ಭಾನುವಾರ, ಮಾರ್ಚ್ 10, 2019

ಎರಡನೆಯ ಬಾರಿಗೆ ಕಾಂಗ್ರೆಸ್ಸೇತರ ಸರಕಾರ

ಭಾರತೀಯ ರಾಜಕೀಯ ಇತಿಹಾಸದಲ್ಲಿ 1989ರ ಸಾರ್ವತ್ರಿಕ ಚುನಾವಣೆಗೆ ತನ್ನದೇ ಆದ ಮಹತ್ವವಿದೆ. ಎರಡನೇ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬರಲು ಈ ಚುನಾವಣೆಯಿಂದ ಸಾಧ್ಯವಾಯಿತು. ಈ ಹಿಂದಿನ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌, ಈ ಬಾರಿ ಇನ್ನಿಲ್ಲದಂತೆ ನೆಲಕಚ್ಚಿತು. ಬೊಫೋರ್ಸ್‌ ಹಗಹರಣ, ಪಂಜಾಬ್‌ನಲ್ಲಿ ಭಯೋತ್ಪಾದನೆ ಸೇರಿದಂತೆ ಇನ್ನಿತರ ಸಮಸ್ಯೆಗಳು ರಾಜೀವ್‌ ಆಡಳಿತದ ವಿರುದ್ಧ ಅಲೆ ಏಳುವಂತೆ ಮಾಡಿತು. ಇದರ ಪರಿಣಾಮ, ಜನತಾದಳ ವಿಶ್ವನಾಥ ಪ್ರತಾಪ್‌ ಸಿಂಗ್‌ ನೇತೃತ್ವದ ನ್ಯಾಷನಲ್‌ ಫ್ರಂಟ್‌ ಅಧಿಕಾರಕ್ಕೆ ಬಂತು. ಬಿಜೆಪಿ ಮತ್ತು ಎಡಪಕ್ಷ ಗಳು ಬಾಹ್ಯ ಬೆಂಬಲ ನೀಡಿದವು. ಚುನಾವಣೆಯಲ್ಲಿ ಜನತಾದಳ 143 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 197 ಕ್ಷೇತ್ರಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ವಿಶೇಷ ಎಂದರೆ, ಕಾಂಗ್ರೆಸ್‌ ಪಡೆದ ಮತಗಳ ಪ್ರಮಾಣ ಶೇ.39.5ರಷ್ಟಿದ್ದರೆ, ಜನತಾ ದಳ ಮತಪ್ರಮಾಣ ಕೇವಲ 17.8ರಷ್ಟು ಮಾತ್ರ. ಬಿಜೆಪಿ 89, ಎಡಪಕ್ಷ ಗಳು 46 ಸ್ಥಾನಗಳನ್ನು ಗೆದ್ದುಕೊಂಡವು. ಬಿಜೆಪಿಯ ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ಈ ಚುನಾವಣೆಯು ಮೈಲುಗಲ್ಲು ಎಂದು ಹೇಳಬಹುದು. 1984ರ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗೆದ್ದಿದ್ದ ಬಿಜೆಪಿ ಈ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಪಡೆಯಿತು. ನ್ಯಾಷನಲ್‌ ಫ್ರಂಟ್‌ನ ನಾಯಕರಾಗಿದ್ದ ವಿಶ್ವನಾಥ ಪ್ರತಾಪ್‌ ಸಿಂಗ್‌ ಪ್ರಧಾನಿಯಾದರು. ಆದರೆ, ಅವರ ಆಡಳಿತವೇನೂ ಬಹಳ ದಿನಗಳವರೆಗೆ ಬರಲಿಲ್ಲ. ಬಿಜೆಪಿಯ ಎಲ್‌.ಕೆ.ಆಡ್ವಾಣಿ ಅವರು ರಾಮರಥ ಯಾತ್ರೆ ಕೈಗೊಂಡಿದ್ದರು. ಬಿಹಾರದಲ್ಲಿ ಲಾಲು ಪ್ರಸಾದ್‌ ಯಾದವ್‌ ಸರಕಾರ ಆಡ್ವಾಣಿಯನ್ನು ಬಂಧಿಸಿದ್ದರಿಂದ ಬಿಜೆಪಿ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆಯಿತು. ವಿಶ್ವನಾಥ ಪ್ರತಾಪ್‌ ಸಿಂಗ್‌ ಸರಕಾರವು 1990ರ ನವೆಂಬರ್‌ನಲ್ಲಿ ಪತನವಾಯಿತು. ಇದೇ ಸಂದರ್ಭದಲ್ಲಿ ಜನತಾ ದಳದ ಮತ್ತೊಬ್ಬ ನಾಯಕ ಚಂದ್ರಶೇಖರ್‌ ಅವರು ತಮ್ಮೊಂದಿಗೆ 64 ಸದಸ್ಯರನ್ನು ಕರೆದುಕೊಂಡು ದಳದಿಂದ ಹೊರ ಬಂದು ಸಮಾಜವಾದಿ ಜನತಾ ಪಾರ್ಟಿ ಸ್ಥಾಪಿಸಿದರು. ಕಾಂಗ್ರೆಸ್‌ ಬೆಂಬಲದೊಂದಿಗೆ ಚಂದ್ರಶೇಖರ್‌ ಪ್ರಧಾನಿಯಾದರು. ಆದರೆ, ರಾಜೀವ್‌ ಗಾಂಧಿ ವಿರುದ್ಧ ಗೂಢಚರ್ಯ ಮಾಡಲಾಗುತ್ತಿದೆಂದು ಆರೋಪಿಸಿದ ಕಾಂಗ್ರೆಸ್‌ ಬೆಂಬಲ ವಾಪಸ್‌ ಪಡೆಯುವುದರೊಂದಿಗೆ ಮತ್ತೊಂದು ಸಾರ್ವತ್ರಿಕ ಚುನಾವಣೆ ಎದುರಾಯಿತು.

ಕಾಮೆಂಟ್‌ಗಳಿಲ್ಲ: