ಮಂಗಳವಾರ, ಮಾರ್ಚ್ 17, 2020

Chan Kin-man is a Hong Kong Gandhi- ಹಾಂಕಾಂಗ್ ಗಾಂಧಿ ಚಾನ್

- ಮಲ್ಲಿಕಾರ್ಜುನ ತಿಪ್ಪಾರ
ಹನ್ನೊಂದು ತಿಂಗಳು ಜೈಲುವಾಸ ಪೂರೈಸಿ ಇದೀಗ ಬಿಡುಗಡೆಯಾಗಿರುವ ಹಾಂಕಾಂಗ್‌ನ ಪ್ರಜಾಪ್ರಭುತ್ವವಾದಿ ಹೋರಾಟಗಾರ, ಸಮಾಜಶಾಸ್ತ್ರ ಪ್ರಾಧ್ಯಾಪಕ ಚಾನ್‌ ಕಿ ಮ್ಯಾನ್‌ ಬಗ್ಗೆ ತಿಳಿದುಕೊಳ್ಳುವ ಮೊದಲು 'ಅಕ್ಯುಪಾಯ್‌ ಮೂವ್‌ ವೆಂಟ್‌' ಬಗ್ಗೆ ತಿಳಿದುಕೊಳ್ಳಬೇಕು. ಆಗಲೇ 'ಹಾಂಕಾಂಗ್‌ ಗಾಂಧಿ' ಚಾನ್‌ ಅವರ ವ್ಯಕ್ತಿತ್ವ ಅರಿವಾಗುತ್ತದೆ.

'ಒಂದು ದೇಶ, ಎರಡು ವ್ಯವಸ್ಥೆ' ಸೂತ್ರದಡಿ ಹಾಂಕಾಂಗ್‌ 1997ರಲ್ಲಿಬ್ರಿಟಿಷ್‌ ಮುಷ್ಟಿಯಿಂದ ಚೀನಾದ ಪಾಲಾಯಿತು. ಈ ಸೂತ್ರದಡಿ ಚೀನಾದಲ್ಲಿರುವ ಎಲ್ಲಹಕ್ಕುಗಳು, ಸ್ವಾತಂತ್ರ್ಯ ಹಾಂಕಾಂಗ್‌ನಲ್ಲಿರುವವರಿಗೂ ಅನ್ವಯವಾಗಬೇಕು. ಆದರೆ, ಪ್ರಜಾಪ್ರಭುತ್ವ ಪರ ಹೋರಾಟಗಾರರ ಪ್ರಕಾರ, ಚೀನಾ ಸರಕಾರ ಹಾಂಕಾಂಗ್‌ ಮೇಲೆ ತನ್ನ ಹಿಡಿತ ಬಿಗಿಗೊಳಿಸಿ, ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ. ಹಾಗಾಗಿ, ಹಾಂಕಾಂಗ್‌ನಲ್ಲಿಪ್ರಜಾಪ್ರಭುತ್ವ ವ್ಯವಸ್ಥೆ ಬರಬೇಕು. ಈ ಹಿನ್ನೆಲೆಯಲ್ಲಿ'ಸಾರ್ವತ್ರಿಕ ಮತದಾನ ಹಕ್ಕು'(ಭಾರತದಲ್ಲೂಇದೇ ಮಾದರಿ ಇದೆ) ಜಾರಿಗೋಸ್ಕರ 'ಅಕ್ಯುಪಾಯ್‌ ಸೆಂಟ್ರಲ್‌ ವಿತ್‌ ಲವ್‌ ಆ್ಯಂಡ್‌ ಪೀಸ್‌' ಅಭಿಯಾನದಿಂದ 2014ರಲ್ಲಿಅಸಹಕಾರ ಚಳವಳಿಗೆ ಕರೆ ನೀಡಲಾಯಿತು. 79 ದಿನ ನಿರಂತರ ಚಳವಳಿ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಚೀನಾ ಸರಕಾರಕ್ಕೆ ಚುರುಕು ಮುಟ್ಟಿಸಿದರು. ಹಾಂಕಾಂಗ್‌ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಈ ಚಳವಳಿಯನ್ನು ಜಗತ್ತು 'ಅಂಬ್ರೆಲಾ ಮೂಮೆಂಟ್‌' ಎಂದು ಗುರುತಿಸಿತು(ಪ್ರತಿಭಟನಾಕಾರರು ಪೊಲೀಸರ ಟಿಯರ್‌ ಗ್ಯಾಸ್‌ ಮತ್ತು ಜಲಪ್ರಯೋಗ ತಪ್ಪಿಸಿಕೊಳ್ಳಲು ಕೊಡೆಗಳನ್ನು ಬಳಸುತ್ತಿದ್ದರು).

ಇಡೀ ಜಗತ್ತೇ ಹಾಂಕಾಂಗ್‌ನತ್ತ ತಿರುಗಿ ನೋಡುವಂತೆ ಮಾಡಿದ ಅಕ್ಯುಪಾಯ್‌ ಅಭಿಯಾನದ ಸಹ ಸಂಸ್ಥಾಪಕನೇ ಈ 'ಚಾನ್‌ ಕಿನ್‌-ಮ್ಯಾನ್‌'. ಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌(ಸಿಯುಎಚ್‌ಕೆ)ನ ಸೋಷಿಯಾಲಜಿ ಪ್ರೊಫೆಸರ್‌ ಆಗಿದ್ದ ಚಾನ್‌, ರೆವರೆಂಡ್‌ ಚು ಯಿಯು-ಮಿಂಗ್‌ ಮತ್ತು ಸಿಯುಎಚ್‌ಕೆ ಕಾನೂನು ಪ್ರಾಧ್ಯಾಪಕ ಬೆನ್ನಿ ತೈ ಯಿಯು-ಟಿಂಗ್‌ ಅವರ ಜೊತೆಗೂಡಿ ಈ ಅಭಿಯಾನವನ್ನು ಆರಂಭಿಸಿ, ವಿದ್ಯಾರ್ಥಿಗಳಲ್ಲಿಪ್ರಜಾಪ್ರಭುತ್ವದ ಮಹತ್ವವನ್ನು ಅರುಹಿದರು. ಇದರ ಫಲವಾಗಿಯೇ ಚೀನಾದ ಆಕ್ರಮಣಕಾರಿ ನೀತಿಗಳ ವಿರುದ್ಧ ಹಾಂಕಾಂಗ್‌ ಜನಸಾಮಾನ್ಯರು ಪ್ರತಿರೋಧ ದಾಖಲಿಸುವ ಮಟ್ಟಿಗೆ ಮನಸ್ಸುಗಳು ಬದಲಾದವು.

ಚಾನ್‌ ವಿರುದ್ಧ ಹಾಂಕಾಂಗ್‌ ನಗರವನ್ನು ಸ್ತಬ್ಧಗೊಳಿಸಿ ಚೀನಾ ಸರಕಾರದ ವಿರುದ್ಧ ಸಾರ್ವಜನಿಕರನ್ನು ಎತ್ತಿಕಟ್ಟಿ, ಗದ್ದಲ ಎಬ್ಬಿಸಿದ ಆರೋಪ ಮಾಡಲಾಗಿತ್ತು. ಹಾಂಕಾಂಗ್‌ ನ್ಯಾಯಾಲಯ ಇವರಿಗೆ 16 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚುನಾವಣೆಗೆ ಸಾರ್ವತ್ರಿಕ ಮತದಾನದ ಹಕ್ಕು ನೀಡಬೇಕೆಂದು ಚಳವಳಿ ಆರಂಭಿಸಿದ ಈ ಚಾನ್‌, ವಿದ್ಯಾರ್ಥಿ ಜೀವನದಿಂದಲೂ ಸಾಮಾಜಿಕ ಕಾರ್ಯಕರ್ತರನಾಗಿ ಗುರುತಿಸಿಕೊಂಡವರು. ಸಮುದಾಯ ಅಭ್ಯುದಯಕ್ಕೆ ಹೋರಾಟ ಮಾಡಿದವರು. ಸ್ವತಃ ಅವರೇ ಸಾಮಾಜಿಕ ಸ್ತರಗಳಲ್ಲಿಅನ್ಯಾಯಗಳನ್ನು ಅನುಭವಿಸಿದವರಾದ್ದರಿಂದ ಅದನ್ನು ಹೋಗಲಾಡಿಸಲು ಸಾಂಸ್ಥಿಕ ಹಂತಗಳಲ್ಲಿಸುಧಾರಣೆ ಅಗತ್ಯ ಎಂದು ಪ್ರತಿಪಾದಿಸಿದರು. ಇದೆಲ್ಲದರ ಒಟ್ಟು ಫಲವೇ ಅಕ್ಯುಪಾಯ್‌ ಅಭಿಯಾನ ಎಂದು ಹೇಳಬಹುದು.

1993ರಿಂದ ಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌ನಲ್ಲಿಅಧ್ಯಾಪನ ವೃತ್ತಿ ಕೈಗೊಂಡ ಚಾನ್‌, ಕಳೆದ ವರ್ಷವಷ್ಟೇ ನಿವೃತ್ತಿಯಾಗಿದ್ದಾರೆ. ಅಧ್ಯಾಪನ ವೃತ್ತಿಯನ್ನು ಪ್ರೀತಿಸುವ ಚಾನ್‌ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರು. ಅದೇ ಕಾರಣಕ್ಕೆ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳ ಸಂಘಟನೆಗಳಿಂದಲೂ ಅನೇಕ ಸಂದರ್ಭಗಳಲ್ಲಿಅತ್ಯುತ್ತಮ ಪ್ರಾಧ್ಯಾಪಕ ಎಂಬ ಗೌರವ ಪಡೆದುಕೊಂಡಿದ್ದಾರೆ. ಚೀನಿ ಸಮುದಾಯಗಳಲ್ಲಿಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜಗಳ ಅಭಿವೃದ್ಧಿಗೆ ಅವರು ತೋರಿದ ಆಸಕ್ತಿ ಮತ್ತು ಸಂಶೋಧನೆ ಅವರನ್ನು ಮೇಲ್ಮಟ್ಟದಲ್ಲಿಕಾಣುವಂತೆ ಮಾಡಿದೆ. ಚೀನಾ ಮತ್ತು ಹಾಂಕಾಂಗ್‌ ಸರಕಾರಗಳಲ್ಲಿಅನೇಕ ಹುದ್ದೆಗಳನ್ನು ನಿರ್ವಹಿಸಿದ ಅವರು ಹಲವಾರು ಸರಕಾರೇತರ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಸದ್ಯ ಅವರು ಹಾಂಕಾಂಗ್‌ ಸಿವಿಲ್‌ ಎಜುಕೇಷನ್‌ ಫೌಂಡೇಷನ್‌ ನಿರ್ದೇಶಕ ಹಾಗೂ ಹಾಂಕಾಂಗ್‌ ಡೆಮಾಕ್ರಟಿಕ್‌ ಡೆವಲಪ್‌ಮೆಂಟ್‌ ನೆಟ್ವರ್ಕ್ನ ಕಾರ್ಯಕಾರಿ ಮಂಡಳಿಯ ಸದಸ್ಯ. ಘ್ಕಿ

1976ರಲ್ಲಿಚಾನ್‌ ಅವರು, ಕಾನ್ಕರ್ಡಿಯಾ ಲೂಥರಿನ್‌ ಮಿಡ್ಲ್‌ಸ್ಕೂಲ್‌ನಲ್ಲಿಆರಂಭಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಬಳಿಕ 19983ರಲ್ಲಿಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌ನಿಂದ ಸೋಷಿಯಾಲಜಿ ವಿಷಯದಲ್ಲಿಬ್ಯಾಚುಲರ್‌ ಆಫ್‌ ಸೈನ್ಸ್‌ ಪದವಿ ಪಡೆದುಕೊಂಡರು. ಯಾಲೆ ವಿವಿಯಲ್ಲಿಉನ್ನತ ಅಧ್ಯಯನ ಕೈಗೊಂಡ ಚಾನ್‌ 1990ರಲ್ಲಿಮಾಸ್ಟರ್‌ ಆಫ್‌ ಆರ್ಟ್ಸ್, 1991ರಲ್ಲಿಮಾಸ್ಟರ್‌ ಆಫ್‌ ಫಿಲಾಸಫಿ ಹಾಗೂ 1995ರಲ್ಲಿಸೋಷಿಯಾಲಜಿಯಲ್ಲಿಡಾಕ್ಟರೇಟ್‌ ಪದವಿ ಗಳಿಸಿಕೊಂಡರು. ಸಿಯುಎಚ್‌ಕೆ ವಿವಿಯಲ್ಲಿಅಧ್ಯಯನ ಮಾಡುತ್ತಿದ್ದಾಗಲೇ ವಿದ್ಯಾರ್ಥಿ ಚಳವಳಿಗಳಲ್ಲಿಸಕ್ರಿಯವಾಗಿ ಪಾಲ್ಗೊಂಡರು. ಅದೇ ವಿವಿಯ ವಿದ್ಯಾರ್ಥಿ ಸಂಘಟನೆಯಲ್ಲಿಕೆಲಸ ಮಾಡಿದರು. ಪದವಿ ಪಡೆದ ಬಳಿಕ ಸಮುದಾಯದ ಕೆಲಸಗಳಲ್ಲಿತೊಡಗಿಸಿಕೊಂಡರು. ಯಾಲೆ ವಿವಿಯಲ್ಲಿಹೆಚ್ಚಿನ ವಿದ್ಯಾಭ್ಯಾಸ ಮಾಡಿ ಮರಳಿದ ಬಳಿಕ ತಾವು ಕಲಿತ ವಿವಿಯಲ್ಲೇ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸ ತೊಡಗಿದರು. ಜೊತೆಗೆ ಏಷ್ಯಾ ಫೆಸಿಫಿಕ್‌ ಸ್ಟಡೀಸ್‌, ಸೆಂಟರ್‌ ಫಾರ್‌ ಸಿವಿಲ್‌ ಸೊಸೈಟಿ ಸ್ಟಡೀಸ್‌ನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಹಲವು ವಿವಿಗಳಿಗೆ ಸಂದರ್ಶಕ ಉಪನ್ಯಾಸಕರಾಗಿಯೂ ಗುರುತಿಸಿಕೊಂಡಿದ್ದರು. ಘ್ಕಿ

ಸದಾ ಸಮುದಾಯ ಅಭ್ಯುದಯದ ಬಗ್ಗೆ ಚಿಂತನೆ ನಡೆಸುತ್ತಿದ್ದ ಚಾನ್‌ ಅವರಿಗೆ ಸಿಯುಎಚ್‌ಕೆ ಕಾನೂನು ಪ್ರಾಧ್ಯಾಪಕ ಬೆನ್ನಿ ತೈ ಮತ್ತು ರೆವರೆಂಡ್‌ ಚು ಯಿಯು-ಮಿಂಗ್‌ ಅವರ ಸಹಚರ್ಯ ದೊರೆಯಿತು. ಈ ಮೂವರ ಚಿಂತನಾ ಫಲವಾಗಿಯೇ ಅಕ್ಯುಪಾಯ್‌ ಅಭಿಯಾನ ಆರಂಭವಾಯಿತು.

ಪ್ರತ್ಯೇಕ ವ್ಯವಸ್ಥೆ ಹೊಂದಿದ್ದರೂ ಹಾಂಕಾಂಗ್‌ ಚೀನಾದ ಕಪಿಮುಷ್ಟಿಯಲ್ಲೇ ಇದೆ. ಚೀನಾ ತನ್ನ ವಾಗ್ದಾನ ಮರೆತ ಪರಿಣಾಮವೇ ಹಾಂಕಾಂಗ್‌ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ದಾರಿ ತುಳಿಯುತ್ತಿರುವುದು. ಇದಕ್ಕೆ ಚಾನ್‌ನಂಥ ಪ್ರಾಧ್ಯಾಪಕರು ದಾರಿದೀಪಗಳಾಗಿದ್ದಾರೆ. 2014ರಲ್ಲಿನಡೆದ ಅಂಬ್ರೆಲಾ ಮೂಮೆಂಟ್‌ ನೇತೃತ್ವ ವಹಿಸಿದ್ದ ಚಾನ್‌, ಮಹಾತ್ಮ ಗಾಂಧಿ ಮಾರ್ಗವನ್ನೇ ಆಯ್ದುಕೊಂಡರು. ತಮ್ಮ ಬೆಂಬಲಿಗರು ಸಾವಿರಾರು ವಿದ್ಯಾರ್ಥಿಗಳೊಂದಿಗೆ ಹಾಂಕಾಂಗ್‌ನಲ್ಲಿಬೀದಿಯಲ್ಲೇ ಕುಳಿತುಕೊಂಡು ಪ್ರತಿಭಟಿಸಿದರು. ಮೊದ ಮೊದಲು ಚೀನಾ ಸರಕಾರ ನಿರ್ಲಕ್ಷಿಸಿತಾದರೂ ಬೆಂಬಲ ಹೆಚ್ಚಾಗುತ್ತಿದ್ದಂತೆ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿತು. ಅಷ್ಟೊತ್ತಿಗಾಗಲೇ ಹಾಂಕಾಂಗ್‌ನಲ್ಲಿನ ಬೆಳವಣಿಗಳು ಇಡೀ ಜಗತ್ತಿನ ಗಮನ ಸೆಳೆದಿದ್ದವು.

ಇದೀಗ ಚಾನ್‌ ಸೆರೆಮನೆಯಿಂದ ಹೊರ ಬಂದಿದ್ದಾರೆ. ಮತ್ತೆ ಹೋರಾಟಕ್ಕೆ ಹುರುಪು ಬರುವುದರಲ್ಲಿಸಂಶಯವೇ ಇಲ್ಲ. ''ಜೈಲಿನಲ್ಲಿಜೀವನ ಕಷ್ಟವಿತ್ತು. ಆದರೆ, ಅದಕ್ಕೆ ನಾನು ಪಶ್ಚಾತ್ತಾಪ ಪಡಲಾರೆ. ಯಾಕೆಂದರೆ, ಪ್ರಜಾಪ್ರಭುತ್ವ ಪಡೆಯಲು ನಾನು ತೆರುತ್ತಿರುವ ಬೆಲೆ ಇದು. ನಮಗೆ ಸಾರ್ವತ್ರಿಕ ಮತದಾನ ಹಕ್ಕು ಬೇಕೇ ಬೇಕು,'' ಎಂದು ಚಾನ್‌ ಹೇಳಿದ್ದಾರೆ. ಅದರರ್ಥ ಹಾಂಕಾಂಗ್‌ನಲ್ಲಿಮತ್ತೆ ಗಾಂಧಿ ಮಾದರಿಯ ಹೋರಾಟ, ಪ್ರತಿಭಟನೆಗಳನ್ನು ನಾವು ಚಾನ್‌ ನೇತೃತ್ವದಲ್ಲಿನಿರೀಕ್ಷಿಸಬಹುದು.

(ಈ ಲೇಖನವು ವಿಜಯ ಕರ್ನಾಟಕದ 2020ರ ಮಾರ್ಚ್ 15ರ ಸಂಚಿಕೆಯ ವ್ಯಕ್ತಿಗತ ಕಾಲಂನಲ್ಲಿ ಪ್ರಕಟವಾಗಿದೆ)

ಗುರುವಾರ, ಮಾರ್ಚ್ 5, 2020

10 Deadliest Viruses: ಜಗತ್ತನ್ನು ಕಾಡಿದ ಆ 10 ವೈರಸ್‌ಗಳು!

- ಮಲ್ಲಿಕಾರ್ಜುನ ತಿಪ್ಪಾರ
ಕೊರೊನಾ ವೈರಸ್‌(ಕೋವಿಡ್‌-19)ಗೆ ಇಡೀ ಜಗತ್ತೇ ತಲ್ಲಣಿಸಿದೆ. 60 ರಾಷ್ಟ್ರಗಳಿಗೆ ಹಬ್ಬಿರುವ ಈ ವೈರಾಣುವಿಗೆ ಈಗಾಗಲೇ 30 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಕೊರೊನಾ ಹರಡದಂತೆ, ಮಾರಣಾಂತಿಕವಾಗದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಇನ್ನೂ ದೊಡ್ಡ ಪ್ರಮಾಣದಲ್ಲಿಯಶಸ್ಸು ದೊರೆಯುತ್ತಿಲ್ಲ.

ಆದರೆ, ಕೊರೊನಾ ವೈರಾಣುಗಿಂತಲೂ ಭೀಕರ ವೈರಸ್‌ಗಳ ಹಾವಳಿಯನ್ನು ಈ ಜಗತ್ತು ಕಂಡಿದೆ. 20ನೇ ಶತಮಾನದಲ್ಲಿಇಡೀ ಮನುಕುಲಕ್ಕೆ ಸಂಚಕಾರ ತಂದಿದ್ದ ಸಿಡುಬು(ಸ್ಮಾಲ್‌ ಪಾಕ್ಸ್‌) ವೈರಾಣು ಇದೀಗ ಭೂಮಿಯ ಮೇಲಿಲ್ಲ! ನಮ್ಮ ವೈದ್ಯ ವಿಜ್ಞಾನ ಬೆಳೆದಂತೆ ವೈರಾಣುಗಳಿಗೆ ಲಸಿಕೆಗಳು, ಔಷಧಗಳನ್ನು ಕಂಡುಹಿಡಿಯಲಾಗುತ್ತಿದೆ. ಆದರೂ ಈವರೆಗೂ ಕೆಲವು ವೈರಾಣುಗಳಿಗೆ ಯಾವುದೇ ರೀತಿಯ ಮದ್ದು ದೊರೆತಿಲ್ಲಮತ್ತು ಇನ್ನೂ ಕೆಲವು ರೋಗಾಣುಗಳನ್ನು ನಿಯಂತ್ರಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ಕೊರೊನಾ ಮುಂಚೆ ಎಬೋಲಾ ಎಂಬ ವೈರಸ್‌ ಕೂಡ ಹೆಚ್ಚು ಭೀತಿಯನ್ನು ಸೃಷ್ಟಿಸಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆ ಆಫ್ರಿಕಾದ ಕೆಲವು ರಾಷ್ಟ್ರಗಳಲಿ ಕಾಣಿಸಿಕೊಂಡಿದ್ದ ಎಬೋಲಾ ಸೃಷ್ಟಿಸಿದ್ದ ಭೀಕರತೆ ಮಾತ್ರ ಗಂಭೀರವಾಗಿತ್ತು. ಎಬೋಲಾ ಪೀಡಿತರ ಪೈಕಿ ಶೇ.90ರಷ್ಟು ಜನರು ಸರಿಯಾದ ಚಿಕಿತ್ಸೆ ದೊರೆಯದೆ ಸಾವಿಗೀಡಾಗಿದ್ದರು. ಇದೀಗ ಕೊರೊನಾ ಕೂಡ ಅಂಥದ್ದೇ ಸ್ಥಿತಿಯನ್ನು ಸೃಷ್ಟಿಸಿದೆ. ಆರೋಗ್ಯ ತುರ್ತು ಪರಿಸ್ಥಿತಿ ಮಾತ್ರವಲ್ಲದೇ ವಿಶ್ವದ ಆರ್ಥಿಕ ವಲಯದ ಮೇಲೆ ಕೊರೊನಾ ಕೆಟ್ಟ ಪರಿಣಾಮ ಬೀರಿದೆ.

ಕೊರೊನಾ ಹೊರತುಪಡಿಸಿ ಈ ವಿಶ್ವವನ್ನು ಕಾಡಿದ ಅತಿ ಭಯಂಕರ ಹತ್ತು ವೈರಾಣುಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಮಾರಣಾಂತಿಕ 'ಮಾರ್ಬರ್ಗ್‌'
1967ರಲ್ಲಿವಿಜ್ಞಾನಿಗಳು ಈ ವೈರಸ್‌ ಗುರುತಿಸಿದರು. ಉಗಾಂಡದಿಂದ ಮಂಗಗಳನ್ನು ಲ್ಯಾಬ್‌ ಕಾರ್ಮಿಕರು ಜರ್ಮನಿಗೆ ತರುತ್ತಿದ್ದರು. ಈ ವೇಳೆ, ಮಂಗಗಳಿಂದ ಅವರಿಗೂ ಈ ವೈರಸ್‌ ತಗುಲಿತ್ತು. ಎಬೋಲಾ ವೈರಸ್‌ ಮಾದರಿಯಲ್ಲೇ ಮಾರ್ಬರ್ಗ್‌ ವೈರಸ್‌ ಇದ್ದು, ಹೆಮರಾಜಿಕ್‌ ಫೀವರ್‌(ರಕ್ತಸ್ರಾವ ಜ್ವರ)ಕ್ಕೆ ಕಾರಣವಾಗುತ್ತದೆÜ. ಅಂದರೆ, ಮಾರ್ಬರ್ಗ್‌ ಸೋಂಕುಪೀಡಿತ ವ್ಯಕ್ತಿಗೆ ಸಿಕ್ಕಾಪಟ್ಟೆ ಜ್ವರ ಉಂಟಾಗಿ, ರಕ್ತಸ್ರಾವವಾಗುತ್ತದೆ. ಇದರ ಪರಿಣಾಮ ವ್ಯಕ್ತಿ ಶಾಕ್‌ಗೊಳಗಾಗಬಹುದು, ಬಹು ಅಂಗಾಂಗಗಳು ವೈಫಲ್ಯ ಕಾಣಬಹುದು ಮತ್ತು ಅಂತಿಮವಾಗಿ ಸಾವು ಸಂಭವಿಸಬಹುದು. ಮಾರ್ಬರ್ಗ್‌ ಮರಣದ ಪ್ರಮಾಣ ಶೇ.25ರಷ್ಟಿದೆ. ಆದರೆ, 1998 ಮತ್ತು 2000ರಲ್ಲಿ ಈ ವೈರಸ್‌ ಕಾಣಿಸಿಕೊಂಡಾಗ ಮರಣ ಪ್ರಮಾಣ ಶೇ.80ರಷ್ಟಿತ್ತು! ವಿಶೇಷವಾಗಿ ಕಾಂಗೊದಲ್ಲಿಈ ಜ್ವರ ಕಾಣಿಸಿಕೊಂಡ ನೂರು ಜನರ ಪೈಕಿ 80 ಜನರು ಸಾವಿಗೀಡಾಗುತ್ತಿದ್ದರು. 2005ರಲ್ಲಿಅಂಗೋಲಾದಲ್ಲಿ ಮಾರ್ಬರ್ಗ್‌ ಕಾಣಿಸಿಕೊಂಡು ಹೆಚ್ಚಿನ ಸಾವು ನೋವಿಗೆ ಕಾರಣವಾಗಿತ್ತು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

2. ಅಲ್ಲೋಲ ಕಲ್ಲೋಲ 'ಎಬೋಲಾ'
ಮಾರಣಾಂತಿಕ 'ಎಬೋಲಾ ವೈರಸ್‌' 1967ರ ಸಮಯದಲ್ಲಿಆಫ್ರಿಕಾದ ಕಾಂಗೊ ಮತ್ತೂ ಸೂಡಾನ್‌ ರಾಷ್ಟ್ರಗಳಲ್ಲಿಏಕಕಾಲಕ್ಕೆ ಕಾಣಿಸಿಕೊಂಡಿತು. ಇದು ಕೂಡ ಡೆಡ್ಲಿವೈರಸ್‌ ಆಗಿದ್ದು, ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ ಸಾವು ಖಚಿತ. ರಕ್ತಅಥವಾ ದೇಹದ ಇತರ ದ್ರವ ಅಥವಾ ಸೋಂಕಿತ ವ್ಯಕ್ತಿ, ಪ್ರಾಣಿಯ ಅಂಗಾಂಶಗಳಿಂದ ಈ ವೈರಸ್‌ ಹರಡುತ್ತದೆ.  ರಕ್ತಅಥವಾ ದೇಹದ ಇತರ ದ್ರವ ಅಥವಾ ಸೋಂಕಿತ ವ್ಯಕ್ತಿ, ಪ್ರಾಣಿಯ ಅಂಗಾಂಶಗಳಿಂದ ಈ ವೈರಸ್‌ ಹರಡುತ್ತದೆ. ತೀರಾ ಇತ್ತೀಚೆಗೆ 
ಅಂದರೆ 2014ರಲ್ಲಿಎಬೋಲಾ ಪಶ್ಚಿಮ ಆಫ್ರಿಕಾದಲ್ಲಿಕಾಣಿಸಿಕೊಂಡಿತ್ತು. ಆತಂಕಕಾರಿ ಸಂಗತಿ ಎಂದರೆ, ಈ ವರೆಗೂ ಕಂಡು ಬಂದಿರುವ ವೈರಸ್‌ಗಳ ಪೈಕಿ ಇದು ಅತ್ಯಂತ ಡೆಡ್ಲಿವೈರಸ್‌ ಎಂಬುದು ಡಬ್ಲ್ಯೂಎಚ್‌ಒ ಅಭಿಮತವಾಗಿದೆ. ವೈರಸ್‌ನಿಂದಾಗಿ ಸಾವಿನ ಪ್ರಮಾಣ ಶೇ.50ರಷ್ಟಿತ್ತು. ಸೂಡಾನ್‌ನಲ್ಲಿಈ ಪ್ರಮಾಣ ಶೇ.70ರಷ್ಟಿತ್ತು.

3. ಭಯಂಕರ 'ರೇಬಿಸ್‌'
ರೇಬಿಸ್‌ ವೈರಸ್‌ಗೆ ಈಗ ಮದ್ದು ಇದೆ. ಆದರೆ, 1920ಕ್ಕಿಂತ ಮುಂಚೆ ಈ ವೈರಸ್‌ ಮಾರಣಾಂತಿಕವಾಗಿತ್ತು. ಆ ಬಳಿಕ ರೇಬಿಸ್‌ಗೆ ಮದ್ದು ಕಂಡು ಹಿಡಿದು ಅದನ್ನು ಹತೋಟಿಗೆ ತರಲಾಗಿತ್ತು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಈ ವೈರಸ್‌ನ ಉಪಟಳ ಅಷ್ಟಿಲ್ಲ. ಆದರೆ, ಈಗಲೂ ಭಾರತ ಮತ್ತು ಆಫ್ರಿಕದ ಕೆಲವು ಭಾಗಳಲ್ಲಿರೇಬಿಸ್‌ ಆಗಾಗ ಜನರಿಗೆ ತೊಂದರೆ ನೀಡುತ್ತದೆ. ರೇಬಿಸ್‌ಪೀಡಿತ ವ್ಯಕ್ತಿಯ ಮೆದುಳು ತನ್ನ ಕೆಲಸವನ್ನು ನಿಲ್ಲಿಸುತ್ತದೆ. ವಿಶೇಷವಾಗಿ ನಾಯಿ ಕಚ್ಚಿದಾಗ ಈ ವೈರಸ್‌ ಸೋಂಕು ತಗಲುತ್ತದೆ. ಕ್ರೋಧೋನ್ಮತ್ತ ಯಾವುದೇ ಪ್ರಾಣಿ ಕಚ್ಚಿದಾಗಲೂ ರೇಬಿಸ್‌ ಸೋಂಕು ಹರಡಬಹುದು. ಈಗಿನ ದಿನಗಳಲ್ಲಿರೇಬಿಸ್‌ಗೆ ಚುಚ್ಚುಮದ್ದು ಮತ್ತು ಆ್ಯಂಟಿಬಯೋಟಿಕ್ಸ್‌ಗಳು ಲಭ್ಯ ಇವೆ. ಆದರೆ, ರೇಬಿಸ್‌ಪೀಡಿತ ಪ್ರಾಣಿ ಕಚ್ಚಿದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಶೇ.100ರಷ್ಟು ಸಾವು ಖಚಿತ ಎನ್ನುತ್ತಾರೆ ತಜ್ಞರು.

4. 'ಎಚ್‌ಐವಿ' ಎಂಬ ಪಾಶವಿ
ಬಹುಶಃ ಎಚ್‌ಐವಿ ವೈರಾಣು ಸೃಷ್ಟಿಸಿದ್ದ ಆತಂಕವನ್ನು ಬೇರೆ ಯಾವುದೇ ವೈರಾಣು ಸೃಷ್ಟಿಸಿಲ್ಲವೇನೋ? ಅದರಲ್ಲೂಭಾರತದಲ್ಲಂತೂ ಎಚ್‌ಐವಿ ವೈರಾಣು ಸೃಷ್ಟಿಸಿದ್ದ ಭೀಕರತೆ ಇನ್ನೂ ಇದೆ. ಆಧುನಿಕ ಜಗತ್ತಿನ ಅತ್ಯಂತ ಡೆಡ್ಲಿವೈರಸ್‌ ಎಂದು ಎಚ್‌ಐವಿಯನ್ನು ಪರಿಗಣಿಸಲಾಗುತ್ತದೆ. ಈಗಲೂ ಜನರನ್ನು ಕೊಲ್ಲುವುದರಲ್ಲಿಈ ವೈರಾಣು ನಂಬರ್‌ ಒನ್‌ ಸ್ಥಾನದಲ್ಲಿದೆ! 1980ರಲ್ಲಿಕಾಂಗೋದಲ್ಲಿಮೊದಲ ಬಾರಿ ಎಚ್‌ಐವಿ ವೈರಾಣು ಪತ್ತೆಯಾಯಿತು. ಅಲ್ಲಿಂದ ಇಲ್ಲಿವರೆಗೂ 3.6 ಕೋಟಿ ಜನರು ಈ ವೈರಾಣುವಿಗೆ ಬಲಿಯಾಗಿದ್ದಾರೆ. ಮಾನವ ಕುಲ ಈವರೆಗೆ ಕಂಡ ಅತ್ಯಂತ ಮಾರಣಾಂತಿಕ ವೈರಸ್‌ ಇದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಎಚ್‌ಐವಿಯನ್ನು ತಡೆಯಲು ಅತ್ಯಂತ ಶಕ್ತಿಶಾಲಿ ಆ್ಯಂಟಿ ವೈರಲ್‌ ಔಷಧ ಸಾಧ್ಯವಾಗಿದೆಯಾದರೂ ಈಗಲೂ ಕಡಿಮೆ ತಲಾದಾಯ ಇರುವ ರಾಷ್ಟ್ರಗಳಲ್ಲಿಎಚ್‌ಐವಿ ಆತಂಕ ಇನ್ನೂ ನಿಂತಿಲ್ಲ. ಸಬ್‌-ಸಹರನ್‌ ಆಫ್ರಿಕಾದಲ್ಲಿಪ್ರತಿ 20 ವಯಸ್ಕರಲ್ಲಿಒಬ್ಬರು ಎಚ್‌ಐವಿ ಪೀಡಿತರಾಗುತ್ತಿದ್ದಾರೆ. ಸದ್ಯ 3.1 ಕೋಟಿಯಿಂದ 3.5 ಕೋಟಿ ಜನರು ಎಚ್‌ಐವಿಪೀಡಿತರಿದ್ದಾರೆ. ಭಾರತದಲ್ಲಿಎಚ್‌ಐವಿಪೀಡಿತರ ಸಂಖ್ಯೆ ಹೆಚ್ಚಿತ್ತು. ಆದರೆ ಸರಕಾರ ಹಾಗೂ ಸಂಘಸಂಸ್ಥೆಗಳ ಜಾಗೃತಿಯ ಪರಿಣಾಮವಾಗಿ ಅದರ ಪರಿಣಾಮ ತಗ್ಗಿದೆ.

5. ಜಗತ್ತು ಕಾಡಿದ 'ಸಿಡುಬು'
1980ರಲ್ಲಿವಿಶ್ವ ಆರೋಗ್ಯ ಸಂಸ್ಥೆಯು ಇಡೀ ಜಗತ್ತನ್ನು ಸ್ಮಾಲ್‌ಪಾಕ್ಸ್‌(ಸಿಡುಬು) ಮುಕ್ತ ಮಾಡುವುದಾಗಿ ಘೋಷಿಸಿತು. ಆದರೆ, ಇದಕ್ಕೂ ಮೊದಲು ಸಾವಿರಾರು ವರ್ಷಗಳಿಂದ ಮಾನವ ಕುಲ ಈ ಸ್ಮಾಲ್‌ಪಾಕ್ಸ್‌ ರೋಗಾಣುವಿನ ಅಟ್ಟಹಾಸಕ್ಕೆ ನರಳಿದೆ. ಸೋಂಕುಪೀಡಿತ ಪ್ರತಿ ಮೂವರ ಪೈಕಿ ಒಬ್ಬರ ಸಾವು ಆಗ ಖಚಿತವಾಗಿತ್ತು. ಇದರಿಂದ ಬದುಕುಳಿದವರು ಶಾಶ್ವತ ಗಾಯದ ಗುರುತುಗಳು ಮತ್ತು ಅಂಧ ಸಮಸ್ಯೆಯಿಂದ ಬಳಲಬೇಕಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. 20ನೇ ಶತಮಾನದಲ್ಲಿಈ ಸ್ಮಾಲ್‌ಪಾಕ್ಸ್‌ನಿಂದಾಗಿ ಅಂದಾಜು 30 ಕೋಟಿ ಜನರು ಸಾವಿಗೀಡಾಗಿದ್ದಾರೆ!

6. ಅಮೆರಿಕದ ಹಂಟರ್‌ 'ಹ್ಯಾಂಟ್‌'
ಹ್ಯಾಂಟ್‌ವೈರಸ್‌ ಪಲ್ಮನರಿ ಸಿಂಡ್ರೋಮ್‌(ಎಚ್‌ಪಿಎಸ್‌) ಮೊದಲ ಬಾರಿಗೆ 1993ರಲ್ಲಿಅಮೆರಿಕದಲ್ಲಿಕಾಣಿಸಿಕೊಂಡಿತು. ಈ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಆದರೆ, ಸೋಂಕಿತ ಇಲಿಯ ಹಿಕ್ಕೆಯು ಮನುಷ್ಯ ಸಂಪರ್ಕಕ್ಕೆ ಬಂದರೆ ಸೋಂಕು ಗ್ಯಾರಂಟಿ ತಗಲುತ್ತದೆ. 1950ರಲ್ಲಿಈ ಹ್ಯಾಂಟ್‌ವೈರಸ್‌ ತೀವ್ರವಾಗಿ ಕಾಣಿಸಿಕೊಂಡಿತು. ಕೊರಿಯನ್‌ ವಾರ್‌ ವೇಳೆ 3,000ಕ್ಕೂ ಹೆಚ್ಚು ಸೈನಿಕರು ಈ ವೈರಾಣುವಿನಿಂದ ಬಳಲಿದ್ದರು ಮತ್ತು ಪೀಡಿತರ ಪೈಕಿ ಶೇ.12ರಷ್ಟು ಯೋಧರು ಸಾವಿಗೀಡಾಗಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇದು ಆಗ ಹೊಸದಾದ ರೋಗಾಣು ಆದ್ದರಿಂದ ತಕ್ಷಣಕ್ಕೆ ಯಾವುದೇ ಚಿಕಿತ್ಸೆ ಇರಲಿಲ್ಲ. ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ಇದಕ್ಕೆ ಔಷಧವನ್ನು ಕಂಡುಹಿಡಿದವು.

7. ಇನ್‌ಫ್ಲುಯೆಂಜಾ
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ಪ್ರಕಾರ, ಜಗತ್ತಿನಾದ್ಯಂತ ವರ್ಷಕ್ಕೆ ಐದು ಲಕ್ಷ ಜನರು ಈ ವೈರಸ್‌ನಿಂದಾಗಿ ಸಾವಿಗೀಡಾಗುತ್ತಾರೆ. ಇದು ಕೂಡ ಅತ್ಯಂತ ಡೆಡ್ಲಿವೈರಾಣು ಆಗಿದ್ದು, ಇದನ್ನು ಕೆಲವೊಮ್ಮೆ ಸ್ಪಾನಿಸ್‌ ಫ್ಲುಎಂದೂ ಕರೆಯಲಾಗುತ್ತದೆ. 1918ರಲ್ಲಿಇದು ಮೊದಲ ಬಾರಿಗೆ ಪತ್ತೆಯಾಯಿತು ಮತ್ತು ಈವರೆಗೆ ಸುಮಾರು 5 ಕೋಟಿ ಜನರು ಈ ವೈರಾಣುವಿಗೆ ಬಲಿಯಾಗಿದ್ದಾರೆ. ಈಗ ಇಡೀ ಜಗತ್ತಿಗೆ ತಲೆನೋವು ತಂದಿರುವ ಕೋವಿಡ್‌-19(ಕೊರೊನಾ ವೈರಸ್‌) ಮರಣದ ಪ್ರಮಾಣದ ಈಇನ್‌ಫ್ಲುಯೆಂಜಾ ವೈರಸ್‌ಗಿಂತಲೂ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

8. 'ಡೆಂಗೆ' ಭೀತಿಯ ಡಂಗುರ
ಡೆಂಗೆ ವೈರಸ್‌ ಬಗ್ಗೆ ಹೇಳುವುದೇ ಬೇಡ! ಪ್ರತಿ ವರ್ಷ ಡೆಂಗೆ ವೈರಸ್‌ ಹಾವಳಿಯನ್ನು ಮಾಧ್ಯಮಗಳಲ್ಲಿಕಾಣುತ್ತವೆ. ಈ ವೈರಸ್‌ 1950ರಲ್ಲಿಫಿಲಿಪ್ಪಿನ್ಸ್‌ ಮತ್ತು ಥಾಯ್ಲೆಂಡ್‌ನಲ್ಲಿಮೊದಲ ಬಾರಿಗೆ ಪತ್ತೆಯಾಯಿತು. ಆ ಬಳಿಕ ಜಗತ್ತಿನ ಉಷ್ಣ ವಲಯ ಹಾಗೂ ಉಪಉಷ್ಣವಲಯಗಳ ರಾಷ್ಟ್ರಗಳಲ್ಲಿವ್ಯಾಪಕವಾಗಿ ಹರಡಿತು. ಸದ್ಯ, ಜಗತ್ತಿನ ಶೇ.40ರಷ್ಟು ಜನಸಂಖ್ಯೆ ಈ ಡೆಂಗೆ ಪ್ರಭಾವದ ಪ್ರದೇಶಗಳಲ್ಲಿದೆ. ಈ ವೈರಸ್‌ ಪ್ರಸರಣಕ್ಕೆ ಮುಖ್ಯ ಸೊಳ್ಳೆಗಳು ಕಾರಣ. ಈ ಸೊಳ್ಳೆಗಳಿಂದಾಗಿಯೇ ಇಡೀ ಜಗತ್ತಿನಾದ್ಯಂತ ವ್ಯಾಪಕ ರೀತಿಯಲ್ಲಿಡೆಂಗೆ ಹರಡುವಂತಾಗಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ 5 ರಿಂದ 10 ಕೋಟಿ ಜನರು ಡೆಂಗೆ ಸೋಂಕುಪಿಡೀತರಾಗುತ್ತಾರೆ. ಇತರ ವೈರಸ್‌ಗಳಿಗೆ ಹೋಲಿಸಿದರೆ ಮರಣದ ಪ್ರಮಾಣ ಕಡಿಮೆ ಇದೆ. ಶೇ.2.5ರಷ್ಟು ಮಾತ್ರ ಮರಣ ಪ್ರಮಾಣವಿದೆ. ಹಾಗಂತ ವೈರಸ್‌ ನಿಯಂತ್ರಣಕ್ಕೆ ಮದ್ದು ಇದೆ ಎಂದು ಭಾವಿಸಬೇಕಿಲ್ಲ!

9. ಮಕ್ಕಳಿಗೆ ಕಂಟಕ 'ರೋಟ್‌'
ಮಕ್ಕಳಿಗೆ ಕಂಟಕಪ್ರಾಯವಾಗಿರುವ ಈ ರೋಟ್‌ ವೈರಸ್‌ ನಿಯಂತ್ರಣಕ್ಕೆ ಈಗ ಎರಡು ಲಸಿಕೆಗಳು ಲಭ್ಯ ಇವೆ. ಶಿಶುಗಳು ಹಾಗೂ ಮಕ್ಕಳಿಗೆ ಮಾರಣಾಂತಿಕವಾಗಿ ಕಾಯಿಲೆಯನ್ನು ಸೃಷ್ಟಿಸುತ್ತಿದ್ದ ಈ ವೈರಸ್‌ ಅತ್ಯಂತ ವೇಗವಾಗಿ ಹರಡಬಲ್ಲದು. ಸದ್ಯ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಈ ವೈರಸ್‌ ಕಾರಣಕ್ಕೆ ಸಾವಿಗೀಡಾಗುವ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ. ಆದರೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಇದು ಮಾರಣಾಂತಿಕವಾಗಿ ಪರಿಣಮಿಸಿದೆ. ರೀಹೈಡ್ರೇಷನ್‌ ಚಿಕಿತ್ಸೆ ಎಲ್ಲೆಡೆ ಇರದಿರುವುದೇ ಇದಕ್ಕೆ ಕಾರಣ. 2008ರಲ್ಲಿಐದು ವರ್ಷದೊಳಗಿನ 453,0000 ಮಕ್ಕಳು ಈ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ! ಆದರೆ, ಆ ಬಳಿಕ ಲಸಿಕೆಗಳನ್ನು ಪೂರೈಸಿದ ಪರಿಣಾಮ ಮರದ ಪ್ರಮಾಣದಲ್ಲಿಭಾರೀ ಕುಸಿತವಾಗಿದೆ.

10. ಎಪ್ಪಾ... 'ನಿಫಾ!'
ಬಾವಲಿ ಕಚ್ಚಿದ ಹಣ್ಣುಗಳು ಮಾನವನ ಸಂಪರ್ಕಕ್ಕೆ ಬಂದಾಗ ಈ ನಿಫಾ ಸೋಂಕು ತಗಲುತ್ತದೆ. ಇದಕ್ಕೂ ಸದ್ಯಕ್ಕೆ ಯಾವುದೇ ಔಷಧಗಳಿಲ್ಲ. 2018ರ ಮಾಹಿತಿ ಪ್ರಕಾರ 700 ಜನರಿಗೆ ನಿಫಾ ಸೋಂಕು ತಗುಲಿತ್ತು ಮತ್ತು ವೈರಾಣುಪೀಡಿತರ ಪೈಕಿ ಶೇ.50ರಿಂದ 70ರಷ್ಟು ನಿಧನರಾಗಿದ್ದರು. ನಮ್ಮ ನೆರೆಯ ಕೇರಳದಲ್ಲಿನಿಫಾ ಭಾರಿ ಭೀತಿಯನ್ನು ಸೃಷ್ಟಿಸಿತ್ತಲ್ಲದೇ 17 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.



ಮಂಗಳವಾರ, ಮಾರ್ಚ್ 3, 2020

How To Apply Dark Mode Theme To Twitter?: ಟ್ವಿಟರ್‌ಗೆ ಡಾರ್ಕ್ ಮೋಡ್ ಥಿಮ್‌ಗೆ ಅನ್ವಯಿಸುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ
ಇತ್ತೀಚಿನ ದಿನಗಳಲ್ಲಿ ಡಾರ್ಕ್‌ಮೋಡ್ ತುಂಬ ಜನಪ್ರಿಯವಾಗುತ್ತಿದೆ. ಬಹುತೇಕ ಎಲ್ಲಆ್ಯಪ್‌ಗಳು, ವೆಬ್‌ಸೈಟ್‌ಗಳು ಡಾರ್ಕ್‌ಮೋಡ್‌ಗೆ ಬದಲಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಪೈಕಿ ಟ್ವಿಟರ್‌ ಡಾರ್ಕ್‌ಮೋಡ್ ಅಳವಡಿಕೆ ವಿಷಯದಲ್ಲಿ ತನ್ನೆಲ್ಲ ಸ್ಪರ್ಧಿಗಳಿಗಿಂತಲೂ ಮುಂದೆ ಇದೆ. ಫೇಸ್‌ಬುಕ್‌ ಹಾಗೂ ವಾಟ್ಸಪ್‌ಗಳು ಇನ್ನೂ ಬೀಟಾ ವರ್ಷನ್‌ನಲ್ಲಿ ಡಾರ್ಕ್‌ಮೋಡ್ ಪರೀಕ್ಷಿಸುತ್ತಿವೆ.

ಕಣ್ಣು, ಬ್ಯಾಟರಿ ಉಳಿತಾಯಕ್ಕೆ ಅನುಕೂಲ

ಮೈಕ್ರೊ ಬ್ಲಾಗಿಂಗ್‌ನಲ್ಲಿ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ಈ ಟ್ವಿಟರ್‌, ಡಾರ್ಕ್‌ಮೋಡ್ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸಿದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಆಧರಿತ ಫೋನ್‌ಗಳಲ್ಲೂ ಡಾರ್ಕ್‌ಮೋಡ್ ಲಭ್ಯವಿದೆ. ಮೊಬೈಲ್‌ ಅಥವಾ ಡೆಸ್ಕ್‌ಟಾಪ್‌ನಲ್ಲಿ ಡಾರ್ಕ್‌ಮೋಡ್ ಬಳಸುವುದರಿಂದ ಸಾಕಷ್ಟ ಲಾಭಗಳಿವೆ. ಬ್ರೈಟ್‌ನೆಸ್‌ ಡಿಸ್‌ಪ್ಲೇ ಅತಿಯಾದ ಬಳಕೆಯಿಂದ ನಮ್ಮ ಕಣ್ಣಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಈಗಾಗಲೇ ದೃಢವಾಗಿದೆ. ಡಾರ್ಕ್‌ಮೋಡ್ ಅಳವಡಿಸಿಕೊಂಡಿದ್ದರೆ ಸ್ಕ್ರೀನ್‌ನಿಂದ ಹೊರಡುವ ಕಿರಣಗಳು ನಿಮ್ಮ ಕಣ್ಣಿಗೆ ತೊಂದರೆಯುಂಟು ಮಾಡಲಾರವು. ಇನ್ನು ಬ್ಯಾಟರಿ ಚಾರ್ಜಿಂಗ್‌ ದೃಷ್ಟಿಯಿಂದಲೂ ಡಾರ್ಕ್‌ಮೋಡ್ ಅಗತ್ಯ. ಶೇ. 50ರಷ್ಟು ಬ್ಯಾಟರಿ ಉಳಿತಾಯವಾಗಬಲ್ಲದು. ಜೊತೆಗೆ ಡಾರ್ಕ್‌ಮೋಡ್‌ನಿಂದ ಒಂದು ವಿಶಿಷ್ಟ ಸೌಂದರ್ಯ ನಿಮ್ಮ ಸ್ಮಾರ್ಟ್‌ಫೋನ್‌ಗೆ ಲಭ್ಯವಾಗುತ್ತದೆ. ಬಹಳಷ್ಟು ಜನರಿಗೆ ಟ್ವಿಟರ್‌ ಅನ್ನು ಡಾರ್ಕ್‌ಮೋಡ್‌ಗೆ ಹೇಗೆ ಬದಲಿಸಬೇಕು ಎಂಬುದು ಗೊತ್ತಿರುವುದಿಲ್ಲ. ಆ ಹಿನ್ನೆಯಲ್ಲಿ ಆ್ಯಂಡ್ರಾಯ್ಡ್‌ ಆಧರಿತ ಫೋನ್‌ಗಳಲ್ಲಿ ಟ್ವಿಟರ್‌ ಅನ್ನು ಡಾರ್ಕ್‌ಮೋಡ್‌ಗೆ ಬದಲಿಸುವ ಬಗ್ಗೆ ಇಲ್ಲಿದೆ ಮಾಹಿತಿ.




ಸಕ್ರಿಯಗೊಳಿಸುವುದು ಹೇಗೆ?

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಟ್ವಿಟರ್‌ ಆ್ಯಪ್‌ ಓಪನ್‌ ಮಾಡಿ. ಇದಾದ ಮೇಲೆ, ಮೊಬೈಲ್‌ ಸ್ಕ್ರೀನ್‌ನ ಎಡ ಭಾಗದ ಮೇಲ್ತುದಿಯಲ್ಲಿಕಾಣುವ ನಿಮ್ಮ ಪ್ರೊಫೈಲ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ, ಆ್ಯಪ್‌ನ ಕೆಳಭಾಗದ ಎಡ ಮತ್ತು ಬಲ ಭಾಗದ ತುದಿಯಲ್ಲಿಎರಡು ಐಕಾನ್‌ಗಳನ್ನು ಕಾಣಬಹುದು. ಎಡ ಭಾಗದ ಐಕಾನ್‌ 'ಬಲ್ಬ್' ರೀತಿಯಲ್ಲಿದೆ. ಬಲಭಾಗದಲ್ಲಿ ನಾಲ್ಕು ಸ್ಕ್ವೇರ್‌ ಮಾರ್ಕಿನ ಐಕಾನ್‌ ಕಾಣಬಹುದು. ಎಡ ಭಾಗದ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ ತಕ್ಷಣವೇ ಡಾರ್ಕ್‌ಮೋಡ್‌ಗೆ ಬದಲಾಗುತ್ತದೆ ನಿಮ್ಮ ಟ್ವಿಟರ್‌ ಆ್ಯಪ್‌. ಅದೇ ರೀತಿ, ಮೊದಲಿನ ರೀತಿಯಾಗಿ ಬ್ರೈಟ್‌ನೆಸ್‌ ಡಿಸ್‌ಪ್ಲೇ ಬೇಕಿದ್ದರೆ ಅದೇ ಐಕಾನ್‌ ಮೇಲೆ ಮತ್ತೆ ಟ್ಯಾಪ್‌ ಮಾಡಿ ಆಗ ಮೊದಲಿನಂತಾಗುತ್ತದೆ.ಟ

ಸೆಟ್ಟಿಂಗ್ಸ್‌ ಬದಲಾವಣೆ ಹೇಗೆ?

ಟ್ವಿಟರ್‌ ಆ್ಯಪ್‌ನ ಮೇಲ್ಭಾಗದ ಎಡ ತುದಿಯಲ್ಲಿರುವ ನಿಮ್ಮ ಪ್ರೊಫೈಲ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ ಅಲ್ಲಿಅನೇಕ ಆಪ್ಷನ್‌ಗಳ ಕಾಣಬಹುದು. ಇವುಗಳ ಪೈಕಿ ಕೊನೆಯಲ್ಲಿರುವ 'ಸೆಟ್ಟಿಂಗ್‌ ಮತ್ತು ಪ್ರೈವೆಸಿ' ಆಪ್ಷನ್‌ ಮೇಲೆ ಟ್ಯಾಪ್‌ ಮಾಡಿ. ಆ ಬಳಿಕ ಜನರಲ್‌ ವಿಭಾಗದಲ್ಲಿರುವ 'ಡಿಸ್‌ಪ್ಲೇ ಆ್ಯಂಡ್‌ ಸೌಂಡ್‌ ಆಪ್ಷನ್‌' ಮೇಲೆ ಟ್ಯಾಪ್‌ ಮಾಡಿದಾಗ, ಮೀಡಿಯಾ, ಡಿಸ್‌ಪ್ಲೇ ಮತ್ತು ಸೌಂಡ್‌ ಸೇರಿದಂತೆ ಇತರೆ ವಿಭಾಗಗಳನ್ನು ಕಾಣಬಹುದು. 'ಡಿಸ್‌ಪ್ಲೇ' ವಿಭಾಗದಲ್ಲಿ'ಡಾರ್ಕ್‌ಮೋಡ್‌' ಇರುವುದನ್ನು ಗಮನಿಸಿ. ಇದರ ಮೇಲೆ ಕ್ಲಿಕ್‌ ಮಾಡಿದಾಗ ಬರುವ ಪಾಪ್‌ ಅಪ್‌ನಲ್ಲಿಆಫ್‌, ಆನ್‌ ಮತ್ತು 'ಆಟೊಮೆಟಿಕ್‌ ಅಟ್‌ ಸನ್‌ಸೆಟ್‌' ಎಂಬ ಆಯ್ಕೆಗಳು ಕಾಣಸಿಗುತ್ತವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಪ್ಷನ್‌ ಆಯ್ಕೆ ಮಾಡಿಕೊಳ್ಳಬಹುದು. ಡಾರ್ಕ್‌ಮೋಡ್‌ ಆಯ್ಕೆಯು ನಿಮಗೆ ಡಾರ್ಕ್‌ಮೋಡ್‌ ಅನ್ನು ಸ್ವಯಂ ಆಗಿ ಸೂರ್ಯೋದಯ ಬಳಿಕ ಸಕ್ರಿಯಗೊಳಿಸುವ ಆಯ್ಕೆಯನ್ನು ನೀಡುತ್ತದೆ. ನಿಮಗೆ ರಾತ್ರಿಯ ವೇಳೆ ಮಾತ್ರವೇ ಟ್ವಿಟರ್‌ ಡಾರ್ಕ್‌ಮೋಡ್‌ನಲ್ಲಿದ್ದರೆ ಚೆನ್ನ ಎನಿಸಿದರೆ ಈ ಆಟೊಮೆಟಿಕ್‌ ಆಪ್ಷನ್‌ ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಡಿಮ್‌ ಮತ್ತು ಲೈಟ್ಸ್‌ ಔಟ್

ಡಿಸ್‌ಪ್ಲೇ ವಿಭಾಗದಲ್ಲಿನೀವು 'ಡಾರ್ಕ್‌ಮೋಡ್‌ ಅಪೀಯರನ್ಸ್‌' ಎಂಬ ಆಪ್ಷನ್‌ ಅನ್ನು ಗಮನಿಸಬಹುದು. ಡಾರ್ಕ್‌ಮೋಡ್‌ ಆಯ್ಕೆ ಕೆಳಭಾಗದಲ್ಲೇ ಇದೆ. ಒಂದು ವೇಳೆ ನೀವು 'ಡಾರ್ಕ್‌ಮೋಡ್‌ ಅಪೀಯರನ್ಸ್‌' ಮೇಲೆ ಟ್ಯಾಪ್‌ ಮಾಡಿದರೆ, 'ಡಿಮ್‌' ಮತ್ತು 'ಲೈಟ್ಸ್‌ ಔಟ್‌' ಆಪ್ಷನ್‌ಗಳಿರುವುದನ್ನು ಕಾಣುತ್ತೀರಿ. ಡಿಮ್‌ ಡಿಫಾಲ್ಟ್‌ ಆಪ್ಷನ್‌ ಆಗಿದ್ದು, ಟ್ವಿಟರ್‌ ಡಾರ್ಕ್ ನ್ಯಾವಿ ಬಣ್ಣವನ್ನು ಹಿನ್ನೆಲೆಯಾಗಿ ಒದಗಿಸುತ್ತದೆ. ಒಂದು ವೇಳೆ, ನೀವು ಲೈಟ್ಸ್‌ ಔಟ್‌ ಆಪ್ಷನ್‌ ಆಯ್ಕೆ ಮಾಡಿಕೊಂಡರೆ, ಟ್ವಿಟರ್‌ ಪೇಜ್‌ನ ಹಿನ್ನೆಲೆ ಸಂಪೂರ್ಣವಾಗಿ ಕಪ್ಪಾಗಿ ಬದಲಾಗುತ್ತದೆ. ವಿಶೇಷವಾಗಿ ಅಮೋಲಿಡ್ ಡಿಸ್‌ಪ್ಲೇಗಳಲ್ಲಿಈ ಆಪ್ಷನ್‌ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.