ಗುರುವಾರ, ನವೆಂಬರ್ 22, 2007

ಸ್ತಬ್ಧಚಿತ್ರ

ಈ ಬಾಲ್ಯವೇ ಹಾಗೇ
ಭಾವನೆಗಳ ಬರಹಕ್ಕೆ ನಿಲುಕದ
ನೀಲಾಕಾಶ... ಎತ್ತ ನೋಡಿದತ್ತ
ಆದಿ-ಅಂತ್ಯವಿಲ್ಲದ ಸ್ತಬ್ದಚಿತ್ರ.

ಊರೂ ಹೊಡೆದು, ಊರಲ್ಲಿ ಭಾಷಣ ಬೀಗಿದು
ಮೊದಲ ಬಹುಮಾನ ತಂದದ್ದು,
ಶಿಕ್ಷಕರು ತಲೆ ನೇವರಿದ ನೆನಪು
ಈಗಲೂ ಹಚ್ಚು-ಹಸಿರು, ನವ-ನವೀರು.

ಚೇಳು ಕಡಿಸಿಕೊಂಡಿದ್ದು, ನೋವು ಮರೆಸಲು
ಅವ್ವ ಕಥೆ ಹೇಳಿದ್ದು, ಅವಳ ತೊಡೆಯ
ಮೇಲೆ ನಿದ್ದೆ ಹೊಗಿದ್ದು, ಈಗಲೂ ಚೇಳು
ಎಂದಾಗಲೆಲ್ಲ ಒತ್ತರಿಸುತ್ತದೆ ಮಾಸಿದ ನೆನಪು.

ಅಕ್ಕಳನ್ನು ಕಾಡಿದ್ದು, ತಂಗಿಯನ್ನು ಪೀಡಿಸಿದ್ದು,
ಅವ್ವಳಿಂದ ಬೈಯಿಸಿಕೊಂಡಿದ್ದು, ಗೆಳೆಯನಿಗೆ
ಹೊಡಿದಿದ್ದು, ಮತ್ತೆ ರಮಿಸಿದ್ದು, ಎಲ್ಲವೂ ಹಾಗೆ
ಇದೆ, ಗೆರೆ ಕೊರೆದ ಚಿತ್ರಗಳಂತೆ.

ಮನೆಯ ಎದುರಿಗಿದ್ದ ಟ್ರ್ಯಾಕ್ಟರ್ ಇಂಜಿನ್ ಕ್ಲಚ್ ಒತ್ತಿ
ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡಿಸಿ, ಬಿಳಿಸಿದ್ದು, ಅಪ್ಪನಿಂದ
ಬಾಸುಂಡೆ ಏಟು ಬೀಗಿಸಿಕೊಂಡಿದ್ದು, ಇನ್ನೂ ಹಾಗೇ
ಇದೆ, ಮೊನ್ನೆ ನಡೆದ ಘಟನೆಯಂತೆ.

ಸ್ಕ್ರ್ಯೂ ಬಿಗಿಯಲು ಬಾರದೇ ಸ್ಕ್ರ್ಯೂಡ್ರೈವರ್
ಅಂಗೈ ಸೇರಿದ್ದು, ಅದ್ನೋಡಿ ಮೇಸ್ತ್ರಿ
ಕೆನ್ನೆಗೆ ಬಾರಿಸಿದ್ದು, ಕಣ್ಣೀರ್ ಕಪಾಳಕ್ಕೆ ಇಳಿದಿದ್ದು,
ರಸ್ತೆ ಬದಿಯಲ್ಲಿ ಗ್ಯಾರೆಜ್ ಕಂಡಾಗಲೆಲ್ಲ
ನೆನಪು ಕಣ್ತೆರೆಯುತ್ತದೆ.

ಇಂದಿನ ವರ್ಣಮಯ ಬದುಕಿನ
ನಡುವೆ, ಅಂದಿನ ಬಾಲ್ಯದ ಕಪ್ಪು-ಬಿಳಪು
(ವಿ)ಚಿತ್ರಗಳು ಈಗ ಬರೀ ಚಿತ್ರ, ಸ್ತಬ್ಧಚಿತ್ರ.

ಗುರುವಾರ, ನವೆಂಬರ್ 1, 2007

ಅಯ್ಯೋ ಕನ್ನಡವೇ... ಪರರು ಕನಿಕರಿಸುವಂತಾಯ್ತೇ...?


ಮೊದಲು ಈ ಘಟನೆಯನ್ನು ಓದಿ.

ನಾಲ್ಕು ದಿನಗಳ ಹಿಂದೆ ಕಚೇರಿ ಕೆಲಸ ಮುಗಿಸಿಕೊಂಡು ಅಂಬತ್ತೂರ್‌ನತ್ತ ಗಿಜಿಗಿಡುವ ಬಸ್ಸಿನಲ್ಲಿ ಹೊರಟಿದ್ದೆ. ಹೊರಗಡೆ ಮಳೆಯ ರುದ್ರ ನರ್ತನ ನಡೆದಿತ್ತು. ಬಸ್ಸು ಗಿಜಿಗುಡುತ್ತಿರುವುದರಿಂದ ಸ್ವಲ್ಪ ಬೆಚ್ಚಗಿನ ವಾತವಾರಣ ನಿರ್ಮಾಣವಾಗಿತ್ತು. ಹೀಗೆ ಸಾಗುತ್ತಿದ್ದ ಬಸ್ ಕೊನೆಯ ಸ್ಟಾಪ್ ಹತ್ತಿರವಾಗುತ್ತಿದ್ದಂತೆ ಬಸ್ಸನಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕರಗುತ್ತಾ ಬಂತು. ಆದರೆ, ಹೊರಗಡೆ ಮಳೆ ಮಾತ್ರ ಧೋ.. ಎನ್ನುತ್ತಿತ್ತು.

ನಾನು ಕಳಿತು ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಡ್ರೈವರ್ ಮತ್ತು ಕಂಡಕ್ಟರ್‌ಗೆ ಪರಿಚಯವಿದ್ದಂತೆ ತೋರಿತು ನನಗೆ. ಬಸ್ಸಿನಲ್ಲಿದ್ದ ಜನರು ಕಡಿಮೆಯಾದ್ದರಿಂದ ಕಂಡಕ್ಟರ್ ಕೂಡಾ ಡ್ರೈವರ್ ಸಮೀಪದಲ್ಲಿಯೇ ಬಂದು ಕುಳಿತುಕೊಂಡ. ಆಗ ಡ್ರೈವರ್, ಕಂಡಕ್ಟರ್ ಮತ್ತು ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯ ನಡುವಿನ ಸಂಭಾಷಣೆ ಕೇಳಿ ಆಶ್ಚರ್ಯವೆನಿಸಿತು. ಮಳೆಯಾಗುತ್ತಿದ್ದ ಕಾರಣ ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಟ್ರಾಪಿಕ್ ಜಾಮ್ ಕುರಿತಂತೆ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಕಂಡಕ್ಟರ್‌ನೊಂದಿಗೆ ಮಾತಿಗಿಳಿದ.

"ಬೆಂಗಳೂರಿನಲ್ಲಿ 200 ಮೀಟರ್‌(ನಿಜವಾಗಲೂ ಇದೆಯಾ) ಅಂತರದಲ್ಲಿ ಫ್ಲೈ ಓವರ್‌ಗಳಿವೆ. ಆದರೂ ಅಲ್ಲಿ ಇಲ್ಲಿಕ್ಕಿಂತ ಹೆಚ್ಚು ಟ್ರಾಫಿಕ್" ಎಂದ.

"ಹೌದು, ನೀನು ಹೇಳುವುದು ನಿಜ. ಅಲ್ಲಿ ತುಂಬಾ ಟ್ರಾಫಿಕ್ ಅಂತ ಕೇಳಲ್ಪಟ್ಟಿದ್ದೇನೆ" ಎಂದು ಕಂಡಕ್ಟರ್ ಮಾರ್ನುಡಿದ.

"ಬೆಂಗಳೂರಿನಲ್ಲಿ ತಮಿಳು ಮಾತಾಡೊ ಜನ ಜಾಸ್ತಿ ಸಿಗುತ್ತಾರಲ್ಲ...?" ಎಂದು ಅನುಮಾನ ಮಿಶ್ರಿತ ದನಿಯಲ್ಲಿ ಕಂಡಕ್ಟರ್ ಪ್ರಶ್ನಿಸಿದ ಆತನನ್ನು.

ತಕ್ಷಣವೇ ಉತ್ತರಿಸಿದ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ, "ಹೌದು, ಆದರೆ ತಮಿಳು ಮತ್ತು ಕನ್ನಡ ಮಾತಾಡೋರಕ್ಕಿಂತಲೂ ತೆಲುಗು ಮಾತಾಡೋ ಜನ ಬಹಳ ಇದ್ದಾರೆ ಬೆಂಗಳೂರಿನಲ್ಲಿ" ಅಂದ.

ಇವರ ಸಂಭಾಷಣೆಯನ್ನೇ ಆಲಿಸುತ್ತಿದ್ದ ನನಗೆ ಈ ಮಾತನ್ನು ಕೇಳೆ ಒಮ್ಮೆಲೇ ದಿಗ್ಭ್ರಮೆಯಾಯಿತು.

(ಮೇಲಿನ ಸಂಭಾಷಣೆ ನಡೆದಿದ್ದು ತಮಿಳು ಭಾಷೆಯಲ್ಲಿ. ನನಗೆ ಪೂರ್ತಿಯಾಗಿ ತಮಿಳು ಬರದಿದ್ದರೂ ಕೂಡಾ ಅವರ ಮಾತಿನ ಭಾವಾರ್ಥ ನೀಡಿದ್ದೇನೆ)
*****

ಮೇಲಿನ ಸಂಭಾಷಣೆ ಓದಿದರಲ್ಲ. ನವೆಂಬರ್ 1ಕ್ಕೆ ಇನ್ನೂ ನಾಲ್ಕು ಮುಂಚಿತವಾಗಿರುವಂತೆಯೇ ಇದು ಚೆನ್ನೈನಲ್ಲಿ ನನ್ನ ಅನುಭವಕ್ಕೆ ಬಂದದ್ದು.

ನೋಡಿ ಕನ್ನಡ ಪರಿಸ್ಥಿತಿ ಏನಾಗಿದೆ ಅಂತ್. ಕನ್ನಡ ದುಸ್ಥಿತಿಯಲ್ಲಿದೇ ಎಂದು ಕನ್ನಡಿಗರೇ ಕಳವಳ ಪಡುವುದು ಸೊಜಿಗವಲ್ಲ. ಆದರೆ, ಬೇರೆ ಭಾಷೆಯವರು ಕೂಡಾ ಬೆಂಗಳೂರು ಕನ್ನಡದ ಬಗ್ಗೆ ಕನಿಕರ (!?) ವ್ಯಕ್ತಪಡಿಸಿತ್ತಿರುವುದು ಕೊಂಚ ನನಗೆ ಆಶ್ಚರ್ಯವುಂಟು ಮಾಡಿತು.

ಅವರು ನಿಜವಾಗಿಯೂ ಕನ್ನಡ ದುಸ್ಥಿತಿಗೆ ವ್ಯಥೆ ಪಡುತ್ತಿದ್ದಾರೋ ಅಥವಾ ಬೆಂಗಳೂರಿನಲ್ಲಿ "ತಮಿಳು" ಬದಲಾಗಿ "ತೆಲುಗು" ಪ್ರಾಬಲ್ಯಪಡಿಯುತ್ತಿದೆ ಎಂದು ಆತಂಕಪಡುತ್ತಿದ್ದಾರೋ ಎಂಬದು ನನಗೆ ಅರ್ಥವಾಗಲಿಲ್ಲ. ಕನ್ನಡ ದುಸ್ಥಿತಿಗೆ ಇಳಿದಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.

ಮತ್ತೆ ನವೆಂಬರ್ 1 ಬಂದಿದೆ. ಸಿಹಿ ಹಂಚಿ, ನಾಮಕಾವಸ್ಥೆಗೆ ರಾಜ್ಯೋತ್ಸವದ ಆಚರಣೆಯ ನಡೆಯುತ್ತದೆ. ಮಂತ್ರಿ ಮಹೋದಯರು (ಸಂತೋಷದ ವಿಷಯವೆಂದರೆ, ಈ ಬಾರಿಯ ರಾಜ್ಯೋತ್ಸವದಲ್ಲಿ ಮಂತ್ರಿ ಮಹೋದಯರ ಆಟೋಟ ಅಷ್ಟಾಗಿಲ್ಲ, ಎಲ್ಲ ರಾಜ್ಯಪಾಲರ ದರ್ಬಾರು) ಭಾಷೆಯ ಹೆಸರಿನಲ್ಲಿ ತಮ್ಮ ವೋಟುಗಳನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಸಾಹಿತಿಗಳು, ಬರಹಗಾರರು, ಕನ್ನಡ ಪರ ಹೋರಾಟಗಾರರು ಈ ಒಂದು ದಿನ ಕನ್ನಡವನ್ನೇ ಮೈ ಮೇಲೆ ಆಹ್ವಾನಿಸಿಕೊಂಡವರಂತೆ ಮಾತಾಡುತ್ತಾರೆ. ಸಂಜೆ ಮರೆಯುತ್ತಾರೆ ಎಂಬುದು ನನ್ನದಷ್ಟೆ ವಾದವಲ್ಲ. ಇದು ಸಮಗ್ರ ಪ್ರಜ್ಞಾವಂತ ಕನ್ನಡಿಗರ ವಾದ ಎಂದು ನಾನು ಭಾವಿಸಿಕೊಳ್ಳುತ್ತೇನೆ.

2000 ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಇಂದಿನ ಸ್ಥಿತಿಯ ಕುರಿತು ನಿಜವಾದ ಚಿಂತನೆ ನಡೆಯುತ್ತಿದೆಯಾ..? ನಮ್ಮಷ್ಟೆ ಇತಿಹಾಸ ಹೊಂದಿರುವ ಪಕ್ಕದ "ತಮಿಳ್‌ ಭಾಷೆಗೆ"ಗೆ ಶಾಸ್ತ್ರೀಯ ಸ್ಥಾನ ಮಾನ ದೊರೆಯುತ್ತದೆ. ಆದರೆ ನಮ್ಮ ತಾಯಿ ನುಡಿಗಿಲ್ಲ. ನಾಲ್ಕಾರು ಸಾಹಿತಿಗಳು ಅದಕ್ಕಾಗಿ ಉಪವಾಸ ಮಾಡುತ್ತಾರೆ ಮತ್ತು ಇನ್ನೂ ನಾಲ್ಕಾರು ಸಾಹಿತಿಗಳು ಶಾಸ್ತ್ರಿಯ ಸ್ಥಾನಮಾನ ಅಗತ್ಯವಿಲ್ಲ ಎಂದು ಸಾರುತ್ತಾರೆ.

ಹೀಗಾದರೆ ಕನ್ನಡ ನುಡಿ ಉಳಿದೀತೇ ಎಂಬ ಪ್ರಶ್ನೇ ನಮ್ಮಂಥವರದು. ಯಾರು ಕೊಡುತ್ತಾರೆ ಉತ್ತರ...? ಉತ್ತರ ಕೊಡಬೇಕಾದವರೆಲ್ಲ ಕುರ್ಚಿಯ ಆಸೆಗಾಗಿ ಕೀಳು ಮಟ್ಟದ ರಾಜಕೀಯಕ್ಕೀಳಿದಿದ್ದಾರೆ (ದಯವಿಟ್ಟು ಕ್ಷಮಿಸಿ. ಕರ್ನಾಟಕದ ಇಂದಿನ ರಾಜಕೀಯಕ್ಕೆ "ಕೀಳುಮಟ್ಟ"ದ ಶಬ್ಧ ಬಳಸಿದರೆ "ಶಬ್ಧ"ಕ್ಕೂ ಅಪಚಾರ ಮಾಡಿದಂತೆ ಎಂಬ ಭಾವನೆ ನನ್ನದು).

ನಿಜವಾಗಿಯೂ ನಾವು ಈಗ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. "ಕನ್ನಡಕ್ಕೆ ಕೈ ಎತ್ತು.. ನಿನ್ನ ಕೈ ಕಲ್ಪವೃಕ್ಷವಾಗುವುದು" ಎಂಬ ಕವಿವಾಣಿ ಕಾರ್ಯರೂಪಕ್ಕೆ ಇಳಿಯುವುದು ಯಾವಾಗ...? ಜಾಗತಿಕರಣ ಅಲೆಗೆ ಸಿಲುಕಿ ಸ್ಥಳೀಯ ಸಂಸ್ಕೃತಿ, ವೇಷ, ಭೂಷಣ, ನಡೆ, ನುಡಿ, ಆಚಾರ-ವಿಚಾರ, ಸಂಪ್ರದಾಯಗಳು ತತ್ತರಿಸಿ ಹೋಗುತ್ತಿರುವಾಗ ಕನ್ನಡ ಎಂಬ ಸ್ನೇಹಮಯಿ, ಮೃದು ಭಾಷೆ ಈ ಹೊಡೆತವನ್ನು ತಾಳಿಕೊಂಡು ಬೆಳೆಯಬಲ್ಲದೆ..?

ಖಂಡಿತ ಬೆಳೆಯುತ್ತದೆ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಅಷ್ಟೆ. ಪಕ್ಕದ ತಮಿಳುರನ್ನು ನೋಡಿ ನಾವು ಕಲಿಯಬೇಕಾಗಿದೆ. ನಾಡು-ನುಡಿ ವಿಷಯ ಬಂದಾಗ ಪಕ್ಷ ಭೇದ ಮರೆತ ಜನರು ಒಂದಾಗುತ್ತಾರೆ. ರಾಷ್ಟ್ರೀಯ ಮಟ್ಟದ ವಾಹನಿಯೊಂದು ಸಂದರ್ಶಿದಾಗಲೂ ತಮಿಳುನಲ್ಲಿಯೇ ಮಾತಾಡುತ್ತಾರೆ ಆ ನಾಡಿನ ಮುಖ್ಯಮಂತ್ರಿ.. ಆದರೆ, ಇಂಗ್ಲಿಷ್ ಬರದಿದ್ದರೂ ಪರವಾಗಿಲ್ಲ. ಕನ್ನಡ ವಾಹಿನಿಗಳಲ್ಲಿ ಇಂಗ್ಲಿಷ್ ಮಾತಾಡುತ್ತಾರೆ ನಮ್ಮ ನಾಡಿನಲ್ಲಿ. ಇಲ್ಲಿ ಯಾರನ್ನು ತೆಗಳುವ ಉದ್ದೇಶ ನನಗಿಲ್ಲ. ಕೇವಲ ಹೋಲಿಕೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕುರಿತು ಹೇಳುವುದು ಅಷ್ಟೆ ನನ್ನ ಉದ್ದೇಶ. ನಮ್ಮಲ್ಲಿ ಅದಾಗುತ್ತಿಲ್ಲ. ಎಲ್ಲವೂ ಹೈಕಮಾಂಡ್‌ಗಳು ಕಟ್ಟಪ್ಪಣೆಯಲ್ಲಿ ನಡೆಯುತ್ತಿರುವಾಗ ಇದೂ ಸಾಧ್ಯವೂ ಇಲ್ಲ. ಹೀಗಿರುವಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವುದಾದರೂ ಹೇಗೆ, ಅಲ್ಲವೇ ?

ಇಲ್ಲಿ ಕೇವಲ ರಾಜಕೀಯ ಇಚ್ಛಾಶಕ್ತಿ ಮತ್ತು ರಾಜಕಾರಣಿಗಳನ್ನು ದೂರಿದರೂ ಸಾಲದು. ರಾಜಕಾರಣಿಗಳಷ್ಟೆ ಕನ್ನಡಿಗರು ಕೂಡಾ ಜವಾಬ್ದಾರರು ಎಂಬುದು ನನ್ನ ಅನಿಸಿಕೆ. ವಿದ್ಯಾವಂತರು ಎನಿಸಿಕೊಂಡಿರುವ ಬುದ್ಧಿವಂತ ಜನ ತಮ್ಮ ಮಕ್ಕಳಲ್ಲಿ ಮೊದಲು ಕನ್ನಡ ಪ್ರೀತಿ ಬೆಳೆಸಬೇಕು. ಆಳುವವರು ಕನ್ನಡದ ಕುರಿತು ಅಸಡ್ಡೆ ತೋರಿದಾಗ ಕಿವಿ ಹಿಂಡುವ ಕೆಲಸ ಮಾಡಬೇಕು. "ಕನ್ನಡ" ಎಂಬ ವಿಷಯ ಬಂದಾಗ ಕನ್ನಡಿಗರಿಗೆ ಬಂದಿರುವ ಬಳುವಳಿಗಳಾದ, "ಶಾಂತ ಪ್ರಿಯ"ರು, "ಸಹನಶೀಲ"ರು ಎಂಬ ಬಿರುದುಗಳನ್ನು ಕಿತ್ತೆಸೆಯಬೇಕು. ಆಗ ನಿಜವಾದ ಕನ್ನಡ ತಳವೂರಿ, ಬೆಳೆಯಲು ಸಾಧ್ಯ.

ಪ್ರತಿಯೊಬ್ಬ ಕನ್ನಡಿಗನು ನಮ್ಮ ನುಡಿಗೆ ಶಾಸ್ತ್ರಿಯ ಸ್ಥಾನಮಾನ ತಂದುಕೊಡುವಲ್ಲಿ ವೈಯಕ್ತಿವಾಗಿ ಮತ್ತು ಸಾಮೂಹಿಕವಾಗಿ ಚಳುವಳಿಯ ರೂಪದಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ಕರ್ನಾಟಕ ಮತ್ತು ಕನ್ನಡಕ್ಕೆ ಯಾವಾಗಲೂ ಕೊಂಚ ತಾರತಮ್ಯ ನೀತಿಯನ್ನೇ ಅನುಸರಿಸುವ ಕೇಂದ್ರಕ್ಕೆ ಬಿಸಿ ಮುಟ್ಟಿಸದಂತಾಗುತ್ತದೆ.

ಆದರೆ, ಕರ್ನಾಟದಲ್ಲಿ ಹುಟ್ಟಿ-ಬೆಳೆದ ಚಳುವಳಿಗಳ ಗತಿ ಇಂದು ಏನಾಗಿದೆ.

(ಈ ಲೇಖನ ವೆಬ್‌ದುನಿಯಾ.ಕನ್ನಡದಲ್ಲಿ ಪ್ರಕಟವಾಗಿದೆ. ಇಲ್ಲಿ ಕ್ಲಿಕಿಸಿ)

ಸೋಮವಾರ, ಅಕ್ಟೋಬರ್ 22, 2007

ಅತ್ತು ಬಿಡು ಹಾಗೇ ಸುಮ್ಮನೆ...


ಅತ್ತು ಬಿಡು, ಗೆಳೆಯ
ಹಾಗೇ ಸುಮ್ಮನೇ
ಹರಿದು ಹೋಗಲಿ
ಕಣ್ಣೀರು ಕೋಡಿ ನದಿಯಾಗಿ.
ಇಳಿದು ಹೋಗಲಿ
ಎದೆಯ ಭಾರ ಹಗುರಾಗಿ.

ನನ್ನ-ನಿನ್ನ ನಡುವಿನ
ಮಾತಿಲ್ಲದ ಮೌನಗಳು
ನೂರು ಅರ್ಥ ಕಲ್ಪಿಸಿವೆ
ನಮ್ಮ ನಡುವಿನ ಸಂಬಂಧಕ್ಕೆ

ಗೆಳೆಯಾ,
ಸಂಬಂಧದ ನಂಟಿಗೆ
ಹೆಸರಿನ ಅಂಟು ಬೇಡ
ಹಾಗೇ ಇದ್ದು ಬಿಡೋಣ
ಬಳ್ಳಿ, ಮರದ ಹಾಗೇ
ಭೂಮಿ, ಚಂದಿರನ ಹಾಗೇ
ಗಾಳಿ, ಗಂಧದ ಹಾಗೇ

ನಾನು ಬಳ್ಳಿಯಾ ? ನೀನು ಮರವಾ?
ನೀನು ಚಂದಿರನಾ? ನಾನು ಭೂಮಿನಾ ?
ಬೇಡ, ಮಿಗಿಲಾಟದ ತೊಳಲಾಟ
ಹೀಗೆ ಇರಲಿ, ಸಂಬಂಧದ
ಪರಿವೆ ಇಲ್ಲದ ಅನುಬಂಧ.

ಹಾಗೇ ಸುಮ್ಮನೇ
ಅತ್ತು ಬಿಡು,
ಇಳಿದು, ತೊಳೆದು
ಹೊಗಲಿ
ನೆನಪಿನ ಮೆರವಣಿಗೆ.

ಸೇರೊಣ ಭೂ-ಕಡಲಿನಂಚಿನಲಿ.

(ಈ ಕವನ ಕನ್ನಡ ಯಾಹೂನಲ್ಲಿ ಪ್ರಕಟಗೊಂಡಿದೆ)

ಸೋಮವಾರ, ಅಕ್ಟೋಬರ್ 15, 2007

ಚೆನ್ನೈ ರೋಡಿಗಿಳಿದ ಬಿನ್ನಾಣಗಿತ್ತಿಯರು...!


ಅರೇ.. ಚೆನ್ನೈ ರಸ್ತೆಗಳಲ್ಲಿ ಬಿನ್ನಾಣಗಿತ್ತಿ(ಬೆಡಗಿ)ಯರು ಸುತ್ತುತ್ತಿರಲಿಲ್ಲವೇ ಎಂದು ಪ್ರಶ್ನಿಸಬೇಡಿ. ಬೆಂಗಳೂರಿನ ಎಂಜಿ ರಸ್ತೆಯಲ್ಲಿ ತಿರುಗಾಡುವ ಬಿಂಕದ ಬೆಡಗಿಯರ ಹಾಗೆಯೇ ಚೆನ್ನೈನ ಮೌಂಟ್ ರೋಡ್, ಸ್ಪೆನ್ಸರ್ ಫ್ಲಾಜಾದಲ್ಲಿ ಕಣ್ಣಿಗೆ ಬಿಳುತ್ತಾರೆ. ಕಣ್ಣಿಗೂ ತಂಪು.. ಮನಸ್ಸಿಗೂ ಹಿತ. ಇದು ಪಡ್ಡೆ ಹುಡುಗರ ಘೋಷ ವಾಕ್ಯ.

ಆದರೆ, ನಾನು ಇಲ್ಲಿ ಹೇಳಲು ಹೊರಟಿದ್ದು ತಮ್ಮ ಅಂಗಾಗಳನ್ನು ಬಳಕಿಸುವ ಲತಾಂಗಿಯರ ಬಗ್ಗೆಯಲ್ಲ. ಬದಲಾಗಿ, ಚೆನ್ನೈ ಹೈಟೆಕ್ ಬಸ್‌ಗಳ ಬಗ್ಗೆ. ಚೈನ್ನೈ ರೋಡಿಗೆ ಹೈಟೆಕ್ ಬಸ್ಸುಗಳು ಲಗ್ಗೆ ಇಟ್ಟಿವೆ. ಈ ಹೈಟೆಕ್ ಬಸ್ಸುಗಳನ್ನೇ ನಾನು ಬಿನ್ನಾಣಗಿತ್ತಿಯರು ಎಂದು ಕರೆದಿದ್ದು. ಯಾಕೆಂದರೆ, ಚೆನ್ನೈ ನಗರ ಸಾರಿಗೆ ಬಸ್‌ಗಳನ್ನು ನೀವೊಂದು ಸಾರಿ ಗಮನಿಸಬೇಕು. ಅವು ಯಾವ ರೀತಿಯಾಗಿ ಇವೆ ಎಂದರೆ, ನೂರು ವರ್ಷದ "ಅಜ್ಜಿ"ಯ ಹಾಗೆ ಇವೆ. (ಎಲ್ಲ ಅಜ್ಜಿಯಂದಿರ ಕ್ಷಮೆ ಕೋರಿ)

ಅದಕ್ಕಾಗಿಯೇ ಹೈಟೆಕ್ ಬಸ್ಸುಗಳು ಒಂದು ನಮೂನೆ ಸಂಚಲನ ಮೂಡಿಸಿವೆ ಇಲ್ಲಿಯ ಜನರಿಗೆ. ನಾನು ಚೆನ್ನೈಗೆ ಬಂದು ಸುಮಾರು ಒಂದು ವರ್ಷವಾಗುತ್ತ ಬಂತು. ಚೈನ್ನೈಗೆ ಬಂದ ಮೊದಲ ದಿನವೇ ನನಗೆ ಆಶ್ಚರ್ಯ ತಂದಿದ್ದು ಇಲ್ಲಿಯ ಬಸ್ಸುಗಳು. ಅವುಗಳನ್ನು ನೋಡಿದಾಕ್ಷಣ ನನಗೆ ಈ ಬಸ್ಸುಗಳ ಸ್ವಾತಂತ್ರ್ಯ ಪೂರ್ವದ ಬಸ್ಸುಗಳಿರಬೇಕು ಎಂದು ಕೊಂಡಿದ್ದೆ.

ಆದರೆ, ಲಲನೆಯರು ಹೇಗೆ ಆಧುನೀಕರಣ ಮತ್ತು ಜಾಗತೀಕರಣ ಸೋಂಕಿಗೆ ಒಳಗಾಗಿ ಅಪಡೆಟ್(!) ಆಗುತ್ತಿದ್ದಾರೋ ಹಾಗೆಯೇ ಚೆನ್ನೈ ಬಸ್ಸುಗಳು ಅಪಡೆಡ್ ಆಗುತ್ತಿವೆ. ಕಳೆದ ಆರು ತಿಂಗಳ ಹಿಂದೆ ಸೆಮಿ ಲಕ್ಸುರಿಯಂಥ ಬಸ್ಸುಗಳು ಚೆನ್ನೈ ರಸ್ತೆಗಳನ್ನು ಆವರಿಸಿಕೊಂಡಿವೆ. ಇದೀಗ ಒಂದು ವಾರದಿಂದ ಅಲ್ಲೊಂದು ಇಲ್ಲೊಂದು ಹೈಟೆಕ್(ಬಿನ್ನಾಣಗಿತ್ತಿ) ಬಸ್ಸುಗಳು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಚೆನ್ನೈನಲ್ಲಿ ಪ್ರತಿಯೊಂದು ಆಫೀಸು, ಕಟ್ಟಡ, ಮನೆಗಳಲ್ಲಿ ಕಡ್ಡಾಯವಾಗಿ ಎಸಿ ಹಾಕಿಸಿರುತ್ತಾರೆ. ಆದರೆ, ಈ ಬಸ್ಸುಗಳಲ್ಲಿ ಯಾಕೆ ಆ ರೀತಿ ಮಾಡಬಾರದು ಎಂದು ನಾನು ಚೆನ್ನೈಗೆ ಹೊಸದಾಗಿ ಬಂದಾಗ ಯೋಚಿಸುತ್ತಿದ್ದೆ. ಆದರೆ, ಈಗ ಎಸಿ ಹೈಟೆಕ್ ಬಸ್ಸುಗಳೇ ರೋಡಿಗಿಳಿದಿವೆ.

ಮಾಡ್ ಹುಡುಗಿಯ ಚೆಲುವಿನ ಹಾಗೆ ಈ ಹೈಟೆಕ್ ಬಸ್ಸುಗಳಿಗೆ ಒಂದು ಅಂದವಿದೆ.. ಚೆಂದವಿದೆ. ಅಲ್ಲಲ್ಲಿ ಉಬ್ಬು-ತಗ್ಗುಗಳಿವೆ(?). ನೋಡಲು ನಯನ ಮನೋಹರವಾಗಿವೆ. ಹುಷಾರ್, ಈ ಬಸ್ಸುಗಳು ತುಂಬಾ ದುಬಾರಿ, ಹುಡುಗಿಯರ ಹಾಗೆ....! ಆದರೆ, ಇಲ್ಲಿಯ ಜನಕ್ಕೆ ಸ್ವಾತಂತ್ರ್ಯ ಪೂರ್ವದ(!) ಬಸ್ಸುಗಳ ಮೇಲೆ ಜಾಸ್ತಿ ಮೋಹ ಅನಿಸುತ್ತದೆ. ಯಾಕೆಂದರೆ ಈ 'ಅಜ್ಜಿ' ಬಸ್ಸುಗಳು ಯಾವಾಗಲೂ ಭರ್ತಿಯಾಗಿರುತ್ತವೆ.

ಈ 'ಅಜ್ಜಿ' ಬಸ್ಸುಗಳು ಪ್ರಯಾಣವೇ ಒಂದು ರೀತಿಯದ್ದು. ಬೇಸಿಗೆಯಲ್ಲಂತೂ ಹೇಳತೀರದು ಆ ಗೋಳು. ಯಾವ ಕಡೆಯಿಂದ ಗಾಳಿ ಬರದಂತೆ ಜನ ಜೋತು ಬಿದ್ದಿರುತ್ತಾರೆ. ಭವಿಷಃ ಮನೆಯಲ್ಲಿ ವ್ಯಾಯಾಮ ಮಾಡದವರಿಗೆ ಇಲ್ಲಿ ಒಂದು ತರಹ ವ್ಯಾಯಾಮ ಮಾಡಿದಂತೆ ಅನುಭವಾಗಲಿಕ್ಕೂ ಸಾಕು. ಊಹಿಸಿಕೊಳ್ಳಿ ಹಾಗೆ ಸುಮ್ಮನೆ, ಚೆನ್ನೈನಂತ ಬಿಸಿಲು ನಗರದಲ್ಲಿ 'ಅಜ್ಜಿ'ಕಾಲದ ತುಂಬಿದ ಬಸ್ಸಿನಲ್ಲಿನ ಸ್ಥಿತಿಯನ್ನು..!?

ಈ ಚೆನ್ನೈ ಮಹಾನಗರವೇ ಹಾಗೆ, ಯಾವುದನ್ನು ಅಷ್ಟು ಸುಲಭವಾಗಿ ತನ್ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಇನ್ನೂ ಊರಾಚೆಯೇ ನಿಲ್ಲಿಸಿ, ಪೂರ್ವಾಪರ ವಿಚಾರಿಸಿ, ತಿಳಿದುಕೊಂಡು ಒಳಗೆ ಬಿಟ್ಟುಕೊಳ್ಳುತ್ತದೆ, ಆಧುನಿಕತೆಗೆ ತೆರೆದುಕೊಳ್ಳುತ್ತದೆ ಅನ್ನಿಸುತ್ತದೆ ನನಗೆ. ಪಕ್ಕದ ಬೆಂಗಳೂರಿನಲ್ಲಿ ಈ ಹೈಟೆಕ್ ಬಸ್ಸುಗಳು ರಸ್ತೆಗಿಳಿದ ಸುಮಾರು ವರ್ಷಗಳೇ ಕಳೆದಿವೆ. ಆದರೆ, ಚೈನ್ನೈಗೆ ಈಗ ಬಂದಿದೆ ಆ ಕಾಲ.

ತನ್ನಷ್ಟಕ್ಕೆ ತಾನೇ ಮಡಿವಂತ ನಗರವೆಂದು ಭಾವಿಸಿಕೊಳ್ಳುವ ಚೆನ್ನೈ. ಮೇಲ್‌ನೋಟಕ್ಕೆ ತುಂಬಾ ಸಾಂಪ್ರದಾಯಿಕ ನಗರವೆಂದು ತೋರಿದರು, ಆ ಆಧುನಿಕತೆ ಹೆಮ್ಮಾರಿ, ಜಾಗತೀಕರಣದ ಬಿರುಗಾಳಿ ಇಲ್ಲಿಯ ಸಾಂಪ್ರದಾಯಿಕ ಬೇರುಗಳನ್ನು ಅಲ್ಲಾಡಿಸಿವೆ.

ಇಲ್ಲಿಗೂ ಅನೇಕ ಬಹುರಾಷ್ಟ್ರೀಯ ಸಾಫ್ಟವೇರ್ ಕಂಪೆನಿಗಳು ಲಗ್ಗೆ ಇಡುತ್ತಿವೆ. ಹೀಗಾಗಿಯೇ ಅರೆ ಮನಸ್ಸಿನಲ್ಲಿಯೇ ಚೆನ್ನೈ ತನ್ನನ್ನು ತಾನು ಈ ಥಳಕು -ಬಳಕು ಮಾದರಿಯ ಜೀವನಕ್ಕೆ ಅನಾವರಣಗೊಳ್ಳುತ್ತಿದೆಯಾ....? ಗೊತ್ತಿಲ್ಲ. ಒಂದು ಅಂತೂ ಸತ್ಯ. ಚೈನ್ನೈಗೆ ಈಗ ಕೇವಲ ಸಾಂಪ್ರದಾಯಿಕ ನಗರವಾಗಿ ಉಳಿದಿಲ್ಲ. ಹೈಟೆಕ್ ಬಿನ್ನಾಣಗಿತ್ತಿಯರೂ ರಸ್ತೆಗಿಳಿದಂತೆ, ತುಂಬಾ ಹಳೆಯ ಚೆನ್ನೈ ಕೂಡಾ ಮತ್ತಷ್ಟು ಯಂಗ್ ಆಂಡ್ ಎನರ್ಜಿಟಿಕ್ ಆಗಿ ಕಾಣುತ್ತಿದೆ.

ಶುಕ್ರವಾರ, ಅಕ್ಟೋಬರ್ 5, 2007

ಬೆಕ್ಕಿನ ಮರಿ ಬೆಲೆ 35,000 ರೂಪಾಯಿ..!


ನಿಜ.. ಬೆಕ್ಕಿನ ಮರಿ ಬೆಲೆ 35,000 ರೂಪಾಯಿ...! ಭಾರತ ಬಡವರ ರಾಷ್ಟ್ರ ಅಂತ್ ಯಾರು ಹೇಳ್ತಾರೆ. ಇಷ್ಟೆ ಬೆಲೆಯ ಏಳೆಂಟು ಬೆಕ್ಕಿನ ಮರಿಗಳನ್ನು ಹೊಂದಿರುವ ಒಡೆಯರು ಬೆಂಗಳೂರಿನಲ್ಲಿದ್ದಾರೆಂದರೆ ಹುಬ್ಬೇರಿಸಬೇಡಿ.

ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ನನ್ನ ಮಾಧ್ಯಮ ಮಿತ್ರ ಯಾವುದೋ ಒಂದು ಫೆಸ್ಟ್ ವರದಿ ಮಾಡಲು ನನ್ನನ್ನು ತನ್ನ ಜತೆ ಕರೆದುಕೊಂಡು ಹೋಗಿದ್ದ. ಅಲ್ಲಿ ಈ ಮಹಾ ದುಬಾರಿಯ ಬೆಕ್ಕು ನನ್ನ ಕಣ್ಣಿಗೆ ಬಿತ್ತು. ಅಷ್ಟೆ ಅಲ್ಲ, ನನ್ನ ಮಿತ್ರ ಅದನ್ನು ತನ್ನ ಕ್ಯಾಮೆರಾ ಕಣ್ಣಿಗೂ ತುಂಬಿಕೊಂಡ.

ತುಂಬಾ ಮುದ್ದಾಗಿದ್ದ ಆ ಬೆಕ್ಕಿನ ಮರಿ ನೋಡೋದಕ್ಕೆ ಕೊಂಚ ನಾಯಿ ಮರಿಯಂತೆ ಇತ್ತು. ನಾನು ಅದನ್ನ ನಾಯಿ ಮರೀನೆ ಅಂತ್ ತಿಳ್ಕೊಂಡಿದ್ದೆ. ಆದರೆ, ಆ ಬೆಕ್ಕಿನ ಮರಿಯ ಒಡತಿಯನ್ನು ಮಾತನಾಡಿಸಿದಾಗ ತಿಳಿದುಬಂತು, ಅದು ಬೆಕ್ಕಿನ ಮರಿ ಅಂತ್, ಅದು ವಿದೇಶದಿಂದ ಅಂದ್ರೆ, ಯುರೋಪಿನಿಂದ ಆಮದು ಮಾಡಿಕೊಂಡದ್ದು.

ಬೆಕ್ಕಿನ ಮರಿ ಒಡತಿ. ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಅವರಿಗೆ ಬೆಕ್ಕುಗಳನ್ನು ಸಾಕುವುದು ಹವ್ಯಾಸವಂತೆ. ಅದು ವಿದೇಶಿ ಬೆಕ್ಕುಗಳು (!). ಇದೇ ಮಾದರಿಯ ಸುಮಾರು ಏಳೆಂಟು ಬೆಕ್ಕುಗಳನ್ನು ಸಾಕಿಕೊಂಡಿದ್ದಾರಂತೆ. ನಾನು ನೋಡಿದ ಬೆಕ್ಕಿನ ಬೆಲೆ ಯುರೋ ಲೆಕ್ಕದಲ್ಲಿ 7 ರಿಂದ 8 ನೂರು ಯುರೋ ಅಂತೆ. ಅಂದ್ರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 35 ಸಾವಿರು ರೂಪಾಯಿಯಂತೆ. ಈ ವಿವರ ನೀಡಿದ್ದು ಕೂಡಾ ಅವರೆ. ಆದರೆ, ಅವರ ಹೆಸರು ಕೇಳೋದನ್ನು ಮರೆತು ಬಿಟ್ಟೆ.

ಮತ್ತೊಬ್ಬ ಮಿತ್ರ "ಈ ಬೆಕ್ಕು ಇಲಿ ಹಿಡಿಯುತ್ತಾ..." ತರ್ಲೆ ಪ್ರಶ್ನೆ ಕೇಳಿದ. ಅದಕ್ಕೆ ಅವರು "ಗೊತ್ತಿಲ್ಲ.. ಹೊರಗಡೆ ಬಿಟ್ಟು ನೋಡಿಲ್ಲ" ಅಂದ್ರು. (ಇಲಿ ಹಿಡಿಯುತ್ತೆ, ಇಲಿ ತಂದು ಬಿಡಿ ಎಂಬ ಭಾವನೆಗಳು ಆಗ ಅವರ ಮುಖದಲ್ಲಿದ್ದವು). ಈ ಮಾತಿಗೆ ನಾವು ಎಲ್ಲರು ನಕ್ಕೇವು.
****

ಸ್ವಲ್ಪ ಯೋಚಿಸಿ, ಸುಮಾರು 35,000 ರೂಪಾಯಿ ಬೆಲೆಯ ಏಳೆಂಟು ಬೆಕ್ಕಿನ ಮರಿಗಳನ್ನು ಸಾಕುವ ಹವ್ಯಾಸಿಗರು(ಹಣವಂತರು) ನಮ್ಮಲ್ಲಿದ್ದಾರೆ. ಹೀಗಿರಬೇಕಾದರೆ, ಭಾರತ ಹೇಗೆ ಬಡ ರಾಷ್ಟ್ರವಾಗೋಕೆ ಸಾಧ್ಯ ಅಲ್ವಾ.

35 ಸಾವಿರು ರೂಪಾಯಿಯಲ್ಲಿ ಗ್ರಾಮೀಣ ಪ್ರದೇಶದ ಓರ್ವ ಬಡ ಹುಡುಗ ಪಿಯೂಸಿ ವರೆಗೆ ಶಿಕ್ಷಣ ಪೂರೈಸಬಲ್ಲ. ಅಂದ್ರೆ ಅಂತ ಏಳೆಂಟು ಬೆಕ್ಕಿನ ಮರಿಗಳನ್ನು ಸಾಕಿಕೊಂಡಿರುವ ಒಡತಿ ಸುಮಾರು ಏಳೆಂಟು ಹುಡುಗರಿಗೆ ಶಿಕ್ಷಣ ನೀಡಬಹುದಾಗಿತ್ತು. ಅಲ್ವಾ, ನಮ್ಮ ದೇಶದಲ್ಲಿ ಇಂತಹುದನ್ನು ಕೇಳಬೇಡಿ. ಬೇಡವಾದಕ್ಕೆ ದುಡ್ಡು ಸುರಿಯೋ ಜನ ಬೇಜಾನ್ ಇದ್ದಾರೆ. ಯಾವುದಾದರೂ ಒಂದು ಒಳ್ಳೆಯ ಕಾರ್ಯ, ಬಡವರಿಗೆ ಸಹಾಯವಾಗುವಂಥದಕ್ಕೆ ದುಡ್ಡು ಕೇಳಿದರೆ ಅವರ ಹತ್ರ, ದುಡ್ಡು ಇರಲ್ಲ.

ಅಷ್ಟಕ್ಕೂ ಅದು ಅವರ ದುಡ್ಡು. ಅವರು ಬೆಕ್ಕು ಅಥವಾ ನಾಯಿಯನ್ನಾದರೂ ಖರೀದಿಸುತ್ತಾರೆ. ಅದನ್ನು ಕೇಳೊ ಹಕ್ಕು ನಮಗೆ ಇಲ್ಲ. ಆದರೆ, ಪ್ರತಿಯೊಬ್ಬನಿಗೂ ಸಮಾಜ ಋಣ ಇರುತ್ತಲ್ಲ. ಬೆಕ್ಕಿಗೆ, ನಾಯಿಗೆ ಲಕ್ಷಾಂತರ ಖರ್ಚು ಮಾಡೊ ಜನ, ಅದರಲ್ಲಿ ಕೊಂಚ ಭಾಗವನ್ನಾದರೂ ಹಳ್ಳಿಯಲ್ಲಿರುವ ಪ್ರತಿಭಾವಂತ ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದರೆ, ಒಂದು ಕುಟುಂಬ ಬದುಕುತ್ತದೆ. ಇಂದಿಗೂ ಹಳ್ಳಿಯಲ್ಲಿ ಅನೇಕ ಪ್ರತಿಭಾವಂತ ಹುಡುಗರು ದುಡ್ಡಿನ ಆಸರೆ ಇಲ್ಲದೇ, ತಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸಿ, ಕೂಲಿ-ನಾಲಿ ಮಾಡುತ್ತಿದ್ದಾರೆ. ಇಂಥವರಿಂದ ಅಂಥವರಿಗೆ ಸ್ವಲ್ಪವಾದರೂ ಸಹಾಯವಾದರೆ ನಮ್ಮ ಹಳ್ಳಿಗಳು, ಹಳ್ಳಿಗರು ಉದ್ದಾರವಾಗುತ್ತಾರೆ.

ಅಷ್ಟಕ್ಕೂ ನಾಯಿ, ಬೆಕ್ಕು ಸಾಕೋದು ತಪ್ಪಲ್ಲ. ಆದರೆ, ಅವುಗಳ ಮೇಲೆ ಖರ್ಚು ಮಾಡೋ ಹಣದಲ್ಲಿ ಕಾಲು ಭಾಗವನ್ನಾದರೂ ಬಡವರಿಗೆ ಕೊಟ್ಟರೆ, ದೇಶ ಉದ್ದಾರವಾದೀತು.

ಹೋಗ್ಲಿ ಬಿಡಿ.. ಇದನ್ನೆಲ್ಲ ಹೇಳೋದಕ್ಕೆ ನಾನ್ಯಾರು ..?? ನೀವು ಯಾರು.. ಅಲ್ವಾ ??

ಶುಕ್ರವಾರ, ಸೆಪ್ಟೆಂಬರ್ 28, 2007

ನಗುವ ನನ್ನ ನಲ್ಲೆ; ನೀ ಇರುವೇ ಹೃದಯಲ್ಲೆ

ಹೇ ಒರಟ,

"ಈ ಪ್ರೀತಿನೇ ಹಾಗೆ, ಬಾ ಅಂದ್ರ ಬರಲ್ಲ, ಹೋಗು ಅಂದ್ರ ಹೋಗಲ್ಲ" ಅಂತ್ ನೀನೇ ಹೇಳಿದ್ದು. ನೆನಪು ಮಾಡ್ಕೊ. ಶುದ್ಧ ಒರಟ ನೀನು. ನನ್ನ ಬೆನ್ನ ಹಿಂದೆ ಬಿದ್ದು, ನನ್ನ ಹೃದಯ ಕದ್ದವನು ನೀನೆ ತಾನೆ, ಈಗ ಆ ಹೃದಯ ಕಾಯುತ್ತಿದೆ ಎಂಬ ಅರಿವು ನಿನಗಿಲ್ಲಂದ್ರೆ ಏನರ್ಥ. ನನಗಿಂತಲೂ ನಿಂಗೆ ನಿನ್ನ ಕೆಲಸವೇ ಮುಖ್ಯನಾ... ಹೀಗೆ ಸಾವಿರಾರು ಪ್ರಶ್ನೆ ಕೇಳು ಬೇಕು ಅನ್ಕೊಂಡಿದ್ದೀನಿ, ಆದ್ರೆ ಕೇಳಲ್ಲ. ಅದು ನಿಂಗೂ ಗೊತ್ತು ದೊರೆ.

ಕಾಲೇಜ್‍‌ನಲ್ಲಿ ನನ್ನಷ್ಟಕ್ಕೆ ನಾನು ಹಾಡ್ತಾ, ಕುಣಿತಾ ಹಾಯಾಗಿದ್ದೆ. ನೀನೆಲ್ಲಿಂದ ಬಂದೆಯೊ..? ಅದು ಹ್ಯಾಗೆ ನನ್ನ ಮನಸ್ಸನ್ನಾ ಗೆದ್ದೆಯೋ..? ಒಂದು ಅರ್ಥ ಆಗಲ್ಲ ನಂಗೆ. ನಿಂಗೆ ಗೊತ್ತಾ, ನಾನು-ನೀನು ಸರಿಯಾದ ಜೋಡಿಯಲ್ಲಂತ ನನ್ನ ತಂಗಿ ಹೇಳ್ತಾಳೆ. ಅವಳು ಹೇಳೊದು ನಿಜ. ಕಾಲೇಜು ರಾಣಿ(ಮಿಸ್ ಕಾಲೆಜ್)ಯಾಗಿ ಆಯ್ಕೆಯಾದಾಕೆ ನಾನು. ಅದಾವುದೋ ಹಳ್ಳಿಯ ಮೊಲೆಯಿಂದ ಎದ್ದು ಬಂದವನಂತೆ ಇದ್ದೆ ನೀನು.

ನನ್ನ ಒಂದು ಕಣ್ ನೋಟಕ್ಕಾಗಿ ಕಾಲೇಜು ಹುಡುಗರೆಲ್ಲಾ ನನ್ನ ಹಿಂದೆನೇ ಬರ್ತಾ ಇದ್ದರ್ರೂ. ಆದ್ರೂ, ಹುಡುಗಾ ನೀನೆ ನಂಗೆ ಇಷ್ಟ, ಯಾಕೆ ಗೊತ್ತಾ..? ಹಾಗೇ ಸುಮ್ಮನೆ ನೋಡಿದ್ರೆ ನೇರವಾಗಿ ಇರಿಯುವ ಆ ನಿನ್ನ ಕಣ್ಣುಗಳು, ಯಾವಾಗಲೂ ನಿನ್ನ ತುಟಿಯಲ್ಲಿ ಸುಡೊ ಆ ಸಿಗರೇಟು, ನಿನ್ನ ಡಿಪಾರ್ಟಮೆಂಟ್ ಬಳಿ ಇದ್ದ ಗಿಡದ ಹತ್ತಿರ ಒಂದು ಕಾಲು ಓರೆಯಾಗಿಟ್ಟು ನಿಲ್ಲುವ ಭಂಗಿ ಇದೆಯಲ್ಲಾ.. ಅದು ನಂಗೆ ತುಂಬಾ ಇಷ್ಟ. ನಿನ್ನ ಹಾಗೆ ನಡೆಯೋಕೆ ಯಾರಿಗೂ ಬರಲ್ಲ.. ಒರಟ.

ಎಲ್ಲಕ್ಕಿಂತ ಹೆಚ್ಚಾಗಿ ನೀನು ಒರಟನಾಗಿ ಕಂಡ್ರೂ, ಮಗುವಿನಂಥ ನಿನ್ನ ಹೃದಯ ನನ್ನನ್ನು ಮರುಳು ಮಾಡಿತು ಮಾರಾಯಾ. ಇನ್ನೂ ನೀ ಬರೆಯುವ ಕವಿತೆಗಳು ನನ್ನಂಥ ಸಾವಿರಾರು ಹುಡುಗಿಯರನ್ನ ನಿನ್ನತ್ತ ತಂದುಕೊಡಬಲ್ಲವು. ಥ್ಯಾಂಕ್ ಗಾಡ್, ಸದ್ಯಕ್ಕೆ ಆ ದೈವ ನನ್ನದಾಗಿದೆ. ಸರೀ ಹೀಗೆ ಹೇಳ್ತಿದ್ದೀನಿ ಅಂತಾ ಬಹಳ ಉಬ್ಬಿ ಹೋಗಬೇಡ. ನಾನೇನು ನಿನಗಿಂತ ಕಮ್ಮಿ ಇಲ್ಲ ಎಂಬುದು ನೆನಪಿರಲಿ. ಹ್ಹ ಹ್ಹ ಹ್ಹ ಹ್ಹ.

ಅಯ್ಯಾ ದೊರೆ, ಆ ನಿನ್ನ ಕೆಲಸಗಳನ್ನು ಬದಿಗಿಟ್ಟ ನಿನಗಾಗಿ ಕಾಯುತ್ತಿರುವ ಈ ಹೃದಯಕ್ಕೆ ದರ್ಶನ ತೋರಿಸಬಾರ್ದಾ. ನಿನ್ನ ತುಟಿಗಳ ನಡುವೆ ಸದಾ ಸುಡುವ ಸಿಗರೆಟ್ ನೋಡುಬೇಕು ಅಂತಾ ತಂಬಾ ಆಸೆ ಕಣೋ. ಶ್.. ಹೀಗೆ ಹೇಳ್ತಿದ್ದೀನಿ ಅಂತ ಒಂದು ಪ್ಯಾಕ್ ಸಿಗರೆಟ್ ಮುಗ್ಸಿಬಿಟ್ಟು ಎರಡನೇ ಪ್ಯಾಕ್‌ಗೆ ಹೋಗಬೇಡ.

ಏ, ಹೇಳೊದು ಮೆರೆತು ಬಿಟ್ಟೆ. ನೀ ಬರೆದ "ನನ್ನ ನಲ್ಲೆ" ಕವನ ಮೊನ್ನೆಯ ವಾರ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅದು ನನಗೋಸ್ಕರ ತಾನೆ ಬರೆದಿದ್ದು ತಾನೆ ? ಬರೆದಿರ್ತಿಯಾ ಬಿಡು. ತುಂಬಾ ಚೆನ್ನಾಗಿದೆ ಅಂತಾ ಹೇಳಲ್ಲಾ, ಯಾಕೆಂದ್ರೆ ನೀ ಬರೆದ ಯಾವ ಕವನಗಳು ಚೆನ್ನಾಗಿರಲ್ಲ ಹೇಳು. ಈ ಕವನದ ಸಾಲುಗಳನ್ನು ಕೂಡಾ ಅದೆಷ್ಟು ಹುಡುಗರು ಹುಡುಗಿಯರಿಗೆ "ಕೊಟ್" ಮಾಡ್ತಾರೋ ನಾ ಕಾಣೆ.

ನಗುವ ನನ್ನ ನಲ್ಲೆ
ನೀ ಇರುವೇ ಹೃದಯಲ್ಲೆ
ಭೂಮಿ-ಭಾನು ದಾಟಿ
ಪ್ರೀತಿಯ ಲೋಕಕ್ಕೆ
ಬಾರೆ.. ನನ್ನ ನಲ್ಲೆ,
ಈ ಲೈನ್‌ಗಳು ತುಂಬಾ ಇಷ್ಟ ಆಯ್ತು ನಂಗೆ. ಹೇಳು ಒರಟ, ಯಾವಾಗ ಬರ್ತಿಯಾ ಊರಿಗೆ, ಯಾವಾಗ ಹೋಗೋಣೊ ಪ್ರೀತಿಯ ಲೋಕಕ್ಕೆ.

ನಿನ್ನವಳು
ಮೀನಾಕ್ಷಿ

(ಈ ಪತ್ರ ಯಾಹೂ ಕನ್ನಡದಲ್ಲಿ ಪ್ರಕಟಗೊಂಡಿದೆ. ನೋಡಲು ಇಲ್ಲಿ ಕ್ಲಿಕಿಸಿ)

ಬುಧವಾರ, ಸೆಪ್ಟೆಂಬರ್ 19, 2007

ನನ್ನವಳ ಪ್ರೀತಿ

ನನ್ನವಳ
ಪ್ರೀತಿ ಅಂದ್ರ
ಚೆನ್ನೈ
ಮಳೆ ಇದ್ದಾಂಗ
ರಾತ್ರಿ ಪೂರ್ತಿ
ಧೋ ಎಂದು ಸುರಿದು
ಮತ್ತ...
ಬೆಳಗ್ಗೆ ಒಣಾ ಬಿಸಿಲು.

ಶುಕ್ರವಾರ, ಸೆಪ್ಟೆಂಬರ್ 14, 2007

ವಿದಾಯ ಹೇಳಿದ 'ನಾಯಕ' ಫ್ಲೆಮಿಂಗ್

ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕ ಯಾರು ಎಂಬ ಪ್ರಶ್ನೆ ಎದುರಾದಾಗ ಎರಡು ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತವೆ. ಆಸ್ಟ್ರೇಲಿಯಾ ತಂಡದ ನಾಯಕ 'ರಿಕಿ ಪಾಟಿಂಗ್' ಮತ್ತು ನ್ಯೂಜಿಲೆಂಡ್ ತಂಡದ 'ಸ್ಟೀಫನ್ ಫ್ಲೆಮಿಂಗ್'.

ಆದರೆ, ಇವರಿಬ್ಬರಲ್ಲೂ ಯಾರು ಉತ್ತಮರು ಎಂದು ಪ್ರಶ್ನಿಸಿದಾಗ, ಕ್ರಿಕೆಟ್ ಪಂಡಿತರು ಫ್ಲೆಮಿಂಗ್‌ನತ್ತ ಬೆರಳು ಮಾಡುತ್ತಾರೆ. ಯಾಕೆಂದರೆ, ಆಸ್ಟ್ರೇಲಿಯಾ ತಂಡದಲ್ಲಿ ಅನೇಕ ಸ್ಟಾರ್ ಆಟಗಾರರಿದ್ದಾರೆ. ಹೀಗಿರುವಾಗ ನಾಯಕ ತನ್ನ ಕೆಲಸವನ್ನು ಯಾವುದೇ ಆಯಾಸವಿಲ್ಲದೇ ನಿರ್ವಹಿಸಬಹುದು. ಆದರೆ, ಯಾವುದೇ ಸ್ಟಾರ್ ಆಟಗಾರರಿಲ್ಲದೇ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸುವಂಥ ತಂತ್ರಗಳನ್ನು ಹೆಣಿದು ಖೆಡ್ಡಾಗೆ ಕೆಡವುವುದು ಫ್ಲೆಮಿಂಗ್‌‌ನಂತಹ ಚಾಣಾಕ್ಷರಿಗೆ ಮಾತ್ರ ಸಾಧ್ಯ.

ಇಂಥ ಆಟಗಾರ ಮತ್ತು ನಾಯಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿ, ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ ತಂಡದ ನಾಯಕನ ಸ್ಥಾನವನ್ನು ಕೂಡಾ ಬಿಟ್ಟುಕೊಡುವ ಮೂಲಕ, ಕ್ರಿಕೆಟ್‌ನಿಂದ ನಿವೃತ್ತಿಯ ಅಂಚಿನವರೆಗ ಬಂದಿರುವುದನ್ನು ಸೂಕ್ಷ್ಮವಾಗಿ ಹೊರಗೆಡುವಿದ್ದಾರೆ. ಆದರೆ, ಇದು ಅವರ ಅಭಿಮಾನಿಗಳಿಗಂತೂ ನಿರಾಶೆ ತಂದಿರುವುದರಲ್ಲಿ ಸಂಶಯವೇ ಇಲ್ಲ.

ನ್ಯೂಜಿಲೆಂಡ್ ಪರ ಅತಿ ಹೆಚ್ಚು ಯಶಸ್ಸು ಗಳಿಸಿದ ನಾಯಕರ ಹೆಸರು ಸಾಲಿನಲ್ಲಿ ಫ್ಲೆಮಿಂಗ್ ಹೆಸರು ಢಾಳವಾಗಿ ಕಾಣಿಸುತ್ತದೆ. ಇಂಥ ಮಹಾನ್ ಆಟಗಾರ ಇನ್ನೂ ಮುಂದೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬೇಸರ ಸಂಗತಿಯಾದರೂ, ಅರಗಿಸಿಕೊಳ್ಳಲೇಬೇಕು. ಯಾಕೆಂದರೆ, ಪ್ರತಿಯೊಂದು ಆರಂಭಕ್ಕೂ ಅಂತ್ಯವಿದ್ದೇ ಇರುತ್ತದೆ.

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪಾಟಿಂಗ್, ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್, ಸ್ಪಿನ್ ಮೋಡಿಗಾರ ಮುರಳೀಧರನ್ ಆಗಲಿ ಒಂದು ದಿನ ಅಂಕಣದಿಂದ ಹೊರಹೋಗಲೇಬೇಕು. ಅಂತಹುದೇ ಸ್ಥಿತಿಗೆ ಫ್ಲೆಮಿಂಗ್ ತಲುಪಿದ್ದಾರಷ್ಟೆ. ಅವರು ಟೆಸ್ಟ್‌ಗೆ ಲಭ್ಯವಿರುವುದಾಗಿ ಹೇಳಿದ್ದಾರಾದರೂ, "ಹೊಸ ನೀರು ಬಂದಾಗ, ಹಳೇ ನೀರು ಕೊಚ್ಚಿಕೊಂಡು ಹೋಗಲೇ ಬೇಕು" ಎನ್ನುವ ಹಾಗೆ, ನ್ಯೂಜೆಲಿಂಡ್ ತಂಡದಲ್ಲಿ ಬಿಸಿ ರಕ್ತದ ಯುವಕರ ಆಗಮನವಾಗುತ್ತಿರುವಾಗ ಫ್ಲೆಮಿಂಗ್ ಟೆಸ್ಟ್ ಕ್ರಿಕೆಟ್‌ನಿಂದ ನೇಪಥ್ಯಕ್ಕೆ ಸರಿಯುವ ದಿನಗಳು ಕೂಡಾ ಬಹಳ ದೂರವಿಲ್ಲ ಎಂದು ಹೇಳಬಹುದು.

ಫ್ಲೆಮಿಂಗ್ ಪೂರ್ಣ ಹೆಸರು, ಸ್ಟೀಫನ್ ಪೌಲ್ ಫ್ಲೆಮಿಂಗ್. ಇವರು 1973 ಏಪ್ರಿಲ್ 1 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದರು. ಫ್ಲೆಮಿಂಗ್ ತಂದೆ ಕ್ರೈಸ್ಟ್‌ಚರ್ಚ್‌ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರಾಗಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಫ್ಲೆಮಿಂಗ್, ನೋಡು ನೋಡುತ್ತಿದ್ದಂತೆ ತಂಡದ ಅವಿಭಾಜ್ಯ ಅಂಗವಾಗಿ ಬೆಳೆದರು.

ಎಡಗೈ ಬ್ಯಾಟ್ಸ್‌ಮನ್‌ರಾದ ಫ್ಲೆಮಿಂಗ್, 1994ರಲ್ಲಿ ಭಾರತ ವಿರುದ್ಧ ಟೆಸ್ಟ್ ಆಡುವ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ತಾವಾಡಿದ ಪ್ರಥಮ ಪಂದ್ಯದಲ್ಲಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದು ವಿಶೇಷ. ಈ ಪಂದ್ಯದಲ್ಲಿ ಅವರು 92 ರನ್ ಗಳಿಸಿದ್ದರು.

ಇದೇ ಪ್ರವಾಸದಲ್ಲಿ ಅವರು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಕ್ಕೂ ಕಾಲಿಟ್ಟರು. ಈ ಪಂದ್ಯದಲ್ಲಿ ಅವರು 90 ರನ್ ಗಳಿಸಿ ರನ್ ಔಟ್‌ಗೆ ಬಲಿಯಾದರು.

ಫ್ಲೆಮಿಂಗ್ ಆಟದ ತಂತ್ರಗಾರಿಕೆ ಹೆಸರುವಾಸಿಯಾದಂತೆ ಕೆಲವು ವಿವಾದಗಳಿಗೂ ಸಿಕ್ಕಿಹಾಕಿಕೊಂಡಿದ್ದಾರೆ. 1995 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ತಂಡದ ಸಹ ಸದಸ್ಯರೊಂದಿಗೆ ಹೊಟೇಲೊಂದರಲ್ಲಿ ಮಾರಿಜುನಾ ಸೇದುವಾಗ ಸಿಕ್ಕಿಬಿದ್ದಿದ್ದು ವಿವಾದಕ್ಕ ಕಾರಣವಾಗಿತ್ತು. ಮುಂದೆ 1996-97ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನ ಮೊದಲ ಶತಕ ದಾಖಲಿಸಿದ ಫ್ಲೆಮಿಂಗ್, ಮೂರನೇ ಟೆಸ್ಟ್ ಪಂದ್ಯದಲ್ಲಿ ಲೀ ಜೊರ್ಮನ್ ಅವರಿಂದ ನಾಯಕನ ಜವಾಬ್ದಾರಿ ವಹಿಸಿಕೊಂಡರು. ಆಗ ಅವರ ವಯಸ್ಸು 23 ವರ್ಷ 320 ದಿನಗಳು. ಹೀಗಾಗಿ ನ್ಯೂಜಿಲೆಂಡ್ ಕಂಡ ಅತ್ಯಂತ ಕಿರಿಯ ನಾಯಕ ಎಂದು ಗುರುತಿಸಿಕೊಂಡರು.

2000ರಲ್ಲಿ ಜಿಂಬಾಬ್ವೆ ವಿರುದ್ಧ ಗೆಲವು ಸಾಧಿಸುವ ಮೂಲಕ ನ್ಯೂಜಿಲೆಂಡ್ ಕ್ರಿಕೆಟ್‌‌ನ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡರು. ಅವರ ನಾಯಕತ್ವದಲ್ಲಿ 12ನೇ ಗೆಲವು ಇದಾಗಿತ್ತು. ಇದಕ್ಕೂ ಮೊದಲು ಈ ದಾಖಲೆ ಗಫ್ ಹೊವರ್ತ್ ಅವರ ಹೆಸರಿನಲ್ಲಿತ್ತು.

ನಾಯಕನಾಗಿ ಫ್ಲೆಮಿಂಗ್
ಕಳೆದ ಹತ್ತು ವರ್ಷಗಳಲ್ಲಿ ಸುಮಾರು 80 ಟೆಸ್ಟ್ ಪಂದ್ಯಗಳಲ್ಲಿ 25 ಪಂದ್ಯಗಳಲ್ಲಿ ಗೆಲವು ಸಾಧಿಸಿದ್ದು, 25 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಒಂದು ದಿನ ಕ್ರಿಕೆಟ್ ತಂಡದ ನಾಯಕರಾಗಿ ಫ್ಲೆಮಿಂಗ್, ಕಳೆದ ಹತ್ತು ವರ್ಷಗಳಲ್ಲಿ 218 ಪಂದ್ಯಗಳಲ್ಲಿ 98 ಸಾರಿ ಗೆಲುವು ಕಂಡಿದ್ದಾರೆ.

ಅಂಕಿ ಅಂಶಗಳು
ಫ್ಲೆಮಿಂಗ್ ಇದುವರೆಗೆ 104 ಟೆಸ್ಟ್ ಪಂದ್ಯ ಆಡಿ 177 ಇನಿಂಗ್ಸ್‌ನಲ್ಲಿ 36.64 ಸರಾಸರಿಯಲ್ಲಿ 6620 ರನ್ನಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 9 ಶತಕಗಳು ಮತ್ತು 41 ಅರ್ಧ ಶಕತಕಗಳು ಸೇರಿವೆ.

ಅದೇ ರೀತಿಯಾಗಿ 280 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿ 269 ಇನಿಂಗ್ಸ್‌ಗಳಲ್ಲಿ 32.40 ಸರಾಸರಿಯಂತೆ 8037 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 8 ಶತಕ ಮತ್ತು 49 ಅರ್ಧ ಶತಕಗಳು ಸೇರಿವೆ.

(ಈ ಲೇಖನ ಯಾಹೂ(in.kannada.yahoo.com) ಕನ್ನಡದಲ್ಲಿ ಪ್ರಕಟಗೊಂಡಿದೆ. ಲಿಂಕ್-http://in.kannada.yahoo.com/News/Sports/0709/13/1070913053_1.htm)

ಶನಿವಾರ, ಸೆಪ್ಟೆಂಬರ್ 8, 2007

ಪುಟ್ಟ ಸಂಭ್ರಮ

ಕನ್ನಡದ ಪ್ರತಿಷ್ಠಿತ ಪೊರ್ಟಲ್ ದಟ್ಸ್ ಕನ್ನಡ ಡಾಟ್ ಕಾಮ್(thatskannada.com) 'ನನ್ನ ಹಾಡು' ಬ್ಲಾಗ್ ಕುರಿತು ನಾಲ್ಕು ಮೆಚ್ಚುಗೆಯ ಮತ್ತು ಪ್ರೋತ್ಸಾಹದಾಯಕ ಮಾತುಗಳನ್ನಾಡಿ ತಮ್ಮ ಪೊರ್ಟಲ್‌ನಲ್ಲಿ ಪರಿಚಯಿಸಿದ್ದಾರೆ. ಇದಕ್ಕೆ ಹೇಗೆ ನಾನು ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ. ಯಾಕೆಂದರೆ ಇದು ನನಗೆ ಪುಟ್ಟ ಸಂಭ್ರಮವನ್ನುಂಟು ಮಾಡಿದೆ. ನನ್ನ ಭಾವನೆಗಳನ್ನು ಅವರು ಗುರುತಿಸಿರುವುದಕ್ಕೆ ತುಂಬಾ ಸಂತೋಷವಾಗಿದ್ದು, ದಟ್ಸ್ ಕನ್ನಡ ಡಾಟ್ ಕಾಮ್‌ಗೆ ಅನಂತ ವಂದನೆಗಳನ್ನು ಹೇಳಲಿಚ್ಛಿಸುತ್ತೇನೆ.

ನಿಮ್ಮ ಬೆಂಬಲ, ಪ್ರೋತ್ಸಾಹ ಹೀಗೆ ಇರಲಿ.
ಮಲ್ಲಿಕಾರ್ಜುನ್

(ಬ್ಲಾಗ್ ಕುರಿತು ಮೆಚ್ಚುಗೆ ಬರೆದ ದಟ್ಸ್ ಕನ್ನಡ ಕೊಂಡಿ ಇಲ್ಲಿ ಇದೆ http://thatskannada.oneindia.in/hand_post/blogs/070907nanna-hadu-mallikarjuna.html)

ಗುರುವಾರ, ಸೆಪ್ಟೆಂಬರ್ 6, 2007

ಜೀವನ ರೂಪಿಸುವ ಶಿಕ್ಷಕರನ್ನು ಮನಸಾ ಸ್ಮರಿಸೋಣ...

ಮತ್ತೆ ಶಿಕ್ಷಕರ ದಿನಾಚರಣೆ ಬಂದಿದೆ; ಅದೇ ಬಾಲ್ಯದ ನೆನಪುಗಳನ್ನು ಹೊತ್ತು ತಂದಿದೆ.

ಈ ದಿನದಂದು ನಮಗೆ ಆಗ ಹಬ್ಬದ ಸಂಭ್ರಮ. ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಚಿಕ್ಕ ಪೋಸ್ಟರ್ ‌‌(ನಾಲ್ಕಾಣೆ ದೇಣಿಗೆ ನೀಡಬೇಕಿತ್ತು)ಗಳನ್ನು ನೋಟ್ ಬುಕ್ ಮೇಲೆ ಅಂಟಿಸಿ ಸಂತಸಪಡುತ್ತಿದ್ದೆವು. ಶಿಕ್ಷಕರ ಕುರಿತು ಮನೆಯಲ್ಲಿ ಅಪ್ಪ ಅಮ್ಮನಿಂದ ಬರೆಯಿಸಿಕೊಂಡು ಬಂದ ಪುಟ್ಟ ಭಾಷಣ ಮಾಡಿ ಸಂತಸಪಡುತ್ತಿದ್ದೆವು- ಇದು ಪ್ರಾಥಮಿಕ ಶಾಲೆಯಲ್ಲಿನ ಸಂಭ್ರಮ.

ಮುಂದೆ ಮಾಧ್ಯಮಿಕ ಶಾಲೆಗೆ ಬಂದಾಗ, ಶಿಕ್ಷಕ ದಿನಾಚರಣೆಗೆ ಚಿಕ್ಕವರಿದ್ದಾಗ ಕೊಡುತ್ತಿದ್ದ ಗೌರವ ಕೊಂಚ ಕಡಿಮೆಯಾಗಿತ್ತು. ಯಾಕೆಂದರೆ, ಪ್ರಾಥಮಿಕ ಶಾಲೆಯಲ್ಲಿ ಯಾವ ಶಿಕ್ಷಕರು ನಮ್ಮ "ಹೀರೋ"ಗಳಾಗಿ ಕಂಗೊಳಿಸುತ್ತಿದ್ದರೋ, ಅವರು ಈಗ ಕೊಂಚ ದುರ್ಬಲರಾಗಿ ಗೋಚರಿಸತೊಡಗಿದ್ದರು. ಹಾಗಂತ ಅವರಿಗೆ ಗೌರವ ಕೊಡುತ್ತಿರಲಿಲ್ಲವೆಂತಲ್ಲ. ಗೌರವದಲ್ಲಿ ಸ್ವಲ್ಪ ವ್ಯತ್ಯಾಸವಾಗಿರುತ್ತದೆ ಅಷ್ಟೆ.

ಇನ್ನು ಕಾಲೇಜ್ ಮೆಟ್ಟಿಲು ಹತ್ತಿದಾಗಲಂತೂ ಶಿಕ್ಷಕರು (ಪ್ರಾಧ್ಯಾಪಕ) ಅವರೇನು ಮಹಾ ಎಂಬ ಉಡಾಫೆ ಮನೋಭಾವ ಬೆಳೆದಿರುತ್ತದೆ. ಇಂಥ ಮನೋಭಾವ ಎಲ್ಲರಲ್ಲಿಯೂ ಇರುತ್ತದೆ ಎಂದು ಹೇಳುತ್ತಿಲ್ಲ. ಬಹುಶಃ ನೂರು ಕಾಲೇಜ್ ಹುಡುಗರಲ್ಲಿ ಸುಮಾರು 80ರಷ್ಟು ಹುಡುಗರು ಇದೇ ಮನೋಭಾವ ಹೊಂದಿರಬಹುದೇನೋ. ಹೀಗಿರುವಾಗ ಶಿಕ್ಷಕ ದಿನಾಚರಣೆಯ ಮಹತ್ವ ಹೇಗೆ ಗೊತ್ತಾಗಬೇಕು? ಇಂದು ಇಂದಿನ ಶಿಕ್ಷಣ ವ್ಯವಸ್ಥೆ, ಮಕ್ಕಳ ಮನೋಭಾವ, ಶಿಕ್ಷಣದ ವಾಣಿಜ್ಯೀಕರಣ... ಇತ್ಯಾದಿಗಳ ಪ್ರಭಾವ.

****

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ

ಎಂದು ಪುರಂದರದಾಸರು ಗುರುವಿನ ಮಹಿಮೆಯನ್ನು ಸಾರಿದ್ದಾರೆ. ಆದರೆ, ನಿಜಕ್ಕೂ ಈಗ "ಮುಕ್ತಿ" ತೋರುವ ಸ್ಥಾನದಲ್ಲಿ "ಗುರು" ಇದ್ದಾನೆಯೇ..? ಅಂತೆಯೇ ವಿದ್ಯಾರ್ಥಿ ಕೂಡಾ "ಮುಕ್ತಿ"ಗಾಗಿ "ಗುಲಾಮ"ನಾಗುವ ಮನೋಭಾವನೆ ಬೆಳೆಸಿಕೊಂಡಿದ್ದಾನೆಯೇ ಎಂಬೆರಡು ಪ್ರಶ್ನೆಗಳನ್ನು ಈಗಿನ ಸಂದರ್ಭದಲ್ಲಿ ಹೆಚ್ಚಾಗಿ ವಿಮರ್ಶೆಗೊಳಪಡಿಸಬೇಕಿದೆ.

ಪ್ರಾಚೀನ ಕಾಲದಲ್ಲಿ ಗುರು ತನ್ನ ಶಿಷ್ಯನನ್ನು 25 ವರ್ಷಗಳವರೆಗೂ ಸಲಹಿ, ತನ್ನ ವಿದ್ಯೆಯನ್ನೆಲ್ಲ ಧಾರೆ ಎರೆದು ಸಮಾಜದಲ್ಲೂ ಒಳ್ಳೆಯ ಪ್ರಜೆಯಾಗಿ ಬಾಳಲು ಮಾರ್ಗದರ್ಶನ ಮಾಡುತ್ತಿದ್ದ. ಶಿಷ್ಯನೂ ಅಷ್ಟೆ, ಗುರು ತೋರಿದ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳುತ್ತಿದ್ದ. ಅದಕ್ಕಾಗಿಯೇ..

ಗುರುಬ್ರಹ್ಮ ಗುರುರ್ವಿಷ್ಣು
ಗುರುಃದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಃ ಬ್ರಹ್ಮ
ತಸ್ಮೈಶ್ರೀ ಗುರವೇ ನಮಃ....


ಎಂಬ ನಾಮಸ್ಮರಣೆಯನ್ನು ಅವರು ಅಕ್ಷರಶಃ ಅನುಸರಿಸುತ್ತಿದ್ದರು. ಈಗ ಹಾಡಿಹೊಗಳುವ ಶಿಷ್ಯರೂ ಇಲ್ಲ, ಆ ಮಟ್ಟದ ಗುರುಗಳೂ ಇಲ್ಲವೆನ್ನಬೇಕಾಗಿರುವುದು ಖೇದನೀಯ ವಿಷಯ. ಇದಕ್ಕೆ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಕೆಲವು ಸುದ್ದಿಗಳೂ ಕಾರಣ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ವೇಶ್ಯಾವಾಟಿಕೆಗೆ ಒತ್ತಡಪಡಿಸಿದ ಇತ್ತೀಚಿನ ದೆಹಲಿ ಘಟನೆ ನಮ್ಮ ಕಣ್ಣ ಮುಂದೆ ಹಸಿರಾಗಿದೆ.

***

ಶಿಕ್ಷಕನಿಗೂ ವಿದ್ಯಾರ್ಥಿಗೂ ಅವಿನಾಭಾವ ಸಂಬಂಧವಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದನೆಲ್ಲ ನಂಬುತ್ತದೆ. ಮಗುವಿನ ಜಗತ್ತಿನಲ್ಲಿ ಶಿಕ್ಷಕನೇ "ರೋಲ್ ಮಾಡೆಲ್", ಅವರೇ "ಸೂಪರ್ ಮ್ಯಾನ್". ತನ್ನ ಗುರುಗಳಿಗೆ ತಿಳಿಯದ ವಿಷಯವೇ ಇಲ್ಲ ಎಂದು ಭಾವಿಸಿಕೊಳ್ಳುತ್ತದೆ. ಇಂಥ ಕಾಲದಲ್ಲಂತೂ ಶಿಕ್ಷಕನ ಜವಾಬ್ದಾರಿ ನಿಜವಾಗಿಯೂ ಮಹತ್ವದ್ದಾಗಿರುತ್ತದೆ. ಎಲ್ಲ ವಿಷಯಗಳಲ್ಲೂ ಸಮಾನತೆ ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜಕ್ಕಾಗಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದು. ಈ ಹಂತದಲ್ಲಿ ನೀಡಿದ ಶಿಕ್ಷಣವೇ ಮಗುವನ್ನು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಸುತ್ತದೆ. ಇಂಥ ಪಕ್ವ ಕಾಲದಲ್ಲಿ ಈಗಿನ ಶಿಕ್ಷಕರು ನಿಜವಾಗಿ ತಮ್ಮ ಜವಾಬ್ದಾರಿಗೆ ನ್ಯಾಯ ಸಲ್ಲಿಸುತ್ತಿದ್ದಾರೆಯೇ..?

ಡಾ.ರಾಧಾಕೃಷ್ಣನ್‌ರಂಥ ಮಹಾನ್ ವಿದ್ವಾಂಸರು ಶಿಕ್ಷಕ ಸ್ಥಾನಕ್ಕೆ ಉನ್ನತವಾದ ಗೌರವ ತಂದುಕೊಟ್ಟಿದ್ದಾರೆ. ಅಂತಹುದೇ ಹಾದಿಯನ್ನು ಅನೇಕ ಶಿಕ್ಷಕರು, ಪ್ರಾಧ್ಯಾಪಕ ಮಹನೀಯರು ಸವೆಸಿದ್ದಾರೆ. ಆದರೆ ಇದೆಲ್ಲವೂ "ಮಾಜಿ" ಕಾಲದ್ದು. ಆದರೆ, ಈಗ ಶಿಕ್ಷಕ ಕೇವಲ ಶಿಕ್ಷಕನಾಗಿ ಉಳಿದಿಲ್ಲ, ರಾಜಕಾರಣ, ವ್ಯಾಪಾರ ಮತ್ತು ಜಾತಿವಾದವು ಶಿಕ್ಷಕನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಹೀಗಿರುವಾಗ ಮಾನಸಿಕವಾಗಿ ಸದೃಢವಾದ ಆರೋಗ್ಯಪೂರ್ಣ ಪ್ರಜೆಗಳು ಸಮಾಜದೊಳಕ್ಕಿಳಿಯಲು ಹೇಗೆ ಸಾಧ್ಯ? ಅಂತೆಯೇ ಶಿಕ್ಷಕ ದಿನಾಚರಣೆಯ ಮಹತ್ವ ಮಕ್ಕಳಲ್ಲಿ ಮೂಡುವುದಾದರೂ ಹೇಗೆ ಅಲ್ಲವೇ..? ಈ ವಿಷಯದ ಬಗ್ಗೆ ಗಂಭೀರ ಚಿಂತನೆಯಾಗಬೇಕಿದೆ.

****

ಎಲ್ಲ ಶಿಕ್ಷಕರೂ ತಮ್ಮ ಜವಾಬ್ದಾರಿಯಿಂದ ವಿಮುಖಗೊಂಡಿದ್ದಾರೆಂದು ಹೇಳುವುದು ನನ್ನ ಉದ್ದೇಶವಲ್ಲ. ಹಾಗೆಯೇ ವಿದ್ಯಾರ್ಥಿಗಳೆಲ್ಲರೂ ಪ್ರಾಮಾಣಿಕರು ಎನ್ನುವುದೂ ಅಲ್ಲ. ಈಗಲೂ ಬೆರಳೆಣಿಕೆಯಷ್ಟು ಶಿಕ್ಷಕರು ತಮ್ಮ ಸ್ಥಾನಕ್ಕೆ ನಿಜವಾದ ಮಹತ್ವ ತಂದುಕೊಟ್ಟಿದ್ದಾರೆ. ಯಾವುದೇ ಮೂಲಸೌಕರ್ಯಗಳಿಲ್ಲದ ಊರಲ್ಲಿ ಮಕ್ಕಳನ್ನು ಮೇಲಕ್ಕೆ ತರಲು ಟೊಂಕ ಕಟ್ಟಿ ಹರಸಾಹಸ ಪ್ರದರ್ಶಿಸುವ ಶಿಕ್ಷಕರೆಷ್ಟಿಲ್ಲ? ಇನ್ನೂ ಕೆಲವರಂತೂ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ, ಅವರ ಭವಿತವ್ಯಕ್ಕಾಗಿ ಟೊಂಕ ಕಟ್ಟಿ ನಿಂತಿರುತ್ತಾರೆ. ಇಂಥವರು ಬೆಳಕಿಗೆ ಬರುತ್ತಿಲ್ಲ ಎಂಬುದು ಶಿಕ್ಷಕ ಸಮುದಾಯದ ದುರದೃಷ್ಟ.

ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮುಡಿಪಾಗಿಡುವ ಶಿಕ್ಷಕರಿಗೆ, ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನುಗ್ಗಲು ಮಾರ್ಗದರ್ಶನ ಮಾಡುವ ಮಾರ್ಗದರ್ಶಕರಿಗೆ, ಗೌರವ ನೀಡಲು ನಮಗೆ ಶಿಕ್ಷಕರ ದಿನವೇ ಬೇಕೆಂದಿಲ್ಲ. ನಮ್ಮ ಭವಿಷ್ಯ ರೂಪಿಸುವ, ನಮ್ಮನ್ನು ಸತ್ಪಥದಲ್ಲಿ ಮುನ್ನಡೆಯುವಂತೆ ಮಾರ್ಗ ತೋರುವ ಗುರುವಿನ ಸ್ಮರಣೆ ಸದಾಕಾಲ ಇರಲಿ. ಶಿಕ್ಷಕರ ದಿನವು ಇತರ ದಿನಾಚರಣೆಗಳಂತೆ ಕಾಟಾಚಾರಕ್ಕೀಡಾಗದಿರಲಿ.

(ಸೂಚನೆ: ಈ ಲೇಖನ ವೆಬ್ ದುನಿಯಾ ಕನ್ನಡ ಪೋರ್ಟಲ್‌ನಲ್ಲಿ ಪ್ರಕಟಗೊಂಡಿದೆ. ಅದನ್ನು ನೋಡಲು ಇಲ್ಲ ಕ್ಲಿಕ್ಕಿಸಿ http://kannada.webdunia.com/miscellaneous/literature/stories/0709/05/1070905002_1.htm)

ಶನಿವಾರ, ಆಗಸ್ಟ್ 11, 2007

ಅವ್ವ ಮತ್ತು ಹೊಲ

ಎಂದಿನಂತೆ ಸೂರ್ಯನ ಕಿರಣಗಳ ಕಿಟಕಿಯೊಳಗಿಂದ ನನ್ನ ಮೇಲೆ ಬಿದ್ದಿರಲಿಲ್ಲ. ಆಗಲೇ ನನ್ನ ಮೊಬೈಲ್ ರಿಂಗುಣಿಸಿದ್ದು.ನಿದ್ದೆಯೇ ಮಂಪರಿನಲ್ಲಿ ಹಲೋ ಎಂದೆ. ಅತ್ತ ಕಡೆಯಿಂದ ಮಾತಾಡಿದ್ದು ನನ್ನ ಸಹೋದರ ಮಾವ. ಆತನ ದನಿ ನಡಗುತ್ತಿತ್ತು.ಹೇಗೊ ಸಾವರಿಸಿಕೊಂಡು ವಿಷಯ ಹೇಳಿದಾ. ಆಗ ನನಗೆ ನಿಂತ ನೆಲ ನಡುಗಿದ ಅನುಭವ. ಆಗಲೇ ಕಿಟಕಿಯೊಳಗಿನಿಂದ ಸೂರ್ಯ ರಶ್ಮಿಯೊಂದು ನನ್ನ ಗಲ್ಲದ ಮೇಲೆ ಬಿತ್ತು. ಅದು ಎಂದಿನಂತೆ ಹಿತವಾಗಿರಲಿಲ್ಲ; ಬೆಂಕಿಯಂತೆ ಸುಡುತ್ತಿತ್ತು. ಅದನ್ನು ತಂಪಾಗಿಸಲು ಏನೊ ಎಂಬಂತೆ ನನ್ನ ಕಣ್ಣೀರಧಾರೆ ಚಿಮ್ಮಿತು.

ಹಾಗೇ ನಿಂತಕೊಂಡದ್ದನ್ನು ನೋಡಿದ ಗೆಳೆಯ ವಿನೋದ, "ಏನ್ ಪೋನು" ಅಂತಾ ಗಾಬರಿಯಿಂದ ಕೇಳಿದ. ಆದರೆ, ನನಗೆ ಹೇಳುವುದಕ್ಕೆ ಬಾಯಿಯಾದರೂ ಎಲ್ಲಿತ್ತು. ಅಳುವೊಂದು ಒಂದೇ ನನ್ನ ಬಾಯಿಗೆ ಗೊತ್ತಾಗಿದ್ದು ಆಗ. ಏನೂ ತಿಳಿಯದೆ ಆತ ಆಶ್ಚರ್ಯಗಣ್ಣುಗಳಿಂದ ನನ್ನ ದಿಟ್ಟಿಸುತ್ತಾ ನೋಡುತ್ತಿದ್ದ; ನಾನು ಅವನ ಹೆಗಲ ಮೇಲೆ ಮುಖವೊಡ್ಡಿ ಮನಸ್ಸು ಹಗುರವಾಗೊವರೆಗೆ ಅತ್ತೆ.
****
ಚೆನ್ನೈನಿಂದ ಬೆಳಗಾವಿಯ ನನ್ನ ಹಳ್ಳಿಗೆ ಹೋಗಬೇಕಾದ್ರೆ ಕನಿಷ್ಟ 21 ರಿಂದ 23 ಗಂಟೆಯಾದ್ರೂ ಬೇಕು. ಮಧ್ಯಾಹ್ನದ ಚೆನ್ನೈನಿಂದ ಬೆಂಗಳೂರಿಗೆ ಹೊರಡುವ ಟ್ರೈನ್‌ಗೆ ಬಿಟ್ಟು ಬರಲು ವಿನೋದ ಬಂದಿದ್ದ. ಟ್ರೈನ್ ತನ್ನ ನಿಗದಿತ ಸಮಯಕ್ಕೆ ನಿರ್ಭಾವಕತೆಯಿಂದ ಹೊರಟಿತು. ಹೊರಗೆ ಭಾವಕನಾದ ವಿನೋದ ಕಣ್ಣೀರು ತುಂಬಿಕೊಂಡಿದ್ದ; ನನ್ನ ಎದೆಯೊಳಗೆ ಕಣ್ಣೀರಿನ ಜಲಪಾತವೇ ಬೀಳುತ್ತಿತ್ತು.

ಚೆನ್ನೈ ದಾಟಿ ಟ್ರೈನ್ ಅದೇ ನಿರ್ಭಾವುಕ ಶಬ್ಧ ಮಾಡುತ್ತ ಮತ್ತು ಅಷ್ಟೆ ವೇಗವಾಗಿ ಓಡುತ್ತಿತ್ತು. ಎಲ್ಲರೂ ಹೀಗೆ ಓಡಬೇಕು ಎಂದು ಅಣುಕಿಸುತ್ತವಂತೆ ಭಾಸವಾಯಿತು ನನಗೆ.
****
ಕಿಟಕಿಗೆ ತಲೆ ಹಚ್ಚಿ ಕಣ್ಣುಚ್ಚುದ್ದಂತೆ ನನ್ನ ಅವ್ವನ ಮುಖ, ಅವಳು ಆ ಹೊಲ ಬಿಡಿಸಿಕೊಳ್ಳುವುದಕ್ಕಾಗಿ ಪಟ್ಟ ಪಾಡು ಎಲ್ಲ ಸುಯ್ಯಂತ ಸುಳಿಯಿತು.

ನಾನು ಪ್ರತಿ ಸಾರಿ ಊರಿಗೆ ಹೋದಾಗ ಅವ್ವನದು ಒಂದೆ ಮಾತು. " ತಮ್ಮಾ ಆ ತುಣಕ್ ಹೊಲ ಬಿಡ್‌ಸ್ಕೊಳ್ಳುನಪಾ. ಆ ಹೊಲದಿಂದ ನಾಲ್ಕ್ ಕಾಳು ಜೋಳ ಬಂದ್ರ್ ಎಷ್ಟೊ ಸಹಾಯ ಆದಂಗ್ ಆಗತೈತಿ. ನೀ ತಿಂಗ್ಳಾ ಎರಡು ಸಾವಿರು ಕಳಿಸಿದ್ರ್ ಸಾಕ್. ನಾ ಹೆಂಗರ್ ಮನಿ ನಡೆಸ್ಕೊಂಡ್ ಹೋಗ್ತೇನಿ. ನಿಮ್ಮ ಅಪ್ಪ್ ಅಂತ್ರೂ ದುಡಿಯಂವಾ ಅಲ್ಲಾ, ದುಃಖ ಪಡಂವಾ ಅಲ್ಲಾ. ನಾ ಹೀಂಗ್ ಎಷ್ಟಾ ದಿನಾ ದುಡೀಲಿ" ಅನ್ನಾಕೆ.

"ಅಲ್ಲವೋ ಆ ಹೊಲಕ್ ಯಾಕ್ ಅಷ್ಟು ಚಿಂತಿ ಮಾಡ್ತಿಯವ್ವಾ. ಇರೋದು ಒಂದೂವರೆ ಎಕ್ರೆನೂ ಇಲ್ಲಾ. ಆ ಹೊಲದಿಂದ ಎಷ್ಟು ಜೋಳಾ ಪಡದೀ ನೀ" ಅನ್ನುತ್ತಿದ್ದಾಂಗ, ಅವ್ವ ಕೊಂಚ ಬೇಸರ ಮಾಡ್ಕೊಂಡು, "ಹಂಗ್ ಅನ್ನಬೇಡೊ ತಮ್ಮಾ, ಅದು ಎಷ್ಟು ಆದ್ರೂ ಹಿರೇರು ಮಾಡಿಟ್ಟ ಆಸ್ತಿ. ಅಂಗೈಷ್ಟಿದ್ದರೂ ಹೊಲಾ ಹೊಲನಾಪಾ" ಅನ್ನುತ್ತ ಕಣ್ಣಂಚಿನೊಳಗ ನೀರು ತರುತ್ತಿದ್ದಳು.

ಆಮೇಲೆ ನಾನು ಊರಿಗೆ ಹೋದಾಗೊಮ್ಮೆ ಮುಂದಿನ ಸಾರಿ ಬಂದಾಗ ಹೊಲ ಬೀಡ್ಸ್ಕೊಂಡ ಬರೋಣ ಅಂತಾ ಹೇಳ್ತಿದ್ದೆ.

ಅಷ್ಟಕ್ಕೆ ಅವ್ವ ತುಂಬಾ ಸಂತೋಷ ಪಡೋಳು. ನನ್ನ ಅವ್ವನ ಆ ನಗುವನ್ನು ಹಾಗೇ ನಿರಂತರವಾಗಿರಸುವುದಕ್ಕಾಗಿ ನಾನು ನನ್ನ ಶಕ್ತಿಮೀರಿ ಉಳಿಸಿದ ಹಣ ಬ್ಯಾಂಕ್ ಅಕೌಂಟಿನಲ್ಲಿ 30000 ರೂಪಾಯಿ ತೋರಿಸಿತ್ತಿತ್ತು.

ಆ ಹೊಲನಾ ನಮ್ಮ ತಂಗಿ ಮದುವೆಗೆ ಅಂತಾ ನಮ್ಮ ಕಾಕಾ ತನ್ನ ಕಾಕಾನಿಗೆ ಹತ್ತು ಸಾವಿರು ರೂಪಾಯಿಗೆ ಉಣ್ಣಾಕ್ ಹಾಕಿದ್ದ. ಐದಾರು ವರ್ಷದಲ್ಲಿ ಬಡ್ಡಿ, ಚಕ್ರ ಬಡ್ಡಿ ಸೇರಿ ಮೊವ್ವತ್ತು ಸಾವಿರು ಆಗಿತ್ತು. ದಿನಾಲೂ ಕುಡಿಯೊ ನಮ್ಮ ಅಪ್ಪನಿಗೆ ಅಷ್ಟು ಹಣಕೊಟ್ಟು ಹೊಲ ತನ್ನದಾಗಿಸಿಕೊಳ್ಳೊ ವಿಚಾರಾದ್ರೂ ಹೆಂಗ್ ಬಂದಿತ್ತು.

ನಮ್ಮ ಅಪ್ಪ ಶುದ್ಧ ಕುಡಕ. ಅವನು ತಾನು ದುಡಿದಿದ್ದನ್ನು ಕುಡಿದು ಹಾಳು ಮಾಡೋದು ಅಲ್ಲದೆ ಅವ್ವನ ಕೂಲಿಯ ಹಣವನ್ನು ಕೂಡಾ ಕುಡಿದು ಹಾಳು ಮಾಡುತ್ತಿದ್ದ. ಆಗ ಅವ್ವ ಒಲೆ ಮುಂದೆ ಕುಳಿತು ಕಣ್ಣೀರು ಹಾಕುದನ್ನು ನಾ ಎಷ್ಟೊ ಬಾರಿ ನೋಡಿದ್ದೇನೆ.

ನಾನು ದುಡಿಯೋಕೆ ಶುರು ಮಾಡಿದ ಮೇಲೆ ಅವ್ವನ ಕಣ್ಣಲ್ಲಿ ಒಮ್ಮೆಯೂ ಒಂದು ಹನಿ ನೀರು ಬರಬಾರ್ದು ಹಾಗೇ ನೋಡ್ಕಬೇಕು ಅಂತಾ ಅನ್ನೊಂಡಿದ್ದು ನೆನಪಾದಗ ನನ್ನ ಕಣ್ಣೀರು ಕಪಾಳ ಮೇಲೆ ಜಿನಗುತ್ತಿತ್ತು.

ನಾನು ಕೆಲಸಕ್ಕೆ ಸೇರಿಕೊಂಡ ವಿಷಯ ತಿಳಿದ ತಕ್ಷಣವೇ ಅವ್ವ ನನಗೆ ಹೇಳಿದ್ದು."ತಮ್ಮಾ ಲಗೂನ್ ಹೊಲ ಬಿಡ್ಸಕೊಳ್ಳನಾಪಾ ಅಂತ್.." ಹೀಗೆ ನೆನಪಿನ ಸುರಳಿ ಬಿಚ್ಚುತ್ತಾ ಹೋಗುತ್ತಿದ್ದಂತೆ ಟ್ರೈನ್ ಒಮ್ಮೆ ಗಕ್ಕನೆ ನಿಂತಿತು;ನೆನಪಿನ ಸುರಳಿ ಕೂಡಾ ಕತ್ತರಿಸಿತು. ಆದರೆ ಕಣ್ಣೀರು ಮಾತ್ರ ಹಾಗೇ ಜಿನಗುತ್ತಿತ್ತು. ಹೊರಗೆ ನೋಡಿದ್ರೆ ಬೆಂಗಳೂರು ಎಂಬ ಬೋರ್ಡ್.
****
ಟ್ರೈನ್ ಇಳಿದು ಬೆಳಗಾವಿಗೆ ಹೋಗೊ ಬಸ್ ಹತ್ತಿದೆ. ಆಗಲೂ ನನ್ನ ಕಣ್ ಮುಂದೆ ಬರುವ ಚಿತ್ರಗಳ ನನ್ನ ಅವ್ವ ಮತ್ತು ಆ ಹೊಲ. ಆಗಲೇ ಹೊರಗೆ ಸಣ್ಣಗೆ ಕತ್ತಲು ಆವರಿಸುತಿತ್ತು. ಬೆಂಗಳೂರು ದಾಟಿ ಬಸ್ಸು ತುಮಕೂರನ್ನು ಮುಂದೆ ಮಾಡಿಕೊಂಡು ಒಂದೆ ಸವನೇ ನುಣಪಾದ ರಸ್ತೆ ಮೇಲೆ ಏದಿರುಸಿರು ಬೀಡದಂತೆ ಓಡುತ್ತಿತ್ತು. ನಾನು ಕಣ್ಣೀರ ನಡುವೆಯೂ ನಿದ್ದೆಗೆ ಪ್ರಯತ್ನಿಸಿದೆ. ಆದ್ರೆ ನಿದ್ದೆ ಬರಲಿಲ್ಲ.

ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಸ್ ನಿಂತಾಗ ಸೂರ್ಯ ತನ್ನ ಮುಖ ಜಗತ್ತಿಗೆ ತೋರಿಸುತ್ತಿದ್ದ. ಅದೇ ಸಮಯಕ್ಕೆ ನನ್ನ ಊರು ತಲಪಲು ಟ್ರೈನ್‌ ಇತ್ತು. ನಾನು ರೈಲು ನಿಲ್ದಾಣದತ್ತ ಧಾವಿಸಿದೆ. ಟ್ರೈನ್ ಹತ್ತಿ ಕುಳಿತುಕೊಂಡಾಗಲೇ, ಮತ್ತ ಅದೆ ಅವ್ವನ ಕುಂಕಮವಿಟ್ಟ ತೇಜೊವರ್ಣ ಮುಖ ಮತ್ತು ಕಪ್ಪು ಮಣ್ಣಿನ ಆ ಹೊಲ.

ರೈಲು ಇಳಿದು ಮನೆ ಹಾದಿ ಹಿಡಿದೆ. ಎದುರಾದವರು ನನ್ನ ಅವ್ವನ ಗುಣಗಾನ ಮಾಡಿ ಮುಂದೆ ಹೋಗುತ್ತಿದ್ದರು. ಆಗ ದುಃಖ ಉಮ್ಮಳಿಸುತ್ತಿತ್ತು. ಸರಕಾರಿ ಧನಸಹಾಯದಲ್ಲಿ ಕಟ್ಟಿಸಿದ್ದ ಆ ನನ್ನ ಮನೆಯ ಮುಂದೆ ಕುಂಕಮ ಹೊತ್ತ ಅವ್ವನ ಮುಖ ನಿರ್ವಣವಾಗಿದ್ದನ್ನು ನೋಡಿದಾಗಲೇ ಅಲ್ಲಿವರೆಗೂ ಮಡಗಟ್ಟಿದ್ದ ನನ್ನ ದುಃಖದ ಕಣ್ಣೀರು ಅಣೆಕಟ್ಟು ಒಡೆದು ಭೋರ್ಗರೆಯಿತು.
***
ಅವ್ವನ ಎಲ್ಲ ಅಂತಿಮ ಕ್ರಿಯೆಗಳನ್ನು ಮುಗಿಸಿ ಮರಳಿ ಚೆನ್ನೈಗೆ ಬರಲು ಬಸ್ ಹತ್ತಿ ಹೊರಟೆ. ಸ್ವಲ್ಪ ಊರು ದಾಟಿದ ನಂತರ ಎದುರಾದ ಕಪ್ಪು ಹೊಲದಲ್ಲಿ ಅವ್ವ ಜೋಳದ ರಾಶಿ ಮಾಡಿದಂತೆ ಅಣಕಿಸಿದಂತಾಯಿತು.

ಸೋಮವಾರ, ಆಗಸ್ಟ್ 6, 2007

ಚೆನ್ನೈನಲ್ಲಿ ಸಖತ್ "ಮುಂಗಾರು ಮಳೆ": ಕನ್ನಡಿಗರಿಗೆ ಪುಳಕ


ಚೆನ್ನೈನಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ. ಆದರೆ ಯೋಗರಾಜ್ ಭಟ್ಟರ "ಮುಂಗಾರು ಮಳೆ" ಭರ್ಜರಿಯಾಗಿ ಸುರಿಯುತ್ತಿದೆ.. ಹಾಗೇ ಸುಮ್ಮನೆ..!

ಅರೆ ಏನು ಇದು.. ಅಂತಾ ಕೇಳ್ತಿದ್ದೀರಾ. ಅಂಥದ್ದೇನೂ ಇಲ್ಲ ಮಾರಾಯ್ರೆ. ಅದೇ ಕನ್ನಡದ ಸೂಪರ್ ಡೂಪರ್ ಹಿಟ್ "ಮುಂಗಾರು ಮಳೆ" ಚಿತ್ರ ಚೆನ್ನೈನಲ್ಲಿ ಬಿಡುಗಡೆಯಾಗಿ ಸಖತ್ ಮೋಡಿ ಮಾಡಿದೆ ಇಲ್ಲಿಯ ಚೆನ್ನೈ ಕನ್ನಡಿಗರಿಗೆ...!

ನಿನ್ನೆ ಭಾನುವಾರ ಇಡೀ ನಮ್ಮ ಆಫೀಸೇ "ಮುಂಗಾರು ಮಳೆ" ಪ್ರದರ್ಶಿಸುತ್ತಿರುವ ಕ್ಯಾಸಿನೊ ಚಿತ್ರಮಂದಿರ ಬಳಿಯಿತ್ತು. ಅದೇನೂ ಮಹಾ ವಿಶೇಷ ಅನ್ನಬೇಡಿ. ನಮ್ಮ ಆಫೀಸ್ ಅಂದ್ರೆ "ಮಿನಿ ಸೌತ್ ಇಂಡಿಯಾ" ಇದ್ದ ಹಾಗೆ. ಇಲ್ಲಿ ಕನ್ನಡಿಗರು, ಮಲಿಯಾಳಿಗಳು, ಆಂಧ್ರದವರು ಮತ್ತು ತಮಿಳರು ಬಹಳ ಅನ್ಯೂನ್ಯದಿಂದ ಕೆಲಸ ಮಾಡುತ್ತಾರೆ. ಯಾಕೆಂದರೆ ನಮ್ಮದು ಹೇಳಿ ಕೇಳಿ ಸಾಫ್ಟವೇರ್ ಲೋಕಲಾಯಿಜಿಶನ್ ಮತ್ತು ಮೀಡಿಯಾ ಮೂಲದ ಎಂಎನ್‌ಸಿ ಕಂಪೆನಿ. ಹೀಗಾಗಿ ನಮ್ಮ ಆಫೀಸ್ ಅಂದ್ರೆ "ಮಿನಿ ಸೌತ್ ಇಂಡಿಯಾ"

ಈಗ ಅರ್ಥ ಆಗಿರಬೇಕಲ್ಲ ಇಡೀ ನಮ್ಮ ಆಫೀಸ್ ತಂಡವೇ ಕ್ಯಾಸಿನೋ ಬಳಿ ಇತ್ತು ಅಂತ ಯಾಕೆ ಹೇಳ್ದೆ ಅಂತ. ಸರಿ ಮತ್ತೆ ಮುಂಗಾರಿ..ಗೆ ಬರೋಣ.

ನಮ್ಮ ಕನ್ನಡ ತಂಡದಲ್ಲಿ ಸಾರಥಿ ಅಂತ ಅಪ್ಪಟ ಕನ್ನಡ ಪ್ರೇಮಿಗಳು ಇದ್ದಾರೆ. ಭಾನುವಾರ ಸುಮಾರು ನಮ್ಮ ಆಫೀಸ್‌ನ 30 ಜನರನ್ನು "ಮಳೆ"ಯಲ್ಲಿ ತೋಯಿಸಿದ ಮಹಾನಭಾವರು. ಕನ್ನಡ ತಂಡದೊಂದಿಗೆ ಉಳಿದ ಭಾಷೆಗಳ ಸಹದ್ಯೋಗಿಗಳಿಗೆ ಅಪ್ಪಟ ಕನ್ನಡ ದೇಶೀಯ ಚಿತ್ರವನ್ನು ತೋರಿಸಿದ ಸಾರಥಿ ಅವರಿಗ ನೂರು ಸಲಾಂ.

ಬಹುಶಃ ಕ್ಯಾಸಿನೋ ಚಿತ್ರ ಮಂದಿರದವರು ಕೂಡಾ ಇಷ್ಟೊಂದು ಜನರು ಕನ್ನಡ ಚಿತ್ರ ನೋಡಲು ಬರುತ್ತಾರೆಂದು ನಿರೀಕ್ಷಿಸಿರಲಿಕ್ಕಿಲ್ಲ. ಯಾಕಂದೆರ ಭಾನುವಾರದ ಮಧ್ಯಾಹ್ನ ಪ್ರದರ್ಶನದ ಟೀಕೆಟ್‌ಗಳು ಒಂದು ದಿನದ ಹಿಂದೆಯೇ ಪೂರ್ಣವಾಗಿ ಬುಕ್‌ ಆಗಿದ್ದವು.
****
ಸರಿ, ನಾವೆಲ್ಲರೂ "ಮುಂಗಾರ ಮಳೆ"ಯಲ್ಲಿ ತೋಯಿಸಿಕೊಳ್ಳಲು ಚಿತ್ರಮಂದಿರದೊಳಗೆ ಹೊದೇವು. ಅಲ್ಲಿಯದು ಬೇರೆಯೇ ಅನುಭವ. ಪಕ್ಕಾ ತಮಿಳು ಚಿತ್ರಗಳ ಮಧ್ಯೆ ಅಪ್ಪಟ ಕನ್ನಡ ಚಿತ್ರವನ್ನು ನೋಡುತ್ತಿರುವುದರಿಂದ ಏನೊ ಒಂಥರಾ... ಸಂತೋಷ, ಅನುಭವ ಉಂಟಾಗುತ್ತಿತ್ತು.

ಚಿತ್ರ ನೋಡ್ತಾ ನೋಡ್ತಾ.. ನಾನು ನನ್ನ ಸುತ್ತ ಕಣ್ ಹಾಯ್ಸಿದೆ. ಬಹುಶಃ ಅವರಿಬ್ಬರೂ ಪ್ರೇಮಿಗಳಿರಬೇಕು. ಆಕೆ ಕನ್ನಡತಿ, ಆತ ತಮಿಳು ಹುಡುಗ. ಇಷ್ಟು ಕರೆಕ್ಟ್ ಆಗಿ ಹೇಗೆ ಹೇಳುತ್ತಿದ್ದೇನೆ ಎಂದು ಹುಬ್ಬೇರಿಸಬೇಡಿ. ಯಾಕಂದರೆ ಆಕೆ ಮುಂಗಾರಿನ ಪಂಚಿಂಗ್ ಸಂಭಾಷಣೆಯನ್ನು ತಮಿಳನಲ್ಲಿ ಭಾಷಾಂತರಿಸಿ ಆತನಿಗೆ ಹೇಳುತ್ತಿದ್ದಳು. ಆಗ ಆತ ನಗುತ್ತಿದ್ದ...! ಇದನ್ನು ನೋಡಿ ನನಗೊ ಖುಷಿಯಾಯಿತು. ಯಾಕೆಂದರೆ ಕನ್ನಡದ ಚಿತ್ರವನ್ನು ಚೆನ್ನೈಗರು ಕೂಡಾ ಆಸ್ವಾದಿಸುತ್ತಿದ್ದಾರೆ ಅಂತ.

ಇನ್ನೂ ಚಿತ್ರದಲ್ಲಿ ತೋರಿಸಲಾದ ಜೋಗದ ಸೀನ್ ಇದೆಯಲ್ಲಾ... ಅದು ತುಂಬಾ ಮೋಡಿ ಮಾಡಿ ಬಿಟ್ಟಿದೆ ಇಲ್ಲಿನ ಜನಕ್ಕೆ. ತಮಿಳು ಸ್ಟಾರ್ ಡೈರಕ್ಟರ್ ಶಂಕರ್ ಕೂಡಾ ಇಂಥ ಜಲಪಾತವನ್ನು ತನ್ನ ಚಿತ್ರದಲ್ಲಿ ಈ ರೀತಿ ಸೆರೆ ಹಿಡಿಯಲು ಸಾಧ್ಯವಿಲ್ಲ ಎಂಬ ಮಾತು ಸಿನೆಮಾ ನೋಡಲು ಆಗಮಿಸಿದ್ದ ಚೆನ್ನೈನ ತಮಿಳರ ಮಧ್ಯೆ ಕೇಳಿ ಬರುತ್ತಿತ್ತು. ಅಷ್ಟೊಂದು ಅದ್ಭುತ.. ಅತ್ಯದ್ಭುತ ಜೋಗದ ಸಿರಿ.. ಮಾಡಿದೆ ಮೋಡಿ ಈ ಪರಿ.

ಬಾಲ್ಕನಿಯಲ್ಲಂತೂ ಕನ್ನಡಿಗರ ಉತ್ಸಾಹ ಹೇಳ ತೀರದು. "ಒಂದೆ ಒಂದು ಸಾರಿ ಕಣ್ಮಂದೆ ಬಾರೆ.., ಅನಿಸುತಿದೆ ಯಾಕೋ ಇಂದು.... ಹಾಡುಗಳಿಗೆ ಎಲ್ಲರೂ ಕೋರಸ್ ಹಾಡುತ್ತಿದ್ದರು. ಅದು ಎಂಧವರಿಗೂ ಅಭಿಮಾನವನ್ನುಂಟು ಮಾಡುವು ಸನ್ನಿವೇಶ ಆಗಿತ್ತು.
****
ಕನ್ನಡದ ಗೆಳೆಯರಲ್ಲ ತಮ್ಮ ತಮ್ಮ ತಮಿಳು ಗೆಳೆಯರನ್ನು ಚಿತ್ರಕ್ಕೆ ಆಹ್ವಾನಿಸಿ ತೋರಿಸುತ್ತಿದ್ದಾರೆ. ಆನಂದ ಪಡುತ್ತಿದ್ದಾರೆ. ಚೆನ್ನೈನ ಕೆಲವು ಪ್ರಮುಖ ಬೀದಿಗಳಲ್ಲಿ ಮುಂಗಾರು ಮಳೆ ಪೋಸ್ಟರ್ ಕಾಣಿಸಿಕೊಂಡಿವೆ. ಬಸ್‌ನಲ್ಲಿ, ಶೇರ್ ಆಟೊದಲ್ಲಿ ಹೋಗುವಾಗ ಆ ಪೋಸ್ಟರ್ ಕಣ್ಣಿಗೆ ಬಿದ್ದರೆ ಎದೆಯಲ್ಲಿ ಏನೊ ಹಾಗೇ ಸುಮ್ಮನೆ...!

"ಮುಂಗಾರು ಮಳೆ" ನೋಡಿಕೊಂಡು ಶೇರ್ ಆಟೊದಲ್ಲಿ ರೂಮ್ ದಾರಿ ಹಿಡಿದಾಗ, ಹೊರಗೆ ಸಣ್ಣಗೆ ತುಂತುರು ಮಳೆ.. ಆಗ ನನ್ನ ಗೆಳೆಯು ಗುಣಗುತ್ತಿದ್ದ ಹೀಗೆ, "ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ..."

ಶನಿವಾರ, ಜುಲೈ 28, 2007

ಒಂದೇ ಪ್ಯಾರಾದಲ್ಲಿ ಕಥೆ


ನಾನು, ಅವನು ಮತ್ತು ಅವಳು

ನಾನು, ಅವನು ಮತ್ತು ಅವಳು. ಅವಳಿಗೆ ಅವನ ಮೇಲೆ ಪ್ರೀತಿ; ಅವನಿಗೂ ಇನ್ನಾರೋ ಮೇಲೆ ಪ್ರೇಮ. ನನಗೆ ಅವಳ ಮೇಲೆ ಒಲವು. ಇದನ್ನು ತಿಳಿದ ಅವನು ನನ್ನೊಂದಗಿನ ಸ್ನೇಹ ಕಡಿದುಕೊಂಡ. ಅವಳ ಪ್ರೀತಿ ನನ್ನಡೆಗೆ ತಿರುಗಿದ್ದು ಬೇಸಿಗೆಯ ಬಿರು ಮಳೆಯಂತೆ ಮಾತ್ರ. ಆ ಮೇಲೆ ಅವಳು ಸ್ಥಿತ ಪ್ರಜ್ಞ. ನಾನು ಈಗ ಹುಚ್ಚಾಸ್ಪತ್ರೆಯಲ್ಲಿ.

ಸೋಮವಾರ, ಜೂನ್ 18, 2007

ಸ್ವಗತ

ಮನದ ಮೂಲೆಯಲ್ಲಿ
ಬಯಕೆಗಳು ಪವಡಿಸುತ್ತಿವೆ.
ಮರಳುಗಾಡಿನಂತಿರುವ ಮನದಲಿ
ಓಯಸಿಸ್‍ಗಳಾಗಲು,
ಒಮ್ಮೊಮ್ಮೆ ಎಚ್ಚೆತ್ತುಕೊಳ್ಳಲು ಹವಣಿಸುತ್ತಿವೆ.
ಪರಿಸ್ಥಿತಿಯ ಒತ್ತಡಕ್ಕೆ ಮಣಿಯುತ್ತಿವೆ.
ತನ್ನತನವನ್ನು ಉಳಿಸಲು ಆಶ್ರಯಿಸುತ್ತಿವೆ
ಇನ್ನೊಬ್ಬರನ್ನು, ಬೇಡವೆಂದಾಗ ಮತ್ತೊಬ್ಬರನ್ನು
ಬೇಡುತ್ತವೆ, ಮತ್ತೊಮ್ಮೆ ತಿರಸ್ಕರಿಸುತ್ತಿವೆ
ಸ್ವಂತಕ್ಕಾಗಿ, ಸ್ವಹಿತಕ್ಕಾಗಿ
ಆಗಲೂ ಈಗಲೂ ಬಯಕೆಗಳಾಗಿಯೇ
ಉಳಿಯುತ್ತಿವೆ, ಬೆಳೆಯುತ್ತಿವೆ.

-ಮಲ್ಲಿ

ಓ.. ಗುಲಾಬಿಯೇ

ಮುಂಜಾನೆಯ ಮಂಜಿನಲಿ
ಮಿಂದೆದ್ದ ಗುಲಾಬಿಯೇ
ಯಾರಿಗಾಗಿ ಕಾಯುತ್ತಿರುವೇ
ದಿನಕರನ ದಿನಾರಂಭಕ್ಕಾಗಿಯೇ..?

ಮೆಲ್ಲನೆ ಅರಳುತ್ತ
ತಂಪನೆಯ ಕಂಪು ಬೀರುತ್ತ
ನಗೆ ಚೆಲ್ಲುತ್ತಾ
ಯಾರಿಗಾಗಿ ಕಾಯುತ್ತಿರುವೆ..?

ತಂಗಾಳಿಗೆ ಮೈ ಒಡ್ಡುತ್ತಾ
ಮೆಲ್ಲನೆ ಭೂತಾಯಿಗೆ ನಮಿಸುತ್ತಾ
ನನ್ನದೇನೂ ಇಲ್ಲಎಲ್ಲವೂ ನಿನ್ನದೆನ್ನುತ್ತಾ

ನಿರವತೆಯ ಮೌನ ಮುರಿಯತ್ತ
ಕಲ್ಲು ಹೃದಯವನ್ನೂ ಅಲಗಿಸುತ್ತ
ಹೂಗಳ ರಾಣಿಯೇ ಹೇಳು
ಯಾರಿಗಾಗಿ ಈ ಚಿತ್ತ....?

ಕನಸುಗಳಿಗೆ ಆಶೆ ನೀಡಿ
ಮನಸ್ಸುಗಳನ್ನು ಒಂದುಗೂಡಿಸುತ್ತಾ
ಸಂಜೆಯಾಗುತ್ತಲೇ ನೀ ಬಾಡುವೆ
ನಶ್ವರತೆಯನ್ನು ಸೂಚಿಸುತ್ತಾ....


-ಮಲ್ಲಿ

ಮಂಗಳವಾರ, ಮೇ 1, 2007

ಅವ್ವ

ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
ಸ್ಥೈರ್ಯ ತುಂಬಿ ಬೆಳೆಸಿದಾಕೆ,
ಬರೀ ಸೋಲು ಕಂಡುವನಿಗೆ
ಗೆಲುವಿನ ದಾರಿ ತೋರಿಸಿದಾಕೆ.. ಅವ್ವ

ಗೆದ್ದು ಬಂದಾಗ...
ಮರೆಯಲ್ಲಿ ನಿಂತು ಆನಂದಭಾಷ್ಪ ಸುರಿಸಿದಾಕೆ
ಎಂಥ ನೋವಿನಲ್ಲೂ ನಗು ತಂದಾಕೆ
ತಾನುಣ್ಣುವ ತುತ್ತನ್ನು
ತನ್ನ ಕರಳು ಕುಡಿಗೆ ತಿನ್ನಿಸಿದಾಕೆ.. ಅವ್ವ

ಮುನ್ನುಗ್ಗಲು ಕಸವು ತುಂಬಲು
ಹಿಮ್ಮೇಳವಾಗಿ ಶಕ್ತಿ ನೀಡಿದಾಕೆ
ರಾಗ ಕೆಟ್ಟು ಭಾವ ಸೋತಾಗ
ತಾನೇ ತಂಬೂರಿ ಕೈಗಿತ್ತಿಕೊಂಡಾಕೆ.. ಅವ್ವ

ಮಾತು ಕಲಿಸಿ; ನೀತಿ ತಿಳಿಸಿ
ಸದ್ಗತಿಯ ಸಾಧ್ಯತೆ ತೋರಿಸಿದಾಕೆ
ಸಾಧ್ಯ-ಅಸಾಧ್ಯಗಳ ತೋಳಲಾಟದಲ್ಲಿ
ತಾನೇ ನಿಂತು ನೆರವಾದಾಕೆ.. ಅವ್ವ

ಆದರೆ

ಆಕೆಗೆ ನೀ ಕೊಟ್ಟಿದ್ದಾರೂ ಏನು
ಬರೀ ಕಣ್ಣೀರು.. ತೋರಿಸಿದ್ದು
ವೃದ್ಧಾಶ್ರಮ ಬಾಗಿಲು...

-ಮಲ್ಲಿ

ಶುಕ್ರವಾರ, ಏಪ್ರಿಲ್ 13, 2007

ಮಾತನಾಡು...

ಕೆಂಡವಾದ ಭೂ ಒಡಲಿಗೆ
ತಂಪನೆರದ ಬೆಸಿಗೆಯ ಬಿರು ಮಳೆ
ಈ ಬೆಂದ ಹೃದಯಕ್ಕೆ
ಪ್ರೀತಿಯಮಳೆಗರೆಯಬಾರದೇ..?

ಆ ನಿನ್ನ ನಿರವ ಮೌನ,
ನನ್ನಲ್ಲೆಬ್ಬಿಸಿದೆ ನೂರಾರು ಅನುಮಾನ
ನಿನ್ನ ಮಾತಿಗೆ, ಹೂ ನಗೆಗೆ
ನಿರೀಕ್ಷೆ ನೊಗ ಹೊತ್ತು.

ನೊಗಭಾರ ಇಳಿಸಿ
ಭಾರವಾದ ಹೃದಯವನ್ನು
ಬರಸೆಳೆಯಬಾರದೇ..?

ಅಷ್ಟುಕ್ಕೂ ಯಾಕೆ ಮೌನ
ಮೌನ ಮಾತಾಗಿ, ಮೆತ್ತಗಾಗಿ
ಮುತ್ತಿಕ್ಕಬಾರದೇ, ಕಾಯುವ ಹೃದಯವನ್ನ.

ಕನಸು ಕಟ್ಚಿಕೊಂಡು ಅಲೆಮಾರಿಯಾಗಿದ್ದೇನೆ
ಕಾಣದ ದಾರಿಯಲ್ಲಿ ಕಾಲಿಡುತ್ತಿದ್ದೇನೆ
ನಿನ್ನ ಮೌನ ಮಾತಾಗುತ್ತದೆ, ಉಸಿರಾಗುತ್ತದೆ ಎಂದು

ಹೇಳು ಮಾತನಾಡಲಾರೆಯಾ..?

-ಮಲ್ಲಿ

ಸೋಮವಾರ, ಏಪ್ರಿಲ್ 9, 2007

ಎಲ್ಲಿರುವೆ..?


ಪ್ರತಿ ವರುಷ ವಸಂತ
ನನಗೆ ಮಾತ್ರ ನಿತ್ಯ ನವ ದಿಗಂತ
ಭಾನತ್ತೆರಕ್ಕೆ ಹಾರಿ ಬಾನಾಡಿಯಂತೆ
ಹುಡುಕುತ್ತಿದ್ದೇನೆ ಕಾಣದ ಚೆಲವು, ಮೂಡದ ಒಲವು..

ನಾನು ಅರಸುತ್ತಿದ್ದೇನೆ ಪ್ರೀತಿ,
ನೀ ಸಿಕ್ಕು ಸಿಗದಂತಿರುವ ಆತ್ಮ ಸಂಗಾತಿ
ಬಳಕುವ ಲತೆಯಲ್ಲಿ, ಬಿರಿವ ಹೂ ಮೊಗ್ಗೆ
ಸೂರ್ಯಕಾಂತಿಗೆ ಕಾಯುವಂತೆ
ಮೊಡದ ಮರೆಯಲಿ ಮುಖ ತೋರಿಸಿ
ಮರೆಯಾಗುವ ಚಂದಿರನಂತೆ
ಕನಸಲ್ಲಿ ಕಣ್ಣು ಮಿಟುಕಿಸಿ
ಎಲ್ಲಿ ಮಾಯಾವಾದೇ ಅಂದಗಾತಿಯೇ..?

ಎಲೆಯ ಮೇಲಿನ ಮಂಜಿನ ಹನಿಯಂತೆ
ಸಿಗದೆ ಜಾರುವ ಜಾಯಮಾನದವಳೆ
ಕಂಡಷ್ಟು, ಕಾಣದಷ್ಟು ನೀ ಸನಿಹ
ನನ್ನ ಕಲ್ಪನಾ ಲೋಕದಲಿ...

- ಮಲ್ಲಿ

ಗುರುವಾರ, ಏಪ್ರಿಲ್ 5, 2007

ಕನ್ನಡ ಚಂದ್ರ

ಕನ್ನಡದ ಪೂರ್ಣಚಂದ್ರ
ಅಸ್ತಂಗತ
ಕಂಬಿನಿ ಮೀಡಿಯುತ್ತಿವೆ
ಅಸಂಖ್ಯಾತ

ಕನ್ನಡ ಕಷ್ಟಕ್ಕೆ ಬಿದ್ದಾಗ
ಅಲ್ಲಿ ಎಲ್ಲೋ ಹೂಂಕರಿಸುತ್ತಿತ್ತು
ಧ್ವನಿಯೊಂದು..
ಈಗ ಸ್ತಬ್ಧ-ನಿಶ್ಯಬ್ಧ
ಪರಿಸರ-ಅಕ್ಷರ ಎರಡು ಉಸಿರು
ಮಹಾ ಚೇತನದ ಅನಿಕೇತನಕೆ

ಕನ್ನಡಿಗರಿಗೆ ತಬರನ ಕಥೆ -ವ್ಯಥೆ
ಹೇಳಿದವ ಕಥೆಯಾದ ಈಗ
ವಿಜ್ಞಾನದ ಅಜ್ಞಾನ ತೊಲಗಿಸಿ
ಪರಿಸರ, ಪಕ್ಷಿ, ಛಾಯಚಿತ್ರ
ಎನುತ ಸಾಹಿತ್ಯ ಸಮುದ್ರ ಈಜಿದ
ಕನ್ನಡದ ಚಂದ್ರ ಅಸ್ತಂಗತ...

- ದುಃಖಿ

ಬುಧವಾರ, ಏಪ್ರಿಲ್ 4, 2007

ಆ ಮುದುಕಿ

ಆ ಮುದುಕಿ ಮಲಗಿದ್ದಾಳೆ
ಚೆನ್ನೈನ ಆ ಜನನಿಬಿಡ ರಸ್ತೆಯಲ್ಲಿ

ಹಾಗೇ ಹೋಗಿ ಬರುವವರನ್ನು ನೋಡುತ್ತಾಳೆ
ಸ್ಥಿತ ಪ್ರಜ್ಞೆ ಕಣ್ಣುಗಳಿಂದ..
ಅವರು ನೋಡುತ್ತಾರೆ ಅವಳನ್ನು.
ಕರುಣೆ ಇದ್ದವರು ಕಾಸು ಎಸೆಯುತ್ತಾರೆ
ಇಲ್ಲದವರು ಕಿಸಕ್ಕೆಂದು ನಕ್ಕು ಮುನ್ನಡೆಯುತ್ತಾರೆ

ಅವಳ ಮಲಗಿದ ಶೈಲಿಯೋ..
ವಿಷ್ಣು ಕಮಲಾರೂಢ ರೀತಿ
ಅವಳಗಿಲ್ಲ ಯಾರದೋ ಭೀತಿ
ದಿನಕರ ದಿನ ಬೆಳಗಿ ಮುಳುಗೋವರೆಗೂ
ಹಾಗೆಯೇ ಮಲಗಿರುತ್ತಾಳೆ
ಅವಳ ಸುತ್ತ ಬಿದ್ದ ಕಾಸು ಒಮ್ಮೊಮ್ಮೆ ಕಿಸಕ್ಕೇನ್ನುತ್ತದೆ..
ಮಹಾನಗರದ ಸಮಸ್ತ ಆಗು ಹೋಗು ಕಂಡು.

ಅವಳು ಈಗಮ್ಮೊ..ಆಗೊಮ್ಮೆ
ತನ್ನಡೆಗೆ ಬರುವ ವಾಹನ, ಸೂಟು-ಬೂಟುಧಾರಿಗಳನ್ನುನೋಡುತ್ತಾಳೆ...
ಏನೋ ಹೇಳಲು ಹೋಗುತ್ತಾಳೆ.
ಮಾತು ಮಾತ್ರ ಗಂಟಲಲ್ಲೇ ಉಳಿಯುತ್ತದೆ
ಮತ್ತ ಅದೇ ಸ್ಥಿತ ಪ್ರಜ್ಞೆ ದೃಷ್ಠಿ, ತದೇಕ ಚಿತ್ತ ಎಲ್ಲರತ್ತ

ಬಸಗಾಗಿ ಕಾಯುತ್ತ
ನೋಡುತ್ತೇನೆ ನಾನು ಅವಳತ್ತ
ಅವಳು ಮಾತ್ರ ಕಾಸು-ಪಾಸು ಎನ್ನುತ್ತ
ಇನ್ನಾವುದರತ್ತ ಹರಿಸಿ ಚಿತ್ತ
ನಗುತ್ತಾಳೆ. ಬಸ್ ಬಂತೆಂದು ಧಾವಿಸುವಾಗ
ಒಂದು- ಎರಡೋ ರೂಪಾಯಿ ಎಸೆಯುತ್ತೇನೆ
ಅವಳು ಮಾತ್ರ ಹಾಗೇ ಮಲಗಿರುತ್ತಾಳೆ.

-ಮಲ್ಲಿ

ಬುಧವಾರ, ಮಾರ್ಚ್ 21, 2007

ಸಾವಿನ ಮನೆಯೆಡೆಗೆ...

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

ಸಂಬಂಧಗಳ ಸಹವಾಸ ಸಾಕು ಎಂದು

ಇರಬಹುದು ಬದುಕುವದಕ್ಕೆ ಕಾರಣಗಳು ನೂರಾರು

ನಾಯುವುದಕ್ಕೆ ನನಗೆ ಕಾರಣಗಳು ಸಾವಿರಾರು

ಬಂಧ-ಅನುಬಂಧಗಳ ಹುಡಕಾಟದಲ್ಲಿ

ದೇಹ-ಮನಸ್ಸು ಜರ್ಜರಿತ

ಕೊನೆಗೂ ನಿಲುಕುಲಿಲ್ಲ

ನಾ ಬಯಿಸಿದ ಸಬಂಧ
ಬಯಿಸಿದ್ದಾದರೂ ಏನು...

ಬೊಗೆಸೆಯಷ್ಟು ಪ್ರೀತಿ

ಸಿಕ್ಕಿದ್ದೇಷ್ಟು ಸಾಸಿವೆ ಕಾಳದಷ್ಟು ಅಲ್ಲ.

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ


ಅಲ್ಲಿ ಎಲ್ಲೋ ನಗುತ್ತಿವೆ

ಹಳಸಿದ ಸಂಬಂಧಗಳು

ನನ್ನ ಕಥೆ-ವ್ಯಥೆ ಕಂಡು..
ನಗಲಿ, ನಕ್ಕು ನಕ್ಕು ಅಳಲಿ

ಬಳಲಿ ಬೆಂಡಾಗಲಿ..

ನನಗಿಲ್ಲ ಅದರ ಚಿಂತೆ

ಜೀವವನ್ನೇ ಧಿಕ್ಕರಿಸೇದ್ದವನಿಗೆ

ಇನ್ನಾವದರ ಚಿಂತೆ

ತೊಡೆದು ಹಾಕಿ ಎಲ್ಲ ಭ್ರಾಂತಿ

ಸಾಗುತ್ತಿದ್ದೇನೆ ಎಲ್ಲಿಯೂ ನಿಲ್ಲದಂತೆ

ಸಾವಿನ ಮನೆಯೆಡೆಗೆ..

ನಗುವನ್ನೇ ಮರೆತವನಿಗೆ ಅಳುವಿನ ಚಿಂತೆಯೇ

ಬದುಕನ್ನು ಬೇಡ ಎಂದವನಿಗೆ ಸಾವಿನ ಅಂಜಿಕಿಯೇ

ಬದುಕು ಬವಣೆಗಳ ತಲ್ಲಣದಿಂದ

ಹೊರಬರುವುದೇ ಈ ಕ್ಷಣದ ಸತ್ಯ; ಸಾವೇ ಸಾಂಗತ್ಯ

ನೀವು ಅನ್ನಬಹುದು ನಿರಾಶಾವಾದಿ

ಆದರೆ, ಇದು ಸತ್ಯ ಆಶೆಯಲ್ಲಿ ನಿರಾಶೆ

ಮನಗಂಡವರಿಗೆ ಮಾತ್ರ

ನನ್ನ ಭಾವ ಆಗುವುದು ಅರ್ಥ

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

-ಮಲ್ಲಿ

ಸಾವಿನ ಮನೆಯೆಡೆಗೆ...

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

ಸಂಬಂಧಗಳ ಸಹವಾಸ ಸಾಕು ಎಂದು

ಇರಬಹುದು ಬದುಕುವದಕ್ಕೆ ಕಾರಣಗಳು ನೂರಾರು

ನಾಯುವುದಕ್ಕೆ ನನಗೆ ಕಾರಣಗಳು ಸಾವಿರಾರು

ಬಂಧ-ಅನುಬಂಧಗಳ ಹುಡಕಾಟದಲ್ಲಿ

ದೇಹ-ಮನಸ್ಸು ಜರ್ಜರಿತ

ಕೊನೆಗೂ ನಿಲುಕುಲಿಲ್ಲ

ನಾ ಬಯಿಸಿದ ಸಬಂಧ
ಬಯಿಸಿದ್ದಾದರೂ ಏನು...

ಬೊಗೆಸೆಯಷ್ಟು ಪ್ರೀತಿ

ಸಿಕ್ಕಿದ್ದೇಷ್ಟು ಸಾಸಿವೆ ಕಾಳದಷ್ಟು ಅಲ್ಲ.

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ


ಅಲ್ಲಿ ಎಲ್ಲೋ ನಗುತ್ತಿವೆ

ಹಳಸಿದ ಸಂಬಂಧಗಳು

ನನ್ನ ಕಥೆ-ವ್ಯಥೆ ಕಂಡು..
ನಗಲಿ, ನಕ್ಕು ನಕ್ಕು ಅಳಲಿ

ಬಳಲಿ ಬೆಂಡಾಗಲಿ..

ನನಗಿಲ್ಲ ಅದರ ಚಿಂತೆ

ಜೀವವನ್ನೇ ಧಿಕ್ಕರಿಸೇದ್ದವನಿಗೆ

ಇನ್ನಾವದರ ಚಿಂತೆ

ತೊಡೆದು ಹಾಕಿ ಎಲ್ಲ ಭ್ರಾಂತಿ

ಸಾಗುತ್ತಿದ್ದೇನೆ ಎಲ್ಲಿಯೂ ನಿಲ್ಲದಂತೆ

ಸಾವಿನ ಮನೆಯೆಡೆಗೆ..

ನಗುವನ್ನೇ ಮರೆತವನಿಗೆ ಅಳುವಿನ ಚಿಂತೆಯೇ

ಬದುಕನ್ನು ಬೇಡ ಎಂದವನಿಗೆ ಸಾವಿನ ಅಂಜಿಕಿಯೇ

ಬದುಕು ಬವಣೆಗಳ ತಲ್ಲಣದಿಂದ

ಹೊರಬರುವುದೇ ಈ ಕ್ಷಣದ ಸತ್ಯ; ಸಾವೇ ಸಾಂಗತ್ಯ

ನೀವು ಅನ್ನಬಹುದು ನಿರಾಶಾವಾದಿ

ಆದರೆ, ಇದು ಸತ್ಯ ಆಶೆಯಲ್ಲಿ ನಿರಾಶೆ

ಮನಗಂಡವರಿಗೆ ಮಾತ್ರ

ನನ್ನ ಭಾವ ಆಗುವುದು ಅರ್ಥ

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

-ಮಲ್ಲಿ

ಶನಿವಾರ, ಮಾರ್ಚ್ 17, 2007

ಮುಂಗಾರು ಸಿಂಚನ

ಮಲ್ಲಿಗೆಯ ಮುಖಕ್ಕೆ ಮುಂಗಾರು ಸಿಂಚನ
ಚಿತ್ತ ಚಿತ್ತಾರ ಮೂಡಿಸಿದೆ
ಆ ನಿನ್ನ ಕರಿ ಮುಂಗುರುಳಿನ ಕುಂಚ
ನನ್ನೆದೆಯ ಬಾಂದಳವೆಲ್ಲ ಕಂಪನ

ಸ್ನಿಗ್ಧ ಸೌಂದರ್ಯದ ಸುರತಿ
ನನ್ನ ನಗುವೆಲ್ಲಾ ನೀನು
ನನ್ನ ಕನಸು,ಕನವರಿಕೆ ನೀನು
ನೀನಿಲ್ಲದ ಬಾಳು ಬಾಳೇ..?

ಸಾವಿರ ಸಂಕೋಲೆ ದಾಟಿ
ಕೈಹಿಡಿವೆ ಈ ಜಗವ ಮೀಟಿ
ನೀನೊಬ್ಬಳಿದ್ದರೆ ಸಾಕು
ಕಾಲ ಕೆಳಗೆ ಆ ನಾಕು

ನಿನ್ನ ನಗುವಿನ ಅಲೆಗಳು
ನನ್ನ ಯಶಸ್ಸಿನ ಕಲೆಗಳು
ಆ ಅಳು, ದು:ಖ ದುಮ್ಮಾನ
ಇರಲಿ ಕಡಲಾಚೆ....

-Malli

ಬುಧವಾರ, ಫೆಬ್ರವರಿ 21, 2007

ಜಾಗತೀಕರಣ ಅಂದ್ರೆ ಇದಪ್ಪಾ..

ಛೇ.. ಅತಿ ಆತ್‍ಪಾ ಈ ಜಾಗತಿಕರಣ ಹಾವಳಿ... ಅಂತ ತಿಪ್ಪಣ್ಣ ಆ ಕಡೆಯಿಂದ ಗುಣಗತ್ತಾ ಬಂದ. ಯಾಕೋ ತಿಪ್ಪಣ್ಣ ಅಂಥದ್ದೇನಾತೀಗ.. ಹಂಗ್ಯಾಕ್ ಗೋಣಗ್ಲಾಕತ್ತಿ ಅಂಥ ನಾನು ನನ್ನದ ಮಾಸ್ತರ್ ಠೀವಿಯೋಳಗ್ ಅವಂಗ್ ಕೇಳಿದೆ.

ಏನ್ ಬಿಡ್ರಿ ಮಾಸ್ತರ್ ಈ ಜಾಗ್ತಿಕರಣ ಬಾಳಾತ್ರಿ.. ಇಂದಿನ ಪೆಪರ್ ನೋಡಿರೇನ್ ನೀವ್.. ಚೆನ್ನೈಯೋಳಗ ಯಾವ್ದೋ ಹೋಟಲ್ದಾಗ್ ಪರದೇಶಿ ಹಜಾಮರ ಬಂದಾರಂತ್... ಅಲ್ರೀ ಮಾಸ್ತರ್ ಇಲ್ಲಿನ್ ಹಜಾಮರೇನು ಸರಿಯಾಗಿ ಕಷ್ಟ್ ಮಾಡಾಂಗಲ್ಲಂತಿ ತಿಳ್ಕೋಂಡಾರೇನ್ರಿ ಈ ಸರಕಾರದವ್ರೋ.. ಅಂತಂದ್..........

ಓಹಾ ಇದಾ ವಿಚಾರ.. ಅಂತೇಂದಾನ್ದ್ರೂ ಬೆಳಿಗ್ಗೆ ನಾನು ಈ ಸುದ್ಧಿ ಓದಿದ್ದೇ. ಈಗ ತೆಲೆಯೋಳಗ ಈ ವಿಚಾರ ಗುಂಯಿಗಡ್ಲಿಕತ್ತು.

ಅಲ್ಲೀ ಮಾಸ್ತರ್, ನಮ್ಮ ನೀರ್ ಸೋಪ ಹಚ್ಚಿ ಕೆರಿತಾರ್.. ಅವರೇನ್ ಬಂಗಾರ ಹಚ್ಚಿ ಕೇರಿತಾರ್.. ಇವತ್ತ ಚೈನೈದಾಗ ಬಂದಾರ್ ಬೆಂಗಳೂರಗೆ ಬರ್ತಾರ್...ನಾಡಿದ್ದ ನಮ್ಮೂರಿಗೆ ಬರ್ತಾರಿವ್ರು.. ಆಗ ನಮ್ಮ ಗತಿ ಏನ್ರೀ ಅಂತ್ ತನ್ನ ಜೀವನೋಪಾಯದ ದೂರಾಲಚೆನೆಯಲ್ಲಿದ್ದ ತಿಪ್ಪಣ್ಣ.

ಹೌದೋ ತಿಪ್ಪಣ್ಣ ನೀ ಹೇಳೂದು ಖರೇ ಅದ. ಜಾಗ್ತಿಕರಣದಿಂದಾಗಿ ನಮ್ಮ ಊರಾಗೀನ ಶೆಟ್ರೀಗೂ ಉಳಿಗಾಲ ಇಲ್ಲ. ವಾಲ್ಟ ಮಾರ್ಟ್ ಅಂತೋನ್ನದು ಒಂದು ದೊಡ್ಡ ಕಂಪನಿ ಭಾರತಕ್ಕ್ ಬರೂದೈತಿ. ಆಗ ನೋಡಿ ನಮ್ಮ ಚಿಲ್ಲರೆ ಅಂಗಡಿ ಇಟ್ಕೋಂಡವರೆಲ್ಲಾ ಬಕ್ಕಾ ಬರ್ಲೆ ಬಿಳ್ತಾರ. ಹಂಗ್ಯ ಈಗ ನಾವಲ್ಯಾಗರಿದೂ ಪರಿಸ್ಥಿ ಬರಬೌದುಪಾ ಅಂತಂದೆ.

ಅವನು ಏನೋನೂ ಅನ್ತಾ ತನ್ನ ಕಟಿಂಗ್ ಶಾಪ್ ಹಾದಿ ಹೊಡೆದ ಹೊರಟ. ನನ್ನಾಕೆ ಸ್ಕೂಲಿಗೆ ಟೈಮಾಯ್ತು ಬನ್ನಿ ಎಂದು ಕರೆದಳು ನಾನು ಎದ್ದು ಒಳ ಹೋದೆ.

-ಮಲ್ಲಿಕಾರ್ಜನ್

ಮಂಗಳವಾರ, ಫೆಬ್ರವರಿ 20, 2007

ನನ್ನ ಅಜಂತಾ

ಯಾಕೆ ಸಿಗರೆಟ್ ಬಹಳ ಸೇದ್ತಿದ್ದಾರಾ ಅಂತಾ ನನ್ನ ಸಿನಿಯರ್ ಕೇಳಿದ್ರು.... ಇಲ್ಲಾ ಅಂತಾ ನಾನು ಹಾರಿಕೆ ಉತ್ತರಾ ಕೊಟ್ಟೇನಾದರ್ರೂ. ಅಂತಾರಳದಲ್ಲಿ ಅದು ನಿಜ.
ನಾನು ಇತ್ತೀಚೆಗೆ ಸಿಗರೇಟ್ ಜಾಸ್ತಿ ಸೇದ್ತಿದೀನಿ. ಹಾಗಂತ ನನ್ನ ಎಲ್ಲ ಫ್ರೇಂಡ್ಸ್ ಹೇಳ್ತಿದ್ದೀರಾ. ಅದು ನಿಜಾನೂ ಹೌದು.....

ಹೌದು ಸಿಗರೆಟ್ ಯಾಕ್ ಸೇದ ಬೇಕು ? ಮಜಾ ಮಾಡೋಕಾ, ಟೆನ್ಸನ್ ಕಡಿಮೆ ಮಾಡೋಕಾ, ಇಲ್ಲಾ ಸುಮ್ಮನೇನಾ ಅಥವಾ ಫಲಿಸದ ಪ್ರೀತಿಗಾಗಿಯೇ.... ಸೇದೋರಿಗೆ ನೂರೆಂಟು ಕಾರಣ.

ಸೇದಿದೇ ಇರೋದಿಕ್ಕ ಕಾರಣ ಇಲ್ಲ. ನಾನಂತೂ ಸೇದೋದು ಕಾರಣ ಇಲ್ಲದೇನೆ ಹಾಗಂತ ಅನ್ಕೊಂಡ್ರೂ ಆಳದಲ್ಲಿ ಕಾರಣ ಇದ್ದೇ ಇದೆ. ಅದು ಏನು ಅನ್ನೋದು ಇಲ್ಲಿ ಹೋಳೋಕ ಆಗಲ್ಲ. ಅಂತಂದ್ರೆ ಮತ್ತೆ ಯಾಕೆ ಇಲ್ಲಿ ಇದನ್ ಬರ್ತಿರಿದ್ದಾರೆ ಅಂತೀರಾ. ಅದಕ್ಕೂ ಕಾರಣ ಇದೆ ಕೇಳಿ.

ನಾನ ಸಿಗರೇಟ್ ಸೇದಾದ್ಮೇಲೆ ಅಜಂತಾ ಬೇಕು. ಅಯ್ಯೋ ಅಜಂತಾ ಕೂಡ್ಲೇ. ಹುಡುಗಿ ಅಂತಾ ತಿಳ್ಕೋಬೇಡಿಪಾ. ಅದು ಅಡಕಿ ಚೀಟಿ ಹೆಸರು. ಅದನ್ನೆ ಯಾಕೆ ತಿನ್ನೋದು ಅಂದ್ರೆ. ಸಿಗರೆಟ್ ಸೇದಿ ಆಪಿಸಿಗೆ ಬಂದು ಕಂಪ್ಯೂಟರ ಮುಂದೆ ಕೂಡ ಬೇಕಲ್ಲ. ಆಗ ನನ್ನು ಸುತ್ತ ಸಹದ್ಯೋಗಿಗಳಿಗೆ ನನ್ನ ಸಿಗರೇಟ್ ಸುವಾಸನೆ ಬಡಿಬಾರದು ಅಂತ ಈ ಮುನ್ನೆಚ್ಚರಿಕೆ...!

ನೀವು ಏನೇ ಹೇಳ್ರೀ ಈ ಅಜಂತ ಸೊಗಸು ತುಂಬಾ ಮಜಾರೀ.. ಹಾಗೆ ಬಾಯಿಲ್ಲಿ ಹಾಕೊಂಡು ತಕ್ಷಣ ಕರಗಿ ಬಿಡುತ್ತೆ ಅನ್ಕೊಂಡ್ರಾ.. ಅದ್ನಾ ಜಗೀಬೇಕು ಆಗ ಕರುಗುತ್ತೆ ಸಣ್ಣಗೆ. ಆದ್ರೇ ಒಂದು ನಮ್ಮ ಸರ್ಕಾರಗಳು ಪ್ರತಿಭಟನೆ ತಡೆಯೋಕೆ ಸಾಕುಷ್ಟು ಮನ್ನೆಚ್ಚರಿಕೆ ವಹಿಸ್ತಾರೆ ಆದ್ರೆ ಏನಾಗುತ್ತೆ. ಏನಾಗಬೇಕಿತ್ತೋ ಅದೇ ಆಗುತ್ತೆ. ಆದ್ರೆ ನನ್ನ ಮುನ್ನೆಚ್ಚರಿಕೆ ಮಾತ್ರ ಹಾಗಲ್ಲ. ಅದು ವಿಫಲವಾಗೋದೇ ಇಲ್ಲ.

ಹೀಗಾಗಿ ನಾನು ಯಾವಗ್ಲೂ ಬಚಾವ್ . ಏನಂತೀರಾ ಸಿಗರೇಟ್ ಮಿತ್ರರರೇ ನೀವು ಒಮ್ಮೆ ಟ್ರೈ ಮಾಡಿ ನೋಡಿ.


- ಮಲ್ಲಿಕಾರ್ಜುನ

ಮಂಗಳವಾರ, ಫೆಬ್ರವರಿ 13, 2007

ಪ್ರೀತಿ...


ಪ್ರೀತಿ ಎಂಬ ಎರಡೂವರೆ ಅಕ್ಷರ

ಆಶೆ ಆಕಾಂಕ್ಷೆಗಳು ಆಗರ


ಹೆಣ್ಣಿನ ಅಂತರಾಳ

ಹೊಕ್ಕು ನೋಡವ ತವಕ

ಒಮ್ಮೊಮ್ಮೆ ಎಟುಕಿತು..

ಮತ್ಚೋಮ್ಮೆ ಕುಟುಕೀತು..


ಪ್ರತಿ ಜೀವಿಯೂ ಬಯಸುವುದೂ

ಬೊಗಸೆಯಷ್ಟು ಹಿಡಿ ಪ್ರೀತಿಯನ್ನ

ಸಿಗದಿದ್ದರೆ ಜೀವನವೇ ಚಿತ್ರಾನ್ನ..!


ಸಹಿಸಿಕೊಂಡಷ್ಟು ಪ್ರೀತಿ ಸಹನೀಯ

ಇಲ್ಲದಿದ್ದರೇ ಜೀವನವೇ ನಿರಸ..

ಆಗದರಲಿ ಹಾಗೆ...

ಬೆಳಗಲಿ ಪತಿ ಪ್ರೇಮಿಯ ಹೃದಯ ಹಣತೆ


ಸಾಗಲಿ ಪ್ರೇಮಿಗಳ ನಿತ್ಯ ನೂತನ

ಜೀವನ ಪ್ರೇಮ ಕೊನೆಯಾಗದರಲಿ

ಎಲ್ಲಿಯೂ ನಿಲ್ಲದಿರಲಿ..



-ಮಲ್ಲಿಕಾರ್ಜುನ್


ಸೋಮವಾರ, ಫೆಬ್ರವರಿ 12, 2007

ನಿನಗೇಕೆ...?

ನನ್ನ ಹಾಡು ನನ್ನದು
ಸುಮ್ಮನೆ ಏಕೆ ಕೆಣಕುತ್ತಿ
ನನ್ನ ಹಾಡು ಎಂದು ನೀ..

ಹಾಡಿನ ಪಾಡು ನನ್ನದೆ
ಪಟ್ಟ ವ್ಯಧ್ಯೆಯು ನನ್ನದೆ
ನಿನಗೇಕೆ ಗೊಡವೆ ನನ್ನದೆಂದು...

ನಾ ಹಾಡುವುದು ನನಗಾಗಿ
ಕೇಳಿಸಿಕೊಳ್ಳದಿದ್ದರೂ ಹಾನಿಯಿಲ್ಲ ಲಾಭವೂ ಇಲ್ಲ.
ಇದು ನನ್ನ ಹಾಡು...

ಕೇಳ ಬೇಡ ನೀ..
ಯಾಕೆ ನನ್ನ ಹಾಡು ಎಂದು..



-ಮಲ್ಲಿಕಾರ್ಜುನ

ಬುಧವಾರ, ಫೆಬ್ರವರಿ 7, 2007

ಪಾಸ್‌ ಇದೆಯಾ..?

ಪಾಸ್‌ ಇದೆಯಾ..?
ಅತ್ತಿಂದ ಧ್ವನಿ ಬಂತು
ಬೆಂಗಳೂರ ಸಿಟಿ ಬಸ್ಸಿಂದಿಳಿದಾಕ್ಷಣ
ತೆಲೆ ಎತ್ತಿ ನೋಡಿದೆ
ಮಬ್ಬುಗತ್ತಲಿನಲ್ಲಿ

ಮೇಲುಗಣ್ಣಿನ ಹುಡುಗ
ಮೈ ಮೇಲೆ ಅಲ್ಲಲ್ಲಿ ಅರಿವೆ
ಕೋಡಬೇಕೋ ಕೋಡಬೇಡವೋ
ಯೋಚಿಸುವ ಮೊದಲೆ
ನನ್ನ ಕೈಕಿಸೆಯೊಳಗಿಳಿದು
ಅವನ ಕೈಗೆ ಪಾಸ್‌ ನೀಡಿತ್ತು...

ಮತ್ತೊಂದು ದಿನ ....

ಬಸ್‌ ಪಾಸ್‌ ಇದೆಯಾ..?
ಕೇಳಿತು ಅತ್ತ ಕಡೆಯಿಂದಬಸ್ಸಿಂದಿಳಾದಕ್ಷಣ.
ನೋಡಿದೆ, ಮೈ ತುಂಬಾ
ಬಟ್ಟೆ ಕೈಗಳು ತುಂಬಾ ಬಂಗಾರ
ಆದರೂ, ಪಾಸ್‌ ಇದೆಯಾ.... ?
ಇದ್ದರೂ ಇಲ್ಲ ಅಂದೆ.

ದುರುಗಟ್ಟಿದ ಆತ...
ದುರಳರು ದುರುಗಟ್ಟುತ್ತಾರೆ
ಆದರೂ `ಪಾಸ್‌'ಗಾಗಿ ಹಪಿಹಪಿಸುತ್ತಾರೆ..
ಇದೇ ನಗರ ಜೀವನಾನಾ...?

ಒಂದಡೇ ಇಲ್ಲದವರೂ ಬೇಡುತ್ತಾರೆ
ಇದ್ದವರೂ ಬೇಡುತ್ತಾರೆ....
ಇಲ್ಲ ಮತ್ತು ಇದ್ದವರ ನಡುವೆ
ಕೊಡವವನು ಯಾರು..?


-ಮಲ್ಲಿಕಾರ್ಜುನ್‌

ಮಂಗಳವಾರ, ಜನವರಿ 16, 2007

ನಟ, ಮೌಲ್ಯ ಮತ್ತು ಅನುಕರಣೆ

ಜನಮಾನಸದಲ್ಲಿ "ಹೀರೋ'ಗಳಾಗಿರುವ ನಮ್ಮ ಸಿನೆಮಾ 'ನಾಯಕ'ರು ನಿಜ ಜೀವನದಲ್ಲಿ ಹಾಗೇ ಇರ್ತಾರಾ.. ?
ಬಾಲಿವುಡ್ ಸ್ಟಾರ್(ಸಿನೆಮಾದಲ್ಲಿ ಮಾತ್ರ) ನಟ ಅಭಿಷೇಕ ಮತ್ತು ಮಾಜಿ ಸೌಂದರ್ಯ ರಾಣಿ(ಆಂತರಿಕ ಸೌಂದರ್ಯವಲ್ಲ) ಐಶ್ವರ್ಯ ರೈ ಅವರು ನಿಶ್ಚಿತಾರ್ಥ ಮತ್ತು ಅದರ ಪ್ರಹಸನ ನೋಡಿ ಇಂಥ ಪ್ರಶ್ನೆ ಎದ್ದಿದೆ.
ಸ್ವಲ್ಪ ನೆನಪು ಮಾಡಿಕೊಳ್ಳಿ.
ಕೆಲ ದಿನಗಳಿಂದ ಬಿಡುಗೆಡೆಯಾದ 'ಲಗೇ ರಹೋ ಮುನ್ನಾ ಭಾಯಿ' ಚಿತ್ರದಲ್ಲಿ ಅಭಿಷೇಕ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರ ಜೋತಿಷ್ಯ ದೋಷ ಹೊಂದಿದ ಯುವತಿಯನ್ನು ವರಿಸುವುದು. ಆ ಪಾತ್ರದಲ್ಲಿ ಅಭಿ, "ನಾನ ಅವಳನ್ನು ಮದುವೆಯಾದರೆ ಸಾಯ್ತಿನಿ ಇಲ್ಲವೊ ಗೋತ್ತಿಲ್ಲ. ಆದರೆ ಮದುವೆಯಾಗದಿದ್ದರೆ ಖಂಡಿತವಾಗಿರಲಾರೆ'' ಎನ್ನುತ್ತಾರೆ. ಅಂದರೆ ಜ್ಯೋತಿಷ್ಯವನ್ನು ನಿರಾಕರಿಸುವ ಹಾಗೂ ಸತ್ಯಕ್ಕೆ ಬೆಲೆ ಕೊಡುವದನ್ನು ಪ್ರತಿಪಾದಿಸುವ ಪಾತ್ರ ಅದು.
ಈಗ ನಿಜ ನಿಶ್ಚಿತಾರ್ಥಕ್ಕೆ ಬನ್ನಿ.
ಅದೇ ಅಭಿಷೇಕ ಬಚ್ಚನ್ ತನ್ನ ಪತ್ನಿಯಾಗಿ ಸ್ವೀಕರಿಸಲಿರುವ ಐಶ್ವರ್ಯ ರೈಳ ಕುಂಡಲಿಯಲ್ಲಿ ದೋಷ ಇರುವದರಿಂದ ಉಜ್ಜಯನಿ, ಕೇರಳಾ ಮತ್ತು ಬೆಂಗಳೂರು ಜ್ಯೋತಿಷಿ ಹತ್ತಿರ ಅಲೆದಾಡುತ್ತಿರುವುದು ಎಷ್ಟು ಹಾಸ್ಯಾಸ್ಪದ..! ಹಾಗಾದರೆ ನೀವ ಅನ್ನಬಹುದು. ಅದು ಸಿನೆಮಾ. ಇದು ನಿಜ ಜೀವನ. ಸಿನೆಮಾ ಮತ್ತು ನಿಜ ಜೀವನಕ್ಕೂ ತಂಬಾ ವ್ಯತ್ಯಾಸವಿದೆ. ಸೀನೆಮಾದಲ್ಲಿ ತೋರಿಸಲಾದ ಪ್ರತಿಯೊಂದು ಅನಕರಿಸಲಾಗದು ಎಂದು ವಾದ ಮಾಡಬಹುದು.
ಸರಿ. ಸಿನೆಮಾ ಮತ್ತು ನಿಜ ಜೀವನಕ್ಕೆ ತುಂಬಾ ವ್ಯತ್ಯಾಸವಿದೆ. ಹಾಗಾದರೆ ನಿನೆಮಾದಲ್ಲಿ ಪ್ರತಿಪಾದಿಸುವ ಅಮೂರ್ತವಾದ ಮೌಲ್ಯಗಳಿಗೆ ಮೂರ್ತ ರೂಪ ನೀಡುವ ಪಾತ್ರದಾರಿಗಳು ಜನರು ಕಣ್ಣಲ್ಲಿ ಸಾಕ್ಷಾತ ನಾಯಕರಾಗುತ್ತಾರೆ. ಆದರೆ ಅವರು ತಮ್ಮ ಜೀವನದಲ್ಲಿ ಏಕೆ (ಬೆರಳಣಿಕೆ ನಟರನ್ನು ಹೊರತುಪಡಿಸಿ) ಅಳವಡಿಸಿಕೊಳ್ಳಲಾರರು ..? ಅದು ಕೇವಲ ದುಡ್ಡ ತೆತ್ತು ನೋಡುವ ಪ್ರೇಕ್ಷಕರಿಗೆ ಮಾತ್ರವೇ ಅನ್ವಯವೇ..? ಹಾಗಾದರೆ ಅದೇ ನಾಯಕರನ್ನು ತಮ್ಮ ರೋಲ್ ಮಾಡಲ್ ಮಾಡಿಕೊಳ್ಳುವ ಅಭಿಮಾನಿಗಳದ್ದು ಕೇವಲ ಹುಚ್ಚತನವಾ..? ಇದೂಂದು ಘಟನೆ ಮಾತ್ರ. ಇಂಥ ಉದಾಹರಣೆಗಳು ಬೇಕಾದಷ್ಟು ದೊರೆಯುತ್ತವೆ.
ಇಲ್ಲಿ ಜ್ಯೋತಿಷ್ಯವನ್ನು ತೆಗಳುವ ಉದ್ದೇಶ ಇಲ್ಲ. ಚಿತ್ರದಲ್ಲಿ ಜ್ಯೋತಿಷ್ಯವನ್ನು ನಿರಾಕರಿಸುವ ನಟ ನಾಯಕ ನಿಜ ಜೀವನದಲ್ಲಿ ಅದರ ನೆರಳಿನಲ್ಲಿಯೇ ಇರುತ್ತಾನೆ ಎಂಬುದಷ್ಟೇ ಹೇಳುವುದು. ಭಾರತದಲ್ಲಿ ಸಿನೆಮಾ ತರುವ ಬದಲಾವಣೆಗಳು ಪ್ರಭಾವದಷ್ಟು ಬೇರೆ ಯಾವ ಮಾಧ್ಯಮವೂ, ವ್ಯಕ್ತಿಯೂ ಕೊಡ ತರಲಾರ. ಅದಕ್ಕಾಗಿ ತೆರೆಯ ಮೇಲಿನ ನಾಯಕರು ಪ್ರತಿಪಾದಿಸುವ ಮೌಲ್ಯದ ಒಂದಂಶವನ್ನಾದರೂ ತೆರೆ ಹಿಂದೆಯಾದರೂ ಪ್ರತಿಪಾದಿಸಬೇಕು. ಹಾಗಂತ ನಮ್ಮ ಯಾವ ಚಿತ್ರನಟರು ಇದಕ್ಕೆ ಹೊರತಾಗಿಲ್ಲ ಅಂತ ಅಲ್ಲ. ಕೆಲವು ನಟರು ಇದಕ್ಕೆ ಹೊರತಾಗಿದ್ದಾರೆ. ರಜನಿಕಾಂತ್, ಡಾ. ರಾಜಕುಮಾರು ಸೇರಿದಂತೆ ಕೆಲವು ನಟರು ತೆರೆಯ ಮೇಲೆ ಪ್ರತಿಪಾದಿಸಿದ ಮೌಲ್ಯಗಳನ್ನು ಎಲ್ಲವೂ ಅನುಕರಿಸದ್ದಿದ್ದೂ ಕೆಲವನ್ನಾಷ್ಟದರೂ ಅಳವಡಿಸಿಕೊಂಡು ನಿಜವಾದ ಸ್ಟಾರ್ ನಟರಾಗಿದ್ದಾರೆ.

ಶುಕ್ರವಾರ, ಜನವರಿ 12, 2007

ಪ್ರೇಮ ದಿಗಂತ

ಪ್ರೇಮ ದಿಗಂತದತ್ತ
ಹಾರುತ್ತಿವೇ ಹಕ್ಕಿಗಳು
ರೆಕ್ಕೆ ಚಾಚುತ್ತ..
ಪಟ ಪಟನೆ ಬಡಿದು
ಏನೋ ಹೇಳುತಿವೆ
ನಿನ್ನ ಕಣ್ಣ ರೆಪ್ಪೆಗಳು...
ಹಕ್ಕಿಗೋ ಆಕಾಶವೇ
ಅವಕಾಶ..
ನಿನ್ನ ಕಣ್ಣಿಗೆ ನನ್ನೆದೆಯ
ಶೋಧ..
ಗೆಳತಿ,
ಹೃದಯದ ಹೆಬ್ಬಾಗಿಲು ಕಣ್ಣು
ಅಂದಿದ್ದು ನಿನ್ನ ನೋಡಿಯೇ ?
ಭಾವನೆಗಳು ಮಾಹಪೂರ
ನಿನ್ನ ಕಣ್ಣ ಸಾಗರ
ನನಗದೇ ನಿತ್ಯ ನಾಗರ..
-ಮಲ್ಲ

ಬೇಸರವೇಕೆ ಬೆಡಗಿ


ಜೀವನಾ ನಿಕೃಷ್ಟ ಅಲ್ಲ
ಸಾವು ಖಚಿತ,
ತಂದಕೋಬ್ಯಾಡ ಮುಂಚಿತ
ಬ್ಯಾಸರ್ ಯಾಕ್ ಬೆಡಗಿ..


ಪ್ರೀತಿ ಅಂದ್ರ್ ಅಲ್ಲ ಅಸಹ್ಯ
ಅದು ಜೀವನ್ಮುಖಿ
ತಿಳ್ಕೋ ಚಂದ್ರಮುಖಿ
ಬ್ಯಾಸರ್ ಯಾಕ್ ಬೆಡಗಿ..

ಪ್ರೀತಿಗೂ ನೀತಿಗೂ ಅಂತ್ರ
ಅಂತ್ ನೀ ಅಳುತ ಕುಂತ್ರ
ಇದ್ದ ಬಾಳು ಬೇಳಕಾಗತೈತೇನು ?
ಬ್ಯಾಸರ್ ಯಾಕ್ ಬೆಡಗಿ..
-ಮಲ್ಲ





ಶನಿವಾರ, ಜನವರಿ 6, 2007

ಮುಂಗಾರಿನ ನೆನಪು...


ಧೋ ಎಂದು ಸುರಿಯುವ
ಮುಂಗಾರು ಮಳೆಗೆ
ನನ್ನವಳ ನೆನಪು ಉಮ್ಮಳಿಸುತ್ತಿದೆ,
ಕೈ-ಕೈ ಹಿಡಿದು ಮಳೆಯಲ್ಲಿ ಹಾಕಿದ ಹೆಜ್ಜೆಗಳು
ಎದೆಯಲ್ಲಿ ಅಚ್ಚಳಿಯದೇ ಉಳಿದಿವೆ.

ಮುಂಗಾರಿನ ಮಳೆಗೆ ಹೆಣೆದ ಕನಸುಗಳು
ಇನ್ನೂ ಹಾಗೆ ಇವೆ, ನೀರ ನಿಂತ ಮಡಿಗಳಂತೆ
ಕಟ್ಟೆಯೊಡೆದು ನೀರು ಜೀನುಗುವಂತೆ
ಈಗಲೋ ಆಗಲೋ ಒಮ್ಮೊಮ್ಮೆ ಇಣಕುತ್ತಿವೆ.
ಗೂಡಿನಿಂದ ಮರಿಹಕ್ಕಿ ಗೋಣು ಹೊರ ಹಾಕಿದಂತೆ

ಮುಂಗಾರಿನಲ್ಲಿ ಅಲ್ಲವೇ ನಾನವಳಿಗೆ
ಕೊಟ್ಟದ್ದು ಮೊದಲ ಮುತ್ತು...
ಆಕೆ ನಾಚಿ ನೀರಾಗಿದ್ದು, ಎಲ್ಲವೂ ನೆನಪಾಗಿ ಕಾಡುತ್ತಿದೆ.

ಹಸಿಯಾದ ರಸ್ತೆಯಲ್ಲಿ ನಡೆಯಾಗದೂ
ನಡೆಯದೇ ಇರಲಾಗದೂ
ಕೈ ಹಾಕಿ ಮಾಡಿದ ಆಣೆ ಪ್ರಮಾಣಗಳು
ಮುಂಗಾರಿನ ಮಳೆಯಲ್ಲಿ ಅಲ್ಲವೇ
ಮತ್ತೆ ಏಕೆ ಮರೆತಳು....?

-ಮಲ್ಲಿಕಾರ್ಜುನ