ಭಾನುವಾರ, ಮೇ 24, 2020

Benjamin Netanyahu Faces Trails: ಕಟಕಟೆಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು

ಇಸ್ರೇಲ್  ಜನರಿಂದ ಬೀಬಿ ಎಂದು ಕರೆಯಿಸಿಕೊಳ್ಳುವ ಬೆಂಜಮಿನ್ ನೆತನ್ಯಾಹು ಭ್ರಷ್ಟಾಚಾರ ಮತ್ತು ಆಡಳಿತ ದುರುಪಯೋಗಕ್ಕಾಗಿ ಕೋರ್ಟ್ ಕಟಕಟೆಯಲ್ಲಿದ್ದಾರೆ. ಮಧ್ಯಪ್ರಾಚ್ಯ ರಾಜಕಾರಣದ ಧಾಡಸಿ ನಾಯಕನ ಭವಿಷ್ಯಕ್ಕೆ ಮಂಕು  ಕವಿಯಲಿದೆಯೇ?


– ಮಲ್ಲಿಕಾರ್ಜುನ ತಿಪ್ಪಾರ

ಇಸ್ರೇಲ್‌ನ ಪ್ರಶ್ನಾತೀತ ನಾಯಕ, ಪ್ರಖರ ರಾಷ್ಟ್ರವಾದಿ ಬೆಂಜಮಿನ್‌ ನೆತನ್ಯಾಹು ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಕೋರ್ಟ್‌ಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆಯುವ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಭಾನುವಾರ ಅವರು ವಿಚಾರಣೆಗೆ ಹಾಜರಾಗಲಿದ್ದು, ಅದರೊಂದಿಗೆ ‘ಅಧಿಕಾರದಲ್ಲಿದ್ದಾ­ಗಲೇ ಕಟಕಟೆ ಏರಿದ ಮೊದಲ ಪ್ರಧಾನಿ’ ಎಂಬ ಕುಖ್ಯಾತಿಯೂ ನೆತನ್ಯಾಹು ಬೆನ್ನಿಗಂಟಿದೆ.

ಸುತ್ತ ವೈರಿ ರಾಷ್ಟ್ರಗಳ ಕೂಟವನ್ನೆ ಕಟ್ಟಿಕೊಂಡಿರುವ ಪುಟ್ಟ ದೇಶ ಇಸ್ರೇಲ್‌ನ ರಾಜಕಾರಣದಲ್ಲಿ ಬೆಂಜಮಿನ್‌ ನೆತನ್ಯಾಹು ಅವರದ್ದು ಮಹತ್ತರ ಪಾತ್ರ­ವಿದೆ. ದಶಕಗಳಿಂದ ಇಸ್ರೇಲ್‌ ರಾಜಕಾರಣದಲ್ಲಿ ಪ್ರಭಾವವನ್ನು ಹೊಂದಿ­ರುವ ನೆತನ್ಯಾಹು ಇದೀಗ, ಭ್ರಷ್ಟಾಚಾರ, ವಿಶ್ವಾಸದ್ರೋಹ ಸೇರಿ ಇನ್ನಿತರ ಆರೋಪಗಳಿಂದಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಹಾಗೆ ನೋಡಿದರೆ, ಈ ಕೊರೊನಾ ವೈರಸ್‌ ಪರಿಸ್ಥಿತಿ ಸೃಷ್ಟಿಯಾಗದಿದ್ದರೆ ಅವರು ಎರಡು ತಿಂಗಳ ಮೊದಲೇ ಕಟಕಟೆ ಏರಬೇಕಿತ್ತು.

ನೆತನ್ಯಾಹು ಅವರು ಮೂರು ರೀತಿಯ ಆರೋಪಗಳಿಂದಾಗಿ ವಿಚಾರಣೆ ಎದುರಿಸುತ್ತಿದ್ದಾರೆ. 1. ಅವರು ಬೆಝಕ್‌ ಟೆಲಿಕಾಂ ಇಸ್ರೇಲ್‌ ಕಂಪನಿಗೆ ಅಂದಾಜು 50 ಕೋಟಿ ಡಾಲರ್‌ ಲಾಭವಾಗುವಂತೆ ಶಾಸನಾತ್ಮಕ ಸಹಾಯ ಮಾಡಿದ್ದು. ಇದಕ್ಕೆ ಪ್ರತಿಯಾಗಿ, ಈ ಕಂಪನಿ ನಿಯಂತ್ರಣ ಹೊಂದಿರುವ ‘ವಲ್ಲಾ’ ನ್ಯೂಸ್‌ ವೆಬ್‌ಸೈಟ್‌ನಲ್ಲಿ ನೆತನ್ಯಾಹು ಹಾಗೂ ಅವರ ಪತ್ನಿ ಪರವಾಗಿರುವ ಸುದ್ದಿಗಳ ಪ್ರಸಾರ. 2. ನೆತನ್ಯಾಹು ಹಾಗೂ ಅವರ ಪತ್ನಿ ಸಾರಾ 2 ಲಕ್ಷ ಡಾಲರ್‌ ಮೌಲ್ಯದ ಕಾಣಿಕೆಗಳನ್ನು ಇಸ್ರೇಲಿ ಮೂಲದ ಹಾಲಿವುಡ್‌ ನಿರ್ಮಾಪಕ ಅರ್ನಾನ್‌ ಮಿಲ್ಚನ್‌ ಹಾಗೂ ಆಸ್ಪ್ರೇಲಿಯನ್‌ ಬಿಸಿನೆಸ್‌ಮನ್‌ ಜೇಮ್ಸ್‌ ಪ್ಯಾಕರ್‌ ಅವರಿಂದ ಪಡೆದಿದ್ದಾರೆ. ಇದರಲ್ಲಿ ದುಬಾರಿ ಷಾಂಪೇನ್‌, ಸಿಗಾರ್‌ಗಳೂ ಸೇರಿವೆ. 3. ಅರ್ನಾನ್‌ ಮೋಜ್‌ ಒಡೆತನದ ‘ಯೆಡಿಯೂತ್‌ ಅಹ್ರನೋಥ್‌’ ಪತ್ರಿಕೆಯಲ್ಲಿ ತಮ್ಮ ಪರವಾಗಿ ಉತ್ತಮ ಸುದ್ದಿಗಳು ಪ್ರಕಟವಾಗುವಂತೆ ನೆತನ್ಯಾಹು ಒಪ್ಪಂದ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ‘ಯೆಡಿಯೂತ್‌ ಅಹ್ರನೋಥ್‌’ನ ಎದುರಾಳಿ ಪತ್ರಿಕೆಗಳ ಬೆಳವಣಿಗೆಯನ್ನು ತಡೆಯುವ ವಾಗ್ದಾನ.

ಮೇಲ್ನೋಟಕ್ಕೆ ಇವೆಲ್ಲ ಸಾಮಾನ್ಯ ರಾಜಕಾರಣಿಯೊಬ್ಬ ತನ್ನ ಏಳಿಗೆಗೆ ಮಾಡಬಹುದಾದ ಪ್ರಕರಣಗಳು ಎನಿಸುತ್ತವೆ. ಆದರೆ, ಇಸ್ರೇಲ್‌ನಂಥ ರಾಷ್ಟ್ರದಲ್ಲಿ ಇದೆಲ್ಲವೂ ಅಷ್ಟು ಸಮ್ಮತವಾದಂತೆ ತೋರುವುದಿಲ್ಲ. ‘‘ಇದೆಲ್ಲ ನನ್ನ ಎದುರಾಳಿಗಳು ಹಾಗೂ ಪೊಲೀಸ್‌ ವ್ಯವಸ್ಥೆ ರೂಪಿಸಿರುವ ಷಡ್ಯಂತ್ರ,’’ ಎಂದು ನೆತನ್ಯಾಹು ಆರೋಪಿಸುತ್ತಿದ್ದಾರೆ. ಬಲಪಂಥೀಯ ನಾಯಕನಾಗಿ­ರುವುದಕ್ಕೆ ಇಂಥ ಆರೋಪಗಳನ್ನು ಎದುರಿಸಬೇಕಾಗಿದೆ ಎಂದು ಹೇಳುವ ಮೂಲಕ ಇಡೀ ಪ್ರಕರಣವನ್ನು ಸೈದ್ಧಾಂತಿಕ ಸಂಘರ್ಷಕ್ಕೆ ಪರಿವರ್ತಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ, ಒಂದೊಮ್ಮೆ ವಿಚಾರಣೆ ಪೂರ್ಣಗೊಂಡು ತಪ್ಪಿತಸ್ಥರು ಎಂದು ಸಾಬೀತಾದರೆ ಅವರ ರಾಜಕೀಯ ಜೀವನವೇ ಮುಗಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇಂದು ನೆತನ್ಯಾಹು ಕೋರ್ಟ್‌ ಕಟಕಟೆಯಲ್ಲಿ ನಿಂತಿರಬಹುದು. ಆದರೆ, ಇಂದಿನ ಶಕ್ತಿಶಾಲಿ ಇಸ್ರೇಲ್‌ನ ಹಿಂದೆ ನೆತನ್ಯಾಹು ಅವರ ಕಾರ್ಯಕ್ಷ ಮತೆಯೂ ಸಾಕಷ್ಟಿದೆ. ನಾಲ್ಕು ಬಾರಿ ಪ್ರಧಾನಿಯಾಗಿರುವ ಅವರಿಗೆ ಸೋಲು-ಗೆಲುವು ಹೊಸದಲ್ಲ. ಇಸ್ರೇಲಿಗಳಿಂದ ಪ್ರೀತಿಯಿಂದ ‘ಬೀಬಿ’ ಎಂದು ಕರೆಯಿಸಿಕೊಳ್ಳುವ ನೆತನ್ಯಾಹು ಜನಿಸಿದ್ದು 1949 ಅಕ್ಟೋಬರ್‌ 21ರಂದು ಟೆಲ್‌ ಅವಿವ್‌ನಲ್ಲಿ. ಇವರ ತಂದೆ ಇತಿಹಾಸತಜ್ಞ. ಅಮೆರಿಕದಲ್ಲಿ ಅವರಿಗೆ ಶೈಕ್ಷ ಣಿಕ ರಂಗದಲ್ಲಿ ಉನ್ನತ ಹುದ್ದೆ ದೊರೆತ ಹಿನ್ನೆಲೆಯಲ್ಲಿ ಅವರ ಕುಟುಂಬ 1963ರಲ್ಲಿ ಅಮೆರಿಕಕ್ಕೆ ವಲಸೆ ಹೋಯಿತು. 18ನೇ ವಯಸ್ಸಿಗೆ ನೆತನ್ಯಾಹು ಇಸ್ರೇಲಿಗೆ ಮರಳಿದರು. ಸೇನೆಯಲ್ಲಿ ಐದು ವರ್ಷ ಕಾಲ ಇದ್ದು, ಕಮಾಂಡೊ ಯುನಿಟ್‌ನಲ್ಲಿ ಕ್ಯಾಪ್ಟನ್‌ ಆಗಿದ್ದರು. 1968ರಲ್ಲಿ ನಡೆದ ಬೈರುತ್‌ ಏರ್‌ಪೋರ್ಟ್‌ ಕಾರ್ಯಾ­ಚರಣೆ ಮತ್ತು 1973ರಲ್ಲಿ ನಡೆದ ಮಧ್ಯ ಪ್ರಾಚ್ಯ ಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಬಳಿಕ ಅವರು ಮತ್ತೆ ಅಮೆರಿಕಕ್ಕೆ ವಾಪಸ್ಸಾದರು. ಆಗಲೇ ಅವರು ಅಮೆರಿಕದ ಮೆಸ್ಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ­(ಎಂಐಟಿ)ಯಿಂದ ಡಿಗ್ರಿ ಮತ್ತು ಮಾಸ್ಟರ್‌ ಡಿಗ್ರಿ ಪಡೆದುಕೊಂಡರು. 1976­ರಲ್ಲಿ ಬೆಂಜಮಿನ್‌ ಸಹೋದರ ಯೋನಾಥನ್‌ ಎಂಟೆಬ್ಬೆ ಕಾರ್ಯಾಚರಣೆ ವೇಳೆ ಹುತಾತ್ಮನಾದ. ಆಗ ಬೆಂಜಮಿನ್‌, ತಮ್ಮ ಸಹೋದರನ ನೆನಪಿಗಾಗಿ ಉಗ್ರ ವಿರೋಧಿ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಈ ಅವಧಿಯಲ್ಲಿ ಅಮೆರಿಕದಲ್ಲಿ ಇಸ್ರೇಲ್‌ ರಾಯಭಾರಿಯಾಗಿದ್ದ ಮೋಶೆ ಏರೆನ್ಸ್‌ ಅವರ ಕಣ್ಣಿಗೆ ಬಿದ್ದರು. ಮೋಶೆ ಅವರು ಬೆಂಜಮಿನ್‌ ಅವರನ್ನು ತಮ್ಮ ಡೆಪ್ಯುಟಿಯಾಗಿ ನೇಮಕ ಮಾಡಿಕೊಂಡರು. ಅಲ್ಲಿಂದಲೇ ನೆತನ್ಯಾಹು ಅವರ ಸಾರ್ವಜನಿಕ ಬದುಕು ಆರಂಭವಾ­ಯಿತು. ಅಮೆರಿಕದ ಶೈಲಿಯಲ್ಲಿ ಅತ್ಯದ್ಭುತವಾಗಿ ಇಂಗ್ಲಿಷ್‌ ಮಾತನಾಡಬಲ್ಲ ನೆತನ್ಯಾಹು, ಅಮೆರಿಕದ ದೂರದರ್ಶನಗಳಿಂದಾಗಿ ಮನೆ ಮಾತಾದರು. ಅವಕಾಶ ಸಿಕ್ಕಾಗಲೆಲ್ಲ ಇಸ್ರೇಲ್‌ ಪರವಾಗಿ ಪ್ರಬಲ ವಾದ ಮಂಡಿಸುತ್ತಿದ್ದರು. ಇದು ಅವರಿಗೆ ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ಶಾಶ್ವತ ಪ್ರತಿನಿಧಿಯಾಗುವ ಅವಕಾಶವನ್ನು ತಂದುಕೊಟ್ಟಿತು.

1988ರಲ್ಲಿ ಇಸ್ರೇಲ್‌ಗೆ ಮರಳಿ, ಇಸ್ರೇಲ್‌ನ ಸಂಸತ್ತಿಗೆ ಆಯ್ಕೆಯಾದರು. ರಾಜಕೀಯವಾಗಿ ನೆತನ್ಯಾಹು ಅವರು ಬಲಪಂಥೀಯವಾದಿ. 1992ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನೆತನ್ಯಾಹು ಪ್ರತಿನಿಧಿಸುತ್ತಿದ್ದ ಲಿಕುಡ್‌ ಪಕ್ಷ ಸೋಲು ಕಂಡಿತು. ಆಗ ಇವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. 1996ರಲ್ಲಿ ಶಿಮೋನ್‌ ಪೆರೆಸ್‌ ಅವರನ್ನು ಸೋಲಿಸಿ ಪ್ರಧಾನಿಯಾಗಿ ಆಯ್ಕೆಯಾದರು. ಇಸ್ರೇಲ್‌ನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2001ರಲ್ಲಿ ಏರಿಯಲ್‌ ಶೆರೋನ್‌ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ, ಹಣಕಾಸು ಸಚಿವರಾಗಿ ಕೆಲಸ ಮಾಡಿದರು. ಗಾಜಾ ಪಟ್ಟಿಯಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿ­ಕೊಳ್ಳುವುದನ್ನು ವಿರೋಧಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2005ರಲ್ಲಿ ಇಸ್ರೇಲ್‌ ರಾಜಕಾರಣದಲ್ಲಿ ಧ್ರುವೀಕರಣ ಆರಂಭವಾಯಿತು. ಆಗ, ಶರೋನ್‌ ಅವರು ಲಿಕುಡ್‌ ಪಕ್ಷದಿಂದ ಹೊರಬಂದು ಕಡಿಮಾ ಪಕ್ಷ ಆರಂಭಿಸಿದರು. ಲಿಕುಡ್‌ ಪಕ್ಷದ ನಾಯಕತ್ವವನ್ನು ನೆತನ್ಯಾಹು ವಹಿಸಿ­ಕೊಂಡರು. 2009ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರು. ಆಗ ಇವರದ್ದು ಮೈನಾರಿಟಿ ಸರಕಾರ. 2012ರಲ್ಲಿ ಸಂಸತ್ತನ್ನು ವಿಸರ್ಜಿಸಿ ಅವಧಿಪೂರ್ವ ಚುನಾವಣೆಗೆ ಮುಂದಾದರು. ಇದೇ ವೇಳೆ, ಗಾಜಾ ಬಂಡುಕೋರರ ಮೇಲೆ ಉಗ್ರ ದಾಳಿಗೂ ಆದೇಶಿಸಿದರು. ಎಂಟು ದಿನ ನಡೆದ ಈ ಯುದ್ಧ ಇಸ್ರೇಲ್‌ನ ಅತ್ಯಂತ ಯಶಸ್ವಿ ಕಾರ್ಯಾಚರಣೆ ಎಂದು ದಾಖಲಾಯಿತು. 2013ರಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರು. 2014ರ ಜುಲೈ ಹೊತ್ತಿಗೆ ಎರಡು ರಾಷ್ಟ್ರಗಳ ಮಧ್ಯೆ ಹಿಂಸಾಚಾರ ಉಲ್ಬಣಗೊಂಡಿತು. 50 ದಿನ ಯುದ್ಧ ನಡೆಯಿತು. 2015ರ ಚುನಾವಣೆಯಲ್ಲಿ ಲಿಕುಡ್‌ ಪಕ್ಷ ಬಹುಮತದೊಂದಿಗೆ ನೆತನ್ಯಾಹು ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು. ನೆತನ್ಯಾಹು ದಾಖಲೆಯ ನಾಲ್ಕನೇ ಬಾರಿ ಪ್ರಧಾನಿಯಾದರು. ‘ಎಲ್ಲ ಬಣ್ಣ ಮಸಿ ನುಂಗಿತು’ ಎನ್ನುವ ಹಾಗೆ ಅವರೆಲ್ಲ ಪರಾಕ್ರಮಗಳನ್ನು ಭ್ರಷ್ಟಾ­ಚಾರ ಆರೋಪಗಳು, ಕ್ರಿಮಿನಲ್‌ ಪ್ರಕರಣಗಳು ನುಂಗಿ ಹಾಕುತ್ತಿವೆ.

ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ನಿಷ್ಣಾತವಾಗಿರುವ ನೆತ­ನ್ಯಾಹು ಅವರು ಕುತೂಹಲಿ, ವಿನಮ್ರ ಹಾಗೂ ನೆರವಾಗುವ ಗುಣವುಳ್ಳವರು. ಅವರಿಗಿರುವ ಸ್ನೇಹಶೀಲ ಗುಣವೂ ಅಂತಾರಾಷ್ಟ್ರೀಯವಾಗಿ ಅನೇಕ ನಾಯಕರನ್ನು ಇಸ್ರೇಲ್‌ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಜಕಾರಣಿ, ಮುತ್ಸದ್ಧಿ, ಚಿಂತಕ, ಅತ್ಯುತ್ತಮ ಆಡಳಿತಗಾರರಾಗಿರುವ ನೆತನ್ಯಾಹುಗೆ ಮೂರು ಬಾರಿ ಮದುವೆಯಾಗಿದೆ. ಮೊದಲ ಹೆಂಡತಿಯ ಹೆಸರು ಮಿರಿಯಾಮ್‌ ವೀಜ್ಮನ್‌, ಎರಡನೇ ಹೆಂಡತಿ ಫ್ಲೇರ್‌ ಕೇಟ್ಸ್‌ ಮತ್ತು ಮೂರನೇ ಹೆಂಡತಿ ಸಾರಾ ಬೆನ್‌ ಆಟ್ರ್ಜಿ. ಮೊದಲ ಇಬ್ಬರಿಗೆ ಡಿವೋರ್ಸ್‌ ನೀಡಿದ್ದಾರೆ. ರಾಜಕೀಯ ಚಾಣಾಕ್ಷನಾಗಿರುವ ನೆತನ್ಯಾಹು ಅಷ್ಟೇ ಸಶಕ್ತ ಬರಹಗಾರರೂ ಹೌದು. ‘ಇಂಟರ್‌ನ್ಯಾಷನಲ್‌ ಟೆರರಿಸಮ್‌: ಚಾಲೆಂಜ್‌ ಆ್ಯಂಡ್‌ ರೆಸ್ಪಾನ್ಸ್‌’ ಸೇರಿ ನಾಲ್ಕು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.

2019ರ ಎಲೆಕ್ಷ ನ್‌ನಲ್ಲಿ ಪೂರ್ಣ ಬಹುಮತ ಬಾರದ್ದರಿಂದ ನೆತನ್ಯಾಹು ತಮ್ಮ ಎದುರಾಳಿ ಬೆನ್ನಿ ಗ್ಯಾಂಟ್ಜ್‌ ಜೊತೆಗೂಡಿ ಸರಕಾರ ರಚಿಸಿದ್ದರು. ಒಪ್ಪಂದದಂತೆ 18 ತಿಂಗಳ ಬಳಿಕ ಅಂದರೆ, 2020 ನವೆಂಬರ್‌ 17ಕ್ಕೆ ಬೆನ್ನಿ ಗ್ಯಾಂಟ್ಜ್‌ಗೆ ಪ್ರಧಾನಿ ಹುದ್ದೆ ಬಿಟ್ಟುಕೊಡಲಿದ್ದಾರೆ. ಆದರೆ, ಈಗಿನ ಬೆಳವಣಿಗೆಗೆಳು ಇಸ್ರೇಲನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಿವೆ ಕಾದು ನೋಡಬೇಕು.

ಭಾನುವಾರ, ಮೇ 17, 2020

Shailaja Teacher-Coronavirus Slayer ವೈರಸ್‌ಗೆ ತಕ್ಕ ಪಾಠ ಕಲಿಸಿದ ಟೀಚರ್

ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಕೇರಳದಲ್ಲೀಗ ಬಹುತೇಕ ಸೋಂಕು ಹತೋಟಿಗೆ ಬಂದಿದೆ. ಈ ಯಶಸ್ಸಿಗೆ ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರ ದೂರದೃಷ್ಟಿ, ಮಾರ್ಗದರ್ಶನ ಮತ್ತು ಪ್ರಯತ್ನವೇ ಕಾರಣ.



- ಮಲ್ಲಿಕಾರ್ಜುನ ತಿಪ್ಪಾರ
ಕೆ.ಕೆ.ಶೈಲಜಾ ಅಂದರೆ ಬಹುಶಃ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಅದೇ ‘ಶೈಲಜಾ ಟೀಚರ್’ ಎಂದರೆ ಸಾಕು, ಕೇರಳ ಮಾತ್ರವಲ್ಲ, ಇಡೀ ದೇಶದ ಜನರ ಕಣ್ಣು ಮುಂದೆ ಅವರ ಮುಖ ಸುಳಿಯುತ್ತದೆ. ಇಡೀ ಜಗತ್ತೇ ಕೊರೊನಾ ವಿರುದ್ಧ ಸೆಣೆಸಾಡುತ್ತಿರುವಾಗ ಕೇರಳದ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಚಿವೆಯಾಗಿರುವ ಶೈಲಜಾ ಟೀಚರ್ ಅವರು ಸದ್ದಿಲ್ಲದೇ ಕೊರೊನಾ ವೈರಸ್ ದೇವರ ನಾಡಿನಲ್ಲಿ ವ್ಯಾಪಕವಾಗಿ ಹರಡದಂತೆ ಮಾಡುವಲ್ಲಿಯಶಸ್ವಿಯಾಗಿದ್ದಾರೆ.

ಚೀನಾದಲ್ಲಿಕೊರೊನಾ ವೈರಸ್ ರುದ್ರನರ್ತನ ಮಾಡುತ್ತಿದ್ದಾಗಲೇ ತಮ್ಮ ರಾಜ್ಯಕ್ಕೂ ಕಾಲಿಟ್ಟರೆ ಏನೇನು ಮಾಡಬೇಕೆಂಬ ಎಲ್ಲಯೋಜನೆಗಳನ್ನು ಪಕ್ಕಾ ಮಾಡಿಕೊಂಡೇ ಇದ್ದರು 63 ವರ್ಷದ ಈ ಟೀಚರ್. ಅವರ ಎಣಿಕೆಯಂತೆ ಇಡೀ ದೇಶದಲ್ಲೇ ಪ್ರಥಮ ಕೊರೊನಾ ಸೋಂಕು  ಪತ್ತೆಯಾಗಿದ್ದು ಕೇರಳದಲ್ಲಿ! ಆದರೆ, ಈಗ ಬೇರೆ ಯಾವುದೇ ರಾಜ್ಯಕ್ಕಿಂತಲೂ ಅತ್ಯಂತ ಪರಿಣಾಮಕಾರಿಯಾಗಿ ಕೊರೊನಾಧಿವನ್ನು ನಿಯಂತ್ರಿಸಿದ ಕೀರ್ತಿ ಕೇರಳಕ್ಕೆ ಸಲ್ಲುತ್ತದೆ. ಇದರ ಹಿಂದೆ ಪಿಣರಾಯಿ ವಿಜಯನ್ ಸರಧಿಕಾರ, ಶೈಲಜಾ ಟೀಚರ್ ಮತ್ತು ಕೇರಳಿಗರಿದ್ದಾರೆ.

ಚೀನಾದಲ್ಲಿಕೊರೊನಾ ವೈರಸ್ ಭೀಕರತೆ ವರದಿಯಾಗುತ್ತಿದ್ದ ಜನವರಿಯ ದಿನಗಳವು. ಈ ಬಗ್ಗೆ ಮಾಹಿತಿ ಪಡೆದ ಶೈಲಜಾ ಟೀಚರ್ ಜನವರಿ 20ರಂದು ತಮ್ಮ ಅಧೀನ ಆರೋಗ್ಯ ಅಧಿಕಾರಿಗಳಿಗೆ ಕರೆ ಮಾಡಿ, ‘‘ಕೊರೊನಾ ವೈರಸ್ ನಮ್ಮಲ್ಲೂ(ಕೇರಳ) ಬರುತ್ತಾ?’’ ಎಂದು ಕೇಳುತ್ತಾರೆ. ಅದಕ್ಕೆ ಅಧಿಕಾರಿ, ‘‘ಖಂಡಿತ ಮೇಡಂ,’’ ಎಂದು ಹೇಳುತ್ತಾರೆ. ಇಷ್ಟು ಮಾಹಿತಿ ಗೊತ್ತಾಗುತ್ತಿದ್ದಂತೆ ಶೈಲಜಾ ಅವರು ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಇದು ಶೈಲಜಾ ಅವರು ಸಂಭಾವ್ಯ ಸಮಸ್ಯೆಯೊಂದನ್ನು ಗುರುತಿಸಿ, ಅದರ ಪರಿಹಾರ ಕುರಿತು ಯೋಚಿಸಿದ ರೀತಿಗೆ ಉದಾಹರಣೆಯಷ್ಟೇ.
ಚೀನಾದ ವುಹಾನ್ ಸಿಟಿಯಲ್ಲಿಸಿಲುಕಿದ್ದ ವಿದ್ಯಾರ್ಥಿಗಳು ಸೇರಿದಂತೆ ಇತರ ದೇಶಗಳಲ್ಲಿರುವ ಕೇರಳಿಗರನ್ನು ಕರೆಯಿಸಿಕೊಳ್ಳುತ್ತದೆ ಕೇರಳ ಸರಕಾರ. ಜನವರಿ 30ರಂದು ವುಹಾನ್ನಿಂದ ಬಂದ ವಿದ್ಯಾರ್ಥಿಗಳ ಪೈಕಿ ಮೂವರಿಗೆ ಸೋಂಕು ಪತ್ತೆಯಾಗುತ್ತದೆ ಮತ್ತು ಇದು ದೇಶದ ಮೊದಲ ಕೊರೊನಾ ಕೇಸ್. ಇಷ್ಟೊತ್ತಿಗಾಗಲೇ ಚೀನಾದಲ್ಲಿವೈರಸ್ನ ವಿರಾಟ್ ರೂಪ ಗೋಚರಿಸಿತ್ತು. ಇದನ್ನು ಕಂಡ ಶೈಲಜಾ ಅವರು ವೈದ್ಯಕೀಯ ತಂಡಗಳನ್ನು ರಚನೆ ಮಾಡಿಕೊಂಡು ಸೋಂಕು ಹರಡುವುದನ್ನು ತಡೆಯುವ ಕೈಂಕರ್ಯಕ್ಕೆ ಮುಂದಾದರು. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಮಾರ್ಗದರ್ಶಿ ಪ್ರಕಾರ ಸೋಂಕು ತೀವ್ರವಾಗಿ ಹಬ್ಬುವುದನ್ನು ತಪ್ಪಿಸಲು ‘ಬ್ರೇಕ್ ದಿ ಚೈನ್’ಗೆ ಮುಂದಾದರು. ಕೇರಳದಲ್ಲಿಈ ಬಗ್ಗೆ ವ್ಯಾಪಕ ಪ್ರಚಾರ ಮಾಡಿ, ಸಾಮಾಜಿಕ ಅಂತರವನ್ನು ಜಾರಿಗೊಳಿಸಲಾಯಿತು. ಕೇಂದ್ರ ಸರಕಾರ ಹೇರಿದ ಲಾಕ್ಡೌನ್ ಕಾಲಾವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಸೋಂಕಿತರ ಕೇಸ್ ಹಿನ್ನಲೆ, ಅವರ ಪ್ರವಾಸದ ಇತಿಹಾಸವನ್ನು ಪತ್ತೆ ಹಚ್ಚಿ ಅವರು ಯಾರೊಂದಿಗೆ ಸಂಪರ್ಕ ಬಂದಿದ್ದಾರೋ ಅವರನ್ನೆಲ್ಲಕ್ವಾರಂಟೈನ್ ಮಾಡಲಾಯಿತು. ಹೀಗೆ ಸಾಧ್ಯವಿರುವ ಎಲ್ಲಪರಿಹಾರೋಪಾಯಗಳನ್ನು ಜಾರಿಗೆ ತರುವ ಮೂಲಕ ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲಾಯಿತು.
ಕೊರೊನಾ ನಿಯಂತ್ರಣದ ಎಲ್ಲಕೆಲಸವನ್ನು ಶೈಲಜಾರೊಬ್ಬರೇ ಮಾಡಿದರಂತಲ್ಲ. ಅಧಿಕಾರಿಗಳ ತಂಡಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರು. ಅವರ ಯೋಜನೆಗಳಲ್ಲಿಸ್ಪಷ್ಟತೆ ಇತ್ತು. ಯಾಕೆಂದರೆ, 2018ರಲ್ಲಿ ಕೇರಳದಲ್ಲಿಕಾಣಿಸಿಕೊಂಡಿದ್ದ ‘ನಿಫಾ ವೈರಸ್’ ನಿರ್ವಹಣೆ ಮಾಡಿದ ಅನುಭವ ಈಗ ಹೆಚ್ಚು ಉಪಯೋಗಕ್ಕೆ ಬಂತು ಎನ್ನುತ್ತಾರೆ ರಾಜಕೀಯ ಪಂಡಿತರು. ಕ್ಯಾಲಿಕಟ್ನ ಹಳ್ಳಿಧಿಯೊಂದರಲ್ಲಿ ನಿಫಾ ಸೋಂಕು ಪತ್ತೆಧಿಯಾಗಿದ್ದಾಗ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದರು. ಆಗ, ಈ ಟೀಚರ್ ತಮ್ಮ ವೈದ್ಯಕೀಯ ತಂಡಗಳೊಂದಿಗೆ ಆ ಹಳ್ಳಿಗೆ ತೆರಳಿ, ನಿಫಾ ಗಾಳಿಯಿಂದ ಹರಡುವುದಿಲ್ಲ. ಅದು ಸಂಪರ್ಕದಿಂದ ಬರುವಂಥದ್ದು ಎಂದು ಮನವರಿಕೆ ಮಾಡಿಕೊಟ್ಟರು. ಆ ಮೂಲಕ ಹಳ್ಳಿಯ ಜನರಿಗೆ ಧೈರ್ಯ ತುಂಬಿದರು. ಹಳ್ಳಿಗರು ವೈದ್ಯಕೀಯ ತಂಡಗಳಿಗೆ ಸಹಕಾರ ನೀಡಿದ ಪರಿಣಾಮ ವ್ಯಾಪಕವಾಗಬಹುದಾಗಿದ್ದ ನಿಫಾ ವೈರಸ್ ಅನ್ನು ಆರಂಭದಲ್ಲಿ ಸಂಹರಿಸಿದರು. ಎರಡೆರಡು ವೈರಸ್ಗಳನ್ನು ಸಂಹರಿಸಿರುವ ಶೈಲಜಾ ಟೀಟರ್ಗೆ ಇದೀಗ ‘ಕೊರೊನಾವೈರಸ್ ಸ್ಲೇಯರ್’(corona virus slayer) ಎಂಬ ಮತ್ತೊಂದು ಅನ್ವರ್ಥಕ ಅಂಟಿಕೊಡಿದೆ. ‘ಸ್ಲೇಯರ್’ ಅಂದರೆ ‘ಹಂತಕ’ ಎಂಬರ್ಥವಿದೆ.

1956 ನವೆಂಬರ್ 20ರಂದು ಶೈಲಜಾ ಜನಿಸಿದರು. ತಂದೆ ಕೆ. ಕುಂದನ್ ಮತ್ತು ತಾಯಿ ಕೆ.ಕೆ.ಶಾಂತಾ. ಶೈಲಜಾ ಅವರ ಅಜ್ಜಿ ಅಸ್ಪೃಶ್ಯತೆ ನಿವಾರಣೆ ಹೋರಾಟದಲ್ಲಿತೊಡಗಿಸಿಕೊಂಡಿದ್ದರು. ಇವರ ಕುಟುಂಬಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿಪಾಲ್ಗೊಂಡ ಹಿನ್ನೆಲೆ ಇದೆ. ಕಣ್ಣೂರು ಜಿಲ್ಲೆಯ ಮಟ್ಟನೂಧಿರಿನ ಪಳಸಿರಾಜಾ ಎನ್ಎಸ್ಎಸ್ ಕಾಲೇಜಿನಿಂದ ವಿಜ್ಞಾನದಲ್ಲಿಪದವಿ ಪಡೆದ ನಂತರ 1980ರಲ್ಲಿವಿಶ್ವೇಶರಾಯ ಕಾಲೇಜು ಸೇರಿ, ಬಿಎಡ್ ಶಿಕ್ಷ ಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಅವರು ಎಡರಂಗ ಪಕ್ಷ ಗಳ ಸಂಘಟನೆಯಾದ ಎಸ್ಎಫ್ಐ ಸೇರಿ ಕೆಲಸ ಮಾಡಿದರು. ಅಲ್ಲಿಂದಲೇ ಅವರ ರಾಜಕೀಯ ಜೀವನಕ್ಕೆ ನಾಂದಿಯೂ ದೊರೆಯಿತು. ಮುಂದೆ ಶಿಕ್ಷ ಣ ಪೂರೈಸಿ ಏಳು ವರ್ಷ ಕಣ್ಣೂರಿನ ಶಿವಪುರಂ ಹೈಸ್ಕೂಲ್ನಲ್ಲಿವಿಜ್ಞಾನ ಶಿಕ್ಷ ಕಿಯಾಗಿ ಸೇವೆ ಸಲ್ಲಿಸಿದರು. ಶೈಲಜಾ ಅವರಿಗೆ ಅಲ್ಲಿದೊರೆತ ‘ಟೀಚರ್’ ಅನ್ವರ್ಥಕ ನಾಮ ಈಗಲೂ ಮುಂದುವರಿದಿದೆ. 2004ರಲ್ಲಿಶೈಲಜಾ ಅವರು ಸಿಪಿಎಂನ ಕೇಂದ್ರ ಸಮಿತಿ ಸದಸ್ಯರಾದರು. ಜೊತೆಗೆ, ಆಲ್ ಇಂಡಿಯಾ ಡೆಮಾಕ್ರಟಿಕ್ ವುಮನ್ಸ್ ಅಸೋಷಿಯೇಷನ್ ರಾಜ್ಯ ಕಾರ್ಯದರ್ಶಿಧಿಯಾಗಿ, ಇದೇ ಸಂಘಟನೆಯ ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಸದಾ ರಾಜಕೀಯ ಚಟುವಟಿಕೆಯಲ್ಲಿದ್ದರೂ ಅವರು ‘ಇಂಡಿಯನ್ ವರ್ಧಮಾನವಂ ಸ್ತ್ರೀಸಮ್ಮೋಹಮ್’ ಮತ್ತು ‘ಚೀನಾ- ರಾಷ್ಟ್ರಂ, ರಾಷ್ಟ್ರೀಯಂ, ಕಳಕಲ್’ ಎಂಬೆರಡು ಪುಸ್ತಕಗಳನ್ನು ಬರೆದಿದ್ದಾರೆ.
1996ರಲ್ಲಿಚುನಾವಣಾ ರಾಜಕೀಯಕ್ಕೆ ಧುಮುಕಿದ ಅವರು ಅದೇ ವರ್ಷ, ಕಣ್ಣೂರು ಜಿಲ್ಲೆಯ ಕೂತುಪರಂಬಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೇರಳ ವಿಧಾನಸಭೆಗೆ ಆಯ್ಕೆಯಾದರು. ಬಳಿಕ 2006ರಲ್ಲಿಪೆರವೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮತ್ತೆ 2016ರಲ್ಲಿತಮ್ಮ ಕೂತುಪರಂಬಾ ಕ್ಷೇತ್ರಕ್ಕೆ ಮರಳಿದರು ಮತ್ತು ಗೆದ್ದರು. ಪಿಣರಾಯಿ ವಿಜಯನ್ ಸರಕಾರದಲ್ಲಿರುವ ಇಬ್ಬರು ಮಹಿಳಾ ಸಚಿವೆಯರ ಪೈಕಿ ಇವರು ಒಬ್ಬರು. ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಇಲಾಖೆಯ ಹೊಣೆ ಹೊತ್ತಿದ್ದಾರೆ. ಅಂದ ಹಾಗೆ, ಶೈಲಜಾ ಟೀಚರ್ ಅವರು ‘ಸ್ತ್ರೀ ಶಬ್ದಂ’ ಮಾಸಿಕದ ಮುಖ್ಯ ಸಂಪಾದಕಿ ಆಗಿದ್ದರು. ಶೈಲಜಾ ಅವರ ಪತಿ ಕೆ ಬಾಲಕೃಷ್ಣನ್. ಶೋಭಿತ್ ಮತ್ತು ಲಸಿತ್ ಎಂಬ ಮಕ್ಕಳಿದ್ದಾರೆ.

ನಮ್ಮ ರಾಜ್ಯದ ವೈದ್ಯಕೀಯ ಶಿಕ್ಷ ಣ ಸಚಿವ ಡಾ.ಕೆ.ಸುಧಾಕರ್ ಅವರೂ ಶೈಲಜಾ ಟೀಚರ್ ಅವರೊಂದಿಗೆ ಸಂವಾದಿಸಿ, ಕೊರೊನಾ ವಿರುದ್ಧ ಹೋರಾಟದ ಅನುಭವದ ಮಾಹಿತಿ ಪಡೆದುಕೊಂಡಿದ್ದು ಸುದ್ದಿಯಾಗಿತ್ತು. ನಿಜವಾಗಲೂ ಅವರೊಬ್ಬ ಧೈರ್ಯಶಾಲಿ ‘ಕೊರೊನಾ ವಾರಿಯರ್’. ಅವರ ಕೆಲಸವೂ ಅನುಕರಣೀಯ. ಹಾಗಾಗಿಯೇ ಅನೇಕ ರಾಜ್ಯಗಳು ಕೊರೊನಾ ವಿರುದ್ಧ ಹೋರಾಟದಲ್ಲಿಅವರ ಮಾರ್ಗದರ್ಶ ಪಡೆಯುತ್ತಿವೆ. ಅವರು ಮಾಡಿದ ಕೆಲಸವು ಅವರನ್ನು ಅಂತಾಧಿರಾಷ್ಟ್ರೀಯವಾಗಿ ಗುರುತಿಸುವಂತೆ ಮಾಡಿದೆ. ಜಗತ್ತಿನಾದ್ಯಂತ ಕೊರೊನಾ ವಿರುದ್ಧ ಹೋರಾಟಗಾರರನ್ನು ಗುರುತಿಸಿರುವ ಬಿಬಿಸಿ, ಭಾರತದಿಂದ ಶೈಲಜಾ ಟೀಚರ್ ಅವರನ್ನು ಹೆಸರಿಸಿದೆ. ‘ದೇವರನಾಡಲ್ಲಿ ದೆವ್ವ’ (ವೈರಸ್)ದ ಉಪಟಳವನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಅವರ ಅನುಭವ ಮತ್ತು ಮಾರ್ಗದರ್ಶನ ಇಡೀ ದೇಶಕ್ಕೂ ಸಿಗಲಿ.

(This article has been published in Vijay Karnataka on 17th of May 2020 edition)

ಸೋಮವಾರ, ಮೇ 11, 2020

Learn to Live With Corona virus ಕೊರೊನಾ ಜತೆಗೇ ನಡೆಯಲಿ ಜೀವನ

- ಮಲ್ಲಿಕಾರ್ಜುನ ತಿಪ್ಪಾರ/ಕಿರಣ್ ಕುಮಾರ್ ಡಿ.ಕೆ

Yes, the show must go on...
ನಾವೀಗ ಕೊರೊನಾ ವೈರಸ್ ಜತೆಗೆ ಬದುಕುವುದನ್ನು ಕಲಿಯಲೇಬೇಕಿದೆ. ಯಾಕೆಂದರೆ, ಸದ್ಯಕ್ಕೆ ಈ ಕೊರೊನಾಗೆ ಪರಿಹಾರವಿಲ್ಲ. ಇರುವ ಪರಿಹಾರ ಮಾರ್ಗಗಳನ್ನು ಅಳವಡಿಸಿ, ಬಳಸಿ ನೋಡಿದ್ದಾಯಿತು. ಈ ಅನುಭವ ಹಾಗೂ ಈ ಹಿಂದಿನ ರೋಗಗಳ ಇತಿಹಾಸದ ಹಿನ್ನೆಲೆಯಲ್ಲಿನಾವೀಗ ಕಂಡುಕೊಳ್ಳಬೇಕಾಗಿರುವ ಸತ್ಯ; ನಮ್ಮ ಬದುಕು ಇನ್ನೇನಿದ್ದರೂ ಕೊರೊನಾ ಜೊತೆಗೇ ನಡೆಯಬೇಕು. ಆದರೆ, ಅದಕ್ಕೊಂದು ಕ್ರಮ ವಿಧಿಸಿಕೊಳ್ಳಬೇಕಷ್ಟೇ.
ಕೊರೊನಾ ವೈರಸ್ಗಿಂತಲೂ ಮಿಗಿಲಾದ, ಅತಿಭಯಂಕರ ವೈರಸ್ಗಳನ್ನು ಈ ಜಗತ್ತು ಕಂಡಿದೆ. ಕಡು ಕಷ್ಟ, ನಷ್ಟ ಅನುಭವಿಸಿದೆ. ಅಂಥ ಕಾಯಿಲೆಗಳನ್ನೂ ಅರಗಿಸಿಕೊಂಡಿದೆ, ಅವುಗಳ ವಿರುದ್ಧ ಜಯ ಸಾಧಿಸಿದೆ. ಸಿಡುಬು, ಮಾರ್ಬರ್ಗ್ ವೈರಸ್, ಎಬೋಲಾ ವೈರಸ್, ರೇಬಿಸ್, ಎಚ್ಐವಿ, ಹಂಟಾ ವೈರಸ್, ಇನ್ಫ್ಲುಂಯೆಜಾ, ಡೆಂಗೆ, ರೋಟಾ ವೈರಸ್, ಸಾರ್ಸ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ಲೇಗ್, ಕಾಲರಾದಂಥ ಕಾಯಿಲೆಗಳು ಶತಮಾನಗಳವರೆಗೂ ನರಸಂಕುಲವನ್ನು ಹಿಂಡಿ ಹಿಪ್ಪೆ ಮಾಡಿವೆ. ಆದರೂ, ಮನುಷ್ಯ ತನ್ನ ಬದುಕನ್ನು ರೂಪಿಸಿಕೊಳ್ಳಲಿಲ್ಲವೇ? ನಾಗರಿಕತೆಯನ್ನು ವಿಸ್ತರಿಸಲಿಲ್ಲವೇ? ಅಸಾಧ್ಯವಾದುದನ್ನು ಸಾಧಿಸಲಿಲ್ಲವೇ? ಈಗಲೂ ಹಾಗೆಯೇ, ನಾವು ಈ ಕೊರೊನಾ ಜತೆಗೆ ಬದುಕುವುದನ್ನು ರೂಡಿಸಿಕೊಳ್ಳಲೇಬೇಕು.
ಯಾವುದೇ ಹೊಸ ವೈರಸ್ನಿಂದ ಕಾಯಿಲೆ ಹುಟ್ಟಿಕೊಂಡಾಗ ಇಡೀ ಜಗತ್ತು ತಲ್ಲಣಗೊಳ್ಳುವುದು ಸಹಜ. ಈಗಲೂ ಹಾಗೆಯೇ ಆಗುತ್ತಿದೆ. ನಾವೆಲ್ಲರೂ ಭಯದಿಂದಲೇ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೇವೆ. ಈ ಹಿಂದೆ ತಲ್ಲಣಗೊಳಿಸಿದ್ದ ವೈರಸ್ಗಳಿಗೆ ಹೋಲಿಸಿದರೆ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ತುಂಬ ಕಡಿಮೆ. ಫ್ಲೂನಿಂದಲೇ ಪ್ರತಿ ವರ್ಷಕ್ಕೆ 10ರಿಂದ 15 ಸಾವಿರ ಜನರು ಸಾಯುತ್ತಾರೆ, ರಸ್ತೆ ಅಪಘಾತಗಳಲ್ಲಿಸಾಯುವರೂ ಸಂಖ್ಯೆ ಇದಕ್ಕಿಂತ ಎರಡು ಪಟ್ಟು ಹೆಚ್ಚು. ಇದಾವುದು ನಮಗೆ ಭಯವನ್ನು ಹುಟ್ಟಿಸುವುದಿಲ್ಲ. ಹೊಸದಾಗಿ ಕಾಡುತ್ತಿರುವ ಈ ಕೊರೊನಾ ಮಾತ್ರ ಎಲ್ಲಿಲ್ಲದ ಭೀತಿಯನ್ನು ಹುಟ್ಟಿಸಿದೆ. ಇದಕ್ಕೆ ಮುಖ್ಯ ಕಾರಣ- ಮದ್ದಿಲ್ಲದಿರುವುದು ಮತ್ತು ಅತ್ಯಂತ ವೇಗವಾಗಿ ಹರಡುವುದು. ಆದರೆ, ಒಂದು ಮಾತನ್ನು ನೆನಪಿಡಿ. ಕೊರೊನಾದಿಂದಲೇ ನಮ್ಮ ಬದುಕು ನಿಂತು ಹೋಗುವುದಿಲ್ಲ; ಜಗತ್ತು ನಾಶವಾಗುವುದಿಲ್ಲ. ವಿನಾಕಾರಣ ಭಯಪಡಬೇಕಾದ ಅಗತ್ಯವಿಲ್ಲ. ಇದೇ ಅಭಿಪ್ರಾಯವನ್ನು ಪದ್ಮಶ್ರೀ ಪುರಸ್ಕೃತ ಖ್ಯಾತ ವೈದ್ಯ ಬಿ.ಎಂ. ಹೆಗ್ಡೆ ಅವರು ಹೊಂದಿದ್ದಾರೆ. ಸಂದರ್ಶನವೊಂದರಲ್ಲಿಅವರು, ‘‘ಕೊರೊನಾ ಭೂತವಲ್ಲ. ಹೆದರಬೇಡಿ. ಅದೊಂದು ಕಾಯಿಲೆ. ಬರುತ್ತದೆ. ಹೋಗುತ್ತದೆ. ಹಾಗಂತ ನಿರ್ಲಕ್ಷ ್ಯ ಮಾಡುವುದು ಬೇಡ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಎಚ್ಚರಿಕೆ ಇರಲಿ,’’ ಎನ್ನುತ್ತಾರೆ.
ಹೆಗ್ಡೆ ಅವರ ಮಾತುಗಳು ಅಕ್ಷ ರಶಃ ಸತ್ಯ. ನಮ್ಮೊಳಗೆ ಹುಟ್ಟುವ ಹೆದರಿಕೆ ನಮ್ಮನ್ನು ಕೊಂದು ಹಾಕುತ್ತದೆ. ಹಾಗಂತ, ‘ತಲೆ ಗಟ್ಟಿ ಇದೆ ಎಂದು ಬಂಡೆಗಲ್ಲಿಗೆ ಡಿಕ್ಕಿ ಹೊಡೆಯುವ ಅಗತ್ಯವಿಲ್ಲ’. ಕಾರಣವಿಲ್ಲದೇ ಕೊರೊನಾ ಕುರಿತು ಭಯಗೊಳ್ಳುವುದು ಬೇಡ. ಭವಿಷ್ಯದ ಸ್ಥಿತಿಯನ್ನು ನೆನೆದುಕೊಂಡು ನಮ್ಮೊಳಗಿನ ಧೀಃಶಕ್ತಿಯನ್ನು ಹಾಳು ಮಾಡಿಕೊಳ್ಳುವುದು ಬೇಡ.



ಲಾಕ್ಡೌನ್ವೊಂದೇ ಪರಿಹಾರವಲ್ಲ
ಕೊರೊನಾ ನಿಯಂತ್ರಣಕ್ಕೆ ಈಗಿರುವ ಸದ್ಯ ಪರಿಹಾರ ‘ಬ್ರೇಕ್ ದಿ ಚೈನ್’ ಅಂದರೆ, ಸೋಂಕಿತರನ್ನು ಪ್ರತ್ಯೇಕವಾಗಿಸಿ, ವೈರಸ್ ಹರಡುವುದನ್ನು ತಡೆಯುವುದು. ಅದಕ್ಕಾಗಿ ಇಡೀ ದೇಶವನ್ನು ಲಾಕ್ಡೌನ್ ಮಾಡಿ, ಮೂರು ಬಾರಿ ಅದನ್ನು ವಿಸ್ತರಿಸಲಾಗಿದೆ. ಆದರೆ, ಇದೊಂದೇ ಪರಿಹಾರವಲ್ಲ. ಲಾಕ್ಡೌನ್ ವಿಸ್ತರಿಸುತ್ತ ಹೋದರೆ ನಮ್ಮ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದು, ಇಡೀ ದೇಶವೇ ನರಳಬೇಕಾಗಬಹುದು. ಈಗಾಗಲೇ, ಲಾಕ್ಡೌನ್ ಎಫೆಕ್ಟ್ ಅನ್ನು ದೇಶ ಅನುಭವಿಸುತ್ತಿದೆ. ಹಾಗಾಗಿ, ನಮ್ಮ ಮುಂದಿರುವ ಏಕೈಕ ದಾರಿ, ಕೊರೊನಾದೊಂದಿಗೆ ಬದುಕುವುದು. ‘‘ನಾವಿನ್ನು ಕೊರೊನಾ ಜತೆಗಿನ ಬದುಕನ್ನು ಕಲಿಯಬೇಕಿದೆ,’’ ಎಂದು ಆರೋಗ್ಯ ಸಚಿವಾಲಯ ಹೇಳಿದ್ದು ಈ ನೆಲೆಯಲ್ಲಿ. ಯಾಕೆಂದರೆ, ಲಾಕ್ಡೌನ್ ಹೊರತಾಗಿಯೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂದರೆ, ಅದು ತನ್ನ ತುತ್ತ ತುದಿ ತಲುಪಿಯೇ ಕೆಳಗಿಳಿಯುವುದು ಈಗಿನ ಟ್ರೆಂಡ್ ನೋಡಿದರೆ ಗೊತ್ತಾಗುತ್ತದೆ. ಈಗಾಗಲೇ ಚೀನಾ, ಇಟಲಿ, ಇರಾನ್, ಸ್ಪೇನ್ ರಾಷ್ಟ್ರಗಳಲ್ಲೂಹೀಗೆ ಆಗಿದೆ. ಅಲ್ಲೆಲ್ಲಈಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.

ಮದ್ದಿದ್ದರೆ ಬೇರೆಯಾಗಿರುತ್ತಿತ್ತು ಕತೆ
ಒಂದು ವೇಳೆ ಕೊರೊನಾ ವೈರಸ್ಗೆ ಮದ್ದು ಇದ್ದರೆ ಈಗಿರುವ ಪರಿಸ್ಥಿತಿ ಉದ್ಭವ ಆಗುತ್ತಿರಲಿಲ್ಲ. ಆರ್ಥಿಕ ಕುಸಿತವೂ ಇರುತ್ತಿರಲಿಲ್ಲ. ಹಾಗಾಗಿ, ಸಾಮಾಜಿಕ ಅಂತರೊಂದಿಗೆ, ಕೊರೊನಾ ಜೊತೆಗೆ ನಮ್ಮ ಜೀವನವನ್ನು ಮರು ರೂಪಿಸಿಕೊಳ್ಳಬೇಕು. ಈಗಿರುವ ಪರಿಹಾರ ಎಂದರೆ, ಎಷ್ಟು ಸಾಧ್ಯವೇ ಅಷ್ಟು ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಡಾ. ಬಿ.ಎಂ. ಹೆಗ್ಡೆ ಅವರು ಈ ಕುರಿತು ಹೇಳಿರುವ ಸಂಗತಿಗಳು ಅನ್ವಯಕಗಳಾಗಿವೆ. ‘‘ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮೊದಲನೆಯದಾಗಿ ಸಾವಧಾನಿಯಾಗಿರಬೇಕು. ಮನಸ್ಸಿನಲ್ಲಿದ್ವೇಷ ಭಾವನೆ ಇರಬಾರದು. ಎಂಥದ್ದೇ ಸಂದರ್ಭದಲ್ಲಿಸಮಚಿತ್ತದಿಂದಿರಬೇಕು. ಎರಡನೆಯದಾಗಿ ಆಹಾರ. ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಯನ್ನು ನಾವು ಅನುಸರಿಸಿದರೆ ಒಳ್ಳೆಯದು. ಮೂರನೆಯದು ವಿಶ್ರಾಂತಿ. ದೇಹಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲವಿಶ್ರಾಂತಿ ಅಗತ್ಯ. ಹೀಗೆ ಮಾಡಿದರೆ, ಖಂಡಿತವಾಗಿಯೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಒಂದೊಮ್ಮೆ ವೈರಸ್ ಸೋಂಕಿತವಾದರೂ ನಾವುದನ್ನು ಮೆಟ್ಟಿ ನಿಲ್ಲಬಹುದು’’ ಎನ್ನುತ್ತಾರೆ ಡಾ. ಬಿ.ಎಂ ಹೆಗ್ಡೆ ಅವರು.

ಉಳಿದಿರುವ ದಾರಿಗಳಾದರೂ ಯಾವುವು?
ಮದ್ದಿಲ್ಲದೇ ಕೊರೊನಾವಂತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ನಮಗೆ ಉಳಿದಿರುವ ದಾರಿಗಳಾದರೂ ಏನಿವೆ? ಒಂದೊ, ಕೊರೊನಾವನ್ನು ಹರ್ಡ್ ಇಮ್ಯುನಿಟಿ (ಸಮುದಾಯ ಪ್ರತಿರೋಧ ಶಕ್ತಿ) ಮೂಲಕ ತಡೆಯಬಹುದು. ಭಾರತದಂಥ ರಾಷ್ಟ್ರದಲ್ಲಿಅದು ದೊಡ್ಡ ಅನಾಹುತವನ್ನೇ ಸೃಷ್ಟಿಸಬಲ್ಲದು. ಇದನ್ನು ಹೊರತುಪಡಿಸಿದರೆ, ಸೋಂಕು ತಗುಲಿಸಿಕೊಳ್ಳದಂತೆ ವೈಯಕ್ತಿಕ ನೆಲೆಯಲ್ಲಿನಾವೇ ಎಚ್ಚರ ವಹಿಸುವುದು. ಅಂದರೆ, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸುವುದು. ಎಷ್ಟು ಸಾಧ್ಯವೋ ಅಷ್ಟು ಜನ ಜಂಗುಳಿಯಾಗದಂತೆ ನೋಡಿಕೊಳ್ಳುವುದು. ಮದ್ದು ಸಿಗೋವರೆಗೂ ಇವಿಷ್ಟೇ ಪರಿಹಾರಗಳು. ಅಲ್ಲಿತನಕ ನಾವು ಕೊರೊನಾದೊಂದಿಗೆ ಹೆಜ್ಜೆ ಹಾಕೋಣ.

(ಈ ಲೇಖನ ವಿಜಯ ಕರ್ನಾಟಕದ 2020 ಮೇ 11ರ ಸಂಚಿಕೆಯಲ್ಲಿ ಪ್ರಕಟವಾಗಿದೆ)

ಶುಕ್ರವಾರ, ಮೇ 1, 2020

For in my dreams, you have no end- ನನ್ನ ಕನಸುಗಳಲ್ಲಿ ನಿನಗೆ ಅಂತ್ಯವೇ ಇಲ್ಲ...

ನಾನು ಮೌನದಲ್ಲಿ ನಿನ್ನನ್ನು ಪ್ರೀತಿಸುವೆ,
ಯಾಕೆಂದರೆ, ಮೌನದಲ್ಲಿ ತಿರಸ್ಕಾರದ ಭಯವೇ ಇಲ್ಲ.

ನಿನ್ನನ್ನು ಪ್ರೀತಿಸಲು ಏಕಾಂಗಿತನವೇ ಆಯ್ಕೆ ಮಾಡಿಕೊಳ್ಳುವೆ,
ಯಾಕೆಂದರೆ ಒಂಟಿತನದಲ್ಲಿ ನಿನ್ನನ್ನು ಯಾರು ಪಡೆಯಲಾರರು ನನ್ನನ್ನು ಬಿಟ್ಟು.

ನಾನು ನಿನ್ನನ್ನು ದೂರದಿಂದಲೇ ಆರಾಧಿಸಲು ಬಯಸುವೆ,
ಈ ದೂರವಿದೆಯಲ್ಲ ಅದು ನನ್ನ ನೋವಿಗೆ ಗುರಾಣಿಯೇ

ಗಾಳಿಯಲ್ಲಿ ನಿನಗೆ ಮುತ್ತು ನೀಡಲು ಬಯಸುವೆ,
ನನ್ನ ತುಟಿಗಳಿಗಿಂತ ಈ ಗಾಳಿಯ ಹೆಚ್ಚು ಸೌಮ್ಯ.

ನನ್ನ ಕನಸುಗಳಲ್ಲಿ ನಿನ್ನನ್ನು ಬಂಧಿಯಾಗಿಸ ಬಯಸುವೆ,
ನನ್ನ ಕನಸುಗಳಲ್ಲಿ ನಿನಗೆ ಅಂತ್ಯವೇ ಇಲ್ಲ....


ಮೂಲ: ರೂಮಿ
ಅನುವಾದ: ಮಲ್ಲಿಕಾರ್ಜುನ ತಿಪ್ಪಾರ