ಸೋಮವಾರ, ಸೆಪ್ಟೆಂಬರ್ 11, 2017

ಹುಡುಗನೊಬ್ಬನ ಗಜಲ್‌ಗಳು: ಆ ಕಾಗದಲ್ಲಿದ್ದದ್ದು ಎರಡೇ ಪದ; ಕ್ಷಮಿಸಿ ಬಿಡು

- ಪ್ರದ್ಯುಮ್ನ
ಮಳೆಗಾಲದ ಈ ದಿನಗಳೇ ಹಾಗೆ. ಒಂಚೂರು ನೆನಪುಗಳನ್ನು ಹಸಿ ಹಸಿಯಾಗಿಟ್ಟು, ಮತ್ತೊಂದಿಷ್ಟನ್ನು ಶಾಶ್ವತವಾಗಿ ಶವಾಗಾರಕ್ಕೆ ತಳ್ಳುವ ಸಾಧನ. ಇಂದು ವ್ಯಾಪಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟ ದಿನ ಮಳೆ ಮಾಯ; ಮಾರನೇ ದಿನ ಭೋರ್ಗರೆಯುವ ವರ್ಷಧಾರೆ. ನಮ್ಮ್ಮಳಗಿನ ನೆನಪುಗಳು ಹಾಗೆಯೇ. ಅವು ಜೀವಗೊಳ್ಳಲು ಯಾವುದೇ ಸೂಚನೆಗಳಿಲ್ಲ; ಯಾವುದೋ ಒಂದು ಸಣ್ಣ ನೆಪ ಸಾಕು ಭಗ್ಗನೇ ಪ್ರಜ್ವಲಿಸಲು. ಅಂದು ಹಾಗೆಯೇ ಆಗಿತ್ತು. ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಬೆಳಗ್ಗೆ ಸಂಭವಿಸಬೇಕಾಗಿದ್ದ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯಲಿಲ್ಲ. ಅರ್ಥಾತ್ ಹಾಲು ಹಾಕುವವನು ಸರಿಯಾದ ಟೈಮ್‌ಗೆ ಬರಲಿಲ್ಲ. ಪೇಪರ್ ಹುಡುಗ ತೊಯ್ದ ತೊಪ್ಪೆಯಾದ ನಾಲ್ಕು ಪೇಪರ್‌ಗಳನ್ನು ರಸ್ತೆಯ ಆ ಬದಿಯಿಂದಲೇ ಇತ್ತ ಎಸೆದು ಪರಾರಿ... ಹೀಗೆ ಎಲ್ಲ ಕೆಲಸಗಳು!
ನೀರಿನಲ್ಲಿ ಅದ್ದಿ ತೆಗೆದಂತಿದ್ದ ಪತ್ರಿಕೆಯ ಒಂದೊಂದು ಪುಟವನ್ನು ಎಚ್ಚರಿಕೆಯಿಂದ ಬಿಡಿಸುತ್ತಿರುವಾಗಲೇ ಮೂಲೆಯೊಂದರಲ್ಲಿ ಪುಟ್ಟ ಸುದ್ದಿ ಕಣ್ಣಿಗೆ ಬಿತ್ತು; ಆತ್ಮಹತ್ಯೆ. ಇಂಥ ಸುದ್ದಿಯನ್ನು ನಾನೇನೂ ಮೊದಲ ಬಾರಿ ಓದುತ್ತಿರಲಿಲ್ಲ. ಆತ್ಮಹತ್ಯೆಗಳ ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ, ಈ ಸುದ್ದಿ ಮಾತ್ರ ನನ್ನೊಳಗೇ ಮಾಸದೆ, ಕದಲದೇ ಕುಳಿತ್ತಿದ್ದ ಆ ದುರಂತದ ಅನೇಕ ನೆನಪುಗಳನ್ನು ಬಡೆದೆಬ್ಬಿಸಿತು. ನಾನು ಪ್ರತಿಕ್ಷಣ ಮರೆಯಲು ಕಷ್ಟಪಡುವ ಯಾತನಾಮಯ ನೆನಪುಗಳವು.
****
ಅವಳಾದರೂ ಎಂಥವಳು? ಅವಳನ್ನೊಮ್ಮೆ ನೋಡಿದ ಬಳಿಕ ಮತ್ತೊಮ್ಮೆ ತಿರುಗಿ ನೋಡಲೇಬೇಕೆನ್ನುವ ರೂಪವತಿ. ಆಕೆಗೆ ತನ್ನ ರೂಪ, ಲಾವಣ್ಯದ ಬಗ್ಗೆ ತುಸು ಗರ್ವವೂ ಇತ್ತು. ಇಟ್ಸ್ ನ್ಯಾಚುರಲ್. ಆದರೆ, ಅವಳಲ್ಲಿದ್ದ ಧೈರ್ಯ ಮಾತ್ರ ಅದಮ್ಯ, ಅಚಲ, ಬಂಡೆಯಂಥದ್ದು. ಆ ಗುಣವೇ ನನ್ನನ್ನು ಆಕರ್ಷಿಸಿದ್ದು. ಕಾಲೇಜ್‌ಗೆ ಬರುವಾಗ ಬೀದಿ ಕಾಮಣ್ಣರು ತಿರುಗಿ ಬಿದ್ದಿದ್ದು ಆ ಪುಟ್ಟ ಪಟ್ಟಣದ ಪೂರ್ತಿ ದೊಡ್ಡ ಸುದ್ದಿಯಾಗಿತ್ತು. ಹಾಗಿತ್ತು ಅವಳ ಧೈರ್ಯ. ಕಾಲೇಜಿನಲ್ಲಿ ಅವಳನ್ನು ಕಂಡು ಬಹುತೇಕರೆಲ್ಲರೂ ಮಾರು ದೂರವೇ ಇರುತ್ತಿದ್ದರು. ನಾನೋ ಅವಳನ್ನು ನನಗರಿವಿಲ್ಲದಂತೆ ಹುಚ್ಚನಂತೆ ಪ್ರೀತಿಸುತ್ತಿದ್ದೆ. ಆದರೆ, ಹೇಳುವುದು ಹೇಗೆ? ಅದಕ್ಕೆ ಎಲ್ಲಿಂದ ತರಬೇಕು ಧೈರ್ಯ? ಆದರೆ, ಎಂಥ ಗಟ್ಟಿ ಹುಡುಗಿಯಾದರೂ ಅವಳೊಳಗೆ ಒಬ್ಬ ಮುಗ್ಧೆ ಇರುತ್ತಾಳೆ, ಕರುಣಾಮಯಿ ಇರುತ್ತಾಳೆ. ಯಾಕೆಂದರೆ, ಹೆಣ್ಣೆಂದರೆ ಹಾಗೆ ಅಲ್ಲವೇ? ಅವಳು ಸಹನೆಯ ಪ್ರತಿರೂಪ, ವಾತ್ಸಲ್ಯದ ಗಣಿ. ಪ್ರೀತಿ ತೋರಿದರೆ ತಿರುಗಿ ಅದೇ ಸಿಗುತ್ತದೆ ಎನ್ನುತ್ತಾರಲ್ಲ ಹಾಗೆ ಅವಳಿದ್ದಳು. ಅವಳು ಅಂದರೆ ಅವಳೇ. ಅವಳ ಹಾಗೆ ಮತ್ತಾರು ಇರಲಿಲ್ಲ. ಹಾಗಾಗಿ ಕಾಲೇಜ್‌ನಲ್ಲಿ ಅವಳಿಗೆ ಸ್ಟಾರ್‌ಗಿರಿ ತನ್ನಿಂದತಾನೇ ಒಲಿದು ಬಂದಿತ್ತು. ಆಕೆಯ ಕುಟುಂಬವೂ ಆ ಪಟ್ಟಣದಲ್ಲಿ
ಸ್ಥಿತಿವಂತವಾಗಿತ್ತು; ರೆಪ್ಯೂಟೆಡ್ ಫ್ಯಾಮಿಲಿ. ಆದರೆ, ನಾನು? ನನ್ನಲ್ಲೇ ನನಗೇ ಅನೇಕ ಪ್ರಶ್ನೆಗಳಿದ್ದವು; ಉತ್ತರ ದೊರೆಯುವುದು
ಯಾವ ಸಾಧ್ಯತೆಗಳಿರಲಿಲ್ಲ. ಕಾಲೇಜ್‌ಗೆ ಬರುವುದೇ ದೊಡ್ಡ ಸಾಹಸವಾಗಿರುವಾಗ ಇನ್ನು ಪ್ರೀತಿ, ಪ್ರೇಮಕ್ಕೆ ಎಲ್ಲಿಂದ ಬರಬೇಕು
ಧೈರ್ಯ? ಆದರೂ, ಈ ಹುಚ್ಚುಖೋಡಿ ಮನಸ್ಸು ಕೇಳಬೇಕಲ್ಲ. ಅದು ತನ್ನ ಹುಚ್ಚು ಜಗತ್ತಿನಲ್ಲೇ ಲಂಗು ಲಗಾಮಿಲ್ಲದೇ ಓಡುವ ಕುದುರೆ. ನನ್ನ ಕಲ್ಪನೆಯ ಲೋಕದಲ್ಲಿ ಈ ಕುದುರೆ ಕಟ್ಟಿ ಹಾಕುವ ಧೀಮಂತಿಕೆ ಆಕೆಗೂ ಇರಲಿಲ್ಲ. ಇರಲಾದರೂ ಹೇಗೆ ಸಾಧ್ಯ?
ಆದರೆ, ಅದೊಂದು ದಿನ, ಅಲ್ಲಲ್ಲ ಸುದಿನ ಅದು. ಭೂಮಿ-ಆಕಾಶ ಎಂದಾದರೂ ಒಂದಾದೀತೆ ಎಂದು ಭಾವಿಸಿದ್ದವನ ಭಾಗ್ಯದ ಬಾಗಿಲು ತೆರೆದ ದಿನ. ಅಂದು ಹಾಗೆ ಆಗಿತ್ತು. ಬೆಳಗಿನ ಜಾವದಿಂದಲೇ ಸುರಿಯುತ್ತಿದ್ದ ಮಳೆಗೆ ಕರುಣೆಯೇ ಇರಲಿಲ್ಲ. ಆಕಾಶ ತನ್ನೆಲ್ಲ ಸಿಟ್ಟು, ದುಃಖವನ್ನು ಈ ಕಣ್ಣೀರ ಮೂಲಕ ಹಾಕುತ್ತಿದೆ ಎನ್ನುವಂತಿತ್ತು. ಅದು ಎಂಥ ಮಳೆ, ಭೋರ್ಗರೆಯುವ ಜಲಪಾತದಡಿ ಶಬ್ದ ಕೇಳಿಸುತ್ತದಲ್ಲವೇ, ಹಾಗಿತ್ತು ಮಳೆಯು ಭೂಮಿಗೆ ಅಪ್ಪಳಿಸುವಾಗ ಹೊರಡುವ ಸೌಂಡು. ಅಂದರೆ ನೀವೇ ಊಹಿಸಿ. ಬಹುಶಃ ಅಷ್ಟೊಂದು ಮಳೆಯನ್ನು ಈ ಪಟ್ಟಣ ಹಿಂದೆಂದೂ ಕಂಡಿರಲಿಲ್ಲ. ಮಳೆ ತುಸುವೇ ಬಿಡುವು ಕೊಟ್ಟಿದ್ದ  ಸಮಯದಲ್ಲಿ  ನಾನು ನನ್ನ ತಡಕ್ಲಾಸ್ ಸೈಕಲ್ ಏರಿ ಕಾಲೇಜ್‌ನತ್ತ ಮುಖ ಮಾಡಿದ್ದೆ. ಇನ್ನೇನೂ ಕಾಲೇಜ್ ಅರ್ಧ ಕಿಲೋ ಮೀಟರ್ ಇರಬೇಕು. ಅವಳು ತನ್ನ ಸ್ಕೂಟಿ ತಳ್ಳುತ್ತಾ  ಏದುಸಿರು  ಬಿಡುತ್ತಾ ಹೊರಟಿದ್ದಳು. ನಾನು ಅವಳನ್ನೊಮ್ಮೆ ನೋಡಿ ಮುಗಳ್ನಕ್ಕೆ. ಅವಳ ಕಣ್ಣಿನಲ್ಲಿ ನೆರವಿನ ಬೇಡಿಕೆ; ಅದನ್ನರಿತೇ ಅವಳತ್ತ ಧಾವಿಸಿದೆ. ಇಲ್ಲದಿದ್ದರೆ ಆಕೆಯತ್ತ ಹೋಗುವ ಧೈರ್ಯ ಯಾವ ಹುಡುಗನಿಗಿತ್ತು ಹೇಳಿ? ಅವಳಿಗೆ ಗೊತ್ತಿತ್ತು ಕಾಲೇಜ್ ಬಿಡುವಿನ ವೇಳೆ ನಾನು ಮೋಟಾರ್ ಸೈಕಲ್ ರಿಪೇರಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದದ್ದು. ಆಕೆಯ ಸ್ಕೂಟಿ ಪಕ್ಕಕ್ಕೆ ಹಚ್ಚಿ ಒಂದಿಷ್ಟು ಆ ಕಡೆ, ಈ ಕಡೆ ನೋಡಿದೆ, ಪ್ಲಗ್ ಕ್ಲೀನ್ ಮಾಡಿ ಹಾಕಿದ್ದೇ ತಡ ಸ್ಕೂಟಿ ತನ್ನ ಎಂದಿನ ಲಯಕ್ಕೆ ಮರಳಿತ್ತು. ಅವಳ ಮುಖದಲ್ಲಿ ಖುಷಿಯ ಹೊನಲಿತ್ತು. ಸಣ್ಣಗೆ ಹನಿಯುತ್ತಿದ್ದ ಮಳೆಗೆ ಆಕೆಯ ಮುಖ ತುಂಬ ಮಳೆ ಹನಿಗಳ ಮುತ್ತಗಳಿದ್ದವು!
ನಾನು ಇನ್ನೇನು ಸೈಕಲ್ ಏರಬೇಕನ್ನುವಷ್ಟರಲ್ಲಿ. ‘‘ನಂಗೆ ಗೊತ್ತು. ನೀನು ನನ್ನ ಇಷ್ಟಪಡಿತ್ತಿದ್ದೀಯಾ,’’ ಎಂದವಳೇ ಸ್ಕೂಟಿಯ ಕಿವಿ ಹಿಂಡಿತ್ತಾ, ಮುಗುಳು ನಗೆ ಬೀರಿ ಹೊರಟೇ ಹೋದಳು. ಇತ್ತ ಮಳೆ ಕರುಣೆ ಇಲ್ಲದಂತೆ ಭೋರ್ಗರೆಯಲಾರಂಭಿಸಿತು ಮತ್ತೆ. ಅಲ್ಲಿಗೆ ಎಲ್ಲ ಖಾತ್ರಿಯಾಗಿತ್ತು. ಅವಳ್ಯಾಕೆ ನನ್ನನ್ನು ಇಷ್ಟಪಡುತ್ತಿದ್ದಳು ಎನ್ನುವುದು ಇಂದಿಗೂ ನನಗೆ ಗೊತ್ತಿಲ್ಲ. ಅಂದಿನ ಆ ನಮ್ಮ ಭೇಟಿ ಮುಂದೆ ದಿನವೂ ನಮ್ಮಿಬ್ಬರ ಸ್ನೇಹ ಮತ್ತೊಂದು ಹಂತಕ್ಕೆ ತಲುಪಿ, ಪ್ರೀತಿಯ ಹಡಗಿನಲ್ಲಿ ಪಯಣಿಸಲು ದಾರಿ ಮಾಡಿಕೊಟ್ಟಿತ್ತು. ಅವಳ ಜತೆ ಕಳೆದ ಅಷ್ಟೂ ಕ್ಷಣಗಳು ನನ್ನ ಪಾಲಿನ ಅಮೂಲ್ಯ ರತ್ನಗಳು. ಅವುಗಳಿಗೆ ಬೆಲೆಯೇ ಕಟ್ಟಲಾಗದು.
ನಮ್ಮ ಎಂದಿನ ಭೇಟಿಗಳಲ್ಲಿ ಗೊತ್ತಾಗಿದ್ದು ಏನಂದರೆ; ಅವಳು ತನ್ನ ತಾಯಿಯನ್ನು ಬೆಟ್ಟದಷ್ಟು ಪ್ರೀತಿಸುತ್ತಿದ್ದಳು. ಇನ್‌ಫ್ಯಾಕ್ಟ್, ನನ್ನನ್ನು ಪ್ರೀತಿಸುವುದುಕ್ಕಿಂತಲೂ ಹೆಚ್ಚು. ತಾಯಿಯೇ ಆಕೆಗೆ ಸ್ನೇಹಿತೆ, ಗುರು... ಎಲ್ಲವೂ ಆಗಿದ್ದಳು. ಅಷ್ಟೊಂದು ಗಟ್ಟಿಗತ್ತಿಯಾಗಲು ತಾಯಿಯೇ ಕಾರಣ ಎನ್ನುತ್ತಿದ್ದವಳು, ಆಕೆಯನ್ನು ಯಾವಾಗ ಬೇಕಾದರೂ ನಾನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇನೆ ಎಂದು ಕಣ್ಣೀರು ಹಾಕುತ್ತಿದ್ದಳು. ಅವಳು ಇಲ್ಲದಿದ್ದರೆ ತನಗೇ ಬದುಕೇ ಇಲ್ಲ. ನೀನು ನನ್ನ ತಾಯಿಯೇ ಆಗಬೇಕು ಎನ್ನುತ್ತಿದ್ದುದ್ದನ್ನು ನೋಡಿದರೆ, ಇವಳೇನಾ ಕಾಲೇಜಿನಲ್ಲಿ ನಾನು ನೋಡಿದ ಗಟ್ಟಿಗತ್ತಿ ಎಂಬ ಅನುಮಾನ ಬರುತ್ತಿತ್ತು. ಆಂತರ್ಯದಲ್ಲಿ ಅಷ್ಟೊಂದು ಮೃದುವಾಗಿದ್ದಳು.
ಆಕೆ, ಯಾವ ಕ್ಷಣ ತನ್ನ ಜೀವನದಲ್ಲಿ ಬರಬಾರದು ಎಂದು ಹಗಲಿರುವ ಪ್ರಾರ್ಥಿಸುತ್ತಿದ್ದಳು ಆ ಕ್ಷಣ ಬಂದು ಬಿಟ್ಟಿತು. ಇತಿಹಾಸದ ಮೇಷ್ಟ್ರು ತಮ್ಮ ಎಂದಿನ ಕಥನ ಶೈಲಿಯಲ್ಲಿ ಪಾಠ ಮಾಡುತ್ತಿರುವಾಗಲೇ ಅಟೆಂಡರ್ ಬಂದು ಆಕೆಯನ್ನು ಹೊರ ಕರೆದು ತಾಯಿ ಸತ್ತ ಸುದ್ದಿ ಮುಟ್ಟಿಸಿದ್ದ. ಆಕೆಯ ಕಣ್ಣೀರು ಕಂಡೆ ನನಗೆಲ್ಲವೂ ಅರ್ಥವಾಗಿತ್ತು. ಆಕೆಯ ಹಿಂದೆ ನಾನು ಎದ್ದು ಹೊರಟೆ. ಅವಳ ಮುಖ ನೋಡುವ ಧೈರ್ಯ ನನ್ನಲ್ಲಿರಲಿಲ್ಲ. ಕಣ್ಣೀರು ಸುರಿಯುತ್ತಲೇ ಇತ್ತು. ಅಯ್ಯೋ ದೇವರೇ... ಆಕೆಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡೆಂದು ಕೇಳಿಕೊಳ್ಳುವುದನ್ನು ಬಿಟ್ಟರೆ ಆಕೆಯನ್ನು ಸಂತೈಸುವ ದಾರಿ ನನ್ನ ಬಳಿ ಇರಲಿಲ್ಲ.
ಎಲ್ಲವು ಮುಗಿದು ಮತ್ತೆ ಕಾಲೇಜ್‌ಗೆ ಬಂದಾಗ ಆಕೆ ಮೊದಲಿನಂತಿರಲಿಲ್ಲ. ಆಕೆಯ ಕಣ್ಣಲ್ಲಿ ಹೊಳಪು ಮಾಸಿತ್ತು; ಧಾಡಸಿತನದ ಕುರುಹುಗಳು ಮಾಯವಾಗಿದ್ದವು. ರೂಪವತಿಯಾದ ಮುಖವೀಗ ಕಳಾಹೀನವಾಗಿತ್ತು. ತಾಯಿ ಅಗಲಿಕೆ ಆಕೆಯನ್ನು ಹೈರಾಣಾಗಿಸಿತ್ತು. ನನ್ನ ಮಾತುಗಳಿಂದ ಒಂದಿಷ್ಟು ಆಹ್ಲಾದ ತಂದುಕೊಂಡುವಳಂತೆ ಕಾಣುತ್ತಿದ್ದಳಾದರೂ ಮತ್ತೆ ಅದೇ ದುಃಖದ ಮಡುವಿನಲ್ಲೇ ಇರುತ್ತಿದ್ದಳು. ಈಕೆಯನ್ನು ಮೊದಲಿನ ಗಟ್ಟಿಗತ್ತಿ ಹುಡುಗಿಯನ್ನಾಗಿ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ ಒಂದಿಷ್ಟು ದಿನಗಳು ಉರುಳಿದವು.
ಅದೊಂದು ದಿನ. ನಾನು ಕನಸು ಮನಸ್ಸಿನಲ್ಲಿ ಎಣಿಸಿರದ ಸುದ್ದಿಯೊಂದು ಅಪ್ಪಳಿಸಿತು. ಆಕೆಯ ಆತ್ಮಹತ್ಯೆಯ ಸುದ್ದಿ ಕೇಳಿದಾಕ್ಷಣ ನಾನು ನಿಂತ ನೆಲ ಕಂಪಿಸಿದಂತಾಯಿತು. ಏನಾಯಿತು ಎನ್ನುವಷ್ಟರಲ್ಲಿ ನಾನು ಪ್ರಜ್ಞೆಯ ಪರಿಧಿ ದಾಟಿ ಹೋಗಿದ್ದೆ; ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಪಕ್ಕದಲ್ಲಿದ್ದ ಸ್ನೇಹಿತ ನನಗೆ ಪ್ರಜ್ಞೆ ಬಂದಿದ್ದು ನೋಡಿ ಖುಷಿಯಾಗಿದ್ದ. ‘‘ಮೂರು ದಿನ ಆಯ್ತು ಕಣೋ ಆಸ್ಪತ್ರೆಯಲ್ಲಿದ್ದೀಯಾ,’’ ಎಂದ. ನಾನು, ‘‘ಅವಳು....’’ ಎನ್ನುವಷ್ಟರಲ್ಲಿ ತನ್ನ ಜೇಬಿನಲ್ಲಿದ್ದ ಮಡಚಿದ ಕಾಗದವನ್ನು ಕೊಟ್ಟ. ಅದರಲ್ಲಿದ್ದದ್ದು ಎರಡೇ ಪದ; ಕ್ಷಮಿಸಿ ಬಿಡು.
****
ಅಂಥ ಧೈರ್ಯವಂತೆ, ಎಂಥ ಸನ್ನಿವೇಶವನ್ನು ಎದುರಿಸುವಂಥ ಛಾತಿ ಇದ್ದ ಹುಡುಗಿ ಆಂತರ್ಯದಲ್ಲಿ ಇಷ್ಟೊಂದು ದುರ್ಬಲಳಾಗಿದ್ದಳೇ? ಈ ಪ್ರಶ್ನೆಗೆ ಅಂದಿನಿಂದ ಇಂದಿಗೂ
ಉತ್ತರ ಹುಡುಕುತ್ತಲೇ ಇದ್ದೇನೆ. ಯಾಕೆಂದರೆ, ಆಕೆಯನ್ನು ನೋಡಿದ ಯಾರೇ ಅವಳು ಹೀಗೆ ಮಾಡಬಹುದು ಎಂದು ಊಹಿಸಲು ಸಾಧ್ಯವಿರಲಿಲ್ಲ; ಹಾಗಿದ್ದಳು ನನ್ನ ಹುಡುಗಿ. ಹೀಗೆ ದುರಂತದ ನೆನಪುಗಳು ಮಳೆಯಲ್ಲಿ ಮತ್ತೆ ಜೀವ ಪಡೆಯುತ್ತಿರುವಾಗಲೇ ಆಕೆ ಕೊಟ್ಟ ಹೋದ ಕಾಗದವನ್ನು ಮತ್ತೊಮ್ಮೆ ಬಿಚ್ಚಿ ನೋಡಿದೆ. ಅವಳ ನಗುವಿನ ಮುಖ ಮಿಂಚಿ ಮರೆಯಾಯ್ತು. ಹೊರಗಡೆ ಮತ್ತೆ ಮಳೆ ಭೋರ್ಗರೆಯಾರಂಭಿಸಿತು. ನನಗೆ ಗೊತ್ತಿಲ್ಲದಂತೆ ಕಣ್ಣ ಹನಿಯೊಂದು ಆ ಕಾಗದ ಮೇಲೆ ಬಿದ್ದು ಇಂಗಿ ಹೋಯಿತು.

(ಈ ಲೇಖನ ವಿಜಯ ಕರ್ನಾಟಕದ ಸೆಪ್ಟೆಂಬರ್ 11, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಸೋಮವಾರ, ಜುಲೈ 31, 2017

ಹುಡುಗನೊಬ್ಬನ ಗಜಲ್‌ಗಳು: ನಾವು ಸಾಯಲ್ಲ, ಬದುಕುತ್ತೇವೆ ಎನ್ನುವ ಕೂಗು ಗುಮ್ಮಟದಲ್ಲಿ ಪ್ರತಿಧ್ವನಿಸಿತು....

- ಪ್ರದ್ಯುಮ್ನ
ವಿಶ್ವ ವಿಖ್ಯಾತ ಗೋಲ್‌ಗುಂಬಜ್‌ನ ಅಭಿಮುಖವಾಗಿ ಮುಖ್ಯ ರಸ್ತೆಯ ಆಚೆ ಇದ್ದ ಈ ಲಾಡ್ಜ್‌ನ ಕೋಣೆ ತುಂಬ ವೌನ. ಕಿಟಕಿಯಾಚೆ ನೋಡಿದರೆ ಗಂಭೀರತೆಯನ್ನೇ ಹೊತ್ತು ನಿಂತಂತೆ ಭಾಸವಾಗುತ್ತಿದ್ದ ಗೋಲ್‌ಗುಂಬಜ್‌ನ ಬೃಹತ್ ಗುಮ್ಮಟ ಮಾತ್ರ ಕಣ್ಣಳತೆಯಲ್ಲಿತ್ತು. ಆ ಗುಮ್ಮಟದ ಪ್ಯಾಸೇಜ್‌ನಲ್ಲಿ ಓಡಾಡುತ್ತಿರುವ ಪ್ರವಾಸಿಗರು ಚಿಕ್ಕವರಂತೆ ಕಾಣುತ್ತಿದ್ದರು. ಇದನ್ನೆಲ್ಲ ನೋಡುತ್ತಿದ್ದ ಅವರಿಬ್ಬರ ಮುಖದಲ್ಲೀಗ ಯಾವುದೇ ಭಾವನೆಗಳಿಲ್ಲ. ನಿರ್ಭಾವುಕ ಮನಸ್ಸು. ಎಲ್ಲವೂ ಮೊದಲೇ ನಿರ್ಧರಿಸಿಕೊಂಡಂತಿತ್ತು. ತಾವೇನು ಮಾಡಲು ಹೊರಟಿದ್ದೇವೆ ಎಂಬ ಸ್ಪಷ್ಟ ಅರಿವು ಅವರಲ್ಲಿತ್ತು. ಹೊರಗಡೆ ಧಾವಂತ, ಬಸ್‌ಗಳ ಓಡಾಟ, ಆಟೋಗಳ ಹಾರ್ನ್, ಜನರ ಕೂಗಾಟಗಳೆಲ್ಲವೂ ಇವರ ಕಿವಿಗೆ ಬಿದ್ದರೂ, ಮನಸ್ಸಿನೊಳಗೆ ಹರಳುಗಟ್ಟುತ್ತಿದ್ದ ಅಂತಿಮ ಕ್ಷಣದ ಭಾವನೆಗಳಿಗೇನೂ ಭಂಗ ತರುತ್ತಿರಲಿಲ್ಲ. ಇಬ್ಬರು ಒಬ್ಬರ ಮುಖವನ್ನೊಮ್ಮೆ ನೋಡುತ್ತಾ, ಗುಮ್ಮಟದತ್ತ ದೃಷ್ಟಿ ಹಾಯಿಸುತ್ತಾ ನಿಂತಿದ್ದರು ಕಿಟಕಿಯ ಪಕ್ಕದಲ್ಲಿ.

ತಾನು ಸತ್ತ ಮೇಲೆ ತನ್ನ ಗೋರಿ ವೈಭವಯುತವಾಗಿರಬೇಕು ಎಂಬ ಮಹದಾಸೆಯಿಂದ ಬಿಜಾಪುರದ ಸುಲ್ತಾನ್ ಆದಿಲ್ ಶಾ ಬದುಕಿರುವಾಗಲೇ ಗೋಲ್ ಗುಂಬಜ್ ನಿರ್ಮಾಣ ಆರಂಭಿಸಿದ್ದ. ಆದರೆ, ಅದು ಪೂರ್ತಿಯಾಗುವ ಮೊದಲೇ ಅಸು ನೀಗಿದ. ಆತ, ಆತನ ಇಬ್ಬರು ಪತ್ನಿಯರಾದ ತಾಜ್ ಜಹಾನ್ ಬೇಗಮ್, ಅರೋಸ್ ಬೀಬಿ ಮತ್ತು ಪ್ರೇಯಸಿ ರಂಭಾ, ಮಕ್ಕಳು, ಮೊಮ್ಮಕ್ಕಳ ಗೋರಿಗಳು ಅದರಲ್ಲಿವೆ ಎಂಬ ಇತಿಹಾಸದ ಕಲ್ಪನೆ ಇಬ್ಬರಿಗೂ ಇತ್ತು. ಆದಿಲ್ ಶಾ ಮತ್ತು ರಂಭಾ ನಡುವಿನ ಪ್ರೇಮದ ಬಗ್ಗೆ ಅಷ್ಟೇನೂ ತಿಳಿವಳಿಕೆ ಇಲ್ಲದಿದ್ದರೂ, ಆಕೆಯೊಬ್ಬಳು ಅಪ್ರತಿಮ ಸುಂದರಿಯಾಗಿದ್ದಳು. ನೃತ್ಯಗಾತಿಯಾಗಿದ್ದ ಆಕೆಯನ್ನು ಆದಿಲ್ ಶಾ ತುಂಬ ಪ್ರೀತಿಸುತ್ತಿದ್ದ ಎಂಬುದನ್ನು ಗೂಗಲಿಂಗ್ ಮಾಡಿ ತಿಳಿದುಕೊಂಡಿದ್ದರು. ಆಗ್ರಾದಲ್ಲಿರುವ ತಾಜ್ ಮಹಲ್ ಪ್ರೇಮ ಸ್ಮಾರಕವಾಗಿ ವಿಶ್ವವಿಖ್ಯಾತವಾಗಿರುವಂತೆ ಈ ಗುಂಬಜ್ ಯಾಕೆ ಪ್ರೇಮ ಸ್ಮಾರಕವಾಗಲಿಲ್ಲ, ಪ್ರೇಮಿಗಳಿಗೊಂದು ವೇದಿಕೆಯಾಗಲಿಲ್ಲ ಎಂಬ ಪ್ರಶ್ನೆಗಳು ಆತನಲ್ಲಿ ಮೂಡುತ್ತಿದ್ದವು. ಹೈಸ್ಕೂಲ್‌ನಲ್ಲಿ ಓದಿದ್ದು ಬಿಟ್ಟರೆ ಇತಿಹಾಸ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ ಆತನಿಗೆ. ಆ ಲಾಡ್ಜ್‌ನ ಆ ಕ್ಷಣದಲ್ಲಿ ಆತನಿಗೆ ಅನಿಸಿದ್ದು; ನಮ್ಮ ಪ್ರೇಮದಂತೆ ಅವರಿಬ್ಬರದ್ದೂ ಎಲ್ಲರಿಂದಲೂ ನಿಕೃಷ್ಟವಾಗಿರಬೇಕು ಇಲ್ಲವೇ ಬೇಕಂತಲೇ ಅವರ ಪ್ರೇಮ ಕಹಾನಿಯನ್ನು ಇತಿಹಾಸಕಾರರು ಸ್ಪಷ್ಟವಾಗಿ ದಾಖಲಿಸಿರಲಿಕ್ಕಿಲ್ಲ... ಹೀಗೆ ನಾನಾ ಯೋಚನೆಗಳಲ್ಲಿ ಮುಳುಗಿದ್ದ ಆತನಿಗೆ, ‘‘ಏನ್ ಯೋಚ್ನೆ ಮಾಡುತ್ತಿದ್ದೀಯಾ?’’ ಎಂದು ಅವನ ಯೋಚನಾಸರಣಿಗೆ ಬ್ರೇಕ್ ಹಾಕಿದಳು. ‘‘ಏನಿಲ್ಲ, ಆದಿಲ್ ಶಾ ಮತ್ತು ರಂಭಾ ಪ್ರೇಮದ ಬಗ್ಗೆ,’’ ಅಂದ ತಲೆ ತಗ್ಗಿಸಿಕೊಂಡೇ. ‘‘ನಮ್ಮ ಪ್ರೀತಿ ಹೇಗೆ ನಮ್ಮವರಿಗೆ ಅನಿಷ್ಟವಾಗಿ ಕಂಡಿದೆಯೋ, ತೀರಾ ಇಂಪಾರ್ಟೆನ್ಸ್ ಇಲ್ಲವೋ ಹಾಗೆ ಇರಬೇಕು ಅವರದ್ದು,’’ ಕಿಟಕಿಯಿಂದಲೇ ಗುಮ್ಮಟವನ್ನು ದಿಟ್ಟಿಸುತ್ತಾ ಆಕೆ ಹೇಳಿದಾಗ, ಅರೇ... ಇವಳು ನನ್ನಂತೆ ಯೋಚಿಸುತ್ತಿದ್ದಾಳಲ್ಲ ಎಂದು ನಸು ನಕ್ಕ. ಅವರಿಬ್ಬರು ಮತ್ತೆ ಅದೇ ಗುಮ್ಮಟದತ್ತ ಚಿತ್ತ ಹಾಯಿಸಿದರು. ಸಂಜೆ ಆಗೋವರೆಗೂ ಗುಮ್ಮಟವನ್ನು ದಿಟ್ಟಿಸಿ ನೋಡುತ್ತ ಇರಬೇಕೆಂದು ನಿರ್ಧರಿಸಿದಂತೆ ಆ ದೃಷ್ಟಿ.
ಬೆಂಗಳೂರಿನಲ್ಲಿ ಪ್ರತಿಷ್ಠತ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ ಅವರಿಬ್ಬರ ಮಧ್ಯೆ ಪ್ರೇಮಾಂಕುರ ಹೇಗೆ ಆಯಿತು ಎಂಬುದಕ್ಕೆ ಉತ್ತರವಿಲ್ಲ. ಅವನು ನಾರ್ಥಿ. ಆದರೆ, ಬೆಂಗಳೂರಿಗೆ ಬಂದು ಐದು ವರ್ಷದಲ್ಲಿ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದ. ಅವಳು ಮೈಸೂರಿನವಳು. ಇಬ್ಬರ ಮಧ್ಯೆ ಇರುವ ಓದುವ ಹವ್ಯಾಸ ಅವರನ್ನು ಒಂದುಗೂಡಿಸಿತ್ತು. ತಾವು ಓದಿದ ಪುಸ್ತಕಗಳ ಬಗ್ಗೆ ವಿಮರ್ಶೆ ಮಾಡಿಕೊಳ್ಳುತ್ತಾ, ಕಾಫಿ ಡೇನಲ್ಲಿ ತಾಸುಗಟ್ಟಲೇ ಕಳೆಯುವುದು ಇಬ್ಬರಿಗೂ ಇಷ್ಟ. ಇಷ್ಟಾನಿಷ್ಟಗಳು ಒಂದಾದ ಮೇಲೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಹುಡುಗ ಉತ್ತರ ಭಾರತೀಯ ಎಂಬ ಕಾರಣವೇ ಅವಳ ಮದುವೆಗೆ ದೊಡ್ಡ ಅಡ್ಡಿಯಾಯಿತು. ಇಂಥದೊಂದು ‘ಕಾರಣ’ ತಮ್ಮಿಬ್ಬರನ್ನು ದೂರ ಮಾಡಬಹುದು ಎಂದೂ ಯೋಚಿಸಿರಲಿಲ್ಲ. ಆದರೆ, ಅದೇ ಸತ್ಯ ಎಂದು ಗೊತ್ತಾದ ಮೇಲೆ, ಬೇರೆ ಬೇರೆಯಾಗಿ ಬದುಕುವುದಕ್ಕಿಂತ ಸಾಯುವುದೇ ಲೇಸೆಂದು ದೂರದ ಬಿಜಾಪುರಕ್ಕೆ ಬಂದು ತಮ್ಮ ಅಂತ್ಯದ ಕ್ಷಣಗಳನ್ನು ಲೆಕ್ಕ ಹಾಕುತ್ತಿದ್ದರು.
ಬಿಜಾಪುರದ ಅಷ್ಟು ಸ್ಥಳಗಳನ್ನೂ ಒಂದು ಇಡೀ ದಿನ ನೋಡಿದ್ದ ಅವರು ಗೋಲ್ ಗುಂಬಜ್ ಮಾತ್ರ ನೋಡಲು ಹೋಗಿರಲಿಲ್ಲ. ಲಾಡ್ಜ್‌ನ ಕಿಟಕಿಯಿಂದಲೇ ಆ ಗುಮ್ಮಟವನ್ನು ತಮ್ಮ ಕಣ್ಣು ತುಂಬಿಕೊಳ್ಳುತ್ತಿದ್ದರು.
ಕೋಣೆಯ ಬಾಗಿಲಿಂದ ಕಟ.. ಕಟ.. ಕಟ.. ಎಂಬ ಶಬ್ಧ ಬಂದಾಗಲೇ ತಾವು ಚಹಾಗೆ ಆರ್ಡರ್ ಮಾಡಿದ್ದು ನೆನಪಾಗಿ, ಬಾಗಿಲು ತರೆದ ಆತ. ಎದುರಿಗಿದ್ದ ಯುವಕನ ಮುಖದಲ್ಲಿ ಮಂದಹಾಸ ನರ್ತಿಸುತ್ತಿತ್ತು. ‘‘ಸರ್, ನಿಮ್ಮ ಚಹಾ..’’ ಎನ್ನುತ್ತಾ ಒಳ ಬಂದು ಟೀಫಾಯಿ ಮೇಲಿಟ್ಟು ನಿಂತ. ಅವರಿಬ್ಬರ ಮುಖವನ್ನೊಮ್ಮೆ ನೋಡಿದ, ಹೋಗು ನೀನು ಇನ್ನು ಎಂಬ ಸೂಚನೆ ಅದರಲ್ಲಿತ್ತು. ‘‘ಸರ್... ತಪ್ಪು ತಿಳಿದುಕೊಳ್ಳುವುದಿಲ್ಲ ಎಂದರೆ ಒಂದು ಮಾತು ಹೇಳಲಾ,’’ ಎಂದ. ಯಾರ ಜತೆ ಮಾತನಾಡಲೂ ಮನಸ್ಸಿಲ್ಲದ ಅವರು ಇವನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರ ಉತ್ತರಕ್ಕೂ ಕಾಯದೆ, ಮಾತು ಮುಂದುವರಿಸಿದ ಆ ಯುವಕ, ‘‘ಸರ್... ನೀವು ಇಲ್ಲಿಗೆ ಬಂದಾಗಿನಿಂದ ನಿಮ್ಮನ್ನು ಗಮನಿಸುತ್ತಿದ್ದೇನೆ. ನಿಮ್ಮಿಬ್ಬರ ನಿರ್ಧಾರ ಏನೆಂದು ನಾನು, ಈ ಮೂರು ವರ್ಷಗಳ ಹಿಂದೆ ನನಗಾದ ಅನುಭವದಿಂದಲೇ ಗ್ರಹಿಸಬಲ್ಲೆ,’’ ಎಂದು ಸುಮ್ಮನಾದ. ಅವರೇನೂ ಇವನ ಮಾತಿಗೆ ಅಂಥ ಆಸಕ್ತಿ ತೋರಿಸಲಿಲ್ಲ. ಆದರೂ, ಮತ್ತೆ ಮುಂದುವರಿದ ಆ ಯುವಕ, ‘‘ನಿಮಗೆ ಇಷ್ಟ ಇಲ್ಲದಿದ್ದರೂ ನನ್ನದೊಂದು ಕತೆ ಹೇಳ್ತಿನಿ ಕೇಳಿ; ನಾನು ಮತ್ತು ನನ್ನ ಗೆಳತಿ ಇಬ್ಬರು ನಿಷ್ಕಲ್ಮಷ ಪ್ರೀತಿಯ ತೂಗುಯ್ಯಲೆಯಲ್ಲಿ ಜೀಕುತ್ತಿದ್ದೆವು. ನಮಗೆ ನಮ್ಮದೇ ಪ್ರಪಂಚ. ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದೆವು. ಅವಳು ನನಗಿಂತಲೂ ಬುದ್ಧಿವಂತೆ, ಗುಣವಂತೆ. ನಮ್ಮ ಪ್ರೀತಿಯಲ್ಲಿ ಲವಲೇಶವೂ ಕಲ್ಮಶವಿರಲಿಲ್ಲ. ಆದರೆ, ಗೊತ್ತಲ್ಲ.. ಈ ಜಗತ್ತು ಪ್ರೀತಿಸುವವರನ್ನು ಹೇಗೆ ನೋಡುತ್ತದೆ ಎಂದು. ನಮ್ಮಿಬ್ಬರ ಪ್ರೀತಿಗೆ ಅಡ್ಡವಾಗಿದ್ದು ಆಕೆಯ ಅಪ್ಪನ ಶ್ರೀಮಂತಿಕೆ. ಆದರೆ, ಅವಳು ಅಂಥ ಶ್ರೀಮಂತಿಕೆಯನ್ನು ಧಿಕ್ಕರಿಸಿ ನನ್ನೊಂದಿಗೆ ಬರಲು ಸಿದ್ಧಳಿದ್ದಳು. ನನಗೆ ಧೈರ್ಯ ಇರಲಿಲ್ಲ. ನಾವಿಬ್ಬರು ನೀವು ಈಗ  ಕೈಗೊಂಡಿರುವ ನಿರ್ಧಾರವನ್ನೇ ಅಂದು ಮಾಡಿ, ಆ ಗುಂಬಜ್ ಸ್ವಲ್ಪ ದೂರದಲ್ಲಿ ಇನ್ನೊಂದು ಗುಮ್ಮಟವಿದೆ. ಅಲ್ಲಿಗೆ ಯಾರೂ ಬರಲ್ಲ. ಆ ಗುಮ್ಮಟ ಏರಿ ಮೇಲಿಂದ ಹಾರಿದೆವು. ಆದರೆ, ನನ್ನ ನಸೀಬು ಚೆನ್ನಾಗಿರಲಿಲ್ಲ; ನಾನು ಬದುಕಿದೆ. ಅವಳು ನನ್ನ ಪ್ರೀತಿಗಾಗಿ ಜೀವ ಕೊಟ್ಟಳು. ಬಿದ್ದಿದ್ದಷ್ಟೆ ಗೊತ್ತಿದ್ದ ನನಗೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಆಗಲೇ ನಿರ್ಧರಿಸಿದ್ದೆ ಸಾವಿಗಿಂತ ಬದುಕು ಮುಖ್ಯ. ಆಕೆಯ ಮಾತು ಕೇಳಿದ್ದರೆ ಎಲ್ಲಿಗಾದರೂ ಹೋಗಿ ಬದುಕಬಹುದಿತ್ತು. ನನ್ನ ಹೇಡಿತನದಿಂದ ಆಕೆ ಪ್ರಾಣಬಿಡಬೇಕಾಯಿತು. ಪ್ರೀತಿ ಮಾಡಿದವರಿಗೆ ಸಾವೇ ಪರಿಹಾರವಲ್ಲ. ಅಂದು ಊರು ಬಿಟ್ಟವನು ಇನ್ನೂ ಊರಿಗೆ ಹೋಗಿಲ್ಲ. ಈ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಾ, ‘ನಿಮ್ಮ ಹಾಗೆ’ ಬರುವವರಿಗೆ ನನ್ನ ಕತೆಯನ್ನು ಹೇಳುತ್ತೇನೆ. ಗೋರಿಗಳ ಮೇಲೆ ಎದ್ದಿರುವ ಆ ಗುಮ್ಮಟವಿದೆಯಲ್ಲ ಅದು ನಮ್ಮ ಬದುಕಿಗೆ ಸ್ಫೂರ್ತಿಯಾಗಬೇಕೆ ಹೊರತು ಸಾವಿಗಲ್ಲ,’’ ಎನ್ನುತ್ತಾ ಅವರಿಬ್ಬರ ಮುಖವನ್ನೊಮ್ಮೆ ನೋಡಿ ತನ್ನದೆ ಆದ ಮಂದಹಾಸ ಬೀರಿ, ಹೊರಟು ಹೋದ.
ಅವರಿಬ್ಬರ ಮುಖದಲ್ಲೀಗ ಪಶ್ಚಾತ್ತಾಪದ ಗೆರೆಗಳು ಕಾಣಲಾರಂಭಿಸಿದ್ದವು. ಆತ ಹೇಳಿದ ಕತೆ ಅವರಿಬ್ಬರಲ್ಲೂ ಹೊಸ ಚೈತನ್ಯ ಉಂಟು ಮಾಡಿತ್ತು. ಸಾವಿಗಿಂತ ಬದುಕು ಶ್ರೇಷ್ಠ. ಪ್ರೀತಿಯ ವೈಫಲ್ಯಕ್ಕೆ ಸಾವು ಅಂತ್ಯವಲ್ಲ ಎಂಬ ನಿರ್ಧಾರಕ್ಕೆ ಬಂದವರೇ ಗೋಲ್ ಗುಂಬಜ್ ನೋಡಲು ಹೊರಟರು. ಅಷ್ಟೊತ್ತಿಗಾಗಲೇ ಬೆಂಕಿಯುಗುಳುತ್ತಿದ್ದ ಸೂರ್ಯ ತನ್ನ ಪ್ರತಾಪವನ್ನು ಬಿಟ್ಟು, ಪಡುವಣದಲ್ಲಿ ನಿಧಾನವಾಗಿ ಜಾರುತ್ತಿದ್ದ. ಬೀಸುತ್ತಿದ್ದ ತಂಪನೆಯ ಗಾಳಿಯೂ ಇಬ್ಬರಲ್ಲೂ ಹೊಸ ಭರವಸೆಯನ್ನು ಮೂಡಿಸುತ್ತಿತ್ತು. ಅವರ ಮುಖದಲ್ಲೀಗ ಮೊದಲಿನ ನಿರ್ಭಾವುಕತೆ ಇಲ್ಲ. ಹೊಸ ಹುಮ್ಮಸ್ಸಿನ ಅಲೆಗಳು ನಗುವಿನ ರೂಪದಲ್ಲಿ ಹೊರ ಬರುತ್ತಿವೆ. ರಸ್ತೆಯಾಚೆಗಿನ ಗುಂಬಜ್‌ನ ಮುಖ್ಯದ್ವಾರದಲ್ಲಿ ಜನಜಂಗುಳಿ, ಎಲ್ಲರ ಮುಖದಲ್ಲಿ ಸಂತೋಷದ ಓಕುಳಿ. ಪಿಸುಮಾತನ್ನು ಪ್ರತಿಧ್ವನಿಸುವ ಗುಮ್ಮಟ ಅಲ್ಲಿದ್ದವರಿಗೆಲ್ಲ ಅಚ್ಚರಿಯ ಭಂಡಾರ. ಗೋಲ್ ಗುಂಬಜ್ ಒಳ ಹೊಕ್ಕ ಇಬ್ಬರು ಜೋರಾಗಿ ‘‘ನಾವು ಸಾಯಲ್ಲ... ಬದುಕುತ್ತೇವೆ...’’ ಕೂಗಿದರು. ಅವರಿಬ್ಬರು ಈ ಮಾತುಗಳು ಪ್ರತಿಧ್ವನಿಗೊಂಡು ಅಲೆ ಅಲೆಯಾಗಿ ತೇಲಿ ಬಂದವು. ಸುತ್ತಮುತ್ತಲಿನವರು ಒಂದು ಕ್ಷಣ ಇವರಿಬ್ಬರನ್ನು ನೋಡಿ, ಪ್ರತಿಧ್ವನಿಸುವ ಈ ಗುಮ್ಮಟದ ಸೌಂದರ್ಯದಲ್ಲಿ ಮಗ್ನರಾದರು. ಮನಸ್ಸು ಹಗುರವಾಗೋವರೆಗೂ ಇಬ್ಬರು ಕೂಗುತ್ತಲೇ ಇದ್ದರು. ಕೂಗಿ ಕೂಗಿ ಧ್ವನಿ ತುಸು ದುರ್ಬಲವಾದ ಬಳಿಕ ಆ ಗುಮ್ಮಟ ಬಿಟ್ಟು ಹೊರ ಬಂದಾಗ ಇಬ್ಬರ ಮನಸ್ಸು ಆಕಾಶದಲ್ಲಿ ತೇಲಾಡುವಷ್ಟು ಹಗುರವಾಗಿತ್ತು. ಅವರಲ್ಲೀಗ ಬದುಕುವ ಛಲ ನೂರ್ಮಡಿಸಿತ್ತು. ಮತ್ತೆಂದೂ ಇಂಥ ಕಟು ನಿರ್ಧಾರಕ್ಕೆ ಬರಬಾರದು ಎಂದು ನಿಶ್ಚಯಿಸಿ, ಮುಖ್ಯದ್ವಾರ ದಾಟಿ ಹೊರಬಂದರು.
ಆಕೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಆ ಚಿಕ್ಕ ಸೀಸೆ ಚರಂಡಿಯ ಪಾಲಾಗಿತ್ತು.


(ಈ ಲೇಖನ ವಿಜಯ ಕರ್ನಾಟಕದ ಜುಲೈ 31,2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಸೋಮವಾರ, ಜೂನ್ 19, 2017

ಹುಡುಗನೊಬ್ಬನ ಗಜಲ್‌ಗಳು: ಜೀವ ಉಳಿಸಿದವಳು ಮಳೆಯಲ್ಲಿ ಕರಗಿದಳು

- ಪ್ರದ್ಯುಮ್ನ
ಈ ಮೋಡಗಳೇ ಅಡ್ನಾಡಿ. ಅದರಲ್ಲೂ ಬಯಲುಸೀಮೆಗೆ ಬಂದರೆ ಅವುಗಳದ್ದು ಚಿತ್ತ ಚಾಂಚಲ್ಯ. ಒಂದಿಷ್ಟು ಗಾಳಿ ಸೋಕಿದರೂ ಸಾಕು ಸಲುಗೆ ಬೆಳೆಸಿ ಕೈ ಕೊಡುತ್ತವೆ. ಬಿಸಿಲಿಗೆ ಬೆಂಡಾಗಿ ಬಾಯ್ತೆರೆದ ಭೂಮಿಗೆ ದೂರದಿಂದಲೇ ಆಸೆ ತೋರಿಸಿ ಕಾಲು ಕೀಳುವ ಈ ಮೋಡಗಳೂ ಹಳೆ ಗೆಳತಿಯ ನೆನಪಿನ ಹಾಗೆ.
ವಸಂತಕಾಲದಲ್ಲಿ ಸುರಿಯೋ ಅಡ್ಡಾದಿಡ್ಡಿ ಮಳೆಗೆ ಬಿರುಸು, ದಾಢಸಿತನ. ಈ ಮಳೆಗಾಲದ ಮಳೆ ಒಮ್ಮಮ್ಮೆ ಕೋಮಲೆ, ಮತ್ತೊಮ್ಮೆ ಸುಕೋಮಲೆ. ತಂಪಾದ ವಾತಾವರಣದಲ್ಲಿ ಆಗಾಗ ನಾಲ್ಕಾರು ಹನಿಗಳನ್ನು ಉದುರಿಸುತ್ತ, ಚೆಲ್ಲಾಟವಾಡುವ ನೈಸರ್ಗಿಕದತ್ತ ಸ್ವಭಾವ. ಮತ್ತೊಮ್ಮೆ ಕೋಪಗೊಂಡ ಪ್ರೇಯಸಿಯ ಹಾಗೆ ಭೋರ್ಗರೆಯುವ ಪ್ರತಾಪ-ಪ್ರಲಾಪ. ಈ ಕೋಪಕ್ಕೆ ಹಳೆಯ ಮಣ್ಣಿನ ಮನೆಗಳೆಲ್ಲ ಚಿಂದಿ ಚಿಂದಿ; ಓಣಿ ತುಂಬ ಕೆಸರು. ಸಂಜೆ ಸೂರ್ಯಾಸ್ತವೂ ಡಲ್ಲು. ಹೊರಗೆ ಕಾಲಿಡಲು ಆಗದಂತೆ ಮಾಡುವ ಈ ಮಳೆಗೆ ಒಂಚೂರೂ ಕರುಣೆ ಇಲ್ಲ ಎಂದೆನಿಸಿತು. ತನ್ನೆಲ್ಲ ಸಿಟ್ಟು ಸೆಡವನ್ನು ಮನಸೋಯಿಚ್ಛೆ ತೋರುವ ಮಳೆಗಾಲ ಅನೇಕರಲ್ಲಿ ಭಾವನೆಗಳಿಗೆ ಮರಿ ಹಾಕುವ ಸಕಾಲ ಎಂದು ಮನದೊಳಗೇ ಹೀಗೆ ಏನೇನೊ ಲೆಕ್ಕ ಹಾಕುತ್ತ ಕುಳಿತಿದ್ದ ಆತನಿಗೆ, ಕಿಟಕಿಯ ಮಾಡಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳು ಆಗ ತಾನೇ ಸುರಿದು ಮಾಯವಾ
ದ ಮಳೆಗೆ ಸಾಕ್ಷಿ ಹೇಳುತ್ತಿದ್ದವು. ಮಲೆನಾಡಿನಲ್ಲಿ ಹೇಗೋ ಗೊತ್ತಿಲ್ಲ. ಆದರೆ, ಬಯಲುಸೀಮೆಯಲ್ಲಿ ಮಳೆಯ ಸ್ವರೂಪವೇ ಚಿತ್ರ-ವಿಚಿತ್ರ. ಬಟಾಬಯಲಾಗುವ ಆಕಾಶದಲ್ಲಿ ಒಮ್ಮಿಲೇ ಕಪ್ಪು ಮೋಡಗಳು ದಂಡೆತ್ತಿ ಬಂದು ಇನ್ನೇನು ಜೋರು ಮಳೆ ಬೀಳುತ್ತದೆ ಎನ್ನುವಷ್ಟರಲ್ಲೇ, ಗಾಳಿಯೊಂದಿಗೆ ಮಾಯವಾಗುತ್ತವೆ. ಅದರ ಹಿಂದೆಯೇ ಬಿಳಿ ಮೋಡಗಳು ಆಕಾಶದಲ್ಲಿ ತೇಲುತ್ತವೆ. ಒಂದೇ ಕ್ಷಣದಲ್ಲಿ ತಂಪಾದ ವಾತಾವರಣ ತುಸು ಬೆಚ್ಚನೆಯ ಜಾಯಮಾನಕ್ಕೆ ಬದಲಾಗುತ್ತದೆ. ಮನಸ್ಸು ಹಾಗೆ ಅಲ್ಲವೇ? ಯಾವುದೋ ಸಿಹಿಯಾದ ನೆನಪಿನೊಂದಿಗೆ ಜೋಕಾಲಿ ಜೀಕುತ್ತಿರುವಾಗಲೇ ಅದರ ಹಿಂದೆಯೇ ಅಪ್ಪಳಿಸುವ ದುರಂತದ ನೆನಪಿನ ದಂಡು ನಮ್ಮನ್ನು ಭಂಗಗೊಳಿಸುತ್ತದೆ.
ಕಿಟಕಿಯಿಂದ ಆಚೆ ನೋಡುತ್ತಿದ್ದ ಅವನಿಗೆ, ಮಕ್ಕಳಿಬ್ಬರು ರಸ್ತೆಯಲ್ಲಿನ ಹೊಂಡದಲ್ಲಿ ನಿಂತಿದ್ದ ನೀರಿನಲ್ಲಿ ಕಾಗದದ ದೋಣಿ ತೇಲಿಬಿಟ್ಟು ಚಪ್ಪಾಳೆ ಹೊಡೆಯುತ್ತಿದ್ದದ್ದು ಕಾಣಿಸಿತು. ಅವರಿಗೆ ಎದುರಾಗಿರುವ ಬಯಲಿನಿಂದ ನಾಲ್ಕಾರು ಎಮ್ಮೆಗಳನ್ನು ಮೇಯಿಸಿಕೊಂಡು ಬರುತ್ತಿದ್ದ ಇಬ್ಬರು ಹುಡುಗರ ತಲೆ ಮೇಲೂ ಮಳೆ ಆಸರೆಗಾಗಿ ತಟ್ಟಿನ ಚೀಲಗಳಿದ್ದವು. ನೆನೆದಿದ್ದರಿಂದ ಅವುಗಳಿಂದಲೂ ತೊಟ್ಟಿಕ್ಕುತ್ತಿದ್ದ ಹನಿಗಳು ಅವರಿಬ್ಬರ ಕಾಲುಗಳಿಂದ ಇಳಿದು ಪಾದಕ್ಕೆ ಅಂಟಿ ಕೊನೆಯಾಗುತ್ತಿದ್ದವು... ಹೀಗೆ ಸೂಕ್ಷ್ಮವಾಗಿ ಅದನ್ನೆಲ್ಲ ಗಮನಿಸುತ್ತಿದ್ದ ಆತನ ಮನದೊಳಗೆ ಬೇಡ ಬೇಡ ಎಂದರೂ ಆ ಘಟನೆ ಮತ್ತೆ ಮತ್ತೆ ಇಣಕುತ್ತಿತ್ತು.
ಅದನ್ನು ನೆನಪಿಸಿಕೊಂಡರೇ ಈಗಲೂ ಅವನ ಮೈ ಬೆವರುತ್ತದೆ. ಆ ಶಾಕ್‌ನಿಂದ ಆತ ಹೊರಗೆ ಬರಲು ಸುಮಾರು ದಿನಗಳನ್ನೇ ತೆಗೆದುಕೊಂಡಿದ್ದ. ಆದರೂ ಪ್ರತಿ ಮಳೆಗಾಲದಲ್ಲಿ ಆ ಘಟನೆ ಆತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ತನ್ನಿಂದಾಗಿಯೇ ತನ್ನನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಜೀವವೊಂದನ್ನು ಬಲಿಕೊಡಬೇಕಾಯಿತು ಎಂದು ತಪ್ಪಿತಸ್ಥ ಭಾವದಲ್ಲಿರುತ್ತಾನೆ. ಅವರಿಬ್ಬರು ಪ್ರೀತಿಸಿ ಮದ್ವೆಯಾದವರಲ್ಲ. ಆದರೆ, ಮದ್ವೆಯಾಗಿ ಹುಚ್ಚರಂತೆ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದವರು. ಆಕೆಯೇನೂ ತುಂಬ ಓದಿದವಳಲ್ಲ. ತನ್ನೂರಲ್ಲಿದ್ದ ಹೈಸ್ಕೂಲ್‌ವರೆಗೆ ಮಾತ್ರ ಓದಿದ್ದಳು. ಆದರೆ ಅವಳಲ್ಲಿದ್ದ ಪ್ರೌಢಿಮೆ ಒಮ್ಮಮ್ಮೆ ಇವನಿಗೆ ಅಚ್ಚರಿ ಮೂಡಿಸುತ್ತಿತ್ತು. ಡಿಗ್ರಿ ಓದಿ, ಹೈಸ್ಕೂಲ್ ಟೀಚರ್ ಆಗಿದ್ದರೂ ಆಕಿಗಿರುವ ಜಾಣ್ಮೆ ತನ್ನಲ್ಲಿಲ್ಲ ಎಂದು ಅದೆಷ್ಟೋ ಬಾರಿ ಅಂದುಕೊಂಡಿದ್ದ. ಅವರಿಬ್ಬರ ಪುಟ್ಟ ಸಂಸಾರ ನಿಜಕ್ಕೂ ಹೊಟ್ಟೆಕಿಚ್ಚು ತರಿಸುವಂತಿತ್ತು.
ವಂಸತದ ಮಳೆ
ನಮ್ಮ ಈ ಪಲ್ಲಕ್ಕಿಯಲ್ಲಿ
ನಿನ್ನ ಮೆಲು ಪಿಸುಮಾತುಗಳು
ಜಪಾನಿನ ಹಾಯ್ಕುನಂತಿತ್ತು ಅವರಿಬ್ಬರ ಸಾಂಗತ್ಯ. ಒಬ್ಬರಿಗೊಬ್ಬರು ಎಂದೂ ಹಂಗಿಸಿಕೊಂಡವರಲ್ಲ; ಹೀಯಾಳಿಸಿಕೊಂಡವರಲ್ಲ. ಹಾಗೆಂದ ಮಾತ್ರಕ್ಕೆ ಆಕೆಯೇನೂ ಅಪೂರ್ವ ಸುಂದರಿಯಲ್ಲ; ಲಕ್ಷಣವಂತೆ. ಗುಣವಂತೆ. ಅವನೂ ಅಷ್ಟೇ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ನಿಲುವು. ಅವರಿಬ್ಬರ ನಡುವಿನ ಸಾಮರಸ್ಯ, ಒಲವು, ಚೆಲುವು, ಪ್ರೀತಿ, ಬೆಸುಗೆ, ಬಂಧನ ಆ ಚಿಕ್ಕ ಹಳ್ಳಿಯಲ್ಲಿ ಮನೆ ಮಾತಾಗಿತ್ತು. ಇದು ಅವರಿಗೂ ಆಗಾಗ ಕಿವಿಗೆ ಬೀಳುತ್ತಿತ್ತು. ಆದರೆ, ಅದರಿಂದೇನೂ ಉಬ್ಬಿ ಹೋದವರಲ್ಲ.
ಇಂಥದೊಂದು ಅಪರೂಪದ ಪ್ರೇಮಗೀತೆಗೆ ಶೋಕದ ಭಾವ ತುಂಬಲು ಆ ವಿಧಿ ಕಾದು ಕುಳಿತಿತ್ತು ಕಾಣುತ್ತದೆ. ಅಂದು ಹಾಗೆಯೇ; ಮಳೆ ಬರುವ ಯಾವ ಮುನ್ಸೂಚನೆಯೂ ಇರಲಿಲ್ಲ. ಆಕಾಶದಲ್ಲಿ ಬಿಳಿ ಮೋಡಗಳ ಕಾರುಬಾರು ಜೋರಾಗಿತ್ತು. ಆ ಮೋಡಗಳೆಲ್ಲ ನಾನಾ ಆಕಾರದಲ್ಲಿ ರಚಿತಗೊಂಡು ಊಹೆಗೆ ತಕ್ಕಂತೆ ಬದಲಾಗುತ್ತಿದ್ದವು. ರಜೆ ದಿನವಾದ್ದರಿಂದ ಆತ ಮನೆಯ ಅಂಗಳದಲ್ಲಿ ನಿಂತ ಬಿಳಿ ಮೋಡಗಳ ಚಿತ್ತಾಕರ್ಷಕ ವೈಚಿತ್ರ್ಯವನ್ನು ನೋಡುತ್ತ ನಿಂತಿದ್ದ. ‘‘ಮಳೆ ಬರುವ ಲಕ್ಷಣಗಳಿಲ್ಲ. ಊರ ಹೊರಗಿನ ದೇವಸ್ಥಾನಕ್ಕೆ ಹೋಗಿ ಬರೋಣ,’’ ಎಂದು ಆಕೆ ಮನೆಯ ಹೊಸ್ತಿಲಲ್ಲಿ ನಿಂತು ಕೇಳಿದಳು. ಆಕಾಶ ನೋಡುತ್ತಿದ್ದವನು ಹಾಗೆಯೇ, ‘‘ಆಯ್ತು ಹೋಗೋಣ, ವಾತಾವರಣವೂ ಚೆನ್ನಾಗಿದೆ,’’ ಎಂದ.
ಅವರಿಬ್ಬರೂ ಆಗಾಗ ಆ ದೇವಸ್ಥಾನಕ್ಕೆ ಹೋಗುತ್ತಿದ್ದರು. ದೇವಸ್ಥಾನದ ಹತ್ತಿರದಲ್ಲಿ ಒಂದು ಸಣ್ಣ ಹಳ್ಳ. ಬೇಸಿಗೆಯಲ್ಲಿ ಅದು ಹೊಲಗಳಿಗೆ ಹೋಗಲು ಕಾಲು ದಾರಿಯಾಗಿರುತ್ತಿತ್ತು. ಮಳೆಗಾಲದಲ್ಲಿ ಒಂದಿಷ್ಟು ನೀರು ಹರಿದು, ಹಳ್ಳದ ಸ್ವರೂಪ ಪಡೆದುಕೊಳ್ಳುತ್ತಿತ್ತು. ಅವರಿಬ್ಬರೂ ದೇವಸ್ಥಾನಕ್ಕೆ ಹೋದಾಗಲೆಲ್ಲ ಆ ಹಳ್ಳದ ಗುಂಟ ಸುಮಾರು ದೂರ ಕ್ರಮಿಸಿ, ವಾಪಸ್ಸು ಬಂದು, ದೇಗುಲದ ಪಕ್ಕದಲ್ಲಿರುವ ಹಳೆಯ ಆಲದ ಮರ ಬುಡದಲ್ಲಿ ಕುಳಿತು ಮನೆಗೆ ಮರಳುತ್ತಿದ್ದರು.
ಅವರಿಬ್ಬರು ಜತೆಗೂಡಿ ದೇವಸ್ಥಾನಕ್ಕೆ ಹೋಗುವ ಹೊತ್ತಿನಲ್ಲಿ ಆಕಾಶದಲ್ಲಿ ಬಿಳಿ ಮೋಡಗಳು ಕರಗಿ, ಕಪ್ಪು ಮೋಡಗಳು ದಂಡೆತ್ತಿ ಬರುತ್ತಿದ್ದವು. ಕೂಗಳತೆ ದೂರದಲ್ಲಿದ್ದ ದೇವಸ್ಥಾನ ತಲುಪುವ ಹೊತ್ತಿಗೆ ದಪ್ಪ ದಪ್ಪ ಹನಿಗಳು ಮುಖದ ಮೇಲೆ ರಪ್ಪಂತ ಬಿದ್ದವು. ಇದು ಧಾರಾಕಾರವಾಗಿ ಸುರಿಯುವ ಮಳೆ ಎಂಬ ಮುನ್ಸೂಚನೆ ದೊರೆಯಿತು. ದೇವಸ್ಥಾನ ಸೇರಿಕೊಳ್ಳುವ ಹೊತ್ತಿಗೆ ತೋಯ್ದು ತೊಪ್ಪೆಯಾಗುವುದು ಖಂಡಿತ ಎಂಬುದು ಅರಿವಾಗುತ್ತಲೇ ಅಲ್ಲೇ ಪಕ್ಕದಲ್ಲಿದ್ದ ಆ ಆಲದ ಮರದ ಬುಡಕ್ಕೆ ಬಂದು ನಿಂತರು. ಮಳೆ ಭೋರ್ಗರೆಯಲಾರಂಭಿಸಿತು. ಸುಮಾರು ಹೊತ್ತು ಸುರಿದ ಮಳೆ ಒಂದಿಷ್ಟು ನಿತ್ರಾಣಗೊಳ್ಳುತ್ತಿದ್ದಂತೆ, ಆಕಾಶದಲ್ಲಿ ಮೋಡಗಳ ಚಲನೆ ಹೆಚ್ಚಾಯಿತು. ಗಾಳಿಯೂ ವೇಗ ಪಡೆದುಕೊಂಡಿತ್ತು. ಅವರು ನಿಂತಿದ್ದ ವಿರುದ್ಧ ದಿಕ್ಕಿನಲ್ಲೇ ಸಿಡಿಲು ಸಂಚಾರವಾಗುತ್ತಲೇ ಇತ್ತು. ಬೆಳ್ಳಂ ಬೆಳಗಿನಂತಿದ್ದ ವಾತಾವರಣ ಪೂರ್ತಿ ಮಬ್ಬುಗತ್ತಲಿನೊಳಗೇ ಲೀನವಾಯಿತು. ಹತ್ತಿರದಲ್ಲಿದ್ದ  ಕಾಲು ದಾರಿಯಂಥ ಹಳ್ಳದಲ್ಲಿ ಒಂದಿಷ್ಟು ನೀರು ಸರಸರನೇ ಓಡುತ್ತಿತ್ತು. ಅದರ ಜತೆಗೆ ನಾಯಿ ಮರಿ ನೀರಿನ ಚಲನೆಯಿಂದ ಹೊರ ಬರದೆ ಅದರೊಂದಿಗೆ ಜಾರಿಕೊಂಡು ಹೋಗುತ್ತಿತ್ತು. ನಾಯಿಮರಿ ಕಂಡ ಅವಳು, ‘‘ಅಯ್ಯ ನಾಯಿ ಮರಿ ಸತ್ತೇ ಹೋಗ್ತದೇರಿ, ಆ ನೀರಿನ ರಭಸಕ್ಕೆ. ಅದನ್ನ ಎತ್ತಿಕೊಂಡು ಬನ್ನಿ,’’ ಎಂದಳು. ಆ ಸಣ್ಣ ಹಳ್ಳದಲ್ಲಿ ಹರಿಯುತ್ತಿದ್ದ ನೀರಿಗೆ ಅಂಥ ರಭಸತನವೇನೂ ಇರಲಿಲ್ಲ. ಆದರೆ, ಅದು ನಾಯಿಮರಿಯ ಶಕ್ತಿಗೂ ಮೀರಿತ್ತು. ಆದರೆ, ಇತ್ತ ಆಕಾಶ ತುಂಬ ಗುಡುಗಿನ ಆರ್ಭಟ; ಆಗಾಗ ಸಿಡಿಲಿನ ಸಂಚಾರ. ಇನ್ನೂ ಈ ಮರದ ಬುಡದಲ್ಲಿ ನಿಂತರೆ ಅಪಾಯ ತಪ್ಪಿದ್ದಲ್ಲ, ಹೇಗಿದ್ದರೂ ನೆನೆದುಕೊಂಡಾಗಿದೆ, ಮಳೆಯೂ ಸ್ವಲ್ಪ ನಿತ್ರಾಣಗೊಂಡಿದೆ. ಓಡೋಡಿ ದೇವಸ್ಥಾನ ಸೇರಿಕೊಳ್ಳುವುದು ಸೂಕ್ತ ಎಂದು ಲೆಕ್ಕಾಚಾರ ಹಾಕುತ್ತಿದ್ದ ಆತನಿಗೆ, ನಾಯಿಮರಿಯನ್ನು ಹಾಗೇ ಬಿಟ್ಟು ಹೋಗುವುದಕ್ಕೆ ಮನಸ್ಸು ಬರಲಿಲ್ಲ. ಹೆಂಡತಿಗಿದ್ದ ಕರುಣೆಯ ಭಾವ ಗೊತ್ತಿದ್ದ ಆತ, ಆಕೆಯ ಮಾತನ್ನು ತೆಗೆದು ಹಾಕುವ ಸ್ಥಿತಿಯಲ್ಲೂ ಇರಲಿಲ್ಲ. ಆದರೆ, ಆತನಿಗೇನು ಗೊತ್ತಿತ್ತು;  ನಾಯಿ ಜೀವ ಉಳಿಸಲು ಹೋದವನಿಗೆ ತಾನು ಏನು ಕಳೆದುಕೊಳ್ಳಬಲ್ಲೆ ಎಂಬುದು?
ಬೀಸುತ್ತಿದ್ದ ಗಾಳಿಗೆ ಇದಿರಾಗಿ ಓಡಿ ಹೋದ ಅವನು, ನೀರಿನೊಂದಿಗೆ ಹರಿದುಕೊಂಡು ಹೋಗುತ್ತಿದ್ದ ನಾಯಿ ಮರಿ ಎತ್ತಿ ಇನ್ನೇನು ಆ ಮರದತ್ತ ಓಡಬೇಕು ಎನ್ನುವಷ್ಟರಲ್ಲಿ, ಕ್ಷಣಾರ್ಧದಲ್ಲಿ ಆತನ ಊಹೆಗೆ ನಿಲುಕದ ಅವಘಡ ನಡದೇ ಹೋಯಿತು. ಮರದ ಬುಡದಲ್ಲಿದ್ದ ಪ್ರೀತಿಯ ಹೆಂಡತಿ ಸುಂದರ ಸಿಡಿಲಿನ ಕ್ರೌರ್ಯಕ್ಕೆ ಬಲಿಯಾಗಿದ್ದಳು. ಆ ಆಲದ ಮರ ಅರ್ಧ ಸುಟ್ಟು ಹೋಗಿತ್ತು. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿಯೇ ಎಲ್ಲವೂ ಮುಗಿದು ಹೋಗಿತ್ತು.
***
ಈಗ ಅದೇ ನಾಯಿ ಮರಿ ಅವನ ಮನೆಯಲ್ಲಿ ಬೆಳೆದು ದೊಡ್ಡದಾಗಿದೆ. ಅವನು ನಿಧಾನವಾಗಿ ಆ ಶಾಕ್‌ನಿಂದ ಹೊರ ಬಂದಿದ್ದಾನೆ. ಈ ಮಧ್ಯೆ ಐದಾರು ಮಳೆಗಾಲವೂ ಸುರಿದು ಹೋಗಿವೆ. ಆದರೆ, ಪ್ರತಿ ಮಳೆಗಾಲ ಬಂದಾಗ ಆತನಿಗೆ ದುರಂತ ನೆನಪುಗಳು ಬಿಟ್ಟು ಬಿಡದೆ ಕಾಡುತ್ತವೆ. ಹಾಗೆ ಕಾಡಿದಾಗಲೆಲ್ಲ ಆಕೆಯ ಸಮಾಧಿ ಬಳಿ ಹೋಗಿ ತುಸು ಹೊತ್ತು ಧ್ಯಾನಸ್ಥನಾಗುತ್ತಾನೆ. ಯಾವಾಗಲೋ ಓದಿದ, ಜಪಾನಿನ ಬಾಶೋ ಕವಿಯ ಹಾಯ್ಕು ಆ ಸಮಾಧಿ ಬಳಿ ಹೋದಾಗಲೆಲ್ಲ ಆತನಿಗೆ ಗೊತ್ತಿಲ್ಲದ ಹಾಗೆಯೇ ಬಡಬಡಿಸುತ್ತಾನೆ.
ನಾವು ಮತ್ತೆ ಭೇಟಿಯಾಗೋಣ
ಈ ಹೂಬಿಡುವ ಸಮಾಧಿ ಬಳಿ
ಎರಡು ಬಿಳಿ ಪಾತರಗಿತ್ತಿಯಾಗಿ

(ಈ ಲೇಖನ ವಿಜಯ ಕರ್ನಾಟಕದ ಜೂನ್ 18, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಮಂಗಳವಾರ, ಜೂನ್ 6, 2017

ವ್ಯಕ್ತಿಗತ- ‘ಬಿಪಿ’ ಹೆಚ್ಚಿಸುವ ರಾವತ್!

ಮಲ್ಲಿಕಾರ್ಜುನ ತಿಪ್ಪಾರ
ಮೇಜರ್ ಗೊಗೊಯಿ ಅವರು ಕಲ್ಲುತೂರಾಟಗಾರನೊಬ್ಬನನ್ನು ಸೇನಾ ಜೀಪಿಗೆ ಕಟ್ಟಿ ತಮ್ಮನ್ನೂ ಸೇರಿದಂತೆ ಚುನಾವಣಾ ಹಾಗೂ ಸೇನಾ ಸಿಬ್ಬಂದಿಯನ್ನು ರಕ್ಷಿಸಿದ ಘಟನೆ ದೊಡ್ಡ ಸುದ್ದಿಯಾಯಿತು. ಸೇನೆಯ ಅಧಿಕಾರಿಯೊಬ್ಬರು ಮಾನವನನ್ನು ಗುರಾಣಿಯ ರೀತಿಯಲ್ಲಿ ಬಳಸಿಕೊಂಡಿದ್ದು ಎಷ್ಟು ಸರಿ ಮತ್ತು ತಪ್ಪು ಎಂಬ ಚರ್ಚೆಗಳು ಇನ್ನೂ ನಡೆದಿವೆ. ಆದರೆ, ಸೇನಾ ಮುಖ್ಯಸ್ಥರು ಈ ಪ್ರಕರಣವನ್ನು ಯಾವ ರೀತಿ ನೋಡುತ್ತಾರೆಂಬುದು ಬಹುತೇಕರ ಕುತೂಹಲವಾಗಿತ್ತು. ಈ ವಿಷಯದಲ್ಲಿ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ವಿಭಿನ್ನ ದಾರಿ ತುಳಿದರು. ಸಾರ್ವಜನಿಕವಾಗಿಯೇ ಮೇಜರ್ ಗೊಗೊಯಿ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಕೆಳದರ್ಜೆಯ ಸೇನಾ ಸ್ತರದಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು. ಶಿಸ್ತುಬದ್ಧ ಸೈನ್ಯದ ಅಧಿಕಾರಿಯೊಬ್ಬರು ಇಂಥ ದಾರಿ ಅನುಸರಿಸುವುದರ ಕುರಿತಾದ ಪರಾಮರ್ಶೆಯ ಆಚೆ ನಿಂತು ನೋಡಿದಾಗ ಸೇನೆಯ ಕಾರ್ಯತಂತ್ರಗಳು ಬದಲಾಗಿರುವುದು ಸ್ಪಷ್ಟವಾಗುತ್ತದೆ. ಇದರ ಹಿಂದೆ ಜನರಲ್ ಬಿಪಿನ್ ರಾವತ್ ಅವರ ಹೆಚ್ಚುಗಾರಿಕೆ ಮತ್ತು ಜಾಣ್ಮೆಯೂ ಅಡಗಿದೆ. ಗೊಗೊಯಿ ಅವರನ್ನು ಬೆಂಬಲಿಸುವ ಮೂಲಕ ಕಾಶ್ಮೀರ ಕಣಿವೆಯ ಪ್ರಕ್ಷುಬ್ಧ ಸ್ಥಿತಿಗೆ ಕಾರಣವಾದವರಿಗೆ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.
ಇಂಥ ಬಿಪಿನ್ ರಾವತ್ ಅವರು ತಾವು ಸೇನಾ ಮುಖ್ಯಸ್ಥರಾಗುವ ಬಗ್ಗೆ ಯೋಚಿಸಿರಲಿಕ್ಕೂ ಇಲ್ಲ. ಯಾಕೆಂದರೆ, ಸಂಪ್ರದಾಯದಂತೆ ಸೇವಾ ಜೇಷ್ಠತೆ ಆಧಾರದ ಮೇಲೆಯೇ ಜನರಲ್ ಸ್ಥಾನಕ್ಕೇರುವುದು ಭಾರತೀಯ ಸೇನೆಯಲ್ಲಿ ನಡೆದುಕೊಂಡು ಬಂದಿದೆ. ಈ ಸಂಪ್ರದಾಯವನ್ನು 1983ರಲ್ಲಿ ಇಂದಿರಾ ಗಾಂಧಿ ಅವರು ಮೊದಲ ಬಾರಿಗೆ ಮುರಿದರು. ನಂತರ ಯಥಾಸ್ಥಿತಿ ಇತ್ತು. ವಾಸ್ತವದಲ್ಲಿ ಸೇವಾ ಜೇಷ್ಠತೆ ಆಧಾರದ ಮೇಲೆ ಲೆಫ್ಟಿನೆಂಟ್ ಜನರಲ್‌ಗಳಾದ ಭಕ್ಷಿ ಮತ್ತು ಹಾರಿಝ್ ಅವರು ಮುಖ್ಯಸ್ಥರಾಗಬೇಕಿತ್ತು. ಆದರೆ, ಮೋದಿ ಸರಕಾರ ಮಾತ್ರ, ಸೇನಾ ಮುಖ್ಯಸ್ಥ ಸ್ಥಾನಕ್ಕೆ ಆಯ್ದುಕೊಂಡಿದ್ದು ‘ಮ್ಯಾನ್ ಆಫ್ ಆ್ಯಕ್ಷನ್’ ಎಂದೇ ಕರೆಯಿಸಿಕೊಂಡಿದ್ದ ಬಿಪಿನ್ ರಾವತ್ ಅವರನ್ನು. ಅಲ್ಲಿಗೆ, ಸೇನಾ ಮುಖ್ಯಸ್ಥರ ನೇಮಕ ವಿಷಯದಲ್ಲಿ ಮತ್ತೊಮ್ಮೆ ಇತಿಹಾಸ ಮರುಕಳಿಸಿತು.

ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳ ‘ಗಡಿ ನಿಯಂತ್ರಣ’ ರೇಖೆಯಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದ ರಾವತ್ ಅವರೇ ಈಗಿನ ಪರಿಸ್ಥಿತಿಯಲ್ಲಿ ಸೇನೆ ಮುಖ್ಯಸ್ಥರಾಗುವುದು ಹೆಚ್ಚು ಸೂಕ್ತ ಕೂಡ ಆಗಿತ್ತು. ಬರೋಬ್ಬರಿ ಮೂರು ದಶಕಗಳು ಸೇನೆಯ ವಿವಿಧ ಶ್ರೇಣಿಗಳಲ್ಲಿ ಸೇವೆ ಸಲ್ಲಿಸಿರುವ ರಾವತ್ ಅವರು, ಚೀನಾ ಗಡಿಯ ಈಸ್ಟರ್ನ್ ಸೆಕ್ಟರ್, ಪುಲ್ವಾಮಾದಲ್ಲಿ ಕಾರ್ಯಾಚರಣೆ ಹೊಣೆ ಹೊತ್ತು ಯಶಸ್ವಿಯಾಗಿದ್ದರು. ಜತೆಗೆ ಈಶಾನ್ಯ ರಾಜ್ಯದಲ್ಲೂ ಕಾರ್ಯಾಚರಣೆ ಜವಾಬ್ದಾರಿಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕ, ಸೇನಾ ಪ್ರಧಾನ ಕಚೇರಿಯ ಸೇನಾ ಕಾರ್ಯಾಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಟ್ರ್ಯಾಕ್ ರೆಕಾರ್ಡ್‌ನಲ್ಲಿ ಹೆಚ್ಚು ಗಮನ ಸೆಳೆಯುವ ಸಂಗತಿ ಎಂದರೆ; ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಕಾಂಗೋ ದೇಶದಲ್ಲಿ ಅವರು ತೋರಿದ ಪ್ರದರ್ಶನ.  ಸರ್ಜಿಕಲ್ ದಾಳಿಗಳನ್ನು ಸಂಘಟಿಸುವುದರಲ್ಲಿ ರಾವತ್ ಅವರು ಎಕ್ಸ್‌ಫರ್ಟ್. ಯುದ್ಧ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಭಾರಿ ಅನುಭವವ ಹೊಂದಿರುವ  ಇವರು, ಪಾಕಿಸ್ತಾನ ಜತೆಗಿನ ಎಲ್‌ಒಸಿ(ಗಡಿ ನಿಯಂತ್ರಣಾ ರೇಖೆ) ಮತ್ತು ಚೀನಾ ಜತೆಗಿನ ಎಲ್‌ಎಸಿ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ದಾಳಿಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.  ಸೇನಾ ಮುಖ್ಯಸ್ಥರಾಗುವ ಮುಂಚೆ ರಾವತ್ ಅವರು ಸದರ್ನ್ ಕಮಾಂಡ್‌ನ ಮುಖ್ಯಸ್ಥರಾಗಿ ಪುಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಉತ್ತರಾಖಂಡ ರಾಜ್ಯದ ಪೌಡಿ ಗಡ್ವಾಲ್ ಜಿಲ್ಲೆಯವರಾದ ರಾವತ್ ಅವರು ಜನಿಸಿದ್ದು ಸೇನಾ ಹಿನ್ನೆಲೆಯ ಕುಟುಂಬದಲ್ಲಿ. ಇವರ ತಂದೆ ಲಚು ಸಿಂಗ್ ರಾವತ್ ಕೂಡ ಸೇನಾಧಿಕಾರಿ. ಡೆಹ್ರಾಡೂನ್‌ನ ಕ್ಯಾಂಬ್ರಿಯನ್ ಹಾಲ್ ಬೋರ್ಡಿಂಗ್ ಸ್ಕೂಲ್, ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್ ಮತ್ತು ಅಮೆರಿಕದ ವೆಲ್ಲಿಂಗ್ಟನ್ ಆ್ಯಂಡ್ ಹೈಯರ್ ಕಮಾಂಡ್‌ನಿಂದ ಪದವಿ ಪಡೆದಿರುವ ಬಿಪಿನ್ ಅವರು, ರಕ್ಷಣೆ ಸಂಬಂಧಿಯ ಅಧ್ಯಯನಕ್ಕಾಗಿ ಮದ್ರಾಸ್ ವಿವಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. ಮೀರತ್‌ನಲ್ಲಿರುವ ಚೌಧರಿ ಚರಣ್ ಸಿಂಗ್ ವಿವಿಯಲ್ಲಿ ಪಿಎಚ್‌ಡಿ ಕೂಡ ಮಾಡಿದ್ದಾರೆ.
1978 ಡಿಸೆಂಬರ್ 6ರಂದು 11ನೇ ಗೋರ್ಖಾ ರೈಫಲ್ಸ್‌ನ  5ನೇ ಬೆಟಾಲಿಯನ್ ಸೇರಿಕೊಳ್ಳುವ ಮೂಲಕ ಸೇನಾ ಸೇವೆಗೆ ಅಡಿಯಿಟ್ಟರು. ವಿಶೇಷ ಎಂದರೆ ಇದೇ ಯೂನಿಟ್‌ನಿಂದ ರಾವತ್ ಅವರ ತಂದೆ ಕೂಡ ಸೇವೆ ಆರಂಭಿಸಿದ್ದರು. ಇಲ್ಲಿಂದ ಶುರುವಾದ ಸೇನಾವೃತ್ತಿ ಕಳೆದ ಮೂರು ದಶಕದಲ್ಲಿ ನಾನಾ ಮಜಲುಗಳನ್ನು ಕಂಡಿದೆ. ಈ ಸುದೀರ್ಘ ಅವಧಿಯಲ್ಲಿ ಅನೇಕ ಸೇವಾಪದಕಗಳು ಅವರನ್ನು ಅರಸಿಕೊಂಡು ಬಂದಿವೆ. ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿದ್ದಾಗ ಪ್ರತಿಷ್ಠಿತ ‘ಸಾವರ್ಡ್ ಆಫ್ ಆನರ್’ ಗೌರವಕ್ಕೂ ಪಾತ್ರರಾಗಿದ್ದಾರೆ. ಇವರು ಖಡಕ್ ಸೇನಾಧಿಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅವರೊಬ್ಬ ಹೃದಯವಂತಿಕೆ ಮತ್ತು ನಾಗರಿಕ ಸಮಾಜದೊಂದಿಗೆ ಉತ್ತಮ ಬಾಂಧವ್ಯದ ಮೂಲಕ ಸಮತೋಲನ ಕಾಪಾಡಿಕೊಳ್ಳುವ ವ್ಯಕ್ತಿತ್ವ ಹೊಂದಿದ್ದಾರೆಂಬುದು ಬಹಳ ಜನರಿಗೆ ಗೊತ್ತಿಲ್ಲ.
ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವುದು ‘ಡರ್ಟಿ ವಾರ್’ ಎಂದು ನಿರ್ಭಿಡೆಯಾಗಿ ಹೇಳುವ ರಾವತ್ ಅವರು, ಭಯೋತ್ಪಾದನಾ ವಿರೋಧಿ ಸೇನಾ ಕಾರ್ಯಾಚರಣೆಗೆ ತಡೆಯೊಡ್ಡುವವರನ್ನು ಉಗ್ರರಿಗಾಗಿ ಕೆಲಸ ಮಾಡುತ್ತಿರುವವರೆಂದು ಪರಿಗಣಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಕಲ್ಲುತೊರಾಟಗಾರರಿಗೆ ಎಚ್ಚರಿಸಿದ್ದರು. ಅವರ ಈ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಜನರ ವಿಶ್ವಾಸ ಗಳಿಸುವ ಮೂಲಕ ಸೇನೆ ತನ್ನ ಕಾರ್ಯಾಚರಣೆ ಮಾಡಬೇಕೇ ಹೊರತು ಅವರನ್ನು ಹೆದರಿಸಿ ಅಲ್ಲ ಎಂಬ ಟೀಕೆಗಳು ಕೇಳಿ ಬಂದಿದ್ದವು. ಇದಾವುದಕ್ಕೂ ಅವರು ತಲೆಕೆಡಿಸಿಕೊಂಡಿಲ್ಲ. ಕಾಶ್ಮೀರದಲ್ಲಿ ನಡೆಯುತ್ತಿರುವ ‘ಕೊಳಕು ಯುದ್ಧ’ವನ್ನು ವಿನೂತನ ಕ್ರಮಗಳಿಂದಲೇ ಎದುರಿಸಬೇಕೆಂಬ ಅಚಲ ನಂಬಿಕೆ ಅವರದ್ದು. ಏತನ್ಮಧ್ಯೆ, ಕಾಶ್ಮೀರ ಕಣಿವೆಗೆ ಭೇಟಿ ನೀಡಿ, ಅಲ್ಲಿನ ನೈಜ ಸ್ಥಿತಿಯನ್ನು ಅವಲೋಕಿಸಿದ್ದಾರೆ.
ರಾವತ್ ಅವರು ಯೋಧರ ಹಿತಾಸಕ್ತಿ ಕಾಪಾಡುವಲ್ಲಿಯೂ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದು, ಸೇನಾ ವೇತನ ಆಯೋಗ ಮತ್ತು ಸರಕಾರದ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ, ಸೇನೆಯಲ್ಲಿ ಬ್ರಿಟಿಷ್ ಕಾಲದಿಂದಲೂ ಚಾಲ್ತಿಯಲ್ಲಿರುವ ‘ಸಹಾಯಕ್’ ಪದ್ಧತಿ ಕೊನೆಗಾಣಿಸುವತ್ತ ಮುಂದಾಗಿದ್ದಾರೆ. ನೆನಪಿರಲಿ, ಈ ಸಹಾಯಕ್ ಪದ್ಧತಿ ಹಿಂತೆಗೆಯುವ ಬಗ್ಗೆ ಸೇನೆಯೊಳಗೇ ಭಾರೀ ಅಸಮಾಧಾನವಿದೆ. ಹೀಗಿದ್ದಾಗ್ಯೂ ಅವರು ಈ ಕೆಲಸಕ್ಕೆ ಮುಂದಾಗಿದ್ದಾರೆ. ಈ ಎರಡು ಕ್ರಮಗಳು ಬಿಪಿನ್ ಅವರಲ್ಲಿರುವ ಮಾನವೀಯ ಗುಣಗಳಿಗೆ ಸ್ಪಷ್ಟ ನಿದರ್ಶನವಾಗಿವೆ.
ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡು ಈಗ ಆರು ತಿಂಗಳಷ್ಟಾಗಿದೆ. ಈಗಾಗಲೇ ರಾವತ್ ಕಾರ್ಯವೈಖರಿಗೆ ಎಲ್ಲರಿಗೂ ಗೊತ್ತಾಗಿದೆ. ಆದರೆ, ಅವರ ಮುಂದೆ ಸವಾಲುಗಳ ಸಾಲೇ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರ ಕಣಿವೆಯು ಅವರ ಜ್ಞಾನ ಮತ್ತು ಅನುಭವವನ್ನು ಒರೆಗೆ ಹಚ್ಚಲಿದೆ. ಈ ಕಣಿವೆ ರಾಜ್ಯದಲ್ಲಿ 90 ದಶಕದ ಪರಿಸ್ಥಿತಿ ಮತ್ತೆ ಮರುಕಳುಹಿಸಿದೆ. ಹಲವು ಆಯಾಮಗಳನ್ನು ಹೊಂದಿರುವ ಈ ಸಮಸ್ಯೆಯನ್ನು ಕೇವಲ ಬಂದೂಕಿನಿಂದ ಮಾತ್ರ ನಿರ್ವಹಿಸಲಾಗದು ಎಂಬ ಸ್ಪಷ್ಟ ಅರಿವು ಅವರಿಗೂ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಪರಿಹಾರ ಬಿಟ್ಟು ಬೇರೆ ದಾರಿಗಳಿಲ್ಲ. ‘ಸದ್ಯದ ಸ್ಥಿತಿಗೆ ಸೂಕ್ತ ವ್ಯಕ್ತಿ’ ಎಂಬ ಹಣೆಪಟ್ಟಿಯೊಂದಿಗೆ ಸೇನಾ ಮುಖ್ಯಸ್ಥನ ಜವಾಬ್ದಾರಿ ನಿರ್ವಹಿಸುತ್ತಿರುವ ರಾವತ್ ವಿಶಿಷ್ಟ ಸೇನಾ ಮುಖ್ಯಸ್ಥರಾಗಿ ಗುರುತಿಸಿಕೊಳ್ಳುವ ಎಲ್ಲ ಲಕ್ಷಣಗಳಿವೆ.

ಈ ಲೇಖನ ವಿಜಯ ಕರ್ನಾಟಕದ ಜೂನ್ 4, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಸೋಮವಾರ, ಮೇ 8, 2017

ಸಂಜೆಬೆಳಕಿನಲ್ಲೊಂದು ವಾಸಿಯಾಗದ ಅನುರಾಗ!

ಹುಡುಗನೊಬ್ಬನ ಗಜಲ್‌ಗಳು:  ಚಟ ಚಕ್ರವರ್ತಿ ಜತೆ ಮದ್ವಿ ಮಾಡಿದ್ರು..ಅದರ ಫಲ ಅಕೀ ಊಣ್ಣಾಕತ್ತಾಳು...


- ಪ್ರದ್ಯುಮ್ನ
ಆ ಊರೇನೂ ಅಂಥ ದೊಡ್ಡದಲ್ಲ. ಹಾಗಂತ ತೀರಾ ಕುಗ್ರಾಮವಂತೂ ಅಲ್ಲವೇ ಅಲ್ಲ. ನಗರಗಳ ಜೀವನ ಶೈಲಿ ಹಳ್ಳಿಗಳ ಮೇಲೂ ಬಿದ್ದು, ಬದಲಾಗುವಂಥ ಸಂಕ್ರಮಣದ ಕಾಲ. ಊರಲ್ಲಿ ತುಸು ಆಧುನಿಕತೆ ಕಣ್ಣಿಗೆ ಕಾಣುವಷ್ಟು ಇತ್ತು. ಆ ಊರಿನ ಹೊರಗೆ ಇರುವ ಸರ
ಕಾರಿ ಶಾಲೆ ಮುಂದೆ ಹಾದು ಹೋಗುವ ಟಾರ್ ರೋಡ್‌ನಲ್ಲಿ ನಾಲ್ಕಾರು ಅಂಗಡಿಗಳು, ಆ ಪೈಕಿ ಈತ ಕೆಲಸ ಮಾಡುವ ಗ್ಯಾರೇಜು ಒಂದು. ಮುಂಜಾನೆ ಕಾಲೇಜಿಗೆ ಹೋಗಿ, ಮಧ್ಯಾಹ್ನದ ನಂತರ ಆತ ಅಲ್ಲಿಯ ಕೆಲಸ ಮಾಡುತ್ತಿದ್ದ. ಗ್ರೀಸು, ಆಯಿಲ್ ಮೆತ್ತಿದ ಡ್ರೆಸ್ ಹಾಕ್ಕೊಂಡು ಮೋಟರ್‌ಸೈಕಲ್ ರಿಪೇರಿಗೆ ಕುಳಿತನೆಂದರೆ, ಯಾವುದೂ ಹೊರಗಿನ ಜಗತ್ತಿನ ಬಗ್ಗೆ ಅರಿವೇ ಇರುತ್ತಿರಲಿಲ್ಲ. ಇಂಥದ್ದೇ ತಲ್ಲೀನತೆ ಪಾಠ ಕೇಳುವಾಗಲೂ ಇರ್ತಿತ್ತು ಎಂದು ಬೇರೆ ಹೇಳಬೇಕಿಲ್ಲ.
ಸೋಮವಾರ ಬಂತೆಂದರೆ ಈತ ಕೆಲಸ ಮಾಡುವ ಗ್ಯಾರೇಜ್ ಮುಂದಿರುವ ರಸ್ತೆಗೆ ಕಳೆ ಕಟ್ಟುತ್ತಿತ್ತು. ಗ್ಯಾರೇಜ್‌ನಿಂದ ಸ್ವಲ್ಪ ದೂರದಲ್ಲಿ ಊರ ದೇವರ ಭವ್ಯ ದೇವಸ್ಥಾನವಿತ್ತು. ಒಂದು ಕಡೆಯಿಂದ ಹೊಲಗಳಿಗೆ ಹೋದವರು, ತಮ್ಮ ದನಕರುಗಳನ್ನು ಹೊಡ್ಕೊಂಡು ಬರೋದು ನೋಡುತ್ತಿದ್ದರೆ, ಅದು ಪೇಂಟಿಂಗ್ ರೀತಿಯಲ್ಲಿ ಕಾಣಿಸುತ್ತಿತ್ತು. ಯಾಕೆಂದರೆ, ಪಡುವಣ ದಿಕ್ಕಿನಲ್ಲಿ ಸಂಜೆಯ ಸೂರ್ಯ ತನ್ನ ಮೈತುಂಬ ಬಂಗಾರದ ಬಣ್ಣ ಮೆತ್ತಿಕೊಳ್ಳುತ್ತಿದ್ದ. ಅದರ ಪ್ರತಿಫಲನ ಈ ರಸ್ತೆಯ ಮೇಲೂ ಚೆಲ್ಲುತ್ತಿತ್ತು. ಆ ಕೆಂಬೆಳಕಲ್ಲಿ ಎಲ್ಲವೂ ಆಕರ್ಷಕ, ಚಿತ್ತಾರ. ಇನ್ನು ಊರೊಳಗಿನಿಂದ ಮಹಿಳೆಯರು, ಮಕ್ಕಳು ಮತ್ತು ಯುವತಿಯರು ಆ ಊರ ದೇವರ ದರ್ಶನಕ್ಕೆ ಹೋಗುತ್ತಿದ್ದರು. ಅವರೂ ಅದೇ ರಸ್ತೆಯ ಮೂಲಕ ಹೋಗಬೇಕು. ಸೂರ್ಯನಿಗೆ ಎದುರಾಗಿ ಹೋಗುವ ಪ್ರತಿ ಹೆಂಗಳೆಯರ ಮುಖ ಬಂಗಾರ ವರ್ಣದಲ್ಲಿ ಅದ್ದಿ ತೆಗೆದಂತೆ ಕಾಣುತ್ತಿತ್ತು.
ಇಂಥ ಸಂಜೆಗಳನ್ನು ಆತ ಬೇಕಾದಷ್ಟು ನೋಡಿದ್ದ. ತನ್ನದೇ ಆದ ಲೋಕದಲ್ಲಿ ತೇಲುತ್ತಿದ್ದವನಿಗೆ ಈ ಸಂಜೆಗಳು ಅನೇಕ ಬಾರಿ ಆತನಲ್ಲಿ ಹೊಸ ಹೊಸ ಕನಸುಗಳನ್ನು ಹುಟ್ಟುಹಾಕಿವೆ. ಹಗಲುಗನಸು ಕಾಣುವುದು ಸಾಮಾನ್ಯ. ಆದರೆ, ಈತ ಸಂಜೆಗನಸು ಕಾಣುತ್ತಿದ್ದ. ಕೈಯಲ್ಲಿ ಸ್ಪ್ಯಾನರ್ ಹಿಡಿದುಕೊಂಡೇ ಬೈಕ್‌ನ ಎಂಜಿನೊಳಗೇ ಮುಖ ತೂರಿಸಿಕೊಂಡು ಹಾಗೆಯೇ ನಿಶ್ಚಲನಾಗಿದ್ದುಂಟು. ಆತನ ಮೇಸ್ತ್ರಿ(ಮೆಕ್ಯಾನಿಕ್), ‘‘ಏ... ಬಾರಾ ನಂಬರ್ ಪಾನಾ ಕೊಡೊ,’’ ಅಂದಾಗಲೇ ಆತ ತನ್ನ ಕಲ್ಪನಾಲೋಕದಿಂದ ವಾಸ್ತವಕ್ಕೆ ಮರಳುತ್ತಿದ್ದ. ಹೀಗೆ ಅದೆಷ್ಟೋ ಬಾರಿಯಾಗಿದೆಯೋ?
ಆ ಸಂಜೆಯು ಹಾಗೇ ಇತ್ತು. ಅಂದು ಕೂಡ ಸೋಮವಾರ. ಒಂದೆಡೆ ಹೊಲದಿಂದ ಬರುವವರ ಸಾಲು, ಮತ್ತೊಂದೆಡೆ ದೇವಸ್ಥಾನಕ್ಕೆ ಹೋಗುವವರಿಂದ ಇಡೀ ರಸ್ತೆ ತುಂಬಿಕೊಂಡಿತ್ತು. ಯಾವುದೋ ಬೈಕ್‌ನ ಹಿಂಬದಿಯ ಗಾಲಿ ಬಿಚ್ಚುತ್ತಿದ್ದ ಈತನಿಗೆ ಕಂಡಳು ಆಕೆ. ಆ ಇಳಿಸಂಜೆಯ ಸೂರ್ಯನ ಬಂಗಾರದ ಕಿರಣಗಳು ಆಕೆಯ ಮುಖದ ಮೇಲೆ  ಬಿದ್ದಿದ್ದರಿಂದ ಅವಳ ಚೆಲುವು ದುಪ್ಪಟ್ಟಾಗಿತ್ತು. ನಯವಾಗಿ ಬೀಸುತ್ತಿದ್ದ ಗಾಳಿ ಆಕೆಯ ಮುಖದ ಮೇಲೆ ಸುಳಿದು ಹೋಗುತ್ತಿರುವಾಗಲೇ, ಕೂದಲುಗಳು ಆ ಗಾಳಿಯ ಆಜ್ಞಾನುವರ್ತಿಯಂತೆ ನರ್ತಿಸುತ್ತಿದ್ದವು. ಗಾಲಿಯ ಸಂದಿಯಿಂದಲೇ ಆಕೆಯನ್ನು ನೋಡುತ್ತಿದ್ದ ಈತನನ್ನು, ಆಕೆಯು ತನ್ನ ಮುಖದ ಮೇಲೆ ಬೀಳುತ್ತಿದ್ದ ಕೂದಲನ್ನು ಸರಿಸುವ ಗಳಿಗೆಯಲ್ಲಿ ನೋಡಿದಳು. ಒಂದು ಕ್ಷಣ ಇಬ್ಬರ ಕಣ್ಣುಗಳು ಸಂಧಿಸಿದವು. ಅವಳೇನೋ ಮುಂದೆ ಹೋದಳು. ಆದರೆ, ಈತನಿಗೆ ಆ ಒಂದು ಕ್ಷಣ ಇಡೀ ಜಗತ್ತೇ ಸ್ತಬ್ಧವಾದ ರೀತಿ. ಕಾಲ ತನ್ನ ಕಾಲುಮುರಿದುಕೊಂಡು ಬಿದ್ದ ಭಾವ. ‘‘ಮುಗೀತೇನಪಾ ಗಾಲಿ ಬಿಚ್ಚುದು,’’ ಎಂದು ಮೇಸ್ತ್ರಿ ಕೂಗಿದಾಗಲೇ ಇಡೀ ಜಗತ್ತೇ ರಿಲಾಕ್ಸ್ ಆಗಿದ್ದು.  ‘‘ಮುಗೀತು... ಮುಗೀತು...’’ ಎನ್ನುತ್ತಲೇ ಅವಳು ಹೋದ ದಿಕ್ಕಿನತ್ತ ನೋಡುತ್ತಿದ್ದವನ ಮುಖದ ಮೇಲಿದ್ದ ಗ್ರೀಸ್‌ಗೆ ನೊಣವೊಂದು ಸಿಕ್ಕಿ ಹಾಕಿಕೊಂಡು, ಪಟಪಟನೆ ತನ್ನ ರೆಕ್ಕೆ ಬಡಿಯುತ್ತಿತ್ತು. ಆ ಗೋಧೂಳಿಯ ಸಮಯದಲ್ಲಿ ಈ ನೊಣದ ವಿಚಾರ ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ, ಗೊತ್ತಾಗಿದ್ದರೆ ಗೇಲಿ ಮಾಡುತ್ತಿದ್ದರೇನೋ!
ಬೇಡ ಬೇಡ ಎಂದರೂ ಅವಳ ಮುಖ ಈತನ ಮನಪರದೆಯ ಮೇಲೆ ಬರುತ್ತಲೇ ಇದೆ. ರಾತ್ರಿ ಪೂರ್ತಿ ನಿದ್ದೆಯೂ ಇಲ್ಲ. ಬೆಳಗ್ಗೆ ಎದ್ದು ಕಾಲೇಜಿಗೆ ಹೋಗುತ್ತಿರುವಾಗಲೇ ಆತನಿಗೆ ಗೊತ್ತಾಗಿದ್ದು, ಕಣ್ಣುಗಳೆರಡು ಕುಡಿದವರ ರೀತಿ ಕೆಂಪಾಗಿವೆ ಎಂಬುದು. ಈ ರೀತಿ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಆಗಿದೆ. ಆದರೆ, ಆಗ ತಡರಾತ್ರಿವರೆಗೂ ಕೆಲಸ ಮಾಡಿದ್ದರ ಪರಿಣಾಮವದು. ಆದರೆ ಈಗಿನದ್ದೇ ಬೇರೆ. ನಿನ್ನೆ ನೋಡಿದ ಮುಖದ ಗುಂಗಿನಲ್ಲೇ ಕಾಲೇಜು ಗೇಟ್ ದಾಟಿದವನ ಪಕ್ಕದಲ್ಲಿ ಬರುತ್ತಿದ್ದವಳು... ಅವಳೇ! ಈತನಿಗೆ ಕನಸೋ ನನಸೋ ನಂಬಲಾಗುತ್ತಿಲ್ಲ. ಆದರೂ ಸಾವರಿಸಿಕೊಂಡು ಹೋದವನಿಗೆ ಗೊತ್ತಾಗಿದ್ದು ಆಕೆಯ ಹೆಸರು ಮಲ್ಲಿಗೆ. ಕಾಲೇಜಿನಲ್ಲಿ ಅವನ ಜ್ಯೂನಿಯರ್.
ಇನ್ನು ಮುಂದೆ ಏನು ಹೇಳುವುದು? ಎಲ್ಲರ ಕಾಲೇಜ್ ಲೈಫ್‌ನಲ್ಲಾಗುವ ರೀತಿಯಲ್ಲೇ ಈತನೂ ಪ್ರೀತಿಯ ಬಲೆಯಲ್ಲಿ ಬಿದ್ದ. ಮೊದ ಮೊದಲು ಒನ್ ವೇ ಇದ್ದ ಪ್ರೀತಿ ಕಾಲೇಜು ಮುಗಿಯುವ ಹೊತ್ತಿಗೆ ಟು ವೇ ಆಗಿ ಬದಲಾಗಿತ್ತು. ಆದರೆ, ಬಹುತೇಕರ ಜೀವನದಲ್ಲಾಗುವಂತೆ ಈತನ ಪ್ರೀತಿಯೂ ಮದುವೆ ಎಂಬ ಹೊಸ ಆರಂಭಕ್ಕೆ ನಾಂದಿಯಾಗಲಿಲ್ಲ.
್ಡ್ಡ್ಡ
ಈಗ ಸುಮಾರು ಹತ್ತನ್ನೆರಡು ವರ್ಷಗಳು ಸರಿದು ಹೋಗಿವೆ. ಆ ಊರು ಇದೀಗ ಪಟ್ಟಣವೆಂಬ ಬೋರ್ಡನ್ನು ತನ್ನ ಹಣೆಗೆ ಅಂಟಿಸಿಕೊಂಡಿದೆ. ಆ ರಸ್ತೆ ಈಗಲೂ ಇದೆ. ನಾಲ್ಕಾರು ಇದ್ದ ಅಂಗಡಿಗಳು ಇದೀಗ ರಸ್ತೆಯ ಎರಡೂ ಬದಿಯಲ್ಲಿ ತುಂಬಿವೆ. ಅದರ ಮಧ್ಯೆಯೇ ಈತ ಕೆಲಸ ಮಾಡುತ್ತಿದ್ದ ಆ ಸಣ್ಣ ಗ್ಯಾರೇಜು ಈಗಲೂ ಇದೆ. ಅದೇ ಮೇಸ್ತ್ರಿ, ಮುರಿದ ಕುರ್ಚಿಯ ಮೇಲೆ ಯಾವುದಾದರೂ ಮೋಟರ್ ಸೈಕಲ್ ರಿಪೇರಿಗೆ ಬರಬಹುದೆಂದು ಕಾಯುತ್ತಿರುತ್ತಾನೆ. ಅಂದು ಆ ರಸ್ತೆಗಿದ್ದ ಸಾವಧಾನದ ಶ್ರೀಮಂತಿಕೆ, ತಂಗಾಳಿಯ ಸೋಕುವಿಕೆ ಇಂದಿಲ್ಲ. ರಸ್ತೆಗಳ ಮೇಲೆ ಬರ್.. ಬರ್.... ಎಂದು ವಾಹನಗಳು ಓಡುತ್ತಿವೆ. ಹೊಲದಿಂದ ಬರುವವರು ಇದೀಗ ಮೋಟರ್ ಸೈಕಲ್ ಏರಿದ್ದಾರೆ. ಇತ್ತ ಆ ದೇವಸ್ಥಾನಕ್ಕೆ ಹೋಗುವವರು ಕಾರು, ಜೀಪುಗಳ ಮೊರೆ ಹೋಗಿದ್ದರೆ, ಯುವತಿಯರು ಸ್ಕೂಟಿ ಸಂಗ ಮಾಡಿದ್ದಾರೆ. ಎಲ್ಲವೂ ಬದಲಾಗಿದೆ. ಎಲ್ಲೆಲ್ಲೂ ಧಾವಂತ ಎಂದು ಯೋಚಿಸುತ್ತ ಅದೇ ಗ್ಯಾರೇಜಿನಲ್ಲಿ ಕುಳಿತಿದ್ದ ಈತನನ್ನು, ರಸ್ತೆಯ ಬದಿಯ ಆಚೆ ನಡೆದುಕೊಂಡು ಹೋಗುತ್ತಿದ್ದವಳ ಕಣ್ಣುಗಳು ನೋಡುತ್ತಿದ್ದವು. ಅಂದು-ಇಂದಿನ ಪರಿಸ್ಥಿತಿ ತುಲನೆಯಲ್ಲಿದ್ದ ಈತ ಆ ನೋಟವನ್ನೇನೂ ಗಮನಿಸಲಿಲ್ಲ. ಆದರೆ, ಸುಪ್ತ ಮನಸ್ಸಿನೊಳಗಿನ ಆಜ್ಞೆ ಎಂಬಂತೆ ಸಡನ್ನಾಗಿ ಆಕೆಯನ್ನು ದಿಟ್ಟಿಸಿ ನೋಡಿದ. ಹೌದು.. ಆಕೆಯೇ. ಮಲ್ಲಿಗೆ. ಏನಿದು ಇಷ್ಟೊಂದು ಸೊರಗೋಗಿದ್ದಾಳೆ ಎನ್ನುತ್ತಿರುವಾಗಲೇ ಅವಳು ಇವನನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ ಮರೆಯಾದಳು.
ಇದನ್ನು ಗಮನಿಸುತ್ತಿದ್ದ ಆ ಮೇಸ್ತ್ರಿ, ‘‘ಯಾಕಪಾ ಹಿಂದಿದ್ದೆಲ್ಲ ನೆನಪಾಯ್ತೇನು?’’ ಎಂದು ಅವನ ಪ್ರತಿಕ್ರಿಯೆಗೂ ಕಾಯದೆ, ‘‘ನೀ ಏನಪಾ ಬೆಂಗ್ಳೂರು ಸೇರಿಕೊಂಡಿ. ನೀ ಹ್ವಾದ ಎರಡ ವರ್ಷಕ್ಕ ಮದ್ವೆ ಮಾಡಿದರು. ಆದ್ರ ಆ ಹುಡುಗ ಸರಿ ಇರ್ಲಿಲ್ಲ. ಅವಂಗ ಎಲ್ಲಾ ಚಟಾ ಇದ್ವು. ಚಟ ಚಕ್ರವರ್ತಿ ಅಂತ ಕರೀತಿದ್ರು ಮಂದಿ. ಎಲ್ಲಾ ಗೊತ್ತಿದ್ದು ಆಕಿ ಅಪ್ಪ ಮದ್ವಿ ಮಾಡಿದ. ಆದ್ರ ಈಗ ನೋಡು ಅದರ ಫಲ ಅಕೀ ಉಣ್ಣಾಕತ್ತಾಳು. ಎರಡ ವರಸದ ಹಿಂದ ಅಂವಾ ಸತ್ಹೋದ,’’ ಎಂದು ಹೇಳಿ ಅಂಗಡಿಯೊಳಗೆ ಸ್ಪ್ಯಾನರ್ ತರಲು ಹೋದ. ಈ ಸುದ್ದಿ ಕೇಳಿದ ಅವನಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಆಕೆಯ ಗಂಡ ಯಾಕೆ ಸತ್ತ? ಏನಾಗಿತ್ತು? ಎಂದು ಕೇಳಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಮೋಟರ್ ಸೈಕಲ್ ತಳ್ಳುತ್ತಾ ಒಬ್ಬ ಬಂದು, ‘‘ಮೇಸ್ತ್ರೀ ಗಾಡಿ ಸುರುವಾಗವಲ್ತು ನೋಡು,’’ ಎಂದ. ಮೇಸ್ತ್ರಿ ಗಾಡಿ ರಿಪೇರಿಯಲ್ಲಿ ಮಗ್ನನಾದ.
ಇತ್ತ ರಸ್ತೆಯಲ್ಲಿ ಧಾವಂತದ ಪರಾಕಾಷ್ಠೆ ಇತ್ತು. ಗದ್ದಲ ತುಂಬಿತ್ತು. ಪಾಂವ್... ಪಾಂವ್... ಎಂದು ಚಿತ್ರ ವಿಚಿತ್ರ ಹಾರ್ನ್ ಬಾರಿಸುತ್ತ ಹೋಗುವ ಬಸ್ಸು, ಕಾರುಗಳಿಗೇನೂ ಕೊರತೆ ಇರಲಿಲ್ಲ. ಆದರೆ, ಅವನ ಮನಸ್ಸಿನೊಳಗೆ ಎಲ್ಲವೂ ಸ್ತಬ್ಧ, ನಿಶ್ಶಬ್ಧ. ಅವಳನ್ನು ನೋಡಿದ ಮೇಲೆ; ಬೇಸಿಗೆಯಲ್ಲಿ  ಅಡ್ಡ ಮಳೆ ಜೋರಾಗಿ ಸುರಿದು ಹೋದಂಥ ಭಾವ. ಮಳೆಯಾಗಿದ್ದು ನಿಜ. ಆದರೆ, ನೆಲ ಆ ಮಳೆ ನೀರನ್ನೆಲ್ಲ ಕುಡಿದು, ಮಳೆಯಾದ ಬಗ್ಗೆ ಸಾಕ್ಷಿ ಕೇಳುವಂತಿತ್ತು ಆತನ ಮನಸ್ಥಿತಿ. ಅಷ್ಟರಲ್ಲಿ, ಆ ಮೋಟರ್ ಸೈಕಲ್ ಬರ್ರ ಅಂತ ಶುರುವಾಯ್ತು. ಮೇಸ್ತ್ರಿ ತನ್ನ ಕೈಯೊಳಗಿದ್ದ ಸ್ಪ್ಯಾನರ್ ಒಳಗಿಟ್ಟು ಬಂದು ಕುಳಿತ.
ಇತ್ತ ಪಡುವಣದಲ್ಲಿ ಸೂರ್ಯ, ಆ ಎತ್ತರದ ಬಿಲ್ಡಿಂಗ್‌ನಿಂದ ಇವನತ್ತ ಇಣುಕಿದಂತಾಯಿತು. ನೋಡಿದರೆ, ಆತನ ಮೈ ಬಣ್ಣ ಕೆಂಪಿಲ್ಲ, ಬರಬರುತ್ತಾ ಕಪ್ಪಾಗುತ್ತಿದೆ. ಈತನ ಮೇಲೆ ಅಗಾಧವಾದ ಸಿಟ್ಟು ಎಂಬಂತೆ ಆತ ತನ್ನ ದಿನದ ಕೆಲಸ ಮುಗಿಸಿ ಭೂಗರ್ಭ ಸೇರಿಬಿಟ್ಟ. ಇತ್ತ ರಸ್ತೆ ಮೇಲೆ ಬೀದಿ ದೀಪಗಳ ಬೆಳಕಿನ ಆಟ ಶುರುವಾಗಿತ್ತು. ಭಾರವಾದ ದನಿಯಂದಲೇ ಕೇಳಿದ, ‘‘ಆಕೆಯ ಗಂಡನಿಗೆ ಏನಾಗಿತ್ತು?’’. ಇದೇ ಪ್ರಶ್ನೆಗೆ ಕಾಯುತ್ತಿದ್ದೆ ಎನ್ನುವಂತೆ ಮೇಸ್ತ್ರಿ, ಒಂದು ಗುಕ್ಕಿನಲ್ಲಿ, ‘‘ಅದರ ಹೆಸ್ರ ಹೇಳಾಕ್ ಬರುದಿಲ್ಲ ನಂಗ. ಆದರ, ಅದೇನೋ ಚಲೋ ಆಗಲಾರ್ದು ಜಡ್ಡಂತ ನೋಡ. ಅದ ಈಕಿಗೂ ಬಂದೈತಿ ಅಂತಾರು ಮಂದಿ,’’ ಎಂದು ಹೇಳಿ ಸುಮ್ಮನಾದ.
‘ವಾಸಿಯಾಗದ ಕಾಯಿಲೆ ಯಾವುದು’ ಎಂದು ಯೋಚಿಸುತ್ತಲೇ ಆತನಿಗೆ ಉತ್ತರ ಗೊತ್ತಾಗಿತ್ತು. ಈಗ ರಸ್ತೆ ಆತನಿಗೆ ಬೆಂಗಾಡಿನ ಕಾಲು ದಾರಿಯಂತೆ ಭಾಸವಾಗುತ್ತಿದೆ. ಮತ್ತೆ ಸೂರ್ಯ ಹುಟ್ಟಲಾರ ಅನಿಸುತ್ತಿದೆ.

This article was published in VijayKarnataka, on 08 May 2017 edition

ಸೋಮವಾರ, ಏಪ್ರಿಲ್ 10, 2017

ಅಸಾದ್: ಯಮದೂತ ‘ಡಾಕ್ಟರ್’ ಪ್ರೆಸಿಡೆಂಟ್!

- ಮಲ್ಲಿಕಾರ್ಜುನ ತಿಪ್ಪಾರ
ವೈರಿಗಳನ್ನು ಮತ್ತು ಉಗ್ರರನ್ನು ಮಟ್ಟ ಹಾಕುವ ನೆಪದಲ್ಲಿ ತನ್ನದೇ ದೇಶದ ಮುಗ್ಧರ ಪ್ರಾಣ ತೆಗೆಯುವ ಹಂತಕ್ಕೆ ಯಾವ ದೇಶದ ನಾಯಕನೂ ಹೋಗಲಾರ. ಆದರೆ, ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸಾದ್ ಇಂಥ ಹೇಯ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇಡ್ಲಿಬ್ ಪ್ರಾಂತದ ಖಾನ್ ಶೇಕುನ್ ನಗರದ ಮೇಲೆ ಕೆಮಿಕಲ್ ಬಾಂಬ್ ದಾಳಿ ನಡೆಸಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರ ಪ್ರಾಣ ಹರಣ ಮಾಡಿದ್ದಾರೆ.
ಅಸಾದ್‌ರ ಈ ದುಸ್ಸಾಹಸಕ್ಕೆ ಇಡೀ ಅಂತಾರಾಷ್ಟ್ರೀಯ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ. ಮಡಿದ ಜೀವಗಳಿಗೆ ಮಮ್ಮಲ ಮರಗುತ್ತಿದೆ. ವಿಷಾನಿಲಕ್ಕೆ ತುತ್ತಾದವರ ಸಂಖ್ಯೆ 80ಕ್ಕೂ ಹೆಚ್ಚು. ಈ ಪೈಕಿ 33 ಮಕ್ಕಳಿದ್ದರೆ, 13 ಮಹಿಳೆಯರು. ಈ ಕೃತ್ಯಕ್ಕೆ ಅಸಾದ್ ಅವರೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್, ಈಗಾಗಲೇ ಸಿರಿಯಾದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದಾರೆ. ಅಸಾದ್ ವಿರುದ್ಧ ಭಾರೀ ಪ್ರಮಾಣದಲ್ಲಿ ಕೈಗೊಳ್ಳುತ್ತಿರುವ ಅಮೆರಿಕದ ಮೊದಲ ಸೇನಾ ಕಾರ್ಯಾಚರಣೆ ಇದು. ಆದರೆ, ಅಸಾದ್‌ನ ಪರಮಮಿತ್ರ ರಾಷ್ಟ್ರವಾಗಿರುವ ರಷ್ಯಾ ಬೇರೆಯದೇ ಕತೆ ಹೇಳುತ್ತಿದೆ. ಆದರೆ, ಅದರ ಕತೆಯನ್ನು ನಂಬುವ ಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಸಮುದಾಯವಿಲ್ಲ. ಇದೆಲ್ಲವೂ ಅಂತಾರಾಷ್ಟ್ರೀಯ ರಾಜಕೀಯದ ಪಟ್ಟುಗಳು. ತಮ್ಮ ಹಿತಾಸಕ್ತಿಗೋಸ್ಕರ ದಾಳಗಳನ್ನು ಎಸೆಯುವ ‘ಸೂಪರ್ ಪವರ್ ರಾಷ್ಟ್ರ’ಗಳು, ಮುಗ್ಧರ ಜೀವಕ್ಕೆ ಬೆಲೆ ನೀಡುವುದಿಲ್ಲ. ಅಸಾದ್‌ನಂಥ ನಾಯಕರು ಇಂಥ ರಾಜಕಾರಣದ ಕೈಗೊಂಬೆಯಾಗಿದ್ದುಕೊಂಡು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವವರನ್ನು ಹಣಿಯುವುದು ಯಾವುದೇ ಸರಕಾರದ ಕರ್ತವ್ಯ. ಅದರಲ್ಲೇನೂ ತಪ್ಪಿಲ್ಲ. ಆದರೆ, ಅದಕ್ಕಾಗಿ ತನ್ನದೇ ಮುಗ್ಧ ಜನರನ್ನು ಬಲಿ ಕೊಡುವುದು ಎಷ್ಟು ಸರಿ ಎಂಬ ನೈತಿಕ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.
ಮನುಷ್ಯನೊಳಗೆ ಹಿಂಸೆ ಅಂತರ್ಗತವಾಗಿರುತ್ತದೆ. ಅದು ಯಾವುದೇ ಕ್ಷಣದಲ್ಲಿ ಆಸ್ಫೋಟಗೊಳ್ಳಬಹುದು ಎಂಬುದಕ್ಕೆ ಸಿರಿಯಾ ಅಧ್ಯಕ್ಷ ಅಸ್ಸಾದ್ ಅವರು ಅತ್ಯುತ್ತಮ ಉದಾಹರಣೆ. ಅಮಾಯಕರಂತೆ ಕಾಣುವ ಅಸ್ಸಾದ್ ಆಂತರ್ಯದಲ್ಲಿ ಕ್ರೂರ ಸರ್ವಾಧಿಕಾರಿ. ಮುಗ್ಧರ ಮೇಲೆ ನಡೆಸಿರುವ ಘೋರ ಅಪರಾಧಗಳು ಇದನ್ನು ಪುಷ್ಟೀಕರಿಸುತ್ತವೆ. ಹಾಗೆ ನೋಡಿದರೆ, ಸಿರಿಯಾದಲ್ಲಿ ವಿಷಾನಿಲ ದಾಳಿ ನಡೆದಿರುವುದು ಇದೇ ಮೊದಲಲ್ಲ. 2013ರಲ್ಲೂ ಇಂಥ ದಾಳಿ ನಡೆದಿತ್ತು. ಆಗ 1000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಆಗಲೇ ಅಂತಾರಾಷ್ಟ್ರೀಯ ಸಮುದಾಯ ಕಠಿಣ ನಿರ್ಧಾರ ಕೈಗೊಂಡಿದ್ದರೆ ಖಾನ್ ಶೇಕುನ್‌ನಂಥ ಘಟನೆಗಳು ಮತ್ತೆ ನಡೆಯುತ್ತಿರಲಿಲ್ಲ.
ಎಂಥ ದುರಂತ ನೋಡಿ; ಬಶರ್ ಅಲ್ ಅಸಾದ್ ವೃತ್ತಿಯಲ್ಲಿ ವೈದ್ಯರು. ನಾಲ್ಕು ವರ್ಷ ಸೇನಾ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ಅಸಾದರದ್ದು ಜೀವವನ್ನು ಕಾಪಾಡುವಂಥ ಪುಣ್ಯದ ಕೆಲಸ. ಆದರೆ, ಅದೇ ವ್ಯಕ್ತಿ ಈಗ ಸಾಮೂಹಿಕವಾಗಿ ಜನರ ಜೀವ ತೆಗೆಯುತ್ತಿದ್ದಾರೆಂದರೆ ಇದಕ್ಕಿಂತ ವಿಪರ್ಯಾಸವೇನಿದೆ? ತನ್ನದೇ ಜನರನ್ನು ಅತ್ಯಂತ ಭೀಕರವಾಗಿ ಕೊಲ್ಲುವ ಹಂತಕ್ಕೆ ಅಧ್ಯಕ್ಷನೊಬ್ಬ ಹೋಗುತ್ತಾನೆಂದರೆ ಆತನ ಸರ್ವಾಧಿಕಾರತ್ವದ ಹಸಿವು ಅರಿವಾಗುತ್ತದೆ. ಈ ವಿಷಯದಲ್ಲಿ ಅಸಾದ್ ಕೂಡ ಜಗತ್ತು ಕಂಡ ಕ್ರೂರ ಸರ್ವಾಧಿಕಾರಿಗಳಿಗಿಂತ ತಾನೇನೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ನಮ್ಮಲ್ಲಿ ‘ವೈದ್ಯೋ ನಾರಾಯಣೋ ಹರಿ’ ಅಂದರೆ, ವೈದ್ಯ ದೇವರಿಗೆ ಸಮಾನ ಎಂದಿದೆ. ಆದರೆ, ಸಿರಿಯಾದಲ್ಲಿ ವೈದ್ಯ ಯಮನಿಗೆ ಸಮಾನ ಎಂಬಂತಾಗಿದೆ.
ಬಶರ್ ಅವರು 1965ರ ಸೆಪ್ಟೆಂಬರ್ 11ರಂದು ಡಮಾಸ್ಕಸ್‌ನಲ್ಲಿ ಜನಿಸಿದವರು. ತಂದೆ ಹಫೀಜ್ ಅಲ್ ಅಸಾದ್ ಸಿರಿಯಾದ ಅಧ್ಯಕ್ಷ. ಡಮಾಸ್ಕಸ್‌ನಲ್ಲಿ ಬೆಳೆದ ಬಶರ್ 1988ರಲ್ಲಿ ಸ್ಕೂಲ್ ಆಫ್ ಡಮಾಸ್ಕಸ್ ಯುನಿರ್ವಸಿಟಿಯಿಂದ ಪದವಿ ಪಡೆದು, ಸಿರಿಯಾ ಸೇನೆಯಲ್ಲಿ ವೈದ್ಯರಾಗಿ ನಾಲ್ಕು ವರ್ಷ ಕೆಲಸ ಮಾಡುತ್ತಾರೆ. ನಂತರ ಅವರು, ಇಂಗ್ಲೆಂಡ್‌ಗೆ ತೆರಳಿ ಲಂಡನ್ ವೆಸ್ಟರ್ನ್ ಐ ಹಾಸ್ಪಿಟಲ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ. ಹಾಗೆ ನೋಡಿದರೆ, ಬಶರ್ ಅವರಿಗೆ ರಾಜಕೀಯ ಕುರಿತು ಅಷ್ಟೇನೂ ಆಸಕ್ತಿ ಇರುವುದಿಲ್ಲ. ತಂದೆಯ ನಂತರ ರಾಜಕೀಯ  ಉತ್ತರಾಧಿಕಾರಿ ಎಂದು ಬಷರ್ ಅವರ ಅಣ್ಣ  ಬಸೆಲ್ ಅಲ್ ಅಸಾದ್ ಗುರುತಿಸಿಕೊಂಡಿರುತ್ತಾರೆ. ಆದರೆ, ಬಸೆಲ್ 1994ರಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಆಗ, ಸಿರಿಯಾಗೆ ಬಶರ್‌ನನ್ನು ತಂದೆ ಹಫೀಜ್ ಅವರು  ಕರೆಯಿಸಿಕೊಂಡು, ಮಿಲಿಟಿರಿ ಅಕಾಡೆಮಿಯಲ್ಲಿ ಕೆಲಸ ಕೊಡುತ್ತಾರೆ. ‘ಸಿರಿಯಾ ಸ್ವಾಧೀನ ಲೆಬನಾನ್’ ಉಸ್ತುವಾರಿಯನ್ನು ಬಶರ್‌ಗೆ 1998ರಲ್ಲಿ ವಹಿಸುತ್ತಾರೆ. ಕುಟುಂಬದ ವ್ಯವಹಾರ ನೋಡಿಕೊಂಡು, ರಾಜಕೀಯದ ಕಡೆ ತಲೆಹಾಕದ ಬಶರ್ ಕೊನೆಗೆ ರಾಜಕೀಯ ಉತ್ತುಂಗಕ್ಕೆ ಏರುತ್ತಾ ಹೋಗಿ, ತಂದೆಯ ನಿಧನದ ಬಳಿಕ ಅಂದರೆ 2000ರಲ್ಲಿ ಸಿರಿಯಾದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.
ಅಧಿಕಾರ ವಹಿಸಿಕೊಂಡಾಗ ಅಸಾದ್ ಅವರಿಗೆ 34 ವರ್ಷ. ಜನರು ಸುಧಾರಣೆಯ ಶುಭ ಕಾಲ ಎಂದೇ ಬಗೆದಿದ್ದರು. ತಮ್ಮ ಅಧಿಕಾರಾವಧಿಯ ಆರಂಭಿಕ ವರ್ಷಗಳಲ್ಲಿ ಬಶರ್ ಅವರೂ ಜನರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಅಧಿಕಾರಕ್ಕೇರುತ್ತಿದ್ದಂತೆ ತಮ್ಮ ತಂದೆಯಂತೆ ಸರ್ವಾಧಿಕಾರಿಯ ಲಕ್ಷಣಗಳನ್ನೇನೂ ತೋರಲಿಲ್ಲ. ಮುಕ್ತ ಚಿಂತನೆಯ ಪ್ರತಿಪಾದಕರಂತೆ ಕಂಡರು. ಅನೇಕ ಸುಧಾರಣೆಗಳಿಗೆ ಶ್ರೀಕಾರ ಹಾಕಿದರು. ರಾಜಕೀಯ ವಿರೋಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದರು. ಮಾಧ್ಯಮಗಳ ಮೇಲಿದ್ದ ನಿರ್ಬಂಧಗಳನ್ನು ತೆಗೆದು ಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಕೊಟ್ಟಿದ್ದರಿಂದ ರಾಜಕೀಯ ಚರ್ಚೆಗಳು ಕೂಡ ನಡೆಯಲಾರಂಭಿಸಿದವು. ಭಿನ್ನ ಧ್ವನಿಗಳಿಗೆ ಅವಕಾಶ ದೊರೆಯಲಾರಂಭಿಸಿತು. ರಾಜಕೀಯ ಬಹುತ್ವಕ್ಕೆ ಮಹತ್ವ ಬರಲಾರಂಭಿಸಿತು. ಈ ಹಿನ್ನೆಲೆಯಲ್ಲೇ ಬಹುತೇಕ ರಾಜತಾಂತ್ರಿಕರು, ಶೈಕ್ಷಣಿಕ ತಜ್ಞರು ಅಸಾದ್ ಅವರ ಮೊದಲನೆಯ ಅವಧಿಯನ್ನು ಶ್ಲಾಘಿಸುತ್ತಾರೆ. ಆದರೆ, ಬಶರ್ ಅವರ ಸುಧಾರಣೆ ಕ್ರಮಗಳನ್ನು ಸೇನೆ ಹಾಗೂ ಸ್ಥಾಪಿತ ಹಿತಾಸಕ್ತಿಗಳು ಪ್ರಶ್ನಿಸಲಾರಂಭಿಸಿದವು. ಬಾತ್ ಪಾರ್ಟಿ ಮತ್ತು ಅಲಾವಿಟ್ ಸಮುದಾಯ(ಬಶರ್ ಅವರು ಪ್ರತಿನಿಧಿಸುವ ಸಮುದಾಯ) ಈ ಸುಧಾರಣೆಗಳಿಂದ ಅತೃಪ್ತಗೊಂಡವು. ಅಸ್ಥಿರತೆಯ ಭಯದಿಂದಾಗಿ ಮತ್ತು ತಮ್ಮ ಪ್ರಭಾವಕ್ಕೆ ಧಕ್ಕೆ ಬರಬಹುದೆಂಬ ಭೀತಿಯಿಂದ ಸುಧಾರಣೆಗಳಿಗೆ ಕೊಕ್ಕೆ ಹಾಕಲಾರಂಭಿಸಿದವು ಮಾತ್ರವಲ್ಲ, ಈ ಹಿಂದಿದ್ದ ದಿನಗಳತ್ತ ಆಡಳಿತವನ್ನು ಕೊಂಡೊಯ್ಯಲು ಪ್ರಯತ್ನಿಸಿದವು. ಇದರ ಪರಿಣಾಮವಾಗಿ, 2014ರಲ್ಲಿ ಅಸಾದ್ ಮರಳಿ ಅಧಿಕಾರಕ್ಕೆ ಬಂದ ನಂತರ, ಅವರ ವ್ಯಕ್ತಿತ್ವ ಹಾಗೂ ಕಾರ್ಯ ನಿರ್ವಹಣೆಯಲ್ಲಿ ಅಪಾರ ವ್ಯತ್ಯಾಸ ಕಂಡು ಬಂತು. ಯಾವ ವ್ಯಕ್ತಿಯನ್ನು ಆಶಾವಾದದ ಪ್ರತೀಕ ಎಂದು ಜನ ನೋಡುತ್ತಿದ್ದರೋ ಅದೇ ವ್ಯಕ್ತಿ ಇದೀಗ ಜನರ ಕಣ್ಣಲ್ಲಿ ವಿಲನ್ ಆಗಿ ಬದಲಾದರು.
ಹಾಗೆ ನೋಡಿದರೆ, 2014ರಲ್ಲಿ ನಡೆದ ಚುನಾವಣೆಯಲ್ಲಿ ಭಾರಿ ಮತಗಳಿಂದಲೇ ಆಯ್ಕೆಯಾಗಿದ್ದರು. ಶೇ.88.7ರಷ್ಟು ಮತಗಳನ್ನು ಅವರು ಪಡೆದಿದ್ದರು. ಬಾತ್ ಪಾರ್ಟಿಯ ಇತಿಹಾಸದಲ್ಲೇ ಅಧ್ಯಕ್ಷರೊಬ್ಬರು ಪಡೆದ ಅತಿ ಹೆಚ್ಚಿನ ಮತಗಳು ಅವು. ಆದರೆ, ಅಂತಾರಾಷ್ಟ್ರೀಯ ಸಮುದಾಯ ಮಾತ್ರ ಈ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದವು. ಇದ್ಯಾವುದಕ್ಕೆ ತಲೆ ಕೆಡಿಸಿಕೊಳ್ಳದ ಅಸಾದ್ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸಿದರು. ಅವರ ಸರ್ವಾಧಿಕಾರತ್ವದ ಲಕ್ಷಣಗಳು ಮೊದಲಿಗೆ ಗೋಚರವಾಗಿದ್ದು, ಅರಬ್ ಸ್ಪ್ರಿಂಗ್ ಪ್ರತಿಭಟನಾಕಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಾಗ. ಇದೇ ಮುಂದೆ ಸಿರಿಯಾದ ನಾಗರಿಕ ಸಂಘರ್ಷಕ್ಕೆ ಕಾರಣವಾಗಿ, ಇದೀಗ ವಿಷಾನಿಲದಂಥ ಭೀಕರ ಸಾಮೂಹಿಕ ಶಸ್ತ್ರಾಸ್ತ್ರಗಳ ಬಳಕೆಯವರೆಗೂ ಬಂದು ಮುಟ್ಟಿದೆ. ನಾಯಕನೊಬ್ಬನ ಕೆಲವು ತಪ್ಪು ನಿರ್ಧಾರಗಳು ಹೇಗೆ ಇಡೀ ದೇಶವನ್ನು ಬಡುಮೇಲು ಮಾಡುತ್ತವೆ ಎಂಬುದಕ್ಕೆ ಇದು ಜೀವಂತ ಉದಾಹರಣೆ. ಇಷ್ಟೆಲ್ಲ ಆದರೂ, ಅಸಾದ್ ತಮ್ಮ ಕ್ರಮಗಳನ್ನು ಇಂದಿಗೂ ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಆದರೆ, ವಿಶ್ವಸಂಸ್ಥೆ ಕೈಗೊಂಡ ಅಧ್ಯಯನ ಪ್ರಕಾರ ಅಸಾದ್ ಅವರ ವಾರ್ ಕ್ರೈಮ್‌ಗಳ ಪಟ್ಟಿ ದೊಡ್ಡದಿದೆ.
ಸಿರಿಯಾದಲ್ಲಿ ನಾಗರಿಕ ಸಂಘರ್ಷ 2011ರಿಂದಲೇ ಆರಂಭವಾಗುತ್ತದೆ. ರಾಜಕೀಯ ಸುಧಾರಣೆ ಮತ್ತು ನಾಗರಿಕ ಹಕ್ಕುಗಳ ಮರುಸ್ಥಾಪನೆಗಾಗಿ ದೊಡ್ಡ ಹೋರಾಟವೇ ನಡೆಯುತ್ತದೆ. ಆಗಲೂ ಸಿರಿಯಾ ಆಡಳಿತ ಪ್ರತಿಭಟನಾಕಾರರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಒಂದೆಡೆ ಅಸಾದ್ ಆಡಳಿತದ ವಿರುದ್ಧ ಜನರು ಬೀದಿಗಿಳಿದರೆ, ಮತ್ತೊಂದೆಡೆ ಅಸಾದ್ ಪರವಾಗಿಯೂ ಹೋರಾಟ ನಡೆಯುತ್ತದೆ. ಇದರ ಒಟ್ಟು ಪರಿಣಾಮವೇ ಎಂದೂ ಮುಗಿಯದ ಸಿರಿಯಾ ನಾಗರಿಕ ಸಂಘರ್ಷ ಆರಂಭವಾಗುತ್ತದೆ. ಇದರ ಮಧ್ಯೆಯೇ ಅಮೆರಿಕ ಮತ್ತು ರಷ್ಯಾದ ಹಸ್ತಕ್ಷೇಪಗಳಿಂದಾಗಿ ಪರಿಸ್ಥಿತಿ ಮತ್ತಷ್ಟು ಹದೆಗೆಡುತ್ತದೆ. ವಾಸ್ತವದಲ್ಲಿ ತನ್ನ ದೇಶದೊಳಗಿನ ಸಂಘರ್ಷವನ್ನು ಚಾಣಾಕ್ಷತನದಿಂದ ಬಗೆಹರಿಸಬೇಕಿದ್ದ ಅಸಾದ್ ಎಡವುತ್ತಾರೆ. ಅಂತಾರಾಷ್ಟ್ರೀಯ ಸಮುದಾಯ, ಸಿರಿಯಾ ಮೇಲೆ ನಿರ್ಬಂಧನೆಗಳನ್ನು ಹೇರಿದ್ದರಿಂದ ಒಟ್ಟಾರೆ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತದೆ. ವಿರೋಧಿ ಪ್ರತಿಭಟನಾಕಾರರನ್ನು  ಸೇನೆಯಿಂದ ದಂಡಿಸಲಾಗುತ್ತದೆ. ಒಂದೊಮ್ಮೆ ಸಿರಿಯಾದ ಆಶಾದಾಯಕ ಅಧ್ಯಕ್ಷನಾಗಿ ಗುರುತಿಸಿಕೊಂಡಿದ್ದ ಅಸಾದ್ ಇದೀಗ ಸಂಪೂರ್ಣ ಸರ್ವಾಧಿಕಾರಿಯಾಗಿ ಬದಲಾಗುತ್ತಾರೆ. ನಂತರ ನಡೆದಿದ್ದೆಲ್ಲ ಹಿಂಸಾತ್ಮಕ ರಾಜಕೀಯವಷ್ಟೆ.
ನಾಗರಿಕ ಸಂಘರ್ಷದಿಂದ ಬಸವಳಿದಿರುವ ಸಿರಿಯಾದಲ್ಲಿ ತುರ್ತಾಗಿ ಶಾಂತಿ ಸ್ಥಾಪನೆಯಾಗಬೇಕಿದೆ. ಆದರೆ, ತಮ್ಮ ಹಿತಾಸಕ್ತಿಗಳ ಅನುಸಾರವಾಗಿ ಸಿರಿಯಾ ಕುರಿತು ವಿದೇಶಾಂಗ ನೀತಿಗಳನ್ನು ರೂಪಿಸಿಕೊಂಡಿರುವ ಅಮೆರಿಕ ಮತ್ತು ರಷ್ಯಾಗಳಿಂದಾಗಿ ಶಾಂತಿ ಸ್ಥಾಪನೆ ಸದ್ಯಕ್ಕೆ ಮರೀಚಿಕೆಯಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದೆಡೆ, ಶಾಂತಿ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿರಬೇಕಾಗಿರುವ ಅಧ್ಯಕ್ಷ ಅಸಾದ್ ಅವರು ಉಗ್ರರನ್ನು ಮಟ್ಟ ಹಾಕುತ್ತಲೇ, ವಿಷಾನಿಲದ ಬಾಂಬ್‌ಗಳನ್ನು ಮುಗ್ಧರ ಮೇಲೆ ಎಸೆಯುತ್ತಾ ತಿರುಗುತ್ತಿರುವುದು ಮಾತ್ರ ಆಧುನಿಕ ಜಗತ್ತಿನ ಅಣಕವಷ್ಟೆ.

This article was published in VijayKarnataka, on 09 April 2017 edition

ಸೋಮವಾರ, ಮಾರ್ಚ್ 27, 2017

ಹುಡುಗನೊಬ್ಬನ ಗಜಲ್‌ಗಳು: ಹಿಸ್ಟರಿಯಲ್ಲಿ ಢುಮ್ಕಿ ಹೊಡೆದವನ ವಸಂತಗಾನ

ನಿಸರ್ಗಕ್ಕೆ ಹಸಿರು ತೋರಣ ಕಟ್ಟಿದ್ದ ವಸಂತ, ನಮ್ಮ ಒಲುಮೆಗೆ ಆತನೇ ಕಾರಣ


- ಪ್ರದ್ಯುಮ್ನ
ಯುನಿವರ್ಸಿಟಿಯ ಹಾಸ್ಟೆಲ್‌ನ ಆ ಕಿಟಿಕಿಯಾಚೆ ನೋಡುತ್ತಿದ್ದವನಿಗೆ ಸಣ್ಣ ಸವಿನೆನಪೊಂದು ಹಾರಿ ಹೋದ ಅನುಭವ. ಶಿಶಿರ ಕಾಲದಲ್ಲಿ ತನ್ನೆಲ್ಲ ಎಲೆಗಳನ್ನು ಕಳಚಿ, ಅಸ್ಥಿ ಪಂಜರದಂತೆ ಕಾಣುತ್ತಿದ್ದ ಆ ಮರವೀಗ ಹಚ್ಚ ಹಸಿರು ಎಲೆಗಳನ್ನು ಹೊದ್ದುಕೊಂಡು ಮದುವಣಗಿತ್ತಿಯಂತೆ ರೆಡಿಯಾಗಿ ನಿಂತಿದೆ. ಅರೇ, ಎರಡು ವಾರದ ಹಿಂದೆಯಷ್ಟೇ ಒಣಗಿದಂತಿದ್ದ ಆ ಮರಕ್ಕೀಗ ಹಸಿರು ತೋರಣ. ಕಾಲ ಹೇಗೆ ನಮ್ಮ ಸುತ್ತಲಿನ ಪರಿಸರವನ್ನು ತನ್ನ ಆಣತಿಯಂತೆ ಬದಲಾಯಿಸುತ್ತಾ ಹೋಗುತ್ತಾನೆ ಅಲ್ಲವೇ? ಆತನಿಗೆ ಗೊತ್ತಿರದ ಸಂಗತಿ ಯಾವುದೂ ಇಲ್ಲ. ನಾನು ಇಲ್ಲಿಗೆ ಬಂದು ನಾಲ್ಕು ವಸಂತ ಕಳೆದು ಐದನೇ ವಸಂತ ಆರಂಭವಾಯಿತು ನೋಡಲೋ ಎಂಬಂತೆ ಆ ಚಿಗುರೆಲೆಗಳು ಗಾಳಿಗೆ ಹೊಯ್ದಡುತ್ತಿದ್ದವು. ಅದರ ಹಿಂದೆಯೇ ಬಿ.ಆರ್.ಲಕ್ಷ್ಮಣ ರಾವ್ ಅವರ ಪದ್ಯವೊಂದರ;
ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ...
ಎಂಬ ಸಾಲುಗಳು ಸ್ಮೃತಿ ಪಟಲದಲ್ಲಿ ಅಚ್ಚು ಹಾಕಿ ಮರೆಯಾದವು. ಎಷ್ಟು ಬೇಗ ಕಾಲ ಉರುಳಿ ಹೋಯಿತು? ಪಿಎಚ್‌ಡಿಗೋಸ್ಕರ ಈ ಯುನಿವರ್ಸಿಟಿಗೆ ನಿನ್ನೆ ಮೊನ್ನೆಯಷ್ಟೇ ಬಂದಿರುವ ಹಾಗಿದೆ ನನಗೆ. ಇನ್ನು ಒಂದೇ ವರ್ಷ ನನ್ನ ಸಂಶೋಧನೆ ಮುಗಿದು ಡಾಕ್ಟರೇಟ್ ಪದವಿ ಪಡೆಯಲು. ಆದರೆ, ಬೇಸಿಗೆ ಬಂದಾಗಲೆಲ್ಲ ನನ್ನೊಳಗೆ ಆಹ್ಲಾದಕರ ಭಾವನೆಗಳ ಉಬ್ಬರವಾಗುತ್ತವೆ. ನಿಸರ್ಗದಲ್ಲಾಗುವ ಹೊಸತನದ ಚಿಗುರು ನನ್ನೊಳಗೂ ಅನೇಕ ಭಾವನೆಗಳಿಗೆ ಮರಿ ಹಾಕಿ ಬಿಡುತ್ತದೆ. ಇಲ್ಲಿಗೆ ಬರುವ ಮುಂಚೆ, ಊರಲ್ಲಿ ಅಲ್ಲೊಂದು ಇಲ್ಲೊಂದು ಕಾಣುವ ಆಲದ ಮರಗಳು, ಬೇಸಿಗೆಯಲ್ಲಿ ಭರ್ಜರಿ ನೆರಳನ್ನು ನೀಡುತ್ತಿದ್ದವು. ಊರಿನಿಂದ ಒಂದು ಮೈಲು ದೂರ ಇದ್ದ ಕಾಲೇಜು ಸುತ್ತ ಮುತ್ತ ಇದ್ದದ್ದು ನಾಲ್ಕೇ ನಾಲ್ಕು ಈ ಮರಗಳು. ಅವು ಕಾಲೇಜಿನಿಂದ ತುಸು ದೂರವೇ ಇದ್ದವು. ಪತ್ರಾಸ್ ಹೊದಿಕೆಯಿದ್ದ ಆ ಕಾಲೇಜಿನ ಕಟ್ಟಡದಲ್ಲಿ ಕುಳಿತು ಲೆಕ್ಚರ್ ಕೇಳುವುದು ಯಮಯಾತನೆ. ನಮಗೆ ಗೊತ್ತಿಲ್ಲದೆಯೇ ಬೆವರು ತನಗೆ ಹೇಗೆ ಬೇಕೋ ಹಾಗೆ ದಾರಿ ಮಾಡಿಕೊಂಡು ಯಾವುದೇ ಅಡೆ ತಡೆ ಇಲ್ಲದೆ ಇಳಿದು ಬಿಡುತ್ತಿತ್ತು. ಇದೇ ಅನುಭವ ಪಾಠ ಹೇಳುವ ಲೆಕ್ಚರ್‌ಗಳಿಗೂ ಆಗುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಮ್ಮ ಇತಿಹಾಸದ ಲೆಕ್ಚರ್‌ರು, ತಮ್ಮ ಪಾಠವನ್ನು ಕಾಲೇಜಿನ ಆಚೆ ಇದ್ದ ಆ ಆಲದ ಮರದ ಬುಡಕ್ಕೆ ಶಿಫ್ಟ್ ಮಾಡುತ್ತಿದ್ದರು. ಆಗ ತಾನೇ ಹಸಿರಿನಿಂದ ಹೊದ್ದು ನಿಂತಿದ್ದ ಆ ಮರದ ಕೆಳಗೆ ಹಾಯ್ ಎನಿಸುವಂಥ ತಂಪು. ಆಗಾಗ ಸುಳಿಯುವ ಗಾಳಿ ನಮ್ಮಲ್ಲಿ ಒಂದು ಹಿತವಾದ ಅನುಭವವನ್ನು ದಾಟಿಸಿಕೊಂಡು ಹೋಗುತ್ತಿತ್ತು. ನಾವೆಲ್ಲ ಒಂದು ಕಡೆ ಕುಳಿತರೆ, ಮತ್ತೊಂದೆಡೆ ಹುಡುಗಿಯರು. ಇತಿಹಾಸದ ಮೇಷ್ಟ್ರು ಷಹಾಜಹಾನ್‌ನ ಪ್ರೇಮ ಪುರಾಣ ಆರಂಭಿಸುತ್ತಿದ್ದಂತೆ ನಮ್ಮ ಮನಸ್ಸು ಪಾಠದ ಮೇಲಿಂದ ವರ್ಗವಾಗಿ ಪಕ್ಕದಲ್ಲಿ ಕುಳಿತಿದ್ದವರ ಕಡೆಗೆ ವಾಲುತ್ತಿತ್ತು. ಗಾಳಿಗೆ ಮುಖವೊಡ್ಡಿ ಪಾಠ ಕೇಳುತ್ತಿದ್ದಂತೆ ಕಾಣುತ್ತಿದ್ದ ಅವರ ಮುಖಗಳು ನಮ್ಮಳಗೆ ನಾನಾ ತರಂಗಗಳನ್ನ ಹುಟ್ಟು ಹಾಕುತ್ತಿದ್ದವು. ಅದರಲ್ಲೂ ಅವಳಿದ್ದಳಲ್ಲ, ಆ ಚೆಲುವೆ, ಅವಳನ್ನು ನೋಡುವುದೇ ಒಂದು ಸುಂದರ ಅನುಭವ; ಅಷ್ಟು ಚೆಲುವೆ ಆಕೆ. ಸುಳಿಯುತ್ತಿದ್ದ ಗಾಳಿಗೆ ಆಕೆಯ ಮುಂಗುರುಳು ಅತ್ತಿಂದ ಇತ್ತ, ಇತ್ತಿಂದ ಅತ್ತ ಹೊಯ್ದಡುತ್ತಿತ್ತು. ಮುಂಗುರುಳನ್ನು ಹತೋಟಿಗೆ ತರಲು, ಬೆರಳುಗಳು ಆಕೆಯ ಅನುಮತಿಯನ್ನು ಕೇಳುತ್ತಿರಲಿಲ್ಲ. ಆದರೆ, ಕೊನೆಗೆ ಸೋಲುತ್ತಿದ್ದದ್ದು ಬೆರಳುಗಳೇ. ಯಾಕೆಂದರೆ, ಆ ಮುಂಗುರುಳಿಗೆ ಗಾಳಿಯ ಬೆಂಬಲ. ಪಾಠ ತನ್ನ ಪಾಡಿಗೆ ತಾನು ನಡೆಯುತ್ತಿರುವಾಗಲೇ ಆಕೆ ಮಿಂಚಿನ ವೇಗದಲ್ಲಿ ನನ್ನತ್ತ ನೋಡಿ ಅಷ್ಟೇ ವೇಗದಲ್ಲಿ ಮುಖ ತಿರುಗಿಸಿದ್ದನ್ನು ಪಕ್ಕದಲ್ಲಿದ್ದ ಗೆಳೆಯ ನೋಡುತ್ತಿದ್ದ. ಅವನಿಗೆ ಗೊತ್ತಿತ್ತು ಆಕೆಯನ್ನು ಬಹಳ ಇಷ್ಟು ಪಡುತ್ತಿದ್ದೆ ಎಂಬುದು. ‘‘ಏ.. ಆಕಿ ನಿನ್ನ ನೋಡಿದ್ಲೋ,’’ ಎಂದು ಮೆಲ್ಲಗೆ ಕಿವಿಯಲ್ಲಿ ಉಸುರುತ್ತಿದ್ದ. ಇದು ದಿನಾ ರಿಪೀಟ್ ಆಗುತ್ತಲೇ ಇತ್ತು. ನನಗೆ ಗೊತ್ತಿಲ್ಲದೆ ಆಕೆ, ಆಕೆಗೆ ಗೊತ್ತಿಲ್ಲದೆ ನಾನು ಪರಸ್ಪರ ನೋಡುವುದು, ಆಗಾಗ ಕಣ್ಣಲ್ಲಿ ಮಾತನಾಡಿಕೊಳ್ಳುವುದು ನಡೆದೇ ಇತ್ತು. ‘ವಸಂತ’ ಕಾಲದ ಹಿಸ್ಟರಿ ಕ್ಲಾಸ್‌ಗಳೆಂದರೆ ನಮ್ಮ ನಡುವಿನ ಪ್ರೇಮ ಪಯಣದ ‘ಇತಿಹಾಸ’ದ ಆರಂಭಕ್ಕೆ ಮುನ್ನುಡಿ ಬರೆದಿದ್ದವು. ಆದರೆ ಎಷ್ಟು ದಿನ ಅಂತ ಹೀಗೆ ನೋಡಿಕೊಂಡಿರುವುದು, ನನ್ನೊಳಗೆ ಪ್ರೇಮ ಚಿಗುರೊಡೆದು ಬೆಳೆದು ಹೆಮ್ಮರವಾಗಿದ್ದನ್ನು ಆಕೆಗೆ ತಿಳಿಸಲೇಬೇಕಿತ್ತು. ಮೋಸ್ಟಲೀ, ಅವಳು ಹಾಗೆ ಅಂದು ಕೊಂಡಿರಬೇಕು ಅನಿಸುತ್ತದೆ. ಇಲ್ಲದಿದ್ದರೆ, ಅಂದು ಯಾಕೆ, ಕ್ಲಾಸ್ ಮುಗಿದ ಬಳಿಕ ಎಲ್ಲರು ಹೋದರೂ ಮರದ ನೆರಳಲ್ಲಿ ಒಬ್ಬಳೇ ನಿಲ್ಲುತ್ತಿದ್ದಳು? ಅದೇನೋ ಹೇಳುತ್ತಾರಲ್ಲ, ‘ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ’ ಎನ್ನುವಂಥ ಸ್ಥಿತಿ ನನ್ನದು. ಆ ದೊಡ್ಡ ಮರದ ಕೆಳಗೆ ನಾವಿಬ್ಬರೇ. ಆಹ್ಲಾದಕರವಾಗಿ ಬೀಸುತ್ತಿದ್ದ ಗಾಳಿಗೆ ಮುಖವೊಡ್ಡಿ, ನೋಟ್‌ಬುಕ್ ಎದೆಗವಚಿಕೊಂಡು ನಿಂತಿದ್ದಾಳೆ. ಆಕೆಯನ್ನು ಮಾತನಾಡಿಸಲೇಬೇಕು ಎಂದು ನಿಂತುಕೊಂಡ ನನಗೆ ಮಾತುಗಳೇ ಹೊರಡುತ್ತಿಲ್ಲ. ಈ ಕಣ್ಣಿನ ಭಾಷೆಗಿರುವಷ್ಟು ಧೈರ್ಯ, ಸಂವಹನ ನುಡಿಗಳಿಗಿರುವುದಿಲ್ಲ ಎಂಬ ಆಲೋಚನೆಗಳು ತಲೆಯಲ್ಲಿ ಗಿರಿಕಿ ಹೊಡೆಯುತ್ತಿರುವಾಗಲೇ ಧೈರ್ಯ ಮಾಡಿ, ‘‘ಹಲೋ,’’ ಎಂದೆ, ಆಕೆ  ‘‘ಹಲೋ,’’ ಎಂದಾಗಲೇ ಗೊತ್ತಾಗಿದ್ದು, ನಾನಷ್ಟೇ ಅಲ್ಲ ಆಕೆಗೂ ಮಾತನಾಡಲು ಧೈರ್ಯ ಸಾಲುತ್ತಿಲ್ಲ ಎಂಬುದು. ಐದು, ಹತ್ತು ನಿಮಿಷ ಆದ್ಮೇಲೆ ನಮ್ಮಿಬ್ಬರ ಮಧ್ಯೆ ಅಳುಕು ನಿಧಾನವಾಗಿ ಕರಗಿ ಅದು- ಇದು ಮಾತನಾಡುತ್ತಲೇ, ಮನದಾಳದಲ್ಲಿದ್ದ ಭಾವನೆಗಳಿಗೆ ಮಾತಿನ ರೂಪ ಕೊಟ್ಟು ಒಂದೇ ಉಸಿರಿನಲ್ಲಿ ‘‘ನಂಗೆ ನೀನು ಭಾಳಾ ಇಷ್ಟ,’’ ಎಂದೆ. ಅಷ್ಟೇ ವೇಗದಲ್ಲಿ ಆಕೆ, ‘‘ನನಗೂ...,’’ ಎಂದವಳೆ ಅಲ್ಲಿಂದ ಮಿಂಚಿನ ಓಟದಲ್ಲಿ ಮಾಯವಾದವಳು. ಓಹೋ ಎಂದು ಜೋರಾಗಿ ಕಿರುಚಿ ಮೇಲೆ ನೋಡಿದವನಿಗೆ ಎಲೆಗಳ ಸಂದುಗೊಂದುಗಳಿಂದ ಸೂರ್ಯ ನನ್ನತ್ತಲೇ ಇಣುಕುತ್ತಿದ್ದ. ‘‘ಭಪ್ಪರೇ ಮಗನೆ,’’ ಎಂದಂತಾಯಿತು. ಗಾಳಿಗೆ ಮೆಲ್ಲನೆ ಸದ್ದು ಮಾಡುತ್ತಿದ್ದ ಎಲೆಗಳು, ಅಂದು ಯಾಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದವೋ?
ನಂತರದ ದಿನಗಳಲ್ಲಿ, ಹಿಸ್ಟರಿ ಕ್ಲಾಸ್‌ನಲ್ಲಿ ಅವಳನ್ನು ನೋಡುವುದೇ ಪಾಠವಾಗಿ ಬಿಟ್ಟಿತ್ತು. ಪಕ್ಕದಲ್ಲಿದ್ದ ಗೆಳೆಯ ಆಗಾಗ ತಿವಿಯುತ್ತಾ, ‘‘ಏ ಮಗನ ನೋಡಿದ್ದು ಸಾಕು, ಪಾಠಾನೂ ಸ್ವಲ್ಪ ಕೇಳು..,’’ ಅಂತಿದ್ದ. ನನ್ನ ದುರದೃಷ್ಟಕ್ಕೆ, ಹಿಸ್ಟರಿ ಲೆಕ್ಚರ್ ನನ್ನತ್ತ ಚಾಕ್‌ಪೀಸ್ ಎಸೆದವರೇ, ‘‘ಲೋ ತಮ್ಮ, ಎದ್ದು ನಿಲ್ಲು. ಅಶೋಕ ಏನೇನ್ ಮಾಡಿದ ಹೇಳು,’’ ಅಂದ್ರು. ‘‘ಲಕ್ಷೋಪ ಲಕ್ಷ  ಸೈನಿಕರೊಂದಿಗೆ ಕಳಿಂಗ ಯುದ್ಧ ಮಾಡಿ ಗೆದ್ದ, ಆ ಮೇಲೆ ರಸ್ತೆಗಳಲ್ಲಿ ಗಿಡಗಳನ್ನು ನೆಟ್ಟ,’’ ಎಂದು ಪೆದ್ದು ಪೆದ್ದಾಗಿ, ಹೈಸ್ಕೂಲ್ ಹುಡುಗ ಹೇಳಿದ ಹಾಗೆ ಹೇಳಿದ್ದೇ ತಡ ಇಡೀ ಕ್ಲಾಸ್ ಗೊಳ್ಳೆಂದು ನಕ್ಕಿತು. ಆಕೆಯೂ ತುಸು ಜೋರೇ ನಕ್ಕಳು. ನಾಚಿಕೆಯಿಂದ ತಲೆ ತಗ್ಗಿಸಿದೆ.
ಆ ವಯಸ್ಸಿನಲ್ಲಿ, ನಮ್ಮನ್ನು ಇಷ್ಟಪಡುವ ಜೀವವೊಂದಿದೆ ಎಂದರೆ ಸಾಕು. ಎಲ್ಲವೂ ಆನಂದಮಯವಾಗಿಯೇ ಕಾಣುತ್ತದೆ. ಎಷ್ಟೆಲ್ಲ ಕಷ್ಟಗಳು ಹೂವಿನಂತೆ ಭಾಸವಾಗುತ್ತವೆ. ಕಿಸೆಯಲ್ಲಿ ನಾಲ್ಕು ಕಾಸು ಇಲ್ಲದಿದ್ದರೂ ಶ್ರೀಮಂತನ ಜಂಭಕ್ಕೇನೂ ಕೊರತೆ ಇರಲ್ಲ. ಆಗ, ಮುಂದಿರುವ ಗುರಿ ಮೈ ಮರೆಯುವ ಅಪಾಯಗಳೇ ಹೆಚ್ಚು. ನನಗೂ ಅದೇ ಆಗಿದ್ದು. ಪ್ರೇಮದ ಸುಳಿಯಲ್ಲಿ ಸಿಕ್ಕವನಿಗೆ ಫೈನಲ್ ಡಿಗ್ರಿ ರಿಸಲ್ಟ್ ದೊಡ್ಡ ಶಾಕ್ ನೀಡಿತ್ತು. ಯಾವ ಕ್ಲಾಸ್‌ನಲ್ಲಿ ಪ್ರೇಮ ಶುರುವಾಗಿತ್ತೋ ಅದೇ ಕ್ಲಾಸ್ ಅಂದರೆ, ಹಿಸ್ಟರಿ ಸಬ್ಜೆಕ್ಟ್‌ನಲ್ಲಿ ಢುಮ್ಕಿ ಹೊಡೆದಿದ್ದೆ. ಈ ವಿಷಯ ಅವಳಿಗೆ ಗೊತ್ತಾಗಿ, ಅದೇ ಮರದ ನೆರಳಿನಲ್ಲಿ ನಿಂತಿದ್ದಳು. ಆಕೆ ಅಂದು ಹೇಳಿದ ಮಾತುಗಳು, ಇಂದು ನಾನು ಡಾಕ್ಟರೇಟ್ ಮಾಡುವ ಹಂತಕ್ಕೆ ತಂದು ನಿಲ್ಲಿಸಿವೆ. ಆಕೆಯದ್ದು ನಿಷ್ಕಲ್ಮಷ ಪ್ರೇಮ. ತನ್ನಿಂದಾಗಿ ನನ್ನ ಭವಿಷ್ಯ ಹಾಳಾಯಿತು ಎಂದು ಬಹಳ ದುಃಖದಲ್ಲಿದ್ದಳು.
‘‘ನಮ್ಮಿಬ್ಬರದ್ದು ನಿಜವಾದ ಪ್ರೀತಿಯೇ ಆಗಿದ್ದರೆ, ನೀನು ಹಿಸ್ಟರಿ ಸಬ್ಜೆಕ್ಟ್‌ನಲ್ಲಿ ಪಿಎಚ್‌ಡಿ ಮಾಡಬೇಕು. ಅಲ್ಲಿಯವರೆಗೂ ನಮ್ಮಿಬ್ಬರ ಮಧ್ಯೆ ಯಾವುದೇ ಮಾತುಕತೆ ಇಲ್ಲ. ನೀನು ಬರೋವರೆಗೆ ನಾನು ಕಾಯುತ್ತಿರುತ್ತೇನೆ’’ ಎಂದವಳೇ ತಿರುಗಿ ನೋಡದೆ ಹೊರಟು ಹೋದಳು. ಚೂರು ಗಾಳಿ ಇರಲಿಲ್ಲ. ಎಲೆಗಳ ಸದ್ದಿಲ್ಲ. ಸಂದಿಯಲ್ಲಿ ಸೂಸುತ್ತಿದ್ದ ಸೂರ್ಯನ ಕಿರಣಗಳೂ ಪ್ರಖರವಾಗಿದ್ದವು. ಆಗಲೇ ನಿರ್ಧರಿಸಿದ್ದೆ. ಗೆಲ್ಲಲೇಬೇಕು ನಾನೊಂದು ದಿನ ಎಂದು.
ಅಂದಿನ ನಿರ್ಧಾರವನ್ನು ಪೂರೈಸುವ ಅಂತಿಮ ಘಟ್ಟದಲ್ಲಿದ್ದೇನೆ ಈಗ . ಎಲ್ಲವೂ ನಾನು ಅಂದುಕೊಂಡಂತೆ ಆದರೆ, ಮುಂದಿನ ವಸಂತ ಬರುವುದರೊಳಗೆ ನನ್ನ ಹೆಸರಿನ ಹಿಂದೆ  ‘ಡಾ.’ ಸೇರಿರುತ್ತೆ. ಅದೇ ಮರದ ಕೆಳಗೆ ನಿಂತ ಆಕೆಗೆ ನನ್ನ ಮುಖ ತೋರಿಸುವ ಹಂಬಲ.

This article has been published in VijayKarnataka, on 27 March 2017 edition

ಶನಿವಾರ, ಫೆಬ್ರವರಿ 18, 2017

ಸೋಮವಾರ, ಫೆಬ್ರವರಿ 13, 2017

ಹುಡುಗನೊಬ್ಬನ ಗಜಲ್‌ಗಳು: ಕ್ಯಾಮೆರಾ ಕನ್ಯೆಯ ಔಟ್ ಆಫ್ ಫೋಕಸ್ ಪ್ರೀತಿ

- ಅವಳದೊಂದು ಅದ್ಭುತ ಲೋಕ; ಅದರಲ್ಲಿ ನಾನಿದ್ದೆ ಎಂಬ ಹೆಮ್ಮೆಯಷ್ಟೇ


- ಪ್ರದ್ಯುಮ್ನ
ಮಹಾತ್ಮ ಗಾಂಧಿಯ ರಸ್ತೆಯ ಆ ಕಾಫಿ ಡೇಯ ಮಂದ ಬೆಳಕಿನಲ್ಲಿ ಅವಳ ಮುಖ ಅಸ್ಪಷ್ಟ ಕಾಣುತ್ತಿತ್ತು. ನಮ್ಮಿಬ್ಬರ ತಲೆಯೊಳಗೂ ವಿಚಾರಗಳ ಸ್ಪಷ್ಟತೆ ಇರಲಿಲ್ಲ. ಅಷ್ಟಕ್ಕೂ ಆ ಕಾಫಿ ಡೇ ನಮ್ಮಿಬ್ಬರಿಗೆ ಅಪರಿಚತವೇನೂ ಅಲ್ಲ. ಆದರೆ, ಅಲ್ಲಿರುವ ಎಲ್ಲ ಚೇರ್‌ಗಳೆಲ್ಲ ಭರ್ತಿಯಾಗಿದ್ದರೂ ನಾವಿಬ್ಬರೇ ಅಲ್ಲಿದ್ದೇವೆ ಎಂಬ ಭಾವನೆ ಮನೆ ಮಾಡಿತ್ತು. ಮೊದಲು ಅವಳು ಮಾತು ಆರಂಭಿಸಲಿ ಎಂದು ನಾನು; ನಾನೇ ಮೊದಲು ಮಾತನಾಡಲಿ ಎಂದು ಅವಳು. ಒಬ್ಬರಿಗೊಬ್ಬರು ಬಾಯಿ ಬಿಡುತ್ತಿಲ್ಲ. ಹೀಗೆ ಹತ್ತಾರು ನಿಮಿಷಗಳು ಸರಿದು ಹೋದವು. ಹಿನ್ನೆಲೆಯಲ್ಲಿ  ರಫಿ ಸಾಬ್ ಹಾಡುತ್ತಿದ್ದರು:
ತು ಇಸ್ ತರಹ ಸೇ ಮೇರಿ ಜಿಂದಗಿ ಮೇ ಶಾಮೀಲ್ ಹೈ
ಜಹಾಂ ಭೀ ಜಾಂವೂ ಯೇ ಲಗ್ತಾ ಹೈ ತೇರಿ ಮೆಹಫಿಲ್ ಹೈ
ನಮ್ಮಬ್ಬಿರ ನಡುವಿನ ಏಕಾಂತವನ್ನು ರಫಿ ಸಾಬ್‌ರ  ಈ ಹಾಡು ಮತ್ತಷ್ಟು ಘನ ಘೋರ ಸ್ಥಿತಿಗೆ ತಲುಪುವಂತೆ ಮಾಡುತ್ತಿತ್ತು. ಒಂದು ಹಂತದಲ್ಲಿ ಅವಳನ್ನು ಹಾಗೆಯೇ ಬಿಟ್ಟು ಎದ್ದು ಹೋಗಿ ಬಿಡಲೇ ಎಂಬ ಯೋಚನೆಯೂ ಸುಳಿದು ಹೋಯಿತು. ಮರುಗಳಿಗೆಯಲ್ಲೇ ಬೇಡ, ಇದೇ ಕೊನೆ ಭೇಟಿಯಾಗಬಹುದು. ಮತ್ತೆ ಅವಳು ಸಿಗುತ್ತಾಳೋ ಇಲ್ಲವೋ ಗೊತ್ತಿಲ್ಲ. ಕೊನೆಯ ಅವಕಾಶವನ್ನು ಹೀಗೆ ಫಲಪ್ರದವಿಲ್ಲದೆ ತಪ್ಪಿಸಿಕೊಳ್ಳುವುದು ಬೇಡ ಎಂದು ತಳವೂರಿ ಗಟ್ಟಿಯಾಗಿ ಕುಳಿತೆ. ಅಷ್ಟರಲ್ಲಿ ಆರ್ಡರ್ ಮಾಡಿದ್ದ ಕಾಫಿಯನ್ನು ಹಿಡಿದುಕೊಂಡು ಬಂದ ವೇಟರ್, ನಮ್ಮ ಮುಂದೆ ‘‘ಕಾಫಿ ಪ್ಲೀಸ್,’’  ಎಂದಾಗಲೇ, ಇಬ್ಬರು ‘‘ಇಲ್ಲಿಡಿ,’’ ಎಂದೆವು. ಬಹುಶಃ ಅದೊಂದು ನೆಪ ನಮ್ಮಿಬ್ಬರ ನಡುವೆ ಕವಿದಿದ್ದ ವೌನದ ಕತ್ತಲೆಯನ್ನು ಹೊಡೆದೊಡೆಸಿ, ಮಾತಿನ ಬೆಳಕು ಮೂಡಿಸಲು ಸಾಧ್ಯವಾಯಿತು ಅಂತ ಕಾಣುತ್ತದೆ.
‘‘ನಿಜವಾಗ್ಲೂ ನನ್ ಕ್ಷಮಿಸಿ ಬಿಡು. ಹಾಗಂತ, ನಾನು ಕ್ಷಮೆಗೆ ಯೋಗ್ಯಳು ಎಂದು ಹೇಳುತ್ತಿಲ್ಲ. ಆದರೆ, ಇದನ್ನು ಬಿಟ್ಟು ಬೇರೆ ಯಾವ ಪದಗಳು ಗೊತ್ತಾಗುತ್ತಿಲ್ಲ; ದಾರಿಯೂ ಕೂಡ,’’ ಎಂದು ಒಂದೇ ಉಸಿರಿನಲ್ಲಿ ಹೇಳಿದಳು. ಅಲ್ಲಿಗೆ ಎಲ್ಲವೂ ಸ್ಪಷ್ಟವಾಯಿತು. ಅವಳ ಮುಖವನ್ನೊಮ್ಮೆ ನೋಡಬೇಕು ಎಂದು ಕತ್ತು ಮೇಲೆತ್ತಿ ನೋಡಲು ಪ್ರಯತ್ನಿಸಿದೆ. ಅದಾಗಲೇ ಅವಳ ಕೆನ್ನೆ ಮೇಲೆ ಕಣ್ಣೀರು ಧಾರೆಯಾಗುತ್ತಿತ್ತು. ಆ ಕ್ಷಣದಲ್ಲಿ ಅವಳಿಗೇನು ಹೇಳಬೇಕು ಎಂದು ತೋಚದೆ ಮತ್ತೆ ನನ್ನ ಚಿತ್ತವನ್ನು ಕಾಫಿಯ ಮೇಲೆ ನೆಟ್ಟೆ. ಕಪ್‌ನಿಂದ ಮೇಲೇಳುತ್ತಿದ್ದ ಹಬೆಯ ಚಕ್ರಗಳು ನನ್ನಲ್ಲೇಳುತ್ತಿದ್ದ ದುಃಖದ ಅಲೆಗಳನ್ನೇ ಸಮೀಕರಿಸುತ್ತಿದ್ದವು.
ಕೇವಲ ಆರು ತಿಂಗಳ ಹಿಂದೆ ನಾವು ಹೀಗಿರಲಿಲ್ಲ; ನಮ್ಮ ನಡುವಿನ ಜಗತ್ತೇ ಬೇರೆಯದ್ದಿತ್ತು. ಅವಳೋ ಕ್ಯಾಮೆರಾ ಹೇಗಲಿಗೇರಿಸಿಕೊಂಡು ಹೊರಟಳೆಂದರೆ ಅದಕ್ಕೆ ದಿಕ್ಕು ದಿಸೆ ಇರುತ್ತಿರಲಿಲ್ಲ. ಹೋಗುವ ದಾರಿ ಯಾವುದು, ಅದು ಎಲ್ಲಿಗೆ ತಲುಪುತ್ತದೆ ಎಂಬುದನ್ನೂ ಯೋಚಿಸುತ್ತಿರಲಿಲ್ಲ. ಎದುರಿಗೆ ಸಿಗುವ ಪ್ರತಿ ವ್ಯಕ್ತಿ, ಗಿಡ, ಮರ, ಪ್ರಾಣಿ, ಪಕ್ಷಿ, ಮನೆ, ದಾರಿ ಬದಿಯ ಕಲ್ಲುಗಳನ್ನಿಟ್ಟು ಪೂಜೆ ಮಾಡುವ ದೇವಸ್ಥಾನವಲ್ಲದ ದೇವಸ್ಥಾನ.... ಹೀಗೆ ಕಣ್ಣಿಗೆ ಕಾಣುವ ಎಲ್ಲವೂ ಅವಳ ಕ್ಯಾಮೆರಾದಲ್ಲಿ ಬಂದಿಯಾಗುತ್ತಿದ್ದವು. ಅವಕ್ಕೊಂದು ಕವಿತೆಯ ಸ್ಪರ್ಶ ದಕ್ಕುತ್ತಿತ್ತು. ಅಷ್ಟೂಂದು ಸೃಜನಾತ್ಮಕವಾಗಿ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಳು. ಅವಳ ಕ್ಯಾಮೆರಾದಲ್ಲಿ ಬಂದಿಯಾಗುವ ಪ್ರತಿ ಚಿತ್ರವೂ ಒಂದೊಂದು ಕತೆ ಹೇಳುತ್ತಿದ್ದವು. ಹಾಗೆ ನೋಡಿದರೆ, ನೈಜದಲ್ಲಿದ್ದ ಚಿತ್ರಗಳಿಗಿಂತ ಆಕೆ ತೆಗೆದ ಚಿತ್ರಗಳು ಹೆಚ್ಚು ಗಮನ ಸೆಳೆಯುತ್ತಿದ್ದವು. ಗೊತ್ತಲ್ಲಿದಂತೆಯೇ ನಿಮ್ಮಳಗೇ ಇಳಿದು ಬಿಡುತ್ತಿದ್ದವು. ಅವಳ ಕ್ಯಾಮೆರಾ ‘ಕಣ್ಣ ಚಳಕ’ ಹಾಗಿತ್ತು. ಅವಳದೊಂದು ಅದ್ಭುತ ಲೋಕ; ಅದರಲ್ಲಿ ನಾನಿದ್ದೆ ಎಂಬ ಹೆಮ್ಮೆಯಷ್ಟೇ ನನ್ನ ಪಾಲಿಗೆ ಈಗ.
ಅಂಥವಳು ನನಗೆ ಸಿಕ್ಕಿದ್ದು ರೋಚಕವೇ. ನಮ್ಮಿಬ್ಬರು ನಡುವೆ ಅಂಥ ಸಾಮತ್ಯಗಳೇನಿಲ್ಲ. ನಾನೋ ಪುಸ್ತಕದ ಹುಳ. ಕೈಗೆ ಸಿಗುವ ಪುಸ್ತಕಗಳನ್ನು ಓದಲು ಕುಳಿತರೆ ಜಗತ್ತೇ ಮರೆತು ಹೋಗುತ್ತಿತ್ತು. ಆದರೆ, ನಮ್ಮಿಬ್ಬರನ್ನು ಬಂಧಿಸಿದ  ಏಕೈಕ ತಂತು; ‘ಮರಗಳ ಪ್ರೇಮ.’ ಅವಳೂ ಅಷ್ಟೇ ಅಭಿವೃದ್ಧಿಯ ನೆಪದಲ್ಲಿ ನಗರದಲ್ಲಾಗುತ್ತಿರುವ ಮರಗಳ ಮಾರಣಹೋಮಕ್ಕೆ ಆಕ್ರೋಶಿತಗೊಳ್ಳುತ್ತಿದ್ದಳು. ಅದನ್ನು ವಿರೋಧಿಸಿ ನಡೆಯುವ ಪ್ರತಿಭಟನೆ, ಚಳವಳಿಗಳೆನ್ನೆಲ್ಲ ತನ್ನ ಕ್ಯಾಮೆರಾ ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದಳು. ಇಂಥದ್ದೇ ಒಂದು ಪ್ರತಿಭಟನೆ ವೇಳೆ, ಆಕೆ ಪರಿಚಯವಾಗಿದ್ದು. ಅವಳೇನೂ ಅಂಥ ಹೇಳಿಕೊಳ್ಳುವಂಥ ಚೆಲುವೆಯಲ್ಲ. ಆದರೆ, ಅವಳಿಗಿರುವ ಬದ್ಧತೆ, ಪ್ಯಾಶನ್, ಆತ್ಮವಿಶ್ವಾಸ, ಪರಿಸರ ಕಾಳಜಿ ಅವಳತ್ತ ತುಸು ಹೆಚ್ಚೇ ಯೋಚಿಸುವಂತೆ ಮಾಡಿದ್ದವು. ಪರಿಚಯವಾಗಿದ್ದಾಗ ಹಾಯ್, ಬಾಯ್‌ಗಷ್ಟೇ ಸಿಮೀತವಾಗಿದ್ದ ಸಂಬಂಧ ಅದ್ಯಾವಾಗ ಸ್ನೇಹಕ್ಕೆ ತಿರುಗಿ ಮತ್ತೆ ಪ್ರೇಮಕ್ಕೆ ವಾಲಿತು ಎಂದು ಹೇಳುವುದು ಕಷ್ಟ. ಪ್ರೇಮ ಎಂದರೆ, ‘ಆಗುವುದಲ್ಲ’ ಅದು ‘ಸಂಭವಿಸುವುದು’ ಎಂದು ಅದ್ಯಾರೋ ಹೇಳಿದ್ದರು; ನಾನು ನಂಬಿರಲಿಲ್ಲ. ಆದರೆ ಈಗ ನಂಬದೇ ವಿಧಿಯಿಲ್ಲ. ಹೀಗೆ ಸಂಭವಿಸಿದ ಪ್ರೇಮಕ್ಕೆ ನಂಬಿಕೆಯೇ ಮೂಲದ್ರವ್ಯ. ನಮ್ಮಿಬ್ಬರ ಮಧ್ಯೆ ಈ ಮೂಲದ್ರವ್ಯಕ್ಕೇನೂ ಕೊರತೆ ಇರಲಿಲ್ಲ. ಸಂಭವಿಸಿದ ಪ್ರೇಮ ಹೆಮ್ಮರವಾಗಿ ಬೆಳೆದಿತ್ತು. ಅದರ ತಂಪನೆಯ ನೆರಳಲ್ಲಿ ಇಡೀ ಜಗತ್ತೆಲ್ಲ ಸುಂದರ ತಿಳಿ ಕೊಳದಂತಿತ್ತು. ಅಲ್ಲಿ ಕಷ್ಟಗಳೆಂಬ, ಅಪನಂಬಿಕೆಗಳೆಂಬ ಬಿಸಲಿನ ಪ್ರಖರ ಕಿರಣಗಳು ನಮ್ಮನ್ನು ತಾಕುತ್ತಿರಲಿಲ್ಲ. ಎಲ್ಲವೂ ಚೆಂದ ಇತ್ತು. ಮನವರಿತ ಗೆಳತಿ ಬಳಿ ಇರಲು ಇನ್ನೇನು ಬೇಕು?
ಹೀಗೆ ಎಲ್ಲವೂ ಚೆಂದ ಇದ್ದಾಗಲೇ, ಸರಳ ರೇಖೆಯಲ್ಲಿ ಜೀವನ ಸಾಗುತ್ತಿರುವಾಗಲೇ ಧುತ್ತನೇ ಎದುರಾಗುವ ಸಂಕಷ್ಟಗಳು ನಿಮ್ಮನ್ನು ಇನ್ನಿಲ್ಲದಂತೆ ಹೈರಾಣು ಮಾಡುತ್ತವೆ. ಪ್ರೇಮ ಪ್ರಕರಣಗಳೆಲ್ಲವೂ ಯಶಸ್ವಿಯಾಗಬೇಕೆಂದೇನೂ ರೂಲ್ಸ್ ಇಲ್ಲವಲ್ಲ. ಬಹುಶಃ ಈ ರೂಲ್ಸ್ ನಮ್ಮಿಬ್ಬರಿಗೂ ತುಸು ಹೆಚ್ಚೇ ಅಪ್ಲೈ ಆಯಿತು ಅಂತಾ ಕಾಣುತ್ತದೆ. ಈಗಲೂ ನನಗೆ ನಿರ್ದಿಷ್ಟ ಕಾರಣಗಳು ಹೊಳೆಯುತ್ತಿಲ್ಲ. ನಮ್ಮಿಬ್ಬರ ನಡುವಿನ ಬಾಂಧವ್ಯಕ್ಕೆ ತೊಡಕಾಗಿದ್ದು ಏನು? ಯಾತಕ್ಕಾಗಿ ನಾವಿಬ್ಬರೂ ಈಗ ಒಬ್ಬರನ್ನೊಬ್ಬರನ್ನು ಬಿಟ್ಟು ಅಗಲುವ ಸ್ಥಿತಿಗೆ ಬಂದು ಬಿಟ್ಟಿದ್ದೇವೆ? ಇಂಥ ಪರಿಸ್ಥಿತಿಗೆ ಅಸಲಿಗೆ ಕಾರಣಗಳೇನಾದರೂ ಇವೆಯೇ... ಎಷ್ಟೇ ಯೋಚಿಸಿದರೂ ಉತ್ತರ ಸಿಗುತ್ತಿಲ್ಲ. ನಮ್ಮಿಬ್ಬರನ್ನು ಬಂಧಿಸಿದ ‘ಮರಗಳ ಪ್ರೇಮ’ ಎಂಬ ಬದ್ಧತೆಯೇಕೆ ಇಷ್ಟು ಬೇಗ ಒಣಗಿ ಹೋಯಿತು? ಆದರೆ, ಈಗಂತೂ ಕವಲು ದಾರಿಯಲ್ಲಿ ನಿಂತಿದ್ದೇವೆ. ಸರಳ ರೇಖೆಯ ಜೀವನ, ವಕ್ರರೇಖೆಯಲ್ಲಿ ಅಂತ್ಯವಾಗುತ್ತಿದೆ ಎಂಬುದಂತೂ ಸತ್ಯ. ಇದಕ್ಕೆ ತಾನೇ ಕಾರಣ ಎಂದು, ಕಾರಣ ಹೇಳದೆ ಹೊರಟು ಹೋಗುವ ಸ್ಥಿತಿಯಲ್ಲಿ ಅವಳಿದ್ದಾಳೆ.
ಪ್ರೇಮ ಸಂಬಂಧ ಕಡಿದುಕೊಳ್ಳುವುದಕ್ಕೆ ಈ ಕಾಫಿ ಡೇ ವೇದಿಕೆಯಾಗಿದೆಯಷ್ಟೇ. ಅವಳಿಗೂ ಗೊತ್ತು ನಂಬಿಕೆ ಬುನಾದಿಯ ಮೇಲೆ ಬೆಳೆದ ಪ್ರೇಮವನ್ನು ಕತ್ತರಿಸಿಕೊಳ್ಳುವುದು ಅಷ್ಟು ಸರಳವಲ್ಲ. ಅವಳ ಮುಖದ ಮೇಲೆ ಎದ್ದೇಳುತ್ತಿದ್ದ ಭಾವನೆಗಳೇ ಎಲ್ಲವನ್ನೂ ಹೇಳುತ್ತಿದ್ದವು. ಆದರೆ, ಅವಳು ನಿಶ್ಚಿಯಿಸಿದ್ದಾಳೆ, ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆಂಬುದಂತೂ ‘‘ಕ್ಷಮಿಸಿ ಬಿಡು,’’ ಎಂದು ಹೇಳುವಾಗಲೇ ಮನವರಿಕೆಯಾಗಿತ್ತು. ಇನ್ನು ಅವಳಿಗೆ ಕಾರಣ ಕೇಳಿಯೂ ಉಪಯೋಗವಿಲ್ಲ. ತಡೆಯುವುದು ಅಸಾಧ್ಯದ ಮಾತು. ಅವಳ ಜೀವನ ಅವಳದ್ದು; ನನ್ನ ಜೀವನ ನನ್ನದು. ಹಾಗಂತ, ಅವಳ ನೆನಪುಗಳಿಂದ ದೂರ ಉಳಿಯತ್ತೇನೆಂದು ಭರವಸೆಯನ್ನಾದರೂ ಹೇಗೆ ಕೊಡಲಿ? ನೆನಪುಗಳಿಲ್ಲದಿದ್ದರೆ ಜೀವನಕ್ಕೇನು ಅರ್ಥವಿದೆ? ಒಣಗಿ ಹೋದ ಬೊಡ್ಡೆಯಿಂದ ಚಿಗುರು ಮತ್ತೆ ಮೂಡದೇ? ನಮ್ಮಿಬ್ಬರ ಜೀವನದಲ್ಲಿ ವಸಂತಗಾನ ಮತ್ತೆ ಶುರುವಾಗಬಹುದು ಎಂದು ಹೇಳಲು ಹೊರಟವನ ಮಾತುಗಳು ಗಂಟಲಲ್ಲೇ ಉಳಿದವು.
ಕಣ್ಣೀರು ಒರೆಸಿಕೊಳ್ಳುತ್ತಾ ಆಕೆ ಎದ್ದು ಹೋಗುವ ಹೊತ್ತಿಗೆ, ಟೇಬಲ್ ಮೇಲಿದ್ದ ಕಾಫಿ ತಣ್ಣಗಾಗಿತ್ತು; ನನ್ನೊಳಗೂ ಅದೇ ಭಾವ. ಹಿನ್ನೆಲೆಯಲ್ಲಿ, ಅದೇ ರಫಿ ಸಾಬ್ ತನ್ನ ತಣ್ಣನೆಯ ದನಿಯ ಹಾಡುತ್ತಿದ್ದರು:
ಇಸ್ಸ ಭರಿ ದುನಿಯಾ ಮೇಂ, ಕೋಯಿ ಭಿ ಹಮಾರಾ ನ ಹುವಾ
ಗೈರ ತೋ ಗೈರ ಹೈ, ಅಪ್ನೋಂ ಕಾ ಸಹಾರಾ ನ ಹುವಾ...




This article has been published in VijayKarnataka, on 13rd Feb 2017 edition

ಶುಕ್ರವಾರ, ಜನವರಿ 13, 2017

ರಾತ್ರಿಗಳು...

ಈ ರಾತ್ರಿಗಳಿಗೇಕಿಲ್ಲ
ಕತ್ತಲೆಯ ಭಯ?
ಚಂದ್ರ, ನಕ್ಷತ್ರಗಳದ್ದೇ
ಇರಬೇಕು ಅಭಯ!
***
ಈ ರಾತ್ರಿಯು ವಿಚಿತ್ರ
ತರುವುದು ಅವಳ
ನೆನಪು ಸಚಿತ್ರ

ಸೋಮವಾರ, ಜನವರಿ 2, 2017

ಹುಡುಗನೊಬ್ಬನ ಗಜಲ್‌ಗಳು: ಅವಳ ಕಣ್ಣಗಳಲ್ಲಿ ಕಾಂತಿ ತುಂಬುವ ಹಂಬಲ

- ಆಕೆ ಬಿಟ್ಟು ಹೋದ ಗಿಫ್ಟ್‌ನೊಂದಿಗೆ ಮತ್ತೆ ಹೊಸ ವರುಷದ ನಿರೀಕ್ಷೆಯಲ್ಲಿ....

- ಪ್ರದ್ಯುಮ್ನ
ಇಡೀ ಜಗತ್ತೇ ಹೊಸ ವರ್ಷದ ಆಚರಣೆಯ ಅಮಲಿನಲ್ಲಿ ಮುಳುಗಿದೆ. ಮಹಾನಗರಗಳ ಪಬ್ಬು, ಕ್ಲಬ್ಬುಗಳಲ್ಲಿ ಮದ್ಯಾರಾಧನೆಯೂ, ಬ್ಯಾಚುಲರ್‌ಗಳ ರೂಮ್‌ಗಳ ತುಂಬ ಬೀಯರ್- ರಮ್ ವಾಸನೆಯೂ, ರಸ್ತೆಗಳ ತುಂಬೆಲ್ಲ ಸೈಲೆನ್ಸರ್ ತೆಗೆದು ಕರ್ಣ ಕರ್ಕಶವಾಗಿ ಚೀರುತ್ತಾ ಓಡುವ ಬೈಕ್‌ಗಳೂ, ಅವುಗಳನ್ನು ಓಡಿಸುವ ನಶೆಯ ಸವಾರರೂ, ಅವರ ಬಾಯಿಂದ ಅಷ್ಟೇ ವಿಕಾರವಾಗಿ ಹೊರಡುವ ಹ್ಯಾಪಿ ನ್ಯೂ ಇಯರ್ ಎಂಬ ಪದಗಳೂ, ಆಕಾಶದ ತುಂಬ ಬಿರುಸು ಬಾಣ ಚಿತ್ತಾರಗಳೂ, ಆ ಸಂತೋಷದ ಕ್ಷಣಗಳೂ... ಇವೆಲ್ಲವೂ ಒಂದು ರೀತಿಯ ಕೊಲಾಜ್. ಇಂಥ ಚಿತ್ರಿಕೆಗಳಿಗೆ ಸಾವಿಲ್ಲ. ಹೊಸ ವರ್ಷವೆಂಬ ಕ್ಯಾನ್ವಾಸ್‌ನಲ್ಲಿ ಪ್ರತಿ ಬಾರಿಯೂ ಒಡಮೂಡಿ, ಸರಿದು ಹೋಗುವ ಚಿತ್ರಗಳು. ಇವಕ್ಕೆ ಕಲಾವಿದನ ಹಂಗಿಲ್ಲ. ಆದರೆ, ಇಂಥ ಸಂತೋಷದ ಕ್ಷಣಗಳನ್ನು ಆಸ್ವಾದಿಸುವ, ರಸಗಳಿಗೆಗಳನ್ನು ಸವಿಯುವ ಸಾಮರ್ಥ್ಯವನ್ನು ನಾನು ಕಳೆದುಕೊಂಡು ಸುಮಾರು ವರ್ಷಗಳಾದವು. ನೀಲಾಕಾಶದಲ್ಲಿ ಚಿತ್ತಾರದ ಸುರುಳಿಗಳು ಬಿಚ್ಚಿಕೊಂಡಾಗಲೆಲ್ಲ ನನ್ನೊಳಗೂ ಭಾವನೆಗಳ ಉಬ್ಬರ. ಅದೆಷ್ಟೋ ಹೊಸ ವರ್ಷಗಳ ಬಂದರೂ, ಹಳೆಯ ನೆನಪಗಳನ್ನೆಲ್ಲ ಗಂಟೆ ಮೂಟೆ ಕಟ್ಟಿಡಲು ಸಾಧ್ಯವಿಲ್ಲ. ಹೊಸ ಹೊಸ ವಸಂತ ತೆರೆದುಕೊಂಡಾಗಲೆಲ್ಲ ನೆನಪುಗಳ ಆಯುಷ್ಯ ಜಾಸ್ತಿಯಾಗುತ್ತಲೇ ಹೋಗುತ್ತದೆ. ಈ ನೆನಪುಗಳೇ ಹಾಗೇ, ಅವುಗಳಿಗೆ ಸಾವಿಲ್ಲ, ಬಣ್ಣವಿಲ್ಲ, ನಿರ್ಗುಣ, ನಿರಾಕಾರ! ಆದರೆ, ಅವುಗಳೊಳಗೇ ತುಂಬಿರುವ ನೋವಿನ ಆಲಾಪನೆ ಮಾತ್ರ ಎಂದಿಗೂ ಸಹಿಸಲು ಅಸಾಧ್ಯ.
ಹೊಸ ವರ್ಷದ ಹಿಂದಿನ ರಾತ್ರಿ ಎಂದರೆ; ನೋವಿನ ಕರಾಳ ರಾತ್ರಿ. ಆ ರಾತ್ರಿಯನ್ನು ನೆನೆಸಿಕೊಂಡರೇ ಈಗಲೂ ಮೈಯಲ್ಲಿ ನಡುಕ. ಉನ್ಮಾದದಲ್ಲಿ ಮಾಡಲು ಹೋದ ಹುಡುಗಾಟಿಕೆ ಇಡೀ ಜೀವನವನ್ನು ನೋವಿನ ಸರಪಳಿಯಲ್ಲಿ ಬಂಧಿಸಿಟ್ಟಿದೆ. ಆಕೆ ಬಿಟ್ಟು ಹೋದ ಹೊಸ ವರ್ಷದ ಗಿಫ್ಟ್ ಬಾಕ್ಸ್ ಇನ್ನೂ ಹಾಗೆಯೇ ಇದೆ; ಭದ್ರವಾಗಿದೆ. ಅದರೊಳಗೇನಿದೆ? ಗೊತ್ತಿಲ್ಲ. ಅದನ್ನು ಒಡೆದು ನೋಡುವ ಸಾಹಸ ಮಾಡಲು ನನ್ನಿಂದ ಸಾಧ್ಯವಿಲ್ಲ. ಅದು ಹಾಗೆಯೇ ಇರಬೇಕು; ಅದು ಆಕೆಯ ನಿಷ್ಕಲ್ಮಶ ಪ್ರೀತಿಯ ಕುರುಹು. ಅದರಲ್ಲಿ ನನಗಾಗಿ ಏನು ಕೊಟ್ಟಿರಬಹದು ಎಂಬೆಲ್ಲ ಲೆಕ್ಕಾಚಾರಗಳೇ, ಊಹೆಗಳೇ ನನ್ನೊಳಗೇ ಆಕೆಯನ್ನು ಜೀವಂತವಾಗಿಟ್ಟಿವೆ. ಒಡೆದು ನೋಡಿದರೆ ಊಹೆಗೂ, ಕಲ್ಪನೆಗೂ ಆಕಾರ ದಕ್ಕಿಬಿಡುತ್ತದೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ಅದು ಹಾಗೆಯೇ ಇದ್ದರೆ ಚೆನ್ನ. ನಿಗೂಢ ಕಾಣಿಕೆಯಾಗಿ, ನನ್ನನ್ನು ಸದಾ ಅವಳ ನೆನಪಿನಲ್ಲಿರುವಂತೆ ಮಾಡುವ ಏಕೈಕ ಸಾಧನವದು. ಮೋಸ್ಟಲೀ... ನನ್ನೊಂದಿಗೇ ಅದರ ಗುಟ್ಟು ಹೊರಟು ಹೋಗಬಹುದು.
ನಾವಾದರೂ ಹೇಗಿದ್ದವು? ಸ್ವರ್ಗಕ್ಕೆ ಕಿಚ್ಚು ಹಚ್ಚುವ ಪ್ರೀತಿಯದು. ನಮ್ಮನ್ನು ನೋಡಿ ಹಲುಬಿದವರು ಅನೇಕರು. ಅದೊಂದು ದಿವ್ಯ ಅನುಭೂತಿ. ಪ್ರೀತಿ ಕೊಟ್ಟು ಪ್ರೀತಿಯನ್ನು ಪಡೆದಾಗಲೇ ದಕ್ಕುವ ಅನನ್ಯ ಅನುಭವವದು; ಅದಕ್ಕೇ ಸಾಟಿಯೇ ಇಲ್ಲ, ಅವಳಿಗೂ. ಸದಾ ಚಟುವಟಿಕೆಯ ಚಿಲುಮೆ ಅವಳು. ಮುಂಗರುಳು ಸರಿಸುತ್ತಾ, ಪಟಪಟನೆ ಮಾತನಾಡುವ ಅವಳನ್ನು ನೋಡುವುದೇ ಚಂದ. ಅವಳ ಬಟ್ಟಲುಗಣ್ಣುಗಳಲ್ಲಿ ನೂರಾರು ಭರವಸೆ, ಏನೇನೋ ಮಾಡುವ ಹುಮ್ಮಸ್ಸು, ಒಮ್ಮೆಲೇ ನಭಕ್ಕೆ ನೆಗೆಯುವ ಅತ್ಯುತ್ಸಾಹ. ಅವಳನ್ನು ನೋಡಿದ ಯಾರಿಗಾದರೂ ಜೀವನೋತ್ಸಾಹ ಇಮ್ಮಡಿಯಾಗುವುದರಲ್ಲಿ ಸಂಶಯವೇ ಇರಲಿಲ್ಲ. ಗಗನಸಖಿಯಾಗಿ ವಿಮಾನದಲ್ಲಿ ಪ್ರಪಂಚ ಪರ್ಯಟನೆ ಮಾಡುವ ಅದಮ್ಯ ಬಯಕೆ ಆಕೆಯದ್ದು. ಆದರೆ?
ಅವಳೆಲ್ಲ ಕನಸುಗಳನ್ನು, ಹೆಬ್ಬಯಕೆಗಳನ್ನು ನಾನೇ ಕೊಂದು ಹಾಕಿದಿನಾ? ಇಂಥದೊಂದು ಗಿಲ್ಟ್ ಕಳೆದ ಐದು ವರ್ಷಗಳಿಂದ ಕಾಡುತ್ತಲೇ ಇದೆ. ನನ್ನಿಂದಾಗಿ ಅವಳ ಬದುಕೇ ಬರ್ಬಾದಾಗಿ ಹೋಯಿತು. ನನ್ನ ಒಂದು ಬೇಜವಾಬ್ದಾರಿ, ಅವಳ ಜೀವನದ ಪಥವನ್ನೇ ಬದಲಿಸಿ ಮುಂದೆ ದಾರಿಯಿಲ್ಲದ ಅಂಚಿನಲ್ಲಿ ತಂದು ನಿಲ್ಲಿಸಿದೆ ಅವಳನ್ನು. ನನ್ನ ಕನಸುಗಳನ್ನೂ ತನ್ನ ಕನಸಗಳೆಂದೇ ಭಾವಿಸಿ, ಸಂಭ್ರಮಸುತ್ತಿದ್ದ ಆಕೆಯಲ್ಲಿ ಕಣ್ಣಗಳಲ್ಲಿ ಆಕೆಯದ್ದೇ ಕನಸುಗಳಿಲ್ಲ. ಅವೆಲ್ಲವೂ ಮುರುಟಿ ಹೋಗಿವೆ. ಅವಳ ಮುಂದೆ ಹೊಸ ವರ್ಷದ ಆಚರಣೆಯ ಬಾಣ ಬಿರುಸಗಳು ಸೃಷ್ಟಿಸುವ ಚಿತ್ತಾರಗಳು ಕೇವಲ ಢಂ.. ಢಂ.. ಎನ್ನುವ ಶಬ್ಧವಷ್ಟೇ. ಅವುಗಳಿಗೆ ಆಕಾರವಿಲ್ಲ, ಸೌಂದರ್ಯವಿಲ್ಲ.
ಅಂದು ಹೀಗೆಯೇ, ಹೊಸ ವರ್ಷದ ಅಮಲಿನಲ್ಲಿ ತೇಲುತ್ತಾ, ಸಂತೋಷದ ರಣಕೇಕೆ ಹಾಕುತ್ತಾ ಹೊರಟಿತ್ತು ನಮ್ಮ ಟೀಮ್. ನನ್ನ ಬೈಕಿನಲ್ಲಿ ಹಿಂದೆ ಕುಳಿತ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾಕೆ ಗೊತ್ತಾ? ಮುಂದಿನ ವಾರ ಅವಳು ಗಗನಸಖಿಯಾಗಿ ಆಕಾಶದಲ್ಲಿ ಹಾರಾಡುವವಳಿದ್ದಳು. ಏರ್‌ಲೈನ್ಸ್ ಕಂಪನಿಯೊಂದು ಆಕೆಗೆ ಆಫರ್ ಲೆಟರ್ ಕೂಡ ಕೊಟ್ಟಿತ್ತು. ಅದೇ ಹುಮ್ಮಸ್ಸಿನಲ್ಲಿ ನನಗೊಂದು ಪುಟ್ಟ ಆ ‘ಗಿಫ್ಟ್’ ಕೊಟ್ಟಿದ್ದಳು. ನಮ್ಮ ಇಡೀ ಟೀಂಗೆ ಅವಳದ್ದೇ ಪಾರ್ಟಿ. ಎಂಟೊಂಭತ್ತು ಜನರಿದ್ದ ನಾವು, ಹೊಸ ವರ್ಷಕ್ಕೆ ಸೇರುವ ಆ ಬೃಹತ್ ರೋಡಿನಲ್ಲಿ ಕುಣಿದು ಕುಪ್ಪಳಿಸಲು ಅಷ್ಟೇ ವೇಗವಾಗಿ ಹೊರಟಿದ್ದವು. ಗಂಟಲೊಳಗೇ ಇಳಿದು ಹೋಗಿದ್ದು ತುಸು ವಿಸ್ಕಿ ನನ್ನನ್ನು ಸಂಪೂರ್ಣವಾಗಿ ನಿಯಂತ್ರಣ ತೆಗೆದುಕೊಳ್ಳುವ ಸನ್ನಾಹದಲ್ಲಿತ್ತು. ಆದರೆ, ಹುಚ್ಚು ಧೈರ್ಯದಿಂದ ಬೈಕಿ ಆ್ಯಕ್ಸಿಲೆಟರ್ ಕಿವಿಯೊತ್ತಿ ಬುರ್ರೆಂದು ಹೊರಟ ನಮಗೆ, ಮುಂದಾಗುವ ಅಪಘಾತದ ಮುನ್ಸೂಚನೆಯೇ ಇರಲಿಲ್ಲ. ಹಿಂದಿದ್ದ ಅವಳ ದನಿಯಲ್ಲಿ ಸಂತೋಷ ಉನ್ಮಾದವಿತ್ತು, ಕನಸು ಸಾಕಾರಗೊಂಡು ಸಂಭ್ರಮವಿತ್ತು. ಪ್ರೀತಿಸುವವನ ತೋಳು ತೆಕ್ಕೆಯಲ್ಲಿ ಬಂಧಿಯಾಗುವ  ದಿನಗಳ ಬಗ್ಗೆ ಲೆಕ್ಕ ಹಾಕುತ್ತಲೇ, ‘‘ನೋಡು ಇನ್ನೆರಡು ವರ್ಷದಲ್ಲಿ ನಾವಿಬ್ಬರು ಮದ್ವೆ ಆಗೋಣ. ಅಷ್ಟರಲ್ಲಿ ನಾನು ಇಡೀ ಜಗತ್ತು ಸುತ್ತಿ ಬರುತ್ತೇನೆ,’’ ಎಂದು ಹೇಳುತ್ತಿದ್ದ ಆಕೆಯ ಮಾತುಗಳು ಈಗಲೂ ಕಿವಿಯಲ್ಲಿ ಅಷ್ಟೇ ಗಟ್ಟಿಯಾಗಿ ಕೇಳಿಸುತ್ತಲೇ ಇರುತ್ತವೆ. ಆಕೆಯ ಮಾತುಗಳಿಗೆಲ್ಲ ‘‘ಎಸ್ ಬಾಸ್,’’ ಎನ್ನುತ್ತಲೇ ಆ್ಯಕ್ಸಿಲೆಟರ್ ತಿರುವುತ್ತಾ ಹೋದವನಿಗೆ, ಎದುರಾಗಿದ್ದು ನಮ್ಮಂತೆಯೇ ಸಂತೋಷದ ಅಮಲಿನಲ್ಲಿ ತೇಲಾಡುತ್ತಿದ್ದ ಜೋಡಿ ಇದ್ದ ಬೈಕ್. ತಪ್ಪು ಅವರದ್ದಾ..  ನಾನು ಮಾಡಿದ್ದು ತಪ್ಪಾ ಎನ್ನುವುದಕ್ಕಿಂತ, ಏನು ಆಗಬಾರದಿತ್ತೋ ಅದು ಆಗಿ ಹೋಗಿತ್ತು. ನಮ್ಮಿಬ್ಬರ ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ, ನಾವಿಬ್ಬರು ರೋಡ್ ಡಿವೈಡರ್‌ಗೆ ಬಡಿದಿದ್ದಾಯಿತು. ಅಷ್ಟೇ ಗೊತ್ತು. ಮುಂದೆನಾಯ್ತು? ಕಣ್ತೆರೆದು ನೋಡಿದಾಗ, ನಾವಿದ್ದದ್ದು ಆಸ್ಪತ್ರೆಯಲ್ಲಿ. ತಲೆಗೆ ಸ್ವಲ್ಪ ಪೆಟ್ಟು ಬಿದ್ದು, ಅಂಥ ಅಪಾಯವೇನಾಗಿರಲಿಲ್ಲ ನನಗೆ. ಆದರೆ, ಅವಳಿಗೆ? ಆಕೆ ತನ್ನ ಕಣ್ಣು ಕಾಂತಿಯನ್ನೇ ಕಳೆದುಕೊಂಡಿದ್ದಳು. ಮಿರರ್‌ನ ಚೂರುಗಳ ಆಕೆಯ ದೃಷ್ಟಿಯನ್ನು ತೆಗೆದು ಹಾಕಿದ್ದವು. ಅಲ್ಲಿಗೆ, ಆಕೆಯ ಇಡೀ ಕನಸು ಕತ್ತಲೆಯಲ್ಲಿ ಮುಳುಗಿ ಹೋಗಿತ್ತು. ಅದಕ್ಕೆ ನಾನು ಕಾರಣನಾದ ಗಿಲ್ಟು! ಹೊಸ ವರ್ಷದ ಸಂಭ್ರಮ ಈಗಲೂ ನನಗೆ ಅದೇ ನೋವನ್ನು ನೆನಪಿಸುವ, ಮಾಯದ ಗಾಯವನ್ನು ಮತ್ತೆ ಕೆದುಕುವ ದಿನವಷ್ಟೆ. ನನ್ನ ಬೇಜವಾಬ್ದಾರಿಯ ರೈಡಿಂಗ್ ಆಕೆಯ ಜೀವನದ ಮೇಲೆಯೇ ಭಾರಿ ಸವಾರಿ ಮಾಡಿ ಬಿಟ್ಟಿತ್ತು. ಅವಳೀಗ ಮೊದಲಿನಂತಿಲ್ಲ. ಅವಳಿಗೇ ಇಡೀ ಜಗತ್ತೇ ಕತ್ತಲು. ಆ ಗಾಢ ಕತ್ತಲಿನಲ್ಲಿ ನಾನು ಮಾತ್ರ ಮಿಣುಕುವ ದೀಪ ಅವಳಿಗೆ. ಆದರೆ, ಅವಳಪ್ಪನ ಸಿಟ್ಟಿಗೆ ಸುಮ್ಮನಿದ್ದಾಳೆ; ಅದ ಸಹಜವೂ ಕೂಡ.
ಅವಳು ಜತೆಯಲ್ಲಿ ಇಲ್ಲದಿರಬಹುದು. ಆದರೆ, ಆಕೆ ಕೊಟ್ಟ ಹೋದ ದಿವ್ಯ ಪ್ರೀತಿ, ಅನನ್ಯ ಅನುಭೂತಿ ಇದೆ. ಆಕೆ ಬಿಟ್ಟು ಹೋಗಿರುವ ನೂರಾರು ನೆನಪುಗಳಿವೆ. ಅಷ್ಟು ಸಾಕು. ತೀರಾ ದುಃಖವಾದಾಗ, ಆಕೆಯ ಆ ‘ಗಿಫ್ಟ್ ’ ಮತ್ತೆ ನನ್ನಲ್ಲಿ ಅದಮ್ಯ ಪ್ರೀತಿಯನ್ನು ಸ್ಪುರಿಸುತ್ತದೆ. ನೆನಪುಗಳಿಗೆ ಜೀವ ತುಂಬುತ್ತದೆ. ಆ ಕರಾಳ ರಾತ್ರಿಯ ಕಹಿ ನೆನಪನ್ನು ಮರೆ ಮಾಚುತ್ತದೆ. ಅದುವೇ ಆಕೆಯ ಪ್ರೀತಿಯ ದಿವ್ಯ ಸಾನ್ನಿಧ್ಯವನ್ನು ಕಲ್ಪಿಸುತ್ತದೆ. ನಾನು ಈಗಲೂ ಅವಳ ನಿರೀಕ್ಷೆಯಲ್ಲಿದ್ದೇನೆ, ಆಕೆ ನನ್ನ ಮೇಲಿಟ್ಟಿರುವ ಪ್ರೀತಿಗೆ ಅವರಪ್ಪ ಸೋಲುತ್ತಾನೆಂಬ ನಿರೀಕ್ಷೆಯಲ್ಲಿ ಆಕೆಯೂ ಇದ್ದಾಳೆ, ನಾನು ಕೂಡ. ಆ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಆಕೆಗೆ ಜೀವನಪೂರ್ತಿ ಕಣ್ಣಾಗಿ, ಆಕೆ ಕಂಡ ಕನಸಗಳಿಗೆ ನಾನು ಜೀವ ತುಂಬುತ್ತೇನೆ. ಅವಳ ಕಣ್ಣಲ್ಲಿ ಕಾಂತಿ ತುಂಬುವ ಹಂಬಲ ನನ್ನದು.



This article has published in VijayKarnataka, on 2nd jan 2017 edition