ಶನಿವಾರ, ಅಕ್ಟೋಬರ್ 15, 2022

Justice D Y Chandrchud | ಡಿ ವೈ ಚಂದ್ರಚೂಡ್ ನ್ಯಾಯನಿಷ್ಠ, ಧೈರ್ಯಶಾಲಿ ನ್ಯಾಯಮೂರ್ತಿ

| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ, 'ಭಾರತೀಯ ನ್ಯಾಯಾಂಗವು ವ್ಯವಸ್ಥೆ ಸುರಕ್ಷಿತ ಕೈಗಳಲ್ಲಿದೆ' ಎಂಬ ಮೆಚ್ಚುಗೆ ಎಲ್ಲೆಡೆಯಿಂದ ಕೇಳಿ ಬಂತು! ನ್ಯಾಯವಾದಿಯಾಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ, ಹೈಕೋರ್ಟ್ ನ್ಯಾಯಮೂರ್ತಿ- ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅವರು ತೋರಿದ ಧೈರ್ಯ, ದೃಢತೆ, ನ್ಯಾಯಪರತೆಯೇ ಈ ಮೆಚ್ಚುಗೆಯ ಹಿಂದಿನ ಕಾರಣ.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

ನ್ಯಾ. ಚಂದ್ರಚೂಡ್ ಅವರನ್ನು ಹತ್ತಿರದಿಂದ ಬಲ್ಲ ಮುಂಬೈ ನ್ಯಾಯವಾದಿಗಳು ಅವರನ್ನು ಮೂರು ಸಿ(C)ಗಳಲ್ಲಿ ಬಣ್ಣಿಸುತ್ತಾರೆ.  compassion, courage and conscientiousness. ಅಂದರೆ, ಸಹಾನುಭೂತಿ, ಧೈರ್ಯ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ವ್ಯಕ್ತಿ ಎಂದರ್ಥ. ಅವರು ನೀಡಿದ ಎಲ್ಲ ತೀರ್ಪುಗಳಲ್ಲಿ ನ್ಯಾಯಪರತೆಯೊಂದಿಗೆ ಈ ಮೂರು ಮೌಲ್ಯಗಳು ಪ್ರತಿಫಲನಗೊಂಡಿರುವುದನ್ನು ಸುಲಭವಾಗಿ ಗುರುತಿಸಬಹುದು. ಹಾಗಾಗಿಯೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿ. ವೈ.ಚಂದ್ರಚೂಡ ಅವರಿಗೆ ವಿಶೇಷವಾದ ಗೌರವವಿದೆ. ಅವರೀಗ ಸುಪ್ರೀಂ ಕೋರ್ಟ್‌ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ. ಸುಮಾರು ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ  ಇರಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ದೀರ್ಘ ಅವಧಿಗೆ ಸಿಜೆಐ ಆಗುತ್ತಿರುವುದು ಇವರೇ ಮೊದಲಿಗರು. ಇನ್‌ಫ್ಯಾಕ್ಟ್ ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತರಾವ್ ವಿ ಚಂದ್ರಚೂಡ್ ಅವರೂ 7 ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ಇದು ಈ ವರೆಗಿನ ಗರಿಷ್ಠ ದಾಖಲೆಯಾಗಿದೆ. ಈಗ ಅವರ ಪುತ್ರ ದೀರ್ಘಾವಧಿಗೆ ಅದೇ ಹುದ್ದೆಯಲ್ಲಿ ಇರಲಿರುವುದು ಕಾಕತಾಳೀಯವಷ್ಟೇ.  ಬಹುಶಃ ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ತಂದೆ-ಮಗ ಇಬ್ಬರು ದೀರ್ಘಾವಧಿಗೆ ಸಿಜೆಐ ಆಗಿರುವುದು ವಿಶಿಷ್ಟ ದಾಖಲೆಯಾಗಲಿದೆ.

1959ರಲ್ಲಿ ಜನನ
ಡಿ ವೈ ಚಂದ್ರಚೂಡ್ ಅವರ ಪೂರ್ತಿ ಹೆಸರು ಧನಂಜಯ್ ಯಶವಂತರಾವ್ ಚಂದ್ರಚೂಡ್. 1959 ನವೆಂಬರ್ 11ರಂದು ಮುಂಬೈನಲ್ಲಿ ಜನಿಸಿದರು. ತಂದೆ ಯಶವಂತರಾವ್ ಚಂದ್ರಚೂಡ್. ಅವರೂ ಸಿಜೆಐ ಆಗಿದ್ದವರು. ತಾಯಿ ಪ್ರಭಾ. ಶಾಸ್ತ್ರೀಯ ಸಂಗೀತಗಾರ್ತಿ. ಧನಂಜಯ್ ಅವರು ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್‌ ಲಾ ಕಾಲೇಜಿನಿಂದ ಕಾನೂನು ಪದವಿ ಗಳಿಸಿದರು. ಹಾಗೆಯೇ, ಹಾರ್ವರ್ಡ್ ಲಾ ಸ್ಕೂಲ್‌ನಿಂದ ಮಾಸ್ಟರ್ ಆಫ್ ಲಾ ಮತ್ತು ಜುರಿಡಿಕಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಸಂಪಾದಿಸಿದರು.  ಆ ಬಳಿಕ ಅವರು ಬಾಂಬೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕಿ ಆರಂಭಿಸಿದರು. ಈ ಮಧ್ಯೆ ಅವರು ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಕೆಲಸ ಮಾಡಿದರು. 2000ರಲ್ಲಿ ಅವರನ್ನು ಬಾಂಬೆ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಅಕ್ಟೋಬರ್ 31ರಂದು ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. 2016 ಮಾರ್ಚ್ 13ರಂದು ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಭಡ್ತಿ ನೀಡಲಾಯಿತು. 

ಬಹುಮುಖ ವ್ಯಕ್ತಿತ್ವ
ನಿಯೋಜಿತ ಸಿಜೆಐ ಡಿ ವೈ ಚಂದ್ರಚೂಡ್ ಅವರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರ ಪೀಠದಲ್ಲಿ ಸ್ವಾಭಾವಿಕ ನಾಯಕನಂತಿರುತ್ತಾರೆ. ಅವರ ಸಮಚಿತ್ತತೆ, ಸಭ್ಯತೆ ಮತ್ತು ದೃಢವಾದ ನಡವಳಿಕೆ, ಅವರ ಪಾಂಡಿತ್ಯ ಮತ್ತು ನ್ಯಾಯದಾನ ಮಾಡುವ ಅವರ ಉತ್ಸಾಹವು ಹೆಚ್ಚು ವಿಶ್ವಾಸಾರ್ಹವಾಗಿದೆ. ಹಾಗಾಗಿ, ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಬಗ್ಗೆ ಇಡೀ ಜಗತ್ತೇ ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದರೆ ಅತಿಶಯೋಕ್ತಿಯೇನೂ ಆಗಲಾರದು. 

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಚಂದ್ರಚೂಡ್ ಅವರು ಮುಂಬೈ ವಿಶ್ವವಿದ್ಯಾಲಯದ ಕಂಪ್ಯಾರಟಿವ್ ಕಾನ್ಸಿಟಿಟ್ಯೂಷನಲ್ ಲಾ ಕಾಲೇಜು ಹಾಗೂ ಅಮೆರಿಕದ ಓಕ್ಲಹೋಮ್ ಯುನಿವರ್ಸಿಟಿಯ ಸ್ಕೂಲ್‌ ಆಫ್ ಲಾ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕರೂ ಹೌದು. ಚಂದ್ರಚೂಡ ಅವರು ನಿಸರ್ಗ ಪ್ರೇಮಿ. ನಡೆಯುವುದೆಂದರೆ ತುಂಬ ಖುಷಿ ಅವರಿಗೆ. ಅಧ್ಯಾತ್ಮಿಕ ಹಾಗೂ ತತ್ವಜ್ಞಾನ ವಿಷಯಗಳು ಇಷ್ಟ. ಇಬ್ಬರು ಮಕ್ಕಳಿದ್ದಾರೆ. ಮೊದಲನೆಯ ಮಗ ಅಭಿನವ್ ಬಾಂಬೆ ಹೈಕೋರ್ಟ್‍‌ನಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. ಎರಡನೇಯ ಮಗ ಚಿಂತನ್ ಅವರು ಲಂಡನ್‌ನ ಬ್ರಿಕ್ ಕೋರ್ಟ್ ಚೇಂಬರ್ಸ್‌ನಲ್ಲಿ ನ್ಯಾಯವಾದಿಯಾಗಿದ್ದಾರೆ.

ತಂದೆ ತೀರ್ಪುಗಳನ್ನೇ ಬದಲಿಸಿದ ಮಗ
ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತ ವಿ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 16ನೇ ಮುಖ್ಯ ನ್ಯಾಯಮೂರ್ತಿಯಾಗಿ ಏಳು ವರ್ಷ ನಾಲ್ಕು ತಿಂಗಳು ಕಾಲ ಕಾರ್ಯ ನಿರ್ವಹಿಸಿದ್ದರು. ಆ ಸಮಯದಲ್ಲಿ ಸಿಜೆಐ ಆಗಿ ಯಶವಂತ ಚಂದ್ರಚೂಡ್ ಅವರು ಖಾಸಗಿ ಹಕ್ಕು (right to privacy) ಮತ್ತು ವಿವಾಹೇತರ ಸಂಬಂಧ (Adultery) ಕುರಿತು ತೀರ್ಪು ನೀಡಿದ್ದರು. ಸೀನಿಯರ್ ಚಂದ್ರಚೂಡ್ ಅವರು ಅಡಲ್ಟರಿ ಕಾನೂನಿನ 497 ವಿಧಿಯ ಸಿಂಧುತ್ವವನ್ನು ಎತ್ತಿ ಹಿಡಿದ್ದರು. ಇದಾದ 35 ವರ್ಷದ ಬಳಿಕ ಅವರ ಪುತ್ರ ಡಿ ವೈ ಚಂದ್ರಚೂಡ್ ಅವರು, ನಮ್ಮ ತೀರ್ಪುಗಳು ವರ್ತಮಾನಕ್ಕೆ ಹೆಚ್ಚು ಹೊಂದಾಣಿಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು. ಅಲ್ಲದೇ, ವಿವಾಹೇತರ ಸಂಬಂಧ ಅಪರಾಧಿಕರಣವನ್ನು ತೆಗೆದು ಹಾಕಿದ್ದರು.  ಅದೇ ರೀತಿ, ಖಾಸಗಿ ಹಕ್ಕಿಗೆ ಸಂಬಂಧಿಸಿದಂತೆ ಸಿಜೆಐ ಯಶವಂತ್ ಚಂದ್ರಚೂಡ್ ಅವರು ವಿವಾದಿತ ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಬದಲಿಸಿದ್ದರು. 

ಡಿ ವೈ ಚಂದ್ರಚೂಡ್ ನೀಡಿದ ಪ್ರಮುಖ ತೀರ್ಪುಗಳು
|  ಅಯೋಧ್ಯೆ ವಿವಾದ: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠವು 2019 ನವೆಂಬರ್ 9ರಂದು ಐತಿಹಾಸಿಕ ತೀರ್ಪು ಪ್ರಕಟಿಸಿತು. ವಿವಾದಿತ ಅಯೋಧ್ಯೆಯ ಜಾಗವು ಹಿಂದೂಗಳಿಗೆ ಸೇರಿದ್ದು, ಮುಸ್ಲಿಮರಿಗೆ ಪರ್ಯಾಯ ಭೂಮಿ ಒದಗಿಸುವಂತೆ ಆದೇಶ ಮಾಡಲಾಯಿತು. ಈ ಸಾಂವಿಧಾನಿಕ ಪೀಠದ ನೇತೃತ್ವವನ್ನು ಅಂದಿನ ಮುಖ್ಯ ನ್ಯಾಯಮೂರ್ತಿ  ರಂಜನ್ ಗೊಗೊಯ್ ವಹಿಸಿದ್ದರು. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಸ್ ಅಬ್ದುಲ್ ನಝೀರ್, ಅಶೋಕ್ ಭೂಷಣ್ ಮತ್ತು ಎಸ್ ಎ ಬೋಬ್ಡೆ ಅವರು ಪೀಠದಲ್ಲಿದ್ದ ಇತರರು. ದಶಕಗಳಿಂದ ನಡೆದುಕೊಂಡಿದ್ದ ಬಂದಿದ್ದ ಪ್ರಕರಣಕ್ಕೆ ಈ ತೀರ್ಪು ಅಂತ್ಯ ಹಾಡಿತು.

|  ಖಾಸಗಿ ಹಕ್ಕು: 2007 ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಪೀಠವು ಖಾಸಗಿ ಹಕ್ಕಿನ ಸಂಬಂಧ ಐತಿಹಾಸಿಕ ತೀರ್ಪು ಪ್ರಕಟಿಸಿತು. ಖಾಸಗಿ ಹಕ್ಕು ಕೂಡ ಮೂಲಭೂತ ಹಕ್ಕು ಎಂಬುದನ್ನು ಸಂವಿಧಾನ ಖಾತರಿಪಡಿಸುತ್ತದೆ ಎಂಬ ತೀರ್ಪನ್ನು ಬರೆದಿದ್ದೇ ನ್ಯಾ. ಡಿ ವೈ ಚಂದ್ರಚೂಡ್ ಅವರು. ಖಾಸಗಿ ಹಕ್ಕು ಮತ್ತು ಘನತೆಯ ಹಕ್ಕು ಬದುಕಿನ ಆಂತರಿಕ ಹಕ್ಕುಗಳಾಗಿವೆ ಎಂದು ತಮ್ಮ ತೀರ್ಪಿನಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

|  ಗರ್ಭಪಾತ ಹಕ್ಕು:  ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿತು. ಅವಿವಾಹಿತ ಮತ್ತು ವಿವಾಹಿತ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ಹೊಂದಿದ್ದಾರೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪು ನೀಡಿದ ಡಿ ವೈ ಚಂದ್ರಚೂಡ ನೇತೃತ್ವದ ಪೀಠದಲ್ಲಿ ಎ ಎಸ್ ಬೋಪಣ್ಣ, ಬಿ ವಿ ನಾಗರತ್ನ ನ್ಯಾಯಮೂರ್ತಿಗಳಿದ್ದರು. 

|  ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ:  ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದವರ ಪ್ರವೇಶಕ್ಕೆ ಒಪ್ಪಿಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ಪೀಠದಲ್ಲೂ ನ್ಯಾ. ಡಿ ವೈ ಚಂದ್ರಚೂಡ್ ಅವರಿದ್ದರು. ಮಹಿಳೆಯರಿಗೆ ದೇಗುಲ ಪ್ರವೇಶ ನಿರಾಕರಿಸುವುದು ಸಾಂವಿಧಾನಿಕ ತತ್ವದ ವಿರುದ್ಧವಾಗಿದೆ ಎಂದು 9 ನ್ಯಾಯಮೂರ್ತಿಗಳಿದ್ದ ಪೀಠವು ಅಭಿಪ್ರಾಯಪಟ್ಟಿತ್ತು.

|  ಕ್ರಿಯೇಟಿವ್ ಪ್ರೈವೇಟ್ ಲಿ. ವರ್ಸಸ್ ಪಶ್ಚಿಮ ಬಂಗಾಳ ಪ್ರಕರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ರಿಪಬ್ಲಿಕ್ ಟಿವಿ  ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ರಕ್ಷಣಾ ಸಚಿವಾಲಯ ವರ್ಸಸ್ ಬಬಿತಾ ಪುನಿಯಾ ಪ್ರಕರಣದಲ್ಲಿ ಲಿಂಗ ಸಮಾನ ನ್ಯಾಯ ಹಾಗೂ ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಪರಿಸರ ರಕ್ಷಣೆ, ಕಾರ್ಮಿಕರ ಹಿತರಕ್ಷಣೆ ಸಂಬಂಧ ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಅದೇ ರೀತಿ, ಸಾಂವಿಧಾನಿಕ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲೂ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ತೀರ್ಪುಗಳಲ್ಲಿ ನ್ಯಾ. ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆ ಕೆಲಸ ಮಾಡಿದೆ.

ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜಿತವಾಗಿರುವ ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆಯಿಂದಾಗಿ ಈಗಾಗಲೇ ಹೆಸರುವಾಸಿಯಾಗಿದ್ದಾರೆ. ಹಾಗಾಗಿ, ಅವರ ಮೇಲೆ ನಿರೀಕ್ಷೆಗಳ ಬೆಟ್ಟ ದೊಡ್ಡದಿದೆ. ಮುಖ್ಯ ನ್ಯಾಯಮೂರ್ತಿಯಾಗಿ ಅವರ ಮುಂದೆ ಸಾಕಷ್ಟು ಸವಾಲಗಳೂ ಇವೆ. ಆದರೆ, ಈವರೆಗಿನ ಅವರ ಕಾರ್ಯವೈಖರಿಯನ್ನು ಪರಿಗಣಿಸಿದರೆ, ಎಲ್ಲ ಸವಾಲು, ಸಂಕಟಗಳನ್ನು ಅವರು ಮೆಟ್ಟಿ ನಿಲ್ಲುತ್ತಾರೆಂಬುದರಲ್ಲಿ ಅನುಮಾನಗಳಿಲ್ಲ.

ಈ ಲೇಖನವು ವಿಸ್ತಾರನ್ಯೂಸ್ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ.

ಭಾನುವಾರ, ಜುಲೈ 31, 2022

Partha Chatterjee and Arpita Mukherjee- ಹಗರಣಕ್ಕೆ ಪಾರ್ಥ ಅರ್ಪಿತ!

ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಎಂಬೆರಡು ಹೆಸರು ಬೇಡದ ಕಾರಣಕ್ಕೆ ಪ್ರಸಿದ್ಧಿಯಾಗಿವೆ. ವಿಭಿನ್ನ ವ್ಯಕ್ತಿತ್ವದ ಈ ಇಬ್ಬರು ಹಗರಣದ ಸುಳಿಯಲ್ಲಿಸಿಲುಕಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
‘‘ಅವಳು ಚೆಲುವೆ. ಪ್ರತಿಭಾವಂತೆ. ಕೆಳಹಂತದಿಂದ ಮೇಲೆ ಬಂದವಳು. ನಾನು ಯಾವಾಗಲೂ ಹೊಸಬರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. 2013ರಲ್ಲಿನಾನು ಬಿಜೆಪಿ ಸೇರಿದೆ. ಆ ಬಳಿಕ ಸಂಪರ್ಕ ಕಡಿದು ಹೋಯಿತು. ಒಂದಂತೂ ಸತ್ಯ. ಆಕೆ, ಅತಿಯಾದ ಮಹತ್ವಾಕಾಂಕ್ಷೆ ಹೊಂದಿದ್ದಳು...’’

- ಚಿತ್ರಕರ್ಮಿ ಹಾಗೂ ಬಿಜೆಪಿಯ ನಾಯಕ ಸಂಗಮಿತ್ರ ಚೌಧರಿ ಅವರು ಅರ್ಪಿತಾ ಮುಖರ್ಜಿ ಬಗ್ಗೆ ಆಡಿದ ಮಾತುಗಳಿವು. ಚೌಧರಿ ಮಾತುಗಳು ಸತ್ಯ. ಅರ್ಪಿತಾ ಮುಖರ್ಜಿ ಎಷ್ಟು ಪ್ರತಿಭಾವಂತಳೋ ಅಷ್ಟೇ ಮಹತ್ವಾಕಾಂಕ್ಷಿಯೂ ಹೌದು. ಯಾವುದೋ ಒಂದು ಹಂತದಲ್ಲಿರಾಜಕಾರಣಿಯ ನಂಟು ಬೆಳೆಸಿಕೊಂಡು, ಈಗ ಹಗರಣದ ಸುಳಿಯಲ್ಲಿಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಾಪ್ತ ಹಾಗೂ ಸಚಿವರಾಗಿದ್ದ ಪಾರ್ಥ ಚಟರ್ಜಿ ಶಾಲಾ ಸೇವಾ ಆಯೋಗದ ನೇಮಕಾತಿ ವೇಳೆ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಜಾರಿ ನಿರ್ದೇಶನಾಲಯ(ಇ.ಡಿ) ಹೊರ ಹಾಕುತ್ತಿರುವ ಮಾಹಿತಿ, ಎಣಿಸುತ್ತಿರುವ ನೋಟುಗಳ ಮೌಲ್ಯ ಇಡೀ ಹಗರಣದ ಕತೆಯನ್ನು ಹೇಳುತ್ತಿವೆ. ಈ ಕತೆಯೊಳಗೇ ‘ಕ್ಯಾಶ್‌ ಕ್ವೀನ್‌’ ನಟಿ ಅರ್ಪಿತಾ ಮುಖರ್ಜಿ ಅವರದ್ದೂ ಒಂದು ಪ್ರಮುಖ ಪಾತ್ರ! ಯಾಕೆಂದರೆ, ಬಗೆದಷ್ಟು ಸಿಗುತ್ತಿರುವ ನಗದು ಅರ್ಪಿತಾ ಮನೆಯಲ್ಲೇ ಹೆಕ್ಕಿರುವುದು. ಈವರೆಗೆ ಅರ್ಪಿತಾ ಮನೆಯಲ್ಲಿ50 ಕೋಟಿ ರೂ. ನಗದು ಮತ್ತು ನಾಲ್ಕೂವರೆ ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಯಾರು ಈ ಅರ್ಪಿತಾ ಮುಖರ್ಜಿ?
ಪ್ರತಿಭಾವಂತೆ ನಟಿ ಎನಿಸಿಕೊಂಡಿದ್ದ ಅರ್ಪಿತಾಗೆ ಸಿನಿಮಾರಂಗದಲ್ಲಿಅಬ್ಬಾ ಎನ್ನುವಂಥ ಯಶಸ್ಸು ಕಾಣಲಿಲ್ಲ. 2008ರಿಂದ 2014ರ ಅವಧಿಯಲ್ಲಿಅರ್ಪಿತಾ ಅವರು ಬೆಂಗಾಳಿ ಮತ್ತು ಒಡಿಯಾ ಭಾಷೆಯ ಕೆಲವು ಚಿತ್ರಗಳಲ್ಲಿನಟಿಸಿದ್ದಾರೆ. ಆದರೆ, ರಾಜಕೀಯ ಕಾರಿಡಾರ್‌ನಲ್ಲಿದೊರೆತ ಸಂಪರ್ಕಗಳು ಅರ್ಪಿತಾ ಅವರನ್ನು ಕೋಲ್ಕೊತಾದ ಪ್ರತಿಷ್ಠಿತ ವ್ಯಕ್ತಿಯನ್ನಾಗಿಸಿದವು. ದಕ್ಷಿಣ ಕೋಲ್ಕೊತಾದ ಚೋಕಾ ಪ್ರದೇಶದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿವಾಸ್ತವ್ಯ ಸಾಮಾನ್ಯವಾಯಿತು. ನಗರದಲ್ಲಿರುವ ಹುಕ್ಕಾ ಬಾರ್‌ಗಳಿಗೆ ಅರ್ಪಿತಾ ನಿತ್ಯದ ಕಸ್ಟಮರ್‌. ಬ್ಯಾಂಕಾಂಕ್‌, ಸಿಂಗಾಪುರ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿರಜೆ ಮೋಜು ಕಳೆದಿದ್ದಿದೆ. 

ಕೋಲ್ಕೊತಾದ ಹೊರವಲಯದಲ್ಲಿರುವ ಬೆಲ್ಗಾರಿಯಾದಲ್ಲಿವಾಸವಾಗಿದ್ದ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲಿಬಂದವರು ಅರ್ಪಿತಾ. ಕಾಲೇಜು ದಿನಗಳಿಂದಲೇ ಮಾಡೆಲಿಂಗ್‌ನಲ್ಲಿಆಸಕ್ತಿ. ತಂದೆಯ ಮರಣದ ನಂತರ, ಜಾಗ್ರಾಮ್‌ನ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದರು ಎಂಬ ಮಾಹಿತಿ ಈಗ ಹೊರ ಬಿದ್ದಿದೆ. ಆದರೆ, ಈ ಮದುವೆಯ ಬಗ್ಗೆ ಹೆಚ್ಚಿನ ವಿವರಗಳೂ ಇನ್ನೂ ಸಿಕ್ಕಿಲ್ಲ. ಆ ಬಳಿಕ ಚಿತ್ರೋದ್ಯಮಕ್ಕೆ ಮರಳಿದ ಅರ್ಪಿತಾ, ಸುವೇಂದು ನಿರ್ದೇಶನದ ‘ಬಂದೆ ಉತ್ಕಲ್‌ ಜನನಿ’, ಅಶೋಕ್‌ ಪಟಿ ಅವರ ‘ಪ್ರೇಮ್‌ ರೋಗಿ’ ಸೇರಿದಂತೆ ಎಂಟು ಒಡಿಯಾ ಸಿನಿಮಾಗಳಲ್ಲಿನಾಯಕಿಯಾಗಿ ನಟಿಸಿದ್ದಾರೆ. ಈ ಎರಡೂ ಚಿತ್ರಗಳು ಬಾಕ್ಸಾಫಿಸ್‌ನಲ್ಲಿಹಿಟ್‌ ಎನಿಸಿಕೊಂಡಿವೆ. 2012ರಲ್ಲಿತೆರೆ ಕಂಡ ‘ರಾಜು ಆವಾರಾ’ ಒಡಿಯಾ ಚಿತ್ರವೇ ಕೊನೆ. ಮತ್ತೆ ಅರ್ಪಿತಾ ಒಡಿಯಾ ಚಿತ್ರದಲ್ಲಿಕಾಣಿಸಿಕೊಂಡಿಲ್ಲ. ಇದಕ್ಕೂ ಮೊದಲು ಕೇಮಿತಿ ಬಂಧನ (2011), ಮು ಕನಾ ಇತೆ ಖರಾಪ್‌(2010) ಚಿತ್ರಗಳಲ್ಲಿನಟಿಸಿದ್ದಾರೆ. ‘ಭೂತ್‌ ಇನ್‌ ರೋಸ್‌ವಿಲ್ಲೆ’, ‘ಜೀನಾ ದಿ ಎಂಡ್ಲೆಸ್‌ ಲವ್‌’, ‘ಬಿದೇರ್ಹಿ ಖೋಂಜೆ ರವೀಂದ್ರಹತ್‌’, ‘ಮಾಮಾ ಭಗ್ನೆ’ ಮತ್ತು ಪಾರ್ಟನರ್‌’ ಸೇರಿದಂತೆ ಕೆಲವು ಬೆಂಗಾಲಿ ಸಿನಿಮಾಗಳಲ್ಲಿಸಣ್ಣ ಪಾತ್ರಗಳಲ್ಲಿಅಭಿನಯಿಸಿದ್ದಾರೆ. ಆದರೆ 2014ರಿಂದ ಯಾವುದೇ ಬೆಂಗಾಲಿ ಸಿನಿಮಾದಲ್ಲೂಕಾಣಿಸಿಕೊಂಡಿಲ್ಲಅರ್ಪಿತಾ. 

ಪಾರ್ಥ ಚಟರ್ಜಿ ಅವರ  ನಕ್ತಲಾ ಉದಯನ್‌ ಸಂಘದ 2020 ಸಾಲಿನ ದುರ್ಗಾ ಪೂಜೆಗೆ ಅರ್ಪಿತಾ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದರು. ಆ ವೇಳೆಯಲ್ಲಿಅರ್ಪಿತಾ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಾರ್ಥ ಚಟರ್ಜಿ ಅವರ ಜತೆಗೆ ವೇದಿಕೆ ಹಂಚಿಕೊಂಡಿರುವ ಫೋಟೊಗಳು, ಕಂತೆ ಕಂತೆ ನೋಟು ಸಿಗುತ್ತಿದ್ದಂತೆ ಭಾರಿ ವೈರಲ್‌ ಆದವು. ಪ್ರತಿಪಕ್ಷ ಗಳು, ಟಿಎಂಸಿ ಜತೆ ಅರ್ಪಿತಾ ಇದ್ದಾರೆಂಬುದಕ್ಕೆ ಈ ಫೋಟೊಗಳು ಸಾಕ್ಷಿಯಾಗಿವೆ ಎಂದು ಆರೋಪಿಸಿವೆ. ಈ ಫೋಟೊಗಳನ್ನು ಪ್ರತಿಪಕ್ಷ ದ ನಾಯಕ ಸುವೇಂದು ಅಧಿಕಾರಿ ಟ್ವಿಟರ್‌ನಲ್ಲಿಹಂಚಿಕೊಂಡು, ಟಿಎಂಸಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. 

ದೀದಿಯ ಅತ್ಯಾಪ್ತ ಪಾರ್ಥ ಚಟರ್ಜಿ
ಈ ಹಿಂದೆ ಶಾರದಾ ಮತ್ತು ನಾರದ ಹಗರಣವು ಮಮತಾ ಬ್ಯಾನರ್ಜಿ ಸುತ್ತ ಇದ್ದ ಬಹುತೇಕ ನಾಯಕರನ್ನು ಸುತ್ತಿಕೊಂಡಿತ್ತು. ಆ ಸುಳಿಯಲ್ಲಿಸಿಲುಕಿಕೊಳ್ಳದೇ ಇದ್ದ ಏಕೈಕ ಹಿರಿಯ ಸಚಿವ ಈ ಪಾರ್ಥ ಚಟರ್ಜಿ. ಆ ಬಗ್ಗೆ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈಗ ಅದೇ ವ್ಯಕ್ತಿಯ ಸುತ್ತ ಶಿಕ್ಷ ಕರ ನೇಮಕ ಹಗರಣ ಸುತ್ತಿಕೊಂಡಿದೆ! 

ಕಾಲೇಜು ದಿನಗಳಿಂದಲೇ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದ ಪಾರ್ಥ ಅವರು, 1960ರ ದಶಕದಲ್ಲಿಕಾಂಗ್ರೆಸ್‌ ಮೂಲಕ ರಾಜಕಾರಣ ಆರಂಭಿಸಿದರು. ಶುಭ್ರತ್‌ ಮುಖರ್ಜಿ ಮತ್ತು ಪ್ರಿಯ ರಂಜನ್‌ ದಾಸಮುನ್ಷಿ ಅವರು ಪಾರ್ಥ ಅವರಿಗೆ ರೋಲ್‌ ಮಾಡೆಲ್‌ ರಾಜಕಾರಣಿಗಳು. ವಿದ್ಯಾರ್ಥಿಗಳ ದಿನಗಳಲ್ಲಿರಾಜಕೀಯದಲ್ಲಿದ್ದೂ ಉನ್ನತ ಶಿಕ್ಷ ಣವನ್ನು ಪಡೆದುಕೊಂಡ ಕೆಲವೇ ಕೆಲವು ಬಂಗಾಳದ ನಾಯಕರಲ್ಲಿಇವರು ಒಬ್ಬರು. ಕಲ್ಕತ್ತಾ ವಿವಿಯಿಂದ ಪಿಜಿ ಪದವಿ ಪಡೆದ ಅವರು, ಇಂಡಿಯನ್‌ ಇನ್ಸ್‌ ಟಿಟ್ಯೂಟ್‌ ಆಫ್‌ ಸೋಷಿಯಲ್‌ ವೆಲೆಧೀರ್‌ ಆ್ಯಂಡ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದರು. ಕಾರ್ಪೊರೇಟ್‌ ಕಂಪನಿಯಲ್ಲಿಸ್ವಲ್ಪ ದಿನಗಳ ಕಾಲ ಎಚ್‌ಆರ್‌ ಆಗಿ ಕೆಲಸ ಮಾಡಿದ ಅನುಭವವಿದೆ.

ಟಿಎಂಸಿ ಸರ್ಕಲ್‌ನಲ್ಲಿ‘ಪಾರ್ಥ ದಾ’ ಎಂದೇ ಖ್ಯಾತರಾಗಿದ್ದ ಅವರೇನೂ ಆಕರ್ಷಕ ಭಾಷಣಕಾರರಲ್ಲ. ಬದಲಿಗೆ ಅತ್ಯುತ್ತಮ ಸಂಘಟಕ. ಇಂದು ಟಿಎಂಸಿ ಏನಾದರೂ ಬಂಗಾಳದಲ್ಲಿತಳಮಟ್ಟದಲ್ಲಿಗಟ್ಟಿ ಕಾರ್ಯಕರ್ತರ ಪಡೆಯನ್ನು ಹೊಂದಿದೆ ಎಂದರೆ ಅದರಲ್ಲಿಪಾರ್ಥ ಅವರ ಕೊಡಗೆ ಅಪಾರ. ಆ ಕಾರಣಕ್ಕಾಗಿಯೇ ಮಮತಾ ದೀದಿ ಅವರನ್ನು ತಮ್ಮ ಅತ್ಯಾಪ್ತ ಬಳಗಕ್ಕೆ ಸೇರಿಸಿಕೊಂಡಿದ್ದರು. ಕಾಂಗ್ರೆಸ್‌ನಿಂದ ಟಿಎಂಸಿಗೆ ಹಿರಿಯ ನಾಯಕರೊಂದಿಗೆ ಬಂದ ಅವರು, ನಿಧಾನ ಮತ್ತು ನಿರಂತರ ಗತಿಯಲ್ಲಿತಮ್ಮ ರಾಜಕೀಯ ಬೆಳವಣಿಗೆಯನ್ನು ಕಂಡುಕೊಂಡರು. ದಕ್ಷಿಣ ಕೋಲ್ಕೊತಾ ಮೂಲದ ಪಾರ್ಥ ಅವರು, ಬಂಗಾಳ ವಿಧಾನಸಭೆಗೆ 2001ರಲ್ಲಿಬೆಹಲಾ ಪಶ್ಚಿಮ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದರು. ಆ ಬಳಿಕ ಸತತ ಐದು ಅವಧಿಗೆ ಗೆದ್ದಿದ್ದಾರೆ. 2011ರಲ್ಲಿಟಿಎಂಸಿ ಅಧಿಕಾರಕ್ಕೆ ಬಂದಾಗ ಪ್ರಮುಖ ಖಾತೆಗಳೇ ಇವರನ್ನು ಅರಸಿಕೊಂಡು ಬಂದವು. 2014ರಿಂದಲೂ ಅವರ ಸಂಪುಟ ದರ್ಜೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಬಂಗಾಳ ವಿಧಾನಸಭೆಯಲ್ಲಿಪ್ರತಿಪಕ್ಷ ದ ನಾಯಕರಾಗಿಯೂ ಪಾರ್ಥ ಕಾರ್ಯಧಿನಿರ್ವಹಿಸಿದ್ದಾರೆ. ಈಗ ಹಗರಣದ ಹಿನ್ನೆಲೆಯಲ್ಲಿಟಿಎಂಸಿ ಪಕ್ಷ ದಿಂದಲೇ ಅವರನ್ನು ಕಿತ್ತು ಹಾಕಲಾಗಿದೆ.

‘ಎಲ್ಲಬಣ್ಣಗಳನ್ನು ಮಸಿ ನುಂಗಿತು’ ಎನ್ನುವ ಹಾಗೆ, ಪಾರ್ಥ ಚಟರ್ಜಿ ಅವರೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಹಣದ ಲಾಲಸೆ, ಅಧಿಕಾರದ ದರ್ಪಗಳೆರಡೂ ಸೇರಿ ಬಿಟ್ಟರೆ ಅನಾಹುತ ಗ್ಯಾರಂಟಿ. ರಾಜಕೀಯ ಇತಿಹಾಸದಲ್ಲಿಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೂ ರಾಜಕೀಯ ನಾಯಕರು ಬುದ್ಧಿ ಕಲಿಯುವುದಿಲ್ಲ. ಅಪಾರ ಅನುಭವವಿದ್ದೂ ಅತಿಆಸೆಗೆ ರಾಜಕೀಯ ಜೀವನಕ್ಕೆ ಕೊಳ್ಳಿ ಇಟ್ಟುಕೊಂಡಿದ್ದು ಪಾರ್ಥ; ಅತಿ ಮಹತ್ವಾಕಾಂಕ್ಷಿಯೇ ಅರ್ಪಿತಾ ಅವರ ಜೀವನಕ್ಕೆ ಮುಸುಕು ಕವಿಯುವಂತೆ ಮಾಡಿತು!



ಈ ಲೇಖನವು ವಿಜಯ ಕರ್ನಾಟಕದ 2022ರ ಜುಲೈ 31ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಶುಕ್ರವಾರ, ಜುಲೈ 15, 2022

Briton former PM Boris Johnson: ಮೋಜುಗಾರ ಬೋರಿಸ್‌ ಜಾನ್ಸನ್

ಬೋರಿಸ್‌ ಜಾನ್ಸನ್‌ ಬ್ರಿಟನ್‌ ಪಿಎಂ ಸ್ಥಾನವನ್ನು ತೊರೆದಿದ್ದಾರೆ. ವಿಲಕ್ಷ ಣ ವ್ಯಕ್ತಿತ್ವದೊಂದಿಗೆ ನಾಯಕತ್ವವನ್ನು ಪ್ರದರ್ಶಿಸುತ್ತಿದ್ದ ಬೋರಿಸ್‌ ಜೀವನವೇ ಮಜವಾಗಿದೆ.


- ಮಲ್ಲಿಕಾರ್ಜುನ ತಿಪ್ಪಾರ
ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ‘ಬ್ರೆಕ್ಸಿಟ್‌’ ಪ್ರಕ್ರಿಯೆಯನ್ನು ಅಡೆ-ತಡೆಗಳ ಮಧ್ಯೆಯೇ ಪೂರ್ಣಗೊಳಿಸಿದ ಬೋರಿಸ್‌ ಜಾನ್ಸನ್‌, ಪ್ರಧಾನಿ ಪಟ್ಟದಿಂದಲೇ ‘ಎಕ್ಸಿಟ್‌’ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಬ್ರಿಟನ್‌ ಕಂಡ ‘ವಿಲಕ್ಷ ಣ’ ಪ್ರಧಾನಿ ಅವರು. ತಮ್ಮ ಮ್ಯಾನರಿಸಂ ಹಾಗೂ ನಿರ್ಧಾರಗಳ ಮೂಲಕ ಅದನ್ನು ಆಗಾಗ ಸಾಬೀತು ಮಾಡಿದ್ದಾರೆ. 58 ವರ್ಷದ ಬೋರಿಸ್‌ ಮೇಲ್ನೋಟಕ್ಕೆ ಹುಡುಗಾಟದ ಹುಡುಗನಂತೆ ಕಂಡರೂ, ಆಳದಲ್ಲಿಅವರಲ್ಲೊಬ್ಬ ನಾಯಕನಿದ್ದಾನೆ, ಸಂದರ್ಭ ಬಂದಾಗೆಲ್ಲಗಟ್ಟಿ ನಿರ್ಧಾರಕ್ಕೆ ಹಿಂಜರಿಯುವುದಿಲ್ಲಎಂಬುದನ್ನು ಈ ಮೂರು ವರ್ಷಗಳಲ್ಲಿಮನದಟ್ಟು ಮಾಡಿಸಿದ್ದಾರೆ.

ಬೋರಿಸ್‌ ಅವರು ಹಗರಣಗಳಲ್ಲೇ ಕಾಲ ಹರಣ ಮಾಡಿದಂತಿದೆ. ಕೆಲವೊಂದರಲ್ಲಿಅವರೇ ನೇರವಾಗಿ ಭಾಗಿಯಾದರೆ, ಮತ್ತೊಂದಿಷ್ಟು ಅವರಿಗೆ ಸಂಬಂಧ ಇರದಿದ್ದರೂ ತಲೆ ಕೊಡಬೇಕಾದ ಪರಿಸ್ಥಿತಿ ಎದುರಾಯಿತು. ಅವರ ರಾಜೀನಾಮೆಯ ಕೊನೆಯ ಪರದೆ ಎಳೆದಿದ್ದು, ನಾರಾಯಣಮೂರ್ತಿ ಅವರ ಅಳಿಯ ಹಾಗೂ ವಿತ್ತ ಸಚಿವರಾಗಿದ್ದ ರಿಷಿ ಸುನಾಕ್‌ ಮತ್ತು ಪಾಕಿಸ್ತಾನ ಮೂಲದ, ಆರೋಗ್ಯ ಸಚಿವ ಸಾಜಿದ್‌ ಜಾವಿದ್‌. ಇವರಿಧಿಬ್ಬರೂ ತಮ್ಮ ಹುದ್ದೆಗಳಿಂದ ನಿರ್ಗಮಿಸಿ, ಬೋರಿಸ್‌ ಅವರು ಪ್ರಧಾನಿ ಹುದ್ದೆಯನ್ನು ತ್ಯಜಿಸಲೇಬೇಕಾದ ಒತ್ತಡ ಸೃಷ್ಟಿಸಿದರು. ರಾಜಕೀಯವಾಗಿ ಬ್ರಿಟನ್‌ನ ಅತ್ಯುಧಿನ್ನತ ಹುದ್ದೆಗೇರಿದ ಬೋರಿಸ್‌ ಅವರ ಲೈಫ್‌ ಅಷ್ಟೇ ಕಲರ್‌ಫುಲ್‌. ವರ್ಣರಂಜಿತ ವ್ಯಕ್ತಿತ್ವ. ವೃತ್ತಿ, ಮದುವೆ ಹಾಗೂ ರಾಜಕೀಯದಲ್ಲಿಅವರದ್ದು ಎಂದೂ ಸರಳಧಿರೇಖೆಯಂಥ ಬದುಕಲ್ಲ; ವಕ್ರಗೆರೆಗಳೇ ಸೇರಿ ಹುಟ್ಟಿದ ಚಿತ್ತಾರ. 37ನೇ ವಯಸ್ಸಿಗೆ ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾದ ಅವರು 7 ವರ್ಷ ಅನುಭವ ಪಡೆದರು. 2008ರಿಂದ 2016ರವರೆಗೆ ಲಂಡನ್‌ನ ಮೇಯರ್‌ ಆಗಿದ್ದರು. 2016ರಿಂದ 2018ರವರೆಗೆ ಬ್ರಿಟನ್‌ನ ವಿದೇಶಾಂಗ ಸಚಿವರಾಗಿ ತಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರು. ಮೇಯರ್‌ ಆಗಿದ್ದ ಕಾಲದಲ್ಲಿಒಲಿಂಪಿಕ್ಸ್‌ ಕೂಟವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಅವರಿಗಿದೆ. ಇದೇ ಸಾಧನೆಯೇ ಅವರಿಗೆ ಕನ್ಸರ್ವೇಟಿವ್‌ ಪಕ್ಷ ದೊಳಗೆ ಗಟ್ಟಿ ನಾಯಕನ ಸ್ಥಾನ ಒದಗಿಸಿ,  ಬ್ರಿಟನ್‌ ಪ್ರಧಾನಿ ಹುದ್ದೆಯವರೆಗೂ ಕರೆ ತಂದಿತು. 

· ಹಲವು ಅಡೆತಡೆಗಳ ಮಧ್ಯೆಯೇ ಬ್ರೆಕ್ಸಿಟ್‌ ಪ್ರಕ್ರಿಯೆ ಪೂರ್ಣಗೊಳಿಸಿದ ಬ್ರಿಟನ್‌ನ ಪ್ರಧಾನಿ
· ಹಲವು ಹಗರಣಗಳು, ಅಪವಾದಗಳು ಬೋರಿಸ್‌ ನೇತೃತ್ವದ ಸರಕಾರ ವಿಶ್ವಾಸ ಕಳೆದುಕೊಳ್ಳಲು ಕಾರಣ
· ಲಂಡನ್‌ ಮೇಯರ್‌ ಆಗಿ ಬೋರಿಸ್‌ ಅತ್ಯುತ್ತಮ ಕೆಲಸ ಮಾಡಿ ಹೆಸರುವಾಸಿಯಾಗಿದ್ದರು

ಬೋರಿಸ್‌ ಪೂರ್ತಿ ಹೆಸರು ಅಲೆಕ್ಸಾಂಡರ್‌ ಬೋರಿಸ್‌ ಡಿ ಪಿಫೆಲ್‌ ಜಾನ್ಸನ್‌. ಅಮೆರಿಕದ ನ್ಯೂಯಾರ್ಕ್‌ ಸಿಟಿಯಲ್ಲಿ1964 ಜೂನ್‌ 19ರಂದು ಜನಿಸಿದರು. ತಂದೆ ಇಂಗ್ಲಿಷ್‌ಮನ್‌ ಸ್ಟ್ಯಾನ್ಲಿಜಾನ್ಸನ್‌. ತಾಯಿ ಷಾರ್ಲೆಟ್‌ ಫಾಸೆಟ್‌. ಕಾಲೇಜಿನಲ್ಲಿದ್ದಾಗಲೇ ಇವರಿಬ್ಬರಿಗೆ ಬೋರಿಸ್‌ ಜನಿಸಿದರು. ಹಾಗಾಗಿ, ಬೋರಿಸ್‌ ಜಾನ್ಸನ್‌ ಅವರಿಗೆ ದ್ವಿಪೌರತ್ವವಿತ್ತು. ಆದರೆ, ತೆರಿಗೆ ಭಾರ ತಾಳಲಾರದೇ 2016ರಲ್ಲಿಅಮೆರಿಕದ ಪೌರತ್ವವನ್ನು ಬಿಟ್ಟುಕೊಟ್ಟರು. ಬೋರಿಸ್‌ಗೆ ಐದು ವರ್ಷ ಆದಾಗ, ಅವರ ತಂದೆ ಬ್ರಿಟನ್‌ಗೆ ಮರಳಿದರು. ಬಾಲ್ಯದಲ್ಲಿಬೋರಿಸ್‌ ಕಿವುಡರಾಗಿದ್ದರು. ಆದರೆ, ಈ ಸಮಸ್ಯಯೇನೂ ದೀರ್ಘಾವಧಿಗೆ ಇರಲಿಲ್ಲ. ಆಕ್ಸ್‌ಫರ್ಡ್‌ನಲ್ಲಿಶಿಕ್ಷ ಣವನ್ನು ಪಡೆದುಕೊಂಡರು. 

1987ರಲ್ಲಿಕಾಲೇಜ್‌ ಶಿಕ್ಷ ಣ ಪೂರೈಸಿದ ಬಳಿಕ ದಿ ಟೈಮ್ಸ್‌ನಲ್ಲಿಪತ್ರಕರ್ತರಾಗಿ ಕೆಲಸಕ್ಕೆ ಸೇರಿಕೊಂಡರು. ವರದಿ ವೇಳೆ ಮೂಲವನ್ನು ತಪ್ಪಾಗಿ ಉಲ್ಲೇಖಿಸಿದ ಪರಿಣಾಮ ಅವರನ್ನು ಕೆಲಸದಿಂದ ಕಿತ್ತು ಹಾಕಲಾಯಿತು. ಇಷ್ಟಾಗಿಯೂ ಬೋರಿಸ್‌ ದಿ ಡೈಲಿ ಟೆಲಿಗ್ರಾಫ್‌, ದಿ ಸ್ಪೆಕ್ಟೇಟರ್‌ನಂಥ ಪತ್ರಿಕೆಗಳಲ್ಲಿಕೆಲಸವನ್ನು ಪಡೆದುಕೊಳ್ಳಲು ಯಶಸ್ವಿಯಾದರೂ, ಹೇಳಿಕೊಳ್ಳುವಂಥ ಸಕ್ಸೆಸ್‌ ಸಿಗಲಿಲ್ಲ. ಆದರೆ, ಕಡಿಮೆ ಅವಧಿಯಲ್ಲೇ ಬಲಪಂಥೀಯ ಒಲವು ಉಳ್ಳ ಓದುಗರನ್ನು ತಮ್ಮತ್ತ ಸೆಳೆಯಲು ಯಶಸ್ವಿಯಾದರು. 80ರ ದಶಕದಲ್ಲಿ100 ಜನರ ಸಾವಿಗೆ ಕಾರಣವಾದ ಫುಟ್‌ಬಾಲ್‌ ಸ್ಟೇಡಿಯಂ ದುರಂತದ ಬಗ್ಗೆ ವಕ್ರವಾಗಿ ಮಾತನಾಡಿ, ಟೀಕೆಗೆ ಗುರಿಯಾಗಿದ್ದರು. ಸಂಪಾದಕೀಯಕ್ಕೆ ಸಂಬಂಧಿಸಿದಂತೆ ಸಂವೇದನಾ ರಹಿತವಾಗಿ ಮತ್ತು ಅಶ್ಲೀಲ ಕಮೆಂಟ್‌ ಮಾಡಿ, ಕ್ಷ ಮೆ ಕೇಳಿದ ಘಟನೆ 2004ರಲ್ಲಿನಡೆಯಿತು.

ಬೋರಿಸ್‌ ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮಗಳನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಅವರಿಗೆ ಫುಟ್‌ಬಾಲ್‌, ರಗ್ಬಿ ತುಂಬಾ ಇಷ್ಟ. ಜಾಗಿಂಗ್‌ ಇನ್ನೂ ಇಷ್ಟ. ಹಾಗಾಗಿ, ಲಂಡನ್‌ನ ಬೀದಿಗಳಲ್ಲಿಜಾಗಿಂಗ್‌ ಮಾಡುತ್ತಾ ಸೈಕಲ್‌ ರೈಡ್‌ ಮಾಡುತ್ತಾ ಹೋಗುವುದನ್ನು ಜನ ನೋಡಬಹುದು. ರಗ್ಬಿ ವಿಷಯದಲ್ಲಿಇವರ ಭಾವಾವೇಶ ಎಷ್ಟೆಂದರೆ, ವಿದೇಶಾಂಗ ಕಾರ್ಯದರ್ಶಿಯಾಗಿ ಜಪಾನ್‌ಗೆ ಹೋಗಿದ್ದಾಗ ಆಟವಾಡುತ್ತಾ 10 ವರ್ಷದ ಬಾಲಕನೊಬ್ಬನನ್ನು ದೂಡಿ ಹಾಕಿದ್ದು ಭಾರಿ ಸುದ್ದಿಯಾಗಿತ್ತು. 2006ರಲ್ಲಿಫಿಫಾ ವರ್ಲ್ಡ್‌ ಕಪ್‌ ಪಂದ್ಯಾವಳಿ ವೇಳೆಯೂ ಬೋರಿಸ್‌ ಟೀಕೆಗೆ ಗುರಿಯಾಗಿದ್ದರು.

ರಾಸಲೀಲೆ ಕತೆಗಳು, ಹಗರಣಗಳು, ವಿಲಕ್ಷ ಣ ವ್ಯಕ್ತಿತ್ವದಿಂದಲೇ ಬೋರಿಸ್‌ ಹೊರ ಜಗತ್ತಿಗೆ ಹೆಚ್ಚು ಗೊತ್ತು. ಆದರೆ, ‘ಮಾಡೆಲ್‌ ಬಸ್‌’ಗಳನ್ನು ತಯಾರಿಸುವ ಪ್ರತಿಭೆ ಹೊಂದಿದ್ದಾರೆಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹಾಗಂತ ಅವರೇನೂ ಫ್ಯಾನ್ಸಿ ಬಸ್‌ಗಳನ್ನು ಮಾಡುವುದಿಲ್ಲ. ಬದಲಿಗೆ, ಹಳೆಯ ಮದ್ಯದ ಬಾಕ್ಸ್‌ಗಳು, ಪೇಂಟ್ಸ್‌ ಬಳಸಿಕೊಂಡು ಉತ್ಕೃಷ್ಟವಾದ ಮಾಡೆಲ್‌ ಬಸ್‌ಗಳನ್ನು ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಬಹುಶಃ ಅವರ ಈ ಹವ್ಯಾಸವೇ ‘ಬೋರಿಸ್‌ ಬಸ್‌’ ಯೋಜನೆಗೆ ಕಾರಣವಾಗಿರಬಹುದು. ಲಂಡನ್‌ನಲ್ಲಿಹೈಬ್ರಿಡ್‌ ಸಾರ್ವಜನಿಕ ಬಸ್‌ ಸೌಲಭ್ಯ ಕಲ್ಪಿಸಿದ್ದರು. ಆದರೆ, ಲಂಡನ್‌ ಮೇಯರ್‌ ಹುದ್ದೆಯಿಂದ ಕೆಳಗಿಳಿಯುಧಿತ್ತಿದ್ದಂತೆ ಆ ಯೋಜನೆ ಕೂಡ ರದ್ದಾಯಿತು. 

ಜಾನ್ಸನ್‌ ಅವರ ಎರಡನೇ ಪತ್ನಿಧಿಯಾಗಿದ್ದ ಮರೀನಾ ವೀಲರ್‌ ಭಾರತ ಮೂಲಧಿದವರು. ಇವರು ಪತ್ರಕರ್ತ ಸರ್‌ ಚಾರ್ಲ್ಸ್ ವೀಲರ್‌ ಮತ್ತು ದೀಪ್‌ ಸಿಂಗ್‌ ಮಗಳು. ಈ ದೀಪ್‌ ಸಿಂಗ್‌ ಯಾರೆಂದರೆ, ಖ್ಯಾತ ಬರಹಗಾರ ಖುಷ್ವಂತ್‌ ಸಿಂಗ್‌ ಅವರ ತಮ್ಮ ದಲ್ಜಿತ್‌ ಸಿಂಗ್‌ ಅವರ ಮೊದಲ ಪತ್ನಿ. ಹೀಗೆ, ಆಕೆ ಭಾರತದ ಮಗಳು. ಹಾಗಾಗಿ ಜಾನ್ಸನ್‌ ಕೂಡ ಭಾರತದ ಅಳಿಯ ಎನ್ನಬಹುದು. ಈ ಮದುವೆ 2020ರಲ್ಲಿವಿಚ್ಛೇದನದೊಂದಿಗೆ ಸಮಾಪ್ತಿಯಾಯಿತು. 2021ರಲ್ಲಿಕ್ಲೈಮೆಟ್‌ ಆ್ಯಕ್ಟಿವಿಸ್ಟ್‌ ಕ್ಯಾರಿ ಸೈಮಂಡ್ಸ್‌ ಅವರನ್ನು ಮದುವೆಯಾಗಿದ್ದಾರೆ. ಇವರ ಮೊದಲನೆಯ ಪತ್ನಿ ಹೆಸರು ಅಲ್ಲೆಗ್ರಾ. ಇವರನ್ನು 1987ರಲ್ಲಿಮದವೆಯಾದರು, 1993ರಲ್ಲಿವಿಚ್ಛೇದನ ನೀಡಿದರು. 

· ಅಮೆರಿಕ ಮತ್ತು ಇಂಗ್ಲೆಡ್‌ ದ್ವಿಪೌರತ್ವ ಹೊಂದಿದ್ದ ಜಾನ್ಸನ್‌ ಅಮೆರಿಕ ಪೌರತ್ವ ತ್ಯಜಿಸಿದ್ದಾರೆ
· ದಿ ಟೈಮ್ಸ್‌, ದಿ ಸ್ಪೆಕ್ಟೇಟರ್‌, ದಿ ಟೆಲಿಗ್ರಾಫ್‌ ಪತ್ರಿಕೆಗಳಲ್ಲಿಕೆಲಸ, ಅಂಥ ಸಕ್ಸೆಸ್‌ ಏನೂ ಸಿಗಲಿಲ್ಲ
· ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಬೋರಿಸ್‌ ಮುಂದಿನ ನಡೆಯ ಬಗ್ಗೆ ಕುತೂಹಲ

ಬೋರಿಸ್‌ ದಿ ಸ್ಪೆಕ್ಟೇಟರ್‌ ಪತ್ರಿಕೆಯಲ್ಲಿಕೆಲಸ ಮಾಡುತ್ತಿದ್ದಾಗ ಇಬ್ಬರು ಮಹಿಳೆರ ಮೇಲೆ ಕೈ ಹಾಕಿದ್ದರಂತೆ. ಮುಂದೆ ಪ್ರಧಾನಿಯಾದಾಗ ಆ ಮಹಿಳೆಯರು ಈ ವಿಷಯವನ್ನು ಬಹಿರಂಗಪಡಿಸಿದರು. ಶಾಡೋ ಆರ್ಟ್‌ ಮಿನಿಸ್ಟರ್‌ ಆಗಿದ್ದಾಗ ಪೆಟ್ರೋನೆಲ್ಲಾವ್ಯಾಟ್‌ ಜತೆಗಿನ ಅನೈತಿಕ ಸಂಬಂಧ ಹೊರಬೀಳುತ್ತಿದ್ದಂತೆ ಬೋರಿಸ್‌ 2004ರಲ್ಲಿತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 2009ರಲ್ಲಿಲಂಡನ್‌ ಮೇಯರ್‌ ಆಗಿದ್ದಾಗ, ಹೆಲೆನ್‌ ಮ್ಯಾಕಿನ್ರ್ಟೈ ಎಂಬಾಕೆ ಜತೆ ದೈಹಿಕ ಸಂಪರ್ಕದಲ್ಲಿದ್ದರು. ಅಲ್ಲದೇ ಹೆಣ್ಣು ಮಗುವಿನ ತಂದೆ ಕೂಡ ಆದರು. ಬೋರಿಸ್‌ ರಾಸಲೀಲೆ ಕತೆಗಳು ಬ್ರಿಟನ್‌ನ ಟ್ಯಾಬ್ಲಾಯ್ಡ್‌ಗಳಿಗೆ ಭಾರಿ ಸುದ್ದಿ ಭೋಜನವನ್ನು ಒದಗಿಸುತ್ತಿದ್ದವು. 

ಏನೇ ಆಗಲಿ, ಬ್ರಿಟನ್‌ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೆಚ್ಚಿಕೊಳ್ಳಧಿಲೇಬೇಕು. ತಮ್ಮದೇ ಪಕ್ಷ ದ ನಾಯಕನೊಬ್ಬ ಹಾದಿ ತಪ್ಪುತ್ತಿರುವುದು ಗೊತ್ತಾಗುಧಿತ್ತಿದ್ದಂತೆ ಅದನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಪ್ರತಿಭಟಿಸುತ್ತಾರೆ, ಪಕ್ಷ ದೊಳಗೇ ಭಿನ್ನಭಿಪ್ರಾಯಗಳಿಗೆ ಬೆಲೆ ನೀಡುತ್ತಾರೆ. ಈ ಒಂದು ಗುಣವೇ ಜಗತ್ತಿನ ಎಲ್ಲರಾಷ್ಟ್ರಗಳ ಪ್ರಜಾ ಪ್ರಭುತ್ವಕ್ಕೆ ಮಾದರಿಯಾಗಿದೆ. ಅದೇ ಮೌಲ್ಯಗಳಿಗೆ ಬೆಲೆ ಕೊಟ್ಟು ಬೋರಿಸ್‌ ಈಗ ಬ್ರಿಟನ್‌ ಪದ ಚ್ಯುತರಾಗಿಧಿದ್ದಾರೆ. ಹಾಗಾದರೆ, ಅವರ ಮುಂದಿರುವ ದಾರಿಗಳೇನು? ಅವರೇನು ಮಾಡುತ್ತಾರೆಂಬ ಪ್ರಶ್ನೆಗಳಿಗೆ ಬ್ರಿಟನ್ನಿಗರು ಉತ್ತರ ಹುಡುಕುಧಿತ್ತಿದ್ದಾರೆ. ರಾಜಕೀಯದಲ್ಲಿಏನು ಬೇಕಾದರೂ ಆಗಬಧಿಹುದು. ಇಂದು ಹೀರೊ ಆದವರು ನಾಳೆ ವಿಲನ್‌ ಆಗಬಹುದು; ವಿಲನ್‌ಗಳು ಹೀರೊ ಆಗಬಹುದು. ಮುಂದಿನ ಪ್ರಧಾನಿ ಆಯ್ಕೆಯವರೆಗೂ ಅವರೇ ಮುಂದುಧಿವರಿಯುತ್ತಾರೆ. ಆ ಬಳಿಕ ಏನು ಮಾಡಲಿ ದ್ದಾರೆಂಬುದನ್ನು ಕಾದು ನೋಡಬೇಕು.



ಗುರುವಾರ, ಜೂನ್ 30, 2022

Rebel Leader Eknath Shinde: ‘ರೆಬೆಲ್‌ ಲೀಡರ್‌’ ಏಕನಾಥಗೆ ಮುಖ್ಯಮಂತ್ರಿ ಪಟ್ಟ

ಕಣ್ಣ ಮುಂದೆಯೇ ಮಕ್ಕಳ ಸಾವಿನಿಂದಾಗಿ ರಾಜಕಾರಣದಿಂದ ದೂರವೇ ಸರಿದಿದ್ದ ಏಕನಾಥ ಶಿಂಧೆ ಮತ್ತೆ ಅಗ್ರಗಣ್ಯ ನಾಯಕರಾಗಿ ಬೆಳೆದಿದ್ದೇ ಅಚ್ಚರಿ


- ಮಲ್ಲಿಕಾರ್ಜುನ ತಿಪ್ಪಾರ
ಏಕನಾಥ ಶಿಂಧೆ ಎಂಬ ಏಕವ್ಯಕ್ತಿ ಮೇಲೆ ಇಡೀ ದೇಶ ಕುತೂಹಲದ ಕಣ್ಣಿಟ್ಟಿದೆ. ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌  ನೇತೃತ್ವದ ‘ಮಹಾ ವಿಕಾಸ್‌ ಅಘಾಡಿ’ ಸರಕಾರವನ್ನು ಖೆಡ್ಡಾಗೆ ಕೆಡವಿರುವ ಏಕನಾಥ, ಶಿವಸೇನೆಯ ಪ್ರಮುಖ ಹಾಗೂ ಭಾರಿ ಪ್ರಭಾವಿ ನಾಯಕ. ತಮ್ಮ ಪಕ್ಷ ವು ‘ಹಿಂದುತ್ವ’ವನ್ನು ಕೈಬಿಟ್ಟಿದೆ ಎಂದು ಆರೋಪಿಸಿ, 30ಕ್ಕೂ ಅಧಿಕ ಶಾಸಕರೊಂದಿಗೆ ಅಸ್ಸಾಂನ ಗುವಾಹಟಿ ಹೋಟೆಲ್‌ನಲ್ಲಿತಳವೂರಿದ್ದಾರೆ. ಮೇಲ್ನೋಟಕ್ಕೆ, ಶಿವಸೇನೆಯ ಸೈದ್ಧಾಂತಿಕ ವೈರುಧ್ಯದ ಕಾರಣಕ್ಕೇ ಬಂಡಾಯ ಬಾವುಟ ಹಾರಿಸಿದ್ದಾರೆ ಎನಿಸಿದರೂ ಆಳದಲ್ಲಿಅವರನ್ನು ಪಕ್ಷ ದಲ್ಲಿ ಮೂಲೆಗುಂಪು ಮಾಡಲಾಗುತ್ತಿದ್ದ ಪಿಸುಮಾತುಗಳಿವೆ!

ಹಣಬಲ ಮತ್ತು ತೋಳ್ಬಲದಲ್ಲಿಏಕನಾಥ ಶಿಂಧೆ ಅವರನ್ನು ಸರಿಗಟ್ಟುವವರಿಲ್ಲ. ಪಕ್ಷ ಕ್ಕೆ ಬೇಕಿರುವ ಮತಗಳನ್ನು ಕ್ರೋಡೀಕರಿಸುವಲ್ಲಿಸಿದ್ಧಹಸ್ತರು. ವಿಶೇಷವಾಗಿ ಠಾಣೆ ವ್ಯಾಪ್ತಿಯಲ್ಲಿಏಕನಾಥ ಅವರೇ ಶಿವಸೇನೆಯ ಅಸಲಿ ನಾಯಕ. ಅಷ್ಟರ ಮಟ್ಟಿಗೆ ವರ್ಚಸ್ಸಿದೆ. ಏಕನಾಥ ಅವರು ಹೇಗೆ ಇಷ್ಟು ಪ್ರಸಿದ್ಧಿಯಾದರು ಎಂದು ತಿಳಿದುಕೊಳ್ಳಧಿಬೇಕಿದ್ದರೆ ಅವರ ರಾಜಕೀಯ ಗುರು ‘ಆನಂದ್‌ ದಿಘೆ ಅವರ ಕುರಿತು ಕೊಂಚ ತಿಳಿದುಕೊಳ್ಳಬೇಕು. ‘ಧರ್ಮವೀರ್‌’ ಆನಂದ ದಿಘೆ ಠಾಣೆಯಲ್ಲಿಅಕ್ಷ ರಶಃ ಸಮಾನಂತರ ಸರಕಾರವನ್ನೇ ನಡೆಸುಧಿತ್ತಿದ್ದರು. ತಮ್ಮದೇ ಶೈಲಿಯಲ್ಲಿನಿತ್ಯವೂ ದರ್ಬಾರ್‌ ನಡೆಸಿ, ಸಮಸ್ಯೆಧಿಗಳನ್ನು ಆಲಿಸುತ್ತಿದ್ದರು. ಬಾಳಾಸಾಹೇಬ್‌ ಠಾಕ್ರೆ ಅವರ ಪರಮ ನಿಷ್ಠರು. ಈ ನಿಷ್ಠೆ ಯಾವ ಪರಿ ಇತ್ತೆಂದರೆ, 1989ರಲ್ಲಿಶ್ರೀಧರ ಖೋಪ್ಕರ್‌ ಎಂಬ ಸದಸ್ಯ ಕಾಂಗ್ರೆಸ್‌ ಪರವಾಗಿ ಮತ ಹಾಕಿದ್ದಕ್ಕೆ ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿಆನಂದ ದಿಘೆ ಅವರನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರ ಬಂದಿದ್ದರು. 2001ರಲ್ಲಿಹೃದಯಾಘಾತದಿಂದ ಸಾವಿಗೀಡಾದರು. ದಿಘೆ ಬಳಿಕ ಉಂಟಾಗಿದ್ದ ನಿರ್ವಾತವನ್ನು ತುಂಬಿದ್ದು ಇದೇ ಏಕನಾಥ ಶಿಂಧೆ. ಅವರದ್ದೇ ರಾಜಕೀಯ ಪಟ್ಟು, ಶೈಲಿಯನ್ನು ಕರಗತ ಮಾಡಿಕೊಂಡಿ­ದ್ದಾರೆ. ದಿಘೆ ಅವರಂತೆ ಏಕನಾಥ ಅವರದ್ದೂ ‘ಆಕ್ರಮಣಕಾರಿ’ ರಾಜಕಾರಣ; ಎಲ್ಲವೂ ತಾಬಡತೋಬಡ ಆಗಬೇಕು. ಎಂವಿಎ ಸರಕಾರದಲ್ಲಿಲೋಕೋಪಯೋಗಿ ಸಚಿವರಾಗಿರುವ 58 ವರ್ಷದ ಏಕನಾಥ ಅವರಿಗೇನೂ ರಾಜಕೀಯ ಕೌಟುಂಬಿಕ ಹಿನ್ನೆಲೆ ಇಲ್ಲ. 

ಸಾತಾರಾ ಮೂಲದವರು: ಏಕನಾಥ ಸಾತಾರಾ ಜಿಲ್ಲೆಜವಳಿ ತಾಲೂಧಿಕಿಧಿನವರು. ಹುಟ್ಟಿದ್ದು ಮರಾಠ ಕುಟುಂಬದಲ್ಲಿ1964 ಫೆಬ್ರವರಿ 9ರಂದು. ತಂದೆ ಸಂಭಾಜಿ. ಏಕನಾಥ ಚಿಕ್ಕವರಿದ್ದಾಗಲೇ ಅವರ ಕುಟುಂಬ ಠಾಣೆಗೆ ಸ್ಥಳಾಂತಧಿರವಾಯಿತು. ಮಂಗಳಾ ಹೈಸ್ಕೂಲ್‌ ಮತ್ತು ಜೂನಿಯರ್‌ ಕಾಲೇಜ್‌ನಲ್ಲಿ11ನೇ ತರಗತಿವರೆಗೆ ಓದಿದ್ದಾರೆ. ಮುಂದೆ ಓದುವ ಆಸೆ ಇದ್ದರೂ ಕುಟುಂಬಕ್ಕಾಗಿ ತಮ್ಮ ಶಿಕ್ಷ ಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ದಿನಗೂಲಿ ಕೆಲಸಗಳನ್ನು ಮಾಡಬೇಕಾಯಿತು. ತುಂಬಾ ಕಷ್ಟಪಟ್ಟು ಕೊನೆಗೆ ಆಟೊರಿಕ್ಷಾ ಚಾಲಕರಾದರು. 70 ಮತ್ತು 80ರ ದಶಕದಲ್ಲಿಮಹಾರಾಷ್ಟ್ರದ ಎಲ್ಲಯುವಕರಂತೆ ಏಕನಾಥ ಅವರಿಗೆ ಸೇನೆ ಚಟುವಟಿಕೆಗಳು ಆಕರ್ಷಿಸಿದವು. 1980ರಲ್ಲಿಶಿವಸೇನೆ ಸೇರಿದರು. ಠಾಣೆ ಜಿಲ್ಲಾಶಿವಸೇನೆ ಪ್ರಮುಖರಾಗಿದ್ದ ಆನಂದ್‌ ದಿಘೆ ಅವರ ‘ನೀಲಿಗಣ್ಣಿನ ಹುಡುಗ’ನಾಗಲು ಬಹಳ ದಿನಗಳೇನೂ ಬೇಕಾಗಲಿಲ್ಲ. ಪ್ರಾಮಾಧಿಣಿಕತೆ, ಕಠಿಣ ಪರಿಶ್ರಮಗಳಿಂದಾಗಿ ಬಾಳಾಸಾಹೇಬ್‌ ಠಾಕ್ರೆ ಕಣ್ಣಿಗೂ ಬಿದ್ದರು. ಠಾಕ್ರೆ ಮತ್ತು ಆನಂದ್‌ ದಿಘೆ ಅವರ ಆಶ್ರಯದಲ್ಲಿಏಕನಾಥ, ಶಿವಸೇನೆಧಿಯಲ್ಲಿಒಂದೊಂದೇ ಹುದ್ದೆಗಳನ್ನೇರುತ್ತಾ ಮುನ್ನಡೆದರು. 

ಕಣ್ಣ ಮುಂದೆ ಮಕ್ಕಳು ಜಲಸಮಾಧಿ: ಏಕನಾಥ ಅವರಿಗೆ 2000 ಕಹಿ ನೀಡಿದ ವರ್ಷ. ಕಣ್ಣ ಮುಂದೆಯೇ ಅವರ ಮೂವರು ಮಕ್ಕಳ ಪೈಕಿ ಇಬ್ಬರು ಜಲಧಿ ಸಮಾಧಿಧಿಯಾದರು. ಅದು ಜೂನ್‌ 2ನೇ ತಾರೀಖು. 11 ವರ್ಷದ ಪುತ್ರ ದಿಪೇಶ್‌,  7 ವರ್ಷದ ಮಗಳು ಶುಭದಾ ಅವರು ಊರಿನ ಕೆರೆಯಲ್ಲಿಬೋಟಿಂಗ್‌ ಮಾಡುತ್ತಿದ್ದರು. ಬೋಟ್‌ ಮುಗುಚಿ ಮಕ್ಕಳಿಬ್ಬರು ಜಲ ಸಮಾಧಿಯಾದರು. ಮಕ್ಕಳ ಸಾವು ಅವರಿಗೆ ಬಾಧಿಸಿತು. ಖಿನ್ನತೆಗೆ ಜಾರಿದರು. ಸಕ್ರಿಯ ರಾಜಕಾರಣದಿಂದಲೇ ವಿಮುಖರಾದರು. ಹೀಗೆ ಬಿಟ್ಟರೆ ಏಕನಾಥ ಕೈಗೆ ಸಿಗುವುದಿಲ್ಲಎಂದು ಭಾವಿಸಿದ ದಿಘೆ, ಏಕನಾಥ ಅವರನ್ನು ಠಾಣೆ ಮುನ್ಸಿಪಲ್‌ ಕಾರ್ಪೊರೇಷನ್‌(ಟಿಎಂಸಿ) ಸದನ ನಾಯಕಧಿರನ್ನಾಗಿ ಮಾಡಿದರು. ನಿಧಾನವಾಗಿ ಏಕನಾಥ, ಮಕ್ಕಳ ಸಾವಿನ ನೋವಿನಿಂದ ಹೊರ ಬಂದರು. ರಾಜಕಾರಣದಲ್ಲಿಮತ್ತೆ ಸಕ್ರಿಯರಾದರು. ಶಿಂಧೆ ಅವರ ಮತ್ತೊಬ್ಬ ಪುತ್ರ ಡಾ.ಶ್ರೀಕಾಂತ್‌ ಅವರು ಕಲ್ಯಾಣ್‌ ಕ್ಷೇತ್ರದಿಂದ 2014ರಿಂದಲೂ ಸಂಸತ್‌ ಸದಸ್ಯರು. 

ಬಳ್ಳಾರಿ ಜೈಲಿನಲ್ಲಿದ್ದರು: ಏಕನಾಥ ಮತ್ತು ಕರ್ನಾಟಕದ ನಡುವೆ ‘ಬೇಡವಾದ ಕಾರಣಕ್ಕೆ’ ನಂಟಿದೆ. 1985ರಲ್ಲಿಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಉಚ್ಚ್ರಾಯದ ಕಾಲ. ಆಗ ಮಹಾರಾಷ್ಟ್ರದಲ್ಲಿಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರತಿಭಟನೆ, ಗಲಾಟೆಗಳಾಗುಧಿತ್ತಿದ್ದವು. ಅಂಥ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಏಕನಾಥ ಅವರನ್ನು ಬಂಧಿಸಿ ಸುಮಾರು 40 ದಿನಗಳ ಕಾಲ ಬಳ್ಳಾರಿ ಜೈಲಿನಧಿಲ್ಲಿಡಲಾಗಿತ್ತು. ಏಕನಾಥ ಅವರು ಶಿವಸೇನೆಯ ಮುಂಚೂಣಿಯ ನಾಯಕಧಿರಾಗಿ, ಬೆಲೆ ಏರಿಕೆ, ಕಾಳದಂಧೆ ಸೇರಿದಂತೆ ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ್ದಾರೆ. 

ನಾಲ್ಕು ಬಾರಿ ಶಾಸಕ, ಸಚಿವ: 1997ರಲ್ಲಿಠಾಣೆ ಮುನ್ಸಿಪಲ್‌ ಕಾರ್ಪೊರೇಷನ್‌ (ಟಿಎಂಸಿ)ಗೆ ಆಯ್ಕೆಧಿಯಾಗಿ, 2001ರಿಂದ ಸಭಾನಾಯಕರಾಗಿದ್ದರು ಏಕನಾಥ್‌. ಟಿಎಂಸಿಗೆ ಸಂಬಂಧಿಸಿದ ಕೆಲಸಗಳಿಗೆ ಮಾತ್ರ ತಮ್ಮನ್ನು ಸೀಮಿತಧಿಗೊಳಿಸಲಿಲ್ಲ. ಬದಲಿಗೆ ಇಡೀ ಥಾಣೆ ಜಿಲ್ಲೆಗೆ ಸಂಬಂಧಿಸಿದ ಎಲ್ಲವಿಷಯಗಳಲ್ಲೂಮುಂಚೂಣಿಧಿಯಲ್ಲಿರುತ್ತಿದ್ದರು. ಪರಿಣಾಮವಾಗಿ, ಕೋಪರಿ-ಪಾಚಪಾಖಾಡಿಧಿ (2004)ಕ್ಷೇತ್ರದಿಂದ ಸ್ಪರ್ಧಿಸಲು ಶಿವಸೇನೆ ಟಿಕೆಟ್‌ ನೀಡಿತು. ಗೆದ್ದರು. ಆ ಬಳಿಕ ಸತತವಾಗಿ 2009, 2014 ಮತ್ತು 2019ರಲ್ಲಿಆಯ್ಕೆಧಿಯಾದರು. ಬಾಳಾಸಾಹೇಬ್‌ ಠಾಕ್ರೆ ಅವರು 2005ರಲ್ಲಿಥಾಣೆ ಜಿಲ್ಲಾಶಿವಸೇನೆಯ ಮುಖ್ಯಸ್ಥರನ್ನಾಗಿ ಮಾಡಿದರು. ಶಿವಸೇನೆಯಲ್ಲಿಈ ರೀತಿ ಶಾಸಕ- ಜಿಲ್ಲಾಮುಖ್ಯಸ್ಥ ಜವಾಬ್ದಾರಿ ಹೊಂದಿದ ಮೊದಲನೇ ವ್ಯಕ್ತಿಧಿಯಾದರು. 2014ರ ಚುನಾವಣೆ ಬಳಿಕ ಮಹಾರಾಷ್ಟ್ರ ವಿಧಾನಸಭೆಯಲ್ಲಿಪ್ರತಿಪಕ್ಷ ದ ನಾಯಕ ಹುದ್ದೆ ಒಲಿಯಿತು. ಇದಾದ ತಿಂಗಳಲ್ಲಿಶಿವಸೇನೆಯು ಬಿಜೆಪಿ ಸರಕಾರದಲ್ಲಿಭಾಗವಹಿಸುತ್ತಿದ್ದಂತೆ ಏಕನಾಥ್‌ ಅವರು ಲೋಕೋಪಯೋಗಿ ಸಚಿವರಾದರು. ಈ ವೇಳೆ, ಯಶವಂತರಾಯ ಚವಾಣ್‌ ಮುಕ್ತ ವಿಶ್ವವಿದ್ಯಾಲಯ ನೋಂದಣಿ ಮಾಡಿಕೊಂಡರು. ಶೇ.77.25 ಅಂಕಗಳೊಂದಿಗೆ ಬಿ ಎ ಡಿಗ್ರಿಯನ್ನು ಪಡೆದುಕೊಂಡರು. ಮರಾಠಿ ಮತ್ತು ರಾಜ್ಯಶಾಸ್ತ್ರ ಮುಖ್ಯ ವಿಷಯಗಳಾಗಿದ್ದವು.  2019ರ ಎಂವಿಎ ಸರಕಾರದಲ್ಲಿಲೋಕೋಪಧಿಯೋಗಿ ಜತೆಗೆ ಜತೆಗೆ ಹೆಚ್ಚುವರಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಣೆ ಹೆಗಲೇರಿತು. ಸಚಿವರಾಗಿ ಅವರು ತುಂಬಾ ಚುರುಕಾಗಿದ್ದರು. ತಮ್ಮ ಬಳಿ ಬರುವ ಎಲ್ಲಶಾಸಕರ ಬೇಕು ಬೇಡಗಳನ್ನು ಈಡೇರಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಉನ್ನತ ಹುದ್ದೆಯ ನಾಯಕರವರೆಗೂ ಅವರು ಕೈಗೆ ಸಿಗುತ್ತಿದ್ದರು. ಇದರಿಂದಾಗಿ ಪಕ್ಷ ದೊಳಗೆ ಜನಪ್ರಿಯರಾದರು.  ಬಹುಶಃ ಈ ಗುಣಗಳೇ ಅವರ ಹಿಂದೆ 30ಕ್ಕೂ ಅಧಿಕ ಶಾಸಕರು ಬರಲು ಕಾರಣವಾಗಿರಬಹುದು!

ಅದೇನೇ ಇರಲಿ, ಮಹಾರಾಷ್ಟ್ರದಲ್ಲಿಬಹುದೊಡ್ಡ ರಾಜಕೀಯ ಪಲ್ಲಟಕ್ಕೆ ಏಕನಾಥ ಅವರು ಶ್ರೀಕಾರ ಹಾಕಿದ್ದಾರೆ. ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತಿರುವ ಅವರ ಮಂದೆ ಸಾಕಷ್ಟು ಸವಾಲುಗಳಿವೆ. ಅವರ ಬಂಡಾಯಕ್ಕೆ ಬಿಜೆಪಿ ಕೂಡ ಸಾಥ್‌ ನೀಡಿರುವ ಸಾಧ್ಯತೆಗಳಿರುವುದರಿಂದ ಸದ್ಯಧಿಕ್ಕಂತೂ ಬಂಡಾಯದಲ್ಲಿಗೆಲುವು ಅವರಿಗೇ ಒಲಿಯಧಿಬಹುದು. ಆದರೆ, ಮುಂದಿನ ಚುನಾವಣೆಗೆ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕು.



(ಈ ಲೇಖನವು ವಿಜಯ ಕರ್ನಾಟಕದ ಭಾನುವಾರ ಸಂಚಿಕೆಯ ವ್ಯಕ್ತಿಗತ ಅಂಕಣದಲ್ಲಿ ಪ್ರಕಟವಾಗಿದೆ)

 

ಬುಧವಾರ, ಜೂನ್ 8, 2022

Khalistan 2.0: ಖಲಿಸ್ತಾನ್‌ ನಿಶ್ಚಲವಷ್ಟೇ ಅದಿನ್ನೂ ಅಂತ್ಯವಾಗಿಲ್ಲ

- ಮಲ್ಲಿಕಾರ್ಜುನ ತಿಪ್ಪಾರ
ಪಂಜಾಬ್‌ ಅನ್ನು ಸೇರಿಸಿಕೊಂಡು ಉತ್ತರ ಭಾರತದ ಕೆಲವು ರಾಜ್ಯಗಳನ್ನೊಳಗೊಂಡ ಖಲಿಸ್ತಾನ್‌ ಪ್ರತ್ಯೇಕ ರಾಷ್ಟ್ರಕ್ಕಾಗಿ ಹುಟ್ಟಿಕೊಂಡಿದ್ದೇ ಖಾಲ್ಸಾ ಚಳವಳಿ. ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿದ್ದ ಈ ಚಳವಳಿ ಮುಂದೆ ಉಗ್ರಗಾಮಿ ಸಂಘಟನೆಯಾಗಿ ಬದಲಾಯಿತು. ಪ್ರತ್ಯೇಕ ಸಾರ್ವಭೌಮ ರಾಷ್ಟ್ರ ಬೇಡಿಕೆ ಹೆಸರಿನಲ್ಲಿಅಮಾಯಕ ಹಿಂದೂಗಳನ್ನು, ಸಿಖ್ಖರೇತರನ್ನು, ತಮ್ಮ ಬೇಡಿಕೆಯನ್ನು ವಿರೋಧಿಸುವ ಸಹ ಸಿಖ್ಖರನ್ನು ಕೊಲ್ಲುವ ಮೂಲಕ ಭಯೋತ್ಪಾದನೆಯ ಹಾದಿಯನ್ನು ತುಳಿಯಿತು. ಜರ್ನೈಲ್‌ ಸಿಂಗ್‌ ಭಿಂದ್ರಾನ್‌ವಾಲೆ ಈ ಖಲಿಸ್ತಾನ್‌ ಚಳವಳಿಗೆ ಹಿಂಸಾರೂಪ ನೀಡಿದ. ಸಿಖ್ಖರ ಪವಿತ್ರ ಕ್ಷೇತ್ರವಾಗಿರುವ ಅಮೃತಸರದ ಸ್ವರ್ಣ ದೇಗುಲವನ್ನೇ ತನ್ನ ಕಾರಸ್ಥಾನವನ್ನಾಗಿ ಮಾಡಿಕೊಂಡಿದ್ದ.

ಪಾಕಿಸ್ತಾನದ ಕುಮ್ಮಕ್ಕಿನಿಂದ ದೇಶದ ಸಾರ್ವಭೌಮತ್ವಕ್ಕೆ ಸವಾಲಾಗಿದ್ದ ಆತನನ್ನು ಹಿಮ್ಮೆಟ್ಟಿಸುವುದು ಅಂದಿನ ಕೇಂದ್ರ ಸರಕಾರಕ್ಕೆ ತುರ್ತು ಅಗತ್ಯವಾಗಿತ್ತು. ಅದರ ಫಲವಾಗಿ ನಡೆದಿದ್ದೇ ‘ಆಪರೇಷನ್‌ ಬ್ಲೂಸ್ಟಾರ್‌’. ಭಾರತ ಕಂಡ ಅತ್ಯಂತ ದಕ್ಷ  ಹಾಗೂ ಪ್ರಭಾವಶಾಲಿ ಪ್ರಧಾನಿಯಾದ ಇಂದಿರಾ ಗಾಂಧಿ ಅವರು ಗಟ್ಟಿ ನಿರ್ಧಾರ ಮಾಡಿ, ಅಮೃತಸರದಲ್ಲಿಬೀಡುಬಿಟ್ಟಿದ್ದ ಭಿಂದ್ರನ್‌ವಾಲೆಯನ್ನು ಮಟ್ಟ ಹಾಕಲು ಸೇನೆಗೆ ಸೂಚಿಸಿದ್ದರು. ಅವರು ಅಂದು ಕೈಗೊಂಡ ಈ ನಿರ್ಧಾರ ಸರಿಯೋ, ತಪ್ಪೋ ಎಂದು ಮೂರು ದಶಕಗಳ ಬಳಿಕವೂ ಚರ್ಚೆಯಾಗುತ್ತಲೇ ಇದೆ. ಕೆಲವು ಇತಿಹಾಸಕಾರರು ಸ್ವರ್ಣ ಮಂದಿರಕ್ಕೆ ಸೇನೆಯನ್ನು ನುಗ್ಗಿಸುವುದರ ಬದಲು ಬೇರೆ ಮಾರ್ಗದ ಮೂಲಕ ಭಿಂದ್ರನ್‌ವಾಲೆಯನ್ನು ಮಟ್ಟ ಹಾಕಬಹುದಿತ್ತು ಎಂದು ಹೇಳಿದರೆ, ಇನ್ನು ಕೆಲವರು ಇಂದಿರಾ ಕೈಗೊಂಡ ನಿರ್ಧಾರ ಸರಿಯಾಗಿತ್ತು ಎಂದು ವಾದಿಸುತ್ತಾರೆ. ಆದರೆ, ಬ್ಲೂಸ್ಟಾರ್‌ ಕಾರ್ಯಾಚರಣೆ ನಡೆದ ನಂತರದ ಘಟನೆಗಳು ಇದನ್ನು ಪುಷ್ಟಿಕರಿಸುತ್ತವೆ. ಕಾರ್ಯಾಚರಣೆಯ ಪ್ರತೀಕಾರಕ್ಕೆ ಮೊದಲಿಗೆ ಬಲಿಯಾಗಿದ್ದೇ ಪ್ರಧಾನಿ ಇಂದಿರಾ ಗಾಂಧಿ ಅವರು. ನಂತರ, ಆಪರೇಷನ್‌ ಬ್ಲೂಸ್ಟಾರ್‌ ವೇಳೆ ಸೇನಾ ನಾಯಕರಾಗಿದ್ದು ಜನರಲ್‌(ನಿವೃತ್ತ) ಎ.ಎಸ್‌. ವೈದ್ಯ, ಲೆಫ್ಟಿನೆಂಟ್‌ ಕರ್ನಲ್‌ ಕುಲ್ದಿಪ್‌ ಸಿಂಗ್‌ ಬ್ರಾರ್‌ ಅವರ ಹತ್ಯೆಯಾಯಿತು. ಇದಕ್ಕೂ ಮುಂಚೆ, ಕೆನಡಾದಲ್ಲಿದ್ದ ಖಲಿಸ್ತಾನದ ಇಬ್ಬರು ಬಂಡುಕೋರರು ಏರ್‌ ಇಂಡಿಯಾ ಕನಿಷ್ಕ ವಿಮಾನವನ್ನು ಆಕಾಶದಲ್ಲೆ ಸೊಧೀಟಿಸಿ, 329 ಜನರ ಆಹುತಿ ತೆಗೆದುಕೊಂಡರು. ಇದಿಷ್ಟು ಆಪರೇಷನ್‌ ಬ್ಲೂಸ್ಟಾರ್‌ಗೆ ಪ್ರತಿಯಾಗಿ ಪ್ರತೀಕಾರದ ಘಟನೆಗಳಾದರೆ, ಇಂದಿರಾ ಗಾಂಧಿ ಹತ್ಯೆ ಮತ್ತೊಂದು ಮಗ್ಗಲನ್ನು ಪಡೆಯಿತು. ಇದಕ್ಕೆ ಪ್ರತಿಯಾಗಿ ದಿಲ್ಲಿಸೇರಿದಂತೆ ದೇಶದೆಲ್ಲೆಡೆ ಸಾವಿರಾರು ಸಿಖ್ಖರ ಮಾರಣಹೋಮವೇ ನಡೆಯಿತು.

1984ರ ಜೂನ್‌ 3ರಿಂದ 8ರವರೆಗೆ ನಡೆದ ಬ್ಲೂಸ್ಟಾರ್‌ ಕಾರ್ಯಾಚರಣೆಗೀಗ 38 ವರ್ಷ. ವರ್ಷಾಚರಣೆ ನೆಪದಲ್ಲಿಈಗಲೂ ಖಲಿಸ್ತಾನಿ ಪರ ಘೋಷಣೆಗಳು, ಭಿಂದ್ರನ್‌ವಾಲೆಯನ್ನು ಹುತಾತ್ಮನ ರೀತಿ ನೋಡುವುದನ್ನು ನಿಂತಿಲ್ಲ. ‘ಖಲಿಸ್ತಾನ್‌ 2.0’ ನಿಧಾನವಾಗಿ ಮರುಹುಟ್ಟು ಪಡೆದುಕೊಳ್ಳುತ್ತಿರುವುದಕ್ಕೆ ಇದೆಲ್ಲವೂ ಸಾಕ್ಷಿ. ಇತ್ತೀಚಿನ ಕೆಲವು ವರ್ಷಗಳಲ್ಲಿಭಾರತ ಹಾಗೂ ಭಾರತದ ಆಚೆ ಅಂದರೆ, ಯುರೋಪ್‌ ಮತ್ತು ಅಮೆರಿಕದ ಕೆಲವು ರಾಷ್ಟ್ರಗಳಲ್ಲಿವಾಸವಾಗಿರುವ ಸಿಖ್‌ ಸಮುದಾಯದಲ್ಲಿಖಲಿಸ್ತಾನ್‌ ಚಳವಳಿಯನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಭಾರತೀಯ ತನಿಖಾ ಏಜೆನ್ಸಿಗಳಲ್ಲಿಸಾಕಷ್ಟು ಸಾಕ್ಷ್ಯಾಧಾರಗಳಿವೆ ಮತ್ತು ಈ ಖಲಿಸ್ತಾನದ ಬಂಡುಕೋರರನ್ನು ಬಳಸಿಕೊಂಡು ಭಾರತದೊಳಗೆ ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಖಲಿಸ್ತಾನ್‌ ಚಳವಳಿ ನಿಶ್ಚಲವಾಗಿದೆಯಷ್ಟೇ, ಸಂಪೂರ್ಣವಾಗಿ ಸತ್ತಿಲ್ಲಎಂಬುದಕ್ಕೆ ಇತ್ತೀಚಿನ ಕೆಲವು ಘಟನೆಗಳು ನಮ್ಮ ಮುಂದಿವೆ.

ಸಿಖ್‌ ರ್ಫಾ ಜಸ್ಟೀಸ್‌ (ಎಸ್‌ಎಫ್‌ಜೆ) ಕಳೆದ ವರ್ಷ ಫೆಬ್ರವರಿಧಿಯಲ್ಲಿಪಂಜಾಬ್‌ನಲ್ಲಿಖಲಿಸ್ತಾನ್‌ ಚಳವಳಿಯನ್ನು ಪುನಃಶ್ಚೇತನಧಿಗೊಳಿಸುವುದು ಮತ್ತು ಭಾವನೆಗಳನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡುತ್ತಿದ್ದ ಬಗ್ಗೆ ವರದಿಗಳಿವೆ. ಎನ್‌ಐಎ ತಂಡವೊಂದು ಕಳೆದ ನವೆಂಬರ್‌ನಲ್ಲಿಕೆನಡಾಗೆ ತೆರಳಿ ಪರಿಶೀಲಿಸಿದಾಗ, ರೈತ ಚಳವಳಿಯ ಹೆಸರಿನಲ್ಲಿಒಂದು ಲಕ್ಷ ಕ್ಕೂ ಅಧಿಕ ಅಮೆರಿಕನ್‌ ಡಾಲರ್‌ ಸಂಗ್ರಹಿಸಿದ್ದನ್ನು ಪತ್ತೆ ಹಚ್ಚಿತ್ತು ಎನ್ನಲಾಗಿದೆ. ಮೇ 5ರಂದು ಖಲಿಸ್ತಾನ್‌ ಧ್ವಜವನ್ನು ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ವಿಧಾನಸಭೆ ಸಂಕೀರ್ಣದ ಮುಖ್ಯ ದ್ವಾರದಲ್ಲಿಕಟ್ಟಲಾಗಿತ್ತು. ಈ ಹಿನ್ನೆಲೆಯಲ್ಲೇ ಎಸ್‌ಎಫ್‌ಜೆ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ಯುಎಪಿಎ ಅಡಿ ಕೇಸ್‌ ದಾಖಲಿಸಿಕೊಂಡಿದ್ದಾರೆ. ರಾಜ್ಯದಲ್ಲಿಖಲಿಸ್ತಾನ್‌ ಪರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಮೇ 9ರಂದು ಪಂಜಾಬ್‌ ಪೊಲೀಸ್‌ ಬೇಹುಗಾರಿಕಾ ಮುಖ್ಯ ಕಚೇರಿ ಮೇಲೆ, ಪಾಕಿಸ್ತಾನ ನಿರ್ಮಿತ ರಾಕೆಟ್‌ ಪೊ›ಪೆಲ್ಡ… ಗ್ರೆನೇಡ್‌ ದಾಳಿ ನಡೆದಿತ್ತು. ಈ ರೀತಿಯ ಘಟನೆಗಳು ನಿರಂತರವಾಗಿ ಪಂಜಾಬ್‌ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿಕಂಡು ಬರುತ್ತಿವೆ.

ಖಲಿಸ್ತಾನ್‌ ಚಳವಳಿಯು ಈಗಲೂ ಸಿಖ್‌ ಸಮುದಾಯದ ಒಂದು ವರ್ಗದಲ್ಲಿಸುಪ್ತವಾಗಿದ್ದು, ಯಾವಾಗಲಾದರೂ ಅದು ಸೊಧೀಟಿಸಬಹುದು ಎಂಬುದನ್ನು ಈ ಘಟನೆಗಳು ಸಾಬೀತುಪಡಿಸುತ್ತವೆ. ಇದಕ್ಕೆಲ್ಲಭಾರತದ ಹೊರಗಡೆ ಇದ್ದುಕೊಂಡೇ ಹಲವರು ನೀರೆರೆಧಿಯುತ್ತಿದ್ದಾರೆ. ಅಂಥ ಒಂಬತ್ತು ಜನರನ್ನು ಭಾರತ ಸರಕಾರವು ಗುರುತಿಸಿದ್ದು, ಅವರನ್ನು ಉಗ್ರಗಾಮಿಗಳೆಂದು ಹೆಸರಿಸಿದೆ.  ಗುರ್ಮೀತ್‌ ಸಿಂಗ್‌ ಬಗ್ಗಾ. ಜರ್ಮನಿಯಲ್ಲಿರಾಧಾಸ್ವಾಮಿ ಪಂಥದ ಮುಖ್ಯಸ್ಥನನ್ನು ಕೊಲೆ ಮಾಡಿಸಿದ ಆರೋಪ ಈತನ ಮೇಲಿದೆ. 2019ರಲ್ಲಿಪಾಕಿಸ್ತಾನದಲ್ಲಿರುವ ಉಗ್ರ ರಂಜೀತ್‌ ಸಹಾಯದಿಂದ ಡ್ರೋನ್‌ ಮೂಲಕ ಭಾರತದೊಳಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಾನೆ. ಬಗ್ಗಾ ಆಪ್ತ ಭೂಪೀಂದೇರ್‌ ಸಿಂಗ್‌ ಭಿಂಡಾ ಕೂಡ ಇದೇ ಕೆಲಸ ಮಾಡುತ್ತಾನೆ. ನೀತಾ ಅಲಿಯಾಸ್‌ ರಂಜೀತ್‌ ಸಿಂಗ್‌ ಪಾಕಿಸ್ತಾನಧಿದಲ್ಲಿದ್ಡುಕೊಂಡೇ ಐಎಸ್‌ಐ ಸಹಾಯದಿಂದ ಭಾರತದೊಳಗೆ ನಕಲಿ ಕರೆನ್ಸಿ, ಮಾದಕ ವಸ್ತುಗಳು ಮತ್ತು ಸೊಧೀಟಕಗಳನ್ನು ಕಳುಹಿಸುವ ಕೆಲಸ ಮಾಡುತ್ತಾನೆ.  ವಾಧ್ವಾ ಸಿಂಗ್‌ ಮತ್ತೊಬ್ಬ ಉಗ್ರಗಾಮಿ. ಈತ ಬಬ್ಬರ್‌ ಖಾಲ್ಸಾ ಅಂತಾರಾಷ್ಟ್ರೀಯ ಸಂಘಟನೆಯ ಮುಖ್ಯಸ್ಥ. ಪಂಜಾಬ್‌ನಲ್ಲಿಹಲವು ಪೊಲೀಸರನ್ನು ಕೊಂದಿರುವ ಆರೋಪವಿದೆ. ಲಕ್‌ಬಿರ್‌ ಸಿಂಗ್‌ ರೋಡೆ ಹಾಗೂ ಈತನ ಮಗ ಭಗತ್‌ ಬ್ರಾರ್‌ ಇಬ್ಬರು ಕೆನಡಾದಲ್ಲಿದ್ದು ಅಲ್ಲಿಂದಲೇ ಖಲಿಸ್ತಾನ ಚಟುವಟಿಕೆಗಳ ಜತೆ  ಕೈಜೋಡಿಸಿದ್ದಾರೆ. ಬ್ರಿಟನ್‌ಲ್ಲಿರುವ ಪ್ರಂಜಿತ್‌ ಸಿಂಗ್‌ ಪಮ್ಮಾ ಖಲಿಸ್ತಾನಿ ಉಗ್ರರಿಗೆ ಹಣಕಾಸು ನೆರವು ಒದಗಿಸುತ್ತಾನೆ. 2018ರಲ್ಲಿಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ಗೆ ಭೇಟಿ ನೀಡಿದಾಗ ಅವರ ವಿರುದ್ಧ ಸ್ಥಳೀಯರಲ್ಲಿಪ್ರಂಜಿತ್‌ ಸಿಂಗ್‌ ಪಮ್ಮಾ ದ್ವೇಷ ಪ್ರಚೋದಿಸುವ ಕೆಲಸ ಮಾಡಿದ್ದ. ಪರಮ್‌ಜಿತ್‌ ಸಿಂಗ್‌ ಪಂಜ್ವರ್‌ ಖಲಿಸ್ತಾನ್‌ ಕಮಾಂಡೋ ಫೋರ್ಸ್‌ ಎಂಬ ಸಂಘಟನೆಯ ನಾಯಕನೀತ. ಅಫಘಾನ್‌ಲ್ಲಿದ್ದು, ಖಲಿಸ್ತಾನಿಗಳಿಗೆ ತರಬೇತಿ ನೀಡುತ್ತಾನೆ. ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಖಲಿಸ್ತಾನ್‌ ಭಯೋತ್ಪಾದನೆಗೆ ಮರುಜೀವ ನೀಡುತ್ತಿರುವ 2020ರ ‘ನಿರ್ಣಯ’ದ ಜನಕ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಪಾಕಿಸ್ತಾನದ ಜೈಷೆ ಮೊಹಮ್ಮದ್‌ ಸಂಘಟನೆಯೊಂದಿಗೆ ಸೇರಿಕೊಂಡು ಉಗ್ರ ಚಟುವಟಿಕೆ ನಡೆಸುತ್ತಾನೆ. ಇವರೆಲ್ಲರೂ ‘ಖಲಿಸ್ತಾನ್‌’ ಎಂಬ ಎಂದೂ ಕೈಗೂಡದ ವಿಚಾರಧಾರೆಯನ್ನು ಸದಾ ಜೀವಂತವಾಗಿಡುವ ಉದ್ದೇಶಕ್ಕಾಗಿ ಭಯೋತ್ಪಾದನೆಯಲ್ಲಿತೊಡಗಿಸಿಕೊಂಡಿದ್ದಾರೆ. 

***

ಖಲಿಸ್ತಾನದ ಬೀಜಗಳು ಮೊಳೆತಿದ್ದು 1800ರ ಅಂತ್ಯ ಮತ್ತು 1900ರ ಆರಂಭದಲ್ಲಿ. ಅಂದಿನ ಬ್ರಿಟಿಷ್‌ ಸರಕಾರದ ನೀತಿಗಳೇ ಇದಕ್ಕೆ ಕಾರಣವಾಯಿತು. 1940ರಲ್ಲೇ ಖಲಿಸ್ತಾನದ ಚಿಂತನೆಯ ಬೀಜಗಳು ಒಡೆದು ಸಸಿಗಳಾಗಲಾರಂಭಿಸಿದವು.  ಪಂಜಾಬ್‌ ಕೇಂದ್ರವಾಗಿಟ್ಟುಕೊಂಡು ಬಲೂಚಿಸ್ತಾನ, ಹಿಮಾಚಲ, ಹರಿಯಾಣ, ಜಮ್ಮು- ಕಾಶ್ಮೀರದ ಕೆಲ ಭಾಗಗಳನ್ನು ಸೇರಿಸಿಕೊಂಡು ಪ್ರತ್ಯೇಕ ಖಲಿಸ್ತಾನ್‌ ರಚಿಸುವ ಪ್ರಯತ್ನವಿದು. ಶ್ರೀಮಂತ ಹಾಗೂ ಪ್ರತ್ಯೇಕತಾವಾದಿ ಸಿಖ್ಖರ ಹಣಕಾಸು ಹಾಗೂ ಪಾಕಿಸ್ತಾನದ ಬೆಂಬಲದಿಂದ 70-80ರ ದಶಕದಲ್ಲಿಉಗ್ರವಾಗಿ ಬೆಳೆಯಿತು. 1980ರಲ್ಲಿಜಗಜಿತ್‌ ಸಿಂಗ್‌ ಚೌಹಾಣ್‌ ಎಂಬಾತ ನ್ಯಾಷನಲ್‌ ಕೌನ್ಸಿಲ್‌ ಆಫ್‌ ಖಲಿಸ್ತಾನ್‌ ಎಂಬ ಸಂಘಟನೆ ಕಟ್ಟಿದ. ಬ್ರಿಟನ್‌ಗೆ ಹೋಗಿ ಅಲ್ಲಿಂದಲೇ ಖಲಿಸ್ತಾನ್‌ ರಚನೆಯನ್ನೂ ಘೋಷಿಸಿದ. ನಂತರ ಜರ್ನೈಲ್‌ ಸಿಂಗ್‌ ಭಿಂದ್ರಾನ್‌ವಾಲೆ ಎಂಬ ಮತಾಂಧ ಧಾರ್ಮಿಕ ಗುರು ಹುಟ್ಟಿಕೊಂಡ. ಉಗ್ರ ಖಾಲ್ಸಾ ವಿಚಾರವನ್ನು ಪ್ರೋತ್ಸಾಹಿಸಿದ. ಈತನ ಕಾಲದಲ್ಲಿಪಂಜಾಬ್‌ನಲ್ಲಿಹಿಂಸೆ ತಾಂಡವವಾಡಿತು. ಅಂತಿಮವಾಗಿ 1984ರಲ್ಲಿಆಪರೇಷನ್‌ ಬ್ಲೂಸ್ಟಾರ್‌ ಮೂಲಕ ಖಲಿಸ್ತಾನ್‌ ಚಳವಳಿಯನ್ನು ಒಂದು ಹಂತಕ್ಕೆ ಹುಟ್ಟಡಗಿಸಲಾಯಿತು. ಆದರೂ, ಖಲಿಸ್ತಾನದ  ಪಳೆಯುಳಿಕೆಗಳು ಅಲ್ಲಲ್ಲಿಉಳಿದುಕೊಂಡು ಈಗ ಮತ್ತೆ ಜೀವ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಖಲಿಸ್ತಾನ್‌ ಬಗ್ಗೆ ಸಹಾನುಭೂತಿ ಹೊಂದಿದ ಬಹಳ ಮಂದಿ ಜರ್ಮನಿ, ಬ್ರಿಟನ್‌, ಕೆನಡಾ ಮತ್ತು ಅಮೆರಿಕದಲ್ಲಿದ್ದಾರೆ. ಖಲಿಸ್ತಾನ್‌ ಜಿಂದಾಬಾದ್‌ ಫೋರ್ಸ್‌ ಎಂಬ ಹೊಸ ಸಂಘಟನೆಯೊಂದನ್ನು ಪೊಲೀಸರು 2019ರಲ್ಲಿಭೇದಿಸಿದ್ದರು. ಇದರ ನಾಯಕರಲ್ಲಿಹೆಚ್ಚಿನವರು ಜರ್ಮನಿಯಲ್ಲಿದ್ದಾರೆ.

***

ಆಪರೇಷನ್‌ ಬ್ಲೂಸ್ಟಾರ್‌ನ ಭಯಂಕರ ಪರಿಣಾಮದ ಹೊರತಾಗಿಯೂ ಅಂಥದ್ದೇ ಕಾರ್ಯಾಚರಣೆಯನ್ನು ಭಾರತವು, ‘ಆಪರೇಷನ್‌ ಬ್ಲ್ಯಾಕ್‌ ಥಂಡರ್‌’ ಹೆಸರಿನಲ್ಲಿಮತ್ತೆ ಕೈಗೊಂಡಿತು. ಆಪರೇಷನ್‌ ಬ್ಲೂಸ್ಟಾರ್‌ ವೇಳೆ ಅಳಿದುಳಿದ ಖಲಿಸ್ತಾನ ಬಂಡುಕೋರರು ಮತ್ತೆ ತಮ್ಮ ಕಾರ್ಯಾಚರಣೆಗೆ ಗೋಲ್ಡನ್‌ ಟೆಂಪಲ್‌ ಅನ್ನೇ ಬಳಸಿಕೊಳ್ಳಲಾರಂಭಿಸಿದ್ದರು. ಈ ಪ್ರಯತ್ನವನ್ನು ಹಿಮ್ಮೆಟ್ಟಿಸುವುದಕ್ಕಾಗಿಯೇ ನಡೆದ ಕಾರ್ಯಾಚರಣೆಯೇ ‘ಆಪರೇಷನ್‌ ಬ್ಲ್ಯಾಕ್‌ ಥಂಡರ್‌’. ಮೊದಲನೆ ಬಾರಿಗೆ ಕಾರ್ಯಾಚರಣೆ ನಡೆದಿದ್ದು 1986 ಏಪ್ರಿಲ್‌ 30ರಂದು. ಇದಕ್ಕಾಗಿ ರಾಷ್ಟ್ರೀಯ ಭದ್ರತಾ ದಳದ ‘ಬ್ಲ್ಯಾಕ್‌ ಕ್ಯಾಟ್‌’ ಕಮಾಂಡೋ ಪಡೆಯನ್ನು ಬಳಸಿಕೊಳ್ಳಲಾಯಿತು. ಎರಡನೇ ಬಾರಿಗೆ ಕಾರ್ಯಾಚರಣೆ ನಡೆದಿದ್ದು 1988 ಮೇ 9ರಂದು. ಎರಡೂ ಆಪರೇಷನ್‌ಗಳ ನೇತೃತ್ವ ವಹಿಸಿದ್ದವರು ಕೆ.ಪಿ.ಗಿಲ್‌. ಅವರು ಆಗ ಪಂಜಾಬ್‌ ಪೊಲೀಸ್‌ ಡಿಜಿಪಿ ಆಗಿದ್ದರು. ಅಳಿದುಳಿದ ಬಂಡುಕೋರರನ್ನು ಮಟ್ಟಹಾಕುವಲ್ಲಿಈ ಬ್ಲ್ಯಾಕ್‌ ಥಂಡರ್‌ ಕಾರ್ಯಾಚರಣೆ ಯಶಸ್ವಿಯಾಗಿತ್ತು.

ಆದರೆ, ಈಗ ಖಲಿಸ್ತಾನ್‌ 2.0 ಸಕ್ರಿಯವಾಗುತ್ತಿರುವುದು ಸ್ಪಷ್ಟ. ಹಲವು ಘಟನೆಗಳು ಇದಕ್ಕೆ ಸಾಕ್ಷ ್ಯ ಒದಗಿಸಿವೆ. ಸರಕಾರ ಈಗಲೇ ಗದಾಪ್ರಹಾರ ಮಾಡದಿದ್ದರೆ, ಮುಂದೊಂದು ದಿನ ಮತ್ತೆ ಪಂಜಾಬ್‌ ಹೊತ್ತಿ ಉರಿಯಬಹುದು, ಭಾರತದ ಸಾರ್ವಭೌಮತ್ವಕ್ಕೆ ಸವಾಲು ಎದುರಾಗಬಹುದು.



ಮಂಗಳವಾರ, ಮೇ 17, 2022

QR Code Scan Scam: ಕ್ಯೂಆರ್‌ ಕೋಡ್‌ ಬಳಸಿ ವಂಚನೆ, ಇರಲಿ ಎಚ್ಚರ


- ಮಲ್ಲಿಕಾರ್ಜುನ ತಿಪ್ಪಾರ
ತಂತ್ರಜ್ಞಾನ  ಬೆಳೆದಂತೆ ನಮ್ಮ ಜೀವನ ಬಹಳ ಸುಲಭವಾಗಿದೆ. ಕೈ ಬೆರಳ ತುದಿಯಲ್ಲೇ ಇಡೀ ಜಗತ್ತಿದೆ. ಕುಳಿತಲ್ಲೇ ನಿಮಗೆ ಬೇಕಾದ್ದನ್ನು ತರಿಸಿಕೊಳ್ಳ­ಬಹುದು; ಇಲ್ಲ ಮಾರಬಹುದು. ಈ ಡಿಜಿಟಲ್‌ ಯುಗದಲ್ಲಿ ಬಹಳಷ್ಟು ಉಪಯೋಗಗಳಿವೆ. ಹಾಗೆಯೇ, ಸ್ವಲ್ಪ ಮೈಮರೆತರೂ ಎಲ್ಲವನ್ನೂ ಕಳೆದುಕೊಳ್ಳಲು ಕ್ಷಣಾರ್ಧ ಸಾಕು. ಸೈಬರ್‌ ಖದೀಮರು ಯಾವ ಮಾಯೆ­ಯಿಂದಲಾದರೂ ನಿಮ್ಮ ಫೋನ್‌ ಹೊಕ್ಕು, ನಿಮ್ಮೆಲ್ಲ ಮಾಹಿತಿ ಹಾಗೂ ಹಣವನ್ನು ಕಿತ್ತುಕೊಳ್ಳಬಲ್ಲರು. ಈ ಖದೀಮರು ಇತ್ತೀಚಿನ ಎರಡು ವರ್ಷಗಳಲ್ಲಿ ಹೊಸ ದಾರಿ ಮೂಲಕ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ. ಅವರೀಗ ಕ್ಯೂಆರ್‌ ಕೋಡ್‌ ಬಳಸಿಕೊಂಡು, ಜನರ ಖಾತೆಯಲ್ಲಿರುವ ಹಣವನ್ನು ಎಗರಿಸುತ್ತಿದ್ದಾರೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಹೇಗೆ ವಂಚನೆ?

ಈ ಮೊದಲು ಫಿಶಿಂಗ್‌ ಮೇಲ್‌, ಲಿಂಕ್ಸ್‌ ಕಳುಹಿಸಿ ಹಣವನ್ನು ಎತ್ತುತ್ತಿದ್ದ ಖದೀಮರು ಕ್ಯೂಆರ್‌ ಕೋಡ್‌ ಮೂಲಕ ಆ ಕೆಲಸವನ್ನು ಮಾಡುತ್ತಿದ್ದಾರೆ. ಅಪರಿಚಿತರಿಗೆ ಕ್ಯೂಆರ್‌ ಕೋಡ್‌ ಕಳುಹಿಸಿ, ನಿಮಗೆ ಇಂತಿಂಥ ಸ್ಕೀಮ್‌ನಲ್ಲಿ ಹಣ ಬಂದಿದೆ, ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿ, ನಿಮ್ಮ ಅಕೌಂಟ್‌ಗೆ ಹಣ ವರ್ಗಾವಣೆಯಾಗುತ್ತದೆ ಎಂಬ ಒಕ್ಕಣಿಕೆ ಸಂದೇಶಗಳನ್ನು ಕಳುಹಿಸುತ್ತಾರೆ. ಬಳಕೆದಾರರು ಇದನ್ನು ನಿಜ ಎಂದು ನಂಬಿ, ಹಣದ ಆಮಿಷಕ್ಕೆ ಒಳಗಾಗಿ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿದರೆ, ಖಾತೆಗೆ ಹಣ ವರ್ಗಾವಣೆ ಆಗುವ ಬದಲು, ನಿಮ್ಮ ಖಾತೆಯಲ್ಲಿರುವ ಹಣವೇ ಅವರಿಗೆ ವರ್ಗಾವಣೆ­ಯಾಗಿರುತ್ತದೆ! ಆಗಲೇ ಮೋಸ ಹೋಗಿರುವುದು ಗೊತ್ತಾಗುತ್ತದೆ. ಜತೆಗೆ ಹಣ ಮಾತ್ರವಲ್ಲದೇ, ನಮ್ಮೆಲ್ಲವೈಯಕ್ತಿಕ ಮಾಹಿತಿಯನ್ನು ಅವರು ಖದಿಯುತ್ತಾರೆ. ಸಾಮಾನ್ಯವಾಗಿ ಇಂಥ ಆಮಿಷ ಒಡ್ಡುವ ಸಂದೇಶಗಳು ವಾಟ್ಸ್‌ಆ್ಯಪ್‌ ಮೂಲಕವೇ ಇಲ್ಲವೇ ಮೇಲ್‌ ಮುಖಾಂತರ ಬರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

ರಕ್ಷ ಣೆ ಹೇಗೆ? 
ಸೈಬರ್‌ ಕಳ್ಳರು ಒಂದಿಲ್ಲ ಒಂದು ಹೊಸ ದಾರಿಯನ್ನು ಹುಡುಕಿಕೊಳ್ಳುತ್ತಿದ್ದಾರೆ. ಈಗ ಕ್ಯೂಆರ್‌ ಕೋಡ್‌ ಮೂಲಕ ಹಣ ಕೀಳುತ್ತಿದ್ದಾರೆ. ಈ ವಂಚನೆಯ ಜಾಲಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕೆಂದರೆ, ನಮ್ಮ ಎಚ್ಚರದಲ್ಲಿ ನಾವಿರಬೇಕು. ಯಾವುದೇ ಕಾರಣಕ್ಕೂ ನಮ್ಮ ಯುಪಿಐ ಐಡಿ ಅಥವಾ ಬ್ಯಾಂಕ್‌ ಮಾಹಿತಿಯನ್ನು ಅಪರಿಚಿತರ ಜತೆ ಹಂಚಿಕೊಳ್ಳಬಾರದು. ಅಪರಿಚಿತರಿಂದ ಅಥವಾ ಶಂಕಾಸ್ಪದ ವ್ಯಕ್ತಿಗಳಿಂದ  ಬರುವ ಯಾವುದೇ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಲು ಹೋಗಬಾರದು. ಜತೆಗೆ, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳ­ಬಾರದು. ಇವಿಷ್ಟು ಮಾಡುವುದರಿಂದ ಖಂಡಿತವಾಗಿಯೂ ನೀವು ವಂಚಕರ ಜಾಲಕ್ಕೆ ಬೀಳದೆ ಬಚಾವ್‌ ಆಗಬಹುದು. ಹಾಗೆಯೇ, ಆನ್‌ಲೈನ್‌ ವ್ಯವಹಾರ ಮಾಡುವಾಗ ಅಥವಾ ಹಣವನ್ನು ಪಾವತಿಸುವಾಗ ವ್ಯಕ್ತಿಯ ನೈಜತೆಯನ್ನು ತಿಳಿಯಲು ಪ್ರಯತ್ನಿಸಿ. ಅದರಲ್ಲೂ ಆನ್‌ಲೈನ್‌ ವೇದಿಕೆಗಳಲ್ಲಿ ಖರೀದಿಸುವಾಗ ಬಹಳ ಹುಷಾರ್‌ ಆಗಿರಬೇಕು. ಸಿಕ್ಕ ಸಿಕ್ಕ ತಾಣಗಳಲ್ಲಿ ಖರೀದಿಗೆ ಮುಂದಾಗಬಾರದು. ವಿಶ್ವಾಸಾರ್ಹ ವೇದಿಕೆಗಳನ್ನು ಮಾತ್ರ ಬಳಸಿ. ಒಂದೊಮ್ಮೆ ನೀವು ಯುಪಿಐ ಬಳಸುತ್ತಿದ್ದರೆ ಕೋಡ್‌ ಮೂಲಕ ಅದನ್ನು ಸೆಕ್ಯುರ್‌ ಮಾಡಿಟ್ಟುಕೊಳ್ಳಿ. ಭೀಮ್‌, ಫೋನ್‌ಪೇ, ಗೂಗಲ್‌ ಪೇ ಸೇರಿದಂತೆ ಎಲ್ಲಯುಪಿಐ ಪೇಮೆಂಟ್‌ ತಾಣಗಳು ಬಳಕೆ­ದಾರರಿಗೆ ಸೆಕ್ಯುರಿಟಿ ಪಿನ್‌ ಮಾಡಲು ಅವಕಾಶ ಮಾಡಿಕೊಟ್ಟಿರುತ್ತವೆ. ಹಾಗಾಗಿ, ತಪ್ಪದೇ ಸೆಕ್ಯುರಿಟಿ ಪಿನ್‌ ಸೆಟ್‌ ಮಾಡಿಕೊಳ್ಳಿ. ಅಪರಿಚಿತರಿಂದ ವ್ಯವಹರಿಸುವಾಗ ಸಾಧ್ಯವಾದಷ್ಟು ನಗದು ಮೂಲಕ ವಹಿವಾ ಮಾಡುವುದು ಉತ್ತಮ. ಇದರಿಂದ ಆನ್‌ಲೈನ್‌ ವಂಚನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. 

ಎಚ್ಚರಿಕೆಯೊಂದೇ ದಾರಿ
ಆನ್‌ಲೈನ್‌ ಹಣಕಾಸು ವ್ಯವಹಾರ ಹೆಚ್ಚಾದಂತೆ ಆನ್‌ಲೈನ್‌ ವಂಚನೆಗಳೂ ಹೆಚ್ಚಾಗುತ್ತಿರುವುದು ಸತ್ಯ. ಹಾಗಾಗಿ, ನಾವು ಯಾವಾಗಲೂ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಿಶೇಷವಾಗಿ, ಆನ್‌ಲೈನ್‌ ತಾಣಗಳ ಮೂಲ ಹಣ ಪಾವತಿಸುವ ಸಂದರ್ಭ ಎದುರಾದಾಗ ಎಷ್ಟು ಸಾಧ್ಯವೋ ಅಷ್ಟು ಮುಂಜಾಗೃತೆಯನ್ನು ವಹಿಸಿಕೊಳ್ಳಬೇಕು. ನಾವು ಯಾರಿಗೆ ಹಣ ಪಾವತಿಸುತ್ತಿದ್ದೇವೆ ಎಂಬುದರ ಬಗ್ಗೆ ಗೊತ್ತಿರಬೇಕು. ಚೂರೇ ಚೂರು ಸಂಶಯ ಬಂದರೂ ಆನ್‌ಲೈನ್‌ ಮೂಲಕ ಹಣ ಪಾವತಿಸಲು ಹೋಗಬೇಡಿ. ಹಾಗೆಯೇ, ಅಪರಿಚಿತರಿಂದ ಬರುವ ಯಾವುದೇ ರೀತಿಯ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾ‌ನ್‌ ಮಾಡಲು ಹೋಗಲೇ ಬೇಡಿ. ಹಣ ಕಳೆದುಕೊಂಡು ಪರಿತಪಿಸುವುದಕ್ಕಿಂತ ಕಳೆದುಕೊಳ್ಳದಂತೆ ನೋಡಿ­ಕೊಳ್ಳುವುದು ಬೆಸ್ಟ್‌ ಉಪಾಯ ಅಲ್ಲವೇ?



Ravindra Jadeja- ಜಡೇಜಾ ಅಂದರೆ 'ಜಯ'

ಮೂರೂ ಮಾದರಿಯ ಕ್ರಿಕೆಟ್‌ನಲ್ಲಿಭಾರತೀಯ ಕ್ರಿಕೆಟ್‌ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್‌ನಲ್ಲಿಸಿಎಸ್‌ಕೆ ತಂಡದ ನಾಯಕ.


- ಮಲ್ಲಿಕಾರ್ಜುನ ತಿಪ್ಪಾರ
ಸಂದರ್ಶಕ: ವೃತ್ತಿ ಜೀವನದ ಅಂತ್ಯಕ್ಕೆ ನಿಮ್ಮ ಹೆಸರಿನಲ್ಲಿವಿಶಿಷ್ಟ ದಾಖಲೆ ಯಾವುದು ಇರಬೇಕೆಂದು ಇಚ್ಛಿಸುತ್ತೀರಿ?
ಕ್ರಿಕೆಟಿಗ: ಒಂದೇ ಪಂದ್ಯದಲ್ಲಿ ಐದು ವಿಕೆಟ್‌ ಹಾಗೂ ಶತಕ ಗಳಿಸಿದ ದಾಖಲೆ.

ಹೀಗೆ, ತಮ್ಮ ದಾಖಲೆ ಯಾವುದು ಇರಬೇಕೆಂದು ಹೇಳಿ ಅದನ್ನು ಸಾಧಿಸಿದ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ವಿಶ್ವದ ನಂ.1 ಆಲ್‌ರೌಂಡರ್‌ ರವೀಂದ್ರ ಜಡೇಜಾ. ಆದರೆ, ಅವರ ವೃತ್ತಿಜೀವನ ಅಂತ್ಯವಾಗುತ್ತಿಲ್ಲ; ಈಗಷ್ಟೇ ಉಚ್ಛ್ರಾಯ ಸ್ಥಿತಿಗೆ ತಲುಪಿದೆ!

ಖಾಸಗಿ ಕ್ರೀಡಾ ವಾಹಿನಿಯೊಂದು 2018ರಲ್ಲಿನಡೆಸಿದ ಸಂದರ್ಶನದ ತುಣುಕು ಇದು. ಇದಾಗಿ ನಾಲ್ಕು ವರ್ಷದಲ್ಲೇ ಜಡೇಜಾ ತಮ್ಮ ಕನಸಿನ ದಾಖಲೆ ಪೂರ್ತಿಗೊಳಿಸುವ ಟೆಸ್ಟ್‌ ಪಂದ್ಯವನ್ನು ಆಡಿ­ದರು. ಕಳೆದ ಮಾರ್ಚ್‌ ತಿಂಗಳಲ್ಲಿ ಮೊಹಾಲಿಯಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಜಡೇಜಾ ಅವರು 7ನೇ ವಿಕೆಟ್‌ನಲ್ಲಿ ಅಮೋಘ 175 ರನ್‌ಗಳನ್ನು ಸಿಡಿಸಿ, ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಗೊಂಚಲು ಕೂಡ ಪಡೆದುಕೊಂಡು, ತಮ್ಮ ಕನಸಿನ ದಾಖಲೆ ಸಾಧಿಸಿ ಬೀಗಿದರು. ಈ ಸಂದರ್ಶನದ ತುಣುಕನ್ನು ಯಾಕೆ ಪ್ರಸ್ತಾಪಿಸಬೇಕಾಯಿತು ಎಂದರೆ, ತಾವು ಅಂದುಕೊಂಡಿದ್ದನ್ನು ಛಲ ಬಿಡದೇ ಸಾಧಿಸುವ ಗುಣ ಅವರಲ್ಲಿದೆ. ಆ ಗುಣವೇ ಅವರನ್ನೀಗ ನಾಲ್ಕು ಬಾರಿ ಐಪಿಎಲ್‌ ಚಾಂಪಿಯನ್‌ ಪಟ್ಟ ಏರಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ನಾಯಕತ್ವದವರೆಗೂ ಕರೆ ತಂದಿದೆ. 

ವರ್ಷದಿಂದ ವರ್ಷಕ್ಕೆ ಪರಿಪೂರ್ಣ ಆಟಗಾರರಾಗಿ ಬದಲಾಗುತ್ತಿರುವ ರವೀಂದ್ರ ಜಡೇಜಾ ಭಾರತೀಯ ಕ್ರಿಕೆಟ್‌ನ ಬಹುದೊಡ್ಡ ಆಸ್ತಿ ಮತ್ತು ಇದೇ ಮಾತನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೂ ಅನ್ವಯಿಸಬಹುದು. ಜಡೇಜಾ 2012ರ ಆವೃತ್ತಿಯಿಂದ ಸಿಎಸ್‌ಕೆ ಬಳಗದಲ್ಲಿದ್ದಾರೆ. ಆ ಆವೃತ್ತಿಯ ಹರಾಜಿನಲ್ಲಿ ಅವರನ್ನು 9.8 ಕೋಟಿ ರೂಪಾಯಿಗೆ ಸಿಎಸ್‌ಕೆ ಫ್ರಾಂಚೈಸಿ ಖರೀದಿಸಿತ್ತು. ಅದು ಆಗ ದಾಖಲೆ. ಕಳೆದ ಹರಾಜಿಗೂ ಮೊದಲು 16 ಕೋಟಿ ರೂಪಾಯಿ ತೆತ್ತು ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. 33 ವರ್ಷದ ಜಡೇಜಾ ಐಪಿಎಲ್‌ ಸಿಎಸ್‌ಕೆ ಪರವಾಗಿ ಅದ್ಭುತವಾದ ಆಟವನ್ನೇ ಆಡಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 200 ಪಂದ್ಯಗಳನ್ನಾಡಿ 2386 ರನ್‌ಗಳೊಂದಿಗೆ 127 ವಿಕೆಟ್‌ ಕೂಡ ಕಿತ್ತಿದ್ದಾರೆ. 

ಕ್ರಿಕೆಟ್‌ನಲ್ಲಿ ‘ಸವ್ಯಸಾಚಿ’ಗಳಿಗೂ ಎಂದಿಗೂ ವಿಶೇಷ ಸ್ಥಾನವಿದೆ. ಕ್ರಿಕೆಟ್‌ ಇತಿಹಾಸವನ್ನು ನೋಡಿದರೆ ಗ್ಯಾರಿ ಸೋಬರ್ಸ್‌, ಜಾಕಸ್‌ ಕಾಲಿಸ್‌, ಕಪಿಲ್‌ ದೇವ್‌, ಇಮ್ರಾನ್‌ ಖಾನ್‌, ರಿಚರ್ಡ್‌ ಹ್ಯಾಡ್ಲಿ, ಕೇಥ್‌ ಮಿಲ್ಲರ್‌, ಲ್ಯಾನ್ಸ್‌ ಕ್ಲುಸ್ನರ್‌, ಟೋನಿ ಗ್ರೇಗ್‌ನಂಥ ಆಟಗಾರರು ಕ್ರಿಕೆಟ್‌ಗೆ ಹೊಸ ಮೆರುಗು ತಂದುಕೊಟ್ಟಿದ್ದಾರೆ. ಅದೇ ಸಾಲಿನಲ್ಲಿ ಜಡೇಜಾ ಕೂಡ ಸಾಗುತ್ತಿದ್ದಾರೆ. ಬ್ಯಾಟ್‌, ಬಾಲ್‌ ಮತ್ತು ಫೀಲ್ಡಿಂಗ್‌ ಮೂಲಕ ತಮ್ಮ ತಂಡವನ್ನು ಯಶಸ್ಸಿನ ದಡಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಪ್ರತಿ ಪಂದ್ಯದಲ್ಲಿ ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಭಾರತೀಯ ಟೆಸ್ಟ್‌ ಕ್ರಿಕೆಟ್‌ ತಂಡದ ಕಾಯಂ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ ಹಾಗೂ ಅವರ ಪ್ರಯತ್ನದ ಫಲವಾಗಿ ಹಲವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ. ಹಾಗಾಗಿ, ಅವರನ್ನು ‘ಮ್ಯಾಚ್‌ ವಿನ್ನರ್‌’ ಎಂದು ಹೇಳಿದರೆ ಅತಿಯಾಗದು. ಟೆಸ್ಟ್‌ ಆಗಲಿ, ಒನ್‌ ಡೇ, ಟಿ20 ಅಥವಾ ಐಪಿಎಲ್‌ ಪಂದ್ಯವೇ ಆಗಿರಲಿ, ಸೋಲಿನ ಅಂಚಿನಲ್ಲಿದ್ದ ತಂಡವನ್ನು ಏಕಾಂಗಿಯಾಗಿ ಬ್ಯಾಟ್‌ ಹಾಗೂ ಬಾಲ್‌ ಮೂಲಕ ಮೇಲಕ್ಕೆತ್ತಿದ ಉದಾಹರಣೆಗಳಿವೆ.

ಹಾಗಂತ, ಅವರೇನೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅದ್ಭುತವಾದ್ದನ್ನು ಮಾಡುವುದಿಲ್ಲ. ಬದಲಿಗೆ, ತಮ್ಮ ಆಟ­ವನ್ನು ಶಿಸ್ತುಬದ್ಧವಾಗಿ ಆಡುತ್ತಾರಷ್ಟೇ. ಉದಾಹರಣೆಗೆ, ರವೀಚಂದ್ರನ್‌ ಅಶ್ವಿನ್‌ ರೀತಿಯಲ್ಲಿ ಜಡೇಜಾ ಅವ­ರೇನೂ ಒಂದೇ ಓವರ್‌ನಲ್ಲಿ 6 ಬಾಲ್‌ಗಳನ್ನು ಒಂದ­ಕ್ಕಿಂತ ಒಂದು ಭಿನ್ನವಾಗಿ ಎಸೆಯುವುದಿಲ್ಲ. ಬದಲಿಗೆ ಸ್ಟಂಪ್‌ ಟು ಸ್ಟಂಪ್‌ ಹಾಗೂ ಲೈನ್‌ ಮತ್ತು ಲೆಂಥ್‌ ಕರಾರು­ವಕ್ಕಾಗಿ ಬೌಲಿಂಗ್‌ ಮಾಡುತ್ತಾರೆ. ಅವರ ಶಿಸ್ತಿನ  ಬೌಲಿಂಗ್‌ಗೆ ಪಿಚ್‌ ಕೂಡ ಸಾಥ್‌ ನೀಡಿದರೆ ಮುಗೀತು ಎದುರಾಳಿಯ ವಿಕೆಟ್‌ಗಳು ಬೀಳುತ್ತಾ ಹೋಗುತ್ತವೆ. ಬ್ಯಾಟಿಂಗ್‌ನಲ್ಲೂ ಅಷ್ಟೇ ವಿಶೇಷವಾದ್ದನ್ನು ಏನೂ ಮಾಡಲು ಹೋಗುವುದಿಲ್ಲ, ಚೆಂಡಿನ ದಿಕ್ಕು ಮತ್ತು ಗತಿಯನ್ನು ಗುರು­ತಿಸಿ ಅದನ್ನು ಅಷ್ಟೇ ಶಿಸ್ತು ಬದ್ಧವಾಗಿ ಬಲವಾಗಿ ಹೊಡೆಯುತ್ತಾರೆ; ಚೆಂಡು ಬೌಂಡ್ರಿ ಗೆರೆಯನ್ನು ದಾಟಿರುತ್ತದೆ. ಇನ್ನು ಫೀಲ್ಡಿಂಗ್‌ನಲ್ಲಿ ಮಾತಾಡು­ವಂತೆಯೇ ಇಲ್ಲ, ಬಹುಶಃ ಮೊಹಮ್ಮದ್‌ ಕೈಫ್‌ ಮತ್ತು ಯುವರಾಜ್‌ ಸಿಂಗ್‌ ಅವರ ಬಳಿಕ ಭಾರತಕ್ಕೆ ಸಿಕ್ಕ ಅದ್ಭುತ ಫೀಲ್ಡರ್‌ ಇವರು. ಅವರ ಬಳಿ ಬಾಲ್‌ ಹೋದರೆ ಎದುರಾಳಿ ತಂಡದ ಬ್ಯಾಟರ್‌ ರನ್‌ ಕದಿಯಲು ಮುಂದಾಗುವುದೇ ಇಲ್ಲ! ಅಷ್ಟರ ಮಟ್ಟಿಗೆ ಅವರ ಥ್ರೋಗಳು ಕರಾರುವಕ್ಕಾಗಿ­ರುತ್ತವೆ ಮತ್ತು ಫೀಲ್ಡಿಂಗ್‌ ಮೂಲಕವೇ ಬೌಂಡರಿಗಳನ್ನು ಉಳಿಸಿ ತಂಡಕ್ಕೆ ನೆರವಾಗುವ ಚಾಕಚಕ್ಯತೆ ಅವರಲ್ಲಿ ಇದೆ. ಈ ವರೆಗೆ 59 ಟೆಸ್ಟ್‌ಗಳಿಂದ 242 ವಿಕೆಟ್‌ ಹಾಗೂ 2 ಶತಕಗಳೊಂದಿಗೆ 2369 ರನ್‌ ಗಳಿಸಿದ್ದಾರೆ. 168 ಅಂತಾರಾಷ್ಟ್ರೀಯ ಒಂದು ದಿನದ ಪಂದ್ಯಗಳನ್ನಾಡಿ 2411 ರನ್‌ಗಳೊಂದಿಗೆ 188 ವಿಕೆಟ್‌ಗಳನ್ನು ಪಡೆದುಕೊಂಡಿ­ದ್ದಾರೆ. 57 ಟಿ20 ಪಂದ್ಯಗಳಲ್ಲಿ47 ವಿಕೆಟ್‌ ಹಾಗೂ 326 ರನ್‌ ಗಳಿಸಿದ್ದಾರೆ.

1988 ಡಿಸೆಂಬರ್‌ 6ರಂದು ರವೀಂದ್ರ ಜಡೇಜಾ ಗುಜರಾತ್‌ನ ಜಾಮ್‌ನಗರದ ರಜಪೂತ್‌ ಕುಟುಂಬದಲ್ಲಿ ಜನಿಸಿದರು. ತಂದೆ ಅನಿರುದ್ಧ ಖಾಸಗಿ ಏಜೆನ್ಸಿ ಪರವಾಗಿ ವಾಚ್‌ಮನ್‌ ಕೆಲಸ ಮಾಡುತ್ತಿದ್ದರು.  ಮಗ ಸೇನೆ ಸೇರಿಕೊಳ್ಳಲಿ ಎಂದು ತಂದೆ ಆಸೆ ಪಟ್ಟರೆ ಕ್ರಿಕೆಟ್‌ ಆಗುವ ಕನಸು ಕಂಡಿದ್ದ ಜಡೇಜಾಗೆ ತಾಯಿ ಲತಾ ಆಸರೆಯಾಗಿ ನಿಂತಿದ್ದರು. ಆದರೆ, ವಿಧಿ ಬೇರೆಯದ್ದೇ ಆಟ ಹೂಡಿತ್ತು. 2005ರಲ್ಲಿಅವರ ತಾಯಿ ರಸ್ತೆ ಅಪಘಾತದಲ್ಲಿಮೃತಪಟ್ಟರು. ಆಗ ಜಡೇಜಾ ಅವರಿಗೆ ಕೇವಲ 17 ವರ್ಷ. ತೀವ್ರ ಆಘಾತಕ್ಕೆ ಒಳಗಾಗಿದ್ದ ಅವರು ಕ್ರಿಕೆಟ್‌ ತೊರೆಯುವ ನಿರ್ಧಾರ ಮಾಡಿದ್ದರಂತೆ. ಆದರೆ, ತಾಯಿ ಆಸೆ ನೆರವೇರಿಸುವ ಪಣ ತೊಟ್ಟಂತೆ ತಮಗೆ ಸಿಕ್ಕ ಅವಕಾಶ­ಗಳನ್ನು ಬಾಚಿಕೊಂಡು ಜಡೇಜಾ ಈಗ ವಿಶ್ವದ ನಂ.1 ಆಲ್‌ರೌಂಡರ್‌ ಆಗಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದಾರೆ. 2016ರಲ್ಲಿರೀವಾ ಸೋಲಂಕಿಯನ್ನು ವರಿಸಿದರು, ದಂಪತಿಗೆ ಒಂದು ಹೆಣ್ಣು ಮಗುವಿದೆ. 

‘ಜಡ್ಡು’, ‘ರಾಕ್‌ ಸ್ಟಾರ್‌’, ‘ಸರ್‌ ಜಡೇಜಾ’ ಇತ್ಯಾದಿ ಅಡ್ಡ  ಹೆಸರುಗಳನ್ನು ಹೊಂದಿರುವ ಜಡೇಡಾ, ಮೈದಾನದಲ್ಲಿಶತಕ ಅಥವಾ ಅರ್ಧ ಶತಕ ಸಿಡಿಸಿದಾಗ ಕತ್ತಿ ವರಸೆ ರೀತಿಯಲ್ಲಿ ಬ್ಯಾಟ್‌ ಬೀಸುವುದನ್ನು ನೋಡುವುದೇ ಚೆಂದ. 16ನೇ ವಯಸ್ಸಿಗೆ ಜಡೇಜಾ ಅಂಡರ್‌ 19 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದರು. ಆದರೆ, ಭಾರತ ತಂಡ ಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂದೆ 2008ರಲ್ಲೂ ಅಂಡರ್‌-19 ಟೀಮ್‌ ಆಯ್ಕೆಯಾದರಲ್ಲದೇ ವೈಸ್‌ ಕ್ಯಾಪ್ಟನ್‌ ಕೂಡ ಆದರು. ಆಗ ಕ್ಯಾಪ್ಟನ್‌ ಆಗಿದ್ದವರು ಮತ್ತೊಬ್ಬ ದಿಗ್ಗಜ ವಿರಾಟ್‌ ಕೊಹ್ಲಿ. ಈ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತೀಯ ತಂಡ ವಿಶ್ವಕಪ್‌ ಎತ್ತಿ ಹಿಡಿಯಿತು. ಜಡೇಜಾ 6 ಪಂದ್ಯಗಳಿಂದ 10 ವಿಕೆಟ್‌ ಪಡೆದುಕೊಂಡರು. 2006-07ರ ಸಾಲಿನ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿ ಇಟ್ಟರು. ದೇಶಿಯ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ಪರವಾಗಿ ಅವರು ಆಡುತ್ತಾರೆ. ರಣಜಿ ಪಂದ್ಯದಲ್ಲಿ ವಿಶಿಷ್ಟ ಸಾಧನೆ ಅವರ ಹೆಸರಿನಲ್ಲಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರು ತ್ರಿಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದಲ್ಲಿ 8ನೇ ಆಟಗಾರ ಎಂಬ ಖ್ಯಾತಿ ಅವರ ಬೆನ್ನಿಗಿದೆ. 2008-09ರ ಸಾಲಿನ ರಣಜಿ ಕ್ರಿಕೆಟ್‌ ಪಂದ್ಯಾವಳಿ ಅದ್ಭುತ ಆಲ್‌ರೌಂಡ್‌ ಆಟದಿಂದ ಆಯ್ಕೆಗಾರ ಗಮನ ಸೆಳೆದರು. ಈ ಟೂರ್ನಿಯಲ್ಲಿ ಅವರು 739 ರನ್‌ ಹಾಗೂ 42 ವಿಕೆಟ್‌ ಪಡೆದುಕೊಂಡು, ಭಾರತೀಯ  ಒಂದು ದಿನದ ಕ್ರಿಕೆಟ್‌ ತಂಡದ ಕದ ತಟ್ಟಿದರು. ಕೊಲಂಬೊದಲ್ಲಿ ನಡೆದ ತಮ್ಮ ಮೊದಲ ಅಂತಾರಾಷ್ಟ್ರೀಯ ಒಡಿಐನಲ್ಲಿ 60 ರನ್‌ ಗಳಿಸಿದರು. ಆದರೆ, ಯಾವುದೇ ವಿಕೆಟ್‌ ಪಡೆಯಲಿಲ್ಲ. 2012ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ನಂತರ ಜಡ್ಡು ನಿಧಾನವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ತಂಡದ ಅವಿಭಾಜ್ಯ ಅಂಗವಾದರು.

ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಅದರದ್ದೇ ಆದ ಮಹತ್ವವಿದೆ; ವಿಶಿಷ್ಟ ಪರಂಪರೆಯಿದೆ. ಯಾಕೆಂದರೆ, ವಿಶ್ವದ ಅತ್ಯುತ್ತಮ ಕ್ಯಾಪ್ಟನ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಮಹೇಂದ್ರ ಸಿಂಗ್‌ ಧೋನಿ ಅವರು ಸಿಎಸ್‌ಕೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯದಿದ್ದಾರೆ. ಆ ತಂಡದ ನೇತೃತ್ವ  ಈಗ ಸವ್ಯಸಾಚಿ ಜಡೇಜಾ ಹೆಗಲಿಗೇರಿದೆ. ಈವರೆಗೆ ಅವರ ಆಟವನ್ನು ನೋಡುತ್ತಾ ಬಂದವರಿಗೆ ನಾಯಕನಾಗಿಯೂ ಜಡೇಜಾ ಯಶಸ್ವಿಯಾಗುತ್ತಾರೆಂಬ ನಂಬಿಕೆ ಸಿಎಸ್‌ಕೆ ತಂಡದ ಅಭಿಮಾನಿಗಳದ್ದು.



ಬುಧವಾರ, ಮೇ 4, 2022

Elon Musk: ಸಾಹಸಿ ಉದ್ಯಮಿ ಮಸ್ಕ್‌

ಎಲಾನ್‌ ಮಸ್ಕ್‌ ಎಂಬ ವ್ಯಕ್ತಿ ಯಾವುದೇ ಅಳತೆಗೋಲಿಗೆ ಸಿಗುವ ಜಾಯಮಾನದವರಲ್ಲ; ಅವರಿಗೆ ಅವರೇ ಅಳತೆಗೋಲು, ಹೊಡೆದಿದ್ದೆಲ್ಲಗೋಲು!


- ಮಲ್ಲಿಕಾರ್ಜುನ ತಿಪ್ಪಾರ
ಒಂದಷ್ಟು ಪ್ರತಿಭೆ; ಮತ್ತೊಂದಿಷ್ಟು ಹುಚ್ಚುತನ, ಒಂದಷ್ಟು ಉಡಾಫೆ; ಮತ್ತೊಂದಿಷ್ಟು ಧೈರ್ಯ, ಒಂದಷ್ಟು ಸಾಹಸ; ಮತ್ತೊಂದಿಷ್ಟು ಹುಚ್ಚು ಸಾಹಸ, ಒಂದಷ್ಟು ತಿಕ್ಕುಲತನ; ಮತ್ತೊಂದಿಷ್ಟು ಮೊಂಡತನ, ಒಂದಷ್ಟು ಹುಮ್ಮಸ್ಸು; ಮತ್ತೊಂದಿಷ್ಟು ಕನಸು, ಒಂದಷ್ಟು ಸೊಗಸುಗಾರ; ಮತ್ತೊಂದಿಷ್ಟು ಮೋಜುಗಾರ... ಈ ಒಂದಿಷ್ಟು ಮತ್ತು ಮತ್ತೊಂದಿಷ್ಟು ಒಟ್ಟು ಮೊತ್ತವೇ ಎಲಾನ್‌ ರೀವ್‌ ಮಸ್ಕ್‌ ಅಲಿಯಾಸ್‌ ಎಲಾನ್‌ ಮಸ್ಕ್‌.

ಭೂಮಿ ಮೇಲಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌, ಹೆಚ್ಚಾಗಿ ನಷ್ಟವನ್ನು ಉಲಿಯುತ್ತಿದ್ದ ‘ಟ್ವಿಟರ್‌’ ಖರೀದಿಯ ಮೂಲಕ ತಾನೆಂಥ ಹುಚ್ಚು ಸಾಹಸಿಗ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಈ ಹುಚ್ಚುತನ ಅವರ ವ್ಯಕ್ತಿತ್ವದಲ್ಲಿದೆ, ಯಾರೂ ಕಾಣದ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳುವ ಛಾತಿ ಅವರಿಗೆ ಒಗ್ಗಿದೆ ಅದೇ ಕಾರಣಕ್ಕೆ. ಎಷ್ಟೋ ರಾಷ್ಟ್ರಗಳು ಚಂದ್ರನಲ್ಲಿಗೆ ಹೋಗಲು ಪ್ಲ್ಯಾನ್‌ ಮಾಡುತ್ತಿರುವಾಗಲೇ, ಮಂಗಳನ ಅಂಗಳಲ್ಲಿ ಮಾನವರ ಕಾಲನಿ ಸೃಷ್ಟಿಸಬೇಕೆಂಬ ಹುಚ್ಚು ಕನಸು ಕಾಣಲು ಸಾಧ್ಯವಾಗುವುದು ಮಸ್ಕ್‌ಗೆ ಮಾತ್ರವೇ ಸಾಧ್ಯ. ಬರೀ ಕನಸಷ್ಟೇ ಅಲ್ಲ, ಆ ದಿಶೆಯಲ್ಲಿ ಯೋಜಿಸಿ, ರೂಪಿಸಿ ಮುಂದಡಿ ಇಡಬಲ್ಲ ಧೈರ್ಯಗಾರನೂ.

ಇಲ್ಲಿ ಒಂದು ಘಟನೆ ಹೇಳಬೇಕು; ಬಿಟ್‌ ಕಾಯಿನ್‌ ಕುರಿತು ಮಸ್ಕ್‌ ಒಂದೇ ಒಂದು ಮಸ್ಕರಿ ಟ್ವೀಟ್‌ ಮಾಡಿದ್ದರು. ಅದರಿಂದ ಅವರ ಟೆಸ್ಲಾ ಕಂಪನಿಗೆ ಒಂದು ಲಕ್ಷ  ಕೋಟಿ ರೂ.ಗೆ ಅಧಿಕ ನಷ್ಟ ಉಂಟು ಮಾಡಿತು ಮತ್ತು ವಿಶ್ವದ ನಂಬರ್‌ 1 ಶ್ರೀಮಂತ ಪಟ್ಟ ಕಳೆದುಕೊಳ್ಳಬೇಕಾಯಿತು. ಮತ್ತೊಮ್ಮೆ ಟೆಸ್ಲಾ ಕಂಪನಿಯು ವರ್ಷಕ್ಕೆ 5 ಲಕ್ಷ ಕಾರುಗಳನ್ನು ತಯಾರಿಸುತ್ತಿದೆ ಎಂಬ ಉತ್ಪ್ರೇಕ್ಷೆಯ ಹೇಳಿಕೆ ನೀಡಿದ್ದಕ್ಕಾಗಿ ಕಂಪನಿಯ ಪಾಲುದಾರರು ಮಸ್ಕ್‌ನ ಮೇಲೆ ಸಿಟ್ಟಾಗಿ ಈತನ ಟ್ವಿಟ್ಟರ್‌ ಖಾತೆಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು. ಮಸ್ಕ್‌ ಅವರ ಈ ತರಹದ ಹುಚ್ಚಾಟಗಳು ಬೇಕಾದಷ್ಟಿವೆ. ಆದರೆ, ಅವರ ಒಟ್ಟಾರೆ ವ್ಯಕ್ತಿತ್ವದಲ್ಲಿನಮಗೆ ಪ್ರೇರಣೆಯಾಗಬಲ್ಲಸಾಕಷ್ಟು ಸಂಗತಿಗಳಿವೆ ಎಂಬುದೂ ಅಷ್ಟೇಸತ್ಯ. 

ಎಲಾನ್‌ ಮಸ್ಕ್‌ ಅವರ ಹೆಸರಿನಲ್ಲಿ ಕಂಪನಿಗಳಿಗೆ ಒಂದಾ, ಎರಡಾ...? ಸ್ಪೇಸ್‌ಎಕ್ಸ್‌, ಟೆಸ್ಲಾ, ಬೋರಿಂಗ್‌ ಕಂಪನಿ, ಗಿ.್ಚಟಞ, ಪೇಪಾಲ್‌, ನ್ಯೂರೊಲಿಂಕ್‌, ಓಪನ್‌ಎಐ, ಝಿಪ್‌ 2, ಮಸ್ಕ್‌ ಫೌಂಡೇಷನ್‌(ಈ ಕಂಪನಿಗಳ ಪಟ್ಟಿಯಲ್ಲಿಕೆಲವು ಮಾರಿದ್ದು ಇದೆ)... ಹೀಗೆ ಪಟ್ಟಿ ದೊಡ್ಡದಿದೆ; ಈಗ ಹೊಸದಾಗಿ ಟ್ವಿಟರ್‌ ಮಾಲೀಕ. ಅವರ ಈ ಸಾಹಸ ಕಂಡು, ನೇಟಿಜನ್ಸ್‌ ಆ ಕಂಪನಿ ಖರೀದಿಸಿ, ಈ ಕಂಪನಿ ಖರೀದಿಸಿ ಎಂಬ ಪುಕ್ಕಟೆ ಸಲಹೆಗಳನ್ನು ಕೂಡ ಕೊಡುತ್ತಿದ್ದಾರೆ! ಈ ಸಲಹೆಗಳು ನಿಜವಾದರೂ ಆಗಬಹುದು. ಯಾಕೆಂದರೆ, 2017ರಲ್ಲಿಮಸ್ಕ್‌ ಅವರು, ‘‘ಐ ಲವ್‌ ಟ್ವಿಟರ್‌,’’ ಎಂದು ಟ್ವೀಟ್‌ ಮಾಡಿದ್ದರು. ‘‘ಹಾಗಿದ್ದರೆ ನೀವು ಅದನ್ನು ಖರೀದಿಸಿ,’’ ಎಂದು ನಿರೂಪಕ ಡೇವ್‌ ಸ್ಮಿತ್‌ ಮರು ಪ್ರತಿಟ್ವೀಟಿಸಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್‌, ‘‘ಎಷ್ಟಂತೆ ಅದರ ಬೆಲೆ,’’ ಎಂದು ಪ್ರಶ್ನಿಸಿದ್ದರು. ಮೊನ್ನೆ ಮಸ್ಕ್‌ ಟ್ವಿಟರ್‌ ಖರೀದಿಸಿದಾಗ ಈ ಹಳೆಯ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು!

ಎಲಾನ್‌ ಮಸ್ಕ್‌ ಅವರು 1971ರ ಜೂನ್‌ 28ರಂದು ದಕ್ಷಿಣ ಆಫ್ರಿಕಾದಲ್ಲಿ, ಕೆನಡಾದ ತಾಯಿತಂದೆಗಳಿಗೆ ಜನಿಸಿದರು. ಅವರ ಶಾಲಾ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ. ಅವರೇ ಹೇಳಿಕೊಂಡಿರುವಂತೆ; ಮಸ್ಕ್‌ ಪುಸ್ತಕದ ಹುಳು. ಎನ್‌ಸೈಕ್ಲೋಪಿಡಿಯಾಗಳಿಂದ ಹಿಡಿದು ಕಾಮಿಕ್‌ ಬುಕ್‌ ಗಳವರೆಗೆ ಎಲ್ಲವನ್ನು ಓದುತ್ತಿದ್ದರಂತೆ. ಪ್ರಿಟೋರಿಯಾ ನಗರದಲ್ಲಿರುವ ವಾಟರ್‌ಕ್ಲೂಫ್‌ ಹೌಸ್‌ ಪ್ರಿಪರೇಟರಿ ಸ್ಕೂಲ್‌ ಸೇರಿಕೊಂಡರು. ಬಳಿಕ ಪ್ರಿಟೋರಿಯಾ ಬಾಯ್ಸ್‌ ಹೈಸ್ಕೂಲ್‌ನಲ್ಲಿಶಿಕ್ಷ ಣ ಪಡೆದುಕೊಂಡರು. ಈ ದಿನಗಳು ಅವರಿಗೆ ಹೆಚ್ಚು ಏಕಾಂಗಿತನವನ್ನು ಕೊಟ್ಟವು. ಆದರೆ, ಎಲಾನ್‌ ಎಂಥ ಬುದ್ಧಿಶಾಲಿ ಎಂದರೆ, 10ನೇ ವಯಸ್ಸಿನಲ್ಲೇ ಸಾಫ್ಟ್‌ವೇರ್‌ ಕೋಡಿಂಗ್‌ ಕಲಿತುಕೊಂಡು, 12ನೇ ವಯಸ್ಸಿನಲ್ಲೇ ಒಂದು ವಿಡಿಯೋ ಗೇಮ್‌ ತಯಾರಿಸಿದರು. ಮುಂದೆ, ಎಕಾನಮಿಕ್ಸ್‌ ಪದವಿಗೆ ಸೇರಿದರು. ಆದರೆ, ಈ ಕೋರ್ಸ್‌ ತಮಗಲ್ಲಎಂಬುದು ಗೊತ್ತಾಗುತ್ತಿದ್ದಂತೆ  ಸೇರಿದ ಎರಡು ದಿನದಲ್ಲೇ ಅದನ್ನು ಬಿಟ್ಟು ‘ಝಿಪ್‌2’ ಎಂಬ ಸಾಫ್ಟ್‌ವೇರ್‌ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಅದನ್ನು ಕಾಂಪಾಕ್‌ ಕಂಪನಿಗೆ 340 ದಶಲಕ್ಷ  ಡಾಲರಿಗೆ ಮಾರಾಟ ಮಾಡಿದರು. ಆಗ ಮಸ್ಕ್‌ ಅವರಿಗೆ ಕೇವಲ 28 ವರ್ಷ. ಈ ವಯಸ್ಸಿಗೆ ಹೊತ್ತಿಗೆ ನಾವು- ನೀವಾದರೆ ಕೆಲಸ ಹುಡ್ಕೊಂಡು ಅಲೆಯುತ್ತಿದ್ದೆವು. ಆನಂತರ ಪೇಪಾಲ್‌ ಎಂಬ ಆನ್‌ಲೈನ್‌ ಹಣಪಾವತಿ ಕಂಪನಿಯನ್ನು ಹುಟ್ಟುಹಾಕಿ ನಂತರ ಅದನ್ನು ಇಬೇ ಕಂಪನಿಗೆ 120 ಕೋಟಿ ಡಾಲರ್‌ಗೆ ಮಾರಾಟ ಮಾಡಿದರು ಮಸ್ಕ್‌. ಟೆಸ್ಲಾಎಂಬ ವಿದ್ಯುತ್‌ ಚಾಲಿತ ಕಾರ್‌ ತಯಾರಿಕಾ ಕಂಪನಿ ಪ್ರಾರಂಭಿಸಿದರು. ಚಿಕ್ಕಂದಿನಿಂದಲೇ ಐಸಾಕ್‌ ಅಸಿಮೋವ್‌ ಮುಂತಾದ ವಿಜ್ಞಾನ ಲೇಖಕರನ್ನು ಓದುತ್ತ ಬೆಳೆದ ಮಸ್ಕ್‌ಗೆ ಬಾಹ್ಯಾಕಾಶ ಸಂಶೋಧನೆಯ ಹುಚ್ಚು. ಅದಕ್ಕಾಗಿಯೇ ಸ್ಪೇಸ್‌ ಎಕ್‌ ್ಸಪ್ಲೋರೇಷನ್‌ (ಸ್ಪೇಸ್‌ಎಕ್ಸ್‌) ಎಂಬ ಕಂಪನಿಯನ್ನು ಆಂಭಿಸಿದರು. ಮಸ್ಕ್‌ ಅವರ ಉದ್ಯಮ ಹುಚ್ಚು ಸಾಹಸಗಳು ಇಷ್ಟಕ್ಕೆ ನಿಲ್ಲುವುದಿಲ್ಲ. ಒಂದರ ಮೇಲೊಂದು ಕಂಪನಿಗಳು ಆರಂಭಿಸುವುದು, ಇಲ್ಲವೇ ಸ್ವಾಧೀನ ಮಾಡಿಕೊಳ್ಳುವುದು ಅಥವಾ ಮಾರುವುದು ಈವರೆಗೆ ನಡೆದುಕೊಂಡು ಬಂದಿದೆ. 

ಉದ್ಯಮ ಸಾಹಸದಂತೆ ಅವರ ವೈಯಕ್ತಿಕ ಜೀವನವೂ ರೋಚಕವಾಗಿದೆ. ಎರಡು ಮದುವೆಗಳಾಗಿವೆ. ಸದ್ಯಕ್ಕೆ ಅವಿವಾಹಿತ. ಮೊದಲ ಹೆಂಡತಿ ಜಸ್ಟಿನ್‌ ವಿಲ್ಸನ್‌. ಈಕೆ ಕೆನಡಾದ ಲೇಖಕಿ. 2000ರಿಂದ 2008ರವರೆಗೆ ಮದುವೆ ಬಾಳಿಕೆ ಬಂತು. ಆ ನಂತರ ಇಂಗ್ಲಿಷ್‌ ನಟಿ ತಾಲುಲಾ ರಿಲೇ ಅವರನ್ನು 2010ರಲ್ಲಿಮದುವೆಯಾದರು; 2016ರಲ್ಲಿಬೇರೆ ಬೇರೆಯಾದರು. ಮಸ್ಕ್‌ಗೆ ಒಟ್ಟು ಆರು ಮಕ್ಕಳಿದ್ದಾರೆ. 2018ರಿಂದ ಕೆನಡಾದ ಗಾಯಕಿ, ಸಾಂಗ್‌ ರೈಟರ್‌ ಗ್ರೀಮ್ಸ್‌ (ಕ್ಲೇರ್‌ ಎಲಿಸ್‌ ಬೌಚರ್‌) ಜತೆ ಸಂಬಂಧವಿಟ್ಟುಕೊಂಡಿದ್ದಾರೆ. ಒಂದು ಮಗುವಿದೆ. ಹಲವು ಗುಪ್ತ ಪ್ರಣಯಗಳೂ ಇವೆ.  ಫೋರ್ಬ್ಸ್‌ ಪತ್ರಿಕೆ ಮಸ್ಕ್‌ ಅವರನ್ನು ಜಗತ್ತಿನ 25 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಸಾಲಿನಲ್ಲಿಸೇರಿಸಿದೆ.

ಮಸ್ಕ್‌ ಅವರಲ್ಲಿಇನ್ನೂ ಏನೇನು ಕನಸುಗಳಿವೆಯೋ? ಎಂಥ ಹುಚ್ಚ ಸಾಹಸಗಳಿಗೆ ಅಣಿಯಾಗುತ್ತಿದ್ದಾರೋ ಯಾರಿಗೆ ಗೊತ್ತು? ಅನಿರೀಕ್ಷಿತ ನಿರ್ಧಾರ ಕೈಗೊಳ್ಳುವುದರಲ್ಲಿಸಿದ್ಧಹಸ್ತರಾಗಿರುವ ವ್ಯಕ್ತಿಯ ನಡೆಯನ್ನು ಊಹಿಸುವುದು ಕಷ್ಟ. ಅವರ ಈ ಗುಣವೇ ಅವರನ್ನು ಇಂದು ವಿಶ್ವದ ಶ್ರೀಮಂತ ವ್ಯಕ್ತಿಸ್ಥಾನದಲ್ಲಿತಂದುಕೂರಿಸಿದೆ. ನೆಲದಿಂದ ಚಂದ್ರನಲ್ಲಿಗೆ ನೆಗೆಯುವ ಸಾಹಸಿ ಗುಣವನ್ನು ಗಟ್ಟಿಗೊಳಿಸಿದೆ.




ಬುಧವಾರ, ಫೆಬ್ರವರಿ 16, 2022

Fearless Businessman Rahul Bajaj - ಹಮಾರಾ 'ರಾಹುಲ್‌ ಬಜಾಜ್‌'

 ಭಾರತದ ‘ಧೈರ್ಯವಂತ’ ಉದ್ಯಮಿ ಎನಿಸಿಕೊಂಡಿದ್ದ ರಾಹುಲ್‌ ಬಜಾಜ್‌, ಅಜ್ಜನಿಂದ ಬಂದ ಬಜಾಜ್‌ ಆಟೊ ಕಂಪನಿಯನ್ನು ಉತ್ತುಂಗಕ್ಕೇರಿಸಿದವರು.


1970 
‘ಬಲಾಢ್ಯ ನಾಯಕಿ’ ಪ್ರಧಾನಿ ಇಂದಿರಾ ಗಾಂಧಿ ಅವರು ‘ಲೈಸೆನ್ಸ್‌ ರಾಜ್‌’ ಹೆಸರಿನಲ್ಲಿಉತ್ಪಾದನಾ ವಲಯವನ್ನು ಅನಗತ್ಯ ನಿಯಂತ್ರಣಕ್ಕೊಳಪಡಿಸಿದ್ದರು. ಈ ವ್ಯವಸ್ಥೆಯ ಪರಿಣಾಮ ಖರೀದಿದಾರರು ಸ್ಕೂಟರ್‌ ಬುಕ್‌ ಮಾಡಿ, ಅದನ್ನು ಖರೀದಿಸಲು ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಆಗ ರಾಹುಲ್‌ ಬಜಾಜ್‌ ಅವರು ಸಂದರ್ಶನವೊಂದರಲ್ಲಿ, ‘‘ಹೆಚ್ಚಿನ ಭಾರತೀಯರಿಗೆ ಅಗತ್ಯವಿರುವ ಸರಕುಗಳ ಉತ್ಪಾದನೆಗಾಗಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದರೆ ಹೋಗಲು ಸಿದ್ಧ,’’ ಎಂದು ಹೇಳಿದ್ದರು.

2019
‘ವಿಕ’ ಸೋದರ ಪತ್ರಿಕೆ ‘ದಿ ಎಕನಾಮಿಕ್‌ ಟೈಮ್ಸ್‌’ ಪತ್ರಿಕೆಯ ಇಟಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿಮಾತನಾಡಿದ್ದ ರಾಹುಲ್‌ ಬಜಾಜ್‌, ‘‘ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರದ ಎರಡನೇ ಅವಧಿಯಲ್ಲಿಯಾರನ್ನು ಬೇಕಾದರೂ ನಾವು ಟೀಕಿಸಲು ಅವಕಾಶವಿತ್ತು. ಆದರೆ, ಈಗ ಅಂಥ ವಾತಾವರಣ ಇಲ್ಲ. ಉದ್ಯಮದಲ್ಲಿಅನೇಕರಿಗೆ ಈ ಭಾವನೆ ಇದೆ. ಉದ್ಯಮದ ಗೆಳೆಯರ ಮನಸ್ಸಿನಲ್ಲಿಯೂ ಅನೇಕ ವಿಷಯಗಳಿವೆ. ಆದರೆ, ಯಾರೂ ಮಾತನಾಡುತ್ತಿಲ್ಲ. ಆದರೆ, ನಾನು ಮಾತನಾಡುತ್ತೇನೆ,’’ ಎಂದಿದ್ದರು. ವಿಶೇಷ ಎಂದರೆ, ಇದೇ ಕಾರ್ಯಕ್ರಮದಲ್ಲಿಗೃಹ ಸಚಿವ ಅಮಿತ್‌ ಶಾ ಕೂಡ ಇದ್ದರು!

***

ಮೇಲಿನ ಈ ಎರಡೂ ಘಟನೆಗಳು, ಶನಿವಾರ ನಿಧನರಾದ ಉದ್ಯಮಿ ರಾಹುಲ್‌ ಬಜಾಜ್‌ ಅವರ ವ್ಯಕಿತ್ವವನ್ನು ಪರಿಚಯಿಸುತ್ತವೆ. ಉದ್ಯಮ ಹಿತಾಸಕ್ತಿಗಳ ಹೊರತಾಗಿಯೂ ಅವರು ವ್ಯವಸ್ಥೆಯ ವಿರುದ್ಧ ಮಾತಾಡಬೇಕಾದ ಅಗತ್ಯ ಎನಿಸಿದರೆ ಯಾರಿಗೂ ಹೆದರದೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಇಷ್ಟಪಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಉದ್ಯಮ ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲೂಬಜಾಜ್‌ ಕುಟುಂಬ ಪಾಲ್ಗೊಂಡಿದೆ, ಅಜ್ಜ ಜಮನ್‌ಲಾಲ್‌ ಬಜಾಜ್‌, ಚಿಕ್ಕಪ್ಪ ರಾಮಕೃಷ್ಣ ಬಜಾಜ್‌ ಅವರು ಹೋರಾಟದಲ್ಲಿಪಾಲ್ಗೊಂಡು, ಜೈಲುವಾಸ ಅನುಭವಿಸಿದ್ದರು. ಬಜಾಜ್‌ ಕುಟುಂಬದ ಹಿನ್ನೆಲೆ ಮತ್ತು ರಾಹುಲ್‌ ಬಜಾಜ್‌ ಅವರನ್ನು ತುಲನೆ ಮಾಡಿದಾಗ ಸಾರ್ವಜನಿಕವಾಗಿ ಅವರು ತೋರಿದ ಧೈರ್ಯ ಮತ್ತು ಉದ್ಯಮದಲ್ಲಿಅವರು ಅಳವಡಿಸಿಕೊಂಡ ಬಂದ ನೀತಿಗಳ ಸೂಧಿರ್ತಿಮೂಲದ ಪರಿಚಯವಾಗುತ್ತದೆ. 

ರಾಹುಲ್‌ ತಮ್ಮ ಗೆಳೆಯರ ಬಳಗ, ಉದ್ಯಮದ ಸ್ನೇಹಿತರ ವಲಯದಲ್ಲಿಮೊದಲಿನಿಂದಲೂ, ‘ಬಾರ್ನ್‌ ಆ್ಯಂಟಿ ಎಸ್ಟಾಬ್ಲಿಷ್‌ಮೆಂಟ್‌’ ಮತ್ತು ‘ಫಿಯರ್‌ಲೆಸ್‌’ ಎಂದು ಗುರುತಿಸಿಕೊಂಡಿದ್ದರು. ಈ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ ಕೂಡ. ಉದ್ಯಮಿಯಾಗಿ ಬಜಾಜ್‌ ಗ್ರೂಪ್‌ ಕಂಪನಿಗಳನ್ನು ತುಂಬ ಎತ್ತರಕ್ಕೆ ಕೊಂಡೊಯ್ಯುವಲ್ಲಿಅವರ ಕಾಣಿಕೆ ಮರೆಯುವಂತಿಲ್ಲ. ಆಟೊ, ಹಣಕಾಸು, ಸಾರ್ಜನಿಕ ಸೇವೆಯಲ್ಲಿಅವರು ತೋರಿದ ಅಪ್ರತಿಮ ಸಾಧನೆಗಳ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿಅಲ್ಪ ಕಾಣಿಕೆ ದೊರೆತಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ. 

ರಾಹುಲ್‌ ಬಜಾಜ್‌ 1938 ಜೂನ್‌ 10ರಂದು ಪಶ್ಚಿಮ ಬಂಗಾಳದ ಕೊಲ್ಕೊತಾದಲ್ಲಿಜನಿಸಿದರು. ತಂದೆ ಕಮಲನಯನ ಬಜಾಜ್‌, ಇವರು ಉದ್ಯಮಿ ಜತೆಗೆ ರಾಜಕಾರಣಿಯೂ ಹೌದು. ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಹುಲ್‌, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಜಮನ್‌ಲಾಲ್‌ ಬಜಾಜ್‌ ಅವರ ಮೊಮ್ಮಗ. 1958ರಲ್ಲಿದಿಲ್ಲಿಯ ಸೇಂಟ್‌ ಸ್ಟೀಫನ್‌ ಕಾಲೇಜಿನಿಂದ ಪದವಿ ಪಡೆದ ರಾಹುಲ್‌, ಬಾಂಬೆ ವಿಶ್ವವಿದ್ಯಾಲಯದಲ್ಲಿಕಾನೂನು ಅಧ್ಯಯನ ಮಾಡಿದರು. ಅಲ್ಲಿಂದ ಅಮೆರಿಕಕ್ಕೆ ತೆರಳಿ ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ನಲ್ಲಿಎಂಬಿಎಂ ಮಾಡಿದರು. 

1965ರಲ್ಲಿಎಂಬಿಎ ಪದವಿ ಪಡೆದು ಭಾರತಕ್ಕೆ ಮರಳಿದ ರಾಹುಲ್‌ ಮೊದಲಿಗೆ ಕಂಪನಿಯ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಆಗಿ ಸೇರಿಕೊಂಡು, ಮಾರ್ಕೆಟಿಂಗ್‌, ಅಕೌಂಟ್ಸ್‌, ಪರ್ಚೇಸ್‌ ಮತ್ತು ಆಡಿಟ್‌ಗಳಂಥ ಪ್ರಮುಖ ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು. ಆಗ ಬಜಾಜ್‌ನ ಆಟೊ ಸಿಇಒ ಆಗಿದ್ದ ನಾವಲ್‌ ಕೆ ಫಿರೋದಿಯಾ ಅವರ ಮಾರ್ಗದರ್ಶನದಲ್ಲಿಉದ್ಯಮ, ವ್ಯಾಪಾರದ ಪಟ್ಟುಗಳನ್ನು ಕಲಿತರು. 1972ರಲ್ಲಿರಾಹುಲ್‌ ತಂದೆ ಕಮಲನಯನ ಬಜಾಜ್‌ ನಿಧನರಾದರು. ಇದಕ್ಕೂ ಮೊದಲೇ ಸಿಇಒ ಆಗಿದ್ದ ಫಿರೋದಿಯಾ ಕೂಡ ಕಂಪನಿ ತೊರೆದಿದ್ದರು. ಹಾಗಾಗಿ, ರಾಹುಲ್‌ ಅವರನ್ನೇ ಬಜಾಜ್‌ ಆಟೊ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ವ್ಯವಹಾರ ಚತುರ ಮತ್ತು ಮಹತ್ವಾಕಾಂಕ್ಷಿಯಾಗಿದ್ದ ರಾಹುಲ್‌, ಸಣ್ಣ ಆಟೊ ಕಂಪನಿ ಎನಿಸಿಕೊಂಡಿದ್ದ ಬಜಾಜ್‌ನ್ನು ಜಗತ್ತಿನ ಬೃಹತ್‌ ಕಂಪನಿಗಳಲ್ಲಿಒಂದಾಗಿಸಿದರು. ಅವರ ನಾಯಕತ್ವದಲ್ಲಿಬಜಾಜ್‌ ಗ್ರೂಪ್‌ ಯಶಸ್ಸಿನ ಉತ್ತುಂಗ ತಲುಪಿತು. ಒಂದೇ ದಶಕದಲ್ಲಿಶತಕೋಟಿ ವ್ಯವಹಾರ ಮಾಡುವ ಕಂಪನಿಯಾಗಿ ಬೆಳೆಯಿತು. ಬಜಾಜ್‌ ಆಟೊ ಬೆಳವಣಿಗೆಯಲ್ಲಿಚೇತಕ್‌ ಸ್ಕೂಟರ್‌ ಮತ್ತು ಪಲ್ಸರ್‌ ಮೋಟರ್‌ ಸೈಕಲ್‌ ಸಕ್ಸೆಸ್‌ ಬಹಳ ಪಾತ್ರ ನಿರ್ವಹಿಸಿದೆ. ಈಗಿನ ಕಾಲದ ಬಹಳ ಮಂದಿಗೆ ಗೊತ್ತಿಲ್ಲ, ಬಜಾಜ್‌ ಚೇತಕ್‌ ಸ್ಕೂಟರ್‌ ಬುಕ್‌ ಮಾಡಿ, ಅದನ್ನು ಖರೀದಿಸಲು ಐದಾರು ವರ್ಷ ಕಾಯಬೇಕಾದ ಪರಿಸ್ಥಿತಿ ಇತ್ತು. ಅಷ್ಟರ ಮಟ್ಟಿಗೆ ಬೇಡಿಕೆ ಸೃಷ್ಟಿಯಾಗಿತ್ತು. ‘ಹಮಾರಾ ಬಜಾಜ್‌’ ನಿಜಾರ್ಥದಲ್ಲಿಭಾರತದ ಸ್ಕೂಟರೇ ಆಗಿತ್ತು ಎಂದು ವಿಶ್ಲೇಷಿಸಬಹುದು. ಭಾರತವು ಉದಾರೀಕರಣಕ್ಕೆ ಹೊರಳುತ್ತಿದ್ದ ಕಷ್ಟದ ಅವಧಿಯಲ್ಲಿ ಕಂಪನಿ ಈ ಮಟ್ಟಿಗೆ ಯಶಸ್ಸು ಸಾಧಿಸಿತು. ಇದಕ್ಕೆ ರಾಹುಲ್‌ ಬಜಾಜ್‌ ತೋರಿದ ನಾಯಕತ್ವ, ಪ್ರಾವೀಣ್ಯ ಮತ್ತು ಸಾಮರ್ಥ್ಯ‌ವೇ ಕಾರಣ.

ಜಮನ್‌ಲಾಲ್‌ ಬಜಾಜ್‌ 1926ರಲ್ಲಿಸ್ಥಾಪಿಸಿದ ಬಜಾಜ್‌ ಕಂಪನಿ ಇಂದು ಜಗತ್ತಿನ ದೈತ್ಯ ಕಂಪನಿಗಳಲ್ಲಿಒಂದಾಗಿದೆ, 60 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದೆ ಎಂದರೆ ಅದಕ್ಕೆ ರಾಹುಲ್‌ ಕೊಡುಗೆ ಸಾಕಷ್ಟಿದೆ. ರಾಹುಲ್‌ 2008ರಲ್ಲಿ ಕಂಪನಿಯನ್ನು ಮೂರು ವಿಭಾಗಗಳಾಗಿ ಅಂದರೆ, ಬಜಾಜ್‌ ಆಟೊ, ಫೈನಾನ್ಸ್‌ ಕಂಪನಿ ಬಜಾಜ್‌ ಫಿನ್‌ಸರ್ವ್‌ ಮತ್ತು ಹೋಲ್ಡಿಂಗ್‌ ಕಂಪನಿಯಾಗಿ ವಿಂಗಡಿಸಿದರು. ಅವರ ನೇತೃತ್ವದಲ್ಲಿಬಜಾಜ್‌ ಆಟೋ ಉತ್ತುಂಗ ತಲುಪಿದ್ದು ಎಷ್ಟು ನಿಜವೋ ಅಷ್ಟೇ ಸಂಕಟವನ್ನು ಎದುರಿಸಿದೆ ಎನ್ನಬಹುದು. 2001ರಲ್ಲಿಅಂದರೆ, ಉದಾರೀಕರಣದ ಬಳಿಕ ಮಾರುಕಟ್ಟೆಯಲ್ಲಿಕಂಪನಿಯ ವಾಹನಗಳ ಮಾರಾಟ ತೀವ್ರ ಕುಸಿತ ಕಂಡಿತ್ತು. ಹೋಂಡಾ, ಸುಜುಕಿ, ಯಮಹಾದಂಥ ಕಂಪನಿಗಳು ಹೊಸ ಹೊಸ ಮೋಟಾರ್‌ಸೈಕಲ್‌ಗಳನ್ನು ಪರಿಚಯಿಸಿ ಭಾರತೀಯ ಮಾರುಕಟ್ಟೆಯ ಒಟ್ಟು ಚಿತ್ರಣವನ್ನು ಬದಲಿಸಿದವು. ಇದರಿಂದ ಬಜಾಜ್‌ ಕೊಂಚ ವಿಚಲಿತವಾದಂತೆ ಕಂಡು ಬಂದಿತಾದರೂ, ಕಂಪನಿಯು ಪಲ್ಸರ್‌ ಮೋಟಾರ್‌ ಸೈಕಲ್‌ ಬಿಡುಗಡೆ ಮಾಡುವ ಮೂಲಕ ಎಲ್ಲನಿರೀಕ್ಷೆಗಳನ್ನು ಮೀರಿ ಯಶಸ್ಸು ಸಾಧಿಸಿತು. ಮುಂದಿನ 10ರಿಂದ 15 ವರ್ಷ ಪಲ್ಸರ್‌ ಅಕ್ಷ ರಶಃ ಮಾರುಕಟ್ಟೆ ಲೀಡರ್‌ ಆಗಿತ್ತು. ಬಜಾಜ್‌ ಕಂಪನಿಯ ಯಶಸ್ಸಿನಲ್ಲಿಚೇತಕ್‌ ಮತ್ತು ಪಲ್ಸರ್‌ಗಳು ಮಹತ್ವದ ಕೊಡುಗೆ ನೀಡಿವೆ ಎಂದು ಹೇಳುವುದು ಇದೇ ಕಾರಣಕ್ಕೆ. 

2005ರಲ್ಲಿರಾಹುಲ್‌ ಕಂಪನಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದು ಜವಾಬ್ದಾರಿಯನ್ನು ಹಿರಿಯ ಪುತ್ರ ರಾಜೀವ್‌ ಬಜಾಜ್‌ಗೆ ವಹಿಸಿದರು. ಆ ಬಳಿಕ 2006ರಿಂದ 2010ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಕೆಲಸ ಮಾಡಿದರು. 2016ರಲ್ಲಿಫೋರ್ಬ್ಸ್‌ ಪ್ರಕಟಿಸಿದ ಜಗತ್ತಿನ ಕೋಟ್ಯಧೀಶರ ಪಟ್ಟಿಯಲ್ಲಿರಾಹುಲ್‌ ಬಜಾಜ್‌ 722ನೇ ಸ್ಥಾನದಲ್ಲಿದ್ದರು. 1979-80 ಮತ್ತು 1999-2000 ಎರಡು ಅವಧಿಯಲ್ಲಿಸಿಐಐ(ಭಾರತೀಯ ಕೈಗಾರಿಕೆಗಳ ಒಕ್ಕೂಟ) ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಅನನ್ಯ ಕಾರ್ಯನಿರ್ವಹಣೆಗಾಗಿ 2017ರಲ್ಲಿಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಸಿಸಿಐ ಪ್ರೆಸಿಡೆಂಟ್‌ ಅವಾರ್ಡ್‌ ಪ್ರದಾನ ಮಾಡಿದ್ದರು. 2021ರ ಏಪ್ರಿಲ್‌ನಲ್ಲಿಬಜಾಜ್‌ ಆಟೋದ ಕಾರ್ಯನಿರ್ವಾಹಕೇತರ ಅಧ್ಯಕ್ಷ  ಸ್ಥಾನದಿಂದ ಕೆಳಗಿಳಿದು, ಸೋದರಸಂಬಂಧಿ ನೀರಜ್‌ ಬಜಾಜ್‌ಗೆ ಆ ಸ್ಥಾನ ಬಿಟ್ಟುಕೊಟ್ಟರು. ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿ ಸಮ್ಮಾನಗಳು ಅವರನ್ನು ಅರಸಿ ಬಂದಿವೆ. 

ಉದ್ಯಮದಲ್ಲಿಅನನ್ಯ ಸಾಧನೆ ಮಾಡಿದ್ದ ರಾಹುಲ್‌ ಬಜಾಜ್‌ ಅವರ ವೈಯಕ್ತಿಕ ಆಸಕ್ತಿಗಳೂ ಅಷ್ಟೇ ಅನನ್ಯವಾಗಿದ್ದವು. ಕುರ್ತಾ ಅವರ ಅಚ್ಚುಮೆಚ್ಚಿನ ಉಡುಪಾಗಿತ್ತು. ಅವರ ಬಳಿ ಕುರ್ತಾಗಳ ದೊಡ್ಡ ಸಂಗ್ರಹವಿತ್ತು. ‘ಧೈರ್ಯವಂತ’ ಉದ್ಯಮಿ ಎನಿಸಿಕೊಂಡಿದ್ದ ರಾಹುಲ್‌ ಬಜಾಜ್‌ ನಿರ್ಗಮನ ಖಂಡಿತವಾಗಿಯೂ ಭಾರತೀಯ ಉದ್ಯಮಕ್ಕೆ ಕಾಡಲಿದೆ.


ಈ ಲೇಖನವು ವಿಜಯ ಕರ್ನಾಟಕದ 2022 ಫೆ.13ರ ಸಂಚಿಕೆಯಲ್ಲಿ ಪ್ರಕಟವಾಗಿದೆ


ಭಾನುವಾರ, ಜನವರಿ 9, 2022

Mother of Orphans Sindhutai Sapkal : ಅನಾಥರ ಆಯಿ ಸಿಂಧುತಾಯಿ ಸಕಪಾಳ್

 ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಕಂದಮ್ಮಗಳಿಗೆ ಅವ್ವಳಾದ ಸಿಂಧುತಾಯಿ ಬದುಕೇ ಸಂಘರ್ಷ. ‘ಚಿಂದಿ’ಯಿಂದ ‘ಚಿನ್ನ’ದಂಥ ತಾಯಿ ಆಗೋವರೆಗಿನ ಕತೆ ಸ್ಫೂರ್ತಿದಾಯಕ.


- ಮಲ್ಲಿಕಾರ್ಜುನ ತಿಪ್ಪಾರ
‘ಎಲ್ಲೆಡೆಯೂ ತಾನಿರಲು ಸಾಧ್ಯವಿಲ್ಲಎಂದು ದೇವರು ತಾಯಿಯನ್ನು ಸೃಷ್ಟಿಸಿದ’ ಎಂಬ ಮಾತಿದೆ. ಈ ಮಾತು ಸಿಂಧುತಾಯಿ ಸಪಕಾಳ್‌ ವಿಷಯದಲ್ಲಿನಿಜವಾಗಿದೆ. ‘ಅನಾಥಾಚಿ ಆಯಿ’(ಅನಾಥರ ತಾಯಿ) ಎಂದು ಖ್ಯಾತರಾದ ಅವರು ಅನಾಥ ಮಕ್ಕಳಿಗೆ ಅಕ್ಷ ರಶಃ ದೇವರಾದರು, ತನ್ನ ಹೊಟ್ಟೆಯಲ್ಲಿಹುಟ್ಟಿದ ಮಕ್ಕಳಂತೆ ಸಾಕಿ, ಸಲುಹಿದರು. ಅವರು ತಮ್ಮ ಬದುಕಿನ ಪೂರ್ತಿ 1500ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಆಸರೆಯಾದರು. ಈ ಕುಟುಂಬ ಬೆಳೆದು ಈಗ ದೊಡ್ಡದಾಗಿದೆ. 282 ಅಳಿಯಂದಿರು, 47 ಸೊಸೆಯರು ಸೇರಿಕೊಂಡಿದ್ದಾರೆ.

‘ಅನಾಥಮಕ್ಕಳ ಅವ್ವ’ ಸಿಂಧುತಾಯಿ ಬದುಕು ಪೂರ್ತಿ ಸಂಘರ್ಷವೇ. ಆಕೆಯ ಜೀವನದ ಪ್ರತಿಪುಟದಲ್ಲೂದೌರ್ಜನ್ಯ, ಅವಮಾನ, ಹಿಂಸೆಯೇ ತುಂಬಿದೆ. ಆದರೂ ಧೃತಿಗೆಡದೇ ಅವರು ತಮ್ಮನ್ನು ತಾವು ರೂಪಿಸಿಕೊಂಡು, ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಸ್ವೀಕರಿಸುವವರೆಗಿನ ಪಯಣ ಯಾರಿಗಾದರೂ ಸ್ಫೂರ್ತಿಯಾಗಬಲ್ಲದು. ಅನಾಥರ ಪಾಲಿನ ದೈವ ಎನಿಸಿಕೊಂಡ ಸಿಂಧುತಾಯಿ, ಹಿಂದೊಮ್ಮೆ ಅನಾಥವಾಗಿಯೇ ಮನೆಯಿಂದ ಹೊರಹಾಕಲ್ಪಟ್ಟ ನತದೃಷ್ಟ ಹೆಣ್ಣುಮಗಳು!

1948 ನವೆಂಬರ್‌ 14ರಂದು ಮಹಾರಾಷ್ಟ್ರ ವಾರ್ಧಾ ಜಿಲ್ಲೆಯ ಪಿಂಪ್ರಿ ಮೆಘೇ ಹಳ್ಳಿಯ ಕಡುಬಡತನದ ಕುಟುಂಬ­ವೊಂದರಲ್ಲಿಜನಿಸಿದರು. ಅಂದಿನ ಕಾಲದಲ್ಲಿಹೆಣ್ಣು ಮಕ್ಕಳು ಜನಿಸಿತೆಂದರೆ ಯಾರಿಗೂ ಸಂತೋಷವೇ ಇರುತ್ತಿರಲಿಲ್ಲ. ಸಿಂಧುತಾಯಿ ವಿಷಯದಲ್ಲಿಈ ಹಣೆಬರಹ ಬದಲಾಗಲಿಲ್ಲ. ಆದರೆ, ಎಂಥ ನಿಕೃಷ್ಟ ಸ್ಥಿತಿ ಎದುರಾಗಿತ್ತು ಎಂದರೆ, ಆ ಹೆಣ್ಣು ಮಗುವಿಗೆ ‘ಚಿಂದಿ’ ಎಂದು ಕರೆಯುತ್ತಿದ್ದರಂತೆ! ಇಂಥ ಮನಸ್ಥಿತಿಯ ಜನರು ಇರುವಾಗ ಸಿಂಧುತಾಯಿ ಬಾಲ್ಯ ಹೇಗೆ ಚೆನ್ನಾಗಿರಲು ಸಾಧ್ಯ? ನಾಲ್ಕನೇ ತರಗತಿ ಮುಗಿಯುತ್ತಿದ್ದಂತೆ, ನವರಾಂವ್‌ ಹಳ್ಳಿಯ 25 ವರ್ಷದ ಶ್ರೀಹರಿ ಸಪಕಾಳ್‌ಗೆ ಮದುವೆ ಮಾಡಿಕೊಟ್ಟರು. ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದಾತ. ಆದರೆ, ಹೆಂಡತಿಗೆ ವಿಪರೀತ ಕಾಟ ಕೊಡುತ್ತಿದ್ದ. ಸಿಂಧು ತಾಯಿ 20 ವರ್ಷಕ್ಕೆ ಬರು­ವಷ್ಟರ ಹೊತ್ತಿಗಾಗಲೇ ಎರಡು ಮಕ್ಕಳಗಾಗಿದ್ದವು. ಗಂಡನ ಕಿರುಕುಳವೂ ಮಿತಿಮೀರಿತ್ತು. ಸ್ಥಳೀಯ ಸಾಹುಕಾರನೊಬ್ಬ ಸಿಂಧುತಾಯಿ ಹೊಟ್ಟೆಯಲ್ಲಿದ್ದ ಮೂರನೇ ಮಗುವಿನ ಬಗ್ಗೆ ಪುಕಾರು ಹಬ್ಬಿಸಿದ. ಇದನ್ನೇ ಸತ್ಯ ಎಂದು ನಂಬಿದ ಗಂಡ ಇನ್ನಷ್ಟು ಕಿರುಕುಳ ನೀಡಲಾರಂಭಿಸಿದ. ಬಸುರಿಯಿದ್ದಾಗಲೇ ಆಕೆಯ ಹೊಟ್ಟೆಗೆ ಒದ್ದು, ದನದ ಕೊಟ್ಟಿಗೆಗೆ ಹಾಕುವ ಮೂಲಕ ವಿಕೃತಿ ಮೆರೆದಿದ್ದ. ದನಗಳು ತುಳಿದು ಸಾಯಿಸಲಿ ಎಂದೇ ಕೊಟ್ಟಿಗೆಗೆ ಹಾಕಿದ್ದಂತೆ. ಆದರೆ, ದನವೊಂದು ಬಸುರಿ ಸಿಂಧುತಾಯಿ ರಕ್ಷ ಣೆಗೆ ನಿಂತು ಬೇರೆ ಯಾವುದೇ ದನಗಳು ಹತ್ತಿರ ಸುಳಿಯದಂತೆ ನೋಡಿಕೊಂಡಿತಂತೆ. ಈ ವಿಷಯವನ್ನು ಸ್ವತಃ ಸಿಂಧುತಾಯಿ ಅವರು 2016ರಲ್ಲಿಹೇಳಿಕೊಂಡಿದ್ದಾರೆ. 

ಸಿಂಧುತಾಯಿ ಬವಣೆಯ ಬದುಕು ಇಷ್ಟಕ್ಕೆ ನಿಲ್ಲಲಿಲ್ಲ. ಗಂಡನ ದೌರ್ಜನ್ಯಕ್ಕೆ ರೋಸಿ ಹೋಗಿ 10 ದಿನದ ಮಗುವಿನೊಂದಿಗೆ ತಂದೆ-ತಾಯಿ ಊರಿಗೆ ಹೋದರೆ, ಅಲ್ಲಿಯೂ ತಿರಸ್ಕಾರದ ಸ್ವಾಗತ. ತಂದೆ, ತಾಯಿ ಅವರನ್ನು ಒಳಗೇ ಬಿಟ್ಟುಕೊಳ್ಳಲಿಲ್ಲ. ಅಲ್ಲಿಂದ ಹೊರಬಿದ್ದ ಅವರಿಗೆ ಬದುಕಲೇಬೇಕೆಂಬ ಹಠ. ಅದಕ್ಕಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರೈಲ್ವೆ ನಿಲ್ದಾಣ, ಸ್ಮಶಾನಗಳೇ ಆಸರೆಗಳಾಗಿದ್ದವು. ಸ್ಮಶಾನದ ಹೆಣಗಳ ಮೇಲಿದ್ದ ಬಟ್ಟೆ, ಅನ್ನವೇ ಆಹಾರ, ಭಿಕ್ಷೆಯೇ ಮೃಷ್ಟಾನ್ನವಾಗಿತ್ತು.

ಭಿಕ್ಷ ಕರ ಜತೆಗೇ ಜೀವನ ಸಾಗಿತ್ತು. ರೈಲ್ವೆ ನಿಲ್ದಾಣದಲ್ಲಿಮಲಗಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ, ಯವ್ವನದಲ್ಲಿದ್ದ ತನ್ನನ್ನು ಮಗುವನ್ನು ಯಾರಾದರೂ ಅಪಹರಿಸಿದರೆ ಎಂಬ ಚಿಂತೆ ಎದುರಾಗುತ್ತಿದ್ದಂತೆ, ನಗರದ ಸ್ಮಶಾನಭೂಮಿ ಸುರಕ್ಷಿತ ತಾಣ ಎಂದರಿತು ಅಲ್ಲಿಗೆ ಹೋದರು. ಆ ದಿನಗಳು ತಮ್ಮ ಬದುಕಿನ ಅತ್ಯಂತ ಕೆಟ್ಟ ದಿನಗಳು ಎಂದ ಆಗಾಗ ನೆನೆಪಿಸಿಕೊಳ್ಳುತ್ತಿದ್ದರು ಅವರು. ಸ್ಮಶಾನದಲ್ಲಿದ್ದಾಗ ಹಸಿವು ಆದಾಗ ತಿನ್ನಲು ಏನೂ ಇರುತ್ತಿರಲಿಲ್ಲ. ಆದರೆ, ಹೊಟ್ಟೆಯ ಬೆಂಕಿಯನ್ನು ಆರಿಸಲು ಹೆಣದ ಬೆಂಕಿಯ ಸಹಾಯ ಪಡೆದುಕೊಳ್ಳದೇ ವಿಧಿಯೇ ಇರಲಿಲ್ಲ! ಸ್ಮಶಾನದಲ್ಲಿಯಾರೋ ನಾದಿದ ಗೋಧಿ ಹಿಟ್ಟನ್ನು ಗೋರಿಯ ಮೇಲೆ ಬಿಟ್ಟು ಹೋಗಿದ್ದರಂತೆ, ಅದು ಕೊಳೆಯುವ ಸ್ಥಿತಿಗೆ ತಲು­ಪಿತ್ತು. ಅದನ್ನೇ ನೀರಿನಲ್ಲಿಅದ್ದಿ, ಮುರಿದ ಮಡಿಕೆಯಲ್ಲಿಟ್ಟು ಹೆಣದ ಚಿತೆಯ ಮೇಲಿಟ್ಟು ರೊಟ್ಟಿ ಮಾಡಿ, ಹಸಿವು ನೀಗಿಸಿಕೊಳ್ಳಬೇಕಾದ ಊಹಾತೀತ ಪರಿಸ್ಥಿತಿಯನ್ನು ಅವರು ಎದುರಿಸಿದ್ದಾರೆ. 

ಆ ಕೆಟ್ಟ ಪರಿಸ್ಥಿತಿಯೇ ಸಿಂಧುತಾಯಿಗೆ ಹೊಸ ಹುಟ್ಟು ನೀಡಿತು. ಯಾಕೆಂದರೆ, ಆಗಲೇ ಅವರು ನಿರ್ಧರಿಸಿದ್ದರಂತೆ, ತಾನು ಹೊಸ ಜೀವವನ್ನು ಆರಂಭಿಸಬೇಕು. ಬಾಳಿನಲ್ಲಿಬಂದಿದ್ದನ್ನು ಛಲದಿಂದ ಎದುರಿಸಬೇಕೆಂದು ತಮ್ಮೊಳಗೇ ಶಪಥ ಮಾಡಿಕೊಂಡು ಮುನ್ನುಗ್ಗಿದರು. ಆ ನಂತರ ಅವರು ತನ್ನಂಥ ಅದೆಷ್ಟೋ ಅನಾಥಮಕ್ಕಳಿಗೆ ನೆರವಾದರು, ಅವರ ಬದಕನ್ನು ಹಸನು ಮಾಡಿದರು. ತಾವು ಮಾತ್ರ ಬದುಕುವುದಲ್ಲದೇ ತನ್ನಂಥ ನೂರಾರು ಜನರಿಗೆ ಸಹಾಯ ಮಾಡಿದರು. ಆದಿವಾಸಿಗಳ ಕಷ್ಟಕ್ಕೆ ಮರುಗಿದರು. ಸಮಾಜದ ಕಟ್ಟಕಡೆಯಲ್ಲಿರುವವರ ಮಕ್ಕಳನ್ನು ಎದೆಗಪ್ಪಿಕೊಂಡು ಬೆಳೆಸಿದರು.

1971ರಲ್ಲಿಅಮರಾವತಿ ಜಿಲ್ಲೆಯ ಚಿಖಲ್ದಾರಾ ಎಂಬ ಗುಡ್ಡಗಾಡು ಊರಿಗೆ ಹೋಗಿ, ಅಲ್ಲಿಆದಿವಾಸಿಗಳ ಪರವಾಗಿಯೂ ಸಿಂಧುತಾಯಿ ಹೋರಾಟ ನಡೆಸಿದರು. ಹುಲಿ ಸಂರಕ್ಷ ಣೆಗಾಗಿ ಕಾಡಿನಲ್ಲಿದ್ದ 84 ಆದಿವಾಸಿ ಕುಟುಂಬಗಳನ್ನು ಹೊರದಬ್ಬಲಾಗಿತ್ತು. ಅವರ ಪರವಾಗಿ ಹೋರಾಟ ನಡೆಸಿದರು. ಸಿಂಧುತಾಯಿ ಹೋರಾಟದ ಕಿಚ್ಚಿಗೆ ಸಣ್ಣ ಉದಾಹರಣೆಯನ್ನು ನೀಡಬಹುದು. ಹುಲಿ ಸಂರಕ್ಷ ಣಾ ಅರಣ್ಯ ಉದ್ಘಾಟನೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚಿಖಲ್ದಾರಾಗೆ ಬಂದಿದ್ದರು. ಈ ವೇಳೆ ಸಿಂಧುತಾಯಿ ಕಾಡು ಪ್ರಾಣಿಗಳಿಂದ ಆದಿವಾಸಿಗಳು ಅನುಭವಿಸುತ್ತಿ­ರುವ ನೋವನ್ನು ಅಭಿವ್ಯಕ್ತಿಸುವ ಫೋಟೊ­ವೊಂದನ್ನು ಇಂದಿರಾ ಗಾಂಧಿ ಎದುರು ಪ್ರದರ್ಶಿಸಿದರು. ‘‘ದನಕ್ಕೆ ಕಾಡು ಪ್ರಾಣಿ ಹಾನಿ ಮಾಡಿದಾಗ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ. ಆದರೆ, ಆದಿವಾಸಿ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡರೂ ಅಧಿಕಾರಿಗಳು ಕ್ಯಾರೆ ಮಾಡುವುದಿಲ್ಲ. ಮನುಷ್ಯರ ನೋವಿಗೆ ಬೆಲೆ ಇಲ್ಲವೇ?’’ ಎಂದು ಇಂದಿರಾ ಗಾಂಧಿ ಅವರನ್ನು ಪ್ರಶ್ನಿಸಿದರಂತೆ. ತಕ್ಷ ಣವೇ ಪ್ರಧಾನಿ ಪರಿಹಾರಕ್ಕೆ ಆದೇಶಿಸಿದರು! 

ಇದೇ ವೇಳೆ ಆದಿವಾಸಿ ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಮಕ್ಕಳ ಸ್ಥಿತಿಯನ್ನು ಕಂಡು ಅವರ ಆಸರೆಗೆ ಮುಂದಾದರು. ಇಲ್ಲಿಂದ ಆರಂಭವಾದ ಅನಾಥ ಮಕ್ಕಳ ರಕ್ಷ ಣೆ ನಿಧಾನವಾಗಿ ಮಹಾರಾಷ್ಟ್ರದಾದ್ಯಂತ ಹರಡಿ­ಕೊಂಡಿತು. ವಿಶೇಷವಾಗಿ ಪುಣೆಯ ಸುತ್ತಮುತ್ತ ಅನಾಥರಿಗೆ ಸಿಂಧುತಾಯಿ ಆಸರೆಯಾದರು. ಇದಕ್ಕಾಗಿ ನಾನಾ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಈ ಪೈಕಿ ಮದರ್‌ ಗ್ಲೋಬಲ್‌ ಫೌಂಡೇಷನ್‌, ಸನ್ಮತಿ ಬಾಲ ನಿಕೇತನ, ಮಮತಾ ಬಾಲ ಸದನ, ಸಪ್ತಸಿಂಧು ಮಹಿಳಾ ಆಧಾರ್‌, ಬಾಲಸಂಗೋಪನ ಮತ್ತು ಶಿಕ್ಷ ಣ ಟ್ರಸ್ಟ್‌ ಹೀಗೆ ಎಲ್ಲಸಂಸ್ಥೆಗಳು ಅನಾಥರ ರಕ್ಷ ಣೆಗೆ ಮೀಸಲಾದವು. ಹೀಗೆ ಶುರುವಾದ ಅವರ ಅನಾಥ ಮಕ್ಕಳ ಸಾಕುವ ಕೈಂಕರ್ಯ ನಿರಂತರವಾಗಿ ನಡೆದುಕೊಂಡು ಬಂತು. ಜನರು ಪ್ರೀತಿಯಿಂದ ‘ಅನಾಥರ ಅವ್ವ’ ಎಂದು ಕರೆಯಲಾರಂಭಿಸಿದರು. ಸಿಂಧುತಾಯಿಯ ಮಾನವೀಯ ಕಾರ್ಯ ಕಂಡು ಹಲವು ಪ್ರಶಸ್ತಿ, ಗೌರವವಗಳು ಹುಡುಕಿಕೊಂಡು ಬಂದವು. ಪದ್ಮಶ್ರೀ(2021) ಸೇರಿದಂತೆ 700ಕ್ಕೂ ಹೆಚ್ಚು ಪ್ರಶಸ್ತಿಗಳು ಅವ­ರಿಗೆ ಸಂದಿವೆ. 2010ರಲ್ಲಿಸಿಂಧುತಾಯಿ ಜೀವನಕತೆ ಆಧರಿಸಿ ನಿರ್ದೇಶಕ ಅನಂತ ನಾರಾಯಣ ಮಹಾದೇವನ್‌ ಅವರು ‘ಮೀ ಸಿಂಧುತಾಯಿ ಸಪಕಾಳ್‌’ ಮರಾಠಿ ಸಿನಿಮಾ ಮಾಡಿದ್ದರು. 

ಮಹಿಳಾ ಶಕ್ತಿಗೆ ಗಡಿಗಳೇ ಇಲ್ಲಎಂಬುದನ್ನು ಸಿಂಧುತಾಯಿ ನಿರೂಪಿಸಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಅವರು ಸಾಧಿಸಿದ್ದಾರೆ. 74 ವರ್ಷ ಬದುಕಿದ ಸಿಂಧುತಾಯಿ, ಲಕ್ಷಾಂತರ ಅಬಲೆ­ಯರು ಎನಿಸಿಕೊಂಡಿರುವ ಹೆಣ್ಣು­ಮಕ್ಕಳಿಗೆ ಸ್ಫೂರ್ತಿಯ ಕಿಡಿ. ಅಂಥ ಮಹಾತಾಯಿ ಜ.4ರಂದು ಇಹ­ಲೋಕ ತ್ಯಜಿಸಿದರು. ಆದರೆ ಅವರು ತೋರಿದ ತಾಯಿ ವಾತ್ಸಲ್ಯ, ಮಮತೆಗಳು ಮಾತ್ರ ಮಾಸಲಾರವು.


(ಈ ಲೇಖನವು ವಿಜಯ ಕರ್ನಾಟಕದ 2022ರ ಜನವರಿ 9ರ ಸಂಚಿಕೆಯಲ್ಲಿ ಪ್ರಕಟವಾಗಿದೆ)


ಶನಿವಾರ, ಜನವರಿ 1, 2022

Arjun Gowda Kannada Film: ಕತೆ ಸುಮಾರು, ಆ್ಯಕ್ಷ ನ್‌ ಜೋರು!

- ಮಲ್ಲಿಕಾರ್ಜುನ ತಿಪ್ಪಾರ

ಕನ್ನಡದ ಚಿತ್ರಗಳಿಗೆ ಅದ್ಧೂರಿತನ, ಆ್ಯಕ್ಷ ನ್‌ ಸಿನಿಮಾಗಳಿಗೆ ಹೊಸ ಖದರ್‌ ತಂದು­ಕೊಟ್ಟವರು ನಿರ್ಮಾಪಕ ‘ಕೋಟಿ’ ರಾಮು. ಅವರ ಬ್ಯಾನರ್‌ನ ಸಿನಿಮಾಗಳೆಂದರೆ ಫುಲ್‌ ಆ್ಯಕ್ಷ ನ್‌, ಸ್ವಲ್ಪ ಸೆಂಟಿಮೆಂಟ್‌ ಜತೆಗೆ ಮನರಂಜನೆ ಗ್ಯಾರಂಟಿ. ಇದಕ್ಕೆ ವರ್ಷದ ಕೊನೆಯಲ್ಲಿಬಿಡುಗಡೆಯಾಗಿರುವ ‘ಅರ್ಜುನ್‌ ಗೌಡ’ ಸಿನಿಮಾ ಹೊರತಲ್ಲ. ಚಿತ್ರ ಅದ್ಧೂರಿ­ಯಾಗಿದೆ. ಆದರೆ, ಪ್ರೇಕ್ಷ ಕರ ಮನಸ್ಸಿಗೆ ಎಷ್ಟು ನಾಟಲಿದೆ ಎಂಬುದು ನಿಗೂಢ!

ನಿರ್ದೇಶಕರು ‘ಅರ್ಜನ್‌ ಗೌಡ’ ಚಿತ್ರದ ಆರಂಭದಲ್ಲಿಪತ್ರಕರ್ತೆ ಗೌರಿ ಲಂಕೇಶ್‌, ವಿದ್ವಾಂಸ ಎಂ. ಎಂ. ಕಲಬುರ್ಗಿ ಹತ್ಯೆಗಳೇ ತಮ್ಮ ಸಿನಿಮಾಕ್ಕೆ ಸೂಧಿರ್ತಿ ಎಂದು ಹೇಳಿಸು­ತ್ತಾರೆ. ಆದರೆ, ಸಿನಿಮಾ ಮುಗಿದರೂ ಆ ಸೂಧಿರ್ತಿ ಏನೆಂಬುದು ಗೊತ್ತಾಗುವುದಿಲ್ಲ! ಪ್ರೀತಿ, ಸಮಾಜ, ದುಷ್ಟಶಕ್ತಿಗಳು, ಮಾಧ್ಯಮ... ಹೀಗೆ ಎಲ್ಲವನ್ನೂ ಹೇಳಲು ಹೋಗಿ, ಯಾವುದನ್ನೂ ಪ್ರೇಕ್ಷ ಕರ ಮನಸ್ಸಿಗೆ ಪೂರ್ತಿಯಾಗಿ ದಾಟಿಸುವಲ್ಲಿಚಿತ್ರ ಯಶಸ್ವಿಯಾಗುವುದಿಲ್ಲ. ಹಾಗಾಗಿಯೇ, ಚಿತ್ರ ನೋಡಿ ಹೊರ ಬಂದಾಗ ನಿಮಗೆ ಮನಸ್ಸು ಭಾರವೂ ಆಗುವುದಿಲ್ಲ, ಹಗುರವೂ ಆಗುವುದಿಲ್ಲ.

ಚಿತ್ರದ ನಾಯಕ ಅರ್ಜುನ್‌ ಗೌಡ (ಪ್ರಜ್ವಲ್‌ ದೇವರಾಜ್‌) ಸುದ್ದಿವಾಹಿನಿಯ ಒಡತಿ ಜಾನಕಿ (ಸ್ಪರ್ಶ ರೇಖಾ) ಅವರ ಏಕೈಕ ಪುತ್ರ. ಆಗಾಗ ಅಮ್ಮ-ಮಗನ ಮಧ್ಯೆ ಜನರೇಷನ್‌ ಗ್ಯಾಪ್‌ ಜಗಳ. ದೊಡ್ಡ ಉದ್ಯಮಿ (ರಾಜ್‌ ದೀಪಕ್‌ ಶೆಟ್ಟಿ) ಮಗಳು ಜಾಹ್ನವಿ (ಪ್ರಿಯಾಂಕಾ ತಿಮ್ಮೇಶ್‌) ಮತ್ತು ಅರ್ಜುನ್‌ ಮಧ್ಯೆ ಅಮರ ಪ್ರೇಮ. ಜಾಹ್ನವಿ ತಂದೆ ಒಪ್ಪಲ್ಲ. ಹಲವು ತಿರುವು ಘಟಿಸಿ ಜಾಹ್ನವಿ ಮದುವೆ ಎನ್‌ಆರ್‌ಐಯೊಂದಿಗೆ ಆಗುತ್ತದೆ. ಇದೇ ದುಃಖದಲ್ಲಿಮನೆ ತೊರೆದ ಅರ್ಜುನ್‌ ಗೌಡ ಮಂಗಳೂರು ಸೇರುತ್ತಾನೆ; ಲೋಕಲ್‌ ಗೂಂಡಾಗಳು ಜತೆ­ಯಾಗುತ್ತಾರೆ. ಮಗನಿಗೆ ಹೀಗೆ ಆಯ್ತಲ್ಲಅಂತ ತಾಯಿ ಉದ್ಯಮಿಯ ವ್ಯಾಪಾರವನ್ನು ತನ್ನ ವರದಿಗಾರರಿಂದ ಜಾಲಾಡಿದಾಗ ಸಮಾಜಘಾತಕಶಕ್ತಿ ಖಳನಾಯಕ­(ರಾಹುಲ್‌ ದೇವ್‌) ಅವರ ಜತೆ ಉದ್ಯ­ಮಿಯ ಸಂಪರ್ಕವಿರುವುದು ಗೊತ್ತಾಗು­ತ್ತದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ವಿಲನ್‌, ಜಾನಕಿಯನ್ನು ಕೊಲ್ಲಲು ಕರಾವಳಿಯ ಡಾನ್‌ಗೆ ಹೇಳುತ್ತಾನೆ. ಜಾನಕಿಯನ್ನು ಯಾರು ಕೊಲ್ಲುತ್ತಾರೆ? ಆ ಸುಪಾರಿ ಕಿಲ್ಲರ್ಸ್‌ ಯಾರು? ಕೊಲೆ ಯತ್ನ ಕೇಸ್‌ನಲ್ಲಿಅರ್ಜುನ್‌ ಗೌಡ ಯಾಕೆ ಜೈಲು ಪಾಲಾಗುತ್ತಾನೆ? ಕೊನೆಗೆ ಜಾಹ್ನವಿ ಏನಾದಳು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಸಿನಿಮಾ ನೋಡಬೇಕು.

ಪ್ರಜ್ವಲ್‌ ದೇವರಾಜ್‌ ಹಾಗೂ ‘ಸ್ಪರ್ಶ’ ರೇಖಾ ಅವರು ತಮಗೆ ವಹಿಸಿರುವ ಕೆಲಸವನ್ನು ನೀಟ್‌ ಆಗಿ ಮಾಡಿದ್ದಾರೆ. ಫೈಟಿಂಗ್‌ ದೃಶ್ಯಗಳಲ್ಲಿಪ್ರಜ್ವಲ್‌ ಪವರ್‌ಫುಲ್‌ ಆಗಿ ಕಾಣಿಸುತ್ತಾರೆ. ಸಿನಿಮಾದಲ್ಲಿಹಾಸ್ಯನಟ ಸಾಧು ಕೋಕಿಲ  ಹಾಗೂ ಕಾಮಿಡಿ ಕಿಲಾಡಿ­ಯಂಥ ನಟರಿದ್ದೂ ಪ್ರೇಕ್ಷ ಕರು ನಗದಿದ್ದರೆ ಅದು ಯಾರ ತಪ್ಪು? ಖಳನಾಯಕ ರಾಹುಲ್‌ ದೇವ್‌ಗೆ ಹೆಚ್ಚು ಕೆಲಸವಿಲ್ಲ.

ಧರ್ಮೇಶ್‌ ವಿಶ್‌ ಅವರ ಸಂಗೀತ ಮಾತ್ರ ತಲೆ ಗಿಂವ್‌ ಅನ್ನುವ ಹಾಗಿದೆ! ಕ್ಯಾಮೆರಾ ವರ್ಕ್‌ ಓಕೆ. ಸಂಭಾಷಣೆ ಅಲ್ಲಲ್ಲಿಹರಿತವಾಗಿದೆ. ಅರ್ಜುನ್‌ ಗೌಡರದ್ದು ಮಧ್ಯಂತರವರೆಗೆ ‘ಸುದೀರ್ಘ’ ಪಯಣ. ಸೆಕೆಂಡ್‌ ಹಾಫ್‌ ಕೂಡ ಹೆಚ್ಚು ಕಡಿಮೆ ಹಾಗೆಯೇ. ಇಷ್ಟಾಗಿಯೂ ಆ್ಯಕ್ಷ ನ್‌ ಪ್ರಿಯರಿಗೆ ಸಿನಿಮಾ ಇಷ್ಟವಾಗಬಹುದು.

ಚಿತ್ರ: ಅರ್ಜುನ್‌ ಗೌಡ 

ನಿರ್ದೇಶನ: ಶಂಕರ್‌. ನಿರ್ಮಾಪಕ:  ರಾಮು.

ತಾರಾಗಣ: ಪ್ರಜ್ವಲ್‌ ದೇವರಾಜ್‌,  ಪ್ರಿಯಾಂಕ ತಿಮ್ಮೇಶ್‌, ರಾಹುಲ್‌ ದೇವ್‌, ಸ್ಪರ್ಶ ರೇಖಾ, ಸಾಧು ಕೋಕಿಲ ಮತ್ತಿತರರು. 


(ಈ ಲೇಖನವು ವಿಜಯ ಕರ್ನಾಟಕ ಜ.1, 2022ರ ಸಂಚಿಕೆಯಲ್ಲಿ ಪ್ರಕಟವಾಗಿದೆ)