ಭಾನುವಾರ, ಮೇ 23, 2021

Remembering Sundarlal Bahuguna: ಪರಿಸರದ ಪರಮಾಪ್ತ ಸುಂದರಲಾಲ್ ಬಹುಗುಣ

ಪರಿಸರ ರಕ್ಷಣೆಯಲ್ಲೂ ಗಾಂಧಿ ಮಾರ್ಗದ ಮೂಲಕವೇ ಯಶಸ್ಸು ಕಂಡ ಸುಂದರಲಾಲ್ಬಹುಗುಣ ಅವರು ಚಿಪ್ಕೋ ಚಳವಳಿಯ ಮೂಲಕ ಜಗದ್ವಿಖ್ಯಾತರಾದವರು.


- ಮಲ್ಲಿಕಾರ್ಜುನ ತಿಪ್ಪಾರ 
ಈಗಿನ ತಲೆಮಾರಿಗೆ ಸುಂದರಲಾಲ್ಬಹುಗುಣ ಹೆಸರು ಪರಿಚಿತವಲ್ಲ. 70ರಿಂದ 90ರ ದಶಕದವರೆಗಿನ ಯುವ ಸಮುದಾಯಕ್ಕೆ, ಪರಿಸರ ಪ್ರೇಮಿಗಳಿಗೆ ಸುಂದರಲಾಲ್ಬಹುಗುಣ ಎಂಬುದು ಕೇವಲ ಹೆಸರಾಗಿರಲಿಲ್ಲ. ಅದು ಪ್ರೇರಕ ಮಂತ್ರ; ಹೋರಾಟದ ದೀವಟಿಗೆ. ಪರಿಸರವಾದಿ, ಪರಿಸರ ಚಳವಳಿಗಾರ ಮಾತ್ರವಲ್ಲದೇ ಅವರ ಹೆಸರಿನಂತೆ ಬಹುಗುಣ ಅವರು, ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಮಹಿಳಾ ಹಕ್ಕುಗಳ ಹೋರಾಟದವರೆಗೂ ವ್ಯಕ್ತಿತ್ವ ಆವರಿಸಿಕೊಂಡಿದೆ. ನಮಗೆ ನಿಮಗೆಲ್ಲ ಅವರು ಪರಿಚತರಾಗಿದ್ದೇಚಿಪ್ಕೋ ಚಳವಳಿಯ ಮೂಲಕ. ಗಾಂಧಿ ಮಾರ್ಗದ ಮೂಲಕವೇ ಪರಿಸರ ರಕ್ಷಣೆಯನ್ನೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು. 

ಬಹುಶಃ ಹಿಮಾಲಯದ ತಪ್ಪಲಿನಲ್ಲಿಇಂದು ಅರಣ್ಯ ಉಳಿದಿರಲು ಬಹುಗುಣ ರೂಪಿಸಿದ ಚಳವಳಿಯೇ ಕಾರಣ. ಇಲ್ಲದಿದ್ದರೆ ಅಭಿವೃದ್ಧಿಯ ಹೆಸರಲ್ಲಿ ಹಿಮಾಲಯದ ತಪ್ಪಲಿನ ಕಾಡು ನಾಶವಾಗಿ, ಬೋಳು ದಿನ್ನೆಯಾಗಿರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿಹೆಚ್ಚು ಪ್ರಚಲಿತವಾಗುತ್ತಿರುವ ಗಂಗಾ ಉಳಿಸಿ ಚಳವಳಿಗೂ ಬಹುಗುಣ ಅವರು ಪ್ರೇರಕ ಎಂಬುದನ್ನು ಬಹುತೇಕ ಪರಿಸರ ಹೋರಾಟಗಾರರು ಒಪ್ಪಿಕೊಳ್ಳುತ್ತಾರೆ.

 ಅರಣ್ಯ ಗುತ್ತಿಗೆದಾರರು ನಡೆಸುತ್ತಿದ್ದ ಅರಣ್ಯ ನಾಶ ತಪ್ಪಿಸುವುದಕ್ಕಾಗಿಯೇ ಸುಂದರಲಾಲ್ಬಹುಗುಣ ನೇತೃತ್ವದಲ್ಲಿ 1974ರ ಮಾರ್ಚ್‌ 26ರಂದು ಉತ್ತರ ಪ್ರದೇಶದಲ್ಲಿ ಮೊದಲಿಗೆ ಚಿಪ್ಕೋ ಚಳವಳಿ ಆರಂಭವಾಯಿತು. ಅಂದಿನ ಉತ್ತರ ಪ್ರದೇಶದ ಅರಣ್ಯದ ಒಂದಿಷ್ಟು ಭಾಗವನ್ನು ಕಡಿಯಲು ಗುತ್ತಿಗೆದಾರರಿಗೆ ಅನುಮತಿ ನೀಡಲಾಯಿತು. ಆಗ ಅಲಕನಂದಾ ಕಣಿವೆಯ ಮೇಲ್ಭಾಗದ ಮಂಡಲ್ಹಳ್ಳಿಯಲ್ಲಿ ಜನರು ಮರ ಕಡಿಯುವುದನ್ನು ಪ್ರತಿಭಟಿಸಿದರು. ಹಾಗೆ, ಚಿಪ್ಕೋ ಚಳವಳಿ ಆರಂಭವಾಯಿತು. ಅದಕ್ಕೆ ಬಹುಗುಣ ನಾಯಕತ್ವವನ್ನು ವಹಿಸಿ, ವಿಶ್ವವ್ಯಾಪಿ ಮಾನ್ಯತೆ­ಯನ್ನು ದೊರಕಿಸಿಕೊಟ್ಟರು. ಹಿಂದಿ ಭಾಷೆಯಲ್ಲಿ ಚಿಪ್ಕೋಅಂದರೆಅಪ್ಪಿಕೊಳ್ಳುಎಂಬರ್ಥವಿದೆ. ಮರಗಳನ್ನು ಕಡಿಯಲು ಮುಂದಾದಾಗ ಚಳವಳಿ ನಿರತರು ಮರಗಳನ್ನು ತಬ್ಬಿಕೊಂಡು ಅವುಗಳ ರಕ್ಷ ಣೆಗೆ ಮುಂದಾದರು. ಈ ಚಳವಳಿ ಆ ನಂತರ ಜನರ ಚಳವಳಿಯಾಯಿತು; ರೈತರ ಚಳವಳಿಯಾಯಿತು; ಯುವ ಜನತೆಯ ಚಳವಳಿಯಾಯಿತು. ಚಿಪ್ಕೋ ಚಳವಳಿಯ ವ್ಯಾಪಕತೆ ಹೆಚ್ಚುತ್ತಾ ಹೋದಂತೆ ಬಹುಗುಣ ಅವರ ಪರಿಸರ ಕಾಳಜಿ ಸಂದೇಶಗಳು, ಗಾಂಧಿ ಹಾದಿಯ ಹೋರಾಟ ಜನರನ್ನು ಸೆಳೆಯಿತು. ಚಿಪ್ಕೋ ಚಳವಳಿ ಮತ್ತು ಪರಿಸರ ಹೋರಾಟಕ್ಕೆ ಬಹುಗುಣ ಅವರ ಅನನ್ಯ ಕೊಡುಗೆ ಎಂದರೆ, ಅವರು ಚಳವಳಿಗೆ ರೂಪಿಸಿದ Ecology is permanent economy ಸ್ಲೋಗನ್‌. ಹಾಗೆ ನೋಡಿದರೆ, ಇದು ಕೇವಲ ಘೋಷಣೆಯಲ್ಲ. ಅವರ ಹೋರಾಟದ ತಿರುಳು; ಪ್ರತಿಪಾದಿಸಿದ ಫಿಲಾಸಫಿ.

ಚಿಪ್ಕೋ ಚಳವಳಿ ಭಾಗವಾಗಿ ಬಹುಗುಣ ಅವರು, ಅಂದಿನ ಉತ್ತರ ಪ್ರದೇಶದ ಹಿಮಾಲಯದ ವ್ಯಾಪ್ತಿಯ ಹಳ್ಳಿಹಳ್ಳಿಗಳಿಗೆ ನಡೆದುಕೊಂಡೇ ಹೋಗಿ ಜನರನ್ನು ಜಾಗೃತಗೊಳಿಸಿದರು. 1981ರಿಂದ 1983ರ ಅವಧಿಯಲ್ಲಿ ಹಿಮಾಲಯದ ಸುಮಾರು 5000 ಕಿ.ಮೀ. ಕಾಲ್ನಡಿಗೆಯಲ್ಲಿ ಪ್ರವಾಸ ಮಾಡಿದರು. ಚಳವಳಿಗೆ ಸ್ಥಳೀಯರಿಂದ ದೊಡ್ಡ ಮಟ್ಟದ ಬೆಂಬಲ ಪಡೆ­ದರು. ಇದರ ಪರಿಣಾಮ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಿಮಾಲಯ ವ್ಯಾಪ್ತಿಯ ಕಾಡು ನಾಶಕ್ಕೆ ಅಂಕುಶ ಹಾಕುವ ಕಾನೂನನ್ನು ಜಾರಿಗೆ ತರಬೇಕಾ­ಯಿತು. ಇಲ್ಲಿಂದ ಭಾರತದ ಪರಿಸರ ಹೋರಾಟಕ್ಕೆ ಬಹುಗುಣ ಅವರು ಮುಖವಾದರು, ವಕ್ತಾರರೆನಿಸಿಕೊಂಡರು. 

ದಶಕಗಳವರೆಗೆ ನಡೆದ ತೆಹ್ರಿ ಡ್ಯಾಮ್ವಿರೋಧಿ ಹೋರಾಟಕ್ಕೆ ಬಹುಗುಣ ಚಾಲಕಶಕ್ತಿಯಾಗಿದ್ದರು. ಈ ಡ್ಯಾಮ್ನಿರ್ಮಾಣ ವಿರೋಧಿಸಿ ಹಲವು ಬಾರಿ ಸತ್ಯಾಗ್ರಹ ಕೈಗೊಂಡರು. ಉತ್ತರಾಖಂಡದಲ್ಲಿ ಹರಿಯುವ ಭಾಗಿರಥಿ ನದಿಗೆ ತೆಹ್ರಿ ಎಂಬ ಹಳ್ಳಿಯ ಸಮೀಪ ಡ್ಯಾಮ್ನಿರ್ಮಾಣ ಮಾಡಲಾಗುತ್ತಿತ್ತು. ಈ ಡ್ಯಾಮ್ನಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಬಹುಗುಣ ಜಾಗೃತಿ ಮೂಡಿಸಿದರು. ಆಡಳಿತ ಶಕ್ತಿಗಳು ಹೋರಾಟಕ್ಕೆ ಬೆಲೆ ನೀಡದೇ ಇದ್ದಾಗ ಸತ್ಯಾಗ್ರಹಗಳನ್ನು ಕೈಗೊಂಡರು.

1995ರಲ್ಲಿ ಬಹುಗುಣ ಅವರು ಭಾಗಿರಥಿ ನದಿಯ ದಂಡೆಯಲ್ಲಿ 45 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ಡ್ಯಾಮ್ಗೆ ಸಂಬಂಧಿಸಿ ಪರಿಶೀಲನಾ ಸಮಿತಿ ನೇಮಕ ಮಾಡಿದ ನಂತರವೇ ತಮ್ಮ ಸತ್ಯಾಗ್ರಹವನ್ನು ಹಿಂತೆಗೆದುಕೊಂಡರು. ಇಷ್ಟಾಗಿಯೂ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಮತ್ತೆ ದಿಲ್ಲಿಯ ರಾಜಘಾಟ್ನಲ್ಲಿ ಗಾಂಧಿ ಸಮಾಧಿ ಬಳಿ 74 ದಿನ ಉಪವಾಸ ಸತ್ಯಾಗ್ರಹ ಕೈಗೊಂಡರು. ಆಗ ಪ್ರಧಾನಿಯಾಗಿದ್ದವರು ಎಚ್‌.ಡಿ.ದೇವೇಗೌಡ. ಯೋಜನೆಯ ಬಗ್ಗೆ ಪರಿಶೀಲಿಸುವ ವಾಗ್ದಾನವನ್ನು ದೇವೇಗೌಡರು ನೀಡಿದ ಬಳಿಕ ಬಹುಗುಣ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು. ಡ್ಯಾಮ್ನಿರ್ಮಾಣವೇನೂ ಸ್ಥಗಿತಗೊಳ್ಳಲಿಲ್ಲ. ಈ ಪ್ರಕರಣ ಸ್ಥಳೀಯ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ನಲ್ಲಿ ದಶಕಗಳ ಕಾಲ ನಡೆದು, 2001ರಲ್ಲಿ ಡ್ಯಾಮ್ನಿರ್ಮಾಣವು ಪುನರಾರಂಭವಾಯಿತು. ಇಷ್ಟಾದರೂ ಬಹುಗುಣ ಹೋರಾಟವನ್ನು ಕೈಬಿಡಲಿಲ್ಲ. ಅವರನ್ನು 2004ರಲ್ಲಿ ಡೆಹ್ರಾಡೂನ್ಗೆ ಸ್ಥಳಾಂತರಿಸಲಾಯಿತು.

ಬಹುಗುಣ ಅವರು ಹಿಮಾಲಯ ಜನರ ಬದುಕನ್ನು ರಕ್ಷಿಸಲು ಕಂಕಣಬದ್ಧರಾಗಿದ್ದರು. ವಿಶೇಷವಾಗಿ ಬೆಟ್ಟಗಳಲ್ಲಿ ದುಡಿಯುವ ಮಹಿಳೆಯರ ಹಕ್ಕುಗಳ ಪರವಾಗಿದ್ದರು. ಪರಿಸರ ಹೋರಾಟದ ಜತೆಗೆ ನದಿಗಳ ರಕ್ಷಣೆಗೂ ಮುಂದಾಳತ್ವ ವಹಿಸಿಕೊಂಡಿದ್ದರು. ಅವರ ಹೋರಾಟದ ಹಾದಿ ಸರಳ ರೇಖೆಯಲ್ಲ; ಅದು ಟಿಸಿಲೊಡೆದ ಅನೇಕ ಹಾದಿಗಳ ಸಂಗಮ. ತಮ್ಮ ಜೀವಿತಾವಧಿಯ ಪೈಕಿ ಒಟ್ಟು 76 ವರ್ಷಗಳನ್ನು ಸಾಮಾಜಿಕ ಹೋರಾಟಗಳಿಗೆ ತ್ಯಾಗ ಮಾಡಿದ್ದಾರೆ.

ಉತ್ತರಾಖಂಡದ ಮರೋದಾ ಎಂಬ ಸಣ್ಣ ಹಳ್ಳಿಯಲ್ಲಿ 1927 ಜನವರಿ 9ರಂದು ಬಹುಗುಣ ಜನಿಸಿದರು. ಇವರ ತಂದೆ ಅಂಬಾದತ್ತ ಅವರು ಅಂದಿನ ತೆಹ್ರಿ ಗರ್ವಾಲ್ರಾಜ್ಯಾಡಳಿತದಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದೆಲ್ಲೆಡೆ ಸ್ವಾತಂತ್ರ್ಯದ ಕಿಡಿ ಹೊತ್ತಿದ ಸಂದರ್ಭವದು. ಬಹುಗುಣ 14 ವರ್ಷ ಇದ್ದಾಗಲೇ ಮಹಾತ್ಮ ಗಾಂಧಿ ಅವರಿಂದ ಪ್ರಭಾವಿತರಾದರು. ಅಹಿಂಸೆ, ಸತ್ಯಾಗ್ರಹಗಳು ಅವರನ್ನು ಬಹುವಾಗಿ ಆಕರ್ಷಿಸಿದವು. ಗಾಂಧಿ ನಂತರ ಬಹುಗುಣರನ್ನು ಪ್ರಭಾವಿಸಿದವರು ಎಂದರೆ ಶ್ರೀದೇವ್ಸುಮನ್ಅವರು. ತೆಹ್ರಿ ಗರ್ವಾಲ್ರಾಜ್ಯಾಡಳಿತವನ್ನು ಕೊನೆಗಾಣಿಸಲು ಅವರು ಹೋರಾಟ ನಡೆಸುತ್ತಿದ್ದರು.

ಗಾಂಧಿ ಮತ್ತು ಸುಮನ್ಅವರಿಂದ ಬಹಳಷ್ಟು ಪ್ರಭಾವಿತಗೊಂಡಿದ್ದ ಬಹುಗುಣ ಚಿಕ್ಕವಯಸ್ಸಿನಲ್ಲೇ ಹೋರಾಟಕ್ಕೆ ಧುಮುಕಿದರು. ತೆಹ್ರಿ ಗರ್ವಾಲ್ರಾಜ್ಯಾಡಳಿತ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡರು. ಪರಿಣಾಮ ಏಳು ತಿಂಗಳು ಸೆರೆವಾಸ ಅನುಭವಿಸಬೇಕಾಯಿತು. ತಮ್ಮ 24ನೇ ವಯಸ್ಸಿನಲ್ಲಿ ಬಹುಗುಣ ಕಾಂಗ್ರೆಸ್ಪಾರ್ಟಿ ಸೇರಿದರು. 1947ರಲ್ಲಿ ಭಾರತ ಸ್ವತಂತ್ರಗೊಂಡರೂ ತೆಹ್ರಿ ರಾಜ್ಯಾಡಳಿತದ ವಿರುದ್ಧ ಹೋರಾಟ ಮುಂದುವರಿದೇ ಇತ್ತು. ಅಂತಿಮವಾಗಿ 1949 ಆಗಸ್ಟ್‌ 1ರಂದು ತೆಹ್ರಿ ರಾಜ್ಯ ಭಾರತದ ಒಕ್ಕೂಟವನ್ನು ಸೇರಿತು.

ಸ್ವಾತಂತ್ರ್ಯ ಹೋರಾಟದ ಬಳಿಕ ಬಹುಗುಣ ಅವರು ಮದ್ಯಪಾನ ವಿರೋಧಿ, ಮಹಿಳೆಯರ ಹಕ್ಕು ಹೋರಾಟಗಳಲ್ಲಿ ತೊಡಗಿಸಿಕೊಂಡರು. ಕೊನೆಗೆ ಚಿಪ್ಕೋ ಚಳವಳಿ ಮೂಲಕ ಪರಿಸರ ಸಂರಕ್ಷ ಣೆಯ ಪ್ರತಿನಿಧಿಯಾದರು. ವ್ಯಕ್ತಿಯೊಬ್ಬ ನಿಸ್ವಾರ್ಥವಾಗಿ ಸಮಾಜ ಸೇವೆಗೆ ತೊಡಗಿಸಿಕೊಂಡಾಗ ಅವರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ಚಿಪ್ಕೋ ಚಳವಳಿಗೆ 1987ರಲ್ಲಿ ರೈಟ್ಲೈವ್ಲೀಹುಡ್ಅವಾರ್ಡ್ಸಂದಿತು. ದೇಶದ ಪರಮೋಚ್ಚ ನಾಗರಿಕ ಗೌರವಗಳಾದ ಪದ್ಮಶ್ರೀ(1981) ಮತ್ತು  ಪದ್ಮವಿಭೂಷಣ(2009) ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಐಐಟಿಗಳು, ಸಂಘ ಸಂಸ್ಥೆಗಳು ಬಹುಗುಣ ಅವರನ್ನು ಸನ್ಮಾನಿಸಿವೆ. ಅವರ ಜೀವನ, ಹೋರಾಟ, ಫಿಲಾಸಫಿಗಳು ಹಲವು ಪುಸ್ತಕಗಳಿಗೆ ವಿಷಯಗಳಾಗಿವೆ. ಬಹುಗುಣ ಕೆಲವು ಕೃತಿಗಳನ್ನು ರಚಿಸಿದ್ದಾರೆ.

ಅವರು ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಇಲ್ಲಿನ ಪರಿಸರ ಚಳವಳಿಗಳಿಗೆ ಪ್ರತ್ಯಕ್ಷ  ಹಾಗೂ ಪರೋಕ್ಷವಾಗಿ ಪ್ರೇರಕ ಶಕ್ತಿಯಾಗಿದ್ದರು. 94 ವರ್ಷ ವಯಸ್ಸಾಗಿದ್ದ ಬಹುಗುಣ ಕೋವಿಡ್ಸೋಂಕಿನಿಂದಾಗಿ ದಿಲ್ಲಿಯ ಏಮ್ಸ್ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೇ 21ರಂದು ಕೊನೆಯುಸಿರೆಳೆದರು. ಪರಿಸರ ಮೇಲಿನ ಪ್ರೀತಿ, ಬದುಕಿನ ಮೇಲಿನ ವ್ಯಾಮೋಹದಿಂದಾಗಿ ಅವರು ಚಿರಸ್ಥಾಯಿ. ಅವರನ್ನು ಕಳೆದುಕೊಂಡ ಹಿಮಾಲಯದ ಮರ ಗಿಡಗಳು ಕಣ್ಣೀರು ಸುರಿಸುತ್ತಿರಬಹುದು!


ಈ ಲೇಖನವು ವಿಜಯ ಕರ್ನಾಟಕದ 2021ರ ಮೇ 23ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


ಮಂಗಳವಾರ, ಮೇ 18, 2021

Mirza Ghalib: ಯಾವಾಗ ಪ್ರೀತಿಸಬೇಕು?

 ಯಾರೋ ಗಾಲಿಬನಿಗೆ ಕೇಳಿದರು

ಯಾವಾಗ ಪ್ರೀತಿಸಬೇಕು..?
ಮದುವೆಗೆ ಮೊದಲೋ
ಇಲ್ವೇ ಮದುವೆಯ ನಂತರ...!
ಗಾಲಿಬ್ ಹೇಳಿದ
ಯಾವಾಗಲಾದರೂ ಪ್ರೀತಿಸಿ
ಆದರೆ, ಹೆಂಡತಿಗೆ ಗೊತ್ತಾಗಬಾರದಷ್ಟೇ
~ ಅನಾಮಿಕ
ಕನ್ನಡಕ್ಕೆ : ಮಂಜುಳ ಕಿರುಗಾವಲು



ಭಾನುವಾರ, ಮೇ 9, 2021

BMC Commissioner Iqbal Singh Chahal: ಕೋವಿಡ್ ನಿಯಂತ್ರಣಕ್ಕೆ 'ಮುಂಬೈ ಮಾಡೆಲ್‌' ಸೃಷ್ಟಿಸಿದ ಚಹಲ್

ಫಿಟ್ನೆಸ್ಫ್ರೀಕ್ಐಎಎಸ್ಅಧಿಕಾರಿ, ಬಿಎಂಸಿ ಆಯುಕ್ತ ಇಕ್ಬಾಲ್ಸಿಂಗ್ಚಹಲ್ಅವರು ಮುಂಬೈನಲ್ಲಿ ಕೋವಿಡ್ನಿಯಂತ್ರಣಕ್ಕೆ ತಂದು, ‘ಮುಂಬೈ ಮಾಡೆಲ್‌’ ಸೃಷ್ಟಿಸಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
ಕೋವಿಡ್ಎರಡನೇ ಅಲೆಯಲ್ಲಿ ಇಡೀ ದೇಶವೇ ಸಿಲುಕಿ ಸಂಕಟದಲ್ಲಿ ಒದ್ದಾಡುತ್ತಿದೆ. ಬೆಡ್ಗಳು ಸಿಗುತ್ತಿಲ್ಲ; ಆಕ್ಸಿಜನ್ಸಾಕಾಗುತ್ತಿಲ್ಲ; ವೆಂಟಿಲೇಟರ್ಗಳಿಲ್ಲ. ಎಲ್ಲ ಇದ್ದರೂ ವೈದ್ಯರಿಲ್ಲ,

ನರ್ಸ್ಗಳಿಲ್ಲ ಅನ್ನೋ ಪರಿಸ್ಥಿತಿ ಎಲ್ಲ ಕಡೆ ಇದೆ. ಕೋವಿಡ್ನಿರ್ವಹಿಸಬೇಕಾದ ಸ್ಥಳೀಯ ಸಂಸ್ಥೆಗಳು ಕೈ ಚೆಲ್ಲಿ ಕುಳಿತಿವೆ. ಅಧಿಕಾರಿಗಳಿಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಇಡೀ ವ್ಯವಸ್ಥೆಯೇ ವಿಫಲವಾಗಿದೆ. ಒಬ್ಬರು ಇನ್ನೊಬ್ಬರು ಮೇಲೆ ದೂರುತ್ತಿದ್ದಾರೆ. ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬಯಿ ನಗರ ಮಾತ್ರ ಭರವಸೆಯ ಬೆಳಕಾಗಿದೆ.

ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ)ಯುಕೋವಿಡ್ಏರುಗತಿ ರೇಖೆಯನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗುತ್ತಿದೆ. ಕೋವಿಡ್ನಿರ್ವಹಣೆಯಲ್ಲಿ ಉಳಿದ ನಗರಗಳಿಗೆ ದಾರಿದೀಪವಾಗಿದೆ. ಸ್ವತಃ ಸುಪ್ರೀಂ ಕೋರ್ಟ್‌, ಬಿಎಂಸಿ ಅನುಸರಿಸಿದ ಮಾದರಿಯನ್ನು ಮುಕ್ತಕಂಠದಿಂದ ಹೊಗಳಿದೆ; ನೀವೂ ನೋಡಿ ಕಲಿಯಿರಿ ಎಂದು ತಾಕೀತು ಮಾಡಿದೆ!

ಮುಂಬಯಿಯ ಈ ಸಕ್ಸೆಸ್ಸ್ಟೋರಿಯ ನಾಯಕ ಇಕ್ಬಾಲ್ಸಿಂಗ್ಚಹಲ್‌. ಚಹಲ್ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತರು. ಪಾಲಿಕೆ ಕಮಿಷನರ್ಆಗಿ ಒಂದು ವರ್ಷವಷ್ಟೇ ಆಗಿದೆ. ಈ ಕಡಿಮೆ ಅವಧಿಯಲ್ಲಿ ಅವರು ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸಿದ ರೀತಿ ಮಾತ್ರ ಅನನ್ಯ. ಒಂದು ಕಾಲು ಕೋಟಿ ಜನಸಂಖ್ಯೆ ಇರುವ ದೇಶದ ಅತಿದೊಡ್ಡ ನಗರ, 39,038.83 ಕೋಟಿ ರೂಪಾಯಿ ಬಜೆಟ್ಮಂಡಿಸುವ ಪಾಲಿಕೆಯ ಆಡಳಿತವೇನೂ ತಮಾಷೆಯಲ್ಲ. ನಮ್ಮ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್‌ 10 ಸಾವಿರ ಕೋಟಿ ರೂ. ಅಚೆ ಈಚೆ ಇದೆ! ಇಂಥ ಮುಂಬಯಿಗೆ ಕೋವಿಡ್ಅಪ್ಪಳಿಸಿದರೆ ಅದನ್ನು ಹತೋಟಿಗೆ ತರುವುದು ಕೂಡ ಅಷ್ಟು ಸಲೀಸಲ್ಲ. ಆದರೆ, ಕಮಿಷನರ್ಚಹಲ್ಮತ್ತು ಅವರ ತಂಡ ದಿನದ 24 ಗಂಟೆಯೂ ಕೆಲಸ ಮಾಡಿ, ಅಸಾಧ್ಯವಾದುದನ್ನು ಸಾಧಿಸಿ ತೋರಿಸುತ್ತಿದೆ, ಬಿಎಂಸಿಯ ಕಾರ್ಯಕ್ಕೆ ಅಲ್ಲಿನ ರಾಜ್ಯ ಸರಕಾರವೂ ಅಷ್ಟೇ ಸಹಾಯ, ಸಹಕಾರ ನೀಡುತ್ತಿದೆ.

ಮೊದಲು ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ; ನಂತರ ನಿಮ್ಮನ್ನು ನೋಡಿ ನಗುತ್ತಾರೆ; ನಂತರ ಸಂಘರ್ಷ ಮಾಡುತ್ತಾರೆ; ಆ ನಂತರ ಗೆಲವು ನಿನ್ನದುಎಂಬ ಮಹಾತ್ಮ ಗಾಂಧಿ ಅವರ ಉಕ್ತಿ ಇಕ್ಬಾಲ್ಸಿಂಗ್ಚಹಲ್  ವಿಷಯದಲ್ಲಿನಿಜವಾಗಿದೆ. ಯಾಕೆಂದರೆ, ಎರಡ್ಮೂರು ತಿಂಗಳ ಹಿಂದೆ ಭಾರತ ಸರಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಹಲ್ಅವರ ಸಹೋದ್ಯೋಗಿ ಮಿತ್ರರೇ ಕರೆ ಮಾಡಿ, ಮಹಾರಾಷ್ಟ್ರದಲ್ಲಿ ಮಾತ್ರವೇ ಯಾಕೆ ಕೊರೊನಾ ಇದೆ ಎಂದು ನಗುತ್ತಿದ್ದರಂತೆ! ಆದರೆ, ಈಗ ನಗುವ ಸರದಿ ಯಾರಿಗೆ ಬಂದಿದೆ ನೋಡಿ. ಮುಂಬಯಿಯಲ್ಲಿ ಶೇ.24.97ರಷ್ಟಿದ್ದ ಪಾಸಿಟಿವಿಟಿ ರೇಟ್ಶೇ.9ಕ್ಕೆ ಇಳಿಕೆಯಾಗಿದೆ. ದಿನದಿಂದ ದಿನಕ್ಕೆ ಕೋವಿಡ್ಪ್ರಕರಣಗಳೂ ಕಡಿಮೆಯಾಗುತ್ತಿವೆ. ವಿದೇಶಿ ಮಾಧ್ಯಮಗಳಲ್ಲೂ ಬಿಎಂಸಿ ಸಾಧನೆ ಮತ್ತು ಮಾದರಿಯ ಬಗ್ಗೆ ಮುಕ್ತ ಪ್ರಶಂಸೆ ದೊರೆಯುತ್ತಿದೆ.

ಚಹಲ್ಅವರೇನೂ ಮಂತ್ರದಂಡ ಪ್ರಯೋಗಿಸಿ, ರಾತ್ರೋರಾತ್ರಿ ಚಮತ್ಕಾರ ಮಾಡಲಿಲ್ಲ. ಕಳೆದ ವರ್ಷ ಮೊದಲನೆ ಅಲೆ ಏರುಗತಿಯಲ್ಲಿದ್ದಾಗಲೇ ಚಹಲ್ಬಿಎಂಸಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಆ ಕ್ಷಣದಿಂದಲೇ ಕೋವಿಡ್ನಿರ್ವಹಣೆಗೆ ತಮ್ಮನ್ನು ಒಡ್ಡಿಕೊಂಡರು. ಮೊದಲನೇ ಅಲೆ ವೇಳೆ ಮಾಡಿದ ತಪ್ಪುಗಳಿಂದ ಪಾಠ ಕಲಿತು, ಸ್ಥಳೀಯಾಡಳಿತವನ್ನು ಎರಡನೇ ಅಲೆಗೆ ಸಜ್ಜುಗೊಳಿಸಿದರು. ಎರಡನೇ ಅಲೆಯ ಗಂಭೀರತೆಯನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ರೂಪಿಸಿದರು. ಫೆಬ್ರವರಿಯಿಂದಲೇ ಇಡೀ ಬಿಎಂಸಿ ಯುದ್ಧ ಸನ್ನದ್ಧವಾಗಿತ್ತು!

ತ್ವರಿತ ಕೋವಿಡ್ಟೆಸ್ಟ್ಗಳು, 24 ಗಂಟೆಯೂ ಕಾರ್ಯನಿರ್ವಹಿಸುವ 24 ವಾರ್ರೂಮ್ಗಳು, ಎಲ್ಲರಿಗೂ ವೈದ್ಯಕೀಯ ಸೇವೆ, ಖಾಸಗಿ ಆಸ್ಪತ್ರೆಗಳ ಜತೆಗಿನ ಸಮನ್ವಯ, ಸ್ಮಶಾನಗಳ ನಿರ್ವಹಣೆ... ಹೀಗೆ ಕೋವಿಡ್ಗೆ ಅಂತರ್ಗತವಾಗಿರುವ ಎಲ್ಲವನ್ನೂ ಬಿಎಂಸಿ ಅಚ್ಚುಕಟ್ಟಾಗಿ ನಿರ್ವಹಿಸಲು ಯಶಸ್ವಿಯಾಯಿತು. ಅದರ ಪರಿಣಾಮ ಈಗ ಕೋವಿಡ್ಹತೋಟಿಗೆಮುಂಬಯಿ ಮಾಡೆಲ್‌’ ಸೃಷ್ಟಿಯಾಗಿ ನಿಂತಿದೆ. ಇದೆಲ್ಲದರ ಹಿಂದೆ 55 ವರ್ಷದ ಕಮಿಷನರ್ಚಹಲ್ದೂರದೃಷ್ಟಿ ಚಿಂತನೆ ಮತ್ತು ಪ್ರಯತ್ನಶೀಲತೆಯನ್ನು ಇಡೀ ಜಗತ್ತೇ ಗುರುತಿಸುತ್ತಿದೆ.

ರಾಜಸ್ಥಾನದ ಜೋಧಪುರದ ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ 1966ರ ಜನವರಿ 20ರಂದು ಇಕ್ಬಾಲ್ಸಿಂಗ್ಚಹಲ್ಜನಿಸಿದರು. ಶಾಲಾ ದಿನಗಳಿಂದಲೇ ಕಲಿಕೆಯಲ್ಲಿ ಅಗ್ರಸ್ಥಾನಿ. 12ನೇ ತರಗತಿಯ ಬೋರ್ಡ್ಎಕ್ಸಾಮ್ನಲ್ಲಿ ನ್ಯಾಷಲ್ಮೆರಿಟ್ಲಿಸ್ಟ್ನಲ್ಲಿ ಕಾಣಿಸಿಕೊಂಡವರು. ಎಲೆಕ್ಟ್ರಾನಿಕ್ಸ್ಮತ್ತು ಕಮ್ಯುನಿಕೇಷನ್ನಲ್ಲಿ ಬಿಟೆಕ್ಪದವಿ ಪಡೆದುಕೊಂಡಿದ್ದಾರೆ. ಹಾರ್ವರ್ಡ್ಯೂನಿವರ್ಸಿಟಿಗೆ ತೆರಳಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಗಳಿಸಿದ್ದಾರೆ. ಅಲ್ಲಿಂದ ಹಿಂದಿರುಗಿದ ಬಳಿಕ 1988ರ ಯುಪಿಎಸ್ಸಿ ಪರೀಕ್ಷೆ ಬರೆದರು. ಮೊದಲ ಯುಪಿಎಸ್ಸಿ ಪರೀಕ್ಷೆಯಲ್ಲೇ ಅತ್ಯುತ್ತಮ ಅಂಕ ಪಡೆದು ಪಾಸಾದರು. ಮಹಾರಾಷ್ಟ್ರ ಕೆಡರ್ಐಎಎಸ್ಅಧಿಕಾರಿಯಾಗಿ ಸೇರ್ಪಡೆಯಾದರು.

ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿಕೆಲಸ ಮಾಡಿರುವ ಚಹಲ್‌, ಕೆಲವು ಕಾಲ ಕೇಂದ್ರ ಸೇವೆಯಲ್ಲಿಯೂ ಇದ್ದರು. ಮಹಾರಾಷ್ಟ್ರದ ಔರಂಗಾಬಾದ್ಮತ್ತು ಥಾಣೆಯ ಜಿಲ್ಲಾಧಿಕಾರಿಯಾಗಿ ಅವರು ಮಾಡಿದ ಕಾರ್ಯಗಳನ್ನು ಜನ ಈಗಲೂ ನೆನೆಯುತ್ತಾರೆ. ಈ ಜಿಲ್ಲೆಗಳಲ್ಲಿನ ಕೆಲಸದಿಂದಾಗಿ ಜನರ ಅಧಿಕಾರಿ ಎನಿಸಿಕೊಂಡರು. ಮುಂಬಯಿನಧಾರಾವಿಏಷ್ಯಾದ ಅತಿದೊಡ್ಡ ಕೊಳಗೇರಿ. ಈ ಕೊಳಗೇರಿ ಅಭಿವೃದ್ಧಿಗೆ ಮಹಾರಾಷ್ಟ್ರ ಸರಕಾರಧಾರಾವಿ ರಿಡೆವಲಪ್ಮೆಂಟ್ಪ್ರಾಜೆಕ್ಟ್ಆರಂಭಿಸಿ, ಸಾರಥ್ಯವನ್ನು ಚಹಲ್ಗೆ ವಹಿಸಿತ್ತು. ಈ ಪ್ರಾಜೆಕ್ಟ್‌ ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲ ಕೊರೊನಾ ಅಲೆಯಲ್ಲಿ ಧಾರಾವಿಯನ್ನು ದೊಡ್ಡ ಅಪಾಯದಿಂದ ಪಾರು ಮಾಡುವಲ್ಲಿಯೂ ಯಶಸ್ವಿಯಾಗಿದ್ದರು. ಈ ಪ್ರಾಜೆಕ್ಟ್ನ ಯಶಸ್ಸು ಅವರನ್ನು ಬಿಎಂಸಿ ಕಮಿಷನರ್ಹುದ್ದೆಗೆ ಕರೆದುಕೊಂಡು ಬಂತು.

ಚಹಲ್ಅವರನ್ನುಫಿಟ್ನೆಸ್ಫ್ರೀಕ್‌’ ಎಂದೂ ಗುರುತಿಸಲಾಗುತ್ತದೆ. ಚಹಲ್ಫಿಜಿಕಲ್ಫಿಟ್ಐಎಎಸ್ಆಫೀಸರ್‌! ಹಲವು ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದಾರೆ. 2004ರಿಂದಲೂ ಮುಂಬಯಿ ಮ್ಯಾರಥಾನ್ನಲ್ಲಿ ಓಡುತ್ತಿದ್ದಾರೆ. ಯೋಗ, ಫಿಟ್ನೆಸ್‌, ಓಟದ ಫೋಟೊಗಳನ್ನು ಆಗಾಗ ತಮ್ಮ ಸೋಷಿಯಲ್ಮೀಡಿಯಾ ವೇದಿಕೆಗಳಲ್ಲಿ ಷೇರ್ಮಾಡಿಕೊಳ್ಳುತ್ತಾರೆ.

ಕೋವಿಡ್ಅತ್ಯುತ್ತಮ ನಿರ್ವಹಣೆಗಾಗಿ ಇಂಡೋ ಅಮೆರಿಕನ್ಚೇಂಬರ್ಸ್ಆಫ್ಕಾಮರ್ಸ್‌(ಐಎಸಿಸಿ) ‘ಕೋವಿಡ್ಕ್ರುಸೆಡರ್ಅವಾರ್ಡ್‌-2020’ ನೀಡಿ ಗೌರವಿಸಿದೆ. ಲೋಕಮತ್  ಮಹಾರಾಷ್ಟ್ರಿಯನ್ಆಫ್ಇಯರ್‌-2020’ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದಲೂ ಗೌರವಗಳು ಸಂದಿವೆ. ಕೋವಿಡ್ಎರಡನೇ ಅಲೆಯನ್ನು ನಿರ್ವಹಿಸುತ್ತಲೇ ಬಿಎಂಸಿಯನ್ನು ಸಂಭಾವ್ಯ ಮೂರನೇ ಅಲೆಗೆ ಸಜ್ಜುಗೊಳಿಸುವ ಕೆಲಸವನ್ನು ಚಹಲ್ಮಾಡುತ್ತಿದ್ದಾರೆ. ಹಲವು ತಜ್ಞರ ಪ್ರಕಾರ, ಮೂರನೇ ಅಲೆಯು ಎರಡನೇ ಅಲೆಗಿಂತಲೂ ಭೀಕರವಾಗಿದ್ದು, ಮಕ್ಕಳು ಹೆಚ್ಚು ಅಪಾಯಕ್ಕೆ ಈಡಾಗಲಿಧಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಎಂಸಿಯು ಮಕ್ಕಳ ಕೋವಿಡ್ಕೇರ್ಸೆಂಟರ್ಗಳನ್ನು ಈಗಿನಿಂದಲೇ ಆರಂಭಿಸುತ್ತಿದೆ.

ಚಹಲ್ಅವರನ್ನು ವಿವಾದಗಳೇನೂ ಬಿಟ್ಟಿಲ್ಲ. ಶಿವಸೇನೆ ಮತ್ತು ನಟಿ ಕಂಗನಾ ರಣಾವತ್ನಡುವಿನ ಬೀದಿ ಕಾಳಗದಲ್ಲಿ ಬಿಎಂಸಿಯೂ ಭಾಗಿಯಾಗಬೇಕಾಯಿತು. ನಿಯಮ ಮೀರಿ ಬಿಲ್ಡಿಂಗ್ಕಟ್ಟಿದ್ದಾರೆಂದು ಬಿಎಂಸಿ ಕಂಗನಾಳ ಮನೆಯನ್ನು ಧ್ವಂಸ ಮಾಡಿತ್ತು. ಆಗ, ಪಾಲಿಕೆ ಆಯುಕ್ತ ಚಹಲ್ವಿರುದ್ಧವೂ ಆರೋಪಗಳು ಕೇಳಿ ಬಂದವು. ಕೋರ್ಟ್ಕೂಡ ಪಾಲಿಕೆ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಅದೇನೇ ಇರಲಿ, ಕೋವಿಡ್ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ಅವರ ರೀತಿ ಎಲ್ಲ ಅಧಿಕಾರಿಗಳಿಗೂ ದಾರಿದೀಪವಾಗಿದೆ.


* ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯ 2021ರ ಮೇ 9ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


ಭಾನುವಾರ, ಮೇ 2, 2021

Nandurbar DM Dr Rajendra Bharud: 'ಪ್ರಾಣವಾಯು' ನೀಡಿದ ನಂದೂರಬಾರ್ ಡಿಸಿ ಡಾ.ರಾಜೇಂದ್ರ ಭಾರೂಡ್

ಕೋವಿಡ್ಬಿಕ್ಕಟ್ಟಿನ ನಡುವೆ ಆಕ್ಸಿಜನ್ಉತ್ಪಾದನೆಯಲ್ಲಿಜಿಲ್ಲೆಯನ್ನೇ ಸ್ವಾವಲಂಬಿಯಾಗಿಸಿರುವ ನಂದೂರಬಾರ್ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ಅವರ ಜೀವನಗಾಥೆ ಸ್ಫೂರ್ತಿದಾಯಕ. 

 

- ಮಲ್ಲಿಕಾರ್ಜುನ ತಿಪ್ಪಾರ
ಇಡೀ ದೇಶವೇ ಕೋವಿಡ್ಎರಡನೇ ಅಲೆಗೆ ಕೊಚ್ಚಿ ಹೋಗುತ್ತಿದೆ. ವ್ಯವಸ್ಥೆಯ ವೈಫಲ್ಯದ ಪರಿಣಾಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕದೇ ಜನರು ಸಾವಿಗೀಡಾಗುತ್ತಿದ್ದಾರೆ; ಸ್ಮಶಾನಗಳು ಗಿಜಿಗಿಡುತ್ತಿವೆ; ದೂರದೃಷ್ಟಿ ಮತ್ತು ಸಿದ್ಧತೆಯ ಕೊರತೆಯ ಫಲವಾಗಿ ಇಡೀ ದೇಶ ಅನಾಥಪ್ರಜ್ಞೆಯನ್ನು ಎದುರಿಸುತ್ತಿದೆ. ಇದರ ನಡುವೆ ಮಹಾರಾಷ್ಟ್ರದ ನಂದೂರಬಾರ್ಜಿಲ್ಲೆಮಾತ್ರ ವಿಭಿನ್ನವಾಗಿ ನಿಂತಿದೆ; ಸೋಂಕನ್ನು ಸಮರ್ಥವಾಗಿ ನಿಭಾಯಿಸುತ್ತಿದೆ.

ದೂರದೃಷ್ಟಿ ಮತ್ತು ದಕ್ಷತೆಯ ಜಿಲ್ಲಾಧಿಕಾರಿಯೊಬ್ಬರಿದ್ದರೆ ಒಂದು ಜಿಲ್ಲೆಯ ವ್ಯವಸ್ಥೆಯು ಯಾವ ರೀತಿ ಕಾರ್ಯನಿರ್ವಹಿಸಬಲ್ಲದು ಎಂಬುದಕ್ಕೆ ನಂದೂರ್ಬಾರ್ಜಿಲ್ಲೆ ದೃಷ್ಟಾಂತ. ಮಹಾರಾಷ್ಟ್ರದಲ್ಲಿ ಆಕ್ಸಿಜನ್ಕೊರತೆಯಿಂದ ಜನರು ಸಾಯುತ್ತಿದ್ದ ಸಂದರ್ಭದಲ್ಲಿ ನಂದೂರಬಾರ್ಎಂಬ ಬುಡಕಟ್ಟು ಜನರೇ ಹೆಚ್ಚಿರುವ ಜಿಲ್ಲೆ ಆಕ್ಸಿಜನ್ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ಚಿಕಿತ್ಸೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲು ಯಶಸ್ವಿಯಾಗಿದೆ. ನಂದರೂಬಾರ್ಯಶಸ್ಸಿನ ಹಿಂದೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ಮತ್ತು ಅವರ ತಂಡದ ಪರಿಶ್ರಮವಿದೆ; ದೂರದೃಷ್ಟಿಯ ಚಿಂತನೆಯಿದೆ. ಸ್ವತಃ ವೈದ್ಯರಾಗಿರುವ ರಾಜೇಂದ್ರ ಅವರಿಗೆ ಕೊರೊನಾದಿಂದ ಉಂಟಾಗಬಹುದಾದ ಅಪಾಯದ ಸ್ಪಷ್ಟತೆ ಇತ್ತು. ತಮ್ಮ ಆಡಳಿತದ ಜಿಲ್ಲೆಯನ್ನು ಕೊರೊನಾ ಎದುರಿಸಲು ಎಲ್ಲರಿಗಿಂತಲೂ ಮುಂಚೆಯೇ ಸನ್ನದ್ಧ ಮಾಡಿ, ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಕೋವಿಡ್‌-19 ಸ್ಫೋಟವಾಗುವ ಮುಂಚೆ ನಂದೂರಬಾರ್ಜಿಲ್ಲೆಯಲ್ಲಿಒಂದೂ ಲಿಕ್ವಿಡ್ಆಕ್ಸಿಜನ್ತಯಾರಿಕಾ ಘಟಕಗಳು ಇರಲಿಲ್ಲ. ಕೋವಿಡ್ಕೇಸ್ಗಳು ಇಳಿಕೆಯಾಗುತ್ತಿದ್ದಂತೆ ಸೆಪ್ಟೆಂಬರ್ನಲ್ಲಿ ಡಾ. ರಾಜೇಂದ್ರ ಅವರು ನಂದೂರಬಾರ್ಜಿಲ್ಲಾಸ್ಪತ್ರೆಯಲ್ಲಿ 85 ಲಕ್ಷ  ರೂ. ವೆಚ್ಚದಲ್ಲಿ ಲಿಕ್ವಿಡ್ಆಕ್ಸಿಜನ್ಘಟಕ ಸ್ಥಾಪಿಸಿದರುಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿಮತ್ತೆ ಎರಡು ಘಟಕಗಳನ್ನು ನಿರ್ಮಿಸಿದರು. ಪರಿಣಾಮ ಜಿಲ್ಲೆಯಲ್ಲಿ ಪ್ರತಿ ನಿಮಿಷಕ್ಕೆ 2,400 ಲೀಟರ್ಲಿಕ್ವಿಡ್ಆಕ್ಸಿಜನ್ಉತ್ಪಾದನೆಯ ಸಾಮರ್ಥ್ಯವನ್ನು ಪಡೆದುಕೊಂಡಿತು. ಮೊದಲನೇ ಅಲೆ ವೇಳೆ ಜಿಲ್ಲೆಯಲ್ಲಿ 190 ಕೇಸ್ಗಳಿದ್ದವು. ಆದರೆ, ಸೋಂಕಿನ ಅಪಾಯದ ಬಗ್ಗೆ ಮತ್ತು ದೂರದೃಷ್ಟಿಯ ಚಿಂತನೆಯಿಂದಾಗಿ ಡಾ. ಭಾರೂಡ್ಅವರು ಆಕ್ಸಿಜನ್ಉತ್ಪಾದನೆಯಲ್ಲಿಇಡೀ ಜಿಲ್ಲೆಯನ್ನೇ ಸ್ವಾವಲಂಬಿಯಾಗಿಸಿದರು.

ಮಹಾರಾಷ್ಟ್ರದಲ್ಲಿ ಯಾವಾಗ ಕೋವಿಡ್ಎರಡನೇ ಅಲೆ ತೀವ್ರವಾಯಿತೋ ಈ ಬುಡಕಟ್ಟು ಜಿಲ್ಲೆಯಲ್ಲಿ24 ಗಂಟೆಯೊಳಗೆ 1,200 ಪ್ರಕರಣಗಳು ಪತ್ತೆಯಾದವು. ಆದರೆ, ಆಕ್ಸಿಜನ್ಕೊರತೆಯಿಂದಾಗಿಯೇ ಯಾವುದೇ ಸಾವು ನೋವು ಸಂಭವಿಸಲಿಲ್ಲ. ಸರಕಾರಿ ಘಟಕಗಳಿಂದ ಪ್ರತಿ ನಿಮಿಷಕ್ಕೆ 1,800 ಲೀ., ಖಾಸಗಿ ಕಂಪನಿಗಳಿಂದ ನಿಮಿಷಕ್ಕೆ 1,200 ಲೀ. ಲಿಕ್ವಿಡ್ಆಕ್ಸಿಜನ್ಉತ್ಪಾದನೆ ಸಾಧ್ಯವಾಗಿದೆ. ಜನರು ಇಡೀ ಜಿಲ್ಲಾಡಳಿತವನ್ನು ಹಾಡಿ ಹೊಗಳುತ್ತಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ಮತ್ತು ಅವರ ತಂಡದ  ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಾರಂಭಿಸಿದೆ.

ದಿಲ್ಲಿ, ಮುಂಬಯಿ, ಬೆಂಗಳೂರಿನಂಥ ಮೆಟ್ರೋ ಸಿಟಿಗಳೇ ಆಕ್ಸಿಜನ್ಕೊರತೆಯಿಂದ ಬಳಲುತ್ತಿವೆ. ಈ ನಗರಗಳಲ್ಲಿ ಹೆಜ್ಜೆ ಹೆಜ್ಜೆಗೂ ಆಸ್ಪತ್ರೆಗಳಿದ್ದರೂ ಕೋವಿಡ್ಸೋಂಕಿತ ಗಂಭೀರ ರೋಗಿಗಳಿಗೆ ಪ್ರಾಣವಾಯು ಸಿಗುತ್ತಿಲ್ಲ; ಪ್ರಾಣ ಉಳಿಸಲಾಗುತ್ತಿಲ್ಲ. ಅಂಥದ್ದರಲ್ಲಿ ಅಷ್ಟೇನೂ ಸಂಪನ್ಮೂಲಗಳು ಇಲ್ಲದೇ ಬುಡಕಟ್ಟು ಜಿಲ್ಲೆಯೊಂದು ಆಕ್ಸಿಜನ್ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿರುವುದು ಇವರ ಕರ್ತೃತ್ವ ಶಕ್ತಿಗೆ ಉದಾಹರಣೆಯಾಗಿದೆ. ತಮ್ಮ ದೂರದೃಷ್ಟಿಯ ಆಡಳಿತದಿಂದಾಗಿ ಪ್ರಸಿದ್ಧಿಯಾಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಭಾರೂಡ್ಅವರ ಜೀವನ ಕತೆಯೂ ಯಾವುದೇ ಥ್ರಿಲ್ಲರ್ಸಿನಿಮಾಗಿಂತಲೂ ಕಡಿಮೆ ಇಲ್ಲ. ಪ್ರತಿಭಾವಂತ ಯಾವುದೇ ವಿದ್ಯಾರ್ಥಿಗೆ ಅವರ ಜೀವನಯಶೋಗಾಥೆ ಸೂಧಿರ್ತಿ.

ರಾಜೇಂದ್ರ ಭಾರೂಡ್‌ 1988ರ ಜನವರಿ 7ರಂದು ಮಹಾರಾಷ್ಟ್ರದ ಧುಳೆ ಜಿಲ್ಲೆಯ ಸಕ್ರಿ ತಾಲೂಕಿನ ಸಾಮೋಡೆ ಹಳ್ಳಿಯಲ್ಲಿ ಜನಿಸಿದರು. ತಂದೆ ಬಂಡು ಭಾರೂಡ್‌, ತಾಯಿ ಕಮಲಾಬಾಯಿ. ಒಟ್ಟು ಮೂವರು ಮಕ್ಕಳು. ರಾಜೇಂದ್ರ ಕಮಲಾಬಾಯಿ ಗರ್ಭದಲ್ಲಿದ್ದಾಗಲೇ ಬಂಡು ಇಹಲೋಕ ತ್ಯಜಿಸಿದರು. ಇಂದಿಗೂ ತಂದೆ ನೋಡಲು ಯಾವ ರೀತಿ ಇದ್ದರು ಎಂಬುದು ರಾಜೇಂದ್ರಗೆ ಗೊತ್ತಿಲ್ಲ! ಅವರ ತಂದೆಯ ಒಂದೂ ಫೋಟೊ ಅವರ ಬಳಿಯಿಲ್ಲ. ಅಷ್ಟು ಕಡು ಬಡತನದಲ್ಲಿರಾಜೇಂದ್ರ ಅವರು ಬೆಳೆದು ಬಂದಿದ್ದಾರೆ.

ಬಡತನವನ್ನೇ ಹಾಸಿ ಹೊದ್ದುಕೊಂಡಿದ್ದ ಕುಟುಂಬ ನಿರ್ವಹಣೆ ಕಷ್ಟವೇ ಆಗಿತ್ತು. ತಾಯಿ ಮತ್ತು ಅಜ್ಜಿ ಇಬ್ಬರು ಸೇರಿ ಮೂವರು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದರು. ಇವರಿಬ್ಬರೂ ದೇಸಿ ಸಾರಾಯಿಯನ್ನು ತಯಾರಿಸಿ ಮಾರಾಟ ಮಾಡಿ ಕುಟುಂಬವನ್ನು ಸಾಕುತ್ತಿದ್ದರು. ದಿನಕ್ಕೆ ನೂರು ರೂಪಾಯಿ ಸಿಗುತ್ತಿತ್ತು. ಕಬ್ಬಿನ ರವದಿಯಿಂದ ಮಾಡಿದ ಒಂದು ಸಣ್ಣ ಗುಡಿಸಲೇ ಇವರಿಗೆ ಅರಮನೆಯಾಗಿತ್ತು. ಅಂಥ ಕಡುಬಡತನದಲ್ಲೇ ಬೆಳೆದ ರಾಜೇಂದ್ರ ವೈದ್ಯರಾಗಿ, ಐಎಸ್ಐ ಅಧಿಕಾರಿಯಾಗುವವರೆಗಿನ ಸಾಧನೆಯನ್ನು ಅಕ್ಷ ರಗಳಲ್ಲಿಹಿಡಿದಿಡಲು ಸಾಧ್ಯವಿಲ್ಲ.

ರಾಜೇಂದ್ರ ಮತ್ತು ಅವರ ಸಹೋದರಿ ಅದೇ ಹಳ್ಳಿಯ ಜಿಲ್ಲಾ ಪರಿಷತ್ಶಾಲೆಗೆ ಹೋಗುತ್ತಿದ್ದರು. ಮತ್ತೊಬ್ಬ ಸಹೋದರ ಬುಡಕಟ್ಟು ಶಾಲೆಯಲ್ಲಿ ಕಲಿಯುತ್ತಿದ್ದರು. ರಾಜೇಂದ್ರ ಅವರು 5ನೇ ತರಗತಿಯಲ್ಲಿದ್ದಾಗ, ಅವರಲ್ಲಿದ್ದ ವಿಶಿಷ್ಟ ಪ್ರತಿಭೆಯನ್ನು ಶಿಕ್ಷಕರೊಬ್ಬರು ಗುರುತಿಸಿ, ತಾಯಿಗೆ ತಿಳಿಸಿದರು. ಯಾವುದೇ ಕಾರಣಕ್ಕೂ ರಾಜೇಂದ್ರ ವಿದ್ಯಾಭ್ಯಾಸವನ್ನು ಕಡಿತಗೊಳಿಸಿದಂತೆ ಕೇಳಿಕೊಂಡಿದ್ದರು. ಅಂದು ಅವರ ಕಂಡ ಪ್ರತಿಭೆ ಇಂದು ಜಗದ್ವಿಖ್ಯಾತವಾಗುತ್ತಿದೆ! ಬಳಿಕ ರಾಜೇಂದ್ರ ಅವರು ಜವಾಹರ ನವೋದಯ ವಿದ್ಯಾಲಯಕ್ಕೆ ಸೇರಿಕೊಂಡರು. ಈ ಶಾಲೆ ಅವರಿದ್ದ ಹಳ್ಳಿಯಿಂದ 15 ಕಿ.ಮೀ. ದೂರದಲ್ಲಿತ್ತು. ತಾಯಿ ಈಗಲೂ ದೇಸಿ ಸಾರಾಯಿ ಮಾರಾಟ ಮಾಡಿ ಮಕ್ಕಳ ಶಾಲೆ ಮತ್ತು ಕುಟಂಬದ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ, ನವೋದಯ ಶಾಲೆಯಿಂದ ರಾಜೇಂದ್ರ ಅವರ ಭವಿಷ್ಯವೇ  ಬದಲಾಯಿತು.

ಗಣಿತ ಮತ್ತು ವಿಜ್ಞಾನ ವಿಷಯಗಳತ್ತ ಆಸಕ್ತಿ ಬೆಳೆಸಿಕೊಂಡ ರಾಜೇಂದ್ರ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುತ್ತಿದ್ದರು. 10 ಮತ್ತು 12ನೇ ತರಗತಿ ಬೋರ್ಡ್ಎಕ್ಸಾಮ್ನಲ್ಲಿ ಟಾಪರ್ಆಗಿದ್ದರು. ಪರಿಣಾಮ ವಿದ್ಯಾರ್ಥಿ ವೇತನ ಪಡೆದುಕೊಂಡು ಮುಂಬೈನ ಸೇಠ್ಜಿಎಸ್ಮೆಡಿಕಲ್ಕಾಲೇಜ್ಗೆ ಪ್ರವೇಶ ಪಡೆದುಕೊಂಡರು. ಬಾಲ್ಯದಿಂದಲೂ ಅವರಿಗೆ ವೈದ್ಯನಾಗಬೇಕೆಂಬ ಕನಸು. ಆದರೆ, ಅರಿವು ಹೆಚ್ಚಾಗುತ್ತಾ ಹೋದಂತೆ ತನ್ನ ಸುತ್ತಮುತ್ತ ಇರುವ ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯ ಎಂಬುದನ್ನು ಮನಗಂಡ ರಾಜೇಂದ್ರ ಅವರು ವೈದ್ಯರಾದರೂ ನಾಗರಿಕ ಆಡಳಿತ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಹಾಗಾಗಿಯೇ ಎಂಬಿಬಿಎಸ್ಓದುತ್ತಿರುವಾಗಲೇ ನಾಗರಿಕ ಸೇವಾ ಪರೀಕ್ಷೆಗೂ ತಯಾರಿ ಮಾಡಲಾರಂಭಿಸಿದರು. ಪಟ್ಟಾಗಿ ಕೂತು ಯುಪಿಎಸ್ಸಿ ಎಕ್ಸಾಮ್ಗೆ ಸಿದ್ಧತೆ ಮಾಡಿಕೊಂಡರು. ವೈದ್ಯ ಕೋರ್ಸ್ಗೆ ಸಂಬಂಧಿಸಿದ ಅಧ್ಯಯನದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾಗಿರುವ ಅಧ್ಯಯನವನ್ನು ಮುಂದುವರಿಸಿದರು. ಇದಕ್ಕಾಗಿ ಕಠಿಣ ಪರಿಶ್ರಮಪಟ್ಟರು.

ಯುಪಿಎಸ್ಸಿ ಎಕ್ಸಾಮ್ರಿಸಲ್ಟ್ಗೊತ್ತಾಗುವ ಹೊತ್ತಿಗೆ ರಾಜೇಂದ್ರ ಹಳ್ಳಿಯಲ್ಲಿದ್ದರು. ಅವರ ತಾಯಿಗೆ ಮಗ ಯಾವ ಪರೀಕ್ಷೆಯನ್ನು ಪಾಸು ಮಾಡಿದ್ದಾನೆಂಬುದರ ಬಗ್ಗೆ ಸಣ್ಣ ಕಲ್ಪನೆಯೂ ಇರಲಿಲ್ಲ. 2012ರಲ್ಲಿ ಫರೀದಾಬಾದ್ನಲ್ಲಿ ಐಆರ್ಎಸ್ಅಧಿಕಾರಿಯಾಗಿ ನಿಯುಕ್ತಿಗೊಂಡರು. ಈ ವೇಳೆ, 2ನೇ ಬಾರಿಗೆ ಯುಪಿಎಸ್ಸಿ ಎಕ್ಸಾಮ್ಬರೆದು, ಐಎಎಸ್ಹುದ್ದೆಗೆ ಆಯ್ಕೆಯಾದರು. 2015ರಲ್ಲಿ ನಾಂದೇಡ್ಜಿಲ್ಲೆಯಲ್ಲಿ ಅಸಿಸ್ಟೆಂಟ್ಕಲೆಕ್ಟರ್ಆಗಿ ಕೆಲಸ ಆರಂಭಿಸಿದರು. ಬಳಿಕ 2017ರಲ್ಲಿ ಸೋಲಾಪುರ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದರು. 2018ರಲ್ಲಿ ಅವರನ್ನು ನಂದೂರಬಾರ್ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಯಿತು.

ತಮ್ಮ ಸಂಘರ್ಷದ ಬದುಕಿನ ಜೀವನದ ಸಾರವನ್ನೇ ಸೃಜನಶೀಲ ಸಾಹಿತ್ಯವಾಗಿಸಿರುವ ರಾಜೇಂದ್ರಮಿ ಏಕ್ಸ್ವಪ್ನ ಪಹಿಲ್‌’ ಎಂಬ ಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ಮೂವರು ಮಕ್ಕಳನ್ನು ಬೆಳೆಸಲು ತಮ್ಮ ತಾಯಿ ಪಟ್ಟ ಕಷ್ಟ, ಸಂಘರ್ಷದ ಬದಕನ್ನು ಚಿತ್ರಿಸಿದ್ದಾರೆ. ರಾಜೇಂದ್ರ ಅವರು ಈಗ ತಾಯಿ, ಪತ್ನಿ ಮತ್ತು ಮಕ್ಕಳ ಜತೆ ಸರಕಾರ ನೀಡಿರುವ ಕ್ವಾರ್ಟರ್ಸ್ನಲ್ಲಿದ್ದಾರೆ. ನಂದೂರಬಾರ್ಜಿಲ್ಲಾಧಿಕಾರಿಯಾಗುವ ಮುಂಚೆ ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅಲ್ಲೆಲ್ಲ ತಮ್ಮ ದಕ್ಷ  ಕಾರ್ಯನಿರ್ವಹಣೆಯ ದಟ್ಟ ಪ್ರಭಾವವನ್ನು ಬಿಟ್ಟು ಬಂದಿದ್ದಾರೆ. ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಬಡವರು, ನಿರ್ಗತಿಕರ ಬದುಕನ್ನು ಸಹನೀಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಈಗಲೂ ಅವರನ್ನು ಜನರು ಸ್ಮರಿಸಿಕೊಳ್ಳುತ್ತಾರೆ. ಇಂಥ ಜಿಲ್ಲಾಧಿಕಾರಿ ಪ್ರತಿ ಜಿಲ್ಲೆಗೆ ಸಿಕ್ಕರೆ ಕೋವಿಡ್ಏನು, ಯಾವುದೇ ಸಮಸ್ಯೆಯನ್ನೂ ಆಡಳಿತ ಅನಾಯಸವಾಗಿ ಎದುರಿಸಬಹುದು.