ಶುಕ್ರವಾರ, ಮಾರ್ಚ್ 22, 2019

ಆಪ್‌, ಅಣ್ಣಾ ಚಳವಳಿಯ ಬಳುವಳಿ

2011ರಲ್ಲಿ ಅಣ್ಣಾ ಹಜಾರೆ ಅವರು ಜನ ಲೋಕಪಾಲ್‌ ಜಾರಿಗಾಗಿ ದಿಲ್ಲಿಯಲ್ಲಿ ಸತ್ಯಾಗ್ರಹ ಆರಂಭಿಸಿದ್ದರು. ಈ ವೇಳೆ ಮಾಧ್ಯಮಗಳಲ್ಲಿ ಅರವಿಂದ್‌ ಕೇಜ್ರಿವಾಲ್‌ ಎಂಬ ಹೆಸರು ಆಗಾಗ ಕೇಳಲಾರಂಭಿಸಿತು. ಜನ ಲೋಕಪಾಲ್‌ ರೂಪಿಸಿದ ಪ್ರಮುಖರ ಪೈಕಿ ಕೇಜ್ರಿವಾಲ್‌ ಕೂಡ ಒಬ್ಬರಾಗಿದ್ದು, ಸರಕಾರದ ಜತೆಗಿನ ಮಾತುಕತೆಯಲ್ಲಿ ಭಾಗಿಯಾಗುತ್ತಿದ್ದರು. ಭ್ರಷ್ಟಾಚಾರದ ವಿರುದ್ಧದ ಈ ಚಳವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಲೋಕಪಾಲ್‌ ಅನುಷ್ಠಾನಕ್ಕೆ ಚಳವಳಿಯೇ ಇರಲಿ ಎಂಬ ಅಣ್ಣಾ ನಿಲುವಿಗೆ ಭಿನ್ನ ಅಭಿಪ್ರಾಯ ಹೊಂದಿದ್ದ ಕೇಜ್ರಿವಾಲ್‌ ಹಾಗೂ ಮತ್ತಿತರು ರಾಜಕೀಯ ಭಾಗವಾಗಿ ಅದನ್ನು ಗುರಿ ಸಾಧಿಸಬೇಕೆಂಬ ವಾದವನ್ನು ಪ್ರತಿಪಾದಿಸಿದರು. ಅಂತಿಮವಾಗಿ 2012ರ ನವೆಂಬರ್‌ 26ರಂದು ಅರವಿಂದ್‌ ಕೇಜ್ರಿವಾಲ್‌ ಹಾಗೂ ಇತರರು ಸೇರಿ 'ಆಮ್‌ ಆದ್ಮಿ ಪಾರ್ಟಿ' ಹುಟ್ಟು ಹಾಕಿದರು. 
ಭಾರತೀಯ ರಾಜಕಾರಣದಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಆಪ್‌ ಕ್ರಮೇಣ ಅದು ಕೂಡ ಇತರ ಪಕ್ಷ ಗಳಂತಾಯಿತು. ಪಕ್ಷ ದ ಸ್ಥಾಪಕರ ಗುಂಪಿನಲ್ಲಿದ್ದ ಪ್ರಶಾಂತ್‌ ಭೂಷಣ್‌, ಯೋಗೇಂದ್ರ ಯಾದವ್‌ ಅವರನ್ನು ಪಕ್ಷ ದಿಂದ ಹೊರ ಹಾಕಲಾಯಿತು.
 2013ರಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ 70 ಸ್ಥಾನಗಳ ಪೈಕಿ 28 ಸ್ಥಾನ ಗೆದ್ದುಕೊಂಡಿತು. ಯಾವುದೇ ಪಕ್ಷ ಕ್ಕೆ ಬಹುಮತ ಬಾರದ್ದರಿಂದ ಕಾಂಗ್ರೆಸ್‌ನ ಷರತ್ತುಬದ್ಧ ಬೆಂಬಲದೊಂದಿಗೆ ದಿಲ್ಲಿಯಲ್ಲಿ ಸರಕಾರ ರಚಿಸಿತು. ಅರವಿಂದ್‌ ಕೇಜ್ರಿವಾಲ್‌ ಸಿಎಂ ಆದರು. ಆದರೆ, ಜನ ಲೋಕಪಾಲ್‌ ವಿಧೇಯಕ ಜಾರಿಗೆ ಇತರ ಪಕ್ಷ ಗಳಿಂದ ಬೆಂಬಲ ದೊರೆಯದ್ದರಿಂದ ಕೇವಲ 49 ದಿನಗಳಲ್ಲೇ ಸರಕಾರ ಪತನವಾಯಿತು. 2015ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಆಪ್‌ ಭಾರೀ ಜಯ ಸಾಧಿಸಿತು. 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿತು. ಕೇಜ್ರಿವಾಲ್‌ ಮತ್ತೆ ಮುಖ್ಯಮಂತ್ರಿಯಾದರು. ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿದರೆ, ಬಿಜೆಪಿ ಗೆದ್ದಿದ್ದು ಕೇವಲ ಮೂರು ಕ್ಷೇತ್ರ. ದಿಲ್ಲಿ ಗೆಲುವು ಆಪ್‌ಗೆ ಹುಮ್ಮಸ್ಸು ತಂದಿದ್ದರಿಂದ ಪಂಜಾಬ್‌, ಹರಿಯಾಣ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷ ದ ನೆಲೆ ಭದ್ರಪಡಿಸಿಕೊಳ್ಳಲು ಸಾಧ್ಯವಾಯಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ ಕೇಜ್ರಿವಾಲ್‌ ಸ್ಪರ್ಧಿಸಿ ಸೋತರು. ಈ ಚುನಾವಣೆಯಲ್ಲಿ ಆಪ್‌ ದೇಶಾದ್ಯಂತ ಒಟ್ಟು 434 ಸ್ಥಾನಗಳಲ್ಲಿ ಸ್ಪರ್ಧಿಸಿ, ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಕಂಡಿತು. ಭಾರತೀಯ ರಾಜಕಾರಣದಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಆಪ್‌ ಕ್ರಮೇಣ ಅದು ಕೂಡ ಇತರ ಪಕ್ಷ ಗಳಂತಾಯಿತು. ಪಕ್ಷ ದ ಸ್ಥಾಪಕರ ಗುಂಪಿನಲ್ಲಿದ್ದ ಪ್ರಶಾಂತ್‌ ಭೂಷಣ್‌, ಯೋಗೇಂದ್ರ ಯಾದವ್‌ ಅವರನ್ನು ಪಕ್ಷ ದಿಂದ ಹೊರ ಹಾಕಲಾಯಿತು. ಭ್ರಷ್ಟಾಚಾರ ವಿರೋಧಿ ನೀತಿ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಸಮಜಾವಾದಿ ಪಕ್ಷ ದ ಧ್ಯೇಯಗಳಾಗಿವೆ. ಪೊರಕೆ ಪಕ್ಷ ದ ಚಿಹ್ನೆ. 

ಕಾಮೆಂಟ್‌ಗಳಿಲ್ಲ: