ಸೋಮವಾರ, ಮಾರ್ಚ್ 28, 2016

ಭಾವಕೋಶ ಕಳೆದುಕೊಂಡ ಹೋಳಿಯಾಟ!

ಆಕೆಯ ಕನಸುಗಳನ್ನು ಈಡೇರಿಸುವ ಸೌಭಾಗ್ಯ ನನಗಿಲ್ಲ ಎಂದುಕೊಂಡು ಇಡೀ ದಿನ ಅತ್ತ


- ಪ್ರದ್ಯುಮ್ನ
ಮನೆಯ ಕಿಟಕಿಯಾಚೆ, ಮಕ್ಕಳು ಕೈಯಲ್ಲಿ ಪಿಚಕಾರಿ ಹಿಡಿದು ಒಬ್ಬೊರಿಗೊಬ್ಬರು ಬಣ್ಣ ಎರಚುತ್ತಿದ್ದರು. ಅವರ ಮುಖದಲ್ಲಿ ಸಂತೋಷದ ಹೊನಲು. ಬಣ್ಣದ ಓಕುಳಿಯಾಟದಲ್ಲಿ ಮಿಂದೆದ್ದ ಅವರಿಗೆ ಜಗತ್ತಿನ ಪರಿವೇ ಇರಲಿಲ್ಲ. ಖಾಲಿಯಾದ ಪಿಚಕಾರಿಗಳನ್ನು ಬಣ್ಣದ ನೀರು ತುಂಬಿದ್ದ ಕ್ಯಾ್ಗಳಲ್ಲಿ ಅದ್ದಿ ಮತ್ತೆ ಓಡುತ್ತಿದ್ದರು. ಒಬ್ಬೊರ ಮೈ ಮೇಲೆ ಒಬ್ಬರು ಬೀಳುತ್ತಿದ್ದರು, ಏಳುತ್ತಿದ್ದರು. ಮುಖದ ತುಂಬ ಬಣ್ಣ ಬಣ್ಣದ ಭಾವ. ಕೇಕೆ ನಲಿವುಗಳಿಗೆ ಮಿತಿಯೇ ಇಲ್ಲದ ಕ್ಷಣಗಳವು. ಹೋಳಿಯಾಟವೇ ಅಂಥದ್ದು. ಬಣ್ಣಗಳ ಜತೆಗಿನ ಸಂವಹನ ನಿಮ್ಮನ್ನು ಅನುಭೂತಿಯ ಸಾಂಗತ್ಯಕ್ಕೆ ಕೊಂಡೊಯ್ಯುತ್ತದೆ. ಬಣ್ಣಗಳೇ ಹಾಗೆ, ನಿಮ್ಮ ನೆನಪುಗಳ ಪುಟ್ಟ ಗೂಡನ್ನು ಹೊಕ್ಕು, ಬೆಚ್ಚಿಗೆ ಕುಳಿತಿದ್ದ ನೆನಪುಗಳಿಗೆ ರೆಕ್ಕೆ ಕಟ್ಟುತ್ತುದೆ, ಗರಿ ಬಿಚ್ಚಿ ಹಾರಾಡಲು ಪ್ರೇರೇಪಿಸುತ್ತದೆ. ಬಣ್ಣ ಬಿಂಬಿಸುವ ಭಾವಗಳೇ ನೂರಾರು. ಪ್ರತಿ ಬಣ್ಣವೂ ಸಂಕೇತಿಸುವ ಅದರದ್ದೇ ಆದ ಭಾವನಾಲೋಕ. ಆದರೆ, ಈ ಬಿಳಿ ಬಣ್ಣವಿದೆಯಲ್ಲ ಅದು ಮಾತ್ರ ನನ್ನನ್ನು ಇಂದಿಗೂ ಕಾಡುತ್ತಲೇ ಇದೆ. ಅವಳು ಆ ಬಣ್ಣದ ಸೀರೆಯುಟ್ಟು ಎದುರಾದಾಗಲೆಲ್ಲ ನನ್ನ ಎದೆಯಲ್ಲಿ ನೋವುಗಳ ಕಂಪನ, ಅವಳ ಮುಖ ನೋಡಲು ಧೈರ್ಯವೂ ಸಾಲದು. ವಿಪರ್ಯಾಸ ಎಂದರೆ, ಆಕೆ ಎಂದೂ ಬಿಳಿ ಬಣ್ಣ ಇಷ್ಟಪಟ್ಟವಳಲ್ಲ. ಅವಳಿಗೆ ತಿಳಿ ನೀಲಿ, ಎಂದರೆ ಎಲ್ಲಿಲ್ಲದ ಇಷ್ಟ. ಅದು ಆಕಾಶದ ಬಣ್ಣ. ಆಕಾಶ ಎಂದರೆ ಮಿತಿ ಇಲ್ಲದ್ದು. ಆಕೆಯ ಕನಸು, ಮಹತ್ವಾಕಾಂಕ್ಷೆಗೂ ಇರಲಿಲ್ಲ ಎಲ್ಲೆ. ಆಕಾಶದಂತೆ ಸ್ವಚ್ಛಂದವಾಗಿ ಇರಬೇಕು ಎಂದುಕೊಂಡವಳು. ಆದರೆ, ಜೀವನದಲ್ಲಿ ನಾವು ಅಂದುಕೊಂಡಂತೆ ಏನೂ ನಡೆಯುವುದಿಲ್ಲವಲ್ಲ. ಅದು ಆಕೆಗೂ ಗೊತ್ತಿತ್ತು. ಆದರೆ ಕನಸು ಕಾಣುವುದು ಬಿಟ್ಟಿರಲಿಲ್ಲ. ತನ್ನೆಲ್ಲ ಕನಸುಗಳನ್ನು ನನ್ನ ಜತೆ ಹಂಚಿಕೊಂಡಿದ್ದಳು. ಆಕಾಶವನ್ನು ಹುಚ್ಚು ರೀತಿಯಲ್ಲಿ ಇಷ್ಟಪಡುತ್ತಿದ್ದ ಅವಳು, ಗಗನ ಸಖಿಯಾಗಿ ದಿನವೆಲ್ಲ ಆಕಾಶದಲ್ಲಿ ಹಾರಾಡುತ್ತ, ದೇಶದಿಂದ ದೇಶಕ್ಕೆ ಸುತ್ತತ್ತಲೇ ಇರಬೇಕೊ ಕಣೋ ಎಂದು ದೊಡ್ಡದಾಗಿ ನಗುತ್ತಿದ್ದಳು.
ನನ್ನ ಅವಳ ಗೆಳೆತನ ತುಂಬ ಹಳೆಯದ್ದು. ಅಂದರೆ, ನಾವಿಬ್ಬರೂ ಒಟ್ಟಾಗಿಯೇ ಓದುತ್ತಿದ್ದೆವು. ನಮ್ಮ ನಡುವಿನ ಸಂಬಂಧಕ್ಕೆ ಹೆಸರೇ ಇರಲಿಲ್ಲ. ನೀವು ಅದನ್ನು ಯಾವುದೇ ಸಂಬಂಧದ ಚೌಕಟ್ಟಿಗೆ ಕಟ್ಟಿ ಹಾಕಲು ಸಾಧ್ಯವಿರಲಿಲ್ಲ. ಯಾವುದೇ ಸಂಬಂಧದ ಹೆಸರು ಹೇಳಿದರೂ ಅದನ್ನು ಮೀರಿದ ಅನುಬಂಧ ನಮ್ಮಿಬ್ಬರದ್ದು. ಆದರೆ, ಆಕೆಯ ಕುಟುಂಬ ಮಾತ್ರ ತುಂಬ ತುಂಬ ಟ್ರೆಡೀಷನ್. ಸಂಪ್ರದಾಯಸ್ಥ ಕುಟುಂಬದಲ್ಲಿ ಈಕೆ ಕಾಣುವ ಕನಸುಗಳಿಗೆ ಬೆಲೆ ದೊರೆಯುತ್ತಾ ಎಂದು ಒಂದೊಂದು ಸಾರಿ ನನಗೆ ಭಯವಾಗುತ್ತಿತ್ತು. ಆದರೆ ಆಕೆಗೆ ಹುಂಬ ಧೈರ್ಯ. ತಾನು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತೇನೆಂಬ ಹುಚ್ಚು ಭರವಸೆ. ಆಕೆಯ ಇಷ್ಟಪಟ್ಟಿದ್ದೆಲ್ಲ ನೆರವೇರಲಿ ಎಂಬ ಸಣ್ಣ ಪ್ರಾರ್ಥನೆ ನನ್ನಿಂದ. ನಮ್ಮಿಬ್ಬರ ನಡುವಿನ ಸಲುಗೆ ಬೇರೆಯವರ ಕಣ್ಣಿಗೆ ಕುಕ್ಕುತ್ತಿತ್ತು. ಕಣ್ಣು ಕುಕ್ಕಿಸಿಕೊಂಡವರು ಸುಮ್ಮನಿದ್ದಾರೆಯೇ? ಏನು ಆಗಬೇಕಿತ್ತೋ.. ಅದೇ ಆಯ್ತು. ನಮ್ಮಿಬ್ಬರ ನಿರ್ವಾಜ್ಯ ಗೆಳತನಕ್ಕೆ ಕಲ್ಲು ಹಾಕುವ ಕೆಲಸವಾಗಿತ್ತು. ಹೀಗಿದ್ದಾಗ್ಯೂ.. ಕಾಲೇ್ನಲ್ಲಿ ನಾನು ಆಕೆ ಒಟ್ಟೊಟ್ಟಿಗೆ ಇರುತ್ತಿದ್ದೆವು. ಅದೊಂದು ದಿನ ಏನು ಆಯ್ತೋ ಗೊತ್ತಿಲ್ಲ. ಲೈಬ್ರರಿಯಲ್ಲಿ ಕೂತಿದ್ದವನ್ನು ಹೊರಗೆ ಕರೆ ತಂದು, ``ನನ್ನನ್ನು ಮದುವೆ ಆಗ್ತಿಯಾ? ನಿನ್ನ ಜತೆಗಿದ್ದರೆ ನನ್ನ ಕನಸೆಲ್ಲ ಈಡೇರುತ್ತದೆ,'' ಎಂದು ಒಂದೇ ಸವನೆ ಅಳಲಾರಂಭಿಸಿದಳು. ಎಂದೂ ಆ ರೀತಿಯಲ್ಲಿ ಯೋಚಿಸದ ನನಗೆ ಏನು ಹೇಳಬೇಕೋ... ಏನು ಹೇಳಬಾರದೋ ಒಂದು ಗೊತ್ತಾಗಲಿಲ್ಲ. ಆಕೆಯ ಕಣ್ಣೀರು ಮಾತ್ರ ಧಾರಾಕಾರವಾಗಿದೆ. ``ನೀನು ಮೊದಲು ಅಳುವುದನ್ನು ನಿಲ್ಲಿಸು,'' ಎಂದು ಸಂತೈಸಿದೆ. ನಮ್ಮಿಬ್ಬರ ಸಂಬಂಧಕ್ಕೆ ಹೊಸ ಅರ್ಥ, ಹೆಸರು ಕೊಡಬೇಕೆಂದು ನಿರ್ಧರಿಸಿಕೊಂಡೇ ಬಂದವಳಂತೆ ಕಾಣುತ್ತಿತ್ತು ಆಕೆ. ಆದರೆ, ನನಗೆ ಮಾತ್ರ ಆಕೆ ಹೀಗೇಕೆ ಒಮ್ಮಿಂದೊಮ್ಮೆ ಈ ರೀತಿ ಹೇಳುತ್ತಿದ್ದಾಳೆ ಎಂದು ಗೊಂದಲ. ಸ್ವಲ್ಪ ಹೊತ್ತಿನ ಬಳಿಕ ಸುಧಾರಿಸಿಕೊಂಡು, ಆಕೆ ಎಲ್ಲ ಹೇಳಿದಳು. ``ನೋಡೋ.. ನಾನು ಏನೆಲ್ಲ ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಹೇಗೆಲ್ಲ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದೇನೆ. ಆದರೆ, ನಮ್ಮ ಮನೆಯಲ್ಲಿ ಮಾತ್ರ ಮದುವೆ ಮಾಡಿಕೊಡಲು ನಿರ್ಧರಿಸಿದ್ದಾರೆ. ನನ್ನ ಅತ್ತೆಯ ಮಗನಿಗೆ,'' ಎಂದವಳೇ ಮಾತು ಹೊರಡಲಾರದೆ ಮತ್ತೆ ಅಳುವಿಗೆ ಶರಣಾದಳು. ಈಗ ನನಗೆಲ್ಲ ಅರ್ಥವಾಗಿತ್ತು. ಬಹುಶಃ ಈಕೆಯ ಗಗನಸಖಿಯಾಗಿ ಆಕಾಶದಲ್ಲಿ ಹಾರಾಡುತ್ತ, ದೇಶ ದೇಶ ಸುತ್ತುವ ಆಸೆ ಮತ್ತು ನನ್ನೊಂದಿಗಿನ ಈ ಒಡನಾಟವೇ ಆಕೆಯ ಮನೆಯವರು ಇಂಥ ನಿರ್ಧಾರಕ್ಕೆ ಬರಲು ಕಾರಣ. ಆದರೆ ನಾನು ನಿಜವಾಗಲೂ ಆಕೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಬಲ್ಲೆನಾ? ಅಂಥ ಶಕ್ತಿ ನನಗಿದೆಯಾ? ನನ್ನ ಜೀವನವೇ ಇನ್ನೂ ಒಂದು ಹಂತಕ್ಕೆ ಬರಬೇಕು. ಇದರ ಮಧ್ಯೆಯೇ ಆಕೆಯ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳಲು ಶಕ್ತನಾ? ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವಳನ್ನು ಪ್ರೀತಿಸುತ್ತಿದ್ದೇನಾ.. ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಓಡಲಾರಂಭಿಸಿದ್ದವು. ನಾನು ಕೇಳಿಕೊಂಡ ಆ ಕೊನೆಯ ಪ್ರಶ್ನೆ ಮಾತ್ರ ತುಸು ಹೊತ್ತು ಯೋಚಿಸುವಂತೆ ಮಾಡಿತು.  ಆಕೆಯೆಡೆಗೆ ನನ್ನಲ್ಲಿರುವ ಭಾವ ಪ್ರೀತಿಯದ್ದಾ.. ಬರೀ ಗೆಳೆತನದ್ದಾ..? ಹೀಗೆ ಪೂರ್ತಿ ಕ್ಪ್ಯೂಷ್. ಯಾವುದನ್ನು ನಿರ್ಧರಿಸಲಿಕ್ಕಾಗದ ಕ್ಷಣಗಳು ಅವು. ``ನನಗೆ ಒಂದಿಷ್ಟು ಸಮಯ ಕೊಡು. ಯೋಚಿಸಿ ಹೇಳುತ್ತೇನೆ,'' ಎಂದು ಆಕೆಯನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿಕೊಟ್ಟೆ.
ಮನೆಗೆ ಹೋದವನಿಗೆ ತಲೆ ತುಂಬ ಇದೇ ವಿಚಾರಗಳ ಸಂಘರ್ಷ. ಕೊನೆಗೂ ಒಂದು ನಿರ್ಧಾರಕ್ಕೆ ಬಂದೆ. ಹೌದು... ನಾನು ಅವಳನ್ನು ಇಷ್ಟಪಡುತ್ತೇನೆ. ಆದರೆ, ಅದಕ್ಕೊಂದು ರೂಪವಿರಲಿಲ್ಲ ಅಷ್ಟೆ. ಅವಳೇ ಅದಕ್ಕೊಂದು ಸ್ಪಷ್ಟವಾದ ರೂಪ ಕೊಟ್ಟಿದ್ದಾಳೆ. ಇನ್ನೇನು ಕಾಲೇ್ ಮುಗಿಯುವ ಹಂತದಲ್ಲಿದೆ. ಒಂದಿಷ್ಟು ಕಷ್ಟಪಟ್ಟರೆ ಒಳ್ಳೆಯ ಕೆಲಸ ಪಡೆಯುವ ಸಾಮರ್ಥ್ಯ ನನ್ನಲ್ಲಿದೆ. ಆಕೆಯ ಕನಸು ಈಡೇರಿಸುವಷ್ಟು ಸಶಕ್ತನಾಗಬಲ್ಲೆ. ನಮ್ಮಿಬ್ಬರ ನಡುವಿನ ಈ ನಿರ್ವಾಜ್ಯ ಸಂಬಂಧಕ್ಕೆ ಒಂದು ಅರ್ಥ ಹೊಳೆಯುತ್ತಿದೆ. ಅದಕ್ಕೊಂದು ಚೌಕಟ್ಟು ವಿಧಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ ಎಂದು ನಿರ್ಧರಿಸಿಕೊಂಡೆ.
ಆದರೆ, ವಿಧಿಯಾಟ ಬೇರೆ ಇತ್ತು. ನನ್ನ ನಿರ್ಧಾರ ತಿಳಿಸಲು ನಾಲ್ಕೈದು ದಿನ ತೆಗೆದುಕೊಂಡೆ. ಕೊನೆಗೆ, `ನಿನ್ನೊಂದಿಗೆ ಹೆಜ್ಜೆ ಹಾಕಲು ನಾನು ಸಿದ್ಧ' ಎಂಬ ವಾಕ್ಯವನ್ನು ಆಕೆಯ ಮುಂದೆ ಕಣ್ಣುಮ್ಚುಚಿಕೊಂಡು ಹೇಳಬೇಕೆಂದುಕೊಂಡು ಕಾಲೇ್ಗೆ ಬಂದೆ. ಆದರೆ ಅಲ್ಲಿ ಆಕೆಯಿಲ್ಲ. ಒಂದು ವಾರವಾದರೂ ಆಕೆ ಕಾಲೇ್ನತ್ತ ಸುಳಿಯತ್ತಲೇ ಇಲ್ಲ. ಎಲ್ಲಿ ಹೋದಳು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆಕೆಯ ಮನೆಗೆ ಹೋಗಿ ಕೇಳುವಷ್ಟು ಧೈರ್ಯ ನನ್ನಲ್ಲಿ ಇರಲಿಲ್ಲ. ಕೊನೆಗೂ ಗೊತ್ತಾಯಿತು. ಆಕೆಯನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿದ್ದಾರೆ. ಮುಂದಿನ ವಾರದಲ್ಲಿ ಮದುವೆ ಇದೆ ಎಂಬ ಮಾಹಿತಿ. ಅಲ್ಲಿಗೆ ಸ್ಪಷ್ಟವಾಗಿತ್ತು. ಇನ್ನು ಆಕೆ ನನಗೆ ಸಿಗಲ್ಲ. ಆಕೆಯ ಕನಸುಗಳನ್ನು ಈಡೇರಿಸುವ ಸೌಭಾಗ್ಯ ನನಗಿಲ್ಲ ಎಂದುಕೊಂಡು ಇಡೀ ದಿನ ಅತ್ತೆ. ಆದರೆ, ಜೀವನ ಮುಂದೆ ಹೋಗಬೇಕಲ್ಲ. ದಿನಗಳು ಉರುಳಿದವು, ವರ್ಷವೂ ಕಳೆಯಿತು. ಅಂದೂ ಹೋಳಿ ಇತ್ತು. ಎಲ್ಲೆಲ್ಲೂ ಬಣ್ಣಗಳ ರಂಗೋಲಿ. ಅಂದು ಹೀಗೆಯೇ ಮಕ್ಕಳ ಹೋಳಿಯಾಟ ನೋಡುತ್ತ ನಿಂತಿದ್ದವನಿಗೆ ಎದುರಾದವಳು ಅವಳೇ. ಅರೇ ಏನಾಯಿತು...? ಹೇಗಿದ್ದವಳು ಹೇಗಾಗಿದ್ದಾಳೆ. ಬಿಳಿ ಬಣ್ಣ ಕಂಡರೆ ಆಗದವಳು ಅದೇ ಬಣ್ಣದ ಸೀರೆ ಉಟ್ಟುಕೊಂಡಿರುವುದ್ಯಾಕೆ? ಛೇ ಅವಳ ಜೀವನದಲ್ಲಿ ಏನೆಲ್ಲ ಅನಾಹುತಗಳಾಗಿರಬಹುದು. ಅವಳ ಕನಸುಗಳಿಗೆ ಕೊಳ್ಳಿ ಇಟ್ಟವರಾರು ಎಂದು ಅವಳನ್ನೇ ಕೇಳಬೇಕು ಎಂದುಕೊಂಡೆ. ಆದರೆ, ಆಕೆ ಮಾತ್ರ, ನಾನು ಪರಿಚಯ ಇಲ್ಲದವನಂತೆ, ನೋಡಿಯೋ ನೋಡಿದಂತೆ ಹೊರಟೇ ಹೋದಳು. ಆಕೆಯ ಮುಖದಲ್ಲೀಗ ಭಾವಗಳಿಲ್ಲ. ಕಣ್ಣುಗಳಲ್ಲಿ ಕನಸುಗಳಿಲ್ಲ. ನಿರ್ಭಾವುಕತೆಯನ್ನು ಹೊದ್ದುಕೊಂಡವಳಂತಿದ್ದಾಳೆ. ಆಕೆಯನ್ನು ನೋಡಿದ ಮೇಲೆ ತಪ್ಪಿತಸ್ಥ ಭಾವ ನನ್ನದು. ಈಗ ಹೋಳಿಗಳು ನನ್ನ ಪಾಲಿಗೆ ಅರ್ಥ ಕಳೆದುಕೊಂಡಿವೆ. ಎಲ್ಲ ಬಣ್ಣಗಳ ನಡುವೆಯೂ ಬಿಳಿ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆಕೆಯ ಬಾಳಿನಲ್ಲಿ ಬಣ್ಣ ಬಣ್ಣಗಳ ಚಿತ್ತಾರ ಬಿಡಿಸಬೇಕಿತ್ತು ನಾನು. ಅವಳ ಇಂದಿನ ಪರಿಸ್ಥಿತಿಗೂ ನಾನು ಕೂಡ ಕಾರಣ ಎಂದು ನೆನಪಾದಾಗಲೆಲ್ಲ ಕಣ್ಣು ತೇವವಾಗುತ್ತದೆ.
ಮೇರೆ ಲಿಯೇ ತುಮ್ಹಾರಿ ಯಾದೇ ಹೀ ಕಾಫೀ ಹೈ
ಮೊಹಬ್ಬ್ ಮೇ ಜರೂರಿ ಮುಲಾಖ್ ನಹೀ
--------------------
Published in VK on 28th March 2016 edition

ಮಂಗಳವಾರ, ಮಾರ್ಚ್ 22, 2016

ಕವಿತೆ

ಕವಿತೆ ನನ್ನೊಳಗಿನ
ಕಾಣದ ಕಡಲಿನ ಹುಡುಕಾಟ
ಭಾವಗಳ ಜತೆ ಚೆಲ್ಲಾಟ
ಎಲ್ಲೆ ಮೀರಿದ ಮೌನದ ಚೀರಾಟ
ಮಾತು ಮೌನವಾಗಿ,
ಮೌನ ಮಾತಾಗುವ ಹೊತ್ತಲ್ಲಿ
ಮೆಲ್ಲನೆ ಉಸಿರು ಪಿಸುಗುಟ್ಟುವ ಕ್ಷಣವೇ ಕವಿತೆ