ಮಂಗಳವಾರ, ಸೆಪ್ಟೆಂಬರ್ 29, 2009

ಗಜಲ್ ಮತ್ತು ಕವನ

ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ,
ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ

ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು,
ಬಿಕ್ಕಳಿಸಿ, ಬಿಕ್ಕಳಿಸಿ ಅಳುವ ಮುನ್ನ ನೀ ಜಾರಿ ಹೋಗಬೇಡ

ಇರಳು ಕವಿಯಲಿ, ಚಂದ್ರ ಮೂಡಲಿ, ನಕ್ಷತ್ರ ಮಿನುಗಲಿ,
ಕ್ಷೀರಪಥದಲಿ ಮಿಂದೆದ್ದು ಬರುವೆ, ಅಲ್ಲಿವರೆಗೂ ಹೋಗಬೇಡ

ಬೆರಳುಗಳು ಸುಡುತ್ತಿವೆ, ಸಿಗರೇಟಿನ ನಿಗಿ ನಿಗಿ ಬೆಂಕಿಗೆ,
ಚಿಮ್ಮುವ ಹೊಗೆಯಲಿ ನಿನ್ನದೇ ರೂಪ ಬಿಟ್ಟು ಹೋಗಬೇಡ

ದಾರಿ- ದಾರಿ ನಡುವೆ ಕಲ್ಲು ಮುಳ್ಳೇ ಇರಲಿ, ನೀ ಕಾಲ್ ಇಡುವಲ್ಲಿ
ನಾ ಕೈಯಿಡುವೆ, ನೋವು ನನಗಿರಲಿ, ನಲಿವು ನಿನಗಿರಲಿ, ಹೋಗಬೇಡ

ಎದೆಯ ಮೇಲೆ ಕಾಲಿಟ್ಟು, ಒಳಗೆ ಬೆಂಕಿಯಿಟ್ಟು ಹೋಗಲೇಬೇಕೆನ್ನುವಾಗ
ಮರೆಯಬೇಡ, ಕೆಂಪು ಸೂರ್ಯನ ಮೇಲಿಟ್ಟ ಆಣೆ, ನೀ ಹೋಗಬೇಡ

ಕಂಪ್ಯೂಟರ್ ಪರದೆ ತುಂಬೆಲ್ಲಾ ನಿನ್ನದೆ ಬಿಂಬ, ಆದರೂ
ಬೆರಳು 'ಡಿಲಿಟ್ ಕೀ' ಮೇಲೆ ಊರುತ್ತಿದೆ, ತೊರೆದು ಹೋಗಬೇಡ



ಅಲ್ಲಿ- ಇಲ್ಲಿ

ಅಲ್ಲಿ ದ್ವéೇಷವಿದೆ, ರೋಷವಿದೆ
ತಮ್ಮೊಳಗೆ ಹೊಡೆದಾಡಿ ಅಂತ್ಯವಾಗುವ ಆಪಾಯವಿದೆ

ಇಲ್ಲಿ ಸ್ನೇಹವಿದೆ, ಪ್ರೇಮವಿದೆ
ತ್ಯಾಗದ ಆರಿವಿದೆ, ಒಂದುಗೂಡಿಸುವ ಧ್ವನಿಯಿದೆ

ಅಲ್ಲಿ ತಲ್ಲಣವಿದೆ, ತವಕವಿದೆ,
ಕ್ರೂರ ಅಟ್ಟಹಾಸವಿದೆ, ಅದರಲ್ಲೇ ನೆತ್ತರದ ಹಸಿವಿದೆ

ಇಲ್ಲಿ ತಂಪಿದೆ, ತಂಗಾಳಿಯಿದೆ,
ನೊಂದವರಿಗೆ ನೆರವಾಗುವ ನೆರಳಿದೆ, ಒಲವಿದೆ

ಅಲ್ಲಿ ಬಿಸಿಲಿದೆ, ಬವಣೆಯಿದೆ,
ಒಂದಾಗುವವರ ಬೆನ್ನುಬೀಳುವ ಹಿಂಡೇ ಇದೆ

ಇಲ್ಲಿ ಕರುಣೆಯಿದೆ, ಅನುಕಂಪವಿದೆ,
ಒಲ್ಲೆ ಎಂದವರಿಗೂ ಹಿಡಿ ಪ್ರೀತಿ ಕೊಡವವರ ದಂಡೇ ಇದೆ

ಅಲ್ಲಿ- ಇಲ್ಲಿ ಇವೆರಡು ನಮ್ಮೊಳಗಿವೆ,
ಮನಸ್ಸು, ಹೃದಯದೊಳು ಅವಿತಿವೆ.