ಶುಕ್ರವಾರ, ಮಾರ್ಚ್ 15, 2019

AGP- ಅಸ್ಸಾಮ್ ಗಣ ಪರಿಷತ್- ವಿದ್ಯಾರ್ಥಿ ಚಳವಳಿಯಿಂದ ವಿಧಾನಸಭೆವರೆಗೆ...

ಸ್ವತಂತ್ರ ಭಾರತದಲ್ಲಿ ಅನೇಕ ಚಳವಳಿಗಳು ನಡೆದಿವೆ. ಆ ಪೈಕಿ ಕೆಲವು ಚಳವಳಿಗಳು ಕ್ರಮೇಣ ರಾಜಕೀಯ ಪಕ್ಷ ಗಳಾಗಿ ಬದಲಾಗಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಅಸ್ಸಾಮ್‌ ಗಣ ಪರಿಷತ್‌. ಈಶಾನ್ಯ ಭಾರತದ ಪ್ರಮುಖ ರಾಜ್ಯವಾಗಿರುವ ಅಸ್ಸಾಮ್‌ನಲ್ಲಿ ರಾಜಕಾರಣ ಇತರ ರಾಜ್ಯಗಳಂತಲ್ಲ. ನೆರೆಯ ರಾಷ್ಟ್ರ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ನಿರಂತರವಾಗಿ ಈ ರಾಜ್ಯದಲ್ಲಿ ನುಸುಳುತ್ತಾರೆ. ಬಹುತೇಕ ಎಲ್ಲ ಚುನಾವಣೆಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಯುವ ನೀತಿಯ ಚುನಾವಣಾ ವಿಷಯವಸ್ತುವಾಗಿರುತ್ತದೆ. ಎಜಿಪಿಯ ಪೂರ್ವಾಶ್ರಮವಾದ ಆಲ್‌ ಅಸ್ಸಾಮ್‌ ಸ್ಟುಡೆಂಟ್‌ ಯೂನಿಯನ್‌(ಎಎಎಸ್‌ಯು) 1970ರ ದಶಕದಲ್ಲಿ ಅಕ್ರಮ ಬಾಂಗ್ಲಾದೇಶಿಗರ ವಿರುದ್ಧ ಚಳವಳಿ ಆರಂಭಿಸಿತು. ವಿದ್ಯಾರ್ಥಿ ಸಂಘದ ಈ ಪ್ರಯತ್ನಕ್ಕೆ ಅಸ್ಸಾಮ್‌ನ ಇತರ ಸಂಘ ಸಂಸ್ಥೆಗಳಿಂದಲೂ ಅಪೂರ್ವ ಬೆಂಬಲ ವ್ಯಕ್ತವಾಯಿತು. ಚಳವಳಿ ತೀವ್ರ ಸ್ವರೂಪ ಪಡೆಯುತಿತದ್ದಂತೆ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ಅಸ್ಸಾಮ್‌ ಒಪ್ಪಂದ ಏರ್ಪಡುವುದಕ್ಕೆ ಕಾರಣವಾದರು. ಅಂದರೆ, 1985 ಆಗಸ್ಟ್‌ 15ರಂದು ಕೇಂದ್ರ ಸರಕಾರ ಮತ್ತು ಎಎಎಸ್‌ಯು ಮಧ್ಯೆ ಒಪ್ಪಂದವಾಯಿತು. ಮುಂದೆ ಇದೇ ವರ್ಷದ ಅಕ್ಟೋಬರ್‌ನ 13ರಿಂದ 14ವರೆಗೆ ತಿಂಗಳಲ್ಲಿ ನಡೆದ ಗೋಲಾಘಾಟ್‌ ಸಮಾವೇಶದಲ್ಲಿ ವಿದ್ಯಾರ್ಥಿ ಸಂಘವನ್ನು ವಿಸರ್ಜಿ ಅಸ್ಸಾಮ್‌ ಗಣ ಪರಿಷತ್‌ ಎಂಬ ರಾಜಕೀಯ ಪಕ್ಷ ವನ್ನು ಆರಂಭಿಸಲಾಯಿತು. ಪ್ರಫುಲ್‌ ಕುಮಾರ್‌ ಮಹಾಂತ ಅವರು ಪಕ್ಷ ದ ಅಧ್ಯಕ್ಷ ರಾಗಿ ಆಯ್ಕೆಯಾದರು. 1985ರಲ್ಲಿ ನಡೆದ ಅಸ್ಸಾಮ್‌ ವಿಧಾನಸಭೆ ಚುನಾವಣೆಯಲ್ಲಿ ಈ ಹೊಸ ಪಕ್ಷ ಸ್ಪರ್ಧಿಸಿತಲ್ಲದೇ, 126 ಸ್ಥಾನಗಳ ಪೈಕಿ 66 ಸ್ಥಾನಗಳನ್ನು ಗೆದ್ದುಕೊಂಡು ಸರಕಾರ ರಚಿಸಿತು. ಮುಂದೆ 1996ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಗೆಲುವು ಸಾಧಿಸಿತು. ಪಕ್ಷ ದ ನಾಯಕ ಪ್ರಫುಲ್‌ ಕುಮಾರ್‌ ಮಹಾಂತ ಅವರು 1985ರಿಂದ 1990 ಮತ್ತು 1996ರಿಂದ 2001ರಲ್ಲಿ ಎರಡು ಅವಧಿಗೆ ಮುಖ್ಯಮಂತ್ರಿಯಾದರು. ಜತೆಗೆ, ಅತ್ಯಂತ ಕಿರಿಯ ವಯಸ್ಸಿನಲ್ಲಿ ಮುಖ್ಯಮಂತ್ರಿಯಾದ ಎಂಬ ಹೆಗ್ಗಳಿಕೆ ಮಹಾಂತ ಅವರಿಗಿದೆ. ಎರಡ್ಮೂರು ಬಾರಿ ಈ ಪಕ್ಷ ಒಡೆದು ಹೋಳಾಗಿದೆ. ಅಸ್ಸಾಮ್‌ನ ಹಾಲಿ ಮುಖ್ಯಮಂತ್ರಿ ಸರ್ಬಾನಂದ್‌ ಸೋನವಾಲಾ ಅವರು ಅಸ್ಸಾಮ್‌ ಗಣ ಪರಿಷತ್‌ನ ಫೈರ್‌ ಬ್ರಾಂಡ್‌ ನಾಯಕ. ಆದರೆ, ಭಿನ್ನಾಭಿಪ್ರಾಯದಿಂದಾಗಿ ಅವರು 2011ರಲ್ಲಿ ಬಿಜೆಪಿ ಸೇರಿದ್ದರು. 


ಕಾಮೆಂಟ್‌ಗಳಿಲ್ಲ: