ಮಂಗಳವಾರ, ಮಾರ್ಚ್ 12, 2019

ಕಾಂಗ್ರೆಸ್, ಬಿಜೆಪಿಗೆ ಪರ್ಯಾಯ ಶಕ್ತಿ ಸಿಪಿಐ(ಎಂ)

ಸಿಪಿಐ(ಎಂ) ಅನ್ನು ಸಾಮಾನ್ಯವಾಗಿ ಸಿಪಿಎಂ ಎಂದು ಕರೆಯುತ್ತಾರೆ. ಕಮ್ಯುನಿಸ್ಟ್‌ ಪಾರ್ಟಿ ಇಂಡಿಯಾ(ಸಿಪಿಐ)ದಿಂದ ಪ್ರತ್ಯೇಕಗೊಂಡು 1964 ಅಕ್ಟೋಬರ್‌ 31ರಂದು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮಾರ್ಕ್ಸ್‌ವಾದ) ರಚನೆಯಾಯಿತು. 1964ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಕಮ್ಯುನಿಸ್ಟ್‌ ಪಾರ್ಟಿ ಇಂಡಿಯಾದ 7ನೇ ಸಮಾವೇಶದಲ್ಲಿ ಪಕ್ಷ ಇಬ್ಭಾಗವಾಯಿತು. ಸದ್ಯ, ಸಿಪಿಎಂ ಕೇರಳದಲ್ಲಿ ಅಧಿಕಾರದಲ್ಲಿದ್ದು, ಒಟ್ಟು 8 ರಾಜ್ಯಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯದಲ್ಲಿ ದಟ್ಟ ಪ್ರಭಾವ ಹೊಂದಿರುವ ಸಿಪಿಎಂ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಪಾಲಿಟ್‌ಬ್ಯೂರೊ ಈ ಪಕ್ಷ ದ ಅತ್ಯುನ್ನತ ನಿರ್ಧಾಕ ಕೈಗೊಳ್ಳುವ ಸಂಸ್ಥೆಯಾಗಿದೆ. ಸಿಪಿಎಂನ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ್‌ ಯಚೂರಿ ಅವರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭೆಯಲ್ಲಿ ಪಿ. ಕರುಣಾಕರನ್‌ ಅವರು ಪಕ್ಷ ದ ನಾಯಕರಾಗಿದ್ದಾರೆ. ಲೋಕಸಭೆಯಲ್ಲಿ 9, ರಾಜ್ಯಸಭೆಯಲ್ಲಿ 5 ಸಂಸದರನ್ನು ಹೊಂದಿರುವ ಸಿಪಿಎಂ, ಕೇರಳದಲ್ಲಿ 59, ತ್ರಿಪುರಾದಲ್ಲಿ 16 ಮತ್ತು ಪಶ್ಚಿಮ ಬಂಗಾಳದಲ್ಲಿ 26 ಶಾಸಕರನ್ನು ಹೊಂದಿದೆ. ಇನ್ನುಳಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 7 ಶಾಸಕರು ಸಿಪಿಎಂನಿಂದ ಆಯ್ಕೆಯಾಗಿದ್ದಾರೆ. ಮಾರ್ಕ್ಸ್‌ ಮತ್ತು ಲೆನಿನ್‌ ವಾದ ಸಿಪಿಎಂ ಪ್ರಮುಖ ಸಿದ್ಧಾಂತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ನೇತೃತ್ವದಲ್ಲಿ ದೀರ್ಘಾವಧಿಯವರೆಗೆ ಸಿಪಿಎಂ ಅಧಿಕಾರದಲ್ಲಿತ್ತು. ಹಾಗೆಯೇ, 1996ರಲ್ಲಿ ಪ್ರಧಾನಿ ಹುದ್ದೆ ಸಿಪಿಎಂ ನಾಯಕರಿಗೆ ಒಲಿದು ಬಂದಿತ್ತು. ರಾಷ್ಟ್ರದಾದ್ಯಂತ ಪಕ್ಷ ವನ್ನು ಬಲಪಡಿಸುವ ಅನೇಕ ಅವಕಾಶಗಳನ್ನು ಕೈ ಚೆಲ್ಲಿದೆ. ಇತ್ತೀಚಿನ ವರ್ಷಗಲ್ಲಂತೂ ಗಟ್ಟಿ ಬೇರುಗಳನ್ನು ಹೊಂದಿದ್ದ ಪಶ್ಚಿಮ ಬಂಗಾಳ, ತ್ರಿಪುರಾದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕೇರಳ ಮಾತ್ರ ಸಿಪಿಎಂ ಇದೀಗ ಆಸರೆಯಾಗಿ ಉಳಿದಿದೆ. ಇ ಎಂ ಎಸ್‌ ನಂಬೂದರಿಪಾದ್‌, ಹರಿಕಿಶನ್‌ ಸಿಂಗ್‌ ಸುರ್ಜಿತ್‌, ಪ್ರಕಾಶ್‌ ಕಾರಟ್‌, ಜ್ಯೋತಿ ಬಸು, ಬುದ್ಧದೇವ್‌ ಭಟ್ಟಾಚಾರ್ಯ, ಮಾಣಿಕ್‌ ಸರ್ಕಾರ್‌, ಈಗ ಕೇರಳ ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್‌, ಸೀತಾರಾಮ್‌ ಯಚೂರಿ ಅವರು ಸಿಪಿಎಂನ ಪ್ರಮುಖ ನಾಯಕರು. ಕುಡುಗೋಲು ಮತ್ತು ಸುತ್ತಿಗೆಯು ಈ ಪಕ್ಷ ದ ಚುನಾವಣಾ ಚಿಹ್ನೆಯಾಗಿದೆ. 

13 ದಿನ ಬಳಿಕ 13 ತಿಂಗ್ಳು ಪ್ರಧಾನಿಯಾದ್ರು ವಾಜಪೇಯಿ

ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅತಂತ್ರ ಪಾರ್ಲಿಮೆಂಟ್‌ಗೆ ಕಾರಣವಾಗಿದ್ದರಿಂದಲೇ ಮತ್ತೊಂದು ಚುನಾವಣೆಯನ್ನು ದೇಶ ಎದುರಿಸಬೇಕಾಯಿತು. ಆದರೆ, ಈ ಚುನಾವಣೆಯಲ್ಲೂ ಯಾವುದೇ ಪಕ್ಷ ಅಥವಾ ಕೂಟಕ್ಕೆ ಬಹುಮತ ಬರಲಿಲ್ಲ. ಹಾಗಾಗಿ ರಾಜಕೀಯ ಅಸ್ಥಿರತೆ ಮುಂದುವರಿಯಿತು. ಅಲ್ಲದೆ ಕೇವಲ ಎರಡು ವರ್ಷದಲ್ಲೇ ಮತ್ತೊಂದು ಚುನಾವಣೆ ಎದುರಿಸಬೇಕಾಯಿತು. 12ನೇ ಲೋಕಸಭೆಗೆ 1998ರಲ್ಲಿ ನಡೆದ ಚುನಾವಣೆಯಲ್ಲಿ ಶೇ.25.8ರಷ್ಟು ಮತಗಳೊಂದಿಗೆ ಬಿಜೆಪಿ ಅತಿದೊಡ್ಡ ಪಕ್ಷ ವಾಗಿ ಉದಯವಾಯಿತು; ಒಟ್ಟು 141 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಬಿಜೆಪಿ ನೇತೃತ್ವದ ಎನ್‌ಡಿಎ ಒಟ್ಟು 545 ಸೀಟುಗಳ ಪೈಕಿ 256 ಸೀಟುಗಳನ್ನು ಪಡೆಯಿತು. ಅದೇ ರೀತಿ, ಕಾಂಗ್ರೆಸ್‌ ನೇತೃತ್ವದ ಯುಪಿಎ ಶೇ.30.8ರಷ್ಟು ಮತ ಪಡೆದು ಒಟ್ಟು 164 ಸೀಟುಗಳನ್ನು ಪಡೆಯಿತು. ಕಾಂಗ್ರೆಸ್‌ ಸ್ವತಂತ್ರವಾಗಿ 140 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತು. ತೃತೀಯ ರಂಗ ಕೇವಲ 74 ಕ್ಷೇತ್ರಗಳಿಗೆ ತೃಪ್ತಿ ಪಡಬೇಕಾಯಿತು. ಅತಿ ದೊಡ್ಡ ಪಕ್ಷ ವಾಗಿದ್ದ ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ದೊರೆಯಿತು. ಅಟಲ್‌ ಬಿಹಾರಿ ವಾಜಪೇಯಿ ಅವರು ಎರಡನೇ ಬಾರಿಗೆ ಪ್ರಧಾನಿಯಾದರು. ಆದರೆ, ರಾಜಕೀಯ ಸ್ಥಿರತೆ ಮಾತ್ರ ಕಂಡು ಬರಲಿಲ್ಲ. ಅಂತಿಮವಾಗಿ 13 ತಿಂಗಳು ಬಳಿಕ ವಾಜಪೇಯಿ ಸರಕಾರ ಪತನವಾಯಿತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ವಿಶ್ವಾಸಮತ ಸಾಬೀತುವೇಳೆ ಎನ್‌ಡಿಎಗೆ ಬೆಂಬಲ ನೀಡಿಲಲ್ಲ. ಕೇವಲ ಒಂದು ಮತದ ಅಂತರದಲ್ಲಿ ಬಿಜೆಪಿ ಸರಕಾರ ಉರುಳಿತು. ಬಳಿಕ ರಾಷ್ಟ್ರಪತಿಗಳು ಎರಡನೇ ಅತಿದೊಡ್ಡ ಪಕ್ಷ ವಾಗಿದ್ದ ಕಾಂಗ್ರೆಸ್‌ಗೆ ಸರಕಾರ ರಚಿಸಲು ಆಹ್ವಾನ ನೀಡಿದರು. ಆದರೆ, ಕಾಂಗ್ರೆಸ್‌ ಮಾತ್ರ ತನ್ನಿಂದ ಸರಕಾರ ರಚನೆ ಸಾಧ್ಯವಿಲ್ಲ ಎಂದು ಹೇಳಿದ್ದರಿಂದ, ಅವರು ಸಂಸತ್ತನ್ನು ವಿಸರ್ಜಿಸಿದರು. 1998ರ ಚುನಾವಣೆಯಲ್ಲಿ ಒಟ್ಟು 60,58,80,192 ಮತದಾರರಿದ್ದರು. ಈ ಪೈಕಿ 37,54,41,739 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಅಂದರೆ ಒಟ್ಟು ಮತದಾನ ಪ್ರಮಾಣ ಶೇ.62ರಷ್ಟಿತ್ತು. ಒಟ್ಟು 178 ರಾಜಕೀಯ ಪಕ್ಷ ಗಳು ಈ ಚುನಾವಣೆಯಲ್ಲಿ ಭಾಗವಹಿಸಿದ್ದವು. 13 ದಿನ ಮತ್ತು 13 ತಿಂಗಳ ಪ್ರಧಾನಿಯಾಗಿದ್ದ ವಾಜಪೇಯಿ ಅವರು ವಿಶಿಷ್ಟ ದಾಖಲೆ ಮಾಡಿದರು.
- ತಿಪ್ಪಾರ

ಈ ಲೇಖನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.

ಸೋಮವಾರ, ಮಾರ್ಚ್ 11, 2019

ನಿಮಗೆ ಕಿಡಲ್ ಗೊತ್ತಾ?, ಮಕ್ಕಳಿಗೋಸ್ಕರವೇ ಇರುವ ಸರ್ಚ್‌ ಎಂಜಿನ್‌

ಗೂಗಲ್‌ ಸರ್ಚ್‌ ಎಂಜಿನ್‌ ಜಗತ್ತಿನ ಎಲ್ಲ ಮಾಹಿತಿಯನ್ನು ಕ್ಷ ಣ ಮಾತ್ರದಲ್ಲಿ ನಿಮ್ಮ ಮುಂದೆ ಹರವಿ ಇಡುತ್ತದೆ. ಅದರಲ್ಲಿ ಬೇಕಾದದ್ದು, ಬೇಡವಾದದ್ದೂ ಎಲ್ಲವೂ ಇರುತ್ತದೆ. ನಮ್ಮ ಆದ್ಯತೆಗನುಗುಣವಾಗಿ ನಾವೇ ಹೆಕ್ಕಿಕೊಳ್ಳಬೇಕಷ್ಟೆ. ಆದರೆ, ಮಕ್ಕಳ ವಿಷಯಕ್ಕೆ ಬಂದಾಗ ನಾವು ಬಹಳಷ್ಟು ಹುಷಾರ್‌ ಆಗಿರಬೇಕಾಗುತ್ತದೆ. ಎಲ್ಲವನ್ನೂ ಮುಚ್ಚು ಮರೆಯಿಲ್ಲದೇ ನೀಡುವ ಗೂಗಲ್‌ ಸರ್ಚ್‌ ಎಂಜಿನ್‌ ಬಳಕೆಯನ್ನು ನಿಧಾನಗೊಳಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೋಸ್ಕರವೇ 'ಕಿಡಲ್‌ ಸರ್ಚ್‌ ಎಂಜಿನ್‌' ಇದೆ. ಅದನ್ನು ಬಳಸಲು ಮಕ್ಕಳಿಗೆ ಪ್ರೇರೇಪಿಸಬೇಕು. 


- ಮಲ್ಲಿಕಾರ್ಜುನ ತಿಪ್ಪಾರ 
ಈ ಇಂಟರ್ನೆಟ್‌ ಯುಗದಲ್ಲಿ ಎಲ್ಲವೂ ಮುಕ್ತ ಮುಕ್ತ. ಯಾವುದೇ ಮುಚ್ಚು ಮರೆಯಿಲ್ಲ. ನಮಗೆ ಬೇಕಾದ್ದು, ಬೇಡವಾದದ್ದು ಎಲ್ಲ ಮಾಹಿತಿಯೂ ನಮ್ಮ ಕಣ್ಣೆದುರಿಗೆ ಬಂದು ಬೀಳುತ್ತಿದೆ. ಕೈ ಬೆರಳಲ್ಲಿ ತುದಿಯಲ್ಲೇ ನಲಿದಾಡುತ್ತಿರುತ್ತದೆ. ಆದರೆ, ಹೀಗೆ ಯಾವುದೇ ಸೆನ್ಸಾರ್‌ ಇಲ್ಲದೇ ಬೇಕಾಬಿಟ್ಟಿಯಾಗಿ ದೊರೆಯುವ ಮಾಹಿತಿ ನಮ್ಮ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದು ಯೋಚಿಸಿದರೆ ಆತಂಕವಾಗುತ್ತದೆ. ಹಾಗಾಗಿಯೇ, ಮಕ್ಕಳಿಗೋಸ್ಕರವೇ ಗೂಗಲ್‌ ಕಂಪನಿಯು ಕಿಡಲ್‌ ಸರ್ಚ್‌ ಎಂಜಿನ್‌ ಆರಂಭಿಸಿದೆ. ಆದರೆ, ಬಹಳಷ್ಟು ಜನರಿಗೆ ಈ ಬಗ್ಗೆ ಜ್ಞಾನವಿಲ್ಲ. ಸಾಮಾನ್ಯವಾಗಿ ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಯಾವುದೇ ಮಿತಿ ಇಲ್ಲ. ಅಲ್ಲಿ ದೊರೆಯುವ ಕಂಟೆಂಟ್‌ ಅನೇಕ ಬಾರಿ ಮಕ್ಕಳಿಗೆ ಬೇಡವಾದದ್ದೇ ಇರುತ್ತದೆ. ಅಂಥದ್ದೆಲ್ಲ ಅವರ ಕಣ್ಣಿಗೆ ಬಿದ್ದರೆ, ಇಲ್ಲವೇ ಅದರ ಗೀಳಿಗೆ ಮಕ್ಕಳು ಅಂಟಿಕೊಂಡು ಬಿಟ್ಟರೆ ಅದರಿಂದಾಗುವ ದುಷ್ಪರಿಣಾಮವನ್ನು ಊಹಿಸುವುದು ಕಷ್ಟ. ಮಕ್ಕಳ ಬೆಳವಣಿಗೆ ಮೇಲೆ ನಕಾರತ್ಮಕ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು. ಶಿಕ್ಷ ಣ ವ್ಯವಸ್ಥೆಯು ಹೆಚ್ಚೆಚ್ಚು ತಂತ್ರಜ್ಞಾನಸ್ನೇಹಿಯಾಗುತ್ತ ಮುಂದುವರಿಯುತ್ತಿರುವುದರಿಂದ ಮಕ್ಕಳ ಹಂತದಲ್ಲೇ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಇಂಟರ್ನೆಟ್‌ ಬಳಕೆ ಅನಿವಾರ್ಯವಾಗಿದೆ. ಶಾಲಾ ಕಾಲೇಜು ಮಕ್ಕಳು ಪ್ರಾಜೆಕ್ಟ್ಗಳನ್ನು ಮಾಡಬೇಕಾಗುತ್ತದೆ. ಅವರು ತಮ್ಮ ಪ್ರಾಜೆಕ್ಟ್ಗಳನ್ನು ಪೂರೈಸಲು ಮತ್ತೆ ಮೊರೆ ಹೋಗುವುದು ಈ ಗೂಗಲ್ಲನ್ನೇ. ಹಾಗಾಗಿ, ಮಕ್ಕಳ ಸೇಫ್‌ ಸರ್ಚ್‌ ಎಂಜಿನ್‌ ಆಗಿ ಕಿಡಲ್‌ ಅನ್ನು ರೂಪಿಸಲಾಗಿದೆ. 

2014ರಲ್ಲಿ ಆರಂಭ 

ಮಕ್ಕಳಿಗೋಸ್ಕರವೇ ಮೀಸಲಾಗಿರುವ ಈ ಡೊಮೈನ್‌ ಅನ್ನು 2014ರಲ್ಲಿ ನೋಂದಣಿ ಮಾಡಲಾಯಿತು. ಕಿಡಲ್‌ ಸರ್ಚ್‌ ಎಂಜಿನ್‌, ಗೂಗಲ್‌ ಕಸ್ಟಮ್‌ ಸರ್ಚ್‌ ಎಂಜಿನ್‌ ವಿಂಡೋ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಬಳಕೆದಾರರು ತಮಗೆ ಬೇಕಿದ್ದ ಮಾಹಿತಿ ಬಗ್ಗೆ ಕೀ ವರ್ಡ್‌ ಹಾಕಿದಾಗ, ಸರ್ಚ್‌ ರಿಸಲ್ಟ್‌ಗಳನ್ನು ತೋರಿಸುತ್ತದೆ. ಮೊದಲ ಮೂರು ರಿಸಲ್ಟ್‌ಗಳು ಸುರಕ್ಷಿತವಾಗಿದ್ದು ಮತ್ತು ಮಕ್ಕಳಿಗೋಸ್ಕರವೇ ಇರುವ ಮಾಹಿತಿಯಾಗಿರುತ್ತದೆ. ಕಿಡಲ್‌ ಎಡಿಟರ್‌ಗಳಿಂದ ದೃಢೀಕರಣಗೊಂಡಿರುತ್ತದೆÜ. ಮುಂದಿನ ನಾಲ್ಕು ಪೇಜ್‌ಗಳ ಬಗ್ಗೆ ಮಕ್ಕಳಿಗೋಸ್ಕರವೇ ಎಂಬ ಕಡ್ಡಾಯವಿರುವುದಿಲ್ಲ ಬದಲು ಮಕ್ಕಳ ಸ್ನೇಹಿಯಾಗಿರುತ್ತವೆ. 8 ಮತ್ತು ಅದರಿಂದಾಚೆಯ ಎಲ್ಲ ರಿಸಲ್ಟ್‌ಗಳು ವಯಸ್ಕರಿಗೆ ಅರ್ಥವಾಗುವಂಥವುಗಳಾಗಿರುತ್ತವೆ. ಮಕ್ಕಳು ಇವುಗಳನ್ನು ಅರಿತು ಮಾಡಿಕೊಳ್ಳುವುದು ಕಷ್ಟ. ಹೀಗೆ ಕಾಣಿಸಿಕೊಳ್ಳುವ ಎಲ್ಲ ರಿಸಲ್ಟ್‌ಗಳು ಗೂಗಲ್‌ನ ಸೇಫ್‌ಸರ್ಚ್‌ ಮೂಲಕ ಜರಡಿಗೊಳಗಾಗಿರುತ್ತವೆ. ಒಂದೊಮ್ಮೆ ಬಳಕೆದಾರರು ಕೆಟ್ಟ ಪದಗಳನ್ನು ಸರ್ಚ್‌ ಮಾಡಿದರೂ ಅದರ ರಿಸಲ್ಟ್‌ ದೊರೆಯುವುದಿಲ್ಲ. ಮತ್ತೊಮ್ಮೆ ಪ್ರಯತ್ನಿಸಿ ಎಂಬ ಸಂದೇಶ ಡಿಸ್‌ಪ್ಲೇ ಆಗುತ್ತದೆ. 

ಕೆಪಿಡಿಯಾ 

ಸರ್ಚ್‌ ಎಂಜಿನ್‌ ಒದಗಿಸುವ ಆನ್‌ಲೈನ್‌ ವಿಶ್ವಕೋಶವನ್ನು ಕಿಡಲ್‌ ವಿಶ್ವಕೋಶ(ಕೆಪಿಡಿಯಾ) ಎಂದು ಕರೆಯಲಾಗುತ್ತದೆ. ಅದರಲ್ಲಿ 700,000ಕ್ಕೂ ಹೆಚ್ಚು ಆರ್ಟಿಕಲ್‌ಗಳಿವೆ. ಮಕ್ಕಳಿಗಾಗಿಯೇ ಮರುಸೃಷ್ಟಿಸಲಾದ ವಿಕಿಪಿಡಿಯಾ ಲೇಖನಗಳನ್ನು ಇದು ಒಳಗೊಂಡಿರುತ್ತದೆ. 

ಕೆಪಿಡಿಯಾ

ಗೇ, ಲೆಸ್ಬಿಯನ್‌, ಸೆಕ್ಸ್‌ ಎಜುಕೇಷನ್‌ನಂಥ ಶಬ್ದಗಳನ್ನು ನಿಷೇಧಿಸಿದ್ದರಿಂದ 2016ರಲ್ಲಿ ಕಿಡಲ್‌ ಭಾರೀ ಟಿಕೆಯನ್ನು ಎದುರಿಸಬೇಕಾಯಿತು. ಜತೆಗೆ ಟ್ರಾನ್ಸ್‌ಜೆಂಡರ್‌, ಬೈಸೆಕ್ಸುವಲ್‌ ಪದಗಳನ್ನು ಬ್ಲಾಕ್‌ ಮಾಡಲಾಗಿತ್ತು. ಆದರೆ, ವಿರೋಧ ಹೆಚ್ಚಾಗುತ್ತಿದ್ದಂತೆ ಈ ಪದಗಳನ್ನು ಅನ್‌ಬ್ಲಾಕ್‌ ಮಾಡುವುದಾಗಿ ಕಿಡಲ್‌ ಪ್ರಕಟಣೆ ನೀಡಿತು. 

ಸುರಕ್ಷಿತ ಸರ್ಚ್‌ 

ಕಿಡಲ್‌ನಲ್ಲಿ ಕಾಣಿಸಿಕೊಳ್ಳುವ ಸರ್ಚ್‌ ರಿಸಲ್ಟ್‌ಗಳು ಫ್ಯಾಮಿಲಿ ಫ್ರೆಂಡ್ಲಿಯಾಗಿರುತ್ತವೆ. ಸೈಟ್‌ಗಳಿಗೆ ಜರಡಿ ಹಿಡಿದು ಮಕ್ಕಳಿಗೆ ಯೋಗ್ಯವಾದ ಸೈಟ್‌ಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. 

ಬೃಹತ್‌ ಥಂಬ್‌ನೇಲ್ಸ್‌ 

ಕಿಡಲ್‌ನ ಬಹುತೇಕ ಸರ್ಚ್‌ ರಿಸಲ್ಟ್‌ಗಳು ಬೃಹತ್‌ ಥಂಬ್‌ನೇಲ್ಸ್‌ಗಳನ್ನು ಹೊಂದಿರುವಂತೆ ವಿನ್ಯಾಸ ಮಾಡಲಾಗಿದೆ. ಇದರಿಂದ ರಿಸಲ್ಟ್‌ಗಳನ್ನು ಸುಲಭವಾಗಿ ಶೋಧಿಸಲು ಮತ್ತು ಅವುಗಳ ನಡುವಿನ ವ್ಯತ್ಯಾಸವನ್ನು ಅರಿಯಲು ಮಕ್ಕಳಿಗೆ ಸಾಧ್ಯವಾಗುತ್ತದೆ. ಜತೆಗೆ ಅಗತ್ಯವಿರುವ ಹೆಚ್ಚು ಸೂಕ್ತವಾದ ರಿಸಲ್ಟ್‌ಗಳ ಮೇಲೆ ಕ್ಲಿಕ್‌ ಮಾಡಲು ಅನುವು ಮಾಡಿಕೊಡುತ್ತದೆ. ಥಂಬ್‌ನೇಲ್ಸ್‌ಗಳು ಚಿತ್ರಿಕೆ ಸುಳಿವುಗಳಾಗಿ ಕಾರ್ಯನಿರ್ವಹಿಸುವುದರಿಂದ ಮಕ್ಕಳಿಗೆ ಬೇಗ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಯಾಕೆಂದರೆ, ದೊಡ್ಡವರಂತೆ ಮಕ್ಕಳಿಗೆ ವೇಗವಾಗಿ ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. 

- ಮಕ್ಕಳಿಗೆ ಓದಲು ಸುಲಭವಾಗುವ ದೃಷ್ಟಿಯಿಂದ ಬೃಹತ್‌ ಏರಿಯಲ್‌ ಫಾಂಟ್‌ಗಳನ್ನು ಕಿಡಲ್‌ ಬಳಸುತ್ತದೆ. ಹಾಗಾಗಿ, ರಿಸಲ್ಟ್‌ಗಳಲ್ಲಿ ಇರುವ ಕಂಟೆಂಟ್‌ ಬೇಗ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 

 ಖಾಸಗಿತನ 
ಕಿಡಲ್‌ ಯಾವುದೇ ರೀತಿಯಲ್ಲಿ ಬಳಕೆದಾರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಪ್ರತಿ 24 ಗಂಟೆಗೊಮ್ಮೆ ಲಾಗ್‌ಗಳನ್ನು ಡಿಲಿಟ್‌ ಮಾಡಲಾಗುತ್ತದೆ. 



ಕಿಡಲ್ ಸರ್ಚ್ ಎಂಜಿನ್ ವೆಬ್ ವಿಳಾಸ- ಕ್ಲಿಕ್ ಮಾಡಿ.
 ​https://www.kiddle.co

ಈ ಲೇಖನವು ವಿಜಯ ಕರ್ನಾಟಕದ 11-2-19ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಇಲ್ಲೂ ಕ್ಲಿಕ್ ಮಾಡಿ

ಭಾನುವಾರ, ಮಾರ್ಚ್ 10, 2019

ಪ್ರಧಾನಿ ಹುದ್ದೆಗೇರಿದ ದಕ್ಷಿಣ ಭಾರತದ ಮೊದಲ ನಾಯಕ ಪಿ ವಿ ನರಹಸಿಂಹ ರಾವ್

ಸ್ವಲ್ಪ ಅವಧಿಗೆ ಅಧಿಕಾರ ವಂಚಿತವಾಗಿದ್ದ ಕಾಂಗ್ರೆಸ್‌ 1991ರ ಚುನಾವಣೆಯ ಮೂಲಕ ಮತ್ತೆ ಆಡಳಿತಕ್ಕೆ ಬಂತಾದರೂ ಈ ಮೊದಲಿದ್ದ ಧಾಡಸಿತನ ಇರಲಿಲ್ಲ. ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ರಾಜನ ಗತ್ತಿನಲ್ಲಿದ್ದ ಕಾಂಗ್ರೆಸ್‌ಗೆ ಇದೀಗ ಮೈತ್ರಿಯ ಆಸರೆ ಬೇಕಿತ್ತು. ಬಹುಶಃ ಈ ಚುನಾವಣೆಯಿಂದಲೇ, ನಿಜಾರ್ಥದ ಮೈತ್ರಿಕೂಟದ ರಾಜಕಾರಣದ ಶೆಕೆ ಆರಂಭವಾಯಿತು ಎನ್ನಬಹುದು. ಈ ಹಿಂದೆಯೂ ಕೂಟಗಳು ರಚನೆಯಾಗಿದ್ದವು. ಆದರೆ, ಅವು ಅನಿವಾರ್ಯತೆಗಳಾಗಿರಲಿಲ್ಲ. ಇನ್ನು ಚುನಾವಣೆಯ ಫಲಿತಾಂಶಕ್ಕೆ ಬಂದರೆ, ಕಾಂಗ್ರೆಸ್‌ 545 ಸ್ಥಾನಗಳ ಪೈಕಿ 244 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು. ಬಿಜೆಪಿ ಇದೇ ಮೊದಲ ಬಾರಿಗೆ ಮೂರಂಕಿ ದಾಟಿ, ಒಟ್ಟು 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್‌ ಶೇ.36.4ರಷ್ಟು ಮತ ಗಳಿಸಿದರೆ, ಬಿಜೆಪಿ ಮತ ಪ್ರಮಾಣ ಶೇ.20ರಷ್ಟಿತ್ತು. ಬಿಜೆಪಿ ನಂತರದ ಸ್ಥಾನದಲ್ಲಿ ಜನತಾದಳ(ನ್ಯಾಷನಲ್‌ ಫ್ರಂಟ್‌) 69, ಎಡಪಕ್ಷ ಗಳು 49 ಕ್ಷೇತ್ರಗಳಲ್ಲಿ ಜಯ ಕಂಡವು. 'ಮಂಡಲ್‌-ಮಂದಿರ' ವಿಷಯಗಳು ಚುನಾವಣಾ ವಸ್ತುಗಳಾದವು. ಜತೆಗೆ ಮತಗಳು ಕೂಡ ಧ್ರುವೀಕರಣಗೊಂಡವು. ವಿಶೇಷ ಎಂದರೆ, ಗಾಂಧಿ ಕುಟುಂಬದ ಹೊರತಾದ ಪ್ರಧಾನಿಯನ್ನು ಕಾಣಲು ಸಾಧ್ಯವಾಯಿತು. ಆಂಧ್ರ ಮೂಲದ ಪಿ.ವಿ.ನರಸಿಂಹ ರಾವ್‌ ಅವರು ಪ್ರಧಾನಿಯಾದರು. ನರಸಿಂಹ ರಾವ್‌ ಅವರ ಆಡಳಿತದಲ್ಲಿ ಎರಡು ಪ್ರಮುಖ ಘಟನೆಗಳು ಸಂಭವಿಸಿದವು. ಮೊದಲನೆಯದಾಗಿ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಉದಾರೀಕರಣಕ್ಕೆ ಮುಕ್ತ ಮಾಡಿದ್ದು. ಎರಡನೆಯದ್ದು, 1992ರ ಡಿಸೆಂಬರ್‌ನಲ್ಲಿ ಸಂಭವಿಸಿದ ಬಾಬರಿ ಮಸೀದಿ ಧ್ವಂಸ ಪ್ರಕರಣ. ಈ ಪೈಕಿ, ಮೊದಲನೆಯದ್ದು ಬೆಳವಣಿಗೆ ದೇಶದ ಆರ್ಥಿಕತೆ ಸದೃಢಗೊಳ್ಳಲು ಕಾರಣವಾಯಿತು. ಎರಡನೆಯ ಘಟನೆಯು ಇನ್ನೂ ತನ್ನ ವಿವಾದದ ಕಿಡಿಯನ್ನು ಹೊತ್ತಿಸಿಕೊಂಡೇ ಇದೆ. ಹಾಗೆಯೇ, ಈ ಬೆಳವಣಿಗೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಮತ್ತಷ್ಟು ಲಾಭ ಮಾಡಿಕೊಟ್ಟಿತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದು ಗಮನಿಸಲೇಬೇಕಾದ ಸಂಗತಿ ಎಂದರೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡು ಶ್ರಿಪೆರಂಬದೂರಿಗೆ ಹೋದಾಗ ಎಲ್‌ಟಿಟಿಇ ಮಾನವ ಬಾಂಬ್‌ ಸ್ಫೋಟಕ್ಕೆ ಬಲಿಯಾದರು. ಇಡೀ ಜಗತ್ತಿನಲ್ಲೇ ಮಾನವ ಬಾಂಬ್‌ ಪ್ರಯೋಗವಾದದ್ದು ಇದೇ ಮೊದಲು.

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.

ಜನಪ್ರಿಯ ರಾಜಕಾರಣದ ಎಐಎಡಿಎಂಕೆ

ದೇಶದ ಪ್ರಬಲ ಪ್ರಾದೇಶಿಕ ಪಕ್ಷ ಗಳ ಪೈಕಿ ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಕೂಡ ಒಂದು. ಸದ್ಯ ತಮಿಳುನಾಡುರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಐಎಡಿಎಂಕೆ, ಪುದುಚೆರಿಯಲ್ಲೂ ತನ್ನ ಪ್ರಭಾವ ಹೊಂದಿದೆ. ತಮಿಳುನಾಡಿನ ಜನಪ್ರಿಯ ನಟ ಮತ್ತು ರಾಜಕಾರಣಿ ಎಂ.ಜಿ.ರಾಮಚಂದ್ರನ್‌ ಅವರು ಈ ಪಕ್ಷ ವನ್ನು ಸ್ಥಾಪಿಸಿದರು. ಡಿಎಂಕೆಯಿಂದಲೇ ರಾಜಕಾರಣ ಆರಂಭಿಸಿದ್ದ ಎಂಜಿಆರ್‌, 1972ರಲ್ಲಿ ಅದರಿಂದ ಹೊರ ಬಂದು ಎಐಎಡಿಎಂಕೆ ಸ್ಥಾಪಿಸಿದರು. 1997ರ ತಮಿಳುನಾಡು ವಿಧಾಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂತು. ಎಂಜಿಆರ್‌ ಮುಖ್ಯಮಂತ್ರಿಯಾದರು. 1987ರವರೆಗೂ ಅಂದರೆ, ತಮ್ಮ ಸಾವಿನವರೆಗೂ ಎಂಜಿಆರ್‌ ಮುಖ್ಯಮಂತ್ರಿಯಾಗಿದ್ದರು. ಅವರ ನಿಧನ ಬಳಿಕ ನಾಯಕತ್ವಕ್ಕೆ ಸಂಬಂಧಿಸಿದಂತೆ ಎಂಜಿಆರ್‌ ಪತ್ನಿ ಜಾನಕಿ ರಾಮಚಂದ್ರನ್‌ ಮತ್ತು ಜಯಲಲಿತಾ ಮಧ್ಯೆ ಸಂಘರ್ಷವೇ ನಡೆಯಿತು. ಜಾನಕಿ ರಾಮಚಂದ್ರನ್‌ ಅವರಿಗೆ 98 ಶಾಸಕರು ಬೆಂಬಲ ನೀಡಿದ್ದರಿಂದ ಕೇವಲ 24 ದಿನಗಳ ಮಟ್ಟಿಗೆ ಅವರು ಸಿಎಂ ಆದರು. ವಿಧಾನಸಭೆ ಅಮಾನತ್ತಿನಲ್ಲಿಡಲಾಯಿತು. ಬಳಿಕ ನಡೆದ ಚುನಾವಣೆಯಲ್ಲಿ ಜಾನಕಿ ಹಾಗೂ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಎರಡೂ ಗುಂಪುಗಳು ಹೀನಾಯವಾಗಿ ಸೋತವು. ಡಿಎಂಕೆ ಅಧಿಕಾರಕ್ಕೆ ಬಂತು. ಈ ಸೋಲಿನ ಬಳಿಕ ಜಯಲಲಿತಾ ನೇತೃತ್ವದಲ್ಲಿ ಎಐಎಡಿಎಂಕೆ ಮತ್ತೆ ಒಂದಾಯಿತು. 1991ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೂಡಿ ವಿಧಾನಸಭೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಜಯಲಲಿತಾ ಮುಖ್ಯಮಂತ್ರಿಯಾದರು. ಇಲ್ಲಿಂದ ಜಯಾ ರಾಜಕಾರಣ ಪರ್ವ ಶುರುವಾಯಿತು. ಮುಂದೆ 1998ರ ಲೋಕಸಭೆ ಚುನಾವಣೆ ಹೊತ್ತಿಗೆ ಜಯಲಲಿತಾ ಬಿಜೆಪಿ, ಎಂಡಿಎಂಕೆ ಜತೆ ಮೈತ್ರಿಕೂಟ ರಚಿಸಿಕೊಂಡರು. ಕೇಂದ್ರದಲ್ಲಿ ವಾಜಪೇಯಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದು ಸರಕಾರ ಪತನಕ್ಕೆ ಕಾರಣರಾದರು. ಜಯಲಲಿತಾ ಅವರು 1991- 1996, 2001, 2002- 2006, 2011- 2014, 2015ಧಿ-2016 ಅವಧಿಯಲ್ಲಿ ಮುಖ್ಯಯಂತ್ರಿಯಾಗಿದ್ದರು. ಎಂಜಿಆರ್‌ ಬಳಿಕ ಪಕ್ಷ ಕ್ಕೆ ಜಯಲಲಿತಾ ಅವರು ಗಟ್ಟಿ ನಾಯಕತ್ವ ಒದಗಿಸಿದ್ದರು. ಆದರೆ, ಜಯಾ ಸಾವಿನ ಬಳಿಕ ಮತ್ತೆ ನಾಯಕತ್ವದ ಕಿತ್ತಾಟ ಶುರವಾಗಿದೆ. ಎಂಜಿಆರ್‌ ಮತ್ತು ಜಯಲಲಿತಾ ಇಬ್ಬರೂ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪ್ರಸಿದ್ಧ ಪಡೆದರು. ಪ್ರಸಕ್ತ ಲೋಕಸಭೆ ಚುನಾವಣೆಯನ್ನು ಎಐಎಡಿಎಂಕೆಯು ಬಿಜೆಪಿ ಜತೆಗೂಡಿ ಎದುರಿಸುತ್ತಿದೆ. 

ಸರಕಾರ ರಚಿಸಿದ ಮೊದಲ ಪ್ರಾದೇಶಿಕ ಪಕ್ಷ ಡಿಎಂಕೆ

ಪ್ರಾದೇಶಿಕ ಪಕ್ಷ ಗಳು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬಹುದು ಎಂಬುದನ್ನು ದ್ರಾವಿಡ್‌ ಮುನ್ನೇತ್ರ ಕಳಗಂ(ಡಿಎಂಕೆ) ತೋರಿಸಿಕೊಟ್ಟಿತ್ತು. ಪ್ರಾದೇಶಿಕ ಪಕ್ಷ ಗಳ ಪೈಕಿ ತುಂಬ ಹಳೆಯದಾದ ಡಿಎಂಕೆ, ನಮ್ಮ ರಾಜ್ಯದ ನೆರೆಯ ತಮಿಳುನಾಡು ಮತ್ತು ಪುದುಚೆರಿಯಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. ತಮಿಳುನಾಡಿನಲ್ಲಿ ಸದ್ಯ ಪ್ರತಿಪಕ್ಷ ಸ್ಥಾನದಲ್ಲಿದೆ. ಈ ಪಕ್ಷ ದ ಜನಪ್ರಿಯ ನಾಯಕರೆಂದರೆ, ಸಿ.ಎನ್‌.ಅಣ್ಣಾದೊರೈ, ಎಂ. ಕರುಣಾನಿಧಿ, ಎಂಜಿಆರ್‌(ಪಕ್ಷ ತೊರೆದು ತಮ್ಮದೇ ಆದ ಎಐಡಿಎಂಕೆ ಸ್ಥಾಪಿಸಿದರು), ಎಂ.ಕೆ.ಸ್ಟಾಲಿನ್‌, ಕನ್ನಿಮೋಳಿ... ಮುಂತಾದವರು. ಕರುಣಾನಿಧಿ ಅವರು ಐದು ಬಾರಿಗೆ ತಮಿಳುನಾಡು ಮುಖ್ಯಂತ್ರಿಯಾಗಿದ್ದರು. ಅಲ್ಲದೆ, 1969ರಿಂದ ಅವರು ತಮ್ಮ ಸಾವಿನ ದಿನವರೆಗೂ ಅಂದರೆ 2018ರ ಅಗಸ್ಟ್‌ 7ರವರೆಗೂ ಡಿಎಂಕೆಯ ನೇತೃತ್ವ ವಹಿಸಿದ್ದರು. ಕಾಂಗ್ರೆಸ್‌ ಹೊರತುಪಡಿಸಿ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ವೊಂದು ಸ್ವಂತ ಸರಕಾರ ರಚಿಸಬಹುದು ಎಂಬುದನ್ನು ಡಿಎಂಕೆಸಾಧಿಸಿ ತೋರಿಸಿತು. ಇದು ಮುಂದೆ ಬಹಳಷ್ಟು ಪ್ರಾದೇಶಿಕ ಪಕ್ಷ ಗಳಿಗೆ ದಾರಿ ಮಾಡಿಕೊಟ್ಟಿತ್ತು. ಡಿಎಂಕೆಯ ಮೂಲ ಜಸ್ಟೀಸ್‌ ಪಾರ್ಟಿಯಲ್ಲಿದೆ. ಕಾಂಗ್ರೆಸ್‌ನಲ್ಲಿದ್ದ ಪೆರಿಯಾರ್‌ ಇ.ವಿ.ರಾಮಸ್ವಾಮಿ ಅವರು ಜಸ್ಟೀಸ್‌ ಪಾರ್ಟಿಯನ್ನು 1935ರಲ್ಲಿ ಸೇರಿದರು. ಬಳಿಕ ದ್ರಾವಿಡರ್‌ ಕಳಗಂ ಸ್ಥಾಪಿಸಿ, ದ್ರಾವಿಡರಿಗೆ ಪ್ರತ್ಯೇಕ ರಾಷ್ಟ್ರ ಬೇಡಿಕೆ ಹಾಗೂ ಹಿಂದಿ ವಿರೋಧಿ ಪ್ರಮುಖ ಅದರ ಪ್ರಮುಖ ನೀತಿಗಳಾಗಿದ್ದವು. ಆದರೆ, ನಂತರದ ದಿನಗಳಲ್ಲಿ ಪ್ರತ್ಯೇಕ ರಾಷ್ಟ್ರ ಹೋರಾಟ ಕೈಬಿಡಲಾಯಿತು. ಈ ಸೈದ್ಧಾಂತಿಕ ವಿಚಾರಧಾರೆಯು ಡಿಎಂಕೆಗೂ ಹರಿದು ಬಂತು. ಆಗ ರಾಮಸ್ವಾಮಿ ಅವರಿಗೆ ಹೆಗಲು ನೀಡಿದ್ದ ಅಣ್ಣಾದೊರೈ ಅವರು ದ್ರಾವಿಡರ್‌ ಕಳಗಂನಿಂದ ಹೊರಬಂದು ಡಿಎಂಕೆ ಸ್ಥಾಪಿಸಿದರು. ನಂತರ ಅಣ್ಣಾದೊರೈ ಜತೆಯಾಗಿ ಹೆಜ್ಜೆ ಹಾಕಿದವರು ಕರುಣಾನಿಧಿ ಅವರು. ಸದ್ಯ ಡಿಎಂಕೆ ನಾಯಕತ್ವವನ್ನು ಅವರ ಪುತ್ರ ಎಂ.ಕೆ. ಸ್ಟಾಲಿನ್‌ ವಹಿಸಿದ್ದಾರೆ. ಪ್ರಾದೇಶಿಕತೆ, ಹಿಂದಿ ಹೇರಿಕೆ ವಿರೋಧಿ ನೀತಿ, ಸಾಮಾಜಿಕ ಪ್ರಜಾಪ್ರಭುತ್ವ ನೀತಿಯನ್ನು ಡಿಎಂಕೆ ಅಳವಡಿಸಿಕೊಂಡಿದೆ. ಜನಪ್ರಿಯ ನಾಯಕ ಎಂಜಿಆರ್‌ ಕೂಡ ಡಿಎಂಕೆ ಭಾರಿ ಬಲ ತುಂಬಿದ್ದರು. ಆದರೆ, ಅವರು ಭಿನ್ನಾಭಿಪ್ರಾಯದಿಂದಾಗಿ ಡಿಎಂಕೆಯಿಂದ ಹೊರ ನಡೆದು, ತಮ್ಮದೇ ಆದ ಎಐಡಿಎಂಕೆ ಸ್ಥಾಪಿಸಿದರು. ಮುಂದೆ ತಮಿಳುನಾಡಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ನಡುವಿನ ಹೋರಾಟವೇ ರಾಜಕಾರಣವಾಯಿತು. ಸದ್ಯ ಡಿಎಂಕೆ ಯುಪಿಎ ಭಾಗವಾಗಿದೆ. 

ಎರಡನೆಯ ಬಾರಿಗೆ ಕಾಂಗ್ರೆಸ್ಸೇತರ ಸರಕಾರ

ಭಾರತೀಯ ರಾಜಕೀಯ ಇತಿಹಾಸದಲ್ಲಿ 1989ರ ಸಾರ್ವತ್ರಿಕ ಚುನಾವಣೆಗೆ ತನ್ನದೇ ಆದ ಮಹತ್ವವಿದೆ. ಎರಡನೇ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬರಲು ಈ ಚುನಾವಣೆಯಿಂದ ಸಾಧ್ಯವಾಯಿತು. ಈ ಹಿಂದಿನ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌, ಈ ಬಾರಿ ಇನ್ನಿಲ್ಲದಂತೆ ನೆಲಕಚ್ಚಿತು. ಬೊಫೋರ್ಸ್‌ ಹಗಹರಣ, ಪಂಜಾಬ್‌ನಲ್ಲಿ ಭಯೋತ್ಪಾದನೆ ಸೇರಿದಂತೆ ಇನ್ನಿತರ ಸಮಸ್ಯೆಗಳು ರಾಜೀವ್‌ ಆಡಳಿತದ ವಿರುದ್ಧ ಅಲೆ ಏಳುವಂತೆ ಮಾಡಿತು. ಇದರ ಪರಿಣಾಮ, ಜನತಾದಳ ವಿಶ್ವನಾಥ ಪ್ರತಾಪ್‌ ಸಿಂಗ್‌ ನೇತೃತ್ವದ ನ್ಯಾಷನಲ್‌ ಫ್ರಂಟ್‌ ಅಧಿಕಾರಕ್ಕೆ ಬಂತು. ಬಿಜೆಪಿ ಮತ್ತು ಎಡಪಕ್ಷ ಗಳು ಬಾಹ್ಯ ಬೆಂಬಲ ನೀಡಿದವು. ಚುನಾವಣೆಯಲ್ಲಿ ಜನತಾದಳ 143 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 197 ಕ್ಷೇತ್ರಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ವಿಶೇಷ ಎಂದರೆ, ಕಾಂಗ್ರೆಸ್‌ ಪಡೆದ ಮತಗಳ ಪ್ರಮಾಣ ಶೇ.39.5ರಷ್ಟಿದ್ದರೆ, ಜನತಾ ದಳ ಮತಪ್ರಮಾಣ ಕೇವಲ 17.8ರಷ್ಟು ಮಾತ್ರ. ಬಿಜೆಪಿ 89, ಎಡಪಕ್ಷ ಗಳು 46 ಸ್ಥಾನಗಳನ್ನು ಗೆದ್ದುಕೊಂಡವು. ಬಿಜೆಪಿಯ ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ಈ ಚುನಾವಣೆಯು ಮೈಲುಗಲ್ಲು ಎಂದು ಹೇಳಬಹುದು. 1984ರ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗೆದ್ದಿದ್ದ ಬಿಜೆಪಿ ಈ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಪಡೆಯಿತು. ನ್ಯಾಷನಲ್‌ ಫ್ರಂಟ್‌ನ ನಾಯಕರಾಗಿದ್ದ ವಿಶ್ವನಾಥ ಪ್ರತಾಪ್‌ ಸಿಂಗ್‌ ಪ್ರಧಾನಿಯಾದರು. ಆದರೆ, ಅವರ ಆಡಳಿತವೇನೂ ಬಹಳ ದಿನಗಳವರೆಗೆ ಬರಲಿಲ್ಲ. ಬಿಜೆಪಿಯ ಎಲ್‌.ಕೆ.ಆಡ್ವಾಣಿ ಅವರು ರಾಮರಥ ಯಾತ್ರೆ ಕೈಗೊಂಡಿದ್ದರು. ಬಿಹಾರದಲ್ಲಿ ಲಾಲು ಪ್ರಸಾದ್‌ ಯಾದವ್‌ ಸರಕಾರ ಆಡ್ವಾಣಿಯನ್ನು ಬಂಧಿಸಿದ್ದರಿಂದ ಬಿಜೆಪಿ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆಯಿತು. ವಿಶ್ವನಾಥ ಪ್ರತಾಪ್‌ ಸಿಂಗ್‌ ಸರಕಾರವು 1990ರ ನವೆಂಬರ್‌ನಲ್ಲಿ ಪತನವಾಯಿತು. ಇದೇ ಸಂದರ್ಭದಲ್ಲಿ ಜನತಾ ದಳದ ಮತ್ತೊಬ್ಬ ನಾಯಕ ಚಂದ್ರಶೇಖರ್‌ ಅವರು ತಮ್ಮೊಂದಿಗೆ 64 ಸದಸ್ಯರನ್ನು ಕರೆದುಕೊಂಡು ದಳದಿಂದ ಹೊರ ಬಂದು ಸಮಾಜವಾದಿ ಜನತಾ ಪಾರ್ಟಿ ಸ್ಥಾಪಿಸಿದರು. ಕಾಂಗ್ರೆಸ್‌ ಬೆಂಬಲದೊಂದಿಗೆ ಚಂದ್ರಶೇಖರ್‌ ಪ್ರಧಾನಿಯಾದರು. ಆದರೆ, ರಾಜೀವ್‌ ಗಾಂಧಿ ವಿರುದ್ಧ ಗೂಢಚರ್ಯ ಮಾಡಲಾಗುತ್ತಿದೆಂದು ಆರೋಪಿಸಿದ ಕಾಂಗ್ರೆಸ್‌ ಬೆಂಬಲ ವಾಪಸ್‌ ಪಡೆಯುವುದರೊಂದಿಗೆ ಮತ್ತೊಂದು ಸಾರ್ವತ್ರಿಕ ಚುನಾವಣೆ ಎದುರಾಯಿತು.

ಶುಕ್ರವಾರ, ಮಾರ್ಚ್ 8, 2019

ಕಾರ್ಗಿಲ್ ಗರ್ಲ್- ಗುಂಜನಾ ಸಕ್ಸೇನಾ

ರಣರಂಗದಲ್ಲಿ ಮಹಿಳೆಯರದ್ದು 'ಸಪೋರ್ಟಿಂಗ್‌ ರೋಲ್‌' ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ವ್ಯಾಖ್ಯಾನ ಬದಲಾಗಿದೆ. ಪುರುಷರಷ್ಟೇ ಸರಿಸಮಾನವಾಗಿ ರಣರಂಗದಲ್ಲಿ ಓಡಾಡಬಲ್ಲ ಧೀರೆ ಗುಂಜನಾ ಸಕ್ಸೇನಾ ಅಂಥ ಉದಾಹರಣೆಗಳಲ್ಲೊಬ್ಬರು. ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆ. ಸೇನಾ ವಲಯ ಹಾಗೂ ಕುಟುಂಬಸ್ಥರು ಗುಂಜನಾ ಅವರನ್ನು 'ಕಾರ್ಗಿಲ್‌ ಗರ್ಲ್‌' ಎಂದು ಪ್ರೀತಿಯಿಂದ ಕರೆಯುತ್ತಾರೆ. ಸೇನೆ ಗುಂಜನಾಗೆ ಹೊಸದಲ್ಲ. ತಂದೆ ಹಾಗೂ ಸಹೋದರರಿಬ್ಬರೂ ಸೇನೆಯಲ್ಲಿ ಅಪ್ರತಿಮ ಸಾಹಸ ಮೆರೆದವರು. ದಿಲ್ಲಿ ವಿವಿಯ ಹಂಸರಾಜ್‌ ಕಾಲೇಜ್‌ನಲ್ಲಿ ಡಿಗ್ರಿ ಪಡೆದ ಬಳಿಕ, ಸೇನೆ ಸೇರುವುದೊಂದೇ ಅವರ ಮುಂದಿದ್ದ ಆಯ್ಕೆ. 1994ರಲ್ಲಿ ಗುಂಜನಾ ಸಕ್ಸೇನಾ, ಶ್ರೀವಿದ್ಯಾ ರಾಜನ್‌ ಸೇರಿದಂತೆ 25 ಮಹಿಳೆಯರ ಮೊದಲ ಪೈಲಟ್‌ ತಂಡವನ್ನು ಭಾರತೀಯ ವಾಯುಪಡೆ ರಚಿಸಿತು. ಹೀಗಿದ್ದರೂ, ಮಹಿಳಾ ತಂಡದ ಸೇವೆ ಸಂಪೂರ್ಣವಾಗಿ ಸೇನೆಗೆ ಲಭ್ಯವಾಗಿದ್ದು 2016ರಲ್ಲಿ. ಆದರೆ, ಗುಂಜನಾ ಮತ್ತು ಶ್ರೀವಿದ್ಯಾ ಅವರ ಸಾಹಸಗಾಥೆ 1999ರ ಕಾರ್ಗಿಲ್‌ ಯುದ್ಧದ ವೇಳೆಯಲ್ಲಿ ಜಗಜ್ಜಾಹೀರಾಯಿತು. ಸೇನೆ ಇನ್ನೂ ಮಹಿಳೆಯರನ್ನು ಯುದ್ಧಭೂಮಿಗೆ ಕಳುಹಿಸಬೇಕೇ ಬೇಡವೇ ಎಂಬ ದ್ವಂದ್ವದಲ್ಲಿದ್ದಾಗಲೇ, ಈ ಮಹಿಳೆಯರಿಬ್ಬರು ಇಡೀ ಯುವತಿಯರಿಗೆ ರೋಲ್‌ ಮಾಡೆಲ್‌ ಆಗುವ ಸಾಹಸ ಮೆರೆದರು. 
ಹಾಗೆ ನೋಡಿದರೆ, ಫ್ಲೈಟ್‌ ಲೆಫ್ಟಿನೆಂಟ್‌ ಗುಂಜನಾ ಮತ್ತು ಶ್ರೀವಿದ್ಯಾ ಅವರು ಫೈಟರ್‌ ಜೆಟ್‌ಗಳ ಹಾರಾಟ ನಡೆಸಿರಲಿಲ್ಲ. ಆದರೆ, ಕಾರ್ಗಿಲ್‌ ಯುದ್ಧ ತುತ್ತತುದಿಯಲ್ಲಿದ್ದಾಗ, ಭಾರತೀಯ ವಾಯುಪಡೆ ತನ್ನೆಲ್ಲ ಪೈಲಟ್‌ಗಳ ಗರಿಷ್ಠ ಸೇವೆಯನ್ನು ಬಳಸಿಕೊಳ್ಳಲು ಮುಂದಾಯಿತು. ಆಗ, ಗುಂಜನಾ ಮತ್ತು ಶ್ರೀವಿದ್ಯಾ ಅವರಿಗೆ ಕರೆ ಬಂತು. ಗಾಯಾಳು ಯೋಧರ ಸ್ಥಳಾಂತರ ಮತ್ತು ಯುದ್ಧಭೂಮಿಯಲ್ಲಿ ಪಾಕಿಸ್ತಾನದ ಸ್ಥಿತಿಯನ್ನು ಗುರುತಿಸಿ ಮಾಹಿತಿ ನೀಡುವ ಟಾಸ್ಕ್‌ ನೀಡಲಾಯಿತು. ಅಚ್ಚರಿಯ ಸಂಗತಿ ಎಂದರೆ, ಗುಂಜನಾ ಮತ್ತು ಶ್ರೀವಿದ್ಯಾ ಹಾರಾಟ ಮಾಡಲಿರುವ ಹೆಲಿಕಾಪ್ಟರ್‌ಗಳು ತುಂಬ ಚಿಕ್ಕವು ಮತ್ತು ಶಸ್ತ್ರರಹಿತವಾಗಿದ್ದವು. ಒಮ್ಮೆ ಇವರು ತಮ್ಮ ಕಾಪ್ಟರ್‌ ಅನ್ನು ಕಾರ್ಗಿಲ್‌ ಏರ್‌ಸ್ಟ್ರಿಪ್‌ನಿಂದ ಟೇಕ್‌ ಆಫ್‌ ಮಾಡುತ್ತಿರುವಾಗಲೇ ಪಾಕಿಸ್ತಾನದ ಕ್ಷಿಪಣಿಯೊಂದು ಇವರತ್ತ ನುಗ್ಗಿ ಬಂತು. ಆಗ ಸ್ವಲ್ಪದರಲ್ಲಿ ಕಾಪ್ಟರ್‌ ಅದರಿಂದ ತಪ್ಪಿಸಿಕೊಂಡಿತು. ಇಂಥ ಸಾವಿನ ಸಮೀಪ ಹೋದ ಅನೇಕ ಅನುಭವವಗಳು ಗುಂಜನಾ ಅವರಿಗೆ ಕಾರ್ಗಿಲ್‌ ಯುದ್ಧದ ವೇಳೆ ಆದವು. ಒಂದೊಮ್ಮೆ ಕಾಪ್ಟರ್‌ ಅಪಘಾತಕ್ಕೀಡಾಗಿ ವೈರಿಗಳ ನೆಲದಲ್ಲಿ ಬಿದ್ದರೆ ನೆರವಿಗೆ ಇರಲಿ ಎಂದು ಗುಂಜನಾ ತಮ್ಮ ಬಳಿ ಐಎನ್‌ಎಸ್‌ಎಎಸ್‌ ರೈಫಲ್‌ ಮತ್ತು ರಿವಾಲ್ವರ್‌ ಇಟ್ಟುಕೊಳ್ಳುತ್ತಿದ್ದರು. ಯುದ್ಧಭೂಮಿಯಲ್ಲಿ ನೇರವಾಗಿ ಭಾಗಿಯಾದ ಮೊದಲ ಮಹಿಳಾ ಪೈಲಟ್‌ಗಳೆಂಬ ಖ್ಯಾತಿ ಅವರಿಗೆ ಅಂಟಿಕೊಂಡಿತು. ಕಾಪ್ಟರ್‌ ಪೈಲಟ್‌ ಆಗಿದ್ದ ಗುಂಜನಾ ಅವರು ಕೇವಲ 7 ವರ್ಷದವರೆಗೆ ಮಾತ್ರ ಸೇವೆ ಸಲ್ಲಿಸಿದರು. ಕಾರ್ಗಿಲ್‌ನಲ್ಲಿ ತೋರಿದ ಅಪ್ರತಿಮ ಸಾಹಸಕ್ಕಾಗಿ ಶೌರ್ಯವೀರ ಪದಕ ನೀಡಲಾಯಿತು. ಎಲ್ಲಕ್ಕಿಂತ ಸಾವಿರಾರು ಯುವತಿಯರಿಗೆ ಸೇನೆ ಸೇರುವ ಸ್ಫೂರ್ತಿಯಾದರು. 

ತೆಲುಗು ಅಸ್ಮಿತೆ ರಾಜಕಾರಣದ ಟಿಡಿಪಿ

ಟಿಡಿಪಿ ಎಂದು ಹೆಚ್ಚು ಪ್ರಚಲಿತವಾಗಿರುವ ತೆಲುಗು ದೇಶಂ ಪಾರ್ಟಿ, ಸಂಸತ್ತಿನಲ್ಲಿ ಪ್ರತಿಪಕ್ಷ ಸ್ಥಾ ನ ನಿರ್ವಹಿಸಿದ ಮೊದಲ ಪ್ರಾದೇಶಿಕ ಪಕ್ಷ ಎಂಬ ಹೆಗ್ಗಳಿಕೆ ಹೊಂದಿದೆ. ಟಿಡಿಪಿ ಸದ್ಯ ಆಂಧ್ರದಲ್ಲಿ ಆಡಳಿತ ನಡೆಸುತ್ತಿದ್ದರೆ, ತೆಲಂಗಾಣದಲ್ಲಿ ತನ್ನ ಪ್ರಭಾವ ಹೊಂದಿದೆ. ತೆಲುಗು ಭಾಷೆಯ ಅಸ್ಮಿತೆಗಾಗಿ ತೆಲುಗು ದೇಶಂ ಪಾರ್ಟಿಯನ್ನು ಪ್ರಖ್ಯಾತ ನಟ ಎನ್‌.ಟಿ.ರಾಮರಾವ್‌ ಅವರು 1982ರ ಮಾರ್ಚ್‌ 29ರಂದು ಆರಂಭಿಸಿದರು. ಸದ್ಯ ಆಂಧ್ರದ ಮುಖ್ಯಮಂತ್ರಿ ಆಗಿರುವ ಚಂದ್ರಬಾಬು ನಾಯ್ಡು ಅವರು 1995ರಿಂದ ಟಿಡಿಪಿ ನೇತೃತ್ವ ವಹಿಸಿದ್ದಾರೆ. ಎನ್‌ಟಿಆರ್‌ ಅವರು ಜನಪ್ರಿಯ ಎಷ್ಟಿತ್ತೆಂದರೆ, ಟಿಡಿಪಿ ಆರಂಭಿಸಿದ 9 ತಿಂಗಳಲ್ಲೇ ಅವರು ಅಧಿಕಾರಕ್ಕೆ ಬಂದು, ಮೊದಲ ಬಾರಿಗೆ ಸಿಎಂ ಆದರು. 1984ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಂತರ ಅತಿ ಹೆಚ್ಚು ಸ್ಥಾನ ಗೆದ್ದಿದ್ದರಿಂದ ಪ್ರತಿಪಕ್ಷ ವಾಗಿ ಟಿಡಿಪಿ ಕಾರ್ಯನಿರ್ವಹಿಸಿತು. ಎನ್‌ಟಿಆರ್‌ ಅವರು ತೆಲುಗು ಭಾಷೆ ಮತ್ತು ನಾಡು ಅಸ್ಮಿತೆಯಾಗಿ ಪಕ್ಷ ವನ್ನ ಆರಂಭಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಕಾಂಗ್ರೆಸ್‌ಗೆ ಪರ್ಯಾಯವಾದ ಪಕ್ಷ ವನ್ನು ಹುಟ್ಟುಹಾಕಬೇಕಿತ್ತು. ಹಾಗಾಗಿ, ಟಡಿಪಿಯ ಸೈದ್ಧಾಂತಿಕ ವಿಚಾರಧಾರೆ ತೆಲುಗು ಅಸ್ಮಿತೆಯೇ ಆಗಿದೆ. ಇದರ ಜತೆಗೆ ರೈತರು, ಹಿಂದಿಳಿದವರು ಮತ್ತು ಮಧ್ಯಮ ವರ್ಗದ ಜನರ ಆಶೋತ್ತರಗಳನ್ನು ಈಡೇರಿಸುವುದಕ್ಕೂ ಬದ್ಧವಾಗಿದೆ. 1990ರ ನಂತರ ಟಿಡಿಪಿ ಉದಾರವಾದಕ್ಕೆ ಒತ್ತು ನೀಡಿದ್ದರಿಂದ, ಅದು ಈಗ ಉದ್ಯಮಿಗಳ ಪರ ಮತ್ತು ಅಭಿವೃದ್ಧಿ ಪರ ಎಂಬ ಟ್ಯಾಗ್‌ಲೈನ್‌ ಅಂಟಿಸಿಕೊಂಡಿದೆ. ಲೋಕಸಭೆಯಲ್ಲಿ 15, ರಾಜ್ಯಸಭೆಯಲ್ಲಿ 6 ತನ್ನ ಪ್ರತಿನಿಧಿಗಳನ್ನು ಹೊಂದಿದೆ. ಇನ್ನು ಆಂಧ್ರಪ್ರದೇಶದಲ್ಲಿ ಒಟ್ಟು 102 ಶಾಸಕರೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ. ಕೇಂದ್ರ ರಾಜಕಾರಣದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಟಿಡಿಪಿ, ಈ ಹಿಂದೆ ಒಮ್ಮೆ ಯುಪಿಎ ಮತ್ತು ಎನ್‌ಡಿಎಗೆ ಬೆಂಬಲ ನೀಡಿತ್ತು. ಪ್ರಸಕ್ತ ಎನ್‌ಡಿಎ ಜತೆಗೆ ಗುರುತಿಸಿಕೊಂಡಿದ್ದ ನಾಯ್ಡು, ಆಂಧ್ರಕ್ಕೆ ವಿಶೇಷ ಪ್ಯಾಕೇಜ್‌ ನೀಡುತ್ತಿಲ್ಲ ಎಂದು ಆರೋಪಿಸಿ ಕೂಟದಿಂದ ಹೊರ ಬಂದಿದ್ದಾರೆ. ಪಕ್ಷ ದ ಸಂಸ್ಥಾಪಕರಾದ ಎನ್‌ಟಿಆರ್‌ ಅವರು ಒಟ್ಟು ಮೂರು ಬಾರಿ ಆಂಧ್ರ ಸಿಎಂ ಆಗಿದ್ದರು. ಚಂದ್ರಬಾಬು ನಾಯ್ಡು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

1984ರಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಜಯ

ಸಿಖ್ಖರ ಪವಿತ್ರ ದೇಗುಲವಾದ ಸ್ವರ್ಣ ಮಂದಿರದಲ್ಲಿ ಖಲಿಸ್ಥಾನ ಉಗ್ರರು ಅಡಗಿಕೊಂಡಿದ್ದರು. ಅವರನ್ನು ಅಲ್ಲಿಂದ ಹೊಡೆದು ಹಾಕುವ ಸೇನಾ ಕಾರ್ಯಾಚರಣೆ, ಆಪರೇಷನ್‌ ಬ್ಲೂಸ್ಟಾರ್‌ ಎಂದು ಪ್ರಖ್ಯಾತವಾಗಿದೆ. ಇಂದಿರಾ ಗಾಂಧಿ ಅವರು ಸ್ವರ್ಣ ಮಂದಿರಕ್ಕೆ ಸೇನೆಯನ್ನು ಕಳುಹಿಸಿದ್ದು ಕೆಲವು ಸಿಖ್ಖರಿಗೆ ಸರಿ ಕಾಣಲಿಲ್ಲ. ಅವರು ಇಂದಿರಾ ಮೇಲೆ ಆಕ್ರೋಶಗೊಂಡಿದ್ದರು. ಇದರ ಪರಿಣಾಮ ಇಂದಿರಾ ಗಾಂಧಿ ಅವರನ್ನು 1984 ಅಕ್ಟೋಬರ್‌ 31ರಂದು ಅವರ ಅಂಗರಕ್ಷ ಕರಾಗಿದ್ದವರೇ ಗುಂಡಿಟ್ಟು ಕೊಂದರು. ಗಾಂಧಿ ಹತ್ಯೆ ನಂತರದ ಸಿಖ್‌ ವಿರೋಧಿ ದಂಗೆಗಳು ಶುರುವಾದವು. ಈ ಹೊತ್ತಲ್ಲಿ ನಡೆದ ನಡೆದ 8ನೇ ಸಾರ್ವತ್ರಿಕ ಚುನಾವಣೆಯು ತುಂಬ ಮಹತ್ವದ್ದಾಗಿತ್ತು. ಇಂದಿರಾ ಗಾಂಧಿ ಹತ್ಯೆ ಚುನಾವಣೆ ಮೇಲೆ ಸಂಪೂರ್ಣ ಪರಿಣಾಮ ಬೀರಿತ್ತು. ಇಂದಿರಾ ಪುತ್ರ ರಾಜೀವ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ 414 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಫಲಿತಾಂಶವನ್ನು ಪಡೆಯಿತು. ಭಾರತೀಯ ಜನತಾ ಪಾರ್ಟಿ(ಬಿಜೆಪಿ) 2ಸ್ಥಾನಗಳನ್ನು ಗೆಲ್ಲುವ ಮೂಲಕ ಚುನಾವಣಾ ರಾಜಕೀಯವನ್ನು ಆರಂಭಿಸಿತು. 1984ರ ಚುನಾವಣೆಯಲ್ಲಿ ದೇಶದೆಲ್ಲೆಡೆ ಸಕಾಲಕ್ಕೆ ನಡೆಯಿತಾದರೂ ಅಸ್ಸಾಮ್‌ ಮತ್ತು ಪಂಜಾಬ್‌ನಲ್ಲಿ ನಡೆಯುತ್ತಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ 1985ರವರೆಗೆ ಮುಂದೂಡಲಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ನಂತರ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದು ಆಂಧ್ರ ಪ್ರದೇಶದ ತೆಲುಗು ದೇಶಂ ಪಾರ್ಟಿ(ಪಿಡಿಪಿ). ಎನ್‌.ಟಿ.ರಾಮರಾವ್‌ ನೇತೃತ್ವದಲ್ಲಿ ಒಟ್ಟು 30 ಸ್ಥಾನಗಳನ್ನು ಗೆದ್ದುಕೊಂಡಿತು. ತಾನು ಎದುರಿಸಿದ ಮೊದಲನೆಯ ಚುನಾವಣೆಯಲ್ಲಿ ಗರಿಷ್ಠ ಸೀಟುಗಳನ್ನು ಪಡೆದ ಟಿಡಿಪಿ, ಕೇಂದ್ರದಲ್ಲಿ ಪ್ರಮುಖ ಪ್ರತಿಪಕ್ಷ ವಾಗಿ ಹೊರಹೊಮ್ಮಿತು. ಇದು ಭಾರತೀಯ ಚುನಾವಣೆಯ ಇತಿಹಾಸದಲ್ಲೇ ಇನ್ನು ದಾಖಲೆಯಾಗಿ ಉಳಿದಿದೆ. ಪ್ರಧಾನಿ ರಾಜೀವ್‌ ಗಾಂಧಿ ಪ್ರಧಾನಿಯಾಗಿ ಆಯ್ಕೆಯಾದರೆ, ಎನ್‌ಟಿಆರ್‌ ಅವರು ಪ್ರತಿಪಕ್ಷ ದ ನಾಯಕರಾದರು. ಇನ್ನುಳಿದಂತೆ ಜನತಾ ಪಾರ್ಟಿ 10, ಲೋಕದಳ 3 ಮತ್ತು ಕಮ್ಯುನಿಸ್ಟ್‌ ಪಾರ್ಟಿ 22 ಸ್ಥಾನಗಳನ್ನು ಗೆದ್ದುಕೊಂಡವು. ಈ ಚುನಾವಣೆ ಅನೇಕ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟವು. ಹೊಸ ತಲೆಮಾರಿನ ರಾಜಕಾರಣಿಯಾಗಿ ರಾಜೀವ್‌ ಗಾಂಧಿ ಅವರು ಪ್ರವರ್ಧಮಾನಕ್ಕೆ ಬಂದರು. ರಾಜೀವ್‌ ಅವಧಿಯಲ್ಲಿ ತಂತ್ರಜ್ಞಾನಕ್ಕೆ ವಿಶೇಷ ಒತ್ತು ದೊರೆಯಿತು. ಸಂವಹನ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾದವು. ಹಾಗೆಯೇ, ಇಂದಿಗೂ ಪ್ರತಿಪಕ್ಷ ಗಳಿಗೆ ಆಯುಧವಾಗಿರುವ ಬೋಪೊರ್ಸ್‌ ಖರೀದಿ ಹಗರಣ ಕೂಡ ಹೆಚ್ಚು ಸದ್ದು ಮಾಡಿತು. ಇದು ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರಿತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. 
- ತಿಪ್ಪಾರ 

ಗುರುವಾರ, ಮಾರ್ಚ್ 7, 2019

ಟಿಎಂಸಿ, ಮಮತಾ ಎಂಬ ಗಟ್ಟಿಗಿತ್ತಿಯ ರಾಜಕಾರಣದ ವೇದಿಕೆ

ಜನತಾ ಪಾರ್ಟಿ ಹೇಗೆ ಅನೇಕ ಹೊಸ ಪ್ರಾದೇಶಿಕ ಪಕ್ಷ ಗಳ ಹುಟ್ಟಿಗೆ ಕಾರಣವಾಯಿತೋ, ಹಾಗೆಯೇ ಕಾಂಗ್ರೆಸ್‌ ಕೂಡ ಅನೇಕ ಪಕ್ಷ ಗಳ ಅಸ್ತಿತ್ವಕ್ಕೆ ದಾರಿ ಮಾಡಿಕೊಟ್ಟಿದೆ. ನಾಯಕತ್ವ ಕಾರಣದಿಂದಾಗಿ ಅನೇಕ ಕಾಂಗ್ರೆಸ್‌ ನಾಯಕರು ತಮ್ಮದೇ ಆದ ಪಕ್ಷ ವನ್ನು ಸಂಘಟಿಸಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಮಮತಾ ಬ್ಯಾನರ್ಜಿ ಅವರೂ ಪ್ರಮುಖರು. 26 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ದುಡಿದಿದ್ದ ಅವರು, 1998 ಜನವರಿ 1ರಂದು ತಮ್ಮದೇ ಆದ ತೃಣಮೂಲ ಕಾಂಗ್ರೆಸ್‌ ಪಕ್ಷ ವನ್ನು ಆರಂಭಿಸಿದರು. 'ಮಾ ಮಾತಿ ಮಾನೂಷ್‌'(ಜನನಿ, ಜನ್ಮಭೂಮಿ ಮತ್ತು ಜನರು) ಎಂಬದು ತೃಣಮೂಲ ಪಕ್ಷ ದ ಧ್ಯೇಯವಾಕ್ಯ ಮತ್ತು ಜನಪ್ರಿಯ ಘೋಷಣೆಯೂ ಹೌದು. 2014ರ ಲೋಕಸಭೆಯ ಚುನಾವಣೆಯಲ್ಲಿ ಶೇ.6ರಷ್ಟು ಮತ ಪಡೆದ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಈ ಪಕ್ಷ ಕ್ಕೆ ರಾಷ್ಟ್ರೀಯ ಪಕ್ಷ ದ ಮಾನ್ಯತೆ ಹೊಂದಿದೆ. 30 ವರ್ಷಗಳ ಕಾಲ ಎಡ ಪಕ್ಷ ಗಳು ಪಶಿಮ ಬಂಗಾಳದಲ್ಲಿ ಹೊಂದಿದ್ದ ಹಿಡಿತವನ್ನು ಸಡಿಲಿಸಿದ್ದೇ ಈ ಮಮತಾ ಬ್ಯಾನರ್ಜಿ. ಹೋರಾಟದಿಂದಲೇ ತೃಣಮೂಲ ಕಾಂಗೆÜ್ರಸ್‌ ಅನ್ನು ಅಧಿಕಾರದ ಪಡಸಾಲೆಗೆ ತಂದು ನಿಲ್ಲಿಸಿದರು. ಸಜವಾಗಿಯೇ, ಅವರು ಮುಖ್ಯಮಂತ್ರಿಯೂ ಆದರು. ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ಮೇಲೆ ಪ್ರಭುತ್ವ ಸಾಧಿಸಲು ಪ್ರತಿ ಪಕ್ಷ ವೂ ಹಾತೊರೆಯುತ್ತಿದೆ. ಯಾರು ಹೆಚ್ಚು ಸೀಟುಗಳನ್ನು ಗೆಲ್ಲುತ್ತಾರೋ ಅವರು ಸಜವಾಗಿ ಕೇಂದ್ರ ರಾಜಕಾರಣದಲ್ಲಿ ಪ್ರಭಾವವನ್ನು ಗಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಹೊರತಾದ ಕೂಟದ ಚರ್ಚೆ ಬಂದಾಗಲೆಲ್ಲ, ಮಮತಾ ಬ್ಯಾನರ್ಜಿ ಅವರು ಹೆಸರು ಮುಂಚೂಣಿಯಲ್ಲಿರುತ್ತದೆ ಮತ್ತು ಅವರು ಪ್ರಧಾನಿ ಹುದ್ದೆಯ ಆಕಾಂಕ್ಷಿಯೂ ಹೌದು. ಪಶ್ಚಿಮ ಬಂಗಾಳ, ತ್ರಿಪುರಾ, ಮಣಿಪುರ, ಜಾರ್ಖಂಡ್‌ ಮತ್ತು ಅಸ್ಸಾಮ್‌ನಲ್ಲಿ ತನ್ನ ಪ್ರಭಾವ ಹೊಂದಿರುವ ತೃಣಮೂಲ ಕಾಂಗ್ರೆಸ್‌ ಲೋಕಸಭೆಯಲ್ಲಿ ಒಟ್ಟು 34 ಸಂಸದರನ್ನು ಹೊಂದಿದ್ದು, ರಾಜ್ಯಸಭೆಯಲ್ಲಿ 13 ಪ್ರತಿನಿಧಿಗಳಿದ್ದಾರೆ. 295 ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ 213 ಶಾಸಕರನ್ನು ಹೊಂದಿದೆ. 2011ರಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ತನ್ನ ಮಿತ್ರ ಪಕ್ಷ ಗಳ ಸಹಾಯದೊಂದಿಗೆ ಅಧಿಕಾರಕ್ಕೆ ಬಂತು. 2016ರ ವಿಧಾನಸಭೆ ಚುನಾವಣೆಯಲ್ಲೂ ಭರ್ಜರಿ ಜಯ ಗಳಿಸಿತು.

ಕಾಂಗ್ರೆಸೇತರ ಮೊದಲ ಸರಕಾರ ರಚನೆ

ಭಾರತೀಯ ರಾಜಕಾರಣದಲ್ಲಿ ಏಕಮೇವಾದ್ವಿತೀಯವಾಗಿ ಮೆರೆಯುತ್ತಿದ್ದ ಕಾಂಗ್ರೆಸ್‌ಗೆ ಬಲವಾದ ಪೆಟ್ಟು ನೀಡಿದ ಚುನಾವಣೆ ಇದು. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಪ್ರತಿಪಕ್ಷ ಗಳೆಲ್ಲವೂ ಒಗ್ಗೂಡಿ, ಕಾಂಗ್ರೆಸ್‌ ಅನ್ನು ಹೀನಾಯವಾಗಿ ಸೋಲಿಸಿದವು. ವಾಸ್ತವದಲ್ಲಿ 1975ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ, ಚುನಾವಣೆಯನ್ನು ಎರಡು ವರ್ಷದವರೆಗೂ ಮುಂದೂಡಿದರು. ಕರಾಳ ತುರ್ತು ಪರಿಸ್ಥಿತಿಯನ್ನು ಅನುಭವಿಸಿದ್ದ ಜನ 1977ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ, ಅದರ ಗರ್ವವನ್ನು ತೊಡೆದು ಹಾಕಿದರು. ಈ ಚುನಾವಣೆಯಲ್ಲಿ ಜನತಾ ಪಾರ್ಟಿ ನೇತೃತ್ವದಲ್ಲಿ ಸಿಪಿಎಂ, ಎಸ್‌ಎಡಿ, ಪಿಡಬ್ಲ್ಯೂಪಿಐ, ಆರ್‌ಎಸ್‌ಪಿ, ಎಐಎಫ್‌ಬಿ, ಆರ್‌ಪಿಐ, ಡಿಎಂಕೆ ಕೂಟ ರಚಿಸಿಕೊಂಡವು. ಇನ್ನು ಕಾಂಗ್ರೆಸ್‌ ನೇತೃತ್ವದ ಕೂಟದಲ್ಲಿ ಎಐಎಡಿಎಂಕೆ, ಸಿಪಿಐ, ಮುಸ್ಲಿಮ್‌ ಲೀಗ್‌, ಕೇರಳ ಕಾಂಗ್ರೆಸ್‌ ಇದ್ದವು. ಜನತಾ ಪಾರ್ಟಿ ಒಟ್ಟು 298 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 153 ಸ್ಥಾನಗಳನ್ನು ಗೆಲ್ಲಲು ಮಾತ್ರ ಸಾಧ್ಯವಾಯಿತು. ಜನತಾ ಪರಿವಾರದ ನಾಯಕರಾಗಿ ಮೊರಾರ್ಜಿ ದೇಸಾಯಿಅವರನ್ನು ಆಯ್ಕೆ ಮಾಡಲಾಯಿತು. ಅವರು ಕಾಂಗ್ರೆಸೇತರ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ವಿಶೇಷ ಎಂದರೆ, ಈ ಚುನಾವಣೆ ನಡೆದಿದ್ದೇ ಡೆಮಾಕ್ರಷಿ ಅಥವಾ ಡಿಕ್ಟಟರ್‌ಶಿಫ್‌(ಜನತಂತ್ರ ಅಥವಾ ಸರ್ವಾಧಿಕಾರ) ಎಂಬ ಸೈದ್ಧಾಂತಿಕ ನೆಲೆಯಲ್ಲಿ. ಕಾಂಗ್ರೆಸ್‌ ವಿರೋಧಿ ನೆಲೆಯಲ್ಲಿ ಒಂದಾಗಿ ಸರಕಾರ ರಚಿಸಿದ್ದ ಜನತಾ ಪರಿವಾರ, 1979ರಲ್ಲಿ ಒಡೆದ ಮನೆಯಾಯಿತು. ಇದರಿಂದ ಅನಿವಾರ್ಯವಾಗಿ ಮೊರಾರ್ಜಿ ದೇಸಾಯಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಬಳಿಕ ಕಾಂಗ್ರೆಸ್‌ ಬೆಂಬಲದೊಂದಿಗೆ ಚರಣ್‌ ಸಿಂಗ್‌ ಅವರು ಪ್ರಧಾನಿಯಾದರು! ಸರ್ವಾಧಿಕಾರ, ಪ್ರಜಾತಂತ್ರ, ಸಂವಿಧಾನ ರಕ್ಷ ಣೆ ಹೆಸರಿನಲ್ಲಿ ನಡೆದ ಈ ಚುನಾವಣೆಯ ಅನೇಕ ಅವಕಾಶಗಳನ್ನು ಸೃಷ್ಟಿಸಿತು. ಆದರೆ, ಅಂಥ ಅವಕಾಶಗಳನ್ನು ಬಳಸಿಕೊಳ್ಳಲು ನಾಯಕರು ಮಾತ್ರ ವಿಫಲರಾದರು. ಕಾಂಗ್ರೆಸ್‌ಗೆ ಪರ್ಯಾಯ ರಾಜಕಾರಣ ಕನಸು ಕಾಣುವಂತೆ ಮಾಡಿದ್ದ ಜನತಾ ಪಾರ್ಟಿ ಅಧಿಕಾರಕ್ಕೆ ಕಚ್ಚಾಡಿಕೊಂಡಿದ್ದು ರಾಜಕೀಯ ಪ್ರಮಾದ ಎಂಬುದು ಮುಂಬರುವ ದಿನಗಳಲ್ಲಿ ಎಲ್ಲ ಭಾರತೀಯರ ಅನುಭವಕ್ಕೆ ಬಂತು. ವಿಶೇಷ ಎಂದರೆ, ತುರ್ತು ಪರಿಸ್ಥಿತಿ ವಿರೋಧಿಸಿ ಮತ ನೀಡಿದ್ದ ಭಾರತೀಯರು ನಂತರದ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ನೀಡಿ ಮತ್ತೆ ಅಧಿಕಾರಕ್ಕೆ ತಂದರು.   - ತಿಪ್ಪಾರ 

ಮಂಗಳವಾರ, ಮಾರ್ಚ್ 5, 2019

ಬಹುಜನರ ಅಭ್ಯುದಯ ಬಿಎಸ್ಪಿಯ ಧ್ಯೇಯ

ಹುಜನ ಸಮಾಜ ಪಾರ್ಟಿ(ಬಿಎಸ್‌ಪಿ)ಗೆ ರಾಷ್ಟ್ರೀಯ ಪಕ್ಷ ದ ಮಾನ್ಯತೆ ಇದ್ದರೂ ಉತ್ತರ ಪ್ರದೇಶದಲ್ಲೆ ಹೆಚ್ಚು ಅಸ್ತಿತ್ವವನ್ನು ಹೊಂದಿದೆ. ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಂದರ್ಭ ಎದುರಾದಗಲೆಲ್ಲ ಅದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ದೇಶದ ತಳಮಟ್ಟದ ಸಮುದಾಯ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕಾನ್ಶಿ ರಾಮ್‌ ಅವರು 1984ರಲ್ಲಿ ಬಿಎಸ್‌ಪಿಯನ್ನು ಹುಟ್ಟು ಹಾಕಿದರು. ಬಹುಜನ ಅಂದರೆ ಬಹುಸಂಖ್ಯಾತರು ಎಂದರ್ಥ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರನ್ನು 'ಬಹುಜನ' ವ್ಯಾಪ್ತಿಯೊಳಗೆ ಸೇರಿದೆ. ಈ ವರ್ಗದ ಜನರ ಸಾಮಾಜಿಕ ಬದಲಾವಣೆ ಮತ್ತು ಆರ್ಥಿಕ ವಿಮೋಚನೆಯ ಬಿಎಸ್‌ಪಿ ಗುರಿ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಒಂದೂ ಸೀಟು ಗೆಲ್ಲದಿದ್ದರೂ ಮತಗಳಿಕೆಯ ಪ್ರಮಾಣದಲ್ಲಿ ದೇಶದ ಮೂರನೇ ಅತಿದೊಡ್ಡ ಪಕ್ಷ ವಾಗಿ ಹೊರಹೊಮ್ಮಿತ್ತು. ಜ್ಯೋತಿರಾವ್‌ ಫುಲೆ, ಅಂಬೇಡ್ಕರ್‌, ನಾರಾಯಣಗುರು, ಪೆರಿಯಾರ್‌ ಇ ವಿ ರಾಮಸ್ವಾಮಿ, ಛತ್ರಪತಿ ಶಾಹುಜಿ ಮಹಾರಾಜ ಅವರ ಸಿದ್ಧಾವಂತನ್ನು ಬಿಎಸ್‌ಪಿ ತನ್ನ ವಿಚಾಧಾರೆಯನ್ನಾಗಿಸಿಕೊಂಡಿದೆ. ಕಾನ್ಶಿ ರಾಮ್‌ ಅವರು ಬಿಎಸ್‌ಪಿಯನ್ನು ಬಹುಜನರ ಪಕ್ಷ ವಾಗಿ ರೂಪಿಸುವಲ್ಲಿ ಮಹತ್ತರ ಕಾಣಿಕೆಯನ್ನು ನೀಡಿದರು. ನಂತರ ಅವರು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಯಾವತಿಯನ್ನು 2001ರಲ್ಲಿ ನೇಮಕ ಮಾಡಿದರು. 2017ರ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಶೇ.22ರಷ್ಟು ಮತದೊಂದಿಗೆ 19 ಸ್ಥಾನಗಳನ್ನು ಗೆದ್ದಿತ್ತು. ಬಿಎಸ್‌ಪಿಗೆ ಪ್ರತ್ಯೇಕವಾದ ವಿದ್ಯಾರ್ಥಿ ವಿಭಾಗವಿಲ್ಲ. ಮಾಯಾವತಿಅವರು ಬಿಎಸ್‌ಪಿ ಸದ್ಯದ ವರ್ಚಸ್ವಿ ನಾಯಕಿ. ಮಾಯಾವತಿ ನಾಲ್ಕು ಬಾರಿ(1995, 1997 ಮತ್ತು 2000 - 2003, 2007-2012) ಬಿಎಸ್‌ಪಿಯನ್ನು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿ, ಮುಖ್ಯಮಂತ್ರಿಯೂ ಆದರು. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರು ಮಾಯಾವತಿ ಬೆಳವಣಿಗೆಯನ್ನು 'ಮಿರಾಕಲ್‌ ಆಫ್‌ ಡೆಮಾಕ್ರಷಿ'(ಪ್ರಜಾಪ್ರಭುತ್ವದ ಪವಾಡ) ಎಂದು ಬಣ್ಣಿಸಿದ್ದರು. ತಮ್ಮ ಕಾರ್ಯಕರ್ತರಿಂದ ಬೇಹನ್‌ಜೀ ಎಂದು ಕರೆಯಿಸಿಕೊಳ್ಳುವ ಮಾಯಾವತಿ ಪ್ರಧಾನಿ ಹುದ್ದೆ ಆಕಾಂಕ್ಷಿಯೂ ಹೌದು. ಪ್ರಸಕ್ತ ಚುನಾವಣೆಯಲ್ಲಿ ಅವರು ಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿದೆ. ಆನೆಯು ಬಿಎಸ್‌ಪಿಯ ಚುನಾವಣಾ ಗುರುತು. 

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ

ಹೊಸ ರಾಜಕಾರಣ ಬಿತ್ತಿದ 5ನೇ ಚುನಾವಣೆ

ಭಾರತೀಯ ರಾಜಕಾರಣದಲ್ಲಿ 1971ರ ಚುನಾವಣೆ ಭಾರೀ ಬದಲಾವಣೆಗೆ ಕಾರಣವಾಯಿತು. ಇಂದಿರಾ ಗಾಂಧಿ ಮೂರನೇ ಅವಧಿಗೆ ಪ್ರಧಾನಿಯಾದರೆ, ಅವಧಿ ಪೂರ್ಣಗೊಂಡರೂ ಚುನಾವಣೆ ನಡೆಸದೇ ತುರ್ತುಪರಿಸ್ಥಿತಿ ಹೇರಿ, ಹೊಸ ರಾಜಕೀಯ ಮನ್ವಂತರಕ್ಕೆ ಹಾದಿ ತೋರಿಸಿದರು; ಹೊಸ ನಾಯಕರು ಉದಯಿಸಿದರು. ರಾಜಕಾರಣದ ಹೊಸ ಸಮೀಕರಣವನ್ನು ಮುಂದಿನ ವರ್ಷಗಳಲ್ಲಿ ಕಾಣಬೇಕಾಯಿತು. ನಾಲ್ಕನೇ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಕಾಂಗ್ರೆಸ್‌, 5ನೇ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿತು. ಈ ಚುನಾವಣೆ ಹೊತ್ತಿಗೆ ಕಾಂಗ್ರೆಸ್‌ ಒಡೆದ ಮನೆಯಾಗಿ, ಮೊರಾರ್ಜಿ ದೇಸಾಯಿನೇತೃತ್ವದ ಕಾಂಗ್ರೆಸ್‌ ಕೂಡ ಸ್ಪರ್ಧೆಯೊಡ್ಡಿತ್ತು. ಇಂದಿರಾ ನೇತೃತ್ವದ ಕಾಂಗ್ರೆಸ್‌ 518 ಕ್ಷೇತ್ರಗಳ ಪೈಕಿ 352 ಕ್ಷೇತ್ರಗಳನ್ನು ಗೆದ್ದುಕೊಂಡಿತು. ದೇಸಾಯಿ ನೇತೃತ್ವದ ಕಾಂಗ್ರೆಸ್‌ ಕೇವಲ 16 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಸಿಪಿಎಂ 25, ಸಿಪಿಐ 23 ಹಾಗೂ ಜನಸಂಘ 22, ಡಿಎಂಕೆ 23 ಸ್ಥಾನಗಳನ್ನು ಗೆದ್ದುಕೊಂಡವು. ಸ್ವತಂತ್ರಪಾರ್ಟಿ ಮಾತ್ರ ಇನ್ನಿಲ್ಲದಂತೆ ನೆಲಕಚ್ಚಿತು. ಈ ಹಿಂದಿನ ಅವಧಿಯಲ್ಲಿ ಇಂದಿರಾ ಗಾಂಧಿ ಮತ್ತು ಮೊರಾರ್ಜಿ ದೇಸಾಯಿ ಮಧ್ಯೆ ಕಾಂಗ್ರೆಸ್‌ ಒಡೆದು ಹೋಗಿತ್ತು. ಇಂದಿರಾ ಅವರನ್ನು ಪಕ್ಷ ದಿಂದ ಹೊರ ಹಾಕಲಾಗಿತ್ತು. ಆದರೆ, ಬಹುತೇಕ ಸಂಸದರು ಮತ್ತು ಕಾರ್ಯಕರ್ತರು ಇಂದಿರಾಗೆ ಸಪೋರ್ಟ್‌ ಮಾಡಿದ್ದರು. ಹಾಗಾಗಿ, ಚುನಾವಣಾ ಆಯೋಗ ಕೂಡ ಇಂದಿರಾ ಕಾಂಗ್ರೆಸ್‌ಗೆ ಮಾನ್ಯತೆ ನೀಡಿತ್ತು. ಇಂದಿರಾ ವಿರೋಧಿಸಿದ್ದ 31 ಸಂಸದರು ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌(ಆರ್ಗನೈಷನ್‌) ಅಡಿ ಗುರುತಿಸಿಕೊಂಡಿದ್ದರು. ಈ ಒಳ ಜಗಳದ ಹೊರತಾಗಿಯೂ, ಇಂದಿರಾ ಪ್ರಭಾವಳಿಯಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಮತ್ತೊಂದೆಡೆ, ಕಾಂಗ್ರೆಸ್‌(ಒ) ಸಂಯುಕ್ತ ಸೋಷಿಯಲಿಸ್ಟ್‌ ಪಾರ್ಟಿ, ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ, ಸ್ವತಂತ್ರ ಪಾರ್ಟಿ, ಬಿಜೆಎಸ್‌ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಕಣಕ್ಕಿಳಿದರು ಇಂದಿರಾಳನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಆದರೆ, 1975ರಲ್ಲಿ ಇಂದಿರಾ ಗಾಂಧಿ ವಿಧಿಸಿದ ತುರ್ತು ಪರಿಸ್ಥಿತಿ ಭಾರತೀಯ ರಾಜಕಾರಣದ ವರಸೆಯನ್ನು ಬದಲಿಸಿದವು. ತುರ್ತು ಪರಿಸ್ಥಿತಿ ಹಿಂದೆಗೆದ ನಂತರ ನಡೆದ ಚುನಾವಣೆಯಲ್ಲಿ ಅದ ಪ್ರಭಾವ ಎದ್ದು ಕಾಣಿತು. 
- ತಿಪ್ಪಾರ 

ಈ ಲೇಖನವು ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ.

ಸೋಮವಾರ, ಮಾರ್ಚ್ 4, 2019

ಇಬ್ಬರು ಸ್ಪೀಕರ್‌ ಕಂಡ ನಾಲ್ಕನೇ ಲೋಕಸಭೆ

1967ರಲ್ಲಿ ನಡೆದ ಚುನಾವಣೆಯು ಹಲವು ದೃಷ್ಟಿಗಳಿಂದ ಮಹತ್ವ ಪಡೆದುಕೊಂಡಿದೆ. ಈ ಚುನಾವಣೆಯ ಹೊತ್ತಿಗೆ ಲೋಕಸಭೆಸ್ಥಾನಗಳು 520ಕ್ಕೆ ಏರಿಕೆಯಾಗಿದವು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡವು. ನೆಹರು ಯುಗ ಮುಗಿದು ಇಂದಿರಾ ಯುಗಕ್ಕೆ ಬುನಾದಿ ಹಾಕಿದ ಚುನಾವಣೆ ಇದು. ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌, ಶೇ.40ರಷ್ಟು ಮತ ಪಡೆದ 283 ಸ್ಥಾನಗಳನ್ನು ಗೆದ್ದುಕೊಂಡು ಸಿಂಪಲ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಆದರೆ, ಈ ಹಿಂದಿನ ಮೂರು ಚುನಾವಣೆಗಳಿಗೆ ಹೋಲಿಸಿದರೆ, ಅದ್ಭುತ ಗೆಲವು ಏನಲ್ಲ. ಈ ಚುನಾವಣೆಯಲ್ಲೂ ರಾಜ್ಯಸಭೆಯ 13 ಸದಸ್ಯರು ಕೆಳಮನೆಗೆ ಆಯ್ಕೆಯಾದರು. ವಿಶೇಷ ಎಂದರೆ, ರಾಜಗೋಪಾಲಚಾರಿ ಅವರ ಸ್ವತಂತ್ರ ಪಾರ್ಟಿ ಕಾಂಗ್ರೆಸ್‌ ನಂತರ ಅತಿ ದೊಡ್ಡ ಪಕ್ಷ ವಾಯಿತು. ಅದು ಒಟ್ಟು 44 ಸ್ಥಾನ ಗೆದ್ದುಕೊಂಡಿತು. 35 ಸ್ಥಾನಗಳೊಂದಿಗೆ ಬಿಜೆಎಸ್‌ ಮೂರನೇ ಸ್ಥಾನದಲ್ಲಿ ಉಳಿಯಿತು. ಗುಜರಾತ್‌, ಮದ್ರಾಸ್‌, ಒಡಿಶಾ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ದಿಲ್ಲಿಯಲ್ಲಿ ಕಾಂಗ್ರೆಸ್‌ ಭಾರಿ ಸೋಲು ಎದುರಾಯಿತು. ಅಂದಿನ ರಾಜಕಾರಣದಲ್ಲಿ ಕಾಂಗ್ರೆಸ್‌ನದ್ದು ದೊಡ್ಡಣ್ಣ ಆ್ಯಟಿಟ್ಯೂಡ್‌. ಆದರೆ, ನೆಹರು ಮತ್ತು ಶಾಸ್ತ್ರಿ ಸಾವಿನ ನಂತರ ಕಾಂಗ್ರೆಸ್‌ನೊಳಗಿದ್ದ ಏಕತೆ ಮಾಯವಾಗಿ, ಒಳಜಗಳ ಶುರುವಾದವು. ಆದರೂ ಅದೆಲ್ಲವನ್ನೂ ಸಂಭಾಳಿಸುವಲ್ಲಿ ಇಂದಿರಾ ಯಶಸ್ವಿಯಾದರು. ಇದೇ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಕೂಡ ಗಣನೀಯವಾಗಿ ಇಳಿಜಾರಿನಲ್ಲಿತ್ತು. ಪಂಚವಾರ್ಷಿಕ ಯೋಜನೆ ಮೂಲಕ ಶೇ.5.6ರಷ್ಟು ಜಿಡಿಪಿ ಸಾಧಿಸುವ ಗುರಿ ಇತ್ತು. ವಾಸ್ತವದಲ್ಲಿ ಗುರಿಸಾಧನೆಯಾಗಿದ್ದು ಕೇವಲ ಶೇ.2.4 ಅಷ್ಟೆ. ಆಡಳಿತಾತ್ಮಕ ಮತ್ತು ರಾಜಕೀಯ ವೈಫಲ್ಯಗಳ ಒಟ್ಟು ಪರಿಣಾಮ ಮುಂದಿನ ಐದು ವರ್ಷಗಳಲ್ಲಿ ಕಾಣಬೇಕಾಯಿತು. ನಾಲ್ಕನೇ ಲೋಕಸಭೆಯ ಮತ್ತೊಂದು ವಿಶೇಷ ಎಂದರೆ, ಇಬ್ಬರು ಸ್ಪೀಕರ್‌ಗಳನ್ನು ಕಂಡಿತು. 1967ರಿಂದ 1969ರವರೆಗೆ ನೀಲಂ ಸಂಜೀವ್‌ ರೆಡ್ಡಿ ಹಾಗೂ 1969ರಿಂದ 71ವರೆಗೆ ಜಿ.ಎಸ್‌.ಧಿಲ್ಲೋನ್‌ ಅವರು ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್‌ ತೊರೆದಿದ್ದರಿಂದ ಸಂಜೀವ್‌ ರೆಡ್ಡಿ ಅವರು ಸ್ಪೀಕರ್‌ ಹುದ್ದೆಯನ್ನು ಬಿಟ್ಟುಕೊಡಬೇಕಾಯಿತು. 
- ತಿಪ್ಪಾರ 

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ

ಎಸ್‌ಪಿ ಜನತಾ ಪರಿವಾರದ ಮತ್ತೊಂದು ಟಿಸಿಲು

ಕಾಂಗ್ರೆಸ್‌ ಮತ್ತು ಬಿಜೆಪಿಯ ಹೊರತಾಗಿ ಸದ್ದು ಮಾಡುವ ಪ್ರಾದೇಶಿಕ ಪಕ್ಷ ಗಳ ಪೈಕಿ ಸಮಾಜವಾದಿ ಪಾರ್ಟಿ(ಎಸ್‌ಪಿ)ಯೂ ಒಂದು. ಉತ್ತರ ಪ್ರದೇಶದಲ್ಲಿ ಬುನಾದಿ ಹೊಂದಿರುವ ಎಸ್‌ಪಿ, ತನ್ನನ್ನು ತಾನು ಪ್ರಜಾಸತ್ತಾತ್ಮಕ ಸಮಾಜವಾದಿ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಭಾರತದ ರಾಜಕಾರಣದಲ್ಲಿ ಉತ್ತರ ಪ್ರದೇಶಕ್ಕೆ ವಿಶೇಷ ಸ್ಥಾನವಿದೆ. ಯಾಕೆಂದರೆ, ಈ ರಾಜ್ಯವೊಂದೇ 80 ಸೀಟುಗಳನ್ನು ತನ್ನ ಮಡಿಲೊಳಗೆ ಇಟ್ಟುಕೊಂಡಿದೆ. ಹಾಗಾಗಿ, ತಮ್ಮದೇ ಆದ ಅಸ್ತಿತ್ವ ಹೊಂದಿರು ಎಸ್‌ಪಿ, ಬಿಎಸ್‌ಪಿ ಕೇಂದ್ರದಲ್ಲಿ ಸಮ್ಮಿಶ್ರ ಸರಕಾರಗಳು ರಚನೆಯಾದಾಗಲೆಲ್ಲ ಪ್ರಮುಖ ಪಾತ್ರ ನಿರ್ವಹಿಸಿವೆ. 2019ರ ಚುನಾವಣೆಯಲ್ಲೂ ಉಭಯ ಪಕ್ಷ ಗಳು ಮೈತ್ರಿಯೊಂದಿಗೆ ಕಣಕ್ಕಿಳಿಯುತ್ತಿರುವುದು ಇದಕ್ಕೆ ಸಾಕ್ಷಿ. ಜಯಪ್ರಕಾಶ್‌ ನಾರಾಯಣ್‌ ಅವರ ಚಳವಳಿಯಿಂದ ಉದಯಿಸಿದ್ದ ಜನತಾ ಪಾರ್ಟಿ ಮೂರು ವರ್ಷದ ಅಧಿಕಾರದ ಬಳಿಕ ಛಿದ್ರವಾಗಿ ಹೋಯಿತು. ಆಗ ಅನೇಕ ಪಕ್ಷ ಗಳು ತಲೆ ಎತ್ತಿದವು. ಆ ಪೈಕಿ ಎಸ್‌ಪಿಯೂ ಒಂದು. ತಮ್ಮ ಕಾರ್ಯಕರ್ತರಿಂದ ಪ್ರೀತಿಯಿಂದ 'ನೇತಾಜಿ' ಎಂದು ಕರೆಯಿಸಿಕೊಳ್ಳುವ ಮುಲಾಯಂ ಸಿಂಗ್‌ ಯಾದವ್‌ ಉತ್ತರ ಪ್ರದೇಶದಲ್ಲಿ ಪಕ್ಷ ವನ್ನು ಸಂಘಟಿಸಿ ಅದನ್ನು ಅಧಿಕಾರದವರೆಗೂ ಕೊಂಡೊಯ್ದರು. ನಾಲ್ಕು ಬಾರಿ ಬೇರೆ ಪಕ್ಷ ಗಳ ನೆರವಿನೊಂದಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೂ ಬಂದರು. ಹಾಗೆಯೇ, ದೇವೇಗೌಡ ಮತ್ತು ಐ.ಕೆ.ಗುಜ್ರಾಲ್‌ ನೇತೃತ್ವದ ಕೇಂದ್ರ ಸರಕಾರದಲ್ಲೂ ಎಸ್‌ಪಿ ಪ್ರಮುಖ ಪಾತ್ರ ನಿರ್ವಹಿಸಿತ್ತು. 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಹುಸಿಗೊಳಿಸಿದ ಎಸ್‌ಪಿ, ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಈ ಬಾರಿಯೂ ನೇತಾಜಿ ಸಿಎಂ ಆಗುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ಮುಲಾಯಂ ಸಿಂಗ್‌ ಅವರು ತಮ್ಮ ಪುತ್ರ ಅಖಿಲೇಶ್‌ ಸಿಂಗ್‌ ಯಾದವರ್‌ ಅವರಿಗೆ ಪಟ್ಟ ಕಟ್ಟಿ ಮುಖ್ಯಮಂತ್ರಿ ಮಾಡಿದರು. ಅಂದ ಹಾಗೆ, ಮೊದಲ ಬಾರಿಗೆ ಎಸ್‌ಪಿ ಐದು ವರ್ಷಗಳ ಪೂರ್ತಿ ಉತ್ತರ ಪ್ರದೇಶದಲ್ಲಿ ಅಧಿಕಾರ ಚಲಾಯಿಸಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಎಸ್‌ಪಿಯೊಳಗೇ ದೊಡ್ಡ ಮಟ್ಟದ ಕೋಲಾಹಲ ಕೂಡ ನಡೆಯಿತು. ಸೈದ್ಧಾಂತಿಕವಾಗಿ ಎಸ್‌ಪಿ ಜಾತ್ಯತೀತ, ಸಮಾಜವಾದ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಎಸ್‌ಪಿ ಚುನಾವಣಾ ಗುರುತು ಸೈಕಲ್‌. ಅಖಿಲೇಶ್‌ ಸಿಂಗ್‌ ಯಾದವ್‌ ಈಗ ಪಕ್ಷ ವನ್ನು ಮುನ್ನಡೆಸುತ್ತಿದ್ದಾರೆ. 

ಈ ಲೇಖನವು ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.

ಎಡ ರಾಜಕಾರಣದ ಮುಂಚೂಣಿ ಪಕ್ಷ ಸಿಪಿಐ

ಮ್ಯುನಿಸ್ಟ್‌ ಪಾರ್ಟಿ ಇಂಡಿಯಾ(ಸಿಪಿಐ) ಭಾರತೀಯ ರಾಜಕಾರಣದಲ್ಲಿ ತನ್ನದೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಭಾರತದಲ್ಲಿ ಸಿಪಿಐ ಯಾವಾಗ ಆರಂಭವಾಯಿತು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ 1925 ಡಿಸೆಂಬರ್‌ 26ರಂದು ಹೇಳಲಾಗುತ್ತದೆ. ಹಾಗೆಯೇ ಪ್ರತಿ ವರ್ಷ 26ರಂದು ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯಪೂರ್ವದಿಂದಲೂ ಎಡಪಕ್ಷ ಗಳು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿದ್ದರೂ ಅವುಗಳ ಪ್ರಾಮುಖ್ಯತೆ ಸ್ವಾತಂತ್ರ್ಯದ ನಂತರವೇ ಹೆಚ್ಚು ಎದ್ದು ಕಂಡಿತು. ಎಡಪಂಥೀಯ ವಿಚಾರಧಾರೆ ನಮ್ಮ ನೆಲದ್ದಲ್ಲ. ಹಾಗಾಗಿ, ಚೀನಾ ಮತ್ತು ಸೋವಿಯತ್‌ ರಷ್ಯಾ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯವು ಭಾರತದಲ್ಲಿನ ಎಡಪಕ್ಷ ದ ಮೇಲೂ ಪರಿಣಾಮ ಬೀರಿ, 1964ರಲ್ಲಿ ಸಿಪಿಐ ಇಬ್ಭಾಗವಾಯಿತು. ಸಿಪಿಐ(ಮಾರ್ಕ್ಸ್‌ವಾದ) ಪ್ರತ್ಯೇಕವಾಗಿ ಪಕ್ಷ ದ ಸ್ಥಾನಮಾನ ಪಡೆದುಕೊಂಡಿತು. ಎಸ್‌.ಸುಧಾಕರ ರೆಡ್ಡಿ ಸಿಪಿಐನ ಪ್ರಸಕ್ತ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಎಡಪಕ್ಷ ಗಳ ಜತೆ ಸಿಪಿಐ ಅಧಿಕಾರದಲ್ಲಿತ್ತು. ಕೇರಳದಲ್ಲಿ 19, ಪಶ್ಚಿಮ ಬಂಗಾಳದಲ್ಲಿ ಒಬ್ಬರು ವಿಧಾನಸಭೆ ಸದಸ್ಯರಿದ್ದಾರೆ. ಲೋಕಸಭೆಯಲ್ಲಿ ಒಬ್ಬ ಹಾಗೂ ರಾಜ್ಯಸಭೆಯಲ್ಲಿ ಇಬ್ಬರು ಪ್ರತಿನಿಧಿಗಳಿದ್ದಾರೆ.ಘ್ಕಿ ಆರಂಭಿಕ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌ ನಂತರ ಅತ್ಯುತ್ತಮ ಪ್ರದರ್ಶನ ತೋರಿದ ಪಕ್ಷ ಎಂದರೆ ಸಿಪಿಐ ಮಾತ್ರ. ಭಾರತದಲ್ಲೂ ಈಗಲೂ ಕಮ್ಯುನಿಸ್ಟ್‌ ಪಾರ್ಟಿಗೆ ಫಾಲೋ ಮಾಡುವ ಅಸಂಖ್ಯೆ ಜನರಿದ್ದಾರೆ. ಆದರೆ, ಅವರನ್ನು ಮುನ್ನಡೆಸಬಲ್ಲ ಸರ್ವ ಒಪ್ಪಿಗೆಯಾಗಬಲ್ಲ ನಾಯಕತ್ವದ ಕೊರತೆ ಇದೆ. ಇಡೀ ದೇಶವನ್ನು ಪ್ರಭಾವಿಸಬಲ್ಲ ನಾಯಕರು ಎಡಪಕ್ಷ ಗಳಿಂದ ಹೊರಬೀಳಲಿಲ್ಲ. ಹಾಗಾಗಿ, ಸಿಪಿಐ 1960ರ ದಶಕದ ನಂತರ, ಮೇಲ್ಮುಖದ ಬೆಳವಣಿಗೆಯನ್ನು ಕಾಣಲೇ ಇಲ್ಲ. ಸಿಪಿಐನಿಂದ ಛಿದ್ರವಾಗಿ ಹೊರಹೋಗಿದ್ದ ಸಿಪಿಎಂ ತುಸು ಬೆಳವಣಿಗೆಯನ್ನು ಕಂಡಿತಾದರೂ ಅದು ಕೂಡ ಇತ್ತೀಚಿನ ವರ್ಷಗಳಲ್ಲಿ ನೆಲಕಚ್ಚುತ್ತಾ ಬಂದಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾದ ರಾಜಕಾರಣವನ್ನು ಕಟ್ಟಿ ಬೆಳೆಸುವ ಸಾಮರ್ಥ್ಯ ಇದ್ದರೂ ಅದನ್ನು ಹೊಣೆ ಹೊತ್ತು ಕೊಳ್ಳುವ ನಾಯಕರಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 

ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ಮ ಮಾಡಿ
https://vijaykarnataka.indiatimes.com/elections/lok-sabha/news/a-history-of-communist-party-of-india-cpi/articleshow/68232805.cms

ಯಶಸ್ಸಿನ ಹಾದಿಯಲ್ಲಿ ಬಿಜೆಪಿ

ಬಿಜೆಪಿ ಸದ್ಯ ಗೆಲುವಿನ ಅಶ್ವ ಏರಿ ಶರವೇಗದಲ್ಲಿ ಸಾಗುತ್ತಿರುವ ಪಕ್ಷ . ಕಾಂಗ್ರೆಸ್‌ಗೆ ಪರ್ಯಾಯ ಮತ್ತು ಬಲಿಷ್ಠ ರಾಜಕೀಯ ವ್ಯವಸ್ಥೆಯನ್ನು ರೂಪಿಸಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ. ಬಿಜೆಪಿಯ ಮೂಲ ಭಾರತೀಯ ಜನ ಸಂಘ ಪಕ್ಷ ದಲ್ಲಿದೆ. ಶ್ಯಾಮ ಪ್ರಸಾದ್‌ ಮುಖರ್ಜಿ ಅವರು 1951ರಲ್ಲಿ ಬಿಜೆಎಸ್‌ ಸ್ಥಾಪಿಸಿದರು. 1977ರ ನಂತರ ಬಿಜೆಎಸ್‌ ಅನ್ನು ಜನತಾ ಪರಿವಾರದೊಂದಿಗೆ ವಿಲೀನ ಮಾಡಲಾಯಿತು. ಮೂರು ವರ್ಷದ ಬಳಿಕ ಜನತಾ ಪರಿವಾರ ಛಿದ್ರವಾಗಿ, ಭಾರತೀಯ ಜನಸಂಘವು ಭಾರತೀಯ ಜನತಾ ಪಾರ್ಟಿಯಾಗಿ ಮರುಜನ್ಮ ಪಡೆದುಕೊಂಡಿತು. ಆರಂಭದಲ್ಲಿ ಅಂಥ ಹೇಳಿಕೊಳ್ಳುವ ಯಶಸ್ಸು ದೊರೆಯಲಿಲ್ಲ. 1984ರ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಆದರೆ, ನಂತರದ ದಿನಗಳಲ್ಲಿ ರಾಮಜನ್ಮಭೂಮಿ ವಿವಾದ ಬಿಜೆಪಿಯ ರಾಜಕಾರಣಕ್ಕೆ ಹೊಸದಿಕ್ಕನ್ನೇ ತೋರಿಸಿತು. ನಿಧಾನವಾಗಿ ರಾಜ್ಯಗಳಲ್ಲಿ ತನ್ನ ಬೇರುಗಳನ್ನು ಚಾಚುತ್ತಾ, ಕೇಂದ್ರ ಮಟ್ಟದಲ್ಲಿ ಗಣನೀಯವಾಗಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಯಿತು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಲ್‌.ಕೆ. ಆಡ್ವಾಣಿಅವರು ಬಿಜೆಪಿಗೆ ಸಮರ್ಥ ನಾಯಕತ್ವ ಒದಗಿಸಿದರು. 1996ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷ ವಾಗಿ ಹೊರಹೊಮ್ಮಿ ವಾಜಪೇಯಿ ನೇತೃತ್ವದಲ್ಲಿ ಸರಕಾರ ರಚಿಸಿತು. ಆದರೆ, ಬಹುಮತ ಕೊರತೆಯಿಂದ 13 ದಿನದಲ್ಲಿ ಪತನ ಕಂಡಿತು. 1998ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತದೊಂದಿಗೆ ಅಧಿಕಾರಕ್ಕೇರಿತು. 2014ರಲ್ಲಿ ಮೋದಿ ನೇತೃತ್ವದಲ್ಲಿ ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರದಲ್ಲಿರುವ ಬಿಜೆಪಿ, ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ ಪಕ್ಷ ಎಂಬ ಹೆಗ್ಗಳಿಕೆ ಇದೆ. ಸದ್ಯ 10 ರಾಜ್ಯಗಳಲ್ಲಿ ಬಿಜೆಪಿ ನೇರವಾಗಿ ಅಧಿಕಾರದಲ್ಲಿದ್ದರೆ, 7 ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಸರಕಾರಗಳಿವೆ. ಬಲಪಂಥೀಯ ವಿಚಾರಧಾರೆ ಹೊಂದಿರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಗಿ ಅಮಿತ್‌ ಶಾ ಕಾರ್ಯನಿರ್ವಹಿಸುತ್ತಿದ್ದಾರೆ. 

ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.
https://vijaykarnataka.indiatimes.com/elections/lok-sabha/news/bjp-party-history/articleshow/68219784.cms

2ನೇ ಚುನಾವಣೆಯಲ್ಲಿ ಅತಿ ಹೆಚ್ಚು ಪಕ್ಷೇತರರ ಆಯ್ಕೆ

16ನೇ ಲೋಕಸಭೆಯು ಪೂರ್ತಿಯಾಗಿ ಅಧಿಕೃತ ಪ್ರತಿಪಕ್ಷ ಇಲ್ಲದೆ ಕಳೆದು ಹೋಯಿತು. ಇಂಥದ್ಧೆ ಸ್ಥಿತಿ 2ನೇ ಲೋಕಸಭೆಯಲ್ಲೂ ಉಂಟಾಗಿತ್ತು. 1957ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಎಂದಿನಂತೆ ಭರ್ಜರಿ ಗೆಲುವು ಸಾಧಿಸಿ, 494 ಸೀಟುಗಳ ಪೈಕಿ 371 ಸೀಟುಗಳನ್ನು ಗೆದ್ದುಕೊಂಡಿತು. ಮತ ಪ್ರಮಾಣ ಕೂಡ ಶೇ.45ರಿಂದ ಶೇ.48ಕ್ಕೇರಿಕೆಯಾಯಿತು. ವಿಶೇಷ ಎಂದರೆ, ಈ ಚುನಾವಣೆಯಲ್ಲೂ ಪಕ್ಷೇತರರು ಶೇ.19.3ರಷ್ಟು ವೋಟು ಪಡೆದು 42 ಸೀಟುಗಳನ್ನು ಗೆದ್ದರು. ಈವರೆಗೆ ಇದು ದಾಖಲೆಯಾಗೇ ಉಳಿದಿದೆ. ಇನ್ನು ಬಿಜೆಎಸ್‌ 4 ಸೀಟು ಗೆದ್ದರೆ, ಸಿಪಿಐ 27, ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ 19 ಸೀಟುಗಳನ್ನು ಪಡೆದುಕೊಂಡವು. ಮೊದಲನೆಯ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕ್ಷೇತ್ರಗಳು ಹೆಚ್ಚಾಗಿದ್ದವು ಮತ್ತು ಒಟ್ಟಾರೆ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಹೆಚ್ಚುವರಿಯಾಗಿ ಏಳು ಸೀಟುಗಳನ್ನು ಪಡೆದುಕೊಡಿತು. ಜತೆಗೆ, ಈ ಎಲೆಕ್ಷ ನ್‌ನಲ್ಲಿ ಮೊದಲ ಬಾರಿಗೆ ಅಂಚೆ ಮತದಾನ ವ್ಯವಸ್ಥೆ(ಪೋಸ್ಟ್‌ ವೋಟಿಂಗ್‌ ಸಿಸ್ಟಮ್‌)ಯನ್ನು ಜಾರಿಗೆ ತರಲಾಯಿತು. 403 ಕ್ಷೇತ್ರಗಳಲ್ಲಿ 91 ಕ್ಷೇತ್ರಗಳು ದ್ವಿದಸ್ಯ ಕ್ಷೇತ್ರಗಳಾಗಿದ್ದರೆ, ಉಳಿದವು ಏಕಸದಸ್ಯ ಕ್ಷೇತ್ರಗಳಾಗಿದ್ದವು. ದ್ವಿದಸ್ಯ ಕ್ಷೇತ್ರ ಪದ್ಧತಿ ಕಂಡ ಕೊನೆಯ ಚುನಾವಣೆ ಇದು. ಭಾರತದ ಪ್ರಥಮ ಪ್ರಧಾನಿಯಾಗಿ ಜನಪ್ರಿಯರಾಗಿದ್ದ ಜವಾಹರಲಾಲ್‌ ನೆಹರು ಅವರು ಎರಡನೇ ಅವಧಿಗೆ ಮತ್ತೆ ಪ್ರಧಾನಿಯಾದರು. ಲೋಕಸಭೆಯ ಸ್ಪೀಕರ್‌ ಆಗಿ ಹುಕುಂ ಸಿಂಗ್‌ ಸರ್ದಾರ್‌ ಅವರು ಆಯ್ಕೆಯಾದರು. ಅನೇಕ ಮೊದಲುಗಳನ್ನು ಕಂಡ 2ನೇ ಸಾರ್ವತ್ರಿಕ ಚುನಾವಣೆಯು ಕುಖ್ಯಾತಿಗೂ ಒಳಗಾಯಿತು.ಬೂತ್‌ಗಳನ್ನು ವಶಕ್ಕೆ ಪಡೆದ ಮೊದಲ ಪ್ರಕರಣ ದಾಖಲಾಯಿತು. ಬಿಹಾರದ ಬೇಗುಸರಾಯ್‌ ಜಿಲ್ಲೆಯ ಮಾತಿಹಾನಿ ವಿಧಾನಸಭಾ ಕ್ಷೇತ್ರದ ರಚಿಯಾಹಿ ಬೂತ್‌ ಅನ್ನು ಕೆಲವರು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಕಪ್ಪುಚುಕ್ಕೆಯಾಗಿ ದಾಖಲಾಯಿತು. 
- ತಿಪ್ಪಾರ 

ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.
https://vijaykarnataka.indiatimes.com/elections/lok-sabha/news/large-number-independent-candidates-elected-in-1957-lok-sabha-election/articleshow/68219193.cms

ಮೊದಲ ಚುನಾವಣೆಯಲ್ಲಿ 489 ಸೀಟಿಗೆ 68 ಹಂತದ ಮತದಾನ

ಮೊದಲನೆ ಸಾರ್ವತ್ರಿಕ ಚುನಾವಣೆಹೇಗಿದ್ದಿರಬಹುದು? ಅಂಥದೊಂದು ಕುತೂಹಲ ಸಾಮಾನ್ಯ. 1949 ನವೆಂಬರ್‌ 26ರಿಂದ ಮೊದಲನೆಯ ಚುನಾವಣೆ ನಡೆಯುವವರೆಗೆ ಮಧ್ಯಂತರ ಸಂಸತ್ತು ಅಸ್ತಿತ್ವದಲ್ಲಿತ್ತು. 25 ಅಕ್ಟೋಬರ್‌ 1951ರಿಂದ 21 ಫೆಬ್ರವರಿ 1952ರ ವರೆಗೆ ಒಟ್ಟು 489 ಸೀಟುಗಳಿಗಾಗಿ 68 ಹಂತದಲ್ಲಿ ಚುನಾವಣೆ ನಡೆಯಿತು. ಶೇ.44.99 ಮತಗಳೊಂದಿಗೆ ಕಾಂಗ್ರೆಸ್‌ 364 ಸೀಟುಗಳನ್ನು ಗೆದ್ದಿತು. ಎರಡನೇ ಸ್ಥಾನದಲ್ಲಿದ್ದ ಸಿಪಿಐ ಗೆದ್ದಿದ್ದು ಕೇವಲ 16 ಸೀಟು ಮಾತ್ರ. ರಾಮಮನೋಹರ ಲೋಹಿಯಾ ಮತ್ತು ಜಯಪ್ರಕಾಶ್‌ ನಾರಾಯಣ್‌ ನೇತೃತ್ವದ ಸೋಷಿಯಲಿಸ್ಟ್‌ ಪಾರ್ಟಿ 12 ಸೀಟು ಗೆದ್ದುಕೊಂಡಿತು. ಭಾರೀ ಗೆಲುವು ಕಂಡ ಕಾಂಗ್ರೆಸ್‌ ನೆಹರು ನೇತೃತ್ವದಲ್ಲಿ ಸರಕಾರ ರಚಿಸಿತು ಮತ್ತು 1952ರ ಏಪ್ರಿಲ್‌ 17ರಂದು ಮೊದಲ ಲೋಕಸಭೆ ಅಸ್ತಿತ್ವಕ್ಕೆ ಬಂತು. ಅಂದ ಹಾಗೆ, ನೆಹರು ಅವರು ತಮ್ಮ ಸಂಪುಟದ ಮಾಜಿ ಸಹೋದ್ಯೋಗಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಹಾಗೂ ಡಾ. ಬಿ.ಆರ್‌.ಅಂಬೇಡ್ಕರ್‌ ಅವರಿಂದ ತೀವ್ರ ಸವಾಲು ಎದುರಿಸಿದ್ದರು. ಆದರೂ ಮುಖರ್ಜಿ ನೇತೃತ್ವದ ಜನಸಂಘ(ಇಂದಿನ ಬಿಜೆಪಿ) ಗೆದ್ದಿದ್ದು 3 ಮತ್ತು ಅಂಬೇಡ್ಕರ್‌ ಅವರ ಆಲ್‌ ಇಂಡಿಯಾ ಷೆಡ್ಯೂಲ್ಡ್‌ ಕ್ಯಾಸ್ಟ್‌ ಫೆಡರೇಷನ್‌ 2 ಸ್ಥಾನ ಗೆದ್ದುಕೊಳ್ಳಲು ಮಾತ್ರ ಸಾಧ್ಯವಾಯಿತು. ಆಗ ಮೈಸೂರು ರಾಜ್ಯವಾಗಿದ್ದ ಕರ್ನಾಟಕದಿಂದ ಕಾಂಗ್ರೆಸ್‌ ಗೆದ್ದಿದ್ದು 10 ಸ್ಥಾನ ಮಾತ್ರ. ಅತಿ ಹೆಚ್ಚು ಸ್ಥಾನಗಳನ್ನು ಉತ್ತರಪ್ರದೇಶ(81)ದಿಂದ ಗೆದ್ದುಕೊಂಡಿತ್ತು. ದ್ವಿಸದಸ್ಯ ಕ್ಷೇತ್ರಗಳು ಅಸ್ತಿತ್ವದಲ್ಲಿ ಇದ್ದುದರಿಂದ ಸಹಜವಾಗಿಯೇ ಮತದಾನ ಪ್ರಮಾಣ ಹೆಚ್ಚಿತು. ಮೊದಲ ಚುನಾವಣೆಯಿಂದ ಆರಂಭವಾದ ಕಾಂಗ್ರೆಸ್‌ನ ಜೈತ್ರಯಾತ್ರೆ 1977ವರೆಗೂ ಮುಂದುವರಿಯಿತು. 1947ರಲ್ಲಿ ಸ್ವಾತಂತ್ರ್ಯ ಪಡೆದ ಭಾರತಕ್ಕೆ ಸಾರ್ವತ್ರಿಕ ಚುನಾವಣೆಯು ಹಬ್ಬದ ರೀತಿಯಲ್ಲಿ ಇತ್ತು. 21 ವರ್ಷ ಮೇಲ್ಪಟ್ಟ ಎಲ್ಲರೂ ಮತ ಚಲಾಯಿಸಲು ಅವಕಾಶವಿದ್ದರಿಂದಲೇ ದೇಶದ ಬಹುತೇಕ ಜನರು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಯಿತು. ಅಲ್ಲಿಂದ ಶುರುವಾದ ದೇಶದ ಚುನಾವಣಾ ರಾಜಕೀಯ ಈಗ 17ನೇ ಲೋಕಸಭೆವರೆಗೂ ಬಂದು ನಿಂತಿದೆ.

ಈ ಆರ್ಟಿಕಲ್ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಕ್ಲಿಕ್ ಮಾಡಿ
https://vijaykarnataka.indiatimes.com/elections/lok-sabha/news/flashback-of-first-general-election-in-india/articleshow/68203413.cms