ಮಂಗಳವಾರ, ಮಾರ್ಚ್ 19, 2019

'ಬಿಸಿ'ಯೇರಿದೆಯಾ ಫೋನು?, ಮಂಡೆ ಬಿಸಿ ಮಾಡಿಕೊಳ್ಳಬೇಡಿ, ಕೂಲ್‌ ಮಾಡಲು ಇಲ್ಲಿದೆ ಪರಿಹಾರ

''ಫೋನ್‌ ತುಂಬಾ ಬಿಸಿಯಾಗುತ್ತದೆ,'' ಎಂದು ನಿಮ್ಮ ಸ್ನೇಹಿತರು ಆಗಾಗ ದೂರುವುದನ್ನು ನೀವು ಕೇಳಿರುತ್ತೀರಿ. ಅಲ್ಲದೇ, ನೀವು ಕೂಡ ಅದೇ ರೀತಿ ಹೇಳಿರುತ್ತೀರಿ. ಇದು ಸ್ಮಾರ್ಟ್‌ಫೋನ್‌ ಬಳಕೆದಾರರ ಸಾಮಾನ್ಯ ದೂರು. ವಿಶೇಷವಾಗಿ ಫೋನ್‌ ರಿಜಾರ್ಜ್‌ ಮಾಡುವಾಗ, ಗೇಮ್‌ ಆಡುವಾಗ, ಸ್ಟ್ರೀಮಿಂಗ್‌ ಕಂಟೆಂಟ್‌ ನೋಡುವಾಗ ಫೋನ್‌ ವಿಪರೀತ ಎನ್ನುವಷ್ಟರ ಮಟ್ಟಿಗೆ ಬಿಸಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಸಾಮರ್ಥ್ಯವಿರುವ ಬ್ಯಾಟರಿಗಳನ್ನು ಎಲ್ಲ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಒದಗಿಸುತ್ತಿವೆ. ಈಗೀಗ 4000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿಗಳು ಸಾಮಾನ್ಯ ಎನ್ನುವಂತಾಗಿದೆ. ಇಷ್ಟು ದೊಡ್ಡ ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಫೋನ್‌ಗಳನ್ನು ಚಾರ್ಜ್‌ ಮಾಡುವಾಗ ಫೋನ್‌ ಬಿಸಿ ನಮ್ಮ ಅನುಭವಕ್ಕೆ ಬರುತ್ತದೆ. ಹಾಗಾದರೆ, ಫೋನ್‌ ಮಿತಿಮೀರಿ ಬಿಸಿಯಾಗಲು ಕಾರಣ ಏನು ಎಂದು ಹುಡುಕತ್ತಾ ಹೊರಟರೆ ಅನೇಕ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಆ ಪೈಕಿ, ಫೋನ್‌ನ ಹಾರ್ಡ್‌ವೇರ್‌ ಸಮಸ್ಯೆ, ಥರ್ಡ್‌ ಪಾರ್ಟಿ ಚಾರ್ಜರ್‌ ಬಳಕೆ, ಅನವಶ್ಯಕ ಆ್ಯಪ್‌ಗಳು ಬಳಕೆ... ಹೀಗೆ ನಾನಾ ಕಾರಣಗಳಿಂದಾಗಿ ಫೋನ್‌ ಬಿಸಿಯಾಗುತ್ತಲೇ ಇರುತ್ತದೆ. ಆದರೆ, ಫೋನ್‌ ಬಿಸಿಯಾಗಿದೆ ಎಂದು ನೀವು ಮಂಡೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವು ಟಿಫ್ಸ್‌ಗಳನ್ನು ಅನುಸರಿಸಿದರೆ ಫೋನ್‌ ಬಿಸಿಯಾಗುವುದನ್ನು ಕಡಿಮೆ ಮಾಡಬಹುದು. 

ಬಿಸಿಲು ತಪ್ಪಿಸಿ 

ಬಹಳ ಸಮಯದವರೆಗೆ ಸ್ಮಾರ್ಟ್‌ಫೋನ್‌ ಮೇಲೆ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅದು ಸ್ಮಾರ್ಟ್‌ಫೋನ್‌ ಬಿಸಿಯಾಗಲು ಕಾರಣವಾಗುತ್ತದೆ. ಅದರಲ್ಲೂ ಪ್ಲ್ಯಾಸ್ಟಿಕ್‌ ವಿನ್ಯಾಸ ಹೊಂದಿರುವ ಫೋನ್‌ಗಳು ಇನ್ನೂ ಹೆಚ್ಚಿಗೆ ಬಿಸಿಯಾಗಬಹುದು. ಅಧ್ಯಯನದ ವರದಿಯೊಂದ ಪ್ರಕಾರ, ದೀರ್ಘ ಸಮಯದವರೆಗೆ ಸ್ಮಾರ್ಟ್‌ಫೋನ್‌ ಬಿಸಿಲಿಗೆ ತೆರೆದುಕೊಂಡರೆ ಅದರ ಟಚ್‌ಸ್ಕ್ರೀನ್‌ ಕಾರ್ಯನಿರ್ವಹಣೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದಯಂತೆ. ಹಾಗಾಗಿ, ಮೊಬೈಲ್‌ಗಳನ್ನು ಸಾಧ್ಯವಾದಷ್ಟು ಬ್ಯಾಗ್‌ಗಳಲ್ಲಿ ಇಡಲು ಪ್ರಯತ್ನಿಸಿ. ಅದರಲ್ಲೂ ಚರ್ಮದ ಬ್ಯಾಗ್‌ಗಳಲ್ಲಿದ್ದರೂ ಇನ್ನೂ ಬೆಟರ್‌. 

ಚಾರ್ಜಿಂಗ್‌ ಮಾಡುವಾಗ ಹುಷಾರ್‌ 

ಚಾರ್ಜಿಂಗ್‌ ಮಾಡುವಾಗ ಫೋನ್‌ ಒಂದಿಷ್ಟು ಉಷ್ಣಾಂಶವನ್ನು ಹೊರ ಹಾಕುತ್ತದೆ. ಹಾಗಾಗಿ, ಫೋನ್‌ ಸ್ವಲ್ಪ ಗಾಳಿಗೆ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಚಾರ್ಜ್‌ ಮಾಡುವಾಗ ಅದನ್ನು ಬೆಡ್‌ ಅಥವಾ ಸೋಫಾ ಮೇಲೆ ಇಟ್ಟರೆ, ಉತ್ಪತ್ತಿಯಾಗುವ ಉಷ್ಣಾಂಶವನ್ನು ಹೊರ ಹಾಕಲು ಸಾಧ್ಯವಾಗುವುದಿಲ್ಲ. ಹಾಗಾದಾಗ ಫೋನ್‌ನ ಶಾಖ ಇನ್ನೂ ಹೆಚ್ಚಾಗತೊಡಗುತ್ತದೆ. ಚಾರ್ಜ್‌ ಮಾಡುವಾಗ ಫೋನ್‌ ಅನ್ನು ಗಟ್ಟಿ ಮೇಲ್ಮೈ ಹೊಂದಿರುವ ವಸ್ತುವಿನ ಮೇಲೆ ಇಡುವುದು ಒಳ್ಳೆಯದು. 

ಬ್ಯಾಕ್‌ ಕೇಸ್‌ ತೆಗೆಯರಿ 

ಫೋನ್‌ ಸುರಕ್ಷ ತೆಗೋಸ್ಕರ ಸಾಮಾನ್ಯವಾಗಿ ಎಲ್ಲರೂ ಬ್ಯಾಕ್‌ ಕೇಸ್‌ ಹಾಕಿರುತ್ತಾರೆ. ಆದರೆ, ಇದು ಚಾರ್ಜಿಂಗ್‌ ಮಾಡುವಾಗ ಫೋನ್‌ನ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಚಾರ್ಜ್‌ ಮಾಡುವಾಗ ಹ್ಯಾಂಡ್‌ಸೆಟ್‌ನ ಬ್ಯಾಕ್‌ ಕೇಸ್‌ ತೆಗೆಯಿರಿ. ಇದರಿಂದ ಫೋನ್‌ ಹೀಟ್‌ ಆಗುವುದು ತಡೆಯಬಹುದು ಮತ್ತು ಕೂಲ್‌ ಆಗಿ ಇಡಲು ಸಾಧ್ಯವಾಗುತ್ತದೆ. 

 ರಾತ್ರಿ ಪೂರ್ತಿ ಚಾರ್ಜಿಂಗ್‌ ಮಾಡಬಹುದೇ? 

ಈ ಅಂಶವು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಅನ್ವಯಿಸುವುದಿಲ್ಲ. ಯಾಕೆಂದರೆ, ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ರಾತ್ರಿಯಿಡಿ ಚಾರ್ಜಿಂಗ್‌ ಇಟ್ಟರೂ ಫೋನ್‌ ಹೀಟ್‌ ಆಗುವುದಾಗಲೀ, ಬ್ಯಾಟರಿ ನಷ್ಟವಾಗುವುದು ಆಗಲಿ ಆಗುವುದಿಲ್ಲ. ಯಾಕೆಂದರೆ, ಬ್ಯಾಟರಿ ಚಾರ್ಜಿಂಗ್‌ ಆದ ತಕ್ಷ ಣ ಅದಕ್ಕೆ ಕರೆಂಟ್‌ ಪ್ರಸರಣ ತಡೆಯಾಗುವಂತೆ ವ್ಯವಸ್ಥೆ ರೂಪಿಸಲಾಗಿರುತ್ತದೆ. ಆದರೆ, ಇದೇ ಮಾತನ್ನು ಹಳೆ ಮಾದರಿಯ ಫೋನ್‌ಗಳಿಗೆ ಹೇಳುವಂತಿಲ್ಲ. ವಿಶೇಷವಾಗಿ ಬೇಸಿಕ್‌ ಫೋನ್‌ಗಳಲ್ಲಿ ಇಂಥ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ರಾತ್ರಿಯಿಡಿ ಫೋನ್‌ ಅನ್ನು ಚಾರ್ಜಿಂಗ್‌ ಮಾಡಿದರೆ ಹೆಚ್ಚು ಹೀಟ್‌ ಆಗುವು ಸಾಧ್ಯತೆ ಹೆಚ್ಚಿರುತ್ತದೆ. 

ಆ್ಯಪ್‌ಗಳ ಬಗ್ಗೆ ಇರಲಿ ಎಚ್ಚರ 

ನಮ್ಮ ಸ್ಮಾರ್ಟ್‌ಫೋನ್‌ಗಳ ಆ್ಯಪ್‌ಗಳಿಂದ ತುಂಬಿ ಹೋಗಿರುತ್ತವೆ. ಬೇಕಾದ್ದು, ಬೇಡವಾದ ಎಲ್ಲ ಆ್ಯಪ್‌ಗಳನ್ನು ನಾವು ಡೌನ್‌ಲೋಡ್‌ ಮಾಡಿಕೊಂಡಿರುತ್ತೇವೆ. ಹೀಗೆ ಡೌನ್‌ಲೋಡ್‌ ಮಾಡಿಕೊಂಡ ಆ್ಯಪ್‌ಗಳ ಪೈಕಿ ಅನೇಕ ಆ್ಯಪ್‌ಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಆಗುತ್ತಲೇ ಇರುತ್ತವೆ ಮತ್ತು ಅವು ಬ್ಯಾಟರಿ ಪವರ್‌ ಅನ್ನು ಕಬಳಿಸುವ ಜತೆಗೆ ಫೋನ್‌ ಹೀಟ್‌ ಆಗಲು ತಮ್ಮ ಕೊಡುಗೆಯನ್ನು ನೀಡುತ್ತವೆ. ಹಾಗಾಗಿ, ಕೆಲಸಕ್ಕೆ ಬಾರದ ಮತ್ತು ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಆಗುವ ಆ್ಯಪ್‌ ಅನ್ನು ಅನ್‌ಇನ್ಸ್‌ಟಾಲ್‌ ಮಾಡುವುದು ಇದಕ್ಕೆ ಇರುವ ಪರಿಹಾರ. 

ಥರ್ಡ್‌ ಪಾರ್ಟಿ ಚಾರ್ಜರ್‌ ಬೇಡ 

ಥರ್ಡ್‌ ಪಾರ್ಟಿ ಚಾರ್ಜರ್‌ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ನಿಮ್ಮ ಫೋನ್‌ ಯಾವ ಕಂಪನಿಯದ್ದು ಇರುತ್ತದೆ ಅದೇ ಕಂಪನಿ ಒದಗಿಸುವ ಚಾರ್ಜರ್‌ಗಳನ್ನು ಬಳಸುವುದು ಸೂಕ್ತ. ಇಲ್ಲದಿದ್ದರೆ ಬ್ಯಾಟರಿ ಮತ್ತು ಚಾರ್ಜರ್‌ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಬ್ಯಾಟರಿ ಹೆಚ್ಚಿನ ಪ್ರಮಾಣದಲ್ಲಿ ಹೀಟ್‌ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. 


ಸ್ಟ್ರೀಮಿಂಗ್‌ ಕಂಟೆಂಟ್‌ 

ಫೋನ್‌ ಬಿಸಿಯಾಲು ಸ್ಟ್ರೀಮಿಂಗ್‌ ಕಂಟೆಂಟ್‌ ಕೂಡ ಕಾರಣವಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ನೀವು ಯೂಟೂಬ್‌ ಅಥವಾ ನೆಟ್‌ಫ್ಲಿಕ್ಸ್‌ನಲ್ಲಿ ಗಂಟೆಗಳ ಕಾಲ ಸ್ಟ್ರೀಮಿಂಗ್‌ ಕಂಟೆಂಟ್‌ ನೋಡುತ್ತಿದ್ದರೆ ಹೀಟ್‌ ಜನರೇಟ್‌ ಆಗುತ್ತದೆ. ಇದಕ್ಕೆ ಕಾರಣ; ಫೋನ್‌ ಪ್ರೊಸೆಸರ್‌ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಉಷ್ಣಾಂಶ ಹೆಚ್ಚಾಗುತ್ತದೆ. 



ಫೋನ್‌ ಯಾಕೆ ಬಿಸಿಯಾಗುತ್ತದೆ? 

ಫೋನ್‌ ಯಾಕೆ ಬಿಸಿಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಫೋನ್‌ ಬಿಸಿ ಮಾಡುವ ನಿಜವಾದ 'ಅಪರಾಧಿ'ಗಳೆಂದರೆ ಬ್ಯಾಟರಿ, ಪ್ರೊಸೆಸರ್‌ ಮತ್ತು ಸ್ಕ್ರೀನ್‌. ಈ ಮೂರು ಘಟಕಗಳು ಉಷ್ಣಾಂಶವನ್ನು ಹೊರ ಹಾಕುತ್ತಲೇ ಇರುತ್ತವೆ. ಬ್ಯಾಟರಿಯೊಳಗಿನ ರಾಸಾಯನಿಕಗಳು ವಿದ್ಯುತ್‌ ಅನ್ನು ಉತ್ಪಾದಿಸಿ ನೀಡುವಾಗ ಬಿಸಿ ಸಹಜ. ಅದೇ ರೀತಿ, ಪ್ರೊಸೆಸರ್‌ ಮಾಹಿತಿಯನ್ನು ಅತ್ಯಂತ ವೇಗದಲ್ಲಿ ವರ್ಗಾವಣೆ ಮಾಡುತ್ತದೆ. ಸ್ಕ್ರೀನ್‌ ಬೆಳಕಳನ್ನು ಹೊರ ಚೆಲ್ಲುತ್ತದೆ. ಹೀಗಾಗಿ, ಈ ಎಲ್ಲ ಘಟಕಗಳು ತಮ್ಮ ಕಾರ್ಯವನ್ನು ನಿರ್ವಹಿಸುವಾಗ ಉಷ್ಣಾಂಶ ಹೊರ ಹಾಕುತ್ತವೆ ಮತ್ತು ಅದರ ಒಟ್ಟು ಬಿಸಿ ಅನುಭವ ನಮಗಾಗುತ್ತದೆ. ಈ ಮೂರು ಘಟಕಗಳು ಮಾತ್ರವಲ್ಲದೆ ಇನ್ನು ಅನೇಕ ಅಂಶಗಳು ಫೋನ್‌ ಹೀಟ್‌ ಆಗಲು ಕಾರಣಗಳಾಗುತ್ತದೆ. ಈ ಲೇಖನವು ವಿಜಯ ಕರ್ನಾಟಕಲ್ಲಿ  ಪ್ರಕಟವಾಗಿದೆ.




ಶನಿವಾರ, ಮಾರ್ಚ್ 16, 2019

2014ರಲ್ಲಿ ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್‌ಗೆ ಹೀನಾಯ ಸೋಲು

ಯುಪಿಎ-2 ಅವಧಿಯಲ್ಲಿ ಕಾಂಗ್ರೆಸ್‌ನ ಸ್ವಯಂಕೃತ ಅಪರಾಧಗಳು, ಹಗರಣಗಳೇ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಆ ಪಕ್ಷ ದ ಹೀನಾಯ ಸೋಲಿಗೆ ಕಾರಣವಾಯಿತು. 2004-2009ರ ಅವಧಿಯಲ್ಲಿ ಯುಪಿಎ ಬಗ್ಗೆ ಜನರು ಹೊಂದಿದ್ದ ಸಾವಧಾನ ಭಾವ 2014ರ ಚುನಾವಣೆ ಹೊತ್ತಿಗೆ ಆಕ್ರೋಶವಾಗಿ ಪರಿಣಮಿಸಿತು. ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಮತ್ತು ಅವರ ಸಂಪುಟದ ಅನೇಕ ಸಚಿವರ ವಿರುದ್ಧವೇ ಕಲ್ಲಿದ್ದಲು, 2ಜಿ ಸ್ಪೆಕ್ಟ್ರಮ್‌, ಕಾಮನ್ವೆಲ್ತ್‌, ಆದರ್ಶ ಹೌಸಿಂಗ್‌, ಆಗಸ್ಟಾವೆಸ್ಟಲ್ಯಾಂಡ್‌ ಸೇರಿದಂತೆ ಇನ್ನಿತರ ಹಗರಣಗಳು ಕೇಳಿ ಬಂದವು. ದೇಶದಲ್ಲಿ ಎಷ್ಟೆಲ್ಲ ಭ್ರಷ್ಟಾಚಾರ ನಡೆಯುತ್ತಿದ್ದರೂ ಪ್ರಧಾನಿ ಸಿಂಗ್‌ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂಬ ಆರೋಪ ಸಾಮಾನ್ಯವಾಗಿತ್ತು. 
ಮತ್ತೊಂದೆಡೆ, ಬಿಜೆಪಿಯು ನರೇಂದ್ರ ಮೋದಿ ಅವರನ್ನು ತಮ್ಮ ಸದೃಢ ನಾಯಕರನ್ನಾಗಿ ಬಿಂಬಿಸಿತಲ್ಲದೇ, ದೇಶವನ್ನು ಮುನ್ನಡೆಸಲು ಇವರೇ ಸೂಕ್ತರು ಎಂದು ಪ್ರಚಾರ ಮಾಡಿತು. ಈ ಅವಧಿಯಲ್ಲಾದ ಒಟ್ಟು ಬೆಳವಣಿಗೆಗಳು ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷ ಗಳ ವಿರುದ್ಧ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದವು. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಖಂಡಿತ ಸೋಲುತ್ತದೆ ಎಂದು ಎಲ್ಲರೂ ಉಹಿಸಿದ್ದರು. ಆದರೆ, ತೀರಾ ಡಬಲ್‌ ಡಿಜಿಟ್‌ಗೆ ಕುಸಿಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅಂತಿಮವಾಗಿ ಫಲಿತಾಂಶ ಹೊರ ಬಿದ್ದಾಗ ಕಾಂಗ್ರೆಸ್‌ 44 ಸ್ಥಾನಗಳನ್ನು ಪಡೆದ ಹೀನಾಯ ಸೋಲು ಕಂಡಿತು. ಮತ್ತೊಂದೆಡೆ ಬಿಜೆಪಿ ಏಕಾಂಗಿಯೇ 282 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಜಯ ಸಾಧಿಸಿತು. ಕಪ್ಪು ಹಣದ ವಿರುದ್ಧ ಸಮರ ಸಾರುವ ಭರವಸೆ ನೀಡಿದ್ದ ಮೋದಿ ಅವರು ಪ್ರಧಾನಿಯಾದರು. ವಾಜಪೇಯಿ ಬಳಿಕ ಪ್ರಧಾನಿಯಾದ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆ ಅವರದ್ದಾಯಿತು. ಈ ಚುನಾವಣೆಯಲ್ಲಿ ಎನ್‌ಡಿಎ ಒಟ್ಟು 336 ಸ್ಥಾನಗಳನ್ನು ಗೆದ್ದರೆ, ಯುಪಿಎ ಗೆದ್ದಿದ್ದು ಕೇವಲ 60 ಸ್ಥಾನ ಮಾತ್ರ. ಅಧಿಕೃತ ಪ್ರತಿಪಕ್ಷ ನಾಯಕ ಇರಲಿಲ್ಲ ಎಂಬುದು 16ನೇ ಲೋಕಸಭೆಯ ವಿಶೇಷ. ಅಧಿಕೃತ ಪ್ರತಿಪಕ್ಷ ವಾಗಬೇಕಿದ್ದರೆ 545 ಸ್ಥಾನಗಳ ಪೈಕಿ ಕನಿಷ್ಠ 55 ಸ್ಥಾನಗಳನ್ನು ಗೆಲ್ಲಬೇಕು. ಆದರೆ, ಯಾವ ಪಕ್ಷ ಕ್ಕೂ ಅಷ್ಟು ಸ್ಥಾನಗಳನ್ನು ಗೆಲ್ಲಲಿಲ್ಲ. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ ಲೋಕಸಭೆಯಲ್ಲಿ ತನ್ನ ನಾಯಕನನ್ನಾಗಿ ಆಯ್ಕೆ ಮಾಡಿತು. ಈಗ ಮತ್ತೆ ಬಿಜೆಪಿ, ಕಾಂಗ್ರೆಸ್‌ 2019ರ ಚುನಾವಣೆಗೆ ಸಜ್ಜಾಗಿವೆ. 
- ತಿಪ್ಪಾರ

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.

ನೆಹರು ಸಮಾಜವಾದಿ ನೀತಿ ವಿರೋಧಿಸಿ ಸ್ವತಂತ್ರ ಪಾರ್ಟಿ ಕಟ್ಟಿದ ಸಿ.ರಾಜಗೋಪಾಲಾಚಾರಿ

ಒಂದು ಕಾಲದಲ್ಲಿ ಸ್ವತಂತ್ರ ಪಾರ್ಟಿಭಾರತೀಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ ಪಕ್ಷ ವಾಗಿತ್ತು. 1959ರಿಂದ 1974ರವರೆಗೆ ಸಕ್ರಿಯವಾಗಿದ್ದ ಈ ಪಕ್ಷ ವನ್ನು ಮುನ್ನಡೆಸಿದ್ದು ಸಿ. ರಾಜಗೋಪಾಲಾಚಾರಿ ಅವರು. ಅಂದಿನ ಪ್ರಧಾನಿ ನೆಹರು ಅವರ ಸಮಾಜವಾದಿ ಧೋರಣೆ ವಿರೋಧಿಸಿ ರಾಜಗೋಪಾಲಾಚಾರಿ ಅವರು ಪಕ್ಷ ವನ್ನು ಸ್ಥಾಪಿಸಿದರು. ಪಕ್ಷ ದ ಸೈದ್ಧಾಂತಿಕ ನೆಲೆ ಸಂಪ್ರದಾಯವಾದವಾದರೂ ಅದರ ಸ್ವರೂಪದಲ್ಲಿ ಉದಾರವಾದವೂ ಇತ್ತು. ಪಕ್ಷ ಪ್ರಮುಖ ನಾಯಕರೆಲ್ಲರೂ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರೇ. ಟಿ.ಪಿ. ಪಂತಲು, ಮಿನೋ ಮಸಾನಿ, ಎನ್‌.ಜಿ.ರಂಗಾ ಮತ್ತು ಕೆ.ಎಂ. ಮುನ್ಶಿ ಆ ಪೈಕಿ ಪ್ರಮುಖರು. 
ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಪರ ಇದ್ದ ಈ ಪಕ್ಷ ದ ನಾಯಕತ್ವ ಮಾತ್ರ ಸಾಂಪ್ರದಾಯಿಕ ಮುಂದುವರಿದ ವರ್ಗದವರ ಕೈಯಲ್ಲೇ ಇತ್ತು. ಅಂದರೆ ಜಮೀನ್ದಾರು ಮತ್ತು ಈ ಹಿಂದೆ ರಾಜರಾಗಿದ್ದವರು. ಪ್ರಧಾನಿ ನೆಹರು ಕೂಡ ಈ ಪಕ್ಷ ವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು, ''ಮಧ್ಯ ವಯಸ್ಸಿನ ನಾಯಕರ ಭೂ ಒಡೆಯರ ಪಕ್ಷ '' ಎಂದು ಹೇಳುತ್ತಿದ್ದರು. ಸ್ವತಂತ್ರ ಪಾರ್ಟಿ ಅಸ್ತಿತ್ವಕ್ಕೆ ಬಂದ ಬಳಿಕ ಅದು 1962ರ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಿತು. ತಾನು ಎದುರಿಸಿದ ಮೊದಲ ಚುನಾವಣೆಯಲ್ಲಿ ಶೇ.6.8ರಷ್ಟು ಮತ ಗಳಿಸಿ, ಒಟ್ಟು 18 ಸ್ಥಾನ ಗೆದ್ದುಕೊಂಡಿತು. ಅಲ್ಲದೆ, ಬಿಹಾರ, ರಾಜಸ್ಥಾನ, ಗುಜರಾತ್‌ ಮತ್ತು ಒಡಿಶಾ ವಿಧಾನಸಭೆಗಳಲ್ಲಿ ಪ್ರಮುಖ ವಿರೋಧ ಪಕ್ಷ ವಾಯಿತು. 1967ರ ಚುನಾವಣೆ ಹೊತ್ತಿಗೆ ಸ್ವತಂತ್ರ ಪಕ್ಷ ವು ದೇಶದ ಕೆಲವು ಭಾಗಗಳಲ್ಲಿ ಭಾರಿ ಪ್ರಭಾವ ಹೊಂದಿತ್ತು. ಈ ಚುನಾವಣೆಯಲ್ಲಿ ಶೇ.8.7ರಷ್ಟು ಮತ ಪಡೆದು ನಾಲ್ಕನೇ ಲೋಕಸಭೆ(1967-71)ಯಲ್ಲಿ ಪ್ರತಿಪಕ್ಷ ವಾಗಿ ಗುರುತಿಸಿಕೊಂಡಿತು. ಒಟ್ಟು 44 ಸ್ಥಾನಗಳನ್ನು ಅದು ಗೆದ್ದುಕೊಂಡಿತ್ತು. ಇಂದಿರಾ ಗಾಂಧಿ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಸ್ವತಂತ್ರ ಪಕ್ಷ ಕೂಡ ಜನತಾ ಪಾರ್ಟಿಯ ಭಾಗವಾಯಿತು. 1971ರಲ್ಲಿ ಶೇ.3ರಷ್ಟು ಮತ ಪಡೆದು 8 ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಯಶಸ್ವಿಯಾಯಿತು. 1974ರಲ್ಲಿ ರಾಜಗೋಪಾಲಚಾರಿ ನಿಧನ ಬಳಿಕ ಪಕ್ಷ ವನ್ನು ಚರಣ್‌ ಸಿಂಗ್‌ ನೇತೃತ್ವದ ಭಾರತೀಯ ಲೋಕದಳ ಪಕ್ಷ ದ ಜತೆ ವಿಲೀನ ಮಾಡಲಾಯಿತು. ಸ್ವತಂತ್ರ ಪಾರ್ಟಿಯ ಸ್ಥಾಪನೆಯ ಉದ್ದೇಶವೇ ಕಾಂಗ್ರೆಸ್‌ ನೀತಿ ವಿರೋಧಿಯಾದ್ದರಿಂದ, ಅವಕಾಶ ಸಿಕ್ಕಾಗಲೆಲ್ಲ ಅದು ಕಾಂಗ್ರೆಸ್‌ ವಿರೋಧಿ ಪಕ್ಷ ಗಳ ಜತೆಗೂಡಿದರು.


ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡಿದೆ.

ಶುಕ್ರವಾರ, ಮಾರ್ಚ್ 15, 2019

AGP- ಅಸ್ಸಾಮ್ ಗಣ ಪರಿಷತ್- ವಿದ್ಯಾರ್ಥಿ ಚಳವಳಿಯಿಂದ ವಿಧಾನಸಭೆವರೆಗೆ...

ಸ್ವತಂತ್ರ ಭಾರತದಲ್ಲಿ ಅನೇಕ ಚಳವಳಿಗಳು ನಡೆದಿವೆ. ಆ ಪೈಕಿ ಕೆಲವು ಚಳವಳಿಗಳು ಕ್ರಮೇಣ ರಾಜಕೀಯ ಪಕ್ಷ ಗಳಾಗಿ ಬದಲಾಗಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಅಸ್ಸಾಮ್‌ ಗಣ ಪರಿಷತ್‌. ಈಶಾನ್ಯ ಭಾರತದ ಪ್ರಮುಖ ರಾಜ್ಯವಾಗಿರುವ ಅಸ್ಸಾಮ್‌ನಲ್ಲಿ ರಾಜಕಾರಣ ಇತರ ರಾಜ್ಯಗಳಂತಲ್ಲ. ನೆರೆಯ ರಾಷ್ಟ್ರ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ನಿರಂತರವಾಗಿ ಈ ರಾಜ್ಯದಲ್ಲಿ ನುಸುಳುತ್ತಾರೆ. ಬಹುತೇಕ ಎಲ್ಲ ಚುನಾವಣೆಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಯುವ ನೀತಿಯ ಚುನಾವಣಾ ವಿಷಯವಸ್ತುವಾಗಿರುತ್ತದೆ. ಎಜಿಪಿಯ ಪೂರ್ವಾಶ್ರಮವಾದ ಆಲ್‌ ಅಸ್ಸಾಮ್‌ ಸ್ಟುಡೆಂಟ್‌ ಯೂನಿಯನ್‌(ಎಎಎಸ್‌ಯು) 1970ರ ದಶಕದಲ್ಲಿ ಅಕ್ರಮ ಬಾಂಗ್ಲಾದೇಶಿಗರ ವಿರುದ್ಧ ಚಳವಳಿ ಆರಂಭಿಸಿತು. ವಿದ್ಯಾರ್ಥಿ ಸಂಘದ ಈ ಪ್ರಯತ್ನಕ್ಕೆ ಅಸ್ಸಾಮ್‌ನ ಇತರ ಸಂಘ ಸಂಸ್ಥೆಗಳಿಂದಲೂ ಅಪೂರ್ವ ಬೆಂಬಲ ವ್ಯಕ್ತವಾಯಿತು. ಚಳವಳಿ ತೀವ್ರ ಸ್ವರೂಪ ಪಡೆಯುತಿತದ್ದಂತೆ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ಅಸ್ಸಾಮ್‌ ಒಪ್ಪಂದ ಏರ್ಪಡುವುದಕ್ಕೆ ಕಾರಣವಾದರು. ಅಂದರೆ, 1985 ಆಗಸ್ಟ್‌ 15ರಂದು ಕೇಂದ್ರ ಸರಕಾರ ಮತ್ತು ಎಎಎಸ್‌ಯು ಮಧ್ಯೆ ಒಪ್ಪಂದವಾಯಿತು. ಮುಂದೆ ಇದೇ ವರ್ಷದ ಅಕ್ಟೋಬರ್‌ನ 13ರಿಂದ 14ವರೆಗೆ ತಿಂಗಳಲ್ಲಿ ನಡೆದ ಗೋಲಾಘಾಟ್‌ ಸಮಾವೇಶದಲ್ಲಿ ವಿದ್ಯಾರ್ಥಿ ಸಂಘವನ್ನು ವಿಸರ್ಜಿ ಅಸ್ಸಾಮ್‌ ಗಣ ಪರಿಷತ್‌ ಎಂಬ ರಾಜಕೀಯ ಪಕ್ಷ ವನ್ನು ಆರಂಭಿಸಲಾಯಿತು. ಪ್ರಫುಲ್‌ ಕುಮಾರ್‌ ಮಹಾಂತ ಅವರು ಪಕ್ಷ ದ ಅಧ್ಯಕ್ಷ ರಾಗಿ ಆಯ್ಕೆಯಾದರು. 1985ರಲ್ಲಿ ನಡೆದ ಅಸ್ಸಾಮ್‌ ವಿಧಾನಸಭೆ ಚುನಾವಣೆಯಲ್ಲಿ ಈ ಹೊಸ ಪಕ್ಷ ಸ್ಪರ್ಧಿಸಿತಲ್ಲದೇ, 126 ಸ್ಥಾನಗಳ ಪೈಕಿ 66 ಸ್ಥಾನಗಳನ್ನು ಗೆದ್ದುಕೊಂಡು ಸರಕಾರ ರಚಿಸಿತು. ಮುಂದೆ 1996ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಗೆಲುವು ಸಾಧಿಸಿತು. ಪಕ್ಷ ದ ನಾಯಕ ಪ್ರಫುಲ್‌ ಕುಮಾರ್‌ ಮಹಾಂತ ಅವರು 1985ರಿಂದ 1990 ಮತ್ತು 1996ರಿಂದ 2001ರಲ್ಲಿ ಎರಡು ಅವಧಿಗೆ ಮುಖ್ಯಮಂತ್ರಿಯಾದರು. ಜತೆಗೆ, ಅತ್ಯಂತ ಕಿರಿಯ ವಯಸ್ಸಿನಲ್ಲಿ ಮುಖ್ಯಮಂತ್ರಿಯಾದ ಎಂಬ ಹೆಗ್ಗಳಿಕೆ ಮಹಾಂತ ಅವರಿಗಿದೆ. ಎರಡ್ಮೂರು ಬಾರಿ ಈ ಪಕ್ಷ ಒಡೆದು ಹೋಳಾಗಿದೆ. ಅಸ್ಸಾಮ್‌ನ ಹಾಲಿ ಮುಖ್ಯಮಂತ್ರಿ ಸರ್ಬಾನಂದ್‌ ಸೋನವಾಲಾ ಅವರು ಅಸ್ಸಾಮ್‌ ಗಣ ಪರಿಷತ್‌ನ ಫೈರ್‌ ಬ್ರಾಂಡ್‌ ನಾಯಕ. ಆದರೆ, ಭಿನ್ನಾಭಿಪ್ರಾಯದಿಂದಾಗಿ ಅವರು 2011ರಲ್ಲಿ ಬಿಜೆಪಿ ಸೇರಿದ್ದರು. 


ಗುರುವಾರ, ಮಾರ್ಚ್ 14, 2019

ಇಂದಿರಾ ಸೋಲು ಸಂಭ್ರಮಿಸಲು ಜನತಾ ಸರಕಾರದಿಂದ 77 ಸಾಫ್ಟ್ ಡ್ರಿಂಕ್!

1977ರಲ್ಲಿ ಇಂದಿರಾ ಗಾಂಧಿ ಸೋತರು. ಜನತಾ ಪಾರ್ಟಿ ಅಧಿಕಾರಕ್ಕೆ ಬಂತು. ಅದೇ ಸಮಯದಲ್ಲಿ ಕೋಕಾ ಕೋಲಾ ಕಂಪನಿಯನ್ನು ದೇಶದಿಂದ ಹೊರ ಹಾಕಲಾಯಿತು. ಆಗ ಕೇಂದ್ರ ಸರಕಾರವೇ ಜನರಿಗೋಸ್ಕರ ಡಬಲ್ ಸೆವೆನ್(77) ತಂಪು ಪಾನೀಯವನ್ನು ಬಿಡುಗಡೆ ಮಾಡಿತು. ಇಂದಿರಾ ಸೋಲ ಸಂಭ್ರಮ ಮತ್ತು ತುರ್ತು ಪರಿಸ್ಥಿತಿಯನ್ನು ಜನರು ಮರೆಯಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. 



1977ರಲ್ಲಿ ಇಂದಿರಾ ಗಾಂಧಿ ಸೋತರು. ಇದರ ನೆನಪಿಗಾಗಿಯೇ ಜನತಾ ಸರಕಾರವೇ ದೇಸಿ ಸಾಫ್ಟ್ ಡ್ರಿಂಕ್ ‘ಡಬಲ್ ಸೆವೆನ್(77)’ ಉತ್ಪಾದನೆ ಆರಂಭಿಸಿತೆಂದರೆ ನಂಬುವಿರಾ ? 

ಹೌದು. ನಂಬಲೇಬೇಕು. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ದೇಶವಾಸಿಗಳ ಕಣ್ಣಲ್ಲಿ ಖಳನಾಯಕಿಯಾಗಿದ್ದರು. ಮತ್ತೊಂದೆಡೆ, ಜಯಪ್ರಕಾಶ್ ನಾರಾಯಣ್ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬಹುತೇಕ ಪಕ್ಷಗಳು ಜನತಾ ಪಾರ್ಟಿಯಡಿ ಒಗ್ಗೂಡಿ 1977ರಲ್ಲಿ ಚುನಾವಣೆ ಎದುರಿಸಿ, ಐತಿಹಾಸಿಕ ಗೆಲುವು ಸಾಧಿಸಿದವು. ಮೊದಲ ಬಾರಿಗೆ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬಂತು. ಮೊರಾರ್ಜಿ ದೇಸಾಯಿಪ್ರಧಾನಿಯಾದರು. 

ಇದೇ ಸಂದರ್ಭದಲ್ಲಿಕೋಕಾ ಕೋಲಾ, ಐಬಿಎಂ ಸೇರಿದಂತೆ ಕೆಲವು ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದವು. ಆಗ ಕೈಗಾರಿಕಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಐಬಿಎಂ ಮತ್ತುಕೋಕಾ ಕೋಲಾ ಕಂಪನಿಗೆ ದೇಶ ತೊರೆಯುವಂತೆ ಸೂಚಿಸಿದರು. ಈ ಹಂತದಲ್ಲಿ ದೇಶದ ಜನರಿಗೆ ದೇಸಿ ಸಾಫ್ಟ್ ಡ್ರಿಂಕ್ ಪರಿಚಯಿಸಲು ಸರಕಾರವೇ ಮುಂದಾಯಿತು. ಆದರೆ, ಅದಕ್ಕೆ ಬೇಕಿದ್ದ ಫಾರ್ಮುಲಾವನ್ನುಕೋಕಾ ಕೋಲಾ ಕಂಪನಿ ಬಿಟ್ಟುಕೊಡಲಿಲ್ಲ. ಆದರೆ, ಜನತಾ ಸರಕಾರ ಮಾತ್ರ ಪಟ್ಟು ಬಿಡದೆ ದೇಸಿ ಸಾಫ್ಟ್ಡ್ರಿಂಕ್ ಪರಿಚಯಿಸಿ, ಅದಕ್ಕೆ 77 (ಡಬಲ್ ಸೆವೆನ್)ಎಂದು ಹೆಸರಿಟ್ಟಿತು !

ಹಾಗೆ ಹೆಸರಿಡಲು ಕಾರಣ- ಇಂದಿರಾ ಗಾಂಧಿಯನ್ನು ಸೋಲಿಸಿ ಜನತಾ ಪಾರ್ಟಿ ಅಧಿಕಾರಕ್ಕೇರಿದ ವರ್ಷ 1977. ಭವಿಷ್ಯದಲ್ಲೂ ಜನತೆತುರ್ತು ಪರಿಸ್ಥಿತಿ ಹಾಗೂ ಅದರ ವಿರುದ್ಧ ನಡೆದ ಹೋರಾಟವನ್ನು ಭಾರತೀಯರುಮರೆಯಲೇಬಾರದು ಎಂಬುದು ಸರಕಾರದ ಉದ್ದೇಶವಾಗಿತ್ತು. ನಿಂಬೆ ಫ್ಲೇವರಿನ ‘ಡಬಲ್ ಸೆವೆನ್ ಟಿಂಗಲ್’ ಎಂಬ ಈಡ್ರಿಂಕ್ ತುಸು ಕಿಕ್ಕೇರಿಸುತಿತ್ತು.ಮುಂದೆಜನತಾ ಪಾರ್ಟಿ ತನ್ನ ಆಂತರಿಕ ಕಚ್ಚಾಟದಿಂದಾಗಿಯೇ 1979ರಲ್ಲಿ ಅಧಿಕಾರದಿಂದ ಕೆಳಗಿಳಿಯಿತು. ಬಳಿಕ ನಡೆದ ಚುನಾವಣೆಯಲ್ಲಿ ಮತ್ತೆ ಇಂದಿರಾ ಗಾಂಧಿ ಪ್ರಚಂಡ ಬಹುಮತದೊಂದಿಗೆ ಪ್ರಧಾನಿಯಾದರು. ಇಂದಿರಾ ಅವರು ಡಬಲ್ ಸೆವೆನ್ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಲಿಲ್ಲ. ಅಂತಿಮವಾಗಿ ಅದು ಮಾರುಕಟ್ಟೆಯಿಂದ ಕಣ್ಮರೆಯಾಯಿತು.
- ಮಲ್ಲಿಕಾರ್ಜುನ ತಿಪ್ಪಾರ

ಈ ಲೇಖನವು ವಿಜಯ ಕರ್ನಾಟಕದ 14-03-2019ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಮಂಗಳವಾರ, ಮಾರ್ಚ್ 12, 2019

ಕಾಂಗ್ರೆಸ್, ಬಿಜೆಪಿಗೆ ಪರ್ಯಾಯ ಶಕ್ತಿ ಸಿಪಿಐ(ಎಂ)

ಸಿಪಿಐ(ಎಂ) ಅನ್ನು ಸಾಮಾನ್ಯವಾಗಿ ಸಿಪಿಎಂ ಎಂದು ಕರೆಯುತ್ತಾರೆ. ಕಮ್ಯುನಿಸ್ಟ್‌ ಪಾರ್ಟಿ ಇಂಡಿಯಾ(ಸಿಪಿಐ)ದಿಂದ ಪ್ರತ್ಯೇಕಗೊಂಡು 1964 ಅಕ್ಟೋಬರ್‌ 31ರಂದು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮಾರ್ಕ್ಸ್‌ವಾದ) ರಚನೆಯಾಯಿತು. 1964ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಕಮ್ಯುನಿಸ್ಟ್‌ ಪಾರ್ಟಿ ಇಂಡಿಯಾದ 7ನೇ ಸಮಾವೇಶದಲ್ಲಿ ಪಕ್ಷ ಇಬ್ಭಾಗವಾಯಿತು. ಸದ್ಯ, ಸಿಪಿಎಂ ಕೇರಳದಲ್ಲಿ ಅಧಿಕಾರದಲ್ಲಿದ್ದು, ಒಟ್ಟು 8 ರಾಜ್ಯಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯದಲ್ಲಿ ದಟ್ಟ ಪ್ರಭಾವ ಹೊಂದಿರುವ ಸಿಪಿಎಂ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಪಾಲಿಟ್‌ಬ್ಯೂರೊ ಈ ಪಕ್ಷ ದ ಅತ್ಯುನ್ನತ ನಿರ್ಧಾಕ ಕೈಗೊಳ್ಳುವ ಸಂಸ್ಥೆಯಾಗಿದೆ. ಸಿಪಿಎಂನ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ್‌ ಯಚೂರಿ ಅವರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭೆಯಲ್ಲಿ ಪಿ. ಕರುಣಾಕರನ್‌ ಅವರು ಪಕ್ಷ ದ ನಾಯಕರಾಗಿದ್ದಾರೆ. ಲೋಕಸಭೆಯಲ್ಲಿ 9, ರಾಜ್ಯಸಭೆಯಲ್ಲಿ 5 ಸಂಸದರನ್ನು ಹೊಂದಿರುವ ಸಿಪಿಎಂ, ಕೇರಳದಲ್ಲಿ 59, ತ್ರಿಪುರಾದಲ್ಲಿ 16 ಮತ್ತು ಪಶ್ಚಿಮ ಬಂಗಾಳದಲ್ಲಿ 26 ಶಾಸಕರನ್ನು ಹೊಂದಿದೆ. ಇನ್ನುಳಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 7 ಶಾಸಕರು ಸಿಪಿಎಂನಿಂದ ಆಯ್ಕೆಯಾಗಿದ್ದಾರೆ. ಮಾರ್ಕ್ಸ್‌ ಮತ್ತು ಲೆನಿನ್‌ ವಾದ ಸಿಪಿಎಂ ಪ್ರಮುಖ ಸಿದ್ಧಾಂತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ನೇತೃತ್ವದಲ್ಲಿ ದೀರ್ಘಾವಧಿಯವರೆಗೆ ಸಿಪಿಎಂ ಅಧಿಕಾರದಲ್ಲಿತ್ತು. ಹಾಗೆಯೇ, 1996ರಲ್ಲಿ ಪ್ರಧಾನಿ ಹುದ್ದೆ ಸಿಪಿಎಂ ನಾಯಕರಿಗೆ ಒಲಿದು ಬಂದಿತ್ತು. ರಾಷ್ಟ್ರದಾದ್ಯಂತ ಪಕ್ಷ ವನ್ನು ಬಲಪಡಿಸುವ ಅನೇಕ ಅವಕಾಶಗಳನ್ನು ಕೈ ಚೆಲ್ಲಿದೆ. ಇತ್ತೀಚಿನ ವರ್ಷಗಲ್ಲಂತೂ ಗಟ್ಟಿ ಬೇರುಗಳನ್ನು ಹೊಂದಿದ್ದ ಪಶ್ಚಿಮ ಬಂಗಾಳ, ತ್ರಿಪುರಾದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕೇರಳ ಮಾತ್ರ ಸಿಪಿಎಂ ಇದೀಗ ಆಸರೆಯಾಗಿ ಉಳಿದಿದೆ. ಇ ಎಂ ಎಸ್‌ ನಂಬೂದರಿಪಾದ್‌, ಹರಿಕಿಶನ್‌ ಸಿಂಗ್‌ ಸುರ್ಜಿತ್‌, ಪ್ರಕಾಶ್‌ ಕಾರಟ್‌, ಜ್ಯೋತಿ ಬಸು, ಬುದ್ಧದೇವ್‌ ಭಟ್ಟಾಚಾರ್ಯ, ಮಾಣಿಕ್‌ ಸರ್ಕಾರ್‌, ಈಗ ಕೇರಳ ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್‌, ಸೀತಾರಾಮ್‌ ಯಚೂರಿ ಅವರು ಸಿಪಿಎಂನ ಪ್ರಮುಖ ನಾಯಕರು. ಕುಡುಗೋಲು ಮತ್ತು ಸುತ್ತಿಗೆಯು ಈ ಪಕ್ಷ ದ ಚುನಾವಣಾ ಚಿಹ್ನೆಯಾಗಿದೆ. 

13 ದಿನ ಬಳಿಕ 13 ತಿಂಗ್ಳು ಪ್ರಧಾನಿಯಾದ್ರು ವಾಜಪೇಯಿ

ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅತಂತ್ರ ಪಾರ್ಲಿಮೆಂಟ್‌ಗೆ ಕಾರಣವಾಗಿದ್ದರಿಂದಲೇ ಮತ್ತೊಂದು ಚುನಾವಣೆಯನ್ನು ದೇಶ ಎದುರಿಸಬೇಕಾಯಿತು. ಆದರೆ, ಈ ಚುನಾವಣೆಯಲ್ಲೂ ಯಾವುದೇ ಪಕ್ಷ ಅಥವಾ ಕೂಟಕ್ಕೆ ಬಹುಮತ ಬರಲಿಲ್ಲ. ಹಾಗಾಗಿ ರಾಜಕೀಯ ಅಸ್ಥಿರತೆ ಮುಂದುವರಿಯಿತು. ಅಲ್ಲದೆ ಕೇವಲ ಎರಡು ವರ್ಷದಲ್ಲೇ ಮತ್ತೊಂದು ಚುನಾವಣೆ ಎದುರಿಸಬೇಕಾಯಿತು. 12ನೇ ಲೋಕಸಭೆಗೆ 1998ರಲ್ಲಿ ನಡೆದ ಚುನಾವಣೆಯಲ್ಲಿ ಶೇ.25.8ರಷ್ಟು ಮತಗಳೊಂದಿಗೆ ಬಿಜೆಪಿ ಅತಿದೊಡ್ಡ ಪಕ್ಷ ವಾಗಿ ಉದಯವಾಯಿತು; ಒಟ್ಟು 141 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಬಿಜೆಪಿ ನೇತೃತ್ವದ ಎನ್‌ಡಿಎ ಒಟ್ಟು 545 ಸೀಟುಗಳ ಪೈಕಿ 256 ಸೀಟುಗಳನ್ನು ಪಡೆಯಿತು. ಅದೇ ರೀತಿ, ಕಾಂಗ್ರೆಸ್‌ ನೇತೃತ್ವದ ಯುಪಿಎ ಶೇ.30.8ರಷ್ಟು ಮತ ಪಡೆದು ಒಟ್ಟು 164 ಸೀಟುಗಳನ್ನು ಪಡೆಯಿತು. ಕಾಂಗ್ರೆಸ್‌ ಸ್ವತಂತ್ರವಾಗಿ 140 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತು. ತೃತೀಯ ರಂಗ ಕೇವಲ 74 ಕ್ಷೇತ್ರಗಳಿಗೆ ತೃಪ್ತಿ ಪಡಬೇಕಾಯಿತು. ಅತಿ ದೊಡ್ಡ ಪಕ್ಷ ವಾಗಿದ್ದ ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ದೊರೆಯಿತು. ಅಟಲ್‌ ಬಿಹಾರಿ ವಾಜಪೇಯಿ ಅವರು ಎರಡನೇ ಬಾರಿಗೆ ಪ್ರಧಾನಿಯಾದರು. ಆದರೆ, ರಾಜಕೀಯ ಸ್ಥಿರತೆ ಮಾತ್ರ ಕಂಡು ಬರಲಿಲ್ಲ. ಅಂತಿಮವಾಗಿ 13 ತಿಂಗಳು ಬಳಿಕ ವಾಜಪೇಯಿ ಸರಕಾರ ಪತನವಾಯಿತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ವಿಶ್ವಾಸಮತ ಸಾಬೀತುವೇಳೆ ಎನ್‌ಡಿಎಗೆ ಬೆಂಬಲ ನೀಡಿಲಲ್ಲ. ಕೇವಲ ಒಂದು ಮತದ ಅಂತರದಲ್ಲಿ ಬಿಜೆಪಿ ಸರಕಾರ ಉರುಳಿತು. ಬಳಿಕ ರಾಷ್ಟ್ರಪತಿಗಳು ಎರಡನೇ ಅತಿದೊಡ್ಡ ಪಕ್ಷ ವಾಗಿದ್ದ ಕಾಂಗ್ರೆಸ್‌ಗೆ ಸರಕಾರ ರಚಿಸಲು ಆಹ್ವಾನ ನೀಡಿದರು. ಆದರೆ, ಕಾಂಗ್ರೆಸ್‌ ಮಾತ್ರ ತನ್ನಿಂದ ಸರಕಾರ ರಚನೆ ಸಾಧ್ಯವಿಲ್ಲ ಎಂದು ಹೇಳಿದ್ದರಿಂದ, ಅವರು ಸಂಸತ್ತನ್ನು ವಿಸರ್ಜಿಸಿದರು. 1998ರ ಚುನಾವಣೆಯಲ್ಲಿ ಒಟ್ಟು 60,58,80,192 ಮತದಾರರಿದ್ದರು. ಈ ಪೈಕಿ 37,54,41,739 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಅಂದರೆ ಒಟ್ಟು ಮತದಾನ ಪ್ರಮಾಣ ಶೇ.62ರಷ್ಟಿತ್ತು. ಒಟ್ಟು 178 ರಾಜಕೀಯ ಪಕ್ಷ ಗಳು ಈ ಚುನಾವಣೆಯಲ್ಲಿ ಭಾಗವಹಿಸಿದ್ದವು. 13 ದಿನ ಮತ್ತು 13 ತಿಂಗಳ ಪ್ರಧಾನಿಯಾಗಿದ್ದ ವಾಜಪೇಯಿ ಅವರು ವಿಶಿಷ್ಟ ದಾಖಲೆ ಮಾಡಿದರು.
- ತಿಪ್ಪಾರ

ಈ ಲೇಖನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.