ವ್ಯಕ್ತಿಗತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವ್ಯಕ್ತಿಗತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 2, 2021

Nandurbar DM Dr Rajendra Bharud: 'ಪ್ರಾಣವಾಯು' ನೀಡಿದ ನಂದೂರಬಾರ್ ಡಿಸಿ ಡಾ.ರಾಜೇಂದ್ರ ಭಾರೂಡ್

ಕೋವಿಡ್ಬಿಕ್ಕಟ್ಟಿನ ನಡುವೆ ಆಕ್ಸಿಜನ್ಉತ್ಪಾದನೆಯಲ್ಲಿಜಿಲ್ಲೆಯನ್ನೇ ಸ್ವಾವಲಂಬಿಯಾಗಿಸಿರುವ ನಂದೂರಬಾರ್ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ಅವರ ಜೀವನಗಾಥೆ ಸ್ಫೂರ್ತಿದಾಯಕ. 

 

- ಮಲ್ಲಿಕಾರ್ಜುನ ತಿಪ್ಪಾರ
ಇಡೀ ದೇಶವೇ ಕೋವಿಡ್ಎರಡನೇ ಅಲೆಗೆ ಕೊಚ್ಚಿ ಹೋಗುತ್ತಿದೆ. ವ್ಯವಸ್ಥೆಯ ವೈಫಲ್ಯದ ಪರಿಣಾಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕದೇ ಜನರು ಸಾವಿಗೀಡಾಗುತ್ತಿದ್ದಾರೆ; ಸ್ಮಶಾನಗಳು ಗಿಜಿಗಿಡುತ್ತಿವೆ; ದೂರದೃಷ್ಟಿ ಮತ್ತು ಸಿದ್ಧತೆಯ ಕೊರತೆಯ ಫಲವಾಗಿ ಇಡೀ ದೇಶ ಅನಾಥಪ್ರಜ್ಞೆಯನ್ನು ಎದುರಿಸುತ್ತಿದೆ. ಇದರ ನಡುವೆ ಮಹಾರಾಷ್ಟ್ರದ ನಂದೂರಬಾರ್ಜಿಲ್ಲೆಮಾತ್ರ ವಿಭಿನ್ನವಾಗಿ ನಿಂತಿದೆ; ಸೋಂಕನ್ನು ಸಮರ್ಥವಾಗಿ ನಿಭಾಯಿಸುತ್ತಿದೆ.

ದೂರದೃಷ್ಟಿ ಮತ್ತು ದಕ್ಷತೆಯ ಜಿಲ್ಲಾಧಿಕಾರಿಯೊಬ್ಬರಿದ್ದರೆ ಒಂದು ಜಿಲ್ಲೆಯ ವ್ಯವಸ್ಥೆಯು ಯಾವ ರೀತಿ ಕಾರ್ಯನಿರ್ವಹಿಸಬಲ್ಲದು ಎಂಬುದಕ್ಕೆ ನಂದೂರ್ಬಾರ್ಜಿಲ್ಲೆ ದೃಷ್ಟಾಂತ. ಮಹಾರಾಷ್ಟ್ರದಲ್ಲಿ ಆಕ್ಸಿಜನ್ಕೊರತೆಯಿಂದ ಜನರು ಸಾಯುತ್ತಿದ್ದ ಸಂದರ್ಭದಲ್ಲಿ ನಂದೂರಬಾರ್ಎಂಬ ಬುಡಕಟ್ಟು ಜನರೇ ಹೆಚ್ಚಿರುವ ಜಿಲ್ಲೆ ಆಕ್ಸಿಜನ್ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ಚಿಕಿತ್ಸೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲು ಯಶಸ್ವಿಯಾಗಿದೆ. ನಂದರೂಬಾರ್ಯಶಸ್ಸಿನ ಹಿಂದೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ಮತ್ತು ಅವರ ತಂಡದ ಪರಿಶ್ರಮವಿದೆ; ದೂರದೃಷ್ಟಿಯ ಚಿಂತನೆಯಿದೆ. ಸ್ವತಃ ವೈದ್ಯರಾಗಿರುವ ರಾಜೇಂದ್ರ ಅವರಿಗೆ ಕೊರೊನಾದಿಂದ ಉಂಟಾಗಬಹುದಾದ ಅಪಾಯದ ಸ್ಪಷ್ಟತೆ ಇತ್ತು. ತಮ್ಮ ಆಡಳಿತದ ಜಿಲ್ಲೆಯನ್ನು ಕೊರೊನಾ ಎದುರಿಸಲು ಎಲ್ಲರಿಗಿಂತಲೂ ಮುಂಚೆಯೇ ಸನ್ನದ್ಧ ಮಾಡಿ, ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಕೋವಿಡ್‌-19 ಸ್ಫೋಟವಾಗುವ ಮುಂಚೆ ನಂದೂರಬಾರ್ಜಿಲ್ಲೆಯಲ್ಲಿಒಂದೂ ಲಿಕ್ವಿಡ್ಆಕ್ಸಿಜನ್ತಯಾರಿಕಾ ಘಟಕಗಳು ಇರಲಿಲ್ಲ. ಕೋವಿಡ್ಕೇಸ್ಗಳು ಇಳಿಕೆಯಾಗುತ್ತಿದ್ದಂತೆ ಸೆಪ್ಟೆಂಬರ್ನಲ್ಲಿ ಡಾ. ರಾಜೇಂದ್ರ ಅವರು ನಂದೂರಬಾರ್ಜಿಲ್ಲಾಸ್ಪತ್ರೆಯಲ್ಲಿ 85 ಲಕ್ಷ  ರೂ. ವೆಚ್ಚದಲ್ಲಿ ಲಿಕ್ವಿಡ್ಆಕ್ಸಿಜನ್ಘಟಕ ಸ್ಥಾಪಿಸಿದರುಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿಮತ್ತೆ ಎರಡು ಘಟಕಗಳನ್ನು ನಿರ್ಮಿಸಿದರು. ಪರಿಣಾಮ ಜಿಲ್ಲೆಯಲ್ಲಿ ಪ್ರತಿ ನಿಮಿಷಕ್ಕೆ 2,400 ಲೀಟರ್ಲಿಕ್ವಿಡ್ಆಕ್ಸಿಜನ್ಉತ್ಪಾದನೆಯ ಸಾಮರ್ಥ್ಯವನ್ನು ಪಡೆದುಕೊಂಡಿತು. ಮೊದಲನೇ ಅಲೆ ವೇಳೆ ಜಿಲ್ಲೆಯಲ್ಲಿ 190 ಕೇಸ್ಗಳಿದ್ದವು. ಆದರೆ, ಸೋಂಕಿನ ಅಪಾಯದ ಬಗ್ಗೆ ಮತ್ತು ದೂರದೃಷ್ಟಿಯ ಚಿಂತನೆಯಿಂದಾಗಿ ಡಾ. ಭಾರೂಡ್ಅವರು ಆಕ್ಸಿಜನ್ಉತ್ಪಾದನೆಯಲ್ಲಿಇಡೀ ಜಿಲ್ಲೆಯನ್ನೇ ಸ್ವಾವಲಂಬಿಯಾಗಿಸಿದರು.

ಮಹಾರಾಷ್ಟ್ರದಲ್ಲಿ ಯಾವಾಗ ಕೋವಿಡ್ಎರಡನೇ ಅಲೆ ತೀವ್ರವಾಯಿತೋ ಈ ಬುಡಕಟ್ಟು ಜಿಲ್ಲೆಯಲ್ಲಿ24 ಗಂಟೆಯೊಳಗೆ 1,200 ಪ್ರಕರಣಗಳು ಪತ್ತೆಯಾದವು. ಆದರೆ, ಆಕ್ಸಿಜನ್ಕೊರತೆಯಿಂದಾಗಿಯೇ ಯಾವುದೇ ಸಾವು ನೋವು ಸಂಭವಿಸಲಿಲ್ಲ. ಸರಕಾರಿ ಘಟಕಗಳಿಂದ ಪ್ರತಿ ನಿಮಿಷಕ್ಕೆ 1,800 ಲೀ., ಖಾಸಗಿ ಕಂಪನಿಗಳಿಂದ ನಿಮಿಷಕ್ಕೆ 1,200 ಲೀ. ಲಿಕ್ವಿಡ್ಆಕ್ಸಿಜನ್ಉತ್ಪಾದನೆ ಸಾಧ್ಯವಾಗಿದೆ. ಜನರು ಇಡೀ ಜಿಲ್ಲಾಡಳಿತವನ್ನು ಹಾಡಿ ಹೊಗಳುತ್ತಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ಮತ್ತು ಅವರ ತಂಡದ  ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಾರಂಭಿಸಿದೆ.

ದಿಲ್ಲಿ, ಮುಂಬಯಿ, ಬೆಂಗಳೂರಿನಂಥ ಮೆಟ್ರೋ ಸಿಟಿಗಳೇ ಆಕ್ಸಿಜನ್ಕೊರತೆಯಿಂದ ಬಳಲುತ್ತಿವೆ. ಈ ನಗರಗಳಲ್ಲಿ ಹೆಜ್ಜೆ ಹೆಜ್ಜೆಗೂ ಆಸ್ಪತ್ರೆಗಳಿದ್ದರೂ ಕೋವಿಡ್ಸೋಂಕಿತ ಗಂಭೀರ ರೋಗಿಗಳಿಗೆ ಪ್ರಾಣವಾಯು ಸಿಗುತ್ತಿಲ್ಲ; ಪ್ರಾಣ ಉಳಿಸಲಾಗುತ್ತಿಲ್ಲ. ಅಂಥದ್ದರಲ್ಲಿ ಅಷ್ಟೇನೂ ಸಂಪನ್ಮೂಲಗಳು ಇಲ್ಲದೇ ಬುಡಕಟ್ಟು ಜಿಲ್ಲೆಯೊಂದು ಆಕ್ಸಿಜನ್ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿರುವುದು ಇವರ ಕರ್ತೃತ್ವ ಶಕ್ತಿಗೆ ಉದಾಹರಣೆಯಾಗಿದೆ. ತಮ್ಮ ದೂರದೃಷ್ಟಿಯ ಆಡಳಿತದಿಂದಾಗಿ ಪ್ರಸಿದ್ಧಿಯಾಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಭಾರೂಡ್ಅವರ ಜೀವನ ಕತೆಯೂ ಯಾವುದೇ ಥ್ರಿಲ್ಲರ್ಸಿನಿಮಾಗಿಂತಲೂ ಕಡಿಮೆ ಇಲ್ಲ. ಪ್ರತಿಭಾವಂತ ಯಾವುದೇ ವಿದ್ಯಾರ್ಥಿಗೆ ಅವರ ಜೀವನಯಶೋಗಾಥೆ ಸೂಧಿರ್ತಿ.

ರಾಜೇಂದ್ರ ಭಾರೂಡ್‌ 1988ರ ಜನವರಿ 7ರಂದು ಮಹಾರಾಷ್ಟ್ರದ ಧುಳೆ ಜಿಲ್ಲೆಯ ಸಕ್ರಿ ತಾಲೂಕಿನ ಸಾಮೋಡೆ ಹಳ್ಳಿಯಲ್ಲಿ ಜನಿಸಿದರು. ತಂದೆ ಬಂಡು ಭಾರೂಡ್‌, ತಾಯಿ ಕಮಲಾಬಾಯಿ. ಒಟ್ಟು ಮೂವರು ಮಕ್ಕಳು. ರಾಜೇಂದ್ರ ಕಮಲಾಬಾಯಿ ಗರ್ಭದಲ್ಲಿದ್ದಾಗಲೇ ಬಂಡು ಇಹಲೋಕ ತ್ಯಜಿಸಿದರು. ಇಂದಿಗೂ ತಂದೆ ನೋಡಲು ಯಾವ ರೀತಿ ಇದ್ದರು ಎಂಬುದು ರಾಜೇಂದ್ರಗೆ ಗೊತ್ತಿಲ್ಲ! ಅವರ ತಂದೆಯ ಒಂದೂ ಫೋಟೊ ಅವರ ಬಳಿಯಿಲ್ಲ. ಅಷ್ಟು ಕಡು ಬಡತನದಲ್ಲಿರಾಜೇಂದ್ರ ಅವರು ಬೆಳೆದು ಬಂದಿದ್ದಾರೆ.

ಬಡತನವನ್ನೇ ಹಾಸಿ ಹೊದ್ದುಕೊಂಡಿದ್ದ ಕುಟುಂಬ ನಿರ್ವಹಣೆ ಕಷ್ಟವೇ ಆಗಿತ್ತು. ತಾಯಿ ಮತ್ತು ಅಜ್ಜಿ ಇಬ್ಬರು ಸೇರಿ ಮೂವರು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದರು. ಇವರಿಬ್ಬರೂ ದೇಸಿ ಸಾರಾಯಿಯನ್ನು ತಯಾರಿಸಿ ಮಾರಾಟ ಮಾಡಿ ಕುಟುಂಬವನ್ನು ಸಾಕುತ್ತಿದ್ದರು. ದಿನಕ್ಕೆ ನೂರು ರೂಪಾಯಿ ಸಿಗುತ್ತಿತ್ತು. ಕಬ್ಬಿನ ರವದಿಯಿಂದ ಮಾಡಿದ ಒಂದು ಸಣ್ಣ ಗುಡಿಸಲೇ ಇವರಿಗೆ ಅರಮನೆಯಾಗಿತ್ತು. ಅಂಥ ಕಡುಬಡತನದಲ್ಲೇ ಬೆಳೆದ ರಾಜೇಂದ್ರ ವೈದ್ಯರಾಗಿ, ಐಎಸ್ಐ ಅಧಿಕಾರಿಯಾಗುವವರೆಗಿನ ಸಾಧನೆಯನ್ನು ಅಕ್ಷ ರಗಳಲ್ಲಿಹಿಡಿದಿಡಲು ಸಾಧ್ಯವಿಲ್ಲ.

ರಾಜೇಂದ್ರ ಮತ್ತು ಅವರ ಸಹೋದರಿ ಅದೇ ಹಳ್ಳಿಯ ಜಿಲ್ಲಾ ಪರಿಷತ್ಶಾಲೆಗೆ ಹೋಗುತ್ತಿದ್ದರು. ಮತ್ತೊಬ್ಬ ಸಹೋದರ ಬುಡಕಟ್ಟು ಶಾಲೆಯಲ್ಲಿ ಕಲಿಯುತ್ತಿದ್ದರು. ರಾಜೇಂದ್ರ ಅವರು 5ನೇ ತರಗತಿಯಲ್ಲಿದ್ದಾಗ, ಅವರಲ್ಲಿದ್ದ ವಿಶಿಷ್ಟ ಪ್ರತಿಭೆಯನ್ನು ಶಿಕ್ಷಕರೊಬ್ಬರು ಗುರುತಿಸಿ, ತಾಯಿಗೆ ತಿಳಿಸಿದರು. ಯಾವುದೇ ಕಾರಣಕ್ಕೂ ರಾಜೇಂದ್ರ ವಿದ್ಯಾಭ್ಯಾಸವನ್ನು ಕಡಿತಗೊಳಿಸಿದಂತೆ ಕೇಳಿಕೊಂಡಿದ್ದರು. ಅಂದು ಅವರ ಕಂಡ ಪ್ರತಿಭೆ ಇಂದು ಜಗದ್ವಿಖ್ಯಾತವಾಗುತ್ತಿದೆ! ಬಳಿಕ ರಾಜೇಂದ್ರ ಅವರು ಜವಾಹರ ನವೋದಯ ವಿದ್ಯಾಲಯಕ್ಕೆ ಸೇರಿಕೊಂಡರು. ಈ ಶಾಲೆ ಅವರಿದ್ದ ಹಳ್ಳಿಯಿಂದ 15 ಕಿ.ಮೀ. ದೂರದಲ್ಲಿತ್ತು. ತಾಯಿ ಈಗಲೂ ದೇಸಿ ಸಾರಾಯಿ ಮಾರಾಟ ಮಾಡಿ ಮಕ್ಕಳ ಶಾಲೆ ಮತ್ತು ಕುಟಂಬದ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ, ನವೋದಯ ಶಾಲೆಯಿಂದ ರಾಜೇಂದ್ರ ಅವರ ಭವಿಷ್ಯವೇ  ಬದಲಾಯಿತು.

ಗಣಿತ ಮತ್ತು ವಿಜ್ಞಾನ ವಿಷಯಗಳತ್ತ ಆಸಕ್ತಿ ಬೆಳೆಸಿಕೊಂಡ ರಾಜೇಂದ್ರ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುತ್ತಿದ್ದರು. 10 ಮತ್ತು 12ನೇ ತರಗತಿ ಬೋರ್ಡ್ಎಕ್ಸಾಮ್ನಲ್ಲಿ ಟಾಪರ್ಆಗಿದ್ದರು. ಪರಿಣಾಮ ವಿದ್ಯಾರ್ಥಿ ವೇತನ ಪಡೆದುಕೊಂಡು ಮುಂಬೈನ ಸೇಠ್ಜಿಎಸ್ಮೆಡಿಕಲ್ಕಾಲೇಜ್ಗೆ ಪ್ರವೇಶ ಪಡೆದುಕೊಂಡರು. ಬಾಲ್ಯದಿಂದಲೂ ಅವರಿಗೆ ವೈದ್ಯನಾಗಬೇಕೆಂಬ ಕನಸು. ಆದರೆ, ಅರಿವು ಹೆಚ್ಚಾಗುತ್ತಾ ಹೋದಂತೆ ತನ್ನ ಸುತ್ತಮುತ್ತ ಇರುವ ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯ ಎಂಬುದನ್ನು ಮನಗಂಡ ರಾಜೇಂದ್ರ ಅವರು ವೈದ್ಯರಾದರೂ ನಾಗರಿಕ ಆಡಳಿತ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಹಾಗಾಗಿಯೇ ಎಂಬಿಬಿಎಸ್ಓದುತ್ತಿರುವಾಗಲೇ ನಾಗರಿಕ ಸೇವಾ ಪರೀಕ್ಷೆಗೂ ತಯಾರಿ ಮಾಡಲಾರಂಭಿಸಿದರು. ಪಟ್ಟಾಗಿ ಕೂತು ಯುಪಿಎಸ್ಸಿ ಎಕ್ಸಾಮ್ಗೆ ಸಿದ್ಧತೆ ಮಾಡಿಕೊಂಡರು. ವೈದ್ಯ ಕೋರ್ಸ್ಗೆ ಸಂಬಂಧಿಸಿದ ಅಧ್ಯಯನದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾಗಿರುವ ಅಧ್ಯಯನವನ್ನು ಮುಂದುವರಿಸಿದರು. ಇದಕ್ಕಾಗಿ ಕಠಿಣ ಪರಿಶ್ರಮಪಟ್ಟರು.

ಯುಪಿಎಸ್ಸಿ ಎಕ್ಸಾಮ್ರಿಸಲ್ಟ್ಗೊತ್ತಾಗುವ ಹೊತ್ತಿಗೆ ರಾಜೇಂದ್ರ ಹಳ್ಳಿಯಲ್ಲಿದ್ದರು. ಅವರ ತಾಯಿಗೆ ಮಗ ಯಾವ ಪರೀಕ್ಷೆಯನ್ನು ಪಾಸು ಮಾಡಿದ್ದಾನೆಂಬುದರ ಬಗ್ಗೆ ಸಣ್ಣ ಕಲ್ಪನೆಯೂ ಇರಲಿಲ್ಲ. 2012ರಲ್ಲಿ ಫರೀದಾಬಾದ್ನಲ್ಲಿ ಐಆರ್ಎಸ್ಅಧಿಕಾರಿಯಾಗಿ ನಿಯುಕ್ತಿಗೊಂಡರು. ಈ ವೇಳೆ, 2ನೇ ಬಾರಿಗೆ ಯುಪಿಎಸ್ಸಿ ಎಕ್ಸಾಮ್ಬರೆದು, ಐಎಎಸ್ಹುದ್ದೆಗೆ ಆಯ್ಕೆಯಾದರು. 2015ರಲ್ಲಿ ನಾಂದೇಡ್ಜಿಲ್ಲೆಯಲ್ಲಿ ಅಸಿಸ್ಟೆಂಟ್ಕಲೆಕ್ಟರ್ಆಗಿ ಕೆಲಸ ಆರಂಭಿಸಿದರು. ಬಳಿಕ 2017ರಲ್ಲಿ ಸೋಲಾಪುರ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದರು. 2018ರಲ್ಲಿ ಅವರನ್ನು ನಂದೂರಬಾರ್ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಯಿತು.

ತಮ್ಮ ಸಂಘರ್ಷದ ಬದುಕಿನ ಜೀವನದ ಸಾರವನ್ನೇ ಸೃಜನಶೀಲ ಸಾಹಿತ್ಯವಾಗಿಸಿರುವ ರಾಜೇಂದ್ರಮಿ ಏಕ್ಸ್ವಪ್ನ ಪಹಿಲ್‌’ ಎಂಬ ಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ಮೂವರು ಮಕ್ಕಳನ್ನು ಬೆಳೆಸಲು ತಮ್ಮ ತಾಯಿ ಪಟ್ಟ ಕಷ್ಟ, ಸಂಘರ್ಷದ ಬದಕನ್ನು ಚಿತ್ರಿಸಿದ್ದಾರೆ. ರಾಜೇಂದ್ರ ಅವರು ಈಗ ತಾಯಿ, ಪತ್ನಿ ಮತ್ತು ಮಕ್ಕಳ ಜತೆ ಸರಕಾರ ನೀಡಿರುವ ಕ್ವಾರ್ಟರ್ಸ್ನಲ್ಲಿದ್ದಾರೆ. ನಂದೂರಬಾರ್ಜಿಲ್ಲಾಧಿಕಾರಿಯಾಗುವ ಮುಂಚೆ ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅಲ್ಲೆಲ್ಲ ತಮ್ಮ ದಕ್ಷ  ಕಾರ್ಯನಿರ್ವಹಣೆಯ ದಟ್ಟ ಪ್ರಭಾವವನ್ನು ಬಿಟ್ಟು ಬಂದಿದ್ದಾರೆ. ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಬಡವರು, ನಿರ್ಗತಿಕರ ಬದುಕನ್ನು ಸಹನೀಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಈಗಲೂ ಅವರನ್ನು ಜನರು ಸ್ಮರಿಸಿಕೊಳ್ಳುತ್ತಾರೆ. ಇಂಥ ಜಿಲ್ಲಾಧಿಕಾರಿ ಪ್ರತಿ ಜಿಲ್ಲೆಗೆ ಸಿಕ್ಕರೆ ಕೋವಿಡ್ಏನು, ಯಾವುದೇ ಸಮಸ್ಯೆಯನ್ನೂ ಆಡಳಿತ ಅನಾಯಸವಾಗಿ ಎದುರಿಸಬಹುದು.



ಸೋಮವಾರ, ಏಪ್ರಿಲ್ 26, 2021

Next Super star of Indian Cricket: 'ದೈವದತ್ತ' ಕ್ರಿಕೆಟ್‌ ಪ್ರತಿಭೆ

ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿಮಿಂಚುತ್ತಿರುವ ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ಭಾರತೀಯ ಕ್ರಿಕೆಟ್‌ ತಂಡದ ಕದವನ್ನು ತಟ್ಟುತ್ತಿದ್ದಾರೆ. 


- ಮಲ್ಲಿಕಾರ್ಜುನ ತಿಪ್ಪಾರ

ದೇವದತ್‌ ಪಡಿಕ್ಕಲ್‌ ಅದ್ಭುತ ಪ್ರತಿಭೆ ಎನ್ನುವುದರಲ್ಲಿಅನುಮಾನವೇ ಇಲ್ಲ. ಭವಿಷ್ಯದ ಆಟಗಾರರಲ್ಲಿಅವರೂ ಒಬ್ಬರು.
- ವಿರಾಟ್‌ ಕೊಹ್ಲಿ ಭಾರತೀಯ ಕ್ರಿಕೆಟ್‌ ತಂಡದ ನಾಯಕ

ದೇವದತ್‌ ಪಡಿಕ್ಕಲ್‌ ಪ್ರಥಮ ದರ್ಜೆ ಹಾಗೂ ರಣಜಿ ಕ್ರಿಕೆಟ್‌ನಲ್ಲಿರನ್‌ ರಾಶಿಗಳನ್ನೇ ಗುಡ್ಡೆ ಹಾಕಿದ್ದಾರೆ. ಅವರಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯ‌ಕ್ಕೆ ಅನುಗುಣವಾಗಿ ಮುಂಬರುವ ದಿನಗಳಲ್ಲಿಕ್ರಿಕೆಟ್‌ನ ಯಾವುದಾದರೂ ಮಾದರಿಯಲ್ಲಿಭಾರತೀಯ ತಂಡವನ್ನು ಪ್ರತಿನಿಧಿಸಿದರೆ ಅಚ್ಚರಿಪಡಬೇಕಾಗಿಲ್ಲ.
- ಸುನೀಲ್‌ ಗವಾಸ್ಕರ್‌ ಮಾಜಿ ಕ್ರಿಕೆಟಿಗ

ಭಾರತೀಯ ಕ್ರಿಕೆಟ್‌ನ ಈ ಇಬ್ಬರು ದಿಗ್ಗಜರ ಮಾತುಗಳೇ ಕರ್ನಾಟಕದ ಪ್ರತಿಭಾವಂತ ದೇವದತ್‌ ಪಡಿಕ್ಕಲ್‌ ಕ್ರಿಕೆಟ್‌ ಬದುಕಿನ ಮುನ್ನುಡಿಗಳಾಗಿವೆ. ಕಳೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನಲ್ಲಿತನ್ನ ಬ್ಯಾಂಟಿಂಗ್‌ ಸ್ಥಿರ ಪ್ರದರ್ಶನದ ಮೂಲಕ ಕ್ರಿಕೆಟ್‌ ಪಂಡಿತರು, ಅಭಿಮಾನಿಗಳ ಗಮನ ಸೆಳೆದಿದ್ದ ದೇವದತ್‌, ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು ‘ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸ್ಟಾರ್‌’ ಎಂಬುದನ್ನು ನಿರೂಪಿಸುತ್ತಿದ್ದಾರೆ. 

21 ವರ್ಷದ ಈ ಎಡಗೈ ಬ್ಯಾಟ್ಸ್‌ಮನ್‌ ಪಡಿಕ್ಕಲ್‌ ಆಟ ನೋಡುವುದೇ ಚೆಂದ. ಆಧುನಿಕ ಚುಟುಕು ಕ್ರಿಕೆಟ್‌ಗೆ ಬೇಕಾಗಿರುವ ಆಕ್ರಮಣಶೀಲತೆ ಮತ್ತು ತಾಂತ್ರಿಕವಾಗಿಯೂ ಪರಿಪೂರ್ಣ ಎನಿಸುವಂಥ ಆಟವನ್ನು ಅವರು ಮೈಗೂಡಿಸಿಕೊಂಡಿದ್ದಾರೆ. 6.3 ಅಡಿ ಎತ್ತರದ ದೇವದತ್‌, ಈಗ ಐಪಿಎಲ್‌ನಲ್ಲಿಆಡುತ್ತಿರುವ ವೈಭವವನ್ನು ನೋಡಿದರೆ, ಶೀಘ್ರವೇ ಭಾರತೀಯ ರಾಷ್ಟ್ರೀಯ ಕ್ರಿಕೆಟ್‌ ತಂಡದ ಬಾಗಿಲನ್ನು ತಟ್ಟದೇ ಇರಲಾರರು. ಆಯ್ಕೆಗಾರರಿಗೂ ಪಡಿಕ್ಕಲ್‌ ಅವರನ್ನು ಬಿಟ್ಟುಕೊಡಲು ಸಾಧ್ಯವಾಗದೇ ಇರಬಹುದು. ಸದ್ಯದ ಮಟ್ಟಿಗೆ, ಕ್ರಿಕೆಟ್‌ನ ಮೂರೂ ಫಾಮ್ರ್ಯಾಟ್‌ಗಳಲ್ಲಿ ಆರಂಭಿಕ ಸ್ಥಾನದಲ್ಲಿ ಘಟಾನುಘಟಿ ಕ್ರಿಕೆಟರ್ಸ್‌ ಇದ್ದಾರೆ. ಜೊತೆಗೆ, ಬೆಂಚ್‌ ಸ್ಟ್ರೆಂಥ್‌ ಕೂಡ ಬಲಿಷ್ಠವಾಗಿದೆ. ಹಾಗಿದ್ದೂ, ಪಡಿಕ್ಕಲ್‌ ತೋರುತ್ತಿರುವ ಗಮನಾರ್ಹ ಪ್ರದರ್ಶನವು ಅವರನ್ನು ಭಾರತೀಯ ಕ್ರಿಕೆಟ್‌ ತಂಡಕ್ಕೆ ಕರೆತರಬಹುದು. 

‘ಟೀಮ್‌ ಫಸ್ಟ್‌’ ಎಂಬ ಮನೋಭಾವ ಕೂಡ ಪಡಿಕ್ಕಲ್‌ ಅವರಲ್ಲಿ ಇರುವುದನ್ನು ನಾವು ಈ ಸೀಸನ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ನೋಡಿದೆವು. ಐಪಿಎಲ್‌ ವೃತ್ತಿಜೀವನದ ಮೊದಲನೇ ಶತಕ ಗಳಿಸುವ ಅವಕಾಶ ಸಿಕ್ಕರೂ, ಆಟ ಬೇಗನೆ ಮುಗಿಸುವಂತೆ ನಾಯಕ ವಿರಾಟ್‌ ಕೊಹ್ಲಿ ಅವರಲ್ಲಿ ಕೇಳಿಕೊಂಡಿದ್ದರಂತೆ ದೇವದತ್‌. ‘‘ನಾನು ಶತಕ ಗಳಿಸುವುದಕ್ಕಿಂತ ತಂಡ ಗೆಲ್ಲುವುದು ಮುಖ್ಯ,’’ ಎಂದು ದೇವದತ್‌ ಬಳಿಕ ಹೇಳಿದ್ದರು. ಇದು ಅವರಲ್ಲಿರುವ ಟೀಮ್‌ ಫಸ್ಟ್‌ ಎಂಬ ಮನೋಭಾವವನ್ನು ಸಾರಿ ಹೇಳುತ್ತದೆ. ವೃತ್ತಿಪರ ಕ್ರಿಕೆಟರ್‌ನಲ್ಲಿರಬೇಕಾದ ಗುಣವಿದು.

ಐಪಿಎಲ್‌ನಲ್ಲಿ ಮಿಂಚುತ್ತಿರುವ ದೇವದತ್‌ ಪಡಿಕ್ಕಲ್‌, ಕರ್ನಾಟಕದ ಪರವಾಗಿ ರಣಜಿ, ಲಿಸ್ಟ್‌ ಎ ಕ್ರಿಕೆಟ್‌ ಆಡುತ್ತಿದ್ದಾರೆ. ಕರ್ನಾಟಕ ಪ್ರೀಮಿಯಲ್‌ ಲೀಗ್‌(ಕೆಪಿಎಲ್‌)ನ ಬಳ್ಳಾರಿ ಟಸ್ಕರ್‌ ಪರವಾಗಿ 2017ರಲ್ಲಿಆಡಿದ್ದಾರೆ. 2019ರಲ್ಲಿಬೆಂಗಳೂರು ರಾಯಲ್‌ ಚಾಲೆಂಜರ್ಸ್‌(ಆರ್‌ಸಿಬಿ) ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. 2020ರ ಐಪಿಎಲ್‌ ಟೂರ್ನಿಯಲ್ಲಿಆರ್‌ಸಿಬಿ ಪರವಾಗಿ ಓಪನಿಂಗ್‌ ಸ್ಥಾನಕ್ಕೆ ಲಗ್ಗೆ ಹಾಕಿದ ಪಡಿಕ್ಕಲ್‌ ಮೊದಲ ಮೂರು ಪಂದ್ಯಗಳಲ್ಲಿ50 ಪ್ಲಸ್‌ ರನ್‌ ಗಳಿಸಿ ದಾಖಲೆ ಬರೆದರು. ಭಾರತೀಯ ಕ್ರಿಕೆಟ್‌ ತಂಡದ ನಾಯಕ ಕೊಹ್ಲಿಯಂಥ ಆಟಗಾರರ ಜತೆ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಳ್ಳುವುದು ಯಾವುದೇ ಆಟಗಾರನಿಗೆ ದೊರೆಯುವ ಅದೃಷ್ಟವೇ ಸರಿ. ಅಂಥದ್ದರಲ್ಲಿ ಪಡಿಕ್ಕಲ್‌ಗೆ ಕೊಹ್ಲಿಜತೆ ಇನ್ನಿಂಗ್ಸ್‌ ಕೂಡ ಆರಂಭಿಸುವ ಅವಕಾಶ ದೊರೆತಿರುವುದು ಅವರಲ್ಲಿರುವ ಪರಿಪೂರ್ಣ ಕ್ರಿಕೆಟ್‌ ಅನ್ನು ಹೊರ ತರಲು ಸಾಧ್ಯವಾಯಿತು. ಕೊಹ್ಲಿಗಿಂತಲೂ ಪಡಿಕ್ಕಲ್‌ಗೆ ದೊಡ್ಡ ಮೆಂಟರ್‌ ಸಿಗಲು ಸಾಧ್ಯವೆ? ಈ ದೃಷ್ಟಿಯಲ್ಲಿ ನೋಡಿದರೆ ದೇವದತ್‌ ಅದೃಷ್ಟವಂತ.

ಪಡಿಕ್ಕಲ್‌ ಮೊದಲ ಸೀಸನ್‌ನಲ್ಲಿ ಆರ್‌ಸಿಬಿ ಪರ 15 ಪಂದ್ಯ ಆಡಿದ್ದಾರೆ. 124 ಸ್ಟ್ರೈಕ್‌ ರೇಟ್‌ನಲ್ಲಿ, 31.53 ಸರಾಸರಿಯಲ್ಲಿ 473 ರನ್‌ ಕಲೆ ಹಾಕಿದ್ದಾರೆ. ಯುವ ಕ್ರಿಕೆಟರ್‌ ತಂಡಕ್ಕೆ ಪದಾರ್ಪಣೆ ಮಾಡಿದ ಟೂರ್ನಿಯಲ್ಲಿ ಇಷ್ಟೊಂದು ಸರಾಸರಿ ಮತ್ತು ಸ್ಟ್ರೈಕ್‌ ರೇಟ್‌ನಲ್ಲಿರನ್‌ ಗಳಿಸುವುದೇನೂ ಸುಲಭವಲ್ಲ. ಆ ಆವೃತ್ತಿಯಲ್ಲಿ ಆರ್‌ಸಿಬಿ ಪರ ಪಡಿಕ್ಕಲ್‌ ಗರಿಷ್ಠ ಸ್ಕೋರರ್‌ ಆಗಿದ್ದರು. ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು 50 ರನ್‌ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಡಿಕ್ಕಲ್‌ಗೆ ಕೊರೊನಾ ಸೋಂಕು ತಗುಲಿದ್ದರಿಂದ ಈಗ ನಡೆಯುತ್ತಿರುವ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಪರ ಆಡಲು ಸಾಧ್ಯವಾಗಲಿಲ್ಲ. ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಅಂಗಣಕ್ಕೆ ಇಳಿದ ಪಡಿಕ್ಕಲ್‌ ತಮ್ಮ ನೈಜಸಾಮರ್ಥ್ಯ‌ ಪ್ರದರ್ಶಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಅವರ ಆಟವಂತೂ ಹಬ್ಬವಾಗಿತ್ತು. 

ಕೇರಳದ ಎಡಪ್ಪಾಳ್‌ ಎಂಬಲ್ಲಿ2000 ಜುಲೈ 7ರಂದು ದೇವದತ್‌ ಜನಿಸಿದರು. ತಂದೆ ಬಾಬು ಕುನ್ನಥ್‌ ಮತ್ತು ತಾಯಿ ಅಂಬಿಲಿ ಪಡಿಕ್ಕಲ್‌ ಅವರು ಬೆಂಗಳೂರಿಗೆ ತಮ್ಮ ನೆಲೆಯನ್ನು ಬದಲಾಯಿಸುವ ಮುನ್ನ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದರು. 11ನೇ ವಯಸ್ಸಿನಲ್ಲಿ ದೇವದತ್‌ ಕ್ರಿಕೆಟ್‌ ಅನ್ನು ಗಂಭೀರವಾಗಿ ಪರಿಗಣಿಸಿ ಅಭ್ಯಾಸ ಆರಂಭಿಸಿದರು. ಕರ್ನಾಟಕ ಇನ್ಸ್‌ಟಿಟ್ಯೂಟ್‌ ಆಫ್‌ ಕ್ರಿಕೆಟ್‌ನಲ್ಲಿ 2014ರಿಂದ ತರಬೇತಿ ಪಡೆಯಲಾರಂಭಿಸಿದರು. ಅಂಡರ್‌ 16 ಮತ್ತು ಅಂಡರ್‌ 19 ಕ್ರಿಕೆಟ್‌ ವಿಭಾಗದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. 

2018-19ರ ಸಾಲಿನಲ್ಲಿ ಕರ್ನಾಟಕದ ಪರವಾಗಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 2018ರಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಕಣ್ಣಿಗೆ ಬಿದ್ದ ದೇವದತ್‌ ಐಪಿಎಲ್‌ನಲ್ಲಿ ಆಡಲು ವೇದಿಕೆ ಸೃಷ್ಟಿಸಿಕೊಂಡರು. 2019ರ ಸೆ.26ರಂದು ಕರ್ನಾಟಕ ಪರವಾಗಿ ಲಿಸ್ಟ್‌ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ವಿಜಯ ಹಜಾರೆ ಪಂದ್ಯಾವಳಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ರನ್‌ ಗಳಿಸಿದರು. ಈ ಟೂರ್ನಿಯಲ್ಲಿ 11 ಪಂದ್ಯಗಳಿಂದ 609 ರನ್‌ ಗಳಿಸಿ ಎಲ್ಲರ ಗಮನ ಸೆಳೆದರು. 2019ರ ಅಕ್ಟೋಬರ್‌ನಲ್ಲಿ ಭಾರತೀಯ ಎ ತಂಡದ ಸದಸ್ಯರಾದರು. 2019ರ ನವೆಂಬರ್‌ನಲ್ಲಿದೇಶಿ ಟ್ವೆಂಟಿ20ಗೂ ಅಡಿಯಿಟ್ಟರೂ. 2019-20ರ ಸಾಲಿನ ಮಸ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿಕರ್ನಾಟಕವನ್ನು ಪ್ರತಿನಿಧಿಸಿದ್ದರು. ಮುಂದೆ 2021ರ ಸಾಲಿನ ಸಯ್ಯದ್‌ ಮಸ್ತಾಕ್‌ ಅಲಿ ಟ್ರೂಫಿ ಟೂರ್ನಿಗೆ ಕರ್ನಾಟಕ ತಂಡದ ಭಾಗವಾದರು.

ಗೌತಮ್‌ ಗಂಭೀರ್‌ ಅವರನ್ನು ಮೆಚ್ಚುವ ಪಡಿಕ್ಕಲ್‌ ಸದ್ಯ 15 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 34.88ರ ಸರಾಸರಿಯಲ್ಲಿ907 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಹತ್ತು ಅರ್ಧ ಶತಕಗಳು ಸೇರಿವೆ. ಇನ್ನು 20 ಲಿಸ್ಟ್‌ ಎ ಕ್ರಿಕೆಟ್‌ ಪಂದ್ಯಗಳನ್ನಾಡಿರುವ ದೇವದತ್‌, 86.68ರ ಸರಾಸರಿಯಲ್ಲಿ1387 ರನ್‌ ಗಳಿಸಿದ್ದಾರೆ. ಇದರಲ್ಲಿ 6 ಶತಕ ಮತ್ತು 8 ಅರ್ಧ ಶತಕಗಳಿವೆ. 36 ಟ್ವೆಂಟಿ20 ಪಂದ್ಯಗಳನ್ನಾಡಿ, 45.41 ಸರಾಸರಿಯಲ್ಲಿ 1408 ರನ್‌ ಪೇರಿಸಿದ್ದಾರೆ. ತುಂಬ ಕಡಿಮೆ ಅವಧಿಯಲ್ಲಿಸಾಕಷ್ಟು ರನ್‌ ಗಳಿಸುವ ಮೂಲಕ ಕ್ರಿಕೆಟ್‌ ಪಂಡಿತರ ಮನಸ್ಸು ಗೆದ್ದಿದ್ದಾರೆ. 

ಐಪಿಎಲ್‌ನ ಪ್ರದರ್ಶನವಂತೂ ಅವರನ್ನು ಸ್ಟಾರ್‌ ಪಟ್ಟಕ್ಕೇರಿಸಿದೆ. ಶೀಘ್ರವೇ ಭಾರತೀಯ ಕ್ರಿಕೆಟ್‌ ತಂಡವನ್ನು ದೇವದತ್‌ ಪ್ರತಿನಿಧಿಸಬಹುದು ಎಂಬ ಭವಿಷ್ಯವನ್ನು ಬಹುತೇಕರು ನುಡಿಯುತ್ತಿದ್ದಾರೆ. ಜಿ.ಆರ್‌.ವಿಶ್ವನಾಥ, ರಾಹುಲ್‌ ದ್ರಾವಿಡ್‌ ಮತ್ತು ಕೆ.ಎಲ್‌ ರಾಹುಲ್‌  ಅವರಂಥ  ಬ್ಯಾಟ್ಸಮನ್‌ಗಳನ್ನು ನೀಡಿರುವ ಕರ್ನಾಟಕದಿಂದ ಮತ್ತೊಬ್ಬ ಪ್ರತಿಭಾನ್ವಿತ ಬ್ಯಾಟ್ಸಮನ್‌ ಆಗಿ ದೇವದತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುವ ದಿನಗಳು ದೂರವಿಲ್ಲ. ದೇವದತ್‌ಗೆ ಈಗಿನ್ನೂ 21 ವರ್ಷ. ಅವರ ಮುಂದೆ ಬೇಕಾದಷ್ಟು ಕ್ರಿಕೆಟ್‌ ಜೀವನವಿದೆ.


ಈ ಲೇಖನವು ವಿಜಯ ಕರ್ನಾಟಕದ 2021ರ ಮೇ 25ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


 

Chief Justice N V Ramana: ನ್ಯಾಯ ನಿಪುಣ ನ್ಯಾ.ರಮಣ

ಕಾನೂನು ಪಾಂಡಿತ್ಯ, ಸಮಚಿತ್ತ, ನ್ಯಾಯನಿಷ್ಠ ವ್ಯಕ್ತಿತ್ವದ ನ್ಯಾ. ಎನ್‌ ವಿ ರಮಣ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗುತ್ತಿರುವುದು ಈ ಕ್ಷ ಣದ ಅಗತ್ಯವೂ ಹೌದು.


- ಮಲ್ಲಿಕಾರ್ಜುನ ತಿಪ್ಪಾರ

ನ್ಯಾಯ ಪರಿಪಾಲನೆಯಲ್ಲಿನೈಪುಣ್ಯತೆಯನ್ನು ಸಾಧಿಸಿರುವ, ಅಪಾರ ಕಾನೂನು ಪಾಂಡಿತ್ಯವನ್ನು ಹೊಂದಿರುವ ನ್ಯಾ. ಎನ್‌ ವಿ ರಮಣ ಅವರು ದೇಶದ ಅಗ್ರ ನ್ಯಾಯಾಲಯ, ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಬಹುಶಃ ಈ ಘನ ಹುದ್ದೆಗೆ ರಮಣ ಅವರು ಪ್ರತಿಶತ ಸಮರ್ಥನೀಯ ವ್ಯಕ್ತಿಯಾಗಿದ್ದಾಧಿರೆಂಬುದು ಕಾನೂನು ವಲಯದಲ್ಲಿಕೇಳಿ ಬರುತ್ತಿರುವ ಮೆಚ್ಚುಗೆ ಮಾತು. 

ಪತ್ರಿಕೆಯಲ್ಲಿ‘ಸುದ್ದಿ’ ಬರೆಯುತ್ತಿದ್ದ ರಮಣ ಅವರು ‘ತೀರ್ಪು’ ಬರೆಯುವವರೆಗೂ ತಲುಪಿದ ಜೀವನದ ಪಯಣವೂ ಸಾಕಷ್ಟು ರೋಚಕ ಹಾಗೂ ಸೂಧಿರ್ತಿದಾಯಕ. ರೈತನ ಮಗನೊಬ್ಬ ಇಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆಂದರೆ ಅದು ಈ ದೇಶದ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ; ಸಂವಿಧಾನ ಒದಗಿಸಿದ ಅವಕಾಶ. 

ಸದಾ ಶಾಂತಚಿತ್ತರಾಗಿರುವ ರಮಣ ನ್ಯಾಯ ಪರಿಪಾಲನೆಯಲ್ಲಿಮಾತ್ರ ಕಠೋರ. ನ್ಯಾಯದ ಹಾದಿಯಲ್ಲಿಎಷ್ಟೇ ಎಡರು ತೊಡರುಗಳು ಎದುರಾದರೂ ಅವರು ಎದೆಗುಂದಿದ ಪ್ರಕರಣವಿಲ್ಲ. ಸತ್ಯವನ್ನು ಯಾವುದೇ ಅಂಜಿಕೆ ಇಲ್ಲದೇ ಹೇಳಿದ್ದಾರೆ ಮತ್ತು ನಾಗರಿಕ ಹಕ್ಕುಗಳನ್ನು ಸಂರಕ್ಷಿಸಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ; ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಕೇಂದ್ರ ಸರಕಾರ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್‌ ಸೇವೆಯನ್ನು ಬಂದ್‌ ಮಾಡಿತ್ತು. ಸರಕಾರದ ನಿಷೇಧ ವರ್ಷಗಟ್ಟಲೆ ಮುಂದುವರಿಯಿತು ಮತ್ತು ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದಾಗ, ಅದರ ವಿಚಾರಣೆ ನಡೆಸಿದ್ದು ಇದೇ ನ್ಯಾ. ಎನ್‌.ವಿ.ರಮಣ ನೇತೃತ್ವದ ಪೀಠ. ‘‘ಈ ಪ್ರಕರಣದಲ್ಲಿ ಅನಿರ್ದಿಷ್ಟಾವಧಿಗೆ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವುದು ಕಾನೂನುಬಾಹಿರವಾಗುತ್ತದೆ,’’ ಎಂದು ಹೇಳಿ, ಸಂವಿಧಾನದಡಿಯಲ್ಲಿ ಇಂಟರ್ನೆಟ್‌ ಸೇವೆಯೂ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿದೆ. ಹಾಗಾಗಿ, ಇಂಟರ್ನೆಟ್‌ ಕೂಡ ಮೂಲಭೂತ ಹಕ್ಕು ಎಂದು ಪೀಠ ಹೇಳಿತು ಮತ್ತು ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್‌ ಸೇವೆ ಮರು ಆರಂಭಿಸಲು ಆದೇಶಿಸಿತು. 

ಇದೇ ರೀತಿಯ ಹಲವು ಐತಿಹಾಸಿಕ ತೀರ್ಪುಗಳನ್ನು ಅವರು ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕಚೇರಿಯನ್ನು ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ) ವ್ಯಾಪ್ತಿಗೆ ತರುವಲ್ಲಿ ಇವರು ನೀಡಿದ ತೀರ್ಪು ಕಾರಣ. ಉದ್ಯಮಿ ಹಾಗೂ ಆರ್‌ಟಿಐ ಕಾರ್ಯಕರ್ತ ಸುಭಾಶ್‌ಚಂದ್ರ ಅಗರ್ವಾಲ್‌ ಅವರು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಆಸ್ತಿ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ(ಸಿಪಿಐಒ) ಆರ್‌ಟಿಐನಡಿ ಕೇಳಿಕೊಂಡಿದ್ದರು. ಆದರೆ, ಗೌಪ್ಯ ಮಾಹಿತಿ ಎಂಬ ಕಾರಣ ನೀಡಿ, ಈ ಅರ್ಜಿಯನ್ನು ಸಿಪಿಐಒ ವಜಾ ಮಾಡಿದರು. ಈ ಪ್ರಕರಣ ಕಡೆಗೆ ಸುಪ್ರೀಂ ಕೋರ್ಟ್‌ನ ಸಂವಿಧಾನಪೀಠಕ್ಕೆ ವರ್ಗವಾಗಿ, ಸುಪ್ರೀಂ ಕೋರ್ಟ್‌ ಕೂಡ ಸಾರ್ವಜನಿಕ ಕಚೇರಿಯಾಗಿರುವು­ದರಿಂದ 2005ರ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಐತಿಹಾಸಿಕ ತೀರ್ಪು ಹೊರ ಬಿತ್ತು. ಈ ತೀರ್ಪಿನ ಹಿಂದೆ ನ್ಯಾ.ರಮಣ ಅವರ ಮಹತ್ತರ ಕಾಣಿಕೆ ಇದೆ. ಈ ತೀರ್ಪಿನೊಂದಿಗೆ ಹಾಲಿ ನ್ಯಾಯಮೂರ್ತಿ­ಗಳು ತಮ್ಮ ಆಸ್ತಿ ವಿವರವನ್ನು ಬಹಿರಂಗಗೊಳಿಸಬೇಕಾಯಿತು. 

ವಾಣಿಜ್ಯ ವ್ಯಾಜ್ಯಗಳನ್ನು ಬಗೆಹರಿಸುವಲ್ಲೂರಮಣರ ಕಾನೂನು ಪಾಂಡಿತ್ಯ ನೆರವಿಗೆ ಬಂದಿದೆ. ಅನೇಕ ಪ್ರಕರಣಗಳಲ್ಲಿ ಮೈಲುಗಲ್ಲುತೀರ್ಪುಗಳನ್ನು ನೀಡಿದ್ದಾರೆ. ಇದಕ್ಕೆ ವಿದ್ಯಾ ದ್ರೋಲಿಯಾ, ಅಲ್ಕನೋ ವರ್ಸಸ್‌ ಸಲೇಮ್‌ ಪ್ರಕರಣಗಳ ತೀರ್ಪನ್ನು ಉದಾಹರಣೆಯಾಗಿ ನೀಡಬಹುದು. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದ ಹಲವು ಪ್ರಕರಣಗಳಲ್ಲಿ ಅವರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ಅನರ್ಹ ಪ್ರಕರಣದಲ್ಲಿ, ಸ್ಪೀಕರ್‌ ನೀಡಿದ ತೀರ್ಮಾನವನ್ನು ಎತ್ತಿ ಹಿಡಿದಿದ್ದರು. 2019ರಲ್ಲಿ ಮಹಾರಾಷ್ಟ್ರದಲ್ಲಿಸರಕಾರ ರಚನೆ ಸಂಬಂಧ ಉಂಟಾಗಿದ್ದ ಬಿಕ್ಕಟ್ಟು ವೇಳೆ, ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ ಸಂವಿಧಾನಬದ್ಧ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದ್ದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗುವ ಮುಂಚೆ ರಮಣ, ಆಂಧ್ರಪ್ರದೇಶ ಹೈಕೋರ್ಟ್‌, ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ, ಆಂಧ್ರಪ್ರದೇಶ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್‌ ನಲ್ಲಿ ವಕೀಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕೆ ಮಾಡುವಾಗ ಸಾಂವಿಧಾನಿಕ, ಅಪರಾಧ, ಸೇವೆ ಮತ್ತು ಅಂತಾರಾಜ್ಯ ಕಾನೂನುಗಳ ವಿಷಯತಜ್ಞತೆಯನ್ನು ಸಾಧಿಸಿದ್ದರು. ಜೊತೆಗೆ ಸಿವಿಲ್‌, ಕ್ರಿಮಿನಲ್‌, ಲೇಬರ್‌, ಸವೀಸ್, ಚುನಾವಣಾ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಿದ್ದಾರೆ. ಹಲವು ಕೇಸ್‌ಗಳಲ್ಲಿ ಕೇಂದ್ರ ಸರಕಾರ, ರೇಲ್ವೆಯನ್ನು ಪ್ರತಿನಿಧಿಸಿದ್ದಾರೆ. ಆಂಧ್ರಪ್ರದೇಶದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ವಕೀಲಿಕೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದ ಅವರನ್ನು 2000 ಜೂನ್‌ 27ರಂದು ಆಂಧ್ರಪ್ರದೇಶದ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಮಾರ್ಚ್‌ 10ರಿಂದ 2013 ಮೇ 20ರವರೆಗೂ ಆಂಧ್ರಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ಮಾಡಿದ್ದಾರೆ. ಬಳಿಕ ಅವರನ್ನು 2013 ಸೆಪ್ಟೆಂಬರ್‌ 2ರಂದು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಯಿತು. ಇದಾದ ಒಂದೇ ವರ್ಷದಲ್ಲಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ 2014 ಫೆಬ್ರವರಿ 17ರಂದು ನೇಮಕಗೊಂಡರು. 

ಅಪಾರ ಕಾನೂನು ಪಾಂಡಿತ್ಯ ಮತ್ತು ಸಮಚಿತ್ತ, ದೃಢ ನಿಲುವು ಹೊಂದಿದ ವ್ಯಕ್ತಿಯೊಬ್ಬರು ಮುಖ್ಯ ನ್ಯಾಯಮೂರ್ತಿ ಗಳಾಗುತ್ತಿರುವುದು ಈ ಕ್ಷ ಣದ ಅಗತ್ಯವೂ ಆಗಿತ್ತು. ಕಾನೂನು ಪ್ರೀತಿಸುವಷ್ಟೇ ಕಲೆ ಮತ್ತು ಸಾಹಿತ್ಯವನ್ನೂ ಇಷ್ಟ ಪಡುತ್ತಾರೆ. 

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಹಳ್ಳಿಯ ಕೃಷಿಕ ಕುಟುಂಬದಲ್ಲಿ ಎನ್‌ ವಿ ರಮಣ ಅವರು 1957 ಆಗಸ್ಟ್‌ 27ರಂದು ಜನಿಸಿದರು. ಇವರ ತಂದೆ ಗಣಪತಿ ರಾವ್‌ ಮತ್ತು ತಾಯಿ ಸರೋಜನಿ ದೇವಿ ಕೃಷಿಕರು. ಬಿಎಸ್‌ಸಿ ಪದವಿ ಪಡೆದ ನಂತರ ಕಾನೂನು ಪದವಿ ಸಂಪಾದಿಸಿದರು. 1975ರಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿಧಿದಾಗ ರಮಣ ಅವರು ಒಂದು ಶೈಕ್ಷ ಣಿಕ ವರ್ಷವನ್ನು ತ್ಯಜಿಸಬೇಕಾದ ಪರಿಸ್ಥಿತಿ ಉಂಟಾಯಿತು. ಬಳಿಕ ಅವರು, ಎರಡು ವರ್ಷಗಳ ಕಾಲ ತೆಲುಗು ಪತ್ರಿಕೆಯೊಂದರಲ್ಲಿ ಕೆಲಸ ಮಾಡಿ, ನಂತರ ಕಾನೂನು ಪದವಿಯನ್ನು ಪಡೆದುಕೊಂಡು ವಕೀಲಿಕೆ ಆರಂಭಿಸಿದರು. ಪೊನ್ನಾವರಮ್‌ ಹಳ್ಳಿಯಿಂದ ವಕೀಲಿಕೆ ಆರಂಭಿಸಿದ ಮೊದಲಿಗರು ಇವರು. 

ವಿದ್ಯಾರ್ಥಿಯಾಗಿದ್ದಾಗಲೇ ರೈತರು, ಕಾರ್ಮಿಕರು ಮತ್ತು ಇತರ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕಾರ್ಯಕರ್ತರಾಗಿದ್ದರು. ನಾಗರಿಕರ ಹಕ್ಕುಗಳ ಪರವಾಗಿದ್ದರು. ವಿದ್ಯಾರ್ಥಿ ದಿಸೆಯಿಂದಲೇ ಅವರಲ್ಲಿ ಸಾಮಾಜಿಕ ಬದ್ಧತೆ ಮೈಗೂಡಿರುವುದನ್ನು ನಾವು ಕಾಣಬಹುದು ಮತ್ತು ಅದು ಅವರ ತೀರ್ಪುಗಳಲ್ಲಿ ಪ್ರತಿಫಲನವಾಗಿದೆ. ಸರಳ ಜೀವನವನ್ನು ಮೈಗೂಡಿಸಿಕೊಂಡಿ­ರುವ ನ್ಯಾ.ರಮಣ ನೈತಿಕವಾಗಿ ಯಾವುದಾದರೂ ವಿಷಯ ಸರಿ ಅಲ್ಲಎಂದು ತೋರಿದರೆ ಅದನ್ನು ಟೀಕಿಸುವುದರಲ್ಲಿಎಂದೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಅವರು ನಮ್ಮ ದೇಶದ ಶಿಕ್ಷ ಣ ವ್ಯವಸ್ಥೆಗೆ ಬಗ್ಗೆ ಮಾಡಿದ ಟೀಕೆಯನ್ನು ಉದಾಹರಿಸಬಹುದು. 

ಇಷ್ಟೆಲ್ಲ ಹೆಗ್ಗಳಿಕೆಯ ಮಧ್ಯೆಯೂ ಅವರು ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. ಆಂಧ್ರಪ್ರದೇಶದ ಸಿಎಂ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು, ಸುಪ್ರೀಂ ಕೋರ್ಟ್‌ನ ಸಿಜೆಐಗೆ ಪತ್ರ ಬರೆದು ರಮಣ ಹಾಗೂ ಅವರ ಸಂಬಂಧಿಕರು ಅಮರಾವತಿಯ ಭೂಸ್ವಾಧೀನದಲ್ಲಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಜತೆಗೆ ತಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾ­ರೆಂದು ಆರೋಪಿಸಿದ್ದರು. ಈ ಪತ್ರ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. 

63 ವರ್ಷದ ನ್ಯಾ. ರಮಣ ಅವರು, ಏಪ್ರಿಲ್‌ 24ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದು, ಅವರ ಅಧಿಕಾರಾವಧಿ 2022 ಆಗಸ್ಟ್‌ 26ಕ್ಕೆ ಕೊನೆಗೊಳ್ಳಲಿದೆ. ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಮಾತ್ರವಲ್ಲದೆ ಅವರು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ವ್ಯವಸ್ಥೆಯ ಮುಖ್ಯಸ್ಥರೂ ಆಗಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಅವರ ಮುಂದೆ ಸಾಕಷ್ಟು ಸವಾಲುಗಳಂತೂ ಇದ್ದೇ ಇವೆ.




ಸೋಮವಾರ, ಮಾರ್ಚ್ 22, 2021

Mithali Raj is a 'Queen' of Indian Women Cricket ಕ್ರಿಕೆಟ್‌ನ 'ರಾಣಿ' ಮಿಥಾಲಿ ರಾಜ್‌

20 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ‘ರಾಣಿ’ಯಂತೆ ಮೆರೆಯುತ್ತಿರುವ, ದಾಖಲೆಗಳ  ಮೇಲೆ ದಾಖಲೆ ಪೇರಿಸುತ್ತಿರುವ ಮಿಥಾಲಿ ರಾಜ್‌ ಸ್ಫೂರ್ತಿಗೆ ಮತ್ತೊಂದು ಹೆಸರು.


- ಮಲ್ಲಿಕಾರ್ಜುನ ತಿಪ್ಪಾರ
ಹತ್ತು ಸಾವಿರ ಅಂತಾರಾಷ್ಟ್ರೀಯ ರನ್‌ ಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್‌, ವಿಶ್ವದ ಎರಡನೇ ಮಹಿಳಾ ಕ್ರಿಕೆಟರ್‌ ಎಂಬ ಖ್ಯಾತಿಗೆ ಪಾತ್ರರಾದ ಮಿಥಾಲಿ ರಾಜ್‌ ಸಾಧನೆ ಕುರಿತು Mithali + Magic = Milestone ಎಂಬ ಟ್ವೀಟ್‌ವೊಂದನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಡಿತ್ತು. ಇದು ಉತ್ಪ್ರೇಕ್ಷೆ ಏನಲ್ಲ. ಮಿಥಾಲಿ ಅವರ ಬ್ಯಾಟಿನಿಂದ ಈಗ ಚಿಮ್ಮುವ ಪ್ರತಿ ರನ್ನೂ ಮೈಲುಗಲ್ಲೇ!

ಪುರುಷರ ಕ್ರಿಕೆಟ್‌ ಪಾರಮ್ಯವಿರುವ ಭಾರತದಂಥ ದೇಶದಲ್ಲಿ20 ವರ್ಷಗಳ ಕಾಲ ಮಹಿಳೆಯೊಬ್ಬಳು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವುದು, ಹತ್ತು ಸಾವಿರ ರನ್‌ ಪೂರೈಸುವುದು ಅಸಾಧಾರಣ ಸಾಧನೆಯೇ ಸರಿ. ಇಂಗ್ಲೆಂಡ್‌ನ ಚಾರ್ಲೊಟ್‌ ಎಡ್ವರ್ಡ್ಸ್ ಈ ಮೊದಲು ಹತ್ತು ಸಾವಿರ ರನ್‌ ಪೂರೈಸಿದ ಮೊದಲ ದಾಂಡಿಗಳು. ಈಗ ಸಾಧನೆ ಮಾಡಿದ ಎರಡನೇ ಬ್ಯಾಟರ್‌ ಮಿಥಾಲಿಯಾಗಿದ್ದಾರೆ. ಜೊತೆಗೆ ಒನ್‌ಡೇ ಮಹಿಳಾ ಕ್ರಿಕೆಟ್‌ನಲ್ಲಿ7000 ರನ್‌ ಪೂರೈಸಿದ ಮೊದಲ ಬ್ಯಾಟರ್‌ ಇವರು. ಭಾರತದ ಮಟ್ಟಿಗೆ ಅವರೀಗ ಬರೀ ಕ್ರಿಕೆಟರ್‌ ಆಗಿ ಉಳಿದಿಲ್ಲ. ಮಿಥಾಲಿ ರಾಜ್‌ ಎನ್ನುವುದು ಸ್ಫೂರ್ತಿಗೆ ಪರ್ಯಾಯವಾಗಿದೆ. ‘ಮಿಥಾಲಿ’ ಈಗ ಮಹಿಳಾ ಕ್ರಿಕೆಟನ್ನು ಅಕ್ಷ ರಶಃ ‘ರಾಜ್‌’ ಮಾಡುತ್ತಿದ್ದಾರೆ. 

ಟೆಸ್ಟ್‌, ಒನ್‌ಡೇ ಹಾಗೂ ಟ್ವೆಂಟಿ20 ಕ್ರಿಕೆಟ್‌ ಮೂರು ಮಾದರಿಗಳಲ್ಲಿತಮ್ಮ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಿದ ಮಿಥಾಲಿ, ಒನ್‌ಡೇ ಕ್ರಿಕೆಟ್‌ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಟ್ವೆಂಟಿ20 ಕ್ರಿಕೆಟ್‌ಗೆ 2019ರಲ್ಲಿನಿವೃತ್ತಿಯನ್ನು ಘೋಷಿಸಿದ್ದಾರೆ. ಈಗ ಅವರಾಡುವ ಪ್ರತಿ ಪಂದ್ಯ, ಹೊಡೆಯುವ ಪ್ರತಿ ರನ್‌, ಕ್ಯಾಪ್ಟನ್ಸಿ ಪ್ರತಿಯೊಂದೂ ದಾಖಲೆಗಳಾಗಿ ರೂಪಾಂತರವಾಗುತ್ತಿವೆ. ಮೊನ್ನೆಯಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಸ್ಕೋರ್‌ಬೋರ್ಡ್‌ ಸಾಕ್ಷಿಯಾಗಿದೆ.

‘‘ಯಶಸ್ಸಿನೊಂದಿಗೆ ಬರುವ ಸೋಲುಗಳನ್ನು ಸ್ವೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು; ಅವುಗಳಿಂದ ಪಾಠ ಕಲಿಯಬೇಕೇ ಹೊರತು ಬೇಜಾರಾಗಬಾರದು. ವೃತ್ತಿಪರ ಜಗತ್ತಿಗೆ ಕಾಲಿಡುವ ಮುನ್ನ ನಿಮ್ಮ ಆಟವನ್ನು ಎಂಜಾಯ್‌ ಮಾಡಿ,’’ ಎಂದು ಕಿರಿಯರಿಗೆ ಕಿವಿಮಾತು ಹೇಳುವ ಮಿಥಾಲಿ ಸೋಲು ಮತ್ತು ಗೆಲುವುಗಳನ್ನು ಅಷ್ಟೇ ಸಮಾನವಾಗಿ ಸ್ವೀಕರಿಸಿದವರು. ಗೆದ್ದಾಗ ಆಕಾಶಕ್ಕೆ ನೆಗೆಯದೇ; ಸೋತಾಗ ಪಾತಾಳಕ್ಕೆ ಇಳಿಯದೇ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ಆದರೆ, ಅವರಲ್ಲಿರುವ ಗೆಲ್ಲುವ ‘ಹಠ’ ಸ್ವಭಾವವೇ ಅವರನ್ನು ಇಲ್ಲಿಯವರೆಗೂ ಕರೆ ತಂದಿದೆ. ಈ ಮನೋಭಾವವನ್ನು ನೀವು ಕ್ರಿಕೆಟ್‌ ಅಂಗಣದಲ್ಲಿಅವರಿಂದ ನಿರೀಕ್ಷಿಸಬಹುದು. ನಾಯಕತ್ವ ಪ್ರದರ್ಶಿಸುವಾಗಲೂ ಸಮಚಿತ್ತ ಭಾವ ಪ್ರದರ್ಶಿಸುತ್ತಲೇ ಗೆಲ್ಲುವ ಹಠವನ್ನು ನಾವು ನೋಡಬಹುದು. ಅವರ ಆಟದಲ್ಲೂಇದೇ ತಾದಾತ್ಮ್ಯತೆಯನ್ನು ನೀವು ಗಮನಿಸಬಹುದು.

ರಾಜಸ್ಥಾನದ ಜೋಧಪುರದ ತಮಿಳು ಕುಟುಂಬದಲ್ಲಿ1982 ಡಿಸೆಂಬರ್‌ 3ರಂದು ಮಿಥಾಲಿ ರಾಜ್‌ ಜನಿಸಿದರು. ತಂದೆ ದೊರೈರಾಜ್‌ ಅವರು ವಾಯುಪಡೆಯಲ್ಲಿಏರ್ಮನ್‌(ವಾರೆಂಟ್‌ ಆಫೀಸರ್‌) ಆಗಿದ್ದರು. ತಾಯಿ ಲೀಲಾ ರಾಜ್‌. ತಮ್ಮ ಹತ್ತನೇ ವಯಸ್ಸಿನಲ್ಲೇ ರಾಜ್‌ ತನ್ನ ಸಹೋದರನೊಂದಿಗೆ ಕ್ರಿಕೆಟ್‌ ಕಲಿಕೆ ಆರಂಭಿಸಿದರು. ಹೈದರಾಬಾದ್‌ನ ಕೀಸ್‌ ಹೈಸ್ಕೂಲ್‌ ಫಾರ್‌ ಗರ್ಲ್ಸ್‌ ಮತ್ತು ಸಿಕಂದರಾಬಾದ್‌ನ ಕಸ್ತೂರ್ಬಾ ಗಾಂಧಿ ಜೂನಿಯರ್‌ ಮಹಿಳಾ ಕಾಲೇಜ್‌ನಲ್ಲಿಓದಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿವಾಸ. 14ನೇ ವಯಸ್ಸಿನಲ್ಲೇ ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಂಡಕ್ಕೆ ಎಂಟ್ರಿ ಪಡೆಯುವ ಸಾಧ್ಯತೆಗಳಿತ್ತು. 1997ರ ಮಹಿಳಾ ಕ್ರಿಕೆಟ್‌ ವಿಶ್ವ ಕಪ್‌ ತಂಡಕ್ಕೆ ಮಿಥಾಲಿ ರಾಜ್‌ ಅವರನ್ನು ಪರಿಗಣಿಸಲಾಗಿತ್ತು. ಆದರೆ, ಅಂತಿಮ ತಂಡದಲ್ಲಿಸೇರಿಸಿಕೊಂಡಿರಲಿಲ್ಲ. ಮುಂದೆ 1999ರಲ್ಲಿಮಿಥಾಲಿ ರಾಜ್‌, ಐರ್ಲೆಂಡ್‌ ವಿರುದ್ಧ ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ಶತಕ ಬಾರಿಸಿದರು. ಅಲ್ಲಿಂದ ಶುರುವಾದ ಕ್ರಿಕೆಟ್‌ ಜರ್ನಿ ಹಲವು ದಾಖಲೆಗಳೊಂದಿಗೆ ಮುಂದುವರಿದಿದೆ. 

2001-02ರಲ್ಲಿದಕ್ಷಿಣ ಆಫ್ರಿಕಾದ ವಿರುದ್ಧ ಟೆಸ್ಟ್‌ಗೂ ಕಾಲಿಟ್ಟರು. ಲಖನೌದಲ್ಲಿನಡೆದ 

ಟೆಸ್ಟ್‌ನಲ್ಲಿಮೂರನೇ ಟೆಸ್ಟ್‌ನಲ್ಲೇ ಮಿಥಾಲಿ ರಾಜ್‌ 209 ರನ್‌ ಚಚ್ಚುವ ಮೂಲಕ ಕರೆನ್‌ ರೋಲ್ಟನ್‌ ಅವರ ಗರಿಷ್ಠ ವೈಯಕ್ತಿಕ ಸ್ಕೋರ್‌ ದಾಖಲೆಯನ್ನು ಪುಡಿ ಪುಡಿ ಮಾಡಿದರು. ಆಗ ಮಿಥಾಲಿಗೆ ಕೇವಲ 19 ವರ್ಷ. ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲೂಅವರು 214 ರನ್‌ ಮಾಡಿದ್ದರು. 2004ರಲ್ಲಿಈ ದಾಖಲೆಯನ್ನು ಪಾಕಿಸ್ತಾನದ ಕಿರನ್‌ ಬಲೂಚ್‌ ಅವರು ವೆಸ್ಟ್‌ ಇಂಡೀಸ್‌ ವಿರುದ್ಧ 242 ರನ್‌ ಗಳಿಸುವ ಮೂಲಕ ಮುರಿದರು. 

ದಕ್ಷಿಣ ಆಫ್ರಿಕಾದಲ್ಲಿನಡೆದ 2005ರ ವಿಶ್ವ ಕಪ್‌ ಪಂದ್ಯಾವಳಿಯಲ್ಲಿತಂಡವನ್ನು ಮುನ್ನಡೆಸಿದ ರಾಜ್‌, ಮೊದಲ ಬಾರಿಗೆ ಭಾರತ ಫೈನಲ್‌ ತಲುಪುವುದಕ್ಕೂ  ಕಾರಣಕರ್ತರಾದರು. ಆದರೆ, ಕಪ್‌ ಗೆಲ್ಲಲಾಗಲಿಲ್ಲ. 2006ರಲ್ಲಿಭಾರತೀಯ ಮಹಿಳಾ ತಂಡ ಮೊದಲ ಬಾರಿಗೆ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯನ್ನು ಗೆದ್ದುಕೊಂಡಿತ್ತು. ಮಿಥಾಲಿ ತಂಡವನ್ನು ಮುನ್ನಡೆಸಿದ್ದರು. ಹಾಗೆಯೇ ಏಷ್ಯಾ ಕಪ್‌ನಲ್ಲಿಒಂದೂ ಪಂದ್ಯವನ್ನು ಸೋಲದೇ ಅಜೇಯರಾಗಿ ಪಂದ್ಯಾವಳಿಯನ್ನು ಗೆದ್ದುಕೊಂಡಿತ್ತು ರಾಜ್‌ ನೇತೃತ್ವದ ಭಾರತೀಯ ತಂಡ.

2013ರ ಮಹಿಳಾ ವಿಶ್ವಕಪ್‌ ಪಂದ್ಯಾವಳಿ ವೇಳೆ ಮಿಥಾಲಿ ಅವರು ಒನ್‌ಡೇ ಕ್ರಿಕೆಟ್‌ನಲ್ಲಿಮೊದಲನೆಯ ರಾರ‍ಯಂಕ್‌ನಲ್ಲಿದ್ದರು. ಮಹಿಳಾ ಒಂಡೇ ಕ್ರಿಕೆಟ್‌ನಲ್ಲಿ5,500 ರನ್‌ ಗಳಿಸಿದ ಎರಡನೇ ಆಟಗಾರ್ತಿ ಎಂಬ ಕೀರ್ತಿಗೆ 2017ರಲ್ಲಿಪಾತ್ರರಾದರು. ಹಾಗೆಯೇ, 20ಟ್ವೆಂಟಿ ಮತ್ತು ಒನ್‌ಡೇ ಕ್ರಿಕೆಟ್‌ನಲ್ಲಿಅತಿ ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ ಭಾರತದ ಮೊದಲ ಆಟಗಾರ್ತಿ. 2017ರ ಜುಲೈನಲ್ಲಿ6000 ರನ್‌ ಪೂರೈಸಿದ ಮೊದಲ ಆಟಗಾರ್ತಿಯಾದರು. 2017ರ ಮಹಿಳಾ ವಿಶ್ವಕಪ್‌ನಲ್ಲಿಭಾರತೀಯ ತಂಡ ಅದ್ಭುತ ಪ್ರದರ್ಶನ ತೋರಿತ್ತು. ಪರಿಣಾಮ ರಾಜ್‌ ನೇತೃತ್ವದ ತಂಡ ಫೈನಲ್‌ಗೆ ಏರಿತ್ತು. ಆದರೆ, ಅಂತಿಮ ಹಣಾಹಣಿಯಲ್ಲಿಇಂಗ್ಲೆಂಡ್‌ ವಿರುದ್ಧ 9 ರನ್‌ಗಳಿಂದ ಸೋಲಬೇಕಾಯಿತು.

ಸದ್ಯ ಮಿಥಾಲಿ ಅಂತಾರಾಷ್ಟ್ರೀಯ ಮಹಿಳಾ ಒಂದು ದಿನದ ಕ್ರಿಕೆಟ್‌ನಲ್ಲಿ7000 ರನ್‌ ಗಳಿಸಿದ ವಿಶ್ವದ ಮೊದಲ ಆಟಗಾರ್ತಿಯಾಗಿದ್ದಾರೆ. ಹಾಗೆಯೇ ಸತತ ಏಳು ಅರ್ಧ ಶತಕ ಗಳಿಸಿದ ದಾಖಲೆ, ಒನ್‌ಡೇಯಲ್ಲಿಅತಿ ಹೆಚ್ಚು ಅರ್ಧಶತಕ ಗಳಿಸಿದ ದಾಖಲೆ, 2018ರಲ್ಲಿನಡೆದ ಮಹಿಳಾ ಟ್ವೆಂಟಿ20 ವಿಶ್ವಕಪ್‌ನಲ್ಲಿ2000 ರನ್‌ ಪೂರೈಸಿದ ಮೊದಲ ಭಾರತದ ಕ್ರಿಕೆಟರ್‌ ಎಂಬ ದಾಖಲೆ, ಐಸಿಸಿ ಒನ್‌ಡೇ ವಿಶ್ವಕಪ್‌ನಲ್ಲಿಒಂದಕ್ಕಿಂತ ಹೆಚ್ಚು ಬಾರಿ ಫೈನಲ್‌ ಪಂದ್ಯದಲ್ಲಿನಾಯಕತ್ವ(2005 ಮತ್ತು 2017) ವಹಿಸಿದ ಮೊದಲ ಆಟಗಾರ್ತಿ ದಾಖಲೆ, 2019ರಲ್ಲಿನ್ಯೂಜಿಲೆಂಡ್‌ ವಿರುದ್ಧ ಒನ್‌ಡೇ ಸರಣಿಯಲ್ಲಿ200 ಪಂದ್ಯಗಳನ್ನಾಡಿದ ಮೊದಲ ಮಹಿಳಾ ಕ್ರಿಕೆಟರ್‌ ದಾಖಲೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ20 ವರ್ಷ ಪೂರೈಸಿದ ಮೊದಲ ಮಹಿಳಾ ಆಟಗಾರ್ತಿ ದಾಖಲೆ! ಉಶ್ಶಪ್ಪಾ.. ಎಷ್ಟೊಂದು ದಾಖಲೆಗಳು!

ಇಷ್ಟೆಲ್ಲದಾಖಲೆಗಳನ್ನು ಗುಡ್ಡೆ ಹಾಕಿದ ಮೇಲೆ ಪ್ರಶಸ್ತಿಗಳು ಬಾರದೆ ಹೋಗುತ್ತವೆಯೇ? ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಹಲವು ಪ್ರಶಸ್ತಿಗಳು ರಾಜ್‌ ಅವರನ್ನು ಅರಸಿ ಬಂದಿವೆ. 2017ರಲ್ಲಿವಿಸ್ಡನ್‌ ಲೀಡಿಂಗ್‌ ವುಮನ್‌ ಕ್ರಿಕೆಟರ್‌, 2003ರಲ್ಲಿಅರ್ಜುನ್‌ ಅವಾರ್ಡ್‌, 2015ರಲ್ಲಿಪದ್ಮಶ್ರೀ ಪ್ರಶಸ್ತಿ... ಹೀಗೆ ಹಲವು ಪ್ರಶಸ್ತಿಗಳು ಅವರ ಶೋಕೇಶ್‌ ಸೇರಿಕೊಂಡಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ20 ವರ್ಷ ಪೂರೈಸಿದ್ದರೂ ಅವರ ಕ್ರಿಕೆಟ್‌ ಪ್ರತಿಭೆಯ ಹೊಳಪು ದಿನದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನೂ ಐದಾರು ವರ್ಷ ಕ್ರಿಕೆಟ್‌ ಆಡುವ ಕ್ಷ ಮತೆ ಅವರಲ್ಲಿದೆ ಎಂಬುದನ್ನು ಅವರು ಗಳಿಸುತ್ತಿರುವ ರನ್‌ಗಳೇ ಸಾರಿ ಹೇಳುತ್ತಿವೆ. ಮೂರೂ ಮಾದರಿಯ ಕ್ರಿಕೆಟ್‌ಗಳಲ್ಲಿಒಂದು ದಿನದ ಕ್ರಿಕೆಟ್‌ ಪಂದ್ಯವನ್ನೇ ಹೆಚ್ಚಾಗಿ ಇಷ್ಟಪಡುವ ಮಿಥಾಲಿಗೆ, ಬ್ಯಾಟಿಂಗ್‌ಗೆ ಸಚಿನ್‌ ತೆಂಡೂಲ್ಕರ್‌; ಕ್ಯಾಪ್ಟನ್‌ಶಿಪ್‌ಗೆ ರಿಕಿ ಪಾಂಟಿಂಗ್‌ ಆದರ್ಶ.

ಮಿಥಾಲಿ ಗೆಜ್ಜೆ ಕಟ್ಟಿಕೊಂಡರೆ ಭರತನಾಟ್ಯದ ಮೂಲಕ ಮನೆಸೂರೆಗೊಳ್ಳುವಂತೆ ಮಾಡಬಲ್ಲರು. ತಾಯಿ ಮತ್ತು ನೃತ್ಯ ಗುರು ತಮ್ಮ ಸ್ಫೂರ್ತಿಯೆಂದು ಅವರು ಆಗಾಗ ಹೇಳುತ್ತಾರೆ. ರಸಮಲಾಯಿ ಮತ್ತು ಪಿಸ್ತಾ ಐಸ್‌ಕ್ರೀಮ್‌ ಇಷ್ಟಪಡುವ ಮಿಥಾಲಿಗೆ ಅಡುಗೆ ಮತ್ತು ಹಾಡಲು ಬರುವುದಿಲ್ಲವಂತೆ. ಹಠವೇ ತಮ್ಮ ದೊಡ್ಡ ಶಕ್ತಿ ಎಂದು ಹೇಳಿಕೊಳ್ಳುವ ಮಿಥಾಲಿ ಅದರಿಂದಲೇ ಇಂದು ಲೆಜೆಂಡ್‌ ಸ್ಥಾನಕ್ಕೇರಿದ್ದಾರೆ. ಶಹಬ್ಬಾಸ್‌ ಮಿಥು!


ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯ 2021ರ ಮಾರ್ಚ್ ತಿಂಗಳ 21ನೇ ತಾರೀಖಿನ ಸಂಚಿಕೆಯಲ್ಲಿ ಪ್ರಕಟವಾಗಿದೆ



 

ಸೋಮವಾರ, ಮಾರ್ಚ್ 15, 2021

How to secure your Facebook profile?: ಫೇಸ್‌ಬಕ್ ಖಾತೆ ಸುರಕ್ಷಿತವಾಗಿಡುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ
ನಾವು ಈಗ ಸೋಷಿಯಲ್ ಮೀಡಿಯಾ ಯುಗದಲ್ಲಿ ಬದುಕುತ್ತಿದ್ದೇವೆ. ಸೋಷಿಯಲ್ ಮೀಡಿಯಾಗಳಿಲ್ಲದೇ ಬದುಕೇ ಇಲ್ಲ ಎನ್ನುವಷ್ಟರಮಟ್ಟಿಗೆ ನಾವು ಅವುಗಳಿಗೆ ದಾಸರಾಗಿದ್ದೇವೆ. ಈ ಜಾಲತಾಣಗಳಿಂದ ನಮಗೆ ಲಾಭ ಮತ್ತು ನಷ್ಟಗಳೆರಡೂ ಉಂಟು. ಅವುಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದು ನಿಂತಿದೆ.

ಸೋಷಿಯಲ್ ಮೀಡಿಯಾಗಳ ಪೈಕಿ ಫೇಸ್‌ಬುಕ್ ಜನಪ್ರಿಯವಾಗಿರುವ ತಾಣವಾಗಿದೆ. ಅಂದಾಜು 2.8 ಶತಕೋಟಿ ಬಳಕೆದಾರರು ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿದ್ದಾರೆ ಎಂದರೆ ಅದರ ಅಗಾಧತೆಯನ್ನು ನೀವು ತಿಳಿದುಕೊಳ್ಳಬಹುದು. 

ಭಾರತದಲ್ಲಂತೂ ಫೇಸ್‌ಬುಕ್  ಸೇರಿದಂತೆ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಜನರು ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಆನ್‌ಲೈನ್ ಮೂಲಕ ಸ್ನೇಹಿತರನ್ನು ಸಂಪಾದಿಸುವುದು, ನಿಮ್ಮ ಪ್ರೀತಿ ಪಾತ್ರರೊಂದಿಗೆ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುವುದು ಇತ್ಯಾದಿ ಚಟುವಟಿಕೆಗಳಿಗೆ ಈ ತಾಣಗಳು ಅವಕಾಶವನ್ನು ಕಲ್ಪಿಸಿಕೊಡುತ್ತೇವೆ. ಈ ಫೇಸ್‌ಬುಕ್ ತಾಣವು ಎಲ್ಲೆಲ್ಲೋ ಇದ್ದವರನ್ನು ಒಂದೇ ಕ್ಲಿಕ್‌ನಲ್ಲಿ ಹತ್ತಿರವಾಗಿಸುತ್ತವೆ ಎಂಬುದು ಅಷ್ಟೇ ಸತ್ಯ. ಆದರೆ, ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅದರಿಂದ ಅಪಾಯಗಳ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ ಅಷ್ಟೇ ಖರೆ.

ಸಮುದ್ರದ ರೀತಿಯಲ್ಲಿರುವ ಈ ಫೇಸ್‌ಬುಕ್‌ನಲ್ಲಿ ಕೊಂಚ ಯಾಮಾರಿದರೂ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಫೇಸ್‌ಬುಕ್‌ನಲ್ಲಿ ಒಳ್ಳೆಯವರು ಸಕ್ರಿಯರಾಗಿರುವಂತೆ ಕೆಟ್ಟ ಬುದ್ಧಿಯವರೂ ಇದ್ದಾರೆ. ಹಾಗಾಗಿ ನಿಮ್ಮ ಪ್ರೊಫೈಲ್‌ನಲ್ಲಿರುವ ಮಾಹಿತಿಯನ್ನು, ನಿಮ್ಮ ಫೋಟೊಗಳನ್ನು ಕದ್ದು ಕುಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ನಾವು ಫೇಸ್‌ಬುಕ್‌ನಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಬಳಕೆದಾರರ ಸುರಕ್ಷತೆಗಾಗಿ ಫೇಸ್‌ಬುಕ್ ಕೂಡ ಹಲವು ಟೂಲ್‌ಗಳನ್ನು ಒದಗಿಸಿದೆ. ಅವುಗಳನ್ನು ಬಳಸಿಕೊಂಡು ನಿಮ್ಮ ಫೇಸ್‌ಬುಕ್ ಪುಟಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು. 

 ಪ್ರೊಫೈಲ್ ಸುರಕ್ಷತೆಗೆ ಹೀಗೆ ಮಾಡಿ

ಪ್ರೊಫೈಲ್ ಲಾಕ್ ಮಾಡಿ
ಸುರಕ್ಷತೆಯ ದೃಷ್ಟಿಯಿಂದ ಇದೊಂದು ಅತ್ತುತ್ಯಮ ಆಯ್ಕೆಯಾಗಿದೆ. ನೀವು ನಿಮ್ಮ ಪ್ರೊಫೈಲ್‌ ಅನ್ನು ಲಾಕ್ ಮಾಡಿದರೆ, ಯಾರಿಗೂ ನಿಮ್ಮ ಖಾತೆಯ ವಿವರವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಫ್ರೆಂಡ್ ಲಿಸ್ಟ್‌ನಲ್ಲಿದ್ದವರಿಗೆ ಮಾತ್ರವೇ ನಿಮ್ಮ ಪ್ರೊಫೈಲ್‌ ಅಕ್ಸೆಸ್ ಸಾಧ್ಯವಾಗುತ್ತದೆ. ಒಂದೊಮ್ಮೆ ಅಪರಿಚಿತರು ನಿಮ್ಮ  ಪ್ರೊಫೈಲ್‌ ನೋಡಬೇಕಾದರೆ ಅವರು ನಿಮಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಬೇಕು ಮತ್ತು ಅದನ್ನು ಅಕ್ಸೆಪ್ಟ್ ಮಾಡಿದಾಗ ಮಾತ್ರ ಪ್ರೊಫೈಲ್ ನೋಡಲು ಸಾಧ್ಯವಾಗುತ್ತದೆ. ಪ್ರೊಫೈಲ್ ಲಾಕ್ ಮಾಡಿದರೆ, ಹೊರಗಿನವರಿಗೆ ನಿಮ್ಮ ಟೈಮ್‌ಲೈನ್‌ನಲ್ಲಿರುವ ಯಾವುದೇ ಪೋಸ್ಟ್ ಆಗಲೀ ಅಥವಾ ಇತರ ಮಾಹಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ.

ಟೈಮ್‌ಲೈನ್ನಲ್ಲಿ ಏನಿರಬೇಕು?
ಫೇಸ್‌ಬುಕ್‌ ಪುಟದಲ್ಲಿ ನಿಮ್ಮ ಸ್ನೇಹಿತರು ಅನೇಕ ಪೋಸ್ಟ್‌ಗಳಿಗೆ ನಿಮ್ಮನ್ನು ಟ್ಯಗ್ ಮಾಡುತ್ತಿರುತ್ತಾರೆ. ಇದೆಲ್ಲವೂ ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಂಡು ಕಿರಿಕಿರಿ ಮಾಡುತ್ತಿರುತ್ತದೆ. ಇದನ್ನು ತಪ್ಪಿಸಲು  ಫೇಸ್‌ಬುಕ್ ನಿಮಗೆ ಟೈಮ್‌ಲೈನ್ ರಿವ್ಯೂ ಆಯ್ಕೆಯನ್ನು ನೀಡುತ್ತದೆ. ಈ ಟೈಮ್‌ಲೈನ್ ರಿವ್ಯೂ ಟೂಲ್ ಬಳಸಿಕೊಂಡು ಯಾವ ಪೋಸ್ಟ್‌ಗಳು ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಿಕೊಳ್ಳಬಹುದು. ಇದರಿಂದ ಅನಾವಶ್ಯಕ ಕಿರಿಕಿರಿಯನ್ನು ತಪ್ಪಿಸಿಕೊಳ್ಳಬಹುದು.

 ಆಡಿಯನ್ಸ್ ನಿರ್ಧರಿಸಿಕೊಳ್ಳಿ
ನೀವು ಪೋಸ್ಟ್ ಮಾಡುವ ಇಲ್ಲವೇ, ಷೇರ್ ಮಾಡುವ ಪೋಸ್ಟ್‌ಗಳನ್ನು ಯಾರು ನೋಡಬೇಕು, ನೋಡಬಾರದು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಹುದು. ಇದಕ್ಕಾಗಿ ಫೇಸ್‌ಬುಕ್ ಒದಗಿಸುವ ಆಡಿಯನ್ಸ್ ಸೆಲೆಕ್ಟರ್ ಆಯ್ಕೆಯನ್ನು ಬಳಸಿಕೊಳ್ಳಬೇಕು. ಈ ಟೂಲ್‌ನಿಂದ  ಬಳಕೆದಾರರು ಪೋಸ್ಟ್‌ಗಳನ್ನು ಯಾರು ವೀಕ್ಷಿಸಬಹುದು ಎಂದು ಸೆಟ್ ಮಾಡಬಹುದು. ಈ ಟೂಲ್‌ನಲ್ಲಿರುವ ಎವರೀವನ್ ಅಥವಾ ಫ್ರೆಂಡ್ಸ್ ಅಥವಾ ನಿಮಗೆ ಬೇಕಾದವರಿಗೆ ಮಾತ್ರವೇ ನಿಮ್ಮ ಪೋಸ್ಟ್ ತಲುಪುವ ಹಾಗೆ ಕಷ್ಟಮೈಸ್ ಕೂಡ ಮಾಡಿಕೊಳ್ಳಬಹುದು. 

ಮ್ಯಾನೇಜ್ ಆಕ್ಟಿವಿಟಿ
ನಿಮ್ಮ ಪೋಸ್ಟ್‌ಗಳನ್ನು ಡಿಲಿಟ್ ಮಾಡಲು ಇಳ್ಲವೇ ಆರ್ಕೈವ್ ಮಾಡಲು ಮ್ಯಾನೇಜ್ ಆಕ್ಟಿವಿಟಿ ನೆರವು ನೀಡುತ್ತದೆ. ಥ್ರ್ಯಾಶ್‌ಗೆ ಕಳುಹಿಸಲಾದ ಪೋಸ್ಟ್‌ಗಳು 30 ದಿನಗಳವರೆಗೂ ಅಂದರೆ ಆಟೋಮ್ಯಾಟಿಕ್ ಆಗಿ ಡಿಲಿಟ್ ಆಗೋವರೆಗೂ ಅಲ್ಲಿಯೇ ಇರುತ್ತವೆ. ಒಂದು ವೇಳೆ ಈ ಪೋಸ್ಟ್‌ಗಳನ್ನು ನೀವು ರಿಸ್ಟೋರ್ ಮಾಡಿಕೊಳ್ಳುವುದಾದರೆ 30 ದಿನಗಳ ಮುಂಚೆಯೇ ಮಾಡಿಕೊಳ್ಳಬೇಕು. ಆ ಬಳಿಕ ಮತ್ತೆ ಅವು ಸಿಗುವುದಿಲ್ಲ.





















(ಈ ಲೇಖನವು ವಿಜಯ ಕರ್ನಾಟಕದ 2021ರ ಮಾರ್ಚ್ 15ರ ಸಂಚಿಕೆಯಲ್ಲಿ ಪ್ರಕಟವಾಗಿದೆ)

ಭಾನುವಾರ, ಫೆಬ್ರವರಿ 28, 2021

Indian desi Twitter 'Koo': ಬನ್ನಿ... Kooಗು ಹಾಕೋಣ!

- ಮಲ್ಲಿಕಾರ್ಜುನ ತಿಪ್ಪಾರ
ದೇಶಿ ಟ್ವಿಟರ್‌’ ಎಂದೇ ಕರೆಯಿಸಿಕೊಳ್ಳುತ್ತಿರುವ  ಕೂ(Koo) ಎಂಬ ಮೈಕ್ರೊ ಬ್ಲಾಗಿಂಗ್‌ ಆ್ಯಪ್‌ಗೆ ಶುಕ್ರ ದೆಸೆ ಆರಂಭವಾಗಿದೆ. 

ರೈತ ಪ್ರತಿಭಟನೆ ಹಾಗೂ ‘ಕೆಂಪು ಕೋಟೆ ಹಿಂಸಾಚಾರ’ದ ಹಿನ್ನೆಲೆಯಲ್ಲಿಕೆಲವು ಟ್ವಿಟರ್‌ ಖಾತೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರ ಪಟ್ಟಿ ನೀಡಿತ್ತು. ನೀವು ಹೇಳಿದಂತೆ ಎಲ್ಲವನ್ನೂ ರದ್ದುಗೊಳಿಸಲು ಸಾಧ್ಯವಿಲ್ಲಎಂದು ಟ್ವಿಟರ್‌ ಹೇಳುತ್ತಿದ್ದಂತೆ, ದೇಶಿ ಮೈಕ್ರೊಬ್ಲಾಗಿಂಗ್‌ ‘ಕೂ’ನತ್ತ ಕೇಂದ್ರ ಸಚಿವರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕ್ರಿಕೆಟಿ ಗರು, ಗಣ್ಯರು, ಸಿನಿಮಾ ನಟ- ನಟಿಯರು ದಾಂಗುಡಿ ಇಟ್ಟರು.

ಅಷ್ಟೇ ಅಲ್ಲದೇ ದೇಶಿ ಆ್ಯಪ್‌ ಕೂ ಬೆಂಬಲಿಸವಂತೆ ಕರೆ ನೀಡಿದರು. ಕೇಂದ್ರ ಸರಕಾರದ ಬಹಳಷ್ಟು ಇಲಾಖೆಗಳು ಕೂ ಆ್ಯಪ್‌ನಲ್ಲಿ ಖಾತೆ ತೆರೆದವು. ಕಳೆದ ಕೆಲವು ದಿನಗಳಿಂದ ಕೂ ಡೌನ್‌ಲೋಡ್‌ಗಳಲ್ಲಿ10 ಪಟ್ಟು ಹೆಚ್ಚಳವಾಗಿದೆ. ಬಹುಶಃ ಈ ಪ್ರಮಾಣ ಇನ್ನೂ ಹೆಚ್ಚಾಗಬಹುದು. ಇದೀಗ ಎಲ್ಲರ ಬಾಯಲ್ಲೂಈ ಆ್ಯಪ್‌ನದ್ದೇ ‘ಕೂ’ಗು. 

ಏತನ್ಮಧ್ಯೆ, ಕೂ ಆ್ಯಪ್‌ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎಂದು ಫ್ರೆಂಚ್‌ ಹ್ಯಾಕರ್‌ರೊಬ್ಬರು ಆಪಾದಿಸಿದ್ದರು. ಇದನ್ನು ಕೂ ಆ್ಯಪ್‌ ಅಲ್ಲಗಳೆದಿದೆ. ಜೊತೆಗೆ, ಈ ಆ್ಯಪ್‌ನಲ್ಲಿ ಚೀನಿ ಹೂಡಿಕೆದಾರರು ಬಂಡವಾಳ ತೊಡಗಿಸಿದ್ದಾರೆ ಎಂಬ ಮಾತುಗಳಿದ್ದವು. ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಕೂ ಆ್ಯಪ್‌ ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣನ್‌ 

ಅವರು, ‘‘ಭಾರತೀಯರೇ ಸ್ಥಾಪಿಸಿರುವ ಈ ಕಂಪನಿ ಭಾರತದಲ್ಲಿ ನೋಂದಣಿಯಾಗಿದೆ. ಈ ಮೊದಲು ಹೂಡಿಕೆ ಮಾಡಿದ್ದ ಚೀನಿ ಹೂಡಿಕೆದಾರರು ಶೀಘ್ರವೇ ಹೊರ ಬೀಳಲಿದ್ದಾರೆ. ಅಪ್ಪಟ ಭಾರತೀಯವಾಗಿರುವ 3one4 capital  ನೇತೃತ್ವದ ಸಂಸ್ಥೆ ಬೊಂಬಿನೇಟ್‌ ಟೆಕ್ನಾಲಜಿಸ್‌ಗೆ ಫಂಡ್‌ ಮಾಡುತ್ತಿದೆ ಎಂದು ಹೇಳಿದ್ದಾರೆ. 

ಏನಿದು ಕೂ?
ಕೂ ಆ್ಯಪ್‌ ಕೂಡ ಟ್ವಿಟರ್‌ ರೀತಿಯ ಮೈಕ್ರೊಬ್ಲಾಗಿಂಗ್‌ ವೇದಿಕೆಯಾಗಿದೆ. ಬಳಕೆದಾರರು ಆಡಿಯೊ ಕ್ಲಿಪ್ಸ್ ‌ ಸೇರಿದಂತೆ ಮಲ್ಟಿಮೀಡಿಯಾ ಕಂಟೆಂಟ್‌ ಪೋಸ್ಟ್‌ ಮಾಡಬಹುದು. ಟ್ವಿಟರ್‌ ರೀತಿಯಲ್ಲಿ ನಿಗದಿತ ಪದಗಳೊಳಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಅಂದರೆ, 400 ಅಕ್ಷ ರಗಳ ಮಿತಿಯಲ್ಲಿ ಹೇಳಬೇಕಾಗುತ್ತದೆ. ಇಂಗ್ಲಿಷ್‌ ಮಾತ್ರವಲ್ಲದೇ, ಕನ್ನಡ ಸೇರಿದಂತೆ 6 ಭಾರತೀಯ ಭಾಷೆಗಳಿಗೆ ಸಪೋರ್ಟ್‌ ಮಾಡುತ್ತದೆ ಮತ್ತು ಇನ್ನಷ್ಟು ಸ್ಥಳೀಯ ಭಾಷೆಗಳಲ್ಲಿ ಸೇವೆ ದೊರೆಯಲಿದೆ. ಟ್ವಿಟರ್‌ ರೀತಿಯಲ್ಲೇ ಕೂ ಲೋಗೊ ಕೂಡ ಪಕ್ಷಿಯಾಗಿದ್ದು, ಹಳದಿ ಬಣ್ಣದಲ್ಲಿದೆ. ಹ್ಯಾಷ್‌ಟ್ಯಾಗ್‌(#) ಮತ್ತು ಮೆನ್ಷನ್‌(@)ಗಳಿಗೆ ಇದು ಅವಕಾಶ ಕಲ್ಪಿಸಿ ಕೊಡುತ್ತದೆ. ರಿ-ಟ್ವೀಟ್‌ ರೀತಿಯಲ್ಲಿ‘ರಿ-ಕೂ’ಗೂ ಅವಕಾಶವಿದೆ ಇಲ್ಲಿ. ಚಾಟ್‌ ಬದಲಿಗೆ ಡೈರೆಕ್ಟ್ ಮೆಸೆಜ್‌ ಮಾಡಬಹುದು. 

ಯಾವಾಗ ಆರಂಭವಾಯಿತು?
ಎಂಬಿಎ ಪದವೀಧರರಾದ ಅಪ್ರಮೇಯ ರಾಧಾಕೃಷ್ಣನ್‌ ಮತ್ತು ಮಾಯಾಂಕ್‌ ಬಿಡಾವತ್ಕಾ ಅವರ ಕೂ ಆ್ಯಪ್‌ ಸಂಸ್ಥಾಪಕರು. ಈ ಇಬ್ಬರು ವೋಕಲ್‌ ಸಂಸ್ಥಾಪಕರೂ ಹೌದು. ವೋಕಲ್‌ ಎಂಬುದು ಕೋರಾ ರೀತಿಯಲ್ಲಿ ಆಡಿಯೊ-ವಿಡಿಯೊ ನಾಲೆಡ್ಜ್‌ ಷೇರಿಂಗ್‌ ವೇದಿಕೆಯಾಗಿತ್ತು. 2020ರ ಮಾರ್ಚ್‌ ತಿಂಗಳಲ್ಲಿ ಕೂ ಆ್ಯಪ್‌ ಆರಂಭವಾಯಿತು ಮತ್ತು ಕೇಂದ್ರ ಸರಕಾರದ ಆತ್ಮನಿರ್ಭರ್‌ ಭಾರತ್‌ ಚಾಲೆಂಜ್‌ ಟೆಕ್‌ ಇನ್ನೋವೇಷನ್‌ ಗೆದ್ದುಕೊಂಡಿದೆ. ಬೆಂಗಳೂರಿನಲ್ಲೇ ಇದರ ಕಚೇರಿ ಇದೆ. 

ಹೇಗೆ ಡೌನ್‌ಲೋಡ್‌?
ಕೂ ಉಚಿತ ಆ್ಯಪ್‌ ಆಗಿದ್ದು, ಆಂಡ್ರಾಯ್ಡ್‌ ಮತ್ತು ಐಒಎಸ್‌ ವೇದಿಕೆಗಳಲ್ಲಿಲಭ್ಯವಿದೆ. Koo: Connect with Indians in Indian Languages ಶೀರ್ಷಿಕೆಯಡಿ ಪ್ಲೇ ಸ್ಟೋರ್‌ನಲ್ಲಿದ್ದರೆ, Koo: Connect with Top Indians ಹೆಸರಿನಡಿ ಐಒಎಸ್‌ನಲ್ಲಿ ದೊರೆಯುತ್ತದೆ. 

ಸುಧಾರಣೆ ಅಗತ್ಯ
ದೇಶಿ ಟ್ವಿಟರ್‌ ಎಂಬ ಹೆಗ್ಗಳಿಕೆಯನ್ನು ಪಡೆಯುತ್ತಿರುವ ಕೂ ಆ್ಯಪ್‌ ಇನ್ನೂ ಹಲವು ರೀತಿಯಲ್ಲಿ ಸುಧಾರಣೆ ಕಾಣಬೇಕಿದೆ ಎನ್ನುವುದು ಅದನ್ನು ಬಳಸುತ್ತಿರುವವರ ಅನೇಕರ ಅಭಿಪ್ರಾಯವಾಗಿದೆ. ಟ್ವಿಟರ್‌ ರೀತಿಯಲ್ಲಿ ಇದು ಬಳಕೆದಾರರ ಸ್ನೇಹಿಯಾಗಿಲ್ಲ ಎಂಬುದು ಸಾಮಾನ್ಯ ದೂರು. ಊಹೆಗೆ ನಿಲುಕದ ರೀತಿಯಲ್ಲಿ ಬಳಕೆದಾರರನ್ನು ಪಡೆಯುತ್ತಿರುವ ಕೂ ಮುಂಬರುವ ದಿನಗಳಲ್ಲಿ ಬಹುಶಃ ಈ ಎಲ್ಲಕುಂದು ಕೊರತೆಗಳನ್ನು ನೀಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಕಂಪನಿಯಾಗಿ ಬೆಳೆಯುವ ಎಲ್ಲ ಅರ್ಹತೆಗಳು ಮತ್ತು ಸಾಮರ್ಥ್ಯವಂತೂ ಇದ್ದೇ ಇದೆ ಎಂಬುದರಲ್ಲಿ ಎರಡು ಮಾತಿಲ್ಲ.



ಭಾನುವಾರ, ಫೆಬ್ರವರಿ 14, 2021

Ghulam Nabi Azad is a Man of Integrity: 'ಆಜಾದ್‌' ಭಾರತದ 'ಬದ್ಧತೆ'ಯ ನಾಯಕ

 ಕಾಂಗ್ರೆಸ್‌ನ ಬಿಕ್ಕಟ್ಟುಗಳಿಗೆ ಪರಿಹಾರ ಸೂಚಿಸುತ್ತಿದ್ದ ಚಾಣಾಕ್ಷ ರಾಜಕಾರಣಿ



- ಮಲ್ಲಿಕಾರ್ಜುನ ತಿಪ್ಪಾರ
ಮೊದಲು ಈ ಘಟನೆ ಓದಿ... ಅದು ರಾಜಮಾತೆ ಸಿಂಧಿಯಾ ಪ್ರತಿಪಕ್ಷ ದ ಉಪ ನಾಯಕಿ­ಯಾಗಿದ್ದ ಸಮಯ. ಸದನದಲ್ಲಿ ಒಮ್ಮೆ ಗುಲಾಂ ನಬಿ ಆಜಾದ್‌ ವಿರುದ್ಧ ಗಂಭೀರ ಆರೋಪ ಮಾಡಿದರು. ಆಗ ಎದ್ದು ನಿಂತ ಆಜಾದ್‌, ‘‘ನಾನು ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಇದರ ತನಿಖೆಗೆ ಸಮಿತಿ ರಚಿಸುವಂತೆ ಕೇಳಿಕೊಳ್ಳುತ್ತೇನೆ. ಸಮಿತಿಯ ನೇತೃತ್ವವನ್ನು ವಾಜಪೇಯಿ ವಹಿಸಿಕೊಳ್ಳಲಿ. ಎಲ್‌.ಕೆ.ಆಡ್ವಾಣಿ ಮತ್ತು ನೀವು(ರಾಜಮಾತಾ) ಸಮಿತಿಯ ಸದಸ್ಯರಾಗಿ. ಹದಿನೈದು ದಿನದಲ್ಲಿ ವರದಿ ನೀಡಲಿ ಮತ್ತು ಅವರು ನೀಡುವ ಶಿಕ್ಷೆಯನ್ನು ಅನುಭವಿಸಲು ಸಿದ್ಧನಾಗಿದ್ದೇನೆ,’’ ಎಂದರು. ಆಗ ಎದ್ದು ನಿಂತ ವಾಜಪೇಯಿ ಸದನದ ಜೊತೆಗೆ ಆಜಾದ್‌ ಅವರಿಗೂ ಕ್ಷ ಮೆ ಕೋರಿ, ‘‘ಅವರ ಬಗ್ಗೆ(ಆಜಾದ್‌) ರಾಜಮಾತಾ ಸಿಂಧಿಯಾಗೆ ಗೊತ್ತಿಲ್ಲ; ನನಗೆ ಅವ­ರೇನು ಎಂಬುದು ಗೊತ್ತು,’’ ಎಂದು ಹೇಳಿ ವಿಷಯವನ್ನು ತಣ್ಣಗಾಗಿಸಿದರು.

ಗುಲಾಂ ನಬಿ ಆಜಾದ್‌ ತಮ್ಮ ರಾಜಕೀಯ ಜೀವನದು­ದ್ದಕ್ಕೂ ಅಂಥದೊಂದು ‘ಪ್ರಾಮಾಣಿಕತೆ’ ಮತ್ತು ‘ಬದ್ಧತೆ’ಯನ್ನು ಕಾಯ್ದು­ಕೊಂಡು ಬಂದಿದ್ದಾರೆ. ಭಾರತೀಯ ರಾಜಕಾರಣದಲ್ಲಿ ಅಜಾತಶತ್ರು ರಾಜಕಾರಣಿಗಳು ವಿರಳ. ಈ ವಿರಳರ ಸಾಲಿನಲ್ಲಿ ಕಾಂಗ್ರೆಸ್‌ನ ಈ ಹಿರಿಯ ನಾಯಕ ನಿಲ್ಲುತ್ತಾರೆ. ನಾಲ್ಕೈದು ದಶಕ ಭಾರತದ ರಾಜಕಾರಣದ ಹಲವು ಪಲ್ಲಟಗಳಿಗೆ ಸಾಕ್ಷಿಯಾದ ಆಜಾದ್‌, ರಾಜ್ಯ­ಸಭೆಯಿಂದ ನಿವೃತ್ತರಾಗುತ್ತಿದ್ದಾರೆ. ಬಿಜೆಪಿ ಸೇರಿ ಹಲವು ಪಕ್ಷ ಗಳು ಅವರ ಮುತ್ಸದ್ದಿತನ, ಬದ್ಧತೆಯನ್ನು ಬಾಯಿತುಂಬ ಕೊಂಡಾಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರಂತೂ, ಆಜಾದ್‌ ಬಗ್ಗೆ ವಿದಾಯ ಭಾಷಣ ಮಾಡುವಾಗ ಗದ್ಗದಿತರಾದರು. ಮೋದಿ ಅವರು ಆಜಾದ್‌ರನ್ನು ಹೊಗಳಿದ ರೀತಿಯನ್ನು ಹಲವರು, ಹಲವು ರೀತಿ­ಯಲ್ಲೇ ಅರ್ಥೈಯಿಸುತ್ತಿದ್ದಾರೆ. ಕೆಲವರು ಆಜಾದ್‌ ಬಿಜೆಪಿ ತೆಕ್ಕೆಗೆ ಜಾರ­ಬಹುದು; ಬಿಜೆಪಿಗೂ ಕಾಶ್ಮೀರದಲ್ಲಿ ವಿಶ್ವಸನೀಯ, ಮುತ್ಸದ್ದಿಯ ಮುಖ­ವೊಂದು ಆಜಾದ್‌ ರೂಪದಲ್ಲಿ ಸಿಗಬಹುದು ಎಂದು ವಿಶ್ಲೇಷಿಸುತ್ತಿದ್ದಾರೆ. ಆದರೆ, ಅವರು ಬಿಜೆಪಿ ಸೇರುವುದನ್ನು ಒಂದೇ ಏಟಿಗೆ ಹೊಡೆದು ಹಾಕಿದ್ದಾರೆ. ಸಂದರ್ಶನದಲ್ಲಿ, ‘‘ಯಾವಾಗ ಕಾಶ್ಮೀರದಲ್ಲಿ ಕಪ್ಪು ಹಿಮ ಬೀಳುತ್ತದೆಯೋ ಆ ದಿನ ಬಿಜೆಪಿ ಸೇರುತ್ತೇನೆ,’’ ಎಂದು ಸ್ಪಷ್ಪಪಡಿಸಿದ್ದಾರೆ. ಅದರರ್ಥ ಬಿಜೆಪಿ ಮಾತ್ರವಲ್ಲದೇ ಬೇರೆ ಯಾವುದೇ ಪಕ್ಷ ಕ್ಕೂ ಸೇರುವುದಿಲ್ಲಎಂದು ಖಡಕ್ಕಾಗಿ ಹೇಳಿದ್ದಾರೆ. 

ಮೋದಿ ಅವರ ಶ್ಲಾಘನೆ ಹಿಂದಿನ ಕಾರಣವನ್ನು ಬಿಚ್ಚಿಟ್ಟಿ­ದ್ದಾರೆ. 90ರಿಂದಲೂ ಮೋದಿ ಮತ್ತು ನಬಿ ಸ್ನೇಹಿತರು. ಇಬ್ಬರು ತಮ್ಮ ಪಕ್ಷ ದ ಪ್ರಧಾನ ಕಾರ್ಯದರ್ಶಿಗಳಾಗಿದ್ದಾಗ ಟಿವಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು. ಆ ಸಮಯದಲ್ಲಿ ‘ಚಹ ಪೇ ಚರ್ಚಾ’ ನಡೆಯುತ್ತಿತ್ತು. ಬಳಿಕ ಇಬ್ಬರು ಮುಖ್ಯಮಂತ್ರಿಗಳಾದರು. ಪ್ರಧಾನಿ, ಗೃಹ ಸಚಿವರ ಸಭೆಗಳಿಗೆ ಹೋದಾಗ ಭೇಟಿಯಾಗುತ್ತಿದ್ದರು. ಹೀಗೆ ಅವರಿಬ್ಬರ ನಡುವಿನ ಸ್ನೇಹ ಈ ಕ್ಷ ಣದವರೆಗೂ ಜಾರಿಯಲ್ಲಿದೆ. ಕಾಶ್ಮೀರದಲ್ಲಿ 2006ರಲ್ಲಿ ಗುಜರಾತ್‌ನ ಪ್ರವಾಸಿಗರ ಬಸ್‌ ಮೇಲೆ ದಾಳಿ ನಡೆಯಿತು. ಈ ವಿಷಯವನ್ನು ಅಂದು ಸಿಎಂ ಆಗಿದ್ದ ಮೋದಿಗೆ ತಿಳಿಸುವಾಗ ಆಜಾದ್‌ ಅತ್ತಿದ್ದರಂತೆ. ರಾಜ್ಯಸಭೆಯಲ್ಲಿ ಮೋದಿ ಮಾತ­ನಾಡಿದ ಆ ಕ್ಷ ಣವೇ ಅವರಿಬ್ಬರನ್ನು ಭಾವುಕರನ್ನಾಗಿಸಿತು.

ಅದೇನೇ ಇರಲಿ. ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟುಗಳು ಸಂಭವಿಸಿ­ದಾಗ, ಅದನ್ನು ಪರಿಹರಿಸುವ ತಂಡದ ಮುಂಚೂಣಿಯಲ್ಲಿ ಆಜಾದ್‌ ಇರುತ್ತಿದ್ದರು. ಆ ಮೂಲಕ ಅವರೊಬ್ಬ ‘ಟ್ರಬಲ್‌ ಶೂಟರ್‌’ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಇಂದಿರಾ ಗಾಂಧಿ ಅವರಿಂದ ಹಿಡಿದು ಸೋನಿಯಾ ಗಾಂಧಿ ತನಕ ಕಾಂಗ್ರೆಸ್‌ನ ಪ್ರಮುಖ­ರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದಾರೆ. ತಾವೊಬ್ಬ ಗಾಂಧಿ ಕುಟುಂಬದ ನಿಷ್ಠ ಎಂಬು­ದನ್ನು ಸಾಬೀತುಪಡಿಸಿದ್ದಾರೆ. ಹಾಗಂತ, ಪಕ್ಷ  ವಿಭಿನ್ನ ದಾರಿಯಲ್ಲಿ ಸಾಗುತ್ತಿ­ದ್ದಾಗ, ವೈಫಲ್ಯ ಸುಳಿಯಲ್ಲಿ ಸಿಲುಕಿದಾಗ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ-‘ಜಿ23’. ಪಕ್ಷ ದ ನಾಯಕತ್ವವನ್ನು ವಿಮರ್ಶೆಗೊಳಪಡಿಸುವ ಸಂಬಂಧ ಪತ್ರ ಬರೆದ 23 ನಾಯಕರ ಪೈಕಿ ಇವರು ಒಬ್ಬರು. ಮತ್ತೊಂದು ಅರ್ಥದಲ್ಲಿ‘ಜಿ23’ಯ ‘ಅನಧಿಕೃತ’ ವಕ್ತಾರರು.

ಮೇಲಿಂದ ಮೇಲೆ ಚುನಾವಣೆಯನ್ನು ಕಾಂಗ್ರೆಸ್‌ ಸೋಲುತ್ತಿರುವಾಗ ಪಕ್ಷ ದ ತಳಮಟ್ಟದ ನಾಯಕತ್ವದಿಂದ ಹಿಡಿದು ಉನ್ನತ ಮಟ್ಟದ ನಾಯಕತ್ವವರೆಗೂ ಬದಲಾವಣೆ ಅಗತ್ಯ ಎಂಬುದು ಅವರ ವಾದವಾಗಿತ್ತು. ಈ ವಿಚಾರಗಳು ಕಾಂಗ್ರೆಸ್‌ನ ಹಲವು ನಾಯಕರಿಗೆ ಹಿಡಿಸದೇ ಹೋದವು. ಆದರೆ, ಆಜಾದ್‌ ತಾವು ಹೇಳಬೇಕಿದ್ದ ಸತ್ಯವನ್ನು ಹೇಳಿಯೇ ಬಿಟ್ಟಿದ್ದಾರೆ.  ವಿಮರ್ಶೆಗೊಳಪಡಿಸುವ ಕೆಲಸವನ್ನು ಪಕ್ಷ ದ ನಾಯಕತ್ವ ಮಾಡಬೇಕಷ್ಟೇ. ನಾಲ್ಕೈದು ದಶಕಗಳ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಸಂಸತ್ತಿನಲ್ಲಿಪ್ರತಿಪಕ್ಷ ದ ನಾಯಕನಾಗಿ, ಪಕ್ಷ ದ ಹಲವು ಹುದ್ದೆ ನಿರ್ವಹಿಸಿ, ಹಲವು ರಾಜ್ಯಗಳ ಉಸ್ತುವಾರಿಯಾಗಿ ಅಗಾಧ ಅನುಭವದ ಮೂಟೆ ಆಜಾದ್‌ ಅವರ ಬೆನ್ನಮೇಲಿದೆ.

ಕಾಶ್ಮೀರದ ದೋಡಾ ಜಿಲ್ಲೆಯ ಸೋತಿ ಎಂಬ ಹಳ್ಳಿಯಲ್ಲಿ1949 ಮಾರ್ಚ್‌ 7ರಂದು ಗುಲಾ ನಂಬಿ ಆಜಾದ್‌ ಜನಿಸಿದರು. ರಹಮತುಲ್ಲಾಹ ಬಟ್ಟ ಮತ್ತು ಬಸಾ ಬೇಗಂ ತಂದೆ-ತಾಯಿ. ಹುಟ್ಟಿದೂರಿನಲ್ಲಿಪ್ರಾಥಮಿಕ ಶಿಕ್ಷ ಣ ಮುಗಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜಮ್ಮುಗೆ ತೆರಳಿ, ಜಿಜಿಎಂ ಸೈನ್ಸ್‌ ಕಾಲೇಜಿನಿಂದ ಡಿಗ್ರಿ ಪಡೆದುಕೊಂಡರು ಆಜಾದ್‌. ಶ್ರೀನಗರದ ಕಾಶ್ಮೀರ ವಿವಿಯಿಂದ 1972ರಲ್ಲಿಪ್ರಾಣಿಶಾಸ್ತ್ರದಲ್ಲಿ ಮಾಸ್ಟರ್‌ ಡಿಗ್ರಿ ಸಂಪಾದಿಸಿದರು.

1973ರಲ್ಲಿ ಭಲೆಸ್ಸಾ ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ಆಯ್ಕೆಯಾ­ಗುವ ಮೂಲಕ ರಾಜಕೀಯ ಜೀವನಕ್ಕೆ ಅಡಿ ಇಟ್ಟರು. ಎರಡು ವರ್ಷದ ಬಳಿಕ ಜಮ್ಮು-ಕಾಶ್ಮೀರ ರಾಜ್ಯ ಯುವ ಕಾಂಗ್ರೆಸ್‌ನ ಅಧ್ಯಕ್ಷ ರಾಗಿ ಆಯ್ಕೆಯಾ­ದರು. 1980ರಲ್ಲಿಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷ ರಾಗಿ ಆಯ್ಕೆ ಯಾದ ಬಳಿಕ ಅವರ ರಾಜಕೀಯ ರಥ ಎಲ್ಲೂನಿಲ್ಲದೇ ಓಡಲಾರಂಭಿಸಿತು. ಹಾಗೆ ನೋಡಿದರೆ,  ಭಾರತದ ರಾಜಕಾರಣದಲ್ಲಿ ಸಕ್ರಿಯವಾಗಿ ಗುರುತಿಸಿ­ಕೊಳ್ಳಲು ಇಂದಿರಾ ಗಾಂಧಿ ಅವರು ಕಾರಣ. ಆಜಾದ್‌ ಅವರಲ್ಲಿ ನಾಯ­ಕತ್ವ, ಸಂಘಟನಾ ಶಕ್ತಿ ಮತ್ತು ಬದ್ಧತೆಯನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಿದರು. ಮುಂದೆ ರಾಜೀವ್‌ ಗಾಂಧಿ ಅವರ ಕಾಲದಲ್ಲಿ ಅವರಿಗೆ ಪ್ರಾಧಾನ್ಯತೆ ಸಿಗುತ್ತಾ ಹೋಯಿತು.  

1980ರಲ್ಲಿ ಮಹಾರಾಷ್ಟ್ರದ ವಶಿಮ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆ­ಯಾಗುವ ಮೂಲಕ ಲೋಕಸಭೆಯನ್ನು ಪ್ರವೇಶಿಸಿದರು. 1982ರಲ್ಲಿ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವಾಲಯದ ಉಪಸಚಿವರಾಗಿ ಸರಕಾರದಲ್ಲೂ ಪಾಲ್ಗೊಂಡರು. 1984ರಲ್ಲಿ ಮತ್ತೆ ಲೋಕಸಭೆ ಆಯ್ಕೆಯಾದರು. 1990ರಿಂದ 96ರವರೆಗೂ ರಾಜ್ಯಸಭೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದರು. ಪಿ.ವಿ.ನರಸಿಂಹರಾವ್‌ ಸರಕಾರದಲ್ಲಿ ಸಂಸದೀಯ ವ್ಯವಹಾರಗಳು ಹಾಗೂ ನಾಗರಿಕ ವಿಮಾನಯಾನ ಸಚಿವಾಲ­ಯಗಳನ್ನು ನಿರ್ವಹಿಸಿದರು. ಆ ನಂತರ ಅವರು ಜಮ್ಮು-ಕಾಶ್ಮೀರದಿಂದ ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಇದರ ಮಧ್ಯೆಯೇ 2005ರಲ್ಲಿ ಕಾಶ್ಮೀರ ಮುಖ್ಯಮಂತ್ರಿಯಾದರು. ಆದರೆ, ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಪಿಪಿ) ತನ್ನ ಬೆಂಬಲ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಅವರು ಸಿಎಂ ಹುದ್ದೆಗೆ ರಾಜಿನಾಮೆ ನೀಡಬೇಕಾಯಿತು.

ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ­-2ನೇ ಅವಧಿಯಲ್ಲಿ ಆಜಾದ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು. ನ್ಯಾಷನಲ್‌ ರೂರಲ್‌ ಹೆಲ್ತ್‌ ಮಿಷನ್‌ ವಿಸ್ತರಿಸಿ ಯಶಸ್ವಿಯಾ­ದರು. ಬಳಿಕ ನ್ಯಾಷನಲ್‌ ಅರ್ಬನ್‌ ಹೆಲ್ತ್‌ ಮಿಷನ್‌ ಆರಂಭಿಸಿ, ನಗರ ಪ್ರದೇಶಗಳಲ್ಲಿನ ಕೊಳಗೇರಿ ಮತ್ತು ಬಡವರಿಗೆ ಆರೋಗ್ಯ ಸೇವೆ ಸಿಗುವ ಹಾಗೆ ಮಾಡಿದರು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಕೊರತೆ­ಯಿಂದಾಗಿ ಟಿವಿ ಮನರಂಜನೆ ಸಿಗುವುದಿಲ್ಲ. ಪರಿಣಾಮ­ವಾಗಿ ‘ಜನಸಂಖ್ಯೆ’ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಹೇಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದರು. ಮದುವೆಗೆ ನಿಗದಿ ಪಡಿಸಲಾಗಿರುವ ವಯೋಮಿತಿಯನ್ನು 25 ಮತ್ತು 30ಕ್ಕೆ ಹೆಚ್ಚಿಸುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಣ ಮಾಡಬಹುದು ಎಂಬುದು ಅವರ ವಾದ.

2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸೋತು ಸುಣ್ಣವಾಗಿ, ಅಧಿಕಾರವಂಚಿತವಾಯಿತು. ರಾಜ್ಯಸಭೆಯಲ್ಲಿ ಪ್ರತಿಪಕ್ಷ ದ ನಾಯಕನ ಜವಾಬ್ದಾರಿ ಗುಲಾಂ ಹೆಗಲೇರಿತು. ಅಲ್ಲಿಂದ ನಿವೃತ್ತಿಯಾಗೋವರೆಗೂ ಆ ಸ್ಥಾನವನ್ನು ದಕ್ಷ ತೆಯಿಂದ ನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಆಜಾದ್‌ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುತ್ತಾರೋ, ಪಕ್ಷದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೋ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ. ಆದರೆ, ಅವರ ಸೇವೆ ದೊರೆಯದೇ ಹೋದರೆ ಅದು ಕಾಂಗ್ರೆಸ್‌ ಪಕ್ಷ ಕ್ಕೆ ಹಾನಿಯೇ ಹೊರತು ಅವರಿಗಲ್ಲ. ಜೊತೆಗೆ, ಅವರು ಸ್ವತಂತ್ರ ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೋರಾಟದ ‘ಮುಖ’ ವಾಗುವ ಸಾಧ್ಯತೆಗಳಿವೆ.


 

(ಈ ಲೇಖನವು ವಿಜಯ ಕರ್ನಾಟಕದ 2020ರ ಫೆಬ್ರವರಿ 14ರ ಸಂಚಿಕೆಯ ವಕ್ತಿಗತದಲ್ಲಿ ಪ್ರಕಟವಾಗಿದೆ)

ಭಾನುವಾರ, ಜನವರಿ 31, 2021

Rakesh Tikait is carrying his father's movement legacy, ತಂದೆಗೆ ತಕ್ಕ ಮಗ ರಾಕೇಶ್ ಟಿಕಾಯತ್

೮೦ ಮತ್ತು ೯೦ರ ದಶಕದಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಅವರ ಹೋರಾಟಕ್ಕೆ ಸರಕಾರಗಳು ನಡುಗುತ್ತಿದ್ದವು. ಅವರ ಕಿರಿಯ ಪುತ್ರ ರಾಕೇಶ್ ಟಿಕಾಯತ್ ತಂದೆಯ ದಾರಿಯಲ್ಲಿ ಸಾಗುತ್ತಿದ್ದಾರೆ.

 

- ಮಲ್ಲಿಕಾರ್ಜುನ ತಿಪ್ಪಾರ
ರಾಕೇಶ್ ಟಿಕಾಯತ್ ಎಂಬ ಹೆಸರು ಎರಡು ತಿಂಗಳ ಹಿಂದೆ ಬಹುಶಃ ಉತ್ತರ ಪ್ರದೇಶದ ಜನರನ್ನು ಬಿಟ್ಟು ದೇಶದ ಇತರ ಭಾಗಗಳಿಗೆ ತೀರಾ ಪರಿಚಿತವಾಗಿರಲಿಲ್ಲ. ಆದರೆ, ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳ ವಿರುದ್ಧ ನಡೆಯುತ್ತಿರುವ ಹೋರಾಟದ ‘ಮುಖ’ವಾಗಿ ಅವರೀಗ ದೇಶಪೂರ್ತಿ ಜನಪ್ರಿಯ. ಅಣ್ಣಾ ಹಜಾರೆ ಚಳವಳಿಯ ಮೂಸೆಯಲ್ಲಿ ಅರವಿಂದ ಕೇಜ್ರಿವಾಲ್ ಎಂಬ ನಾಯಕ ಬೆಳಕಿಗೆ ಬಂದಂತೆ ಈ ರೈತ ಹೋರಾಟದ ಫಲವಾಗಿ, ಭಾರತ ಕಿಸಾನ್ ಯೂನಿಯನ್(ಬಿಕೆಯು)ನ ವಕ್ತಾರ ರಾಕೇಶ್ ಟಿಕಾಯತ್ ಅವರು ಪ್ರಭಾವಿ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ೪೦ಕ್ಕೂ ಹೆಚ್ಚು ರೈತ ಸಂಘಟನೆಗಳು ಒಂದುಗೂಡಿ ನಡೆಸುತ್ತಿರುವ ಹೋರಾಟದ ನೇತೃತ್ವವನ್ನು ತಮ್ಮ ಹೆಗಲ ಮೇಲೇರಿಸಿಕೊಂಡು ಮುನ್ನಡೆಯುತ್ತಿದ್ದಾರೆ.

ರಾಕೇಶ್ ಟಿಕಾಯತ್ ಬಗ್ಗೆ ತಿಳಿದುಕೊಳ್ಳುವ ಮುಂಚೆ ಅವರ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಬಗ್ಗೆ ತಿಳಿದುಕೊಂಡರೆ ನಿಮಗೆ ಮತ್ತೊಂದು ಹೊಳಹು ದೊರೆತೀತು. ಅದು ೧೯೮೮ರ ಸಮಯ. ಮಹೇಂದ್ರ ಸಿಂಗ್ ಟಿಕಾಯತ್ ಅವರು ೫ ಲಕ್ಷ ರೈತರೊಂದಿಗೆ ದಿಲ್ಲಿಗೆ ನುಗ್ಗಿದ್ದರು. ಅಂದು ಪ್ರಚಂಡ ಬಹುಮತದೊಂದಿಗೆ ಪ್ರಧಾನಿಯಾಗಿದ್ದ–ವರು ರಾಜೀವ್ ಗಾಂಧಿ ಮತ್ತು ಗೃಹ ಮಂತ್ರಿಯಾಗಿದ್ದವರು ಇತ್ತೀಚೆಗಷ್ಟೇ ನಿಧನರಾದ ಬೂಟಾ ಸಿಂಗ್. ಅಂದು ಮತ್ತು ಇಂದಿನ ಹೋರಾಟಕ್ಕೆ ವ್ಯತ್ಯಾಸ ಏನೆಂದರೆ; ಅಂದಿನ ಸರಕಾರವು ರೈತರನ್ನು ದಿಲ್ಲಿಯ ಗಡಿಯಲ್ಲೇನೂ ತಡೆದಿರಲಿಲ್ಲ. ಬದಲಿಗೆ ನಗರದೊಳಗೆ ಬಿಟ್ಟುಕೊಂಡಿತ್ತು. ರೈತರೆಲ್ಲರೂ ದಿಲ್ಲಿಯ ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೂ ಟೆಂಟ್‌ಗಳನ್ನು ಹಾಕಿ ಪ್ರತಿಭಟನೆ ನಡೆಸಿದ್ದರು. ದಿಲ್ಲಿಯ ಬೋಟ್ ಕ್ಲಬ್ ಲಾನ್‌ನಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ ಸರಕಾರವು ಅವರ ಬೇಡಿಕೆಗಳಿಗೆ ಮಣಿಯದೇ ಬೇರೆ ದಾರಿ ಇರಲಿಲ್ಲ. ಇದರ ಮಧ್ಯೆಯೂ ರೈತ ಹೋರಾಟವನ್ನು ತಡೆಯಲು ಬೂಟಾ ಸಿಂಗ್ ಪೊಲೀಸ್ ಬಲ ಪ್ರಯೋಗಿಸಿದರೂ ಮಹೇಂದ್ರ ಸಿಂಗ್ ಟಿಕಾಯತ್ ಹೆದರಲಿಲ್ಲ, ಬೆದರಲಿಲ್ಲ. ವಾರಗಳ ಕಾಲ ನಡೆದ ಹೋರಾಟದ ಬಳಿಕ ರಾಜೀವ್ ಗಾಂಧಿ ಸರಕಾರವು ರೈತರ ಬೇಡಿಕೆಗಳನ್ನು ಒಪ್ಪಿಕೊಂಡಿತು. ಕಬ್ಬಿಗೆ ಹೆಚ್ಚಿನ ಬೆಲೆ, ವಿದ್ಯುತ್ ಮತ್ತು ನೀರು ಶುಲ್ಕ ಮನ್ನಾ ಸೇರಿದಂತೆ ೩೫ ಬೇಡಿಕೆ ಈಡೇರಿಸಿಕೊಂಡೇ ಟಿಕಾಯತ್ ತಮ್ಮ ರೈತ ಸೇನೆಯೊಂದಿಗೆ ಮುಜಫರ್‌ನಗರಕ್ಕೆ ವಾಪಸಾಗಿದ್ದರು. ಅಂದಿನ ಹೋರಾಟದ ಬಗ್ಗೆ ಹಲವಾರು ಲೇಖನಗಳು ಸಾರ್ವಜನಿಕವಾಗಿ ಲಭ್ಯ ಇವೆ. ಅವುಗಳನ್ನು ಓದಿದರೆ ಅಂದಿನ ಹೋರಾಟದ ಸ್ವರೂಪ ಹಾಗೂ ಸರಕಾರದ ಸ್ಪಂದನದ ರೀತಿ ಅರಿವಾದೀತು.

ಈಗ ನಿಮಗೆ ರಾಕೇಶ್ ಟಿಕಾಯತ್ ಅವರ ಹೋರಾಟದ ಹಿನ್ನೆಲೆ ಸ್ವಲ್ಪವಾದರೂ ಅರಿವಾದೀತು. ಜನವರಿ ೨೬ರಂದು ‘ರೈತ ಗಣತಂತ್ರ ಪರೇಡ್’ ವೇಳೆ ಉಂಟಾದ ಹಿಂಸಾಚಾರ ಮತ್ತು ಕೆಂಪುಕೋಟೆ ಸಿಖ್ ಧ್ವಜಾರೋಹಣ ಪ್ರಕರಣ ಹಿನ್ನೆಲೆಯಲ್ಲಿ ರೈತ ಹೋರಾಟ ಸಂಪೂರ್ಣವಾಗಿ ಹಿನ್ನೆಲೆಗೆ ಸರಿಯಿತು ಎಂದು ಬಹುತೇಕ ಮಾಧ್ಯಮಗಳು ಷರಾ ಬರೆದಿದ್ದವು ಮತ್ತು ಕೇಂದ್ರ ಸರಕಾರದ ಉದ್ದೇಶವೂ ಈಡೇರಿತ್ತು! ಉತ್ತರ ಪ್ರದೇಶದ ಸರಕಾರವು ಘಾಜಿಪುರ್ ಬಾರ್ಡರ್‌ನಲ್ಲಿ ಬೀಡುಬಿಟ್ಟಿದ್ದ ರೈತರನ್ನು ಖಾಲಿ ಮಾಡಲು ಬಹುದೊಡ್ಡ ಪೊಲೀಸ್ ಪಡೆಯನ್ನು ಕಳುಹಿಸಿತ್ತು. ವಿದ್ಯುತ್ ಮತ್ತು ನೀರು ಪೂರೈಕೆಯನ್ನು ನಿಲ್ಲಿಸಿತ್ತುಘಿ. ಅಕ್ಷರಶಃ ರೈತರು ಘಾಜಿಪುರ್ ತೊರೆದು ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಆ ಕ್ಷಣದಲ್ಲಿ ರಾಕೇಶ್ ಟಿಕಾಯತ್ ಮಾಡಿದ ಭಾವನಾತ್ಮಕ ಭಾಷಣವು ಅವರೊಬ್ಬ ತಂದೆಯಂತೆಯೇ ಗಟ್ಟಿ ನಾಯಕ ಎಂಬುದನ್ನು ಸಾಬೀತುಪಡಿಸಿತು. ಈ ವೇಳೆ ಭಾವುಕರಾಗಿ ಕಣ್ಣೀರು ಸುರಿಸಿದ್ದು ಇಡೀ ರೈತ ಹೋರಾಟವನ್ನು ಮತ್ತೆ ಫ್ರಂಟ್‌ಫುಟ್‌ಗೆ ತಂದು ನಿಲ್ಲಿಸಿತು. ಟಿಕಾಯಿತ್ ಕಣ್ಣೀರಿನ ವಿಡಿಯೋ ಕ್ಲಿಪ್ ಕಾಳ್ಗಿಚ್ಚಿನಂತೆ ಹರಡಿ ಘಾಜಿಪುರ್‌ನಿಂದ ೧೫೦ ಕಿ.ಮೀ. ದೂರವಿರುವ ಮುಝಫರ್‌ನಗರದಿಂದ ರಾತ್ರೋರಾತ್ರಿ ರೈತರು ಟ್ರ್ಯಾಕ್ಟರ್ ಏರಿ ಘಾಜಿಪುರ್ ಬಾರ್ಡರ್‌ಗೆ ತಲುಪಿದರು. ಅತ್ತ ಸಿಂಘು ಬಾರ್ಡರ್ ಸೇರಿದಂತೆ ಎಲ್ಲ ಗಡಿಗಳಿಗೂ ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶ ರೈತರು ಸಾಗರೋಪಾದಿಯಲ್ಲಿ ಬಂದು ಸೇರಲಾರಂಭಿಸಿದರು. ಗತ್ಯಂತರವಿಲ್ಲದೇ ಉತ್ತರ ಪ್ರದೇಶ ಸರಕಾರವು ಘಾಜಿಪುರ್ ಗಡಿಯಿಂದ ತನ್ನ ಪೊಲೀಸ್ ಪಡೆಯನ್ನು ವಾಪಸ್ ಕರೆಸಿಕೊಂಡಿತು. ರಾಕೇಶ್ ಟಿಕಾಯತ್ ಬಲಿಷ್ಠ ರೈತನಾಯಕನಾಗಿ ಬೆಳೆದು ನಿಂತರು. ಇನ್ನೇನು ಮುಗಿದೇ ಹೋಯಿತು ಎಂಬ ಸ್ಥಿತಿಗೆ ತಲುಪಿದ್ದ ರೈತ ಹೋರಾಟ ಹೊಸ ಹುರುಪಿನಿಂದ ಮತ್ತೆ ಮೈಕೊಡವಿಕೊಂಡು ಎದ್ದು ನಿಲ್ಲಲು ರಾಕೇಶ್ ಕಾರಣರಾದರು.

‘‘ಒಂದು ಹನಿ ಕಣ್ಣೀರು ಸರಕಾರಕ್ಕೆ ಗಂಡಾಂತರ ಸೃಷ್ಟಿಸಲಿದೆ. ಇನ್ನು ಕಣ್ಣುಗಳೇ ಕಡಲಾಗಿ ಉಕ್ಕುವುದನ್ನು ನೀವು ಕಂಡಿರಲಾರಿರಿ,’’ ಎಂಬ ಟಿಕಾಯತ್ ಅವರ ಮಾತುಗಳು ರೈತರ ಒಡಲಾಳದ ಕಿಚ್ಚನ್ನು ಹೊತ್ತಿಸಿದವು.

೧೯೬೯ರ ಜೂನ್ ೪ರಂದು ರಾಕೇಶ್ ಟಿಕಾಯತ್ ಅವರು ಮುಝಫರ್ ನಗರದ ಸಿಸೌಲಿ ಪಟ್ಟಣದಲ್ಲಿ ಜನಿಸಿದರು. ತಂದೆ ಮಹೇಂದ್ರ ಸಿಂಗ್ ಪಶ್ಚಿಮ ಉತ್ತರ ಪ್ರದೇಶದ ಪ್ರಭಾವಿ ರೈತ ನಾಯಕ ಮತ್ತು ಭಾರತ್ ಕಿಸಾನ್ ಯೂನಿಯನ್(ಬಿಕೆಯು) ಸಹ ಸಂಸ್ಥಾಪಕರು. ಟಿಕಾಯತ್ ಕುಟುಂಬವು ಬಿಲಿಯಾನ್ ಖಾಪ್‌ಗೆ ಸೇರಿದ್ದಾಗಿದೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿ ಕೃಷಿಕರಾಗಿರುವ ಜಾಟ್ ಸಮುದಾಯದಕ್ಕೆ ಸೇರಿದವರು ಇವರು. ಮೀರತ್ ವಿಶ್ವವಿದ್ಯಾಲಯದಿಂದ ರಾಕೇಶ್ ಎಂಎ ಪದವಿ ಪಡೆದಿದ್ದಾರೆ.

೨೦೧೧ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ನಿಧನದ ಬಳಿಕ ಅಣ್ಣ ನರೇಶ್ ಟಿಕಾಯತ್ ಯೂನಿಯನ್ ಅಧ್ಯಕ್ಷರಾದರು, ರಾಕೇಶ್ ಬಿಕೆಯುನ ವಕ್ತಾರರಾದರು. ರೈತ ಸಂಘಟನೆಯಲ್ಲಿ ಗುರುತಿಸಿಕೊಳ್ಳುವ ಮುಂಚೆ ರಾಕೇಶ್ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದರು. ಆ ಬಳಿಕ ಎಸ್‌ಐ ಕೂಡ ಆದರು. ೧೯೯೩ರಲ್ಲಿ ಮಹೇಂದ್ರ ಸಿಂಗ್ ಅವರು ಕೆಂಪುಕೋಟೆಯಲ್ಲಿ ಪ್ರತಿಭಟನೆ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ, ತಂದೆಯ ಜೊತೆ ಹೋರಾಟಕ್ಕೆ ಧುಮುಕಿದರು. ನಾಲ್ಕು ವರ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಬಳಿಕ ವಕ್ತಾರರಾಗಿ ನೇಮಕವಾದರು. ಅಲ್ಲಿಂದ ಟಿಕಾಯತ್ ಅವರ ರೈತಪರ ಹೋರಾಟ ಆರಂಭವಾಯಿತು. ಹಲವು ಬಾರಿ ರೈತರ ಪರವಾಗಿ ಹೋರಾಟ ಮಾಡಿ ೪೦ಕ್ಕೂ ಹೆಚ್ಚು ಬಾರಿ ಜೈಲುವಾಸ ಕಂಡಿದ್ದಾರೆ. ೨೦೧೮ರಲ್ಲಿ ಟಿಕಾಯತ್ ಸಂಘಟಿಸಿದ ಉತ್ತರಾಖಂಡದ ಹರಿದ್ವಾರದಿಂದ ದಿಲ್ಲಿಯವರೆಗೆ ನಡೆಸಿದ ಕಿಸಾನ್ ಕ್ರಾಂತಿ ಯಾತ್ರೆ ಗಮನ ಸೆಳೆಯಿತು.

೫೧ ವರ್ಷದ ಟಿಕಾಯತ್ ಸಂಘಟಿಸಿದ ಬಹುತೇಕ ರೈತ ಹೋರಾಟಗಳಲ್ಲಿ ಯಶಸ್ಸು ಕಂಡಿದ್ದಾರೆ. ರಾಜಕೀಯದಲ್ಲೂ ತಮ್ಮ ನಸೀಬು ಪರೀಕ್ಷಿಸಿದರಾದರೂ ಯಶಸ್ಸು ಸಿಕ್ಕಿಲ್ಲ. ಕಾಂಗ್ರೆಸ್ ಬೆಂಬಲದೊಂದಿಗೆ ೨೦೦೭ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಸ್ಪರ್ಧಿಸಿ ಸೋತರು. ಮತಗಳ ಲೆಕ್ಕದಲ್ಲಿ ಅವರು ಆರನೇ ಸ್ಥಾನದಲ್ಲಿದ್ದರು! ಇನ್ನು ೨೦೧೪ರ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಟಿಕೆಟ್ ಪಡೆದು ಅಮ್ರೋಹ ಕ್ಷೇತ್ರದಿಂದ ಸ್ಪರ‌್ಸಿ, ಕೇವಲ ಹತ್ತು ಸಾವಿರ ಒಳಗೆ ಮತಗಳನ್ನು ಪಡೆದರು. ರಾಜಕಾರಣದ ಸೋಲು ಅವರನ್ನೇನೂ ಧೃತಿಗೆಡಿಸಲಿಲ್ಲ. ಬದಲಿಗೆ ರೈತ ಹೋರಾಟದಲ್ಲಿ ಇನ್ನು ಹೆಚ್ಚಿಗೆ ತೊಡಗಿಸಿಕೊಳ್ಳುವಂತೆ ಮಾಡಿತು.

ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ಅವರೊಂದಿಗೆ ರಾಕೇಶ್ ಅವರದ್ಧು ಕಭೀ ಖುಷಿ ಕಭೀ ಗಮ್ ಸಂಬಂಧ. ಅವರೂ ಟಿಕಾಯತ್ ಬೆಂಬಲಕ್ಕೆ ನಿಂತಿದ್ದಾರೆ. ಇಂಡಿಯನ್ ನ್ಯಾಷನಲ್ ಲೋಕದಳದ ಅಭಯ ಸಿಂಗ್ ಚೌಟಾಲಾ, ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯ ಹನುಮಾನ್ ಬೇಣಿವಾಲಾ ಅವರು ಸಂಪೂರ್ಣವಾಗಿ ಟಿಕಾಯತ್ ಬೆಂಬಲಕ್ಕೆ ನಿಲ್ಲುವ ಮೂಲಕ ರೈತರ ಹೋರಾಟಕ್ಕೆ ಹೊಸ ತಿರುವು ದೊರೆಯಲಾರಂಭಿಸಿದೆ. ತಂದೆಯ ದಾರಿಯಲ್ಲೇ ಸಾಗುತ್ತಿರುವ ರಾಕೇಶ್ ಅವರ ಮೇಲೆ ಈಗ ಜವಾಬ್ದಾರಿ ಹೆಚ್ಚಾಗಿದೆ. ಜೊತೆಗಿರುವ ೪೦ಕ್ಕೂ ಹೆಚ್ಚು ರೈತ ಸಂಘಟನೆಗಳ ನಡುವೆ ಸಮನ್ವಯ ಸಾಸುತ್ತಲೇ ರೈತ ಹೋರಾಟವನ್ನು ವಿಫಲಗೊಳಿಸುವ ಒಳಸಂಚುಗಳನ್ನು ಮೆಟ್ಟಿ ರೈತ ಹೋರಾಟವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅನೂಹ್ಯವಾಗಿ ವ್ಯಕ್ತವಾಗು ತ್ತಿರುವ ಬೆಂಬಲವನ್ನು ಹಿಡಿದಿಟ್ಟುಕೊಂಡು ಗಮ್ಯ ತಲುಪುವ ಸವಾಲು ಅವರ ಮುಂದಿದೆ. 




ಸೋಮವಾರ, ಜನವರಿ 4, 2021

Former home minister Buta Singh: ನಿರ್ದಯ ನಡೆಯ ಬೂಟಾ ಸಿಂಗ್‌

ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆ ಮೂಲಕ ಪ್ರಜಾಪ್ರಭುತ್ವದ ಲೋಪಗಳನ್ನು ಎತ್ತಿ ತೋರಿಸಿದ, ಆ ನೆಪದಲ್ಲಿಅದನ್ನು ಗಟ್ಟಿಗೊಳಿಸಲು ಕಾರಣರಾದ ಬೂಟಾ ಸಿಂಗ್‌ ಅವರನ್ನು ನೆನಪಿಟ್ಟುಕೊಳ್ಳಲೇಬೇಕು.


- ಮಲ್ಲಿಕಾರ್ಜುನ ತಿಪ್ಪಾರ

ಏಳು ವರ್ಷದ ಬಾಲಕನೊಬ್ಬನಿಗೆ ಆತನ ಚಿಕ್ಕಪ್ಪ, ಕಣಜದ ಗೂಡು ತೋರಿಸಿ ಅದರಲ್ಲಿಜೇನು ಇದೆ ಎಂದು ಹೇಳುತ್ತಾರೆ. ಆ ಬಾಲಕ, ಹಿಂದೆ ಮುಂದೆ ಯೋಚಿಸದೇ ಮರ ಏರಿ, ನಿರ್ದಯವಾಗಿ ಈ ಕಣಜದ ಗೂಡನ್ನು ಕೆಡವುತ್ತಾನೆ. ಗೂಡಿನಲ್ಲಿದ್ದ ಕಣಜದ ಹಾರುಹುಳಗಳು ಬೆನ್ನ ಹತ್ತಿದ್ದರಿಂದ ಮರ ಮೇಲಿಂದ ಬಿದ್ದು ಕಾಲು ಮುರಿದುಕೊಳ್ಳುತ್ತಾನೆ. 

ಆ ಬಾಲಕನೇ ಮುಂದೆ ‘ನಿರ್ದಯಿ’ ರಾಜಕಾರಣಿಯಾಗಿ ರೂಪುಗೊಂಡ ಬೂಟಾ ಸಿಂಗ್‌. ಅವರ ಈ ಸ್ವಭಾವದ ಪರಿಣಾಮಗಳು ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಕಾಲದಲ್ಲಿಢಾಳಾಗಿ ಎದ್ದು ಕಂಡಿತು.  ಇಂದಿರಾ ಮತ್ತು ರಾಜೀವ್‌ ಅವರ ‘ಪರಮ ನಿಷ್ಠ’ರಾಗಿದ್ದ ಬೂಟಾ, ಅವರ ಎಲ್ಲಕಾರ್ಯಗಳನ್ನು ಯಾವುದನ್ನೂ ಲೆಕ್ಕಿಸದೇ ಮಾಡಿ ಬಿಡುತ್ತಿದ್ದರು. ಪರಿಣಾಮ­ವಾಗಿ ಅವರನ್ನು ಮಾಧ್ಯಮಗಳು ಅತ್ಯಂತ ವಿವಾದಿತ ರಾಜಕಾರಣಿ, ರಾಜೀವ್‌ ಬಂಟ ಎಂದು ಇಂದಿಗೂ ಗುರುತಿಸುತ್ತವೆ. ಅಂಥ ಬೂಟಾ ಸಿಂಗ್‌ ಅವರು, ಕಾಂಗ್ರೆಸ್‌ಗೆ ಏನೆಲ್ಲಮಾಡಿದೆ. ತನ್ನ ನಿಷ್ಠೆಯನ್ನು ಯಾರೂ ಪರಿಗಣಿ ಸಲೇ ಇಲ್ಲಎಂಬ ಕೊರಗಿನಲ್ಲೇ 86ನೇ ವಯಸ್ಸಿನಲ್ಲಿಕೊನೆಯುಸಿರೆಳೆದಿದ್ದಾರೆ. 

ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಅಕ್ಷ ರಶಃ ಅವರು ಕ್ಯಾಬಿನೆಟ್‌ನಲ್ಲಿಎರಡನೇ ಸ್ಥಾನದಲ್ಲಿ­ದ್ದರು. ಇತರ ಎಲ್ಲಸಚಿವರಿಗಿಂತಲೂ ರಾಜೀವ್‌ ಅವರನ್ನು ಬಹಳ ಸಲೀಸಾಗಿ ಭೇಟಿಯಾಗುತ್ತಿದ್ದರು. ದೇಶದ ಗೃಹ ಮಂತ್ರಿಯಾಗಿದ್ದಾಗ ರಾಜ್ಯ ಸರಕಾರಗಳನ್ನು ಕಣ್ಣು ಮಿಟುಕಿಸುವಷ್ಟರಲ್ಲಿಕೆಡವಿ ಬಿಡುತ್ತಿದ್ದರು. ಅಂಥ ನಿರ್ದಯಿ ರಾಜಕಾರಣಿ ಬೂಟಾ ಸಿಂಗ್‌. 

ರಾಜೀವ್‌ ಕಾಲದಲ್ಲಿಕಾಂಗ್ರೆಸ್‌ನ ದಲಿತ ಹಾಗೂ ಏಕೈಕ ಸಿಖ್‌ ಮುಖವಾಗಿದ್ದ ಬೂಟಾ ಸಿಂಗ್‌ ರಾಜಕಾರಣದ ಹಿನ್ನೆಲೆಯಲ್ಲಿಬೆಳೆದು ಬಂದವರಲ್ಲ. ಪಂಜಾಬ್‌ನ ಜಲಂಧರ್‌ ಜಿಲ್ಲೆಯ ಮುಸ್ತಫಾಪುರದಲ್ಲಿ1934 ಮಾರ್ಚ್‌ 21ರಂದು ಬೂಟಾ ಸಿಂಗ್‌ ಜನಿಸಿದರು. ಬೂಟಾ ಅವರದ್ದು ಸಾಧಾರಣ ಹಿನ್ನೆಲೆಯ ಕುಟುಂಬ. ಲಿಯಾಲ್‌ಪುರ ಖಾಲ್ಸಾ ಕಾಲೇಜ್‌ನಿಂದ ಬಿ.ಎ(ಆನರ್ಸ್‌) ಮತ್ತು ಬಾಂಬೆಯ ಗುರು ನಾನಾಕ್‌ ಖಾಲ್ಸಾ ಕಾಲೇಜ್‌ನಲ್ಲಿಎಂಎ ಪದವಿ ಪಡೆದುಕೊಂಡರು. ಬಳಿಕ ಬುಂದೇಲ್‌ಖಂಡ್‌ ವಿವಿಯಲ್ಲಿಪಿಎಚ್‌ಡಿ ಮಾಡಿದರು. 1964ರಲ್ಲಿಮಂಜಿತ್‌ ಕೌರ್‌ ಅವರನ್ನು ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. 

ಬೂಟಾ ಸಿಂಗ್‌ ಅವರು ರಾಜಕಾರಣಕ್ಕೆ ಪ್ರವೇಶ ಪಡೆಯುವ ಮುಂಚೆ ಪತ್ರಕರ್ತರಾಗಿದ್ದರು. ಅಕಾಲಿ ದಳದ ಮೂಲಕ ರಾಜಕಾರಣ ಆರಂಭಿಸಿ ಕಾಂಗ್ರೆಸ್‌ನಲ್ಲಿಉತ್ತುಂಗಕ್ಕೇರಿ, ಬಿಜೆಪಿಯಲ್ಲೂಸ್ವಲ್ಪ ಕಾಲ ಇದ್ದು ಮತ್ತೆ ಕಾಂಗ್ರೆಸ್‌ಗೆ ಮರಳಿ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. 

ಬೂಟಾ ಅವರು ಅಕಾಲಿದಳ ಸೇರುವ ಮುಂಚೆ ಮಾರ್ಕ್ಸ್‌ ವಿಚಾರಗಳಿಗೆ ಮಾರು ಹೋಗಿದ್ದರು. ಬಾಂಬೆಯ ಖಾಲ್ಸಾ ಕಾಲೇಜ್‌ನಲ್ಲಿಇತಿಹಾಸ ಓದುತ್ತಿದ್ದಾಗ ಅವರು ಬೊಲ್ಶೆವಿಕ್‌ ಸಾಹಿತ್ಯದ ಕಟ್ಟಾ ಓದುಗರು. ‘ಫೂಲ್‌ವಾರಿ’ ಮ್ಯಾಗ್‌ಜಿನ್‌ನಲ್ಲಿಪ್ರೂಫ್‌ರೀಡರ್‌ ಆಗಿ ಕೆಲಸ ಮಾಡುತ್ತಿದ್ದಾಗ, 1953ರಲ್ಲಿಜೋಸೆಫ್‌ ಸ್ಟಾಲಿನ್‌ ನಿಧನದ ಸುದ್ದಿ ತಿಳಿದಾಗ ಕಣ್ಣೀರಿಟ್ಟಿದ್ದರು. ಅಂದರೆ, ಮಾರ್ಕ್ಸ್‌ವಾದ ಅವರನ್ನು ಅಷ್ಟೊಂದು ಆವರಿಸಿಕೊಂಡಿತ್ತು. ‘ಅಕಾಲಿ ಪತ್ರಿಕಾ’ದಲ್ಲಿಉಪ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. 1962ರಲ್ಲಿಅಕಾಲಿ ದಳ ಬೂಟಾ ಅವರನ್ನು ರೋಪರ್‌ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಕಣಕ್ಕಿಳಿಸಿತು. ಮುಂದೆ ಅಕಾಲಿ ಇಬ್ಭಾಗ ಆದಾಗ ಅವರು ತಾರಾ ಸಿಂಗ್‌ ಅವರೊಂದಿಗೆ ಹೆಜ್ಜೆ ಹಾಕಿದರಾದರೂ ಅವರೊಂದಿಗೆ ಬಹಳ ದಿನ ನಿಲ್ಲಲಿಲ್ಲ. ಇಂದಿರಾ ಅವರ ಪರಿಚಯವಾದ ಮೇಲೆ ಕಾಂಗ್ರೆಸ್‌ ಸೇರಿದರು. ಆನಂತರ ನಡೆದಿದ್ದೆಲ್ಲಇತಿಹಾಸ. 

ಇಂದಿರಾ ಗಾಂಧಿ ಅವರು ‘ಆಪರೇಷನ್‌ ಬ್ಲೂಸ್ಟಾರ್‌’ ಕಾರ್ಯಾಚರಣೆ ಕೈಗೊಂಡಾಗ ಅದರ ಎಲ್ಲನಿರ್ವಹಣೆ ಮಾಡಿವರು ಇದೇ ಬೂಟಾ ಸಿಂಗ್‌. ಸಚಿವರಾಗಿ ‘ಗೋಲ್ಡನ್‌ ಟೆಂಪಲ್‌’ನ ಪುನರ್‌ ನಿರ್ಮಾಣವನ್ನು ನೋಡಿಕೊಂಡರು. ಆದರೆ, ಸಿಖ್‌ ಧಾರ್ಮಿಕ ಗುರುಗಳು ಇವರನ್ನು ‘ಧರ್ಮಭ್ರಷ್ಟ’ ಎಂದು ಘೋಷಿಸಿದರು. ಬೂಟಾ ಸಿಂಗ್‌ ಆ ಬಳಿಕ ಸ್ವರ್ಣಮಂದಿರದಲ್ಲಿಭಕ್ತರ ಚಪ್ಪಲಿ ಕ್ಲೀನ್‌ ಮಾಡಿ ಪ್ರಾಯಶ್ಚಿತ್ತ ಕೂಡ ಮಾಡಿಕೊಂಡರೆನ್ನಿ. 

ರಾಜೀವ್‌ ಗಾಂಧಿ ಅವಧಿಯಲ್ಲಿಬೂಟಾ ಸಿಂಗ್‌ ರಾಜಕಾರಣಿಯಾಗಿ, ಆಡಳಿತಗಾರನಾಗಿ ಗ್ರಾಫ್‌ ಏರುಗತಿಯಲ್ಲಿತ್ತು; ಜೊತೆಗೆ ವಿವಾದಗಳೂ. ರಾಜೀವ್‌ ಸಂಪುಟದಲ್ಲಿಪಿ.ವಿ.ನರಸಿಂಹ ರಾವ್‌ ಮತ್ತು ಪಿ ಶಿವಶಂಕರ್‌ ಅವರಂಥ ಹಿರಿಯರಿದ್ದರೂ ಬೂಟಾ ಸಿಂಗ್‌ ಅಕ್ಷ ರಶಃ ರಾಜೀವ್‌ ನಂತರದ ಸ್ಥಾನದಲ್ಲಿವಿರಾಜಮಾನರಾದರು. ರಾಜೀವ್‌ ಅವರ ಬಂಟ ಎಂದೇ ಖ್ಯಾತರಾದರು. ಈ ಅವಧಿಯಲ್ಲಿಅವರು ಪ್ರತಿಕ್ಷ ಗಳ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿಪ್ರಮುಖ ಪಾತ್ರ ವಹಿಸಿದರು. 1988ರಲ್ಲಿಜಾನಕಿ ರಾಮಚಂದ್ರನ್‌ ಸರಕಾರ ವಜಾಗೊಳಿಸಿದರು. ಕಾಂಗ್ರೆಸ್‌ನ ಅನೇಕ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ದೂರ ಸರಿಸುವ ಕಾರ್ಯವನ್ನು ಬೂಟಾ ನಿರ್ದಯಿಯಾಗಿ ಮಾಡಿದರು. ರಾಜಸ್ಥಾನದಲ್ಲಿಹರಿದೇವ್‌ ಜೋಶಿ, ಮಧ್ಯ ಪ್ರದೇಶದಲ್ಲಿಮೋತಿಲಾಲ್‌ ವೋರಾ ಇದಕ್ಕೆ ಉದಾಹಣೆಯಾಗಿ ನೀಡಬಹುದು. ರಾಜೀವ್‌ ಗಾಂಧಿ 1989ರಲ್ಲಿಅಯೋಧ್ಯೆಯ ವಿವಾದಿತ ಜಾಗದಲ್ಲಿರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಅದರ ಹಿಂದೆ ಬೂಟಾ ಸಿಂಗ್‌ ಇದ್ದರು ಎಂದು ಇಂದಿಗೂ ಕಾಂಗ್ರೆಸ್‌ನವರು ಮಾತನಾಡಿಕೊಳ್ಳುತ್ತಾರೆ. 

1985ರಿಂದ 89ರ ಅವಧಿಯಲ್ಲಿಕೇಂದ್ರ ಗೃಹ ಸಚಿವರಾಗಿ ಬೂಟಾ ಸಿಂಗ್‌, ಅನೇಕ ರಾಜ್ಯ ಸರಕಾರಗಳನ್ನು ಉರುಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಿ­ದರು. ‘‘ಬೂಟಾ ಸಿಂಗ್‌ಜೀ, ನಿಮ್ಮ ಕೃಪಾಣ್‌(ಕತ್ತಿ) ಒಳಗಿಡಿ,’’ ಎಂದು ರಾಜೀವ್‌ ಅವರು ಹೇಳಿಧಿದ್ದರಂತೆ. ಅಷ್ಟೊತ್ತಿಗೆ, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ತ್ರಿಪುರಾ, ರಾಜಸ್ಥಾನ, ಬಿಹಾರ ಮತ್ತಿತರ ರಾಜ್ಯ ಸರಕಾರಗಳನ್ನು ಬುಡಮೇಲು ಮಾಡಿಯಾಗಿತ್ತು. ಬಿಹಾರದ ರಾಜ್ಯಪಾಲರಾಗಿ­ದ್ದಾಗ ಅವರ ನಡೆದುಕೊಂಡ ರೀತಿ ಸುಪ್ರೀಂ ಕೋರ್ಟ್‌ ತೀಕ್ಷ ್ಣ ಟೀಕೆಗೂ ಗುರಿಯಾಗಿತ್ತು. 2005ರಲ್ಲಿಜೆಡಿಎಯು-­ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡುವ ಬದಲು ಅಸೆಂಬ್ಲಿಯನ್ನೇ ವಿಸರ್ಜಿಸಿ ಬಿಟ್ಟಿದ್ದರು. ಕೇಂದ್ರ ಸಂಪುಟಕ್ಕೆ ತಪ್ಪು ಮಾಹಿತಿ, ಸಂಸದೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದೀರಿ ಎಂದು ಸುಪ್ರೀಂ ಕೋರ್ಟ್‌ ತಪರಾಕಿ ಹಾಕಿತ್ತು. ಇದು ಬಹಳ ಚರ್ಚೆ ಕಾರಣವಾಗಿತ್ತು. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 

ರಾಜೀವ್‌ ಬಳಿಕ ಕಾಂಗ್ರೆಸ್‌ನಲ್ಲಾದ ಬದಲಾ­ವಣೆಗಳು ಬೂಟಾ ಸಿಂಗ್‌ ಅವರನ್ನು ತೆರೆಮರೆಗೆ ಸರಿಯುವಂತೆ ಮಾಡಿದವು. ಆಗ ಅವರು ಬಿಜೆಪಿ ಸೇರಿ ವಾಜಪೇಯಿ ಸರಕಾರದಲ್ಲಿಸಚಿವರೂ ಆದರು. ಆದರೆ, ಜೆಎಂಎಂ ಲಂಚ ಪ್ರಕರಣದಲ್ಲಿಕೋರ್ಟ್‌ ಬೂಟಾ ಅವರ ವಿರುದ್ಧ ದೋಷಾರೋಪಣೆ ಮಾಡಿದ ಹಿನ್ನೆಲೆಯಲ್ಲಿಅವರನ್ನು ವಾಜಪೇಯಿ ಅವರು ಸಂಪುಟದಿಂದ ಕೈ ಬಿಟ್ಟ ಬಳಿಕ ಮತ್ತೆ ಮರಳಿ ಕಾಂಗ್ರೆಸ್‌ ಗೂಡು ಸೇರಿಕೊಂಡರು. ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆಯ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಲೋಪಗ­ಳನ್ನು ಎತ್ತಿ ತೋರಿಸಿದ್ದಕ್ಕಾಗಿ ಮತ್ತು ಅದನ್ನು ಗಟ್ಟಿಗೊಳಿಸಲು ಪರೋಕ್ಷ ವಾಗಿ ಕಾರಣರಾದ ಬೂಟಾ ಸಿಂಗ್‌ ಅವರನ್ನು ನೆನಪಿಟ್ಟುಕೊಳ್ಳಲೇಬೇಕು!

ಸುಮಾರು ಐದು ದಶಕಗಳ ರಾಜಕೀಯ ಜೀವನದಲ್ಲಿಬೂಟಾ ಸಿಂಗ್‌ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ವಿವಾದಗಳನ್ನೇ ಮೈಮೇಲೆ ಎಳೆದುಕೊಂಡಷ್ಟೇ ವೇಗವಾಗಿ ಅವುಗಳಿಂದ  ಹೊರಗೆ ಬರುವ ಕಲೆಯ ಅವರಿಗೆ ಗೊತ್ತಿತ್ತು. ಹಾಗಾಗಿಯೇ ಎಂಥದ್ದೇ ವಿವಾದಗಳು ಎದುರಾದರೂ ಎಲ್ಲವನ್ನು ನುಂಗಿಬಿಡುವ ಧಿಮಾಕು ಅವರಲ್ಲಿತ್ತು. ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಬೂಟಾ ಸಿಂಗ್‌, ಕೇಂದ್ರ ಗೃಹ, ರೈಲ್ವೆ, ವಾಣಿಜ್ಯ, ಬಂದರು ಮತ್ತು ಹೆದ್ದಾರಿ, ಸಂಸದೀಯ ವ್ಯವಹಾರ, ಕ್ರೀಡೆ, ಹೌಸಿಂಗ್‌, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ನಾಗರಿಕ ಪೂರೈಕೆ-ಗ್ರಾಹಕ ವ್ಯವಹಾರ,  ಸಂವಹನ ಸೇರಿ ಹಲವು ಇಲಾಖೆಗಳನ್ನು ನಿರ್ವಹಿಸಿದ ಕಸುಬುದಾರರು. ತೀರಾ ಇತ್ತೀಚೆಗೆ ಅಂದರೆ, 2007ರಿಂದ 10ರವರೆಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿಅನೇಕ ಜನೋಪಕಾರಿ ಕೆಲಸ ಮಾಡಿದ್ದರೂ ಜನರು ಅವುಗಳನ್ನು ನೆನಪಿನಲ್ಲಿಟ್ಟುಕೊಂಡಿಲ್ಲ. ಯಾಕೆಂದರೆ, ಬೂಟಾ ಸಿಂಗ್‌ ಈಗಲೂ, ಇಂದಿರಾ ಅವರ ನೆಚ್ಚಿಗ ಮತ್ತು ರಾಜೀವ್‌ ಅವರ ಭಂಟ. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ವಿವಾದಿತ ರಾಜಕಾರಣಿ ಎಂಬುದು ನಿರ್ವಿವಾದ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿ ಪಕ್ಷ  ಸಂಘಟನೆಯಲ್ಲಿಅಮೂಲ್ಯ ಕೊಡುಗೆ ನೀಡಿದ್ದ ಬೂಟಾ ಸಿಂಗ್‌ ಅವರಿಗೆ ಕೊನೆಯ ದಿನಗಳಲ್ಲಿತಮ್ಮ ನಿಷ್ಠೆಯನ್ನು ಯಾರೂ ಪರಿಗಣಿಸುತ್ತಿಲ್ಲಎಂಬ ಚಿಂತೆ ಕಾಡುತ್ತಿತ್ತು. ತಮ್ಮ ಆಪ್ತರ ಬಳಿಯೂ ಹೇಳಿಕೊಂಡಿದ್ದರು. 



ಸೋಮವಾರ, ಡಿಸೆಂಬರ್ 14, 2020

ಸೈಂಟಿಸ್ಟ್ ಸೂಪರ್‌ಹೀರೊ ಗೀತಾಂಜಲಿ

ಪ್ರತಿಷ್ಠತಟೈಮ್ಮ್ಯಾಗಜಿನ್ ನೀಡುತ್ತಿರುವಕಿಡ್ ಆ್ ದಿ ಇಯರ್ಗೌರವಕ್ಕೆ ಪಾತ್ರಳಾದ ಇಂಡಿಯನ್-ಅಮೆರಿಕನ್ ಬಾಲೆ ಗೀತಾಂಜಲಿ ರಾವ್, ಬಹುಮುಖ ಪ್ರತಿಭಾವಂತೆ.


- ಮಲ್ಲಿಕಾರ್ಜುನ ತಿಪ್ಪಾರ 

ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಎರಡು ಹೆಮ್ಮೆಯ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗುವ ಮೂಲಕ ಇತಿಹಾಸ ಸೃಷ್ಟಿಸಿದರೆ, ಪ್ರತಿಷ್ಠತಟೈಮ್ಮ್ಯಾಗಜಿನ್ ಇದೇ ಮೊದಲ ಬಾರಿಗೆ ನೀಡುತ್ತಿರುವಕಿಡ್ಸ್ ಆ್ ದಿ ಇಯರ್ಗೌರವಕ್ಕೆ ಇಂಡಿಯನ್-ಅಮೆರಿಕನ್ ಬಾಲೆ, 15ರ ಹರೆಯದಗೀತಾಂಜಲಿ ರಾವ್ಅವರನ್ನು ಆಯ್ಕೆ ಮಾಡಿದೆ. ಈ ಬಾಲೆ ಮಂಗಳೂರು ಮೂಲದವಳು ಎನ್ನುವುದು ಕನ್ನಡಿಗರಾಗಿ ನಮಗೆ ಮತ್ತೊಂದು ಹೆಮ್ಮೆಯ ಕೋಡು!

ಗೀತಾಂಜಲಿ ರಾವ್ ಪ್ರತಿಭೆ ಯಾವುದೇ ಒಂದಕ್ಕೆ ಸೀಮಿತವಾಗಿಲ್ಲ. ಆಕೆ ಸಂಶೋಧಕಿ, ವಿಜ್ಞಾನಿ, ಫೆನ್ಸರ್, ಡ್ಯಾನ್ಸರ್, ಸಿಂಗರ್, ಬೇಕರ್, ಟೆಡ್ ಸ್ಪೀಕರ್... ಹೀಗೆ ಪಟ್ಟಿ ಬೆಳೆಯುತ್ತದೆ. ಅಮೆರಿಕದ ಕೊಲೊರಡೊದ ಡೆನೆವರ್ನಲ್ಲಿ ವಾಸವಾಗಿರುವ ಗೀತಾಂಜಲಿಟೈಮ್ಸ್ಮುಖಪುಟದಲ್ಲಿ ರಾರಾಜಿಸುವ ಖುಷಿಯ ಕ್ಷಣ ಸಲೀಸಾಗಿ ಸಿಕ್ಕಿದ್ದಲ್ಲ. ಅಮೆರಿಕದ ಐದು ಸಾವಿರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳನ್ನು ಹಿಂದಿಕ್ಕಿ ಗೆದ್ದಿದ್ದಾಳೆ ಮತ್ತು ಈ ಗೌರವಕ್ಕೆ ಯಾವುದೇ ದೃಷ್ಟಿಯಿಂದ ನೋಡಿದರೂ ಆಕೆ ಸೂಕ್ತ ಆಯ್ಕೆಯೂ ಹೌದು.

ಹಾಲಿವುಡ್ನ ಖ್ಯಾತ ನಟಿ ಎಂಜೆಲಿನಾ ಜೋಲಿ ಅವರು ಗೀತಾಂಜಲಿ ರಾವ್ ಅವರನ್ನು ಸಂದರ್ಶಿಸಿದ್ದು, ಅದರಲ್ಲಿ ಆಕೆ ತನ್ನ ಗುರಿ, ಮುಂದಿನ ಯೋಜನೆಗಳು, ಹಲವು ಸಂಶೋಧನೆಗಳಿಗೆ ಕಾರಣವಾದ ಸಂಗತಿಗಳು, ಸ್ಫೂರ್ತಿ ನೀಡಿದ ನಾಯಕರು, ಸಾಗಬೇಕಿರುವ ದಾರಿ... ಹೀಗೆ ಮಾತುಗಳನ್ನು ಹರವಿಟ್ಟಿದ್ದಾಳೆ. ಗೀತಾಂಜಲಿಯ ಸಾಧನೆಗೆ ಆಕೆಯ ತಂದೆ ರಾಮ್ ರಾವ್ ಮತ್ತು ತಾಯಿ ಭಾರತಿ ಅವರ ಸಂಪೂರ್ಣ ಬೆಂಬಲವೂ ಇದೆ. ಯಾವುದೇ ಮಕ್ಕಳು ಹೊಸದಕ್ಕೆ ತುಡಿದಾಗ ಅದಕ್ಕೆ ಪೋಷಕರು ಅಗತ್ಯ ಬೆಂಬಲ ನೀಡಿದರೆ ಅದ್ಭುತ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಗೀತಾಂಜಲಿ ಉದಾಹರಣೆ.

ಚಿಕ್ಕ ವಯಸ್ಸಾದರೂ ಆಕೆಯಲ್ಲಿರುವ ವಿಚಾರ ಸ್ಪಷ್ಟತೆ, ನಿರ್ದಿಷ್ಟ ಗುರಿಯೆಡೆಗಿನ ಬದ್ಧತೆ ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ವಯಸ್ಸಿಗೆ ಮೀರಿದ ಯೋಚನಾ ಸರಣಿ ಹಾಗೂ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ತುಡಿತವೇ ಆಕೆಯ ಸಂಶೋಧನೆ, ಆವಿಷ್ಕಾರಗಳಿಗೆ ಕಾರಣವಾಗಿದೆ.

ಕುಡಿಯುವ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿದ್ದ ಸೀಸದ ಸಮಸ್ಯೆಯನ್ನು ಅಮೆರಿಕದ ಮಿಶಿಗನ್, ಫ್ಲಿಂಟ್ ವಾಸಿಗಳು ಎದುರಿಸುತ್ತಿದ್ದರು. ಈ ಸಮಸ್ಯೆಗೆ ಪರಿಹಾರ ಯೋಚಿಸಿದ ಗೀತಾಂಜಲಿ, ‘ಟೆಥಿಸ್ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದಳು. ಇದು ಕಾರ್ಬನ್ ನ್ಯಾನೋಟ್ಯೂಬ್ ಆಗಿದ್ದು, ನೀರಿನಲ್ಲಿರುವ ಸೀಸದ ಪ್ರಮಾಣ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚಿ, ಕುಡಿಯಲು ನೀರು ಯೋಗ್ಯವಾಗಿದೆಯೇ ಎಂಬುದನ್ನು ಸುರಕ್ಷಿತ, ಸ್ವಲ್ಪ ಕಲುಷಿತ ಮತ್ತು ಯೋಗ್ಯವಲ್ಲ ಎಂದು ವಿಂಗಡಿಸಿ ಮಾಹಿತಿಯನ್ನು ಸ್ಮಾರ್ಟ್ ೆನ್ನ ಆ್ಯಪ್ಗೆ ರವಾನಿಸುತ್ತದೆ. ಈ ಸಾಧನ ಆಕೆಗೆ 2017ರಲ್ಲಿ ಡಿಸ್ಕವರಿ ಎಜುಕೇಷನ್ 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಗೆಲ್ಲಲು ಅವಕಾಶ ಕಲ್ಪಿಸಿತು. ಕೈಂಡ್ಲೀ ಎನ್ನುವ ಆ್ಯಪ್ ಅನ್ನು ಗೀತಾಂಜಲಿ ಅಭಿವೃದ್ಧಿ ಪಡಿಸಿದ್ದಾಳೆ. ಕೃತಕ ಬುದ್ಧಿಮತ್ತೆ(ಎಐ) ಆಧರಿತ ಈ ಆ್ಯಪ್ ಸೈಬರ್ಬುಲ್ಲಿ ಚಟುವಟಿಕೆಯನ್ನು ಪತ್ತೆ ಹಚ್ಚುತ್ತದೆ. ಗೀತಾಂಜಲಿಯ ಮತ್ತೊಂದು ಅವಿಷ್ಕಾರವು ಹ್ಯೂಮನ್ ಜೆನೆಟಿಕ್ಸ್(ಮಾನವ ತಳಿಶಾಸ) ಸಂಬಂಧಿಸಿದ್ದು ಮತ್ತು ಮಾದಕ ವ್ಯಸನಿಯಾಗುವುದನ್ನು ಪತ್ತೆ ಹಚ್ಚುತ್ತದೆ.

ವಿಜ್ಞಾನ, ತಂತ್ರಜ್ಞಾನ, ಎಂಜನಿಯರಿಂಗ್, ಗಣಿತ—(ಸ್ಟೆಮ್)ನಲ್ಲಿ ಅಪಾರ ನಂಬಿಕೆ ಹೊಂದಿರುವ ಗೀತಾಂಜಲಿ, ಸ್ಟೆಮ್ ಸಂಸ್ಥೆಗಳಲ್ಲಿರುವ ಹುಡುಗಿಯರು, ಸ್ಕೂಲ್ ವಿದ್ಯಾರ್ಥಿಗಳು, ಶಾಂಘೈ ಇಂಟರ್ನ್ಯಾಘಿಷನಲ್ ಯುಥ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಗ್ರೂಪ್, ಲಂಡನ್ನ ರಾಯಲ್ ಅಕಾಡೆಮಿ ಆ್ ಎಂಜನಿಯರಿಂಗ್ ಸಂಸ್ಥೆಗಳಲ್ಲಿ ನಾವೀನ್ಯತಾ ಕಾರ್ಯಾಗಾರಗಳನ್ನು ಮಾಡುವುದನ್ನು ಇಷ್ಟಪಡುತ್ತಾಳೆ. ವಾರಾಂತ್ಯದಲ್ಲಿ ಈ ಕ್ಲಾಸುಗಳಿಗೆ ಜಗತ್ತಿನಾದ್ಯಂತ 28 ಸಾವಿರಕ್ಕೂ ಹೆಚ್ಚು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹೈಸ್ಕೂಲು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ ಮತ್ತು ಗೀತಾಂಜಲಿ ತಾನು ಕಂಡುಕೊಂಡ ಪ್ರಕ್ರಿಯೆ ಹಾಗೂ ಸಾಧನಗಳ ಬಗ್ಗೆ ಮಾಹಿತಿ ನೀಡುತ್ತಾಳೆ.

‘‘ಪ್ರತಿ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಹೋಗಬಾರದು. ನಿಮ್ಮನ್ನು ಪ್ರಚೋದಿಸುವ ಸಮಸ್ಯೆಯೊಂದರ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಿ. ಒಂದು ವೇಳೆ ಇಷ್ಟೆಲ್ಲ ಮಾಡಲು ನನಗೆ ಸಾಧ್ಯವಾಗಿದ್ದರೆ, ಯಾರಾದರೂ ಇದನ್ನು ಮಾಡಬಹುದಲ್ಲವೇ,’’ ಎನ್ನುತ್ತಾ ಇತರರನ್ನು ಹುರಿದುಂಬಿಸುವ ಔದಾರ್ಯ ಗೀತಾಂಜಲಿಗಿದೆ. ‘‘ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದೀಯಲ್ಲನಿನಗೆ ಯಾರು ಸ್ಫೂರ್ತಿ?’’ ಎಂದು ಕೇಳಿದರೆ, ಮೇರಿ ಕ್ಯೂರಿ ತನ್ನ ಅತಿದೊಡ್ಡ ಸ್ಫೂರ್ತಿ ಎನ್ನುತ್ತಾಳೆ ಬಟ್ಟಲು ಕಂಗಳ ಗೀತಾಂಜಲಿ. ಜೊತೆಗೆ, ತಂದೆ ತಾಯಿ, ಭಾರತದಲ್ಲಿರುವ ಕುಟುಂಬದ ಸದಸ್ಯರ ಬೆಂಬಲವನ್ನು ಸ್ಮರಿಸುತ್ತಾಳೆ. ಫ್ರೆಂಚ್ ಪ್ರಾಧ್ಯಾಪಕ ಮತ್ತು ಮೈಕ್ರೋಬಯಾಲಜಿ, ಜೆನೆಟಿಕ್ಸ್ ಮತ್ತು ಬಯೋಕೆಮಿಸ್ಟ್ರಿ ಸಂಶೋಧಕ ಎಮ್ಯಾನುಯೆಲ್ ಮೇರಿ ಚಾರ್ಪೆಂಟಿಯರ್ ಮತ್ತು ಅಮೆರಿಕದ ಜೀವರಾಸಾಯನಿಕ ವಿಜ್ಞಾನಿ ಜೆನ್ನಿರ್ ಆನ್ ಡೌಡನಾ ಗೀತಾಂಜಲಿ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾರೆ.

ಜಗತ್ತಿನ ಹಲವು ಮಕ್ಕಳಿಗೆರೋಲ್ ಮಾಡೆಲ್ಆಗಿರುವ ಗೀತಾಂಜಲಿ ಭಾರತದ ಇಂದಿರಾ ಗಾಂಧಿ ಎಂದರೆ ಅಚ್ಚುಮೆಚ್ಚು ಮತ್ತು ಸ್ಫೂರ್ತಿಯ ಸೆಲೆ. ‘‘ಭಾರತದಲ್ಲಿ ನನಗೆ ಸ್ಫೂರ್ತಿದಾಯಕ ವ್ಯಕ್ತಿ ಎಂದರೆ ಇಂದಿರಾ ಗಾಂಧಿ. ಇಂದಿರಾ ಬರ್ತ್ಡೇ ದಿನವೇ ನನ್ನದು ಕೂಡ,’’ ಎನ್ನುತ್ತಾಳೆ ಗೀತಾಂಜಲಿ. ಇಂದಿರಾ ಅವರ ಕೆಲಸ, ತೋರಿದ ದಿಟ್ಟ ನಾಯಕತ್ವದ ಬಗ್ಗೆ ಅಪಾರ ಮೆಚ್ಚುಗೆ. ಅವರು ಸಾಗಿದ ದಾರಿಯಲ್ಲೇ ಸಾಗಿ, ಅವರಷ್ಟೇ ಶಕ್ತಿಶಾಲಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಇಂಗಿತ ಹೊರಹಾಕುತ್ತಾಳೆ. ಇಂದಿರಾ ಹೊರತುಪಡಿಸಿ, ನಟ ಶಾರುಖ್ ಖಾನ್ ಬಗ್ಗೆಯೂ ಗೀತಾಂಜಲಿಗೆ ಅಭಿಮಾನವಿದೆ. ತಾನು ಈವರೆಗೆ ಭೇಟಿ ಮಾಡಿದವರ ಪೈಕಿ ಅತ್ಯಂತ ನಿಸ್ವಾರ್ಥ ವ್ಯಕ್ತಿ ಎಂದುಕಿಂಗ್ ಖಾನ್ರನ್ನು ಶ್ಲಾಘಿಸುತ್ತಾಳೆ. ಶಾರುಖ್ ನಡೆಸಿಕೊಟ್ಟ ಟೆಡ್ ಟಾಕ್ನಲ್ಲೂ ಗೀತಾಂಜಲಿ ಮಾತನಾಡಿದ ಅನುಭವವನ್ನು ನೆನಪಿಸಿಕೊಳ್ಳುತ್ತಾಳೆ. ಹಾಲಿವುಡ್ನಲ್ಲೂ ಹೆಸರು ಮಾಡುತ್ತಿರುವ ಭಾರತದ ನಟಿ ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ಗೀತಾಂಜಲಿಗೆ ಪ್ರೀತಿ ಇದೆ.

ಗೀತಾಂಜಲಿಯ ಆಸಕ್ತಿ ವಿಜ್ಞಾನ, ಸಂಶೋಧನೆಗೆ ಸೀಮಿತವಾಗಿಲ್ಲ. ಆಕೆಗೆ ನಾನಾ ಆಸಕ್ತಿ. ಪ್ರತಿಯೊಂದನ್ನು ಕುತೂಹಲದಿಂದ ನೋಡುವ ಬೆರಗು ಸ್ವಭಾವ ಅವಳದ್ದು. ಪ್ರತಿಯೊಂದರಲ್ಲೂ ಆಸಕ್ತಿ ತಾಳಿ ಅದನ್ನು ಒಲಿಸಿಕೊಳ್ಳುತ್ತಾಳೆ. ಪಿಯಾನೋ ವಾದನ, ಭಾರತೀಯ ನೃತ್ಯ, ಗಾಯನ, ಈಜು ಮತ್ತು ಫೆನ್ಸಿಂಗ್ ಗೀತಾಂಜಲಿಯ ಆಸಕ್ತಿಯ ಕ್ಷೇತ್ರಗಳು. ಒಂಭತ್ತು ವರ್ಷದವಳಿದ್ದಾಗಲೇ ಶಾಸೀಯ ಸಂಗೀತ ಅಭ್ಯಾಸ ಆರಂಭಿಸಿದಳು. ಕೋವಿಡ್ ಕ್ವಾರಂಟೈನ್ನಲ್ಲಿ ಸಮಯವನ್ನು ಹೊಸ ಕಲಿಕೆಗೆ ಸದುಪಯೋಗಪಡಿಸಿಕೊಂಡೆ ಎಂದು ಏಂಜೆಲೀನಾ ಜೋಲಿ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾಳೆ. ಇದೇ ಸಮಯದಲ್ಲಿ ತಾನು ಹೇಗೆ ಬೇಕಿಂಗ್ ಕಲಿತೆ ಎಂಬುದನ್ನು ರಸವತ್ತಾಗಿ ವಿವರಿಸಿದ್ದಾಳೆ.

ತೀರಾ ಚಿಕ್ಕ ವಯಸ್ಸಿಗೆ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಗೀತಾಂಜಲಿ ಮುಂದೇನು ಮಾಡುತ್ತಾಳೆ ಎಂಬ ಪ್ರಶ್ನೆ ಸಹಜ. ನಯೀ ಬಾತ್ ಟೆಡ್ಟಾಕ್ನಲ್ಲಿ ತನ್ನ ಮುಂದಿರುವ ಗುರಿಯನ್ನು ಸೂಪರ್ ಹೀರೋಗಳೊಂದಿಗೆ ಸಮೀಕರಿಸಿ ವಿವರಿಸಿದ್ದಾಳೆ. ಕಾಮಿಕ್ ಅಥವಾ ಸಿನಿಮಾದಲ್ಲಿ ಸೂಪರ್ ಹೀರೋಗಳು ಎತ್ತರದ ಕಟ್ಟಡಗಳಿಂದ ಕಟ್ಟಡಕ್ಕೆ ನೆಗೆಯುತ್ತಾರೆ; ತಾಂತ್ರಿಕ ಗ್ಯಾಜೆಟ್ಗಳನ್ನು ಬಳಸುತ್ತಾರೆ; ಅತಿಮಾನುಷ ಶಕ್ತಿ ಹೊಂದಿರುತ್ತಾರೆ. ಆದರೆ, ಅವರ ಮುಖ್ಯ ಕೆಲಸ ಜೀವಗಳನ್ನುರಕ್ಷಿಸುವುದೇ ಆಗಿರುತ್ತದೆ. ವಿಜ್ಞಾನಿಗಳೂ ಹಾಗೆಯೇ. ವಿಜ್ಞಾನಿಗಳು ಯಾವಾಗಲೂ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ; ಜನರ ಸಂಕಟಕ್ಕೆ ನೆರವಾಗುತ್ತಾರೆ. ತಾನುಸೈಂಟಿಸ್ಟ್ ಸೂಪರ್ ಹೀರೊಆಗಬೇಕು. ನಿಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುತ್ತಾ, ಜೀವಗಳನ್ನು ರಕ್ಷಿಸಬೇಕು ಎನ್ನುವುದು ಆಕೆಯ ಆಂತರ್ಯದ ಮಾತುಗಳು. ಅವಳ ಮುಂದಿನ ಗುರಿ, ಯೋಜನೆಗಳೇನೆಂಬುದು ನಿಮಗೀಗ ಸ್ಪಷ್ಟವಾಗಿರಬೇಕು ಅಲ್ಲವೇ?

(ಈ ಲೇಖನ ವಿಜಯ ಕರ್ನಾಟಕದ 2020 ಡಿಸೆಂಬರ್ 13ರ ಸಂಚಿಕೆಯಲ್ಲಿ ಪ್ರಕಟವಾಗಿದೆ) 

ಸೋಮವಾರ, ಫೆಬ್ರವರಿ 24, 2020

Joaquin Phoenix: ಅದ್ಭುತ ನಟ, ಹೃದಯವಂತ ವಾಕಿನ್‌

ಮಲ್ಲಿಕಾರ್ಜುನ ತಿಪ್ಪಾರ
''ಹಸುವಿಗೆ ಕೃತಕ ಗರ್ಭಧಾರಣೆ ಮಾಡಲು ಮತ್ತು ಅದರ ಕರುವಿಗೆ ಸ್ವಾಭಾವಿಕವಾಗಿ ದಕ್ಕಬೇಕಿದ್ದನ್ನು ಕಸಿದುಕೊಳ್ಳುವ ಹಕ್ಕು ನಮಗಿದೆ ಎಂದು ನಾವು ಭಾವಿಸಿಕೊಳ್ಳುತ್ತಿದ್ದೇವೆ. ಹಸುವಿನ ಬೇಗುದಿಯ ಕೂಗಿಗೆ ಯಾವುದೂ ಸಮಾಧಾನ ತರಲಾರದು. ಅದರ ಕರುವಿಗೆ ಮಾತ್ರವೇ ಸಿಗಬೇಕಾದ ಹಾಲನ್ನು ನಾವು ನಮ್ಮ ಕಾಫಿ ಮತ್ತು ಊಟಕ್ಕೆ ಬಳಸಿಕೊಳ್ಳುತ್ತಿದ್ದೇವೆ...''










ಜೋಕರ್‌' ಎಂಬ ವಿಶಿಷ್ಟ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ 'ಆಸ್ಕರ್‌' ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ನಟ ವಾಕಿನ್‌ ಫಿನಿಕ್ಸ್‌ ಅವರ ಅಂತರಾಳದ ಮಾತುಗಳು ಇವು. ಆಸ್ಕರ್‌ ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿಆಡಿದ ಈ ಮಾತುಗಳಿಗೆ ಇಡೀ ಜಗತ್ತೇ ತಲೆದೂಗುತ್ತಿದೆ. ವಾಕಿನ್‌ ಅವರ ಸ್ಫೂರ್ತಿದಾಯಕ ಮಾತುಗಳಿಗೆ ಮಾರುಹೋಗಿ ಸುಮಾರಷ್ಟು ಜನರು ವೆಗಾನ್‌(ಸಂಪೂರ್ಣ ಸಸ್ಯಾಹಾರಿ)ಗಳಾಗುತ್ತಿದ್ದಾರೆ. ಒಬ್ಬ ಸೆಲಿಬ್ರಿಟಿ ನಟನೊಬ್ಬನ ಪ್ರಾಮಾಣಿಕ ಕಾಳಜಿಗೆ ಸಲ್ಲುತ್ತಿರುವ ಗೌರವ ಇದು.

ಬಹಳಷ್ಟು ನಟ- ನಟಿಯರು ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸುವುದು ಅತಿ ವಿರಳ. ಆದರೆ, ವಾಕಿನ್‌ ಫಿನಿಕ್ಸ್‌ನಂಥ ನಟರು ತಮಗೆ ಸರಿ ಅನ್ನಿಸಿದ್ದನ್ನು ನಿರ್ಭೀತಿಯಿಂದ ಮಾಡುತ್ತಾರೆ. ಹಾಗಾಗಿಯೇ ಆಸ್ಕರ್‌ನಂಥ ಬಹುದೊಡ್ಡ ವೇದಿಕೆಯಲ್ಲಿಗೋ ರಕ್ಷಣೆಯ ಆ್ಯಕ್ಟಿವಿಸಮ್‌ ಬಗ್ಗೆ ಮಾತನಾಡುತ್ತಾರೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿದನದ ಮಾಂಸ ಆಹಾರ ಸಂಸ್ಕೃತಿಯ ಭಾಗವಾಗಿದೆ. ಹಾಗಾಗಿ, ಆಸ್ಕರ್‌ ವೇದಿಕೆಯಲ್ಲಿಗೋರಕ್ಷಣೆಯ ಬಗ್ಗೆ ಮಾತನಾಡಿರುವ ಫಿನಿಕ್ಸ್‌ ಅವರ ಮಾತುಗಳಿಗೆ ಹೆಚ್ಚು ಮಹತ್ವವಿದೆ. ಫಿನಿಕ್ಸ್‌ ಅವರ ಗೋ ಕಾಳಜಿಗೆ ಉದಾಹರಣೆ ಎಂಬಂತೆ, ಆಸ್ಕರ್‌ ಸ್ವೀಕರಿಸಿದ ಎರಡು ದಿನಗಳ ಬಳಿಕ ಅವರು ಹಸು ಮತ್ತು ಅದರ ಕರುವನ್ನು ರಕ್ಷಿಸಿ ಸುದ್ದಿಯಾದರು!

ಚಿಕ್ಕ ವಯಸ್ಸಿನಿಂದಲೇ ವೆಗಾನ್‌ ಆಗಿರುವ ವಾಕಿನ್‌ ಫಿನಿಕ್ಸ್‌ ಹಾಲಿವುಡ್‌ನಲ್ಲಿಬಹುದೊಡ್ಡ ಹೆಸರು. ಒಂದೆರಡು ಬಾರಿ ಆಸ್ಕರ್‌ ಪ್ರಶಸ್ತಿ ಕಣದಲ್ಲಿದ್ದರೂ ಸಂದಿರಲಿಲ್ಲ. ಆದರೆ, ಜೋಕರ್‌ ಸಿನಿಮಾ ಅವರ ಆ ಕೊರತೆಯನ್ನು ನೀಗಿಸಿದೆ. ಅವರು ಎಷ್ಟು ದೊಡ್ಡ ನಟರೋ, ಎಷ್ಟು ಸಹಜ ಅಭಿನಯ ನೀಡುತ್ತಾರೋ ಅಷ್ಟೇ ಅಂತಃಕರಣಿ; ನಿಸರ್ಗ ಪ್ರೇಮಿ. ಸಾಮಾಜಿಕ ಕಾರ್ಯಕರ್ತ. ಆಫ್ರಿಕಾದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಉದಾರಿ. ನಿಗರ್ವಿ ಮತ್ತು ಸೀದಾ ಸಾದಾ ವ್ಯಕ್ತಿ.

ವಾಕಿನ್‌ ಫಿನಿಕ್ಸ್‌ ಅವರ ಪೂರ್ತಿ ಹೆಸರು ವಾಕಿನ್‌ ರಫೇಲ್‌ ಫಿನಿಕ್ಸ್‌. 1974ರ ಅಕ್ಟೋಬರ್‌ 28ರಂದು ಪೋರ್ಟರಿಕೊ ಎಂಬ ಕೆರೆಬಿಯನ್‌ ದ್ವೀಪದ ಸ್ಯಾನ್‌ ಜುವಾನ್‌ನ ರಿಯೊ ಪಿಡ್ರಾಸ್‌ನಲ್ಲಿಜನಿಸಿದರು. ಪೋರ್ಟರಿಕೊ ದ್ವೀಪ ಅಮೆರಿಕ ನಿಯಂತ್ರಿತ ಪ್ರದೇಶ. ತಾಯಿ ಅರ್ಲಿನ್‌ ಫಿನಿಕ್ಸ್‌. ತಂದೆ ಜಾನ್‌ ಲೀ ಬಾಟಮ್‌. ಈ ದಂಪತಿಯ ಐದು ಮಕ್ಕಳ ಪೈಕಿ ವಾಕಿನ್‌ ಮೂರನೆಯವರು. ರೇನ್‌, ಸಮ್ಮರ್‌ ಮತ್ತು ಲಿಬರ್ಟಿ ಸಹೋದರಿಯರು ಮತ್ತು ರಿವರ್‌ ಸಹೋದರ. ವಿಶೇಷ ಎಂದರೆ ಇಷ್ಟೂ ಜನರು ಸಿನಿಮಾ ರಂಗದಲ್ಲಿದ್ದಾರೆ. ನಟ, ನಟಿಯರು. 'ಚಿಲ್ಡ್ರನ್‌ ಆಫ್‌ ಗಾಡ್‌' ಎಂಬ ಪಂಥವನ್ನು ಅನುಸರಿಸುತ್ತಿದ್ದ ಇವರ ತಂದೆ ತಾಯಿ ದಕ್ಷಿಣ ಅಮೆರಿಕ ತುಂಬ ಪ್ರವಾಸ ಮಾಡಿ, ಪ್ರಚಾರ ಮಾಡಲು ಪ್ರಯತ್ನಿಸಿದರು. ಆದರೆ, ಮುಂದೆ ಭಿನ್ನಾಭಿಪ್ರಾಯದಿಂದಾಗಿ ಈ ಪಂಥವನ್ನು ತೊರೆದು 1977ರಲ್ಲಿಅಮೆರಿಕಕ್ಕೆ ಮರಳಿದಾಗ ಫಿನಿಕ್ಸ್‌ಗೆ ಮೂರು ವರ್ಷ. ಫಿನಿಕ್ಸ್‌ ಸಹೋದರ ಮತ್ತು ಸಹೋದರಿಯರ ಹೆಸರು ಗಮನಿಸಿದರೆ ನಿಮಗೆ ನಿಸರ್ಗದ ಛಾಯೆ ಎದ್ದು ಕಾಣುತ್ತದೆ. ಬಹುಶಃ ಇದೇ ಮುಂದೆ ಫಿನಿಕ್ಸ್‌ ಕೂಡ ನಿಸರ್ಗಪ್ರೇಮಿಯಾಗಲು ಪ್ರೇರಣೆಯಾಯಿತೇನೊ?

ಬಾಲ್ಯ ಕಲಾವಿದನಾಗಿ ಫಿನಿಕ್ಸ್‌ ಸಹೋದರ ರಿವರ್‌ ಮತ್ತು ಸಿಸ್ಟರ್‌ ಸಮ್ಮರ್‌ ಜೊತೆಗೂಡಿ ನಟನೆಗಿಳಿದರು. ಸ್ಪೇಸ್‌ಕ್ಯಾಂಪ್‌(1986)ನಲ್ಲಿವಾಕಿನ್‌ಗೆ ಪ್ರಮುಖ ಪಾತ್ರ ದೊರೆಯಿತು. 1995ರ ತನಕ ಫಿನಿಕ್ಸ್‌ ಅವರ ಬೆಳ್ಳಿತೆರೆ ಹೆಸರು ಲೀಫ್‌ ಫಿನಿಕ್ಸ್‌ ಎಂದಿತ್ತು. 'ಟು ಡೈ ಫಾರ್‌'(1995) ಸಿನಿಮಾದಲ್ಲಿಅವರ ಮೂಲ ಹೆಸರು ಕಾಣಿಸಿಕೊಂಡಿತು. ವಿಶೇಷ ಎಂದರೆ, 'ಟು ಡೈ ಫಾರ್‌' ಚಿತ್ರವು ಫಿನಿಕ್ಸ್‌ ಅವರ ಸಿನಿಮಾ ಬದುಕಿಗೆ ಗಟ್ಟಿ ಅಡಿಪಾಯ ಹಾಕಿತು. ಈ ಕಾಮಿಡಿ-ಡ್ರಾಮಾ ಫಿಲ್ಮ್‌ನಲ್ಲಿಫಿನಿಕ್ಸ್‌ ನಿರ್ವಹಿಸಿದ ಪಾತ್ರಕ್ಕೆ ಅಪಾರ ಮೆಚ್ಚುಗೆ ದೊರೆಯಿತು. ಬಳಿಕ ಅವರು ಪಿರಿಯಾಡಿಕಲ್‌ ಚಿತ್ರ 'ಕ್ವಿಲ್ಸ್‌'(2000)ನಲ್ಲಿಕಾಣಿಸಿಕೊಂಡರು. ಇದೇ ಅವಧಿಯಲ್ಲಿತೆರೆ ಕಂಡ ಐತಿಹಾಸಿಕ ಕಥಾವಸ್ತು ಹೊಂದಿದ್ದ 'ಗ್ಲಾಡಿಯೇಟರ್‌' ಕೂಡ ಫಿನಿಕ್ಸ್‌ಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು. ಈ ಚಿತ್ರದ 'ಕೊಮೆಡೊಸ್‌' ಪಾತ್ರ ಎಷ್ಟು ಪ್ರಭಾವ ಬೀರಿತು ಎಂದರೆ, ಅತ್ಯುತ್ತಮ ಪೋಷಕ ಪಾತ್ರಕ್ಕಾಗಿ ಆಸ್ಕರ್‌ಗೆ ನಾಮಿನೇಟ್‌ ಆದರು. 2005ರಲ್ಲಿತೆರೆಕಂಡ 'ವಾಕ್‌ ದಿ ಲೈನ್‌' ಸಿನಿಮಾದಲ್ಲಿನಿರ್ವಹಿಸಿದ ಮ್ಯೂಸಿಯನ್‌ ಜಾನಿ ಕ್ಯಾಶ್‌ ಪಾತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತಲ್ಲದೇ ಆಸ್ಕರ್‌ನ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನೇಟ್‌ ಆದರು. ಕುಡುಕ ಯೋಧನ ಪಾತ್ರ ನಿರ್ವಹಣೆಯ 'ದಿ ಮಾಸ್ಟರ್‌'(2012), 'ದಿ ವಿಲೇಜ್‌'(2004), ಐತಿಹಾಸಿಕ ಕಥಾವಸ್ತು ಹೊಂದಿದ 'ಹೊಟೇಲ್‌ ರವಂಡಾ'(2004), ರೋಮಾಂಟಿಕ್‌ ಡ್ರಾಮಾ 'ಹರ್‌'(2013), ಅಪರಾಧ ವಿಡಂಬನಾತ್ಮಕ ಕಥಾವಸ್ತುವಿರುವ 'ಇನ್‌ಹೆರೆಂಟ್‌ ವೈಸ್‌'(2014), ಸೈಕಾಲಜಿಕಲ್‌ ಥ್ರಿಲ್ಲರ್‌ 'ಯು ವೇರ್‌ ನೆವರ್‌ ರಿಯಲೀ ಹಿಯರ್‌'(2017) ಚಿತ್ರಗಳು ವಾಕಿನ್‌ ಫಿನಿಕ್ಸ್‌ಗೆ ಹಾಲಿವುಡ್‌ನಲ್ಲಿಗಟ್ಟಿ ಸ್ಥಾನ ಒದಗಿಸಿದವು. 2019ರಲ್ಲಿತೆರೆ ಕಂಡ 'ಜೋಕರ್‌' ಸಿನಿಮಾದ ಪಾತ್ರ ಫಿನಿಕ್ಸ್‌ಗೆ ಆಸ್ಕರ್‌ ತಂದುಕೊಟ್ಟಿತು. ಆ ಚಿತ್ರದಲ್ಲಿಫಿನಿಕ್ಸ್‌ ಅಭಿನಯಕ್ಕೆ ಮನಸೋಲದವರೇ ಇಲ್ಲ.

ವಾಕಿನ್‌ ಫಿನಿಕ್ಸ್‌ ಕೇವಲ ನಟನೆಯಲ್ಲಿತಮ್ಮನ್ನು ತೊಡಗಿಸಿಕೊಂಡಿಲ್ಲ. ಮ್ಯೂಸಿಕ್‌ ವಿಡಿಯೊಗಳಿಗೆ ನಿರ್ದೇಶನ ಮಾಡಿದ್ದಾರೆ, ಅನೇಕ ಸಿನಿಮಾ ಮತ್ತು ಟಿವಿ ಶೋ ನಿರ್ಮಾಣ ಮಾಡಿದ್ದಾರೆ. 'ವಾಕ್‌ ದಿ ಲೈನ್‌' ಚಿತ್ರದ ಸಂಗೀತ ರೆಕಾರ್ಡಿಂಗ್‌ಗಾಗಿ ಅವರಿಗೆ ಗ್ರ್ಯಾಮಿ ಅವಾರ್ಡ್‌ ಕೂಡ ಬಂದಿದೆ. ಅವರಿಗೆ ಎರಡು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳೂ ಬಂದಿವೆ.

ಫಿನಿಕ್ಸ್‌ ಮಾನವೀಯ ಸಂಘಟನೆಗಳಲ್ಲಿತೊಡಗಿಸಿಕೊಂಡಿದ್ದಾರೆ. ಅನೇಕ ಸೇವಾ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌, ದಿ ಆರ್ಟ್‌ ಆಫ್‌ ಎಲಿಸಿಯಮ್‌, ಹಾರ್ಟ್‌, ಪೀಸ್‌ ಅಲಾಯನ್ಸ್‌ ಸೇರಿದಂತೆ ಅನೇಕ ಸಂಘಟನೆಗಳಿಗೆ ನೆರವು ನೀಡಿದ್ದಾರೆ; ಅವುಗಳ ಕೆಲಸಕಾರ್ಯಗಳಲ್ಲಿತೊಡಗಿಸಿಕೊಂಡಿದ್ದಾರೆ. 'ದಿ ಲಂಚ್‌ಬಾಕ್ಸ್‌ ಫಂಡ್‌' ಎಂಬ ಸರಕಾರೇತರ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆಯು ದಕ್ಷಿಣ ಆಫ್ರಿಕಾದ ಸೊವೆಟೊ ನಗರದ ಶಾಲಾ ಮಕ್ಕಳಿಗೆ ನಿತ್ಯ ಊಟ ಪೂರೈಸುತ್ತದೆ. ವಿಶೇಷ ಎಂದರೆ, ಫಿನಿಕ್ಸ್‌ ಅವರ ಮಾಜಿ ಪ್ರೇಯಸಿ ದಕ್ಷಿಣಾ ಆಫ್ರಿಕಾದ ಮಾಡೆಲ್‌ ತೋಪಾಜ್‌ ಪೇಜ್‌-ಗ್ರೀನ್‌ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇಷ್ಟಲ್ಲದೆ, ವೆಗನಿಸಮ್‌ ಪ್ರಚುರ ಪಡಿಸುವುದಕ್ಕಾಗಿ ಫಿನಿಕ್ಸ್‌ ಅನೇಕ ಪ್ರಾಣಿದಯಾ ಸಂಘಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಫೆನ್ಸ್‌ ಆಫ್‌ ಆ್ಯನಿಮಲ್ಸ್‌, ಪೆಟಾ ಸದಸ್ಯರಾಗಿದ್ದಾರೆ. ಪ್ರಾಣಿ ಚರ್ಮದಿಂದ ಮಾಡಿದ ಬಟ್ಟೆಗಳನ್ನು ಸಿನಿಮಾದಲ್ಲೂ ತೊಡುವುದಿಲ್ಲ!