ಸೋಮವಾರ, ಆಗಸ್ಟ್ 6, 2007

ಚೆನ್ನೈನಲ್ಲಿ ಸಖತ್ "ಮುಂಗಾರು ಮಳೆ": ಕನ್ನಡಿಗರಿಗೆ ಪುಳಕ


ಚೆನ್ನೈನಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ. ಆದರೆ ಯೋಗರಾಜ್ ಭಟ್ಟರ "ಮುಂಗಾರು ಮಳೆ" ಭರ್ಜರಿಯಾಗಿ ಸುರಿಯುತ್ತಿದೆ.. ಹಾಗೇ ಸುಮ್ಮನೆ..!

ಅರೆ ಏನು ಇದು.. ಅಂತಾ ಕೇಳ್ತಿದ್ದೀರಾ. ಅಂಥದ್ದೇನೂ ಇಲ್ಲ ಮಾರಾಯ್ರೆ. ಅದೇ ಕನ್ನಡದ ಸೂಪರ್ ಡೂಪರ್ ಹಿಟ್ "ಮುಂಗಾರು ಮಳೆ" ಚಿತ್ರ ಚೆನ್ನೈನಲ್ಲಿ ಬಿಡುಗಡೆಯಾಗಿ ಸಖತ್ ಮೋಡಿ ಮಾಡಿದೆ ಇಲ್ಲಿಯ ಚೆನ್ನೈ ಕನ್ನಡಿಗರಿಗೆ...!

ನಿನ್ನೆ ಭಾನುವಾರ ಇಡೀ ನಮ್ಮ ಆಫೀಸೇ "ಮುಂಗಾರು ಮಳೆ" ಪ್ರದರ್ಶಿಸುತ್ತಿರುವ ಕ್ಯಾಸಿನೊ ಚಿತ್ರಮಂದಿರ ಬಳಿಯಿತ್ತು. ಅದೇನೂ ಮಹಾ ವಿಶೇಷ ಅನ್ನಬೇಡಿ. ನಮ್ಮ ಆಫೀಸ್ ಅಂದ್ರೆ "ಮಿನಿ ಸೌತ್ ಇಂಡಿಯಾ" ಇದ್ದ ಹಾಗೆ. ಇಲ್ಲಿ ಕನ್ನಡಿಗರು, ಮಲಿಯಾಳಿಗಳು, ಆಂಧ್ರದವರು ಮತ್ತು ತಮಿಳರು ಬಹಳ ಅನ್ಯೂನ್ಯದಿಂದ ಕೆಲಸ ಮಾಡುತ್ತಾರೆ. ಯಾಕೆಂದರೆ ನಮ್ಮದು ಹೇಳಿ ಕೇಳಿ ಸಾಫ್ಟವೇರ್ ಲೋಕಲಾಯಿಜಿಶನ್ ಮತ್ತು ಮೀಡಿಯಾ ಮೂಲದ ಎಂಎನ್‌ಸಿ ಕಂಪೆನಿ. ಹೀಗಾಗಿ ನಮ್ಮ ಆಫೀಸ್ ಅಂದ್ರೆ "ಮಿನಿ ಸೌತ್ ಇಂಡಿಯಾ"

ಈಗ ಅರ್ಥ ಆಗಿರಬೇಕಲ್ಲ ಇಡೀ ನಮ್ಮ ಆಫೀಸ್ ತಂಡವೇ ಕ್ಯಾಸಿನೋ ಬಳಿ ಇತ್ತು ಅಂತ ಯಾಕೆ ಹೇಳ್ದೆ ಅಂತ. ಸರಿ ಮತ್ತೆ ಮುಂಗಾರಿ..ಗೆ ಬರೋಣ.

ನಮ್ಮ ಕನ್ನಡ ತಂಡದಲ್ಲಿ ಸಾರಥಿ ಅಂತ ಅಪ್ಪಟ ಕನ್ನಡ ಪ್ರೇಮಿಗಳು ಇದ್ದಾರೆ. ಭಾನುವಾರ ಸುಮಾರು ನಮ್ಮ ಆಫೀಸ್‌ನ 30 ಜನರನ್ನು "ಮಳೆ"ಯಲ್ಲಿ ತೋಯಿಸಿದ ಮಹಾನಭಾವರು. ಕನ್ನಡ ತಂಡದೊಂದಿಗೆ ಉಳಿದ ಭಾಷೆಗಳ ಸಹದ್ಯೋಗಿಗಳಿಗೆ ಅಪ್ಪಟ ಕನ್ನಡ ದೇಶೀಯ ಚಿತ್ರವನ್ನು ತೋರಿಸಿದ ಸಾರಥಿ ಅವರಿಗ ನೂರು ಸಲಾಂ.

ಬಹುಶಃ ಕ್ಯಾಸಿನೋ ಚಿತ್ರ ಮಂದಿರದವರು ಕೂಡಾ ಇಷ್ಟೊಂದು ಜನರು ಕನ್ನಡ ಚಿತ್ರ ನೋಡಲು ಬರುತ್ತಾರೆಂದು ನಿರೀಕ್ಷಿಸಿರಲಿಕ್ಕಿಲ್ಲ. ಯಾಕಂದೆರ ಭಾನುವಾರದ ಮಧ್ಯಾಹ್ನ ಪ್ರದರ್ಶನದ ಟೀಕೆಟ್‌ಗಳು ಒಂದು ದಿನದ ಹಿಂದೆಯೇ ಪೂರ್ಣವಾಗಿ ಬುಕ್‌ ಆಗಿದ್ದವು.
****
ಸರಿ, ನಾವೆಲ್ಲರೂ "ಮುಂಗಾರ ಮಳೆ"ಯಲ್ಲಿ ತೋಯಿಸಿಕೊಳ್ಳಲು ಚಿತ್ರಮಂದಿರದೊಳಗೆ ಹೊದೇವು. ಅಲ್ಲಿಯದು ಬೇರೆಯೇ ಅನುಭವ. ಪಕ್ಕಾ ತಮಿಳು ಚಿತ್ರಗಳ ಮಧ್ಯೆ ಅಪ್ಪಟ ಕನ್ನಡ ಚಿತ್ರವನ್ನು ನೋಡುತ್ತಿರುವುದರಿಂದ ಏನೊ ಒಂಥರಾ... ಸಂತೋಷ, ಅನುಭವ ಉಂಟಾಗುತ್ತಿತ್ತು.

ಚಿತ್ರ ನೋಡ್ತಾ ನೋಡ್ತಾ.. ನಾನು ನನ್ನ ಸುತ್ತ ಕಣ್ ಹಾಯ್ಸಿದೆ. ಬಹುಶಃ ಅವರಿಬ್ಬರೂ ಪ್ರೇಮಿಗಳಿರಬೇಕು. ಆಕೆ ಕನ್ನಡತಿ, ಆತ ತಮಿಳು ಹುಡುಗ. ಇಷ್ಟು ಕರೆಕ್ಟ್ ಆಗಿ ಹೇಗೆ ಹೇಳುತ್ತಿದ್ದೇನೆ ಎಂದು ಹುಬ್ಬೇರಿಸಬೇಡಿ. ಯಾಕಂದರೆ ಆಕೆ ಮುಂಗಾರಿನ ಪಂಚಿಂಗ್ ಸಂಭಾಷಣೆಯನ್ನು ತಮಿಳನಲ್ಲಿ ಭಾಷಾಂತರಿಸಿ ಆತನಿಗೆ ಹೇಳುತ್ತಿದ್ದಳು. ಆಗ ಆತ ನಗುತ್ತಿದ್ದ...! ಇದನ್ನು ನೋಡಿ ನನಗೊ ಖುಷಿಯಾಯಿತು. ಯಾಕೆಂದರೆ ಕನ್ನಡದ ಚಿತ್ರವನ್ನು ಚೆನ್ನೈಗರು ಕೂಡಾ ಆಸ್ವಾದಿಸುತ್ತಿದ್ದಾರೆ ಅಂತ.

ಇನ್ನೂ ಚಿತ್ರದಲ್ಲಿ ತೋರಿಸಲಾದ ಜೋಗದ ಸೀನ್ ಇದೆಯಲ್ಲಾ... ಅದು ತುಂಬಾ ಮೋಡಿ ಮಾಡಿ ಬಿಟ್ಟಿದೆ ಇಲ್ಲಿನ ಜನಕ್ಕೆ. ತಮಿಳು ಸ್ಟಾರ್ ಡೈರಕ್ಟರ್ ಶಂಕರ್ ಕೂಡಾ ಇಂಥ ಜಲಪಾತವನ್ನು ತನ್ನ ಚಿತ್ರದಲ್ಲಿ ಈ ರೀತಿ ಸೆರೆ ಹಿಡಿಯಲು ಸಾಧ್ಯವಿಲ್ಲ ಎಂಬ ಮಾತು ಸಿನೆಮಾ ನೋಡಲು ಆಗಮಿಸಿದ್ದ ಚೆನ್ನೈನ ತಮಿಳರ ಮಧ್ಯೆ ಕೇಳಿ ಬರುತ್ತಿತ್ತು. ಅಷ್ಟೊಂದು ಅದ್ಭುತ.. ಅತ್ಯದ್ಭುತ ಜೋಗದ ಸಿರಿ.. ಮಾಡಿದೆ ಮೋಡಿ ಈ ಪರಿ.

ಬಾಲ್ಕನಿಯಲ್ಲಂತೂ ಕನ್ನಡಿಗರ ಉತ್ಸಾಹ ಹೇಳ ತೀರದು. "ಒಂದೆ ಒಂದು ಸಾರಿ ಕಣ್ಮಂದೆ ಬಾರೆ.., ಅನಿಸುತಿದೆ ಯಾಕೋ ಇಂದು.... ಹಾಡುಗಳಿಗೆ ಎಲ್ಲರೂ ಕೋರಸ್ ಹಾಡುತ್ತಿದ್ದರು. ಅದು ಎಂಧವರಿಗೂ ಅಭಿಮಾನವನ್ನುಂಟು ಮಾಡುವು ಸನ್ನಿವೇಶ ಆಗಿತ್ತು.
****
ಕನ್ನಡದ ಗೆಳೆಯರಲ್ಲ ತಮ್ಮ ತಮ್ಮ ತಮಿಳು ಗೆಳೆಯರನ್ನು ಚಿತ್ರಕ್ಕೆ ಆಹ್ವಾನಿಸಿ ತೋರಿಸುತ್ತಿದ್ದಾರೆ. ಆನಂದ ಪಡುತ್ತಿದ್ದಾರೆ. ಚೆನ್ನೈನ ಕೆಲವು ಪ್ರಮುಖ ಬೀದಿಗಳಲ್ಲಿ ಮುಂಗಾರು ಮಳೆ ಪೋಸ್ಟರ್ ಕಾಣಿಸಿಕೊಂಡಿವೆ. ಬಸ್‌ನಲ್ಲಿ, ಶೇರ್ ಆಟೊದಲ್ಲಿ ಹೋಗುವಾಗ ಆ ಪೋಸ್ಟರ್ ಕಣ್ಣಿಗೆ ಬಿದ್ದರೆ ಎದೆಯಲ್ಲಿ ಏನೊ ಹಾಗೇ ಸುಮ್ಮನೆ...!

"ಮುಂಗಾರು ಮಳೆ" ನೋಡಿಕೊಂಡು ಶೇರ್ ಆಟೊದಲ್ಲಿ ರೂಮ್ ದಾರಿ ಹಿಡಿದಾಗ, ಹೊರಗೆ ಸಣ್ಣಗೆ ತುಂತುರು ಮಳೆ.. ಆಗ ನನ್ನ ಗೆಳೆಯು ಗುಣಗುತ್ತಿದ್ದ ಹೀಗೆ, "ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ..."

ಶನಿವಾರ, ಜುಲೈ 28, 2007

ಒಂದೇ ಪ್ಯಾರಾದಲ್ಲಿ ಕಥೆ


ನಾನು, ಅವನು ಮತ್ತು ಅವಳು

ನಾನು, ಅವನು ಮತ್ತು ಅವಳು. ಅವಳಿಗೆ ಅವನ ಮೇಲೆ ಪ್ರೀತಿ; ಅವನಿಗೂ ಇನ್ನಾರೋ ಮೇಲೆ ಪ್ರೇಮ. ನನಗೆ ಅವಳ ಮೇಲೆ ಒಲವು. ಇದನ್ನು ತಿಳಿದ ಅವನು ನನ್ನೊಂದಗಿನ ಸ್ನೇಹ ಕಡಿದುಕೊಂಡ. ಅವಳ ಪ್ರೀತಿ ನನ್ನಡೆಗೆ ತಿರುಗಿದ್ದು ಬೇಸಿಗೆಯ ಬಿರು ಮಳೆಯಂತೆ ಮಾತ್ರ. ಆ ಮೇಲೆ ಅವಳು ಸ್ಥಿತ ಪ್ರಜ್ಞ. ನಾನು ಈಗ ಹುಚ್ಚಾಸ್ಪತ್ರೆಯಲ್ಲಿ.

ಸೋಮವಾರ, ಜೂನ್ 18, 2007

ಸ್ವಗತ

ಮನದ ಮೂಲೆಯಲ್ಲಿ
ಬಯಕೆಗಳು ಪವಡಿಸುತ್ತಿವೆ.
ಮರಳುಗಾಡಿನಂತಿರುವ ಮನದಲಿ
ಓಯಸಿಸ್‍ಗಳಾಗಲು,
ಒಮ್ಮೊಮ್ಮೆ ಎಚ್ಚೆತ್ತುಕೊಳ್ಳಲು ಹವಣಿಸುತ್ತಿವೆ.
ಪರಿಸ್ಥಿತಿಯ ಒತ್ತಡಕ್ಕೆ ಮಣಿಯುತ್ತಿವೆ.
ತನ್ನತನವನ್ನು ಉಳಿಸಲು ಆಶ್ರಯಿಸುತ್ತಿವೆ
ಇನ್ನೊಬ್ಬರನ್ನು, ಬೇಡವೆಂದಾಗ ಮತ್ತೊಬ್ಬರನ್ನು
ಬೇಡುತ್ತವೆ, ಮತ್ತೊಮ್ಮೆ ತಿರಸ್ಕರಿಸುತ್ತಿವೆ
ಸ್ವಂತಕ್ಕಾಗಿ, ಸ್ವಹಿತಕ್ಕಾಗಿ
ಆಗಲೂ ಈಗಲೂ ಬಯಕೆಗಳಾಗಿಯೇ
ಉಳಿಯುತ್ತಿವೆ, ಬೆಳೆಯುತ್ತಿವೆ.

-ಮಲ್ಲಿ

ಓ.. ಗುಲಾಬಿಯೇ

ಮುಂಜಾನೆಯ ಮಂಜಿನಲಿ
ಮಿಂದೆದ್ದ ಗುಲಾಬಿಯೇ
ಯಾರಿಗಾಗಿ ಕಾಯುತ್ತಿರುವೇ
ದಿನಕರನ ದಿನಾರಂಭಕ್ಕಾಗಿಯೇ..?

ಮೆಲ್ಲನೆ ಅರಳುತ್ತ
ತಂಪನೆಯ ಕಂಪು ಬೀರುತ್ತ
ನಗೆ ಚೆಲ್ಲುತ್ತಾ
ಯಾರಿಗಾಗಿ ಕಾಯುತ್ತಿರುವೆ..?

ತಂಗಾಳಿಗೆ ಮೈ ಒಡ್ಡುತ್ತಾ
ಮೆಲ್ಲನೆ ಭೂತಾಯಿಗೆ ನಮಿಸುತ್ತಾ
ನನ್ನದೇನೂ ಇಲ್ಲಎಲ್ಲವೂ ನಿನ್ನದೆನ್ನುತ್ತಾ

ನಿರವತೆಯ ಮೌನ ಮುರಿಯತ್ತ
ಕಲ್ಲು ಹೃದಯವನ್ನೂ ಅಲಗಿಸುತ್ತ
ಹೂಗಳ ರಾಣಿಯೇ ಹೇಳು
ಯಾರಿಗಾಗಿ ಈ ಚಿತ್ತ....?

ಕನಸುಗಳಿಗೆ ಆಶೆ ನೀಡಿ
ಮನಸ್ಸುಗಳನ್ನು ಒಂದುಗೂಡಿಸುತ್ತಾ
ಸಂಜೆಯಾಗುತ್ತಲೇ ನೀ ಬಾಡುವೆ
ನಶ್ವರತೆಯನ್ನು ಸೂಚಿಸುತ್ತಾ....


-ಮಲ್ಲಿ

ಮಂಗಳವಾರ, ಮೇ 1, 2007

ಅವ್ವ

ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
ಸ್ಥೈರ್ಯ ತುಂಬಿ ಬೆಳೆಸಿದಾಕೆ,
ಬರೀ ಸೋಲು ಕಂಡುವನಿಗೆ
ಗೆಲುವಿನ ದಾರಿ ತೋರಿಸಿದಾಕೆ.. ಅವ್ವ

ಗೆದ್ದು ಬಂದಾಗ...
ಮರೆಯಲ್ಲಿ ನಿಂತು ಆನಂದಭಾಷ್ಪ ಸುರಿಸಿದಾಕೆ
ಎಂಥ ನೋವಿನಲ್ಲೂ ನಗು ತಂದಾಕೆ
ತಾನುಣ್ಣುವ ತುತ್ತನ್ನು
ತನ್ನ ಕರಳು ಕುಡಿಗೆ ತಿನ್ನಿಸಿದಾಕೆ.. ಅವ್ವ

ಮುನ್ನುಗ್ಗಲು ಕಸವು ತುಂಬಲು
ಹಿಮ್ಮೇಳವಾಗಿ ಶಕ್ತಿ ನೀಡಿದಾಕೆ
ರಾಗ ಕೆಟ್ಟು ಭಾವ ಸೋತಾಗ
ತಾನೇ ತಂಬೂರಿ ಕೈಗಿತ್ತಿಕೊಂಡಾಕೆ.. ಅವ್ವ

ಮಾತು ಕಲಿಸಿ; ನೀತಿ ತಿಳಿಸಿ
ಸದ್ಗತಿಯ ಸಾಧ್ಯತೆ ತೋರಿಸಿದಾಕೆ
ಸಾಧ್ಯ-ಅಸಾಧ್ಯಗಳ ತೋಳಲಾಟದಲ್ಲಿ
ತಾನೇ ನಿಂತು ನೆರವಾದಾಕೆ.. ಅವ್ವ

ಆದರೆ

ಆಕೆಗೆ ನೀ ಕೊಟ್ಟಿದ್ದಾರೂ ಏನು
ಬರೀ ಕಣ್ಣೀರು.. ತೋರಿಸಿದ್ದು
ವೃದ್ಧಾಶ್ರಮ ಬಾಗಿಲು...

-ಮಲ್ಲಿ

ಶುಕ್ರವಾರ, ಏಪ್ರಿಲ್ 13, 2007

ಮಾತನಾಡು...

ಕೆಂಡವಾದ ಭೂ ಒಡಲಿಗೆ
ತಂಪನೆರದ ಬೆಸಿಗೆಯ ಬಿರು ಮಳೆ
ಈ ಬೆಂದ ಹೃದಯಕ್ಕೆ
ಪ್ರೀತಿಯಮಳೆಗರೆಯಬಾರದೇ..?

ಆ ನಿನ್ನ ನಿರವ ಮೌನ,
ನನ್ನಲ್ಲೆಬ್ಬಿಸಿದೆ ನೂರಾರು ಅನುಮಾನ
ನಿನ್ನ ಮಾತಿಗೆ, ಹೂ ನಗೆಗೆ
ನಿರೀಕ್ಷೆ ನೊಗ ಹೊತ್ತು.

ನೊಗಭಾರ ಇಳಿಸಿ
ಭಾರವಾದ ಹೃದಯವನ್ನು
ಬರಸೆಳೆಯಬಾರದೇ..?

ಅಷ್ಟುಕ್ಕೂ ಯಾಕೆ ಮೌನ
ಮೌನ ಮಾತಾಗಿ, ಮೆತ್ತಗಾಗಿ
ಮುತ್ತಿಕ್ಕಬಾರದೇ, ಕಾಯುವ ಹೃದಯವನ್ನ.

ಕನಸು ಕಟ್ಚಿಕೊಂಡು ಅಲೆಮಾರಿಯಾಗಿದ್ದೇನೆ
ಕಾಣದ ದಾರಿಯಲ್ಲಿ ಕಾಲಿಡುತ್ತಿದ್ದೇನೆ
ನಿನ್ನ ಮೌನ ಮಾತಾಗುತ್ತದೆ, ಉಸಿರಾಗುತ್ತದೆ ಎಂದು

ಹೇಳು ಮಾತನಾಡಲಾರೆಯಾ..?

-ಮಲ್ಲಿ