ಭಾನುವಾರ, ಸೆಪ್ಟೆಂಬರ್ 6, 2020

Kangana Ranaut: ಕಂಗನಾ ಅಂದ್ರೆ ಸುಮ್ನೇನಾ?

 

ಯಾವುದೇ ಘಟನೆ ಅಥವಾ ಪ್ರಕರಣದ ವಿರುದ್ಧ ದಿಕ್ಕಿನಲ್ಲಿಯೋಚಿಸಿ, ಅದನ್ನು ಅಷ್ಟೇ ದೊಡ್ಡ ದನಿಯಲ್ಲಿಹೇಳಿ, ಒಪ್ಪಿಸುವ ಛಾತಿ ನಟಿ ಕಂಗನಾಗೆ ಇದೆ.



- ಮಲ್ಲಿಕಾರ್ಜುನ ತಿಪ್ಪಾರ
ಕಂಗನಾ ರಣಾವತ್‌ ಎಂಬ ಫಿಯರ್‌ಲೆಸ್‌ ಮತ್ತು ಫಿಲ್ಟರ್‌ಲೆಸ್‌ ಆಗಿ ಮಾತನಾಡುವ ನಟಿ ಕಳೆದ ಎರಡ್ಮೂರು ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್‌ನ ಭರವಸೆಯ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಜೂನ್‌ 14ರಂದು ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ, ಅದೊಂದು ಕೊಲೆ, ಮಾನಸಿಕ ಒತ್ತಡ ಮತ್ತು ಸ್ವಜನಪಕ್ಷಪಾತಕ್ಕೆ ಬೇಸತ್ತು ಆತ್ಮಹತ್ಯೆ ಎಂಬಂಥ ಕತೆಗಳನ್ನು ನಾವು ದಿನಾ ಟಿವಿಗಳಲ್ಲಿನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ''ಸುಶಾಂತನದ್ದು ಆತ್ಮಹತ್ಯೆಯಲ್ಲ; ಅದೊಂದು ವ್ಯವಸ್ಥಿತ ಕೊಲೆ. ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತವೇ ಇದಕ್ಕೆ ಕಾರಣ,'' ಎಂದು 'ಕ್ವೀನ್‌' ನಟಿ ಕಂಗನಾ ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿಹೇಳಿದಳೋ ಆಗ ಸುಶಾಂತ್‌ ಪ್ರಕರಣ ಮತ್ತೊಂದು ದಿಕ್ಕಿಗೆ ಹೊರಳಿತು. ಅವಳ ಈ ಹೇಳಿಕೆಯನ್ನೇ ಇಟ್ಟುಕೊಂಡು ಕೆಲವು ಟಿವಿ ಚಾನೆಲ್‌ಗಳೂ ದಿನದ 24 ಗಂಟೆ ಅದೇ ಸುದ್ದಿ ಬಿತ್ತರಿಸಿ, ಸುಶಾಂತ್‌ ಕುಟುಂಬದ ಸದಸ್ಯರ ಒತ್ತಡ ಹಾಗೂ ಮುಂಬಯಿ ಮತ್ತು ಬಿಹಾರ ಪೊಲೀಸರ ನಡುವಿನ ಒಟ್ಟಾರೆ ಜಟಾಪಟಿಯ ಪರಿಣಾಮ ಸುಪ್ರೀಂ ಕೋರ್ಟ್‌ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತು.

ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ವಹಿಸುವ ಪ್ರಕ್ರಿಯೆಯಲ್ಲಿಕಂಗನಾ ರಣಾವತಳ ಪಾತ್ರ ಎಷ್ಟಿದೆಯೋ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ, ಅದಕ್ಕೊಂದು ಕಿಡಿ ಹೊತ್ತಿಸುವ ಪಾತ್ರವನ್ನಂತೂ ಕಂಗನಾ ಪರಿಣಾಮಕಾರಿಯಾಗಿ ನಿಭಾಯಿಸಿದರು! ಸುಶಾಂತ ಆತ್ಮಹತ್ಯೆಯ ಪ್ರಕರಣದ ತನಿಖೆಯನ್ನು ಮುಂದುವರಿಸಿದಂತೆ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ಡ್ರಗ್‌ ಜಾಲ ಕೂಡ ಬೆಳಕಿಗೆ ಬಂತು. ಇಲ್ಲೂ, ಕಂಗನಾ ದೊಡ್ಡದಾಗಿ ಕೂಗು ಹಾಕಿದಳು; ಬಾಲಿವುಡ್‌ನಲ್ಲಿದೊಡ್ಡ ಮಾಫಿಯಾ ಇದೆ ಎಂದು ಟಿವಿ ಚಾನೆಲ್‌ನಲ್ಲಿಕೂತು ಅಪ್ಪಣೆ ಹೊರಡಿಸಿದಳು. ಬಾಲಿವುಡ್‌ನಲ್ಲಿಆಳವಾಗಿ ಬೇರು ಬಿಟ್ಟಿರುವ ಸ್ವಜನಪಕ್ಷಪಾತದ ಬಗ್ಗೆ ತನ್ನ ಮಾತಿನ ಬಾಣಗಳನ್ನು ಚಿತ್ರರಂಗದಲ್ಲಿತನಗೆ ಆಗದವರನ್ನು ಕೇಂದ್ರೀಕರಿಸಿ ಗುರಿಯಿಟ್ಟಳು. ಸುಶಾಂತ್‌ ಕುಟುಂಬದ ಪರ ವಕೀಲರೂ ಮಾಧ್ಯಮಗಳ ಮುಂದೆ ಬಂದು ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದರು. ಕಂಗನಾ, ಸುಶಾಂತ್‌ ಹೆಸರಿನಲ್ಲಿತನಗೆ ಆಗದವರ ವಿರುದ್ಧ ಆರೋಪ ಮಾಡುತ್ತಿದ್ದಾಳೆ ಎಂದು ಹೇಳಿದರು.

ಯಾವುದೇ ಘಟನೆ ಅಥವಾ ಪ್ರಕರಣದ ವಿರುದ್ಧ ದಿಕ್ಕಿನಲ್ಲಿಯೋಚಿಸಿ, ಅದನ್ನು ಅಷ್ಟೇ ದೊಡ್ಡ ದನಿಯಲ್ಲಿಹೇಳಿ, ಒಪ್ಪಿಸುವ ಛಾತಿ ಕಂಗನಾಗೆ ಇದೆ. ಇದೇ ಕಾರಣಕ್ಕೆ ಅನೇಕ ವಿವಾದಗಳನ್ನು ಮೈಮೇಲೆ ಹಲವು ಬಾರಿ ಎಳೆದುಕೊಡಿದ್ದಾಳೆ. ಸಹ ನಟಿಯರಾದ ತಾಪ್ಸಿ ಪನ್ನು, ಸ್ವರಾ ಭಾಸ್ಕರ್‌ ವಿರುದ್ಧ ಟೀಕೆಗಳು, ಹೃತಿಕ್‌ ರೋಷನ್‌ ಮತ್ತು ತನ್ನ ನಡುವಿನ ಸಂಬಂಧವನ್ನು ಬೀದಿ ರಂಪ ಮಾಡಿದ್ದು, ಆಮೀರ್‌ ಖಾನ್‌ ಸೇರಿದಂತೆ ದೊಡ್ಡ ನಟರ ಜತೆ ನಟಿಸಲಾರೆ ಎಂಬ ಅಹಮ್ಮಿನ ಹೇಳಿಕೆಗಳು, ತಾನೂಬ್ಬ ಅಪ್ರತಿಮ ರಾಷ್ಟ್ರವಾದಿ ಎಂಬುದನ್ನು ತೋರಿಸಿಕೊಳ್ಳುವುದಕ್ಕಾಗಿ ನ್ಯಾಷನಲ್‌-ಆ್ಯಂಟಿ ನ್ಯಾಷನಲ್‌ ವಿಷಯದಲ್ಲಿಖ್ಯಾತ ನಿರ್ದೇಶಕ ಮಣಿರತ್ನಮ್‌ ಸೇರಿದಂತೆ ಹಲವರ ವಿರುದ್ಧ ಕಿಡಿ ಕಾರಿದ್ದು, ನಾಸಿರುದ್ದೀನ್‌ ಷಾ ವಿರುದ್ಧ ಕೆಂಡ ಕಾರಿದ್ದು, ಲೇಟೆಸ್ಟ್‌ ಆಗಿ, ಮುಂಬಯಿಯನ್ನು ತಾಲಿಬಾನ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ)ಗೆ ಹೋಲಿಕೆ ಮಾಡಿದ್ದು... ಹೀಗೆ ಕಂಗನಾಳ ವಿವಾದ ಸರಮಾಲೆ ಸಾಗುತ್ತಲೇ ಇರುತ್ತದೆ.

ಅಭಿನಯದಲ್ಲಿಮೂರು ರಾಷ್ಟ್ರ ಪ್ರಶಸ್ತಿಗಳು, ನಾಲ್ಕು ಫಿಲ್ಮ್‌ಫೇರ್‌ ಅವಾರ್ಡುಗಳನ್ನು ಗೆದ್ದುಕೊಂಡಿರುವ 33 ವರ್ಷದ ಈ ಕಂಗನಾಗೆ ದೇಶದ ನಾಲ್ಕೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಶ್ರೀ ಕೂಡ ಸಂದಿದೆ. ಕಂಗನಾ ಬಾಲ್ಯದಿಂದಲೂ ಬಂಡಾಯ ಮತ್ತು ಪಟ್ಟುಬಿಡದ ಸ್ವಭಾವವನ್ನು ಬೆಳೆಸಿಕೊಂಡಿದ್ದಾಳೆ. ''ನನ್ನ ತಂದೆ ತಮ್ಮನಿಗೆ ಪ್ಲಾಸ್ಟಿಕ್‌ ಗನ್‌ ಕೊಡಿಸಿದಾಗ ಮಾತ್ರ ನನಗೆ ಒಂದು ಗೊಂಬೆಯನ್ನು ಕೊಡಿಸುತ್ತಿದ್ದರು. ನಾನು ಈ ತಾರತಮ್ಯವನ್ನು ಪ್ರಶ್ನಿಸುತ್ತಿದ್ದೆ,'' ಎಂದು ಕಂಗನಾ ಒಮ್ಮೆ ಹೇಳಿಕೊಂಡಿದ್ದರು.

1987ರ ಮಾರ್ಚ್ 23ರಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಣ್ಣ ಪಟ್ಟಣ ಭಂಬ್ಲಾ(ಈಗ ಸೂರಜ್‌ಪುರ) ರಜಪೂತ ಕುಟುಂಬದಲ್ಲಿಕಂಗನಾ ಜನಿಸಿದಳು. ತಾಯಿ ಆಶಾ ರಣಾವತ್‌ ಸ್ಕೂಲ್‌ ಟೀಚರ್‌ ಮತ್ತು ತಂದೆ ಅಮರದೀಪ್‌ ರಣಾವತ್‌ ಬಿಸಿನೆಸ್‌ಮನ್‌. ಹಿರಿಯ ಸಹೋದರಿ ರಂಗೋಲಿ ಚಾಂಡೆಲ್‌, 2014ರಿಂದ ಕಂಗನಾಗೆ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾಳೆ. ಅಕ್ಷತ್‌ ಎಂಬ ಸಹೋದರನಿದ್ದಾನೆ. ಕಂಗನಾಳ ಮುತ್ತಜ್ಜ ಸರ್ಜು ಸಿಂಗ್‌ ರಣಾವತ್‌ ಶಾಸಕರಾಗಿದ್ದರು ಮತ್ತು ಅಜ್ಜ ಭಾರತೀಯ ಆಡಳಿತ ಸೇವೆಯಲ್ಲಿಅಧಿಕಾರಿಯಾಗಿದ್ದರು. ಭಂಬ್ಲಾದಲ್ಲಿರುವ ಬಂಗ್ಲೆಯಲ್ಲಿವಾಸವಿದ್ದ ಅವಿಭಕ್ತ ಕುಟುಂಬದಲ್ಲಿಕಂಗನಾ ಬಾಲ್ಯವನ್ನು ಕಳೆದರು.

ಚಂಡೀಗಢದ ಡಿಎವಿ ಸ್ಕೂಲ್‌ನಲ್ಲಿಕಂಗನಾ ದಾಖಲಾದಳು. ವಿಜ್ಞಾನ ಆಕೆಯ ಅಧ್ಯಯನದ ಮುಖ್ಯ ವಿಷಯವಾಗಿತ್ತು. ತಂದೆ-ತಾಯಿಗೆ ಕಂಗನಾ ವೈದ್ಯಳಾಗಬೇಕೆಂಬ ಆಸೆ. ಕಂಗನಾ ಕೂಡ ಆ ನಿಟ್ಟಿನಲ್ಲಿಪ್ರಯತ್ನಿಸಿದ್ದಳು. ಆದರೆ, 12ನೇ ಕ್ಲಾಸ್‌ನ ಯುನಿಟ್‌ ಟೆಸ್ಟ್‌ನಲ್ಲಿಕಂಗನಾ ಕೆಮೆಸ್ಟ್ರಿ ಪರೀಕ್ಷೆಯಲ್ಲಿಫೇಲ್‌ ಆದಳು. ಈ ಫಲಿತಾಂಶವು ಕಂಗನಾಗೆ ತನ್ನ ಆದ್ಯತೆ ಕುರಿತು ಮತ್ತೊಮ್ಮೆ ಯೋಚಿಸುವಂತೆ ಮಾಡಿತು. ಹಾಗಾಗಿ, ಆಲ್‌ ಇಂಡಿಯಾ ಪ್ರಿ ಮೆಡಿಕಲ್‌ ಟೆಸ್ಟ್‌ಗೆ ಸಿದ್ಧತೆ ನಡೆಸಿದ್ದರೂ ಪರೀಕ್ಷೆಗೆ ಹಾಜರಾಗಲಿಲ್ಲ. ಸ್ವಾತಂತ್ರ್ಯ ಹಾಗೂ ಅವಕಾಶವನ್ನು ಪಡೆದುಕೊಳ್ಳುವುದಕ್ಕಾಗಿಯೇ ಹಿಮಾಚಲ ಪ್ರದೇಶದಿಂದ ದಿಲ್ಲಿಗೆ ಬಂದಳು. ಆಗ ಕಂಗನಾಗೆ 16 ವರ್ಷ. ವೈದ್ಯಕೀಯ ಶಿಕ್ಷಣ ಪಡೆಯಲು ನಿರಾಕರಿಸಿದ ಪರಿಣಾಮ ತಂದೆ-ತಾಯಿಯೊಂದಿಗೆ ಜಗಳವಾಗಿತ್ತು ಮತ್ತು ಕಂಗನಾಳ ಮುಂದಿನ ಯಾವುದೇ ಕೆಲಸಕ್ಕೆ ತಂದೆಯಿಂದ ಸಹಾಯ ಸಿಗಲಿಲ್ಲ. ದಿಲ್ಲಿಗೆ ಬಂದ ಕಂಗನಾಗೆ, ತನ್ನ ಕರಿಯರ್‌ ಆಯ್ಕೆ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಎಲೈಟ್‌ ಮಾಡೆಲಿಂಗ್‌ ಏಜೆನ್ಸಿ ಕಂಗನಾಳ ಸೌಂದರ್ಯಕ್ಕೆ ಮಾರುಹೋಗಿ ಮಾಡೆಲಿಂಗ್‌ಗೆ ಇಳಿಯುವಂತೆ ಹೇಳಿತು. ಕೆಲವು ಮಾಡೆಲಿಂಗ್‌ ಪ್ರಾಜೆಕ್ಟ್ನಲ್ಲಿಪಾಲ್ಗೊಂಡರೂ ಸೃಜನಶೀಲತೆಗೆ ಅವಕಾಶವಿಲ್ಲಎಂಬುದು ಗೊತ್ತಾಗುತ್ತಿದ್ದಂತೆ ಮಾಡೆಲಿಂಗ್‌ ಕೈ ಬಿಟ್ಟಳು. ಅಭಿನಯದತ್ತ ಗಮನ ಕೇಂದ್ರೀಕರಿಸಿದ ಕಂಗನಾ ಅಸ್ಮಿತಾ ಥಿಯೇಟರ್‌ ಗ್ರೂಪ್‌ ಸೇರಿದರು. ರಂಗ ನಿರ್ದೇಶಕ ಅರವಿಂದ ಗೌರ್‌, ಕಂಗನಾಗೆ ನಟನೆಯ ಪಟ್ಟುಗಳನ್ನು ಹೇಳಿಕೊಟ್ಟರು. ಕನ್ನಡಿಗ ಗಿರೀಶ್‌ ಕಾರ್ನಾಡ ಅವರ 'ತಲೆದಂಡ' ಸೇರಿದಂತೆ ಹಲವು ನಾಟಕಗಳಲ್ಲಿಅಭಿನಯಿಸಿ ಸಾಮರ್ಥ್ಯವನ್ನು ಸಾಬೀತುಪಡಿಸಿದಳು. ಒಮ್ಮೆ ನಾಟಕವೊಂದರ ಪುರುಷ ಪಾತ್ರಧಾರಿಯೊಬ್ಬರು ನಾಪತ್ತೆಯಾದರು. ಆಗ ಕಂಗನಾ ಆ ಪುರುಷನ ಮತ್ತು ತನ್ನ ಮೂಲ ಪಾತ್ರವನ್ನು ನಿರ್ವಹಿಸಿ ಬಹುಮೆಚ್ಚುಗೆಯನ್ನು ಪಡೆದುಕೊಂಡಳು. ಈ ಘಟನೆಯಿಂದ ಪ್ರೇರಣೆ ಪಡೆದು ತನ್ನ ಕರ್ಮಭೂಮಿಯನ್ನು ದಿಲ್ಲಿಯಿಂದ ಮುಂಬಯಿಗೆ ಸ್ಥಳಾಂತರಿಸಿ, ಅಲ್ಲಿಆಶಾ ಚಂದ್ರ ಅವರ ನಾಟಕ ಶಾಲೆಯಲ್ಲಿಮತ್ತೆ ನಾಲ್ಕು ತಿಂಗಳ ತರಬೇತಿ ಪಡೆದುಕೊಂಡಳು.

ಬಾಲಿವುಡ್‌ನ ಸಂಘರ್ಷದ ದಿನಗಳಲ್ಲಿಸಾಕಷ್ಟು ಕಷ್ಟಗಳನ್ನು ಕಂಡಿದ್ದಾಳೆ ಕಂಗನಾ. ಈ ಅವಧಿಯಲ್ಲಿತಂದೆಯ ಆರ್ಥಿಕ ನೆರವನ್ನು ತಿರಸ್ಕರಿಸಿದ ಪರಿಣಾಮ ಕೆಲವೊಮ್ಮೆ ಕೇವಲ ಬ್ರೆಡ್‌ ಮತ್ತು ಉಪ್ಪಿನಕಾಯಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತಂತೆ. ಫಿಲ್ಮ್‌ ಕರಿಯರ್‌ ಆಯ್ಕೆಗೆ ಸಂಬಂಧಿಕರಿಂದಲೂ ವಿರೋಧವಿತ್ತು. 2007ರಲ್ಲಿ'ಲೈಫ್‌ ಇನ್‌ ಮೆಟ್ರೊ' ಚಿತ್ರ ಬಿಡುಗಡೆ ನಂತರ ಕುಟುಂಬ ಹಾಗೂ ಸಂಬಂಧಿಕರು ಕಂಗನಾ ಜೊತೆಗೆ ಸಂವಹನ ಬೆಳೆಸಿದರು.

ಮಹೇಶ್‌ ಭಟ್‌(ಕಂಗನಾ ಇವರ ವಿರುದ್ಧವೇ ಸ್ವಜನಪಕ್ಷಪಾತದ ಆರೋಪ ಮಾಡುತ್ತಿದ್ದಾರೆ) ನಿರ್ಮಾಣ ಮತ್ತು ಅನುರಾಗ್‌ ಬಸು ನಿರ್ದೇಶನದ 'ಗ್ಯಾಂಗಸ್ಟರ್‌' ಚಿತ್ರದ ಮೂಲಕ ಕಂಗನಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 2004ರಿಂದ ಆರಂಭವಾದ ಸಿನಿ ಬದುಕಿನಲ್ಲಿಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ವೋ ಲಮ್ಹೆ(2006), ಲೈಫ್‌ ಇನ್‌ ಮೆಟ್ರೊ(2007), ಫ್ಯಾಷನ್‌(2008) ಚಿತ್ರಗಳ ಪೈಕಿ ಕೊನೆಯ ಎರಡು ಚಿತ್ರಗಳ ಅಭಿನಯಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. 2009ರಲ್ಲಿತೆರೆಕಂಡ ರಾಝ್‌: ದಿ ಮಿಸ್ಟರಿ ಕಂಟಿನ್ಯೂಸ್‌, ತನು ವೆಡ್ಸ್‌ ಮನು(2011), ಕ್ರಿಶ್‌ 3(2023) ಮತ್ತು 2014ರಲ್ಲಿಬಿಡುಗಡೆಯಾದ 'ಕ್ವೀನ್‌' ಚಿತ್ರ ಕಂಗನಾಳಿಗೆ ಬಾಲಿವುಡ್‌ನ ಕ್ವೀನ್‌ ಕೀರ್ತಿಗೆ ಭಾಜನವಾಗುವಂತೆ ಮಾಡಿತು. ಇದರ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಬಂತು. 'ಮಣಿಕರ್ಣಿಕಾ' ಚಿತ್ರದಲ್ಲಿಅಭಿನಯದೊಂದಿಗೆ ನಿರ್ದೇಶನ ಕೂಡ ಮಾಡಿದರು.

ಸಿನಿ ಜಗತ್ತಿನಲ್ಲಿತನ್ನದೇ ಛಾಪು ಮೂಡಿಸಿದ ಬಳಿಕ ಸಾರ್ವಜನಿಕವಾಗಿ ಹಲವು ವಿಷಯಗಳ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯಲಿಲ್ಲ. ಆಕೆಯನ್ನು ಇಷ್ಟಪಡೋರಿಗೆ ಕಂಗನಾ ಕ್ರುಸೆಡರ್‌ ರೀತಿಯಲ್ಲೂ, ದ್ವೇಷಿಸುವವರಿಗೆ ಬಲಪಂಥೀಯ ಪ್ರಪಗಾಂಡಿಸ್ಟ್‌ ರೀತಿಯಲ್ಲೂ, ಉಪೇಕ್ಷಿಸುವವರಿಗೆ ಬಾಲಿವುಡ್‌ನ ಮ್ಯಾಡ್‌ ಕ್ವೀನ್‌ ರೀತಿಯಲ್ಲೂಕಾಣಿಸುತ್ತಾಳೆ. ಆಕೆಯನ್ನು ನೀವು ಇಷ್ಟಪಡಬಹುದು; ಇಷ್ಟಪಡದಿರಬಹುದು. ಆದರೆ, ಖಂಡಿತವಾಗಿಯೂ ಕಡೆಗಣಿಸಲಾರಿರಿ.

ಸೋಮವಾರ, ಆಗಸ್ಟ್ 31, 2020

Abe Shinzo: ಭಾರತದ ಗೆಳೆಯ ಶಿಂಜೊ ಎಂದೆಂದೂ ಜತೆಯಾಗಿರಿ

ಜಪಾನ್‌ನ ಜನಪ್ರಿಯ ಪ್ರಧಾನಿ ಅಬೆ ಶಿಂಜೊ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಭಾರತ ಮತ್ತು ಜಪಾನ್‌ ನಡುವಿನ ಬಾಂಧವ್ಯಕ್ಕೆ ಹೊಸ ರೂಪ ನೀಡಿ, ಉಭಯ ರಾಷ್ಟ್ರಗಳ ಜನರ ಪ್ರೀತಿಗೆ ಶಿಂಜೊ ಪಾತ್ರರಾಗಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ


ಬಹುಶಃ ಭಾರತೀಯರಿಗೆ 'ಅಬೆ ಶಿಂಜೊ' ಹೆಸರು ಗೊತ್ತಿರುವಷ್ಟು ಜಪಾನ್‌ನ ಇನ್ನಾವುದೇ ಪ್ರಧಾನಿ ಅಥವಾ ನಾಯಕರ ಹೆಸರು ಪರಿಚಿತವಿಲ್ಲ. ಭಾರತದೆಡೆಗೆ ಅವರು ಹೊಂದಿರುವ ಕಾಳಜಿ ಮತ್ತು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗೆ ಅವರು ತುಡಿಯುತ್ತಿದ್ದ ರೀತಿಯೇ ಭಾರತೀಯರ ಮೆಚ್ಚುಗೆಗೆ ಕಾರಣವಾಗಿತ್ತು. ವಿಶೇಷವಾಗಿ ಪ್ರಧಾನಿ ಮೋದಿ ಮತ್ತು ಪ್ರಧಾನಿ ಅಬೆ ನಡುವಿನ ಗೆಳೆತನ ಅಂತಾರಾಷ್ಟ್ರೀಯವಾಗಿ ಖ್ಯಾತಿಯಾಗಿತ್ತು.

ಜಪಾನ್‌ನ 'ಆಕ್ರಮಣಕಾರಿ'(Hawkish PM) ಹಾಗೂ ಸುದೀರ್ಘ ಕಾಲದ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ ಅಬೆ ತಮ್ಮ ಹುದ್ದೆಯನ್ನು ತೊರೆಯುತ್ತಿದ್ದಾರೆ. ಕರುಳು ಉರಿಯೂತ ಕಾಯಿಲೆಯಿಂದ ಜರ್ಜರಿತವಾಗಿರುವ ಅಬೆ, ತಮ್ಮ ಕೆಲಸಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲಎಂದು ಗೊತ್ತಾಗುತ್ತಿದ್ದಂತೆ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಈ ಹಿಂದೆಯೂ ಇದೇ ಕಾಯಿಲೆ ಕಾರಣಕ್ಕಾಗಿಯೇ ಅವರು ಪ್ರಧಾನಿ ಪಟ್ಟ ತೊರೆದು, ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಆದರೆ, ಈ ಬಾರಿ ಅವರು ರಾಜಕಾರಣದಿಂದ ವಿಮುಖರಾಗುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಹಾಗಾಗಿ, ಜಪಾನ್‌ ಪ್ರಧಾನಿ ಹುದ್ದೆಗೆ ಎಲ್‌ಡಿಪಿ(ಲಿಬರಲ್‌ ಡೆಮಾಕ್ರಾಟಿಕ್‌ ಪಾರ್ಟಿ)ಯಲ್ಲಿಹುಡುಕಾಟ ಶುರುವಾಗಿದೆ.

''ಅಧಿಕಾರಾವಧಿ ಪೂರ್ಣಗೊಳ್ಳಲು ಒಂದು ವರ್ಷ ಬಾಕಿ ಇರುವಾಗಲೇ ಮತ್ತು ಕೊರೊನಾ ಸಮಸ್ಯೆ ಮಧ್ಯೆಯೇ, ವಿವಿಧ ಕಾರ್ಯನೀತಿಗಳು ಜಾರಿ ಹಂತದಲ್ಲಿರುವಾಗಲೇ ಹುದ್ದೆ ತೊರೆಯುತ್ತಿರುವುದಕ್ಕೆ ನಾನು ಜಪಾನ್‌ ಜನರ ಕ್ಷಮೆ ಕೋರುತ್ತೇನೆ,'' ಎಂದು ಅಬೆ ಶಿಂಜೊ ತಮ್ಮ ನಿರ್ಧಾರ ಪ್ರಕಟಿಸುವಾಗ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕಕ್ಕೆ ಎಲ್ಲದೇಶಗಳು ತಲ್ಲಣಗೊಂಡಿವೆ. ಇದಕ್ಕೆ ಜಪಾನ್‌ ಕೂಡ ಹೊರತಾಗಿಲ್ಲ. ಇಂಥ ಸಂದರ್ಭದಲ್ಲಿಯಾವುದೇ ದೇಶದ ನಾಯಕತ್ವ ಬದಲಾವಣೆ ಜಾಣತನದ ನಿರ್ಧಾರವಲ್ಲ.


ಅಬೆ ಶಿಂಜೊ 'ದಿ ಪ್ರಿನ್ಸ್‌' ಎಂಬ ಖ್ಯಾತಿ ಪಡೆದಿದ್ದಾರೆ. ಜಪಾನಿಗರು ಅವರನ್ನು ಹಾಗೆ ಕರೆಯುತ್ತಾರೆ; ಅವರು ಇದ್ದದ್ದು ಹಾಗೆಯೇ. ಶಿಂಜೊ ಅವರಿಗೆ ರಾಜಕೀಯ ಹೊಸದೇನಲ್ಲ. ಅವರದ್ದು ರಾಜಕೀಯ ಕುಟುಂಬ. ಜಪಾನ್‌ನ ಟೊಕಿಯೊದಲ್ಲಿ1954ರ ಸೆಪ್ಟೆಂಬರ್‌ 12ರಂದು ಅಬೆ ಶಿಂಜೊ ದೇಶದ ಪ್ರಮುಖ ರಾಜಕೀಯ ಮನೆತನದಲ್ಲಿಜನಿಸಿದರು. ಶಿಂಜೊ ಅಜ್ಜ ನೊಬುಸ್ಕೆ ಕಿಶಿ(ತಾಯಿಯ ತಂದೆ) ಅವರು 1957ರಿಂದ 1960ರವರೆಗೂ ಜಪಾನ್‌ನ ಪ್ರಧಾನಿಯಾಗಿದ್ದರು. ಮುತ್ತಜ್ಜ ವಿಸ್ಕೌಂಟ್‌ ಯೋಶಿಮಾಸಾ ಒಶಿಮಾ ಅವರು ಇಂಪಿರೀಯಲ್‌ ಜಪಾನ್‌ ಸೇನೆಯಲ್ಲಿಜನರಲ್‌ ಆಗಿದ್ದರು. ಶಿಂಜೊ ಅವರ ತಂದೆ ಶಿಂಚೊರೊ ಅವರು ಪೆಸಿಫಿಕ್‌ ಯುದ್ಧ ವೇಳೆ ಪೈಲಟ್‌ ಆಗಿದ್ದರು. ಆ ಬಳಿಕ ಜಪಾನ್‌ನ ವಿದೇಶಾಂಗ ಸಚಿವರೂ ಆಗಿದ್ದರು. ಅಂದರೆ, ಅಬೆ ಶಿಂಜೊ ಅವರಿಗೆ ರಾಜಕೀಯ ರಕ್ತಗತವಾಗಿ ಬಂದಿರುವಂಥದ್ದು ಮತ್ತು ಸಹಜವಾಗಿಯೇ ಅವರು ಜಪಾನ್‌ನ ಉನ್ನತ ಸ್ಥಾನಕ್ಕೇರಲು ಇದು ಪ್ರಭಾವ ಬೀರಿದೆ. ಜನರೂ ಶಿಂಜೊ ಕುಟುಂಬದ ಮೇಲೆ ಅಪರಿಮಿತ ವಿಶ್ವಾಸವನ್ನು ಹೊಂದಿದ್ದಾರೆ. ಈಗಲೂ, ಜಪಾನ್‌ನ ಅತ್ಯಂತ ಜನಪ್ರಿಯ ನಾಯಕರೆಂದರೆ ಅಬೆ ಶಿಂಜೊ ಮಾತ್ರ.

ಅಬೆ ಅವರು ಸೈಕಾಯ್‌ ಪ್ರಾಥಮಿಕ ಶಾಲೆ, ಜ್ಯೂನಿಯರ್‌ ಮತ್ತು ಮಾಧ್ಯಮಿಕ ಶಾಲೆಯಲ್ಲಿಶಿಕ್ಷಣ ಪಡೆದರು. 1977ರಲ್ಲಿಸೈಕಾಯ್‌ ವಿಶ್ವವಿದ್ಯಾಲಯದಲ್ಲಿಸಾರ್ವಜನಿಕ ಆಡಳಿತ ಅಧ್ಯಯನ ಮಾಡಿದರು. ಜೊತೆಗೆ ಪಾಲಿಟಿಕಲ್‌ ಸೈನ್ಸ್‌ ವಿಷಯದಲ್ಲಿಪದವಿ ಸಂಪಾದಿಸಿದರು. ಬಳಿಕ ಅಮೆರಿಕಕ್ಕೆ ತೆರಳಿ ಸದರ್ನ್‌ ಕ್ಯಾಲಿಫೋರ್ನಿಯಾದ ಸ್ಕೂಲ್‌ ಆಫ್‌ ಪಬ್ಲಿಕ್‌ ಪಾಲಿಸಿಯಲ್ಲಿಸಾರ್ವಜನಿಕ ನೀತಿಗಳಿಗೆ ಸಂಬಂಧಿಸಿದಂತೆ ಅಧ್ಯಯನ ಕೈಗೊಂಡರು. 1979ರಲ್ಲಿಕೋಬೆ ಸ್ಟೀಲ್‌ನಲ್ಲಿಕೆಲಸ ಆರಂಭಿಸಿದರು. ಶೀಘ್ರವೇ ತಮ್ಮ ಆದ್ಯತೆ ಮತ್ತು ಆಸಕ್ತಿಗಳನ್ನು ಗುರುತಿಸಿಕೊಂಡ ಅಬೆ ಕೆಲಸ ತೊರೆದು 1982ರಲ್ಲಿರಾಜಕಾರಣಕ್ಕೆ ಧುಮುಕಿದರು. ಮೊದಲಿಗೆ ಅವರು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯಕಾರಿ ಸಹಾಯಕರಾಗಿ ಸೇರಿಕೊಂಡರು. ಆ ನಂತರ, ಜಪಾನ್‌ ಪ್ರಮುಖ ರಾಜಕೀಯ ಪಕ್ಷ ಎಲ್‌ಡಿಪಿ ಜನರಲ್‌ ಕೌನ್ಸಿಲ್‌ನ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಮತ್ತು ಎಲ್‌ಡಿಪಿ ಸೆಕ್ರೆಟರಿ-ಜನರಲ್‌ಗೆ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

1991ರಲ್ಲಿತಮ್ಮ ತಂದೆಯ ಮರಣದ ನಂತರ 1993ರಲ್ಲಿಶಿಂಜೊ ಅವರು ಯಮಗುಶಿ ಪ್ರಾಂತ್ಯದ ಮೊದಲ ಜಿಲ್ಲೆಗೆ ಆಯ್ಕೆಯಾದರು. ಎಸ್‌ಎನ್‌ಟಿವಿ ಬಹು ಸದಸ್ಯರ ಜಿಲ್ಲೆಯಲ್ಲಿಚುನಾಯಿತರಾದ ನಾಲ್ಕು ಪ್ರತಿನಿಧಿಗಳಲ್ಲಿಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದರು. 1999ರಲ್ಲಿಅವರು ಸಾಮಾಜಿಕ ವ್ಯವಹಾರಗಳ ವಿಭಾಗದ ನಿರ್ದೇಶಕರಾದರು. 2000-2003ರ ವರೆಗೆ ಯೋಶಿರೆ ಮೋರಿ ಮತ್ತು ಜುನಿಚಿರೆ ಕೊಯಿಜುಮಿ ಸಂಪುಟದಲ್ಲಿಡೆಪ್ಯುಟಿ ಚೀಫ್‌ ಕ್ಯಾಬಿನೆಟ್‌ ಕಾರ್ಯದರ್ಶಿಯಾಗಿದ್ದರು. ನಂತರ ಅವರನ್ನು ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಆ ಬಳಿಕ ಅವರು ತಿರುಗಿ ನೋಡಲಿಲ್ಲ.

2006ರ ಏಪ್ರಿಲ್‌ 23ರಂದು ಅಬೆ ಅವರನ್ನು ಆಡಳಿತ ಪಕ್ಷ ಎಲ್‌ಡಿಪಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅದೇ ವರ್ಷ ಜುಲೈ 14ರಂದು ಜಪಾನ್‌ನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಆಗ ಅವರಿಗೆ 52 ವರ್ಷ. 1941ರ ಬಳಿಕ ಜಪಾನ್‌ನ ಅತ್ಯಂತ ಕಿರಿಯ ಪ್ರಧಾನಿ ಎಂಬ ಗರಿಮೆಗೆ ಪಾತ್ರರಾದರು. ಈಗ ಬಾಧಿಸುತ್ತಿರುವ ಕರುಳು ಊರಿಯೂತ ಕಾಯಿಲೆ 2007ರಲ್ಲೂಅಬೆ ಅವರನ್ನು ತೀವ್ರವಾಗಿ ಬಾಧಿಸಿತು. ಅದೇ ಕಾರಣಕ್ಕಾಗಿ ಅವರು ಆಗಲೂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ಶೀಘ್ರವೇ ಅದರಿಂದ ಗುಣಮುಖರಾಗಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರು ಎಂಟ್ರಿ ಕೊಟ್ಟಿದ್ದರು. 2012ರಲ್ಲಿಮತ್ತೆ ಅಬೆ ಜಪಾನ್‌ನ ಪ್ರಧಾನಿಯಾದರು. 2014 ಮತ್ತು 2017ರಲ್ಲಿಮರು ಆಯ್ಕೆಯಾದರು. ಇಷ್ಟೂ ವರ್ಷಗಳಲ್ಲಿಜಪಾನ್‌ನಲ್ಲಿಅಬೆ ಅತ್ಯಂತ ಜನಪ್ರಿಯ ಪ್ರಧಾನಿಯಾಗಿಯೇ ಗುರುತಿಸಿಕೊಂಡರು. ತಮ್ಮದೇ ವಿದೇಶಾಂಗ ನೀತಿ ಮತ್ತು ಆರ್ಥಿಕ ನೀತಿ(ಅಬೆನಾಮಿಕ್ಸ್‌)ಗಳಿಂದಾಗಿ ಮನೆ ಮಾತಾದರು.

ಅಬೆ ಶಿಂಜೊ ಅವರ ಬಗ್ಗೆ ಮಾತನಾಡುವಾಗ ಭಾರತ ಮತ್ತು ಜಪಾನ್‌ ನಡುವಿನ ಸಂಬಂಧ ವೃದ್ಧಿಯ ಬಗ್ಗೆ ಹೇಳಲೇಬೇಕಾಗುತ್ತದೆ. ಯಾಕೆಂದರೆ, ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಈ ಅವಧಿಯಲ್ಲಿಹೊಸ ಭಾಷ್ಯವನ್ನೇ ಬರೆಯಲಾಗಿದೆ. ಜಪಾನ್‌ ಭಾರತದ ಸಹಜ ಮಿತ್ರ ರಾಷ್ಟ್ರವಾಗಿದ್ದರೂ, ಶಿಂಜೊ ಆಡಳಿತದಲ್ಲಿಈ ಮಿತ್ರತ್ವವನ್ನು ಮತ್ತೊಂದು ಹಂತಕ್ಕೆ ಹೋಯಿತು.

ಪ್ರಧಾನಿಯಾಗಿದ್ದ 2006-07ರ ಅವಧಿಯಲ್ಲಿಅಬೆ ಭಾರತಕ್ಕೆ ಭೇಟಿ ನೀಡಿ, ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದರು. ಎರಡನೇ ಬಾರಿ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದ ಬಳಿಕ ಭಾರತಕ್ಕೆ 2014 ಜನವರಿ, 2015 ಡಿಸೆಂಬರ್‌ ಮತ್ತು 2017ರ ಸೆಪ್ಟೆಂಬರ್‌ನಲ್ಲಿಭೇಟಿ ನೀಡಿದರು. 2014ರ ಗಣರಾಜ್ಯೋತ್ಸವದಲ್ಲಿಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಪಾನ್‌ನ ಮೊದಲ ಪ್ರಧಾನಿ ಎನಿಸಿಕೊಂಡರು. ಪ್ರಧಾನಿಯಾಗಿ ಅವರು, ಯುಪಿಎ ಆಡಳಿತ ಹಾಗೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಆಡಳಿತಾವಧಿಯಲ್ಲಿಭಾರತಕ್ಕೆ ಬಹು ನೆರವಾಗಿದ್ದಾರೆ. ಮೋದಿ ಕಾಲದಲ್ಲಿಈ ಪ್ರಕ್ರಿಯೆ ಇನ್ನಷ್ಟು ಚುರುಕು ಪಡೆದುಕೊಂಡಿತು ಎಂದು ಹೇಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರು, ನೆರೆ ಹೊರೆ ರಾಷ್ಟ್ರಗಳ ಬಳಿಕ ಮೊದಲಿಗೆ ಭೇಟಿ ನೀಡಿದ್ದು ಜಪಾನ್‌ಗೆ. ಅಂದರೆ, ಭಾರತ ಮತ್ತು ಜಪಾನ್‌ ನಡುವಿನ ಬಾಂಧವ್ಯ ಎಷ್ಟರ ಮಟ್ಟಿಗೆ ಮಹತ್ವದ್ದು ಎಂಬುದನ್ನು ಅದು ಸಾಂಕೇತಿಸುತ್ತದೆ. ಈ ವೇಳೆ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಮೋದಿ ಮತ್ತು ಅಬೆ ಒಪ್ಪಿಗೆ ಸೂಚಿಸಿದ್ದರು. ನಾಗರಿಕ ಅಣು ಇಂಧನ, ಕರಾವಳಿ ಭದ್ರತೆ, ಬುಲೆಟ್‌ ಟ್ರೇನ್‌ ಪ್ರಾಜೆಕ್ಟ್ , ಇಂಡೋ-ಪೆಸಿಫಿಕ್‌ ಸ್ಟ್ರ್ಯಾಟಜಿ ಸೇರಿದಂತೆ ಅನೇಕ ಯೋಜನೆಗಳು ಸಾಕಾರಗೊಂಡವು. ಆ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಹಭಾಗಿತ್ವದ ಹೊಸ ಮಜಲಿನತ್ತ ಸಾಗಿದವು. ಇದಕ್ಕೆ ಅಬೆ ಶಿಂಜೊ ಅವರ ಕಾಣಿಕೆ ಅಪಾರ ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಅಬೆ ರಾಜೀನಾಮೆ ನೀಡಿದ್ದರೂ ಮುಂದಿನ ಪ್ರಧಾನಿ ಆಯ್ಕೆಯ ತನಕ, ಅವರ ಬಳಿಯೇ ಆಡಳಿತ ಇರಲಿದೆ. ಜಪಾನ್‌ ಜನಪದೀಯ ಗೀತೆಗಳನ್ನು ಹಾಡುವ ಅಬೆ ಅವರಿಗೆ, ಐಸ್‌ಕ್ರೀಮ್‌ ಮತ್ತು ಕಲ್ಲಂಗಡಿ ಹಣ್ಣು ತುಂಬ ಇಷ್ಟ. ಸೆಪ್ಟೆಂಬರ್‌ 21ಕ್ಕೆ 65 ವರ್ಷ ಪೂರೈಸಲಿರುವ ಅಬೆ ಆದಷ್ಟು ಬೇಗ ಅನಾರೋಗ್ಯದಿಂದ ಗುಣಮುಖರಾಗಿ, ಮತ್ತೆ ಜಪಾನ್‌ನ ರಾಜಕಾರಣದಲ್ಲಿ ಮತ್ತೆ ಮಿಂಚಲಿ.

ಗುರುವಾರ, ಆಗಸ್ಟ್ 27, 2020

What to do if your phone is hacked?: ಫೋನ್‌ ಹ್ಯಾಕ್‌ ಆಗಿದೆಯಾ? ನೀವೇ ಚೆಕ್‌ ಮಾಡಿಕೊಳ್ಳಿ

ಆ್ಯಂಡ್ರಾಯ್ಡ ಫೋನ್‌ಗಳು ಜನಪ್ರಿಯವಾಗುತ್ತಿರುವಂತೆ ಅವು ಹ್ಯಾಕರ್ಸ್‌ ಮತ್ತು ಸೈಬರ್‌ ಕ್ರಿಮಿನಲ್‌ಗಳ ನೆಚ್ಚಿನ ಫೋನ್‌ಗಳೂ ಆಗುತ್ತಿವೆ! ಈ ಖದೀಮರು ಬಳಕೆದಾರರನ್ನು ತಮ್ಮ ಖೆಡ್ಡಾಗೆ ಕೆಡವಿಕೊಳ್ಳಲು ಸದಾ ಕಾಯುತ್ತಿರುತ್ತಾರೆ, ಇದಕ್ಕಾಗಿ ಒಂದಿಲ್ಲಒಂದು ಹೊಸ ದಾರಿಯನ್ನು ಹುಡುಕುತ್ತಿರುತ್ತಾರೆ. ಮೊಬೈಲ್‌ ಬಳಕೆಯ ಜ್ಞಾನ ಕೊಂಚ ಕಡಿಮೆ ಇರುವ ಬಳಕೆದಾರರನ್ನು ಟಾರ್ಗೆಟ್‌ ಮಾಡುವ ಸೈಬರ್‌ ಕ್ರಿಮಿನಲ್‌ಗಳು, ಅನುಮಾನಾಸ್ಪದ ಆ್ಯಪ್‌ ಮತ್ತು ವೈರಸ್‌ ಇರುವ ಯುಆರ್‌ಎಲ್‌ ತೆರೆಯುವಂತೆ ಪ್ರೇರೇಪಿಸುತ್ತಾರೆ. ಜೊತೆಗೆ ಥರ್ಡ್‌ ಪಾರ್ಟಿ ಎಪಿಕೆ ಫೈಲ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡರೆ ಅನಗತ್ಯ ಜಾಹೀರಾತುಗಳು ಕಾಣಿಸಿಕೊಳ್ಳುತ್ತೇವೆ. ನಮ್ಮ ಸ್ಮಾರ್ಟ್‌ ಫೋನ್‌ ಹ್ಯಾಕ್‌ ಆಗಿದೆಯೇ ಇಲ್ಲವೇ ಎಂಬುದನ್ನು ನಾವು ಗುರುತಿಸಿಕೊಳ್ಳಬಹುದು. ರೋಗದ ಗುಣ ಲಕ್ಷ ಣ ಕೇಳಿ ರೋಗ ನಿರ್ಧಾರ ಮಾಡುತ್ತಾರಲ್ಲಹಾಗೆ. ಹಾಗಿದ್ದರೆ, ನಮ್ಮ ಸ್ಮಾರ್ಟ್‌ ಫೋನ್‌ ಹ್ಯಾಕ್‌ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನೀವಿಲ್ಲಿನೆನಪಿಡಬೇಕಾದ ಸಂಗತಿ ಏನೆಂದರೆ, ಹ್ಯಾಕಿಂಗ್‌ ಎಂದರೆ, ಅಪಾಯಕಾರಿ ಆ್ಯಪ್‌ಗಳು, ಮಾಲ್‌ವೇರ್‌, ಸ್ಪೈ ವೇರ್‌, ನಿಮ್ಮ ಬ್ಯಾಂಕಿಂಗ್‌ ಡೇಟಾ ಕದಿಯುವ ಪ್ರೋಗ್ರಾಮ…, ವೈರಸ್‌ ಇರುವ ಲಿಂಕ್‌ ಮತ್ತು ಒಟ್ಟಾರೆ ನಿಮ್ಮ ಸ್ಮಾರ್ಟ್‌ ಫೋನ್‌ಗೆ ಹಾನಿಯನ್ನುಂಟು ಮಾಡುವ ಸಂಗತಿಗಳನ್ನು ಹ್ಯಾಕಿಂಗ್‌ ಎಂದು ಭಾವಿಸಬಹುದು. 

  • ಪಾಪ್‌ ಆ್ಯಡ್‌ ಹೆಚ್ಚಾಗುವುದು
    ನಿಮ್ಮ ಫೋನ್‌ ಸ್ಕ್ರೀನ್‌ ಮೇಲೆ ಇದ್ದಕ್ಕಿದ್ದಂತೆ ಪಾಪ್‌ ಅಪ್‌ ಜಾಹೀರಾತುಗಳು ಕಾಣಿಸಿಕೊಳ್ಳಲಾರಂಭಿಸಿದರೆ, ಅಂಥ ಫೋನ್‌ನಲ್ಲಿ ಮಾಲ್‌ವೇರ್‌ ಸೇರಿಕೊಂಡಿರುವ ಸಾಧ್ಯತೆ ಇರುತ್ತದೆ ಎಂದು ಪರಿಗಣಿಸಬಹುದು. 

  • ಗೊತ್ತಿಲ್ಲದಂತೆ ಅಪರಿಚಿತ ಆ್ಯಪ್‌ ಇನ್‌ಸ್ಟಾಲ್‌
    ಕೆಲವೊಂದು ಸಾರಿ ನಿಮಗೆ ಗೊತ್ತಿಲ್ಲದಂತೆ ಕೆಲವೊಂದು ಆ್ಯಪ್‌ಗಳು ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್‌ ಆಗಿರುತ್ತವೆ. ಅಂಥ ಆ್ಯಪ್‌ಗಳು ಅಪಾಯಕಾರಿಯಾಗಿರುತ್ತವೆ. ಇದು ಕೂಡ ನಿಮ್ಮ ಫೋನ್‌ ಮಾಲ್‌ವೇರ್‌ ದಾಳಿಗೆ ಒಳಗಾಗಿರುವ ಸಂಕೇತವಾಗಿರುತ್ತದೆ. 

  • ಐಕಾನ್‌ ಕಾಣದಂತೆ ಮಾಯ
    ನೀವು ಯಾವುದೇ ಒಂದು ಆ್ಯಪ್‌ ಒಂದನ್ನು  ಡೌನ್ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿಕೊಳ್ಳುತ್ತೀರಿ. ಆದರೆ, ಇನ್‌ಸ್ಟಾಲ್‌ ಆಗುತ್ತಿದ್ದಂತೆ ಆ್ಯಪ್‌ನ ಐಕಾನ್‌ ಸ್ಕ್ರೀನ್‌ ಮೇಲೆ ಕಾಣಿಸದಿದ್ದರೆ ಅಂಥ ಆ್ಯಪ್‌ ಮಾಲ್ವೇರ್‌ಗೆ ಒಳಗಾಗಿರುವ ಸಾಧ್ಯತೆ ಇರುತ್ತದೆ. 

  • ಬ್ಯಾಟರಿ ಖಾಲಿಯಾಗುತ್ತಿದ್ದರೆ...
    ನಿಮ್ಮ ಸ್ಮಾರ್ಟ್‌ ಫೋನ್‌ ಬ್ಯಾಟರಿ ಇದ್ದಕ್ಕಿದ್ದಂತೆ ಖಾಲಿಯಾಗುತ್ತಿದ್ದರೆ ಅಂದರೆ ಶೇ.100ರಷ್ಟಿದ್ದ ಬ್ಯಾಟರಿ ತಕ್ಷ ಣವೇ ಶೇ.10ಕ್ಕೆ ಇಳಿಯುತ್ತಿದ್ದರೆ ಅಂಥ ಫೋನ್‌ ಮಾಲ್‌ವೇರ್‌ ದಾಳಿಗೆ ಒಳಗಾಗಿದೆ ಎಂದು ಭಾವಿಸಬೇಕು.

  • ಅಂತಾರಾಷ್ಟ್ರೀಯ ಕರೆಗಳು, ಮಿಸ್ಡ್‌ ಕಾಲ್‌ಗಳು
    ಒಂದೊಮ್ಮೆ  ನಿಮಗೆ ಮೇಲಿಂದ ಮೇಲೆ ಅಂತಾರಾಷ್ಟ್ರೀಯ ಕರೆಗಳು ಬರುತ್ತಿದ್ದರೆ, ಮಿಸ್ಡ್‌ ಕಾಲ್‌ಗಳಾಗುತ್ತಿದ್ದರೆ  ನಿಮ್ಮ ಫೋನ್‌ ಅನ್ನು ಹ್ಯಾಕ್‌ ಮಾಡಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ನಿಮ್ಮ ಫೋನ್‌ ಅನ್ನು ಪರೀಕ್ಷಿಸಿಕೊಳ್ಳುವುದು ಬೆಸ್ಟ್‌.

  • ಡೇಟಾ ಖಾಲಿಯಾಗುತ್ತಿದ್ದರೆ....
    ನೀವು ನಿಯಂತ್ರಿತ ಡೇಟಾ ಪ್ಯಾಕ್‌ ಹಾಕಿಸಿಕೊಂಡಿರುತ್ತೀರಿ. ಆದರೂ ಡೇಟಾ ಖಾಲಿಯಾಗುತ್ತಿದ್ದರೆ ಅಂದು ಚಿಂತೆಯ ವಿಷಯ ಖಂಡಿತ  ಹೌದು. ಯಾಕೆಂದರೆ, ನಿಮ್ಮ ಫೋನ್‌ ವೈರಸ್‌ ದಾಳಿಗೊಳಗಾಗಿರುವ ಸಾಧ್ಯತೆ ಇರುತ್ತದೆ. 

  • ಆ್ಯಪ್‌ ಕ್ರ್ಯಾಶ್‌, ಅಪ್ಡೇಟ್‌ ಆಗದಿರುವುದು
    ಒಂದು ವೇಳೆ ಆ್ಯಪ್‌ಗಳು ಪದೇ ಪದೇ ಕ್ರ್ಯಾಶ್‌ ಆಗುತ್ತಿದ್ದರೆ ಮತ್ತು ಅಪ್ಡೇಟ್‌ ಮಾಡಲು ಸಾಧ್ಯವಾಗುತ್ತಿಲ್ಲವಾದರೆ ಮಾಲ್‌ವೇರ್‌ಇಫೆಕ್ಟ್ ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.

  • ನಿಧಾನ ಪ್ರದರ್ಶನ
    ಚೆನ್ನಾಗಿಯೇ ಇರುವ ಸ್ಮಾರ್ಟ್‌ ಫೋನ್‌ ನಿಧಾನವಾಗಿ ಪ್ರದರ್ಶನ ತೋರಿಸಲಾರಂಭಿಸಿದರೆ ಖಂಡಿತವಾಗಿಯೂ ಅಪಾಯದ ಮುನ್ಸೂಚನೆಯಾಗಿರುತ್ತದೆ.  ಹಾಗಾಗಿ, ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.


  1. ಕಾಲ್‌ ವಾರ್ನಿಂಗ್‌, ಹುಷಾರಾಗಿರಿ!

ಬಳಕೆದಾರ ವೈಯಕ್ತಿಕ ಮಾಹಿತಿಯನ್ನು ಕದಿಯುವುದಕ್ಕಾಗಿ ಕೆಲವು ನಕಲಿ ಕರೆಗಳು ಬರುತ್ತಿದ್ದು ಈ ಬಗ್ಗೆ ಎಚ್ಚರ ವಹಿಸುವಂತೆ ಸರಕಾರವೇ ಎಚ್ಚರಿಸಿದೆ. ಸೈಬರ್‌ ಖದೀಮರು ಬಳಕೆದಾರರಿಗೆ ಕರೆ ಮಾಡಿ, ಬ್ಯಾಂಕಿಂಗ್‌ ಮಾಹಿತಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ನಿಮ್ಮಿಂದ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವುದು ಸೂಕ್ತ. ಅಂಥ ಕರೆಗಳನ್ನು ಗುರುತಿಸುವುದು ಹೇಗೆ?

  •  ಸಾಮಾನ್ಯವಾಗಿ ಈ ರೀತಿಯ ಕರೆಗಳ ನಂಬರ್‌ +92ನಿಂದ ಆರಂಭವಾಗಿರುತ್ತವೆ.
  • ಇಂಥ ಕರೆಗಳು ಸಾಮಾನ್ಯ­ ವಾಗಿ ಧ್ವನಿ ಕರೆಗಳು ಇಲ್ಲವೇ ವಾಟ್ಸ್‌ ಆ್ಯಪ್‌ ಕರೆಗಳಾಗಿರುತ್ತವೆ.
  • ಬ್ಯಾಂಕ್‌ ಖಾತೆ ನಂಬರ್‌ ಅಥವಾ ಡೆಬಿಟ್‌ ಕಾರ್ಡ್‌ ಮಾಹಿತಿ ಪಡೆಯುವುದೇ ಉದ್ದೇಶವಾಗಿರುತ್ತದೆ.
  • ನಕಲಿ ಲಾಟರಿ, ಲಕ್ಕಿ ಡ್ರಾ ದೊರೆತಿದೆ ಎಂಬ ಆಮಿಷ ಒಡ್ಡುವ ಕರೆಗಳಾಗಿರುತ್ತವೆ. 
  • ಖದೀಮರು ತಾವು ಅಧಿಧಿಕೃತ ಸಂಸ್ಥೆಯಿಂದಲೇ ಕರೆ ಮಾಡುತ್ತಿರುವುದಾಗಿ ನಂಬಿಸುತ್ತಾರೆ.
  • ಕೆಲವೊಮ್ಮೆ ಸೈಬರ್‌ ಕ್ರಿಮಿನಲ್‌ಗಳು ನಿಮಗೆ ಕ್ಯೂಆರ್‌ ಕೋಡ್‌ ಅಥವಾ ಬಾರ್‌ ಕೋಡ್‌ ಸಂದೇಶಗಳನ್ನು ಕಳುಹಿಸುತ್ತಾರೆ. ಅಂಥ ಕ್ಯೂಆರ್‌ ಕೋಡ್‌ಗಳನ್ನು  ಎಂದಿಗೂ ಸ್ಕ್ಯಾ‌ನ್‌ ಮಾಡಲು ಹೋಗಬೇಡಿ.
  • ಖದೀಮರು +01 ಆರಂಭವಾಗುವ ನಂಬರ್‌ನಿಂದಲೂ ಕರೆಗಳ ಬರಬಹುದು ಹುಷಾರಾಗಿರಿ.


    (ಈ ಲೇಖನ ವಿಜಯ ಕರ್ನಾಟಕದ 2020ರ ಆಗಸ್ಟ್ 26ರ ಸಂಚಿಕೆಯಲ್ಲಿ ಪ್ರಕಟಾಗಿದೆ)