ಸೋಮವಾರ, ಮಾರ್ಚ್ 11, 2019

ನಿಮಗೆ ಕಿಡಲ್ ಗೊತ್ತಾ?, ಮಕ್ಕಳಿಗೋಸ್ಕರವೇ ಇರುವ ಸರ್ಚ್‌ ಎಂಜಿನ್‌

ಗೂಗಲ್‌ ಸರ್ಚ್‌ ಎಂಜಿನ್‌ ಜಗತ್ತಿನ ಎಲ್ಲ ಮಾಹಿತಿಯನ್ನು ಕ್ಷ ಣ ಮಾತ್ರದಲ್ಲಿ ನಿಮ್ಮ ಮುಂದೆ ಹರವಿ ಇಡುತ್ತದೆ. ಅದರಲ್ಲಿ ಬೇಕಾದದ್ದು, ಬೇಡವಾದದ್ದೂ ಎಲ್ಲವೂ ಇರುತ್ತದೆ. ನಮ್ಮ ಆದ್ಯತೆಗನುಗುಣವಾಗಿ ನಾವೇ ಹೆಕ್ಕಿಕೊಳ್ಳಬೇಕಷ್ಟೆ. ಆದರೆ, ಮಕ್ಕಳ ವಿಷಯಕ್ಕೆ ಬಂದಾಗ ನಾವು ಬಹಳಷ್ಟು ಹುಷಾರ್‌ ಆಗಿರಬೇಕಾಗುತ್ತದೆ. ಎಲ್ಲವನ್ನೂ ಮುಚ್ಚು ಮರೆಯಿಲ್ಲದೇ ನೀಡುವ ಗೂಗಲ್‌ ಸರ್ಚ್‌ ಎಂಜಿನ್‌ ಬಳಕೆಯನ್ನು ನಿಧಾನಗೊಳಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೋಸ್ಕರವೇ 'ಕಿಡಲ್‌ ಸರ್ಚ್‌ ಎಂಜಿನ್‌' ಇದೆ. ಅದನ್ನು ಬಳಸಲು ಮಕ್ಕಳಿಗೆ ಪ್ರೇರೇಪಿಸಬೇಕು. 


- ಮಲ್ಲಿಕಾರ್ಜುನ ತಿಪ್ಪಾರ 
ಈ ಇಂಟರ್ನೆಟ್‌ ಯುಗದಲ್ಲಿ ಎಲ್ಲವೂ ಮುಕ್ತ ಮುಕ್ತ. ಯಾವುದೇ ಮುಚ್ಚು ಮರೆಯಿಲ್ಲ. ನಮಗೆ ಬೇಕಾದ್ದು, ಬೇಡವಾದದ್ದು ಎಲ್ಲ ಮಾಹಿತಿಯೂ ನಮ್ಮ ಕಣ್ಣೆದುರಿಗೆ ಬಂದು ಬೀಳುತ್ತಿದೆ. ಕೈ ಬೆರಳಲ್ಲಿ ತುದಿಯಲ್ಲೇ ನಲಿದಾಡುತ್ತಿರುತ್ತದೆ. ಆದರೆ, ಹೀಗೆ ಯಾವುದೇ ಸೆನ್ಸಾರ್‌ ಇಲ್ಲದೇ ಬೇಕಾಬಿಟ್ಟಿಯಾಗಿ ದೊರೆಯುವ ಮಾಹಿತಿ ನಮ್ಮ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದು ಯೋಚಿಸಿದರೆ ಆತಂಕವಾಗುತ್ತದೆ. ಹಾಗಾಗಿಯೇ, ಮಕ್ಕಳಿಗೋಸ್ಕರವೇ ಗೂಗಲ್‌ ಕಂಪನಿಯು ಕಿಡಲ್‌ ಸರ್ಚ್‌ ಎಂಜಿನ್‌ ಆರಂಭಿಸಿದೆ. ಆದರೆ, ಬಹಳಷ್ಟು ಜನರಿಗೆ ಈ ಬಗ್ಗೆ ಜ್ಞಾನವಿಲ್ಲ. ಸಾಮಾನ್ಯವಾಗಿ ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಯಾವುದೇ ಮಿತಿ ಇಲ್ಲ. ಅಲ್ಲಿ ದೊರೆಯುವ ಕಂಟೆಂಟ್‌ ಅನೇಕ ಬಾರಿ ಮಕ್ಕಳಿಗೆ ಬೇಡವಾದದ್ದೇ ಇರುತ್ತದೆ. ಅಂಥದ್ದೆಲ್ಲ ಅವರ ಕಣ್ಣಿಗೆ ಬಿದ್ದರೆ, ಇಲ್ಲವೇ ಅದರ ಗೀಳಿಗೆ ಮಕ್ಕಳು ಅಂಟಿಕೊಂಡು ಬಿಟ್ಟರೆ ಅದರಿಂದಾಗುವ ದುಷ್ಪರಿಣಾಮವನ್ನು ಊಹಿಸುವುದು ಕಷ್ಟ. ಮಕ್ಕಳ ಬೆಳವಣಿಗೆ ಮೇಲೆ ನಕಾರತ್ಮಕ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು. ಶಿಕ್ಷ ಣ ವ್ಯವಸ್ಥೆಯು ಹೆಚ್ಚೆಚ್ಚು ತಂತ್ರಜ್ಞಾನಸ್ನೇಹಿಯಾಗುತ್ತ ಮುಂದುವರಿಯುತ್ತಿರುವುದರಿಂದ ಮಕ್ಕಳ ಹಂತದಲ್ಲೇ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಇಂಟರ್ನೆಟ್‌ ಬಳಕೆ ಅನಿವಾರ್ಯವಾಗಿದೆ. ಶಾಲಾ ಕಾಲೇಜು ಮಕ್ಕಳು ಪ್ರಾಜೆಕ್ಟ್ಗಳನ್ನು ಮಾಡಬೇಕಾಗುತ್ತದೆ. ಅವರು ತಮ್ಮ ಪ್ರಾಜೆಕ್ಟ್ಗಳನ್ನು ಪೂರೈಸಲು ಮತ್ತೆ ಮೊರೆ ಹೋಗುವುದು ಈ ಗೂಗಲ್ಲನ್ನೇ. ಹಾಗಾಗಿ, ಮಕ್ಕಳ ಸೇಫ್‌ ಸರ್ಚ್‌ ಎಂಜಿನ್‌ ಆಗಿ ಕಿಡಲ್‌ ಅನ್ನು ರೂಪಿಸಲಾಗಿದೆ. 

2014ರಲ್ಲಿ ಆರಂಭ 

ಮಕ್ಕಳಿಗೋಸ್ಕರವೇ ಮೀಸಲಾಗಿರುವ ಈ ಡೊಮೈನ್‌ ಅನ್ನು 2014ರಲ್ಲಿ ನೋಂದಣಿ ಮಾಡಲಾಯಿತು. ಕಿಡಲ್‌ ಸರ್ಚ್‌ ಎಂಜಿನ್‌, ಗೂಗಲ್‌ ಕಸ್ಟಮ್‌ ಸರ್ಚ್‌ ಎಂಜಿನ್‌ ವಿಂಡೋ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಬಳಕೆದಾರರು ತಮಗೆ ಬೇಕಿದ್ದ ಮಾಹಿತಿ ಬಗ್ಗೆ ಕೀ ವರ್ಡ್‌ ಹಾಕಿದಾಗ, ಸರ್ಚ್‌ ರಿಸಲ್ಟ್‌ಗಳನ್ನು ತೋರಿಸುತ್ತದೆ. ಮೊದಲ ಮೂರು ರಿಸಲ್ಟ್‌ಗಳು ಸುರಕ್ಷಿತವಾಗಿದ್ದು ಮತ್ತು ಮಕ್ಕಳಿಗೋಸ್ಕರವೇ ಇರುವ ಮಾಹಿತಿಯಾಗಿರುತ್ತದೆ. ಕಿಡಲ್‌ ಎಡಿಟರ್‌ಗಳಿಂದ ದೃಢೀಕರಣಗೊಂಡಿರುತ್ತದೆÜ. ಮುಂದಿನ ನಾಲ್ಕು ಪೇಜ್‌ಗಳ ಬಗ್ಗೆ ಮಕ್ಕಳಿಗೋಸ್ಕರವೇ ಎಂಬ ಕಡ್ಡಾಯವಿರುವುದಿಲ್ಲ ಬದಲು ಮಕ್ಕಳ ಸ್ನೇಹಿಯಾಗಿರುತ್ತವೆ. 8 ಮತ್ತು ಅದರಿಂದಾಚೆಯ ಎಲ್ಲ ರಿಸಲ್ಟ್‌ಗಳು ವಯಸ್ಕರಿಗೆ ಅರ್ಥವಾಗುವಂಥವುಗಳಾಗಿರುತ್ತವೆ. ಮಕ್ಕಳು ಇವುಗಳನ್ನು ಅರಿತು ಮಾಡಿಕೊಳ್ಳುವುದು ಕಷ್ಟ. ಹೀಗೆ ಕಾಣಿಸಿಕೊಳ್ಳುವ ಎಲ್ಲ ರಿಸಲ್ಟ್‌ಗಳು ಗೂಗಲ್‌ನ ಸೇಫ್‌ಸರ್ಚ್‌ ಮೂಲಕ ಜರಡಿಗೊಳಗಾಗಿರುತ್ತವೆ. ಒಂದೊಮ್ಮೆ ಬಳಕೆದಾರರು ಕೆಟ್ಟ ಪದಗಳನ್ನು ಸರ್ಚ್‌ ಮಾಡಿದರೂ ಅದರ ರಿಸಲ್ಟ್‌ ದೊರೆಯುವುದಿಲ್ಲ. ಮತ್ತೊಮ್ಮೆ ಪ್ರಯತ್ನಿಸಿ ಎಂಬ ಸಂದೇಶ ಡಿಸ್‌ಪ್ಲೇ ಆಗುತ್ತದೆ. 

ಕೆಪಿಡಿಯಾ 

ಸರ್ಚ್‌ ಎಂಜಿನ್‌ ಒದಗಿಸುವ ಆನ್‌ಲೈನ್‌ ವಿಶ್ವಕೋಶವನ್ನು ಕಿಡಲ್‌ ವಿಶ್ವಕೋಶ(ಕೆಪಿಡಿಯಾ) ಎಂದು ಕರೆಯಲಾಗುತ್ತದೆ. ಅದರಲ್ಲಿ 700,000ಕ್ಕೂ ಹೆಚ್ಚು ಆರ್ಟಿಕಲ್‌ಗಳಿವೆ. ಮಕ್ಕಳಿಗಾಗಿಯೇ ಮರುಸೃಷ್ಟಿಸಲಾದ ವಿಕಿಪಿಡಿಯಾ ಲೇಖನಗಳನ್ನು ಇದು ಒಳಗೊಂಡಿರುತ್ತದೆ. 

ಕೆಪಿಡಿಯಾ

ಗೇ, ಲೆಸ್ಬಿಯನ್‌, ಸೆಕ್ಸ್‌ ಎಜುಕೇಷನ್‌ನಂಥ ಶಬ್ದಗಳನ್ನು ನಿಷೇಧಿಸಿದ್ದರಿಂದ 2016ರಲ್ಲಿ ಕಿಡಲ್‌ ಭಾರೀ ಟಿಕೆಯನ್ನು ಎದುರಿಸಬೇಕಾಯಿತು. ಜತೆಗೆ ಟ್ರಾನ್ಸ್‌ಜೆಂಡರ್‌, ಬೈಸೆಕ್ಸುವಲ್‌ ಪದಗಳನ್ನು ಬ್ಲಾಕ್‌ ಮಾಡಲಾಗಿತ್ತು. ಆದರೆ, ವಿರೋಧ ಹೆಚ್ಚಾಗುತ್ತಿದ್ದಂತೆ ಈ ಪದಗಳನ್ನು ಅನ್‌ಬ್ಲಾಕ್‌ ಮಾಡುವುದಾಗಿ ಕಿಡಲ್‌ ಪ್ರಕಟಣೆ ನೀಡಿತು. 

ಸುರಕ್ಷಿತ ಸರ್ಚ್‌ 

ಕಿಡಲ್‌ನಲ್ಲಿ ಕಾಣಿಸಿಕೊಳ್ಳುವ ಸರ್ಚ್‌ ರಿಸಲ್ಟ್‌ಗಳು ಫ್ಯಾಮಿಲಿ ಫ್ರೆಂಡ್ಲಿಯಾಗಿರುತ್ತವೆ. ಸೈಟ್‌ಗಳಿಗೆ ಜರಡಿ ಹಿಡಿದು ಮಕ್ಕಳಿಗೆ ಯೋಗ್ಯವಾದ ಸೈಟ್‌ಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. 

ಬೃಹತ್‌ ಥಂಬ್‌ನೇಲ್ಸ್‌ 

ಕಿಡಲ್‌ನ ಬಹುತೇಕ ಸರ್ಚ್‌ ರಿಸಲ್ಟ್‌ಗಳು ಬೃಹತ್‌ ಥಂಬ್‌ನೇಲ್ಸ್‌ಗಳನ್ನು ಹೊಂದಿರುವಂತೆ ವಿನ್ಯಾಸ ಮಾಡಲಾಗಿದೆ. ಇದರಿಂದ ರಿಸಲ್ಟ್‌ಗಳನ್ನು ಸುಲಭವಾಗಿ ಶೋಧಿಸಲು ಮತ್ತು ಅವುಗಳ ನಡುವಿನ ವ್ಯತ್ಯಾಸವನ್ನು ಅರಿಯಲು ಮಕ್ಕಳಿಗೆ ಸಾಧ್ಯವಾಗುತ್ತದೆ. ಜತೆಗೆ ಅಗತ್ಯವಿರುವ ಹೆಚ್ಚು ಸೂಕ್ತವಾದ ರಿಸಲ್ಟ್‌ಗಳ ಮೇಲೆ ಕ್ಲಿಕ್‌ ಮಾಡಲು ಅನುವು ಮಾಡಿಕೊಡುತ್ತದೆ. ಥಂಬ್‌ನೇಲ್ಸ್‌ಗಳು ಚಿತ್ರಿಕೆ ಸುಳಿವುಗಳಾಗಿ ಕಾರ್ಯನಿರ್ವಹಿಸುವುದರಿಂದ ಮಕ್ಕಳಿಗೆ ಬೇಗ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಯಾಕೆಂದರೆ, ದೊಡ್ಡವರಂತೆ ಮಕ್ಕಳಿಗೆ ವೇಗವಾಗಿ ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. 

- ಮಕ್ಕಳಿಗೆ ಓದಲು ಸುಲಭವಾಗುವ ದೃಷ್ಟಿಯಿಂದ ಬೃಹತ್‌ ಏರಿಯಲ್‌ ಫಾಂಟ್‌ಗಳನ್ನು ಕಿಡಲ್‌ ಬಳಸುತ್ತದೆ. ಹಾಗಾಗಿ, ರಿಸಲ್ಟ್‌ಗಳಲ್ಲಿ ಇರುವ ಕಂಟೆಂಟ್‌ ಬೇಗ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 

 ಖಾಸಗಿತನ 
ಕಿಡಲ್‌ ಯಾವುದೇ ರೀತಿಯಲ್ಲಿ ಬಳಕೆದಾರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಪ್ರತಿ 24 ಗಂಟೆಗೊಮ್ಮೆ ಲಾಗ್‌ಗಳನ್ನು ಡಿಲಿಟ್‌ ಮಾಡಲಾಗುತ್ತದೆ. 



ಕಿಡಲ್ ಸರ್ಚ್ ಎಂಜಿನ್ ವೆಬ್ ವಿಳಾಸ- ಕ್ಲಿಕ್ ಮಾಡಿ.
 ​https://www.kiddle.co

ಈ ಲೇಖನವು ವಿಜಯ ಕರ್ನಾಟಕದ 11-2-19ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಇಲ್ಲೂ ಕ್ಲಿಕ್ ಮಾಡಿ

ಭಾನುವಾರ, ಮಾರ್ಚ್ 10, 2019

ಪ್ರಧಾನಿ ಹುದ್ದೆಗೇರಿದ ದಕ್ಷಿಣ ಭಾರತದ ಮೊದಲ ನಾಯಕ ಪಿ ವಿ ನರಹಸಿಂಹ ರಾವ್

ಸ್ವಲ್ಪ ಅವಧಿಗೆ ಅಧಿಕಾರ ವಂಚಿತವಾಗಿದ್ದ ಕಾಂಗ್ರೆಸ್‌ 1991ರ ಚುನಾವಣೆಯ ಮೂಲಕ ಮತ್ತೆ ಆಡಳಿತಕ್ಕೆ ಬಂತಾದರೂ ಈ ಮೊದಲಿದ್ದ ಧಾಡಸಿತನ ಇರಲಿಲ್ಲ. ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ರಾಜನ ಗತ್ತಿನಲ್ಲಿದ್ದ ಕಾಂಗ್ರೆಸ್‌ಗೆ ಇದೀಗ ಮೈತ್ರಿಯ ಆಸರೆ ಬೇಕಿತ್ತು. ಬಹುಶಃ ಈ ಚುನಾವಣೆಯಿಂದಲೇ, ನಿಜಾರ್ಥದ ಮೈತ್ರಿಕೂಟದ ರಾಜಕಾರಣದ ಶೆಕೆ ಆರಂಭವಾಯಿತು ಎನ್ನಬಹುದು. ಈ ಹಿಂದೆಯೂ ಕೂಟಗಳು ರಚನೆಯಾಗಿದ್ದವು. ಆದರೆ, ಅವು ಅನಿವಾರ್ಯತೆಗಳಾಗಿರಲಿಲ್ಲ. ಇನ್ನು ಚುನಾವಣೆಯ ಫಲಿತಾಂಶಕ್ಕೆ ಬಂದರೆ, ಕಾಂಗ್ರೆಸ್‌ 545 ಸ್ಥಾನಗಳ ಪೈಕಿ 244 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು. ಬಿಜೆಪಿ ಇದೇ ಮೊದಲ ಬಾರಿಗೆ ಮೂರಂಕಿ ದಾಟಿ, ಒಟ್ಟು 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್‌ ಶೇ.36.4ರಷ್ಟು ಮತ ಗಳಿಸಿದರೆ, ಬಿಜೆಪಿ ಮತ ಪ್ರಮಾಣ ಶೇ.20ರಷ್ಟಿತ್ತು. ಬಿಜೆಪಿ ನಂತರದ ಸ್ಥಾನದಲ್ಲಿ ಜನತಾದಳ(ನ್ಯಾಷನಲ್‌ ಫ್ರಂಟ್‌) 69, ಎಡಪಕ್ಷ ಗಳು 49 ಕ್ಷೇತ್ರಗಳಲ್ಲಿ ಜಯ ಕಂಡವು. 'ಮಂಡಲ್‌-ಮಂದಿರ' ವಿಷಯಗಳು ಚುನಾವಣಾ ವಸ್ತುಗಳಾದವು. ಜತೆಗೆ ಮತಗಳು ಕೂಡ ಧ್ರುವೀಕರಣಗೊಂಡವು. ವಿಶೇಷ ಎಂದರೆ, ಗಾಂಧಿ ಕುಟುಂಬದ ಹೊರತಾದ ಪ್ರಧಾನಿಯನ್ನು ಕಾಣಲು ಸಾಧ್ಯವಾಯಿತು. ಆಂಧ್ರ ಮೂಲದ ಪಿ.ವಿ.ನರಸಿಂಹ ರಾವ್‌ ಅವರು ಪ್ರಧಾನಿಯಾದರು. ನರಸಿಂಹ ರಾವ್‌ ಅವರ ಆಡಳಿತದಲ್ಲಿ ಎರಡು ಪ್ರಮುಖ ಘಟನೆಗಳು ಸಂಭವಿಸಿದವು. ಮೊದಲನೆಯದಾಗಿ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಉದಾರೀಕರಣಕ್ಕೆ ಮುಕ್ತ ಮಾಡಿದ್ದು. ಎರಡನೆಯದ್ದು, 1992ರ ಡಿಸೆಂಬರ್‌ನಲ್ಲಿ ಸಂಭವಿಸಿದ ಬಾಬರಿ ಮಸೀದಿ ಧ್ವಂಸ ಪ್ರಕರಣ. ಈ ಪೈಕಿ, ಮೊದಲನೆಯದ್ದು ಬೆಳವಣಿಗೆ ದೇಶದ ಆರ್ಥಿಕತೆ ಸದೃಢಗೊಳ್ಳಲು ಕಾರಣವಾಯಿತು. ಎರಡನೆಯ ಘಟನೆಯು ಇನ್ನೂ ತನ್ನ ವಿವಾದದ ಕಿಡಿಯನ್ನು ಹೊತ್ತಿಸಿಕೊಂಡೇ ಇದೆ. ಹಾಗೆಯೇ, ಈ ಬೆಳವಣಿಗೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಮತ್ತಷ್ಟು ಲಾಭ ಮಾಡಿಕೊಟ್ಟಿತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದು ಗಮನಿಸಲೇಬೇಕಾದ ಸಂಗತಿ ಎಂದರೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡು ಶ್ರಿಪೆರಂಬದೂರಿಗೆ ಹೋದಾಗ ಎಲ್‌ಟಿಟಿಇ ಮಾನವ ಬಾಂಬ್‌ ಸ್ಫೋಟಕ್ಕೆ ಬಲಿಯಾದರು. ಇಡೀ ಜಗತ್ತಿನಲ್ಲೇ ಮಾನವ ಬಾಂಬ್‌ ಪ್ರಯೋಗವಾದದ್ದು ಇದೇ ಮೊದಲು.

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.

ಜನಪ್ರಿಯ ರಾಜಕಾರಣದ ಎಐಎಡಿಎಂಕೆ

ದೇಶದ ಪ್ರಬಲ ಪ್ರಾದೇಶಿಕ ಪಕ್ಷ ಗಳ ಪೈಕಿ ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಕೂಡ ಒಂದು. ಸದ್ಯ ತಮಿಳುನಾಡುರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಐಎಡಿಎಂಕೆ, ಪುದುಚೆರಿಯಲ್ಲೂ ತನ್ನ ಪ್ರಭಾವ ಹೊಂದಿದೆ. ತಮಿಳುನಾಡಿನ ಜನಪ್ರಿಯ ನಟ ಮತ್ತು ರಾಜಕಾರಣಿ ಎಂ.ಜಿ.ರಾಮಚಂದ್ರನ್‌ ಅವರು ಈ ಪಕ್ಷ ವನ್ನು ಸ್ಥಾಪಿಸಿದರು. ಡಿಎಂಕೆಯಿಂದಲೇ ರಾಜಕಾರಣ ಆರಂಭಿಸಿದ್ದ ಎಂಜಿಆರ್‌, 1972ರಲ್ಲಿ ಅದರಿಂದ ಹೊರ ಬಂದು ಎಐಎಡಿಎಂಕೆ ಸ್ಥಾಪಿಸಿದರು. 1997ರ ತಮಿಳುನಾಡು ವಿಧಾಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂತು. ಎಂಜಿಆರ್‌ ಮುಖ್ಯಮಂತ್ರಿಯಾದರು. 1987ರವರೆಗೂ ಅಂದರೆ, ತಮ್ಮ ಸಾವಿನವರೆಗೂ ಎಂಜಿಆರ್‌ ಮುಖ್ಯಮಂತ್ರಿಯಾಗಿದ್ದರು. ಅವರ ನಿಧನ ಬಳಿಕ ನಾಯಕತ್ವಕ್ಕೆ ಸಂಬಂಧಿಸಿದಂತೆ ಎಂಜಿಆರ್‌ ಪತ್ನಿ ಜಾನಕಿ ರಾಮಚಂದ್ರನ್‌ ಮತ್ತು ಜಯಲಲಿತಾ ಮಧ್ಯೆ ಸಂಘರ್ಷವೇ ನಡೆಯಿತು. ಜಾನಕಿ ರಾಮಚಂದ್ರನ್‌ ಅವರಿಗೆ 98 ಶಾಸಕರು ಬೆಂಬಲ ನೀಡಿದ್ದರಿಂದ ಕೇವಲ 24 ದಿನಗಳ ಮಟ್ಟಿಗೆ ಅವರು ಸಿಎಂ ಆದರು. ವಿಧಾನಸಭೆ ಅಮಾನತ್ತಿನಲ್ಲಿಡಲಾಯಿತು. ಬಳಿಕ ನಡೆದ ಚುನಾವಣೆಯಲ್ಲಿ ಜಾನಕಿ ಹಾಗೂ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಎರಡೂ ಗುಂಪುಗಳು ಹೀನಾಯವಾಗಿ ಸೋತವು. ಡಿಎಂಕೆ ಅಧಿಕಾರಕ್ಕೆ ಬಂತು. ಈ ಸೋಲಿನ ಬಳಿಕ ಜಯಲಲಿತಾ ನೇತೃತ್ವದಲ್ಲಿ ಎಐಎಡಿಎಂಕೆ ಮತ್ತೆ ಒಂದಾಯಿತು. 1991ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೂಡಿ ವಿಧಾನಸಭೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಜಯಲಲಿತಾ ಮುಖ್ಯಮಂತ್ರಿಯಾದರು. ಇಲ್ಲಿಂದ ಜಯಾ ರಾಜಕಾರಣ ಪರ್ವ ಶುರುವಾಯಿತು. ಮುಂದೆ 1998ರ ಲೋಕಸಭೆ ಚುನಾವಣೆ ಹೊತ್ತಿಗೆ ಜಯಲಲಿತಾ ಬಿಜೆಪಿ, ಎಂಡಿಎಂಕೆ ಜತೆ ಮೈತ್ರಿಕೂಟ ರಚಿಸಿಕೊಂಡರು. ಕೇಂದ್ರದಲ್ಲಿ ವಾಜಪೇಯಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದು ಸರಕಾರ ಪತನಕ್ಕೆ ಕಾರಣರಾದರು. ಜಯಲಲಿತಾ ಅವರು 1991- 1996, 2001, 2002- 2006, 2011- 2014, 2015ಧಿ-2016 ಅವಧಿಯಲ್ಲಿ ಮುಖ್ಯಯಂತ್ರಿಯಾಗಿದ್ದರು. ಎಂಜಿಆರ್‌ ಬಳಿಕ ಪಕ್ಷ ಕ್ಕೆ ಜಯಲಲಿತಾ ಅವರು ಗಟ್ಟಿ ನಾಯಕತ್ವ ಒದಗಿಸಿದ್ದರು. ಆದರೆ, ಜಯಾ ಸಾವಿನ ಬಳಿಕ ಮತ್ತೆ ನಾಯಕತ್ವದ ಕಿತ್ತಾಟ ಶುರವಾಗಿದೆ. ಎಂಜಿಆರ್‌ ಮತ್ತು ಜಯಲಲಿತಾ ಇಬ್ಬರೂ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪ್ರಸಿದ್ಧ ಪಡೆದರು. ಪ್ರಸಕ್ತ ಲೋಕಸಭೆ ಚುನಾವಣೆಯನ್ನು ಎಐಎಡಿಎಂಕೆಯು ಬಿಜೆಪಿ ಜತೆಗೂಡಿ ಎದುರಿಸುತ್ತಿದೆ. 

ಸರಕಾರ ರಚಿಸಿದ ಮೊದಲ ಪ್ರಾದೇಶಿಕ ಪಕ್ಷ ಡಿಎಂಕೆ

ಪ್ರಾದೇಶಿಕ ಪಕ್ಷ ಗಳು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬಹುದು ಎಂಬುದನ್ನು ದ್ರಾವಿಡ್‌ ಮುನ್ನೇತ್ರ ಕಳಗಂ(ಡಿಎಂಕೆ) ತೋರಿಸಿಕೊಟ್ಟಿತ್ತು. ಪ್ರಾದೇಶಿಕ ಪಕ್ಷ ಗಳ ಪೈಕಿ ತುಂಬ ಹಳೆಯದಾದ ಡಿಎಂಕೆ, ನಮ್ಮ ರಾಜ್ಯದ ನೆರೆಯ ತಮಿಳುನಾಡು ಮತ್ತು ಪುದುಚೆರಿಯಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. ತಮಿಳುನಾಡಿನಲ್ಲಿ ಸದ್ಯ ಪ್ರತಿಪಕ್ಷ ಸ್ಥಾನದಲ್ಲಿದೆ. ಈ ಪಕ್ಷ ದ ಜನಪ್ರಿಯ ನಾಯಕರೆಂದರೆ, ಸಿ.ಎನ್‌.ಅಣ್ಣಾದೊರೈ, ಎಂ. ಕರುಣಾನಿಧಿ, ಎಂಜಿಆರ್‌(ಪಕ್ಷ ತೊರೆದು ತಮ್ಮದೇ ಆದ ಎಐಡಿಎಂಕೆ ಸ್ಥಾಪಿಸಿದರು), ಎಂ.ಕೆ.ಸ್ಟಾಲಿನ್‌, ಕನ್ನಿಮೋಳಿ... ಮುಂತಾದವರು. ಕರುಣಾನಿಧಿ ಅವರು ಐದು ಬಾರಿಗೆ ತಮಿಳುನಾಡು ಮುಖ್ಯಂತ್ರಿಯಾಗಿದ್ದರು. ಅಲ್ಲದೆ, 1969ರಿಂದ ಅವರು ತಮ್ಮ ಸಾವಿನ ದಿನವರೆಗೂ ಅಂದರೆ 2018ರ ಅಗಸ್ಟ್‌ 7ರವರೆಗೂ ಡಿಎಂಕೆಯ ನೇತೃತ್ವ ವಹಿಸಿದ್ದರು. ಕಾಂಗ್ರೆಸ್‌ ಹೊರತುಪಡಿಸಿ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ವೊಂದು ಸ್ವಂತ ಸರಕಾರ ರಚಿಸಬಹುದು ಎಂಬುದನ್ನು ಡಿಎಂಕೆಸಾಧಿಸಿ ತೋರಿಸಿತು. ಇದು ಮುಂದೆ ಬಹಳಷ್ಟು ಪ್ರಾದೇಶಿಕ ಪಕ್ಷ ಗಳಿಗೆ ದಾರಿ ಮಾಡಿಕೊಟ್ಟಿತ್ತು. ಡಿಎಂಕೆಯ ಮೂಲ ಜಸ್ಟೀಸ್‌ ಪಾರ್ಟಿಯಲ್ಲಿದೆ. ಕಾಂಗ್ರೆಸ್‌ನಲ್ಲಿದ್ದ ಪೆರಿಯಾರ್‌ ಇ.ವಿ.ರಾಮಸ್ವಾಮಿ ಅವರು ಜಸ್ಟೀಸ್‌ ಪಾರ್ಟಿಯನ್ನು 1935ರಲ್ಲಿ ಸೇರಿದರು. ಬಳಿಕ ದ್ರಾವಿಡರ್‌ ಕಳಗಂ ಸ್ಥಾಪಿಸಿ, ದ್ರಾವಿಡರಿಗೆ ಪ್ರತ್ಯೇಕ ರಾಷ್ಟ್ರ ಬೇಡಿಕೆ ಹಾಗೂ ಹಿಂದಿ ವಿರೋಧಿ ಪ್ರಮುಖ ಅದರ ಪ್ರಮುಖ ನೀತಿಗಳಾಗಿದ್ದವು. ಆದರೆ, ನಂತರದ ದಿನಗಳಲ್ಲಿ ಪ್ರತ್ಯೇಕ ರಾಷ್ಟ್ರ ಹೋರಾಟ ಕೈಬಿಡಲಾಯಿತು. ಈ ಸೈದ್ಧಾಂತಿಕ ವಿಚಾರಧಾರೆಯು ಡಿಎಂಕೆಗೂ ಹರಿದು ಬಂತು. ಆಗ ರಾಮಸ್ವಾಮಿ ಅವರಿಗೆ ಹೆಗಲು ನೀಡಿದ್ದ ಅಣ್ಣಾದೊರೈ ಅವರು ದ್ರಾವಿಡರ್‌ ಕಳಗಂನಿಂದ ಹೊರಬಂದು ಡಿಎಂಕೆ ಸ್ಥಾಪಿಸಿದರು. ನಂತರ ಅಣ್ಣಾದೊರೈ ಜತೆಯಾಗಿ ಹೆಜ್ಜೆ ಹಾಕಿದವರು ಕರುಣಾನಿಧಿ ಅವರು. ಸದ್ಯ ಡಿಎಂಕೆ ನಾಯಕತ್ವವನ್ನು ಅವರ ಪುತ್ರ ಎಂ.ಕೆ. ಸ್ಟಾಲಿನ್‌ ವಹಿಸಿದ್ದಾರೆ. ಪ್ರಾದೇಶಿಕತೆ, ಹಿಂದಿ ಹೇರಿಕೆ ವಿರೋಧಿ ನೀತಿ, ಸಾಮಾಜಿಕ ಪ್ರಜಾಪ್ರಭುತ್ವ ನೀತಿಯನ್ನು ಡಿಎಂಕೆ ಅಳವಡಿಸಿಕೊಂಡಿದೆ. ಜನಪ್ರಿಯ ನಾಯಕ ಎಂಜಿಆರ್‌ ಕೂಡ ಡಿಎಂಕೆ ಭಾರಿ ಬಲ ತುಂಬಿದ್ದರು. ಆದರೆ, ಅವರು ಭಿನ್ನಾಭಿಪ್ರಾಯದಿಂದಾಗಿ ಡಿಎಂಕೆಯಿಂದ ಹೊರ ನಡೆದು, ತಮ್ಮದೇ ಆದ ಎಐಡಿಎಂಕೆ ಸ್ಥಾಪಿಸಿದರು. ಮುಂದೆ ತಮಿಳುನಾಡಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ನಡುವಿನ ಹೋರಾಟವೇ ರಾಜಕಾರಣವಾಯಿತು. ಸದ್ಯ ಡಿಎಂಕೆ ಯುಪಿಎ ಭಾಗವಾಗಿದೆ. 

ಎರಡನೆಯ ಬಾರಿಗೆ ಕಾಂಗ್ರೆಸ್ಸೇತರ ಸರಕಾರ

ಭಾರತೀಯ ರಾಜಕೀಯ ಇತಿಹಾಸದಲ್ಲಿ 1989ರ ಸಾರ್ವತ್ರಿಕ ಚುನಾವಣೆಗೆ ತನ್ನದೇ ಆದ ಮಹತ್ವವಿದೆ. ಎರಡನೇ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬರಲು ಈ ಚುನಾವಣೆಯಿಂದ ಸಾಧ್ಯವಾಯಿತು. ಈ ಹಿಂದಿನ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌, ಈ ಬಾರಿ ಇನ್ನಿಲ್ಲದಂತೆ ನೆಲಕಚ್ಚಿತು. ಬೊಫೋರ್ಸ್‌ ಹಗಹರಣ, ಪಂಜಾಬ್‌ನಲ್ಲಿ ಭಯೋತ್ಪಾದನೆ ಸೇರಿದಂತೆ ಇನ್ನಿತರ ಸಮಸ್ಯೆಗಳು ರಾಜೀವ್‌ ಆಡಳಿತದ ವಿರುದ್ಧ ಅಲೆ ಏಳುವಂತೆ ಮಾಡಿತು. ಇದರ ಪರಿಣಾಮ, ಜನತಾದಳ ವಿಶ್ವನಾಥ ಪ್ರತಾಪ್‌ ಸಿಂಗ್‌ ನೇತೃತ್ವದ ನ್ಯಾಷನಲ್‌ ಫ್ರಂಟ್‌ ಅಧಿಕಾರಕ್ಕೆ ಬಂತು. ಬಿಜೆಪಿ ಮತ್ತು ಎಡಪಕ್ಷ ಗಳು ಬಾಹ್ಯ ಬೆಂಬಲ ನೀಡಿದವು. ಚುನಾವಣೆಯಲ್ಲಿ ಜನತಾದಳ 143 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 197 ಕ್ಷೇತ್ರಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ವಿಶೇಷ ಎಂದರೆ, ಕಾಂಗ್ರೆಸ್‌ ಪಡೆದ ಮತಗಳ ಪ್ರಮಾಣ ಶೇ.39.5ರಷ್ಟಿದ್ದರೆ, ಜನತಾ ದಳ ಮತಪ್ರಮಾಣ ಕೇವಲ 17.8ರಷ್ಟು ಮಾತ್ರ. ಬಿಜೆಪಿ 89, ಎಡಪಕ್ಷ ಗಳು 46 ಸ್ಥಾನಗಳನ್ನು ಗೆದ್ದುಕೊಂಡವು. ಬಿಜೆಪಿಯ ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ಈ ಚುನಾವಣೆಯು ಮೈಲುಗಲ್ಲು ಎಂದು ಹೇಳಬಹುದು. 1984ರ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗೆದ್ದಿದ್ದ ಬಿಜೆಪಿ ಈ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಪಡೆಯಿತು. ನ್ಯಾಷನಲ್‌ ಫ್ರಂಟ್‌ನ ನಾಯಕರಾಗಿದ್ದ ವಿಶ್ವನಾಥ ಪ್ರತಾಪ್‌ ಸಿಂಗ್‌ ಪ್ರಧಾನಿಯಾದರು. ಆದರೆ, ಅವರ ಆಡಳಿತವೇನೂ ಬಹಳ ದಿನಗಳವರೆಗೆ ಬರಲಿಲ್ಲ. ಬಿಜೆಪಿಯ ಎಲ್‌.ಕೆ.ಆಡ್ವಾಣಿ ಅವರು ರಾಮರಥ ಯಾತ್ರೆ ಕೈಗೊಂಡಿದ್ದರು. ಬಿಹಾರದಲ್ಲಿ ಲಾಲು ಪ್ರಸಾದ್‌ ಯಾದವ್‌ ಸರಕಾರ ಆಡ್ವಾಣಿಯನ್ನು ಬಂಧಿಸಿದ್ದರಿಂದ ಬಿಜೆಪಿ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆಯಿತು. ವಿಶ್ವನಾಥ ಪ್ರತಾಪ್‌ ಸಿಂಗ್‌ ಸರಕಾರವು 1990ರ ನವೆಂಬರ್‌ನಲ್ಲಿ ಪತನವಾಯಿತು. ಇದೇ ಸಂದರ್ಭದಲ್ಲಿ ಜನತಾ ದಳದ ಮತ್ತೊಬ್ಬ ನಾಯಕ ಚಂದ್ರಶೇಖರ್‌ ಅವರು ತಮ್ಮೊಂದಿಗೆ 64 ಸದಸ್ಯರನ್ನು ಕರೆದುಕೊಂಡು ದಳದಿಂದ ಹೊರ ಬಂದು ಸಮಾಜವಾದಿ ಜನತಾ ಪಾರ್ಟಿ ಸ್ಥಾಪಿಸಿದರು. ಕಾಂಗ್ರೆಸ್‌ ಬೆಂಬಲದೊಂದಿಗೆ ಚಂದ್ರಶೇಖರ್‌ ಪ್ರಧಾನಿಯಾದರು. ಆದರೆ, ರಾಜೀವ್‌ ಗಾಂಧಿ ವಿರುದ್ಧ ಗೂಢಚರ್ಯ ಮಾಡಲಾಗುತ್ತಿದೆಂದು ಆರೋಪಿಸಿದ ಕಾಂಗ್ರೆಸ್‌ ಬೆಂಬಲ ವಾಪಸ್‌ ಪಡೆಯುವುದರೊಂದಿಗೆ ಮತ್ತೊಂದು ಸಾರ್ವತ್ರಿಕ ಚುನಾವಣೆ ಎದುರಾಯಿತು.

ಶುಕ್ರವಾರ, ಮಾರ್ಚ್ 8, 2019

ಕಾರ್ಗಿಲ್ ಗರ್ಲ್- ಗುಂಜನಾ ಸಕ್ಸೇನಾ

ರಣರಂಗದಲ್ಲಿ ಮಹಿಳೆಯರದ್ದು 'ಸಪೋರ್ಟಿಂಗ್‌ ರೋಲ್‌' ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ವ್ಯಾಖ್ಯಾನ ಬದಲಾಗಿದೆ. ಪುರುಷರಷ್ಟೇ ಸರಿಸಮಾನವಾಗಿ ರಣರಂಗದಲ್ಲಿ ಓಡಾಡಬಲ್ಲ ಧೀರೆ ಗುಂಜನಾ ಸಕ್ಸೇನಾ ಅಂಥ ಉದಾಹರಣೆಗಳಲ್ಲೊಬ್ಬರು. ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆ. ಸೇನಾ ವಲಯ ಹಾಗೂ ಕುಟುಂಬಸ್ಥರು ಗುಂಜನಾ ಅವರನ್ನು 'ಕಾರ್ಗಿಲ್‌ ಗರ್ಲ್‌' ಎಂದು ಪ್ರೀತಿಯಿಂದ ಕರೆಯುತ್ತಾರೆ. ಸೇನೆ ಗುಂಜನಾಗೆ ಹೊಸದಲ್ಲ. ತಂದೆ ಹಾಗೂ ಸಹೋದರರಿಬ್ಬರೂ ಸೇನೆಯಲ್ಲಿ ಅಪ್ರತಿಮ ಸಾಹಸ ಮೆರೆದವರು. ದಿಲ್ಲಿ ವಿವಿಯ ಹಂಸರಾಜ್‌ ಕಾಲೇಜ್‌ನಲ್ಲಿ ಡಿಗ್ರಿ ಪಡೆದ ಬಳಿಕ, ಸೇನೆ ಸೇರುವುದೊಂದೇ ಅವರ ಮುಂದಿದ್ದ ಆಯ್ಕೆ. 1994ರಲ್ಲಿ ಗುಂಜನಾ ಸಕ್ಸೇನಾ, ಶ್ರೀವಿದ್ಯಾ ರಾಜನ್‌ ಸೇರಿದಂತೆ 25 ಮಹಿಳೆಯರ ಮೊದಲ ಪೈಲಟ್‌ ತಂಡವನ್ನು ಭಾರತೀಯ ವಾಯುಪಡೆ ರಚಿಸಿತು. ಹೀಗಿದ್ದರೂ, ಮಹಿಳಾ ತಂಡದ ಸೇವೆ ಸಂಪೂರ್ಣವಾಗಿ ಸೇನೆಗೆ ಲಭ್ಯವಾಗಿದ್ದು 2016ರಲ್ಲಿ. ಆದರೆ, ಗುಂಜನಾ ಮತ್ತು ಶ್ರೀವಿದ್ಯಾ ಅವರ ಸಾಹಸಗಾಥೆ 1999ರ ಕಾರ್ಗಿಲ್‌ ಯುದ್ಧದ ವೇಳೆಯಲ್ಲಿ ಜಗಜ್ಜಾಹೀರಾಯಿತು. ಸೇನೆ ಇನ್ನೂ ಮಹಿಳೆಯರನ್ನು ಯುದ್ಧಭೂಮಿಗೆ ಕಳುಹಿಸಬೇಕೇ ಬೇಡವೇ ಎಂಬ ದ್ವಂದ್ವದಲ್ಲಿದ್ದಾಗಲೇ, ಈ ಮಹಿಳೆಯರಿಬ್ಬರು ಇಡೀ ಯುವತಿಯರಿಗೆ ರೋಲ್‌ ಮಾಡೆಲ್‌ ಆಗುವ ಸಾಹಸ ಮೆರೆದರು. 
ಹಾಗೆ ನೋಡಿದರೆ, ಫ್ಲೈಟ್‌ ಲೆಫ್ಟಿನೆಂಟ್‌ ಗುಂಜನಾ ಮತ್ತು ಶ್ರೀವಿದ್ಯಾ ಅವರು ಫೈಟರ್‌ ಜೆಟ್‌ಗಳ ಹಾರಾಟ ನಡೆಸಿರಲಿಲ್ಲ. ಆದರೆ, ಕಾರ್ಗಿಲ್‌ ಯುದ್ಧ ತುತ್ತತುದಿಯಲ್ಲಿದ್ದಾಗ, ಭಾರತೀಯ ವಾಯುಪಡೆ ತನ್ನೆಲ್ಲ ಪೈಲಟ್‌ಗಳ ಗರಿಷ್ಠ ಸೇವೆಯನ್ನು ಬಳಸಿಕೊಳ್ಳಲು ಮುಂದಾಯಿತು. ಆಗ, ಗುಂಜನಾ ಮತ್ತು ಶ್ರೀವಿದ್ಯಾ ಅವರಿಗೆ ಕರೆ ಬಂತು. ಗಾಯಾಳು ಯೋಧರ ಸ್ಥಳಾಂತರ ಮತ್ತು ಯುದ್ಧಭೂಮಿಯಲ್ಲಿ ಪಾಕಿಸ್ತಾನದ ಸ್ಥಿತಿಯನ್ನು ಗುರುತಿಸಿ ಮಾಹಿತಿ ನೀಡುವ ಟಾಸ್ಕ್‌ ನೀಡಲಾಯಿತು. ಅಚ್ಚರಿಯ ಸಂಗತಿ ಎಂದರೆ, ಗುಂಜನಾ ಮತ್ತು ಶ್ರೀವಿದ್ಯಾ ಹಾರಾಟ ಮಾಡಲಿರುವ ಹೆಲಿಕಾಪ್ಟರ್‌ಗಳು ತುಂಬ ಚಿಕ್ಕವು ಮತ್ತು ಶಸ್ತ್ರರಹಿತವಾಗಿದ್ದವು. ಒಮ್ಮೆ ಇವರು ತಮ್ಮ ಕಾಪ್ಟರ್‌ ಅನ್ನು ಕಾರ್ಗಿಲ್‌ ಏರ್‌ಸ್ಟ್ರಿಪ್‌ನಿಂದ ಟೇಕ್‌ ಆಫ್‌ ಮಾಡುತ್ತಿರುವಾಗಲೇ ಪಾಕಿಸ್ತಾನದ ಕ್ಷಿಪಣಿಯೊಂದು ಇವರತ್ತ ನುಗ್ಗಿ ಬಂತು. ಆಗ ಸ್ವಲ್ಪದರಲ್ಲಿ ಕಾಪ್ಟರ್‌ ಅದರಿಂದ ತಪ್ಪಿಸಿಕೊಂಡಿತು. ಇಂಥ ಸಾವಿನ ಸಮೀಪ ಹೋದ ಅನೇಕ ಅನುಭವವಗಳು ಗುಂಜನಾ ಅವರಿಗೆ ಕಾರ್ಗಿಲ್‌ ಯುದ್ಧದ ವೇಳೆ ಆದವು. ಒಂದೊಮ್ಮೆ ಕಾಪ್ಟರ್‌ ಅಪಘಾತಕ್ಕೀಡಾಗಿ ವೈರಿಗಳ ನೆಲದಲ್ಲಿ ಬಿದ್ದರೆ ನೆರವಿಗೆ ಇರಲಿ ಎಂದು ಗುಂಜನಾ ತಮ್ಮ ಬಳಿ ಐಎನ್‌ಎಸ್‌ಎಎಸ್‌ ರೈಫಲ್‌ ಮತ್ತು ರಿವಾಲ್ವರ್‌ ಇಟ್ಟುಕೊಳ್ಳುತ್ತಿದ್ದರು. ಯುದ್ಧಭೂಮಿಯಲ್ಲಿ ನೇರವಾಗಿ ಭಾಗಿಯಾದ ಮೊದಲ ಮಹಿಳಾ ಪೈಲಟ್‌ಗಳೆಂಬ ಖ್ಯಾತಿ ಅವರಿಗೆ ಅಂಟಿಕೊಂಡಿತು. ಕಾಪ್ಟರ್‌ ಪೈಲಟ್‌ ಆಗಿದ್ದ ಗುಂಜನಾ ಅವರು ಕೇವಲ 7 ವರ್ಷದವರೆಗೆ ಮಾತ್ರ ಸೇವೆ ಸಲ್ಲಿಸಿದರು. ಕಾರ್ಗಿಲ್‌ನಲ್ಲಿ ತೋರಿದ ಅಪ್ರತಿಮ ಸಾಹಸಕ್ಕಾಗಿ ಶೌರ್ಯವೀರ ಪದಕ ನೀಡಲಾಯಿತು. ಎಲ್ಲಕ್ಕಿಂತ ಸಾವಿರಾರು ಯುವತಿಯರಿಗೆ ಸೇನೆ ಸೇರುವ ಸ್ಫೂರ್ತಿಯಾದರು. 

ತೆಲುಗು ಅಸ್ಮಿತೆ ರಾಜಕಾರಣದ ಟಿಡಿಪಿ

ಟಿಡಿಪಿ ಎಂದು ಹೆಚ್ಚು ಪ್ರಚಲಿತವಾಗಿರುವ ತೆಲುಗು ದೇಶಂ ಪಾರ್ಟಿ, ಸಂಸತ್ತಿನಲ್ಲಿ ಪ್ರತಿಪಕ್ಷ ಸ್ಥಾ ನ ನಿರ್ವಹಿಸಿದ ಮೊದಲ ಪ್ರಾದೇಶಿಕ ಪಕ್ಷ ಎಂಬ ಹೆಗ್ಗಳಿಕೆ ಹೊಂದಿದೆ. ಟಿಡಿಪಿ ಸದ್ಯ ಆಂಧ್ರದಲ್ಲಿ ಆಡಳಿತ ನಡೆಸುತ್ತಿದ್ದರೆ, ತೆಲಂಗಾಣದಲ್ಲಿ ತನ್ನ ಪ್ರಭಾವ ಹೊಂದಿದೆ. ತೆಲುಗು ಭಾಷೆಯ ಅಸ್ಮಿತೆಗಾಗಿ ತೆಲುಗು ದೇಶಂ ಪಾರ್ಟಿಯನ್ನು ಪ್ರಖ್ಯಾತ ನಟ ಎನ್‌.ಟಿ.ರಾಮರಾವ್‌ ಅವರು 1982ರ ಮಾರ್ಚ್‌ 29ರಂದು ಆರಂಭಿಸಿದರು. ಸದ್ಯ ಆಂಧ್ರದ ಮುಖ್ಯಮಂತ್ರಿ ಆಗಿರುವ ಚಂದ್ರಬಾಬು ನಾಯ್ಡು ಅವರು 1995ರಿಂದ ಟಿಡಿಪಿ ನೇತೃತ್ವ ವಹಿಸಿದ್ದಾರೆ. ಎನ್‌ಟಿಆರ್‌ ಅವರು ಜನಪ್ರಿಯ ಎಷ್ಟಿತ್ತೆಂದರೆ, ಟಿಡಿಪಿ ಆರಂಭಿಸಿದ 9 ತಿಂಗಳಲ್ಲೇ ಅವರು ಅಧಿಕಾರಕ್ಕೆ ಬಂದು, ಮೊದಲ ಬಾರಿಗೆ ಸಿಎಂ ಆದರು. 1984ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಂತರ ಅತಿ ಹೆಚ್ಚು ಸ್ಥಾನ ಗೆದ್ದಿದ್ದರಿಂದ ಪ್ರತಿಪಕ್ಷ ವಾಗಿ ಟಿಡಿಪಿ ಕಾರ್ಯನಿರ್ವಹಿಸಿತು. ಎನ್‌ಟಿಆರ್‌ ಅವರು ತೆಲುಗು ಭಾಷೆ ಮತ್ತು ನಾಡು ಅಸ್ಮಿತೆಯಾಗಿ ಪಕ್ಷ ವನ್ನ ಆರಂಭಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಕಾಂಗ್ರೆಸ್‌ಗೆ ಪರ್ಯಾಯವಾದ ಪಕ್ಷ ವನ್ನು ಹುಟ್ಟುಹಾಕಬೇಕಿತ್ತು. ಹಾಗಾಗಿ, ಟಡಿಪಿಯ ಸೈದ್ಧಾಂತಿಕ ವಿಚಾರಧಾರೆ ತೆಲುಗು ಅಸ್ಮಿತೆಯೇ ಆಗಿದೆ. ಇದರ ಜತೆಗೆ ರೈತರು, ಹಿಂದಿಳಿದವರು ಮತ್ತು ಮಧ್ಯಮ ವರ್ಗದ ಜನರ ಆಶೋತ್ತರಗಳನ್ನು ಈಡೇರಿಸುವುದಕ್ಕೂ ಬದ್ಧವಾಗಿದೆ. 1990ರ ನಂತರ ಟಿಡಿಪಿ ಉದಾರವಾದಕ್ಕೆ ಒತ್ತು ನೀಡಿದ್ದರಿಂದ, ಅದು ಈಗ ಉದ್ಯಮಿಗಳ ಪರ ಮತ್ತು ಅಭಿವೃದ್ಧಿ ಪರ ಎಂಬ ಟ್ಯಾಗ್‌ಲೈನ್‌ ಅಂಟಿಸಿಕೊಂಡಿದೆ. ಲೋಕಸಭೆಯಲ್ಲಿ 15, ರಾಜ್ಯಸಭೆಯಲ್ಲಿ 6 ತನ್ನ ಪ್ರತಿನಿಧಿಗಳನ್ನು ಹೊಂದಿದೆ. ಇನ್ನು ಆಂಧ್ರಪ್ರದೇಶದಲ್ಲಿ ಒಟ್ಟು 102 ಶಾಸಕರೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ. ಕೇಂದ್ರ ರಾಜಕಾರಣದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಟಿಡಿಪಿ, ಈ ಹಿಂದೆ ಒಮ್ಮೆ ಯುಪಿಎ ಮತ್ತು ಎನ್‌ಡಿಎಗೆ ಬೆಂಬಲ ನೀಡಿತ್ತು. ಪ್ರಸಕ್ತ ಎನ್‌ಡಿಎ ಜತೆಗೆ ಗುರುತಿಸಿಕೊಂಡಿದ್ದ ನಾಯ್ಡು, ಆಂಧ್ರಕ್ಕೆ ವಿಶೇಷ ಪ್ಯಾಕೇಜ್‌ ನೀಡುತ್ತಿಲ್ಲ ಎಂದು ಆರೋಪಿಸಿ ಕೂಟದಿಂದ ಹೊರ ಬಂದಿದ್ದಾರೆ. ಪಕ್ಷ ದ ಸಂಸ್ಥಾಪಕರಾದ ಎನ್‌ಟಿಆರ್‌ ಅವರು ಒಟ್ಟು ಮೂರು ಬಾರಿ ಆಂಧ್ರ ಸಿಎಂ ಆಗಿದ್ದರು. ಚಂದ್ರಬಾಬು ನಾಯ್ಡು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.