ಭಾನುವಾರ, ಮಾರ್ಚ್ 10, 2019

ಜನಪ್ರಿಯ ರಾಜಕಾರಣದ ಎಐಎಡಿಎಂಕೆ

ದೇಶದ ಪ್ರಬಲ ಪ್ರಾದೇಶಿಕ ಪಕ್ಷ ಗಳ ಪೈಕಿ ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಕೂಡ ಒಂದು. ಸದ್ಯ ತಮಿಳುನಾಡುರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಐಎಡಿಎಂಕೆ, ಪುದುಚೆರಿಯಲ್ಲೂ ತನ್ನ ಪ್ರಭಾವ ಹೊಂದಿದೆ. ತಮಿಳುನಾಡಿನ ಜನಪ್ರಿಯ ನಟ ಮತ್ತು ರಾಜಕಾರಣಿ ಎಂ.ಜಿ.ರಾಮಚಂದ್ರನ್‌ ಅವರು ಈ ಪಕ್ಷ ವನ್ನು ಸ್ಥಾಪಿಸಿದರು. ಡಿಎಂಕೆಯಿಂದಲೇ ರಾಜಕಾರಣ ಆರಂಭಿಸಿದ್ದ ಎಂಜಿಆರ್‌, 1972ರಲ್ಲಿ ಅದರಿಂದ ಹೊರ ಬಂದು ಎಐಎಡಿಎಂಕೆ ಸ್ಥಾಪಿಸಿದರು. 1997ರ ತಮಿಳುನಾಡು ವಿಧಾಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂತು. ಎಂಜಿಆರ್‌ ಮುಖ್ಯಮಂತ್ರಿಯಾದರು. 1987ರವರೆಗೂ ಅಂದರೆ, ತಮ್ಮ ಸಾವಿನವರೆಗೂ ಎಂಜಿಆರ್‌ ಮುಖ್ಯಮಂತ್ರಿಯಾಗಿದ್ದರು. ಅವರ ನಿಧನ ಬಳಿಕ ನಾಯಕತ್ವಕ್ಕೆ ಸಂಬಂಧಿಸಿದಂತೆ ಎಂಜಿಆರ್‌ ಪತ್ನಿ ಜಾನಕಿ ರಾಮಚಂದ್ರನ್‌ ಮತ್ತು ಜಯಲಲಿತಾ ಮಧ್ಯೆ ಸಂಘರ್ಷವೇ ನಡೆಯಿತು. ಜಾನಕಿ ರಾಮಚಂದ್ರನ್‌ ಅವರಿಗೆ 98 ಶಾಸಕರು ಬೆಂಬಲ ನೀಡಿದ್ದರಿಂದ ಕೇವಲ 24 ದಿನಗಳ ಮಟ್ಟಿಗೆ ಅವರು ಸಿಎಂ ಆದರು. ವಿಧಾನಸಭೆ ಅಮಾನತ್ತಿನಲ್ಲಿಡಲಾಯಿತು. ಬಳಿಕ ನಡೆದ ಚುನಾವಣೆಯಲ್ಲಿ ಜಾನಕಿ ಹಾಗೂ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಎರಡೂ ಗುಂಪುಗಳು ಹೀನಾಯವಾಗಿ ಸೋತವು. ಡಿಎಂಕೆ ಅಧಿಕಾರಕ್ಕೆ ಬಂತು. ಈ ಸೋಲಿನ ಬಳಿಕ ಜಯಲಲಿತಾ ನೇತೃತ್ವದಲ್ಲಿ ಎಐಎಡಿಎಂಕೆ ಮತ್ತೆ ಒಂದಾಯಿತು. 1991ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೂಡಿ ವಿಧಾನಸಭೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಜಯಲಲಿತಾ ಮುಖ್ಯಮಂತ್ರಿಯಾದರು. ಇಲ್ಲಿಂದ ಜಯಾ ರಾಜಕಾರಣ ಪರ್ವ ಶುರುವಾಯಿತು. ಮುಂದೆ 1998ರ ಲೋಕಸಭೆ ಚುನಾವಣೆ ಹೊತ್ತಿಗೆ ಜಯಲಲಿತಾ ಬಿಜೆಪಿ, ಎಂಡಿಎಂಕೆ ಜತೆ ಮೈತ್ರಿಕೂಟ ರಚಿಸಿಕೊಂಡರು. ಕೇಂದ್ರದಲ್ಲಿ ವಾಜಪೇಯಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದು ಸರಕಾರ ಪತನಕ್ಕೆ ಕಾರಣರಾದರು. ಜಯಲಲಿತಾ ಅವರು 1991- 1996, 2001, 2002- 2006, 2011- 2014, 2015ಧಿ-2016 ಅವಧಿಯಲ್ಲಿ ಮುಖ್ಯಯಂತ್ರಿಯಾಗಿದ್ದರು. ಎಂಜಿಆರ್‌ ಬಳಿಕ ಪಕ್ಷ ಕ್ಕೆ ಜಯಲಲಿತಾ ಅವರು ಗಟ್ಟಿ ನಾಯಕತ್ವ ಒದಗಿಸಿದ್ದರು. ಆದರೆ, ಜಯಾ ಸಾವಿನ ಬಳಿಕ ಮತ್ತೆ ನಾಯಕತ್ವದ ಕಿತ್ತಾಟ ಶುರವಾಗಿದೆ. ಎಂಜಿಆರ್‌ ಮತ್ತು ಜಯಲಲಿತಾ ಇಬ್ಬರೂ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪ್ರಸಿದ್ಧ ಪಡೆದರು. ಪ್ರಸಕ್ತ ಲೋಕಸಭೆ ಚುನಾವಣೆಯನ್ನು ಎಐಎಡಿಎಂಕೆಯು ಬಿಜೆಪಿ ಜತೆಗೂಡಿ ಎದುರಿಸುತ್ತಿದೆ. 

ಸರಕಾರ ರಚಿಸಿದ ಮೊದಲ ಪ್ರಾದೇಶಿಕ ಪಕ್ಷ ಡಿಎಂಕೆ

ಪ್ರಾದೇಶಿಕ ಪಕ್ಷ ಗಳು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬಹುದು ಎಂಬುದನ್ನು ದ್ರಾವಿಡ್‌ ಮುನ್ನೇತ್ರ ಕಳಗಂ(ಡಿಎಂಕೆ) ತೋರಿಸಿಕೊಟ್ಟಿತ್ತು. ಪ್ರಾದೇಶಿಕ ಪಕ್ಷ ಗಳ ಪೈಕಿ ತುಂಬ ಹಳೆಯದಾದ ಡಿಎಂಕೆ, ನಮ್ಮ ರಾಜ್ಯದ ನೆರೆಯ ತಮಿಳುನಾಡು ಮತ್ತು ಪುದುಚೆರಿಯಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. ತಮಿಳುನಾಡಿನಲ್ಲಿ ಸದ್ಯ ಪ್ರತಿಪಕ್ಷ ಸ್ಥಾನದಲ್ಲಿದೆ. ಈ ಪಕ್ಷ ದ ಜನಪ್ರಿಯ ನಾಯಕರೆಂದರೆ, ಸಿ.ಎನ್‌.ಅಣ್ಣಾದೊರೈ, ಎಂ. ಕರುಣಾನಿಧಿ, ಎಂಜಿಆರ್‌(ಪಕ್ಷ ತೊರೆದು ತಮ್ಮದೇ ಆದ ಎಐಡಿಎಂಕೆ ಸ್ಥಾಪಿಸಿದರು), ಎಂ.ಕೆ.ಸ್ಟಾಲಿನ್‌, ಕನ್ನಿಮೋಳಿ... ಮುಂತಾದವರು. ಕರುಣಾನಿಧಿ ಅವರು ಐದು ಬಾರಿಗೆ ತಮಿಳುನಾಡು ಮುಖ್ಯಂತ್ರಿಯಾಗಿದ್ದರು. ಅಲ್ಲದೆ, 1969ರಿಂದ ಅವರು ತಮ್ಮ ಸಾವಿನ ದಿನವರೆಗೂ ಅಂದರೆ 2018ರ ಅಗಸ್ಟ್‌ 7ರವರೆಗೂ ಡಿಎಂಕೆಯ ನೇತೃತ್ವ ವಹಿಸಿದ್ದರು. ಕಾಂಗ್ರೆಸ್‌ ಹೊರತುಪಡಿಸಿ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ವೊಂದು ಸ್ವಂತ ಸರಕಾರ ರಚಿಸಬಹುದು ಎಂಬುದನ್ನು ಡಿಎಂಕೆಸಾಧಿಸಿ ತೋರಿಸಿತು. ಇದು ಮುಂದೆ ಬಹಳಷ್ಟು ಪ್ರಾದೇಶಿಕ ಪಕ್ಷ ಗಳಿಗೆ ದಾರಿ ಮಾಡಿಕೊಟ್ಟಿತ್ತು. ಡಿಎಂಕೆಯ ಮೂಲ ಜಸ್ಟೀಸ್‌ ಪಾರ್ಟಿಯಲ್ಲಿದೆ. ಕಾಂಗ್ರೆಸ್‌ನಲ್ಲಿದ್ದ ಪೆರಿಯಾರ್‌ ಇ.ವಿ.ರಾಮಸ್ವಾಮಿ ಅವರು ಜಸ್ಟೀಸ್‌ ಪಾರ್ಟಿಯನ್ನು 1935ರಲ್ಲಿ ಸೇರಿದರು. ಬಳಿಕ ದ್ರಾವಿಡರ್‌ ಕಳಗಂ ಸ್ಥಾಪಿಸಿ, ದ್ರಾವಿಡರಿಗೆ ಪ್ರತ್ಯೇಕ ರಾಷ್ಟ್ರ ಬೇಡಿಕೆ ಹಾಗೂ ಹಿಂದಿ ವಿರೋಧಿ ಪ್ರಮುಖ ಅದರ ಪ್ರಮುಖ ನೀತಿಗಳಾಗಿದ್ದವು. ಆದರೆ, ನಂತರದ ದಿನಗಳಲ್ಲಿ ಪ್ರತ್ಯೇಕ ರಾಷ್ಟ್ರ ಹೋರಾಟ ಕೈಬಿಡಲಾಯಿತು. ಈ ಸೈದ್ಧಾಂತಿಕ ವಿಚಾರಧಾರೆಯು ಡಿಎಂಕೆಗೂ ಹರಿದು ಬಂತು. ಆಗ ರಾಮಸ್ವಾಮಿ ಅವರಿಗೆ ಹೆಗಲು ನೀಡಿದ್ದ ಅಣ್ಣಾದೊರೈ ಅವರು ದ್ರಾವಿಡರ್‌ ಕಳಗಂನಿಂದ ಹೊರಬಂದು ಡಿಎಂಕೆ ಸ್ಥಾಪಿಸಿದರು. ನಂತರ ಅಣ್ಣಾದೊರೈ ಜತೆಯಾಗಿ ಹೆಜ್ಜೆ ಹಾಕಿದವರು ಕರುಣಾನಿಧಿ ಅವರು. ಸದ್ಯ ಡಿಎಂಕೆ ನಾಯಕತ್ವವನ್ನು ಅವರ ಪುತ್ರ ಎಂ.ಕೆ. ಸ್ಟಾಲಿನ್‌ ವಹಿಸಿದ್ದಾರೆ. ಪ್ರಾದೇಶಿಕತೆ, ಹಿಂದಿ ಹೇರಿಕೆ ವಿರೋಧಿ ನೀತಿ, ಸಾಮಾಜಿಕ ಪ್ರಜಾಪ್ರಭುತ್ವ ನೀತಿಯನ್ನು ಡಿಎಂಕೆ ಅಳವಡಿಸಿಕೊಂಡಿದೆ. ಜನಪ್ರಿಯ ನಾಯಕ ಎಂಜಿಆರ್‌ ಕೂಡ ಡಿಎಂಕೆ ಭಾರಿ ಬಲ ತುಂಬಿದ್ದರು. ಆದರೆ, ಅವರು ಭಿನ್ನಾಭಿಪ್ರಾಯದಿಂದಾಗಿ ಡಿಎಂಕೆಯಿಂದ ಹೊರ ನಡೆದು, ತಮ್ಮದೇ ಆದ ಎಐಡಿಎಂಕೆ ಸ್ಥಾಪಿಸಿದರು. ಮುಂದೆ ತಮಿಳುನಾಡಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ನಡುವಿನ ಹೋರಾಟವೇ ರಾಜಕಾರಣವಾಯಿತು. ಸದ್ಯ ಡಿಎಂಕೆ ಯುಪಿಎ ಭಾಗವಾಗಿದೆ. 

ಎರಡನೆಯ ಬಾರಿಗೆ ಕಾಂಗ್ರೆಸ್ಸೇತರ ಸರಕಾರ

ಭಾರತೀಯ ರಾಜಕೀಯ ಇತಿಹಾಸದಲ್ಲಿ 1989ರ ಸಾರ್ವತ್ರಿಕ ಚುನಾವಣೆಗೆ ತನ್ನದೇ ಆದ ಮಹತ್ವವಿದೆ. ಎರಡನೇ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬರಲು ಈ ಚುನಾವಣೆಯಿಂದ ಸಾಧ್ಯವಾಯಿತು. ಈ ಹಿಂದಿನ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌, ಈ ಬಾರಿ ಇನ್ನಿಲ್ಲದಂತೆ ನೆಲಕಚ್ಚಿತು. ಬೊಫೋರ್ಸ್‌ ಹಗಹರಣ, ಪಂಜಾಬ್‌ನಲ್ಲಿ ಭಯೋತ್ಪಾದನೆ ಸೇರಿದಂತೆ ಇನ್ನಿತರ ಸಮಸ್ಯೆಗಳು ರಾಜೀವ್‌ ಆಡಳಿತದ ವಿರುದ್ಧ ಅಲೆ ಏಳುವಂತೆ ಮಾಡಿತು. ಇದರ ಪರಿಣಾಮ, ಜನತಾದಳ ವಿಶ್ವನಾಥ ಪ್ರತಾಪ್‌ ಸಿಂಗ್‌ ನೇತೃತ್ವದ ನ್ಯಾಷನಲ್‌ ಫ್ರಂಟ್‌ ಅಧಿಕಾರಕ್ಕೆ ಬಂತು. ಬಿಜೆಪಿ ಮತ್ತು ಎಡಪಕ್ಷ ಗಳು ಬಾಹ್ಯ ಬೆಂಬಲ ನೀಡಿದವು. ಚುನಾವಣೆಯಲ್ಲಿ ಜನತಾದಳ 143 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 197 ಕ್ಷೇತ್ರಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ವಿಶೇಷ ಎಂದರೆ, ಕಾಂಗ್ರೆಸ್‌ ಪಡೆದ ಮತಗಳ ಪ್ರಮಾಣ ಶೇ.39.5ರಷ್ಟಿದ್ದರೆ, ಜನತಾ ದಳ ಮತಪ್ರಮಾಣ ಕೇವಲ 17.8ರಷ್ಟು ಮಾತ್ರ. ಬಿಜೆಪಿ 89, ಎಡಪಕ್ಷ ಗಳು 46 ಸ್ಥಾನಗಳನ್ನು ಗೆದ್ದುಕೊಂಡವು. ಬಿಜೆಪಿಯ ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ಈ ಚುನಾವಣೆಯು ಮೈಲುಗಲ್ಲು ಎಂದು ಹೇಳಬಹುದು. 1984ರ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗೆದ್ದಿದ್ದ ಬಿಜೆಪಿ ಈ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಪಡೆಯಿತು. ನ್ಯಾಷನಲ್‌ ಫ್ರಂಟ್‌ನ ನಾಯಕರಾಗಿದ್ದ ವಿಶ್ವನಾಥ ಪ್ರತಾಪ್‌ ಸಿಂಗ್‌ ಪ್ರಧಾನಿಯಾದರು. ಆದರೆ, ಅವರ ಆಡಳಿತವೇನೂ ಬಹಳ ದಿನಗಳವರೆಗೆ ಬರಲಿಲ್ಲ. ಬಿಜೆಪಿಯ ಎಲ್‌.ಕೆ.ಆಡ್ವಾಣಿ ಅವರು ರಾಮರಥ ಯಾತ್ರೆ ಕೈಗೊಂಡಿದ್ದರು. ಬಿಹಾರದಲ್ಲಿ ಲಾಲು ಪ್ರಸಾದ್‌ ಯಾದವ್‌ ಸರಕಾರ ಆಡ್ವಾಣಿಯನ್ನು ಬಂಧಿಸಿದ್ದರಿಂದ ಬಿಜೆಪಿ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆಯಿತು. ವಿಶ್ವನಾಥ ಪ್ರತಾಪ್‌ ಸಿಂಗ್‌ ಸರಕಾರವು 1990ರ ನವೆಂಬರ್‌ನಲ್ಲಿ ಪತನವಾಯಿತು. ಇದೇ ಸಂದರ್ಭದಲ್ಲಿ ಜನತಾ ದಳದ ಮತ್ತೊಬ್ಬ ನಾಯಕ ಚಂದ್ರಶೇಖರ್‌ ಅವರು ತಮ್ಮೊಂದಿಗೆ 64 ಸದಸ್ಯರನ್ನು ಕರೆದುಕೊಂಡು ದಳದಿಂದ ಹೊರ ಬಂದು ಸಮಾಜವಾದಿ ಜನತಾ ಪಾರ್ಟಿ ಸ್ಥಾಪಿಸಿದರು. ಕಾಂಗ್ರೆಸ್‌ ಬೆಂಬಲದೊಂದಿಗೆ ಚಂದ್ರಶೇಖರ್‌ ಪ್ರಧಾನಿಯಾದರು. ಆದರೆ, ರಾಜೀವ್‌ ಗಾಂಧಿ ವಿರುದ್ಧ ಗೂಢಚರ್ಯ ಮಾಡಲಾಗುತ್ತಿದೆಂದು ಆರೋಪಿಸಿದ ಕಾಂಗ್ರೆಸ್‌ ಬೆಂಬಲ ವಾಪಸ್‌ ಪಡೆಯುವುದರೊಂದಿಗೆ ಮತ್ತೊಂದು ಸಾರ್ವತ್ರಿಕ ಚುನಾವಣೆ ಎದುರಾಯಿತು.

ಶುಕ್ರವಾರ, ಮಾರ್ಚ್ 8, 2019

ಕಾರ್ಗಿಲ್ ಗರ್ಲ್- ಗುಂಜನಾ ಸಕ್ಸೇನಾ

ರಣರಂಗದಲ್ಲಿ ಮಹಿಳೆಯರದ್ದು 'ಸಪೋರ್ಟಿಂಗ್‌ ರೋಲ್‌' ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ವ್ಯಾಖ್ಯಾನ ಬದಲಾಗಿದೆ. ಪುರುಷರಷ್ಟೇ ಸರಿಸಮಾನವಾಗಿ ರಣರಂಗದಲ್ಲಿ ಓಡಾಡಬಲ್ಲ ಧೀರೆ ಗುಂಜನಾ ಸಕ್ಸೇನಾ ಅಂಥ ಉದಾಹರಣೆಗಳಲ್ಲೊಬ್ಬರು. ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆ. ಸೇನಾ ವಲಯ ಹಾಗೂ ಕುಟುಂಬಸ್ಥರು ಗುಂಜನಾ ಅವರನ್ನು 'ಕಾರ್ಗಿಲ್‌ ಗರ್ಲ್‌' ಎಂದು ಪ್ರೀತಿಯಿಂದ ಕರೆಯುತ್ತಾರೆ. ಸೇನೆ ಗುಂಜನಾಗೆ ಹೊಸದಲ್ಲ. ತಂದೆ ಹಾಗೂ ಸಹೋದರರಿಬ್ಬರೂ ಸೇನೆಯಲ್ಲಿ ಅಪ್ರತಿಮ ಸಾಹಸ ಮೆರೆದವರು. ದಿಲ್ಲಿ ವಿವಿಯ ಹಂಸರಾಜ್‌ ಕಾಲೇಜ್‌ನಲ್ಲಿ ಡಿಗ್ರಿ ಪಡೆದ ಬಳಿಕ, ಸೇನೆ ಸೇರುವುದೊಂದೇ ಅವರ ಮುಂದಿದ್ದ ಆಯ್ಕೆ. 1994ರಲ್ಲಿ ಗುಂಜನಾ ಸಕ್ಸೇನಾ, ಶ್ರೀವಿದ್ಯಾ ರಾಜನ್‌ ಸೇರಿದಂತೆ 25 ಮಹಿಳೆಯರ ಮೊದಲ ಪೈಲಟ್‌ ತಂಡವನ್ನು ಭಾರತೀಯ ವಾಯುಪಡೆ ರಚಿಸಿತು. ಹೀಗಿದ್ದರೂ, ಮಹಿಳಾ ತಂಡದ ಸೇವೆ ಸಂಪೂರ್ಣವಾಗಿ ಸೇನೆಗೆ ಲಭ್ಯವಾಗಿದ್ದು 2016ರಲ್ಲಿ. ಆದರೆ, ಗುಂಜನಾ ಮತ್ತು ಶ್ರೀವಿದ್ಯಾ ಅವರ ಸಾಹಸಗಾಥೆ 1999ರ ಕಾರ್ಗಿಲ್‌ ಯುದ್ಧದ ವೇಳೆಯಲ್ಲಿ ಜಗಜ್ಜಾಹೀರಾಯಿತು. ಸೇನೆ ಇನ್ನೂ ಮಹಿಳೆಯರನ್ನು ಯುದ್ಧಭೂಮಿಗೆ ಕಳುಹಿಸಬೇಕೇ ಬೇಡವೇ ಎಂಬ ದ್ವಂದ್ವದಲ್ಲಿದ್ದಾಗಲೇ, ಈ ಮಹಿಳೆಯರಿಬ್ಬರು ಇಡೀ ಯುವತಿಯರಿಗೆ ರೋಲ್‌ ಮಾಡೆಲ್‌ ಆಗುವ ಸಾಹಸ ಮೆರೆದರು. 
ಹಾಗೆ ನೋಡಿದರೆ, ಫ್ಲೈಟ್‌ ಲೆಫ್ಟಿನೆಂಟ್‌ ಗುಂಜನಾ ಮತ್ತು ಶ್ರೀವಿದ್ಯಾ ಅವರು ಫೈಟರ್‌ ಜೆಟ್‌ಗಳ ಹಾರಾಟ ನಡೆಸಿರಲಿಲ್ಲ. ಆದರೆ, ಕಾರ್ಗಿಲ್‌ ಯುದ್ಧ ತುತ್ತತುದಿಯಲ್ಲಿದ್ದಾಗ, ಭಾರತೀಯ ವಾಯುಪಡೆ ತನ್ನೆಲ್ಲ ಪೈಲಟ್‌ಗಳ ಗರಿಷ್ಠ ಸೇವೆಯನ್ನು ಬಳಸಿಕೊಳ್ಳಲು ಮುಂದಾಯಿತು. ಆಗ, ಗುಂಜನಾ ಮತ್ತು ಶ್ರೀವಿದ್ಯಾ ಅವರಿಗೆ ಕರೆ ಬಂತು. ಗಾಯಾಳು ಯೋಧರ ಸ್ಥಳಾಂತರ ಮತ್ತು ಯುದ್ಧಭೂಮಿಯಲ್ಲಿ ಪಾಕಿಸ್ತಾನದ ಸ್ಥಿತಿಯನ್ನು ಗುರುತಿಸಿ ಮಾಹಿತಿ ನೀಡುವ ಟಾಸ್ಕ್‌ ನೀಡಲಾಯಿತು. ಅಚ್ಚರಿಯ ಸಂಗತಿ ಎಂದರೆ, ಗುಂಜನಾ ಮತ್ತು ಶ್ರೀವಿದ್ಯಾ ಹಾರಾಟ ಮಾಡಲಿರುವ ಹೆಲಿಕಾಪ್ಟರ್‌ಗಳು ತುಂಬ ಚಿಕ್ಕವು ಮತ್ತು ಶಸ್ತ್ರರಹಿತವಾಗಿದ್ದವು. ಒಮ್ಮೆ ಇವರು ತಮ್ಮ ಕಾಪ್ಟರ್‌ ಅನ್ನು ಕಾರ್ಗಿಲ್‌ ಏರ್‌ಸ್ಟ್ರಿಪ್‌ನಿಂದ ಟೇಕ್‌ ಆಫ್‌ ಮಾಡುತ್ತಿರುವಾಗಲೇ ಪಾಕಿಸ್ತಾನದ ಕ್ಷಿಪಣಿಯೊಂದು ಇವರತ್ತ ನುಗ್ಗಿ ಬಂತು. ಆಗ ಸ್ವಲ್ಪದರಲ್ಲಿ ಕಾಪ್ಟರ್‌ ಅದರಿಂದ ತಪ್ಪಿಸಿಕೊಂಡಿತು. ಇಂಥ ಸಾವಿನ ಸಮೀಪ ಹೋದ ಅನೇಕ ಅನುಭವವಗಳು ಗುಂಜನಾ ಅವರಿಗೆ ಕಾರ್ಗಿಲ್‌ ಯುದ್ಧದ ವೇಳೆ ಆದವು. ಒಂದೊಮ್ಮೆ ಕಾಪ್ಟರ್‌ ಅಪಘಾತಕ್ಕೀಡಾಗಿ ವೈರಿಗಳ ನೆಲದಲ್ಲಿ ಬಿದ್ದರೆ ನೆರವಿಗೆ ಇರಲಿ ಎಂದು ಗುಂಜನಾ ತಮ್ಮ ಬಳಿ ಐಎನ್‌ಎಸ್‌ಎಎಸ್‌ ರೈಫಲ್‌ ಮತ್ತು ರಿವಾಲ್ವರ್‌ ಇಟ್ಟುಕೊಳ್ಳುತ್ತಿದ್ದರು. ಯುದ್ಧಭೂಮಿಯಲ್ಲಿ ನೇರವಾಗಿ ಭಾಗಿಯಾದ ಮೊದಲ ಮಹಿಳಾ ಪೈಲಟ್‌ಗಳೆಂಬ ಖ್ಯಾತಿ ಅವರಿಗೆ ಅಂಟಿಕೊಂಡಿತು. ಕಾಪ್ಟರ್‌ ಪೈಲಟ್‌ ಆಗಿದ್ದ ಗುಂಜನಾ ಅವರು ಕೇವಲ 7 ವರ್ಷದವರೆಗೆ ಮಾತ್ರ ಸೇವೆ ಸಲ್ಲಿಸಿದರು. ಕಾರ್ಗಿಲ್‌ನಲ್ಲಿ ತೋರಿದ ಅಪ್ರತಿಮ ಸಾಹಸಕ್ಕಾಗಿ ಶೌರ್ಯವೀರ ಪದಕ ನೀಡಲಾಯಿತು. ಎಲ್ಲಕ್ಕಿಂತ ಸಾವಿರಾರು ಯುವತಿಯರಿಗೆ ಸೇನೆ ಸೇರುವ ಸ್ಫೂರ್ತಿಯಾದರು. 

ತೆಲುಗು ಅಸ್ಮಿತೆ ರಾಜಕಾರಣದ ಟಿಡಿಪಿ

ಟಿಡಿಪಿ ಎಂದು ಹೆಚ್ಚು ಪ್ರಚಲಿತವಾಗಿರುವ ತೆಲುಗು ದೇಶಂ ಪಾರ್ಟಿ, ಸಂಸತ್ತಿನಲ್ಲಿ ಪ್ರತಿಪಕ್ಷ ಸ್ಥಾ ನ ನಿರ್ವಹಿಸಿದ ಮೊದಲ ಪ್ರಾದೇಶಿಕ ಪಕ್ಷ ಎಂಬ ಹೆಗ್ಗಳಿಕೆ ಹೊಂದಿದೆ. ಟಿಡಿಪಿ ಸದ್ಯ ಆಂಧ್ರದಲ್ಲಿ ಆಡಳಿತ ನಡೆಸುತ್ತಿದ್ದರೆ, ತೆಲಂಗಾಣದಲ್ಲಿ ತನ್ನ ಪ್ರಭಾವ ಹೊಂದಿದೆ. ತೆಲುಗು ಭಾಷೆಯ ಅಸ್ಮಿತೆಗಾಗಿ ತೆಲುಗು ದೇಶಂ ಪಾರ್ಟಿಯನ್ನು ಪ್ರಖ್ಯಾತ ನಟ ಎನ್‌.ಟಿ.ರಾಮರಾವ್‌ ಅವರು 1982ರ ಮಾರ್ಚ್‌ 29ರಂದು ಆರಂಭಿಸಿದರು. ಸದ್ಯ ಆಂಧ್ರದ ಮುಖ್ಯಮಂತ್ರಿ ಆಗಿರುವ ಚಂದ್ರಬಾಬು ನಾಯ್ಡು ಅವರು 1995ರಿಂದ ಟಿಡಿಪಿ ನೇತೃತ್ವ ವಹಿಸಿದ್ದಾರೆ. ಎನ್‌ಟಿಆರ್‌ ಅವರು ಜನಪ್ರಿಯ ಎಷ್ಟಿತ್ತೆಂದರೆ, ಟಿಡಿಪಿ ಆರಂಭಿಸಿದ 9 ತಿಂಗಳಲ್ಲೇ ಅವರು ಅಧಿಕಾರಕ್ಕೆ ಬಂದು, ಮೊದಲ ಬಾರಿಗೆ ಸಿಎಂ ಆದರು. 1984ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಂತರ ಅತಿ ಹೆಚ್ಚು ಸ್ಥಾನ ಗೆದ್ದಿದ್ದರಿಂದ ಪ್ರತಿಪಕ್ಷ ವಾಗಿ ಟಿಡಿಪಿ ಕಾರ್ಯನಿರ್ವಹಿಸಿತು. ಎನ್‌ಟಿಆರ್‌ ಅವರು ತೆಲುಗು ಭಾಷೆ ಮತ್ತು ನಾಡು ಅಸ್ಮಿತೆಯಾಗಿ ಪಕ್ಷ ವನ್ನ ಆರಂಭಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಕಾಂಗ್ರೆಸ್‌ಗೆ ಪರ್ಯಾಯವಾದ ಪಕ್ಷ ವನ್ನು ಹುಟ್ಟುಹಾಕಬೇಕಿತ್ತು. ಹಾಗಾಗಿ, ಟಡಿಪಿಯ ಸೈದ್ಧಾಂತಿಕ ವಿಚಾರಧಾರೆ ತೆಲುಗು ಅಸ್ಮಿತೆಯೇ ಆಗಿದೆ. ಇದರ ಜತೆಗೆ ರೈತರು, ಹಿಂದಿಳಿದವರು ಮತ್ತು ಮಧ್ಯಮ ವರ್ಗದ ಜನರ ಆಶೋತ್ತರಗಳನ್ನು ಈಡೇರಿಸುವುದಕ್ಕೂ ಬದ್ಧವಾಗಿದೆ. 1990ರ ನಂತರ ಟಿಡಿಪಿ ಉದಾರವಾದಕ್ಕೆ ಒತ್ತು ನೀಡಿದ್ದರಿಂದ, ಅದು ಈಗ ಉದ್ಯಮಿಗಳ ಪರ ಮತ್ತು ಅಭಿವೃದ್ಧಿ ಪರ ಎಂಬ ಟ್ಯಾಗ್‌ಲೈನ್‌ ಅಂಟಿಸಿಕೊಂಡಿದೆ. ಲೋಕಸಭೆಯಲ್ಲಿ 15, ರಾಜ್ಯಸಭೆಯಲ್ಲಿ 6 ತನ್ನ ಪ್ರತಿನಿಧಿಗಳನ್ನು ಹೊಂದಿದೆ. ಇನ್ನು ಆಂಧ್ರಪ್ರದೇಶದಲ್ಲಿ ಒಟ್ಟು 102 ಶಾಸಕರೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ. ಕೇಂದ್ರ ರಾಜಕಾರಣದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಟಿಡಿಪಿ, ಈ ಹಿಂದೆ ಒಮ್ಮೆ ಯುಪಿಎ ಮತ್ತು ಎನ್‌ಡಿಎಗೆ ಬೆಂಬಲ ನೀಡಿತ್ತು. ಪ್ರಸಕ್ತ ಎನ್‌ಡಿಎ ಜತೆಗೆ ಗುರುತಿಸಿಕೊಂಡಿದ್ದ ನಾಯ್ಡು, ಆಂಧ್ರಕ್ಕೆ ವಿಶೇಷ ಪ್ಯಾಕೇಜ್‌ ನೀಡುತ್ತಿಲ್ಲ ಎಂದು ಆರೋಪಿಸಿ ಕೂಟದಿಂದ ಹೊರ ಬಂದಿದ್ದಾರೆ. ಪಕ್ಷ ದ ಸಂಸ್ಥಾಪಕರಾದ ಎನ್‌ಟಿಆರ್‌ ಅವರು ಒಟ್ಟು ಮೂರು ಬಾರಿ ಆಂಧ್ರ ಸಿಎಂ ಆಗಿದ್ದರು. ಚಂದ್ರಬಾಬು ನಾಯ್ಡು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

1984ರಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಜಯ

ಸಿಖ್ಖರ ಪವಿತ್ರ ದೇಗುಲವಾದ ಸ್ವರ್ಣ ಮಂದಿರದಲ್ಲಿ ಖಲಿಸ್ಥಾನ ಉಗ್ರರು ಅಡಗಿಕೊಂಡಿದ್ದರು. ಅವರನ್ನು ಅಲ್ಲಿಂದ ಹೊಡೆದು ಹಾಕುವ ಸೇನಾ ಕಾರ್ಯಾಚರಣೆ, ಆಪರೇಷನ್‌ ಬ್ಲೂಸ್ಟಾರ್‌ ಎಂದು ಪ್ರಖ್ಯಾತವಾಗಿದೆ. ಇಂದಿರಾ ಗಾಂಧಿ ಅವರು ಸ್ವರ್ಣ ಮಂದಿರಕ್ಕೆ ಸೇನೆಯನ್ನು ಕಳುಹಿಸಿದ್ದು ಕೆಲವು ಸಿಖ್ಖರಿಗೆ ಸರಿ ಕಾಣಲಿಲ್ಲ. ಅವರು ಇಂದಿರಾ ಮೇಲೆ ಆಕ್ರೋಶಗೊಂಡಿದ್ದರು. ಇದರ ಪರಿಣಾಮ ಇಂದಿರಾ ಗಾಂಧಿ ಅವರನ್ನು 1984 ಅಕ್ಟೋಬರ್‌ 31ರಂದು ಅವರ ಅಂಗರಕ್ಷ ಕರಾಗಿದ್ದವರೇ ಗುಂಡಿಟ್ಟು ಕೊಂದರು. ಗಾಂಧಿ ಹತ್ಯೆ ನಂತರದ ಸಿಖ್‌ ವಿರೋಧಿ ದಂಗೆಗಳು ಶುರುವಾದವು. ಈ ಹೊತ್ತಲ್ಲಿ ನಡೆದ ನಡೆದ 8ನೇ ಸಾರ್ವತ್ರಿಕ ಚುನಾವಣೆಯು ತುಂಬ ಮಹತ್ವದ್ದಾಗಿತ್ತು. ಇಂದಿರಾ ಗಾಂಧಿ ಹತ್ಯೆ ಚುನಾವಣೆ ಮೇಲೆ ಸಂಪೂರ್ಣ ಪರಿಣಾಮ ಬೀರಿತ್ತು. ಇಂದಿರಾ ಪುತ್ರ ರಾಜೀವ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ 414 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಫಲಿತಾಂಶವನ್ನು ಪಡೆಯಿತು. ಭಾರತೀಯ ಜನತಾ ಪಾರ್ಟಿ(ಬಿಜೆಪಿ) 2ಸ್ಥಾನಗಳನ್ನು ಗೆಲ್ಲುವ ಮೂಲಕ ಚುನಾವಣಾ ರಾಜಕೀಯವನ್ನು ಆರಂಭಿಸಿತು. 1984ರ ಚುನಾವಣೆಯಲ್ಲಿ ದೇಶದೆಲ್ಲೆಡೆ ಸಕಾಲಕ್ಕೆ ನಡೆಯಿತಾದರೂ ಅಸ್ಸಾಮ್‌ ಮತ್ತು ಪಂಜಾಬ್‌ನಲ್ಲಿ ನಡೆಯುತ್ತಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ 1985ರವರೆಗೆ ಮುಂದೂಡಲಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ನಂತರ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದು ಆಂಧ್ರ ಪ್ರದೇಶದ ತೆಲುಗು ದೇಶಂ ಪಾರ್ಟಿ(ಪಿಡಿಪಿ). ಎನ್‌.ಟಿ.ರಾಮರಾವ್‌ ನೇತೃತ್ವದಲ್ಲಿ ಒಟ್ಟು 30 ಸ್ಥಾನಗಳನ್ನು ಗೆದ್ದುಕೊಂಡಿತು. ತಾನು ಎದುರಿಸಿದ ಮೊದಲನೆಯ ಚುನಾವಣೆಯಲ್ಲಿ ಗರಿಷ್ಠ ಸೀಟುಗಳನ್ನು ಪಡೆದ ಟಿಡಿಪಿ, ಕೇಂದ್ರದಲ್ಲಿ ಪ್ರಮುಖ ಪ್ರತಿಪಕ್ಷ ವಾಗಿ ಹೊರಹೊಮ್ಮಿತು. ಇದು ಭಾರತೀಯ ಚುನಾವಣೆಯ ಇತಿಹಾಸದಲ್ಲೇ ಇನ್ನು ದಾಖಲೆಯಾಗಿ ಉಳಿದಿದೆ. ಪ್ರಧಾನಿ ರಾಜೀವ್‌ ಗಾಂಧಿ ಪ್ರಧಾನಿಯಾಗಿ ಆಯ್ಕೆಯಾದರೆ, ಎನ್‌ಟಿಆರ್‌ ಅವರು ಪ್ರತಿಪಕ್ಷ ದ ನಾಯಕರಾದರು. ಇನ್ನುಳಿದಂತೆ ಜನತಾ ಪಾರ್ಟಿ 10, ಲೋಕದಳ 3 ಮತ್ತು ಕಮ್ಯುನಿಸ್ಟ್‌ ಪಾರ್ಟಿ 22 ಸ್ಥಾನಗಳನ್ನು ಗೆದ್ದುಕೊಂಡವು. ಈ ಚುನಾವಣೆ ಅನೇಕ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟವು. ಹೊಸ ತಲೆಮಾರಿನ ರಾಜಕಾರಣಿಯಾಗಿ ರಾಜೀವ್‌ ಗಾಂಧಿ ಅವರು ಪ್ರವರ್ಧಮಾನಕ್ಕೆ ಬಂದರು. ರಾಜೀವ್‌ ಅವಧಿಯಲ್ಲಿ ತಂತ್ರಜ್ಞಾನಕ್ಕೆ ವಿಶೇಷ ಒತ್ತು ದೊರೆಯಿತು. ಸಂವಹನ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾದವು. ಹಾಗೆಯೇ, ಇಂದಿಗೂ ಪ್ರತಿಪಕ್ಷ ಗಳಿಗೆ ಆಯುಧವಾಗಿರುವ ಬೋಪೊರ್ಸ್‌ ಖರೀದಿ ಹಗರಣ ಕೂಡ ಹೆಚ್ಚು ಸದ್ದು ಮಾಡಿತು. ಇದು ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರಿತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. 
- ತಿಪ್ಪಾರ 

ಗುರುವಾರ, ಮಾರ್ಚ್ 7, 2019

ಟಿಎಂಸಿ, ಮಮತಾ ಎಂಬ ಗಟ್ಟಿಗಿತ್ತಿಯ ರಾಜಕಾರಣದ ವೇದಿಕೆ

ಜನತಾ ಪಾರ್ಟಿ ಹೇಗೆ ಅನೇಕ ಹೊಸ ಪ್ರಾದೇಶಿಕ ಪಕ್ಷ ಗಳ ಹುಟ್ಟಿಗೆ ಕಾರಣವಾಯಿತೋ, ಹಾಗೆಯೇ ಕಾಂಗ್ರೆಸ್‌ ಕೂಡ ಅನೇಕ ಪಕ್ಷ ಗಳ ಅಸ್ತಿತ್ವಕ್ಕೆ ದಾರಿ ಮಾಡಿಕೊಟ್ಟಿದೆ. ನಾಯಕತ್ವ ಕಾರಣದಿಂದಾಗಿ ಅನೇಕ ಕಾಂಗ್ರೆಸ್‌ ನಾಯಕರು ತಮ್ಮದೇ ಆದ ಪಕ್ಷ ವನ್ನು ಸಂಘಟಿಸಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಮಮತಾ ಬ್ಯಾನರ್ಜಿ ಅವರೂ ಪ್ರಮುಖರು. 26 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ದುಡಿದಿದ್ದ ಅವರು, 1998 ಜನವರಿ 1ರಂದು ತಮ್ಮದೇ ಆದ ತೃಣಮೂಲ ಕಾಂಗ್ರೆಸ್‌ ಪಕ್ಷ ವನ್ನು ಆರಂಭಿಸಿದರು. 'ಮಾ ಮಾತಿ ಮಾನೂಷ್‌'(ಜನನಿ, ಜನ್ಮಭೂಮಿ ಮತ್ತು ಜನರು) ಎಂಬದು ತೃಣಮೂಲ ಪಕ್ಷ ದ ಧ್ಯೇಯವಾಕ್ಯ ಮತ್ತು ಜನಪ್ರಿಯ ಘೋಷಣೆಯೂ ಹೌದು. 2014ರ ಲೋಕಸಭೆಯ ಚುನಾವಣೆಯಲ್ಲಿ ಶೇ.6ರಷ್ಟು ಮತ ಪಡೆದ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಈ ಪಕ್ಷ ಕ್ಕೆ ರಾಷ್ಟ್ರೀಯ ಪಕ್ಷ ದ ಮಾನ್ಯತೆ ಹೊಂದಿದೆ. 30 ವರ್ಷಗಳ ಕಾಲ ಎಡ ಪಕ್ಷ ಗಳು ಪಶಿಮ ಬಂಗಾಳದಲ್ಲಿ ಹೊಂದಿದ್ದ ಹಿಡಿತವನ್ನು ಸಡಿಲಿಸಿದ್ದೇ ಈ ಮಮತಾ ಬ್ಯಾನರ್ಜಿ. ಹೋರಾಟದಿಂದಲೇ ತೃಣಮೂಲ ಕಾಂಗೆÜ್ರಸ್‌ ಅನ್ನು ಅಧಿಕಾರದ ಪಡಸಾಲೆಗೆ ತಂದು ನಿಲ್ಲಿಸಿದರು. ಸಜವಾಗಿಯೇ, ಅವರು ಮುಖ್ಯಮಂತ್ರಿಯೂ ಆದರು. ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ಮೇಲೆ ಪ್ರಭುತ್ವ ಸಾಧಿಸಲು ಪ್ರತಿ ಪಕ್ಷ ವೂ ಹಾತೊರೆಯುತ್ತಿದೆ. ಯಾರು ಹೆಚ್ಚು ಸೀಟುಗಳನ್ನು ಗೆಲ್ಲುತ್ತಾರೋ ಅವರು ಸಜವಾಗಿ ಕೇಂದ್ರ ರಾಜಕಾರಣದಲ್ಲಿ ಪ್ರಭಾವವನ್ನು ಗಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಹೊರತಾದ ಕೂಟದ ಚರ್ಚೆ ಬಂದಾಗಲೆಲ್ಲ, ಮಮತಾ ಬ್ಯಾನರ್ಜಿ ಅವರು ಹೆಸರು ಮುಂಚೂಣಿಯಲ್ಲಿರುತ್ತದೆ ಮತ್ತು ಅವರು ಪ್ರಧಾನಿ ಹುದ್ದೆಯ ಆಕಾಂಕ್ಷಿಯೂ ಹೌದು. ಪಶ್ಚಿಮ ಬಂಗಾಳ, ತ್ರಿಪುರಾ, ಮಣಿಪುರ, ಜಾರ್ಖಂಡ್‌ ಮತ್ತು ಅಸ್ಸಾಮ್‌ನಲ್ಲಿ ತನ್ನ ಪ್ರಭಾವ ಹೊಂದಿರುವ ತೃಣಮೂಲ ಕಾಂಗ್ರೆಸ್‌ ಲೋಕಸಭೆಯಲ್ಲಿ ಒಟ್ಟು 34 ಸಂಸದರನ್ನು ಹೊಂದಿದ್ದು, ರಾಜ್ಯಸಭೆಯಲ್ಲಿ 13 ಪ್ರತಿನಿಧಿಗಳಿದ್ದಾರೆ. 295 ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ 213 ಶಾಸಕರನ್ನು ಹೊಂದಿದೆ. 2011ರಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ತನ್ನ ಮಿತ್ರ ಪಕ್ಷ ಗಳ ಸಹಾಯದೊಂದಿಗೆ ಅಧಿಕಾರಕ್ಕೆ ಬಂತು. 2016ರ ವಿಧಾನಸಭೆ ಚುನಾವಣೆಯಲ್ಲೂ ಭರ್ಜರಿ ಜಯ ಗಳಿಸಿತು.