ಸೋಮವಾರ, ಮಾರ್ಚ್ 5, 2018

ಕ್ಷಣ ಕ್ಷಣ ಅನುಭವಿಸಿ, ನೆಮ್ಮದಿಯಾಗಿ ಬದುಕಿ

- ಮಲ್ಲಿಕಾರ್ಜುನ ತಿಪ್ಪಾರ
ರಾಜೇಶ್ ದೊಡ್ಡ ಕಂಪನಿಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾನೆ. ಕೈ ತುಂಬ ಸಂಬಳ. ಆದರೂ ಆತನಿಗೆ ಸಂತೋಷವೇ ಇಲ್ಲಘಿ. ಯಾವಾಗಲೂ ಭವಿಷ್ಯದ ಚಿಂತೆ. ಮುಂದೆ ಹಾಗಾದರೆ, ಹೀಗಾದರೆ ಎಂಬ ಕೊರಗು. ಆತನ ಹೆಂಡತಿ ಸುಮಾ ಮಾತ್ರ ತುಂಬ ಪ್ರಾಕ್ಟಿಕಲ್. ಭವಿಷ್ಯದ ಬಗ್ಗೆ ವಿನಾಕಾರಣ ಯೋಚಿಸದೆ, ಭಯಭೀತಗೊಳ್ಳದೇ ವರ್ತಮಾನದ ಬದುಕನ್ನು ಸಂತೋಷವಾಗಿ ಕಳೆಯುವ ಗುಣದವಳು. ತನ್ನ ಗಂಡನಿಗೆ, ಈ ಕ್ಷಣದ ಸಂತೋಷ ಅನುಭವಿಸು, ಯಾಕೆ ಸುಮ್ಮನೇ ಭವಿಷ್ಯದ ಬಗ್ಗೆ ಯೋಚಿಸಿ ಈಗಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೀಯಾ ಎಂದು ಹೇಳುತ್ತಲೇ ಇರುತ್ತಾಳೆ.
***
ಸುರೇಶ್ ಎಂಬಿಎ ೈನಲ್ ಇಯರ್‌ನಲ್ಲಿ ಓದುತ್ತಿದ್ದಾನೆ. ಆತನಿಗೂ ಯಾವಾಗಲೂ ಭವಿಷ್ಯದ ಬಗ್ಗೆಯೇ ಕಾಳಜಿ. ಪರೀಕ್ಷೆ ಬಗ್ಗೆ ವಿಪರೀತ ಭಯ. ೇಲ್ ಆದರೆ ಏನು ಮಾಡುವುದು ಎನ್ನುವಂಥ ಪ್ರಶ್ನೆಗಳ ಮೂಟೆಯನ್ನು ತಲೆಯಲ್ಲಿ ತುಂಬಿಕೊಂಡು, ಓದಿನ ಮೇಲೂ ಏಕಾಗ್ರತೆ ಸಾಧಿಸಲು ಆಗುತ್ತಿಲ್ಲ. ಆತನ ಗೆಳೆಯ ಸುಜಿತ್ ಮಾತ್ರಘಿ, ಪರೀಕ್ಷೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಈ ಕ್ಷಣದಲ್ಲಿ ಓದುವುದಷ್ಟೇ ಮುಖ್ಯ ಎಂದು ಭಾವಿಸಿ, ಅದನ್ನು ಆನಂದಿಸುತ್ತಲೇ ಮಾಡುತ್ತಾನೆ. ಸುರೇಶ್‌ನಿಗೆ ಸುಜಿತ್ ತಿಳಿ ಹೇಳುತ್ತಾನೆ; ಪರೀಕ್ಷೆಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡ. ನಮ್ಮ ಕೆಲಸ ಚೆನ್ನಾಗಿ ಓದುವುದು. ಹಾಗಂತ ಬರೀ ಓದುವುದಲ್ಲ; ಎಂಜಾಯ್ ಮಾಡುತ್ತಾ ಓದುವುದು. ಹಾಗೆ ಮಾಡಿದರೆ, ನಿನಗೆ ಭಯ ಇರುವುದಿಲ್ಲಘಿ. ಸುಮ್ಮನೆ ಯಾಕೆ ಏನೇನೊ ನಿನ್ನಷ್ಟಕ್ಕೆ ನೀನು ಯೋಚನೆ ಮಾಡಿಕೊಂಡು, ಈ ಕ್ಷಣದ ಸಂತೋಷ ಹಾಳು ಮಾಡಿಕೊಳ್ಳುತ್ತೀಯಾ ಎನ್ನುತ್ತಾನೆ.
***
ಈ ತರಹದ ಸಮಸ್ಯೆಯ ಸುಳಿಯಲ್ಲಿ ಬಹಳಷ್ಟು ಜನರು ಸಿಲುಕಿಕೊಂಡಿದ್ದಾರೆ. ಮುಂದೆ ಆಗಬಹುದಾದ  ಇಲ್ಲವೇ ಘಟಿಸಲು ಸಾಧ್ಯವೇ ಇಲ್ಲದಂಥ ಸಂಗತಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೇವೆ. ಅದೇ ವೇಳೆಯಲ್ಲಿ ಈ ಹೊತ್ತಿನಲ್ಲಿ ನಮಗೆ ದೊರೆಯಬಹುದಾದ ಚಿಕ್ಕ, ಪುಟ್ಟ ಸಂತೋಷ, ನೆಮ್ಮದಿಗಳನ್ನೆಲ್ಲ ಮರೆತು, ನಮ್ಮ ಇಡೀ ಜೀವನವನ್ನು ಗೋಳುಮಯ ಮಾಡಿಕೊಳ್ಳುತ್ತೇವೆ. ಇಂಥ ಸಂದರ್ಭದಲ್ಲಿ ಭಗವಾನ್ ಬುದ್ಧ ಹೇಳಿದ ಮಾತು ಹೆಚ್ಚು ಆಪ್ತವಾಗುತ್ತದೆ. ‘ಭೂತಕಾಲದಲ್ಲಿ ವಾಸಿಸಬೇಡ, ಭವಿಷ್ಯದ  ಬಗ್ಗೆ ಚಿಂತಿಸಬೇಡ; ಈ ಕ್ಷಣದ ಬಗ್ಗೆ ಮನಸ್ಸಿನ ಮೇಲೆ ಏಕಾಗ್ರತೆಯನ್ನು ಸಾಧಿಸು’ ಎನ್ನುತ್ತಾರೆ ಬುದ್ಧಘಿ. ಅಂದರೆ, ನಾವು ಈಗ ಏನು ಮಾಡುತ್ತಿದ್ದೇವೊ ಅದನ್ನೇ ಅಚ್ಚುಕಟ್ಟಾಗಿ, ಯಾವುದಕ್ಕೂ ಚ್ಯುತಿ ಬಾರದಂತೆ ಮಾಡಿಬಿಡಬೇಕು. ಅದು ಬಿಟ್ಟುಘಿ, ಅಯ್ಯೊ ನನಗೆ ಹಿಂದೆ ಹೀಗೆ ಆಗಿತ್ತಲ್ಲ ಎಂಬ ಕೊರಗನ್ನು ವರ್ತಮಾನಕ್ಕೆ ಅನ್ವಯಿಸಿಕೊಂಡು ಕುಳಿತುಕೊಳ್ಳಬಾರದು. ಇದರಿಂದ ನಿಮ್ಮ ಈಗಿನ ಕೆಲಸಗಳ್ಯಾವುವೂ ಸುಗಮವಾಗಿ ಮುಗಿಯುವುದಿಲ್ಲಘಿ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮನಸ್ಸಿನ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹಾಗೆಯೇ, ಭವಿಷ್ಯದ ಬಗ್ಗೆ ವಿನಾಕಾರಣ ಅತಿಯಾಗಿ ಚಿಂತಿಸುವುದು ಒಳ್ಳೆಯದಲ್ಲಘಿ. ಕಾರಣವಿಲ್ಲದ ಭಯಪಡುವುದು ತರವಲ್ಲಘಿ. ಹಾಗಂತ, ಭವಿಷ್ಯದ ಕುರಿತು ಯೋಚಿಸುವುದೇ ತಪ್ಪು ಎಂದಲ್ಲಘಿ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳಿಘಿ, ಗುರಿಗಳನ್ನು ಹಾಕಿಕೊಳ್ಳಿಘಿ. ಆದರೆ, ಭಯಗೊಳ್ಳಬೇಡಿ. ಮೇಲಿಂದ ಮೇಲೆ ಆ ಕುರಿತು ಚಿಂತಿಸುವುದು ಮತ್ತು ಅದರಲ್ಲೇ ಕೊರಗುವುದು ವ್ಯಸನವಾಗಬಾರದಷ್ಟೇಘಿ.
ಹಾಗಾದರೆ, ಈ ಕ್ಷಣದಲ್ಲಿ ಬದುಕುವುದು ಹೇಗೆ? ಈ ಪ್ರಶ್ನೆಗೆ ಜರ್ಮನಿಯ ಖ್ಯಾತ ಟೆನ್ನಿಸ್ ತಾರೆ ಏಂಜಿಲಿಕ್ ಕೆರ್ಬರ್ ಅವರ ಮಾತುಗಳು ಉತ್ತರ ನೀಡಬಲ್ಲವು. ‘‘ಯಾವುದೇ ಸಮಸ್ಯೆಘಿ, ಸಂಗತಿಗಳನ್ನು ತುಂಬಾ ಸಂಕೀರ್ಣಗೊಳಿಸಲು ಹೋಗಬೇಡಿ. ರಿಲಾಕ್ಸ್ ಆಗಿರಲು ಪ್ರಯತ್ನಿಸಿ, ಪ್ರತಿ ಕ್ಷಣವನ್ನು ಎಂಜಾಯ್ ಮಾಡಿ ಮತ್ತು ಅದರ ಸದ್ಬಳಕೆ ಮಾಡಿಕೊಳ್ಳಿ,’’ ಎಂದೆನ್ನುವ ಕೆರ್ಬರ್ ಮಾತುಗಳಲ್ಲಿ ಸತ್ಯವಿದೆ. ನಾವೆಲ್ಲರೂ ತಮ್ಮ ಜೀವನದ ಪ್ರತಿ ಕ್ಷಣಗಳನ್ನು ಸಂಕೀರ್ಣಗೊಳಿಸುತ್ತಲೇ ಹೋಗುತ್ತೇವೆ. ತುಂಬ ಸರಳವಾಗಿ ಬಗೆಹರಿಯಬಹುದಾದ ಸಮಸ್ಯೆಯನ್ನು ಗುಡ್ಡ ಮಾಡಿಟ್ಟು ಬಿಡುತ್ತೇವೆ. ಅಯ್ಯೋ ಹೀಗಾಯ್ತಲ್ಲ ಎಂದು ಕರಬುತ್ತೇವೆ. ಸರಳವಾಗಿ ಮುಗಿಯಬಹುದಾದ ಯಾವುದೋ ಕೆಲಸವನ್ನು ತುಂಬ ದಿನಗಳವರೆಗೆ ಎಳೆದುಕೊಂಡು ಹೋಗುತ್ತೇವೆ. ನಮಗೆ ನಾವೇ ಕಲ್ಪಿತ ಶತ್ರುಗಳನ್ನುಘಿ ಸೃಷ್ಟಿಸಿಕೊಂಡು, ಅವರಿಂದಾಗುವ ಅಪಾಯವನ್ನು ಊಹೆ ಮಾಡಿಕೊಂಡು, ಈಗಿನ ಜೀವನದ, ಈ ಕ್ಷಣದ ಸಂತೋಷವನ್ನು ಕೈ ಚೆಲ್ಲಿ ಬಿಡುತ್ತೇವೆ.
‘ಸಮಯ ಮತ್ತು ಅಲೆಗಳು ಯಾರಿಗೂ ಕಾಯುವುದಿಲ್ಲ’ ಎಂಬ ಮಾತಿದೆ. ಅಂದರೆ, ಪ್ರತಿ ಕ್ಷಣವೂ ಅತ್ಯಮೂಲ್ಯಘಿ. ಅಂಥ ಕ್ಷಣವನ್ನು ಗೋಳಾಟದಿಂದ, ಇನ್ನಾವುದೇ ಭಯದಿಂದ ಕಳೆದುಕೊಳ್ಳುವುದು ಬೇಡ. ಆ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸಿ. ವರ್ತಮಾನವೇ ನಿಜವಾದ ಬದುಕು ಎಂಬುದನ್ನು ಅರಿತುಕೊಳ್ಳಿಘಿ. ಈ ಹಿಂದೆ ಆಗಿ ಹೋದ ಘಟನೆಗಳನ್ನು ಈಗ ಮತ್ತೆ ತರಲಾಗುವುದಿಲ್ಲಘಿ. ಹಾಗೆಯೇ, ಮುಂದೆ ಬರಬಹುದಾದುದನ್ನು ತಡೆಯಲಾಗುವುದಿಲ್ಲ. ವಾಸ್ತವ ಹೀಗಿರುವಾಗ ನಾವೇಕೆ, ಈ ಕ್ಷಣದ ಸಂತೋಷವನ್ನು ಹಾಳು ಮಾಡಿಕೊಳ್ಳಬೇಕು ಹೇಳಿ? ನೀವು ಮಾಡುವ ಪ್ರತಿ ಕೆಲಸವನ್ನು ಸಂತೋಷದಿಂದ ಮಾಡಿ, ಪ್ರೀತಿಯಿಂದ ಮಾಡಿ. ಆಗ ಅದರಲ್ಲಿ ದೊರೆಯುವ ಆನಂದ ಪದಗಳಿಗೂ ನಿಲುಕದ್ದುಘಿ. ಅದನ್ನು ಅನುಭವಿಸಿಯೇ ಸವಿಯಬೇಕು. ನಾವು ಯಾವಾಗ, ಬದುಕಿನ ಪ್ರತಿ ಕ್ಷಣವನ್ನು ಅನುಭವಿಸುತ್ತೇವೆಯೋ ಆಗಲೇ ನೆಮ್ಮದಿ ದೊರೆಯುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿಘಿ.

 ಪ್ರತಿ ಕ್ಷಣ ಆನಂದಿಸುವುದು ಹೇಗೆ?
- ಸದ್ಯ ನೀವು ಮಾಡುವ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ. ಆ ನಿಟ್ಟಿನಲ್ಲಿ ಮನಸ್ಸನ್ನು ತರಬೇತುಗೊಳಿಸಿ.
- ಖಾಲಿಯಾಗಿ ಇರಬೇಡಿ. ಏನಾದರೂ ಮಾಡುತ್ತಲೇ ಇರಿ ಮತ್ತು ಆ ಪ್ರಕ್ರಿಯೆಯನ್ನು ಅನುಭವಿಸಿ.
- ಪ್ರತಿ ಕ್ಷಣವನ್ನು ವರ್ತಮಾನದಲ್ಲೇ ಅನುಭವಿಸುವ ಮತ್ತು ರಿಲಾಕ್ಸ್ ಆಗುವ ತಂತ್ರಗಳನ್ನು ಕರಗತ ಮಾಡಿಕೊಳ್ಳಿ
- ನಿಮ್ಮ ಸುತ್ತಲಿನ ಬಗ್ಗೆ ಗಮನವಿರಲಿ. ಅಂದರೆ, ದೃಶ್ಯಗಳು, ಧ್ವನಿ, ವಾಸನೆ, ವ್ಯಕ್ತಿಗಳು.. ಇತ್ಯಾದಿ.
- ಇತರರ ಮಾತುಗಳನ್ನು ಗಮನವಿಟ್ಟು ಕೇಳಿ. ಸಂಗೀತವನ್ನು ಆಲಿಸಿ. ಅಷ್ಟೇ ಯಾಕೆ, ವೌನವನ್ನೂ ಗಮನವಿಟ್ಟುಕೊಂಡೇ ಅನುಭವಿಸಿ.
- ನೀವು ತಿನ್ನುವ ಆಹಾರವನ್ನು ಸಂತೋಷವಾಗಿಯೇ ತಿನ್ನಿಘಿ. ಆಗ ಸಿಗುವ ಆನಂದವೇ ಬೇರೆ.


(ಈ ಲೇಖನ ಬೋಧಿವೃಕ್ಷದ ಮಾರ್ಚ್ 4ನೇ ತಾರಿಖಿನ ಸಂಚಿಕೆಯಲ್ಲಿ ಪ್ರಕಟವಾಗಿದೆ)

http://www.bodhivrukshaepaper.com/Details.aspx?id=977&boxid=16579717




ಸೋಮವಾರ, ಸೆಪ್ಟೆಂಬರ್ 11, 2017

ಹುಡುಗನೊಬ್ಬನ ಗಜಲ್‌ಗಳು: ಆ ಕಾಗದಲ್ಲಿದ್ದದ್ದು ಎರಡೇ ಪದ; ಕ್ಷಮಿಸಿ ಬಿಡು

- ಪ್ರದ್ಯುಮ್ನ
ಮಳೆಗಾಲದ ಈ ದಿನಗಳೇ ಹಾಗೆ. ಒಂಚೂರು ನೆನಪುಗಳನ್ನು ಹಸಿ ಹಸಿಯಾಗಿಟ್ಟು, ಮತ್ತೊಂದಿಷ್ಟನ್ನು ಶಾಶ್ವತವಾಗಿ ಶವಾಗಾರಕ್ಕೆ ತಳ್ಳುವ ಸಾಧನ. ಇಂದು ವ್ಯಾಪಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟ ದಿನ ಮಳೆ ಮಾಯ; ಮಾರನೇ ದಿನ ಭೋರ್ಗರೆಯುವ ವರ್ಷಧಾರೆ. ನಮ್ಮ್ಮಳಗಿನ ನೆನಪುಗಳು ಹಾಗೆಯೇ. ಅವು ಜೀವಗೊಳ್ಳಲು ಯಾವುದೇ ಸೂಚನೆಗಳಿಲ್ಲ; ಯಾವುದೋ ಒಂದು ಸಣ್ಣ ನೆಪ ಸಾಕು ಭಗ್ಗನೇ ಪ್ರಜ್ವಲಿಸಲು. ಅಂದು ಹಾಗೆಯೇ ಆಗಿತ್ತು. ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಬೆಳಗ್ಗೆ ಸಂಭವಿಸಬೇಕಾಗಿದ್ದ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯಲಿಲ್ಲ. ಅರ್ಥಾತ್ ಹಾಲು ಹಾಕುವವನು ಸರಿಯಾದ ಟೈಮ್‌ಗೆ ಬರಲಿಲ್ಲ. ಪೇಪರ್ ಹುಡುಗ ತೊಯ್ದ ತೊಪ್ಪೆಯಾದ ನಾಲ್ಕು ಪೇಪರ್‌ಗಳನ್ನು ರಸ್ತೆಯ ಆ ಬದಿಯಿಂದಲೇ ಇತ್ತ ಎಸೆದು ಪರಾರಿ... ಹೀಗೆ ಎಲ್ಲ ಕೆಲಸಗಳು!
ನೀರಿನಲ್ಲಿ ಅದ್ದಿ ತೆಗೆದಂತಿದ್ದ ಪತ್ರಿಕೆಯ ಒಂದೊಂದು ಪುಟವನ್ನು ಎಚ್ಚರಿಕೆಯಿಂದ ಬಿಡಿಸುತ್ತಿರುವಾಗಲೇ ಮೂಲೆಯೊಂದರಲ್ಲಿ ಪುಟ್ಟ ಸುದ್ದಿ ಕಣ್ಣಿಗೆ ಬಿತ್ತು; ಆತ್ಮಹತ್ಯೆ. ಇಂಥ ಸುದ್ದಿಯನ್ನು ನಾನೇನೂ ಮೊದಲ ಬಾರಿ ಓದುತ್ತಿರಲಿಲ್ಲ. ಆತ್ಮಹತ್ಯೆಗಳ ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ, ಈ ಸುದ್ದಿ ಮಾತ್ರ ನನ್ನೊಳಗೇ ಮಾಸದೆ, ಕದಲದೇ ಕುಳಿತ್ತಿದ್ದ ಆ ದುರಂತದ ಅನೇಕ ನೆನಪುಗಳನ್ನು ಬಡೆದೆಬ್ಬಿಸಿತು. ನಾನು ಪ್ರತಿಕ್ಷಣ ಮರೆಯಲು ಕಷ್ಟಪಡುವ ಯಾತನಾಮಯ ನೆನಪುಗಳವು.
****
ಅವಳಾದರೂ ಎಂಥವಳು? ಅವಳನ್ನೊಮ್ಮೆ ನೋಡಿದ ಬಳಿಕ ಮತ್ತೊಮ್ಮೆ ತಿರುಗಿ ನೋಡಲೇಬೇಕೆನ್ನುವ ರೂಪವತಿ. ಆಕೆಗೆ ತನ್ನ ರೂಪ, ಲಾವಣ್ಯದ ಬಗ್ಗೆ ತುಸು ಗರ್ವವೂ ಇತ್ತು. ಇಟ್ಸ್ ನ್ಯಾಚುರಲ್. ಆದರೆ, ಅವಳಲ್ಲಿದ್ದ ಧೈರ್ಯ ಮಾತ್ರ ಅದಮ್ಯ, ಅಚಲ, ಬಂಡೆಯಂಥದ್ದು. ಆ ಗುಣವೇ ನನ್ನನ್ನು ಆಕರ್ಷಿಸಿದ್ದು. ಕಾಲೇಜ್‌ಗೆ ಬರುವಾಗ ಬೀದಿ ಕಾಮಣ್ಣರು ತಿರುಗಿ ಬಿದ್ದಿದ್ದು ಆ ಪುಟ್ಟ ಪಟ್ಟಣದ ಪೂರ್ತಿ ದೊಡ್ಡ ಸುದ್ದಿಯಾಗಿತ್ತು. ಹಾಗಿತ್ತು ಅವಳ ಧೈರ್ಯ. ಕಾಲೇಜಿನಲ್ಲಿ ಅವಳನ್ನು ಕಂಡು ಬಹುತೇಕರೆಲ್ಲರೂ ಮಾರು ದೂರವೇ ಇರುತ್ತಿದ್ದರು. ನಾನೋ ಅವಳನ್ನು ನನಗರಿವಿಲ್ಲದಂತೆ ಹುಚ್ಚನಂತೆ ಪ್ರೀತಿಸುತ್ತಿದ್ದೆ. ಆದರೆ, ಹೇಳುವುದು ಹೇಗೆ? ಅದಕ್ಕೆ ಎಲ್ಲಿಂದ ತರಬೇಕು ಧೈರ್ಯ? ಆದರೆ, ಎಂಥ ಗಟ್ಟಿ ಹುಡುಗಿಯಾದರೂ ಅವಳೊಳಗೆ ಒಬ್ಬ ಮುಗ್ಧೆ ಇರುತ್ತಾಳೆ, ಕರುಣಾಮಯಿ ಇರುತ್ತಾಳೆ. ಯಾಕೆಂದರೆ, ಹೆಣ್ಣೆಂದರೆ ಹಾಗೆ ಅಲ್ಲವೇ? ಅವಳು ಸಹನೆಯ ಪ್ರತಿರೂಪ, ವಾತ್ಸಲ್ಯದ ಗಣಿ. ಪ್ರೀತಿ ತೋರಿದರೆ ತಿರುಗಿ ಅದೇ ಸಿಗುತ್ತದೆ ಎನ್ನುತ್ತಾರಲ್ಲ ಹಾಗೆ ಅವಳಿದ್ದಳು. ಅವಳು ಅಂದರೆ ಅವಳೇ. ಅವಳ ಹಾಗೆ ಮತ್ತಾರು ಇರಲಿಲ್ಲ. ಹಾಗಾಗಿ ಕಾಲೇಜ್‌ನಲ್ಲಿ ಅವಳಿಗೆ ಸ್ಟಾರ್‌ಗಿರಿ ತನ್ನಿಂದತಾನೇ ಒಲಿದು ಬಂದಿತ್ತು. ಆಕೆಯ ಕುಟುಂಬವೂ ಆ ಪಟ್ಟಣದಲ್ಲಿ
ಸ್ಥಿತಿವಂತವಾಗಿತ್ತು; ರೆಪ್ಯೂಟೆಡ್ ಫ್ಯಾಮಿಲಿ. ಆದರೆ, ನಾನು? ನನ್ನಲ್ಲೇ ನನಗೇ ಅನೇಕ ಪ್ರಶ್ನೆಗಳಿದ್ದವು; ಉತ್ತರ ದೊರೆಯುವುದು
ಯಾವ ಸಾಧ್ಯತೆಗಳಿರಲಿಲ್ಲ. ಕಾಲೇಜ್‌ಗೆ ಬರುವುದೇ ದೊಡ್ಡ ಸಾಹಸವಾಗಿರುವಾಗ ಇನ್ನು ಪ್ರೀತಿ, ಪ್ರೇಮಕ್ಕೆ ಎಲ್ಲಿಂದ ಬರಬೇಕು
ಧೈರ್ಯ? ಆದರೂ, ಈ ಹುಚ್ಚುಖೋಡಿ ಮನಸ್ಸು ಕೇಳಬೇಕಲ್ಲ. ಅದು ತನ್ನ ಹುಚ್ಚು ಜಗತ್ತಿನಲ್ಲೇ ಲಂಗು ಲಗಾಮಿಲ್ಲದೇ ಓಡುವ ಕುದುರೆ. ನನ್ನ ಕಲ್ಪನೆಯ ಲೋಕದಲ್ಲಿ ಈ ಕುದುರೆ ಕಟ್ಟಿ ಹಾಕುವ ಧೀಮಂತಿಕೆ ಆಕೆಗೂ ಇರಲಿಲ್ಲ. ಇರಲಾದರೂ ಹೇಗೆ ಸಾಧ್ಯ?
ಆದರೆ, ಅದೊಂದು ದಿನ, ಅಲ್ಲಲ್ಲ ಸುದಿನ ಅದು. ಭೂಮಿ-ಆಕಾಶ ಎಂದಾದರೂ ಒಂದಾದೀತೆ ಎಂದು ಭಾವಿಸಿದ್ದವನ ಭಾಗ್ಯದ ಬಾಗಿಲು ತೆರೆದ ದಿನ. ಅಂದು ಹಾಗೆ ಆಗಿತ್ತು. ಬೆಳಗಿನ ಜಾವದಿಂದಲೇ ಸುರಿಯುತ್ತಿದ್ದ ಮಳೆಗೆ ಕರುಣೆಯೇ ಇರಲಿಲ್ಲ. ಆಕಾಶ ತನ್ನೆಲ್ಲ ಸಿಟ್ಟು, ದುಃಖವನ್ನು ಈ ಕಣ್ಣೀರ ಮೂಲಕ ಹಾಕುತ್ತಿದೆ ಎನ್ನುವಂತಿತ್ತು. ಅದು ಎಂಥ ಮಳೆ, ಭೋರ್ಗರೆಯುವ ಜಲಪಾತದಡಿ ಶಬ್ದ ಕೇಳಿಸುತ್ತದಲ್ಲವೇ, ಹಾಗಿತ್ತು ಮಳೆಯು ಭೂಮಿಗೆ ಅಪ್ಪಳಿಸುವಾಗ ಹೊರಡುವ ಸೌಂಡು. ಅಂದರೆ ನೀವೇ ಊಹಿಸಿ. ಬಹುಶಃ ಅಷ್ಟೊಂದು ಮಳೆಯನ್ನು ಈ ಪಟ್ಟಣ ಹಿಂದೆಂದೂ ಕಂಡಿರಲಿಲ್ಲ. ಮಳೆ ತುಸುವೇ ಬಿಡುವು ಕೊಟ್ಟಿದ್ದ  ಸಮಯದಲ್ಲಿ  ನಾನು ನನ್ನ ತಡಕ್ಲಾಸ್ ಸೈಕಲ್ ಏರಿ ಕಾಲೇಜ್‌ನತ್ತ ಮುಖ ಮಾಡಿದ್ದೆ. ಇನ್ನೇನೂ ಕಾಲೇಜ್ ಅರ್ಧ ಕಿಲೋ ಮೀಟರ್ ಇರಬೇಕು. ಅವಳು ತನ್ನ ಸ್ಕೂಟಿ ತಳ್ಳುತ್ತಾ  ಏದುಸಿರು  ಬಿಡುತ್ತಾ ಹೊರಟಿದ್ದಳು. ನಾನು ಅವಳನ್ನೊಮ್ಮೆ ನೋಡಿ ಮುಗಳ್ನಕ್ಕೆ. ಅವಳ ಕಣ್ಣಿನಲ್ಲಿ ನೆರವಿನ ಬೇಡಿಕೆ; ಅದನ್ನರಿತೇ ಅವಳತ್ತ ಧಾವಿಸಿದೆ. ಇಲ್ಲದಿದ್ದರೆ ಆಕೆಯತ್ತ ಹೋಗುವ ಧೈರ್ಯ ಯಾವ ಹುಡುಗನಿಗಿತ್ತು ಹೇಳಿ? ಅವಳಿಗೆ ಗೊತ್ತಿತ್ತು ಕಾಲೇಜ್ ಬಿಡುವಿನ ವೇಳೆ ನಾನು ಮೋಟಾರ್ ಸೈಕಲ್ ರಿಪೇರಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದದ್ದು. ಆಕೆಯ ಸ್ಕೂಟಿ ಪಕ್ಕಕ್ಕೆ ಹಚ್ಚಿ ಒಂದಿಷ್ಟು ಆ ಕಡೆ, ಈ ಕಡೆ ನೋಡಿದೆ, ಪ್ಲಗ್ ಕ್ಲೀನ್ ಮಾಡಿ ಹಾಕಿದ್ದೇ ತಡ ಸ್ಕೂಟಿ ತನ್ನ ಎಂದಿನ ಲಯಕ್ಕೆ ಮರಳಿತ್ತು. ಅವಳ ಮುಖದಲ್ಲಿ ಖುಷಿಯ ಹೊನಲಿತ್ತು. ಸಣ್ಣಗೆ ಹನಿಯುತ್ತಿದ್ದ ಮಳೆಗೆ ಆಕೆಯ ಮುಖ ತುಂಬ ಮಳೆ ಹನಿಗಳ ಮುತ್ತಗಳಿದ್ದವು!
ನಾನು ಇನ್ನೇನು ಸೈಕಲ್ ಏರಬೇಕನ್ನುವಷ್ಟರಲ್ಲಿ. ‘‘ನಂಗೆ ಗೊತ್ತು. ನೀನು ನನ್ನ ಇಷ್ಟಪಡಿತ್ತಿದ್ದೀಯಾ,’’ ಎಂದವಳೇ ಸ್ಕೂಟಿಯ ಕಿವಿ ಹಿಂಡಿತ್ತಾ, ಮುಗುಳು ನಗೆ ಬೀರಿ ಹೊರಟೇ ಹೋದಳು. ಇತ್ತ ಮಳೆ ಕರುಣೆ ಇಲ್ಲದಂತೆ ಭೋರ್ಗರೆಯಲಾರಂಭಿಸಿತು ಮತ್ತೆ. ಅಲ್ಲಿಗೆ ಎಲ್ಲ ಖಾತ್ರಿಯಾಗಿತ್ತು. ಅವಳ್ಯಾಕೆ ನನ್ನನ್ನು ಇಷ್ಟಪಡುತ್ತಿದ್ದಳು ಎನ್ನುವುದು ಇಂದಿಗೂ ನನಗೆ ಗೊತ್ತಿಲ್ಲ. ಅಂದಿನ ಆ ನಮ್ಮ ಭೇಟಿ ಮುಂದೆ ದಿನವೂ ನಮ್ಮಿಬ್ಬರ ಸ್ನೇಹ ಮತ್ತೊಂದು ಹಂತಕ್ಕೆ ತಲುಪಿ, ಪ್ರೀತಿಯ ಹಡಗಿನಲ್ಲಿ ಪಯಣಿಸಲು ದಾರಿ ಮಾಡಿಕೊಟ್ಟಿತ್ತು. ಅವಳ ಜತೆ ಕಳೆದ ಅಷ್ಟೂ ಕ್ಷಣಗಳು ನನ್ನ ಪಾಲಿನ ಅಮೂಲ್ಯ ರತ್ನಗಳು. ಅವುಗಳಿಗೆ ಬೆಲೆಯೇ ಕಟ್ಟಲಾಗದು.
ನಮ್ಮ ಎಂದಿನ ಭೇಟಿಗಳಲ್ಲಿ ಗೊತ್ತಾಗಿದ್ದು ಏನಂದರೆ; ಅವಳು ತನ್ನ ತಾಯಿಯನ್ನು ಬೆಟ್ಟದಷ್ಟು ಪ್ರೀತಿಸುತ್ತಿದ್ದಳು. ಇನ್‌ಫ್ಯಾಕ್ಟ್, ನನ್ನನ್ನು ಪ್ರೀತಿಸುವುದುಕ್ಕಿಂತಲೂ ಹೆಚ್ಚು. ತಾಯಿಯೇ ಆಕೆಗೆ ಸ್ನೇಹಿತೆ, ಗುರು... ಎಲ್ಲವೂ ಆಗಿದ್ದಳು. ಅಷ್ಟೊಂದು ಗಟ್ಟಿಗತ್ತಿಯಾಗಲು ತಾಯಿಯೇ ಕಾರಣ ಎನ್ನುತ್ತಿದ್ದವಳು, ಆಕೆಯನ್ನು ಯಾವಾಗ ಬೇಕಾದರೂ ನಾನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇನೆ ಎಂದು ಕಣ್ಣೀರು ಹಾಕುತ್ತಿದ್ದಳು. ಅವಳು ಇಲ್ಲದಿದ್ದರೆ ತನಗೇ ಬದುಕೇ ಇಲ್ಲ. ನೀನು ನನ್ನ ತಾಯಿಯೇ ಆಗಬೇಕು ಎನ್ನುತ್ತಿದ್ದುದ್ದನ್ನು ನೋಡಿದರೆ, ಇವಳೇನಾ ಕಾಲೇಜಿನಲ್ಲಿ ನಾನು ನೋಡಿದ ಗಟ್ಟಿಗತ್ತಿ ಎಂಬ ಅನುಮಾನ ಬರುತ್ತಿತ್ತು. ಆಂತರ್ಯದಲ್ಲಿ ಅಷ್ಟೊಂದು ಮೃದುವಾಗಿದ್ದಳು.
ಆಕೆ, ಯಾವ ಕ್ಷಣ ತನ್ನ ಜೀವನದಲ್ಲಿ ಬರಬಾರದು ಎಂದು ಹಗಲಿರುವ ಪ್ರಾರ್ಥಿಸುತ್ತಿದ್ದಳು ಆ ಕ್ಷಣ ಬಂದು ಬಿಟ್ಟಿತು. ಇತಿಹಾಸದ ಮೇಷ್ಟ್ರು ತಮ್ಮ ಎಂದಿನ ಕಥನ ಶೈಲಿಯಲ್ಲಿ ಪಾಠ ಮಾಡುತ್ತಿರುವಾಗಲೇ ಅಟೆಂಡರ್ ಬಂದು ಆಕೆಯನ್ನು ಹೊರ ಕರೆದು ತಾಯಿ ಸತ್ತ ಸುದ್ದಿ ಮುಟ್ಟಿಸಿದ್ದ. ಆಕೆಯ ಕಣ್ಣೀರು ಕಂಡೆ ನನಗೆಲ್ಲವೂ ಅರ್ಥವಾಗಿತ್ತು. ಆಕೆಯ ಹಿಂದೆ ನಾನು ಎದ್ದು ಹೊರಟೆ. ಅವಳ ಮುಖ ನೋಡುವ ಧೈರ್ಯ ನನ್ನಲ್ಲಿರಲಿಲ್ಲ. ಕಣ್ಣೀರು ಸುರಿಯುತ್ತಲೇ ಇತ್ತು. ಅಯ್ಯೋ ದೇವರೇ... ಆಕೆಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡೆಂದು ಕೇಳಿಕೊಳ್ಳುವುದನ್ನು ಬಿಟ್ಟರೆ ಆಕೆಯನ್ನು ಸಂತೈಸುವ ದಾರಿ ನನ್ನ ಬಳಿ ಇರಲಿಲ್ಲ.
ಎಲ್ಲವು ಮುಗಿದು ಮತ್ತೆ ಕಾಲೇಜ್‌ಗೆ ಬಂದಾಗ ಆಕೆ ಮೊದಲಿನಂತಿರಲಿಲ್ಲ. ಆಕೆಯ ಕಣ್ಣಲ್ಲಿ ಹೊಳಪು ಮಾಸಿತ್ತು; ಧಾಡಸಿತನದ ಕುರುಹುಗಳು ಮಾಯವಾಗಿದ್ದವು. ರೂಪವತಿಯಾದ ಮುಖವೀಗ ಕಳಾಹೀನವಾಗಿತ್ತು. ತಾಯಿ ಅಗಲಿಕೆ ಆಕೆಯನ್ನು ಹೈರಾಣಾಗಿಸಿತ್ತು. ನನ್ನ ಮಾತುಗಳಿಂದ ಒಂದಿಷ್ಟು ಆಹ್ಲಾದ ತಂದುಕೊಂಡುವಳಂತೆ ಕಾಣುತ್ತಿದ್ದಳಾದರೂ ಮತ್ತೆ ಅದೇ ದುಃಖದ ಮಡುವಿನಲ್ಲೇ ಇರುತ್ತಿದ್ದಳು. ಈಕೆಯನ್ನು ಮೊದಲಿನ ಗಟ್ಟಿಗತ್ತಿ ಹುಡುಗಿಯನ್ನಾಗಿ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ ಒಂದಿಷ್ಟು ದಿನಗಳು ಉರುಳಿದವು.
ಅದೊಂದು ದಿನ. ನಾನು ಕನಸು ಮನಸ್ಸಿನಲ್ಲಿ ಎಣಿಸಿರದ ಸುದ್ದಿಯೊಂದು ಅಪ್ಪಳಿಸಿತು. ಆಕೆಯ ಆತ್ಮಹತ್ಯೆಯ ಸುದ್ದಿ ಕೇಳಿದಾಕ್ಷಣ ನಾನು ನಿಂತ ನೆಲ ಕಂಪಿಸಿದಂತಾಯಿತು. ಏನಾಯಿತು ಎನ್ನುವಷ್ಟರಲ್ಲಿ ನಾನು ಪ್ರಜ್ಞೆಯ ಪರಿಧಿ ದಾಟಿ ಹೋಗಿದ್ದೆ; ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಪಕ್ಕದಲ್ಲಿದ್ದ ಸ್ನೇಹಿತ ನನಗೆ ಪ್ರಜ್ಞೆ ಬಂದಿದ್ದು ನೋಡಿ ಖುಷಿಯಾಗಿದ್ದ. ‘‘ಮೂರು ದಿನ ಆಯ್ತು ಕಣೋ ಆಸ್ಪತ್ರೆಯಲ್ಲಿದ್ದೀಯಾ,’’ ಎಂದ. ನಾನು, ‘‘ಅವಳು....’’ ಎನ್ನುವಷ್ಟರಲ್ಲಿ ತನ್ನ ಜೇಬಿನಲ್ಲಿದ್ದ ಮಡಚಿದ ಕಾಗದವನ್ನು ಕೊಟ್ಟ. ಅದರಲ್ಲಿದ್ದದ್ದು ಎರಡೇ ಪದ; ಕ್ಷಮಿಸಿ ಬಿಡು.
****
ಅಂಥ ಧೈರ್ಯವಂತೆ, ಎಂಥ ಸನ್ನಿವೇಶವನ್ನು ಎದುರಿಸುವಂಥ ಛಾತಿ ಇದ್ದ ಹುಡುಗಿ ಆಂತರ್ಯದಲ್ಲಿ ಇಷ್ಟೊಂದು ದುರ್ಬಲಳಾಗಿದ್ದಳೇ? ಈ ಪ್ರಶ್ನೆಗೆ ಅಂದಿನಿಂದ ಇಂದಿಗೂ
ಉತ್ತರ ಹುಡುಕುತ್ತಲೇ ಇದ್ದೇನೆ. ಯಾಕೆಂದರೆ, ಆಕೆಯನ್ನು ನೋಡಿದ ಯಾರೇ ಅವಳು ಹೀಗೆ ಮಾಡಬಹುದು ಎಂದು ಊಹಿಸಲು ಸಾಧ್ಯವಿರಲಿಲ್ಲ; ಹಾಗಿದ್ದಳು ನನ್ನ ಹುಡುಗಿ. ಹೀಗೆ ದುರಂತದ ನೆನಪುಗಳು ಮಳೆಯಲ್ಲಿ ಮತ್ತೆ ಜೀವ ಪಡೆಯುತ್ತಿರುವಾಗಲೇ ಆಕೆ ಕೊಟ್ಟ ಹೋದ ಕಾಗದವನ್ನು ಮತ್ತೊಮ್ಮೆ ಬಿಚ್ಚಿ ನೋಡಿದೆ. ಅವಳ ನಗುವಿನ ಮುಖ ಮಿಂಚಿ ಮರೆಯಾಯ್ತು. ಹೊರಗಡೆ ಮತ್ತೆ ಮಳೆ ಭೋರ್ಗರೆಯಾರಂಭಿಸಿತು. ನನಗೆ ಗೊತ್ತಿಲ್ಲದಂತೆ ಕಣ್ಣ ಹನಿಯೊಂದು ಆ ಕಾಗದ ಮೇಲೆ ಬಿದ್ದು ಇಂಗಿ ಹೋಯಿತು.

(ಈ ಲೇಖನ ವಿಜಯ ಕರ್ನಾಟಕದ ಸೆಪ್ಟೆಂಬರ್ 11, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಸೋಮವಾರ, ಜುಲೈ 31, 2017

ಹುಡುಗನೊಬ್ಬನ ಗಜಲ್‌ಗಳು: ನಾವು ಸಾಯಲ್ಲ, ಬದುಕುತ್ತೇವೆ ಎನ್ನುವ ಕೂಗು ಗುಮ್ಮಟದಲ್ಲಿ ಪ್ರತಿಧ್ವನಿಸಿತು....

- ಪ್ರದ್ಯುಮ್ನ
ವಿಶ್ವ ವಿಖ್ಯಾತ ಗೋಲ್‌ಗುಂಬಜ್‌ನ ಅಭಿಮುಖವಾಗಿ ಮುಖ್ಯ ರಸ್ತೆಯ ಆಚೆ ಇದ್ದ ಈ ಲಾಡ್ಜ್‌ನ ಕೋಣೆ ತುಂಬ ವೌನ. ಕಿಟಕಿಯಾಚೆ ನೋಡಿದರೆ ಗಂಭೀರತೆಯನ್ನೇ ಹೊತ್ತು ನಿಂತಂತೆ ಭಾಸವಾಗುತ್ತಿದ್ದ ಗೋಲ್‌ಗುಂಬಜ್‌ನ ಬೃಹತ್ ಗುಮ್ಮಟ ಮಾತ್ರ ಕಣ್ಣಳತೆಯಲ್ಲಿತ್ತು. ಆ ಗುಮ್ಮಟದ ಪ್ಯಾಸೇಜ್‌ನಲ್ಲಿ ಓಡಾಡುತ್ತಿರುವ ಪ್ರವಾಸಿಗರು ಚಿಕ್ಕವರಂತೆ ಕಾಣುತ್ತಿದ್ದರು. ಇದನ್ನೆಲ್ಲ ನೋಡುತ್ತಿದ್ದ ಅವರಿಬ್ಬರ ಮುಖದಲ್ಲೀಗ ಯಾವುದೇ ಭಾವನೆಗಳಿಲ್ಲ. ನಿರ್ಭಾವುಕ ಮನಸ್ಸು. ಎಲ್ಲವೂ ಮೊದಲೇ ನಿರ್ಧರಿಸಿಕೊಂಡಂತಿತ್ತು. ತಾವೇನು ಮಾಡಲು ಹೊರಟಿದ್ದೇವೆ ಎಂಬ ಸ್ಪಷ್ಟ ಅರಿವು ಅವರಲ್ಲಿತ್ತು. ಹೊರಗಡೆ ಧಾವಂತ, ಬಸ್‌ಗಳ ಓಡಾಟ, ಆಟೋಗಳ ಹಾರ್ನ್, ಜನರ ಕೂಗಾಟಗಳೆಲ್ಲವೂ ಇವರ ಕಿವಿಗೆ ಬಿದ್ದರೂ, ಮನಸ್ಸಿನೊಳಗೆ ಹರಳುಗಟ್ಟುತ್ತಿದ್ದ ಅಂತಿಮ ಕ್ಷಣದ ಭಾವನೆಗಳಿಗೇನೂ ಭಂಗ ತರುತ್ತಿರಲಿಲ್ಲ. ಇಬ್ಬರು ಒಬ್ಬರ ಮುಖವನ್ನೊಮ್ಮೆ ನೋಡುತ್ತಾ, ಗುಮ್ಮಟದತ್ತ ದೃಷ್ಟಿ ಹಾಯಿಸುತ್ತಾ ನಿಂತಿದ್ದರು ಕಿಟಕಿಯ ಪಕ್ಕದಲ್ಲಿ.

ತಾನು ಸತ್ತ ಮೇಲೆ ತನ್ನ ಗೋರಿ ವೈಭವಯುತವಾಗಿರಬೇಕು ಎಂಬ ಮಹದಾಸೆಯಿಂದ ಬಿಜಾಪುರದ ಸುಲ್ತಾನ್ ಆದಿಲ್ ಶಾ ಬದುಕಿರುವಾಗಲೇ ಗೋಲ್ ಗುಂಬಜ್ ನಿರ್ಮಾಣ ಆರಂಭಿಸಿದ್ದ. ಆದರೆ, ಅದು ಪೂರ್ತಿಯಾಗುವ ಮೊದಲೇ ಅಸು ನೀಗಿದ. ಆತ, ಆತನ ಇಬ್ಬರು ಪತ್ನಿಯರಾದ ತಾಜ್ ಜಹಾನ್ ಬೇಗಮ್, ಅರೋಸ್ ಬೀಬಿ ಮತ್ತು ಪ್ರೇಯಸಿ ರಂಭಾ, ಮಕ್ಕಳು, ಮೊಮ್ಮಕ್ಕಳ ಗೋರಿಗಳು ಅದರಲ್ಲಿವೆ ಎಂಬ ಇತಿಹಾಸದ ಕಲ್ಪನೆ ಇಬ್ಬರಿಗೂ ಇತ್ತು. ಆದಿಲ್ ಶಾ ಮತ್ತು ರಂಭಾ ನಡುವಿನ ಪ್ರೇಮದ ಬಗ್ಗೆ ಅಷ್ಟೇನೂ ತಿಳಿವಳಿಕೆ ಇಲ್ಲದಿದ್ದರೂ, ಆಕೆಯೊಬ್ಬಳು ಅಪ್ರತಿಮ ಸುಂದರಿಯಾಗಿದ್ದಳು. ನೃತ್ಯಗಾತಿಯಾಗಿದ್ದ ಆಕೆಯನ್ನು ಆದಿಲ್ ಶಾ ತುಂಬ ಪ್ರೀತಿಸುತ್ತಿದ್ದ ಎಂಬುದನ್ನು ಗೂಗಲಿಂಗ್ ಮಾಡಿ ತಿಳಿದುಕೊಂಡಿದ್ದರು. ಆಗ್ರಾದಲ್ಲಿರುವ ತಾಜ್ ಮಹಲ್ ಪ್ರೇಮ ಸ್ಮಾರಕವಾಗಿ ವಿಶ್ವವಿಖ್ಯಾತವಾಗಿರುವಂತೆ ಈ ಗುಂಬಜ್ ಯಾಕೆ ಪ್ರೇಮ ಸ್ಮಾರಕವಾಗಲಿಲ್ಲ, ಪ್ರೇಮಿಗಳಿಗೊಂದು ವೇದಿಕೆಯಾಗಲಿಲ್ಲ ಎಂಬ ಪ್ರಶ್ನೆಗಳು ಆತನಲ್ಲಿ ಮೂಡುತ್ತಿದ್ದವು. ಹೈಸ್ಕೂಲ್‌ನಲ್ಲಿ ಓದಿದ್ದು ಬಿಟ್ಟರೆ ಇತಿಹಾಸ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ ಆತನಿಗೆ. ಆ ಲಾಡ್ಜ್‌ನ ಆ ಕ್ಷಣದಲ್ಲಿ ಆತನಿಗೆ ಅನಿಸಿದ್ದು; ನಮ್ಮ ಪ್ರೇಮದಂತೆ ಅವರಿಬ್ಬರದ್ದೂ ಎಲ್ಲರಿಂದಲೂ ನಿಕೃಷ್ಟವಾಗಿರಬೇಕು ಇಲ್ಲವೇ ಬೇಕಂತಲೇ ಅವರ ಪ್ರೇಮ ಕಹಾನಿಯನ್ನು ಇತಿಹಾಸಕಾರರು ಸ್ಪಷ್ಟವಾಗಿ ದಾಖಲಿಸಿರಲಿಕ್ಕಿಲ್ಲ... ಹೀಗೆ ನಾನಾ ಯೋಚನೆಗಳಲ್ಲಿ ಮುಳುಗಿದ್ದ ಆತನಿಗೆ, ‘‘ಏನ್ ಯೋಚ್ನೆ ಮಾಡುತ್ತಿದ್ದೀಯಾ?’’ ಎಂದು ಅವನ ಯೋಚನಾಸರಣಿಗೆ ಬ್ರೇಕ್ ಹಾಕಿದಳು. ‘‘ಏನಿಲ್ಲ, ಆದಿಲ್ ಶಾ ಮತ್ತು ರಂಭಾ ಪ್ರೇಮದ ಬಗ್ಗೆ,’’ ಅಂದ ತಲೆ ತಗ್ಗಿಸಿಕೊಂಡೇ. ‘‘ನಮ್ಮ ಪ್ರೀತಿ ಹೇಗೆ ನಮ್ಮವರಿಗೆ ಅನಿಷ್ಟವಾಗಿ ಕಂಡಿದೆಯೋ, ತೀರಾ ಇಂಪಾರ್ಟೆನ್ಸ್ ಇಲ್ಲವೋ ಹಾಗೆ ಇರಬೇಕು ಅವರದ್ದು,’’ ಕಿಟಕಿಯಿಂದಲೇ ಗುಮ್ಮಟವನ್ನು ದಿಟ್ಟಿಸುತ್ತಾ ಆಕೆ ಹೇಳಿದಾಗ, ಅರೇ... ಇವಳು ನನ್ನಂತೆ ಯೋಚಿಸುತ್ತಿದ್ದಾಳಲ್ಲ ಎಂದು ನಸು ನಕ್ಕ. ಅವರಿಬ್ಬರು ಮತ್ತೆ ಅದೇ ಗುಮ್ಮಟದತ್ತ ಚಿತ್ತ ಹಾಯಿಸಿದರು. ಸಂಜೆ ಆಗೋವರೆಗೂ ಗುಮ್ಮಟವನ್ನು ದಿಟ್ಟಿಸಿ ನೋಡುತ್ತ ಇರಬೇಕೆಂದು ನಿರ್ಧರಿಸಿದಂತೆ ಆ ದೃಷ್ಟಿ.
ಬೆಂಗಳೂರಿನಲ್ಲಿ ಪ್ರತಿಷ್ಠತ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ ಅವರಿಬ್ಬರ ಮಧ್ಯೆ ಪ್ರೇಮಾಂಕುರ ಹೇಗೆ ಆಯಿತು ಎಂಬುದಕ್ಕೆ ಉತ್ತರವಿಲ್ಲ. ಅವನು ನಾರ್ಥಿ. ಆದರೆ, ಬೆಂಗಳೂರಿಗೆ ಬಂದು ಐದು ವರ್ಷದಲ್ಲಿ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದ. ಅವಳು ಮೈಸೂರಿನವಳು. ಇಬ್ಬರ ಮಧ್ಯೆ ಇರುವ ಓದುವ ಹವ್ಯಾಸ ಅವರನ್ನು ಒಂದುಗೂಡಿಸಿತ್ತು. ತಾವು ಓದಿದ ಪುಸ್ತಕಗಳ ಬಗ್ಗೆ ವಿಮರ್ಶೆ ಮಾಡಿಕೊಳ್ಳುತ್ತಾ, ಕಾಫಿ ಡೇನಲ್ಲಿ ತಾಸುಗಟ್ಟಲೇ ಕಳೆಯುವುದು ಇಬ್ಬರಿಗೂ ಇಷ್ಟ. ಇಷ್ಟಾನಿಷ್ಟಗಳು ಒಂದಾದ ಮೇಲೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಹುಡುಗ ಉತ್ತರ ಭಾರತೀಯ ಎಂಬ ಕಾರಣವೇ ಅವಳ ಮದುವೆಗೆ ದೊಡ್ಡ ಅಡ್ಡಿಯಾಯಿತು. ಇಂಥದೊಂದು ‘ಕಾರಣ’ ತಮ್ಮಿಬ್ಬರನ್ನು ದೂರ ಮಾಡಬಹುದು ಎಂದೂ ಯೋಚಿಸಿರಲಿಲ್ಲ. ಆದರೆ, ಅದೇ ಸತ್ಯ ಎಂದು ಗೊತ್ತಾದ ಮೇಲೆ, ಬೇರೆ ಬೇರೆಯಾಗಿ ಬದುಕುವುದಕ್ಕಿಂತ ಸಾಯುವುದೇ ಲೇಸೆಂದು ದೂರದ ಬಿಜಾಪುರಕ್ಕೆ ಬಂದು ತಮ್ಮ ಅಂತ್ಯದ ಕ್ಷಣಗಳನ್ನು ಲೆಕ್ಕ ಹಾಕುತ್ತಿದ್ದರು.
ಬಿಜಾಪುರದ ಅಷ್ಟು ಸ್ಥಳಗಳನ್ನೂ ಒಂದು ಇಡೀ ದಿನ ನೋಡಿದ್ದ ಅವರು ಗೋಲ್ ಗುಂಬಜ್ ಮಾತ್ರ ನೋಡಲು ಹೋಗಿರಲಿಲ್ಲ. ಲಾಡ್ಜ್‌ನ ಕಿಟಕಿಯಿಂದಲೇ ಆ ಗುಮ್ಮಟವನ್ನು ತಮ್ಮ ಕಣ್ಣು ತುಂಬಿಕೊಳ್ಳುತ್ತಿದ್ದರು.
ಕೋಣೆಯ ಬಾಗಿಲಿಂದ ಕಟ.. ಕಟ.. ಕಟ.. ಎಂಬ ಶಬ್ಧ ಬಂದಾಗಲೇ ತಾವು ಚಹಾಗೆ ಆರ್ಡರ್ ಮಾಡಿದ್ದು ನೆನಪಾಗಿ, ಬಾಗಿಲು ತರೆದ ಆತ. ಎದುರಿಗಿದ್ದ ಯುವಕನ ಮುಖದಲ್ಲಿ ಮಂದಹಾಸ ನರ್ತಿಸುತ್ತಿತ್ತು. ‘‘ಸರ್, ನಿಮ್ಮ ಚಹಾ..’’ ಎನ್ನುತ್ತಾ ಒಳ ಬಂದು ಟೀಫಾಯಿ ಮೇಲಿಟ್ಟು ನಿಂತ. ಅವರಿಬ್ಬರ ಮುಖವನ್ನೊಮ್ಮೆ ನೋಡಿದ, ಹೋಗು ನೀನು ಇನ್ನು ಎಂಬ ಸೂಚನೆ ಅದರಲ್ಲಿತ್ತು. ‘‘ಸರ್... ತಪ್ಪು ತಿಳಿದುಕೊಳ್ಳುವುದಿಲ್ಲ ಎಂದರೆ ಒಂದು ಮಾತು ಹೇಳಲಾ,’’ ಎಂದ. ಯಾರ ಜತೆ ಮಾತನಾಡಲೂ ಮನಸ್ಸಿಲ್ಲದ ಅವರು ಇವನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರ ಉತ್ತರಕ್ಕೂ ಕಾಯದೆ, ಮಾತು ಮುಂದುವರಿಸಿದ ಆ ಯುವಕ, ‘‘ಸರ್... ನೀವು ಇಲ್ಲಿಗೆ ಬಂದಾಗಿನಿಂದ ನಿಮ್ಮನ್ನು ಗಮನಿಸುತ್ತಿದ್ದೇನೆ. ನಿಮ್ಮಿಬ್ಬರ ನಿರ್ಧಾರ ಏನೆಂದು ನಾನು, ಈ ಮೂರು ವರ್ಷಗಳ ಹಿಂದೆ ನನಗಾದ ಅನುಭವದಿಂದಲೇ ಗ್ರಹಿಸಬಲ್ಲೆ,’’ ಎಂದು ಸುಮ್ಮನಾದ. ಅವರೇನೂ ಇವನ ಮಾತಿಗೆ ಅಂಥ ಆಸಕ್ತಿ ತೋರಿಸಲಿಲ್ಲ. ಆದರೂ, ಮತ್ತೆ ಮುಂದುವರಿದ ಆ ಯುವಕ, ‘‘ನಿಮಗೆ ಇಷ್ಟ ಇಲ್ಲದಿದ್ದರೂ ನನ್ನದೊಂದು ಕತೆ ಹೇಳ್ತಿನಿ ಕೇಳಿ; ನಾನು ಮತ್ತು ನನ್ನ ಗೆಳತಿ ಇಬ್ಬರು ನಿಷ್ಕಲ್ಮಷ ಪ್ರೀತಿಯ ತೂಗುಯ್ಯಲೆಯಲ್ಲಿ ಜೀಕುತ್ತಿದ್ದೆವು. ನಮಗೆ ನಮ್ಮದೇ ಪ್ರಪಂಚ. ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದೆವು. ಅವಳು ನನಗಿಂತಲೂ ಬುದ್ಧಿವಂತೆ, ಗುಣವಂತೆ. ನಮ್ಮ ಪ್ರೀತಿಯಲ್ಲಿ ಲವಲೇಶವೂ ಕಲ್ಮಶವಿರಲಿಲ್ಲ. ಆದರೆ, ಗೊತ್ತಲ್ಲ.. ಈ ಜಗತ್ತು ಪ್ರೀತಿಸುವವರನ್ನು ಹೇಗೆ ನೋಡುತ್ತದೆ ಎಂದು. ನಮ್ಮಿಬ್ಬರ ಪ್ರೀತಿಗೆ ಅಡ್ಡವಾಗಿದ್ದು ಆಕೆಯ ಅಪ್ಪನ ಶ್ರೀಮಂತಿಕೆ. ಆದರೆ, ಅವಳು ಅಂಥ ಶ್ರೀಮಂತಿಕೆಯನ್ನು ಧಿಕ್ಕರಿಸಿ ನನ್ನೊಂದಿಗೆ ಬರಲು ಸಿದ್ಧಳಿದ್ದಳು. ನನಗೆ ಧೈರ್ಯ ಇರಲಿಲ್ಲ. ನಾವಿಬ್ಬರು ನೀವು ಈಗ  ಕೈಗೊಂಡಿರುವ ನಿರ್ಧಾರವನ್ನೇ ಅಂದು ಮಾಡಿ, ಆ ಗುಂಬಜ್ ಸ್ವಲ್ಪ ದೂರದಲ್ಲಿ ಇನ್ನೊಂದು ಗುಮ್ಮಟವಿದೆ. ಅಲ್ಲಿಗೆ ಯಾರೂ ಬರಲ್ಲ. ಆ ಗುಮ್ಮಟ ಏರಿ ಮೇಲಿಂದ ಹಾರಿದೆವು. ಆದರೆ, ನನ್ನ ನಸೀಬು ಚೆನ್ನಾಗಿರಲಿಲ್ಲ; ನಾನು ಬದುಕಿದೆ. ಅವಳು ನನ್ನ ಪ್ರೀತಿಗಾಗಿ ಜೀವ ಕೊಟ್ಟಳು. ಬಿದ್ದಿದ್ದಷ್ಟೆ ಗೊತ್ತಿದ್ದ ನನಗೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಆಗಲೇ ನಿರ್ಧರಿಸಿದ್ದೆ ಸಾವಿಗಿಂತ ಬದುಕು ಮುಖ್ಯ. ಆಕೆಯ ಮಾತು ಕೇಳಿದ್ದರೆ ಎಲ್ಲಿಗಾದರೂ ಹೋಗಿ ಬದುಕಬಹುದಿತ್ತು. ನನ್ನ ಹೇಡಿತನದಿಂದ ಆಕೆ ಪ್ರಾಣಬಿಡಬೇಕಾಯಿತು. ಪ್ರೀತಿ ಮಾಡಿದವರಿಗೆ ಸಾವೇ ಪರಿಹಾರವಲ್ಲ. ಅಂದು ಊರು ಬಿಟ್ಟವನು ಇನ್ನೂ ಊರಿಗೆ ಹೋಗಿಲ್ಲ. ಈ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಾ, ‘ನಿಮ್ಮ ಹಾಗೆ’ ಬರುವವರಿಗೆ ನನ್ನ ಕತೆಯನ್ನು ಹೇಳುತ್ತೇನೆ. ಗೋರಿಗಳ ಮೇಲೆ ಎದ್ದಿರುವ ಆ ಗುಮ್ಮಟವಿದೆಯಲ್ಲ ಅದು ನಮ್ಮ ಬದುಕಿಗೆ ಸ್ಫೂರ್ತಿಯಾಗಬೇಕೆ ಹೊರತು ಸಾವಿಗಲ್ಲ,’’ ಎನ್ನುತ್ತಾ ಅವರಿಬ್ಬರ ಮುಖವನ್ನೊಮ್ಮೆ ನೋಡಿ ತನ್ನದೆ ಆದ ಮಂದಹಾಸ ಬೀರಿ, ಹೊರಟು ಹೋದ.
ಅವರಿಬ್ಬರ ಮುಖದಲ್ಲೀಗ ಪಶ್ಚಾತ್ತಾಪದ ಗೆರೆಗಳು ಕಾಣಲಾರಂಭಿಸಿದ್ದವು. ಆತ ಹೇಳಿದ ಕತೆ ಅವರಿಬ್ಬರಲ್ಲೂ ಹೊಸ ಚೈತನ್ಯ ಉಂಟು ಮಾಡಿತ್ತು. ಸಾವಿಗಿಂತ ಬದುಕು ಶ್ರೇಷ್ಠ. ಪ್ರೀತಿಯ ವೈಫಲ್ಯಕ್ಕೆ ಸಾವು ಅಂತ್ಯವಲ್ಲ ಎಂಬ ನಿರ್ಧಾರಕ್ಕೆ ಬಂದವರೇ ಗೋಲ್ ಗುಂಬಜ್ ನೋಡಲು ಹೊರಟರು. ಅಷ್ಟೊತ್ತಿಗಾಗಲೇ ಬೆಂಕಿಯುಗುಳುತ್ತಿದ್ದ ಸೂರ್ಯ ತನ್ನ ಪ್ರತಾಪವನ್ನು ಬಿಟ್ಟು, ಪಡುವಣದಲ್ಲಿ ನಿಧಾನವಾಗಿ ಜಾರುತ್ತಿದ್ದ. ಬೀಸುತ್ತಿದ್ದ ತಂಪನೆಯ ಗಾಳಿಯೂ ಇಬ್ಬರಲ್ಲೂ ಹೊಸ ಭರವಸೆಯನ್ನು ಮೂಡಿಸುತ್ತಿತ್ತು. ಅವರ ಮುಖದಲ್ಲೀಗ ಮೊದಲಿನ ನಿರ್ಭಾವುಕತೆ ಇಲ್ಲ. ಹೊಸ ಹುಮ್ಮಸ್ಸಿನ ಅಲೆಗಳು ನಗುವಿನ ರೂಪದಲ್ಲಿ ಹೊರ ಬರುತ್ತಿವೆ. ರಸ್ತೆಯಾಚೆಗಿನ ಗುಂಬಜ್‌ನ ಮುಖ್ಯದ್ವಾರದಲ್ಲಿ ಜನಜಂಗುಳಿ, ಎಲ್ಲರ ಮುಖದಲ್ಲಿ ಸಂತೋಷದ ಓಕುಳಿ. ಪಿಸುಮಾತನ್ನು ಪ್ರತಿಧ್ವನಿಸುವ ಗುಮ್ಮಟ ಅಲ್ಲಿದ್ದವರಿಗೆಲ್ಲ ಅಚ್ಚರಿಯ ಭಂಡಾರ. ಗೋಲ್ ಗುಂಬಜ್ ಒಳ ಹೊಕ್ಕ ಇಬ್ಬರು ಜೋರಾಗಿ ‘‘ನಾವು ಸಾಯಲ್ಲ... ಬದುಕುತ್ತೇವೆ...’’ ಕೂಗಿದರು. ಅವರಿಬ್ಬರು ಈ ಮಾತುಗಳು ಪ್ರತಿಧ್ವನಿಗೊಂಡು ಅಲೆ ಅಲೆಯಾಗಿ ತೇಲಿ ಬಂದವು. ಸುತ್ತಮುತ್ತಲಿನವರು ಒಂದು ಕ್ಷಣ ಇವರಿಬ್ಬರನ್ನು ನೋಡಿ, ಪ್ರತಿಧ್ವನಿಸುವ ಈ ಗುಮ್ಮಟದ ಸೌಂದರ್ಯದಲ್ಲಿ ಮಗ್ನರಾದರು. ಮನಸ್ಸು ಹಗುರವಾಗೋವರೆಗೂ ಇಬ್ಬರು ಕೂಗುತ್ತಲೇ ಇದ್ದರು. ಕೂಗಿ ಕೂಗಿ ಧ್ವನಿ ತುಸು ದುರ್ಬಲವಾದ ಬಳಿಕ ಆ ಗುಮ್ಮಟ ಬಿಟ್ಟು ಹೊರ ಬಂದಾಗ ಇಬ್ಬರ ಮನಸ್ಸು ಆಕಾಶದಲ್ಲಿ ತೇಲಾಡುವಷ್ಟು ಹಗುರವಾಗಿತ್ತು. ಅವರಲ್ಲೀಗ ಬದುಕುವ ಛಲ ನೂರ್ಮಡಿಸಿತ್ತು. ಮತ್ತೆಂದೂ ಇಂಥ ಕಟು ನಿರ್ಧಾರಕ್ಕೆ ಬರಬಾರದು ಎಂದು ನಿಶ್ಚಯಿಸಿ, ಮುಖ್ಯದ್ವಾರ ದಾಟಿ ಹೊರಬಂದರು.
ಆಕೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಆ ಚಿಕ್ಕ ಸೀಸೆ ಚರಂಡಿಯ ಪಾಲಾಗಿತ್ತು.


(ಈ ಲೇಖನ ವಿಜಯ ಕರ್ನಾಟಕದ ಜುಲೈ 31,2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಸೋಮವಾರ, ಜೂನ್ 19, 2017

ಹುಡುಗನೊಬ್ಬನ ಗಜಲ್‌ಗಳು: ಜೀವ ಉಳಿಸಿದವಳು ಮಳೆಯಲ್ಲಿ ಕರಗಿದಳು

- ಪ್ರದ್ಯುಮ್ನ
ಈ ಮೋಡಗಳೇ ಅಡ್ನಾಡಿ. ಅದರಲ್ಲೂ ಬಯಲುಸೀಮೆಗೆ ಬಂದರೆ ಅವುಗಳದ್ದು ಚಿತ್ತ ಚಾಂಚಲ್ಯ. ಒಂದಿಷ್ಟು ಗಾಳಿ ಸೋಕಿದರೂ ಸಾಕು ಸಲುಗೆ ಬೆಳೆಸಿ ಕೈ ಕೊಡುತ್ತವೆ. ಬಿಸಿಲಿಗೆ ಬೆಂಡಾಗಿ ಬಾಯ್ತೆರೆದ ಭೂಮಿಗೆ ದೂರದಿಂದಲೇ ಆಸೆ ತೋರಿಸಿ ಕಾಲು ಕೀಳುವ ಈ ಮೋಡಗಳೂ ಹಳೆ ಗೆಳತಿಯ ನೆನಪಿನ ಹಾಗೆ.
ವಸಂತಕಾಲದಲ್ಲಿ ಸುರಿಯೋ ಅಡ್ಡಾದಿಡ್ಡಿ ಮಳೆಗೆ ಬಿರುಸು, ದಾಢಸಿತನ. ಈ ಮಳೆಗಾಲದ ಮಳೆ ಒಮ್ಮಮ್ಮೆ ಕೋಮಲೆ, ಮತ್ತೊಮ್ಮೆ ಸುಕೋಮಲೆ. ತಂಪಾದ ವಾತಾವರಣದಲ್ಲಿ ಆಗಾಗ ನಾಲ್ಕಾರು ಹನಿಗಳನ್ನು ಉದುರಿಸುತ್ತ, ಚೆಲ್ಲಾಟವಾಡುವ ನೈಸರ್ಗಿಕದತ್ತ ಸ್ವಭಾವ. ಮತ್ತೊಮ್ಮೆ ಕೋಪಗೊಂಡ ಪ್ರೇಯಸಿಯ ಹಾಗೆ ಭೋರ್ಗರೆಯುವ ಪ್ರತಾಪ-ಪ್ರಲಾಪ. ಈ ಕೋಪಕ್ಕೆ ಹಳೆಯ ಮಣ್ಣಿನ ಮನೆಗಳೆಲ್ಲ ಚಿಂದಿ ಚಿಂದಿ; ಓಣಿ ತುಂಬ ಕೆಸರು. ಸಂಜೆ ಸೂರ್ಯಾಸ್ತವೂ ಡಲ್ಲು. ಹೊರಗೆ ಕಾಲಿಡಲು ಆಗದಂತೆ ಮಾಡುವ ಈ ಮಳೆಗೆ ಒಂಚೂರೂ ಕರುಣೆ ಇಲ್ಲ ಎಂದೆನಿಸಿತು. ತನ್ನೆಲ್ಲ ಸಿಟ್ಟು ಸೆಡವನ್ನು ಮನಸೋಯಿಚ್ಛೆ ತೋರುವ ಮಳೆಗಾಲ ಅನೇಕರಲ್ಲಿ ಭಾವನೆಗಳಿಗೆ ಮರಿ ಹಾಕುವ ಸಕಾಲ ಎಂದು ಮನದೊಳಗೇ ಹೀಗೆ ಏನೇನೊ ಲೆಕ್ಕ ಹಾಕುತ್ತ ಕುಳಿತಿದ್ದ ಆತನಿಗೆ, ಕಿಟಕಿಯ ಮಾಡಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳು ಆಗ ತಾನೇ ಸುರಿದು ಮಾಯವಾ
ದ ಮಳೆಗೆ ಸಾಕ್ಷಿ ಹೇಳುತ್ತಿದ್ದವು. ಮಲೆನಾಡಿನಲ್ಲಿ ಹೇಗೋ ಗೊತ್ತಿಲ್ಲ. ಆದರೆ, ಬಯಲುಸೀಮೆಯಲ್ಲಿ ಮಳೆಯ ಸ್ವರೂಪವೇ ಚಿತ್ರ-ವಿಚಿತ್ರ. ಬಟಾಬಯಲಾಗುವ ಆಕಾಶದಲ್ಲಿ ಒಮ್ಮಿಲೇ ಕಪ್ಪು ಮೋಡಗಳು ದಂಡೆತ್ತಿ ಬಂದು ಇನ್ನೇನು ಜೋರು ಮಳೆ ಬೀಳುತ್ತದೆ ಎನ್ನುವಷ್ಟರಲ್ಲೇ, ಗಾಳಿಯೊಂದಿಗೆ ಮಾಯವಾಗುತ್ತವೆ. ಅದರ ಹಿಂದೆಯೇ ಬಿಳಿ ಮೋಡಗಳು ಆಕಾಶದಲ್ಲಿ ತೇಲುತ್ತವೆ. ಒಂದೇ ಕ್ಷಣದಲ್ಲಿ ತಂಪಾದ ವಾತಾವರಣ ತುಸು ಬೆಚ್ಚನೆಯ ಜಾಯಮಾನಕ್ಕೆ ಬದಲಾಗುತ್ತದೆ. ಮನಸ್ಸು ಹಾಗೆ ಅಲ್ಲವೇ? ಯಾವುದೋ ಸಿಹಿಯಾದ ನೆನಪಿನೊಂದಿಗೆ ಜೋಕಾಲಿ ಜೀಕುತ್ತಿರುವಾಗಲೇ ಅದರ ಹಿಂದೆಯೇ ಅಪ್ಪಳಿಸುವ ದುರಂತದ ನೆನಪಿನ ದಂಡು ನಮ್ಮನ್ನು ಭಂಗಗೊಳಿಸುತ್ತದೆ.
ಕಿಟಕಿಯಿಂದ ಆಚೆ ನೋಡುತ್ತಿದ್ದ ಅವನಿಗೆ, ಮಕ್ಕಳಿಬ್ಬರು ರಸ್ತೆಯಲ್ಲಿನ ಹೊಂಡದಲ್ಲಿ ನಿಂತಿದ್ದ ನೀರಿನಲ್ಲಿ ಕಾಗದದ ದೋಣಿ ತೇಲಿಬಿಟ್ಟು ಚಪ್ಪಾಳೆ ಹೊಡೆಯುತ್ತಿದ್ದದ್ದು ಕಾಣಿಸಿತು. ಅವರಿಗೆ ಎದುರಾಗಿರುವ ಬಯಲಿನಿಂದ ನಾಲ್ಕಾರು ಎಮ್ಮೆಗಳನ್ನು ಮೇಯಿಸಿಕೊಂಡು ಬರುತ್ತಿದ್ದ ಇಬ್ಬರು ಹುಡುಗರ ತಲೆ ಮೇಲೂ ಮಳೆ ಆಸರೆಗಾಗಿ ತಟ್ಟಿನ ಚೀಲಗಳಿದ್ದವು. ನೆನೆದಿದ್ದರಿಂದ ಅವುಗಳಿಂದಲೂ ತೊಟ್ಟಿಕ್ಕುತ್ತಿದ್ದ ಹನಿಗಳು ಅವರಿಬ್ಬರ ಕಾಲುಗಳಿಂದ ಇಳಿದು ಪಾದಕ್ಕೆ ಅಂಟಿ ಕೊನೆಯಾಗುತ್ತಿದ್ದವು... ಹೀಗೆ ಸೂಕ್ಷ್ಮವಾಗಿ ಅದನ್ನೆಲ್ಲ ಗಮನಿಸುತ್ತಿದ್ದ ಆತನ ಮನದೊಳಗೆ ಬೇಡ ಬೇಡ ಎಂದರೂ ಆ ಘಟನೆ ಮತ್ತೆ ಮತ್ತೆ ಇಣಕುತ್ತಿತ್ತು.
ಅದನ್ನು ನೆನಪಿಸಿಕೊಂಡರೇ ಈಗಲೂ ಅವನ ಮೈ ಬೆವರುತ್ತದೆ. ಆ ಶಾಕ್‌ನಿಂದ ಆತ ಹೊರಗೆ ಬರಲು ಸುಮಾರು ದಿನಗಳನ್ನೇ ತೆಗೆದುಕೊಂಡಿದ್ದ. ಆದರೂ ಪ್ರತಿ ಮಳೆಗಾಲದಲ್ಲಿ ಆ ಘಟನೆ ಆತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ತನ್ನಿಂದಾಗಿಯೇ ತನ್ನನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಜೀವವೊಂದನ್ನು ಬಲಿಕೊಡಬೇಕಾಯಿತು ಎಂದು ತಪ್ಪಿತಸ್ಥ ಭಾವದಲ್ಲಿರುತ್ತಾನೆ. ಅವರಿಬ್ಬರು ಪ್ರೀತಿಸಿ ಮದ್ವೆಯಾದವರಲ್ಲ. ಆದರೆ, ಮದ್ವೆಯಾಗಿ ಹುಚ್ಚರಂತೆ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದವರು. ಆಕೆಯೇನೂ ತುಂಬ ಓದಿದವಳಲ್ಲ. ತನ್ನೂರಲ್ಲಿದ್ದ ಹೈಸ್ಕೂಲ್‌ವರೆಗೆ ಮಾತ್ರ ಓದಿದ್ದಳು. ಆದರೆ ಅವಳಲ್ಲಿದ್ದ ಪ್ರೌಢಿಮೆ ಒಮ್ಮಮ್ಮೆ ಇವನಿಗೆ ಅಚ್ಚರಿ ಮೂಡಿಸುತ್ತಿತ್ತು. ಡಿಗ್ರಿ ಓದಿ, ಹೈಸ್ಕೂಲ್ ಟೀಚರ್ ಆಗಿದ್ದರೂ ಆಕಿಗಿರುವ ಜಾಣ್ಮೆ ತನ್ನಲ್ಲಿಲ್ಲ ಎಂದು ಅದೆಷ್ಟೋ ಬಾರಿ ಅಂದುಕೊಂಡಿದ್ದ. ಅವರಿಬ್ಬರ ಪುಟ್ಟ ಸಂಸಾರ ನಿಜಕ್ಕೂ ಹೊಟ್ಟೆಕಿಚ್ಚು ತರಿಸುವಂತಿತ್ತು.
ವಂಸತದ ಮಳೆ
ನಮ್ಮ ಈ ಪಲ್ಲಕ್ಕಿಯಲ್ಲಿ
ನಿನ್ನ ಮೆಲು ಪಿಸುಮಾತುಗಳು
ಜಪಾನಿನ ಹಾಯ್ಕುನಂತಿತ್ತು ಅವರಿಬ್ಬರ ಸಾಂಗತ್ಯ. ಒಬ್ಬರಿಗೊಬ್ಬರು ಎಂದೂ ಹಂಗಿಸಿಕೊಂಡವರಲ್ಲ; ಹೀಯಾಳಿಸಿಕೊಂಡವರಲ್ಲ. ಹಾಗೆಂದ ಮಾತ್ರಕ್ಕೆ ಆಕೆಯೇನೂ ಅಪೂರ್ವ ಸುಂದರಿಯಲ್ಲ; ಲಕ್ಷಣವಂತೆ. ಗುಣವಂತೆ. ಅವನೂ ಅಷ್ಟೇ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ನಿಲುವು. ಅವರಿಬ್ಬರ ನಡುವಿನ ಸಾಮರಸ್ಯ, ಒಲವು, ಚೆಲುವು, ಪ್ರೀತಿ, ಬೆಸುಗೆ, ಬಂಧನ ಆ ಚಿಕ್ಕ ಹಳ್ಳಿಯಲ್ಲಿ ಮನೆ ಮಾತಾಗಿತ್ತು. ಇದು ಅವರಿಗೂ ಆಗಾಗ ಕಿವಿಗೆ ಬೀಳುತ್ತಿತ್ತು. ಆದರೆ, ಅದರಿಂದೇನೂ ಉಬ್ಬಿ ಹೋದವರಲ್ಲ.
ಇಂಥದೊಂದು ಅಪರೂಪದ ಪ್ರೇಮಗೀತೆಗೆ ಶೋಕದ ಭಾವ ತುಂಬಲು ಆ ವಿಧಿ ಕಾದು ಕುಳಿತಿತ್ತು ಕಾಣುತ್ತದೆ. ಅಂದು ಹಾಗೆಯೇ; ಮಳೆ ಬರುವ ಯಾವ ಮುನ್ಸೂಚನೆಯೂ ಇರಲಿಲ್ಲ. ಆಕಾಶದಲ್ಲಿ ಬಿಳಿ ಮೋಡಗಳ ಕಾರುಬಾರು ಜೋರಾಗಿತ್ತು. ಆ ಮೋಡಗಳೆಲ್ಲ ನಾನಾ ಆಕಾರದಲ್ಲಿ ರಚಿತಗೊಂಡು ಊಹೆಗೆ ತಕ್ಕಂತೆ ಬದಲಾಗುತ್ತಿದ್ದವು. ರಜೆ ದಿನವಾದ್ದರಿಂದ ಆತ ಮನೆಯ ಅಂಗಳದಲ್ಲಿ ನಿಂತ ಬಿಳಿ ಮೋಡಗಳ ಚಿತ್ತಾಕರ್ಷಕ ವೈಚಿತ್ರ್ಯವನ್ನು ನೋಡುತ್ತ ನಿಂತಿದ್ದ. ‘‘ಮಳೆ ಬರುವ ಲಕ್ಷಣಗಳಿಲ್ಲ. ಊರ ಹೊರಗಿನ ದೇವಸ್ಥಾನಕ್ಕೆ ಹೋಗಿ ಬರೋಣ,’’ ಎಂದು ಆಕೆ ಮನೆಯ ಹೊಸ್ತಿಲಲ್ಲಿ ನಿಂತು ಕೇಳಿದಳು. ಆಕಾಶ ನೋಡುತ್ತಿದ್ದವನು ಹಾಗೆಯೇ, ‘‘ಆಯ್ತು ಹೋಗೋಣ, ವಾತಾವರಣವೂ ಚೆನ್ನಾಗಿದೆ,’’ ಎಂದ.
ಅವರಿಬ್ಬರೂ ಆಗಾಗ ಆ ದೇವಸ್ಥಾನಕ್ಕೆ ಹೋಗುತ್ತಿದ್ದರು. ದೇವಸ್ಥಾನದ ಹತ್ತಿರದಲ್ಲಿ ಒಂದು ಸಣ್ಣ ಹಳ್ಳ. ಬೇಸಿಗೆಯಲ್ಲಿ ಅದು ಹೊಲಗಳಿಗೆ ಹೋಗಲು ಕಾಲು ದಾರಿಯಾಗಿರುತ್ತಿತ್ತು. ಮಳೆಗಾಲದಲ್ಲಿ ಒಂದಿಷ್ಟು ನೀರು ಹರಿದು, ಹಳ್ಳದ ಸ್ವರೂಪ ಪಡೆದುಕೊಳ್ಳುತ್ತಿತ್ತು. ಅವರಿಬ್ಬರೂ ದೇವಸ್ಥಾನಕ್ಕೆ ಹೋದಾಗಲೆಲ್ಲ ಆ ಹಳ್ಳದ ಗುಂಟ ಸುಮಾರು ದೂರ ಕ್ರಮಿಸಿ, ವಾಪಸ್ಸು ಬಂದು, ದೇಗುಲದ ಪಕ್ಕದಲ್ಲಿರುವ ಹಳೆಯ ಆಲದ ಮರ ಬುಡದಲ್ಲಿ ಕುಳಿತು ಮನೆಗೆ ಮರಳುತ್ತಿದ್ದರು.
ಅವರಿಬ್ಬರು ಜತೆಗೂಡಿ ದೇವಸ್ಥಾನಕ್ಕೆ ಹೋಗುವ ಹೊತ್ತಿನಲ್ಲಿ ಆಕಾಶದಲ್ಲಿ ಬಿಳಿ ಮೋಡಗಳು ಕರಗಿ, ಕಪ್ಪು ಮೋಡಗಳು ದಂಡೆತ್ತಿ ಬರುತ್ತಿದ್ದವು. ಕೂಗಳತೆ ದೂರದಲ್ಲಿದ್ದ ದೇವಸ್ಥಾನ ತಲುಪುವ ಹೊತ್ತಿಗೆ ದಪ್ಪ ದಪ್ಪ ಹನಿಗಳು ಮುಖದ ಮೇಲೆ ರಪ್ಪಂತ ಬಿದ್ದವು. ಇದು ಧಾರಾಕಾರವಾಗಿ ಸುರಿಯುವ ಮಳೆ ಎಂಬ ಮುನ್ಸೂಚನೆ ದೊರೆಯಿತು. ದೇವಸ್ಥಾನ ಸೇರಿಕೊಳ್ಳುವ ಹೊತ್ತಿಗೆ ತೋಯ್ದು ತೊಪ್ಪೆಯಾಗುವುದು ಖಂಡಿತ ಎಂಬುದು ಅರಿವಾಗುತ್ತಲೇ ಅಲ್ಲೇ ಪಕ್ಕದಲ್ಲಿದ್ದ ಆ ಆಲದ ಮರದ ಬುಡಕ್ಕೆ ಬಂದು ನಿಂತರು. ಮಳೆ ಭೋರ್ಗರೆಯಲಾರಂಭಿಸಿತು. ಸುಮಾರು ಹೊತ್ತು ಸುರಿದ ಮಳೆ ಒಂದಿಷ್ಟು ನಿತ್ರಾಣಗೊಳ್ಳುತ್ತಿದ್ದಂತೆ, ಆಕಾಶದಲ್ಲಿ ಮೋಡಗಳ ಚಲನೆ ಹೆಚ್ಚಾಯಿತು. ಗಾಳಿಯೂ ವೇಗ ಪಡೆದುಕೊಂಡಿತ್ತು. ಅವರು ನಿಂತಿದ್ದ ವಿರುದ್ಧ ದಿಕ್ಕಿನಲ್ಲೇ ಸಿಡಿಲು ಸಂಚಾರವಾಗುತ್ತಲೇ ಇತ್ತು. ಬೆಳ್ಳಂ ಬೆಳಗಿನಂತಿದ್ದ ವಾತಾವರಣ ಪೂರ್ತಿ ಮಬ್ಬುಗತ್ತಲಿನೊಳಗೇ ಲೀನವಾಯಿತು. ಹತ್ತಿರದಲ್ಲಿದ್ದ  ಕಾಲು ದಾರಿಯಂಥ ಹಳ್ಳದಲ್ಲಿ ಒಂದಿಷ್ಟು ನೀರು ಸರಸರನೇ ಓಡುತ್ತಿತ್ತು. ಅದರ ಜತೆಗೆ ನಾಯಿ ಮರಿ ನೀರಿನ ಚಲನೆಯಿಂದ ಹೊರ ಬರದೆ ಅದರೊಂದಿಗೆ ಜಾರಿಕೊಂಡು ಹೋಗುತ್ತಿತ್ತು. ನಾಯಿಮರಿ ಕಂಡ ಅವಳು, ‘‘ಅಯ್ಯ ನಾಯಿ ಮರಿ ಸತ್ತೇ ಹೋಗ್ತದೇರಿ, ಆ ನೀರಿನ ರಭಸಕ್ಕೆ. ಅದನ್ನ ಎತ್ತಿಕೊಂಡು ಬನ್ನಿ,’’ ಎಂದಳು. ಆ ಸಣ್ಣ ಹಳ್ಳದಲ್ಲಿ ಹರಿಯುತ್ತಿದ್ದ ನೀರಿಗೆ ಅಂಥ ರಭಸತನವೇನೂ ಇರಲಿಲ್ಲ. ಆದರೆ, ಅದು ನಾಯಿಮರಿಯ ಶಕ್ತಿಗೂ ಮೀರಿತ್ತು. ಆದರೆ, ಇತ್ತ ಆಕಾಶ ತುಂಬ ಗುಡುಗಿನ ಆರ್ಭಟ; ಆಗಾಗ ಸಿಡಿಲಿನ ಸಂಚಾರ. ಇನ್ನೂ ಈ ಮರದ ಬುಡದಲ್ಲಿ ನಿಂತರೆ ಅಪಾಯ ತಪ್ಪಿದ್ದಲ್ಲ, ಹೇಗಿದ್ದರೂ ನೆನೆದುಕೊಂಡಾಗಿದೆ, ಮಳೆಯೂ ಸ್ವಲ್ಪ ನಿತ್ರಾಣಗೊಂಡಿದೆ. ಓಡೋಡಿ ದೇವಸ್ಥಾನ ಸೇರಿಕೊಳ್ಳುವುದು ಸೂಕ್ತ ಎಂದು ಲೆಕ್ಕಾಚಾರ ಹಾಕುತ್ತಿದ್ದ ಆತನಿಗೆ, ನಾಯಿಮರಿಯನ್ನು ಹಾಗೇ ಬಿಟ್ಟು ಹೋಗುವುದಕ್ಕೆ ಮನಸ್ಸು ಬರಲಿಲ್ಲ. ಹೆಂಡತಿಗಿದ್ದ ಕರುಣೆಯ ಭಾವ ಗೊತ್ತಿದ್ದ ಆತ, ಆಕೆಯ ಮಾತನ್ನು ತೆಗೆದು ಹಾಕುವ ಸ್ಥಿತಿಯಲ್ಲೂ ಇರಲಿಲ್ಲ. ಆದರೆ, ಆತನಿಗೇನು ಗೊತ್ತಿತ್ತು;  ನಾಯಿ ಜೀವ ಉಳಿಸಲು ಹೋದವನಿಗೆ ತಾನು ಏನು ಕಳೆದುಕೊಳ್ಳಬಲ್ಲೆ ಎಂಬುದು?
ಬೀಸುತ್ತಿದ್ದ ಗಾಳಿಗೆ ಇದಿರಾಗಿ ಓಡಿ ಹೋದ ಅವನು, ನೀರಿನೊಂದಿಗೆ ಹರಿದುಕೊಂಡು ಹೋಗುತ್ತಿದ್ದ ನಾಯಿ ಮರಿ ಎತ್ತಿ ಇನ್ನೇನು ಆ ಮರದತ್ತ ಓಡಬೇಕು ಎನ್ನುವಷ್ಟರಲ್ಲಿ, ಕ್ಷಣಾರ್ಧದಲ್ಲಿ ಆತನ ಊಹೆಗೆ ನಿಲುಕದ ಅವಘಡ ನಡದೇ ಹೋಯಿತು. ಮರದ ಬುಡದಲ್ಲಿದ್ದ ಪ್ರೀತಿಯ ಹೆಂಡತಿ ಸುಂದರ ಸಿಡಿಲಿನ ಕ್ರೌರ್ಯಕ್ಕೆ ಬಲಿಯಾಗಿದ್ದಳು. ಆ ಆಲದ ಮರ ಅರ್ಧ ಸುಟ್ಟು ಹೋಗಿತ್ತು. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿಯೇ ಎಲ್ಲವೂ ಮುಗಿದು ಹೋಗಿತ್ತು.
***
ಈಗ ಅದೇ ನಾಯಿ ಮರಿ ಅವನ ಮನೆಯಲ್ಲಿ ಬೆಳೆದು ದೊಡ್ಡದಾಗಿದೆ. ಅವನು ನಿಧಾನವಾಗಿ ಆ ಶಾಕ್‌ನಿಂದ ಹೊರ ಬಂದಿದ್ದಾನೆ. ಈ ಮಧ್ಯೆ ಐದಾರು ಮಳೆಗಾಲವೂ ಸುರಿದು ಹೋಗಿವೆ. ಆದರೆ, ಪ್ರತಿ ಮಳೆಗಾಲ ಬಂದಾಗ ಆತನಿಗೆ ದುರಂತ ನೆನಪುಗಳು ಬಿಟ್ಟು ಬಿಡದೆ ಕಾಡುತ್ತವೆ. ಹಾಗೆ ಕಾಡಿದಾಗಲೆಲ್ಲ ಆಕೆಯ ಸಮಾಧಿ ಬಳಿ ಹೋಗಿ ತುಸು ಹೊತ್ತು ಧ್ಯಾನಸ್ಥನಾಗುತ್ತಾನೆ. ಯಾವಾಗಲೋ ಓದಿದ, ಜಪಾನಿನ ಬಾಶೋ ಕವಿಯ ಹಾಯ್ಕು ಆ ಸಮಾಧಿ ಬಳಿ ಹೋದಾಗಲೆಲ್ಲ ಆತನಿಗೆ ಗೊತ್ತಿಲ್ಲದ ಹಾಗೆಯೇ ಬಡಬಡಿಸುತ್ತಾನೆ.
ನಾವು ಮತ್ತೆ ಭೇಟಿಯಾಗೋಣ
ಈ ಹೂಬಿಡುವ ಸಮಾಧಿ ಬಳಿ
ಎರಡು ಬಿಳಿ ಪಾತರಗಿತ್ತಿಯಾಗಿ

(ಈ ಲೇಖನ ವಿಜಯ ಕರ್ನಾಟಕದ ಜೂನ್ 18, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಮಂಗಳವಾರ, ಜೂನ್ 6, 2017

ವ್ಯಕ್ತಿಗತ- ‘ಬಿಪಿ’ ಹೆಚ್ಚಿಸುವ ರಾವತ್!

ಮಲ್ಲಿಕಾರ್ಜುನ ತಿಪ್ಪಾರ
ಮೇಜರ್ ಗೊಗೊಯಿ ಅವರು ಕಲ್ಲುತೂರಾಟಗಾರನೊಬ್ಬನನ್ನು ಸೇನಾ ಜೀಪಿಗೆ ಕಟ್ಟಿ ತಮ್ಮನ್ನೂ ಸೇರಿದಂತೆ ಚುನಾವಣಾ ಹಾಗೂ ಸೇನಾ ಸಿಬ್ಬಂದಿಯನ್ನು ರಕ್ಷಿಸಿದ ಘಟನೆ ದೊಡ್ಡ ಸುದ್ದಿಯಾಯಿತು. ಸೇನೆಯ ಅಧಿಕಾರಿಯೊಬ್ಬರು ಮಾನವನನ್ನು ಗುರಾಣಿಯ ರೀತಿಯಲ್ಲಿ ಬಳಸಿಕೊಂಡಿದ್ದು ಎಷ್ಟು ಸರಿ ಮತ್ತು ತಪ್ಪು ಎಂಬ ಚರ್ಚೆಗಳು ಇನ್ನೂ ನಡೆದಿವೆ. ಆದರೆ, ಸೇನಾ ಮುಖ್ಯಸ್ಥರು ಈ ಪ್ರಕರಣವನ್ನು ಯಾವ ರೀತಿ ನೋಡುತ್ತಾರೆಂಬುದು ಬಹುತೇಕರ ಕುತೂಹಲವಾಗಿತ್ತು. ಈ ವಿಷಯದಲ್ಲಿ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ವಿಭಿನ್ನ ದಾರಿ ತುಳಿದರು. ಸಾರ್ವಜನಿಕವಾಗಿಯೇ ಮೇಜರ್ ಗೊಗೊಯಿ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಕೆಳದರ್ಜೆಯ ಸೇನಾ ಸ್ತರದಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು. ಶಿಸ್ತುಬದ್ಧ ಸೈನ್ಯದ ಅಧಿಕಾರಿಯೊಬ್ಬರು ಇಂಥ ದಾರಿ ಅನುಸರಿಸುವುದರ ಕುರಿತಾದ ಪರಾಮರ್ಶೆಯ ಆಚೆ ನಿಂತು ನೋಡಿದಾಗ ಸೇನೆಯ ಕಾರ್ಯತಂತ್ರಗಳು ಬದಲಾಗಿರುವುದು ಸ್ಪಷ್ಟವಾಗುತ್ತದೆ. ಇದರ ಹಿಂದೆ ಜನರಲ್ ಬಿಪಿನ್ ರಾವತ್ ಅವರ ಹೆಚ್ಚುಗಾರಿಕೆ ಮತ್ತು ಜಾಣ್ಮೆಯೂ ಅಡಗಿದೆ. ಗೊಗೊಯಿ ಅವರನ್ನು ಬೆಂಬಲಿಸುವ ಮೂಲಕ ಕಾಶ್ಮೀರ ಕಣಿವೆಯ ಪ್ರಕ್ಷುಬ್ಧ ಸ್ಥಿತಿಗೆ ಕಾರಣವಾದವರಿಗೆ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.
ಇಂಥ ಬಿಪಿನ್ ರಾವತ್ ಅವರು ತಾವು ಸೇನಾ ಮುಖ್ಯಸ್ಥರಾಗುವ ಬಗ್ಗೆ ಯೋಚಿಸಿರಲಿಕ್ಕೂ ಇಲ್ಲ. ಯಾಕೆಂದರೆ, ಸಂಪ್ರದಾಯದಂತೆ ಸೇವಾ ಜೇಷ್ಠತೆ ಆಧಾರದ ಮೇಲೆಯೇ ಜನರಲ್ ಸ್ಥಾನಕ್ಕೇರುವುದು ಭಾರತೀಯ ಸೇನೆಯಲ್ಲಿ ನಡೆದುಕೊಂಡು ಬಂದಿದೆ. ಈ ಸಂಪ್ರದಾಯವನ್ನು 1983ರಲ್ಲಿ ಇಂದಿರಾ ಗಾಂಧಿ ಅವರು ಮೊದಲ ಬಾರಿಗೆ ಮುರಿದರು. ನಂತರ ಯಥಾಸ್ಥಿತಿ ಇತ್ತು. ವಾಸ್ತವದಲ್ಲಿ ಸೇವಾ ಜೇಷ್ಠತೆ ಆಧಾರದ ಮೇಲೆ ಲೆಫ್ಟಿನೆಂಟ್ ಜನರಲ್‌ಗಳಾದ ಭಕ್ಷಿ ಮತ್ತು ಹಾರಿಝ್ ಅವರು ಮುಖ್ಯಸ್ಥರಾಗಬೇಕಿತ್ತು. ಆದರೆ, ಮೋದಿ ಸರಕಾರ ಮಾತ್ರ, ಸೇನಾ ಮುಖ್ಯಸ್ಥ ಸ್ಥಾನಕ್ಕೆ ಆಯ್ದುಕೊಂಡಿದ್ದು ‘ಮ್ಯಾನ್ ಆಫ್ ಆ್ಯಕ್ಷನ್’ ಎಂದೇ ಕರೆಯಿಸಿಕೊಂಡಿದ್ದ ಬಿಪಿನ್ ರಾವತ್ ಅವರನ್ನು. ಅಲ್ಲಿಗೆ, ಸೇನಾ ಮುಖ್ಯಸ್ಥರ ನೇಮಕ ವಿಷಯದಲ್ಲಿ ಮತ್ತೊಮ್ಮೆ ಇತಿಹಾಸ ಮರುಕಳಿಸಿತು.

ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳ ‘ಗಡಿ ನಿಯಂತ್ರಣ’ ರೇಖೆಯಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದ ರಾವತ್ ಅವರೇ ಈಗಿನ ಪರಿಸ್ಥಿತಿಯಲ್ಲಿ ಸೇನೆ ಮುಖ್ಯಸ್ಥರಾಗುವುದು ಹೆಚ್ಚು ಸೂಕ್ತ ಕೂಡ ಆಗಿತ್ತು. ಬರೋಬ್ಬರಿ ಮೂರು ದಶಕಗಳು ಸೇನೆಯ ವಿವಿಧ ಶ್ರೇಣಿಗಳಲ್ಲಿ ಸೇವೆ ಸಲ್ಲಿಸಿರುವ ರಾವತ್ ಅವರು, ಚೀನಾ ಗಡಿಯ ಈಸ್ಟರ್ನ್ ಸೆಕ್ಟರ್, ಪುಲ್ವಾಮಾದಲ್ಲಿ ಕಾರ್ಯಾಚರಣೆ ಹೊಣೆ ಹೊತ್ತು ಯಶಸ್ವಿಯಾಗಿದ್ದರು. ಜತೆಗೆ ಈಶಾನ್ಯ ರಾಜ್ಯದಲ್ಲೂ ಕಾರ್ಯಾಚರಣೆ ಜವಾಬ್ದಾರಿಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕ, ಸೇನಾ ಪ್ರಧಾನ ಕಚೇರಿಯ ಸೇನಾ ಕಾರ್ಯಾಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಟ್ರ್ಯಾಕ್ ರೆಕಾರ್ಡ್‌ನಲ್ಲಿ ಹೆಚ್ಚು ಗಮನ ಸೆಳೆಯುವ ಸಂಗತಿ ಎಂದರೆ; ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಕಾಂಗೋ ದೇಶದಲ್ಲಿ ಅವರು ತೋರಿದ ಪ್ರದರ್ಶನ.  ಸರ್ಜಿಕಲ್ ದಾಳಿಗಳನ್ನು ಸಂಘಟಿಸುವುದರಲ್ಲಿ ರಾವತ್ ಅವರು ಎಕ್ಸ್‌ಫರ್ಟ್. ಯುದ್ಧ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಭಾರಿ ಅನುಭವವ ಹೊಂದಿರುವ  ಇವರು, ಪಾಕಿಸ್ತಾನ ಜತೆಗಿನ ಎಲ್‌ಒಸಿ(ಗಡಿ ನಿಯಂತ್ರಣಾ ರೇಖೆ) ಮತ್ತು ಚೀನಾ ಜತೆಗಿನ ಎಲ್‌ಎಸಿ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ದಾಳಿಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.  ಸೇನಾ ಮುಖ್ಯಸ್ಥರಾಗುವ ಮುಂಚೆ ರಾವತ್ ಅವರು ಸದರ್ನ್ ಕಮಾಂಡ್‌ನ ಮುಖ್ಯಸ್ಥರಾಗಿ ಪುಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಉತ್ತರಾಖಂಡ ರಾಜ್ಯದ ಪೌಡಿ ಗಡ್ವಾಲ್ ಜಿಲ್ಲೆಯವರಾದ ರಾವತ್ ಅವರು ಜನಿಸಿದ್ದು ಸೇನಾ ಹಿನ್ನೆಲೆಯ ಕುಟುಂಬದಲ್ಲಿ. ಇವರ ತಂದೆ ಲಚು ಸಿಂಗ್ ರಾವತ್ ಕೂಡ ಸೇನಾಧಿಕಾರಿ. ಡೆಹ್ರಾಡೂನ್‌ನ ಕ್ಯಾಂಬ್ರಿಯನ್ ಹಾಲ್ ಬೋರ್ಡಿಂಗ್ ಸ್ಕೂಲ್, ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್ ಮತ್ತು ಅಮೆರಿಕದ ವೆಲ್ಲಿಂಗ್ಟನ್ ಆ್ಯಂಡ್ ಹೈಯರ್ ಕಮಾಂಡ್‌ನಿಂದ ಪದವಿ ಪಡೆದಿರುವ ಬಿಪಿನ್ ಅವರು, ರಕ್ಷಣೆ ಸಂಬಂಧಿಯ ಅಧ್ಯಯನಕ್ಕಾಗಿ ಮದ್ರಾಸ್ ವಿವಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. ಮೀರತ್‌ನಲ್ಲಿರುವ ಚೌಧರಿ ಚರಣ್ ಸಿಂಗ್ ವಿವಿಯಲ್ಲಿ ಪಿಎಚ್‌ಡಿ ಕೂಡ ಮಾಡಿದ್ದಾರೆ.
1978 ಡಿಸೆಂಬರ್ 6ರಂದು 11ನೇ ಗೋರ್ಖಾ ರೈಫಲ್ಸ್‌ನ  5ನೇ ಬೆಟಾಲಿಯನ್ ಸೇರಿಕೊಳ್ಳುವ ಮೂಲಕ ಸೇನಾ ಸೇವೆಗೆ ಅಡಿಯಿಟ್ಟರು. ವಿಶೇಷ ಎಂದರೆ ಇದೇ ಯೂನಿಟ್‌ನಿಂದ ರಾವತ್ ಅವರ ತಂದೆ ಕೂಡ ಸೇವೆ ಆರಂಭಿಸಿದ್ದರು. ಇಲ್ಲಿಂದ ಶುರುವಾದ ಸೇನಾವೃತ್ತಿ ಕಳೆದ ಮೂರು ದಶಕದಲ್ಲಿ ನಾನಾ ಮಜಲುಗಳನ್ನು ಕಂಡಿದೆ. ಈ ಸುದೀರ್ಘ ಅವಧಿಯಲ್ಲಿ ಅನೇಕ ಸೇವಾಪದಕಗಳು ಅವರನ್ನು ಅರಸಿಕೊಂಡು ಬಂದಿವೆ. ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿದ್ದಾಗ ಪ್ರತಿಷ್ಠಿತ ‘ಸಾವರ್ಡ್ ಆಫ್ ಆನರ್’ ಗೌರವಕ್ಕೂ ಪಾತ್ರರಾಗಿದ್ದಾರೆ. ಇವರು ಖಡಕ್ ಸೇನಾಧಿಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅವರೊಬ್ಬ ಹೃದಯವಂತಿಕೆ ಮತ್ತು ನಾಗರಿಕ ಸಮಾಜದೊಂದಿಗೆ ಉತ್ತಮ ಬಾಂಧವ್ಯದ ಮೂಲಕ ಸಮತೋಲನ ಕಾಪಾಡಿಕೊಳ್ಳುವ ವ್ಯಕ್ತಿತ್ವ ಹೊಂದಿದ್ದಾರೆಂಬುದು ಬಹಳ ಜನರಿಗೆ ಗೊತ್ತಿಲ್ಲ.
ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವುದು ‘ಡರ್ಟಿ ವಾರ್’ ಎಂದು ನಿರ್ಭಿಡೆಯಾಗಿ ಹೇಳುವ ರಾವತ್ ಅವರು, ಭಯೋತ್ಪಾದನಾ ವಿರೋಧಿ ಸೇನಾ ಕಾರ್ಯಾಚರಣೆಗೆ ತಡೆಯೊಡ್ಡುವವರನ್ನು ಉಗ್ರರಿಗಾಗಿ ಕೆಲಸ ಮಾಡುತ್ತಿರುವವರೆಂದು ಪರಿಗಣಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಕಲ್ಲುತೊರಾಟಗಾರರಿಗೆ ಎಚ್ಚರಿಸಿದ್ದರು. ಅವರ ಈ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಜನರ ವಿಶ್ವಾಸ ಗಳಿಸುವ ಮೂಲಕ ಸೇನೆ ತನ್ನ ಕಾರ್ಯಾಚರಣೆ ಮಾಡಬೇಕೇ ಹೊರತು ಅವರನ್ನು ಹೆದರಿಸಿ ಅಲ್ಲ ಎಂಬ ಟೀಕೆಗಳು ಕೇಳಿ ಬಂದಿದ್ದವು. ಇದಾವುದಕ್ಕೂ ಅವರು ತಲೆಕೆಡಿಸಿಕೊಂಡಿಲ್ಲ. ಕಾಶ್ಮೀರದಲ್ಲಿ ನಡೆಯುತ್ತಿರುವ ‘ಕೊಳಕು ಯುದ್ಧ’ವನ್ನು ವಿನೂತನ ಕ್ರಮಗಳಿಂದಲೇ ಎದುರಿಸಬೇಕೆಂಬ ಅಚಲ ನಂಬಿಕೆ ಅವರದ್ದು. ಏತನ್ಮಧ್ಯೆ, ಕಾಶ್ಮೀರ ಕಣಿವೆಗೆ ಭೇಟಿ ನೀಡಿ, ಅಲ್ಲಿನ ನೈಜ ಸ್ಥಿತಿಯನ್ನು ಅವಲೋಕಿಸಿದ್ದಾರೆ.
ರಾವತ್ ಅವರು ಯೋಧರ ಹಿತಾಸಕ್ತಿ ಕಾಪಾಡುವಲ್ಲಿಯೂ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದು, ಸೇನಾ ವೇತನ ಆಯೋಗ ಮತ್ತು ಸರಕಾರದ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ, ಸೇನೆಯಲ್ಲಿ ಬ್ರಿಟಿಷ್ ಕಾಲದಿಂದಲೂ ಚಾಲ್ತಿಯಲ್ಲಿರುವ ‘ಸಹಾಯಕ್’ ಪದ್ಧತಿ ಕೊನೆಗಾಣಿಸುವತ್ತ ಮುಂದಾಗಿದ್ದಾರೆ. ನೆನಪಿರಲಿ, ಈ ಸಹಾಯಕ್ ಪದ್ಧತಿ ಹಿಂತೆಗೆಯುವ ಬಗ್ಗೆ ಸೇನೆಯೊಳಗೇ ಭಾರೀ ಅಸಮಾಧಾನವಿದೆ. ಹೀಗಿದ್ದಾಗ್ಯೂ ಅವರು ಈ ಕೆಲಸಕ್ಕೆ ಮುಂದಾಗಿದ್ದಾರೆ. ಈ ಎರಡು ಕ್ರಮಗಳು ಬಿಪಿನ್ ಅವರಲ್ಲಿರುವ ಮಾನವೀಯ ಗುಣಗಳಿಗೆ ಸ್ಪಷ್ಟ ನಿದರ್ಶನವಾಗಿವೆ.
ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡು ಈಗ ಆರು ತಿಂಗಳಷ್ಟಾಗಿದೆ. ಈಗಾಗಲೇ ರಾವತ್ ಕಾರ್ಯವೈಖರಿಗೆ ಎಲ್ಲರಿಗೂ ಗೊತ್ತಾಗಿದೆ. ಆದರೆ, ಅವರ ಮುಂದೆ ಸವಾಲುಗಳ ಸಾಲೇ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರ ಕಣಿವೆಯು ಅವರ ಜ್ಞಾನ ಮತ್ತು ಅನುಭವವನ್ನು ಒರೆಗೆ ಹಚ್ಚಲಿದೆ. ಈ ಕಣಿವೆ ರಾಜ್ಯದಲ್ಲಿ 90 ದಶಕದ ಪರಿಸ್ಥಿತಿ ಮತ್ತೆ ಮರುಕಳುಹಿಸಿದೆ. ಹಲವು ಆಯಾಮಗಳನ್ನು ಹೊಂದಿರುವ ಈ ಸಮಸ್ಯೆಯನ್ನು ಕೇವಲ ಬಂದೂಕಿನಿಂದ ಮಾತ್ರ ನಿರ್ವಹಿಸಲಾಗದು ಎಂಬ ಸ್ಪಷ್ಟ ಅರಿವು ಅವರಿಗೂ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಪರಿಹಾರ ಬಿಟ್ಟು ಬೇರೆ ದಾರಿಗಳಿಲ್ಲ. ‘ಸದ್ಯದ ಸ್ಥಿತಿಗೆ ಸೂಕ್ತ ವ್ಯಕ್ತಿ’ ಎಂಬ ಹಣೆಪಟ್ಟಿಯೊಂದಿಗೆ ಸೇನಾ ಮುಖ್ಯಸ್ಥನ ಜವಾಬ್ದಾರಿ ನಿರ್ವಹಿಸುತ್ತಿರುವ ರಾವತ್ ವಿಶಿಷ್ಟ ಸೇನಾ ಮುಖ್ಯಸ್ಥರಾಗಿ ಗುರುತಿಸಿಕೊಳ್ಳುವ ಎಲ್ಲ ಲಕ್ಷಣಗಳಿವೆ.

ಈ ಲೇಖನ ವಿಜಯ ಕರ್ನಾಟಕದ ಜೂನ್ 4, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.