ಗುರುವಾರ, ಆಗಸ್ಟ್ 25, 2011

ಸಾರಿ ಪ್ರೇಮ್... ಯು ಆರ್ ನಾಟ್ ಎ ಜೋಗಿ ಪ್ರೇಮ್!

ತುಂಬಾ ನಿರೀಕ್ಷೆ ಇಟ್ಟುಕೊಂಡು ಜೋಗಯ್ಯ ನೋಡಲು ಹೋಗಿದ್ದೆ. ಆದರೆ, ಸಿನಿಮಾ ನೋಡುತ್ತಿದ್ದ ಅರೆಗಳಿಗೆಯಲ್ಲೇ ನಿರೀಕ್ಷೆಯಲ್ಲಿ ಠುಸ್ ಆಯ್ತು. ಹ್ಯಾಟ್ರಿಕ್ ಸೂಪರ್ ಚಿತ್ರಗಳನ್ನು ನೀಡಿದ್ದ ಪ್ರೇಮ್, ಜೋಗಯ್ಯ ಚಿತ್ರವನ್ನು ಕಥೆಯಿಲ್ಲದೇ ಎಳೆಯಬಾರದಿತ್ತು. ಪ್ರಥಮಾಧ೯ದಲ್ಲಿ ರವಿಶಂಕರ್ ಪಾತ್ರ ನಿಮಗೆ ಕೊಂಚ ರಿಲೀಫ್ ನೀಡುತ್ತದೆ. ಅದೇ ಪಾತ್ರವನ್ನು ದ್ವಿತೀಯಾಧ೯ದಲ್ಲೂ ವಿಸ್ತರಿಸಿದ್ದರೆ ವೀಕ್ಷಕನಿಗೆ ಕೊಂಚವಾದರೂ ನೆಮ್ಮದಿ ಸಿಗುತ್ತಿತ್ತು.


ಅಷ್ಟಕ್ಕೂ ಈ ಚಿತ್ರದ ಕಥೆ ಏನು ಎಂದು ಹುಡುಕಲು ಹೊರಟರೆ ನಿಮ್ಮಂಥ ಮೂಖ೯ರು ಯಾರು ಇಲ್ಲ. ಯಾಕೆಂದರೆ ಕಥೆ ಇಲ್ಲದೆ ಸಿನಿಮಾ ಹೇಗೆ ಮಾಡಬಹುದು ಎಂಬುದನ್ನು ಪ್ರೇಂರಿಂದ ಕಲಿಯಬಹುದು(?). ಕೇವಲ್ ಗಿಮಿಕ್ ಗಳಿಂದ ಚಿತ್ರವನ್ನು ಗೆಲ್ಲಿಸುವುದಾದರೆ ಇಷ್ಟೊತ್ತಿಗೆ ಸುಮಾರು ಚಿತ್ರಗಳು ಗೆಲ್ಲಬೇಕಾಗಿತ್ತು. ಯಾವುದೇ ಗಿಮಿಕ್ ಮಾಡಿದರೂ ಪ್ರೇಕ್ಷಕನನ್ನು ಎರಡು ದಿನಗಳವರೆಗೆ ಚಿತ್ರಮಂದಿರಕ್ಕೆ ಬರವಂತೆ ಮಾಡಬಹುದೇ ಹೊರತು ಪೂತಿ೯ಯಾಗಿಲ್ಲ. ಒಂದು ಚಿತ್ರ ಯಶಸ್ವಿಯಾಗಲು ಗಿಮಿಕ್(ಅತಿಯಾದ ಗಿಮಿಕ್ ಅಲ್ಲ) ಕೂಡಾ ಒಂದು ಅಂಶವಷ್ಟೇ. ಅದನ್ನೇ ನೆಚ್ಚಿಕೊಂಡರೆ ಜೋಗಯ್ಯ ತರಹವಾಗುತ್ತದೆ. ಯಾಕೆಂದರೆ, ಚಿತ್ರ ಬಿಡುಗಡೆಯ ಮುಂಚೆಯೇ ನೀವು ಬೆಟ್ಟದಷ್ಟು ನಿರೀಕ್ಷೆ ಮೂಡಿಸುತ್ತೀರಿ. ಆ ಚಿತ್ರವನ್ನು ನೋಡಿ ಹೊರ ಬಂದಾಗ ಪ್ರೇಕ್ಷಕನ ಮನದಲ್ಲಿ ನಿರೀಕ್ಷೆ ಠುಸ್ಸಾಗಿದ್ದರೆ ಮುಗೀತು ಚಿತ್ರದ ಕಥೆ ಅಲ್ಲಿಗೆ. ನೀವು ಎಷ್ಟು ನಿರೀಕ್ಷೆಯನ್ನು ಹೆಚ್ಚಿಸುತ್ತೀರೋ ಅಷ್ಟೇ ಚೆನ್ನಾಗಿ ಚಿತ್ರವನ್ನು ನಿರೂಪಿಸಬೇಕು. ಆಗಲೇ ಪ್ರೇಕ್ಷಕ ಮರಳಿ ಚಿತ್ರಮಂದಿರಕ್ಕೆ ಹೋಗಲು ಸಾಧ್ಯ. ಆದರೆ, ಪ್ರಚಾರ ಮಾಡಿದಂತೆ ಎಷ್ಟೋ ಸಿನಿಮಾಗಳು ಹಾಗೆ ಇರುವುದೇ ಇಲ್ಲ. ಪ್ರಚಾರ ನಂಬಿ ಚಿತ್ರಮಂದಿರಕ್ಕೆ ಹೋದರೆ ನಿರಾಶೆ ಗ್ಯಾರಂಟಿ. ಜೋಗಯ್ಯ ಕೂಡಾ ಇದೇ ಸಾಲಿಗೆ ಸೇರುತ್ತದೆ.

ಇದರ ಮಧ್ಯೆಯೇ, ಶಿವಣ್ಣ ಜೋಗಯ್ಯದಲ್ಲಿ ಅಚ್ಚರಿ ಮೂಡಿಸುತ್ತಾರೆ. ಅಭಿಯನಕ್ಕೆ ಸಂಬಂಧಿಸಿದಂತೆ ತುಂಬಾ ಸಾಧ್ಯತೆಗಳನ್ನು ಹೊರ ಹಾಕುವುದಕ್ಕೆ ತಮ್ಮಿಂದ ಸಾಧ್ಯ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ. ಚಿತ್ರದಲ್ಲಿ ಅವರು ವೈಸ್ ಮಾಡ್ಯೂಲೇಷನ್ ಗೆ ಪ್ರಯತ್ನಿಸಿದ್ದಾರೆ. ಚಿತ್ರ ನೋಡುವಾಗ ಕೆಲವು ಸನ್ನಿವೇಶಗಳಲ್ಲಿ ಅವರ ಮುಖ ಭಾವ ರಾಜಕುಮಾರ ಅವರನ್ನು ನೆನಪಿಸಿದರೆ ಅದು ಅವರ ಅಭಿನಯಕ್ಕೆ ಸಂದ ಜಯ.

ಇನ್ನು ಚಿತ್ರದ ಹಾಡುಗಳ ವಿಷಯಕ್ಕೆ ಬಂದರೆ ವಿ.ಹರಿಕೖಷ್ಣ ಫುಲ್ ಸ್ಕೋರ್ ಮಾಡುತ್ತಾರೆ. ಅದ್ಭುತ ಎನ್ನುವಂಥ ಟ್ಯೂನ್ ಗಳನ್ನು ಕೊಟ್ಟಿಲ್ಲವಾದರೂ ಇಂಪಾಗಿವೆ. ಮನಸ್ಸಿಗೆ ಹಿಡಿಸುತ್ತವೆ. ಹಾಗೆಯೇ ಹಾಡುಗಳನ್ನು ಚಿತ್ರೀಕರಣ ಮಾಡಿರುವ ಪರಿ ಹಾಗೂ ಅವುಗಳ ಕಲ್ಪನೆಯಲ್ಲಿ ಪ್ರೇಮ್ ಗೆಲ್ಲುತ್ತಾರೆ. ಅದೇ ಕಲ್ಪನೆ, ರೀತಿ, ಕ್ರಮವನ್ನು ಸ್ಕ್ರೀನ್ ಪ್ಲೆ, ಕಥೆ, ನಿದೇ೯ಶನದಲ್ಲಿ ತೋರಿದ್ದರೆ ಜೋಗಯ್ಯ ಅದ್ಭುತ ಚಿತ್ರವಾಗುತ್ತಿತ್ತು. ಆದರೆ, ಪ್ರೇಮ್ ಸಂಪೂಣ೯ವಾಗಿ ಎಡವಿದ್ದಾರೆ. ಅವರಷ್ಟೇ ಎಡುವುದಲ್ಲದೇ ಪ್ರೇಕ್ಷಕರನ್ನು ಕೂಡಾ ಎಡುವಂತೆ ಮಾಡುತ್ತಿದ್ದಾರೆ. ನಾವು ಚಿತ್ರವನ್ನು ಹಾಗೆ ತೆಗೆದಿದ್ದೇವೆ. ಹೀಗೆ ತೆಗಿದಿದ್ದೇವೆ. ಅಷ್ಟೊಂದು ಕಷ್ಟಪಟ್ಟಿದ್ದೇವೆ. ಇಷ್ಟೊಂದು ಕಷ್ಟಪಟ್ಟಿದ್ದೇವೆ ಎಂದು ಟೀವಿಗಳಲ್ಲಿ ಹೇಳುತ್ತಿದ್ದಾರೆ ಪ್ರೇಮ್. ನೀವು ಕಷ್ಟಪಟ್ಟಿದ್ದು ನಿಜವೇ ಇರಬಹುದು. ನಿಮ್ಮ ಕಷ್ಟಕ್ಕೆ ಬಲ, ಫಲ ಸಿಗಬೇಕಿದ್ದರೆ ಚಿತ್ರದ ಒಟ್ಟು ಫಲಿತಾಂಶವನ್ನು ನಿಧ೯ರಿಸುತ್ತದೆ ಎಂಬುದನ್ನು ಮರೆಯಬಾರದು. ಪ್ರೇಮ್ ತುಂಬಾ ಕಷ್ಟಪಟ್ಟಿದ್ದಾರೆಂದು ಎಂದು ನಿಮಗಿರುವ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಬಹುದು. ಆದರೆ, ಕೇವಲ ಉತ್ತಮ ಚಿತ್ರಗಳನ್ನು ನೋಡಬೇಕು ಎಂದು ಅಭಿಮಾನ ಇಟ್ಟುಕೊಂಡವರನ್ನು ನೀವು ಚಿತ್ರಮಂದಿರಕ್ಕೆ ಎಳೆಯಲು ಸಾಧ್ಯವಿಲ್ಲ. ಅವರೂ ಬಂದಾಗಲೇ ಚಿತ್ರ ಗೆಲ್ಲೋದು. ಅಂದರೆ, ಒಂದು ಚಿತ್ರ ಗೆಲ್ಲಬೇಕಾದರೆ ಎಲ್ಲ ವಗ೯ದ ಜನರು ಬರವಂತಾಗಬೇಕು. ಬರಬೇಕು. ಆಗಲೇ ಗೆಲವು ಅಲ್ಲವೇ..?

ಜೋಗಯ್ಯ ಇಡೀ ಚಿತ್ರವಾಗಿ ಇಷ್ಟ ಆಗೋದಿಲ್ಲ. ಹಾಡುಗಳಿಗೆ ಇಷ್ಟವಾಗುತ್ತದೆ. ಕೆಲವು ದೖಶ್ಯಗಳಾಗಿ ಇಷ್ಟವಾಗುತ್ತದೆ ಅಷ್ಟೆ. ಬಿಡಿ ಬಿಡಿಯಾಗಿ ಚಿತ್ರ ಇಷ್ಟವಾಗುವುದಾದರೆ ಗೆಲ್ಲವುದು ಹೇಗೆ..? ಚಿತ್ರಕಥೆಯಲ್ಲಿ ಬಿಗುವಿಲ್ಲ. ಶಿವಣ್ಣನ ನೂರನೇ ಚಿತ್ರವಾಗಿರುವುದರಿಂದ ಸಶಕ್ತ ವಿಲನ್ ಕ್ಯಾರೆಕ್ಟರೇ ಇಲ್ಲ!!.

ಇದಿಷ್ಟು ಜೋಗಯ್ಯ ನೋಡಿದ ಮೇಲೆ ನನಗನ್ನಿಸಿದ್ದು. ನನಗೆ ಅನ್ನಿಸಿದ ಹಾಗೆಯೇ ನಿಮಗೆ ಅನ್ನಿಸಬೇಕಿಲ್ಲ. ನಿಮಗೆ ಇಷ್ಟವಾಗಬಹುದು. ಪ್ರೇಮ್ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡು, ನಿರೀಕ್ಷೆ ಇಟ್ಟುಕೊಂಡಿದ್ದರಿಂದ ನನಗೆ ಹಾಗೆ ಅನ್ನಿಸರಬಹುದು ಕೂಡಾ. ಇದು ನನ್ನ ಪ್ರಾಮಾಣಿಕ ಅನಿಸಿಕೆ ಅಷ್ಟೇ.

ಸಾರಿ ಪ್ರೇಮ್... ಯು ಆರ್ ನಾಟ್ ಎ ಜೋಗಿ ಪ್ರೇಮ್!
ಹೀಗೆ ಹೇಳದೇ ಬೇರೆ ದಾರಿ ಇಲ್ಲ.



ಬುಧವಾರ, ಅಕ್ಟೋಬರ್ 27, 2010

ಸಚಿನ್ಮಯ- ಕೇವಲ ದಾಖಲೆಗಾಗಿ ಅಲ್ಲ


ಸಚಿನ್ ತೆಂಡೂಲ್ಕರ್.

ಈ ಹೆಸರೇ ಪ್ರೇರಕ. ಸ್ಪೂರ್ತಿ. ವಿಶ್ವ ಕ್ರಿಕೆಟ್ ನ ಸಾಮ್ರಾಟನ ಬಗ್ಗೆ ಎಷ್ಟೇ ಬರೆದರೂ ಸಾಲದು. ಸಚಿನ್ ಈಗ ಎಲ್ಲ ಪದಗಳನ್ನು ಮೀರಿ ನಿಂತಿದ್ದಾರೆ. ಅವರ ಸಾಧನೆ ಬಣ್ಣಿಸಲು ಪದಗಳು ಸಾಲುವುದಿಲ್ಲ. ಸಚಿನ್ ಬಣ್ಣನೆಗೆ ಯಾವುದೇ ಪದ ಬಳಸಿದರೂ ಆ ಪದ ಅವರ ಸಾಧನೆಯನ್ನು ಪೂರ್ತಿಯಾಗಿ ಪರಿಚಯಿಸುವುದಿಲ್ಲ. ಒಬ್ಬ ವ್ಯಕ್ತಿ ಕ್ರೀಡೆಯಿಂದಲೇ ದೇವರ ಸ್ಥಾನಕ್ಕೇರುತ್ತಾರೆಂದರೆ ಅದು ಸಾಮಾನ್ಯದ ಮಾತೇನು..ಕ್ರೀಡೆಯತ್ತ ಸಚಿನ್ ಅವರಿಗಿರುವ ಬದ್ಧತೆಯನ್ನು ಯಾರು ಪ್ರಶ್ನಿಸಲಾಗದು. ಇದಕ್ಕೆ ಮತ್ತೊಂದು ತಾಜಾ ಉದಾಹರಣೆಯೆಂದರೆ, ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿನ ದ್ವಿಶತಕ. 37ನೇ ವಯಸ್ಸಿನಲ್ಲಿ ಸಚಿನ್ ಇನ್ನು 18ರ ಹರೆಯದ ಹುಡುಗನ ರೀತಿ ಆಡುತ್ತಾರೆಂದರೆ, ಅದು ಅವರ ಸಾಮರ್ಥ್ಯದ ಸಾಕ್ಷಿ. ಸಚಿನ್ ಗೆ ವಯಸ್ಸಾಯಿತು. ಹೀಗೆ ಜರಿದವರಿಗೆ ಅವರು ಬ್ಯಾಟಿಂಗ್ ನಿಂದಲೇ ಉತ್ತರ ನೀಡುತ್ತಾರೆ. ತುಟಿಪಿಟಿಕ್ ಎನ್ನುವುದಿಲ್ಲ. ಈ ಗುಣವೇ ಅವರನ್ನು ವಿಶ್ವ ಕ್ರಿಕೆಟ್ ನ ಅತ್ಯುಚ್ಛ ಸ್ಥಾನಕ್ಕೇರಿಸಿದೆ. ಆನೆ ನಡೆದಿದ್ದೇ ದಾರಿ ಎನ್ನುವಂತೆ ಸಚಿನ್ ಎಂಬ ಅಶ್ವಮೇಧ ಓಟಕ್ಕೆ ಯಾರೂ ಕಡಿವಾಣ ಹಾಕಲು ಸಾಧ್ಯವಿಲ್ಲ. ಅವರ ದಾಖಲೆಗಳನ್ನು ಭವಿಷ್ಯದಲ್ಲಿ ಯಾರಾದರೂ ಮುರಿಯಬಹುದು. ಆದರೆ, ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತು ಬಿಡಿ. ರನ್ ಗಳ ಶಿಖರ ಏರಿ ಕುಳಿತಿರುವ ಸೂರ್ಯ ಶಿಕಾರಿ ಸಚಿನ್. ಇದಕ್ಕೆ ಅವರು ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ನಲ್ಲಿ ಆಡಿದ ಪರಿಯೇ ಸಾಕ್ಷಿ. ಸಚಿನ್ ಅವರ ಒಂದೊಂದು ಹೊಡೆತಕ್ಕೂ ಚಿನ್ನಸ್ವಾಮಿ ಅಂಗಣದಲ್ಲಿ ಪ್ರೇಕ್ಷರ ಓಹೋ ಎನ್ನುವ ಲಹರಿ. ಅದರೊಳಗೆ ಸಚಿನ್ ಗುಣಗಾನ.ಸಚಿನ್ ಬ್ಯಾಟ್ ಹಿಡಿದು ಕ್ರಿಸ್ ಗೆ ಇಳಿದರೆ ಸಾಕು. ದಾಖಲೆಗಳ ಮೇಲೆ ದಾಖಲೆಗಳು ದಾಖಲಾಗುತ್ತಾ ಹೋಗುತ್ತವೆ. ಟೆಸ್ಟ್ ಕ್ರಿಕೆಟ್ ನಲ್ಲಿ 49 ಶತಕ ಸಿಡಿಸಿರುವ ಈ ಸಿಡಿಲಮರಿಗೆ ಶತಕಗಳ ಅರ್ಧಶತಕಕ್ಕೆ ಇನ್ನೊಂದೇ ಶತಕ ಸಾಕು. ಅದು ಮುಂಬರುವ ನ್ಯೂಜಿಲೆಂಡ್ ಸರಣಿಯಲ್ಲಿ ಈ ಸಾಕಾರುಗೊಳ್ಳತ್ತದೆ. ಇದರಲ್ಲಿ ಅನುಮಾನ ಬೇಡ. ಏಕದಿನ ಪಂದ್ಯಗಳಲ್ಲಿ 46 ಶತಕ ಸಿಡಿಸಿದ್ದಾರೆ. ಇಲ್ಲಿಯೂ ಶತಕಗಳ ಅರ್ಧಶತಕಕ್ಕೆ ಅಡಿ ಇಡಲು ಬಹಳ ದಿನ ಕಾಯಬೇಕಿಲ್ಲ. ಎರಡೂ ಮಾದರಿಯ ಕ್ರಿಕೆಟ್ ನಲ್ಲಿ ಶತಕಗಳ ಶತಕ ದಾಖಲಿಸುವ ಕ್ಷಣಕ್ಕೆ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕಾದುಕುಳಿತಿದೆ. ಆ ಗಳಿಗೆ ಯಾವಾಗ... ಇನ್ನೇನೂ ದೂರವಿಲ್ಲ ಬಿಡಿ. ಎರಡೂ ಮಾದರಿಯ ಕ್ರಿಕೆಟ್ ನಿಂದ ಸಚಿನ್ ಇದೂವರೆಗೆ ಬರೋಬ್ಬರಿ 31838 ರನ್ ಗಳಿಸಿದ್ದಾರೆ. ಅಬ್ಬಾ... ಸಚಿನ್.ಇತ್ತೀಚೆಗಷ್ಟೇ, ಐಸಿಸಿ ವರ್ಷದ ವ್ಯಕ್ತಿ ಹಾಗೂ ಜನರ ಆಯ್ಕೆ ಪ್ರಶಸ್ತಿಯನ್ನು ಸಚಿನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದುವರೆಗೂ ಐಸಿಸಿ ಪ್ರಶಸ್ತಿ ಸಿಕ್ಕಿಲ್ಲವಲ್ಲ ಎಂಬ ಅವರ ಅಭಿಮಾನಿಗಳ ಕೊರಗು ಕೂಡಾ ಕೊನೆಯಾಗಿದೆ. ಈ ಸಂದರ್ಭದಲ್ಲಿ ಅವರು, ಎಲ್ಲಾ ಪ್ರಶಸ್ತಿಗಳಿಗಿಂತ ಜನರ ಆಯ್ಕೆಯ ಪ್ರಶಸ್ತಿ ತುಂಬಾ ಖುಷಿ ಕೊಡುತ್ತದೆ ಎಂದಿರುವುದು ಅವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.ಒಬ್ಬ ವ್ಯಕ್ತಿ ಸುಖಾಸುಮ್ಮನೇ ಉನ್ನತ ಸ್ಥಾನಕ್ಕೇರುವುದಿಲ್ಲ. ಅದರಲ್ಲೂ ಮಹಾತ್ಮನ ಸ್ಥಾನಕ್ಕೇರುವುದೆಂದರೆ ಮನುಷ್ಯ ಸಹಜ ಎಲ್ಲ ಗುಣಧರ್ಮಗಳನ್ನು ಬಿಟ್ಟುಕೊಡಬೇಕು. ಭಾರತದಲ್ಲಿ ಈ ಸ್ಥಾನಕ್ಕೇರಿದವರೆಂದರೆ ಇಬ್ಬರೇ. ಒಬ್ಬರು ಮಹಾತ್ಮ ಗಾಂಧಿಜಿ. ಇನ್ನೊಬ್ಬರು ಸಚಿನ್ ತೆಂಡೂಲ್ಕರ್. ಅದಕ್ಕೆ ಅವರನ್ನು ಕ್ರಿಕೆಟ್ ದೇವರು ಎಂದು ಅಭಿಮಾನಿಗಳು ಕರೆಯುವುದು. ಯಾವುದೇ ಕ್ರಿಕೆಟ್ ನಲ್ಲಿ 30, 32 ವಯಸ್ಸು ಎಂದರೆ ಅದು ನಿವೃತ್ತಿ ವಯಸ್ಸು. ಆದರೆ, ಸಚಿನ್ ಮಾತ್ರ ಹೊರತಾಗಿದ್ದಾರೆ. 37ನೇ ವಯಸ್ಸಿನಲ್ಲೂ ಅವರು ಕ್ರಿಕೆಟ್ ಆಡುವ ಪರಿಯನ್ನು ಗಮನಿಸಿದರೆ ಸಚಿನ್ ಗೆ ಸಚಿನ್ ಸಾಟಿ. ಅವರು ತಮಗೆ ಬೇಕಾಗುವಷ್ಟು ಕ್ರಿಕೆಟ್ ಆಡುವವರು ಎಂಬುದರಲ್ಲಿ ಅನುಮಾನವಿಲ್ಲ. ತಮ್ಮ ಸಮಕಾಲೀನ ಎಲ್ಲ ಬೌಲರ್ ಗಳಿಗೂ ನೀರು ಕುಡಿಸಿರುವ ಸಚಿನ್, ಬ್ಯಾಟಿಂಗ್ ನ ಅದ್ವಿತೀಯ. ಮಹಾನ್ ಕ್ರಿಕೆಟಿಗ ಎಂದು ಹೇಳುವುದು ಕ್ಲಿಷೆಯಷ್ಟೇ. ಸಚಿನ್ ಕೇವಲ ಆಟದಲ್ಲಷ್ಟೇ ಮಾದರಿಯಲ್ಲ. ಒಬ್ಬ ಸೆಲಿಬ್ರಿಟಿ ಹೇಗೆ ಇರಬೇಕು ಎಂಬುದಕ್ಕೂ ಸಚಿನ್ ಮಾದರಿ. ಸಚಿನ್ ಕೇವಲ ದಾಖಲೆಗೋಸ್ಕರ ಆಡುತ್ತಾರೆ. ಅವರಿಗೆ ದೇಶ ಮುಖ್ಯವಲ್ಲ ಎಂದು ವಿರೋಧಿಗಳು ಟೀಕಿಸಬಹುದು. ಆದರೆ, ಇದು ನೂರಕ್ಕೆ ನೂರರಷ್ಟು ಸುಳ್ಳು. ವ್ಯಕ್ತಿಯೊಬ್ಬ ಕೇವಲ ದಾಖಲೆಗಳಿಗೋಸ್ಕರ ಆಡುವುದಾದರೆ, ಕ್ರಿಕೆಟ್ ನಲ್ಲಿ ಇಷ್ಟೊಂದು ವಷ ಆಡಲು ಸಾಧ್ಯವೇ... ಮುಂಬೈ ಮರಾಠಿಗರಿಗೆ ಸೇರಿದ್ದು ಎಂದು ಕಿರಿಕಿರಿ ನಾಯಕ ಬಾಳಾ ಠಾಕ್ರೆಗೆ ತಿರುಗೇಟು ನೀಡಿದ ಸಚಿನ್, ಮುಂಬೈ ಎಲ್ಲರಿಗೂ ಸೇರಿದ್ದು ಎಂದು ಹೇಳುವ ಮೂಲಕ ಭವ್ಯ ಭಾರತದ ಏಕತೆಯನ್ನು ಸಾರಿದ್ದರು. ಅವರ ರಾಷ್ಟ್ರಭಕ್ತಿಗೆ ಇದೊಂದು ಉಕ್ತಿ ಸಾಲದೆ...ಸಚಿನ್ ಬಗ್ಗೆ ಯಾರೇ ಏನೇ ಹೇಳಲಿ. ಅವರೊಬ್ಬ ಅದ್ಭುತ ಕ್ರಿಕೆಟಿಗ ಮತ್ತು ವ್ಯಕ್ತಿ. ಎಲ್ಲ ಕಾಲಕ್ಕೂ ರೋಲ್ ಮಾಡಲ್. ಅವರಿಗೇ ಅವರೇ ಸಾಟಿ.
(ಕನ್ನಡಪ್ರಭದ 19-10-2010ರ ಕ್ರೀಡಾಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಬರಹ)

ಮಂಗಳವಾರ, ಮಾರ್ಚ್ 9, 2010

ಯಾಕೆಂದರೆ ಅವಳು ಹೆಣ್ಣು

ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದೇನೆ
ಒಬ್ಬರು ನಾನು ಹೀಗೆ ಇರಬೇಕು ಅಂದ್ರು
ಇನ್ನೊಬ್ಬರು ನಾನು ಹೀಗಿರಬಾರದು ಅಂದ್ರು
ಯಾರೂ ಕೇಳಲಿಲ್ಲ ನಾನ್ ಹೇಗೆ ಇರಬೇಕೆಂದು

ಮೀಸೆ ಮಂದಿ ಅರಿಯಲಿಲ್ಲ
ನನ್ನ ಆಂತಯ೯, ಕೇಳಲಿಲ್ಲ ಬಯಕೆ.
ಹೇರಿದರು ನನ್ನ ಮೇಲೆ ಅವರವರ ಭಾವ.
ತಿಂದುಂಡರು, ತೇಗಿ ಸುಸ್ತಾದರು.
ನನ್ನ ಸುಸ್ತು ಕೇಳಲಿಲ್ಲ, ಅರಿಯಲಿಲ್ಲ

ನಾಲ್ಕು ಗೋಡೆಗಳ ಮಧ್ಯೆ ನಿನ್ನ
ಬಾಳು, ಅಲ್ಲೇ ನಿನ್ನ ಜೀವನ
ಮಕ್ಕಳ ಹೇರು. ಹೊತ್ತೊತ್ತು
ಮಾಡು ಕೂಳು, ಕೇಳಬೇಡ
ಮತ್ತೇನನ್ನು ಯಾಕೆಂದರೆ ನೀನು ಹೆಣ್ಣು

ಇದೆಲ್ಲ ಆಗ...

ಈಗ ಕಾಲ ಉರುಳಿದೆ
ಇತಿಹಾಸದಲ್ಲಿ ಹೂತು ಹೋದವಳೇ
ನಿಮಿ೯ಸುತ್ತಿದ್ದಾಳೆ ಇತಿಹಾಸ
ಸವಾಲಾಗಿದ್ದಾಳೆ ನಾವೇ ಸಮ ಎನ್ನುವರಿಗೇ

ಮೈಲುಗಲ್ಲು ನೆಟ್ಟಿದ್ದಾಳೆ
ನಮ್ಮದೇ ಮೈಲುಗಲ್ಲು ಎನ್ನುವವರ ಮುಂದೆ
ದಾಟಿದ್ದಾಳೆ ಸಂಪ್ರದಾಯ,
ಭವ- ಬಂಧನಗಳನ್ನು ಮೀರಿದ್ದಾಳೆ
ಯಾಕೆಂದರೆ ಅವಳು ಹೆಣ್ಣು.

ಇದು ಈಗ...

ಶುಕ್ರವಾರ, ಜನವರಿ 29, 2010

ಹನಿಮೂನಗೆ ಕಾಶ್ಮೀರಕ್ಕೆ ಬರೋಣ ಕಣೋ...

ಹೇಗಿದ್ದೀಯಾ ಮುದ್ದು?

ನಿನ್ನನ್ನು ಸೇರಿಕೊಳ್ಳುವ ದಿನಗಳು ಸಮೀಪಿಸುತ್ತಿದ್ದಂತೆ ನನ್ನ ಮನಸ್ಸು, ಹೃದಯ ಉಲ್ಲಾಸದಿಂದ ತುಂಬಿ ತುಳುಕುತ್ತಿದೆ. ಉಳಿದಿರುವ ಒಂದು ವಾರ ಕೂಡಾ ಯುಗಯುಗದಂತೆ ಭಾಸವಾಗುತ್ತಿದೆ ಚಿನ್ನು. ನನ್ನ ತರಬೇತಿ ಮುಗಿದಿದೆ. ಈಗೇನಿದ್ದರೂ ಇಡೀ ಕಾಶ್ಮೀರವನ್ನು ಸುತ್ತಾಡಿ ಮರೆಯಲಾಗದ ನೆನಪು, ಅನುಭವವನ್ನು ಹೊತ್ತು ತರುವುದು ಅಷ್ಟೇ ನನ್ನ ಕೆಲಸ. ಆದರೂ ನಿನ್ನ ಸಾನ್ನಿಧ್ಯದಲ್ಲಿ ಸಿಗುವ ಸಂತೋಷ ನನಗೆ ಬೇರಲ್ಲೂ ಸಿಗಲ್ಲ ಕಣೋ. ಹಾಂ.... ಹಾಗೆಂದಕ್ಷಣಾ ನಾನು ಖುಷಿಯಿಂದ ಕಾಶ್ಮೀರ ಸುತ್ತುತ್ತಿದ್ದೇನೆ ಎಂದು ಭಾವಿಸಬೇಡ. ನೀನಲ್ಲದ ಭಾವ ನನ್ನ ಸದಾ ಕೊರೆಯತ್ತಲೇ ಇರುತ್ತದೆ. ನಾವಿಬ್ಬರೂ ಸಪ್ತಪದಿ ತುಳಿದ ನಂತರ ಮತ್ತೆ ಕಾಶ್ಮೀರಕ್ಕೆ ಬರೋಣ. ನಿಜವಾಗಲೂ ಕಾಶ್ಮೀರ "ಪ್ರೇಮಕಾಶ್ಮೀರ" ಕಣೋ ಇದು. ಪ್ರೇಮಿಗಳಿಗಾಗಿಯೇ ಭೂಮಿ ಮೇಲೆ ದೇವರು ಸೃಷ್ಟಿಸಿರುವ ಪ್ರೇಮಲೋಕ. ಆದರೂ, ಈ ಕ್ಷಣದಲ್ಲಿ ನೀನು ನನ್ನ ಬಳಿ ಇಲ್ಲ ಎಂಬುದೇ ನನ್ನ ದುಃಖಕ್ಕೆ ಕಾರಣ. ಚಿನ್ನು.. ಸುಮ್ಮನೇ ಏನೇನೋ ಕಲ್ಪಿಸಿಕೊಂಡು ಭಯಭೀತಗೊಳ್ಳಬೇಡ. ನೀನು ಅಂದುಕೊಂಡ ಹಾಗೆ ನಮ್ಮಪ್ಪ ನಮ್ಮಿಬ್ಬರ "ಅಮರಪ್ರೇಮ"ವನ್ನು ಹಾಳು ಮಾಡಲಾರ. ಯಾಕೆಂದರೆ ನಂಗೆ ಗೊತ್ತು... ನಮ್ಮಪ್ಪ ಒರಟನಂತೆ ಕಂಡರೂ ಹೃದಯ ಬಲು ಮೆದು. ಸಮಾಜಕ್ಕೆ ಹೆದರಿ ಜಾತಿ ಬಗ್ಗೆ ಮಾತನಾಡುತ್ತಾನೇ ಹೊರತು ಅವನೇನೂ ಪ್ರೀತಿಯ ಶತ್ರುವಲ್ಲ. ನಿಂಗೆ ಗೊತ್ತಾ...? ನಾನು ನನ್ನ ಅವ್ವನಿಗಿಂತಲೂ ಹೆಚ್ಚು ಹಚ್ಚಿಕೊಂಡಿದ್ದು ಅಪ್ಪನನ್ನೇ. ಆತ ಎಂದೆಂದಿಗೂ ನನ್ನ ಆಸೆ, ಆಕಾಂಕ್ಷೆಗಳನ್ನು ಭಗ್ನಗೊಳಿಸಲಾರ ಮುದ್ದು. ಧೈರ್ಯವಾಗಿರು. ಈ ಜೀವ ಇರುವುದೇ ನಿನಗಾಗಿ. ನನ್ನನ್ನು ನಾನು ಪ್ರೀತಿಸಿಕೊಳ್ಳುವ ಸಾವಿರ ಪಟ್ಟು ಹೆಚ್ಚು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಮ್ಮಿಬ್ಬರ ಈ ನಿಷ್ಕಲ್ಮಷ ಪ್ರೀತಿಗೆ ಜಾತಿ-ಪಾತಿ ಯಾವ ಲೆಕ್ಕ. ಪ್ರೇಮಿಗಳೆಂದರೇ ಎಲ್ಲ ಲೆಕ್ಕವನ್ನು ಬುಡುಮೇಲು ಮಾಡವವರು ಅಲ್ವಾ...? ಇನ್ನು ಒಂದೇ ಒಂದು ವಾರ. ನಾನು ನಿನ್ನ ತೆಕ್ಕೆಯಲ್ಲಿರುತ್ತೇನೆ. ಅಲ್ಲದೇ, ನೀನೇ ನನಗೆ ಪ್ರಪಂಚ. ನಾನೇ ನಿನಗೆ ಪ್ರಪಂಚ. ಬಾಕೀ ಪ್ರಪಂಚ ಬರೀ ನೆಪ ಮಾತ್ರ. ತಿಳೀತಾ ಕೋತಿ..


-ನಿನ್ನವಳು

ಶನಿವಾರ, ಜನವರಿ 23, 2010

ಜಾತಿಯ ಕೂಪದಲ್ಲಿ ಬೀಳದಿರಲಿ ಪ್ರೀತಿ.....

ಹಾಯ್ ಹೃದಯೇಶ್ವರಿ,


ಈಗೀಗ ಮನಸ್ಸು ಮುಂದಿನದನ್ನು ನೆನೆಸಿಕೊಂಡು ಭಯ ಬೀಳುತ್ತಿದೆ. ಯಾಕೆ ಗೊತ್ತಿಲ್ಲ. ನಮ್ಮಿಬ್ಬರ ಪ್ರೀತಿ ಮದುವೆ ಎಂಬ ಸುಂದರ ಕಲ್ಪನೆಯಲ್ಲಿ ಬಂಧಿಯಾಗುತ್ತದಾ...? ನಾವಿಬ್ಬರೂ ಪ್ರಮಾಣ ಮಾಡಿದಂತೆ ಕೊನೆವರೆಗೂ ಜತೆಯಾಗೇ ಇರುತ್ತೇವೆ..? ಎಂಬ ದುಗುಡ ಕಾಡುತ್ತಿದೆ. ಅಷ್ಟಕ್ಕೂ ಇಂಥ ಅಪಶಕುನ ಪ್ರಶ್ನೆಗಳು ಅದೇಕ ಏಳುತ್ತಿವೆ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ ಜಾಣೆ.

ಯಾರಿಗೆ ಬೇಕು ಈ ಲೋಕ


ಮೋಸಕ್ಕೆ ಇಲ್ಲಿ ಕೈ ಮುಗಿಬೇಕಾ


ಪ್ರೀತಿಯೇ ಹೋದರೂ ಇರಬೇಕಾ..?


ಈ ಹಾಡು ಎಫ್ಎಂನಲ್ಲಿ ಕೇಳುತ್ತಿದ್ದಂತೆ ನಮ್ಮಿಬ್ಬರ ಬಿಡಿಸಲಾಗದ ಈ ಪ್ರೀತಿಯ ಗಂಟನ್ನು ಜಾತಿ ಎಂಬ ಎರಡಕ್ಷರಗಳು ಬಿಸಿಡಿಸಿದರೆ ಎಂಬ ಆತಂಕ ಶುರುವಾಗಿದೆ. ಬಿಡಿಸಿದರೆ ಖಂಡಿತವಾಗಿಯೂ ನಾನು ನಾನಾಗಿಯೇ ಇರಲ್ಲ ಚಿನ್ನು. ಹುಚ್ಚನಾದರೂ ಆದೆ, ವ್ಯಸನಿಯಾದರೂ ಆದೇನು. ಪ್ರೀತಿಯ ವ್ಯಸನಿಯಾದ ಮೇಲೆ ಇದು ಸಹಜ ಎನ್ನುತ್ತಾನೆ ನನ್ನ ಭಗ್ನ ಪ್ರೇಮಿ ಗೆಳೆಯನೊಬ್ಬ. ನಾವು ಭಗ್ನಪ್ರೇಮಿಗಳಾದರೆ...? ಖಂಡಿತ ಹಾಗೆ ಆಗುವುದು ಬೇಡ ಎಂಬ ಹಾರೈಕೆ, ಓಲೈಕೆ ನನ್ನದು. ಆದರೆ, ವಿಧಿಯಾಟ ಯಾರು ಬಲ್ಲರು. ಚಿನ್ನು ಒಂದು ಮಾತು ಹೇಳಲಾ...? ನಾನು ಹುಡುಗನಾದರೂ ನನಗಿಂತ ಧೈರ್ಯ ನಿನಗೇ ಹೆಚ್ಚು. ನಮ್ಮ ಪ್ರೀತಿಯ ಯಶಸ್ಸಿನ ಬಗ್ಗೆ ಹೆಚ್ಚು ಕನಸು ಕಾಣುತ್ತಿರುವಳು ನೀನೇ. ಹೀಗಿದ್ದಾಗ್ಯೂ.. ನಿಮ್ಮಪ್ಪನ ಭಯಂಕರ ಜಾತಿ ಪ್ರೇಮ ನೆನೆದು ನನ್ನ ಚಿಕ್ಕಪುಟ್ಟ ದುಗುಡಗಳು ಬೆಳೆದು ಭೂತಾಕಾರ ಪಡೆಯುತ್ತಿವೆ ಬೇಗ ಬಾ ನೀನು. ಜತೆಗಿದ್ದರೆ ನೀನು ಇಂಥ ದುಗುಡ- ದುಮ್ಮಾನಗಳು ನನ್ನಷ್ಟು ಕಾಡಲಾರವು.


ಇನ್ನೊಂದು ವಿಷಯ ಗೊತ್ತಾ...? ಇಷ್ಟೆಲ್ಲ ಮನಸ್ಸಿನ ಕಿರಿಕಿರಿ ನಡುವೆ ನಾನು ನಿನ್ನೊಂದಿಗೆ ಕಳೆದ ಪ್ರತಿಕ್ಷಣಗಳು ದುಗುಡದ ಮರುಗಳಿಗೆಯಲ್ಲಿ ಉಲ್ಲಾಸಿತಗೊಳಿಸುತ್ತೇವೆ. ಅದೇ ನಿನ್ನ ಶಕ್ತಿ ಹೃದಯೇಶ್ವರಿ. ಅದನ್ನೇ ನಾನು ಮೆಚ್ಚಿ ನಿನ್ನ ಹಿಂದೆ ಬಂದದ್ದು. ಹೊಡೆತ ತಿಂದದ್ದು. ಇದೆಲ್ಲ ನೆನಪಾದಾಗೆಲ್ಲಾ ಒಬ್ಬನೇ ನಗ್ತಾ ಇರುತ್ತೇನೆ. ನಿನ್ನ ಹಾದಿಯನ್ನು ಕಾಯುತ್ತಿರುತ್ತೇನೆ ಎಂಬುದನ್ನು ಮರೆಯಬೇಡ.. ಪ್ಲೀಸ್


ಎಂದೆಂದಿಗೂ ನಿನ್ನವ

ಮಂಗಳವಾರ, ಸೆಪ್ಟೆಂಬರ್ 29, 2009

ಗಜಲ್ ಮತ್ತು ಕವನ

ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ,
ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ

ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು,
ಬಿಕ್ಕಳಿಸಿ, ಬಿಕ್ಕಳಿಸಿ ಅಳುವ ಮುನ್ನ ನೀ ಜಾರಿ ಹೋಗಬೇಡ

ಇರಳು ಕವಿಯಲಿ, ಚಂದ್ರ ಮೂಡಲಿ, ನಕ್ಷತ್ರ ಮಿನುಗಲಿ,
ಕ್ಷೀರಪಥದಲಿ ಮಿಂದೆದ್ದು ಬರುವೆ, ಅಲ್ಲಿವರೆಗೂ ಹೋಗಬೇಡ

ಬೆರಳುಗಳು ಸುಡುತ್ತಿವೆ, ಸಿಗರೇಟಿನ ನಿಗಿ ನಿಗಿ ಬೆಂಕಿಗೆ,
ಚಿಮ್ಮುವ ಹೊಗೆಯಲಿ ನಿನ್ನದೇ ರೂಪ ಬಿಟ್ಟು ಹೋಗಬೇಡ

ದಾರಿ- ದಾರಿ ನಡುವೆ ಕಲ್ಲು ಮುಳ್ಳೇ ಇರಲಿ, ನೀ ಕಾಲ್ ಇಡುವಲ್ಲಿ
ನಾ ಕೈಯಿಡುವೆ, ನೋವು ನನಗಿರಲಿ, ನಲಿವು ನಿನಗಿರಲಿ, ಹೋಗಬೇಡ

ಎದೆಯ ಮೇಲೆ ಕಾಲಿಟ್ಟು, ಒಳಗೆ ಬೆಂಕಿಯಿಟ್ಟು ಹೋಗಲೇಬೇಕೆನ್ನುವಾಗ
ಮರೆಯಬೇಡ, ಕೆಂಪು ಸೂರ್ಯನ ಮೇಲಿಟ್ಟ ಆಣೆ, ನೀ ಹೋಗಬೇಡ

ಕಂಪ್ಯೂಟರ್ ಪರದೆ ತುಂಬೆಲ್ಲಾ ನಿನ್ನದೆ ಬಿಂಬ, ಆದರೂ
ಬೆರಳು 'ಡಿಲಿಟ್ ಕೀ' ಮೇಲೆ ಊರುತ್ತಿದೆ, ತೊರೆದು ಹೋಗಬೇಡ



ಅಲ್ಲಿ- ಇಲ್ಲಿ

ಅಲ್ಲಿ ದ್ವéೇಷವಿದೆ, ರೋಷವಿದೆ
ತಮ್ಮೊಳಗೆ ಹೊಡೆದಾಡಿ ಅಂತ್ಯವಾಗುವ ಆಪಾಯವಿದೆ

ಇಲ್ಲಿ ಸ್ನೇಹವಿದೆ, ಪ್ರೇಮವಿದೆ
ತ್ಯಾಗದ ಆರಿವಿದೆ, ಒಂದುಗೂಡಿಸುವ ಧ್ವನಿಯಿದೆ

ಅಲ್ಲಿ ತಲ್ಲಣವಿದೆ, ತವಕವಿದೆ,
ಕ್ರೂರ ಅಟ್ಟಹಾಸವಿದೆ, ಅದರಲ್ಲೇ ನೆತ್ತರದ ಹಸಿವಿದೆ

ಇಲ್ಲಿ ತಂಪಿದೆ, ತಂಗಾಳಿಯಿದೆ,
ನೊಂದವರಿಗೆ ನೆರವಾಗುವ ನೆರಳಿದೆ, ಒಲವಿದೆ

ಅಲ್ಲಿ ಬಿಸಿಲಿದೆ, ಬವಣೆಯಿದೆ,
ಒಂದಾಗುವವರ ಬೆನ್ನುಬೀಳುವ ಹಿಂಡೇ ಇದೆ

ಇಲ್ಲಿ ಕರುಣೆಯಿದೆ, ಅನುಕಂಪವಿದೆ,
ಒಲ್ಲೆ ಎಂದವರಿಗೂ ಹಿಡಿ ಪ್ರೀತಿ ಕೊಡವವರ ದಂಡೇ ಇದೆ

ಅಲ್ಲಿ- ಇಲ್ಲಿ ಇವೆರಡು ನಮ್ಮೊಳಗಿವೆ,
ಮನಸ್ಸು, ಹೃದಯದೊಳು ಅವಿತಿವೆ.

ಭಾನುವಾರ, ಜೂನ್ 28, 2009

ನಿಶಕ್ತ ಕಾಲುಗಳು

ಚಿಕ್ಕವನಿದ್ದಾಗಲೇ ಮೇಲೆದ್ದ. ಮೇಲದ್ದಾಗಲೇ ಬಿದ್ದ
ಮಕ್ಕಳೇ ದೇವರೆಂದ, ಮಕ್ಕಳಿಗೆ ಇವನೇ ದೆವ್ವೆಂದರು.
ಗೆದ್ದಷ್ಟೇ ಸೋತ. ಸೋತಷ್ಟೇ ಮತ್ತೆ ಚಿಗಿತ.
ಚಿಗಿಯುವಾಗಲೂ, ನೆಗೆಯುವಾಗಲೂ ತಾನೇ ತಾನಾದ.
ಕರಿ ಬಿಳಿ ತೊಗಲಿನ ಮಧ್ಯೆ ಕುಣಿದ, ಕುಪ್ಪಳಿಸಿದಎಲುಬುಗಳು
ಮುರಿಯವಂತೆ ಮೈ ಮಣಿಸಿದ ಕಾಲ್ ಕುಣಿಸಿದ,
ದನಿ ಎತ್ತರಿಸಿ, ತಗ್ಗಿಸಿದ ಪ್ರತಿ ಏರಿಳಿತದಲ್ಲೂ
ನೋವು-ನಲಿವು ನಗಿಸಿದ ಪಾಪ್ ಎಂದು ಮೂಗು ಮುರಿಯೋರೋಮೂಗ್
ಮೇಲೆ ಬೆರಳಿಟ್ಟರು, ಕಣ್ಣೀರಿಟ್ಟರು
ಸರ ಸರ ಸರಿದಾಡುವ, ಹರಿದಾಡುವ ಕಾಲುಗಳಿಗೆ ಕಣ್, ಮನ ಸೋತರು.
ಈಗ ಕಾಲುಗಳೇ ನಿತ್ರಾಣ, ನಿಶಕ್ತ ಹಾಡುವ ರಾಗ, ನಿರಾಗ,
ಕೇಳುವಗಡಿ-ಭಾಷೆ ಬೇಧಿಸಿ, ರಾಗ-ದ್ವೇಷ ಸರಿಸಿ ನಾದ ಹರಿಸಿದ.
ಕೊನೆಗೇ ತಾನೇ ನಿನಾದನಾದ.
ನನ್ನ ಕತ್ತರಿಸಿದರೂ ಹರಿಯೋದುಕೆಂಪ ರಕ್ತ, ಕರಿಯಲ್ಲ
ಎನ್ನುತ್ತಲೇ ಬಿಳಿ ಚರ್ಮಕ್ಕೆ ಮನಸೋತ ಬಣ್ಣ ಬಲಾಯಿಸಿದ
ಬಣ್ಣವೇನೋ ಬದಲಾಯಿತು. ಮನಸ್ಸು?

ಬುಧವಾರ, ನವೆಂಬರ್ 19, 2008

ಏನು ಬರೆಯಲಿ ಹೇಳು...?

ಬರೆಯಲು ಹೊರಟವನ
ಅಂತರಂಗವೆಲ್ಲ ಖಾಲಿಯಾದಾಗ
ಸುಟ್ಟು ಹೋದ ಕನಸುಗಳ
ವಾಸನೆ ಮೂಗಿಗೆ ಅಡರುತ್ತಿರುವಾಗ
ಬರೆಯುವದಾದರು ಹೇಗೆ ಹೇಳು..?
ಆಗುಂತಕಳಾಗಿ ಎದುರಾಗಿ, ಮರೆಯಾದೆ
ಮರೆಯಾಗುವ ಮುನ್ನ
ಮಾಸಲಾರದ ಬರೆ ಹಾಕಿದೆ
ಬರೆ ಇನ್ನು ಹಸಿ ಹಸಿಯಾಗಿರುವಾಗಲೇ
ಹಾಳೆಯ ಮೇಲೆ ಗೆರೆಯಾದ್ರೂ
ಹೇಗೆ ಮೊಡಿತು ಹೇಳು...?
ಬದುಕಿದ್ದು ಸತ್ತಂತಿರುವಾಗ
ಭಾವವಾಗುವ ಅಕ್ಷರಗಳಿಗೆ
ಜೀವವನ್ನಾದರೂ ಹೇಗೆ ತುಂಬಲಿ...?
ನಾ ಹಾಳಾಗುವ ಮುನ್ನ
ಒಮ್ಮೆ ನೀ ಹರಸು
ಎಂದೆಂದಿಗೂ ನಾ ನಿನ್ನ
ನೀ ನನ್ನ ನೋಡದಂತೆ

ಸೋಮವಾರ, ನವೆಂಬರ್ 17, 2008

ಮರೆಯೋದಲ್ಲ

ಮಳೆಗೆ ಅಳೋದು ಮಾತ್ರ ಗೊತ್ತು

ನಗೋದಲ್ಲ

ಸೂರ್ಯನಿಗೆ ಸುಡೋದು ಗೊತ್ತು

ಆರಿಸೋದಲ್ಲ

ಆದರೆ

ನನಗೆ ನಿನ್ನ ನೆನಪು

ಮಾಡಿಕೊಳ್ಳುದು ಗೊತ್ತು

ಮರೆಯೋದಲ್ಲ

- ಇದು ನನಗೆ ಇಷ್ಟವಾದ ಒಂದು ಶಾಯರಿಯ ಭಾವಾನುವಾದ

ಶನಿವಾರ, ಅಕ್ಟೋಬರ್ 18, 2008

ಅಲೆಗಳು ಏಳುತ್ತವೆ


ಶಾಯರಿಗಳಿಗೂ ಕೆಲವು
ಅಂದಾಜು ಇರತವೆ
ಕನಸುಗಳು ತೆರೆದ
ಕಣ್ಣುಗಳಲ್ಲೂ ಒಡಮೂಡುತ್ತವೆ
ದುಃಖದಲ್ಲಿ ಕಣ್ಣೀರು
ಬರಲೇಬೇಕೆನಿಲ್ಲ
ನಗುವ ನಯನಗಳಲ್ಲು
ಅಲೆಗಳು ಏಳುತ್ತವೆ
-------- ಇದು ಹಿಂದಿ ಶಾಯರಿಯ ಭಾವಾನುವಾದ.
ಇದು ಮನಸು ಕಾಡುವ ಶಾಯರಿ ಎಂಬ
ಭಾವನೆ ನನ್ನದು.. ನಿಮ್ಮದು ...?

ಭಾನುವಾರ, ಸೆಪ್ಟೆಂಬರ್ 28, 2008

ನಗಲು ಪ್ರಯತ್ನಿಸುತ್ತಿದ್ದೇನೆ

ಕತ್ತಲೆಯೇ ಬದುಕೆಂದು
ನಂಬಿದ ನಾನು ಈಗೀಗ
ನಗಲು ಪ್ರಯತ್ನಿಸುತ್ತಿದ್ದೇನೆ
ದುಃಖದ ಸಾಗರದಲ್ಲಿ ಕೈ
ಬಿಟ್ಟು ನೀ ಹಿಂತಿರುಗಿ ನೋಡದೆ
ಹೋದಾಗ ಸಾಯಬೇಕೆಂದು
ಕೊಂಡವನಿಗೆ ಅಲೆಗಳೇ
ಈಜು ಕಲಿಸಿ ದಡಕ್ಕೆ ಎಸೆದಿವೆ ನನ್ನನ್ನು.
----
ಈಗೀಗ ಪ್ರತಿ ಸೂರ್ಯನ ಹುಟ್ಟು
ಸಾವು ಕೂಡಾ ಆಸಕ್ತಿ ಹುಟ್ಟಿಸುತ್ತಿದೆ
ರಾತ್ರಿಯಲ್ಲಿ ಚಂದ್ರನ ತಣ್ಣನೆಯ
ಬೆಳಗು ಕೂಡಾ ಹೊಮ್ಮಿಸುತ್ತಿದೆ
ನೂರಾರು ಅರ್ಥ ನನ್ನೆದೆಯ
ಭಾವದೊಳಗೆ ಆದರೆ,
ಅಲ್ಲಿ ನೀನಿಲ್ಲವೆಂಬ
ಅರಿವು ಎಚ್ಚರವಾದಾಗ
ಮತ್ತೆ ಅದೇ ಕತ್ತಲೆ ಇಷ್ಟವಾಗುತ್ತದೆ
ಆದರೂ ಪಣತೊಟ್ಟಿದ್ದೇನೆ
ಕತ್ತಲೆಯನ್ನೇ ಹಿಂಜಿ
ಬೆಳಕನ್ನು ಪಡೆಯಬೇಕೆಂದು
ಆ ಬೆಳಕಲ್ಲಿ ಹೊಸ ಲೋಕ,
ಭಾವ, ಭಾಷೆ ಕಲಿಯಬೇಕೆಂಬ
ಹಂಬಲ ನನ್ನದು.

ಶನಿವಾರ, ಜುಲೈ 26, 2008

ಏನೋ ಆಗಿದೆ


ಏನೋ ಆಗಿದೆ
ನನಗಿಂದು
ಮುಂಗಾರು ಮೊದಲ
ಮಳೆ ಬಿದ್ದ ನೆಲದ
ಸುವಾಸನೆಯಂತೆ
ಹರಡಿದೆ ಮನವು
ಬರಿದಾಗಿದ್ದ ಭಾವಗಳು
ಮತ್ತೆ ಮೆಲ್ಲನೆ
ಚಿಗುರೊಡೆದಿವೆ
ಸೂರ್ಯನತ್ತ ಚಾಚಿ
ಮೊಗ್ಗಾಗಿ ಹೂ
ಬಿರಿಯಲು ಎದೆಯೊಳಗೆ
ಏನೋ ಉಲ್ಲಾಸ,
ಸಂಭ್ರಮದ ನರ್ತನ
ಕಾಣದ ಹೃದಯವ
ಕಾಣಲು ಕಾತರಿಸಿವೆ
ಕಣ್ಣಗಳೆರಡು
ಮುಗಿಲಾಚೆ ಮಲಗಿ
ಭೂ ಅಂಚಿನಲ್ಲಿ
ಅಸ್ತಂಗತವಾಗಲು
ಗರಿಗೆದರಿವೆ ಬಯಕೆಗಳು