ಸೋಮವಾರ, ಮೇ 11, 2020

Learn to Live With Corona virus ಕೊರೊನಾ ಜತೆಗೇ ನಡೆಯಲಿ ಜೀವನ

- ಮಲ್ಲಿಕಾರ್ಜುನ ತಿಪ್ಪಾರ/ಕಿರಣ್ ಕುಮಾರ್ ಡಿ.ಕೆ

Yes, the show must go on...
ನಾವೀಗ ಕೊರೊನಾ ವೈರಸ್ ಜತೆಗೆ ಬದುಕುವುದನ್ನು ಕಲಿಯಲೇಬೇಕಿದೆ. ಯಾಕೆಂದರೆ, ಸದ್ಯಕ್ಕೆ ಈ ಕೊರೊನಾಗೆ ಪರಿಹಾರವಿಲ್ಲ. ಇರುವ ಪರಿಹಾರ ಮಾರ್ಗಗಳನ್ನು ಅಳವಡಿಸಿ, ಬಳಸಿ ನೋಡಿದ್ದಾಯಿತು. ಈ ಅನುಭವ ಹಾಗೂ ಈ ಹಿಂದಿನ ರೋಗಗಳ ಇತಿಹಾಸದ ಹಿನ್ನೆಲೆಯಲ್ಲಿನಾವೀಗ ಕಂಡುಕೊಳ್ಳಬೇಕಾಗಿರುವ ಸತ್ಯ; ನಮ್ಮ ಬದುಕು ಇನ್ನೇನಿದ್ದರೂ ಕೊರೊನಾ ಜೊತೆಗೇ ನಡೆಯಬೇಕು. ಆದರೆ, ಅದಕ್ಕೊಂದು ಕ್ರಮ ವಿಧಿಸಿಕೊಳ್ಳಬೇಕಷ್ಟೇ.
ಕೊರೊನಾ ವೈರಸ್ಗಿಂತಲೂ ಮಿಗಿಲಾದ, ಅತಿಭಯಂಕರ ವೈರಸ್ಗಳನ್ನು ಈ ಜಗತ್ತು ಕಂಡಿದೆ. ಕಡು ಕಷ್ಟ, ನಷ್ಟ ಅನುಭವಿಸಿದೆ. ಅಂಥ ಕಾಯಿಲೆಗಳನ್ನೂ ಅರಗಿಸಿಕೊಂಡಿದೆ, ಅವುಗಳ ವಿರುದ್ಧ ಜಯ ಸಾಧಿಸಿದೆ. ಸಿಡುಬು, ಮಾರ್ಬರ್ಗ್ ವೈರಸ್, ಎಬೋಲಾ ವೈರಸ್, ರೇಬಿಸ್, ಎಚ್ಐವಿ, ಹಂಟಾ ವೈರಸ್, ಇನ್ಫ್ಲುಂಯೆಜಾ, ಡೆಂಗೆ, ರೋಟಾ ವೈರಸ್, ಸಾರ್ಸ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ಲೇಗ್, ಕಾಲರಾದಂಥ ಕಾಯಿಲೆಗಳು ಶತಮಾನಗಳವರೆಗೂ ನರಸಂಕುಲವನ್ನು ಹಿಂಡಿ ಹಿಪ್ಪೆ ಮಾಡಿವೆ. ಆದರೂ, ಮನುಷ್ಯ ತನ್ನ ಬದುಕನ್ನು ರೂಪಿಸಿಕೊಳ್ಳಲಿಲ್ಲವೇ? ನಾಗರಿಕತೆಯನ್ನು ವಿಸ್ತರಿಸಲಿಲ್ಲವೇ? ಅಸಾಧ್ಯವಾದುದನ್ನು ಸಾಧಿಸಲಿಲ್ಲವೇ? ಈಗಲೂ ಹಾಗೆಯೇ, ನಾವು ಈ ಕೊರೊನಾ ಜತೆಗೆ ಬದುಕುವುದನ್ನು ರೂಡಿಸಿಕೊಳ್ಳಲೇಬೇಕು.
ಯಾವುದೇ ಹೊಸ ವೈರಸ್ನಿಂದ ಕಾಯಿಲೆ ಹುಟ್ಟಿಕೊಂಡಾಗ ಇಡೀ ಜಗತ್ತು ತಲ್ಲಣಗೊಳ್ಳುವುದು ಸಹಜ. ಈಗಲೂ ಹಾಗೆಯೇ ಆಗುತ್ತಿದೆ. ನಾವೆಲ್ಲರೂ ಭಯದಿಂದಲೇ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೇವೆ. ಈ ಹಿಂದೆ ತಲ್ಲಣಗೊಳಿಸಿದ್ದ ವೈರಸ್ಗಳಿಗೆ ಹೋಲಿಸಿದರೆ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ತುಂಬ ಕಡಿಮೆ. ಫ್ಲೂನಿಂದಲೇ ಪ್ರತಿ ವರ್ಷಕ್ಕೆ 10ರಿಂದ 15 ಸಾವಿರ ಜನರು ಸಾಯುತ್ತಾರೆ, ರಸ್ತೆ ಅಪಘಾತಗಳಲ್ಲಿಸಾಯುವರೂ ಸಂಖ್ಯೆ ಇದಕ್ಕಿಂತ ಎರಡು ಪಟ್ಟು ಹೆಚ್ಚು. ಇದಾವುದು ನಮಗೆ ಭಯವನ್ನು ಹುಟ್ಟಿಸುವುದಿಲ್ಲ. ಹೊಸದಾಗಿ ಕಾಡುತ್ತಿರುವ ಈ ಕೊರೊನಾ ಮಾತ್ರ ಎಲ್ಲಿಲ್ಲದ ಭೀತಿಯನ್ನು ಹುಟ್ಟಿಸಿದೆ. ಇದಕ್ಕೆ ಮುಖ್ಯ ಕಾರಣ- ಮದ್ದಿಲ್ಲದಿರುವುದು ಮತ್ತು ಅತ್ಯಂತ ವೇಗವಾಗಿ ಹರಡುವುದು. ಆದರೆ, ಒಂದು ಮಾತನ್ನು ನೆನಪಿಡಿ. ಕೊರೊನಾದಿಂದಲೇ ನಮ್ಮ ಬದುಕು ನಿಂತು ಹೋಗುವುದಿಲ್ಲ; ಜಗತ್ತು ನಾಶವಾಗುವುದಿಲ್ಲ. ವಿನಾಕಾರಣ ಭಯಪಡಬೇಕಾದ ಅಗತ್ಯವಿಲ್ಲ. ಇದೇ ಅಭಿಪ್ರಾಯವನ್ನು ಪದ್ಮಶ್ರೀ ಪುರಸ್ಕೃತ ಖ್ಯಾತ ವೈದ್ಯ ಬಿ.ಎಂ. ಹೆಗ್ಡೆ ಅವರು ಹೊಂದಿದ್ದಾರೆ. ಸಂದರ್ಶನವೊಂದರಲ್ಲಿಅವರು, ‘‘ಕೊರೊನಾ ಭೂತವಲ್ಲ. ಹೆದರಬೇಡಿ. ಅದೊಂದು ಕಾಯಿಲೆ. ಬರುತ್ತದೆ. ಹೋಗುತ್ತದೆ. ಹಾಗಂತ ನಿರ್ಲಕ್ಷ ್ಯ ಮಾಡುವುದು ಬೇಡ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಎಚ್ಚರಿಕೆ ಇರಲಿ,’’ ಎನ್ನುತ್ತಾರೆ.
ಹೆಗ್ಡೆ ಅವರ ಮಾತುಗಳು ಅಕ್ಷ ರಶಃ ಸತ್ಯ. ನಮ್ಮೊಳಗೆ ಹುಟ್ಟುವ ಹೆದರಿಕೆ ನಮ್ಮನ್ನು ಕೊಂದು ಹಾಕುತ್ತದೆ. ಹಾಗಂತ, ‘ತಲೆ ಗಟ್ಟಿ ಇದೆ ಎಂದು ಬಂಡೆಗಲ್ಲಿಗೆ ಡಿಕ್ಕಿ ಹೊಡೆಯುವ ಅಗತ್ಯವಿಲ್ಲ’. ಕಾರಣವಿಲ್ಲದೇ ಕೊರೊನಾ ಕುರಿತು ಭಯಗೊಳ್ಳುವುದು ಬೇಡ. ಭವಿಷ್ಯದ ಸ್ಥಿತಿಯನ್ನು ನೆನೆದುಕೊಂಡು ನಮ್ಮೊಳಗಿನ ಧೀಃಶಕ್ತಿಯನ್ನು ಹಾಳು ಮಾಡಿಕೊಳ್ಳುವುದು ಬೇಡ.



ಲಾಕ್ಡೌನ್ವೊಂದೇ ಪರಿಹಾರವಲ್ಲ
ಕೊರೊನಾ ನಿಯಂತ್ರಣಕ್ಕೆ ಈಗಿರುವ ಸದ್ಯ ಪರಿಹಾರ ‘ಬ್ರೇಕ್ ದಿ ಚೈನ್’ ಅಂದರೆ, ಸೋಂಕಿತರನ್ನು ಪ್ರತ್ಯೇಕವಾಗಿಸಿ, ವೈರಸ್ ಹರಡುವುದನ್ನು ತಡೆಯುವುದು. ಅದಕ್ಕಾಗಿ ಇಡೀ ದೇಶವನ್ನು ಲಾಕ್ಡೌನ್ ಮಾಡಿ, ಮೂರು ಬಾರಿ ಅದನ್ನು ವಿಸ್ತರಿಸಲಾಗಿದೆ. ಆದರೆ, ಇದೊಂದೇ ಪರಿಹಾರವಲ್ಲ. ಲಾಕ್ಡೌನ್ ವಿಸ್ತರಿಸುತ್ತ ಹೋದರೆ ನಮ್ಮ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದು, ಇಡೀ ದೇಶವೇ ನರಳಬೇಕಾಗಬಹುದು. ಈಗಾಗಲೇ, ಲಾಕ್ಡೌನ್ ಎಫೆಕ್ಟ್ ಅನ್ನು ದೇಶ ಅನುಭವಿಸುತ್ತಿದೆ. ಹಾಗಾಗಿ, ನಮ್ಮ ಮುಂದಿರುವ ಏಕೈಕ ದಾರಿ, ಕೊರೊನಾದೊಂದಿಗೆ ಬದುಕುವುದು. ‘‘ನಾವಿನ್ನು ಕೊರೊನಾ ಜತೆಗಿನ ಬದುಕನ್ನು ಕಲಿಯಬೇಕಿದೆ,’’ ಎಂದು ಆರೋಗ್ಯ ಸಚಿವಾಲಯ ಹೇಳಿದ್ದು ಈ ನೆಲೆಯಲ್ಲಿ. ಯಾಕೆಂದರೆ, ಲಾಕ್ಡೌನ್ ಹೊರತಾಗಿಯೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂದರೆ, ಅದು ತನ್ನ ತುತ್ತ ತುದಿ ತಲುಪಿಯೇ ಕೆಳಗಿಳಿಯುವುದು ಈಗಿನ ಟ್ರೆಂಡ್ ನೋಡಿದರೆ ಗೊತ್ತಾಗುತ್ತದೆ. ಈಗಾಗಲೇ ಚೀನಾ, ಇಟಲಿ, ಇರಾನ್, ಸ್ಪೇನ್ ರಾಷ್ಟ್ರಗಳಲ್ಲೂಹೀಗೆ ಆಗಿದೆ. ಅಲ್ಲೆಲ್ಲಈಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.

ಮದ್ದಿದ್ದರೆ ಬೇರೆಯಾಗಿರುತ್ತಿತ್ತು ಕತೆ
ಒಂದು ವೇಳೆ ಕೊರೊನಾ ವೈರಸ್ಗೆ ಮದ್ದು ಇದ್ದರೆ ಈಗಿರುವ ಪರಿಸ್ಥಿತಿ ಉದ್ಭವ ಆಗುತ್ತಿರಲಿಲ್ಲ. ಆರ್ಥಿಕ ಕುಸಿತವೂ ಇರುತ್ತಿರಲಿಲ್ಲ. ಹಾಗಾಗಿ, ಸಾಮಾಜಿಕ ಅಂತರೊಂದಿಗೆ, ಕೊರೊನಾ ಜೊತೆಗೆ ನಮ್ಮ ಜೀವನವನ್ನು ಮರು ರೂಪಿಸಿಕೊಳ್ಳಬೇಕು. ಈಗಿರುವ ಪರಿಹಾರ ಎಂದರೆ, ಎಷ್ಟು ಸಾಧ್ಯವೇ ಅಷ್ಟು ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಡಾ. ಬಿ.ಎಂ. ಹೆಗ್ಡೆ ಅವರು ಈ ಕುರಿತು ಹೇಳಿರುವ ಸಂಗತಿಗಳು ಅನ್ವಯಕಗಳಾಗಿವೆ. ‘‘ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮೊದಲನೆಯದಾಗಿ ಸಾವಧಾನಿಯಾಗಿರಬೇಕು. ಮನಸ್ಸಿನಲ್ಲಿದ್ವೇಷ ಭಾವನೆ ಇರಬಾರದು. ಎಂಥದ್ದೇ ಸಂದರ್ಭದಲ್ಲಿಸಮಚಿತ್ತದಿಂದಿರಬೇಕು. ಎರಡನೆಯದಾಗಿ ಆಹಾರ. ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಯನ್ನು ನಾವು ಅನುಸರಿಸಿದರೆ ಒಳ್ಳೆಯದು. ಮೂರನೆಯದು ವಿಶ್ರಾಂತಿ. ದೇಹಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲವಿಶ್ರಾಂತಿ ಅಗತ್ಯ. ಹೀಗೆ ಮಾಡಿದರೆ, ಖಂಡಿತವಾಗಿಯೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಒಂದೊಮ್ಮೆ ವೈರಸ್ ಸೋಂಕಿತವಾದರೂ ನಾವುದನ್ನು ಮೆಟ್ಟಿ ನಿಲ್ಲಬಹುದು’’ ಎನ್ನುತ್ತಾರೆ ಡಾ. ಬಿ.ಎಂ ಹೆಗ್ಡೆ ಅವರು.

ಉಳಿದಿರುವ ದಾರಿಗಳಾದರೂ ಯಾವುವು?
ಮದ್ದಿಲ್ಲದೇ ಕೊರೊನಾವಂತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ನಮಗೆ ಉಳಿದಿರುವ ದಾರಿಗಳಾದರೂ ಏನಿವೆ? ಒಂದೊ, ಕೊರೊನಾವನ್ನು ಹರ್ಡ್ ಇಮ್ಯುನಿಟಿ (ಸಮುದಾಯ ಪ್ರತಿರೋಧ ಶಕ್ತಿ) ಮೂಲಕ ತಡೆಯಬಹುದು. ಭಾರತದಂಥ ರಾಷ್ಟ್ರದಲ್ಲಿಅದು ದೊಡ್ಡ ಅನಾಹುತವನ್ನೇ ಸೃಷ್ಟಿಸಬಲ್ಲದು. ಇದನ್ನು ಹೊರತುಪಡಿಸಿದರೆ, ಸೋಂಕು ತಗುಲಿಸಿಕೊಳ್ಳದಂತೆ ವೈಯಕ್ತಿಕ ನೆಲೆಯಲ್ಲಿನಾವೇ ಎಚ್ಚರ ವಹಿಸುವುದು. ಅಂದರೆ, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸುವುದು. ಎಷ್ಟು ಸಾಧ್ಯವೋ ಅಷ್ಟು ಜನ ಜಂಗುಳಿಯಾಗದಂತೆ ನೋಡಿಕೊಳ್ಳುವುದು. ಮದ್ದು ಸಿಗೋವರೆಗೂ ಇವಿಷ್ಟೇ ಪರಿಹಾರಗಳು. ಅಲ್ಲಿತನಕ ನಾವು ಕೊರೊನಾದೊಂದಿಗೆ ಹೆಜ್ಜೆ ಹಾಕೋಣ.

(ಈ ಲೇಖನ ವಿಜಯ ಕರ್ನಾಟಕದ 2020 ಮೇ 11ರ ಸಂಚಿಕೆಯಲ್ಲಿ ಪ್ರಕಟವಾಗಿದೆ)

ಶುಕ್ರವಾರ, ಮೇ 1, 2020

For in my dreams, you have no end- ನನ್ನ ಕನಸುಗಳಲ್ಲಿ ನಿನಗೆ ಅಂತ್ಯವೇ ಇಲ್ಲ...

ನಾನು ಮೌನದಲ್ಲಿ ನಿನ್ನನ್ನು ಪ್ರೀತಿಸುವೆ,
ಯಾಕೆಂದರೆ, ಮೌನದಲ್ಲಿ ತಿರಸ್ಕಾರದ ಭಯವೇ ಇಲ್ಲ.

ನಿನ್ನನ್ನು ಪ್ರೀತಿಸಲು ಏಕಾಂಗಿತನವೇ ಆಯ್ಕೆ ಮಾಡಿಕೊಳ್ಳುವೆ,
ಯಾಕೆಂದರೆ ಒಂಟಿತನದಲ್ಲಿ ನಿನ್ನನ್ನು ಯಾರು ಪಡೆಯಲಾರರು ನನ್ನನ್ನು ಬಿಟ್ಟು.

ನಾನು ನಿನ್ನನ್ನು ದೂರದಿಂದಲೇ ಆರಾಧಿಸಲು ಬಯಸುವೆ,
ಈ ದೂರವಿದೆಯಲ್ಲ ಅದು ನನ್ನ ನೋವಿಗೆ ಗುರಾಣಿಯೇ

ಗಾಳಿಯಲ್ಲಿ ನಿನಗೆ ಮುತ್ತು ನೀಡಲು ಬಯಸುವೆ,
ನನ್ನ ತುಟಿಗಳಿಗಿಂತ ಈ ಗಾಳಿಯ ಹೆಚ್ಚು ಸೌಮ್ಯ.

ನನ್ನ ಕನಸುಗಳಲ್ಲಿ ನಿನ್ನನ್ನು ಬಂಧಿಯಾಗಿಸ ಬಯಸುವೆ,
ನನ್ನ ಕನಸುಗಳಲ್ಲಿ ನಿನಗೆ ಅಂತ್ಯವೇ ಇಲ್ಲ....


ಮೂಲ: ರೂಮಿ
ಅನುವಾದ: ಮಲ್ಲಿಕಾರ್ಜುನ ತಿಪ್ಪಾರ


ಮಂಗಳವಾರ, ಮಾರ್ಚ್ 17, 2020

Chan Kin-man is a Hong Kong Gandhi- ಹಾಂಕಾಂಗ್ ಗಾಂಧಿ ಚಾನ್

- ಮಲ್ಲಿಕಾರ್ಜುನ ತಿಪ್ಪಾರ
ಹನ್ನೊಂದು ತಿಂಗಳು ಜೈಲುವಾಸ ಪೂರೈಸಿ ಇದೀಗ ಬಿಡುಗಡೆಯಾಗಿರುವ ಹಾಂಕಾಂಗ್‌ನ ಪ್ರಜಾಪ್ರಭುತ್ವವಾದಿ ಹೋರಾಟಗಾರ, ಸಮಾಜಶಾಸ್ತ್ರ ಪ್ರಾಧ್ಯಾಪಕ ಚಾನ್‌ ಕಿ ಮ್ಯಾನ್‌ ಬಗ್ಗೆ ತಿಳಿದುಕೊಳ್ಳುವ ಮೊದಲು 'ಅಕ್ಯುಪಾಯ್‌ ಮೂವ್‌ ವೆಂಟ್‌' ಬಗ್ಗೆ ತಿಳಿದುಕೊಳ್ಳಬೇಕು. ಆಗಲೇ 'ಹಾಂಕಾಂಗ್‌ ಗಾಂಧಿ' ಚಾನ್‌ ಅವರ ವ್ಯಕ್ತಿತ್ವ ಅರಿವಾಗುತ್ತದೆ.

'ಒಂದು ದೇಶ, ಎರಡು ವ್ಯವಸ್ಥೆ' ಸೂತ್ರದಡಿ ಹಾಂಕಾಂಗ್‌ 1997ರಲ್ಲಿಬ್ರಿಟಿಷ್‌ ಮುಷ್ಟಿಯಿಂದ ಚೀನಾದ ಪಾಲಾಯಿತು. ಈ ಸೂತ್ರದಡಿ ಚೀನಾದಲ್ಲಿರುವ ಎಲ್ಲಹಕ್ಕುಗಳು, ಸ್ವಾತಂತ್ರ್ಯ ಹಾಂಕಾಂಗ್‌ನಲ್ಲಿರುವವರಿಗೂ ಅನ್ವಯವಾಗಬೇಕು. ಆದರೆ, ಪ್ರಜಾಪ್ರಭುತ್ವ ಪರ ಹೋರಾಟಗಾರರ ಪ್ರಕಾರ, ಚೀನಾ ಸರಕಾರ ಹಾಂಕಾಂಗ್‌ ಮೇಲೆ ತನ್ನ ಹಿಡಿತ ಬಿಗಿಗೊಳಿಸಿ, ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ. ಹಾಗಾಗಿ, ಹಾಂಕಾಂಗ್‌ನಲ್ಲಿಪ್ರಜಾಪ್ರಭುತ್ವ ವ್ಯವಸ್ಥೆ ಬರಬೇಕು. ಈ ಹಿನ್ನೆಲೆಯಲ್ಲಿ'ಸಾರ್ವತ್ರಿಕ ಮತದಾನ ಹಕ್ಕು'(ಭಾರತದಲ್ಲೂಇದೇ ಮಾದರಿ ಇದೆ) ಜಾರಿಗೋಸ್ಕರ 'ಅಕ್ಯುಪಾಯ್‌ ಸೆಂಟ್ರಲ್‌ ವಿತ್‌ ಲವ್‌ ಆ್ಯಂಡ್‌ ಪೀಸ್‌' ಅಭಿಯಾನದಿಂದ 2014ರಲ್ಲಿಅಸಹಕಾರ ಚಳವಳಿಗೆ ಕರೆ ನೀಡಲಾಯಿತು. 79 ದಿನ ನಿರಂತರ ಚಳವಳಿ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಚೀನಾ ಸರಕಾರಕ್ಕೆ ಚುರುಕು ಮುಟ್ಟಿಸಿದರು. ಹಾಂಕಾಂಗ್‌ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಈ ಚಳವಳಿಯನ್ನು ಜಗತ್ತು 'ಅಂಬ್ರೆಲಾ ಮೂಮೆಂಟ್‌' ಎಂದು ಗುರುತಿಸಿತು(ಪ್ರತಿಭಟನಾಕಾರರು ಪೊಲೀಸರ ಟಿಯರ್‌ ಗ್ಯಾಸ್‌ ಮತ್ತು ಜಲಪ್ರಯೋಗ ತಪ್ಪಿಸಿಕೊಳ್ಳಲು ಕೊಡೆಗಳನ್ನು ಬಳಸುತ್ತಿದ್ದರು).

ಇಡೀ ಜಗತ್ತೇ ಹಾಂಕಾಂಗ್‌ನತ್ತ ತಿರುಗಿ ನೋಡುವಂತೆ ಮಾಡಿದ ಅಕ್ಯುಪಾಯ್‌ ಅಭಿಯಾನದ ಸಹ ಸಂಸ್ಥಾಪಕನೇ ಈ 'ಚಾನ್‌ ಕಿನ್‌-ಮ್ಯಾನ್‌'. ಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌(ಸಿಯುಎಚ್‌ಕೆ)ನ ಸೋಷಿಯಾಲಜಿ ಪ್ರೊಫೆಸರ್‌ ಆಗಿದ್ದ ಚಾನ್‌, ರೆವರೆಂಡ್‌ ಚು ಯಿಯು-ಮಿಂಗ್‌ ಮತ್ತು ಸಿಯುಎಚ್‌ಕೆ ಕಾನೂನು ಪ್ರಾಧ್ಯಾಪಕ ಬೆನ್ನಿ ತೈ ಯಿಯು-ಟಿಂಗ್‌ ಅವರ ಜೊತೆಗೂಡಿ ಈ ಅಭಿಯಾನವನ್ನು ಆರಂಭಿಸಿ, ವಿದ್ಯಾರ್ಥಿಗಳಲ್ಲಿಪ್ರಜಾಪ್ರಭುತ್ವದ ಮಹತ್ವವನ್ನು ಅರುಹಿದರು. ಇದರ ಫಲವಾಗಿಯೇ ಚೀನಾದ ಆಕ್ರಮಣಕಾರಿ ನೀತಿಗಳ ವಿರುದ್ಧ ಹಾಂಕಾಂಗ್‌ ಜನಸಾಮಾನ್ಯರು ಪ್ರತಿರೋಧ ದಾಖಲಿಸುವ ಮಟ್ಟಿಗೆ ಮನಸ್ಸುಗಳು ಬದಲಾದವು.

ಚಾನ್‌ ವಿರುದ್ಧ ಹಾಂಕಾಂಗ್‌ ನಗರವನ್ನು ಸ್ತಬ್ಧಗೊಳಿಸಿ ಚೀನಾ ಸರಕಾರದ ವಿರುದ್ಧ ಸಾರ್ವಜನಿಕರನ್ನು ಎತ್ತಿಕಟ್ಟಿ, ಗದ್ದಲ ಎಬ್ಬಿಸಿದ ಆರೋಪ ಮಾಡಲಾಗಿತ್ತು. ಹಾಂಕಾಂಗ್‌ ನ್ಯಾಯಾಲಯ ಇವರಿಗೆ 16 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚುನಾವಣೆಗೆ ಸಾರ್ವತ್ರಿಕ ಮತದಾನದ ಹಕ್ಕು ನೀಡಬೇಕೆಂದು ಚಳವಳಿ ಆರಂಭಿಸಿದ ಈ ಚಾನ್‌, ವಿದ್ಯಾರ್ಥಿ ಜೀವನದಿಂದಲೂ ಸಾಮಾಜಿಕ ಕಾರ್ಯಕರ್ತರನಾಗಿ ಗುರುತಿಸಿಕೊಂಡವರು. ಸಮುದಾಯ ಅಭ್ಯುದಯಕ್ಕೆ ಹೋರಾಟ ಮಾಡಿದವರು. ಸ್ವತಃ ಅವರೇ ಸಾಮಾಜಿಕ ಸ್ತರಗಳಲ್ಲಿಅನ್ಯಾಯಗಳನ್ನು ಅನುಭವಿಸಿದವರಾದ್ದರಿಂದ ಅದನ್ನು ಹೋಗಲಾಡಿಸಲು ಸಾಂಸ್ಥಿಕ ಹಂತಗಳಲ್ಲಿಸುಧಾರಣೆ ಅಗತ್ಯ ಎಂದು ಪ್ರತಿಪಾದಿಸಿದರು. ಇದೆಲ್ಲದರ ಒಟ್ಟು ಫಲವೇ ಅಕ್ಯುಪಾಯ್‌ ಅಭಿಯಾನ ಎಂದು ಹೇಳಬಹುದು.

1993ರಿಂದ ಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌ನಲ್ಲಿಅಧ್ಯಾಪನ ವೃತ್ತಿ ಕೈಗೊಂಡ ಚಾನ್‌, ಕಳೆದ ವರ್ಷವಷ್ಟೇ ನಿವೃತ್ತಿಯಾಗಿದ್ದಾರೆ. ಅಧ್ಯಾಪನ ವೃತ್ತಿಯನ್ನು ಪ್ರೀತಿಸುವ ಚಾನ್‌ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರು. ಅದೇ ಕಾರಣಕ್ಕೆ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳ ಸಂಘಟನೆಗಳಿಂದಲೂ ಅನೇಕ ಸಂದರ್ಭಗಳಲ್ಲಿಅತ್ಯುತ್ತಮ ಪ್ರಾಧ್ಯಾಪಕ ಎಂಬ ಗೌರವ ಪಡೆದುಕೊಂಡಿದ್ದಾರೆ. ಚೀನಿ ಸಮುದಾಯಗಳಲ್ಲಿಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜಗಳ ಅಭಿವೃದ್ಧಿಗೆ ಅವರು ತೋರಿದ ಆಸಕ್ತಿ ಮತ್ತು ಸಂಶೋಧನೆ ಅವರನ್ನು ಮೇಲ್ಮಟ್ಟದಲ್ಲಿಕಾಣುವಂತೆ ಮಾಡಿದೆ. ಚೀನಾ ಮತ್ತು ಹಾಂಕಾಂಗ್‌ ಸರಕಾರಗಳಲ್ಲಿಅನೇಕ ಹುದ್ದೆಗಳನ್ನು ನಿರ್ವಹಿಸಿದ ಅವರು ಹಲವಾರು ಸರಕಾರೇತರ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಸದ್ಯ ಅವರು ಹಾಂಕಾಂಗ್‌ ಸಿವಿಲ್‌ ಎಜುಕೇಷನ್‌ ಫೌಂಡೇಷನ್‌ ನಿರ್ದೇಶಕ ಹಾಗೂ ಹಾಂಕಾಂಗ್‌ ಡೆಮಾಕ್ರಟಿಕ್‌ ಡೆವಲಪ್‌ಮೆಂಟ್‌ ನೆಟ್ವರ್ಕ್ನ ಕಾರ್ಯಕಾರಿ ಮಂಡಳಿಯ ಸದಸ್ಯ. ಘ್ಕಿ

1976ರಲ್ಲಿಚಾನ್‌ ಅವರು, ಕಾನ್ಕರ್ಡಿಯಾ ಲೂಥರಿನ್‌ ಮಿಡ್ಲ್‌ಸ್ಕೂಲ್‌ನಲ್ಲಿಆರಂಭಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಬಳಿಕ 19983ರಲ್ಲಿಚೀನೀಸ್‌ ಯುನಿವರ್ಸಿಟಿ ಆಫ್‌ ಹಾಂಕಾಂಗ್‌ನಿಂದ ಸೋಷಿಯಾಲಜಿ ವಿಷಯದಲ್ಲಿಬ್ಯಾಚುಲರ್‌ ಆಫ್‌ ಸೈನ್ಸ್‌ ಪದವಿ ಪಡೆದುಕೊಂಡರು. ಯಾಲೆ ವಿವಿಯಲ್ಲಿಉನ್ನತ ಅಧ್ಯಯನ ಕೈಗೊಂಡ ಚಾನ್‌ 1990ರಲ್ಲಿಮಾಸ್ಟರ್‌ ಆಫ್‌ ಆರ್ಟ್ಸ್, 1991ರಲ್ಲಿಮಾಸ್ಟರ್‌ ಆಫ್‌ ಫಿಲಾಸಫಿ ಹಾಗೂ 1995ರಲ್ಲಿಸೋಷಿಯಾಲಜಿಯಲ್ಲಿಡಾಕ್ಟರೇಟ್‌ ಪದವಿ ಗಳಿಸಿಕೊಂಡರು. ಸಿಯುಎಚ್‌ಕೆ ವಿವಿಯಲ್ಲಿಅಧ್ಯಯನ ಮಾಡುತ್ತಿದ್ದಾಗಲೇ ವಿದ್ಯಾರ್ಥಿ ಚಳವಳಿಗಳಲ್ಲಿಸಕ್ರಿಯವಾಗಿ ಪಾಲ್ಗೊಂಡರು. ಅದೇ ವಿವಿಯ ವಿದ್ಯಾರ್ಥಿ ಸಂಘಟನೆಯಲ್ಲಿಕೆಲಸ ಮಾಡಿದರು. ಪದವಿ ಪಡೆದ ಬಳಿಕ ಸಮುದಾಯದ ಕೆಲಸಗಳಲ್ಲಿತೊಡಗಿಸಿಕೊಂಡರು. ಯಾಲೆ ವಿವಿಯಲ್ಲಿಹೆಚ್ಚಿನ ವಿದ್ಯಾಭ್ಯಾಸ ಮಾಡಿ ಮರಳಿದ ಬಳಿಕ ತಾವು ಕಲಿತ ವಿವಿಯಲ್ಲೇ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸ ತೊಡಗಿದರು. ಜೊತೆಗೆ ಏಷ್ಯಾ ಫೆಸಿಫಿಕ್‌ ಸ್ಟಡೀಸ್‌, ಸೆಂಟರ್‌ ಫಾರ್‌ ಸಿವಿಲ್‌ ಸೊಸೈಟಿ ಸ್ಟಡೀಸ್‌ನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಹಲವು ವಿವಿಗಳಿಗೆ ಸಂದರ್ಶಕ ಉಪನ್ಯಾಸಕರಾಗಿಯೂ ಗುರುತಿಸಿಕೊಂಡಿದ್ದರು. ಘ್ಕಿ

ಸದಾ ಸಮುದಾಯ ಅಭ್ಯುದಯದ ಬಗ್ಗೆ ಚಿಂತನೆ ನಡೆಸುತ್ತಿದ್ದ ಚಾನ್‌ ಅವರಿಗೆ ಸಿಯುಎಚ್‌ಕೆ ಕಾನೂನು ಪ್ರಾಧ್ಯಾಪಕ ಬೆನ್ನಿ ತೈ ಮತ್ತು ರೆವರೆಂಡ್‌ ಚು ಯಿಯು-ಮಿಂಗ್‌ ಅವರ ಸಹಚರ್ಯ ದೊರೆಯಿತು. ಈ ಮೂವರ ಚಿಂತನಾ ಫಲವಾಗಿಯೇ ಅಕ್ಯುಪಾಯ್‌ ಅಭಿಯಾನ ಆರಂಭವಾಯಿತು.

ಪ್ರತ್ಯೇಕ ವ್ಯವಸ್ಥೆ ಹೊಂದಿದ್ದರೂ ಹಾಂಕಾಂಗ್‌ ಚೀನಾದ ಕಪಿಮುಷ್ಟಿಯಲ್ಲೇ ಇದೆ. ಚೀನಾ ತನ್ನ ವಾಗ್ದಾನ ಮರೆತ ಪರಿಣಾಮವೇ ಹಾಂಕಾಂಗ್‌ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ದಾರಿ ತುಳಿಯುತ್ತಿರುವುದು. ಇದಕ್ಕೆ ಚಾನ್‌ನಂಥ ಪ್ರಾಧ್ಯಾಪಕರು ದಾರಿದೀಪಗಳಾಗಿದ್ದಾರೆ. 2014ರಲ್ಲಿನಡೆದ ಅಂಬ್ರೆಲಾ ಮೂಮೆಂಟ್‌ ನೇತೃತ್ವ ವಹಿಸಿದ್ದ ಚಾನ್‌, ಮಹಾತ್ಮ ಗಾಂಧಿ ಮಾರ್ಗವನ್ನೇ ಆಯ್ದುಕೊಂಡರು. ತಮ್ಮ ಬೆಂಬಲಿಗರು ಸಾವಿರಾರು ವಿದ್ಯಾರ್ಥಿಗಳೊಂದಿಗೆ ಹಾಂಕಾಂಗ್‌ನಲ್ಲಿಬೀದಿಯಲ್ಲೇ ಕುಳಿತುಕೊಂಡು ಪ್ರತಿಭಟಿಸಿದರು. ಮೊದ ಮೊದಲು ಚೀನಾ ಸರಕಾರ ನಿರ್ಲಕ್ಷಿಸಿತಾದರೂ ಬೆಂಬಲ ಹೆಚ್ಚಾಗುತ್ತಿದ್ದಂತೆ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿತು. ಅಷ್ಟೊತ್ತಿಗಾಗಲೇ ಹಾಂಕಾಂಗ್‌ನಲ್ಲಿನ ಬೆಳವಣಿಗಳು ಇಡೀ ಜಗತ್ತಿನ ಗಮನ ಸೆಳೆದಿದ್ದವು.

ಇದೀಗ ಚಾನ್‌ ಸೆರೆಮನೆಯಿಂದ ಹೊರ ಬಂದಿದ್ದಾರೆ. ಮತ್ತೆ ಹೋರಾಟಕ್ಕೆ ಹುರುಪು ಬರುವುದರಲ್ಲಿಸಂಶಯವೇ ಇಲ್ಲ. ''ಜೈಲಿನಲ್ಲಿಜೀವನ ಕಷ್ಟವಿತ್ತು. ಆದರೆ, ಅದಕ್ಕೆ ನಾನು ಪಶ್ಚಾತ್ತಾಪ ಪಡಲಾರೆ. ಯಾಕೆಂದರೆ, ಪ್ರಜಾಪ್ರಭುತ್ವ ಪಡೆಯಲು ನಾನು ತೆರುತ್ತಿರುವ ಬೆಲೆ ಇದು. ನಮಗೆ ಸಾರ್ವತ್ರಿಕ ಮತದಾನ ಹಕ್ಕು ಬೇಕೇ ಬೇಕು,'' ಎಂದು ಚಾನ್‌ ಹೇಳಿದ್ದಾರೆ. ಅದರರ್ಥ ಹಾಂಕಾಂಗ್‌ನಲ್ಲಿಮತ್ತೆ ಗಾಂಧಿ ಮಾದರಿಯ ಹೋರಾಟ, ಪ್ರತಿಭಟನೆಗಳನ್ನು ನಾವು ಚಾನ್‌ ನೇತೃತ್ವದಲ್ಲಿನಿರೀಕ್ಷಿಸಬಹುದು.

(ಈ ಲೇಖನವು ವಿಜಯ ಕರ್ನಾಟಕದ 2020ರ ಮಾರ್ಚ್ 15ರ ಸಂಚಿಕೆಯ ವ್ಯಕ್ತಿಗತ ಕಾಲಂನಲ್ಲಿ ಪ್ರಕಟವಾಗಿದೆ)