ಬುಧವಾರ, ಜನವರಿ 30, 2019

ಜಾರ್ಜ್ ನೆನಪು: ನಂದಿದ ಸಮಾಜವಾದದ ಕಿಡಿ

ಮಲ್ಲಿಕಾರ್ಜುನ ತಿಪ್ಪಾರ 

ಭಾರತೀಯ ರಾಜಕೀಯ ದಿಗಂತದಲ್ಲಿ ಜಾರ್ಜ್‌ ಫರ್ನಾಂಡಿಸ್‌ ಎಂಬ ಧ್ರುವತಾರೆ ಅಸ್ತಂಗತವಾಗಿದೆ. ಜಾರ್ಜ್‌ ಅವರು 'ಹೋರಾಟ ರಾಜಕಾರಣ'ದ ಕೊನೆಯ ಕೊಂಡಿ. ಹೋರಾಟದ ಮೂಲಕವೇ ರಾಜಕೀಯ ಏಳ್ಗೆ ಕಂಡು, ಜನ ಮತ್ತು ದೇಶಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಿದವರು. ಅವರನ್ನು ಕೇವಲ ರಾಜಕಾರಣಿ ಎಂಬ ಒಂದೇ ಪದದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಸಮತಾವಾದಿ, ಅತ್ಯುತ್ತಮ ವಾಗ್ಮಿ... ಹೀಗೆ ಏನೆಲ್ಲ ವಿಶೇಷಣಗಳನ್ನು ಅವರಿಗೆ ಧಾರಾಳವಾಗಿ ನೀಡಬಹುದು. ಅವರು ಎಂದೂ ತಾವು ನಂಬಿದ ಸಿದ್ಧಾಂತಕ್ಕೆ ತಿಲಾಂಜಲಿ ಇಡಲಿಲ್ಲ. ರಾಜಕೀಯದಲ್ಲಿ ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು; ಯಾವುದಕ್ಕೂ ರಾಜಿಯಾಗಲಿಲ್ಲ. ಅಧಿಕಾರ ಸುಖ ಅವರನ್ನು ಆಲಸಿಯಾಗಿ ಮಾಡಲಿಲ್ಲ; ಗರ್ವಿಷ್ಠರನ್ನಾಗಿಸಲಿಲ್ಲ. ಅಧಿಕಾರ ಬರುವ ಮುಂಚೆ ಹೇಗಿದ್ದರೋ, ಕುರ್ಚಿಯಲ್ಲಿ ಕುಳಿತಾಗಲೂ ಹಾಗೆಯೇ ಇದ್ದರು. ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ದೊಡ್ಡತನ. 

ಅವರ ಉಡುಗೆ ತೊಡುಗೆ ಸಿಂಪಲ್‌. ಒಂದು ಖಾದಿ ಪ್ಯಾಂಟ್‌; ಇಸ್ತ್ರಿಯಾಗದ ಖಾದಿ ಜುಬ್ಬಾ, ಇಷ್ಟೆ ಅವರ ತೊಡುಗೆ. ಬಿಳಿ ಕೂದಲು ತುಂಬಿದ ತಲೆ, ಮುಖಕ್ಕೊಂದು ಅಗಲವಾದ ಕನ್ನಡಕ ಅವರ ಒಟ್ಟು ವ್ಯಕ್ತಿತ್ವಕ್ಕೆ ಒಂದು ಗಂಭೀರತೆಯನ್ನು ತಂದುಕೊಟ್ಟಿತ್ತು. ಆದರೆ, ಅವರ ಜೀವನ ಮಾತ್ರ ಸರಳವಾಗಿರಲಿಲ್ಲ. ಮೂಲತಃ ಕರ್ನಾಟಕದವರಾದರೂ ಇಡೀ ಭಾರತವೇ ಅವರ ಹೋರಾಟದ ಅಂಗಣವಾಗಿತ್ತು. ಅವರು ಕಾಲಿಟ್ಟ ಕಡೆ ಹೋರಾಟದ ಹೆಜ್ಜೆಗಳು ಮೂಡುತ್ತಿದ್ದವು. ಮಂಗಳೂರು, ಬೆಂಗಳೂರು, ಮುಂಬಯಿ, ಬಿಹಾರ, ದಿಲ್ಲಿ... ಹೀಗೆ ಅವರ ಕಾರ್ಯಕ್ಷೇತ್ರ ಹರಡಿಕೊಳ್ಳುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಯಾವಾಗಲೂ ಚಿಂತನೆಗಳಿರುತ್ತಿದ್ದವು. ಕಾರ್ಮಿಕರ ಶ್ರೇಯೋಭಿವೃದ್ಧಿಯೇ ಮೂಲಮಂತ್ರವಾಗಿತ್ತು. ಅವರ ಹಿತರಕ್ಷ ಣೆಗೆ ಎಂಥ ಹೋರಾಟಕ್ಕೂ ಅಣಿಯಾಗುತ್ತಿದ್ದರು. ಒಮ್ಮೆ ಅವರ ಮುಷ್ಕರ ಕರೆಗೆ ಇಡೀ ದೇಶವೇ ಸ್ತಬ್ಧವಾಗಿತ್ತು; ಅಂಥ ಧೀಃಶಕ್ತಿ ಅವರಲ್ಲಿತ್ತು. ಆದರೆ, ಅವರ ಕೊನೆಯ ದಿನಗಳು ಮಾತ್ರ ಯಾತನಾಮಯವಾಗಿದ್ದವು ಎಂಬುದು ಅವರನ್ನು ಇಷ್ಟಪಡೋರಿಗೆ ಅರಗಿಸಿಕೊಳ್ಳಲಾಗದ ಸಂಗತಿ. 

ಕನ್ನಡದ ಕುವರ:ಜಾರ್ಜ್‌ ಫರ್ನಾಂಡಿಸ್‌ ಕನ್ನಡದವರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಕರಾವಳಿಯ ಮಂಗಳೂರಿನವರು. 1930 ಜೂನ್‌ 3ರಂದು ಮಂಗಳೂರಿನ ಕ್ಯಾಥೋಲಿಕ್‌ ಕುಟುಂಬದಲ್ಲಿ ಜನಿಸಿದರು. ತಂದೆ ಜೋಸೆಫ್‌ ಫರ್ನಾಂಡಿಸ್‌, ತಾಯಿ ಅಲಿಶಾ ಮಾರ್ಥಾ ಫರ್ನಾಂಡಿಸ್‌. ಇವರಿಗೆ ಆರು ಮಕ್ಕಳು. ಜಾರ್ಜ್‌ ಹಿರಿಯರು. ಕುಟುಂಬದಲ್ಲಿ ಜಾರ್ಜ್‌ ಅವರನ್ನು ಪ್ರೀತಿಯಿಂದ ಎಲ್ಲರೂ ಜರ್ರಿ ಎಂದು ಕರೆಯುತ್ತಿದ್ದರು. ಜೋಸೆಫ್‌ ಅವರದ್ದು ಕ್ರಿಶ್ಚಿಯನ್‌ ಸಂಪ್ರದಾಯಸ್ಥ ಕುಟುಂಬ. ಹಾಗಾಗಿ, ಹಿರಿಯ ಮಗ ಪಾದ್ರಿಯಾಗಲಿ ಎಂದು ಅವರನ್ನು ಪಾದ್ರಿ ತರಬೇತಿಗೆ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಆದರೆ ಜಾರ್ಜ್‌ ಪಾದ್ರಿಯಾಗಲಿಲ್ಲ. ಬೆಂಗಳೂರು ಬಿಟ್ಟು ಸೀದಾ ಮುಂಬೈ(ಅಂದಿನ ಬಾಂಬೆ)ಗೆ ತೆರಳಿದರು. ಆಗ ಅವರಿಗೆ ಕೇವಲ 19 ವರ್ಷ. ಮುಂಬೈನ ಬೀದಿಗಳಲ್ಲಿ ಅಲೆಯುತ್ತಿದ್ದ ಜಾರ್ಜ್‌ಗೆ ಪರಿಚಯದವರು ಯಾರೂ ಇರಲಿಲ್ಲ. ಎಷ್ಟೋ ಸಾರಿ ಅವರು ಸಮುದ್ರ ತೀರ ಮತ್ತು ರಸ್ತೆಗಳಲ್ಲಿ ಮಲಗುತ್ತಿದ್ದರು. ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಸಿಗುವವರೆಗೂ ಕೈಗೆ ಸಿಕ್ಕ ಕೆಲಸಗಳನ್ನು ಮಾಡಿದರು. ಮುಂಬೈಯಲ್ಲಿ ಅವರದ್ದು ಅಕ್ಷ ರಶಃ ಕಷ್ಟದ ಜೀವನವೇ ಆಗಿತ್ತು. 

ಲೋಹಿಯಾ ಮತ್ತು ಡಿಮೆಲ್ಲೊ ಸಂಪರ್ಕ: 
ಮುಂಬೈ ಜೀವನದಲ್ಲಿ ಹೋರಾಟ ಬದುಕು ನಡೆಸುತ್ತಿರುವಾಗಲೇ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಮತ್ತು ಹಿರಿಯ ಕಾರ್ಮಿಕ ಮುಖಂಡ ಡಿ'ಮೆಲ್ಲೊ ಅವರ ಸಂಪರ್ಕ ಜಾರ್ಜ್‌ಗೆ ದೊರಕಿತು. ಇಲ್ಲಿಂದಲೇ ಜಾರ್ಜ್‌ ಅವರ ಹೋರಾಟದ ಮಜಲುಗಳು ಆರಂಭವಾದವು. ಅದು ಕಾರ್ಮಿಕ ಚಳವಳಿಕ ಉಚ್ಛ್ರಾಯ ಕಾಲ. ಹಾಗಾಗಿ, ನಿಧಾನವಾಗಿ ಕಾರ್ಮಿಕ ಚಳವಳಿಯಲ್ಲಿ ಜಾರ್ಜ್‌ ಅಗ್ರಗಣ್ಯ ನಾಯಕರಾಗಿ ರೂಪುಗೊಂಡರು. ಅಲ್ಲಿಂದ ಅವರು 1961ರಲ್ಲಿ ಬಾಂಬೆ ಮುನ್ಸಿಪಲ್‌ ಕಾರ್ಪೊರೇಷನ್‌ಗೆ ಸ್ಪರ್ಧಿಸಿ ಆಯ್ಕೆಯಾದರು. ಹೋರಾಟದ ಜತೆಗೆ ರಾಜಕೀಯ ಜೀವನವನ್ನು ಆರಂಭಿಸಿದರು. 

ಜಾರ್ಜ್‌ ದಿ ಜೈಂಟ್‌ ಕಿಲ್ಲರ್‌! 
ಕಾರ್ಪೊರೇಷನ್‌ಗೆ ಆಯ್ಕೆಯಾದ ಆರು ವರ್ಷದ ಬಳಿಕ ಜಾರ್ಜ್‌ ಲೋಕಸಭೆ ಸ್ಪರ್ಧೆಗೆ ಮುಂದಾದರು. ದಕ್ಷಿಣ ಮುಂಬೈ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದರು. ಅವರ ಎದುರಾಳಿ, ಮಹಾರಾಷ್ಟ್ರದ ಅಂದಿನ ಪ್ರಖ್ಯಾತ ಕಾಂಗ್ರೆಸ್‌ ನಾಯಕ ಎಸ್‌.ಕೆ.ಪಾಟೀಲ್‌. ಈ ಚುನಾವಣೆಯಲ್ಲಿ ಜಾರ್ಜ್‌ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಫಲಿತಾಂಶ ಪ್ರಕಟವಾದಾಗ ಮಾತ್ರ ಎಲ್ಲರಿಗೂ ಆಶ್ಚರ್ಯವಾಗಿತ್ತು. ಪ್ರಭಾವಿ ಪಾಟೀಲ್‌ರನ್ನು ಸೋಲಿಸಿ ಜಾರ್ಜ್‌ ಆಯ್ಕೆಯಾಗಿದ್ದರು. ಅಲ್ಲಿಂದಲೇ ಅವರಿಗೆ ಎಛಿಟ್ಟಜಛಿ, Thಛಿ ಎಜಿa್ಞಠಿ ಓಜ್ಝ್ಝಿಛ್ಟಿ ಎಂಬ ಹೆಸರು ಬಂತು. ಇಲ್ಲಿಂದ ಅವರು ರಾಜಕೀಯದಲ್ಲಿ ಹಿಂದಿರುಗಿ ನೋಡಲಿಲ್ಲ. ಹೋರಾಟದ ಜತೆಗೆ ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಮೇಲೇರಿದರು. 

ಭೂಗತ ನಾಯಕ:1974ರ ಹೊತ್ತಿಗೆ ದೇಶದಲ್ಲಿ ಜಾರ್ಜ್‌ ಜನಪ್ರಿಯ ಹೆಸರಾಗಿತ್ತು. ಈ ಅವಧಿಯಲ್ಲಿ ಅವರು ರೇಲ್ವೆ ಕಾರ್ಮಿಕರ ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಅದು ಎಷ್ಟು ಪರಿಣಾಮಕಾರಿ ಕರೆಯಾಗಿತ್ತು ಎಂದರೆ, ಇಡೀ ದೇಶ ಅಕ್ಷ ರಶಃ ಸ್ತಬ್ಧವಾಗಿತ್ತು. ಈ ಮುಷ್ಕರಕ್ಕೆ ದೇಶದ ಎಲ್ಲ ಉದ್ಯಮ ವಲಯಗಳಿಂದ ಬೆಂಬಲ ದೊರಕಿತ್ತು. ಮೂರು ವಾರಗಳ ಈ ಮುಷ್ಕರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯಲ್ಲೂ ಅಭದ್ರತೆ ಹುಟ್ಟು ಹಾಕಿತ್ತು ಎಂದರೆ ಅದರ ಪರಿಣಾವನ್ನು ಯಾರಾದರೂ ಊಹಿಸಬಹುದು. ಇದೇ ಸಂದರ್ಭದಲ್ಲಿ 'ಲೋಕ ನಾಯಕ' ಜಯಪ್ರಕಾಶ್‌ ನಾರಾಯಣ್‌ ಅವರ ಮೂವ್‌ಮೆಂಟ್‌ ಫಾರ್‌ ಚೇಂಜ್‌ ಚಳವಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಆಂತರಿಕವಾಗಿ ಹೆಚ್ಚುತ್ತಿದ್ದ ಸರಕಾರ ವಿರೋಧಿ ಧೋರಣೆ ಮತ್ತೊಂದೆಡೆ ಕೋರ್ಟ್‌ನಲ್ಲಾದ ಹಿನ್ನಡೆಯನ್ನು ಅರಗಿಸಿಕೊಳ್ಳಲಾಗದ ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಪ್ರತಿಪಕ್ಷ ನಾಯಕರು ಜೈಲು ಪಾಲಾದರು. ಆಗ ಜಾರ್ಜ್‌ ಮತ್ತು ಅವರ ಜತೆಗಿದ್ದವರು ಭೂಗತರಾದರು. ಈ ಸಂದರ್ಭದಲ್ಲಿ ಬರೋಡಾದಿಂದ ಡೈನಮೈಟ್‌ ತಂದು ಸರಕಾರಿ ಕಚೇರಿಗಳನ್ನು ಧ್ವಂಸಗೊಳಿಸುವ ಯೋಜನೆ ಜಾರ್ಜ್‌ ಅವರದ್ದಾಗಿತ್ತು. ಆದರೆ, ಕೋಲ್ಕತಾ(ಅಂದಿನ ಕಲ್ಕತ್ತಾ)ದಲ್ಲಿ ಸೆರೆ ಸಿಕ್ಕರು. ಡೈನಮೈಟ್‌ ಕದ್ದ ಆರೋಪವನ್ನು ಜಾರ್ಜ್‌ ಮೇಲೆ ಹಾಕಿ ಅವರನ್ನು 9 ತಿಂಗಳು ಕಾಲ ತಿಹಾರ್‌ ಜೈಲಿನಲ್ಲಿ ಇಡಲಾಯಿತು. ಈ ಪ್ರಕರಣವೇ ಮುಂದೆ 'ಬರೋಡಾ ಡೈನಮೈಟ್‌' ಎಂದು ಪ್ರಖ್ಯಾತವಾಯಿತು. ಜೈಲಿನಲ್ಲಿದ್ದುಕೊಂಡೇ ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ, ಮೂರು ಲಕ್ಷ ಮತಗಳ ಅಂತರದಿಂದ ಗೆದ್ದರು. ಜಾರ್ಜ್‌ ಅವರನ್ನು ಬಂಧಿಸಿದ ಕ್ಷ ಣದಲ್ಲಿ ಅವರ ಕೋಳ ತೊಟ್ಟ ಕೈ ಮೇಲತ್ತಿದ ಫೋಟೋ ಈ ಗೆಲುವಿನಲ್ಲಿ ಭಾರಿ ಪ್ರಭಾವ ಬೀರಿತ್ತು! 

ಸಚಿವರಾದರು ಜಾರ್ಜ್‌:
 
ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡಿತು. ಇದೇ ಮೊದಲ ಬಾರಿಗೆ ಮೊರಾರ್ಜಿ ದೇಸಾಯಿ ನೇತೃತ್ವದ ಪ್ರಥಮ ಕಾಂಗ್ರೆಸ್ಸೇತರ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲಿ ಜೈಲುಪಾಲಾಗಿದ್ದ ನಾಯಕರೆಲ್ಲ ಬಿಡುಗಡೆಗೊಂಡರು. ಜಾರ್ಜ್‌ ಅವರು ದೇಸಾಯಿ ಸಂಪುಟದಲ್ಲಿ ಕೈಗಾರಿಕಾ ಸಚಿವರಾದರು. ಬಂಡವಾಳ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ್ದ ಅಮೆರಿಕ ಐಬಿಎಂ ಮತ್ತು ಕೊಕಾಕೋಲಾ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡ ಫಲವಾಗಿ ಅವರೆಡೂ ಕಂಪನಿಗಳು ಭಾರತದಿಂದ ಕಾಲು ಕೀಳಬೇಕಾಯಿತು. ಮುಂದೆ ಜನತಾ ದಳ ನಾಯಕ ವಿ.ಪಿ. ಸಿಂಗ್‌ ನೇತೃತ್ವದ ಸರಕಾರದಲ್ಲಿ ರೇಲ್ವೆ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಪಶ್ಚಿಮ ಕರಾವಳಿಯನ್ನು ಸಂಪರ್ಕಿಸುವ ಕೊಂಕಣ ರೇಲ್ವೆ ಯೋಜನೆ ಅನುಷ್ಠಾನಗೊಳಿಸಿದರು. 

ಬಿಜೆಪಿಯ ಸಖ್ಯ:ಜೆಪಿ ಚಳವಳಿಯಲ್ಲಿ ಉದಯಿಸಿದ ನಾಯಕರ ಜನತಾ ಪರಿವಾರ ದಿಕ್ಕಾಪಾಲಾದ ಸಂದರ್ಭ ಅದು. ರಾಜಕೀಯ ಅನಿವಾರ್ಯತೆ ಮತ್ತು ಕಾಂಗ್ರೆಸ್‌ ವಿರೋಧಿ ನೀತಿಯ ಪ್ರಮುಖ ಧ್ಯೇಯದಿಂದಾಗಿ ಜಾರ್ಜ್‌ ಅವರು ಅನಿವಾರ್ಯವಾಗಿ ಬಿಜೆಪಿಯ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಆಡ್ವಾಣಿ ಜತೆ ಕೈ ಜೋಡಿಸಬೇಕಾಯಿತು. ವಿಶೇಷ ಎಂದರೆ, ಆರ್‌ಎಸ್‌ಎಸ್‌ ನೀತಿಯನ್ನು ಜಾರ್ಜ್‌ ಟೀಕಿಸುತ್ತಿದ್ದರು. ಹಾಗಿದ್ದೂ ಅವರು ಬಿಜೆಪಿ ಜತೆ ಹೆಜ್ಜೆ ಹಾಕಬೇಕಾಯಿತು. ಜತೆಗೆ ಬಿಜೆಪಿ ನೇತೃತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌-ಎನ್‌ಡಿಎ ಸಂಚಾಲಕರಾದರು. ಯಾರೂ ನಿರೀಕ್ಷಿಸದ ರೀತಿಯಲ್ಲಿ 1998ರಲ್ಲಿ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆಗ ಜಾರ್ಜ್‌ ಅವರಿಗೆ ರಕ್ಷ ಣಾ ಸಚಿವ ಸ್ಥಾನ ತಾನಾಗಿಯೇ ಒಲಿದು ಬಂತು. ವಿಪರ್ಯಾಸ ಎಂದರೆ, ಜಾರ್ಜ್‌ ತಮ್ಮ ಬದುಕಿನುದ್ದಕ್ಕೂ ಅಣ್ವಸ್ತ್ರಗಳನ್ನು ವಿರೋಧಿಸುತ್ತಲೇ ಬಂದಿದ್ದರು. ಆದರೆ, ಅದೇ ಜಾರ್ಜ್‌ ಅವರು ಅಣ್ವಸ್ತ್ರ ಪರೀಕ್ಷೆಯಲ್ಲಿ ವಾಜಪೇಯಿ ಜತೆ ಪಾಲುದಾರರಾದರು! 

ಬೆನ್ನತ್ತಿದ ವಿವಾದಗಳು:ಜಾರ್ಜ್‌ ಅವರು ರಕ್ಷ ಣಾ ಸಚಿವರಾಗಿದ್ದಾಗಲೇ ಬಾರಾಕ್‌ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳು ಬೆನ್ನು ಹತ್ತಿದವು. ಇದಕ್ಕಾಗಿ ಅವರು ರಕ್ಷ ಣಾ ಸಚಿವ ಸ್ಥಾನವನ್ನು ತೊರೆಯಬೇಕಾಯಿತು. ಮುಂದೆ ತನಿಖೆ ವೇಳೆ ಜಾರ್ಜ್‌ ಅವರು ನಿರ್ದೋಷಿ ಎಂದು ಸಾಬೀತಾದ ಮೇಲೆ ಮತ್ತೆ ರಕ್ಷ ಣಾ ಸಚಿವರಾದರು. ಆದರೆ, ಕಾರ್ಗಿಲ್‌ ಯುದ್ಧದ ವೇಳೆ ಖರೀದಿಸಲಾದ ಶವಪೆಟ್ಟಿಗೆಗಳ ಹಗರಣ ಮತ್ತೆ ಜಾರ್ಜ್‌ ತಲೆಯೇರಿತು. ತೀರಾ ಇತ್ತೀಚೆಗಷ್ಟೇ ಈ ಹಗರಣದಲ್ಲೂ ಜಾರ್ಜ್‌ ಅವರು ನಿರ್ದೋಷಿ ಎಂದು ಸಾಬೀತಾಯಿತಾದರೂ, ಅದನ್ನು ಕೇಳಿ ಸಂತೋಷ ಪಡುವ ಸ್ಥಿತಿಯಲ್ಲಿ ಜಾರ್ಜ್‌ ಇರಲಿಲ್ಲ. ಸಾಮಾನ್ಯವಾಗಿ ಭಾರತದ ಮಗ್ಗಲು ಮುಳ್ಳು ಪಾಕಿಸ್ತಾನ ಎಂದು ಬಹುತೇಕ ರಾಜಕಾರಣಿಗಳು ಹೇಳುತ್ತಾರೆ. ಆದರೆ, ಜಾರ್ಜ್‌ ಮಾತ್ರ ಭಾರತದ ನಂ.1ವೈರಿ ಪಾಕಿಸ್ತಾನವಲ್ಲ ಚೀನಾ ಎಂದು ಬಹಿರಂಗವಾಗಿ ಹೇಳುವ ಮೂಲಕ ಭಾರಿ ಸಂಚಲನಕ್ಕೆ ಕಾರಣವಾಗಿದ್ದರು. 

ನೇಪಥ್ಯಕ್ಕೆ ಜಾರಿದ ಜಾರ್ಜ್‌:
 
2004ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಮರಳಿ ಅಧಿಕಾರ ಹಿಡಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ ಎನ್‌ಡಿಎ ಸೋಲು ಕಂಡು ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂತು. ಈ ಅವಧಿಯಲ್ಲಿ ದೇಶದ ಇಬ್ಬರು ಪ್ರಮುಖ ನಾಯಕರು ನೇಪಥ್ಯಕ್ಕೆ ಜಾರುವಂತಾಯಿತು. ಒಬ್ಬರು ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ, ಮತ್ತೊಬ್ಬರು ಜಾರ್ಜ್‌. ನಂತರ ಅವರಿಗೆ ಅಲ್ಜೈಮರ್‌ ಕಾಯಿಲೆ ಉಲ್ಬಣಗೊಂಡು ಸಂಪೂರ್ಣವಾಗಿ ಸಾರ್ವಜನಿಕ ಜೀವನದಿಂದ ಮರೆಯಾಗಬೇಕಾಯಿತು. 

ಮರಳಿ ಬಾರದ ಲೋಕಕ್ಕೆ:ಜಾರ್ಜ್‌ ಅದ್ಭುತ ಮಾತುಗಾರರು. ಅವರು ಭಾಷಣಕ್ಕೆ ನಿಂತರೆ ಇಡೀ ಜನಸಮೂಹ ತದೇಕ ಚಿತ್ತದಿಂದ ಆಲಿಸುತ್ತಿತ್ತು. ಸಂಸತ್ತಿನಲ್ಲಿ ಮಾತನಾಡಲು ಆರಂಭಿಸಿದರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಕೊಂಕಣಿ, ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ಜಾರ್ಜ್‌ ನಿರರ್ಗಳವಾಗಿ ಮಾತನಾಡುತ್ತಿದ್ದರು. ಪ್ರಖರ ಸಮಾಜವಾದಿಯಾಗಿದ್ದ ಜಾರ್ಜ್‌ ತುಂಬ ದಿನಗಳ ಕಾಲ ಅನಾರೋಗ್ಯಪೀಡಿತರಾಗಿ ಕೊನೆಯ ದಿನಗಳನ್ನು ಅತ್ಯಂತ ಯಾತನೆಯಲ್ಲಿ ಕಳೆದರು. ಅವರೀಗ ಯಾರೂ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. 

ಜಾರ್ಜ್‌ ಮ್ಯಾಥ್ಯೂ ಫರ್ನಾಂಡಿಸ್‌ 
ಜನನ: 3 ಜೂನ್‌ 1930, ಮಂಗಳೂರು 
ನಿಧನ: 29 ಜನವರಿ 2019 
ಪತ್ನಿ: ಲೈಲಾ ಕಬೀರ್‌ 
ಪಕ್ಷ ಗಳು: ಸಮತಾ, ಜನತಾ ದಳ, ಜನತಾ ಪಾರ್ಟಿ, ಸಂಯುಕ್ತ ಸೋಷಿಯಲಿಸ್ಟ್‌ ಪಾರ್ಟಿ, ಎನ್‌ಡಿಎ 
ಸಿದ್ಧಾಂತ: ಸಮಾಜವಾದ 
ನಿರ್ವಹಿಸಿದ ಖಾತೆಗಳು: ರಕ್ಷ ಣೆ, ಕೈಗಾರಿಕೆ ಮತ್ತು ರೈಲ್ವೆ

ವಿಯೆಟ್ನಾಮಿಯಾಗಿ ಹುಟ್ಟುವೆ! ''ಒಂದು ವೇಳೆ ಪುನರ್ಜನ್ಮ ಎಂಬುದಿದ್ದರೆ ನಾನು ವಿಯೆಟ್ನಾಮಿಯಾಗಿ(ವಿಯೆಟ್ನಾಮ್‌ ಪ್ರಜೆ) ಹುಟ್ಟುವೆ,'' ಎಂದು ಜಾರ್ಜ್‌ ಒಮ್ಮೆ ಹೇಳಿದ್ದರು. ಒಂದುವರೆ ದಶಕದ ಹಿಂದೆ ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ಬಯಕೆಯನ್ನು ಅವರು ಹೊರಹಾಕಿದ್ದರು. ''ವಿಯೆಟ್ನಾಮಿ ಜನರು ತಮ್ಮ ಬದ್ಧತೆಯನ್ನು ಪೂರೈಸಲು ಸಾಯಲು ಸಿದ್ಧರಾಗಿರುತ್ತಾರೆ. ಅಂಥ ಶಿಸ್ತು ಅವರಲ್ಲಿರುತ್ತದೆ. ನಾನು ವಿಯೆಟ್ನಾಮ್‌ನ ಅಭಿಮಾನಿ,'' ಎಂದು ಹೇಳಿದ್ದರು. 



(ಈ ಲೇಖನವು ವಿಜಯ ಕರ್ನಾಟಕದ 2019ರ ಜನವರಿ 30ರ ಸಂಚಿಕೆಯಲ್ಲಿ ಪ್ರಕಟವಾಗಿದೆ) ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:  

ಸೋಮವಾರ, ಮಾರ್ಚ್ 5, 2018

ಕ್ಷಣ ಕ್ಷಣ ಅನುಭವಿಸಿ, ನೆಮ್ಮದಿಯಾಗಿ ಬದುಕಿ

- ಮಲ್ಲಿಕಾರ್ಜುನ ತಿಪ್ಪಾರ
ರಾಜೇಶ್ ದೊಡ್ಡ ಕಂಪನಿಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾನೆ. ಕೈ ತುಂಬ ಸಂಬಳ. ಆದರೂ ಆತನಿಗೆ ಸಂತೋಷವೇ ಇಲ್ಲಘಿ. ಯಾವಾಗಲೂ ಭವಿಷ್ಯದ ಚಿಂತೆ. ಮುಂದೆ ಹಾಗಾದರೆ, ಹೀಗಾದರೆ ಎಂಬ ಕೊರಗು. ಆತನ ಹೆಂಡತಿ ಸುಮಾ ಮಾತ್ರ ತುಂಬ ಪ್ರಾಕ್ಟಿಕಲ್. ಭವಿಷ್ಯದ ಬಗ್ಗೆ ವಿನಾಕಾರಣ ಯೋಚಿಸದೆ, ಭಯಭೀತಗೊಳ್ಳದೇ ವರ್ತಮಾನದ ಬದುಕನ್ನು ಸಂತೋಷವಾಗಿ ಕಳೆಯುವ ಗುಣದವಳು. ತನ್ನ ಗಂಡನಿಗೆ, ಈ ಕ್ಷಣದ ಸಂತೋಷ ಅನುಭವಿಸು, ಯಾಕೆ ಸುಮ್ಮನೇ ಭವಿಷ್ಯದ ಬಗ್ಗೆ ಯೋಚಿಸಿ ಈಗಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೀಯಾ ಎಂದು ಹೇಳುತ್ತಲೇ ಇರುತ್ತಾಳೆ.
***
ಸುರೇಶ್ ಎಂಬಿಎ ೈನಲ್ ಇಯರ್‌ನಲ್ಲಿ ಓದುತ್ತಿದ್ದಾನೆ. ಆತನಿಗೂ ಯಾವಾಗಲೂ ಭವಿಷ್ಯದ ಬಗ್ಗೆಯೇ ಕಾಳಜಿ. ಪರೀಕ್ಷೆ ಬಗ್ಗೆ ವಿಪರೀತ ಭಯ. ೇಲ್ ಆದರೆ ಏನು ಮಾಡುವುದು ಎನ್ನುವಂಥ ಪ್ರಶ್ನೆಗಳ ಮೂಟೆಯನ್ನು ತಲೆಯಲ್ಲಿ ತುಂಬಿಕೊಂಡು, ಓದಿನ ಮೇಲೂ ಏಕಾಗ್ರತೆ ಸಾಧಿಸಲು ಆಗುತ್ತಿಲ್ಲ. ಆತನ ಗೆಳೆಯ ಸುಜಿತ್ ಮಾತ್ರಘಿ, ಪರೀಕ್ಷೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಈ ಕ್ಷಣದಲ್ಲಿ ಓದುವುದಷ್ಟೇ ಮುಖ್ಯ ಎಂದು ಭಾವಿಸಿ, ಅದನ್ನು ಆನಂದಿಸುತ್ತಲೇ ಮಾಡುತ್ತಾನೆ. ಸುರೇಶ್‌ನಿಗೆ ಸುಜಿತ್ ತಿಳಿ ಹೇಳುತ್ತಾನೆ; ಪರೀಕ್ಷೆಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡ. ನಮ್ಮ ಕೆಲಸ ಚೆನ್ನಾಗಿ ಓದುವುದು. ಹಾಗಂತ ಬರೀ ಓದುವುದಲ್ಲ; ಎಂಜಾಯ್ ಮಾಡುತ್ತಾ ಓದುವುದು. ಹಾಗೆ ಮಾಡಿದರೆ, ನಿನಗೆ ಭಯ ಇರುವುದಿಲ್ಲಘಿ. ಸುಮ್ಮನೆ ಯಾಕೆ ಏನೇನೊ ನಿನ್ನಷ್ಟಕ್ಕೆ ನೀನು ಯೋಚನೆ ಮಾಡಿಕೊಂಡು, ಈ ಕ್ಷಣದ ಸಂತೋಷ ಹಾಳು ಮಾಡಿಕೊಳ್ಳುತ್ತೀಯಾ ಎನ್ನುತ್ತಾನೆ.
***
ಈ ತರಹದ ಸಮಸ್ಯೆಯ ಸುಳಿಯಲ್ಲಿ ಬಹಳಷ್ಟು ಜನರು ಸಿಲುಕಿಕೊಂಡಿದ್ದಾರೆ. ಮುಂದೆ ಆಗಬಹುದಾದ  ಇಲ್ಲವೇ ಘಟಿಸಲು ಸಾಧ್ಯವೇ ಇಲ್ಲದಂಥ ಸಂಗತಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೇವೆ. ಅದೇ ವೇಳೆಯಲ್ಲಿ ಈ ಹೊತ್ತಿನಲ್ಲಿ ನಮಗೆ ದೊರೆಯಬಹುದಾದ ಚಿಕ್ಕ, ಪುಟ್ಟ ಸಂತೋಷ, ನೆಮ್ಮದಿಗಳನ್ನೆಲ್ಲ ಮರೆತು, ನಮ್ಮ ಇಡೀ ಜೀವನವನ್ನು ಗೋಳುಮಯ ಮಾಡಿಕೊಳ್ಳುತ್ತೇವೆ. ಇಂಥ ಸಂದರ್ಭದಲ್ಲಿ ಭಗವಾನ್ ಬುದ್ಧ ಹೇಳಿದ ಮಾತು ಹೆಚ್ಚು ಆಪ್ತವಾಗುತ್ತದೆ. ‘ಭೂತಕಾಲದಲ್ಲಿ ವಾಸಿಸಬೇಡ, ಭವಿಷ್ಯದ  ಬಗ್ಗೆ ಚಿಂತಿಸಬೇಡ; ಈ ಕ್ಷಣದ ಬಗ್ಗೆ ಮನಸ್ಸಿನ ಮೇಲೆ ಏಕಾಗ್ರತೆಯನ್ನು ಸಾಧಿಸು’ ಎನ್ನುತ್ತಾರೆ ಬುದ್ಧಘಿ. ಅಂದರೆ, ನಾವು ಈಗ ಏನು ಮಾಡುತ್ತಿದ್ದೇವೊ ಅದನ್ನೇ ಅಚ್ಚುಕಟ್ಟಾಗಿ, ಯಾವುದಕ್ಕೂ ಚ್ಯುತಿ ಬಾರದಂತೆ ಮಾಡಿಬಿಡಬೇಕು. ಅದು ಬಿಟ್ಟುಘಿ, ಅಯ್ಯೊ ನನಗೆ ಹಿಂದೆ ಹೀಗೆ ಆಗಿತ್ತಲ್ಲ ಎಂಬ ಕೊರಗನ್ನು ವರ್ತಮಾನಕ್ಕೆ ಅನ್ವಯಿಸಿಕೊಂಡು ಕುಳಿತುಕೊಳ್ಳಬಾರದು. ಇದರಿಂದ ನಿಮ್ಮ ಈಗಿನ ಕೆಲಸಗಳ್ಯಾವುವೂ ಸುಗಮವಾಗಿ ಮುಗಿಯುವುದಿಲ್ಲಘಿ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮನಸ್ಸಿನ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹಾಗೆಯೇ, ಭವಿಷ್ಯದ ಬಗ್ಗೆ ವಿನಾಕಾರಣ ಅತಿಯಾಗಿ ಚಿಂತಿಸುವುದು ಒಳ್ಳೆಯದಲ್ಲಘಿ. ಕಾರಣವಿಲ್ಲದ ಭಯಪಡುವುದು ತರವಲ್ಲಘಿ. ಹಾಗಂತ, ಭವಿಷ್ಯದ ಕುರಿತು ಯೋಚಿಸುವುದೇ ತಪ್ಪು ಎಂದಲ್ಲಘಿ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳಿಘಿ, ಗುರಿಗಳನ್ನು ಹಾಕಿಕೊಳ್ಳಿಘಿ. ಆದರೆ, ಭಯಗೊಳ್ಳಬೇಡಿ. ಮೇಲಿಂದ ಮೇಲೆ ಆ ಕುರಿತು ಚಿಂತಿಸುವುದು ಮತ್ತು ಅದರಲ್ಲೇ ಕೊರಗುವುದು ವ್ಯಸನವಾಗಬಾರದಷ್ಟೇಘಿ.
ಹಾಗಾದರೆ, ಈ ಕ್ಷಣದಲ್ಲಿ ಬದುಕುವುದು ಹೇಗೆ? ಈ ಪ್ರಶ್ನೆಗೆ ಜರ್ಮನಿಯ ಖ್ಯಾತ ಟೆನ್ನಿಸ್ ತಾರೆ ಏಂಜಿಲಿಕ್ ಕೆರ್ಬರ್ ಅವರ ಮಾತುಗಳು ಉತ್ತರ ನೀಡಬಲ್ಲವು. ‘‘ಯಾವುದೇ ಸಮಸ್ಯೆಘಿ, ಸಂಗತಿಗಳನ್ನು ತುಂಬಾ ಸಂಕೀರ್ಣಗೊಳಿಸಲು ಹೋಗಬೇಡಿ. ರಿಲಾಕ್ಸ್ ಆಗಿರಲು ಪ್ರಯತ್ನಿಸಿ, ಪ್ರತಿ ಕ್ಷಣವನ್ನು ಎಂಜಾಯ್ ಮಾಡಿ ಮತ್ತು ಅದರ ಸದ್ಬಳಕೆ ಮಾಡಿಕೊಳ್ಳಿ,’’ ಎಂದೆನ್ನುವ ಕೆರ್ಬರ್ ಮಾತುಗಳಲ್ಲಿ ಸತ್ಯವಿದೆ. ನಾವೆಲ್ಲರೂ ತಮ್ಮ ಜೀವನದ ಪ್ರತಿ ಕ್ಷಣಗಳನ್ನು ಸಂಕೀರ್ಣಗೊಳಿಸುತ್ತಲೇ ಹೋಗುತ್ತೇವೆ. ತುಂಬ ಸರಳವಾಗಿ ಬಗೆಹರಿಯಬಹುದಾದ ಸಮಸ್ಯೆಯನ್ನು ಗುಡ್ಡ ಮಾಡಿಟ್ಟು ಬಿಡುತ್ತೇವೆ. ಅಯ್ಯೋ ಹೀಗಾಯ್ತಲ್ಲ ಎಂದು ಕರಬುತ್ತೇವೆ. ಸರಳವಾಗಿ ಮುಗಿಯಬಹುದಾದ ಯಾವುದೋ ಕೆಲಸವನ್ನು ತುಂಬ ದಿನಗಳವರೆಗೆ ಎಳೆದುಕೊಂಡು ಹೋಗುತ್ತೇವೆ. ನಮಗೆ ನಾವೇ ಕಲ್ಪಿತ ಶತ್ರುಗಳನ್ನುಘಿ ಸೃಷ್ಟಿಸಿಕೊಂಡು, ಅವರಿಂದಾಗುವ ಅಪಾಯವನ್ನು ಊಹೆ ಮಾಡಿಕೊಂಡು, ಈಗಿನ ಜೀವನದ, ಈ ಕ್ಷಣದ ಸಂತೋಷವನ್ನು ಕೈ ಚೆಲ್ಲಿ ಬಿಡುತ್ತೇವೆ.
‘ಸಮಯ ಮತ್ತು ಅಲೆಗಳು ಯಾರಿಗೂ ಕಾಯುವುದಿಲ್ಲ’ ಎಂಬ ಮಾತಿದೆ. ಅಂದರೆ, ಪ್ರತಿ ಕ್ಷಣವೂ ಅತ್ಯಮೂಲ್ಯಘಿ. ಅಂಥ ಕ್ಷಣವನ್ನು ಗೋಳಾಟದಿಂದ, ಇನ್ನಾವುದೇ ಭಯದಿಂದ ಕಳೆದುಕೊಳ್ಳುವುದು ಬೇಡ. ಆ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸಿ. ವರ್ತಮಾನವೇ ನಿಜವಾದ ಬದುಕು ಎಂಬುದನ್ನು ಅರಿತುಕೊಳ್ಳಿಘಿ. ಈ ಹಿಂದೆ ಆಗಿ ಹೋದ ಘಟನೆಗಳನ್ನು ಈಗ ಮತ್ತೆ ತರಲಾಗುವುದಿಲ್ಲಘಿ. ಹಾಗೆಯೇ, ಮುಂದೆ ಬರಬಹುದಾದುದನ್ನು ತಡೆಯಲಾಗುವುದಿಲ್ಲ. ವಾಸ್ತವ ಹೀಗಿರುವಾಗ ನಾವೇಕೆ, ಈ ಕ್ಷಣದ ಸಂತೋಷವನ್ನು ಹಾಳು ಮಾಡಿಕೊಳ್ಳಬೇಕು ಹೇಳಿ? ನೀವು ಮಾಡುವ ಪ್ರತಿ ಕೆಲಸವನ್ನು ಸಂತೋಷದಿಂದ ಮಾಡಿ, ಪ್ರೀತಿಯಿಂದ ಮಾಡಿ. ಆಗ ಅದರಲ್ಲಿ ದೊರೆಯುವ ಆನಂದ ಪದಗಳಿಗೂ ನಿಲುಕದ್ದುಘಿ. ಅದನ್ನು ಅನುಭವಿಸಿಯೇ ಸವಿಯಬೇಕು. ನಾವು ಯಾವಾಗ, ಬದುಕಿನ ಪ್ರತಿ ಕ್ಷಣವನ್ನು ಅನುಭವಿಸುತ್ತೇವೆಯೋ ಆಗಲೇ ನೆಮ್ಮದಿ ದೊರೆಯುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿಘಿ.

 ಪ್ರತಿ ಕ್ಷಣ ಆನಂದಿಸುವುದು ಹೇಗೆ?
- ಸದ್ಯ ನೀವು ಮಾಡುವ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ. ಆ ನಿಟ್ಟಿನಲ್ಲಿ ಮನಸ್ಸನ್ನು ತರಬೇತುಗೊಳಿಸಿ.
- ಖಾಲಿಯಾಗಿ ಇರಬೇಡಿ. ಏನಾದರೂ ಮಾಡುತ್ತಲೇ ಇರಿ ಮತ್ತು ಆ ಪ್ರಕ್ರಿಯೆಯನ್ನು ಅನುಭವಿಸಿ.
- ಪ್ರತಿ ಕ್ಷಣವನ್ನು ವರ್ತಮಾನದಲ್ಲೇ ಅನುಭವಿಸುವ ಮತ್ತು ರಿಲಾಕ್ಸ್ ಆಗುವ ತಂತ್ರಗಳನ್ನು ಕರಗತ ಮಾಡಿಕೊಳ್ಳಿ
- ನಿಮ್ಮ ಸುತ್ತಲಿನ ಬಗ್ಗೆ ಗಮನವಿರಲಿ. ಅಂದರೆ, ದೃಶ್ಯಗಳು, ಧ್ವನಿ, ವಾಸನೆ, ವ್ಯಕ್ತಿಗಳು.. ಇತ್ಯಾದಿ.
- ಇತರರ ಮಾತುಗಳನ್ನು ಗಮನವಿಟ್ಟು ಕೇಳಿ. ಸಂಗೀತವನ್ನು ಆಲಿಸಿ. ಅಷ್ಟೇ ಯಾಕೆ, ವೌನವನ್ನೂ ಗಮನವಿಟ್ಟುಕೊಂಡೇ ಅನುಭವಿಸಿ.
- ನೀವು ತಿನ್ನುವ ಆಹಾರವನ್ನು ಸಂತೋಷವಾಗಿಯೇ ತಿನ್ನಿಘಿ. ಆಗ ಸಿಗುವ ಆನಂದವೇ ಬೇರೆ.


(ಈ ಲೇಖನ ಬೋಧಿವೃಕ್ಷದ ಮಾರ್ಚ್ 4ನೇ ತಾರಿಖಿನ ಸಂಚಿಕೆಯಲ್ಲಿ ಪ್ರಕಟವಾಗಿದೆ)

http://www.bodhivrukshaepaper.com/Details.aspx?id=977&boxid=16579717




ಸೋಮವಾರ, ಸೆಪ್ಟೆಂಬರ್ 11, 2017

ಹುಡುಗನೊಬ್ಬನ ಗಜಲ್‌ಗಳು: ಆ ಕಾಗದಲ್ಲಿದ್ದದ್ದು ಎರಡೇ ಪದ; ಕ್ಷಮಿಸಿ ಬಿಡು

- ಪ್ರದ್ಯುಮ್ನ
ಮಳೆಗಾಲದ ಈ ದಿನಗಳೇ ಹಾಗೆ. ಒಂಚೂರು ನೆನಪುಗಳನ್ನು ಹಸಿ ಹಸಿಯಾಗಿಟ್ಟು, ಮತ್ತೊಂದಿಷ್ಟನ್ನು ಶಾಶ್ವತವಾಗಿ ಶವಾಗಾರಕ್ಕೆ ತಳ್ಳುವ ಸಾಧನ. ಇಂದು ವ್ಯಾಪಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟ ದಿನ ಮಳೆ ಮಾಯ; ಮಾರನೇ ದಿನ ಭೋರ್ಗರೆಯುವ ವರ್ಷಧಾರೆ. ನಮ್ಮ್ಮಳಗಿನ ನೆನಪುಗಳು ಹಾಗೆಯೇ. ಅವು ಜೀವಗೊಳ್ಳಲು ಯಾವುದೇ ಸೂಚನೆಗಳಿಲ್ಲ; ಯಾವುದೋ ಒಂದು ಸಣ್ಣ ನೆಪ ಸಾಕು ಭಗ್ಗನೇ ಪ್ರಜ್ವಲಿಸಲು. ಅಂದು ಹಾಗೆಯೇ ಆಗಿತ್ತು. ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಬೆಳಗ್ಗೆ ಸಂಭವಿಸಬೇಕಾಗಿದ್ದ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯಲಿಲ್ಲ. ಅರ್ಥಾತ್ ಹಾಲು ಹಾಕುವವನು ಸರಿಯಾದ ಟೈಮ್‌ಗೆ ಬರಲಿಲ್ಲ. ಪೇಪರ್ ಹುಡುಗ ತೊಯ್ದ ತೊಪ್ಪೆಯಾದ ನಾಲ್ಕು ಪೇಪರ್‌ಗಳನ್ನು ರಸ್ತೆಯ ಆ ಬದಿಯಿಂದಲೇ ಇತ್ತ ಎಸೆದು ಪರಾರಿ... ಹೀಗೆ ಎಲ್ಲ ಕೆಲಸಗಳು!
ನೀರಿನಲ್ಲಿ ಅದ್ದಿ ತೆಗೆದಂತಿದ್ದ ಪತ್ರಿಕೆಯ ಒಂದೊಂದು ಪುಟವನ್ನು ಎಚ್ಚರಿಕೆಯಿಂದ ಬಿಡಿಸುತ್ತಿರುವಾಗಲೇ ಮೂಲೆಯೊಂದರಲ್ಲಿ ಪುಟ್ಟ ಸುದ್ದಿ ಕಣ್ಣಿಗೆ ಬಿತ್ತು; ಆತ್ಮಹತ್ಯೆ. ಇಂಥ ಸುದ್ದಿಯನ್ನು ನಾನೇನೂ ಮೊದಲ ಬಾರಿ ಓದುತ್ತಿರಲಿಲ್ಲ. ಆತ್ಮಹತ್ಯೆಗಳ ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ, ಈ ಸುದ್ದಿ ಮಾತ್ರ ನನ್ನೊಳಗೇ ಮಾಸದೆ, ಕದಲದೇ ಕುಳಿತ್ತಿದ್ದ ಆ ದುರಂತದ ಅನೇಕ ನೆನಪುಗಳನ್ನು ಬಡೆದೆಬ್ಬಿಸಿತು. ನಾನು ಪ್ರತಿಕ್ಷಣ ಮರೆಯಲು ಕಷ್ಟಪಡುವ ಯಾತನಾಮಯ ನೆನಪುಗಳವು.
****
ಅವಳಾದರೂ ಎಂಥವಳು? ಅವಳನ್ನೊಮ್ಮೆ ನೋಡಿದ ಬಳಿಕ ಮತ್ತೊಮ್ಮೆ ತಿರುಗಿ ನೋಡಲೇಬೇಕೆನ್ನುವ ರೂಪವತಿ. ಆಕೆಗೆ ತನ್ನ ರೂಪ, ಲಾವಣ್ಯದ ಬಗ್ಗೆ ತುಸು ಗರ್ವವೂ ಇತ್ತು. ಇಟ್ಸ್ ನ್ಯಾಚುರಲ್. ಆದರೆ, ಅವಳಲ್ಲಿದ್ದ ಧೈರ್ಯ ಮಾತ್ರ ಅದಮ್ಯ, ಅಚಲ, ಬಂಡೆಯಂಥದ್ದು. ಆ ಗುಣವೇ ನನ್ನನ್ನು ಆಕರ್ಷಿಸಿದ್ದು. ಕಾಲೇಜ್‌ಗೆ ಬರುವಾಗ ಬೀದಿ ಕಾಮಣ್ಣರು ತಿರುಗಿ ಬಿದ್ದಿದ್ದು ಆ ಪುಟ್ಟ ಪಟ್ಟಣದ ಪೂರ್ತಿ ದೊಡ್ಡ ಸುದ್ದಿಯಾಗಿತ್ತು. ಹಾಗಿತ್ತು ಅವಳ ಧೈರ್ಯ. ಕಾಲೇಜಿನಲ್ಲಿ ಅವಳನ್ನು ಕಂಡು ಬಹುತೇಕರೆಲ್ಲರೂ ಮಾರು ದೂರವೇ ಇರುತ್ತಿದ್ದರು. ನಾನೋ ಅವಳನ್ನು ನನಗರಿವಿಲ್ಲದಂತೆ ಹುಚ್ಚನಂತೆ ಪ್ರೀತಿಸುತ್ತಿದ್ದೆ. ಆದರೆ, ಹೇಳುವುದು ಹೇಗೆ? ಅದಕ್ಕೆ ಎಲ್ಲಿಂದ ತರಬೇಕು ಧೈರ್ಯ? ಆದರೆ, ಎಂಥ ಗಟ್ಟಿ ಹುಡುಗಿಯಾದರೂ ಅವಳೊಳಗೆ ಒಬ್ಬ ಮುಗ್ಧೆ ಇರುತ್ತಾಳೆ, ಕರುಣಾಮಯಿ ಇರುತ್ತಾಳೆ. ಯಾಕೆಂದರೆ, ಹೆಣ್ಣೆಂದರೆ ಹಾಗೆ ಅಲ್ಲವೇ? ಅವಳು ಸಹನೆಯ ಪ್ರತಿರೂಪ, ವಾತ್ಸಲ್ಯದ ಗಣಿ. ಪ್ರೀತಿ ತೋರಿದರೆ ತಿರುಗಿ ಅದೇ ಸಿಗುತ್ತದೆ ಎನ್ನುತ್ತಾರಲ್ಲ ಹಾಗೆ ಅವಳಿದ್ದಳು. ಅವಳು ಅಂದರೆ ಅವಳೇ. ಅವಳ ಹಾಗೆ ಮತ್ತಾರು ಇರಲಿಲ್ಲ. ಹಾಗಾಗಿ ಕಾಲೇಜ್‌ನಲ್ಲಿ ಅವಳಿಗೆ ಸ್ಟಾರ್‌ಗಿರಿ ತನ್ನಿಂದತಾನೇ ಒಲಿದು ಬಂದಿತ್ತು. ಆಕೆಯ ಕುಟುಂಬವೂ ಆ ಪಟ್ಟಣದಲ್ಲಿ
ಸ್ಥಿತಿವಂತವಾಗಿತ್ತು; ರೆಪ್ಯೂಟೆಡ್ ಫ್ಯಾಮಿಲಿ. ಆದರೆ, ನಾನು? ನನ್ನಲ್ಲೇ ನನಗೇ ಅನೇಕ ಪ್ರಶ್ನೆಗಳಿದ್ದವು; ಉತ್ತರ ದೊರೆಯುವುದು
ಯಾವ ಸಾಧ್ಯತೆಗಳಿರಲಿಲ್ಲ. ಕಾಲೇಜ್‌ಗೆ ಬರುವುದೇ ದೊಡ್ಡ ಸಾಹಸವಾಗಿರುವಾಗ ಇನ್ನು ಪ್ರೀತಿ, ಪ್ರೇಮಕ್ಕೆ ಎಲ್ಲಿಂದ ಬರಬೇಕು
ಧೈರ್ಯ? ಆದರೂ, ಈ ಹುಚ್ಚುಖೋಡಿ ಮನಸ್ಸು ಕೇಳಬೇಕಲ್ಲ. ಅದು ತನ್ನ ಹುಚ್ಚು ಜಗತ್ತಿನಲ್ಲೇ ಲಂಗು ಲಗಾಮಿಲ್ಲದೇ ಓಡುವ ಕುದುರೆ. ನನ್ನ ಕಲ್ಪನೆಯ ಲೋಕದಲ್ಲಿ ಈ ಕುದುರೆ ಕಟ್ಟಿ ಹಾಕುವ ಧೀಮಂತಿಕೆ ಆಕೆಗೂ ಇರಲಿಲ್ಲ. ಇರಲಾದರೂ ಹೇಗೆ ಸಾಧ್ಯ?
ಆದರೆ, ಅದೊಂದು ದಿನ, ಅಲ್ಲಲ್ಲ ಸುದಿನ ಅದು. ಭೂಮಿ-ಆಕಾಶ ಎಂದಾದರೂ ಒಂದಾದೀತೆ ಎಂದು ಭಾವಿಸಿದ್ದವನ ಭಾಗ್ಯದ ಬಾಗಿಲು ತೆರೆದ ದಿನ. ಅಂದು ಹಾಗೆ ಆಗಿತ್ತು. ಬೆಳಗಿನ ಜಾವದಿಂದಲೇ ಸುರಿಯುತ್ತಿದ್ದ ಮಳೆಗೆ ಕರುಣೆಯೇ ಇರಲಿಲ್ಲ. ಆಕಾಶ ತನ್ನೆಲ್ಲ ಸಿಟ್ಟು, ದುಃಖವನ್ನು ಈ ಕಣ್ಣೀರ ಮೂಲಕ ಹಾಕುತ್ತಿದೆ ಎನ್ನುವಂತಿತ್ತು. ಅದು ಎಂಥ ಮಳೆ, ಭೋರ್ಗರೆಯುವ ಜಲಪಾತದಡಿ ಶಬ್ದ ಕೇಳಿಸುತ್ತದಲ್ಲವೇ, ಹಾಗಿತ್ತು ಮಳೆಯು ಭೂಮಿಗೆ ಅಪ್ಪಳಿಸುವಾಗ ಹೊರಡುವ ಸೌಂಡು. ಅಂದರೆ ನೀವೇ ಊಹಿಸಿ. ಬಹುಶಃ ಅಷ್ಟೊಂದು ಮಳೆಯನ್ನು ಈ ಪಟ್ಟಣ ಹಿಂದೆಂದೂ ಕಂಡಿರಲಿಲ್ಲ. ಮಳೆ ತುಸುವೇ ಬಿಡುವು ಕೊಟ್ಟಿದ್ದ  ಸಮಯದಲ್ಲಿ  ನಾನು ನನ್ನ ತಡಕ್ಲಾಸ್ ಸೈಕಲ್ ಏರಿ ಕಾಲೇಜ್‌ನತ್ತ ಮುಖ ಮಾಡಿದ್ದೆ. ಇನ್ನೇನೂ ಕಾಲೇಜ್ ಅರ್ಧ ಕಿಲೋ ಮೀಟರ್ ಇರಬೇಕು. ಅವಳು ತನ್ನ ಸ್ಕೂಟಿ ತಳ್ಳುತ್ತಾ  ಏದುಸಿರು  ಬಿಡುತ್ತಾ ಹೊರಟಿದ್ದಳು. ನಾನು ಅವಳನ್ನೊಮ್ಮೆ ನೋಡಿ ಮುಗಳ್ನಕ್ಕೆ. ಅವಳ ಕಣ್ಣಿನಲ್ಲಿ ನೆರವಿನ ಬೇಡಿಕೆ; ಅದನ್ನರಿತೇ ಅವಳತ್ತ ಧಾವಿಸಿದೆ. ಇಲ್ಲದಿದ್ದರೆ ಆಕೆಯತ್ತ ಹೋಗುವ ಧೈರ್ಯ ಯಾವ ಹುಡುಗನಿಗಿತ್ತು ಹೇಳಿ? ಅವಳಿಗೆ ಗೊತ್ತಿತ್ತು ಕಾಲೇಜ್ ಬಿಡುವಿನ ವೇಳೆ ನಾನು ಮೋಟಾರ್ ಸೈಕಲ್ ರಿಪೇರಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದದ್ದು. ಆಕೆಯ ಸ್ಕೂಟಿ ಪಕ್ಕಕ್ಕೆ ಹಚ್ಚಿ ಒಂದಿಷ್ಟು ಆ ಕಡೆ, ಈ ಕಡೆ ನೋಡಿದೆ, ಪ್ಲಗ್ ಕ್ಲೀನ್ ಮಾಡಿ ಹಾಕಿದ್ದೇ ತಡ ಸ್ಕೂಟಿ ತನ್ನ ಎಂದಿನ ಲಯಕ್ಕೆ ಮರಳಿತ್ತು. ಅವಳ ಮುಖದಲ್ಲಿ ಖುಷಿಯ ಹೊನಲಿತ್ತು. ಸಣ್ಣಗೆ ಹನಿಯುತ್ತಿದ್ದ ಮಳೆಗೆ ಆಕೆಯ ಮುಖ ತುಂಬ ಮಳೆ ಹನಿಗಳ ಮುತ್ತಗಳಿದ್ದವು!
ನಾನು ಇನ್ನೇನು ಸೈಕಲ್ ಏರಬೇಕನ್ನುವಷ್ಟರಲ್ಲಿ. ‘‘ನಂಗೆ ಗೊತ್ತು. ನೀನು ನನ್ನ ಇಷ್ಟಪಡಿತ್ತಿದ್ದೀಯಾ,’’ ಎಂದವಳೇ ಸ್ಕೂಟಿಯ ಕಿವಿ ಹಿಂಡಿತ್ತಾ, ಮುಗುಳು ನಗೆ ಬೀರಿ ಹೊರಟೇ ಹೋದಳು. ಇತ್ತ ಮಳೆ ಕರುಣೆ ಇಲ್ಲದಂತೆ ಭೋರ್ಗರೆಯಲಾರಂಭಿಸಿತು ಮತ್ತೆ. ಅಲ್ಲಿಗೆ ಎಲ್ಲ ಖಾತ್ರಿಯಾಗಿತ್ತು. ಅವಳ್ಯಾಕೆ ನನ್ನನ್ನು ಇಷ್ಟಪಡುತ್ತಿದ್ದಳು ಎನ್ನುವುದು ಇಂದಿಗೂ ನನಗೆ ಗೊತ್ತಿಲ್ಲ. ಅಂದಿನ ಆ ನಮ್ಮ ಭೇಟಿ ಮುಂದೆ ದಿನವೂ ನಮ್ಮಿಬ್ಬರ ಸ್ನೇಹ ಮತ್ತೊಂದು ಹಂತಕ್ಕೆ ತಲುಪಿ, ಪ್ರೀತಿಯ ಹಡಗಿನಲ್ಲಿ ಪಯಣಿಸಲು ದಾರಿ ಮಾಡಿಕೊಟ್ಟಿತ್ತು. ಅವಳ ಜತೆ ಕಳೆದ ಅಷ್ಟೂ ಕ್ಷಣಗಳು ನನ್ನ ಪಾಲಿನ ಅಮೂಲ್ಯ ರತ್ನಗಳು. ಅವುಗಳಿಗೆ ಬೆಲೆಯೇ ಕಟ್ಟಲಾಗದು.
ನಮ್ಮ ಎಂದಿನ ಭೇಟಿಗಳಲ್ಲಿ ಗೊತ್ತಾಗಿದ್ದು ಏನಂದರೆ; ಅವಳು ತನ್ನ ತಾಯಿಯನ್ನು ಬೆಟ್ಟದಷ್ಟು ಪ್ರೀತಿಸುತ್ತಿದ್ದಳು. ಇನ್‌ಫ್ಯಾಕ್ಟ್, ನನ್ನನ್ನು ಪ್ರೀತಿಸುವುದುಕ್ಕಿಂತಲೂ ಹೆಚ್ಚು. ತಾಯಿಯೇ ಆಕೆಗೆ ಸ್ನೇಹಿತೆ, ಗುರು... ಎಲ್ಲವೂ ಆಗಿದ್ದಳು. ಅಷ್ಟೊಂದು ಗಟ್ಟಿಗತ್ತಿಯಾಗಲು ತಾಯಿಯೇ ಕಾರಣ ಎನ್ನುತ್ತಿದ್ದವಳು, ಆಕೆಯನ್ನು ಯಾವಾಗ ಬೇಕಾದರೂ ನಾನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇನೆ ಎಂದು ಕಣ್ಣೀರು ಹಾಕುತ್ತಿದ್ದಳು. ಅವಳು ಇಲ್ಲದಿದ್ದರೆ ತನಗೇ ಬದುಕೇ ಇಲ್ಲ. ನೀನು ನನ್ನ ತಾಯಿಯೇ ಆಗಬೇಕು ಎನ್ನುತ್ತಿದ್ದುದ್ದನ್ನು ನೋಡಿದರೆ, ಇವಳೇನಾ ಕಾಲೇಜಿನಲ್ಲಿ ನಾನು ನೋಡಿದ ಗಟ್ಟಿಗತ್ತಿ ಎಂಬ ಅನುಮಾನ ಬರುತ್ತಿತ್ತು. ಆಂತರ್ಯದಲ್ಲಿ ಅಷ್ಟೊಂದು ಮೃದುವಾಗಿದ್ದಳು.
ಆಕೆ, ಯಾವ ಕ್ಷಣ ತನ್ನ ಜೀವನದಲ್ಲಿ ಬರಬಾರದು ಎಂದು ಹಗಲಿರುವ ಪ್ರಾರ್ಥಿಸುತ್ತಿದ್ದಳು ಆ ಕ್ಷಣ ಬಂದು ಬಿಟ್ಟಿತು. ಇತಿಹಾಸದ ಮೇಷ್ಟ್ರು ತಮ್ಮ ಎಂದಿನ ಕಥನ ಶೈಲಿಯಲ್ಲಿ ಪಾಠ ಮಾಡುತ್ತಿರುವಾಗಲೇ ಅಟೆಂಡರ್ ಬಂದು ಆಕೆಯನ್ನು ಹೊರ ಕರೆದು ತಾಯಿ ಸತ್ತ ಸುದ್ದಿ ಮುಟ್ಟಿಸಿದ್ದ. ಆಕೆಯ ಕಣ್ಣೀರು ಕಂಡೆ ನನಗೆಲ್ಲವೂ ಅರ್ಥವಾಗಿತ್ತು. ಆಕೆಯ ಹಿಂದೆ ನಾನು ಎದ್ದು ಹೊರಟೆ. ಅವಳ ಮುಖ ನೋಡುವ ಧೈರ್ಯ ನನ್ನಲ್ಲಿರಲಿಲ್ಲ. ಕಣ್ಣೀರು ಸುರಿಯುತ್ತಲೇ ಇತ್ತು. ಅಯ್ಯೋ ದೇವರೇ... ಆಕೆಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡೆಂದು ಕೇಳಿಕೊಳ್ಳುವುದನ್ನು ಬಿಟ್ಟರೆ ಆಕೆಯನ್ನು ಸಂತೈಸುವ ದಾರಿ ನನ್ನ ಬಳಿ ಇರಲಿಲ್ಲ.
ಎಲ್ಲವು ಮುಗಿದು ಮತ್ತೆ ಕಾಲೇಜ್‌ಗೆ ಬಂದಾಗ ಆಕೆ ಮೊದಲಿನಂತಿರಲಿಲ್ಲ. ಆಕೆಯ ಕಣ್ಣಲ್ಲಿ ಹೊಳಪು ಮಾಸಿತ್ತು; ಧಾಡಸಿತನದ ಕುರುಹುಗಳು ಮಾಯವಾಗಿದ್ದವು. ರೂಪವತಿಯಾದ ಮುಖವೀಗ ಕಳಾಹೀನವಾಗಿತ್ತು. ತಾಯಿ ಅಗಲಿಕೆ ಆಕೆಯನ್ನು ಹೈರಾಣಾಗಿಸಿತ್ತು. ನನ್ನ ಮಾತುಗಳಿಂದ ಒಂದಿಷ್ಟು ಆಹ್ಲಾದ ತಂದುಕೊಂಡುವಳಂತೆ ಕಾಣುತ್ತಿದ್ದಳಾದರೂ ಮತ್ತೆ ಅದೇ ದುಃಖದ ಮಡುವಿನಲ್ಲೇ ಇರುತ್ತಿದ್ದಳು. ಈಕೆಯನ್ನು ಮೊದಲಿನ ಗಟ್ಟಿಗತ್ತಿ ಹುಡುಗಿಯನ್ನಾಗಿ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ ಒಂದಿಷ್ಟು ದಿನಗಳು ಉರುಳಿದವು.
ಅದೊಂದು ದಿನ. ನಾನು ಕನಸು ಮನಸ್ಸಿನಲ್ಲಿ ಎಣಿಸಿರದ ಸುದ್ದಿಯೊಂದು ಅಪ್ಪಳಿಸಿತು. ಆಕೆಯ ಆತ್ಮಹತ್ಯೆಯ ಸುದ್ದಿ ಕೇಳಿದಾಕ್ಷಣ ನಾನು ನಿಂತ ನೆಲ ಕಂಪಿಸಿದಂತಾಯಿತು. ಏನಾಯಿತು ಎನ್ನುವಷ್ಟರಲ್ಲಿ ನಾನು ಪ್ರಜ್ಞೆಯ ಪರಿಧಿ ದಾಟಿ ಹೋಗಿದ್ದೆ; ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಪಕ್ಕದಲ್ಲಿದ್ದ ಸ್ನೇಹಿತ ನನಗೆ ಪ್ರಜ್ಞೆ ಬಂದಿದ್ದು ನೋಡಿ ಖುಷಿಯಾಗಿದ್ದ. ‘‘ಮೂರು ದಿನ ಆಯ್ತು ಕಣೋ ಆಸ್ಪತ್ರೆಯಲ್ಲಿದ್ದೀಯಾ,’’ ಎಂದ. ನಾನು, ‘‘ಅವಳು....’’ ಎನ್ನುವಷ್ಟರಲ್ಲಿ ತನ್ನ ಜೇಬಿನಲ್ಲಿದ್ದ ಮಡಚಿದ ಕಾಗದವನ್ನು ಕೊಟ್ಟ. ಅದರಲ್ಲಿದ್ದದ್ದು ಎರಡೇ ಪದ; ಕ್ಷಮಿಸಿ ಬಿಡು.
****
ಅಂಥ ಧೈರ್ಯವಂತೆ, ಎಂಥ ಸನ್ನಿವೇಶವನ್ನು ಎದುರಿಸುವಂಥ ಛಾತಿ ಇದ್ದ ಹುಡುಗಿ ಆಂತರ್ಯದಲ್ಲಿ ಇಷ್ಟೊಂದು ದುರ್ಬಲಳಾಗಿದ್ದಳೇ? ಈ ಪ್ರಶ್ನೆಗೆ ಅಂದಿನಿಂದ ಇಂದಿಗೂ
ಉತ್ತರ ಹುಡುಕುತ್ತಲೇ ಇದ್ದೇನೆ. ಯಾಕೆಂದರೆ, ಆಕೆಯನ್ನು ನೋಡಿದ ಯಾರೇ ಅವಳು ಹೀಗೆ ಮಾಡಬಹುದು ಎಂದು ಊಹಿಸಲು ಸಾಧ್ಯವಿರಲಿಲ್ಲ; ಹಾಗಿದ್ದಳು ನನ್ನ ಹುಡುಗಿ. ಹೀಗೆ ದುರಂತದ ನೆನಪುಗಳು ಮಳೆಯಲ್ಲಿ ಮತ್ತೆ ಜೀವ ಪಡೆಯುತ್ತಿರುವಾಗಲೇ ಆಕೆ ಕೊಟ್ಟ ಹೋದ ಕಾಗದವನ್ನು ಮತ್ತೊಮ್ಮೆ ಬಿಚ್ಚಿ ನೋಡಿದೆ. ಅವಳ ನಗುವಿನ ಮುಖ ಮಿಂಚಿ ಮರೆಯಾಯ್ತು. ಹೊರಗಡೆ ಮತ್ತೆ ಮಳೆ ಭೋರ್ಗರೆಯಾರಂಭಿಸಿತು. ನನಗೆ ಗೊತ್ತಿಲ್ಲದಂತೆ ಕಣ್ಣ ಹನಿಯೊಂದು ಆ ಕಾಗದ ಮೇಲೆ ಬಿದ್ದು ಇಂಗಿ ಹೋಯಿತು.

(ಈ ಲೇಖನ ವಿಜಯ ಕರ್ನಾಟಕದ ಸೆಪ್ಟೆಂಬರ್ 11, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಸೋಮವಾರ, ಜುಲೈ 31, 2017

ಹುಡುಗನೊಬ್ಬನ ಗಜಲ್‌ಗಳು: ನಾವು ಸಾಯಲ್ಲ, ಬದುಕುತ್ತೇವೆ ಎನ್ನುವ ಕೂಗು ಗುಮ್ಮಟದಲ್ಲಿ ಪ್ರತಿಧ್ವನಿಸಿತು....

- ಪ್ರದ್ಯುಮ್ನ
ವಿಶ್ವ ವಿಖ್ಯಾತ ಗೋಲ್‌ಗುಂಬಜ್‌ನ ಅಭಿಮುಖವಾಗಿ ಮುಖ್ಯ ರಸ್ತೆಯ ಆಚೆ ಇದ್ದ ಈ ಲಾಡ್ಜ್‌ನ ಕೋಣೆ ತುಂಬ ವೌನ. ಕಿಟಕಿಯಾಚೆ ನೋಡಿದರೆ ಗಂಭೀರತೆಯನ್ನೇ ಹೊತ್ತು ನಿಂತಂತೆ ಭಾಸವಾಗುತ್ತಿದ್ದ ಗೋಲ್‌ಗುಂಬಜ್‌ನ ಬೃಹತ್ ಗುಮ್ಮಟ ಮಾತ್ರ ಕಣ್ಣಳತೆಯಲ್ಲಿತ್ತು. ಆ ಗುಮ್ಮಟದ ಪ್ಯಾಸೇಜ್‌ನಲ್ಲಿ ಓಡಾಡುತ್ತಿರುವ ಪ್ರವಾಸಿಗರು ಚಿಕ್ಕವರಂತೆ ಕಾಣುತ್ತಿದ್ದರು. ಇದನ್ನೆಲ್ಲ ನೋಡುತ್ತಿದ್ದ ಅವರಿಬ್ಬರ ಮುಖದಲ್ಲೀಗ ಯಾವುದೇ ಭಾವನೆಗಳಿಲ್ಲ. ನಿರ್ಭಾವುಕ ಮನಸ್ಸು. ಎಲ್ಲವೂ ಮೊದಲೇ ನಿರ್ಧರಿಸಿಕೊಂಡಂತಿತ್ತು. ತಾವೇನು ಮಾಡಲು ಹೊರಟಿದ್ದೇವೆ ಎಂಬ ಸ್ಪಷ್ಟ ಅರಿವು ಅವರಲ್ಲಿತ್ತು. ಹೊರಗಡೆ ಧಾವಂತ, ಬಸ್‌ಗಳ ಓಡಾಟ, ಆಟೋಗಳ ಹಾರ್ನ್, ಜನರ ಕೂಗಾಟಗಳೆಲ್ಲವೂ ಇವರ ಕಿವಿಗೆ ಬಿದ್ದರೂ, ಮನಸ್ಸಿನೊಳಗೆ ಹರಳುಗಟ್ಟುತ್ತಿದ್ದ ಅಂತಿಮ ಕ್ಷಣದ ಭಾವನೆಗಳಿಗೇನೂ ಭಂಗ ತರುತ್ತಿರಲಿಲ್ಲ. ಇಬ್ಬರು ಒಬ್ಬರ ಮುಖವನ್ನೊಮ್ಮೆ ನೋಡುತ್ತಾ, ಗುಮ್ಮಟದತ್ತ ದೃಷ್ಟಿ ಹಾಯಿಸುತ್ತಾ ನಿಂತಿದ್ದರು ಕಿಟಕಿಯ ಪಕ್ಕದಲ್ಲಿ.

ತಾನು ಸತ್ತ ಮೇಲೆ ತನ್ನ ಗೋರಿ ವೈಭವಯುತವಾಗಿರಬೇಕು ಎಂಬ ಮಹದಾಸೆಯಿಂದ ಬಿಜಾಪುರದ ಸುಲ್ತಾನ್ ಆದಿಲ್ ಶಾ ಬದುಕಿರುವಾಗಲೇ ಗೋಲ್ ಗುಂಬಜ್ ನಿರ್ಮಾಣ ಆರಂಭಿಸಿದ್ದ. ಆದರೆ, ಅದು ಪೂರ್ತಿಯಾಗುವ ಮೊದಲೇ ಅಸು ನೀಗಿದ. ಆತ, ಆತನ ಇಬ್ಬರು ಪತ್ನಿಯರಾದ ತಾಜ್ ಜಹಾನ್ ಬೇಗಮ್, ಅರೋಸ್ ಬೀಬಿ ಮತ್ತು ಪ್ರೇಯಸಿ ರಂಭಾ, ಮಕ್ಕಳು, ಮೊಮ್ಮಕ್ಕಳ ಗೋರಿಗಳು ಅದರಲ್ಲಿವೆ ಎಂಬ ಇತಿಹಾಸದ ಕಲ್ಪನೆ ಇಬ್ಬರಿಗೂ ಇತ್ತು. ಆದಿಲ್ ಶಾ ಮತ್ತು ರಂಭಾ ನಡುವಿನ ಪ್ರೇಮದ ಬಗ್ಗೆ ಅಷ್ಟೇನೂ ತಿಳಿವಳಿಕೆ ಇಲ್ಲದಿದ್ದರೂ, ಆಕೆಯೊಬ್ಬಳು ಅಪ್ರತಿಮ ಸುಂದರಿಯಾಗಿದ್ದಳು. ನೃತ್ಯಗಾತಿಯಾಗಿದ್ದ ಆಕೆಯನ್ನು ಆದಿಲ್ ಶಾ ತುಂಬ ಪ್ರೀತಿಸುತ್ತಿದ್ದ ಎಂಬುದನ್ನು ಗೂಗಲಿಂಗ್ ಮಾಡಿ ತಿಳಿದುಕೊಂಡಿದ್ದರು. ಆಗ್ರಾದಲ್ಲಿರುವ ತಾಜ್ ಮಹಲ್ ಪ್ರೇಮ ಸ್ಮಾರಕವಾಗಿ ವಿಶ್ವವಿಖ್ಯಾತವಾಗಿರುವಂತೆ ಈ ಗುಂಬಜ್ ಯಾಕೆ ಪ್ರೇಮ ಸ್ಮಾರಕವಾಗಲಿಲ್ಲ, ಪ್ರೇಮಿಗಳಿಗೊಂದು ವೇದಿಕೆಯಾಗಲಿಲ್ಲ ಎಂಬ ಪ್ರಶ್ನೆಗಳು ಆತನಲ್ಲಿ ಮೂಡುತ್ತಿದ್ದವು. ಹೈಸ್ಕೂಲ್‌ನಲ್ಲಿ ಓದಿದ್ದು ಬಿಟ್ಟರೆ ಇತಿಹಾಸ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ ಆತನಿಗೆ. ಆ ಲಾಡ್ಜ್‌ನ ಆ ಕ್ಷಣದಲ್ಲಿ ಆತನಿಗೆ ಅನಿಸಿದ್ದು; ನಮ್ಮ ಪ್ರೇಮದಂತೆ ಅವರಿಬ್ಬರದ್ದೂ ಎಲ್ಲರಿಂದಲೂ ನಿಕೃಷ್ಟವಾಗಿರಬೇಕು ಇಲ್ಲವೇ ಬೇಕಂತಲೇ ಅವರ ಪ್ರೇಮ ಕಹಾನಿಯನ್ನು ಇತಿಹಾಸಕಾರರು ಸ್ಪಷ್ಟವಾಗಿ ದಾಖಲಿಸಿರಲಿಕ್ಕಿಲ್ಲ... ಹೀಗೆ ನಾನಾ ಯೋಚನೆಗಳಲ್ಲಿ ಮುಳುಗಿದ್ದ ಆತನಿಗೆ, ‘‘ಏನ್ ಯೋಚ್ನೆ ಮಾಡುತ್ತಿದ್ದೀಯಾ?’’ ಎಂದು ಅವನ ಯೋಚನಾಸರಣಿಗೆ ಬ್ರೇಕ್ ಹಾಕಿದಳು. ‘‘ಏನಿಲ್ಲ, ಆದಿಲ್ ಶಾ ಮತ್ತು ರಂಭಾ ಪ್ರೇಮದ ಬಗ್ಗೆ,’’ ಅಂದ ತಲೆ ತಗ್ಗಿಸಿಕೊಂಡೇ. ‘‘ನಮ್ಮ ಪ್ರೀತಿ ಹೇಗೆ ನಮ್ಮವರಿಗೆ ಅನಿಷ್ಟವಾಗಿ ಕಂಡಿದೆಯೋ, ತೀರಾ ಇಂಪಾರ್ಟೆನ್ಸ್ ಇಲ್ಲವೋ ಹಾಗೆ ಇರಬೇಕು ಅವರದ್ದು,’’ ಕಿಟಕಿಯಿಂದಲೇ ಗುಮ್ಮಟವನ್ನು ದಿಟ್ಟಿಸುತ್ತಾ ಆಕೆ ಹೇಳಿದಾಗ, ಅರೇ... ಇವಳು ನನ್ನಂತೆ ಯೋಚಿಸುತ್ತಿದ್ದಾಳಲ್ಲ ಎಂದು ನಸು ನಕ್ಕ. ಅವರಿಬ್ಬರು ಮತ್ತೆ ಅದೇ ಗುಮ್ಮಟದತ್ತ ಚಿತ್ತ ಹಾಯಿಸಿದರು. ಸಂಜೆ ಆಗೋವರೆಗೂ ಗುಮ್ಮಟವನ್ನು ದಿಟ್ಟಿಸಿ ನೋಡುತ್ತ ಇರಬೇಕೆಂದು ನಿರ್ಧರಿಸಿದಂತೆ ಆ ದೃಷ್ಟಿ.
ಬೆಂಗಳೂರಿನಲ್ಲಿ ಪ್ರತಿಷ್ಠತ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ ಅವರಿಬ್ಬರ ಮಧ್ಯೆ ಪ್ರೇಮಾಂಕುರ ಹೇಗೆ ಆಯಿತು ಎಂಬುದಕ್ಕೆ ಉತ್ತರವಿಲ್ಲ. ಅವನು ನಾರ್ಥಿ. ಆದರೆ, ಬೆಂಗಳೂರಿಗೆ ಬಂದು ಐದು ವರ್ಷದಲ್ಲಿ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದ. ಅವಳು ಮೈಸೂರಿನವಳು. ಇಬ್ಬರ ಮಧ್ಯೆ ಇರುವ ಓದುವ ಹವ್ಯಾಸ ಅವರನ್ನು ಒಂದುಗೂಡಿಸಿತ್ತು. ತಾವು ಓದಿದ ಪುಸ್ತಕಗಳ ಬಗ್ಗೆ ವಿಮರ್ಶೆ ಮಾಡಿಕೊಳ್ಳುತ್ತಾ, ಕಾಫಿ ಡೇನಲ್ಲಿ ತಾಸುಗಟ್ಟಲೇ ಕಳೆಯುವುದು ಇಬ್ಬರಿಗೂ ಇಷ್ಟ. ಇಷ್ಟಾನಿಷ್ಟಗಳು ಒಂದಾದ ಮೇಲೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಹುಡುಗ ಉತ್ತರ ಭಾರತೀಯ ಎಂಬ ಕಾರಣವೇ ಅವಳ ಮದುವೆಗೆ ದೊಡ್ಡ ಅಡ್ಡಿಯಾಯಿತು. ಇಂಥದೊಂದು ‘ಕಾರಣ’ ತಮ್ಮಿಬ್ಬರನ್ನು ದೂರ ಮಾಡಬಹುದು ಎಂದೂ ಯೋಚಿಸಿರಲಿಲ್ಲ. ಆದರೆ, ಅದೇ ಸತ್ಯ ಎಂದು ಗೊತ್ತಾದ ಮೇಲೆ, ಬೇರೆ ಬೇರೆಯಾಗಿ ಬದುಕುವುದಕ್ಕಿಂತ ಸಾಯುವುದೇ ಲೇಸೆಂದು ದೂರದ ಬಿಜಾಪುರಕ್ಕೆ ಬಂದು ತಮ್ಮ ಅಂತ್ಯದ ಕ್ಷಣಗಳನ್ನು ಲೆಕ್ಕ ಹಾಕುತ್ತಿದ್ದರು.
ಬಿಜಾಪುರದ ಅಷ್ಟು ಸ್ಥಳಗಳನ್ನೂ ಒಂದು ಇಡೀ ದಿನ ನೋಡಿದ್ದ ಅವರು ಗೋಲ್ ಗುಂಬಜ್ ಮಾತ್ರ ನೋಡಲು ಹೋಗಿರಲಿಲ್ಲ. ಲಾಡ್ಜ್‌ನ ಕಿಟಕಿಯಿಂದಲೇ ಆ ಗುಮ್ಮಟವನ್ನು ತಮ್ಮ ಕಣ್ಣು ತುಂಬಿಕೊಳ್ಳುತ್ತಿದ್ದರು.
ಕೋಣೆಯ ಬಾಗಿಲಿಂದ ಕಟ.. ಕಟ.. ಕಟ.. ಎಂಬ ಶಬ್ಧ ಬಂದಾಗಲೇ ತಾವು ಚಹಾಗೆ ಆರ್ಡರ್ ಮಾಡಿದ್ದು ನೆನಪಾಗಿ, ಬಾಗಿಲು ತರೆದ ಆತ. ಎದುರಿಗಿದ್ದ ಯುವಕನ ಮುಖದಲ್ಲಿ ಮಂದಹಾಸ ನರ್ತಿಸುತ್ತಿತ್ತು. ‘‘ಸರ್, ನಿಮ್ಮ ಚಹಾ..’’ ಎನ್ನುತ್ತಾ ಒಳ ಬಂದು ಟೀಫಾಯಿ ಮೇಲಿಟ್ಟು ನಿಂತ. ಅವರಿಬ್ಬರ ಮುಖವನ್ನೊಮ್ಮೆ ನೋಡಿದ, ಹೋಗು ನೀನು ಇನ್ನು ಎಂಬ ಸೂಚನೆ ಅದರಲ್ಲಿತ್ತು. ‘‘ಸರ್... ತಪ್ಪು ತಿಳಿದುಕೊಳ್ಳುವುದಿಲ್ಲ ಎಂದರೆ ಒಂದು ಮಾತು ಹೇಳಲಾ,’’ ಎಂದ. ಯಾರ ಜತೆ ಮಾತನಾಡಲೂ ಮನಸ್ಸಿಲ್ಲದ ಅವರು ಇವನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರ ಉತ್ತರಕ್ಕೂ ಕಾಯದೆ, ಮಾತು ಮುಂದುವರಿಸಿದ ಆ ಯುವಕ, ‘‘ಸರ್... ನೀವು ಇಲ್ಲಿಗೆ ಬಂದಾಗಿನಿಂದ ನಿಮ್ಮನ್ನು ಗಮನಿಸುತ್ತಿದ್ದೇನೆ. ನಿಮ್ಮಿಬ್ಬರ ನಿರ್ಧಾರ ಏನೆಂದು ನಾನು, ಈ ಮೂರು ವರ್ಷಗಳ ಹಿಂದೆ ನನಗಾದ ಅನುಭವದಿಂದಲೇ ಗ್ರಹಿಸಬಲ್ಲೆ,’’ ಎಂದು ಸುಮ್ಮನಾದ. ಅವರೇನೂ ಇವನ ಮಾತಿಗೆ ಅಂಥ ಆಸಕ್ತಿ ತೋರಿಸಲಿಲ್ಲ. ಆದರೂ, ಮತ್ತೆ ಮುಂದುವರಿದ ಆ ಯುವಕ, ‘‘ನಿಮಗೆ ಇಷ್ಟ ಇಲ್ಲದಿದ್ದರೂ ನನ್ನದೊಂದು ಕತೆ ಹೇಳ್ತಿನಿ ಕೇಳಿ; ನಾನು ಮತ್ತು ನನ್ನ ಗೆಳತಿ ಇಬ್ಬರು ನಿಷ್ಕಲ್ಮಷ ಪ್ರೀತಿಯ ತೂಗುಯ್ಯಲೆಯಲ್ಲಿ ಜೀಕುತ್ತಿದ್ದೆವು. ನಮಗೆ ನಮ್ಮದೇ ಪ್ರಪಂಚ. ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದೆವು. ಅವಳು ನನಗಿಂತಲೂ ಬುದ್ಧಿವಂತೆ, ಗುಣವಂತೆ. ನಮ್ಮ ಪ್ರೀತಿಯಲ್ಲಿ ಲವಲೇಶವೂ ಕಲ್ಮಶವಿರಲಿಲ್ಲ. ಆದರೆ, ಗೊತ್ತಲ್ಲ.. ಈ ಜಗತ್ತು ಪ್ರೀತಿಸುವವರನ್ನು ಹೇಗೆ ನೋಡುತ್ತದೆ ಎಂದು. ನಮ್ಮಿಬ್ಬರ ಪ್ರೀತಿಗೆ ಅಡ್ಡವಾಗಿದ್ದು ಆಕೆಯ ಅಪ್ಪನ ಶ್ರೀಮಂತಿಕೆ. ಆದರೆ, ಅವಳು ಅಂಥ ಶ್ರೀಮಂತಿಕೆಯನ್ನು ಧಿಕ್ಕರಿಸಿ ನನ್ನೊಂದಿಗೆ ಬರಲು ಸಿದ್ಧಳಿದ್ದಳು. ನನಗೆ ಧೈರ್ಯ ಇರಲಿಲ್ಲ. ನಾವಿಬ್ಬರು ನೀವು ಈಗ  ಕೈಗೊಂಡಿರುವ ನಿರ್ಧಾರವನ್ನೇ ಅಂದು ಮಾಡಿ, ಆ ಗುಂಬಜ್ ಸ್ವಲ್ಪ ದೂರದಲ್ಲಿ ಇನ್ನೊಂದು ಗುಮ್ಮಟವಿದೆ. ಅಲ್ಲಿಗೆ ಯಾರೂ ಬರಲ್ಲ. ಆ ಗುಮ್ಮಟ ಏರಿ ಮೇಲಿಂದ ಹಾರಿದೆವು. ಆದರೆ, ನನ್ನ ನಸೀಬು ಚೆನ್ನಾಗಿರಲಿಲ್ಲ; ನಾನು ಬದುಕಿದೆ. ಅವಳು ನನ್ನ ಪ್ರೀತಿಗಾಗಿ ಜೀವ ಕೊಟ್ಟಳು. ಬಿದ್ದಿದ್ದಷ್ಟೆ ಗೊತ್ತಿದ್ದ ನನಗೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಆಗಲೇ ನಿರ್ಧರಿಸಿದ್ದೆ ಸಾವಿಗಿಂತ ಬದುಕು ಮುಖ್ಯ. ಆಕೆಯ ಮಾತು ಕೇಳಿದ್ದರೆ ಎಲ್ಲಿಗಾದರೂ ಹೋಗಿ ಬದುಕಬಹುದಿತ್ತು. ನನ್ನ ಹೇಡಿತನದಿಂದ ಆಕೆ ಪ್ರಾಣಬಿಡಬೇಕಾಯಿತು. ಪ್ರೀತಿ ಮಾಡಿದವರಿಗೆ ಸಾವೇ ಪರಿಹಾರವಲ್ಲ. ಅಂದು ಊರು ಬಿಟ್ಟವನು ಇನ್ನೂ ಊರಿಗೆ ಹೋಗಿಲ್ಲ. ಈ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಾ, ‘ನಿಮ್ಮ ಹಾಗೆ’ ಬರುವವರಿಗೆ ನನ್ನ ಕತೆಯನ್ನು ಹೇಳುತ್ತೇನೆ. ಗೋರಿಗಳ ಮೇಲೆ ಎದ್ದಿರುವ ಆ ಗುಮ್ಮಟವಿದೆಯಲ್ಲ ಅದು ನಮ್ಮ ಬದುಕಿಗೆ ಸ್ಫೂರ್ತಿಯಾಗಬೇಕೆ ಹೊರತು ಸಾವಿಗಲ್ಲ,’’ ಎನ್ನುತ್ತಾ ಅವರಿಬ್ಬರ ಮುಖವನ್ನೊಮ್ಮೆ ನೋಡಿ ತನ್ನದೆ ಆದ ಮಂದಹಾಸ ಬೀರಿ, ಹೊರಟು ಹೋದ.
ಅವರಿಬ್ಬರ ಮುಖದಲ್ಲೀಗ ಪಶ್ಚಾತ್ತಾಪದ ಗೆರೆಗಳು ಕಾಣಲಾರಂಭಿಸಿದ್ದವು. ಆತ ಹೇಳಿದ ಕತೆ ಅವರಿಬ್ಬರಲ್ಲೂ ಹೊಸ ಚೈತನ್ಯ ಉಂಟು ಮಾಡಿತ್ತು. ಸಾವಿಗಿಂತ ಬದುಕು ಶ್ರೇಷ್ಠ. ಪ್ರೀತಿಯ ವೈಫಲ್ಯಕ್ಕೆ ಸಾವು ಅಂತ್ಯವಲ್ಲ ಎಂಬ ನಿರ್ಧಾರಕ್ಕೆ ಬಂದವರೇ ಗೋಲ್ ಗುಂಬಜ್ ನೋಡಲು ಹೊರಟರು. ಅಷ್ಟೊತ್ತಿಗಾಗಲೇ ಬೆಂಕಿಯುಗುಳುತ್ತಿದ್ದ ಸೂರ್ಯ ತನ್ನ ಪ್ರತಾಪವನ್ನು ಬಿಟ್ಟು, ಪಡುವಣದಲ್ಲಿ ನಿಧಾನವಾಗಿ ಜಾರುತ್ತಿದ್ದ. ಬೀಸುತ್ತಿದ್ದ ತಂಪನೆಯ ಗಾಳಿಯೂ ಇಬ್ಬರಲ್ಲೂ ಹೊಸ ಭರವಸೆಯನ್ನು ಮೂಡಿಸುತ್ತಿತ್ತು. ಅವರ ಮುಖದಲ್ಲೀಗ ಮೊದಲಿನ ನಿರ್ಭಾವುಕತೆ ಇಲ್ಲ. ಹೊಸ ಹುಮ್ಮಸ್ಸಿನ ಅಲೆಗಳು ನಗುವಿನ ರೂಪದಲ್ಲಿ ಹೊರ ಬರುತ್ತಿವೆ. ರಸ್ತೆಯಾಚೆಗಿನ ಗುಂಬಜ್‌ನ ಮುಖ್ಯದ್ವಾರದಲ್ಲಿ ಜನಜಂಗುಳಿ, ಎಲ್ಲರ ಮುಖದಲ್ಲಿ ಸಂತೋಷದ ಓಕುಳಿ. ಪಿಸುಮಾತನ್ನು ಪ್ರತಿಧ್ವನಿಸುವ ಗುಮ್ಮಟ ಅಲ್ಲಿದ್ದವರಿಗೆಲ್ಲ ಅಚ್ಚರಿಯ ಭಂಡಾರ. ಗೋಲ್ ಗುಂಬಜ್ ಒಳ ಹೊಕ್ಕ ಇಬ್ಬರು ಜೋರಾಗಿ ‘‘ನಾವು ಸಾಯಲ್ಲ... ಬದುಕುತ್ತೇವೆ...’’ ಕೂಗಿದರು. ಅವರಿಬ್ಬರು ಈ ಮಾತುಗಳು ಪ್ರತಿಧ್ವನಿಗೊಂಡು ಅಲೆ ಅಲೆಯಾಗಿ ತೇಲಿ ಬಂದವು. ಸುತ್ತಮುತ್ತಲಿನವರು ಒಂದು ಕ್ಷಣ ಇವರಿಬ್ಬರನ್ನು ನೋಡಿ, ಪ್ರತಿಧ್ವನಿಸುವ ಈ ಗುಮ್ಮಟದ ಸೌಂದರ್ಯದಲ್ಲಿ ಮಗ್ನರಾದರು. ಮನಸ್ಸು ಹಗುರವಾಗೋವರೆಗೂ ಇಬ್ಬರು ಕೂಗುತ್ತಲೇ ಇದ್ದರು. ಕೂಗಿ ಕೂಗಿ ಧ್ವನಿ ತುಸು ದುರ್ಬಲವಾದ ಬಳಿಕ ಆ ಗುಮ್ಮಟ ಬಿಟ್ಟು ಹೊರ ಬಂದಾಗ ಇಬ್ಬರ ಮನಸ್ಸು ಆಕಾಶದಲ್ಲಿ ತೇಲಾಡುವಷ್ಟು ಹಗುರವಾಗಿತ್ತು. ಅವರಲ್ಲೀಗ ಬದುಕುವ ಛಲ ನೂರ್ಮಡಿಸಿತ್ತು. ಮತ್ತೆಂದೂ ಇಂಥ ಕಟು ನಿರ್ಧಾರಕ್ಕೆ ಬರಬಾರದು ಎಂದು ನಿಶ್ಚಯಿಸಿ, ಮುಖ್ಯದ್ವಾರ ದಾಟಿ ಹೊರಬಂದರು.
ಆಕೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಆ ಚಿಕ್ಕ ಸೀಸೆ ಚರಂಡಿಯ ಪಾಲಾಗಿತ್ತು.


(ಈ ಲೇಖನ ವಿಜಯ ಕರ್ನಾಟಕದ ಜುಲೈ 31,2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)