ಸೋಮವಾರ, ಜೂನ್ 18, 2007

ಓ.. ಗುಲಾಬಿಯೇ

ಮುಂಜಾನೆಯ ಮಂಜಿನಲಿ
ಮಿಂದೆದ್ದ ಗುಲಾಬಿಯೇ
ಯಾರಿಗಾಗಿ ಕಾಯುತ್ತಿರುವೇ
ದಿನಕರನ ದಿನಾರಂಭಕ್ಕಾಗಿಯೇ..?

ಮೆಲ್ಲನೆ ಅರಳುತ್ತ
ತಂಪನೆಯ ಕಂಪು ಬೀರುತ್ತ
ನಗೆ ಚೆಲ್ಲುತ್ತಾ
ಯಾರಿಗಾಗಿ ಕಾಯುತ್ತಿರುವೆ..?

ತಂಗಾಳಿಗೆ ಮೈ ಒಡ್ಡುತ್ತಾ
ಮೆಲ್ಲನೆ ಭೂತಾಯಿಗೆ ನಮಿಸುತ್ತಾ
ನನ್ನದೇನೂ ಇಲ್ಲಎಲ್ಲವೂ ನಿನ್ನದೆನ್ನುತ್ತಾ

ನಿರವತೆಯ ಮೌನ ಮುರಿಯತ್ತ
ಕಲ್ಲು ಹೃದಯವನ್ನೂ ಅಲಗಿಸುತ್ತ
ಹೂಗಳ ರಾಣಿಯೇ ಹೇಳು
ಯಾರಿಗಾಗಿ ಈ ಚಿತ್ತ....?

ಕನಸುಗಳಿಗೆ ಆಶೆ ನೀಡಿ
ಮನಸ್ಸುಗಳನ್ನು ಒಂದುಗೂಡಿಸುತ್ತಾ
ಸಂಜೆಯಾಗುತ್ತಲೇ ನೀ ಬಾಡುವೆ
ನಶ್ವರತೆಯನ್ನು ಸೂಚಿಸುತ್ತಾ....


-ಮಲ್ಲಿ

ಮಂಗಳವಾರ, ಮೇ 1, 2007

ಅವ್ವ

ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
ಸ್ಥೈರ್ಯ ತುಂಬಿ ಬೆಳೆಸಿದಾಕೆ,
ಬರೀ ಸೋಲು ಕಂಡುವನಿಗೆ
ಗೆಲುವಿನ ದಾರಿ ತೋರಿಸಿದಾಕೆ.. ಅವ್ವ

ಗೆದ್ದು ಬಂದಾಗ...
ಮರೆಯಲ್ಲಿ ನಿಂತು ಆನಂದಭಾಷ್ಪ ಸುರಿಸಿದಾಕೆ
ಎಂಥ ನೋವಿನಲ್ಲೂ ನಗು ತಂದಾಕೆ
ತಾನುಣ್ಣುವ ತುತ್ತನ್ನು
ತನ್ನ ಕರಳು ಕುಡಿಗೆ ತಿನ್ನಿಸಿದಾಕೆ.. ಅವ್ವ

ಮುನ್ನುಗ್ಗಲು ಕಸವು ತುಂಬಲು
ಹಿಮ್ಮೇಳವಾಗಿ ಶಕ್ತಿ ನೀಡಿದಾಕೆ
ರಾಗ ಕೆಟ್ಟು ಭಾವ ಸೋತಾಗ
ತಾನೇ ತಂಬೂರಿ ಕೈಗಿತ್ತಿಕೊಂಡಾಕೆ.. ಅವ್ವ

ಮಾತು ಕಲಿಸಿ; ನೀತಿ ತಿಳಿಸಿ
ಸದ್ಗತಿಯ ಸಾಧ್ಯತೆ ತೋರಿಸಿದಾಕೆ
ಸಾಧ್ಯ-ಅಸಾಧ್ಯಗಳ ತೋಳಲಾಟದಲ್ಲಿ
ತಾನೇ ನಿಂತು ನೆರವಾದಾಕೆ.. ಅವ್ವ

ಆದರೆ

ಆಕೆಗೆ ನೀ ಕೊಟ್ಟಿದ್ದಾರೂ ಏನು
ಬರೀ ಕಣ್ಣೀರು.. ತೋರಿಸಿದ್ದು
ವೃದ್ಧಾಶ್ರಮ ಬಾಗಿಲು...

-ಮಲ್ಲಿ

ಶುಕ್ರವಾರ, ಏಪ್ರಿಲ್ 13, 2007

ಮಾತನಾಡು...

ಕೆಂಡವಾದ ಭೂ ಒಡಲಿಗೆ
ತಂಪನೆರದ ಬೆಸಿಗೆಯ ಬಿರು ಮಳೆ
ಈ ಬೆಂದ ಹೃದಯಕ್ಕೆ
ಪ್ರೀತಿಯಮಳೆಗರೆಯಬಾರದೇ..?

ಆ ನಿನ್ನ ನಿರವ ಮೌನ,
ನನ್ನಲ್ಲೆಬ್ಬಿಸಿದೆ ನೂರಾರು ಅನುಮಾನ
ನಿನ್ನ ಮಾತಿಗೆ, ಹೂ ನಗೆಗೆ
ನಿರೀಕ್ಷೆ ನೊಗ ಹೊತ್ತು.

ನೊಗಭಾರ ಇಳಿಸಿ
ಭಾರವಾದ ಹೃದಯವನ್ನು
ಬರಸೆಳೆಯಬಾರದೇ..?

ಅಷ್ಟುಕ್ಕೂ ಯಾಕೆ ಮೌನ
ಮೌನ ಮಾತಾಗಿ, ಮೆತ್ತಗಾಗಿ
ಮುತ್ತಿಕ್ಕಬಾರದೇ, ಕಾಯುವ ಹೃದಯವನ್ನ.

ಕನಸು ಕಟ್ಚಿಕೊಂಡು ಅಲೆಮಾರಿಯಾಗಿದ್ದೇನೆ
ಕಾಣದ ದಾರಿಯಲ್ಲಿ ಕಾಲಿಡುತ್ತಿದ್ದೇನೆ
ನಿನ್ನ ಮೌನ ಮಾತಾಗುತ್ತದೆ, ಉಸಿರಾಗುತ್ತದೆ ಎಂದು

ಹೇಳು ಮಾತನಾಡಲಾರೆಯಾ..?

-ಮಲ್ಲಿ

ಸೋಮವಾರ, ಏಪ್ರಿಲ್ 9, 2007

ಎಲ್ಲಿರುವೆ..?


ಪ್ರತಿ ವರುಷ ವಸಂತ
ನನಗೆ ಮಾತ್ರ ನಿತ್ಯ ನವ ದಿಗಂತ
ಭಾನತ್ತೆರಕ್ಕೆ ಹಾರಿ ಬಾನಾಡಿಯಂತೆ
ಹುಡುಕುತ್ತಿದ್ದೇನೆ ಕಾಣದ ಚೆಲವು, ಮೂಡದ ಒಲವು..

ನಾನು ಅರಸುತ್ತಿದ್ದೇನೆ ಪ್ರೀತಿ,
ನೀ ಸಿಕ್ಕು ಸಿಗದಂತಿರುವ ಆತ್ಮ ಸಂಗಾತಿ
ಬಳಕುವ ಲತೆಯಲ್ಲಿ, ಬಿರಿವ ಹೂ ಮೊಗ್ಗೆ
ಸೂರ್ಯಕಾಂತಿಗೆ ಕಾಯುವಂತೆ
ಮೊಡದ ಮರೆಯಲಿ ಮುಖ ತೋರಿಸಿ
ಮರೆಯಾಗುವ ಚಂದಿರನಂತೆ
ಕನಸಲ್ಲಿ ಕಣ್ಣು ಮಿಟುಕಿಸಿ
ಎಲ್ಲಿ ಮಾಯಾವಾದೇ ಅಂದಗಾತಿಯೇ..?

ಎಲೆಯ ಮೇಲಿನ ಮಂಜಿನ ಹನಿಯಂತೆ
ಸಿಗದೆ ಜಾರುವ ಜಾಯಮಾನದವಳೆ
ಕಂಡಷ್ಟು, ಕಾಣದಷ್ಟು ನೀ ಸನಿಹ
ನನ್ನ ಕಲ್ಪನಾ ಲೋಕದಲಿ...

- ಮಲ್ಲಿ

ಗುರುವಾರ, ಏಪ್ರಿಲ್ 5, 2007

ಕನ್ನಡ ಚಂದ್ರ

ಕನ್ನಡದ ಪೂರ್ಣಚಂದ್ರ
ಅಸ್ತಂಗತ
ಕಂಬಿನಿ ಮೀಡಿಯುತ್ತಿವೆ
ಅಸಂಖ್ಯಾತ

ಕನ್ನಡ ಕಷ್ಟಕ್ಕೆ ಬಿದ್ದಾಗ
ಅಲ್ಲಿ ಎಲ್ಲೋ ಹೂಂಕರಿಸುತ್ತಿತ್ತು
ಧ್ವನಿಯೊಂದು..
ಈಗ ಸ್ತಬ್ಧ-ನಿಶ್ಯಬ್ಧ
ಪರಿಸರ-ಅಕ್ಷರ ಎರಡು ಉಸಿರು
ಮಹಾ ಚೇತನದ ಅನಿಕೇತನಕೆ

ಕನ್ನಡಿಗರಿಗೆ ತಬರನ ಕಥೆ -ವ್ಯಥೆ
ಹೇಳಿದವ ಕಥೆಯಾದ ಈಗ
ವಿಜ್ಞಾನದ ಅಜ್ಞಾನ ತೊಲಗಿಸಿ
ಪರಿಸರ, ಪಕ್ಷಿ, ಛಾಯಚಿತ್ರ
ಎನುತ ಸಾಹಿತ್ಯ ಸಮುದ್ರ ಈಜಿದ
ಕನ್ನಡದ ಚಂದ್ರ ಅಸ್ತಂಗತ...

- ದುಃಖಿ

ಬುಧವಾರ, ಏಪ್ರಿಲ್ 4, 2007

ಆ ಮುದುಕಿ

ಆ ಮುದುಕಿ ಮಲಗಿದ್ದಾಳೆ
ಚೆನ್ನೈನ ಆ ಜನನಿಬಿಡ ರಸ್ತೆಯಲ್ಲಿ

ಹಾಗೇ ಹೋಗಿ ಬರುವವರನ್ನು ನೋಡುತ್ತಾಳೆ
ಸ್ಥಿತ ಪ್ರಜ್ಞೆ ಕಣ್ಣುಗಳಿಂದ..
ಅವರು ನೋಡುತ್ತಾರೆ ಅವಳನ್ನು.
ಕರುಣೆ ಇದ್ದವರು ಕಾಸು ಎಸೆಯುತ್ತಾರೆ
ಇಲ್ಲದವರು ಕಿಸಕ್ಕೆಂದು ನಕ್ಕು ಮುನ್ನಡೆಯುತ್ತಾರೆ

ಅವಳ ಮಲಗಿದ ಶೈಲಿಯೋ..
ವಿಷ್ಣು ಕಮಲಾರೂಢ ರೀತಿ
ಅವಳಗಿಲ್ಲ ಯಾರದೋ ಭೀತಿ
ದಿನಕರ ದಿನ ಬೆಳಗಿ ಮುಳುಗೋವರೆಗೂ
ಹಾಗೆಯೇ ಮಲಗಿರುತ್ತಾಳೆ
ಅವಳ ಸುತ್ತ ಬಿದ್ದ ಕಾಸು ಒಮ್ಮೊಮ್ಮೆ ಕಿಸಕ್ಕೇನ್ನುತ್ತದೆ..
ಮಹಾನಗರದ ಸಮಸ್ತ ಆಗು ಹೋಗು ಕಂಡು.

ಅವಳು ಈಗಮ್ಮೊ..ಆಗೊಮ್ಮೆ
ತನ್ನಡೆಗೆ ಬರುವ ವಾಹನ, ಸೂಟು-ಬೂಟುಧಾರಿಗಳನ್ನುನೋಡುತ್ತಾಳೆ...
ಏನೋ ಹೇಳಲು ಹೋಗುತ್ತಾಳೆ.
ಮಾತು ಮಾತ್ರ ಗಂಟಲಲ್ಲೇ ಉಳಿಯುತ್ತದೆ
ಮತ್ತ ಅದೇ ಸ್ಥಿತ ಪ್ರಜ್ಞೆ ದೃಷ್ಠಿ, ತದೇಕ ಚಿತ್ತ ಎಲ್ಲರತ್ತ

ಬಸಗಾಗಿ ಕಾಯುತ್ತ
ನೋಡುತ್ತೇನೆ ನಾನು ಅವಳತ್ತ
ಅವಳು ಮಾತ್ರ ಕಾಸು-ಪಾಸು ಎನ್ನುತ್ತ
ಇನ್ನಾವುದರತ್ತ ಹರಿಸಿ ಚಿತ್ತ
ನಗುತ್ತಾಳೆ. ಬಸ್ ಬಂತೆಂದು ಧಾವಿಸುವಾಗ
ಒಂದು- ಎರಡೋ ರೂಪಾಯಿ ಎಸೆಯುತ್ತೇನೆ
ಅವಳು ಮಾತ್ರ ಹಾಗೇ ಮಲಗಿರುತ್ತಾಳೆ.

-ಮಲ್ಲಿ