ಭಾನುವಾರ, ನವೆಂಬರ್ 21, 2021

'Jai Bhim' Real Hero Justice K Chandru: ಶೋಷಿತರ ರಿಯಲ್‌ ಹೀರೊ ಜಸ್ಟೀಸ್ ಕೆ ಚಂದ್ರು

ಶೋಷಿತರ ಪರ ನಿಲ್ಲುವ ನ್ಯಾಯವಾದಿಯ ಕತೆಯ ಸಿನಿಮಾಜೈ ಭೀಮ್‌’ ಸದ್ದು ಮಾಡುತ್ತಿದೆ. ನೈಜ ಕತೆಯನ್ನಾಧರಿಸಿದ ಈ ಚಿತ್ರದ ಅಸಲಿ ಹೀರೊ ಜಸ್ಟೀಸ್ಕೆ.ಚಂದ್ರು.


- ಮಲ್ಲಿಕಾರ್ಜುನ ತಿಪ್ಪಾರ
ದೃಶ್ಯ ಮಾಧ್ಯಮದ ಬಹು ಸಾಧ್ಯತೆಗಳನ್ನು ಬಳಸಿಕೊಳ್ಳುವುದಲ್ಲಿ ತಮಿಳು ಚಿತ್ರರಂಗದ್ದು ಎತ್ತಿದ ಕೈ. ನೈಜ ಕತೆಗಳನ್ನು ಬೆಳ್ಳಿತೆರೆಗೆ ಅನ್ವಯಿಸಿ, ಜನರಿಗೆ ನಾಟುವಂತೆ ದಾಟಿಸುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಈಗ ಸೂರ್ಯ ನಟನೆಯಜೈ ಭೀಮ್‌’ ಸಿನಿಮಾ ಕೂಡ ಇದೇ ನೆಲೆಯಲ್ಲಿ ರೂಪುಗೊಂಡಿದ್ದು, ನೈಜ ಕತೆಯಾಧರಿಸಿ ಇತರ ಸಿನಿಮಾಗಳಿಗಿಂತ ಭಿನ್ನವಾಗಿ ನಿಂತಿದೆ. ಅಪರಿಮಿತ ಅಧಿಕಾರ ಹೊಂದಿರುವ ಪೊಲೀಸ್ವ್ಯವಸ್ಥೆ ತನ್ನ ಸಂವೇದನೆ ಕಳೆದುಕೊಂಡು, ಅಪ್ರಮಾಣಿಕವಾಗಿ, ಅಧಿಕಾರದ ದರ್ಪದಿಂದ ವರ್ತಿಸಿದಾಗ ಧ್ವನಿ ಇಲ್ಲದವರು, ಸಮಾಜದಲ್ಲಿಯಾವ ರೀತಿಯಲ್ಲಿಶೋಷಣೆಗೊಳಗಾಗುತ್ತಾರೆ, ನಿರ್ದೋಷಿಗಳು ಹೇಗೆ ಬಲಿಯಾಗುತ್ತಾರೆಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಈ ಚಿತ್ರದಲ್ಲಿಮುಖ್ಯ ಪಾತ್ರ ನ್ಯಾಯವಾದಿ ಚಂದ್ರು. ಈ ಪಾತ್ರವನ್ನು ನಟ ಸೂರ್ಯ ಪರಕಾಯ ಪ್ರವೇಶ ಮಾಡಿದ್ದು, ವಿಮರ್ಶಕರಿಂದಲೂ ಮೆಚ್ಚುಗೆ ದೊರೆತಿದೆ. ಇದಿಷ್ಟುರೀಲ್‌’ ಕತೆಯಾದರೆ, ಸೈಡ್ವಿಂಗ್ನಲ್ಲಿ ರಿಯಲ್ಕತೆಯನ್ನು ಬಿಚ್ಚುತ್ತಾ ಹೋದರೆ ಅದು ಇನ್ನೊಂದು ರೋಮಾಂಚನ. ಚಿತ್ರದ ಮುಖ್ಯ ಪಾತ್ರವಾಗಿರುವ ಚಂದ್ರು, ನಿಜ ಜೀವನದ ಜಸ್ಟೀಸ್ಕೆ. ಚಂದ್ರು. ಮದ್ರಾಸ್ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ದಕ್ಷ ತೆಯಿಂದ ಕೆಲಸ ಮಾಡಿದ ವ್ಯಕ್ತಿ ಅವರು. ತಮಿಳುನಾಡಿನಲ್ಲಿ ತುಂಬ ಹೆಸರಿದೆ. ಆದರೆ, ‘ಜೈ ಭೀಮ್‌’ ತೆರೆಗೆ ಬರುವವರೆಗೂ ಜ.ಕೆ. ಚಂದ್ರು ಅವರ ಬಗ್ಗೆ ತಮಿಳುನಾಡಿನಾಚೆ ಅಷ್ಟೇನೂ ಗೊತ್ತಿರಲಿಲ್ಲ.

ಕೆ.ಚಂದ್ರು ಅವರು ಮದ್ರಾಸ್ಹೈಕೋರ್ಟ್ನ್ಯಾಯಮೂರ್ತಿಯಾಗಿ ಅದ್ವಿತೀಯ ಕೆಲಸ ಮಾಡಿದ್ದಾರೆ. ಸಾಮಾನ್ಯಧಿವಾಗಿ ಒಬ್ಬ ಜಡ್ಜ್ತಮ್ಮ ಅವಧಿಯಲ್ಲಿ 10 ಸಾವಿರದಿಂದ 20 ಸಾವಿರದವರೆಗೆ ಕೇಸ್ಗಳನ್ನು ಇತ್ಯರ್ಥಪಡಿಸುತ್ತಾರೆ. ಆದರೆ, . ಚಂದ್ರು ತಮ್ಮ ಆರೂವರೆ ವರ್ಷಗಳ ಅವಧಿಯಲ್ಲಿ90 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಕ್ಷೀಪ್ರ ನ್ಯಾಯದಾನ ಮಾಡಿದ್ದಾರೆ.

ಕೆಂಪು ಗೂಟದ ಕಾರನ್ನು ಯಾರು ಬಳಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆದೇ ಇವೆ. ಕೋರ್ಟ್ಆದೇಶದ ಪ್ರಕಾರ, ಕೆಲವು ಸಂವಿಧಾನಬದ್ಧ ಹುದ್ದೆ ಅಲಂಕರಿಸಿದವರನ್ನು ಹೊರತುಪಡಿಸಿ ಉಳಿದವರಿಗೆ ಈ ಸೇವೆ ಇಲ್ಲ. ಈ ಬಗ್ಗೆ ಆದೇಶವಾಗುವುದಕ್ಕಿಂತ ಮುಂಚೆಯೇ ಚಂದ್ರು ತಮ್ಮ ಕಾರಿನ ಕೆಂಪು ದೀಪವನ್ನು ತೆಗೆಸಿದ್ದರು. ವಕೀಲರು ನ್ಯಾಯಾಧೀಶರನ್ನು ಉದ್ದೇಶಿಸಿ ಬಳಸುವಮೈ ಲಾರ್ಡ್‌’ ಪದವನ್ನು ತಮಗೆ ಬಳಸದಂತೆ ಸೂಚಿಸಿದ್ದರು! ಇದೆಲ್ಲವೂ ಅವರ ಸರಳತೆಯನ್ನು ಬಹಿರಂಗಗೊಳಿಸುತ್ತದೆ.

2006ರಲ್ಲಿಚಂದ್ರು ಮದ್ರಾಸ್ಹೈಕೋರ್ಟ್ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2009ರಲ್ಲಿಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಯಿತು. ಅವರ ಸರಳತೆಗೆ ಮತ್ತೊಂದು ಉದಾಹರಣೆ ಎಂದರೆ, ಅವರು ನ್ಯಾಯಮೂರ್ತಿಯಾಗಿ ನಿವೃತ್ತಿಯಾದ ದಿನ ಬೆಳಗ್ಗೆ ಸರಕಾರಿ ಕಾರ್ಉಪಯೋಗಿಸಿದ್ದರೆ, ಸಾಯಂಕಾಲ ಸರಕಾರಿ ಕಾರನ್ನು ಬಿಟ್ಟು  ಲೋಕಲ್ಟ್ರೈನ್ನಲ್ಲಿಮನೆಗೆ ಪ್ರಯಾಣಿಸಿದ್ದರು. ಸರಳತೆ, ಪ್ರಮಾಣಿಕತೆ, ಬದ್ಧತೆ ಹಾಗೂ ನಿಸ್ವಾರ್ಥ ಮೌಲ್ಯಗಳು ಅವರನ್ನು ಒಬ್ಬ ಪರಿಪೂರ್ಣ ನ್ಯಾಯಮೂರ್ತಿಯಾಗಿ ಮಾಡಿದ್ದಲ್ಲದೆ, ಒಬ್ಬ ಕ್ರೂಸೆಡರ್ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು.

ನ್ಯಾಯಮೂರ್ತಿಯಾಗುವ ಮೊದಲು ಅವರು ಮದ್ರಾಸ್ಹೈಕೋರ್ಟ್ನಲ್ಲಿವಕೀಲಿಕೆ ಮಾಡುತ್ತಿದ್ದರು. ಆಗಲೂ ಅಷ್ಟೇ ವಕೀಲರಾಗಿ ಸಮಾಜದಲ್ಲಿನ ಬಡವರು, ಬುಡಕಟ್ಟು ಜನಾಂಗದವರು, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕಾನೂನು ಸೇವೆಯನ್ನು ಒದಗಿಸಿದ್ದಾರೆ. ಒಂದು ಪೈಸೆ ತೆಗೆದುಕೊಳ್ಳದೇ ಅವರ ಪರವಾಗಿ ಹೋರಾಡಿದ್ದಾರೆ. ‘ಜೈ ಭೀಮ್‌’ ಚಿತ್ರದಲ್ಲಿಅಳವಡಿಸಿಧಿಕೊಳ್ಳಲಾಗಿಧಿರುವುದು ಅವರ ವೃತ್ತಿ ಬದುಕಿನ ಒಂದು ಎಪಿಸೋಡ್ಅಷ್ಟೇ.

ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬನನ್ನು ಪೊಲೀಸರು ಕಳ್ಳತನದ (ಸುಳ್ಳು ಪ್ರಕರಣ) ಆರೋಪದ ಮೇಲೆ ಬಂಧಿಸುತ್ತಾರೆ. ಮಾಡದೇ ಇರುವ ತಪ್ಪನ್ನು ಒಪ್ಪಿಕೊಳ್ಳುವಂತೆ ಕಿರುಕುಳ ನೀಡುತ್ತಾರೆ. ಇದರಿಂದ ಆತ ಸತ್ತು ಹೋಗುಧಿತ್ತಾನೆ. ಕೇಸ್ಮುಚ್ಚಿ ಹಾಕುವುದಕ್ಕಾಗಿ ಆರೋಪಿ ಪರಾರಿಧಿಯಾಗಿದ್ದಾನೆಂಬ ಕತೆ ಕಟ್ಟುತ್ತಾರೆ. ಆದರೆ, ಮೃತನ ಪತ್ನಿ ನಂಬುವುದಿಲ್ಲ. ಆಕೆಗೆ ಕಂಡಿದ್ದೇ ಈ ನ್ಯಾಯವಾದಿ ಚಂದ್ರು. ಪ್ರಕರಣವನ್ನು ಕೈಗೆತ್ತಿಕೊಳ್ಳುವ ಅವರು 13 ವರ್ಷ ಹೋರಾಡಿ, ಆರೋಪಿ ಪೋಲೀಸರಿಗೆ 14 ವರ್ಷ ಕಾಲ ಜೈಲು ಶಿಕ್ಷೆಯಾಗುವಂತೆ ಮಾಡುತ್ತಾರೆ. ಈ ಕೇಸಿಧಿನಿಂದ ಹಿಂದೆ ಸರಿಯಲು ಸಾಕಷ್ಟು ಆಮಿಷಗಳನ್ನು ಒಡ್ಡಿದರೂ ಚಂದ್ರು ತಮ್ಮ ಬದ್ಧತೆಯನ್ನು ಎಲ್ಲೂಬಿಟ್ಟುಕೊಡುಧಿವುದಿಲ್ಲ, ಹಣ ತುಂಬಿದ ಸೂಟ್ಕೇಸ್ಅನ್ನೇ ರೂಮಿನಿಂದ ಆಚೆ ಎಸೆದಂಥ ಘಟನೆಗಳಿವೆ. ಇಂಥ ಹತ್ತಾರು ಕತೆಗಳು, ಪ್ರಕರಣಗಳು ಅವರಲ್ಲಿವೆ.

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಮ್ನ ಮಧ್ಯಮ ವರ್ಗದ ಕುಟುಂಬದಲ್ಲಿ1951 ಮೇ 8ರಂದು ಜನಿಸಿದರು. ಸತ್ಯದ ಪರವಾಗಿ ಹೋರಾಟ ಅವರಿಗೆ ವಿದ್ಯಾರ್ಥಿ ದೆಸೆಯಿಂದಲೇ ಬಂದ ಗುಣ. ಕಾಲೇಜಿನಲ್ಲಿದ್ದಾಧಿಗಲೇ ಸಿಪಿಎಂ ವಿದ್ಯಾರ್ಥಿ ನಾಯಕರಾಗಿದ್ದರು. ಇದರಿಂದಾಗಿ ಚೆನ್ನೈನಲ್ಲಿಲೋಯೋಲಾ ಕಾಲೇಜ್ನಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾಯಿತು. ವಿದ್ಯಾರ್ಥಿಗಳ ಹೋರಾಟದ ನಾಯಕತ್ವ ವಹಿಸಿಕೊಂಡಿದ್ದಕ್ಕಾಗಿ ಲೋಯೋಲಾ ಕಾಲೇಜ್ಆಡಳಿತ ಮಂಡಳಿ ಇವರನ್ನು ಕಾಲೇಜಿನಿಂದ ಹೊರ ಹಾಕಿತು. ನಂತರ ಅವರು ಕ್ರಿಶ್ಚಿಯನ್ಕಾಲೇಜ್ನಲ್ಲಿಅಧ್ಯಯನ ಮುಂದುವರಿಸಬೇಕಾಯಿತು.

ವಿದ್ಯಾರ್ಥಿ ನಾಯಕನಾಗಿ, ಟ್ರೇಡ್ಯೂನಿಯನ್ನಾಯಕನಾಗಿ ಅವರು ಇಡೀ ತಮಿಳುನಾಡನ್ನು ಲಾರಿ ಮತ್ತು ಬಸ್ಗಳ ಮೂಲಕವೇ ಸುತ್ತಿದ್ದಾರೆ; ಜನರನ್ನು ಸಂಘಟಿಸಿದ್ದಾರೆ. ಈ ಸಂದರ್ಭದಲ್ಲಿದಲಿತರು, ಕಾರ್ಮಿಕರು, ಕೃಷಿ ಕಾರ್ಮಿಕರು, ಟ್ರೇಡ್ಯೂನಿಯನ್ನಾಯಕರನ್ನು ಭೇಟಿ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ. ಈ ವ್ಯವಸ್ಥೆಯು ಶಕ್ತಿಹೀನರನ್ನು ಹೇಗೆ ಶೋಷಣೆ ಮಾಡುತ್ತದೆ ಎಂಬ ಸ್ಪಷ್ಟವಾದ ಪರಿಕಲ್ಪನೆ, ಅನುಭವ ಅವರಿಗಾಗಿದೆ.

ಚಂದ್ರು ಅವರು ವಕೀಲಿ ವೃತ್ತಿಗೆ ಬರಲು ಅಣ್ಣಾ ವಿವಿ ವಿದ್ಯಾರ್ಥಿಯೊಬ್ಬ ಪೊಲೀಸರ ಲಾಠಿ ಏಟಿಗೆ ಮೃತಪಟ್ಟ ಘಟನೆ ಕಾರಣವಾಯಿತು. ಈ ಘಟನೆಯ ತನಿಖೆಗೆ ಎಂ ಕರುಣಾನಿಧಿ ಅವರು ಹೆಚ್ಚುವರಿ ನ್ಯಾಯಧಿಮೂರ್ತಿ ನೇತೃತ್ವದಲ್ಲಿಆಯೋಗ ನೇಮಕ ಮಾಡಿದ್ದರು. ಈ ಆಯೋಗದ ಎದುರು ಚಂದ್ರು ಅವರು ವಿದ್ಯಾರ್ಥಿಗಳ ಪರವಾಗಿ ಹಾಜರಾಗಿಧಿದ್ದರು. ಅವರ ವಾದ ಮಂಡನೆ ಮತ್ತು ಜಾಣತನವನ್ನು ಗುರುತಿಸಿದ ನ್ಯಾಯಧಿಮೂರ್ತಿ, ಕಾನೂನು ವೃತ್ತಿಗೆ ಬರುವಂತೆ ಸೂಚಿಸಿದರು. ಪರಿಣಾಮ ಚಂದ್ರು 1973ರಲ್ಲಿಕಾನೂನು ಕಾಲೇಜಿಗೆ ದಾಖಲಾದರು. ಆದರೆ, ಹಾಸ್ಟೆಲ್ಪ್ರವೇಶಧಿವನ್ನು ನಿರಾಕರಿಸಲಾಯಿತು. ವಿದ್ಯಾರ್ಥಿ ನಾಯಕರಾಗಿ ಅವರು ಕೈಗೊಂಡ ಹೋರಾಟಗಳೇ ಇದಕ್ಕೆ ಕಾರಣವಾಗಿತ್ತು. ಆದರೆ, ಪಟ್ಟು ಸಡಿಲಿಸದ ಅವರು ಮೂರು ದಿನ ಉಪವಾಸ ಸತ್ಯಾಗ್ರಹ ಕೈಗೊಂಡರು. ಅಂತಿಮವಾಗಿ ಅಧಿಕಾರಿಗಳು ಹಾಸ್ಟೆಲ್ಪ್ರವೇಶ ನೀಡಬೇಕಾಯಿತು

 ಕಾಲೇಜಿನಲ್ಲಿದ್ದಾಗಲೇ ಬಡವರಿಗೆ ಕಾನೂನು ಸೇವೆ ಒದಗಿಸಲಾರಂಭಿಸಿದರು. ಬಡವರು, ಶೋಷಿತರಿಗೆ ಕಾನೂನು ಸೇವೆಯನ್ನು ಒದಗಿಸುತ್ತಿದ್ದ ರಾವ್ಆಂಡ್ರೆಡ್ಡಿ ಸಂಸ್ಥೆಯನ್ನು ಸೇರಿದರು. 8 ವರ್ಷ ಇಲ್ಲಿಕೆಲಸ ಮಾಡಿ, ಸ್ವತಂತ್ರವಾಗಿ ವಕೀಲಿಕೆಯನ್ನು ಆರಂಭಿಸಿದರು. ತಮಿಳುನಾಡು ಬಾರ್ಕೌನ್ಸಿಲ್ಗೆ ಆಯ್ಕೆಯಾದ ಅತ್ಯಂತ ತರುಣ ನ್ಯಾಯವಾದಿ ಎನಿಸಿಕೊಂಡರು. ಇದರ ಮಧ್ಯೆಯೇ, ಶ್ರೀಲಂಕಾ ವಿಷಯದಲ್ಲಿ ರಾಜೀವ್ಗಾಂಧಿ ಆಡಳಿತ ನಡೆದುಕೊಂಡ ರೀತಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯದಿಂದಾಗಿ ಸಿಪಿಎಂ ಪಕ್ಷ ವನ್ನೂ ತೊರೆದರು.

ಮದ್ರಾಸ್ಹೈಕೋರ್ಟ್ನ್ಯಾಯಮೂರ್ತಿಯಾಗಿ ಕ್ಷೀಪ್ರವಾಗಿ ನ್ಯಾಯದಾನ ಮಾಡಿದ್ದೂ ಮಾತ್ರವಲ್ಲದೇ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ. ಆ ಪೈಕಿ ಮಹಿಳೆಯರಿಗೆ ಅರ್ಚಕರಾಗಲು ಅವಕಾಶ ಕಲ್ಪಿಸುವುದು, ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿಕೆಲಸ ಮಾಡುತ್ತಿದ್ದ 25 ಸಾವಿರ ಬಡ ಹೆಣ್ಣುಮಕ್ಕಳಿಗೆ ಉದ್ಯೋಗ ಭದ್ರತೆ ಒದಗಿಸುವ ತೀರ್ಪು ಸೇರಿದಂತೆ ಅನೇಕ ಜನಪರ ತೀರ್ಪುಗಳನ್ನು ನೀಡಿದ್ದಾರೆ. ನ್ಯಾಯವಾದಿಯಾಗಿದ್ದಾಗ ಪಾಲಿಸಿಕೊಂಡಿದ್ದ ಶೋಷಿತರಿಗೆ ಧ್ವನಿಯಾಗುವ ಕೆಲಸವನ್ನು ನ್ಯಾಯಾಧೀಶಧಿರಾದಾಗಲೂ ಮುಂದುವರಿಸಿಕೊಂಡು ಬಂದು, 2013ರಲ್ಲಿನಿವೃತ್ತರಾದರು.

ಅವರು ಕೇವಲ ಒಬ್ಬ ನ್ಯಾಯವಾದಿ, ಜಸ್ಟಿಸ್ಮಾತ್ರವಲ್ಲದೆ ಬರಹಗಾರರೂ ಹೌದು. ನಿವೃತ್ತಿಯಾದ ಮೇಲೂ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ; ಪುಸ್ತಕಗಳನ್ನು ಬರೆದಿದ್ದಾರೆ. Listen to My Case!: When Women Approach the Courts of Tamil Naduಅವರ ಇತ್ತೀಚಿನ ಕೃತಿ. ಈ ಪುಸ್ತಕದಲ್ಲಿ ಚಂದ್ರು ಅವರು, ನ್ಯಾಯಕ್ಕಾಗಿ ಹೋರಾಡಿದ 20 ಮಹಿಳೆಯರ  ಬಗ್ಗೆ ಬರೆದಿದ್ದಾರೆ. ಜಸ್ಟೀಸ್ಕೆ.ಚಂದ್ರು ಅವರಂಥ ಬದ್ಧತೆಯುಳ್ಳ ನ್ಯಾಯವಾದಗಳು, ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾದರೆ ಬಹುಶಃ ದೀನ ದಲಿತರಿಗೆ, ಬಡವರಿಗೆ, ಕಾನೂನು ಎಂಬುದು ಗಗನಕುಸುಮವಾಗಲಾರದು.



ಸೋಮವಾರ, ಅಕ್ಟೋಬರ್ 25, 2021

NCB Mumbai Zonal Director Sameer Wankhede: ಡ್ರಗ್ಸ್ ವಿರುದ್ಧ ಸಮೀರ್ ವಾಂಖೆಡೆ ಸಮರ

 ಮುಂಬಯಿಯಲ್ಲಿ ಐಆರ್‌ಎಸ್ ಅಧಿಕಾರಿ ವಾಂಖೆಡೆ ಅವರು ಡ್ರಗ್ಸ್ ಜಾಲದ ವಿರುದ್ಧ ಸಮರವನ್ನೇ ಸಾರಿದ್ದಾರೆ. ಮಾದಕ ದ್ರವ್ಯ ಹಾಗೂ ಬಾಲಿವುಡ್ ನಡುವಿನ ನಂಟನ್ನು ಭೇದಿಸುವಲ್ಲಿ ನಿರತರಾಗಿದ್ದಾರೆ.

- ಮಲ್ಲಿಕಾರ್ಜುನ ತಿಪ್ಪಾರ
ಸಮೀರ್ ವಾಂಖೆಡೆ. ಈ ಹೆಸರನ್ನು ಕೇಳಿದರೆ ಬಾಲಿವುಡ್ ಸೆಲೆಬ್ರಿಟಿಗಳು ಬೆಚ್ಚಿ ಬೀಳುತ್ತಿದ್ದಾರೆ. ಮಾದಕ ದ್ರವ್ಯ ಸೇವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲಘಿ, ಈ ಹಿಂದೆ ಅವರು ಕಸ್ಟಮ್ಸ್ ಸೇವೆಯಲ್ಲಿದ್ದಾಗಲೂ ಸೆಲೆಬ್ರಿಟಿಗಳು ಥರಗುಟ್ಟಿದ್ದರು! ಅವರು ಮುಂಬಯಿ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿದ್ದರು. ಆಗಲೂ ಹೊರ ದೇಶಗಳಿಂದ ತರುತ್ತಿದ್ದ ಬೆಲೆ ಬಾಳುವ ವಸ್ತುಗಳಿಗೆ ತೆರಿಗೆ ಪಾವತಿಸದೇ ಬಿಟ್ಟುಕೊಡುತ್ತಿರಲಿಲ್ಲ ಈ ಖಡಕ್ ಅಧಿಕಾರಿ. ಹಾಗಾಗಿ, ಬಾಲಿವುಡ್ ಹಾಗೂ ವಾಂಖೆಡೆ ಅವರ ಮಧ್ಯೆ ಮೊದಲಿನಿಂದಲೂ ಒಂಥರಾ ಲವ್ ಆ್ಯಂಡ್ ಹೇಟ್ ಸಂಬಂಧ!

ಒಂದು ವರ್ಷದಿಂದ ವಾಂಖೆಡೆ ಅವರು, ಗಣ್ಯ ವಲಯದಲ್ಲಿ ಹೆಪ್ಪುಗಟ್ಟಿರುವ ಮಾದಕ ಸೇವನೆ, ಮಾರಾಟದ ಜಾಲವನ್ನು ಭೇದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 2020ರ ಜೂನ್ ತಿಂಗಳಲ್ಲಿ ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ ಆತ್ಮಹತ್ಯೆ ಪ್ರಕರಣ ತನಿಖೆಯು ವಿಸ್ತಾರಗೊಳ್ಳುತ್ತಿದ್ದಂತೆ ಡ್ರಗ್ಸ್‌ನ ಭಯಾನಕತೆಗಳು ಅನಾವರಣಗೊಂಡವು. ಅಲ್ಲಿಂದ ಶುರುವಾದ ವಾಂಖೆಡೆ ಅವರ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯು ಸದ್ಯ ‘ಸೂಪರ್ ಸ್ಟಾರ್’ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನವರೆಗೂ ಸಾಗಿದೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಮಾದಕ ದ್ರವ್ಯ ಬಳಕೆಯ ಸಂಗತಿಗಳು ಬಯಲಾಗಿದ್ದವು. ಆಗ ಸುಶಾಂತ್‌ನ ಗೆಳತಿ ರೇಹಾ ಚಕ್ರವರ್ತಿ ಹಾಗೂ ಆಕೆಯ ಸಹೋದರನನ್ನು ಬಂಧಿಸಲಾಗಿತ್ತು. ಜೊತೆಗೆ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್‌ಪ್ರೀತ್ ಸಿಂಗ್, ಭಾರ್ತಿ ಸಿಂಗ್ ಇತ್ಯಾದಿ ನಟಿಯರನ್ನು ಡ್ರಗ್ಸ್ ಸಂಬಂಧ ವಿಚಾರಣೆಗೊಳಪಡಿಸಲಾಗಿತ್ತು. ಇದೀಗ ಆರ್ಯನ್ ಖಾನ್ ಪ್ರಕರಣವು ಬಾಲಿವುಡ್‌ನ ಇತರೆ ಸೆಲೆಬ್ರಿಟಿಗಳ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಈಗಾಗಲೇ ನಟಿ ಅನನ್ಯಾ ಪಾಂಡೆ ಎರಡು ಬಾರಿ ವಿಚಾರಣೆ ಎದುರಿಸಿದ್ದಾಳೆ. ಈ ಎಲ್ಲದರ ಹಿಂದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಮುಂಬಯಿ ರೆನಲ್ ಡೈರೆಕ್ಟರ್ ಸಮೀರ್ ವಾಂಖೆಡೆ ಕರ್ತವ್ಯ ಎದ್ದು ಕಾಣುತ್ತಿದೆ. ಕಾನೂನು ಪಾಲನೆಯೊಂದನ್ನೇ ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅವರಿಗೆ, ಸೆಲೆಬ್ರಿಟಿ ಅಥವಾ ಸಾಮಾನ್ಯರು ಎಂಬ ತಾರತಮ್ಯವಿಲ್ಲಘಿ. ಯಾರು ತಪ್ಪು ಮಾಡುತ್ತಾರೋ ಅವರನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. 

ಇಷ್ಟಾಗಿಯೂ ಅವರು ಆರೋಪಗಳಿಂದ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವುದಕ್ಕಾಗಿ ವಾಂಖೆಡೆ ಸೆಲೆಬ್ರಿಟಿಗಳ  ಬೆನ್ನು ಹಿಂದೆ ಬಿದ್ದಿದ್ದಾರೆ ಎಂಬ ಆರೋಪ ಸಾಮಾನ್ಯವಾಗಿದೆ. ಜೊತೆಗೆ ಎನ್‌ಸಿಪಿಯ ನಾಯಕ ನವಾಬ್ ಮಲಿಕ್ ಅವರಂತೂ, ಬಾಲಿವುಡ್ ಸೆಲೆಬ್ರಿಟಿಗಳಿಂದ ವಾಂಖೆಡೆ ಅವರು ಸುಲಿಗೆಗಿಳಿದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದುಘಿ, ಅವರನ್ನು ಜೈಲಿಗೆ ಕಳುಹಿಸುವವರೆಗೂ ವಿರಮಿಸುವುದಿಲ್ಲ ಎಂದಿದ್ದಾರೆ. ಜೊತೆಗೆ, ದುಬೈ ಮತ್ತು ಮಾಲ್ಡೀವ್ಸ್‌ಗೆ ವಾಂಖೆಡೆ ತೆರಳಿದ್ದ ೆಟೊಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆಲ್ಲಘಿ, ಸಮೀರ್ ಪ್ರತ್ಯುತ್ತರ ಕೊಟ್ಟಿದ್ದಾರೆ. ಜೊತೆಗೆ, ಆರ್ಯನ್ ಖಾನ್ ಬಂಧನದ ವೇಳೆಯ ಹಾಜರಿದ್ದ ಕೆಲವು ಖಾಸಗಿ ವ್ಯಕ್ತಿಗಳಿಂದಾಗಿ ವಾಂಖೆಡೆ ಅವರ ಒಟ್ಟಾರೆ ಉದ್ದೇಶದ ಮೇಲೂ ಶಂಕೆ ಮೂಡುತ್ತಿರುವುದು ಸುಳ್ಳಲ್ಲಘಿ. ಇದಕ್ಕೆಲ್ಲ ಅವರು ಸಮರ್ಥನೆ ನೀಡಿದ್ದಾರೆಂಬುದು ಬೇರೆ ಮಾತು. 

ವಿಶೇಷ ಏನೆಂದರೆ, ಸಮೀರ್ ಪತ್ನಿ ಕ್ರಾಂತಿ ರೇಡ್ಕರ್ ಕೂಡಾ ಒಬ್ಬ ನಟಿ. ಮರಾಠಿ ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಹೆಸರಿದೆ. ಅಜಯ್ ದೇವಗನ್ ನಟನೆಯ ‘ಗಂಗಾಜಲ್’ ಚಿತ್ರದಲ್ಲೂ ಕ್ರಾಂತಿ ನಟಿಸಿದ್ದಾರೆ. ಹಾಗಾಗಿ, ಸಮೀರ್ ಅವರಿಗೆ ಚಿತ್ರರಂಗ ಹೊಸದಲ್ಲ. ಅಲ್ಲಿ ನಡೆಯುವ ಬೆಳವಣಿಗೆಗಳು, ಹೈಕ್ಲಾಸ್ ಸೊಸೈಟಿಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಅರಿವು ಅವರಿಗಿದೆ.

ಎನ್‌ಸಿಬಿಯ ಮುಂಬಯಿ ರೆನಲ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುವ ಮೊದಲು ಮಹಾರಾಷ್ಟ್ರ ಸರ್ವೀಸ್ ಟ್ಯಾಕ್ಸ್ ವಿಭಾಗದಲ್ಲಿದ್ದರು. ಆಗ ಅವರು ತೆರಿಗೆ ವಂಚಿಸುತ್ತಿದ್ದ ಸುಮಾರು 2,500 ಮಂದಿ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಪೈಕಿ 200 ಸೆಲೆಬ್ರಿಟಿಗಳಿದ್ದರು. ಎರಡು ವರ್ಷದಲ್ಲಿ ಮುಂಬಯಿನಲ್ಲೇ ಒಟ್ಟು 87 ಕೋಟಿ ರೂಪಾಯಿಯನ್ನು ಖಜಾನೆಗೆ ಹರಿದು ಬರುವಂತೆ ಮಾಡಿದ್ದರು. 2011ರಲ್ಲಿ ಭಾರತೀಯ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದಿತು. ಆಗ ತಂಡಕ್ಕೆ ನೀಡಲಾಗಿದ್ದ ಟ್ರೋಫಿಯಲ್ಲಿ  ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಇದೆ. ಹಾಗಾಗಿ, ತೆರಿಗೆ ಪಾವತಿಸಿಯೇ ಪಡೆದುಕೊಳ್ಳಬೇಕೆಂದು ಇವರು ಪಟ್ಟು ಹಿಡಿದಿದ್ದರು. ಕಸ್ಟಮ್ಸ್ ತೆರಿಗೆ ಕೊಟ್ಟ ಮೇಲೆಯೇ ಟ್ರೋಫಿಯನ್ನು ಕ್ಲಿಯರ್ ಮಾಡಿದ್ದರು. ಅವರ ಈ ನಡೆಯೂ ಭಾರೀ ಚರ್ಚೆಗೆ ಕಾರಣವಾಗಿತ್ತುಘಿ.

2013ರಲ್ಲಿ ವಿದೇಶಿ ಕರೆನ್ಸಿಯನ್ನು ಹೊಂದಿದ್ದ ಗಾಯಕ ಮಿಕಾ ಸಿಂಗ್ ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು. ಅದೇ ರೀತಿ, ಅನುರಾಗ್ ಕಶ್ಯಪ್, ವಿವೇಕ್ ಒಬೇರಾಯ್ ಮತ್ತು ರಾಮಗೋಪಾಲ್ ವರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಾಂಖೆಡೆ ಅವರ ತನಿಖಾ ಕ್ಷಕಿರಣಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ ಮುಂಬಯಿಯೊಂದರಲ್ಲೇ ವಾಂಖೆಡೆ ಹಾಗೂ ಅವರ ತಂಡವು 17 ಸಾವಿರ ಕೋಟಿ ರೂ. ವೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದೆ! ಮಾದಕ ದ್ರವ್ಯ ಜಾಲ ಭೇದಿಸುವ ಅವರ ಈ ಕಾರ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ದೈಹಿಕ ಹಲ್ಲೆಗೂ ಒಳಗಾಗಿದ್ದಾರೆ ವಾಂಖೆಡೆ. 2020 ನವೆಂಬರ್ 22ರಂದು 60 ಮಂದಿ ಇದ್ದ ಡ್ರಗ್ ಪೆಡ್ಲರ್‌ಗಳ ಗುಂಪೊಂದು ವಾಂಖೆಡೆ ಹಾಗೂ ಎನ್‌ಸಿಬಿಯ ಇತರ ಐದು ಅಧಿಕಾರಿಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿ ವೇಳೆ ವಾಂಖೆಡೆ ಅವರಿಗೆ ಸಣ್ಣ ಪುಟ್ಟ ಗಾಯಳಾದವು. ಆದರೆ, ತಂಡದ ಇತರ ಸದಸ್ಯರು ತೀವ್ರವಾಗಿ ಗಾಯಗೊಂಡರು. ಅವರನ್ನು ಬೆದರಿಸುವ ಹಲವು ಘಟನೆಗಳು ನಡೆಯುತ್ತಲೇ ಇವೆ. ಆದರೆ, ವಾಂಖೆಡೆ ಅದಾವುದಕ್ಕೂ ತಲೆಕೆಡಿಸಿಕೊಳ್ಳದೇ ಬಾಲಿವುಡ್ ಹಾಗೂ ಮಾದಕ ದ್ರವ್ಯ ಜಾಲ ನಡುವಿನ ನಂಟನ್ನು ಭೇದಿಸುವ ಕೆಲಸವನ್ನು ಮುಂದುವರಿಸಿದ್ದಾರೆ. 

2008ರ ಬ್ಯಾಚಿನ ಐಆರ್‌ಎಸ್ ಅಧಿಕಾರಿಯಾಗಿರುವ ಸಮೀರ್ ಅವರ ಮೊದಲಿಗೆ ಮುಂಬಯಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದಲ್ಲಿ ಡೆಪ್ಯುಟಿ ಕಸ್ಟಮ್ಸ್ ಕಮಿಷನರ್ ಆಗಿದ್ದರು. ಆ ಬಳಿಕ ಅವರನ್ನು ದಿಲ್ಲಿ ಹಾಗೂ ಆಂಧ್ರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು. ಅಲ್ಲಿಂದ ಅವರು ಡೆಪ್ಯುಟಿ ಕಮಿಷನರ್ ಆ್ ಏರ್ ಇಂಟೆಲಿಜೆನ್ಸ್ ಯುನಿಟ್(ಎಐಯು), ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್‌ಐಎ) ಹೆಚ್ಚುವರಿ ಎಸ್‌ಪಿಯಾಗಿಯೂ ಕೆಲಸ ಮಾಡಿದ್ದಾರೆ. ಇದೀಗ ಎನ್‌ಸಿಬಿ ಮುಂಬಯಿ ರೆನಲ್ ನಿರ್ದೇಶಕರಾಗಿ ದಕ್ಷವಾಗಿ ಕೆಲಸ ಮಾಡುತ್ತಿದ್ದಾರೆ. 

ಮೂಲತಃ ಮುಂಬೈನವರೇ ಆಗಿರುವ ಸಮೀರ್ ಅವರ ತಂದೆ ಪೊಲೀಸ್ ಅಧಿಕಾರಿಯಾಗಿದ್ದರು. ಸಮೀರ್-ಕ್ರಾಂತಿ ರೇಡ್ಕರ್ ದಂಪತಿಗೆ ಅವಳಿ ಮಕ್ಕಳಿದ್ದಾರೆ.  42 ವರ್ಷದ ಸಮೀರ್ ವಾಂಖೆಡೆ ಅವರು ಸಾರ್ವಜನಿಕ ಅಧಿಕಾರಿಯಾಗಿ ತೋರಿದ ದಕ್ಷತೆಗಾಗಿ ಮಹಾರಾಷ್ಟ್ರದ ಜಮದಾರ್ ಬಾಪು ಲಕ್ಷ್ಮಣ್ ಲಮಖೆಡೆ ಅವಾರ್ಡ್ ಕೂಡ ಬಂದಿದೆ.

ಮುಂಬಯಿನಲ್ಲಿ ಮಾದಕ ದ್ರವ್ಯ ಮಾರಾಟ, ಸೇವನೆ ವಿರುದ್ಧ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿರುವ ವಾಂಖೆಡೆಗೆ ಸಾಜರ್ವನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ಅವರು ತಮ್ಮ ಕೆಲಸದಲ್ಲಿ ತೋರುತ್ತಿರುವ ಧೈರ್ಯ, ಸ್ಥೈರ್ಯ, ಕರ್ತವ್ಯ ಪ್ರಜ್ಞೆಘಿ, ವೃತ್ತಿಪರತೆಯೇ ಅವರಿಗೆ ‘ಗಣ್ಯ’ ಸ್ಥಾನವು ಲಭ್ಯವಾಗುವಂತೆ ಮಾಡಿದೆ. ಆದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಯಾವ ಅಧಿಕಾರಿಯಾಗಿ ಪ್ರಮಾಣಿಕವಾಗಿ, ನಿರ್ಭೀತಿಯಿಂದ ಕೆಲಸ ಮಾಡಲು ಆರಂಭಿಸುತ್ತಾನೋ ಆಗ ಆತನನ್ನು ಹಿಂದಕ್ಕೆ ಎಳೆಯುವ  ಪ್ರಯತ್ನಗಳು ಬೇಕಾದಷ್ಟು ನಡೆಯುತ್ತವೆ. ಇದಕ್ಕೆ ವಾಂಖೆಡೆ ಕೂಡ ಅವರು ಹೊರತಾಗಿಲ್ಲಘಿ. ಈಗಾಗಲೇ ಅದು ಅವರ ಅನುಭವವಕ್ಕೂ ಬಂದಿದೆ. ಇದು ವ್ಯವಸ್ಥೆಯ ದೋಷ. ಇದೆಲ್ಲವನ್ನೂ ಮೀರಿ ಮುನ್ನಡೆಯುವ ಛಾತಿ ವಾಂಖೆಡೆ ಅವರಿಗಿದೆ ಎಂಬುದು ಈಗಾಗಲೇ  ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.


ಈ ಲೇಖನವು ವಿಜಯ ಕರ್ನಾಟಕದ, 2021ರ ಅಕ್ಟೋಬರ್ 24ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಭಾನುವಾರ, ಸೆಪ್ಟೆಂಬರ್ 19, 2021

Captain Amarinder Singh: ಅಮರೀಂದರ್ ಸಿಂಗ್ 'ಜನರ ಮಹಾರಾಜ'

ನವಜೋತ್‌ ಸಿಧು ಜೊತೆಗಿನ ಒಳಜಗಳದಲ್ಲಿ ಕೈಸೋತ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
‘‘ಇನ್ನು ನಾನು ಅವಮಾನ ಸಹಿಸಲಾರೆ,’’ ಎನ್ನುತ್ತಲೇ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ನ ನೂತನ ಅಧ್ಯಕ್ಷ , ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಹಾಗೂ ಅಮರೀಂದರ್‌ ಸಿಂಗ್‌ ನಡುವಿನ ಕಿತ್ತಾಟ ಒಂದು ಹಂತಕ್ಕೆ ತಲುಪಿದೆ. 

ಅನುಮಾನವೇ ಬೇಡ; ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಪಂಜಾಬ್‌ ಕಾಂಗ್ರೆಸ್‌ನ ದಿಗ್ಗಜ ಧುರೀಣ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಬೇರುಮಟ್ಟದಿಂದ ಸಂಘಟಿಸಿ, ಅದಕ್ಕೊಂದು ಸಾಂಸ್ಥಿಕ ರೂಪ ನೀಡಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಕೊಡುಗೆ ಅನನ್ಯ, ಅನುಪಮ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಅವರು ಮುಖ್ಯಮಂತ್ರಿ ಆಯ್ಕೆಯ ಮೊದಲ ಆದ್ಯತೆಯಾ­ಗುತ್ತಿದ್ದರು. ಪರಿಣಾಮ ಎರಡು ಬಾರಿ ಸಿಎಂ ಆಗಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ ಮೇಲೆ ಬಿಗಿ ಹಿಡಿತ ಹೊಂದಿದ್ದ ‘ಕ್ಯಾಪ್ಟನ್‌’ ವಿರುದ್ಧವೇ ಶಾಸಕರು, ಕೆಲವು ನಾಯಕರು ಬಂಡೆದ್ದ ಪರಿಣಾಮ, ಕಳೆದ ಎರಡ್ಮೂರು ವರ್ಷದಲ್ಲಿ ಪಂಜಾಬ್‌ ಕಾಂಗ್ರೆಸ್‌ ಬೀದಿ ಜಗಳವನ್ನು ಇಡೀ ರಾಷ್ಟ್ರವೇ ನೋಡಿದೆ. ಹಾಗೆ ನೋಡಿದರೆ, 2017ರಲ್ಲಿ ಪ್ರಚಂಡ ಬಹುಮತದಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂತಲ್ಲ, ಆಗಲೇ ಈ ಬಂಡಾಯದ ಕಿಚ್ಚು ಶುರವಾಗಿದ್ದು! ಹೇಗೆಂದರೆ, ಬಿಜೆಪಿಯಿಂದ ವಲಸೆ ಬಂದು ಕಾಂಗ್ರೆಸ್‌ ಸೇರಿದ್ದ ಮಾಜಿ ಕ್ರಿಕೆಟಿಗ ‘ಸಿಕ್ಸರ್‌’ ಸಿಧು, ಉಪಮುಖ್ಯಮಂತ್ರಿಯ ಹುದ್ದೆಗೆ ಹಕ್ಕು ಚಲಾಯಿಸಿದ್ದರು. 

ಆದರೆ, ಅಂದಿನ ಸನ್ನಿವೇಶದಲ್ಲಿ ಅಮರೀಂದರ್‌ ಸಿಂಗ್‌ ಏರಿದ್ದ ಎತ್ತರಕ್ಕೆ ದಿಲ್ಲಿ ವರಿಷ್ಠ ಮಂಡಳಿ ಎದುರಾಡುವ ಮಾತೇ ಇರಲಿಲ್ಲ, ಪರಿಣಾಮ ಸಿಧು ಡಿಸಿಎಂ ಸ್ಥಾನದಿಂದ ವಂಚಿತರಾಗಿ, ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾ­ಯಿತು. ಆದರೆ, ಅವರೊಳಗಿನ ಮಹತ್ವಾಕಾಂಕ್ಷಿ ಸಿಧು ತೃಪ್ತನಾಗಲಿಲ್ಲ. ಸ್ವಲ್ಪ ದಿನಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು, ಕ್ಯಾಪ್ಟನ್‌ ವಿರುದ್ಧ ಬಂಡಾಯ ಸಾರಿದರು. ಇಷ್ಟೇ ಆದರೆ ಪರ್ವಾಗಿರಲಿಲ್ಲ. ಸಿಎಂ ಆಗಿದ್ದ ಅಮರೀಂದರ್‌ ಅವರು ನಿಧಾನವಾಗಿ ಪಕ್ಷ ದ ಮೇಲಿನ ಹಿಡಿತ ಕಳೆದುಕೊಳ್ಳುವುದಕ್ಕೂ, ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುವುದಕ್ಕೂ, ಸಿಧು ಅತೃಪ್ತ ಶಾಸಕರ ನಾಯಕನಾಗಿ ಹೊರಹೊಮ್ಮುವುದಕ್ಕೂ ಸರಿಹೋಗಿದೆ. ಹಲವು ಬಾರಿ ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಪಂಜಾಬ್‌ ಬಿಕ್ಕಟ್ಟನ್ನು ಶಮನ ಮಾಡಿದರು, ಅದು ತಾತ್ಕಾಲಿಕವಾಗಿತ್ತಷ್ಟೇ. ನವಜೋತ್‌ ಸಿಂಗ್‌ ಸಿಧು ಅವರನ್ನು ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ಮಾಡಿದ ಮೇಲೆ ಒಳಜಗಳ ಮತ್ತಷ್ಟು ಬಿಗಡಾಯಿಸಿತು. 

ಅಮರೀಂದರ್ ರಾಜೀನಾಮೆಯು ಪಂಜಾಬ್‌ ಕಾಂಗ್ರೆಸ್‌ನ ಒಳಜಗಳದ ಫಲಿತಾಂಶವಾದರೂ ಅದಕ್ಕೆ ಸಾಕಷ್ಟು ಆಯಾಮಗಳಿವೆ. 2017ರ ಚುನಾವಣೆ ವೇಳೆಗೆ ಪ್ರಶ್ನಾತೀತ ನಾಯಕರಾಗಿದ್ದ ಅಮರೀಂದರ್‌ ಸಿಂಗ್‌ 2022ರ ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯತೆಯಲ್ಲಿ ಕುಸಿದಿದ್ದಾರೆ. ‘ಜನರ ಮಹಾರಾಜ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು ಕೊನೆ ಕೊನೆಗೆ ಜನರಿಗೆ ಸಿಗುವುದೇ ಕಷ್ಟವಾಗಿತ್ತು. ಅಮರೀಂದರ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಗೆಲುವು ಸಿಗಲಾರದು ಎಂಬ ಸಮೀಕ್ಷೆಯೂ ಅವರು ನಿರ್ಗಮನಕ್ಕೆ ಕಾರಣವಾಯಿತು. ಅವರ ನೆರಳಾಗಿದ್ದ ಬಹಳಷ್ಟು ಶಾಸಕರು ಪಾಳಯ ಬದಲಿಸಿದ್ದಾರೆ ಎನ್ನುತ್ತಾರೆ  ಪಂಜಾಬ್ ರಾಜಕಾರಣ ಬಲ್ಲ ವಿಶ್ಲೇಷಕರು. 

‘ಸೇನೆ ಇಲ್ಲದ ವಯೋವೃದ್ಧ ಸೇನಾನಿ’ಯಾಗಿರುವ ಅಮರೀಂದರ್‌ ಸಿಂಗ್‌ ವ್ಯಕ್ತಿತ್ವ ಕೇವಲ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಯೋಧ, ಸೇನಾ ಇತಿಹಾಸಿಕಾರ, ಶೆಫ್‌, ತೋಟಗಾರ, ಬರಹಗಾರ.. ಹೀಗೆ ನಾನು ಮುಖಗಳಿವೆ. ಅವರು ಅಪರೂಪದ ರಾಜಕೀಯ ನಾಯಕರು. ರಾಯಲ್‌ ಫ್ಯಾಮಿಲಿಯ ಅಮರೀಂದರ್‌ ರಾಜಕಾರಣಕ್ಕೆ ಬಂದಿದ್ದು, ತಮ್ಮ ಶಾಲಾ ದಿನಗಳ ಸ್ನೇಹಿತ ರಾಜೀವ್‌ ಗಾಂಧಿಯ ಒತ್ತಾಸೆಯಿಂದಾಗಿ. 1942 ಮಾರ್ಚ್‌ 11ರಂದು ಪಟಿಯಾಲಾದ ರಾಜಮನೆತನದಲ್ಲಿ ಜನಿಸಿದರು. ತಂದೆ ಮಹಾರಾಜ ಸರ್‌ ಯಾದವೀಂದ್ರ ಸಿಂಗ್‌ ಮತ್ತು ತಾಯಿ ಮಹಾರಾಣಿ ಮೊಹೀಂದರ್‌ ಕೌರ್‌. ಶಿಮ್ಲಾದ ಲೊರೆಟೋ ಕಾನ್ವೆಂಟ್‌, ಸನಾವರ್‌ದ ಲಾವರೆನ್ಸ್‌ ಸ್ಕೂಲ್‌ನಲ್ಲಿ ಆರಂಭದ ಶಿಕ್ಷ ಣ ಪಡೆದು, ಡೆಹ್ರಾಡೂನ್‌ನ ದಿ ಡೂನ್‌ ಸ್ಕೂಲ್‌ಗೆ ಸೇರಿದರು. ಅಮರೀಂದರ್‌ ಅವರ ಪತ್ನಿ ಪ್ರಣೀತ್‌ ಕೌರ್‌. ರಣೀಂದರ್‌ ಸಿಂಗ್‌ ಮತ್ತು ಜೈ ಇಂದೇರ್‌ ಕೌರ್‌ ಮಕ್ಕಳು. ಪತ್ನಿ ಪ್ರಣೀತ್‌ ಕೌರ್‌ ಅವರು ಸಂಸದೆಯಾಗಿದ್ದರು ಮತ್ತು 2009ರಿಂದ ಅಕ್ಟೋಬರ್‌ 2012ರವರೆಗೆ ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಮರೀಂದರ್‌ ಅವರ ಸಹೋದರಿ ಹೇಮಿಂದರ್‌ ಕೌರ್‌ ಮಾಜಿ ವಿದೇಶಾಂಗ ಸಚಿವರಾಗಿದ್ದ ಕೆ. ನಟ್ವರ್‌ ಸಿಂಗ್‌ ಅವರ ಪತ್ನಿ. ಹಾಗೆಯೇ, ಶಿರೋಮಣಿ ಅಕಾಲಿ ದಳ(ಎ)ದ ಮುಖ್ಯಸ್ಥ ಸಿಮ್ರಂಜಿತ್‌ ಸಿಂಗ್‌ ಮನ್‌ ಕೂಡ ಇವರ ಸಂಬಂಧಿ. ಅಮರೀಂದರ್‌ ಸಿಂಗ್‌ ಅವರ ಒಟ್ಟು ಫ್ಯಾಮಿಲಿ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ.

ರಾಜಕಾರಣಕ್ಕೆ ಕಾಲಿಡುವ ಮುನ್ನ ಅಮರೀಂದರ್‌ ಅವರು, ಸೇನೆಯಲ್ಲಿ ಕ್ಯಾಪ್ಟನ್‌ ಆಗಿದ್ದರು. 1963ರಿಂದ 1966ವರೆಗೆ ಸೇವೆ ಸಲ್ಲಿಸಿದ್ದಾರೆ. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ಮಿಲಿಟರಿ ಅಕಾಡೆಮಿ ಪದವೀಧರರೂ ಹೌದು. ಅವರ ಸೇನೆಯಲ್ಲಿ ಸಿಖ್‌ ರೆಜಿಮಂಟ್‌ನಲ್ಲಿದ್ದರು. 1965ರ ಇಂಡೋ-ಪಾಕ್‌ ಯುದ್ಧದಲ್ಲಿಸಕ್ರಿಯವಾಗಿ ಪಾಲ್ಗೊಂಡ ಹಿರಿಮೆ ಅವರಿಗಿದೆ. ರಾಜೀವ್‌ ಗಾಂಧಿಯ ಒತ್ತಾಸೆಯ ಮೇರೆಗೆ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿ 1980ರಲ್ಲಿಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು. ಆದರೆ, ಆಪರೇಷನ್‌ ಬ್ಲೂಸ್ಟಾರ್‌ ಕಾರ್ಯಾಚರಣೆ ವಿರೋಧಿಸಿ ತಮ್ಮ ಲೋಕಸಭಾ ಸದಸ್ಯತ್ವ ಹಾಗೂ ಕಾಂಗ್ರೆಸ್‌ ಪಾರ್ಟಿಗೆ ರಾಜೀನಾಮೆ ನೀಡಿ ಹೊರಬಂದರು. ಬಳಿಕ ಶಿರೋಮಣಿ ಅಕಾಲಿ ದಳ ಸೇರ್ಪಡೆಯಾಗಿ ತಲವಂಡಿ ಸಾಬೋ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ಸಚಿವರೂ ಆದರು. ಕೃಷಿ, ಅರಣ್ಯ, ಅಭಿವೃದ್ಧಿ ಮತ್ತು ಪಂಚಾಯತ್‌ ಇಲಾಖೆಗಳನ್ನು ನಿರ್ವಹಣೆ ಮಾಡಿ ಅನುಭವ ಪಡೆದುಕೊಂಡರು. 

ಆದರೆ, ಅಕಾಲಿದಳದಲ್ಲೂ ತುಂಬ ದಿನಗಳ ಕಾಲ ಅಮರೀಂದರ್‌ ಉಳಿಯಲಿಲ್ಲ. 1992ರಲ್ಲಿ ಆ ಪಕ್ಷ ವನ್ನು ತೊರೆದು ತಮ್ಮದೇ ಆದ ಶಿರೋಮಣಿ ಅಕಾಲಿ ದಳ(ಪ್ಯಾಂಥಿಕ್‌) ಸ್ಥಾಪಿಸಿದರು. ಆದರೆ, ವಿಧಾಸಭೆ ಚುನಾವಣೆಯಲ್ಲಿ ಹೀನಾಯವಾಗಿ ಅವರ ಪಕ್ಷ  ಸೋಲು ಕಂಡಿತು. ಸ್ವತಃ ಅಮರೀಂದರ್‌ ಅವರು ಕೇವಲ 856 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಪರಿಣಾಮ ತಮ್ಮ ಪಕ್ಷ ವನ್ನು ಅವರು 1998ರಲ್ಲಿಕಾಂಗ್ರೆಸ್‌ ಜತೆ ವಿಲೀನಗೊಳಿಸಿದರು. ಆಗ ಕಾಂಗ್ರೆಸ್‌ ನಾಯಕತ್ವ ಸೋನಿಯಾ ಗಾಂಧಿ ಹೆಗಲಿಗೇರಿತ್ತು. 1998ರಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು. ಆದರೆ, ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ  ಕಟ್ಟುವ ಹೊಣೆಗಾರಿಕೆ ಅವರನ್ನು ಮುಂಚೂಣಿಯ ನಾಯಕನನ್ನಾಗಿ ಮಾಡಿತು. 1999ರಿಂದ 2002, 2010ರಿಂದ 2013 ಮತ್ತು 2015ರಿಂದ 2017, ಹೀಗೆ ಮೂರು ಬೇರೆ ಬೇರೆ ಅವಧಿಯಲ್ಲಿ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರದ ಮೊಗಸಾಲೆಗೆ ತರುವಲ್ಲಿ ಯಶಸ್ವಿಯಾಗಿ, 2002ರಿಂದ 2007ರವರೆ ಮೊದಲ ಬಾರಿಗೆ  ಪಂಜಾಬ್‌ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅಮರೀಂದರ್‌ 2013ರಿಂದಲೂ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಕಾಯಂ ಆಹ್ವಾನಿತ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾಯಿತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಆದರೆ, ಪಂಜಾಬ್‌ನಲ್ಲಿ ಮೋದಿ ಅಲೆಯ ನಡುವೆಯೂ ಅರುಣ್‌ ಜೇಟ್ಲಿ ಅವರನ್ನು ಸೋಲಿಸುವಲ್ಲಿ ಅಮರೀಂದರ್‌ ಯಶಸ್ವಿಯಾಗಿದ್ದರು. ಪಟಿಯಾಲ ನಗರ ಮೂರು ಬಾರಿ, ಸಮನಾ ಹಾಗೂ ತಲ್ವಾಂಡಿ ಸಾಬೋ ವಿಧಾನಸಭೆ ಕ್ಷೇತ್ರಗಳನ್ನು ತಲಾ ಒಂದು ಬಾರಿ ಪ್ರತಿನಿಧಿಸಿದ್ದಾರೆ. 2015ರಲ್ಲಿ ಕಾಂಗ್ರೆಸ್‌ ನಾಯಕತ್ವ ಇವರನ್ನು ಮತ್ತೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ನೇಮಿಸಿತು. ಪರಿಣಾಮ 2017ರಲ್ಲಿ ಎಲೆಕ್ಷ ನ್‌ನಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ದಾಖಲಿಸಿ ಮತ್ತೆ ಅಧಿಕಾರಕ್ಕೇರಿತು. ಅಮರೀಂದರ್‌ ಸಿಂಗ್‌ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. 

ಪಂಜಾಬ್‌ನಲ್ಲಿ ತಾವೊಬ್ಬ ನಿರ್ಣಾಯಕ ನಾಯಕ ಎಂಬುದನ್ನು ಕಾಲಕಾಲಕ್ಕೆ ಅವರು ಸಾಬೀತುಪಡಿಸುತ್ತಾ ಬಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಹಿತಾಸಕ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕತ್ವದ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡಲು ಅವರು ಯಾವತ್ತೂ ಹಿಂಜರಿದಿಲ್ಲ. ಈಗ ಕಾಲ ಬದಲಾಗಿದೆ; ಪಂಜಾಬ್‌ನ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. 79 ವರ್ಷದ ಅಮರೀಂದರ್‌ ಅವರಿಗೀಗ ಮೊದಲಿದ್ದ ಚಾರ್ಮ್‌ ಇಲ್ಲ ಎಂಬುದನ್ನು ಅರಿತ ಹಲವು ಶಾಸಕರು, ನಾಯಕರು ಅವರ ವಿರುದ್ಧವೇ ನಿಂತು ಕಾಳಗ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅವರು ನೀಡಿರುವ ರಾಜೀನಾಮೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಸದ್ಯಕ್ಕೆ ಹೇಳುವುದು ಕಷ್ಟ. ಆರೇಳು ತಿಂಗಳು ಕಳೆದರೂ ಸಾಕು, ಎಲ್ಲವೂ ನಿಚ್ಚಳವಾಗಲಿದೆ.