ಸೋಮವಾರ, ಫೆಬ್ರವರಿ 13, 2017

ಹುಡುಗನೊಬ್ಬನ ಗಜಲ್‌ಗಳು: ಕ್ಯಾಮೆರಾ ಕನ್ಯೆಯ ಔಟ್ ಆಫ್ ಫೋಕಸ್ ಪ್ರೀತಿ

- ಅವಳದೊಂದು ಅದ್ಭುತ ಲೋಕ; ಅದರಲ್ಲಿ ನಾನಿದ್ದೆ ಎಂಬ ಹೆಮ್ಮೆಯಷ್ಟೇ


- ಪ್ರದ್ಯುಮ್ನ
ಮಹಾತ್ಮ ಗಾಂಧಿಯ ರಸ್ತೆಯ ಆ ಕಾಫಿ ಡೇಯ ಮಂದ ಬೆಳಕಿನಲ್ಲಿ ಅವಳ ಮುಖ ಅಸ್ಪಷ್ಟ ಕಾಣುತ್ತಿತ್ತು. ನಮ್ಮಿಬ್ಬರ ತಲೆಯೊಳಗೂ ವಿಚಾರಗಳ ಸ್ಪಷ್ಟತೆ ಇರಲಿಲ್ಲ. ಅಷ್ಟಕ್ಕೂ ಆ ಕಾಫಿ ಡೇ ನಮ್ಮಿಬ್ಬರಿಗೆ ಅಪರಿಚತವೇನೂ ಅಲ್ಲ. ಆದರೆ, ಅಲ್ಲಿರುವ ಎಲ್ಲ ಚೇರ್‌ಗಳೆಲ್ಲ ಭರ್ತಿಯಾಗಿದ್ದರೂ ನಾವಿಬ್ಬರೇ ಅಲ್ಲಿದ್ದೇವೆ ಎಂಬ ಭಾವನೆ ಮನೆ ಮಾಡಿತ್ತು. ಮೊದಲು ಅವಳು ಮಾತು ಆರಂಭಿಸಲಿ ಎಂದು ನಾನು; ನಾನೇ ಮೊದಲು ಮಾತನಾಡಲಿ ಎಂದು ಅವಳು. ಒಬ್ಬರಿಗೊಬ್ಬರು ಬಾಯಿ ಬಿಡುತ್ತಿಲ್ಲ. ಹೀಗೆ ಹತ್ತಾರು ನಿಮಿಷಗಳು ಸರಿದು ಹೋದವು. ಹಿನ್ನೆಲೆಯಲ್ಲಿ  ರಫಿ ಸಾಬ್ ಹಾಡುತ್ತಿದ್ದರು:
ತು ಇಸ್ ತರಹ ಸೇ ಮೇರಿ ಜಿಂದಗಿ ಮೇ ಶಾಮೀಲ್ ಹೈ
ಜಹಾಂ ಭೀ ಜಾಂವೂ ಯೇ ಲಗ್ತಾ ಹೈ ತೇರಿ ಮೆಹಫಿಲ್ ಹೈ
ನಮ್ಮಬ್ಬಿರ ನಡುವಿನ ಏಕಾಂತವನ್ನು ರಫಿ ಸಾಬ್‌ರ  ಈ ಹಾಡು ಮತ್ತಷ್ಟು ಘನ ಘೋರ ಸ್ಥಿತಿಗೆ ತಲುಪುವಂತೆ ಮಾಡುತ್ತಿತ್ತು. ಒಂದು ಹಂತದಲ್ಲಿ ಅವಳನ್ನು ಹಾಗೆಯೇ ಬಿಟ್ಟು ಎದ್ದು ಹೋಗಿ ಬಿಡಲೇ ಎಂಬ ಯೋಚನೆಯೂ ಸುಳಿದು ಹೋಯಿತು. ಮರುಗಳಿಗೆಯಲ್ಲೇ ಬೇಡ, ಇದೇ ಕೊನೆ ಭೇಟಿಯಾಗಬಹುದು. ಮತ್ತೆ ಅವಳು ಸಿಗುತ್ತಾಳೋ ಇಲ್ಲವೋ ಗೊತ್ತಿಲ್ಲ. ಕೊನೆಯ ಅವಕಾಶವನ್ನು ಹೀಗೆ ಫಲಪ್ರದವಿಲ್ಲದೆ ತಪ್ಪಿಸಿಕೊಳ್ಳುವುದು ಬೇಡ ಎಂದು ತಳವೂರಿ ಗಟ್ಟಿಯಾಗಿ ಕುಳಿತೆ. ಅಷ್ಟರಲ್ಲಿ ಆರ್ಡರ್ ಮಾಡಿದ್ದ ಕಾಫಿಯನ್ನು ಹಿಡಿದುಕೊಂಡು ಬಂದ ವೇಟರ್, ನಮ್ಮ ಮುಂದೆ ‘‘ಕಾಫಿ ಪ್ಲೀಸ್,’’  ಎಂದಾಗಲೇ, ಇಬ್ಬರು ‘‘ಇಲ್ಲಿಡಿ,’’ ಎಂದೆವು. ಬಹುಶಃ ಅದೊಂದು ನೆಪ ನಮ್ಮಿಬ್ಬರ ನಡುವೆ ಕವಿದಿದ್ದ ವೌನದ ಕತ್ತಲೆಯನ್ನು ಹೊಡೆದೊಡೆಸಿ, ಮಾತಿನ ಬೆಳಕು ಮೂಡಿಸಲು ಸಾಧ್ಯವಾಯಿತು ಅಂತ ಕಾಣುತ್ತದೆ.
‘‘ನಿಜವಾಗ್ಲೂ ನನ್ ಕ್ಷಮಿಸಿ ಬಿಡು. ಹಾಗಂತ, ನಾನು ಕ್ಷಮೆಗೆ ಯೋಗ್ಯಳು ಎಂದು ಹೇಳುತ್ತಿಲ್ಲ. ಆದರೆ, ಇದನ್ನು ಬಿಟ್ಟು ಬೇರೆ ಯಾವ ಪದಗಳು ಗೊತ್ತಾಗುತ್ತಿಲ್ಲ; ದಾರಿಯೂ ಕೂಡ,’’ ಎಂದು ಒಂದೇ ಉಸಿರಿನಲ್ಲಿ ಹೇಳಿದಳು. ಅಲ್ಲಿಗೆ ಎಲ್ಲವೂ ಸ್ಪಷ್ಟವಾಯಿತು. ಅವಳ ಮುಖವನ್ನೊಮ್ಮೆ ನೋಡಬೇಕು ಎಂದು ಕತ್ತು ಮೇಲೆತ್ತಿ ನೋಡಲು ಪ್ರಯತ್ನಿಸಿದೆ. ಅದಾಗಲೇ ಅವಳ ಕೆನ್ನೆ ಮೇಲೆ ಕಣ್ಣೀರು ಧಾರೆಯಾಗುತ್ತಿತ್ತು. ಆ ಕ್ಷಣದಲ್ಲಿ ಅವಳಿಗೇನು ಹೇಳಬೇಕು ಎಂದು ತೋಚದೆ ಮತ್ತೆ ನನ್ನ ಚಿತ್ತವನ್ನು ಕಾಫಿಯ ಮೇಲೆ ನೆಟ್ಟೆ. ಕಪ್‌ನಿಂದ ಮೇಲೇಳುತ್ತಿದ್ದ ಹಬೆಯ ಚಕ್ರಗಳು ನನ್ನಲ್ಲೇಳುತ್ತಿದ್ದ ದುಃಖದ ಅಲೆಗಳನ್ನೇ ಸಮೀಕರಿಸುತ್ತಿದ್ದವು.
ಕೇವಲ ಆರು ತಿಂಗಳ ಹಿಂದೆ ನಾವು ಹೀಗಿರಲಿಲ್ಲ; ನಮ್ಮ ನಡುವಿನ ಜಗತ್ತೇ ಬೇರೆಯದ್ದಿತ್ತು. ಅವಳೋ ಕ್ಯಾಮೆರಾ ಹೇಗಲಿಗೇರಿಸಿಕೊಂಡು ಹೊರಟಳೆಂದರೆ ಅದಕ್ಕೆ ದಿಕ್ಕು ದಿಸೆ ಇರುತ್ತಿರಲಿಲ್ಲ. ಹೋಗುವ ದಾರಿ ಯಾವುದು, ಅದು ಎಲ್ಲಿಗೆ ತಲುಪುತ್ತದೆ ಎಂಬುದನ್ನೂ ಯೋಚಿಸುತ್ತಿರಲಿಲ್ಲ. ಎದುರಿಗೆ ಸಿಗುವ ಪ್ರತಿ ವ್ಯಕ್ತಿ, ಗಿಡ, ಮರ, ಪ್ರಾಣಿ, ಪಕ್ಷಿ, ಮನೆ, ದಾರಿ ಬದಿಯ ಕಲ್ಲುಗಳನ್ನಿಟ್ಟು ಪೂಜೆ ಮಾಡುವ ದೇವಸ್ಥಾನವಲ್ಲದ ದೇವಸ್ಥಾನ.... ಹೀಗೆ ಕಣ್ಣಿಗೆ ಕಾಣುವ ಎಲ್ಲವೂ ಅವಳ ಕ್ಯಾಮೆರಾದಲ್ಲಿ ಬಂದಿಯಾಗುತ್ತಿದ್ದವು. ಅವಕ್ಕೊಂದು ಕವಿತೆಯ ಸ್ಪರ್ಶ ದಕ್ಕುತ್ತಿತ್ತು. ಅಷ್ಟೂಂದು ಸೃಜನಾತ್ಮಕವಾಗಿ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಳು. ಅವಳ ಕ್ಯಾಮೆರಾದಲ್ಲಿ ಬಂದಿಯಾಗುವ ಪ್ರತಿ ಚಿತ್ರವೂ ಒಂದೊಂದು ಕತೆ ಹೇಳುತ್ತಿದ್ದವು. ಹಾಗೆ ನೋಡಿದರೆ, ನೈಜದಲ್ಲಿದ್ದ ಚಿತ್ರಗಳಿಗಿಂತ ಆಕೆ ತೆಗೆದ ಚಿತ್ರಗಳು ಹೆಚ್ಚು ಗಮನ ಸೆಳೆಯುತ್ತಿದ್ದವು. ಗೊತ್ತಲ್ಲಿದಂತೆಯೇ ನಿಮ್ಮಳಗೇ ಇಳಿದು ಬಿಡುತ್ತಿದ್ದವು. ಅವಳ ಕ್ಯಾಮೆರಾ ‘ಕಣ್ಣ ಚಳಕ’ ಹಾಗಿತ್ತು. ಅವಳದೊಂದು ಅದ್ಭುತ ಲೋಕ; ಅದರಲ್ಲಿ ನಾನಿದ್ದೆ ಎಂಬ ಹೆಮ್ಮೆಯಷ್ಟೇ ನನ್ನ ಪಾಲಿಗೆ ಈಗ.
ಅಂಥವಳು ನನಗೆ ಸಿಕ್ಕಿದ್ದು ರೋಚಕವೇ. ನಮ್ಮಿಬ್ಬರು ನಡುವೆ ಅಂಥ ಸಾಮತ್ಯಗಳೇನಿಲ್ಲ. ನಾನೋ ಪುಸ್ತಕದ ಹುಳ. ಕೈಗೆ ಸಿಗುವ ಪುಸ್ತಕಗಳನ್ನು ಓದಲು ಕುಳಿತರೆ ಜಗತ್ತೇ ಮರೆತು ಹೋಗುತ್ತಿತ್ತು. ಆದರೆ, ನಮ್ಮಿಬ್ಬರನ್ನು ಬಂಧಿಸಿದ  ಏಕೈಕ ತಂತು; ‘ಮರಗಳ ಪ್ರೇಮ.’ ಅವಳೂ ಅಷ್ಟೇ ಅಭಿವೃದ್ಧಿಯ ನೆಪದಲ್ಲಿ ನಗರದಲ್ಲಾಗುತ್ತಿರುವ ಮರಗಳ ಮಾರಣಹೋಮಕ್ಕೆ ಆಕ್ರೋಶಿತಗೊಳ್ಳುತ್ತಿದ್ದಳು. ಅದನ್ನು ವಿರೋಧಿಸಿ ನಡೆಯುವ ಪ್ರತಿಭಟನೆ, ಚಳವಳಿಗಳೆನ್ನೆಲ್ಲ ತನ್ನ ಕ್ಯಾಮೆರಾ ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದಳು. ಇಂಥದ್ದೇ ಒಂದು ಪ್ರತಿಭಟನೆ ವೇಳೆ, ಆಕೆ ಪರಿಚಯವಾಗಿದ್ದು. ಅವಳೇನೂ ಅಂಥ ಹೇಳಿಕೊಳ್ಳುವಂಥ ಚೆಲುವೆಯಲ್ಲ. ಆದರೆ, ಅವಳಿಗಿರುವ ಬದ್ಧತೆ, ಪ್ಯಾಶನ್, ಆತ್ಮವಿಶ್ವಾಸ, ಪರಿಸರ ಕಾಳಜಿ ಅವಳತ್ತ ತುಸು ಹೆಚ್ಚೇ ಯೋಚಿಸುವಂತೆ ಮಾಡಿದ್ದವು. ಪರಿಚಯವಾಗಿದ್ದಾಗ ಹಾಯ್, ಬಾಯ್‌ಗಷ್ಟೇ ಸಿಮೀತವಾಗಿದ್ದ ಸಂಬಂಧ ಅದ್ಯಾವಾಗ ಸ್ನೇಹಕ್ಕೆ ತಿರುಗಿ ಮತ್ತೆ ಪ್ರೇಮಕ್ಕೆ ವಾಲಿತು ಎಂದು ಹೇಳುವುದು ಕಷ್ಟ. ಪ್ರೇಮ ಎಂದರೆ, ‘ಆಗುವುದಲ್ಲ’ ಅದು ‘ಸಂಭವಿಸುವುದು’ ಎಂದು ಅದ್ಯಾರೋ ಹೇಳಿದ್ದರು; ನಾನು ನಂಬಿರಲಿಲ್ಲ. ಆದರೆ ಈಗ ನಂಬದೇ ವಿಧಿಯಿಲ್ಲ. ಹೀಗೆ ಸಂಭವಿಸಿದ ಪ್ರೇಮಕ್ಕೆ ನಂಬಿಕೆಯೇ ಮೂಲದ್ರವ್ಯ. ನಮ್ಮಿಬ್ಬರ ಮಧ್ಯೆ ಈ ಮೂಲದ್ರವ್ಯಕ್ಕೇನೂ ಕೊರತೆ ಇರಲಿಲ್ಲ. ಸಂಭವಿಸಿದ ಪ್ರೇಮ ಹೆಮ್ಮರವಾಗಿ ಬೆಳೆದಿತ್ತು. ಅದರ ತಂಪನೆಯ ನೆರಳಲ್ಲಿ ಇಡೀ ಜಗತ್ತೆಲ್ಲ ಸುಂದರ ತಿಳಿ ಕೊಳದಂತಿತ್ತು. ಅಲ್ಲಿ ಕಷ್ಟಗಳೆಂಬ, ಅಪನಂಬಿಕೆಗಳೆಂಬ ಬಿಸಲಿನ ಪ್ರಖರ ಕಿರಣಗಳು ನಮ್ಮನ್ನು ತಾಕುತ್ತಿರಲಿಲ್ಲ. ಎಲ್ಲವೂ ಚೆಂದ ಇತ್ತು. ಮನವರಿತ ಗೆಳತಿ ಬಳಿ ಇರಲು ಇನ್ನೇನು ಬೇಕು?
ಹೀಗೆ ಎಲ್ಲವೂ ಚೆಂದ ಇದ್ದಾಗಲೇ, ಸರಳ ರೇಖೆಯಲ್ಲಿ ಜೀವನ ಸಾಗುತ್ತಿರುವಾಗಲೇ ಧುತ್ತನೇ ಎದುರಾಗುವ ಸಂಕಷ್ಟಗಳು ನಿಮ್ಮನ್ನು ಇನ್ನಿಲ್ಲದಂತೆ ಹೈರಾಣು ಮಾಡುತ್ತವೆ. ಪ್ರೇಮ ಪ್ರಕರಣಗಳೆಲ್ಲವೂ ಯಶಸ್ವಿಯಾಗಬೇಕೆಂದೇನೂ ರೂಲ್ಸ್ ಇಲ್ಲವಲ್ಲ. ಬಹುಶಃ ಈ ರೂಲ್ಸ್ ನಮ್ಮಿಬ್ಬರಿಗೂ ತುಸು ಹೆಚ್ಚೇ ಅಪ್ಲೈ ಆಯಿತು ಅಂತಾ ಕಾಣುತ್ತದೆ. ಈಗಲೂ ನನಗೆ ನಿರ್ದಿಷ್ಟ ಕಾರಣಗಳು ಹೊಳೆಯುತ್ತಿಲ್ಲ. ನಮ್ಮಿಬ್ಬರ ನಡುವಿನ ಬಾಂಧವ್ಯಕ್ಕೆ ತೊಡಕಾಗಿದ್ದು ಏನು? ಯಾತಕ್ಕಾಗಿ ನಾವಿಬ್ಬರೂ ಈಗ ಒಬ್ಬರನ್ನೊಬ್ಬರನ್ನು ಬಿಟ್ಟು ಅಗಲುವ ಸ್ಥಿತಿಗೆ ಬಂದು ಬಿಟ್ಟಿದ್ದೇವೆ? ಇಂಥ ಪರಿಸ್ಥಿತಿಗೆ ಅಸಲಿಗೆ ಕಾರಣಗಳೇನಾದರೂ ಇವೆಯೇ... ಎಷ್ಟೇ ಯೋಚಿಸಿದರೂ ಉತ್ತರ ಸಿಗುತ್ತಿಲ್ಲ. ನಮ್ಮಿಬ್ಬರನ್ನು ಬಂಧಿಸಿದ ‘ಮರಗಳ ಪ್ರೇಮ’ ಎಂಬ ಬದ್ಧತೆಯೇಕೆ ಇಷ್ಟು ಬೇಗ ಒಣಗಿ ಹೋಯಿತು? ಆದರೆ, ಈಗಂತೂ ಕವಲು ದಾರಿಯಲ್ಲಿ ನಿಂತಿದ್ದೇವೆ. ಸರಳ ರೇಖೆಯ ಜೀವನ, ವಕ್ರರೇಖೆಯಲ್ಲಿ ಅಂತ್ಯವಾಗುತ್ತಿದೆ ಎಂಬುದಂತೂ ಸತ್ಯ. ಇದಕ್ಕೆ ತಾನೇ ಕಾರಣ ಎಂದು, ಕಾರಣ ಹೇಳದೆ ಹೊರಟು ಹೋಗುವ ಸ್ಥಿತಿಯಲ್ಲಿ ಅವಳಿದ್ದಾಳೆ.
ಪ್ರೇಮ ಸಂಬಂಧ ಕಡಿದುಕೊಳ್ಳುವುದಕ್ಕೆ ಈ ಕಾಫಿ ಡೇ ವೇದಿಕೆಯಾಗಿದೆಯಷ್ಟೇ. ಅವಳಿಗೂ ಗೊತ್ತು ನಂಬಿಕೆ ಬುನಾದಿಯ ಮೇಲೆ ಬೆಳೆದ ಪ್ರೇಮವನ್ನು ಕತ್ತರಿಸಿಕೊಳ್ಳುವುದು ಅಷ್ಟು ಸರಳವಲ್ಲ. ಅವಳ ಮುಖದ ಮೇಲೆ ಎದ್ದೇಳುತ್ತಿದ್ದ ಭಾವನೆಗಳೇ ಎಲ್ಲವನ್ನೂ ಹೇಳುತ್ತಿದ್ದವು. ಆದರೆ, ಅವಳು ನಿಶ್ಚಿಯಿಸಿದ್ದಾಳೆ, ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆಂಬುದಂತೂ ‘‘ಕ್ಷಮಿಸಿ ಬಿಡು,’’ ಎಂದು ಹೇಳುವಾಗಲೇ ಮನವರಿಕೆಯಾಗಿತ್ತು. ಇನ್ನು ಅವಳಿಗೆ ಕಾರಣ ಕೇಳಿಯೂ ಉಪಯೋಗವಿಲ್ಲ. ತಡೆಯುವುದು ಅಸಾಧ್ಯದ ಮಾತು. ಅವಳ ಜೀವನ ಅವಳದ್ದು; ನನ್ನ ಜೀವನ ನನ್ನದು. ಹಾಗಂತ, ಅವಳ ನೆನಪುಗಳಿಂದ ದೂರ ಉಳಿಯತ್ತೇನೆಂದು ಭರವಸೆಯನ್ನಾದರೂ ಹೇಗೆ ಕೊಡಲಿ? ನೆನಪುಗಳಿಲ್ಲದಿದ್ದರೆ ಜೀವನಕ್ಕೇನು ಅರ್ಥವಿದೆ? ಒಣಗಿ ಹೋದ ಬೊಡ್ಡೆಯಿಂದ ಚಿಗುರು ಮತ್ತೆ ಮೂಡದೇ? ನಮ್ಮಿಬ್ಬರ ಜೀವನದಲ್ಲಿ ವಸಂತಗಾನ ಮತ್ತೆ ಶುರುವಾಗಬಹುದು ಎಂದು ಹೇಳಲು ಹೊರಟವನ ಮಾತುಗಳು ಗಂಟಲಲ್ಲೇ ಉಳಿದವು.
ಕಣ್ಣೀರು ಒರೆಸಿಕೊಳ್ಳುತ್ತಾ ಆಕೆ ಎದ್ದು ಹೋಗುವ ಹೊತ್ತಿಗೆ, ಟೇಬಲ್ ಮೇಲಿದ್ದ ಕಾಫಿ ತಣ್ಣಗಾಗಿತ್ತು; ನನ್ನೊಳಗೂ ಅದೇ ಭಾವ. ಹಿನ್ನೆಲೆಯಲ್ಲಿ, ಅದೇ ರಫಿ ಸಾಬ್ ತನ್ನ ತಣ್ಣನೆಯ ದನಿಯ ಹಾಡುತ್ತಿದ್ದರು:
ಇಸ್ಸ ಭರಿ ದುನಿಯಾ ಮೇಂ, ಕೋಯಿ ಭಿ ಹಮಾರಾ ನ ಹುವಾ
ಗೈರ ತೋ ಗೈರ ಹೈ, ಅಪ್ನೋಂ ಕಾ ಸಹಾರಾ ನ ಹುವಾ...




This article has been published in VijayKarnataka, on 13rd Feb 2017 edition

ಕಾಮೆಂಟ್‌ಗಳಿಲ್ಲ: