ಭಾನುವಾರ, ಸೆಪ್ಟೆಂಬರ್ 19, 2021

Captain Amarinder Singh: ಅಮರೀಂದರ್ ಸಿಂಗ್ 'ಜನರ ಮಹಾರಾಜ'

ನವಜೋತ್‌ ಸಿಧು ಜೊತೆಗಿನ ಒಳಜಗಳದಲ್ಲಿ ಕೈಸೋತ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
‘‘ಇನ್ನು ನಾನು ಅವಮಾನ ಸಹಿಸಲಾರೆ,’’ ಎನ್ನುತ್ತಲೇ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ನ ನೂತನ ಅಧ್ಯಕ್ಷ , ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಹಾಗೂ ಅಮರೀಂದರ್‌ ಸಿಂಗ್‌ ನಡುವಿನ ಕಿತ್ತಾಟ ಒಂದು ಹಂತಕ್ಕೆ ತಲುಪಿದೆ. 

ಅನುಮಾನವೇ ಬೇಡ; ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಪಂಜಾಬ್‌ ಕಾಂಗ್ರೆಸ್‌ನ ದಿಗ್ಗಜ ಧುರೀಣ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಬೇರುಮಟ್ಟದಿಂದ ಸಂಘಟಿಸಿ, ಅದಕ್ಕೊಂದು ಸಾಂಸ್ಥಿಕ ರೂಪ ನೀಡಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಕೊಡುಗೆ ಅನನ್ಯ, ಅನುಪಮ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಅವರು ಮುಖ್ಯಮಂತ್ರಿ ಆಯ್ಕೆಯ ಮೊದಲ ಆದ್ಯತೆಯಾ­ಗುತ್ತಿದ್ದರು. ಪರಿಣಾಮ ಎರಡು ಬಾರಿ ಸಿಎಂ ಆಗಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ ಮೇಲೆ ಬಿಗಿ ಹಿಡಿತ ಹೊಂದಿದ್ದ ‘ಕ್ಯಾಪ್ಟನ್‌’ ವಿರುದ್ಧವೇ ಶಾಸಕರು, ಕೆಲವು ನಾಯಕರು ಬಂಡೆದ್ದ ಪರಿಣಾಮ, ಕಳೆದ ಎರಡ್ಮೂರು ವರ್ಷದಲ್ಲಿ ಪಂಜಾಬ್‌ ಕಾಂಗ್ರೆಸ್‌ ಬೀದಿ ಜಗಳವನ್ನು ಇಡೀ ರಾಷ್ಟ್ರವೇ ನೋಡಿದೆ. ಹಾಗೆ ನೋಡಿದರೆ, 2017ರಲ್ಲಿ ಪ್ರಚಂಡ ಬಹುಮತದಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂತಲ್ಲ, ಆಗಲೇ ಈ ಬಂಡಾಯದ ಕಿಚ್ಚು ಶುರವಾಗಿದ್ದು! ಹೇಗೆಂದರೆ, ಬಿಜೆಪಿಯಿಂದ ವಲಸೆ ಬಂದು ಕಾಂಗ್ರೆಸ್‌ ಸೇರಿದ್ದ ಮಾಜಿ ಕ್ರಿಕೆಟಿಗ ‘ಸಿಕ್ಸರ್‌’ ಸಿಧು, ಉಪಮುಖ್ಯಮಂತ್ರಿಯ ಹುದ್ದೆಗೆ ಹಕ್ಕು ಚಲಾಯಿಸಿದ್ದರು. 

ಆದರೆ, ಅಂದಿನ ಸನ್ನಿವೇಶದಲ್ಲಿ ಅಮರೀಂದರ್‌ ಸಿಂಗ್‌ ಏರಿದ್ದ ಎತ್ತರಕ್ಕೆ ದಿಲ್ಲಿ ವರಿಷ್ಠ ಮಂಡಳಿ ಎದುರಾಡುವ ಮಾತೇ ಇರಲಿಲ್ಲ, ಪರಿಣಾಮ ಸಿಧು ಡಿಸಿಎಂ ಸ್ಥಾನದಿಂದ ವಂಚಿತರಾಗಿ, ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾ­ಯಿತು. ಆದರೆ, ಅವರೊಳಗಿನ ಮಹತ್ವಾಕಾಂಕ್ಷಿ ಸಿಧು ತೃಪ್ತನಾಗಲಿಲ್ಲ. ಸ್ವಲ್ಪ ದಿನಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು, ಕ್ಯಾಪ್ಟನ್‌ ವಿರುದ್ಧ ಬಂಡಾಯ ಸಾರಿದರು. ಇಷ್ಟೇ ಆದರೆ ಪರ್ವಾಗಿರಲಿಲ್ಲ. ಸಿಎಂ ಆಗಿದ್ದ ಅಮರೀಂದರ್‌ ಅವರು ನಿಧಾನವಾಗಿ ಪಕ್ಷ ದ ಮೇಲಿನ ಹಿಡಿತ ಕಳೆದುಕೊಳ್ಳುವುದಕ್ಕೂ, ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುವುದಕ್ಕೂ, ಸಿಧು ಅತೃಪ್ತ ಶಾಸಕರ ನಾಯಕನಾಗಿ ಹೊರಹೊಮ್ಮುವುದಕ್ಕೂ ಸರಿಹೋಗಿದೆ. ಹಲವು ಬಾರಿ ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಪಂಜಾಬ್‌ ಬಿಕ್ಕಟ್ಟನ್ನು ಶಮನ ಮಾಡಿದರು, ಅದು ತಾತ್ಕಾಲಿಕವಾಗಿತ್ತಷ್ಟೇ. ನವಜೋತ್‌ ಸಿಂಗ್‌ ಸಿಧು ಅವರನ್ನು ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ಮಾಡಿದ ಮೇಲೆ ಒಳಜಗಳ ಮತ್ತಷ್ಟು ಬಿಗಡಾಯಿಸಿತು. 

ಅಮರೀಂದರ್ ರಾಜೀನಾಮೆಯು ಪಂಜಾಬ್‌ ಕಾಂಗ್ರೆಸ್‌ನ ಒಳಜಗಳದ ಫಲಿತಾಂಶವಾದರೂ ಅದಕ್ಕೆ ಸಾಕಷ್ಟು ಆಯಾಮಗಳಿವೆ. 2017ರ ಚುನಾವಣೆ ವೇಳೆಗೆ ಪ್ರಶ್ನಾತೀತ ನಾಯಕರಾಗಿದ್ದ ಅಮರೀಂದರ್‌ ಸಿಂಗ್‌ 2022ರ ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯತೆಯಲ್ಲಿ ಕುಸಿದಿದ್ದಾರೆ. ‘ಜನರ ಮಹಾರಾಜ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು ಕೊನೆ ಕೊನೆಗೆ ಜನರಿಗೆ ಸಿಗುವುದೇ ಕಷ್ಟವಾಗಿತ್ತು. ಅಮರೀಂದರ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಗೆಲುವು ಸಿಗಲಾರದು ಎಂಬ ಸಮೀಕ್ಷೆಯೂ ಅವರು ನಿರ್ಗಮನಕ್ಕೆ ಕಾರಣವಾಯಿತು. ಅವರ ನೆರಳಾಗಿದ್ದ ಬಹಳಷ್ಟು ಶಾಸಕರು ಪಾಳಯ ಬದಲಿಸಿದ್ದಾರೆ ಎನ್ನುತ್ತಾರೆ  ಪಂಜಾಬ್ ರಾಜಕಾರಣ ಬಲ್ಲ ವಿಶ್ಲೇಷಕರು. 

‘ಸೇನೆ ಇಲ್ಲದ ವಯೋವೃದ್ಧ ಸೇನಾನಿ’ಯಾಗಿರುವ ಅಮರೀಂದರ್‌ ಸಿಂಗ್‌ ವ್ಯಕ್ತಿತ್ವ ಕೇವಲ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಯೋಧ, ಸೇನಾ ಇತಿಹಾಸಿಕಾರ, ಶೆಫ್‌, ತೋಟಗಾರ, ಬರಹಗಾರ.. ಹೀಗೆ ನಾನು ಮುಖಗಳಿವೆ. ಅವರು ಅಪರೂಪದ ರಾಜಕೀಯ ನಾಯಕರು. ರಾಯಲ್‌ ಫ್ಯಾಮಿಲಿಯ ಅಮರೀಂದರ್‌ ರಾಜಕಾರಣಕ್ಕೆ ಬಂದಿದ್ದು, ತಮ್ಮ ಶಾಲಾ ದಿನಗಳ ಸ್ನೇಹಿತ ರಾಜೀವ್‌ ಗಾಂಧಿಯ ಒತ್ತಾಸೆಯಿಂದಾಗಿ. 1942 ಮಾರ್ಚ್‌ 11ರಂದು ಪಟಿಯಾಲಾದ ರಾಜಮನೆತನದಲ್ಲಿ ಜನಿಸಿದರು. ತಂದೆ ಮಹಾರಾಜ ಸರ್‌ ಯಾದವೀಂದ್ರ ಸಿಂಗ್‌ ಮತ್ತು ತಾಯಿ ಮಹಾರಾಣಿ ಮೊಹೀಂದರ್‌ ಕೌರ್‌. ಶಿಮ್ಲಾದ ಲೊರೆಟೋ ಕಾನ್ವೆಂಟ್‌, ಸನಾವರ್‌ದ ಲಾವರೆನ್ಸ್‌ ಸ್ಕೂಲ್‌ನಲ್ಲಿ ಆರಂಭದ ಶಿಕ್ಷ ಣ ಪಡೆದು, ಡೆಹ್ರಾಡೂನ್‌ನ ದಿ ಡೂನ್‌ ಸ್ಕೂಲ್‌ಗೆ ಸೇರಿದರು. ಅಮರೀಂದರ್‌ ಅವರ ಪತ್ನಿ ಪ್ರಣೀತ್‌ ಕೌರ್‌. ರಣೀಂದರ್‌ ಸಿಂಗ್‌ ಮತ್ತು ಜೈ ಇಂದೇರ್‌ ಕೌರ್‌ ಮಕ್ಕಳು. ಪತ್ನಿ ಪ್ರಣೀತ್‌ ಕೌರ್‌ ಅವರು ಸಂಸದೆಯಾಗಿದ್ದರು ಮತ್ತು 2009ರಿಂದ ಅಕ್ಟೋಬರ್‌ 2012ರವರೆಗೆ ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಮರೀಂದರ್‌ ಅವರ ಸಹೋದರಿ ಹೇಮಿಂದರ್‌ ಕೌರ್‌ ಮಾಜಿ ವಿದೇಶಾಂಗ ಸಚಿವರಾಗಿದ್ದ ಕೆ. ನಟ್ವರ್‌ ಸಿಂಗ್‌ ಅವರ ಪತ್ನಿ. ಹಾಗೆಯೇ, ಶಿರೋಮಣಿ ಅಕಾಲಿ ದಳ(ಎ)ದ ಮುಖ್ಯಸ್ಥ ಸಿಮ್ರಂಜಿತ್‌ ಸಿಂಗ್‌ ಮನ್‌ ಕೂಡ ಇವರ ಸಂಬಂಧಿ. ಅಮರೀಂದರ್‌ ಸಿಂಗ್‌ ಅವರ ಒಟ್ಟು ಫ್ಯಾಮಿಲಿ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ.

ರಾಜಕಾರಣಕ್ಕೆ ಕಾಲಿಡುವ ಮುನ್ನ ಅಮರೀಂದರ್‌ ಅವರು, ಸೇನೆಯಲ್ಲಿ ಕ್ಯಾಪ್ಟನ್‌ ಆಗಿದ್ದರು. 1963ರಿಂದ 1966ವರೆಗೆ ಸೇವೆ ಸಲ್ಲಿಸಿದ್ದಾರೆ. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ಮಿಲಿಟರಿ ಅಕಾಡೆಮಿ ಪದವೀಧರರೂ ಹೌದು. ಅವರ ಸೇನೆಯಲ್ಲಿ ಸಿಖ್‌ ರೆಜಿಮಂಟ್‌ನಲ್ಲಿದ್ದರು. 1965ರ ಇಂಡೋ-ಪಾಕ್‌ ಯುದ್ಧದಲ್ಲಿಸಕ್ರಿಯವಾಗಿ ಪಾಲ್ಗೊಂಡ ಹಿರಿಮೆ ಅವರಿಗಿದೆ. ರಾಜೀವ್‌ ಗಾಂಧಿಯ ಒತ್ತಾಸೆಯ ಮೇರೆಗೆ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿ 1980ರಲ್ಲಿಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು. ಆದರೆ, ಆಪರೇಷನ್‌ ಬ್ಲೂಸ್ಟಾರ್‌ ಕಾರ್ಯಾಚರಣೆ ವಿರೋಧಿಸಿ ತಮ್ಮ ಲೋಕಸಭಾ ಸದಸ್ಯತ್ವ ಹಾಗೂ ಕಾಂಗ್ರೆಸ್‌ ಪಾರ್ಟಿಗೆ ರಾಜೀನಾಮೆ ನೀಡಿ ಹೊರಬಂದರು. ಬಳಿಕ ಶಿರೋಮಣಿ ಅಕಾಲಿ ದಳ ಸೇರ್ಪಡೆಯಾಗಿ ತಲವಂಡಿ ಸಾಬೋ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ಸಚಿವರೂ ಆದರು. ಕೃಷಿ, ಅರಣ್ಯ, ಅಭಿವೃದ್ಧಿ ಮತ್ತು ಪಂಚಾಯತ್‌ ಇಲಾಖೆಗಳನ್ನು ನಿರ್ವಹಣೆ ಮಾಡಿ ಅನುಭವ ಪಡೆದುಕೊಂಡರು. 

ಆದರೆ, ಅಕಾಲಿದಳದಲ್ಲೂ ತುಂಬ ದಿನಗಳ ಕಾಲ ಅಮರೀಂದರ್‌ ಉಳಿಯಲಿಲ್ಲ. 1992ರಲ್ಲಿ ಆ ಪಕ್ಷ ವನ್ನು ತೊರೆದು ತಮ್ಮದೇ ಆದ ಶಿರೋಮಣಿ ಅಕಾಲಿ ದಳ(ಪ್ಯಾಂಥಿಕ್‌) ಸ್ಥಾಪಿಸಿದರು. ಆದರೆ, ವಿಧಾಸಭೆ ಚುನಾವಣೆಯಲ್ಲಿ ಹೀನಾಯವಾಗಿ ಅವರ ಪಕ್ಷ  ಸೋಲು ಕಂಡಿತು. ಸ್ವತಃ ಅಮರೀಂದರ್‌ ಅವರು ಕೇವಲ 856 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಪರಿಣಾಮ ತಮ್ಮ ಪಕ್ಷ ವನ್ನು ಅವರು 1998ರಲ್ಲಿಕಾಂಗ್ರೆಸ್‌ ಜತೆ ವಿಲೀನಗೊಳಿಸಿದರು. ಆಗ ಕಾಂಗ್ರೆಸ್‌ ನಾಯಕತ್ವ ಸೋನಿಯಾ ಗಾಂಧಿ ಹೆಗಲಿಗೇರಿತ್ತು. 1998ರಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು. ಆದರೆ, ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ  ಕಟ್ಟುವ ಹೊಣೆಗಾರಿಕೆ ಅವರನ್ನು ಮುಂಚೂಣಿಯ ನಾಯಕನನ್ನಾಗಿ ಮಾಡಿತು. 1999ರಿಂದ 2002, 2010ರಿಂದ 2013 ಮತ್ತು 2015ರಿಂದ 2017, ಹೀಗೆ ಮೂರು ಬೇರೆ ಬೇರೆ ಅವಧಿಯಲ್ಲಿ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರದ ಮೊಗಸಾಲೆಗೆ ತರುವಲ್ಲಿ ಯಶಸ್ವಿಯಾಗಿ, 2002ರಿಂದ 2007ರವರೆ ಮೊದಲ ಬಾರಿಗೆ  ಪಂಜಾಬ್‌ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅಮರೀಂದರ್‌ 2013ರಿಂದಲೂ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಕಾಯಂ ಆಹ್ವಾನಿತ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾಯಿತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಆದರೆ, ಪಂಜಾಬ್‌ನಲ್ಲಿ ಮೋದಿ ಅಲೆಯ ನಡುವೆಯೂ ಅರುಣ್‌ ಜೇಟ್ಲಿ ಅವರನ್ನು ಸೋಲಿಸುವಲ್ಲಿ ಅಮರೀಂದರ್‌ ಯಶಸ್ವಿಯಾಗಿದ್ದರು. ಪಟಿಯಾಲ ನಗರ ಮೂರು ಬಾರಿ, ಸಮನಾ ಹಾಗೂ ತಲ್ವಾಂಡಿ ಸಾಬೋ ವಿಧಾನಸಭೆ ಕ್ಷೇತ್ರಗಳನ್ನು ತಲಾ ಒಂದು ಬಾರಿ ಪ್ರತಿನಿಧಿಸಿದ್ದಾರೆ. 2015ರಲ್ಲಿ ಕಾಂಗ್ರೆಸ್‌ ನಾಯಕತ್ವ ಇವರನ್ನು ಮತ್ತೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ನೇಮಿಸಿತು. ಪರಿಣಾಮ 2017ರಲ್ಲಿ ಎಲೆಕ್ಷ ನ್‌ನಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ದಾಖಲಿಸಿ ಮತ್ತೆ ಅಧಿಕಾರಕ್ಕೇರಿತು. ಅಮರೀಂದರ್‌ ಸಿಂಗ್‌ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. 

ಪಂಜಾಬ್‌ನಲ್ಲಿ ತಾವೊಬ್ಬ ನಿರ್ಣಾಯಕ ನಾಯಕ ಎಂಬುದನ್ನು ಕಾಲಕಾಲಕ್ಕೆ ಅವರು ಸಾಬೀತುಪಡಿಸುತ್ತಾ ಬಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಹಿತಾಸಕ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕತ್ವದ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡಲು ಅವರು ಯಾವತ್ತೂ ಹಿಂಜರಿದಿಲ್ಲ. ಈಗ ಕಾಲ ಬದಲಾಗಿದೆ; ಪಂಜಾಬ್‌ನ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. 79 ವರ್ಷದ ಅಮರೀಂದರ್‌ ಅವರಿಗೀಗ ಮೊದಲಿದ್ದ ಚಾರ್ಮ್‌ ಇಲ್ಲ ಎಂಬುದನ್ನು ಅರಿತ ಹಲವು ಶಾಸಕರು, ನಾಯಕರು ಅವರ ವಿರುದ್ಧವೇ ನಿಂತು ಕಾಳಗ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅವರು ನೀಡಿರುವ ರಾಜೀನಾಮೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಸದ್ಯಕ್ಕೆ ಹೇಳುವುದು ಕಷ್ಟ. ಆರೇಳು ತಿಂಗಳು ಕಳೆದರೂ ಸಾಕು, ಎಲ್ಲವೂ ನಿಚ್ಚಳವಾಗಲಿದೆ.



Virtual RAM: ವರ್ಚುವಲ್‌ RAM ಇದ್ದರೆ ಆರಾಮ್‌!

- ಮಲ್ಲಿಕಾರ್ಜುನ ತಿಪ್ಪಾರ
ಇಂದಿದ್ದ ಟೆಕ್ನಾಲಜಿ ಮಾರನೇ ದಿನಕ್ಕೆ ಹಳೆಯದ್ದಾಗಿ­ರುತ್ತದೆ. ಈ ಕಾರಣಕ್ಕಾಗಿಯೇ ತಂತ್ರಜ್ಞಾನವನ್ನು ನಿತ್ಯ ನೂತನ ಎಂದು ಕರೆಯುವುದು. ಇತ್ತೀಚಿನ ದಿನಗಳಲ್ಲಿಹೆಚ್ಚು ಸದ್ದು ಮಾಡುತ್ತಿರುವ ವರ್ಚವಲ್‌ RAM (Virutval RAM) ಬಗ್ಗೆ ಕೇಳಿರಬಹುದು. ಸ್ಯಾಮ್ಸಂಗ್‌ನಂಥ ಪ್ರಮುಖ ಕಂಪನಿಗಳು ಈ ವರ್ಚುವಲ್‌ RAM ಬಳಸುತ್ತಿವೆ. ಸ್ಯಾಮ್ಸಂಗ್‌, ‘RAM ಪ್ಲಸ್‌’ ಮೂಲಕ ಈ ವರ್ಚುವಲ್‌ RAM ಈಗಾಗಲೇ ಕಂಪ್ಯೂಟರ್‌ ಬಳಕೆಯಲ್ಲಿಹೆಚ್ಚು ಪ್ರಸಿದ್ಧಿಯಾಗಿವೆ. ಆದರೆ, ಸ್ಮಾರ್ಟ್‌ಫೋನ್‌ ವಿಷಯಕ್ಕೆ ಬಂದಾಗ ಅದು ಸ್ವಲ್ಪ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಯಾಮ್ಸಂಗ್‌ ಮಾತ್ರವಲ್ಲದೇ 2022ರ ಹೊತ್ತಿಗೆ ಒಪ್ಪೋ, ಶವೋಮಿ, ರಿಯಲ್‌ಮಿ ಮತ್ತು ಒನ್‌ಪ್ಲಸ್‌ನಂಥ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿಈ ವರ್ಚುವಲ್‌ RAM ಬಳಸುವ ಸಾಧ್ಯತೆಗಳಿವೆ. 

ಸ್ಯಾಮ್ಸಂಗ್‌ ಇತ್ತೀಚೆಗಷ್ಟೇ ತನ್ನ ಗ್ಯಾಲಕ್ಸಿ ಎ52ಎಸ್‌ 5ಜಿ ಸ್ಮಾರ್ಟ್‌ ಫೋನ್‌ಗೆ ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿತು. ಈ ಮೂಲಕ ಅದು ವರ್ಚುವಲ್‌ RAM ಕಾರ್ಯಕ್ಕೆ ಅನುಮತಿ ನೀಡಿದೆ. ಈಗ  ಈ ಫೋನ್‌ ಬಳಕೆ­ದಾರರು 4 ಜಿಬಿ ವರ್ಚುವಲ್‌ RAM ಪಡೆಯಲಿದ್ದಾರೆ. ಈ ಸಾಧನವು 4 ಜಿಬಿ ಮತ್ತು 8 ಜಿಬಿ RAMಗಳಲ್ಲಿ ಲಭ್ಯವಿದ್ದು, ಇದೀಗ ಹೆಚ್ಚುವರಿಯಾಗಿ 4 ಜಿಬಿ ವರ್ಚುವಲ್‌ RAM ಕೂಡ ದೊರೆಯಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ವರ್ಚುವಲ್‌ RAM ಬಳಕೆ ತೀರಾ ಸಾಮಾನ್ಯವಾಗ­ಬಹುದು. ಸದ್ಯಕ್ಕೆ ಕಂಪ್ಯೂಟರ್‌ನಲ್ಲೇ ಮಾತ್ರವೇ ಬಳಕೆ­ಯಾಗು­ತ್ತಿದೆ. ತಂತ್ರಜ್ಞಾನದ ಹೊಸ ಸಾಧ್ಯತೆ ಇದಾಗಿದ್ದು, ವರ್ಚುವಲ್‌ ಮೆಮೊರಿ ಬಳಕೆಯಿಂದಾಗಿ ಒಟ್ಟಾರೆ ಸಾಧನದ ವೆಚ್ಚ ತಗ್ಗಲೂ ಕಾರಣವಾದರೂ ಆಗಬಹುದು.

ವರ್ಚುವಲ್‌ RAM ಯಾಕೆ?
ಫಿಜಿಕಲ್‌ RAM ಹೆಚ್ಚು ತುಟ್ಟಿಯಾದ ಪರಿಣಾಮ ವರ್ಚು­ವಲ್‌ ಮೆಮೊರಿ ಬಳಕೆಯ ಸಾಧ್ಯತೆಗಳು ಹುಟ್ಟಿಕೊಂಡವು ಮತ್ತು ಅದನ್ನು ಸಾಧ್ಯ ಕೂಡ ಮಾಡಲಾಯಿತು. ಸ್ಟೋರೇಜ್‌ ಮಧ್ಯಮಗಳಾದ ಹಾರ್ಡ್‌ ಡಿಸ್ಕ್‌ ಮತ್ತು ಇತರ ಸಾಧನಗಳಿಗೆ ಹೋಲಿಸಿದರೆ ಪ್ರತಿ ಗಿಗಾಬೈಟ್‌ಗೆ ಫಿಸಿಕಲ್‌ RAM ಈಗಲೂ ತುಟ್ಟಿಯೇ ಆಗಿದೆ. ಈ ಕಾರಣಕ್ಕಾಗಿಯೇ ಅಗ್ಗದ RAM ಬಳಕೆಯ ಫಲವಾಗಿ ವರ್ಚುವಲ್‌ ಮೆಮೋರಿಯನ್ನು ಬಳಸಿಕೊಳ್ಳಲಾಗುತ್ತಿದೆ. ಪರಿಣಾಮ ಯಾವುದೇ ಕಂಪ್ಯೂಟರ್‌ಗೆ ಈಗ ಫಿಸಿಕಲ್‌ RAM ಜತೆಗೆ ಹೆಚ್ಚುವರಿಯಾಗಿ ವರ್ಚುವಲ್‌ RAM ಬಳಕೆಯಾಗುತ್ತಿರು­ವುದರಿಂದ ಹೆಚ್ಚು ಮೆಮೊರಿ ದೊರೆಯುತ್ತಿದೆ. ಇನ್ನೊಂದು ಕಾರಣ ಏನೆಂದರೆ-ಎಲ್ಲಾಕಂಪ್ಯೂಟರ್‌ಗಳಲ್ಲಿಫಿಜಿಕಲ್‌ RAM ಇನ್‌ಸ್ಟಾಲ್‌ ಮಾಡಲು ಮಿತಿಯನ್ನು ಹೊಂದಿವೆ. ಈ ಮಿತಿಯನ್ನು ಮೀರಿ ಮೆಮೊರಿ ಬಳಕೆಗೆ ವರ್ಚುವಲ್‌ RAM ಅನುವು ಮಾಡಿಕೊಡುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿವರ್ಚುವಲ್‌ ಮೆಮೊರಿ ಬಳಕೆಯೂ ಹೆಚ್ಚಾಗುತ್ತಿದೆ.

ಪ್ರಯೋಜನಗಳೇನು?
ವರ್ಚುವಲ್‌ RAM ಬಳಕೆಯಿಂದ ಏಕಕಾಲಕ್ಕೆ ಹೆಚ್ಚೆಚ್ಚು ಅಪ್ಲಿಕೇಷನ್‌ಗಳನ್ನು ರನ್‌ ಮಾಡಲು ಸಾಧ್ಯವಾಗುತ್ತದೆ. ಫಿಜಿಕಲ್‌ ರಾರ‍ಯಮ್‌ನಲ್ಲಿರನ್‌ ಮಾಡಲು ಸಾಧ್ಯವಾಗದೇ ಇರುವ ಬೃಹತ್‌ ಅಪ್ಲಿಕೇಷನ್‌ಗಳನ್ನು ರನ್‌ ಮಾಡಲು ವರ್ಚುವಲ್‌ ರಾರ‍ಯಮ್‌ ನೆರವು ನೀಡುತ್ತದೆ. ಫಿಸಿಕಲ್‌ RAM ವೆಚ್ಚಕ್ಕೆ ಹೋಲಿಸಿದರೆ ಇದು ಅಗ್ಗ. ಕಡಿಮೆ ವೆಚ್ಚದಲ್ಲೇ ಹೆಚ್ಚು ಮೆಮೊರಿಯನ್ನು ಬಳಸಿಕೊಳ್ಳಬಹುದು. ಹಾರ್ಡ್‌ವೇರ್‌ ಮತ್ತು ಆಪರೇಟಿಂಗ್‌ ಸಿಸ್ಟಮ್‌ ಬೆಂಬಲಿಸುವ ಗರಿಷ್ಠ ಪ್ರಮಾಣದ ರಾರ‍ಯಮ್‌ ಹೊಂದಿರುವ ಸಿಸ್ಟಂನಲ್ಲಿಮೆಮೊರಿಯನ್ನು ಹೆಚ್ಚಿಸುವ ಅವಕಾಶವನ್ನು ಸೃಷ್ಟಿಸುತ್ತದೆ. ವರ್ಚುವಲ್‌ ರಾರ‍ಯಮ್‌ ಬಳಕೆಯ ಪ್ರಯೋಜನಗಳ ಜತೆಗೆ ಒಂದಿಷ್ಟು ಅನಾನುಕೂಲಗಳೂ ಇವೆ; ಫಿಸಿಕಲ್‌ RAMಗೆ ಹೋಲಿಸಿದರೆ ವರ್ಚುವಲ್‌ ಮೆಮೊರಿಯ ದಕ್ಷ ತೆಯ ಪ್ರಮಾಣ ಕಡಿಮೆ. ಸಿಸ್ಟಮ್‌ನ ಒಟ್ಟಾರೆ ಪ್ರದರ್ಶನದ ಮೇಲೆ ಋುಣಾತ್ಮಕ ಪರಿಣಾಮ ಬೀರಬಲ್ಲದು.

ಏನಿದು RAM?
RAM ಎಂದರೆ random-access memory. ಇದು ಕಂಪ್ಯೂಟರ್‌ನ ಪ್ರಮುಖ  ಭಾಗ. ಕಿರು ಅವಧಿಯ ಮೆಮೊರಿಯಾಗಿರುವ ರಾರ‍ಯಮ್‌ನಲ್ಲಿಪ್ರೊಸೆಸರ್‌ನ ಅಗತ್ಯಕ್ಕೆ ತಕ್ಕಂತೆ ಡೇಟಾ ಸಂಗ್ರಹವಾಗುತ್ತದೆ. RAM ಮೆಮೊರಿ ಹೆಚ್ಚಾದಷ್ಟು ಕಂಪ್ಯೂಟರ್‌ನ ಕಾರ್ಯಕ್ಷ ಮತೆಯೂ ಹೆಚ್ಚಾಗುತ್ತದೆ. ಏಕಕಾಲಕ್ಕೆ ಹತ್ತಾರು ಅಪ್ಲಿಕೇಷನ್‌ಗಳ ಮೂಲಕ ಕೆಲಸ ಮಾಡುವವರಿಗೆ RAM ಹೆಚ್ಚಿರುವ ಕಂಪ್ಯೂಟರ್‌ಗಳೇ ಬೇಕಾಗುತ್ತವೆ. ಹಾಗಾಗಿ, ಇದು ಕಂಪ್ಯೂಟರ್‌ನ ಪ್ರಮುಖ ಭಾಗ ಎಂದು ಪರಿಗಣಿಸಲಾಗುತ್ತದೆ.



ಮಂಗಳವಾರ, ಆಗಸ್ಟ್ 10, 2021

WhatsApp Web: ‘ವಾಟ್ಸ್‌ಆ್ಯಪ್‌ ವೆಬ್‌’ ಅಂತ್ಯ ಸನ್ನಿಹಿತವೇ?

- ಮಲ್ಲಿಕಾರ್ಜುನ ತಿಪ್ಪಾರ
ವಾಟ್ಸ್‌ಆ್ಯಪ್‌ ಈಗ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ. ನಮ್ಮೆಲ್ಲರ ಅಗತ್ಯಗಳನ್ನು ಪೂರೈಸುವ ಮೂಲಸೌಕರ್ಯ ಎನಿಸಿಕೊಂಡಿದೆ. ವಾಟ್ಸ್‌ಆ್ಯಪ್‌ ಇಲ್ಲದ ಬದುಕನ್ನು ನೆನೆಸಿಕೊಳ್ಳುವುದು ಕಷ್ಟ. ಅಷ್ಟರ ಮಟ್ಟಿಗೆ ವಾಟ್ಸ್‌ಆ್ಯಪ್‌ ನಮ್ಮ ಬದುಕಿನ ಅವಿಭಾಜ್ಯವಾಗಿದೆ.

ಸಂವಹನದ ಜತೆಗೆ ನಿತ್ಯದ ನಮ್ಮ ಕೆಲಸಗಳಿಗೆ ಅನುಕೂಲವಾಗುವ ರೀತಿಯಲ್ಲಿವಾಟ್ಸ್‌ಆ್ಯಪ್‌ ಅನೇಕ ಫೀಚರ್‌ಗಳನ್ನು ಒಳಗೊಂಡಿದೆ. ಆ ಪೈಕಿ ‘ವಾಟ್ಸ್‌ಆ್ಯಪ್‌ ವೆಬ್‌’ ಕೂಡ ಒಂದು. ಅಂದರೆ, ನಿಮ್ಮ ವಾಟ್ಸ್‌ಆ್ಯಪ್‌ 

ಅನ್ನು ಲ್ಯಾಪ್‌ಟಾಪ್‌ ಅಥವಾ ಡೆಸ್ಕ್‌ಟಾಪ್‌ನಲ್ಲೇ ಬಳಸುವುದು. ಇದರಿಂದ ವಾಟ್ಸ್‌ಆ್ಯಪ್‌ ಮೂಲಕ ನಡೆಯುವ ನಿಮ್ಮ ಕೆಲಸ ಬಹಳಷ್ಟು ಸುಲಭವಾಗುತ್ತದೆ. ಹಾಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ವಾಟ್ಸ್‌ಆ್ಯಪ್‌ ವೆಬ್‌ ಫೀಚರ್‌ ಹೆಚ್ಚು ಬಳಕೆಯಾಗುತ್ತಿದೆ. ಆದರೆ, ಈ ಸೌಲಭ್ಯ ನಿಂತು ಹೋಗಲಿದೆಯಾ? ಇಂಥದೊಂದು ಅನುಮಾನ ಬರಲು ಕಾರಣವಿದೆ. ವಾಟ್ಸ್‌ಆ್ಯಪ್‌ ಮಲ್ಟಿ ಡಿವೈಸ್‌ ಸಪೋರ್ಟ್‌ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಸದ್ಯ ಈ ಫೀಚರ್‌ ಬೀಟಾ ವರ್ಷನ್ನಲ್ಲಿದ್ದು, ನಿರ್ದಿಷ್ಟ ಬಳಕೆದಾರರಿಗೆ ಬಳಸಲು ಅವಕಾಶ ನೀಡಲಾಗಿದೆ.

ಏನಿದು ವಾಟ್ಸ್‌ಆ್ಯಪ್‌ ಮಲ್ಟಿ ಡಿವೈಸ್‌ ಎಂದು ನೀವು ಕೇಳಬಹುದು. ವಾಟ್ಸ್‌ಆ್ಯಪ್‌ ವೆಬ್‌ ಬಳಸಿಕೊಂಡು ಡೆಸ್ಕ್‌ಟಾಪ್‌ನಲ್ಲೂ ವಾಟ್ಸ್‌ಆ್ಯಪ್‌ ಹೇಗೆ ಬಳಸುತ್ತಿವೆಯೋ ಹಾಗೆಯೇ, ವಾಟ್ಸ್‌ಆ್ಯಪ್‌ ಅನ್ನು ನೀವು ನಾಲ್ಕು ಸಾಧನಗಳಲ್ಲಿ ಏಕಕಾಲಕ್ಕೆ ಬಳಸಬಹುದು! ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ಈ ಫೀಚರ್‌ ಅನ್ನು ಶೀಘ್ರವೇ ಗ್ರಾಹಕರ ಬಳಕೆಗೆ ನೀಡುವ ಸಾಧ್ಯತೆಯಿದೆ.

ವಾಟ್ಸ್‌ಆ್ಯಪ್‌ ವೆಬ್‌ ಬಳಸುವಾಗ ಬಳಕೆದಾರರು ಒಂದಿಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಅಂದರೆ, ನಿಮ್ಮ ಫೋನ್‌ ಇಂಟರ್ನೆಟ್‌ ಸಂಪರ್ಕದಿಂದ ಕಡಿತಗೊಂಡರೆ, ಬ್ಯಾಟರಿ ಖಾಲಿಯಾದರೆ ಆ ಕ್ಷ ಣದಿಂದ ನೀವು ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್‌ಆ್ಯಪ್‌ ವೆಬ್‌ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಬಹುಶಃ ವಾಟ್ಸ್‌ಆ್ಯಪ್‌ ಮಲ್ಟಿ ಡಿವೈಸ್‌ ವೈಶಿಷ್ಟ್ಯಪೂರ್ಣವಾಗಿ ಬಳಕೆದಾರರಿಗೆ ಸಿಗಲಾರಂಭಿಧಿಸಿಧಿದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದು ವಾಟ್ಸ್‌ಧಿಆ್ಯಪ್‌ನ ಅಭಿಪ್ರಾಯವಾಗಿದೆ. ವಾಟ್ಸ್‌ಧಿಆ್ಯಪ್‌ನಲ್ಲಿಇತ್ತೀಚೆಗೆ ಪರಿಚಯಿಸಲಾದ ಮಲ್ಟಿ-ಡಿವೈಸ್‌ ಬೀಟಾ ಪರೀಕ್ಷೆಯು ಬಳಕೆದಾರರ ಪ್ರಾಥಮಿಕ ಸಾಧನದಲ್ಲಿ(ಸ್ಮಾರ್ಟ್‌ಫೋನ್‌) ಮತ್ತು ಪ್ರಾಥಮಿಕ ಸಾಧನವು ಇಂಟರ್ನೆಟ್‌ ಸಂಪರ್ಕಿತಗೊಂಡಿಲ್ಲದಿದ್ದರೂ ಇತರ ನಾಲ್ಕು ಸಾಧನಗಳಲ್ಲಿಕೆಲಸ ಮಾಡಲು ಅವಕಾಶ ನೀಡುವ ಮೂಲಕ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಆದಾಗ್ಯೂ, ಬಹು-ಸಾಧನ ಬೆಂಬಲವು ಹೊರಬಂದ ನಂತರ 

ವಾಟ್ಸ್‌ಆ್ಯಪ್‌ ವೆಬ್‌  ಫೀಚರ್‌ ಭವಿಷ್ಯ ಏನು ಎಂಬ ಪ್ರಶ್ನೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ವಾಟ್ಸ್‌ಆ್ಯಪ್‌ ವೆಬ್‌ ಬಳಕೆದಾರರಿಗೆ ಒಂದು ಪ್ರಮುಖ ವೇದಿಕೆಯಾಗಿ ಉಳಿದಿದೆ. ಇಲ್ಲಿಯವರೆಗೆ, ವಾಟ್ಸ್‌ಆ್ಯಪ್‌ ಅನ್ನು ಒಂದು ಸಮಯದಲ್ಲಿಒಂದು ಸಾಧನದಲ್ಲಿ

ಮಾತ್ರ ಬಳಸಬಹುದಿತ್ತು. ಡೆಸ್ಕ್‌ಟಾಪ್‌ ಮತ್ತು ವೆಬ್‌ ಬೆಂಬಲವು ನಿಮ್ಮ ಫೋನ್‌ ಅನ್ನು ಪ್ರತಿಬಿಂಬಿಸುವ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಂದರೆ ನಿಮ್ಮ ಫೋನ್‌ ಆನ್‌ ಆಗಿರಬೇಕು ಮತ್ತು ಸಕ್ರಿಯ ಇಂಟರ್ನೆಟ್‌ ಸಂಪರ್ಕವನ್ನು ಹೊಂದಿ­ರ­ಬೇಕು. ಆಗಲೇ ಅದು ಕಾರ್ಯ­ನಿರ್ವಹಿಸಲು ಸಾಧ್ಯವಾಗುತ್ತದೆ.

ಮಲ್ಟಿ ಡಿವೈಸ್‌ ಬೆಂಬಲ ಸಕ್ರಿಯವಾದ ಬಳಕೆದಾರರಿಗೆ ಇನ್ನೂ ನಾಲ್ಕು ಸಾಧನಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ಆದರೆ ವಾಟ್ಸ್‌ ಆ್ಯಪ್‌ ವೆಬ…, ವಾಟ್ಸ್‌ಆ್ಯಪ್‌ ಡೆಸ್ಕ್‌ಟಾಪ್‌ ಅಥವಾ ಫೇಸ್‌ಬುಕ್‌ ಪೋರ್ಟಲ್‌ಗಳನ್ನು ಮಾತ್ರ ಸೇರಿಸಬಹುದು. ಕಂಪನಿಯು ನಂತರದ ಹಂತದಲ್ಲಿಹೆಚ್ಚುವರಿ ಸಾಧನಗಳನ್ನು (ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಂಥ) ಸೇರಿಸಲು ಬೆಂಬಲವನ್ನು ಸೇರಿಸಬಹುದು ಎನ್ನಲಾಗುತ್ತಿದೆ.

ಸದ್ಯದ ಪರಿಸ್ಥಿತಿಯನ್ನು ಆಧರಿಸಿ ಹೇಳುವುದಾದರೆ ವಾಟ್ಸ್‌ಆ್ಯಪ್‌ ವೆಬ್‌ ಫೀಚರ್‌ ಇರಲಿದೆ. ಜೊತೆಗೆ, ವಾಟ್ಸ್‌ಆ್ಯಪ್‌ ಮಲ್ಟಿ ಸಪೋರ್ಟ್‌ ಸಕ್ರಿಯಗೊಂಡ ಬಳಿಕ ಅದು ಎದುರಿಸುತ್ತಿದ್ದ ಸಮಸ್ಯೆಗಳೂ ನೀಗಲಿವೆ. ಜೊತೆಗೆ, ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿವಾಟ್ಸ್‌ಆ್ಯಪ್‌ ಬಳಸಲು ಸಾಧ್ಯವಾಗುವುದರಿಂದ, ಅದರ ಬಳಕೆಯ ಸಾಧ್ಯತೆಗಳು ಇನ್ನೂ ಹೆಚ್ಚಾಗಲಿವೆ.

ಭಾರತದಲ್ಲೇ 39 ಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆ್ಯಪ್‌ ಸಂವಹನಕ್ಕಾಗಿ ಮಾತ್ರವಲ್ಲದೇ ಬಿಸಿನೆಸ್‌, ಹಣಕಾಸಿನ ಸೇವೆಗೂ ಬಳಕೆಯಾಗುತ್ತಿದೆ. ಹಾಗಾಗಿ, ಅದು ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೆ ಫೀಚರ್‌ಗಳನ್ನು ಅಭಿವೃದ್ಧಿಪಡಿಸಿ, ಬಳಕೆಯ ಅನುಭವವನ್ನು ಹೆಚ್ಚಿಸುತ್ತಿದೆ. ವಾಟ್ಸ್‌ಆ್ಯಪ್‌ ಮಲ್ಟಿ ಡಿವೈಸ್‌ ಸಪೋರ್ಟ್‌ ಕೂಡ ಅದೇ ಹಾದಿಯಲ್ಲಿದೆ.

ಈ ಲೇಖನವು ವಿಜಯ ಕರ್ನಾಟಕದ 2021 ಆಗಸ್ಟ್ 9ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಭಾನುವಾರ, ಆಗಸ್ಟ್ 1, 2021

Billionaire investor Rakesh Jhunjhunwala: 'ಷೇರುಪೇಟೆ ಸರದಾರ'ನ ವಿಮಾನಯಾನ

‘ಭಾರತೀಯ ವಾರೆನ್‌ ಬಫೆಟ್‌’ ರಾಕೇಶ್‌ ಜುಂಜುನ್‌ವಾಲಾ ಅವರೀಗ ‘ಆಕಾಶ’ಕ್ಕೆ ಏಣಿ ಹಾಕಲು ಅಣಿಯಾಗುತ್ತಿದ್ದಾರೆ. ಷೇರುಪೇಟೆ ಚತುರ ಹೂಡಿಕೆದಾರನ ವಿಮಾನಯಾನ ಸಂಸ್ಥೆಗೆ ಸಕ್ಸೆಸ್‌ ಸಿಗುತ್ತಾ? 


-ಮಲ್ಲಿಕಾರ್ಜುನ ತಿಪ್ಪಾರ
ಷೇರುಪೇಟೆ ವಹಿವಾಟು ಬಲ್ಲವರಿಗೆ, ಹೂಡಿಕೆದಾರರ ವಲಯಕ್ಕೆ  ರಾಕೇಶ್‌ ಜುಂಜುನ್‌ವಾಲಾ ಚಿರಪರಿಚಿತ ಹೆಸರು. ಆದರೆ, ಸಾಮಾನ್ಯರಿಗೆ ಅವರ ಬಗ್ಗೆ ಗೊತ್ತಾಗಿದ್ದು ಅಗ್ಗದ ವಿಮಾನಯಾನ ಸಂಸ್ಥೆ ಆರಂಭಿಸುವ ಬಗ್ಗೆ ಘೋಷಣೆ ಮಾಡಿದಾಗಲೇ!

‘ಭಾರತದ ವಾರೆನ್‌ ಬಫೆಟ್‌’ ಎಂದು ಕರೆಸಿಕೊಳ್ಳುವ 61 ವರ್ಷದ ಈ ಚಾಣಾಕ್ಷ  ಹೂಡಿಕೆದಾರ ಇಡುವ ನಡೆಗಳೇ ನಿಗೂಢ. ಅವರ ಈ ಗುಣಕ್ಕೆ ಅಲ್ಟ್ರಾ ಲೋ ಕಾಸ್ಟ್‌ ಏರ್‌ಲೈನ್‌ ಸ್ಥಾಪನೆಯೇ ಘೋಷಣೆಯೇ ಸಾಕ್ಷಿ. ಯಾಕೆಂದರೆ, ಕೋವಿಡ್‌ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಇಡೀ ವಿಮಾನಯಾನ ವಲಯದ ಮೇಲೆ ‘ಆಕಾಶ’ವೇ ಕಳಚಿ ಬಿದ್ದಿದೆ. ಅದರಿಂದ ಹೊರಬರಲು ಹರಸಾಹಸ ಪಡುತ್ತಿದೆ. ಸಾಂಕ್ರಾಮಿಕ ಪರಿಸ್ಥಿತಿ ಶುರುವಾಗುವ ಕೆಲವು ವರ್ಷಗಳ ಮೊದಲೇ ಕಿಂಗ್‌ ಫಿಶರ್‌ ಸಂಸ್ಥೆ ಬಾಗಿಲು ಹಾಕಿದ್ದರೆ, 2019ರಲ್ಲಿಜೆಟ್‌ ಏರ್‌ವೇಸ್‌ ಕೂಡ ಸೇವೆ ರದ್ದುಪಡಿಸಿತ್ತು. ಜೊತೆಗೆ, ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಕೂಡ ಲಾಭದಲ್ಲಿಲ್ಲ. ಟಾಟಾ ಒಡೆತನದ ವಿಸ್ತಾರ, ಸ್ಪೈಸ್‌ಜೆಟ್‌, ಇಂಡಿಗೋ, ಏರ್‌ ಏಷ್ಯಾ ಸೇರಿ ಕೆಲವು ಸಂಸ್ಥೆಗಳು ಸೇವೆಯನ್ನು ಒದಗಿಸುತ್ತಿವೆ. ಬಹುಶಃ ಕೊರೊನಾದಿಂದ ಅತಿ ಹೆಚ್ಚು ಹೊಡೆತ ಬಿದ್ದಿರುವುದು ವಿಮಾನಯಾನ ಕ್ಷೇತ್ರದ ಮೇಲೆ. ಹಾಗಾಗಿ, ಈ ಕ್ಷೇತ್ರದಲ್ಲಿಹೂಡಿಕೆ ಮಾಡುತ್ತಿರುವ ‘ಬಿಗ್‌ ಬುಲ್‌’ ರಾಕೇಶ್‌ ಜುಂಜುನ್‌ವಾಲಾ ಅವರ ನಡೆ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ.

ಇಂಥ ವಿಷಮ ಪರಿಸ್ಥಿತಿಯಲ್ಲಿ ಈತ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಆರಂಭಿಸಲು ಹೊರಟಿದ್ದಾರೆ ಎಂದರೆ ಅವರ ಲೆಕ್ಕಾಚಾರದ ಬಗ್ಗೆ ಯೋಚಿಸಲೇಬೇಕಾಗುತ್ತದೆ. ಅವರ ಈ ಸಾಹಸಕ್ಕೆ ಇಂಡಿಗೋ ಹಾಗೂ ಜೆಟ್‌ವೇಸ್‌ನ ಮಾಜಿ ಅಧಿಕಾರಿಗಳೂ ಸಾಥ್‌ ನೀಡುತ್ತಿದ್ದಾರೆ. ತಾವು ಸ್ಥಾಪಿಸಲು ಹೊರಟಿರುವ ವಿಮಾನಯಾನ ಸಂಸ್ಥೆಗೆ ರಾಕೇಶ್‌, ‘ಆಕಾಶ್‌ ಏರ್‌’ ಎಂದು ನಾಮಕರಣ ಮಾಡಲಿದ್ದಾರೆ. ಈ ಸಂಸ್ಥೆಯಲ್ಲಿಅವರು ಶೇ.40 ಪಾಲು ಹೊಂದಲಿದ್ದಾರೆ. ಕೆಲವೇ ದಿನಗಳಲ್ಲಿಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡುವ ಸಾಧ್ಯತೆಯೂ ಇದೆ.

ದೊಡ್ಡ ವಿಮಾನ ತಯಾರಿಕಾ ಕಂಪನಿ ಎನಿಸಿಕೊಂಡಿರುವ ಬೋಯಿಂಗ್‌ ಭಾರತೀಯ ಆಕಾಶದಲ್ಲಿಮತ್ತೆ ರೆಕ್ಕೆ ಬಿಚ್ಚಲು ಜುಂಜುನ್‌ವಾಲಾ ಆರಂಭಿಸಲಿರುವ ಸಂಸ್ಥೆ ಬಲ ನೀಡುವ ಸಾಧ್ಯತೆ ಇದೆ. ಯಾಕೆಂದರೆ, ಭಾರತದಲ್ಲಿಜೆಟ್‌ ಏರ್‌ವೇಸ್‌ ಬೋಯಿಂಗ್‌ನ ಅತಿ ದೊಡ್ಡ ಗ್ರಾಹಕನಾಗಿತ್ತು. ಅದು ಬಾಗಿಲು ಹಾಕಿದ ಮೇಲೆ ಭಾರತದಲ್ಲಿಸ್ಪೈಸ್‌ಜೆಟ್‌ ಬಿಟ್ಟು ಬೋಯಿಂಗ್‌ಗೆ ಅಂಥ ಹೇಳಿಕೊಳ್ಳುವ ಗ್ರಾಹಕರಿರಲಿಲ್ಲ. ಉಳಿದ ವಿಯಾನಯಾನ ಕಂಪನಿಗಳು, ಏರ್‌ಬಸ್‌ ತಯಾರಿಸುವ ಕಡಿಮೆ ಅಗಲದ ವಿಮಾನಗಳನ್ನೇ ಹೆಚ್ಚಾಗಿ ಬಳಸುತ್ತಿವೆ. ಹಾಗಾಗಿ, ‘ಆಕಾಶ್‌ ಏರ್‌’ನಿಂದಾಗಿ ಭಾರತೀಯ ಆಕಾಶದಲ್ಲಿಬೋಯಿಂಗ್‌ ವರ್ಸಸ್‌ ಏರ್‌ಬಸ್‌ ಸ್ಪರ್ಧೆಯನ್ನು ಮತ್ತೆ ಕಾಣಬಹುದು. ಮುಂದಿನ ನಾಲ್ಕು ವರ್ಷಗಳಲ್ಲಿ180 ಆಸನಗಳುಳ್ಳ ಸುಮಾರು 70 ವಿಮಾನಗಳನ್ನು ಖರೀದಿಸುವ ಗುರಿಯನ್ನು ಅವರು ಹಾಕಿಕೊಂಡಿದ್ದಾರೆ.

‘ಫೋರ್ಬ್ಸ್‌ ಇಂಡಿಯಾ’ ಪ್ರಕಾರ ರಾಕೇಶ್‌ ಭಾರತದ 48ನೇ ಶ್ರೀಮಂತ ವ್ಯಕ್ತಿ. ಸುಮಾರು 34,387 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಸಾಧಾರಣ ವ್ಯಕ್ತಿಯೊಬ್ಬ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವ ಕತೆಯೂ ರಣರೋಚಕವಾಗಿದೆ. ರಾಕೇಶ್‌ ಅವರ ತಂದೆ ಮುಂಬೈಯಲ್ಲಿಆದಾಯ ತೆರಿಗೆ ಅಧಿಕಾರಿಯಾಗಿದ್ದರು. ಇವರದ್ದು ಮಧ್ಯಮ ವರ್ಗದ ಕುಟುಂಬ. ರಾಕೇಶ್‌ ಹುಟ್ಟಿದ್ದು 1960 ಜುಲೈ 5ರಂದು ಇಂದಿನ ತೆಲಂಗಾಣದ ಹೈದ್ರಾಬಾದ್‌ನಲ್ಲಿ. ಬೆಳೆದಿದ್ದೆಲ್ಲಮುಂಬಯಿಯಲ್ಲಿ. ತಂದೆ ಆದಾಯ ತೆರಿಗೆ ಅಧಿಕಾರಿಯಾಗಿದ್ದರಿಂದ ಮನೆಯಲ್ಲಿಷೇರು ಪೇಟೆ ಬಗೆಗಿನ ಮಾತುಕತೆಗಳು ಸಾಮಾನ್ಯವಾಗಿದ್ದವು. ಅದು ಯುವಕ ರಾಕೇಶ್‌ ಕಿವಿಯ ಮೇಲೆ ಬೀಳುತ್ತಿತ್ತು. ಪರಿಣಾಮ ಕಾಲೇಜಿನಲ್ಲಿರುವಾಗಲೇ ರಾಕೇಶ್‌ಗೆ ಷೇರು ಪೇಟೆ ವ್ಯವಹಾರ, ಹೂಡಿಕೆಯ ಮೇಲೆ ಆಸಕ್ತಿ ಬೆಳೆಯಿತು. 1985ರಲ್ಲಿಸಿಡನ್‌ಹಮ್‌ ಕಾಲೇಜಿನಿಂದ ಪದವಿ ಪಡೆದ ಬಳಿಕ ಇನ್ಸ್‌ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟಂಟ್‌ ಆಫ್‌ ಇಂಡಿಯಾ ಸಂಸ್ಥೆ ಸೇರಿದರು. 

1986ರಲ್ಲಿಅವರು ಕೇವಲ 43 ರೂಪಾಯಿಗೆ 5000 ಟಾಟಾ ಟೀ ಷೇರುಗಳನ್ನು ಖರೀದಿಸಿದ್ದರು. ಮೂರು ತಿಂಗಳ ಬಳಿಕ ಷೇರು ಮೌಲ್ಯ 143 ರೂ.ಗೆ ಏರಿಕೆಯಾಯಿತು. ಹೂಡಿಕೆಗೆಗಿಂತ ಮೂರು ಪಟ್ಟು ಲಾಭ ಮಾಡಿಕೊಂಡ ರಾಕೇಶ್‌ ಮುಂದಿನ ಮೂರು ವರ್ಷಗಳಲ್ಲಿಷೇರು ಹೂಡಿಕೆಗಳಲ್ಲಿ20ರಿಂದ 25 ಲಕ್ಷ  ರೂಪಾಯಿ ಲಾಭ ಮಾಡಿಕೊಂಡರಂತೆ!

1987ರಲ್ಲಿರಾಕೇಶ್‌ ಅವರು ರೇಖಾ ಎಂಬವರನ್ನು ವಿವಾಹವಾದರು. ಪತ್ನಿ ಕೂಡ ಷೇರು ಪೇಟೆ ಹೂಡಿಕೆದಾರೆ. 2003ರಲ್ಲಿಇವರಿಬ್ಬರು ತಮ್ಮದೇ ಸ್ಟಾಕ್‌ ಟ್ರೇಡಿಂಗ್‌ ಕಂಪನಿ ಶುರು ಮಾಡಿದರು. ಅದಕ್ಕೆ ತಮ್ಮಿಬ್ಬರ ಹೆಸರಿನ ಮೊದಲನೇ ಅಕ್ಷ ರಗಳನ್ನು ಸೇರಿಸಿ ‘ರೇರಾ(್ಕಛ್ಟಿa) ಎಂಟರ್‌ಪ್ರೈಸಸ್‌’ ಎಂದು ಕರೆದಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಷೇರುಪೇಟೆ ವ್ಯವಹಾರದಲ್ಲಿರಾಕೇಶ್‌ ಅವರನ್ನೇ ಅನುಸರಿಸುವ ಬಹುದೊಡ್ಡ ವರ್ಗವೇ ಇದೆ. ಅವರ ಒಂದು ಸಣ್ಣ ಇಶಾರೆಯೂ ಕಂಪನಕ್ಕೆ ಕಾರಣವಾಗುತ್ತದೆ. ತಮ್ಮ ಖಾಸಗಿ ರೇರಾ ಸ್ಟಾಕ್‌ ಟ್ರೇಡಿಂಗ್‌ ಕಂಪನಿ ಮೂಲಕ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಟೈಟನ್‌, ಕ್ರಿಸಿಲ್‌, ಅರಬಿಂದೋ ಫಾರ್ಮಾ, ಪ್ರಜ್‌ ಇಂಡಸ್ಟ್ರೀಜ್‌, ಎನ್‌ಸಿಸಿ, ಆಪ್ಟೇಕ್‌ ಲಿ., ಅಯಾನ್‌ ಎಕ್ಸ್‌ಚೇಂಜ್‌, ಎಂಸಿಎಕ್ಸ್‌, ಫೋರ್ಟಿಸ್‌ ಹೆಲ್ತ್‌ಕೇರ್‌, ಲುಪಿನ್‌, ವಿಐಪಿ ಇಂಡಸ್ಟ್ರೀಜ್‌, ಜಿಯೋಜಿತ್‌ ಫೈನಾನ್ಷಿಯಲ್‌ ಸವೀರ್‍ಸಸ್‌, ರಾರ‍ಯಲಿಸ್‌ ಇಂಡಿಯಾ, ಜುಬಿಲಿಯೆಂಟ್‌ ಲೈಫ್‌ ಸೈನ್ಸೀಸ್‌, ಸ್ಟಾರ್‌ ಹೆಲ್ತ್‌ ಇನ್ಶೂರೆನ್ಸ್‌ ಹೀಗೆ ಹಲವಾರು ಕಂಪನಿಗಳಲ್ಲಿರಾಕೇಶ್‌ ಹೂಡಿಕೆ ಮಾಡಿದ್ದಾರೆ. ಜೊತೆಗೆ, ಷೇರು ವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆಯನ್ನೂ ಎದುರಿಸುತ್ತಿದ್ದಾರೆ!

ಷೇರುಪೇಟೆ ಬಿಟ್ಟು ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ ಬಾಲಿವುಡ್‌. ಹಲವು ಹಿಂದಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಶ್ರೀದೇವಿ ಅಭಿಯನದ ‘ಇಂಗ್ಲಿಷ್‌ ವಿಂಗ್ಲಿಷ್‌’, ಕರಿನಾ ಕಪೂರ್‌ ಅಭಿನಯದ ‘ಕೀ ಆ್ಯಂಡ್‌ ಕಾ’ ಚಿತ್ರಗಳನ್ನು ಹೆಸರಿಸಬಹುದು. ರಾಕೇಶ್‌ ಮಾನವ ಹಿತಾಕಾಂಕ್ಷಿ ಆಗಿಯೂ ಹೆಸರುವಾಸಿಯಾಗಿದ್ದಾರೆ. ವಿಶೇಷವಾಗಿ ಷೌಷ್ಟಿಕತೆ ಮತ್ತು ಶಿಕ್ಷ ಣಕ್ಕೆ ಸಂಬಂಧಿಸಿ ತೊಡಗಿಸಿಕೊಂಡಿದ್ದಾರೆ. ತಮ್ಮ ಆದಾಯದ ಶೇ.25ರಷ್ಟು ಹಣವನ್ನು ಸಮಾಜಮುಖಿ ಕೆಲಸಗಳಿಗೆ ಬಳುಸುತ್ತಿದ್ದಾರೆ. ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಆಶ್ರಯ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಮುಂಬೈಯಲ್ಲಿಕಣ್ಣಿನ ಆಸ್ಪತ್ರೆ ಕಟ್ಟಿಸಿ ಅದರ ಮೂಲಕ ಉಚಿತವಾಗಿ 15,000 ಕಣ್ಣಿನ ಚಿಕಿತ್ಸೆ ನಡೆಸುವ ಗುರಿ. 

ಹೂಡಿಕೆ ಮಾಡಿದರೆ ‘ಹೊಳೆಯಲ್ಲಿಹುಣಸೆ ಹಣ್ಣು ತೊಳೆ’ದಂತೆ ಭಾವಿಸಲಾಗುತ್ತಿರುವ ವಿಮಾನಯಾನ ಕ್ಷೇತ್ರದಲ್ಲಿಹಣ ಸುರಿಯಲು ಜುಂಜುನ್‌ವಾಲಾ ಮುಂದಾಗಿದ್ದಾರೆಂದರೆ, ಅವರ ಲೆಕ್ಕಾಚಾರ ಸರಿಯಾಗೇ ಇರಬೇಕು. ಸದ್ಯ ಬಸವಳಿದಂತೆ ಕಾಣುತ್ತಿರುವ ವಿಮಾನಯಾನ ಮುಂಬರುವ ವರ್ಷಗಳಲ್ಲಿಪುಟಿದೇಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸೊರಗುತ್ತಿರುವ ಭಾರತೀಯ ವಿಮಾನಯಾನ ಕ್ಷೇತ್ರಕ್ಕೆ ರಾಕೇಶ್‌ ಜುಂಜುನ್‌ವಾಲಾ ಅವರ ಆಕಾಶ್‌ ಏರ್‌ ಸಂಸ್ಥೆ ಬಲ ನೀಡಲಿದೆ ಎಂಬ ವಿಶ್ಲೇಷಣೆಗಳೂ ನಡೆಯುತ್ತಿವೆ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಈ ವರ್ಷಾಂತ್ಯ ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿಜುಂಜುನ್‌ವಾಲಾ ಅವರ ‘ಆಕಾಶ ಏರ್‌’ ವಿಮಾನದಲ್ಲಿಹಾರಾಡಬಹುದು.


ಈ ಲೇಖನವು ವಿಜಯ ಕರ್ನಾಟಕದ 2021ರ ಆಗಸ್ಟ್ 1ರ ಸಂಚಿಕೆಯಲ್ಲಿ ಪ್ರಕಟವಾಗಿದೆ


ಶುಕ್ರವಾರ, ಜುಲೈ 23, 2021

clubhouse vs twitter spaces: ಕ್ಲಬ್‌ಹೌಸ್ ಬೇಡ್ವಾ, ಸ್ಪೇಸಸ್‌ಗೆ ಬನ್ನಿ!

- ಮಲ್ಲಿಕಾರ್ಜುನ ತಿಪ್ಪಾರ
ಪಾಡ್‌ಕಾಸ್ಟ್‌ಗೆ ಅಷ್ಟೇ ಸೀಮಿತವಾಗಿದ್ದ ಆಡಿಯೋ ವೇದಿಕೆಗೆ ಹೊಸ ಖದರ್ ತಂದುಕೊಟ್ಟಿದ್ದು ‘ಕ್ಲಬ್‌ಹೌಸ್’ ಆ್ಯಪ್. ಈ ವರ್ಷದ ಆರಂಭದಲ್ಲಿ ಆಂಡ್ರಾಯ್ಡ್ ಸಾಧನಗಳಲ್ಲೂ ಬಳಕೆಗೆ ಅವಕಾಶ ಸಿಗುತ್ತಿದಂತೆ ಕ್ಲಬ್‌ಹೌಸ್‌ನ ಬಳಕೆಯ ಒಟ್ಟು ಸಾಧ್ಯತೆಯೇ ಬದಲಾಗಿ ಹೋಗಿದೆ. ಭಾರತದಲ್ಲಂತೂ ಈ ಕ್ಲಬ್‌ಹೌಸ್ ನಾಗಾಲೋಟದಲ್ಲಿ ಓಡುತ್ತಿದೆ. ಅತಿ ಕಡಿಮೆ ಅವಧಿಯಲ್ಲಿ 20 ಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿರುವ ಈ ಆ್ಯಪ್ ಒಟ್ಟು 50 ಲಕ್ಷಕ್ಕೂ ಅಧಿಕ ಡೌನ್‌ಲೋಡ್ ಕಂಡಿದೆ. 

ಕ್ಲಬ್‌ಹೌಸ್‌ನ ಈ ಜನಪ್ರಿಯತೆಗೆ ಬೆಚ್ಚಿಬಿದ್ದಿರುವ ಸೋಷಿಯಲ್ ಮೀಡಿಯಾ ದೈತ್ಯ ಕಂಪನಿಗಳಾದ ೇಸ್‌ಬುಕ್, ಟ್ವಿಟರ್ ಅಂಥದ್ದೇ ವೇದಿಕೆಯನ್ನು ಸೃಷ್ಟಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಟ್ವಿಟರ್‌ನ ‘ಸ್ಪೇಸಸ್’ ವೇದಿಕೆ ಸಕ್ರಿಯವಾಗಿದೆ. ಇದು ಕೂಡ ಕ್ಲಬ್‌ಹೌಸ್ ಆ್ಯಪ್ ರೀತಿಯಲ್ಲೇ ಆಡಿಯೋ ವೇದಿಕೆಯಾಗಿದೆ. ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಿಗೆ ಇದು ಸಪೋರ್ಟ್ ಮಾಡುತ್ತದೆ. ನೀವು ಟ್ವಿಟರ್‌ನ ಈ ಸ್ಪೇಸಸ್‌ನಲ್ಲಿ ಮಾತುಗಳನ್ನು ಕೇಳಬಹುದು; ನೀವೇ ಸ್ಪೀಕರ್ ಆಗಬಹುದು; ನಿಮಗೆ ಬೇಕಾದ ವೇದಿಕೆಗಳಿಗೆ ಹೋಗಿ ಕುಳಿತುಕೊಳ್ಳಬಹುದು. ಸದ್ಯಕ್ಕೆ ಈ ಸ್ಪೇಸ್ ವೆಬ್‌ನಲ್ಲಿ ಸಿಗುವುದಿಲ್ಲ, ಆದರೆ ನೀವು ಕೇಳುಗರಾಗಿ ಸೇರಿಕೊಳ್ಳಬಹುದು.

ಸ್ಪೇಸಸ್ ಶುರು ಮಾಡುವುದು ಹೇಗೆ?

ನೀವು ಐಒಎಸ್ ಬಳಕೆದಾರರಾಗಿದ್ದರೆ, ಎರಡು ರೀತಿಯಲ್ಲಿ ಟ್ವಿಟರ್‌ನಲ್ಲಿ ಸ್ಪೇಸ್ ಚರ್ಚೆ ಆರಂಭಿಸಬಹುದು. ನಿಮ್ಮ ಹೋಮ್ ಟೈಮ್‌ಲೈನ್ ಟ್ವೀಟ್ ಕಾಂಪೋಸ್ ಮೇಲೆ ದೀರ್ಘಾವಧಿಗೆ ಒತ್ತಿ ಹಿಡಿಯಬೇಕು. ಆಗ ಕಾಣಿಸಿಕೊಳ್ಳುವ ಸ್ಪೇಸಸ್ ಐಕಾನ್ ಮೇಲೆ ಟ್ಯಾಪ್ ಮಾಡಿ, ಆಗ ನೀವು ಸ್ಪೇಸ್ ಹಾಸ್ಟ್ ಆಗಿ ಎಂಟ್ರಿ ಪಡೆದುಕೊಳ್ಳುತ್ತೀರಿ. ಅಥವಾ ನಿಮ್ಮ ಪ್ರೊೈಲ್ ಇಮೇಜ್ ಮೇಲೆ ಟ್ಯಾಪ್ ಮಾಡಿ ಮತ್ತು ಬಲಬದಿಗೆ ಸ್ಕ್ರಾಲ್ ಮಾಡಿ ಮತ್ತು ಸ್ಪೇಸಸ್ ಮೇಲೆ ಟ್ಯಾಪ್ ಮಾಡುವ ಮೂಲಕ ಆರಂಭಿಸಬಹುದು. ಆಂಡ್ರಾಯ್ಡ್ ೆನ್‌ಗಳಲ್ಲಾದರೆ, ಮೊದಲಿಗೆ ಟ್ವಿಟರ್ ಆ್ಯಪ್ ಓಪನ್ ಮಾಡಿ, ಸ್ಕ್ರೀನ್‌ನ ಬಲಬದಿಯ ಕೆಳ ತುದಿಯಲ್ಲಿ ಕಾಣುವ ಟ್ವೀಟ್ ಕಾಂಪೋಸ್ ಮಾಡುವ ಐಕಾನ್ ಮೇಲೆ ಟ್ಯಾಪ್ ಮಾಡಿ. ಆಗ ನಿಮಗೆ ಸ್ಪೇಸಸ್, ೆಟೋಸ್, ಜಿಐಎ್ ಮತ್ತು ಟ್ವೀಟ್ ಎಂಬ ಪದಗಳು ಐಕಾನ್ ಸಹಿತ ಕಾಣುತ್ತವೆ. ಸ್ಪೇಸಸ್ ಐಕಾನ್ ಮೇಲೆ ಟ್ಯಾಪ್ ಮಾಡಿದಾಗ,  ಸ್ಟಾರ್ಟ್ ಯುವರ್ ಸ್ಪೇಸ್ ಪಾಪ್ ಅಪ್ ಕಾಣಿಸಿಕೊಳ್ಳುತ್ತದೆ. ಅಲ್ಲಿಯೇ ನಿಮ್ಮ ಚರ್ಚೆಗೆ ಹೆಸರನ್ನು ಕೂಡ ದಾಖಲಿಸಬಹುದು. ಬಳಿಕ ಸ್ಟಾರ್ಟ್ ಯುವರ್ ಸ್ಪೇಸ್ ಬಟನ್ ಮೇಲೆ ಟ್ಯಾಪ್ ಮಾಡಿದಾಗ ನೀವು ಹೋಸ್ಟ್ ಆಗಿ  ಸಕ್ರಿಯರಾಗುತ್ತೀರಿ ಮತ್ತು ನಿಮ್ಮ ಚಾಟ್ ರೂಮ್‌ಗೆ ಉಳಿದವರನ್ನು ಆಮಂತ್ರಿಸಬಹುದು.

ಯಾರೆಲ್ಲ ಜಾಯಿನ್ ಆಗಬಹುದು? 
ಸ್ಪೇಸಸ್ ವೇದಿಕೆ ಮುಕ್ತವಾಗಿದ್ದು, ಯಾರು ಬೇಕಾದರೂ ಕೇಳುಗರಾಗಿ ಸೇರಿಕೊಳ್ಳಬಹುದು. ಟ್ವಿಟರ್‌ನಲ್ಲಿ ನಿಮ್ಮನ್ನು ಾಲೋ ಮಾಡದೇ ಇರುವುವರು ಕೂಡ ಇದರಲ್ಲಿ ಕೇಳುಗರಾಗಿ ಬಂದು ಕುಳಿತುಕೊಳ್ಳಲು ಅವಕಾಶವಿದೆ. ಲಿಂಕ್ ಕಳುಹಿಸುವ ಮೂಲಕ ನೇರವಾಗಿ ಕೇಳುಗರನ್ನೂ ಆಮಂತ್ರಿಸಬಹುದು. ನಿಮ್ಮ ಸ್ಪೇಸಸ್ ಲಿಂಕ್ ಅನ್ನು ಟ್ವೀಟ್ ಮಾಡುವ ಮೂಲಕ ಅಥವಾ ಇತರೆ ವೇದಿಕೆಗಳಲ್ಲಿ ಅದನ್ನು ಷೇರ್ ಮಾಡುವುದರೊಂದಿಗೆ ಕೇಳುಗರನ್ನು ಕರೆದುಕೊಳ್ಳಬಹುದಾಗಿದೆ.

ಒದಗಿಸಲಾದ ನಿಗದಿತ ವೇಳೆಯಲ್ಲಿ  ಈ ವೇದಿಕೆಯಲ್ಲಿ 11 ಜನರು ಮಾತ್ರವೇ ಸ್ಪೀಕರ್ ಆಗಲು ಅವಕಾಶವಿದೆ. ಯಾವಾಗ ನೀವು ಹೊಸ ಸ್ಪೇಸ್ ಸೃಷ್ಟಿಸುತ್ತೀರಿ ಆಗ ನಿಮ್ಮ ಸ್ಪೇಸ್‌ಗೆ ಹೆಸರು ಕೊಡಲು ಅವಕಾಶವಿರುವುದನ್ನು ಕಾಣಬಹುದು ಮತ್ತು ಆ ಮೂಲಕ ಸ್ಪೇಸ್ ಸ್ಟಾರ್ಟ್ ಮಾಡಬಹುದು. ನೀವು ನಿಮ್ಮ ಸ್ಪೇಸ್ ಅನ್ನು ಶೆಡ್ಯೂಲ್ ಮಾಡಬಹುದು ಕೂಡ. 

ಒಮ್ಮೆ ಸ್ಪೇಸಸ್ ಶುರುವಾದ ಮೇಲೆ ಹೋಸ್ಟ್ ಮಾಡುವವರು, ಪೀಪಲ್ ಐಕಾನ್ ಮೇಲೆ ಟ್ಯಾಪಿಂಗ್ ಮಾಡುವ ಮೂಲಕ ಸ್ಪೀಕರ್ ಆಗಲು ಕೇಳುಗರಿಗೆ ರಿಕ್ವೆಸ್ಟ್ ಕಳುಹಿಸಬಹುದು. ಹಾಗೆಯೇ, ಕೇಳುಗರಲ್ಲಿ ಯಾರಿಗಾದರೂ ಮಾತನಾಡಬೇಕು ಎನಿಸಿದರೆ, ಮೈಕೋ್ರೆನ್ ಕೆಳಗಡೆ ಕಾಣುವ ರಿಕ್ವೆಸ್ಟ್ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಅನುಮತಿಯನ್ನು ಪಡೆದುಕೊಳ್ಳಬಹುದು. 

ಕ್ಲಬ್‌ಹೌಸ್ ಆ್ಯಪ್‌ಗೆ ಒಗ್ಗಿಕೊಂಡವರಿಗೆ ಟ್ವಿಟರ್‌ನ ಸ್ಪೇಸಸ್ ತುಸು ಕಷ್ಟ ಎನ್ನಬಹುದು. ಕ್ಲಬ್‌ಹೌಸ್‌ನಷ್ಟು ಇದು ಬಳಕೆದಾರಸ್ನೇಹಿಯಂತೆ ಕಾಣುತ್ತಿಲ್ಲಘಿ. ಸ್ಪೇಸಸ್ ಈಗಷ್ಟೇ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಟ್ವಿಟರ್ ಈ ವೇದಿಕೆಯನ್ನು ಇನ್ನಷ್ಟು ಹೆಚ್ಚು ಆಪ್ತವಾಗಿಸಬಹುದು.


ಈ ಲೇಖನವು ವಿಜಯ ಕರ್ನಾಟಕ ಟೆಕ್ ನೋ ಪುರವಣಿಯಲ್ಲಿ 2021ರ ಜುಲೈ 23ರಂದು ಪ್ರಕಟವಾಗಿದೆ.


ಭಾನುವಾರ, ಜುಲೈ 18, 2021

India-Born Sirisha Bandla flies to Space ಆಕಾಶದೆತ್ತರದ ಕನಸು ಬೆಂಬತ್ತಿದ ಬಾಂಡ್ಲಾ

ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ರಿಚರ್ಡ್‌ ಬ್ರಾನ್ಸನ್‌ ನೇತೃತ್ವದ ತಂಡದಲ್ಲಿಭಾರತೀಯ ಸಂಜಾತೆ, 34 ವರ್ಷದ ಸಿರಿಶಾ ಬಾಂಡ್ಲಾಇರುವುದು ಭಾರತೀಯರಾದ ನಮಗೆ ಹೆಮ್ಮೆ.

ಮಲ್ಲಿಕಾರ್ಜುನ ತಿಪ್ಪಾರ
ಭಾನುವಾರ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿರುವ ಭಾರತೀಯ ಸಂಜಾತೆ ಅಮೆರಿಕನ್‌ ಸಿರಿಶಾ ಬಾಂಡ್ಲಾಅವರ ವಿಷಯದಲ್ಲಿ ‘ಕನಸು ಕಂಡರಷ್ಟೇ ಅದನ್ನು ಸಾಕಾರಗೊಳಿಸುವುದು ಸಾಧ್ಯ’ ಎಂಬ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರ ಉಕ್ತಿ ಅಕ್ಷ ರಶಃ ನಿಜವಾಗಿದೆ!

ಕಂಡ ಕನಸನ್ನು ಬೆನ್ನಟ್ಟಿ ಅದನ್ನು ನಿಜವಾಗಿಸುವ ಪ್ರಯತ್ನದ ಅನುಭವ ಕೊಡುವ ಥ್ರಿಲ್‌ ಬೇರೆ ಯಾವುದರಿಂದಲೂ ದೊರೆಯಲು ಸಾಧ್ಯವಿಲ್ಲ. ಅಮೆರಿಕದ ಬಾಹ್ಯಾಕಾಶದ ಚಟುವಟಿಕೆಗಳ ಕೇಂದ್ರ ಸ್ಥಾನ ನಾಸಾದ ಜಾನ್ಸನ್‌ ಸ್ಪೇಸ್‌ ಸೆಂಟರ್‌ ಸಮೀಪದ ಹೂಸ್ಟನ್‌ನಲ್ಲಿ ಆಡಿ ಬೆಳೆದ ಹುಡುಗಿ ಗಗನಯಾತ್ರಿಯಾಗುವ ಕನಸು ಕಾಣುವುದು ಸಾಮಾನ್ಯ. ಆದರೆ, ಆ ಕನಸನ್ನು ಬೆಂಬತ್ತಿ ಅದನ್ನು ನನಸಾಗಿಸಿಕೊಳ್ಳುವ ಗುಣ ಸಿರಿಶಾ ಅವರಿಗೆ ಚಿಕ್ಕಂದಿನಿಂದಲೇ ಇತ್ತು. ನಾಸಾದಲ್ಲಿಗಗನಯಾತ್ರಿಯಾಗುವ ಕನಸು ಕಂಡರು. ಆದರೆ, ದೃಷ್ಟಿ ದೋಷದಿಂದಾಗಿ ಪೈಲಟ್‌ ಅಥವಾ ಗಗನಯಾತ್ರಿಧಿಯಾಗುವ ಅರ್ಹತೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಏರ್‌ಫೋರ್ಸ್‌ ಮೂಲಕ ನಾಸಾ ಕದ ತಟ್ಟುವ ಕನಸು ಕೈಗೂಡಲಿಲ್ಲ. ಆದರೇನಂತೆ, ಒಂದಿಲ್ಲಒಂದು ದಿನ ಬಾಹ್ಯಾಕಾಶಕ್ಕೆ ನೆಗೆದೇ ನೆಗೆಯುತ್ತೇನೆ ಎಂಬ ಛಲದಲ್ಲಿಯಾವುದೇ ಕೊರತೆ ಇರಲಿಲ್ಲ. ಕಂಡ ಕನಸನ್ನು ನಿಜವಾಗಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಅವರು ಬಿಡಲಿಲ್ಲ. ಅದಕ್ಕೀಗ ಫಲ ದೊರೆಯುತ್ತಿದೆ. ಅಗತ್ಯ ವಿದ್ಯಾಭ್ಯಾಸವನ್ನು ಪೂರೈಸಿಕೊಂಡ ಅವರೀಗ ತಮ್ಮ ಕನಸನ್ನು ನಿಜವಾಗಿಸಿಕೊಧಿಳ್ಳುತ್ತಿಧಿದ್ದಾರೆ; ಬಾಹ್ಯಾಕಾಶಕ್ಕೆ ಕಾಲಿಡುತ್ತಿರುವ ನಾಲ್ಕನೇ ಭಾರತೀಯ ಸಂಜಾತೆ ಎಂಬ ಕೀರ್ತಿಗೆ ಪಾತ್ರರಾಗುತ್ತಿದ್ದಾರೆ. 

ನಾಸಾ ಗಗನಯಾತ್ರಿಯಾಗಿದ್ದ ಕಲ್ಪನಾ ಚಾವ್ಲಾಅವರು 2003ರಲ್ಲಿಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿಭೂಮಿಗೆ ಮರಳುವಾಗ ದುರ್ಘಟನೆ ಸಂಭವಿಸಿ ಮೃತಧಿರಾಗಿದ್ದರು. ಇದಕ್ಕೂ ಮೊದಲ ರಾಕೇಶ್‌ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಇಂಡಿಯನ್‌. ಮತ್ತೊಬ್ಬರು ಭಾರತೀಯ ಮೂಲದ ಸುನೀತಾ ವಿಲಯಮ್ಸ್‌. ಸಿರಿಶಾ ಬಾಹ್ಯಾಕಾಶಕ್ಕೆ ತಲುಪಿದರೆ ಈ ವರೆಗೆ ಭಾರತ ಮೂಲದ ನಾಲ್ವರು ಇಂಥ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಸಿರಿಶಾ ಬಾಹ್ಯಾಕಾಶ ಕನಸಿಗೆ ಪ್ರೇರಣೆಯಾದವರು ರಾಕೇಶ್‌ ಶರ್ಮಾ! 

ಬಾಹ್ಯಾಕಾಶಕ್ಕೆ ತೆರಳಲಿರುವ ವರ್ಜಿನ್‌ ಸಂಸ್ಥಾಪಕ ಸರ್‌ ರಿಚರ್ಡ್‌ ಬ್ರಾನ್ಸನ್‌ ನೇತೃತ್ವದ ತಂಡದಲ್ಲಿಒಟ್ಟು ಆರು ಜನರಿದ್ದು, ರಿಚರ್ಡ್‌ ಬ್ರಾನ್ಸ್‌ನ ಗಗನಯಾತ್ರಿ 001 ಆದರೆ ಸಿರಿಶಾ ಗಗನಯಾತ್ರಿ 004. ಇವರ ಜೊತೆಗೆ, ಮುಖ್ಯ ಗಗನಯಾತ್ರಿ ಬೆಥ್‌ ಮೋಸೆಸ್‌(ಗಗನಯಾತ್ರಿ 002), ಮುಖ್ಯ ಕಾರ್ಯಾಚರಣೆ ಎಂಜಿನಿಯರ್‌ ಕೊಲಿನ್‌ ಬೆನ್ನೆಟ್‌(ಗಗನಯಾತ್ರಿ 003) ಹಾಗೂ ಡೇವ್‌ ಮ್ಯಾಕೆ ಮತ್ತು ಮಸೂಚಿ ಇಬ್ಬರು ಪೈಲಟ್‌ಗಳಿದ್ದಾರೆ. ಈ ಆರು ಜನರನ್ನು ಹೊತ್ತ ವರ್ಜಿನ್‌ ಗ್ಯಾಲಕ್ಟಿಕ್‌ ವಿಎಸ್‌ಎಸ್‌ ಯೂನಿಟಿ ಗಗನ ನೌಕೆ  ಭಾನುವಾರ ನ್ಯೂ ಮೆಕ್ಸಿಕೊದಿಂದ ಬಾಹ್ಯಾಕಾಶಕ್ಕೆ ಪ್ರಯಾಣ ಆರಂಭಿಸಲಿದೆ. ಇದರಲ್ಲಿಕಂಪನಿಯ ಮಾಲೀಕ ಬ್ರಾನ್ಸನ್‌ ಅವರದ್ದು ‘ಗ್ರಾಹಕರ ಬಾಹ್ಯಾಕಾಶ ಹಾರಾಟದ ಅನುಭವವ ಮೌಲ್ಯಮಾಪನ’ ಮಾಡುವ ಜವಾಬ್ದಾರಿಯಾದರೆ, ಏರೋನಾಟಿಕಲ್‌ ಎಂಜಿನಿಯರ್‌ ಆಗಿರುವ ಸಿರಿಶಾ ಅವರದ್ದು ‘ಸಂಶೋಧಕರ ಅನುಭವ’ವನ್ನು ಕಟ್ಟಿಕೊಡುವ ಹೊಣೆಯನ್ನ ಹೊತ್ತುಕೊಡಿದ್ದಾರೆ. ಬೆಳಕಿನ ವೇಗಕ್ಕಿಂತಲೂ ಮೂರುವರೆ ಪಟ್ಟು ವೇಗದಲ್ಲಿಈ ಸ್ಪೇಸ್‌ ಪ್ಲೇನ್‌ ಹಾರಲಿದೆ. 

ಬ್ರಾನ್ಸ್‌ನ ಒಡೆತನದ ‘ವರ್ಜಿನ್‌ ಗ್ಯಾಲಕ್ಟಿಕ್‌’ನಲ್ಲಿ ಸರಕಾರಕ್ಕೆ ಸಂಬಂಧಿಸಿದ ವ್ಯವಹಾರ ವಿಭಾಗ ಮತ್ತು ಸಂಶೋಧನಾ ಕಾರ್ಯಚರಣೆಗಳ ವೈಸ್‌ ಪ್ರೆಸಿಡೆಂಟ್‌ ಆಗಿ ಕಾರ್ಯಧಿನಿರ್ವಧಿಹಿಸುತ್ತಿದ್ದಾರೆ.  ಆಂಧ್ರದ ಗುಂಟೂರು ಜಿಲ್ಲೆಧಿಯಲ್ಲಿ1988ರಲ್ಲಿಸಿರಿಶಾ ಜನಿಸಿದರು. ತಂದೆ ಕೃಷಿ ವಿಜ್ಞಾನಿ ಡಾ.ಮುರಳಿ, ತಾಯಿ ಅನುರಾಧಾ. ಸಿರಿಶಾಗೆ ನಾಲ್ಕು ವರ್ಷವಿದ್ದಾಗ ಅವರ ಕುಟುಂಬವು ಅಮೆರಿಕದ ಹೂಸ್ಟನ್‌, ಟೆಕ್ಸಾಸ್‌ಗೆ ಸ್ಥಳಾಂತಧಿರಗೊಂಡಿತು. ಸದ್ಯ ವಾಷಿಂಗ್ಟನ್‌ನಲ್ಲಿವಾಸವಾಗಿದ್ದಾರೆ. ಟೆಕ್ಸಾಸ್‌ನ ಸ್ಥಳೀಯ ಶಾಲೆಯಲ್ಲಿಶಿಕ್ಷ ಣ ಪೂರೈಸಿದ ಬಳಿಕ 2006ರಲ್ಲಿಸಿರಿಶಾ ಪರ್ಡೂ್ಯ ವಿವಿ ಸೇರಿದರು. ಏರೋನಾಟಿಕಲ್‌, ಏರೋ ಸ್ಪೇಸ್‌ ಮತ್ತು ಆಸ್ಟ್ರೋನಾಟಿಕಲ್‌ ಎಂಜಿನಿಧಿಯರಿಂಗ್‌ ಪದವಿಯನ್ನು 2011ರಲ್ಲಿಪಡೆದುಕೊಂಡರು. 2015ರಲ್ಲಿಜಾರ್ಜಿಯಾ ವಾಷಿಂಗ್ಟನ್‌ ವಿಶ್ವವಿದ್ಯಾಲಯದಿಂದ ಬಿಸಿನೆಸ್‌ ಅಡ್ಮಿನಿಸ್ಪ್ರೇಷನ್‌ನಲ್ಲಿಸ್ನಾತಕೋತ್ತರ ಪದವಿಯನ್ನು ಗಳಿಸಿಕೊಂಡರು. 

ಸಿರಿಶಾ ಅವರು ಶಿಕ್ಷ ಣದ ಜೊತೆ ಜತೆಗೆಯೇ 2012ರಲ್ಲಿಕಮರ್ಷಿಯಲ್‌ ಸ್ಪೇಸ್‌ಫ್ಲೈಟ್‌ ಫೆಡರೇಷನ್‌ನಲ್ಲಿಅಸೋಸಿಯೇಟ್‌ ಡೈರೆಕ್ಟರ್‌ ಆಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಬಹುಶಃ 2015ರ ನಂತರ ಅವರು ಕನಸು ಕೈಗೂಡುವ ದಿನಗಳ ಶುರುವಾದವು ಎನ್ನಬಹುದು! ಯಾಕೆಂದರೆ, 2015ರಲ್ಲಿಅವರು ವರ್ಜಿನ್‌ ಗ್ಯಾಲಕ್ಟಿಕ್‌ ಕಂಪನಿ ಸೇರಿ, 2020ರವರೆಗೂ ವ್ಯವಹಾರ ಅಭಿವೃದ್ಧಿ ಮತ್ತು ಸರಕಾರಿ ವ್ಯವಹಾರಗಳ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಬಳಿಕ ಅವರು ವರ್ಜಿನ್‌ ಆರ್ಬಿಟ್‌ನಲ್ಲಿವಾಷಿಂಗ್ಟನ್‌ ಆಪರೇಷನ್‌ನ ಡೈರೆಕ್ಟರ್‌ ಆಗಿದ್ದರು. 

2021ರಿಂದ ಸಿರಿಶಾ ವರ್ಜಿನ್‌ ಗ್ಯಾಲಕ್ಟಿಕ್‌ನ ಸರಕಾರ ವ್ಯವಹಾರಗಳ ಉಪಾಧ್ಯಕ್ಷ ರಾಗಿ ಬಡ್ತಿ ಪಡೆದುಕೊಂಡರು. ವರ್ಜಿನ್‌ ಗ್ಯಾಲಕ್ಟಿಕ್‌ ಎನ್ನುವುದು ರಿಚರ್ಡ್‌ ಬ್ರಾನ್ಸನ್‌ ಅವರು ಸ್ಥಾಪಿಸಿದ ಅಮೆರಿಕನ್‌ ಸ್ಪೇಸ್‌ಕ್ರಾಫ್ಟ್‌ ಕಂಪನಿಯಾಗಿದೆ. ಬಾಹ್ಯಾಕಾಶ ಪ್ರವಾಸೋದ್ಯಮ ಹಿನ್ನೆಲೆಯಲ್ಲಿವರ್ಜನ್‌ ಕಂಪನಿ ಕೈಗೊಂಡಿರುವ ಬಾಹ್ಯಾಕಾಶದಂಚಿನ ಪಯಣವು ಮೈಲುಗಲ್ಲಾಗಲಿದೆ. ಆ ಐತಿಹಾಸಿಕ ಪ್ರಯತ್ನದಲ್ಲಿಭಾರತೀಯ ಸಂಜಾತೆಯೊಬ್ಬಳು ಭಾಗಿಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. 

ಭೂಮಿಯಿಂದ ಮೂರು ಲಕ್ಷ  ಅಡಿ ಎತ್ತರದಲ್ಲಿಹಾರಾಟ ನಡೆಸಲಿರುವ ಸಿರಿಶಾಗೆ ಅಮ್ಮ ಮಾಡುವ ಊಟ ತಂಬ ಇಷ್ಟ. ಹಾಗಂತಲೇ ಅವರ ತಾಯಿ, ಫೇವರಿಟ್‌ ಮಟನ್‌ ಬಿರಿಯಾನಿ ಮಾಡಿಕೊಂಡು ಬಂದಿಧಿದ್ದರಂತೆ. ಅವರಿಗೆ ಆಂಧ್ರದ ವಿಶಿಷ್ಟ ‘ಪಪ್ಪು’(ಅನ್ನ) ತುಂಬ ಇಷ್ಟ. ಬಾಹ್ಯಾಕಾಶದಿಂದ ಮರಳಿದ ಬಳಿಕ ಅಮ್ಮನ ಕೈಯಿಂದ ಮಾಡಿದ ‘ಪಪ್ಪು’ ತಿನ್ನವ ಬಯಕೆಯನ್ಯೂ ಹೊಂದಿದ್ದಾರೆ.

ರಿಚರ್ಡ್‌  ಬ್ರಾನ್ಸನ್‌ ಬಳಿಕ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೂಸ್‌ ಕೂಡ ಜುಲೈ 20ರಂದು ಬ್ಲೂಒರಿಜಿನ್‌ ಕಂಪನಿಯ ನ್ಯೂ ಶೇಪರ್ಡ್‌ ಮೂಲಕ ಬಾಹ್ಯಾಕಾಶ ಯಾನ ಕೈಗೊಳ್ಳಲಿದ್ದಾರೆ. ಜಗತ್ತಿನ ಇಬ್ಬರು ಶ್ರೀಮಂತ ಉದ್ದಿಮೆದಾರರು ನಡೆಸುತ್ತಿರುವ ಈ ಯಾನವು ಮುಂಬರುವ ದಿನಗಳಲ್ಲಿಹೊಸ ‘ಉದ್ಯಮ ಸ್ಥಾಪನೆ’ಗೂ ಕಾರಣವಾಗಬಹುದು!

ಈ ಎಲ್ಲಕಾರಣಗಳಿಂದಾಗಿಯೇ ಖಾಸಗಿ ಬಾಹ್ಯಾಕಾಶ ಯಾನ ಹೆಚ್ಚು ಚರ್ಚಿತವಾಗುತ್ತಿದೆ ಮತ್ತು ಅಂಥ ಒಂದು ಪ್ರಯತ್ನದಲ್ಲಿಭಾರತ ಸಂಜಾತೆ ಸಿರಿಶಾ ಭಾಗಿಯಾಗುತ್ತಿದ್ದಾರೆ. ಬಾಹ್ಯಾಕಾಶಕ್ಕೆ ತೆರಳುತ್ತಿರುವ ಸಿರಿಶಾ, ತನ್ನೊಂದಿಗೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಹೆಮ್ಮೆಯ  ಭಾವ ಹೊಂದಿದ್ದಾರೆ. ಇದನ್ನು ಅವರು ಸ್ವತಃ ಹೇಳಿಕೊಂಡಿದ್ದಾರೆ ಕೂಡ, ‘‘ನಾನು ಸ್ವಲ್ಪ ಭಾರತವನ್ನು ನನ್ನೊಂದಿಗೆ ಕರೆದೊಯ್ಯುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ’’ ಎಂದು ಹೇಳಿಕೊಂಡಿದ್ದಾರೆ. 

ಬಾಹ್ಯಾಕಾಶದ ಗೀಳಿನ ಹೊರತಾಗಿಯೂ ಸಿರಿಶಾ ಹಲವು ವಿಷಯಗಳಲ್ಲಿವಿಶಿಷ್ಟ ಆಸಕ್ತಿಗಳನ್ನು ಬೆಳೆಸಿಕೊಂಡಿದ್ದಾರೆ. ಹೊಸ ಹೊಸ ಸಂಗತಿಗಳಿಗೆ ಬಹಳ ಬೇಗ ಆಕರ್ಷಿತವಾಗಿವ ಅವರಿಗೆ ಬೋಟಿಂಗ್‌ ಮಾಡುವುದು ತುಂಬ ಇಷ್ಟ. ಇದರ ಜತೆಗೆ ಬಾಸ್ಕೆಟ್‌ಬಾಲ್‌ ಆಟವನ್ನು ನೋಡುವುದು ತುಂಬ ಎಂಜಾಯ್‌ ಮಾಡುತ್ತಾರೆ. ಬೆಕ್ಕು ಮತ್ತು ನಾಯಿ ಅಕ್ಕರೆ ಸಂಗಾತಿಗಳು. ನೆಚ್ಚಿನ ನಾಯಿ ‘ಚಾನ್ಸ್‌’ ಅವರ ಜೀವನದ ಭಾಗವೇ ಆಗಿದೆ. ಸಹೋದರಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಎಲ್ಲಹಬ್ಬಗಳನ್ನು ಆಚರಿಸುತ್ತಾರೆ. ಪ್ರವಾಸವನ್ನು ಹೆಚ್ಚಿಗೆ ಇಷ್ಟ ಪಡುವ ಸಿರಿಶಾ ಭಾರತವು ಸೇರಿದಂತೆ ಹಲವು ದೇಶಗಳನ್ನು ಸುತ್ತಿ ವಿಶಿಷ್ಟ ಅನುಭವವನ್ನು ಪಡೆದುಕೊಂಡಿದ್ದಾರೆ. 

ರಿಚರ್ಡ್‌ ಬ್ರಾನ್ಸನ್‌ ತಂಡದೊಂದಿಗೆ ಸಿರಿಶಾ ಬಾಂಡ್ಲಾ ಕೈಗೊಳ್ಳುತ್ತಿರುವ ಬಾಹ್ಯಾಕಾಶ ಯಾನ ಇತಿಹಾಸ ಸೃಷ್ಟಿಸುವುದು ಖಚಿತ. ಜೊತೆಗೆ, ಏನಾದರೂ ಹೊಸದನ್ನು ಮಾಡುವ ಹುಮ್ಮಸ್ಸು ಹೊಂದಿರುವ, ಜಗತ್ತಿನ ಪ್ರತಿಭಾವಂತ ಅಸಂಖ್ಯ ಹೆಣ್ಣುಮಕ್ಕಳಿಗೆ ಸಿರಿಶಾ ಅವರ ಈ ಜರ್ನಿ ಹುರುಪು ತುಂಬಲಿದೆ; ಕನಸುಗಳನ್ನು ಕಾಣಲು ದಾರಿ ಮಾಡಿಕೊಡಲಿದೆ. ಅಂಥದೊಂದು ಪ್ರೇರಣೆಗೆ ಕಾರಣವಾಧಿಗುತ್ತಿರುವ ಸಿರಿಶಾ ಬಾಹ್ಯಾಕಾಶ ಪಯಣಕ್ಕೆ ಗುಡ್‌ಲಕ್‌ ಹೇಳೋಣ.


ಈ ಲೇಖನವು ವಿಜಯ ಕರ್ನಾಟಕದ 2021 ಜುಲೈ 10 ಸಂಚಿಕೆಯಲ್ಲಿ ಪ್ರಕಟವಾಗಿದೆ



ಸೋಮವಾರ, ಜೂನ್ 14, 2021

Sunil Chhetri overtakes Lionel Messi - ಕಾಲ್ಚೆಂಡು ಮಾಂತ್ರಿಕ ಸುನಿಲ್‌ ಛೆತ್ರಿ

ರಾಷ್ಟ್ರೀಯ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ , ಅಂತಾರಾಷ್ಟ್ರೀಯ ಸಕ್ರಿಯ ಫುಟ್ಬಾಲಿಗರ ಪೈಕಿ ಅತಿ ಹೆಚ್ಚು ‘ಗೋಲ್‌’ ಬಾರಿಸಿದವರ ಪಟ್ಟಿಯಲ್ಲಿಮೆಸ್ಸಿಯನ್ನೇ ಮೀರಿಸಿದ್ದಾರೆ!


ಮಲ್ಲಿಕಾರ್ಜುನ ತಿಪ್ಪಾರ
ಆರಾಧಿಸುವ ವ್ಯಕ್ತಿಯ ಸಾಧನೆಯನ್ನು ನೀವೇ ಹಿಂದಿಕ್ಕಿ ಮುನ್ನಡೆದರೆ ಆಗ ಆಗುವ ಆನಂದವನ್ನು ಅಭಿವ್ಯಕ್ತಿಸಲಾದೀತೆ? ಏನಿದ್ದರೂ ಆ ಅನುಭವವನ್ನು ಅನುಭವಿಸಬೇಕಷ್ಟೇ. ಇಂಥದ್ದೇ ಮನಸ್ಥಿತಿಯಲ್ಲಿದ್ದಾರೆ ಭಾರತೀಯ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಛೆತ್ರಿ. 

‘ಜಗತ್ತಿನ ಸಾರ್ವಕಾಲಿಕ  ಶ್ರೇಷ್ಠ ಫುಟ್ಬಾಲಿಗ’ ಎಂದು ಗುರುತಿಸಿಕೊಳ್ಳುತ್ತಿ­ರುವ ಅರ್ಜೆಂಟೀನಾದ ಆಟಗಾರ ಲಿಯೋನೆಲ್‌ ಮೆಸ್ಸಿ ಸಾಧನೆಯನ್ನು ನಮ್ಮ ಸುನಿಲ್‌ ಹಿಂದಿಕ್ಕಿದ್ದಾರೆ. ಸಕ್ರಿಯ ಫುಟ್ಬಾಲ್‌ ಆಟಗಾರರ ಪೈಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್‌ಗಳನ್ನು ಗಳಿಸಿದವರು ಪಟ್ಟಿಯಲ್ಲಿಪೋರ್ಚುಗಲ್‌ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ(103) ಅಗ್ರ ಸ್ಥಾನದಲ್ಲಿದ್ದರೆ, ಲಿಯೋನೆಲ್‌ ಮೆಸ್ಸಿ 72 ಗೋಲುಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರು. ಈಗ ಭಾರತದ ಸುನಿಲ್‌ ಬಾಂಗ್ಲಾದೇಶದ ವಿರುದ್ಧ ಏಷ್ಯಾ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ2 ಗೋಲು ಬಾರಿಸಿ, ತಮ್ಮ ಗೋಲುಗಳ ಸಂಖ್ಯೆಯನ್ನು 74ಕ್ಕೆ ಹೆಚ್ಚಿಸಿಕೊಂಡು, ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈವರೆಗೆ ಅವರು 117 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

ಅಂತಾರಾಷ್ಟ್ರೀಯ ಗೋಲುಗಳ ಪಟ್ಟಿಯಲ್ಲಿಮೆಸ್ಸಿಯನ್ನು ಅವರು ಹಿಂದೆ ಹಾಕುತ್ತಿದ್ದಂತೆ, ಮೆಸ್ಸಿಗಿಂತ ಯೇ ಶ್ರೇಷ್ಠ ಎಂಬ ವಾದ ಸೋಷಿಯಲ್‌ ಮೀಡಿಯಾಗಳಲ್ಲಿಜೋರಾಗಿತ್ತು. ಇದಕ್ಕೆಲ್ಲಉತ್ತರ ನೀಡಿರುವ ಸುನಿಲ್‌, ‘‘ಮೆಸ್ಸಿಯ ಅಸಂಖ್ಯ ಅಭಿಮಾನಿಗಳಲ್ಲಿನಾನೂ ಒಬ್ಬ. ನನ್ನ ಮತ್ತು ಅವರ(ಮೆಸ್ಸಿ) ಮಧ್ಯೆ ಹೋಲಿಕೆ ಸರಿ­ಯಲ್ಲ,’’ ಎಂದಿದ್ದಾರೆ. ‘‘ಲಿಯೋನೆಲ್‌ ಮೆಸ್ಸಿ­ಯನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ, ಕೈ ಕುಲುಕಿ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳುವೆ,’’ ಎನ್ನುವ ಅವರಿಗೆ ಅದು ಪಕ್ಕಾ ಫ್ಯಾನ್‌ಬಾಯ್‌ ಮೊಮೆಂಟ್‌!

ಕ್ರಿಕೆಟ್‌ನ್ನೇ ಉಸಿರಾಡುವ ಭಾರತದಂಥ ರಾಷ್ಟ್ರದಲ್ಲಿಫುಟ್ಬಾಲ್‌ ಆಟಗಾರರೊಬ್ಬರ ಈ ಸಾಧನೆಗೆ ಹೆಚ್ಚಿನ ಮಹತ್ವವಿದೆ. ಕ್ರಿಕೆಟ್‌ನ ಅಬ್ಬರದಲ್ಲಿಫುಟ್ಬಾಲ್‌ ಸೇರಿದಂತೆ ಇತರ ಆಟಗಳಿಗೆ ಪ್ರಾಧಾನ್ಯ, ಪ್ರಾಯೋಜಕತ್ವ ಸಿಗು­ವುದು ಕಷ್ಟ. ಹಾಗಿದ್ದೂ, ಹಲವು ಗುಂಪು ಆಟಗಾರರು ಮತ್ತು ಅಥ್ಲೀಟ್‌ಗಳು ದೇಶದ ಕೀರ್ತಿಯನ್ನು ಆಗಾಗ ಗಗನಕ್ಕೆ ಏರಿಸುತ್ತಲೇ ಇರುತ್ತಾರೆ. ಅಂಥ ಅಭಿಮಾನದ ಕ್ಷ ಣಕ್ಕೆ ಸುನಿಲ್‌ ಈಗ ಕಾರಣವಾಗಿದ್ದಾರೆ.

ದಂತಕತೆ ಬೈಚುಂಗ್‌ ಭುಟಿಯಾ ಬಳಿಕ ಸುನಿಲ್‌ ಛೆತ್ರಿ ಭಾರತೀಯ ಫುಟ್ಬಾಲ್‌ ನೊಗವನ್ನು ಸಮರ್ಥವಾಗಿ ಎಳೆಯುತ್ತಿದ್ದಾರೆ. ಇಂಡಿಯನ್‌ ಸೂಪರ್‌ ಲೀಗ್‌(ಐಸಿಎಲ್‌)ನಲ್ಲಿಬೆಂಗಳೂರು ಫುಟ್ಬಾಲ್‌ ಕ್ಲಬ್‌(ಬಿಎಫ್‌ಸಿ) ಪರವಾಗಿಯೂ ಆಡುತ್ತಿರುವ  ‘ಕ್ಯಾಪ್ಟನ್‌ ಫೆಂಟಾಸ್ಟಿಕ್‌’ ಸುನೀಲ್‌ ಛೆತ್ರಿ ಹುಟ್ಟಿದ್ದು ಈಗಿನ ತೆಲಂಗಾಣದ ಸಿಕಂದರಾಬಾದ್‌ನಲ್ಲಿ1984ರ ಆಗಸ್ಟ್‌ 3ರಂದು. ತಂದೆ ಕೆ.ಬಿ.ಛೆತ್ರಿ, ತಾಯಿ ಸುಶೀಲಾ. ತಂದೆ ಭಾರತೀಯ ಸೇನೆಯಲ್ಲಿಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಮೆಕಾನಿಕಲ್‌ ಎಂಜಿನಿಯರ್‌ ಅಧಿಕಾರಿ. ಸುನಿಲ್‌ ಅವರು ತಂದೆ ಅವರೂ ಭಾರತೀಯ ಸೇನೆಯ ಪರವಾಗಿ ಫುಟ್ಬಾಲ್‌ ಆಡಿದ್ದಾರೆ. ತಾಯಿ ಸುಶೀಲಾ ಹಾಗೂ ಅವರ ಇಬ್ಬರು ಅವಳಿ ಸಹೋದರಿಯರು ನೇಪಾಳದ ಮಹಿಳಾ ರಾಷ್ಟ್ರೀಯ ಫುಟ್ಬಾಲ್‌ ತಂಡಕ್ಕೆ ಆಡುತ್ತಿದ್ದರು. ತಂದೆ ತಾಯಿ ಇಬ್ಬರೂ ಫುಟ್ಬಾಲ್‌ ಆಟಗಾರರು; ಸುನಿಲ್‌ಗೆ ಫುಟ್ಬಾಲ್‌ ರಕ್ತಗತ.

ತಂದೆ ಸೇನೆಯಲ್ಲಿಅಧಿಕಾರಿಯಾಗಿದ್ದರಿಂದಾಗಿ ಸುನಿಲ್‌ ಶಾಲಾ ಶಿಕ್ಷ ಣ ಒಂದೇ ರಾಜ್ಯಕ್ಕೆ ಸಿಮೀತವಾಗಲಿಲ್ಲ. ಸಿಕ್ಕಿಮ್‌ನ ಗ್ಯಾಂಗ್ಟಕ್‌ನ ಬಹಾಯಿ ಸ್ಕೂಲ್‌, ಪಶ್ಚಿಮ ಬಂಗಾಳದ ಡಾರ್ಜೀಲಿಂಗ್‌ ಬೆತ್ನೀಸ್‌ ಸ್ಕೂಲ್‌, ಕೋಲ್ಕೊತಾದ ಲೊಯೊಲಾ ಸ್ಕೂಲ್‌ ಮತ್ತು ದಿಲ್ಲಿಯ ಆರ್ಮಿ ಪಬ್ಲಿಕ್‌ ಸ್ಕೂಲ್‌ನಲ್ಲಿಶಾಲಾ ಶಿಕ್ಷ ಣವನ್ನು ಪೂರೈಸಿದ್ದಾರೆ. ಕೋಲ್ಕೊತಾದ ಅಶುತೋಷ ಕಾಲೇಜ್‌ನಲ್ಲಿಪ್ರವೇಶ ಪಡೆದು, 12ನೇ ತರಗತಿಯಲ್ಲಿಓದುತ್ತಿದ್ದಾಗಲೇ 2001ರಲ್ಲಿಮಲೇಷ್ಯಾದಲ್ಲಿಆಯೋಜಿಸಲಾಗಿದ್ದ ಏಷ್ಯನ್‌ ಸ್ಕೂಲ್‌ ಚಾಂಪಿಯನ್‌ಶಿಪ್‌ಗೆ ಭಾರತೀಯ ತಂಡಧಿವನ್ನು ಪ್ರತಿನಿಧಿಸುವ ಅವಕಾಶ ಒದಗಿ ಬಂತು. ಕಾಲೇಜು ಶಿಕ್ಷ ಣಧಿಧಿಧಿವನ್ನು ಅರ್ಧಕ್ಕೆ ಮೊಟಕುಧಿಗೊಳಿಸಧಿಬೇಕಾ­ಧಿಯಿತು. ಮುಂದಿನ ನಾಲ್ಕೈದು ವರ್ಷದಲ್ಲಿಅವರು ಭಾರತೀಯ ರಾಷ್ಟ್ರೀಯ ಫುಟ್ಬಾಲ್‌ ತಂಡಕ್ಕೆ ಪ್ರವೇಶ ಪಡೆದರು. ನಂತರ ನಡೆದಿದ್ದೆಲ್ಲಇತಿಹಾಸ.

ಸುನಿಲ್‌ ತಮ್ಮ ಬಹುಕಾಲದ ಗೆಳತಿ ಸೋನಂ ಭಟ್ಟಾಚಾರ್ಯ ಅವರನ್ನು 2017ರಲ್ಲಿಮದುವೆಯಾದರು. ಈ ಸೋನಮ್‌ ಬೇರೆ ಯಾರೂ ಅಲ್ಲ. ರಾಷ್ಟ್ರೀಯ ಫುಟ್ಬಾಲ್‌ ತಂಡದ ಮಾಜಿ ಆಟಗಾರ, ಮೋಹನ್‌ ಬಗಾನ್‌ ತಂಡದ ದಂತಕತೆ ಸುಬ್ರತ ಭಟ್ಟಾಚಾರ್ಯ ಅವರ ಪುತ್ರಿ. ಇವರು ಛೆತ್ರಿ ಮೆಂಟರ್‌ ಕೂಡ. ಸುನಿಲ್‌ ಅವರ ಆಟ ಹಾಗೂ ವ್ಯಕ್ತಿತ್ವದ ಮೇಲೆ ಅವರ ತಾಯಿ ದಟ್ಟ ಪ್ರಭಾವ ಬೀರಿದ್ದಾರೆಂಬುದು ಅವರ ಮಾತುಗಳನ್ನು ಕೇಳಿದರೆ ಅರಿವಾ­ಗುತ್ತದೆ. ‘‘ಆಟದ ಬಗ್ಗೆ ಹೇಳುವುದಾದರೆ ಅದು ನನ್ನ ತಂದೆ, ತಾಯಿಂದಲೇ ಆರಂಭವಾಗುತ್ತದೆ, ವಿಶೇಷವಾಗಿ ನನ್ನ ತಾಯಿ. ತಾಯಿಯೊಂದಿಗೆ ಕೇರಂ, ಚೆಸ್‌, ಚೀನೀಸ್‌ ಚೆಕರ್ಸ್‌ ಮತ್ತು ಇತರ ಹೊರಾಂಗಣ ಕ್ರೀಡೆಗಳನ್ನು ಆಡುವುದು ತೀರಾ ಸಾಮಾನ್ಯವಾಗಿತ್ತು. ನನಗೆ 13 ವರ್ಷವಾಗೋವರೆಗೂ ಈ ಯಾವುದೇ ಆಟದಲ್ಲೂನನ್ನ ತಾಯಿಯನ್ನು ಸೋಲಿಸಲು ನನ್ನಿಂದಾ­ಗಲಿಲ್ಲ. ಅವರೂ ಎಂದು ಸೋಲಲು ಒಪ್ಪುತ್ತಿರಲಿಲ್ಲ. ಸೋಲು ಒಪ್ಪಿಕೊಳ್ಳ­ದಿರುವ ಗುಣ ನನ್ನ ತಾಯಿಯಿಂದಲೇ ಬಂದಿದೆ ನನಗೂ ಬಂದಿದೆ,’’  ಎನ್ನುತ್ತಾರೆ ಅವರು. ಬೈಚುಂಗ್‌ ಭುಟಿಯಾ ಅವರಿಂದಲೂ ಸಾಕಷ್ಟು ಕಲಿತಿದ್ದೇನೆ. ಅವರ ಸರಳ ವ್ಯಕ್ತಿತ್ವ ತುಂಬಾ ಇಷ್ಟ ಎನ್ನುತ್ತಾರೆ ಅವರು.

ರಾಷ್ಟ್ರೀಯ ತಂಡದ ಪರವಾಗಿ ಅತಿ ಹೆಚ್ಚು ಪಂದ್ಯಗಳು ಹಾಗೂ ಗೋಲು ಬಾರಿಸಿರುವ ದಾಖಲೆಯನ್ನು ಹೊಂದಿರುವ ಸುನಿಲ್‌ಅವರು ತಮ್ಮ ವೃತ್ತಿಪರ ಫುಟ್ಬಾಲ್‌ ಆಟವನ್ನು 2002ರಲ್ಲಿಏಷ್ಯಾದ ಹಳೆಯ ಕ್ಲಬ್‌ಗಳಲ್ಲಿಒಂದಾಗಿರುವ ಮೋಹನ್‌ ಬಗಾನ್‌ ಕ್ಲಬ್‌ನೊಂದಿಗೆ ಆರಂಭಿಸಿಧಿದರು. ಬಳಿಕ ಜೆಸಿಟಿ ಕ್ಲಬ್‌ಗೆ ವಲಸೆ ಬಂದು, 48 ಪಂದ್ಯಗಳಲ್ಲಿ21 ಗೋಲು ಬಾರಿಸಿ ಗಮನ ಸೆಳೆದರು. 2010ರಲ್ಲಿಮೇಜರ್‌ ಲೀಗ್‌ ಸಾಕರ್‌ನಲ್ಲಿಕನ್ಸಾಸ್‌ ಸಿಟಿ ವಿಜಾರ್ಡ್ಸ್‌ನೊಂದಿಗೆ ಗುರುಧಿತಿಸಿಧಿಕೊಂಡರು. ಈ ಮೂಲಕ ವಿದೇಶದ ಕ್ಲಬ್‌ ಪರವಾಗಿ ಆಟವಾಡಿದ ಭಾರತೀಯ ಉಪಖಂಡದ ಮೂರನೇ ಆಟಗಾರ ಎನಿಸಿಕೊಂಡರು. ಅಲ್ಲಿಂದ ಹಿಂದಿರುಗಿದ ಬಳಿಕ ಚಿರಾಗ್‌ ಯುನೈಟೆಡ್‌, ಮೋಹನ್‌ ಬಗಾನ್‌ ಪರವಾಗಿ ಐ ಲೀಗ್‌ನಲ್ಲಿಆಡಿದರು. ಮತ್ತೆ ವಿದೇಶಕ್ಕೆ ತೆರಳಿ ಪೋರ್ಚುಗಲ್‌ನ ಸ್ಪೋರ್ಟಿಂಗ್‌ ಕ್ಲಬ್‌ ಸೇರಿದರು. 2005ರಲ್ಲಿಭಾರತೀಯ ರಾಷ್ಟ್ರೀಯ ಫುಟ್ಬಾಲ್‌ ತಂಡವನ್ನು ಸೇರಿ, ತಮ್ಮ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದರು. ಈ ಪಂದ್ಯದಲ್ಲಿಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲು ಹೊಡೆದರು.

ಸುನಿಲ್‌ ಛೆತ್ರಿ ಅವರ ನೆರವಿನಿಂದಾಗಿ ಭಾರತ ತಂಡವು 2007, 2009 ಮತ್ತು 2012ರಲ್ಲಿನೆಹರು ಕಪ್‌ ಮತ್ತು 2011ರ ಎಸ್‌ಎಎಫ್‌ಎಫ್‌ ಚಾಂಪಿ­ಯನ್‌ಶಿಪ್‌ ಗೆದ್ದುಕೊಂಡಿತು. 2008ರ ಏಷ್ಯನ್‌ ಫುಟ್ಬಾಲ್‌ ಕಾನೆಧಿಡೆರಷನ್‌(ಎಎಫ್‌ಸಿ) ಚಾಲೆಂಜ್‌ ಕಪ್‌ ಗೆಲ್ಲುವಲ್ಲಿಯೂ ಅವರ ಪಾತ್ರ ಮಹತ್ವ­ದ್ದಾಗಿತ್ತು. ಈ ಗೆಲುವಿನಿಂದಾಗಿಯೇ ಭಾರತವು 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯನ್‌ ಕಪ್‌ ಪಂದ್ಯಾವಳಿಯಲ್ಲಿಆಡಲು ಅರ್ಹತೆ ಪಡೆದು­ಕೊಂಡಿತು. 2007, 2011, 2013, 2014, 2017 ಮತ್ತು 2019 ಹೀಗೆ ದಾಖಲೆಯ ಆರು ಬಾರಿ ಎಐಎಫ್‌ಎಫ್‌(ಆಲ್‌ ಇಂಡಿಯಾ ಫುಟ್ಬಾಲ್‌ ಫೆಡರೆಷನ್‌) ವರ್ಷದ ಆಟಗಾರ ಎಂದು ಅವರನ್ನು ಹೆಸರಿಸಲಾಗಿದೆ. 2014ರಲ್ಲಿಇವರ ನೇತೃತ್ವದಲ್ಲಿಬೆಂಗಳೂರು ಫುಟ್ಬಾಲ್‌ ಕ್ಲಬ್‌ ಚೊಚ್ಚಿಲ ಋುತುವಿನಲ್ಲಿಪ್ರಶಸ್ತಿ ಗೆದ್ದುಕೊಂಡಿತು.

ಭಾರತದಲ್ಲಿಕ್ರಿಕೆಟ್‌ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟ ಫುಟ್ಬಾಲ್‌. 36 ವರ್ಷದ ಸುನಿಲ್‌  ಭಾರಧಿತೀಯ ಫುಟ್ಬಾಲ್‌ ತಂಡದ ಧ್ರುವತಾರೆ. ಹೊಸ ಪೀಳಿಗೆಯ ಆಟಗಾರರಿಗೆ ಅವರು ರೋಲ್‌ಮಾಡೆಲ್‌. ಭಾರತದ ಕ್ರೀಡಾಕ್ಷೇತ್ರದ ಪ್ರಮುಖ ಪ್ರಶಸ್ತಿ ಅರ್ಜುನ್‌ ಅವಾರ್ಡ್‌ಧಿ (2011), ದೇಶದ ನಾಲ್ಕನೇ ಅತ್ಯುಚ್ಚ ನಾಗರಿಕ ಪ್ರಶಸ್ತಿ ಪದ್ಮಶ್ರೀ ಮತ್ತು ದಿಲ್ಲಿಫುಟ್ಬಾಲ್‌ ಅಸೋಷಿಯೇಷನ್‌ನ ಫುಟ್ಬಾಲ್‌ ರತ್ನ ಅವಾರ್ಡ್‌  ಸಾಧನೆಯ ಕಿರೀಟಧಿವನ್ನು ಅಲಂಕರಿಸಿವೆ. ಶಾರುಖ್‌ ಖಾನ್‌ ಮತ್ತು ಸಚಿನ್‌ ತೆಂಡೂಲ್ಕರ್‌ ಅವರನ್ನು ಇಷ್ಟಪಡುವ ಅವರಿಗೆ ಸಂಗೀತ ಕೇಳುವುದು ಸಿಕ್ಕಾಪಟ್ಟೆ ಇಷ್ಟ. ಹಾಬಿಯಾಗಿ ಕ್ರಿಕೆಟ್‌, ಬ್ಯಾಡ್ಮಿಂಟ್‌, ಟೆನ್ನಿಸ್‌ ಕೂಡ ಆಡುತ್ತಾರೆ. ಬೆಂಗಳೂರು ಎಫ್‌ಸಿ ಮೂಲಕ  ಅವರು ಕನ್ನಡ ನಾಡಿಗೆ ಇನ್ನಷ್ಟು ಹತ್ತಿರವಾಗಿದ್ದೆರಂಬುದೂ ನಮಗೆ ಹೆಮ್ಮೆಯೇ ಸರಿ.


ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯ 2021ರ ಜೂನ್ 13ರ ಸಂಚಿಕೆಯಲ್ಲಿ ಪ್ರಕಟವಾಗಿದೆ.