ಸೋಮವಾರ, ಮಾರ್ಚ್ 4, 2019

ಇಬ್ಬರು ಸ್ಪೀಕರ್‌ ಕಂಡ ನಾಲ್ಕನೇ ಲೋಕಸಭೆ

1967ರಲ್ಲಿ ನಡೆದ ಚುನಾವಣೆಯು ಹಲವು ದೃಷ್ಟಿಗಳಿಂದ ಮಹತ್ವ ಪಡೆದುಕೊಂಡಿದೆ. ಈ ಚುನಾವಣೆಯ ಹೊತ್ತಿಗೆ ಲೋಕಸಭೆಸ್ಥಾನಗಳು 520ಕ್ಕೆ ಏರಿಕೆಯಾಗಿದವು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡವು. ನೆಹರು ಯುಗ ಮುಗಿದು ಇಂದಿರಾ ಯುಗಕ್ಕೆ ಬುನಾದಿ ಹಾಕಿದ ಚುನಾವಣೆ ಇದು. ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌, ಶೇ.40ರಷ್ಟು ಮತ ಪಡೆದ 283 ಸ್ಥಾನಗಳನ್ನು ಗೆದ್ದುಕೊಂಡು ಸಿಂಪಲ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಆದರೆ, ಈ ಹಿಂದಿನ ಮೂರು ಚುನಾವಣೆಗಳಿಗೆ ಹೋಲಿಸಿದರೆ, ಅದ್ಭುತ ಗೆಲವು ಏನಲ್ಲ. ಈ ಚುನಾವಣೆಯಲ್ಲೂ ರಾಜ್ಯಸಭೆಯ 13 ಸದಸ್ಯರು ಕೆಳಮನೆಗೆ ಆಯ್ಕೆಯಾದರು. ವಿಶೇಷ ಎಂದರೆ, ರಾಜಗೋಪಾಲಚಾರಿ ಅವರ ಸ್ವತಂತ್ರ ಪಾರ್ಟಿ ಕಾಂಗ್ರೆಸ್‌ ನಂತರ ಅತಿ ದೊಡ್ಡ ಪಕ್ಷ ವಾಯಿತು. ಅದು ಒಟ್ಟು 44 ಸ್ಥಾನ ಗೆದ್ದುಕೊಂಡಿತು. 35 ಸ್ಥಾನಗಳೊಂದಿಗೆ ಬಿಜೆಎಸ್‌ ಮೂರನೇ ಸ್ಥಾನದಲ್ಲಿ ಉಳಿಯಿತು. ಗುಜರಾತ್‌, ಮದ್ರಾಸ್‌, ಒಡಿಶಾ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ದಿಲ್ಲಿಯಲ್ಲಿ ಕಾಂಗ್ರೆಸ್‌ ಭಾರಿ ಸೋಲು ಎದುರಾಯಿತು. ಅಂದಿನ ರಾಜಕಾರಣದಲ್ಲಿ ಕಾಂಗ್ರೆಸ್‌ನದ್ದು ದೊಡ್ಡಣ್ಣ ಆ್ಯಟಿಟ್ಯೂಡ್‌. ಆದರೆ, ನೆಹರು ಮತ್ತು ಶಾಸ್ತ್ರಿ ಸಾವಿನ ನಂತರ ಕಾಂಗ್ರೆಸ್‌ನೊಳಗಿದ್ದ ಏಕತೆ ಮಾಯವಾಗಿ, ಒಳಜಗಳ ಶುರುವಾದವು. ಆದರೂ ಅದೆಲ್ಲವನ್ನೂ ಸಂಭಾಳಿಸುವಲ್ಲಿ ಇಂದಿರಾ ಯಶಸ್ವಿಯಾದರು. ಇದೇ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಕೂಡ ಗಣನೀಯವಾಗಿ ಇಳಿಜಾರಿನಲ್ಲಿತ್ತು. ಪಂಚವಾರ್ಷಿಕ ಯೋಜನೆ ಮೂಲಕ ಶೇ.5.6ರಷ್ಟು ಜಿಡಿಪಿ ಸಾಧಿಸುವ ಗುರಿ ಇತ್ತು. ವಾಸ್ತವದಲ್ಲಿ ಗುರಿಸಾಧನೆಯಾಗಿದ್ದು ಕೇವಲ ಶೇ.2.4 ಅಷ್ಟೆ. ಆಡಳಿತಾತ್ಮಕ ಮತ್ತು ರಾಜಕೀಯ ವೈಫಲ್ಯಗಳ ಒಟ್ಟು ಪರಿಣಾಮ ಮುಂದಿನ ಐದು ವರ್ಷಗಳಲ್ಲಿ ಕಾಣಬೇಕಾಯಿತು. ನಾಲ್ಕನೇ ಲೋಕಸಭೆಯ ಮತ್ತೊಂದು ವಿಶೇಷ ಎಂದರೆ, ಇಬ್ಬರು ಸ್ಪೀಕರ್‌ಗಳನ್ನು ಕಂಡಿತು. 1967ರಿಂದ 1969ರವರೆಗೆ ನೀಲಂ ಸಂಜೀವ್‌ ರೆಡ್ಡಿ ಹಾಗೂ 1969ರಿಂದ 71ವರೆಗೆ ಜಿ.ಎಸ್‌.ಧಿಲ್ಲೋನ್‌ ಅವರು ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್‌ ತೊರೆದಿದ್ದರಿಂದ ಸಂಜೀವ್‌ ರೆಡ್ಡಿ ಅವರು ಸ್ಪೀಕರ್‌ ಹುದ್ದೆಯನ್ನು ಬಿಟ್ಟುಕೊಡಬೇಕಾಯಿತು. 
- ತಿಪ್ಪಾರ 

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ

ಎಸ್‌ಪಿ ಜನತಾ ಪರಿವಾರದ ಮತ್ತೊಂದು ಟಿಸಿಲು

ಕಾಂಗ್ರೆಸ್‌ ಮತ್ತು ಬಿಜೆಪಿಯ ಹೊರತಾಗಿ ಸದ್ದು ಮಾಡುವ ಪ್ರಾದೇಶಿಕ ಪಕ್ಷ ಗಳ ಪೈಕಿ ಸಮಾಜವಾದಿ ಪಾರ್ಟಿ(ಎಸ್‌ಪಿ)ಯೂ ಒಂದು. ಉತ್ತರ ಪ್ರದೇಶದಲ್ಲಿ ಬುನಾದಿ ಹೊಂದಿರುವ ಎಸ್‌ಪಿ, ತನ್ನನ್ನು ತಾನು ಪ್ರಜಾಸತ್ತಾತ್ಮಕ ಸಮಾಜವಾದಿ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಭಾರತದ ರಾಜಕಾರಣದಲ್ಲಿ ಉತ್ತರ ಪ್ರದೇಶಕ್ಕೆ ವಿಶೇಷ ಸ್ಥಾನವಿದೆ. ಯಾಕೆಂದರೆ, ಈ ರಾಜ್ಯವೊಂದೇ 80 ಸೀಟುಗಳನ್ನು ತನ್ನ ಮಡಿಲೊಳಗೆ ಇಟ್ಟುಕೊಂಡಿದೆ. ಹಾಗಾಗಿ, ತಮ್ಮದೇ ಆದ ಅಸ್ತಿತ್ವ ಹೊಂದಿರು ಎಸ್‌ಪಿ, ಬಿಎಸ್‌ಪಿ ಕೇಂದ್ರದಲ್ಲಿ ಸಮ್ಮಿಶ್ರ ಸರಕಾರಗಳು ರಚನೆಯಾದಾಗಲೆಲ್ಲ ಪ್ರಮುಖ ಪಾತ್ರ ನಿರ್ವಹಿಸಿವೆ. 2019ರ ಚುನಾವಣೆಯಲ್ಲೂ ಉಭಯ ಪಕ್ಷ ಗಳು ಮೈತ್ರಿಯೊಂದಿಗೆ ಕಣಕ್ಕಿಳಿಯುತ್ತಿರುವುದು ಇದಕ್ಕೆ ಸಾಕ್ಷಿ. ಜಯಪ್ರಕಾಶ್‌ ನಾರಾಯಣ್‌ ಅವರ ಚಳವಳಿಯಿಂದ ಉದಯಿಸಿದ್ದ ಜನತಾ ಪಾರ್ಟಿ ಮೂರು ವರ್ಷದ ಅಧಿಕಾರದ ಬಳಿಕ ಛಿದ್ರವಾಗಿ ಹೋಯಿತು. ಆಗ ಅನೇಕ ಪಕ್ಷ ಗಳು ತಲೆ ಎತ್ತಿದವು. ಆ ಪೈಕಿ ಎಸ್‌ಪಿಯೂ ಒಂದು. ತಮ್ಮ ಕಾರ್ಯಕರ್ತರಿಂದ ಪ್ರೀತಿಯಿಂದ 'ನೇತಾಜಿ' ಎಂದು ಕರೆಯಿಸಿಕೊಳ್ಳುವ ಮುಲಾಯಂ ಸಿಂಗ್‌ ಯಾದವ್‌ ಉತ್ತರ ಪ್ರದೇಶದಲ್ಲಿ ಪಕ್ಷ ವನ್ನು ಸಂಘಟಿಸಿ ಅದನ್ನು ಅಧಿಕಾರದವರೆಗೂ ಕೊಂಡೊಯ್ದರು. ನಾಲ್ಕು ಬಾರಿ ಬೇರೆ ಪಕ್ಷ ಗಳ ನೆರವಿನೊಂದಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೂ ಬಂದರು. ಹಾಗೆಯೇ, ದೇವೇಗೌಡ ಮತ್ತು ಐ.ಕೆ.ಗುಜ್ರಾಲ್‌ ನೇತೃತ್ವದ ಕೇಂದ್ರ ಸರಕಾರದಲ್ಲೂ ಎಸ್‌ಪಿ ಪ್ರಮುಖ ಪಾತ್ರ ನಿರ್ವಹಿಸಿತ್ತು. 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಹುಸಿಗೊಳಿಸಿದ ಎಸ್‌ಪಿ, ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಈ ಬಾರಿಯೂ ನೇತಾಜಿ ಸಿಎಂ ಆಗುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ಮುಲಾಯಂ ಸಿಂಗ್‌ ಅವರು ತಮ್ಮ ಪುತ್ರ ಅಖಿಲೇಶ್‌ ಸಿಂಗ್‌ ಯಾದವರ್‌ ಅವರಿಗೆ ಪಟ್ಟ ಕಟ್ಟಿ ಮುಖ್ಯಮಂತ್ರಿ ಮಾಡಿದರು. ಅಂದ ಹಾಗೆ, ಮೊದಲ ಬಾರಿಗೆ ಎಸ್‌ಪಿ ಐದು ವರ್ಷಗಳ ಪೂರ್ತಿ ಉತ್ತರ ಪ್ರದೇಶದಲ್ಲಿ ಅಧಿಕಾರ ಚಲಾಯಿಸಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಎಸ್‌ಪಿಯೊಳಗೇ ದೊಡ್ಡ ಮಟ್ಟದ ಕೋಲಾಹಲ ಕೂಡ ನಡೆಯಿತು. ಸೈದ್ಧಾಂತಿಕವಾಗಿ ಎಸ್‌ಪಿ ಜಾತ್ಯತೀತ, ಸಮಾಜವಾದ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಎಸ್‌ಪಿ ಚುನಾವಣಾ ಗುರುತು ಸೈಕಲ್‌. ಅಖಿಲೇಶ್‌ ಸಿಂಗ್‌ ಯಾದವ್‌ ಈಗ ಪಕ್ಷ ವನ್ನು ಮುನ್ನಡೆಸುತ್ತಿದ್ದಾರೆ. 

ಈ ಲೇಖನವು ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.

ಎಡ ರಾಜಕಾರಣದ ಮುಂಚೂಣಿ ಪಕ್ಷ ಸಿಪಿಐ

ಮ್ಯುನಿಸ್ಟ್‌ ಪಾರ್ಟಿ ಇಂಡಿಯಾ(ಸಿಪಿಐ) ಭಾರತೀಯ ರಾಜಕಾರಣದಲ್ಲಿ ತನ್ನದೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಭಾರತದಲ್ಲಿ ಸಿಪಿಐ ಯಾವಾಗ ಆರಂಭವಾಯಿತು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ 1925 ಡಿಸೆಂಬರ್‌ 26ರಂದು ಹೇಳಲಾಗುತ್ತದೆ. ಹಾಗೆಯೇ ಪ್ರತಿ ವರ್ಷ 26ರಂದು ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯಪೂರ್ವದಿಂದಲೂ ಎಡಪಕ್ಷ ಗಳು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿದ್ದರೂ ಅವುಗಳ ಪ್ರಾಮುಖ್ಯತೆ ಸ್ವಾತಂತ್ರ್ಯದ ನಂತರವೇ ಹೆಚ್ಚು ಎದ್ದು ಕಂಡಿತು. ಎಡಪಂಥೀಯ ವಿಚಾರಧಾರೆ ನಮ್ಮ ನೆಲದ್ದಲ್ಲ. ಹಾಗಾಗಿ, ಚೀನಾ ಮತ್ತು ಸೋವಿಯತ್‌ ರಷ್ಯಾ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯವು ಭಾರತದಲ್ಲಿನ ಎಡಪಕ್ಷ ದ ಮೇಲೂ ಪರಿಣಾಮ ಬೀರಿ, 1964ರಲ್ಲಿ ಸಿಪಿಐ ಇಬ್ಭಾಗವಾಯಿತು. ಸಿಪಿಐ(ಮಾರ್ಕ್ಸ್‌ವಾದ) ಪ್ರತ್ಯೇಕವಾಗಿ ಪಕ್ಷ ದ ಸ್ಥಾನಮಾನ ಪಡೆದುಕೊಂಡಿತು. ಎಸ್‌.ಸುಧಾಕರ ರೆಡ್ಡಿ ಸಿಪಿಐನ ಪ್ರಸಕ್ತ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಎಡಪಕ್ಷ ಗಳ ಜತೆ ಸಿಪಿಐ ಅಧಿಕಾರದಲ್ಲಿತ್ತು. ಕೇರಳದಲ್ಲಿ 19, ಪಶ್ಚಿಮ ಬಂಗಾಳದಲ್ಲಿ ಒಬ್ಬರು ವಿಧಾನಸಭೆ ಸದಸ್ಯರಿದ್ದಾರೆ. ಲೋಕಸಭೆಯಲ್ಲಿ ಒಬ್ಬ ಹಾಗೂ ರಾಜ್ಯಸಭೆಯಲ್ಲಿ ಇಬ್ಬರು ಪ್ರತಿನಿಧಿಗಳಿದ್ದಾರೆ.ಘ್ಕಿ ಆರಂಭಿಕ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌ ನಂತರ ಅತ್ಯುತ್ತಮ ಪ್ರದರ್ಶನ ತೋರಿದ ಪಕ್ಷ ಎಂದರೆ ಸಿಪಿಐ ಮಾತ್ರ. ಭಾರತದಲ್ಲೂ ಈಗಲೂ ಕಮ್ಯುನಿಸ್ಟ್‌ ಪಾರ್ಟಿಗೆ ಫಾಲೋ ಮಾಡುವ ಅಸಂಖ್ಯೆ ಜನರಿದ್ದಾರೆ. ಆದರೆ, ಅವರನ್ನು ಮುನ್ನಡೆಸಬಲ್ಲ ಸರ್ವ ಒಪ್ಪಿಗೆಯಾಗಬಲ್ಲ ನಾಯಕತ್ವದ ಕೊರತೆ ಇದೆ. ಇಡೀ ದೇಶವನ್ನು ಪ್ರಭಾವಿಸಬಲ್ಲ ನಾಯಕರು ಎಡಪಕ್ಷ ಗಳಿಂದ ಹೊರಬೀಳಲಿಲ್ಲ. ಹಾಗಾಗಿ, ಸಿಪಿಐ 1960ರ ದಶಕದ ನಂತರ, ಮೇಲ್ಮುಖದ ಬೆಳವಣಿಗೆಯನ್ನು ಕಾಣಲೇ ಇಲ್ಲ. ಸಿಪಿಐನಿಂದ ಛಿದ್ರವಾಗಿ ಹೊರಹೋಗಿದ್ದ ಸಿಪಿಎಂ ತುಸು ಬೆಳವಣಿಗೆಯನ್ನು ಕಂಡಿತಾದರೂ ಅದು ಕೂಡ ಇತ್ತೀಚಿನ ವರ್ಷಗಳಲ್ಲಿ ನೆಲಕಚ್ಚುತ್ತಾ ಬಂದಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾದ ರಾಜಕಾರಣವನ್ನು ಕಟ್ಟಿ ಬೆಳೆಸುವ ಸಾಮರ್ಥ್ಯ ಇದ್ದರೂ ಅದನ್ನು ಹೊಣೆ ಹೊತ್ತು ಕೊಳ್ಳುವ ನಾಯಕರಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 

ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ಮ ಮಾಡಿ
https://vijaykarnataka.indiatimes.com/elections/lok-sabha/news/a-history-of-communist-party-of-india-cpi/articleshow/68232805.cms

ಯಶಸ್ಸಿನ ಹಾದಿಯಲ್ಲಿ ಬಿಜೆಪಿ

ಬಿಜೆಪಿ ಸದ್ಯ ಗೆಲುವಿನ ಅಶ್ವ ಏರಿ ಶರವೇಗದಲ್ಲಿ ಸಾಗುತ್ತಿರುವ ಪಕ್ಷ . ಕಾಂಗ್ರೆಸ್‌ಗೆ ಪರ್ಯಾಯ ಮತ್ತು ಬಲಿಷ್ಠ ರಾಜಕೀಯ ವ್ಯವಸ್ಥೆಯನ್ನು ರೂಪಿಸಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ. ಬಿಜೆಪಿಯ ಮೂಲ ಭಾರತೀಯ ಜನ ಸಂಘ ಪಕ್ಷ ದಲ್ಲಿದೆ. ಶ್ಯಾಮ ಪ್ರಸಾದ್‌ ಮುಖರ್ಜಿ ಅವರು 1951ರಲ್ಲಿ ಬಿಜೆಎಸ್‌ ಸ್ಥಾಪಿಸಿದರು. 1977ರ ನಂತರ ಬಿಜೆಎಸ್‌ ಅನ್ನು ಜನತಾ ಪರಿವಾರದೊಂದಿಗೆ ವಿಲೀನ ಮಾಡಲಾಯಿತು. ಮೂರು ವರ್ಷದ ಬಳಿಕ ಜನತಾ ಪರಿವಾರ ಛಿದ್ರವಾಗಿ, ಭಾರತೀಯ ಜನಸಂಘವು ಭಾರತೀಯ ಜನತಾ ಪಾರ್ಟಿಯಾಗಿ ಮರುಜನ್ಮ ಪಡೆದುಕೊಂಡಿತು. ಆರಂಭದಲ್ಲಿ ಅಂಥ ಹೇಳಿಕೊಳ್ಳುವ ಯಶಸ್ಸು ದೊರೆಯಲಿಲ್ಲ. 1984ರ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಆದರೆ, ನಂತರದ ದಿನಗಳಲ್ಲಿ ರಾಮಜನ್ಮಭೂಮಿ ವಿವಾದ ಬಿಜೆಪಿಯ ರಾಜಕಾರಣಕ್ಕೆ ಹೊಸದಿಕ್ಕನ್ನೇ ತೋರಿಸಿತು. ನಿಧಾನವಾಗಿ ರಾಜ್ಯಗಳಲ್ಲಿ ತನ್ನ ಬೇರುಗಳನ್ನು ಚಾಚುತ್ತಾ, ಕೇಂದ್ರ ಮಟ್ಟದಲ್ಲಿ ಗಣನೀಯವಾಗಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಯಿತು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಲ್‌.ಕೆ. ಆಡ್ವಾಣಿಅವರು ಬಿಜೆಪಿಗೆ ಸಮರ್ಥ ನಾಯಕತ್ವ ಒದಗಿಸಿದರು. 1996ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷ ವಾಗಿ ಹೊರಹೊಮ್ಮಿ ವಾಜಪೇಯಿ ನೇತೃತ್ವದಲ್ಲಿ ಸರಕಾರ ರಚಿಸಿತು. ಆದರೆ, ಬಹುಮತ ಕೊರತೆಯಿಂದ 13 ದಿನದಲ್ಲಿ ಪತನ ಕಂಡಿತು. 1998ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತದೊಂದಿಗೆ ಅಧಿಕಾರಕ್ಕೇರಿತು. 2014ರಲ್ಲಿ ಮೋದಿ ನೇತೃತ್ವದಲ್ಲಿ ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರದಲ್ಲಿರುವ ಬಿಜೆಪಿ, ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ ಪಕ್ಷ ಎಂಬ ಹೆಗ್ಗಳಿಕೆ ಇದೆ. ಸದ್ಯ 10 ರಾಜ್ಯಗಳಲ್ಲಿ ಬಿಜೆಪಿ ನೇರವಾಗಿ ಅಧಿಕಾರದಲ್ಲಿದ್ದರೆ, 7 ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಸರಕಾರಗಳಿವೆ. ಬಲಪಂಥೀಯ ವಿಚಾರಧಾರೆ ಹೊಂದಿರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಗಿ ಅಮಿತ್‌ ಶಾ ಕಾರ್ಯನಿರ್ವಹಿಸುತ್ತಿದ್ದಾರೆ. 

ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.
https://vijaykarnataka.indiatimes.com/elections/lok-sabha/news/bjp-party-history/articleshow/68219784.cms

2ನೇ ಚುನಾವಣೆಯಲ್ಲಿ ಅತಿ ಹೆಚ್ಚು ಪಕ್ಷೇತರರ ಆಯ್ಕೆ

16ನೇ ಲೋಕಸಭೆಯು ಪೂರ್ತಿಯಾಗಿ ಅಧಿಕೃತ ಪ್ರತಿಪಕ್ಷ ಇಲ್ಲದೆ ಕಳೆದು ಹೋಯಿತು. ಇಂಥದ್ಧೆ ಸ್ಥಿತಿ 2ನೇ ಲೋಕಸಭೆಯಲ್ಲೂ ಉಂಟಾಗಿತ್ತು. 1957ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಎಂದಿನಂತೆ ಭರ್ಜರಿ ಗೆಲುವು ಸಾಧಿಸಿ, 494 ಸೀಟುಗಳ ಪೈಕಿ 371 ಸೀಟುಗಳನ್ನು ಗೆದ್ದುಕೊಂಡಿತು. ಮತ ಪ್ರಮಾಣ ಕೂಡ ಶೇ.45ರಿಂದ ಶೇ.48ಕ್ಕೇರಿಕೆಯಾಯಿತು. ವಿಶೇಷ ಎಂದರೆ, ಈ ಚುನಾವಣೆಯಲ್ಲೂ ಪಕ್ಷೇತರರು ಶೇ.19.3ರಷ್ಟು ವೋಟು ಪಡೆದು 42 ಸೀಟುಗಳನ್ನು ಗೆದ್ದರು. ಈವರೆಗೆ ಇದು ದಾಖಲೆಯಾಗೇ ಉಳಿದಿದೆ. ಇನ್ನು ಬಿಜೆಎಸ್‌ 4 ಸೀಟು ಗೆದ್ದರೆ, ಸಿಪಿಐ 27, ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ 19 ಸೀಟುಗಳನ್ನು ಪಡೆದುಕೊಂಡವು. ಮೊದಲನೆಯ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕ್ಷೇತ್ರಗಳು ಹೆಚ್ಚಾಗಿದ್ದವು ಮತ್ತು ಒಟ್ಟಾರೆ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಹೆಚ್ಚುವರಿಯಾಗಿ ಏಳು ಸೀಟುಗಳನ್ನು ಪಡೆದುಕೊಡಿತು. ಜತೆಗೆ, ಈ ಎಲೆಕ್ಷ ನ್‌ನಲ್ಲಿ ಮೊದಲ ಬಾರಿಗೆ ಅಂಚೆ ಮತದಾನ ವ್ಯವಸ್ಥೆ(ಪೋಸ್ಟ್‌ ವೋಟಿಂಗ್‌ ಸಿಸ್ಟಮ್‌)ಯನ್ನು ಜಾರಿಗೆ ತರಲಾಯಿತು. 403 ಕ್ಷೇತ್ರಗಳಲ್ಲಿ 91 ಕ್ಷೇತ್ರಗಳು ದ್ವಿದಸ್ಯ ಕ್ಷೇತ್ರಗಳಾಗಿದ್ದರೆ, ಉಳಿದವು ಏಕಸದಸ್ಯ ಕ್ಷೇತ್ರಗಳಾಗಿದ್ದವು. ದ್ವಿದಸ್ಯ ಕ್ಷೇತ್ರ ಪದ್ಧತಿ ಕಂಡ ಕೊನೆಯ ಚುನಾವಣೆ ಇದು. ಭಾರತದ ಪ್ರಥಮ ಪ್ರಧಾನಿಯಾಗಿ ಜನಪ್ರಿಯರಾಗಿದ್ದ ಜವಾಹರಲಾಲ್‌ ನೆಹರು ಅವರು ಎರಡನೇ ಅವಧಿಗೆ ಮತ್ತೆ ಪ್ರಧಾನಿಯಾದರು. ಲೋಕಸಭೆಯ ಸ್ಪೀಕರ್‌ ಆಗಿ ಹುಕುಂ ಸಿಂಗ್‌ ಸರ್ದಾರ್‌ ಅವರು ಆಯ್ಕೆಯಾದರು. ಅನೇಕ ಮೊದಲುಗಳನ್ನು ಕಂಡ 2ನೇ ಸಾರ್ವತ್ರಿಕ ಚುನಾವಣೆಯು ಕುಖ್ಯಾತಿಗೂ ಒಳಗಾಯಿತು.ಬೂತ್‌ಗಳನ್ನು ವಶಕ್ಕೆ ಪಡೆದ ಮೊದಲ ಪ್ರಕರಣ ದಾಖಲಾಯಿತು. ಬಿಹಾರದ ಬೇಗುಸರಾಯ್‌ ಜಿಲ್ಲೆಯ ಮಾತಿಹಾನಿ ವಿಧಾನಸಭಾ ಕ್ಷೇತ್ರದ ರಚಿಯಾಹಿ ಬೂತ್‌ ಅನ್ನು ಕೆಲವರು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಕಪ್ಪುಚುಕ್ಕೆಯಾಗಿ ದಾಖಲಾಯಿತು. 
- ತಿಪ್ಪಾರ 

ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.
https://vijaykarnataka.indiatimes.com/elections/lok-sabha/news/large-number-independent-candidates-elected-in-1957-lok-sabha-election/articleshow/68219193.cms

ಮೊದಲ ಚುನಾವಣೆಯಲ್ಲಿ 489 ಸೀಟಿಗೆ 68 ಹಂತದ ಮತದಾನ

ಮೊದಲನೆ ಸಾರ್ವತ್ರಿಕ ಚುನಾವಣೆಹೇಗಿದ್ದಿರಬಹುದು? ಅಂಥದೊಂದು ಕುತೂಹಲ ಸಾಮಾನ್ಯ. 1949 ನವೆಂಬರ್‌ 26ರಿಂದ ಮೊದಲನೆಯ ಚುನಾವಣೆ ನಡೆಯುವವರೆಗೆ ಮಧ್ಯಂತರ ಸಂಸತ್ತು ಅಸ್ತಿತ್ವದಲ್ಲಿತ್ತು. 25 ಅಕ್ಟೋಬರ್‌ 1951ರಿಂದ 21 ಫೆಬ್ರವರಿ 1952ರ ವರೆಗೆ ಒಟ್ಟು 489 ಸೀಟುಗಳಿಗಾಗಿ 68 ಹಂತದಲ್ಲಿ ಚುನಾವಣೆ ನಡೆಯಿತು. ಶೇ.44.99 ಮತಗಳೊಂದಿಗೆ ಕಾಂಗ್ರೆಸ್‌ 364 ಸೀಟುಗಳನ್ನು ಗೆದ್ದಿತು. ಎರಡನೇ ಸ್ಥಾನದಲ್ಲಿದ್ದ ಸಿಪಿಐ ಗೆದ್ದಿದ್ದು ಕೇವಲ 16 ಸೀಟು ಮಾತ್ರ. ರಾಮಮನೋಹರ ಲೋಹಿಯಾ ಮತ್ತು ಜಯಪ್ರಕಾಶ್‌ ನಾರಾಯಣ್‌ ನೇತೃತ್ವದ ಸೋಷಿಯಲಿಸ್ಟ್‌ ಪಾರ್ಟಿ 12 ಸೀಟು ಗೆದ್ದುಕೊಂಡಿತು. ಭಾರೀ ಗೆಲುವು ಕಂಡ ಕಾಂಗ್ರೆಸ್‌ ನೆಹರು ನೇತೃತ್ವದಲ್ಲಿ ಸರಕಾರ ರಚಿಸಿತು ಮತ್ತು 1952ರ ಏಪ್ರಿಲ್‌ 17ರಂದು ಮೊದಲ ಲೋಕಸಭೆ ಅಸ್ತಿತ್ವಕ್ಕೆ ಬಂತು. ಅಂದ ಹಾಗೆ, ನೆಹರು ಅವರು ತಮ್ಮ ಸಂಪುಟದ ಮಾಜಿ ಸಹೋದ್ಯೋಗಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಹಾಗೂ ಡಾ. ಬಿ.ಆರ್‌.ಅಂಬೇಡ್ಕರ್‌ ಅವರಿಂದ ತೀವ್ರ ಸವಾಲು ಎದುರಿಸಿದ್ದರು. ಆದರೂ ಮುಖರ್ಜಿ ನೇತೃತ್ವದ ಜನಸಂಘ(ಇಂದಿನ ಬಿಜೆಪಿ) ಗೆದ್ದಿದ್ದು 3 ಮತ್ತು ಅಂಬೇಡ್ಕರ್‌ ಅವರ ಆಲ್‌ ಇಂಡಿಯಾ ಷೆಡ್ಯೂಲ್ಡ್‌ ಕ್ಯಾಸ್ಟ್‌ ಫೆಡರೇಷನ್‌ 2 ಸ್ಥಾನ ಗೆದ್ದುಕೊಳ್ಳಲು ಮಾತ್ರ ಸಾಧ್ಯವಾಯಿತು. ಆಗ ಮೈಸೂರು ರಾಜ್ಯವಾಗಿದ್ದ ಕರ್ನಾಟಕದಿಂದ ಕಾಂಗ್ರೆಸ್‌ ಗೆದ್ದಿದ್ದು 10 ಸ್ಥಾನ ಮಾತ್ರ. ಅತಿ ಹೆಚ್ಚು ಸ್ಥಾನಗಳನ್ನು ಉತ್ತರಪ್ರದೇಶ(81)ದಿಂದ ಗೆದ್ದುಕೊಂಡಿತ್ತು. ದ್ವಿಸದಸ್ಯ ಕ್ಷೇತ್ರಗಳು ಅಸ್ತಿತ್ವದಲ್ಲಿ ಇದ್ದುದರಿಂದ ಸಹಜವಾಗಿಯೇ ಮತದಾನ ಪ್ರಮಾಣ ಹೆಚ್ಚಿತು. ಮೊದಲ ಚುನಾವಣೆಯಿಂದ ಆರಂಭವಾದ ಕಾಂಗ್ರೆಸ್‌ನ ಜೈತ್ರಯಾತ್ರೆ 1977ವರೆಗೂ ಮುಂದುವರಿಯಿತು. 1947ರಲ್ಲಿ ಸ್ವಾತಂತ್ರ್ಯ ಪಡೆದ ಭಾರತಕ್ಕೆ ಸಾರ್ವತ್ರಿಕ ಚುನಾವಣೆಯು ಹಬ್ಬದ ರೀತಿಯಲ್ಲಿ ಇತ್ತು. 21 ವರ್ಷ ಮೇಲ್ಪಟ್ಟ ಎಲ್ಲರೂ ಮತ ಚಲಾಯಿಸಲು ಅವಕಾಶವಿದ್ದರಿಂದಲೇ ದೇಶದ ಬಹುತೇಕ ಜನರು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಯಿತು. ಅಲ್ಲಿಂದ ಶುರುವಾದ ದೇಶದ ಚುನಾವಣಾ ರಾಜಕೀಯ ಈಗ 17ನೇ ಲೋಕಸಭೆವರೆಗೂ ಬಂದು ನಿಂತಿದೆ.

ಈ ಆರ್ಟಿಕಲ್ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಕ್ಲಿಕ್ ಮಾಡಿ
https://vijaykarnataka.indiatimes.com/elections/lok-sabha/news/flashback-of-first-general-election-in-india/articleshow/68203413.cms

ಮಂಗಳವಾರ, ಫೆಬ್ರವರಿ 19, 2019

ಸ್ವರ್ಗದಂಥ ಕಾಶ್ಮೀರ ನರಕವಾಗಿದ್ದೇಕೆ?


'ಸ್ವರ್ಗಕ್ಕಿಂತ ಸುಂದರ!' ಎಂದು ಕಾಶ್ಮೀರ ಕುರಿತು ಕವಿರತ್ನ ಕಾಳಿದಾಸ ಹೇಳಿದ ಮಾತುಗಳೇನೂ ಅತಿಶೋಯುಕ್ತಿವಲ್ಲ. ಹಿಮಾಲಯ ಗರಡಿಯ ಈ ನಾಡು ಕಣ್ಣಿಗೆ ತಂಪೆರೆಯುವ ಬೀಡು. ಆದರೆ, ರಾಜಕೀಯ ಕಾರಣಗಳಿಂದಾಗಿ ಅದರ ಮಣ್ಣಿನಲ್ಲಿ ನಿತ್ಯ ನೆತ್ತರು ಹರಿಯುತ್ತಿದೆ. 'ಭರತ ವರ್ಷ'ದ ಅವಿಭಾಜ್ಯ ಅಂಗವಾದ ಕಾಶ್ಮೀರವು ಇದೀಗ ಪಾಕಿಸ್ತಾನ-ಭಾರತ ನಡುವಿನ 'ಕದನದ ಕೊಂಡಿ'ಯಾಗಿದೆ. ಕಾಶ್ಮೀರದ ಇಂದಿನ ಪರಿಸ್ಥಿತಿಗೆ ಯಾರು, ಹೇಗೆ, ಯಾಕೆ ಕಾರಣರಾದರು ಎಂದು ವಿಶ್ಲೇಷ ಮಾಡುತ್ತ ಕುಳಿತರೆ ಅದು, ಸತ್ತ ಕತ್ತೆಯ ಕಾಲು ಹಿಡಿದು ಎಳೆದಂತಾಗುತ್ತದೆ. ಆಗಿರುವ ಐತಿಹಾಸಿಕ ಪ್ರಮಾದಗಳನ್ನು ತಿದ್ದಿಕೊಂಡು, ಕಾಶ್ಮೀರಕ್ಕೊಂದು ಹೊಸ ಭರವಸೆಯನ್ನು ನೀಡಬೇಕಾದ, ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯ ಈ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. 

ಮುಸ್ಲಿಂ ಅರಸರ ಆಳ್ವಿಕೆ

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಲ್ಲಿ ಕಾಶ್ಮೀರವನ್ನು ಹಿಂದೂ ರಾಜ ಆಳುತ್ತಿದ್ದ. ಅದಕ್ಕೂ ಮೊದಲು ಈ ರಾಜ್ಯವನ್ನು ಅಂದರೆ, 1346ರಿಂದ 1819ರವರೆಗೆ ಮುಸ್ಲಿಂ ರಾಜರು ಆಡಳಿತ ನಡೆಸಿದ್ದಾರೆ. ಈ ಅವಧಿಯಲ್ಲಿ ಹಿಂದೂ ದೇಗುಲಗಳನ್ನು ನಾಶ ಮಾಡಲಾಯಿತು. ಜನರ ಒತ್ತಾಯದಿಂದ ಇಸ್ಲಾಮ್‌ ಧರ್ಮವನ್ನು ಹೇರಲಾಯಿತು. ಆದರೆ, 1587ರಿಂದ 1752ರವರೆಗಿನ ಮೊಘಲ ಆಡಳಿತದಲ್ಲಿ ಕಾಶ್ಮೀರ ಯಾವುದೇ ಅಪಸವ್ಯಗಳಿಗೆ ಒಳಗಾಗಲಿಲ್ಲ. ನಂತರದ ಆಫ್ಘನ್‌ಆಡಳಿತವನ್ನು ಕತ್ತಲೆ ಅವಧಿ ಎದು ಕರೆಯಲಾಗುತ್ತದೆ. 1819ರಲ್ಲಿ ಮುಸ್ಲಿಂ ಆಡಳಿತ ಕೊನೆಗೊಂಡಿತು. 

ಹಿಂದೂ ಅರಸರ ಆಡಳಿತ 
ಮೊದಲನೆಯ ಸಿಖ್‌ ವಾರ್‌(1846)ರ ಮುಕ್ತಾಯ ಬಳಿಕ ಈಗಿರುವ ಕಾಶ್ಮೀರವನ್ನು ಜಮ್ಮುವಿನಲ್ಲಿ ಆಡಳಿತ ಮಾಡುತ್ತಿದ್ದ ಮಹಾರಾಜ ಗುಲಾಬ್‌ ಸಿಂಗ್‌ ಅವರ ಸುಪರ್ದಿಗೆ ವಹಿಸಲಾಯಿತು. ಬಳಿಕ, ಮಹಾರಾಜ ರಣಬೀರ್‌ ಸಿಂಗ್‌, ಮಹಾರಾಜ ಪ್ರತಾಪ್‌ ಸಿಂಗ್‌, ಮಹಾರಾಜ ಹರಿಸಿಂಗ್‌ ಅವರು ಆಧುನಿಕ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಅಡಿಪಾಯ ಹಾಕಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಲ್ಲಿ ಕಾಶ್ಮೀರವನ್ನು ಆಳುತ್ತಿದ್ದವರು ರಾಜಾ ಹರಿಸಿಂಗ್‌ ಅವರು. 1880ರಲ್ಲಿ ಬ್ರಿಟಿಷ್‌ ಆಡಳಿತವು ಆಫ್ಘಾನಿಸ್ತಾನ ಮತ್ತು ರಷ್ಯಾಗೆ ಸಂಬಂಧಿಸಿದಂತೆ ಸ್ಪಷ್ಟವಾದ ಗಡಿಗಳನ್ನು ಗುರುತಿಸಿತು. 

ಸ್ವಾತಂತ್ರ್ಯದ ಬಳಿಕ ಕಾಶ್ಮೀರ 

ಭಾರತದಿಂದ ಪಾಕಿಸ್ತಾನ ಪ್ರತ್ಯೇಕತೆಯಲ್ಲೇ ಕಾಶ್ಮೀರ ಬಿಕ್ಕಟ್ಟು ಕೂಡ ಅಡಕವಾಗಿದೆ. ವಿಭಜನೆಯ ಸಮಯದಲ್ಲಿ ಕಾಶ್ಮೀರ ಯಾವ ಕಡೆ ಹೋಗಬೇಕು ಎಂಬ ನಿರ್ಧಾರವನ್ನು ಅಂದಿನ ರಾಜ ಹರಿಸಿಂಗ್‌ ಅವರಿಗೆ ಬಿಡಲಾಯಿತು. ಅವರ ಮುಂದೆ ಕೆಲವು ಷರತ್ತುಗಳೊಂದಿಗೆ ಸ್ವತಂತ್ರ ರಾಷ್ಟ್ರವಾಗುವ ಆಯ್ಕೆಯನ್ನು ನೀಡಲಾಗಿತ್ತು. ಕೆಲವು ತಿಂಗಳು ತೊಳಲಾಡಿದ ಬಳಿಕ ಅವರು, ಭಾರತೀಯ ಒಕ್ಕೂಟ ಜತೆ ಸೇರುವ ನಿರ್ಧಾರಕ್ಕೆ ಬಂದರು. ಮುಸ್ಲಿಂ ಬಾಹುಳ್ಯದ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕೆಂದು ಹಟ ಹಿಡಿದ ಪಾಕಿಸ್ತಾನ, ಕಣಿವೆ ರಾಜ್ಯದ ಮೇಲೆ ಯುದ್ಧ ಸಾರಿತು. ರಾಜಾ ಹರಿಸಿಂಗ್‌ ಭಾರತದ ಆಶ್ರಯಕ್ಕೆ ಬಂದರು. ಭಾರತ ತನ್ನ ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಿ ಕೊಟ್ಟಿತು. ಅದು 1948ರ ಸಮಯ. ಉಭಯ ರಾಷ್ಟ್ರಗಳ ನಡುವಿನ ಮೊದಲ ಯುದ್ಧವದು. ಇದರಲ್ಲಿ ಸೋಲುಂಡಿದ್ದು ಪಾಕಿಸ್ತಾನವೇ. ಕಾಶ್ಮೀರದ ಕೆಲವು ಪ್ರದೇಶದ ಮೇಲೆ ಪಾಕಿಸ್ತಾನ ನಿಯಂತ್ರಣ ಸಾಧಿಸಿದರೆ, ಬಹುತೇಕ ಭಾಗವು ಭಾರತದ ಆಡಳಿತಕ್ಕೆ ಒಳಪಟ್ಟಿತು. 

ವಿಶೇಷ ಸ್ಥಾನಮಾನ 

ಭಾರತ ಒಕ್ಕೂಟ ಸೇರಬೇಕಿದ್ದರೆ ಒಂದಿಷ್ಟು ಭರವಸೆಗಳನ್ನು ಈಡೇರಿಸಬೇಕೆಂಬುದು ಅಂದಿನ ರಾಜಮನೆತನದ ಆಗ್ರಹವಾಗಿತ್ತು. ಇದಕ್ಕೆ ಅಂದಿನ ಪ್ರಧಾನಿ ನೆಹರು ಕೂಡ ಒಪ್ಪಿಗೆ ಸೂಚಿಸಿದ್ದರು. ಇದರ ಪರಿಣಾಮವೇ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ರಕ್ಷ ಣೆ, ಹಣಕಾಸು, ಸಂವಹನ ಮತ್ತು ವಿದೇಶಾಂಗ ವ್ಯವಹಾರಗಳನ್ನು ಹೊರತುಪಡಿಸಿ ಉಳಿದ ಎಲ್ಲ ಆಡಳಿತದಲ್ಲಿ ಕಾಶ್ಮೀರವು ಪ್ರತ್ಯೇಕತೆಯನ್ನು ಹೊಂದಿದೆ. ಇದಕ್ಕಾಗಿ ಸಂವಿಧಾನದ ವಿಧಿ 370ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರನ್ವಯ, ಕಾಶ್ಮೀರವು ತನ್ನದೇ ಸ್ವಂತ ಸಂವಿಧಾನ ಹೊಂದಿದ್ದ, ಕೆಲವೊಂದು ವಿಶೇಷ ಹಕ್ಕುಗಳನ್ನು ಪಡೆದುಕೊಂಡಿದೆ. 

 ಬಿಕ್ಕಟ್ಟಿನ ಸುಕ್ಕುಗಳು

ಕಾಶ್ಮಿರ ಸಮಸ್ಯೆ ಮೂಲ ಹುಡುಕುತ್ತಾ ಹೋದರೆ ಅದು ದೇಶ ವಿಭಜನೆಗೆ ತಂದು ನಿಲ್ಲಿಸುತ್ತದೆ. ಮುಸ್ಲಿಮರೇ ಹೆಚ್ಚಾಗಿದ್ದ ರಾಜ್ಯವನ್ನು ಆಳುತ್ತಿದ್ದ ಹಿಂದೂ ರಾಜ ಹರಿಸಿಂಗ್‌ ಭಾರತದೊಂದಿಗೆ ವಿಲೀನಗೊಳಿಸುವ ನಿರ್ಧಾರ ಸಹಜವಾಗಿ ಪಾಕಿಸ್ತಾನಕ್ಕೆ ಹೊಟ್ಟೆಯುರಿಗೆ ಕಾರಣವಾಯಿತು ಮತ್ತು ಅಲ್ಲಿಂದಲೇ ಕಾಶ್ಮೀರ ಕಣಿವೆಯಲ್ಲಿ ನೆತ್ತರ ಹರಿಯಲು ಆರಂಭವಾಯಿತು. ಬಳಿಕ, ಉಭಯ ರಾಷ್ಟ್ರಗಳ ನಾಯಕರು ಕೈಗೊಂಡ ಕೆಲವು ನಿರ್ಧಾರಗಳು ಸಮಸ್ಯೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದವು. ಭಾರತದ ಅಂದಿನ ಪ್ರಧಾನಿ ಜವಾಹರ ಲಾಲ್‌ ನೆಹರು ಅವರು ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವಿರುದ್ಧ ಈ ಸಮಸ್ಯೆಯನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಟ್ಟವರು ಅಂದಿನ ರಕ್ಷ ಣಾ ಸಚಿವ ವಿ. ಕೆ. ಕೃಷ್ಣ ಮೆನನ್‌ಅವರು. 1950ರಲ್ಲಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ 8 ಗಂಟೆಗಳ ಕಾಲ ಮಾತನಾಡಿ ಕಾಶ್ಮೀರ ಮೇಲಿನ ಹಕ್ಕು ಪ್ರತಿಪಾದಿಸಿದರು. ಕೊನೆಯದಾಗಿ, ಕಾಶ್ಮೀರ ವಿಷಯವನ್ನು ಮತ್ತೆ ಮತ್ತೆ ಕೆದಕುವುದೆಂದರೆ ಸತ್ತ ಕತ್ತೆಯ ಬಾಲ ಹಿಡಿದು ಎಳೆದಂತೆ'' ಎಂದು ಹೇಳಿದ್ದರು. ಆನಂತರದ ರಾಜತಾಂತ್ರಿಕ ಮಾತುಕತೆಗಳು, ಯುದ್ಧಗಳು ಸಮಸ್ಯೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದವು. ಯುದ್ಧದಲ್ಲಿ ಗೆಲ್ಲಲಾಗದು ಎಂಬ ಕಟು ವಾಸ್ತವ ಅರಿವಾಗುತ್ತಿದ್ದಂತೆ ಪಾಕಿಸ್ತಾನ, ಭಯೋತ್ಪಾದನೆ ಮೂಲಕ ಗೆಲ್ಲುವ ಹೂಟಕ್ಕಿಳಿಯಿತು; ಶಾಂತಿಮಾತುಕತೆಗಳು ಹಳ್ಳ ಹಿಡಿದವು. ಸೇನೆಯ ಕೈಗೊಂಬೆಯಂತೆ ವರ್ತಿಸುವ ಪಾಕಿಸ್ತಾನದ ಯಾವುದೇ ಸರಕಾರವು ಈವರೆಗೂ ನಿರ್ದಿಷ್ಟವಾಗಿ ಪರಿಹಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಮತ್ತೊಂದೆಡೆ ಭಾರತವು, ಭಯೋತ್ಪಾದನೆ ಕೃತ್ಯ ಮತ್ತು ಅಪ್ರಚೋದಿತ ಕಾಳಗವನ್ನು ಗಡಿಯಲ್ಲಿ ನಿರಂತರ ಎದುರಿಸುತ್ತಲೇ ಬಂದಿದೆ. 

ನೆತ್ತರ ಹರಿಸಿದ ಯುದ್ಧಗಳು

ಇಡೀ ಕಾಶ್ಮೀರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲೇಬೇಕೆಂಬ ಪಾಕಿಸ್ತಾನದ ದುರಾಸೆಯಿಂದಾಗಿ ಈವರೆಗೆ ನಾಲ್ಕು ಯುದ್ಧಗಳು ಉಭಯ ರಾಷ್ಟ್ರಗಳ ನಡುವೆ ನಡೆದಿವೆ. ಈ ಪೈಕಿ ಮೂರು ಯುದ್ಧಗಳು ನೇರವಾಗಿ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ್ದರೆ, ಒಂದು ಯುದ್ಧವು ಪೂರ್ವ ಪಾಕಿಸ್ತಾನ ವಿಮೋಚನೆಗೆ ಸಂಬಂಧಿಸಿದ್ದಾಗಿದೆ. ವಿಶೇಷ ಎಂದರೆ, ಈ ನಾಲ್ಕೂ ಯುದ್ಧಗಳಲ್ಲಿ ಭಾರತ ಮೇಲುಗೈಯ ಸಾಧಿಸಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಪಾಕಿಸ್ತಾನ ಮಾತ್ರ ಜಯ ದೊರಕಿದ್ದು ತನಗೇ ಎಂದುಹೇಳಿಕೊಳ್ಳುತ್ತದೆ. 

1947 ಯುದ್ಧ: ಇದನ್ನು ಮೊದಲನೆಯ ಕಾಶ್ಮೀರ ಯುದ್ಧ ಎಂದು ಕರೆಯಲಾಗುತ್ತದೆ. 1947 ಅಕ್ಟೋಬರ್‌ನಲ್ಲಿ ಆರಂಭವಾದ ಯುದ್ಧ ಏಪ್ರಿಲ್‌ 1948ರವರೆಗೆ ನಡೆಯಿತು. ಅಂತಿಮವಾಗಿ ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಕ್‌ ಭಾರತದ ವಶವಾದರೆ, ಪಾಕಿಸ್ತಾನಕ್ಕೆ ಅಜಾದ್‌ ಕಾಶ್ಮೀರ ಮತ್ತು ಗಿಲ್ಗಿಟ್‌-ಬಾಲ್ಟಿಸ್ತಾನ ದಕ್ಕಿದವು. ಜತೆಗೆ ಲೈನ್‌ ಆಫ್‌ ಕಂಟ್ರೋಲ್‌ ಗುರುತಿಲಾಯಿತು. 

1965ರ ಯುದ್ಧ: ಪಾಕಿಸ್ತಾನದ ಆಪರೇಷನ್‌ ಗ್ರಿಬ್ರಾಲ್ಟರ್‌ನೊಂದಿಗೆ ಯುದ್ಧ ಕೂಡ ಆರಂಭವಾಯಿತು. ಮೊದಲಿಗೆ ಪಾಕಿಸ್ತಾನದ ಸೇನೆಯ ಕಾಶ್ಮೀರದೊಳಗೆ ನುಸುಳಿತು. ಇದಕ್ಕೆ ಪ್ರತಿಯಾಗಿ ಭಾರತವು ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಿಸಿತು. 17 ದಿನಗಳ ಕಾಲ ನಡೆದ ಯುದ್ಧದಲ್ಲಿ ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿತು. ಅಂತಿಮವಾಗಿ ಪಾಕ್‌ ಅಧ್ಯಕ್ಷ ಅಯೋಬ್‌ ಖಾನ್‌ ಮತ್ತು ಅಂದಿನ ಪ್ರಧಾನಿ ಲಾಲ ಬಹದ್ದೂರ್‌ ಶಾಸ್ತ್ರಿ ತಾಷ್ಕೆಂಟ್‌ನಲ್ಲಿ ತಾಷ್ಕೆಂಟ್‌ ಒಪ್ಪಂದಕ್ಕೆ ಸಹಿ ಹಾಕಿದರು. 

ಪೂರ್ವ ಪಾಕಿಸ್ತಾನ ವಿಮೋಚನೆಕಾಶ್ಮೀರ ಕಾರಣಕ್ಕಾಗಿ 1971ರ ಯುದ್ಧ ನಡೆಯಲಿಲ್ಲ. ಬದಲಿಗೆ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಈ ಯುದ್ಧವಿದು. ಪಶ್ಚಿಮ ಪಾಕಿಸ್ತಾನದ ದುರಾಡಳಿತಕ್ಕೆ ಬೇಸತ್ತ ಪೂರ್ವ ಪಾಕಿಸ್ತಾನದ ನಾಯಕರು ಬಂಡಾಯವೆದ್ದರು. ಪೂರ್ವ ಪಾಕಿಸ್ತಾನದ ನೆರವಿಗೆ ಧಾವಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು, ಪೂರ್ವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಡಿಸುವ ಮೂಲಕ ಭಾರಿ ಹೊಡೆತವನ್ನು ನೀಡಿದರು. ಅಪಾರ ಪ್ರಮಾಣದ ಸಾವು ನೋವು ಸಂಭವಿಸಿತು. ಪಾಕಿಸ್ತಾನದ ನೌಕಾ ಪಡೆ ಮತ್ತು ವಾಯು ಪಡೆ ಇನ್ನಿಲ್ಲದಂತೆ ಘಾಸಿಗೊಂಡವು. ಪಾಕಿಸ್ತಾನದ 90 ಸಾವಿರ ಸೈನಿಕರು ಸೆರೆಯಾಳಾದರು. ಅಂತಿಮವಾಗಿ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಉದಯವಾಯಿತು. ಪಾಕಿಸ್ತಾನ ಇನ್ನಿಲ್ಲದಂತೆ ನಷ್ಟ ಅನುಭವಿಸಿತು. 

ಕಾರ್ಗಿಲ್‌ ಯುದ್ಧ-1999:ಎಲ್‌ಒಸಿ ದಾಟಿ ಒಳ ನುಗ್ಗಿದ ಪಾಕಿಸ್ತಾನದ ಪಡೆಗಳು ಕಾಶ್ಮೀರ ಕಾರ್ಗಿಲ್‌ ಜಿಲ್ಲೆಯ ಕೆಲವು ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತವು ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ಕೈಗೊಂಡಿತು. ಎರಡು ತಿಂಗಳ ಕಾಲ ಈ ಯುದ್ಧ ನಡೆಯಿತು. ಭಾರತೀಯ ಸೇನೆ ತನ್ನೆಲ್ಲ ಪ್ರದೇಶಗಳನ್ನು ಒಂದೊಂದಾಗಿ ಮರಳಿ ವಶಪಡಿಸಿಕೊಂಡಿತು. ಘನಘೋರ ಯುದ್ಧದ ಸುಳಿವು ಅರಿತ ಅಂತಾರಾಷ್ಟ್ರೀಯ ಸಮುದಾಯವು ಯುದ್ಧ ವಿರಾಮಕ್ಕೆ ಒತ್ತಡ ಹೇರಿದವು. ಯುದ್ಧ ಕೊನೆಯಾಯಿತು. ಎರಡು ಕಡೆ ಅಪಾರ ಸಾವು ನೋವು ಸಂಭವಿಸಿತು. 

ಮಾತುಕತೆ, ಒಪ್ಪಂದಗಳು
ಕಾಶ್ಮೀರ ಮೇಲಿನ ಹಕ್ಕು ಸಾಧನೆಗೆ ಪಾಕಿಸ್ತಾನ ಆಗಾಗ ಯುದ್ಧಕ್ಕೆ ಮುಂದಾದರೂ ಭಾರತವು ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅನೇಕ ಒಪ್ಪಂದ ಮತ್ತು ಮಾತುಕತೆಗಳನ್ನು ಆ ರಾಷ್ಟ್ರದ ಜತೆ ಕೈಗೊಂಡಿದೆ. ಈ ಪೈಕಿ ಕೆಲವು ಯಶಸ್ವಿಯಾದರೆ, ಬಹುತೇಕ ವಿಫಲವಾಗಿವೆ. 

ಶಿಮ್ಲಾ ಒಪ್ಪಂದ:
1971ರ ಯುದ್ಧದಲ್ಲಿ ಪಾಕಿಸ್ತಾನ ಸೋತ ನಂತರ ಏರ್ಪಟ್ಟ ಒಪ್ಪಂದವಿದು. ಪಾಕ್‌ ಅಧ್ಯಕ್ಷ ಝುಲ್ಫಿಕರ್‌ ಅಲಿ ಭುಟ್ಟೊ ಮತ್ತು ಪ್ರಧಾನಿ ಇಂದಿರಾ ಗಾಂಧಿ ಅವರು ಶಿಮ್ಲಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಅದರ ಅನ್ವಯ ಭಾರತವು ಸೆರೆಯಾಳಾಗಿಸಿಕೊಂಡಿದ್ದ ಎಲ್ಲ ಪಾಕ್‌ ಸೈನಿಕರನ್ನು ಬಿಟ್ಟಕೊಡುವುದು. ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಯನ್ನು ಮಾತುಕತೆಯ ಮೂಲಕ ನಡೆಸಬೇಕೆಂದು ಕರಾರು ಮಾಡಲಾಯಿತು. 

1990ರ ದಶಕ: ಈ ಅವಧಿಯಲ್ಲಿ ಉಭಯ ರಾಷ್ಟ್ರಗಳ ಪ್ರಧಾನಿಗಳು ಎರಡು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದರು. ಹಾಗೆಯೇ ವಿದೇಶಾಂಗ ಕಾರ್ಯದರ್ಶಿಗಳು ಮೂರು ಸುತ್ತಿನ ಮಾತುಕತೆ ನಡೆಸಿದರು. ಕಾಶ್ಮೀರ ಸಮಸ್ಯೆ ಸೇರಿದಂತೆ ಒಟ್ಟು 8 ವಿಷಯಗಳ ಬಗ್ಗೆ ಚರ್ಚಿಸಲಾಯಿತು. 1997ರಲ್ಲಿ ನಡೆದ ಮಾತುಕತೆ ವಿಫಲವಾದರೆ(ಕಾಶ್ಮೀರ ವಿಷಯಕ್ಕಾಗಿ), 1999ರಲ್ಲಿ ಕೈಗೊಳ್ಳಲಾದ ಪ್ರಯತ್ನದಲ್ಲಿ ಉಭಯ ಪ್ರಧಾನಿಗಳು ಲಾಹೋರ್‌ನಲ್ಲಿ ಮಾತುಕತೆ ನಡೆಸಿ ಮೂರು ಒಪ್ಪಂದಕ್ಕೆ ಸಹಿ ಹಾಕಿದದರು. ಆದರೆ, ಪಾಕಿಸ್ತಾನದಲ್ಲಿ ಸೇನಾಡಳಿತ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಎಲ್ಲ ಮಾತುಕತೆಗಳು ವಿಫಲಗೊಂಡವು. 

ಲಾಹೋರ್‌ಗೆ ಬಸ್‌: ಶಾಂತಿಯ ಸಂದೇಶ ಹೊತ್ತು ಅಂದಿನ ಪ್ರಧಾನಿ ವಾಜಪೇಯಿ ಅವರು 1999ರಲ್ಲಿ ಲಾಹೋರ್‌ ಬಸ್‌ ಯಾತ್ರೆಯನ್ನು ಕೈಗೊಂಡರು. ಫೆಬ್ರವರಿ 21ರಂದು ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದವು. ಆದರೆ, ಬಸ್‌ ಯಾತ್ರೆ ಮುಗಿಸಿ ವಾಪಸ್‌ ಬರುವಷ್ಟರಲ್ಲಿ ಪಾಕಿಸ್ತಾನದ ಸೇನಾ ಪಡೆಗಳು ಕಾರ್ಗಿಲ್‌ನೊಳಗೆ ನುಸುಳಿಕೊಂಡಿದ್ದವು. ಇದೇ ಮುಂದೆ ಕಾರ್ಗಿಲ್‌ ಯುದ್ಧಕ್ಕೆ ಕಾರಣವಾಯಿತು. 

ಭಯೋತ್ಪಾದನೆ
ಯುದ್ಧದ ಮೂಲಕ ಭಾರತದ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಾಗತ್ತಿದ್ದಂತೆ ಪಾಕಿಸ್ತಾನದ ಸೇನೆ ಭಯೋತ್ಪಾದನೆಗೆ ನೀರೇರಿಯಿತು. ಇದಕ್ಕೆ ಕಾಶ್ಮೀರ ಪ್ರತ್ಯೇಕವಾದಿಗಳೂ ಇಂಬು ನೀಡಿದರು. ಸ್ಥಳೀಯರ ಭಾರತ ವಿರೋಧಿ ಭಾವನೆಯನ್ನೆ ಬಂಡವಾಳವಾಗಿಸಿಕೊಂಡ ಅಲ್ಲಿನ ಸೇನೆ ಉಗ್ರ ಸಂಘಟನೆಗಳು ಎಲ್ಲ ಸಹಕಾರ, ನೆರವು ಒದಗಿಸಿತು. ಈ ವಿಷಯ ಪ್ರತಿ ಭಯೋತ್ಪಾದನೆ ಸಂದರ್ಭದಲ್ಲಿ ಸಾಬೀತಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬಲಿಯಾದ ಸೈನಿಕರು, ನಾಗರಿಕರ ಪಟ್ಟಿ ದೊಡ್ಡದಿದೆ. ಜೈಷೆ ಇ ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಗೆ 2017ರಿಂದ 2019ವರೆಗಿನ ಫೆಬ್ರವರಿ 14ರ ವರೆಗೆ 110ಕ್ಕೂ ಹೆಚ್ಚು ಯೋಧರು ಬಲಿಯಾದರೆ, ಉಗ್ರರನ್ನೂ ಸೇನೆ ಸದೆ ಬಡೆದಿದೆ. ಇದು ಕೇವಲ ಉದಾಹರಣೆಯಷ್ಟೆ. ಒಂದು ಅಂದಾಜಿನ ಪ್ರಕಾರ, 1947ರಿಂದ ಇಲ್ಲಿಯವರೆಗೆ ಯೋಧರು, ನಾಗರಿಕರು ಸೇರಿ 40 ಸಾವಿರದಿಂದ 80 ಸಾವಿರವರೆಗೂ ಜನ ಸತ್ತಿದ್ದಾರೆ. ಇದಕ್ಕೆಲ್ಲ ಕೊನೆ ಹಾಡಬೇಕಾದ ಕಾಲ ಈಗ ಸನ್ನಿಹಿತವಾಗಿದೆ. 


https://vijaykarnataka.indiatimes.com/state/vk-special/how-heaven-of-earth-kashmir-becoming-the-hell-due-to-pakistan-terrorism/articleshow/68052382.cms