ಸೋಮವಾರ, ಮೇ 8, 2017

ಸಂಜೆಬೆಳಕಿನಲ್ಲೊಂದು ವಾಸಿಯಾಗದ ಅನುರಾಗ!

ಹುಡುಗನೊಬ್ಬನ ಗಜಲ್‌ಗಳು:  ಚಟ ಚಕ್ರವರ್ತಿ ಜತೆ ಮದ್ವಿ ಮಾಡಿದ್ರು..ಅದರ ಫಲ ಅಕೀ ಊಣ್ಣಾಕತ್ತಾಳು...


- ಪ್ರದ್ಯುಮ್ನ
ಆ ಊರೇನೂ ಅಂಥ ದೊಡ್ಡದಲ್ಲ. ಹಾಗಂತ ತೀರಾ ಕುಗ್ರಾಮವಂತೂ ಅಲ್ಲವೇ ಅಲ್ಲ. ನಗರಗಳ ಜೀವನ ಶೈಲಿ ಹಳ್ಳಿಗಳ ಮೇಲೂ ಬಿದ್ದು, ಬದಲಾಗುವಂಥ ಸಂಕ್ರಮಣದ ಕಾಲ. ಊರಲ್ಲಿ ತುಸು ಆಧುನಿಕತೆ ಕಣ್ಣಿಗೆ ಕಾಣುವಷ್ಟು ಇತ್ತು. ಆ ಊರಿನ ಹೊರಗೆ ಇರುವ ಸರ
ಕಾರಿ ಶಾಲೆ ಮುಂದೆ ಹಾದು ಹೋಗುವ ಟಾರ್ ರೋಡ್‌ನಲ್ಲಿ ನಾಲ್ಕಾರು ಅಂಗಡಿಗಳು, ಆ ಪೈಕಿ ಈತ ಕೆಲಸ ಮಾಡುವ ಗ್ಯಾರೇಜು ಒಂದು. ಮುಂಜಾನೆ ಕಾಲೇಜಿಗೆ ಹೋಗಿ, ಮಧ್ಯಾಹ್ನದ ನಂತರ ಆತ ಅಲ್ಲಿಯ ಕೆಲಸ ಮಾಡುತ್ತಿದ್ದ. ಗ್ರೀಸು, ಆಯಿಲ್ ಮೆತ್ತಿದ ಡ್ರೆಸ್ ಹಾಕ್ಕೊಂಡು ಮೋಟರ್‌ಸೈಕಲ್ ರಿಪೇರಿಗೆ ಕುಳಿತನೆಂದರೆ, ಯಾವುದೂ ಹೊರಗಿನ ಜಗತ್ತಿನ ಬಗ್ಗೆ ಅರಿವೇ ಇರುತ್ತಿರಲಿಲ್ಲ. ಇಂಥದ್ದೇ ತಲ್ಲೀನತೆ ಪಾಠ ಕೇಳುವಾಗಲೂ ಇರ್ತಿತ್ತು ಎಂದು ಬೇರೆ ಹೇಳಬೇಕಿಲ್ಲ.
ಸೋಮವಾರ ಬಂತೆಂದರೆ ಈತ ಕೆಲಸ ಮಾಡುವ ಗ್ಯಾರೇಜ್ ಮುಂದಿರುವ ರಸ್ತೆಗೆ ಕಳೆ ಕಟ್ಟುತ್ತಿತ್ತು. ಗ್ಯಾರೇಜ್‌ನಿಂದ ಸ್ವಲ್ಪ ದೂರದಲ್ಲಿ ಊರ ದೇವರ ಭವ್ಯ ದೇವಸ್ಥಾನವಿತ್ತು. ಒಂದು ಕಡೆಯಿಂದ ಹೊಲಗಳಿಗೆ ಹೋದವರು, ತಮ್ಮ ದನಕರುಗಳನ್ನು ಹೊಡ್ಕೊಂಡು ಬರೋದು ನೋಡುತ್ತಿದ್ದರೆ, ಅದು ಪೇಂಟಿಂಗ್ ರೀತಿಯಲ್ಲಿ ಕಾಣಿಸುತ್ತಿತ್ತು. ಯಾಕೆಂದರೆ, ಪಡುವಣ ದಿಕ್ಕಿನಲ್ಲಿ ಸಂಜೆಯ ಸೂರ್ಯ ತನ್ನ ಮೈತುಂಬ ಬಂಗಾರದ ಬಣ್ಣ ಮೆತ್ತಿಕೊಳ್ಳುತ್ತಿದ್ದ. ಅದರ ಪ್ರತಿಫಲನ ಈ ರಸ್ತೆಯ ಮೇಲೂ ಚೆಲ್ಲುತ್ತಿತ್ತು. ಆ ಕೆಂಬೆಳಕಲ್ಲಿ ಎಲ್ಲವೂ ಆಕರ್ಷಕ, ಚಿತ್ತಾರ. ಇನ್ನು ಊರೊಳಗಿನಿಂದ ಮಹಿಳೆಯರು, ಮಕ್ಕಳು ಮತ್ತು ಯುವತಿಯರು ಆ ಊರ ದೇವರ ದರ್ಶನಕ್ಕೆ ಹೋಗುತ್ತಿದ್ದರು. ಅವರೂ ಅದೇ ರಸ್ತೆಯ ಮೂಲಕ ಹೋಗಬೇಕು. ಸೂರ್ಯನಿಗೆ ಎದುರಾಗಿ ಹೋಗುವ ಪ್ರತಿ ಹೆಂಗಳೆಯರ ಮುಖ ಬಂಗಾರ ವರ್ಣದಲ್ಲಿ ಅದ್ದಿ ತೆಗೆದಂತೆ ಕಾಣುತ್ತಿತ್ತು.
ಇಂಥ ಸಂಜೆಗಳನ್ನು ಆತ ಬೇಕಾದಷ್ಟು ನೋಡಿದ್ದ. ತನ್ನದೇ ಆದ ಲೋಕದಲ್ಲಿ ತೇಲುತ್ತಿದ್ದವನಿಗೆ ಈ ಸಂಜೆಗಳು ಅನೇಕ ಬಾರಿ ಆತನಲ್ಲಿ ಹೊಸ ಹೊಸ ಕನಸುಗಳನ್ನು ಹುಟ್ಟುಹಾಕಿವೆ. ಹಗಲುಗನಸು ಕಾಣುವುದು ಸಾಮಾನ್ಯ. ಆದರೆ, ಈತ ಸಂಜೆಗನಸು ಕಾಣುತ್ತಿದ್ದ. ಕೈಯಲ್ಲಿ ಸ್ಪ್ಯಾನರ್ ಹಿಡಿದುಕೊಂಡೇ ಬೈಕ್‌ನ ಎಂಜಿನೊಳಗೇ ಮುಖ ತೂರಿಸಿಕೊಂಡು ಹಾಗೆಯೇ ನಿಶ್ಚಲನಾಗಿದ್ದುಂಟು. ಆತನ ಮೇಸ್ತ್ರಿ(ಮೆಕ್ಯಾನಿಕ್), ‘‘ಏ... ಬಾರಾ ನಂಬರ್ ಪಾನಾ ಕೊಡೊ,’’ ಅಂದಾಗಲೇ ಆತ ತನ್ನ ಕಲ್ಪನಾಲೋಕದಿಂದ ವಾಸ್ತವಕ್ಕೆ ಮರಳುತ್ತಿದ್ದ. ಹೀಗೆ ಅದೆಷ್ಟೋ ಬಾರಿಯಾಗಿದೆಯೋ?
ಆ ಸಂಜೆಯು ಹಾಗೇ ಇತ್ತು. ಅಂದು ಕೂಡ ಸೋಮವಾರ. ಒಂದೆಡೆ ಹೊಲದಿಂದ ಬರುವವರ ಸಾಲು, ಮತ್ತೊಂದೆಡೆ ದೇವಸ್ಥಾನಕ್ಕೆ ಹೋಗುವವರಿಂದ ಇಡೀ ರಸ್ತೆ ತುಂಬಿಕೊಂಡಿತ್ತು. ಯಾವುದೋ ಬೈಕ್‌ನ ಹಿಂಬದಿಯ ಗಾಲಿ ಬಿಚ್ಚುತ್ತಿದ್ದ ಈತನಿಗೆ ಕಂಡಳು ಆಕೆ. ಆ ಇಳಿಸಂಜೆಯ ಸೂರ್ಯನ ಬಂಗಾರದ ಕಿರಣಗಳು ಆಕೆಯ ಮುಖದ ಮೇಲೆ  ಬಿದ್ದಿದ್ದರಿಂದ ಅವಳ ಚೆಲುವು ದುಪ್ಪಟ್ಟಾಗಿತ್ತು. ನಯವಾಗಿ ಬೀಸುತ್ತಿದ್ದ ಗಾಳಿ ಆಕೆಯ ಮುಖದ ಮೇಲೆ ಸುಳಿದು ಹೋಗುತ್ತಿರುವಾಗಲೇ, ಕೂದಲುಗಳು ಆ ಗಾಳಿಯ ಆಜ್ಞಾನುವರ್ತಿಯಂತೆ ನರ್ತಿಸುತ್ತಿದ್ದವು. ಗಾಲಿಯ ಸಂದಿಯಿಂದಲೇ ಆಕೆಯನ್ನು ನೋಡುತ್ತಿದ್ದ ಈತನನ್ನು, ಆಕೆಯು ತನ್ನ ಮುಖದ ಮೇಲೆ ಬೀಳುತ್ತಿದ್ದ ಕೂದಲನ್ನು ಸರಿಸುವ ಗಳಿಗೆಯಲ್ಲಿ ನೋಡಿದಳು. ಒಂದು ಕ್ಷಣ ಇಬ್ಬರ ಕಣ್ಣುಗಳು ಸಂಧಿಸಿದವು. ಅವಳೇನೋ ಮುಂದೆ ಹೋದಳು. ಆದರೆ, ಈತನಿಗೆ ಆ ಒಂದು ಕ್ಷಣ ಇಡೀ ಜಗತ್ತೇ ಸ್ತಬ್ಧವಾದ ರೀತಿ. ಕಾಲ ತನ್ನ ಕಾಲುಮುರಿದುಕೊಂಡು ಬಿದ್ದ ಭಾವ. ‘‘ಮುಗೀತೇನಪಾ ಗಾಲಿ ಬಿಚ್ಚುದು,’’ ಎಂದು ಮೇಸ್ತ್ರಿ ಕೂಗಿದಾಗಲೇ ಇಡೀ ಜಗತ್ತೇ ರಿಲಾಕ್ಸ್ ಆಗಿದ್ದು.  ‘‘ಮುಗೀತು... ಮುಗೀತು...’’ ಎನ್ನುತ್ತಲೇ ಅವಳು ಹೋದ ದಿಕ್ಕಿನತ್ತ ನೋಡುತ್ತಿದ್ದವನ ಮುಖದ ಮೇಲಿದ್ದ ಗ್ರೀಸ್‌ಗೆ ನೊಣವೊಂದು ಸಿಕ್ಕಿ ಹಾಕಿಕೊಂಡು, ಪಟಪಟನೆ ತನ್ನ ರೆಕ್ಕೆ ಬಡಿಯುತ್ತಿತ್ತು. ಆ ಗೋಧೂಳಿಯ ಸಮಯದಲ್ಲಿ ಈ ನೊಣದ ವಿಚಾರ ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ, ಗೊತ್ತಾಗಿದ್ದರೆ ಗೇಲಿ ಮಾಡುತ್ತಿದ್ದರೇನೋ!
ಬೇಡ ಬೇಡ ಎಂದರೂ ಅವಳ ಮುಖ ಈತನ ಮನಪರದೆಯ ಮೇಲೆ ಬರುತ್ತಲೇ ಇದೆ. ರಾತ್ರಿ ಪೂರ್ತಿ ನಿದ್ದೆಯೂ ಇಲ್ಲ. ಬೆಳಗ್ಗೆ ಎದ್ದು ಕಾಲೇಜಿಗೆ ಹೋಗುತ್ತಿರುವಾಗಲೇ ಆತನಿಗೆ ಗೊತ್ತಾಗಿದ್ದು, ಕಣ್ಣುಗಳೆರಡು ಕುಡಿದವರ ರೀತಿ ಕೆಂಪಾಗಿವೆ ಎಂಬುದು. ಈ ರೀತಿ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಆಗಿದೆ. ಆದರೆ, ಆಗ ತಡರಾತ್ರಿವರೆಗೂ ಕೆಲಸ ಮಾಡಿದ್ದರ ಪರಿಣಾಮವದು. ಆದರೆ ಈಗಿನದ್ದೇ ಬೇರೆ. ನಿನ್ನೆ ನೋಡಿದ ಮುಖದ ಗುಂಗಿನಲ್ಲೇ ಕಾಲೇಜು ಗೇಟ್ ದಾಟಿದವನ ಪಕ್ಕದಲ್ಲಿ ಬರುತ್ತಿದ್ದವಳು... ಅವಳೇ! ಈತನಿಗೆ ಕನಸೋ ನನಸೋ ನಂಬಲಾಗುತ್ತಿಲ್ಲ. ಆದರೂ ಸಾವರಿಸಿಕೊಂಡು ಹೋದವನಿಗೆ ಗೊತ್ತಾಗಿದ್ದು ಆಕೆಯ ಹೆಸರು ಮಲ್ಲಿಗೆ. ಕಾಲೇಜಿನಲ್ಲಿ ಅವನ ಜ್ಯೂನಿಯರ್.
ಇನ್ನು ಮುಂದೆ ಏನು ಹೇಳುವುದು? ಎಲ್ಲರ ಕಾಲೇಜ್ ಲೈಫ್‌ನಲ್ಲಾಗುವ ರೀತಿಯಲ್ಲೇ ಈತನೂ ಪ್ರೀತಿಯ ಬಲೆಯಲ್ಲಿ ಬಿದ್ದ. ಮೊದ ಮೊದಲು ಒನ್ ವೇ ಇದ್ದ ಪ್ರೀತಿ ಕಾಲೇಜು ಮುಗಿಯುವ ಹೊತ್ತಿಗೆ ಟು ವೇ ಆಗಿ ಬದಲಾಗಿತ್ತು. ಆದರೆ, ಬಹುತೇಕರ ಜೀವನದಲ್ಲಾಗುವಂತೆ ಈತನ ಪ್ರೀತಿಯೂ ಮದುವೆ ಎಂಬ ಹೊಸ ಆರಂಭಕ್ಕೆ ನಾಂದಿಯಾಗಲಿಲ್ಲ.
್ಡ್ಡ್ಡ
ಈಗ ಸುಮಾರು ಹತ್ತನ್ನೆರಡು ವರ್ಷಗಳು ಸರಿದು ಹೋಗಿವೆ. ಆ ಊರು ಇದೀಗ ಪಟ್ಟಣವೆಂಬ ಬೋರ್ಡನ್ನು ತನ್ನ ಹಣೆಗೆ ಅಂಟಿಸಿಕೊಂಡಿದೆ. ಆ ರಸ್ತೆ ಈಗಲೂ ಇದೆ. ನಾಲ್ಕಾರು ಇದ್ದ ಅಂಗಡಿಗಳು ಇದೀಗ ರಸ್ತೆಯ ಎರಡೂ ಬದಿಯಲ್ಲಿ ತುಂಬಿವೆ. ಅದರ ಮಧ್ಯೆಯೇ ಈತ ಕೆಲಸ ಮಾಡುತ್ತಿದ್ದ ಆ ಸಣ್ಣ ಗ್ಯಾರೇಜು ಈಗಲೂ ಇದೆ. ಅದೇ ಮೇಸ್ತ್ರಿ, ಮುರಿದ ಕುರ್ಚಿಯ ಮೇಲೆ ಯಾವುದಾದರೂ ಮೋಟರ್ ಸೈಕಲ್ ರಿಪೇರಿಗೆ ಬರಬಹುದೆಂದು ಕಾಯುತ್ತಿರುತ್ತಾನೆ. ಅಂದು ಆ ರಸ್ತೆಗಿದ್ದ ಸಾವಧಾನದ ಶ್ರೀಮಂತಿಕೆ, ತಂಗಾಳಿಯ ಸೋಕುವಿಕೆ ಇಂದಿಲ್ಲ. ರಸ್ತೆಗಳ ಮೇಲೆ ಬರ್.. ಬರ್.... ಎಂದು ವಾಹನಗಳು ಓಡುತ್ತಿವೆ. ಹೊಲದಿಂದ ಬರುವವರು ಇದೀಗ ಮೋಟರ್ ಸೈಕಲ್ ಏರಿದ್ದಾರೆ. ಇತ್ತ ಆ ದೇವಸ್ಥಾನಕ್ಕೆ ಹೋಗುವವರು ಕಾರು, ಜೀಪುಗಳ ಮೊರೆ ಹೋಗಿದ್ದರೆ, ಯುವತಿಯರು ಸ್ಕೂಟಿ ಸಂಗ ಮಾಡಿದ್ದಾರೆ. ಎಲ್ಲವೂ ಬದಲಾಗಿದೆ. ಎಲ್ಲೆಲ್ಲೂ ಧಾವಂತ ಎಂದು ಯೋಚಿಸುತ್ತ ಅದೇ ಗ್ಯಾರೇಜಿನಲ್ಲಿ ಕುಳಿತಿದ್ದ ಈತನನ್ನು, ರಸ್ತೆಯ ಬದಿಯ ಆಚೆ ನಡೆದುಕೊಂಡು ಹೋಗುತ್ತಿದ್ದವಳ ಕಣ್ಣುಗಳು ನೋಡುತ್ತಿದ್ದವು. ಅಂದು-ಇಂದಿನ ಪರಿಸ್ಥಿತಿ ತುಲನೆಯಲ್ಲಿದ್ದ ಈತ ಆ ನೋಟವನ್ನೇನೂ ಗಮನಿಸಲಿಲ್ಲ. ಆದರೆ, ಸುಪ್ತ ಮನಸ್ಸಿನೊಳಗಿನ ಆಜ್ಞೆ ಎಂಬಂತೆ ಸಡನ್ನಾಗಿ ಆಕೆಯನ್ನು ದಿಟ್ಟಿಸಿ ನೋಡಿದ. ಹೌದು.. ಆಕೆಯೇ. ಮಲ್ಲಿಗೆ. ಏನಿದು ಇಷ್ಟೊಂದು ಸೊರಗೋಗಿದ್ದಾಳೆ ಎನ್ನುತ್ತಿರುವಾಗಲೇ ಅವಳು ಇವನನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ ಮರೆಯಾದಳು.
ಇದನ್ನು ಗಮನಿಸುತ್ತಿದ್ದ ಆ ಮೇಸ್ತ್ರಿ, ‘‘ಯಾಕಪಾ ಹಿಂದಿದ್ದೆಲ್ಲ ನೆನಪಾಯ್ತೇನು?’’ ಎಂದು ಅವನ ಪ್ರತಿಕ್ರಿಯೆಗೂ ಕಾಯದೆ, ‘‘ನೀ ಏನಪಾ ಬೆಂಗ್ಳೂರು ಸೇರಿಕೊಂಡಿ. ನೀ ಹ್ವಾದ ಎರಡ ವರ್ಷಕ್ಕ ಮದ್ವೆ ಮಾಡಿದರು. ಆದ್ರ ಆ ಹುಡುಗ ಸರಿ ಇರ್ಲಿಲ್ಲ. ಅವಂಗ ಎಲ್ಲಾ ಚಟಾ ಇದ್ವು. ಚಟ ಚಕ್ರವರ್ತಿ ಅಂತ ಕರೀತಿದ್ರು ಮಂದಿ. ಎಲ್ಲಾ ಗೊತ್ತಿದ್ದು ಆಕಿ ಅಪ್ಪ ಮದ್ವಿ ಮಾಡಿದ. ಆದ್ರ ಈಗ ನೋಡು ಅದರ ಫಲ ಅಕೀ ಉಣ್ಣಾಕತ್ತಾಳು. ಎರಡ ವರಸದ ಹಿಂದ ಅಂವಾ ಸತ್ಹೋದ,’’ ಎಂದು ಹೇಳಿ ಅಂಗಡಿಯೊಳಗೆ ಸ್ಪ್ಯಾನರ್ ತರಲು ಹೋದ. ಈ ಸುದ್ದಿ ಕೇಳಿದ ಅವನಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಆಕೆಯ ಗಂಡ ಯಾಕೆ ಸತ್ತ? ಏನಾಗಿತ್ತು? ಎಂದು ಕೇಳಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಮೋಟರ್ ಸೈಕಲ್ ತಳ್ಳುತ್ತಾ ಒಬ್ಬ ಬಂದು, ‘‘ಮೇಸ್ತ್ರೀ ಗಾಡಿ ಸುರುವಾಗವಲ್ತು ನೋಡು,’’ ಎಂದ. ಮೇಸ್ತ್ರಿ ಗಾಡಿ ರಿಪೇರಿಯಲ್ಲಿ ಮಗ್ನನಾದ.
ಇತ್ತ ರಸ್ತೆಯಲ್ಲಿ ಧಾವಂತದ ಪರಾಕಾಷ್ಠೆ ಇತ್ತು. ಗದ್ದಲ ತುಂಬಿತ್ತು. ಪಾಂವ್... ಪಾಂವ್... ಎಂದು ಚಿತ್ರ ವಿಚಿತ್ರ ಹಾರ್ನ್ ಬಾರಿಸುತ್ತ ಹೋಗುವ ಬಸ್ಸು, ಕಾರುಗಳಿಗೇನೂ ಕೊರತೆ ಇರಲಿಲ್ಲ. ಆದರೆ, ಅವನ ಮನಸ್ಸಿನೊಳಗೆ ಎಲ್ಲವೂ ಸ್ತಬ್ಧ, ನಿಶ್ಶಬ್ಧ. ಅವಳನ್ನು ನೋಡಿದ ಮೇಲೆ; ಬೇಸಿಗೆಯಲ್ಲಿ  ಅಡ್ಡ ಮಳೆ ಜೋರಾಗಿ ಸುರಿದು ಹೋದಂಥ ಭಾವ. ಮಳೆಯಾಗಿದ್ದು ನಿಜ. ಆದರೆ, ನೆಲ ಆ ಮಳೆ ನೀರನ್ನೆಲ್ಲ ಕುಡಿದು, ಮಳೆಯಾದ ಬಗ್ಗೆ ಸಾಕ್ಷಿ ಕೇಳುವಂತಿತ್ತು ಆತನ ಮನಸ್ಥಿತಿ. ಅಷ್ಟರಲ್ಲಿ, ಆ ಮೋಟರ್ ಸೈಕಲ್ ಬರ್ರ ಅಂತ ಶುರುವಾಯ್ತು. ಮೇಸ್ತ್ರಿ ತನ್ನ ಕೈಯೊಳಗಿದ್ದ ಸ್ಪ್ಯಾನರ್ ಒಳಗಿಟ್ಟು ಬಂದು ಕುಳಿತ.
ಇತ್ತ ಪಡುವಣದಲ್ಲಿ ಸೂರ್ಯ, ಆ ಎತ್ತರದ ಬಿಲ್ಡಿಂಗ್‌ನಿಂದ ಇವನತ್ತ ಇಣುಕಿದಂತಾಯಿತು. ನೋಡಿದರೆ, ಆತನ ಮೈ ಬಣ್ಣ ಕೆಂಪಿಲ್ಲ, ಬರಬರುತ್ತಾ ಕಪ್ಪಾಗುತ್ತಿದೆ. ಈತನ ಮೇಲೆ ಅಗಾಧವಾದ ಸಿಟ್ಟು ಎಂಬಂತೆ ಆತ ತನ್ನ ದಿನದ ಕೆಲಸ ಮುಗಿಸಿ ಭೂಗರ್ಭ ಸೇರಿಬಿಟ್ಟ. ಇತ್ತ ರಸ್ತೆ ಮೇಲೆ ಬೀದಿ ದೀಪಗಳ ಬೆಳಕಿನ ಆಟ ಶುರುವಾಗಿತ್ತು. ಭಾರವಾದ ದನಿಯಂದಲೇ ಕೇಳಿದ, ‘‘ಆಕೆಯ ಗಂಡನಿಗೆ ಏನಾಗಿತ್ತು?’’. ಇದೇ ಪ್ರಶ್ನೆಗೆ ಕಾಯುತ್ತಿದ್ದೆ ಎನ್ನುವಂತೆ ಮೇಸ್ತ್ರಿ, ಒಂದು ಗುಕ್ಕಿನಲ್ಲಿ, ‘‘ಅದರ ಹೆಸ್ರ ಹೇಳಾಕ್ ಬರುದಿಲ್ಲ ನಂಗ. ಆದರ, ಅದೇನೋ ಚಲೋ ಆಗಲಾರ್ದು ಜಡ್ಡಂತ ನೋಡ. ಅದ ಈಕಿಗೂ ಬಂದೈತಿ ಅಂತಾರು ಮಂದಿ,’’ ಎಂದು ಹೇಳಿ ಸುಮ್ಮನಾದ.
‘ವಾಸಿಯಾಗದ ಕಾಯಿಲೆ ಯಾವುದು’ ಎಂದು ಯೋಚಿಸುತ್ತಲೇ ಆತನಿಗೆ ಉತ್ತರ ಗೊತ್ತಾಗಿತ್ತು. ಈಗ ರಸ್ತೆ ಆತನಿಗೆ ಬೆಂಗಾಡಿನ ಕಾಲು ದಾರಿಯಂತೆ ಭಾಸವಾಗುತ್ತಿದೆ. ಮತ್ತೆ ಸೂರ್ಯ ಹುಟ್ಟಲಾರ ಅನಿಸುತ್ತಿದೆ.

This article was published in VijayKarnataka, on 08 May 2017 edition

ಸೋಮವಾರ, ಏಪ್ರಿಲ್ 10, 2017

ಅಸಾದ್: ಯಮದೂತ ‘ಡಾಕ್ಟರ್’ ಪ್ರೆಸಿಡೆಂಟ್!

- ಮಲ್ಲಿಕಾರ್ಜುನ ತಿಪ್ಪಾರ
ವೈರಿಗಳನ್ನು ಮತ್ತು ಉಗ್ರರನ್ನು ಮಟ್ಟ ಹಾಕುವ ನೆಪದಲ್ಲಿ ತನ್ನದೇ ದೇಶದ ಮುಗ್ಧರ ಪ್ರಾಣ ತೆಗೆಯುವ ಹಂತಕ್ಕೆ ಯಾವ ದೇಶದ ನಾಯಕನೂ ಹೋಗಲಾರ. ಆದರೆ, ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸಾದ್ ಇಂಥ ಹೇಯ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇಡ್ಲಿಬ್ ಪ್ರಾಂತದ ಖಾನ್ ಶೇಕುನ್ ನಗರದ ಮೇಲೆ ಕೆಮಿಕಲ್ ಬಾಂಬ್ ದಾಳಿ ನಡೆಸಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರ ಪ್ರಾಣ ಹರಣ ಮಾಡಿದ್ದಾರೆ.
ಅಸಾದ್‌ರ ಈ ದುಸ್ಸಾಹಸಕ್ಕೆ ಇಡೀ ಅಂತಾರಾಷ್ಟ್ರೀಯ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ. ಮಡಿದ ಜೀವಗಳಿಗೆ ಮಮ್ಮಲ ಮರಗುತ್ತಿದೆ. ವಿಷಾನಿಲಕ್ಕೆ ತುತ್ತಾದವರ ಸಂಖ್ಯೆ 80ಕ್ಕೂ ಹೆಚ್ಚು. ಈ ಪೈಕಿ 33 ಮಕ್ಕಳಿದ್ದರೆ, 13 ಮಹಿಳೆಯರು. ಈ ಕೃತ್ಯಕ್ಕೆ ಅಸಾದ್ ಅವರೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್, ಈಗಾಗಲೇ ಸಿರಿಯಾದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದಾರೆ. ಅಸಾದ್ ವಿರುದ್ಧ ಭಾರೀ ಪ್ರಮಾಣದಲ್ಲಿ ಕೈಗೊಳ್ಳುತ್ತಿರುವ ಅಮೆರಿಕದ ಮೊದಲ ಸೇನಾ ಕಾರ್ಯಾಚರಣೆ ಇದು. ಆದರೆ, ಅಸಾದ್‌ನ ಪರಮಮಿತ್ರ ರಾಷ್ಟ್ರವಾಗಿರುವ ರಷ್ಯಾ ಬೇರೆಯದೇ ಕತೆ ಹೇಳುತ್ತಿದೆ. ಆದರೆ, ಅದರ ಕತೆಯನ್ನು ನಂಬುವ ಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಸಮುದಾಯವಿಲ್ಲ. ಇದೆಲ್ಲವೂ ಅಂತಾರಾಷ್ಟ್ರೀಯ ರಾಜಕೀಯದ ಪಟ್ಟುಗಳು. ತಮ್ಮ ಹಿತಾಸಕ್ತಿಗೋಸ್ಕರ ದಾಳಗಳನ್ನು ಎಸೆಯುವ ‘ಸೂಪರ್ ಪವರ್ ರಾಷ್ಟ್ರ’ಗಳು, ಮುಗ್ಧರ ಜೀವಕ್ಕೆ ಬೆಲೆ ನೀಡುವುದಿಲ್ಲ. ಅಸಾದ್‌ನಂಥ ನಾಯಕರು ಇಂಥ ರಾಜಕಾರಣದ ಕೈಗೊಂಬೆಯಾಗಿದ್ದುಕೊಂಡು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವವರನ್ನು ಹಣಿಯುವುದು ಯಾವುದೇ ಸರಕಾರದ ಕರ್ತವ್ಯ. ಅದರಲ್ಲೇನೂ ತಪ್ಪಿಲ್ಲ. ಆದರೆ, ಅದಕ್ಕಾಗಿ ತನ್ನದೇ ಮುಗ್ಧ ಜನರನ್ನು ಬಲಿ ಕೊಡುವುದು ಎಷ್ಟು ಸರಿ ಎಂಬ ನೈತಿಕ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.
ಮನುಷ್ಯನೊಳಗೆ ಹಿಂಸೆ ಅಂತರ್ಗತವಾಗಿರುತ್ತದೆ. ಅದು ಯಾವುದೇ ಕ್ಷಣದಲ್ಲಿ ಆಸ್ಫೋಟಗೊಳ್ಳಬಹುದು ಎಂಬುದಕ್ಕೆ ಸಿರಿಯಾ ಅಧ್ಯಕ್ಷ ಅಸ್ಸಾದ್ ಅವರು ಅತ್ಯುತ್ತಮ ಉದಾಹರಣೆ. ಅಮಾಯಕರಂತೆ ಕಾಣುವ ಅಸ್ಸಾದ್ ಆಂತರ್ಯದಲ್ಲಿ ಕ್ರೂರ ಸರ್ವಾಧಿಕಾರಿ. ಮುಗ್ಧರ ಮೇಲೆ ನಡೆಸಿರುವ ಘೋರ ಅಪರಾಧಗಳು ಇದನ್ನು ಪುಷ್ಟೀಕರಿಸುತ್ತವೆ. ಹಾಗೆ ನೋಡಿದರೆ, ಸಿರಿಯಾದಲ್ಲಿ ವಿಷಾನಿಲ ದಾಳಿ ನಡೆದಿರುವುದು ಇದೇ ಮೊದಲಲ್ಲ. 2013ರಲ್ಲೂ ಇಂಥ ದಾಳಿ ನಡೆದಿತ್ತು. ಆಗ 1000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಆಗಲೇ ಅಂತಾರಾಷ್ಟ್ರೀಯ ಸಮುದಾಯ ಕಠಿಣ ನಿರ್ಧಾರ ಕೈಗೊಂಡಿದ್ದರೆ ಖಾನ್ ಶೇಕುನ್‌ನಂಥ ಘಟನೆಗಳು ಮತ್ತೆ ನಡೆಯುತ್ತಿರಲಿಲ್ಲ.
ಎಂಥ ದುರಂತ ನೋಡಿ; ಬಶರ್ ಅಲ್ ಅಸಾದ್ ವೃತ್ತಿಯಲ್ಲಿ ವೈದ್ಯರು. ನಾಲ್ಕು ವರ್ಷ ಸೇನಾ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ಅಸಾದರದ್ದು ಜೀವವನ್ನು ಕಾಪಾಡುವಂಥ ಪುಣ್ಯದ ಕೆಲಸ. ಆದರೆ, ಅದೇ ವ್ಯಕ್ತಿ ಈಗ ಸಾಮೂಹಿಕವಾಗಿ ಜನರ ಜೀವ ತೆಗೆಯುತ್ತಿದ್ದಾರೆಂದರೆ ಇದಕ್ಕಿಂತ ವಿಪರ್ಯಾಸವೇನಿದೆ? ತನ್ನದೇ ಜನರನ್ನು ಅತ್ಯಂತ ಭೀಕರವಾಗಿ ಕೊಲ್ಲುವ ಹಂತಕ್ಕೆ ಅಧ್ಯಕ್ಷನೊಬ್ಬ ಹೋಗುತ್ತಾನೆಂದರೆ ಆತನ ಸರ್ವಾಧಿಕಾರತ್ವದ ಹಸಿವು ಅರಿವಾಗುತ್ತದೆ. ಈ ವಿಷಯದಲ್ಲಿ ಅಸಾದ್ ಕೂಡ ಜಗತ್ತು ಕಂಡ ಕ್ರೂರ ಸರ್ವಾಧಿಕಾರಿಗಳಿಗಿಂತ ತಾನೇನೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ನಮ್ಮಲ್ಲಿ ‘ವೈದ್ಯೋ ನಾರಾಯಣೋ ಹರಿ’ ಅಂದರೆ, ವೈದ್ಯ ದೇವರಿಗೆ ಸಮಾನ ಎಂದಿದೆ. ಆದರೆ, ಸಿರಿಯಾದಲ್ಲಿ ವೈದ್ಯ ಯಮನಿಗೆ ಸಮಾನ ಎಂಬಂತಾಗಿದೆ.
ಬಶರ್ ಅವರು 1965ರ ಸೆಪ್ಟೆಂಬರ್ 11ರಂದು ಡಮಾಸ್ಕಸ್‌ನಲ್ಲಿ ಜನಿಸಿದವರು. ತಂದೆ ಹಫೀಜ್ ಅಲ್ ಅಸಾದ್ ಸಿರಿಯಾದ ಅಧ್ಯಕ್ಷ. ಡಮಾಸ್ಕಸ್‌ನಲ್ಲಿ ಬೆಳೆದ ಬಶರ್ 1988ರಲ್ಲಿ ಸ್ಕೂಲ್ ಆಫ್ ಡಮಾಸ್ಕಸ್ ಯುನಿರ್ವಸಿಟಿಯಿಂದ ಪದವಿ ಪಡೆದು, ಸಿರಿಯಾ ಸೇನೆಯಲ್ಲಿ ವೈದ್ಯರಾಗಿ ನಾಲ್ಕು ವರ್ಷ ಕೆಲಸ ಮಾಡುತ್ತಾರೆ. ನಂತರ ಅವರು, ಇಂಗ್ಲೆಂಡ್‌ಗೆ ತೆರಳಿ ಲಂಡನ್ ವೆಸ್ಟರ್ನ್ ಐ ಹಾಸ್ಪಿಟಲ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ. ಹಾಗೆ ನೋಡಿದರೆ, ಬಶರ್ ಅವರಿಗೆ ರಾಜಕೀಯ ಕುರಿತು ಅಷ್ಟೇನೂ ಆಸಕ್ತಿ ಇರುವುದಿಲ್ಲ. ತಂದೆಯ ನಂತರ ರಾಜಕೀಯ  ಉತ್ತರಾಧಿಕಾರಿ ಎಂದು ಬಷರ್ ಅವರ ಅಣ್ಣ  ಬಸೆಲ್ ಅಲ್ ಅಸಾದ್ ಗುರುತಿಸಿಕೊಂಡಿರುತ್ತಾರೆ. ಆದರೆ, ಬಸೆಲ್ 1994ರಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಆಗ, ಸಿರಿಯಾಗೆ ಬಶರ್‌ನನ್ನು ತಂದೆ ಹಫೀಜ್ ಅವರು  ಕರೆಯಿಸಿಕೊಂಡು, ಮಿಲಿಟಿರಿ ಅಕಾಡೆಮಿಯಲ್ಲಿ ಕೆಲಸ ಕೊಡುತ್ತಾರೆ. ‘ಸಿರಿಯಾ ಸ್ವಾಧೀನ ಲೆಬನಾನ್’ ಉಸ್ತುವಾರಿಯನ್ನು ಬಶರ್‌ಗೆ 1998ರಲ್ಲಿ ವಹಿಸುತ್ತಾರೆ. ಕುಟುಂಬದ ವ್ಯವಹಾರ ನೋಡಿಕೊಂಡು, ರಾಜಕೀಯದ ಕಡೆ ತಲೆಹಾಕದ ಬಶರ್ ಕೊನೆಗೆ ರಾಜಕೀಯ ಉತ್ತುಂಗಕ್ಕೆ ಏರುತ್ತಾ ಹೋಗಿ, ತಂದೆಯ ನಿಧನದ ಬಳಿಕ ಅಂದರೆ 2000ರಲ್ಲಿ ಸಿರಿಯಾದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.
ಅಧಿಕಾರ ವಹಿಸಿಕೊಂಡಾಗ ಅಸಾದ್ ಅವರಿಗೆ 34 ವರ್ಷ. ಜನರು ಸುಧಾರಣೆಯ ಶುಭ ಕಾಲ ಎಂದೇ ಬಗೆದಿದ್ದರು. ತಮ್ಮ ಅಧಿಕಾರಾವಧಿಯ ಆರಂಭಿಕ ವರ್ಷಗಳಲ್ಲಿ ಬಶರ್ ಅವರೂ ಜನರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಅಧಿಕಾರಕ್ಕೇರುತ್ತಿದ್ದಂತೆ ತಮ್ಮ ತಂದೆಯಂತೆ ಸರ್ವಾಧಿಕಾರಿಯ ಲಕ್ಷಣಗಳನ್ನೇನೂ ತೋರಲಿಲ್ಲ. ಮುಕ್ತ ಚಿಂತನೆಯ ಪ್ರತಿಪಾದಕರಂತೆ ಕಂಡರು. ಅನೇಕ ಸುಧಾರಣೆಗಳಿಗೆ ಶ್ರೀಕಾರ ಹಾಕಿದರು. ರಾಜಕೀಯ ವಿರೋಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದರು. ಮಾಧ್ಯಮಗಳ ಮೇಲಿದ್ದ ನಿರ್ಬಂಧಗಳನ್ನು ತೆಗೆದು ಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಕೊಟ್ಟಿದ್ದರಿಂದ ರಾಜಕೀಯ ಚರ್ಚೆಗಳು ಕೂಡ ನಡೆಯಲಾರಂಭಿಸಿದವು. ಭಿನ್ನ ಧ್ವನಿಗಳಿಗೆ ಅವಕಾಶ ದೊರೆಯಲಾರಂಭಿಸಿತು. ರಾಜಕೀಯ ಬಹುತ್ವಕ್ಕೆ ಮಹತ್ವ ಬರಲಾರಂಭಿಸಿತು. ಈ ಹಿನ್ನೆಲೆಯಲ್ಲೇ ಬಹುತೇಕ ರಾಜತಾಂತ್ರಿಕರು, ಶೈಕ್ಷಣಿಕ ತಜ್ಞರು ಅಸಾದ್ ಅವರ ಮೊದಲನೆಯ ಅವಧಿಯನ್ನು ಶ್ಲಾಘಿಸುತ್ತಾರೆ. ಆದರೆ, ಬಶರ್ ಅವರ ಸುಧಾರಣೆ ಕ್ರಮಗಳನ್ನು ಸೇನೆ ಹಾಗೂ ಸ್ಥಾಪಿತ ಹಿತಾಸಕ್ತಿಗಳು ಪ್ರಶ್ನಿಸಲಾರಂಭಿಸಿದವು. ಬಾತ್ ಪಾರ್ಟಿ ಮತ್ತು ಅಲಾವಿಟ್ ಸಮುದಾಯ(ಬಶರ್ ಅವರು ಪ್ರತಿನಿಧಿಸುವ ಸಮುದಾಯ) ಈ ಸುಧಾರಣೆಗಳಿಂದ ಅತೃಪ್ತಗೊಂಡವು. ಅಸ್ಥಿರತೆಯ ಭಯದಿಂದಾಗಿ ಮತ್ತು ತಮ್ಮ ಪ್ರಭಾವಕ್ಕೆ ಧಕ್ಕೆ ಬರಬಹುದೆಂಬ ಭೀತಿಯಿಂದ ಸುಧಾರಣೆಗಳಿಗೆ ಕೊಕ್ಕೆ ಹಾಕಲಾರಂಭಿಸಿದವು ಮಾತ್ರವಲ್ಲ, ಈ ಹಿಂದಿದ್ದ ದಿನಗಳತ್ತ ಆಡಳಿತವನ್ನು ಕೊಂಡೊಯ್ಯಲು ಪ್ರಯತ್ನಿಸಿದವು. ಇದರ ಪರಿಣಾಮವಾಗಿ, 2014ರಲ್ಲಿ ಅಸಾದ್ ಮರಳಿ ಅಧಿಕಾರಕ್ಕೆ ಬಂದ ನಂತರ, ಅವರ ವ್ಯಕ್ತಿತ್ವ ಹಾಗೂ ಕಾರ್ಯ ನಿರ್ವಹಣೆಯಲ್ಲಿ ಅಪಾರ ವ್ಯತ್ಯಾಸ ಕಂಡು ಬಂತು. ಯಾವ ವ್ಯಕ್ತಿಯನ್ನು ಆಶಾವಾದದ ಪ್ರತೀಕ ಎಂದು ಜನ ನೋಡುತ್ತಿದ್ದರೋ ಅದೇ ವ್ಯಕ್ತಿ ಇದೀಗ ಜನರ ಕಣ್ಣಲ್ಲಿ ವಿಲನ್ ಆಗಿ ಬದಲಾದರು.
ಹಾಗೆ ನೋಡಿದರೆ, 2014ರಲ್ಲಿ ನಡೆದ ಚುನಾವಣೆಯಲ್ಲಿ ಭಾರಿ ಮತಗಳಿಂದಲೇ ಆಯ್ಕೆಯಾಗಿದ್ದರು. ಶೇ.88.7ರಷ್ಟು ಮತಗಳನ್ನು ಅವರು ಪಡೆದಿದ್ದರು. ಬಾತ್ ಪಾರ್ಟಿಯ ಇತಿಹಾಸದಲ್ಲೇ ಅಧ್ಯಕ್ಷರೊಬ್ಬರು ಪಡೆದ ಅತಿ ಹೆಚ್ಚಿನ ಮತಗಳು ಅವು. ಆದರೆ, ಅಂತಾರಾಷ್ಟ್ರೀಯ ಸಮುದಾಯ ಮಾತ್ರ ಈ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದವು. ಇದ್ಯಾವುದಕ್ಕೆ ತಲೆ ಕೆಡಿಸಿಕೊಳ್ಳದ ಅಸಾದ್ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸಿದರು. ಅವರ ಸರ್ವಾಧಿಕಾರತ್ವದ ಲಕ್ಷಣಗಳು ಮೊದಲಿಗೆ ಗೋಚರವಾಗಿದ್ದು, ಅರಬ್ ಸ್ಪ್ರಿಂಗ್ ಪ್ರತಿಭಟನಾಕಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಾಗ. ಇದೇ ಮುಂದೆ ಸಿರಿಯಾದ ನಾಗರಿಕ ಸಂಘರ್ಷಕ್ಕೆ ಕಾರಣವಾಗಿ, ಇದೀಗ ವಿಷಾನಿಲದಂಥ ಭೀಕರ ಸಾಮೂಹಿಕ ಶಸ್ತ್ರಾಸ್ತ್ರಗಳ ಬಳಕೆಯವರೆಗೂ ಬಂದು ಮುಟ್ಟಿದೆ. ನಾಯಕನೊಬ್ಬನ ಕೆಲವು ತಪ್ಪು ನಿರ್ಧಾರಗಳು ಹೇಗೆ ಇಡೀ ದೇಶವನ್ನು ಬಡುಮೇಲು ಮಾಡುತ್ತವೆ ಎಂಬುದಕ್ಕೆ ಇದು ಜೀವಂತ ಉದಾಹರಣೆ. ಇಷ್ಟೆಲ್ಲ ಆದರೂ, ಅಸಾದ್ ತಮ್ಮ ಕ್ರಮಗಳನ್ನು ಇಂದಿಗೂ ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಆದರೆ, ವಿಶ್ವಸಂಸ್ಥೆ ಕೈಗೊಂಡ ಅಧ್ಯಯನ ಪ್ರಕಾರ ಅಸಾದ್ ಅವರ ವಾರ್ ಕ್ರೈಮ್‌ಗಳ ಪಟ್ಟಿ ದೊಡ್ಡದಿದೆ.
ಸಿರಿಯಾದಲ್ಲಿ ನಾಗರಿಕ ಸಂಘರ್ಷ 2011ರಿಂದಲೇ ಆರಂಭವಾಗುತ್ತದೆ. ರಾಜಕೀಯ ಸುಧಾರಣೆ ಮತ್ತು ನಾಗರಿಕ ಹಕ್ಕುಗಳ ಮರುಸ್ಥಾಪನೆಗಾಗಿ ದೊಡ್ಡ ಹೋರಾಟವೇ ನಡೆಯುತ್ತದೆ. ಆಗಲೂ ಸಿರಿಯಾ ಆಡಳಿತ ಪ್ರತಿಭಟನಾಕಾರರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಒಂದೆಡೆ ಅಸಾದ್ ಆಡಳಿತದ ವಿರುದ್ಧ ಜನರು ಬೀದಿಗಿಳಿದರೆ, ಮತ್ತೊಂದೆಡೆ ಅಸಾದ್ ಪರವಾಗಿಯೂ ಹೋರಾಟ ನಡೆಯುತ್ತದೆ. ಇದರ ಒಟ್ಟು ಪರಿಣಾಮವೇ ಎಂದೂ ಮುಗಿಯದ ಸಿರಿಯಾ ನಾಗರಿಕ ಸಂಘರ್ಷ ಆರಂಭವಾಗುತ್ತದೆ. ಇದರ ಮಧ್ಯೆಯೇ ಅಮೆರಿಕ ಮತ್ತು ರಷ್ಯಾದ ಹಸ್ತಕ್ಷೇಪಗಳಿಂದಾಗಿ ಪರಿಸ್ಥಿತಿ ಮತ್ತಷ್ಟು ಹದೆಗೆಡುತ್ತದೆ. ವಾಸ್ತವದಲ್ಲಿ ತನ್ನ ದೇಶದೊಳಗಿನ ಸಂಘರ್ಷವನ್ನು ಚಾಣಾಕ್ಷತನದಿಂದ ಬಗೆಹರಿಸಬೇಕಿದ್ದ ಅಸಾದ್ ಎಡವುತ್ತಾರೆ. ಅಂತಾರಾಷ್ಟ್ರೀಯ ಸಮುದಾಯ, ಸಿರಿಯಾ ಮೇಲೆ ನಿರ್ಬಂಧನೆಗಳನ್ನು ಹೇರಿದ್ದರಿಂದ ಒಟ್ಟಾರೆ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತದೆ. ವಿರೋಧಿ ಪ್ರತಿಭಟನಾಕಾರರನ್ನು  ಸೇನೆಯಿಂದ ದಂಡಿಸಲಾಗುತ್ತದೆ. ಒಂದೊಮ್ಮೆ ಸಿರಿಯಾದ ಆಶಾದಾಯಕ ಅಧ್ಯಕ್ಷನಾಗಿ ಗುರುತಿಸಿಕೊಂಡಿದ್ದ ಅಸಾದ್ ಇದೀಗ ಸಂಪೂರ್ಣ ಸರ್ವಾಧಿಕಾರಿಯಾಗಿ ಬದಲಾಗುತ್ತಾರೆ. ನಂತರ ನಡೆದಿದ್ದೆಲ್ಲ ಹಿಂಸಾತ್ಮಕ ರಾಜಕೀಯವಷ್ಟೆ.
ನಾಗರಿಕ ಸಂಘರ್ಷದಿಂದ ಬಸವಳಿದಿರುವ ಸಿರಿಯಾದಲ್ಲಿ ತುರ್ತಾಗಿ ಶಾಂತಿ ಸ್ಥಾಪನೆಯಾಗಬೇಕಿದೆ. ಆದರೆ, ತಮ್ಮ ಹಿತಾಸಕ್ತಿಗಳ ಅನುಸಾರವಾಗಿ ಸಿರಿಯಾ ಕುರಿತು ವಿದೇಶಾಂಗ ನೀತಿಗಳನ್ನು ರೂಪಿಸಿಕೊಂಡಿರುವ ಅಮೆರಿಕ ಮತ್ತು ರಷ್ಯಾಗಳಿಂದಾಗಿ ಶಾಂತಿ ಸ್ಥಾಪನೆ ಸದ್ಯಕ್ಕೆ ಮರೀಚಿಕೆಯಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದೆಡೆ, ಶಾಂತಿ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿರಬೇಕಾಗಿರುವ ಅಧ್ಯಕ್ಷ ಅಸಾದ್ ಅವರು ಉಗ್ರರನ್ನು ಮಟ್ಟ ಹಾಕುತ್ತಲೇ, ವಿಷಾನಿಲದ ಬಾಂಬ್‌ಗಳನ್ನು ಮುಗ್ಧರ ಮೇಲೆ ಎಸೆಯುತ್ತಾ ತಿರುಗುತ್ತಿರುವುದು ಮಾತ್ರ ಆಧುನಿಕ ಜಗತ್ತಿನ ಅಣಕವಷ್ಟೆ.

This article was published in VijayKarnataka, on 09 April 2017 edition

ಸೋಮವಾರ, ಮಾರ್ಚ್ 27, 2017

ಹುಡುಗನೊಬ್ಬನ ಗಜಲ್‌ಗಳು: ಹಿಸ್ಟರಿಯಲ್ಲಿ ಢುಮ್ಕಿ ಹೊಡೆದವನ ವಸಂತಗಾನ

ನಿಸರ್ಗಕ್ಕೆ ಹಸಿರು ತೋರಣ ಕಟ್ಟಿದ್ದ ವಸಂತ, ನಮ್ಮ ಒಲುಮೆಗೆ ಆತನೇ ಕಾರಣ


- ಪ್ರದ್ಯುಮ್ನ
ಯುನಿವರ್ಸಿಟಿಯ ಹಾಸ್ಟೆಲ್‌ನ ಆ ಕಿಟಿಕಿಯಾಚೆ ನೋಡುತ್ತಿದ್ದವನಿಗೆ ಸಣ್ಣ ಸವಿನೆನಪೊಂದು ಹಾರಿ ಹೋದ ಅನುಭವ. ಶಿಶಿರ ಕಾಲದಲ್ಲಿ ತನ್ನೆಲ್ಲ ಎಲೆಗಳನ್ನು ಕಳಚಿ, ಅಸ್ಥಿ ಪಂಜರದಂತೆ ಕಾಣುತ್ತಿದ್ದ ಆ ಮರವೀಗ ಹಚ್ಚ ಹಸಿರು ಎಲೆಗಳನ್ನು ಹೊದ್ದುಕೊಂಡು ಮದುವಣಗಿತ್ತಿಯಂತೆ ರೆಡಿಯಾಗಿ ನಿಂತಿದೆ. ಅರೇ, ಎರಡು ವಾರದ ಹಿಂದೆಯಷ್ಟೇ ಒಣಗಿದಂತಿದ್ದ ಆ ಮರಕ್ಕೀಗ ಹಸಿರು ತೋರಣ. ಕಾಲ ಹೇಗೆ ನಮ್ಮ ಸುತ್ತಲಿನ ಪರಿಸರವನ್ನು ತನ್ನ ಆಣತಿಯಂತೆ ಬದಲಾಯಿಸುತ್ತಾ ಹೋಗುತ್ತಾನೆ ಅಲ್ಲವೇ? ಆತನಿಗೆ ಗೊತ್ತಿರದ ಸಂಗತಿ ಯಾವುದೂ ಇಲ್ಲ. ನಾನು ಇಲ್ಲಿಗೆ ಬಂದು ನಾಲ್ಕು ವಸಂತ ಕಳೆದು ಐದನೇ ವಸಂತ ಆರಂಭವಾಯಿತು ನೋಡಲೋ ಎಂಬಂತೆ ಆ ಚಿಗುರೆಲೆಗಳು ಗಾಳಿಗೆ ಹೊಯ್ದಡುತ್ತಿದ್ದವು. ಅದರ ಹಿಂದೆಯೇ ಬಿ.ಆರ್.ಲಕ್ಷ್ಮಣ ರಾವ್ ಅವರ ಪದ್ಯವೊಂದರ;
ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ...
ಎಂಬ ಸಾಲುಗಳು ಸ್ಮೃತಿ ಪಟಲದಲ್ಲಿ ಅಚ್ಚು ಹಾಕಿ ಮರೆಯಾದವು. ಎಷ್ಟು ಬೇಗ ಕಾಲ ಉರುಳಿ ಹೋಯಿತು? ಪಿಎಚ್‌ಡಿಗೋಸ್ಕರ ಈ ಯುನಿವರ್ಸಿಟಿಗೆ ನಿನ್ನೆ ಮೊನ್ನೆಯಷ್ಟೇ ಬಂದಿರುವ ಹಾಗಿದೆ ನನಗೆ. ಇನ್ನು ಒಂದೇ ವರ್ಷ ನನ್ನ ಸಂಶೋಧನೆ ಮುಗಿದು ಡಾಕ್ಟರೇಟ್ ಪದವಿ ಪಡೆಯಲು. ಆದರೆ, ಬೇಸಿಗೆ ಬಂದಾಗಲೆಲ್ಲ ನನ್ನೊಳಗೆ ಆಹ್ಲಾದಕರ ಭಾವನೆಗಳ ಉಬ್ಬರವಾಗುತ್ತವೆ. ನಿಸರ್ಗದಲ್ಲಾಗುವ ಹೊಸತನದ ಚಿಗುರು ನನ್ನೊಳಗೂ ಅನೇಕ ಭಾವನೆಗಳಿಗೆ ಮರಿ ಹಾಕಿ ಬಿಡುತ್ತದೆ. ಇಲ್ಲಿಗೆ ಬರುವ ಮುಂಚೆ, ಊರಲ್ಲಿ ಅಲ್ಲೊಂದು ಇಲ್ಲೊಂದು ಕಾಣುವ ಆಲದ ಮರಗಳು, ಬೇಸಿಗೆಯಲ್ಲಿ ಭರ್ಜರಿ ನೆರಳನ್ನು ನೀಡುತ್ತಿದ್ದವು. ಊರಿನಿಂದ ಒಂದು ಮೈಲು ದೂರ ಇದ್ದ ಕಾಲೇಜು ಸುತ್ತ ಮುತ್ತ ಇದ್ದದ್ದು ನಾಲ್ಕೇ ನಾಲ್ಕು ಈ ಮರಗಳು. ಅವು ಕಾಲೇಜಿನಿಂದ ತುಸು ದೂರವೇ ಇದ್ದವು. ಪತ್ರಾಸ್ ಹೊದಿಕೆಯಿದ್ದ ಆ ಕಾಲೇಜಿನ ಕಟ್ಟಡದಲ್ಲಿ ಕುಳಿತು ಲೆಕ್ಚರ್ ಕೇಳುವುದು ಯಮಯಾತನೆ. ನಮಗೆ ಗೊತ್ತಿಲ್ಲದೆಯೇ ಬೆವರು ತನಗೆ ಹೇಗೆ ಬೇಕೋ ಹಾಗೆ ದಾರಿ ಮಾಡಿಕೊಂಡು ಯಾವುದೇ ಅಡೆ ತಡೆ ಇಲ್ಲದೆ ಇಳಿದು ಬಿಡುತ್ತಿತ್ತು. ಇದೇ ಅನುಭವ ಪಾಠ ಹೇಳುವ ಲೆಕ್ಚರ್‌ಗಳಿಗೂ ಆಗುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಮ್ಮ ಇತಿಹಾಸದ ಲೆಕ್ಚರ್‌ರು, ತಮ್ಮ ಪಾಠವನ್ನು ಕಾಲೇಜಿನ ಆಚೆ ಇದ್ದ ಆ ಆಲದ ಮರದ ಬುಡಕ್ಕೆ ಶಿಫ್ಟ್ ಮಾಡುತ್ತಿದ್ದರು. ಆಗ ತಾನೇ ಹಸಿರಿನಿಂದ ಹೊದ್ದು ನಿಂತಿದ್ದ ಆ ಮರದ ಕೆಳಗೆ ಹಾಯ್ ಎನಿಸುವಂಥ ತಂಪು. ಆಗಾಗ ಸುಳಿಯುವ ಗಾಳಿ ನಮ್ಮಲ್ಲಿ ಒಂದು ಹಿತವಾದ ಅನುಭವವನ್ನು ದಾಟಿಸಿಕೊಂಡು ಹೋಗುತ್ತಿತ್ತು. ನಾವೆಲ್ಲ ಒಂದು ಕಡೆ ಕುಳಿತರೆ, ಮತ್ತೊಂದೆಡೆ ಹುಡುಗಿಯರು. ಇತಿಹಾಸದ ಮೇಷ್ಟ್ರು ಷಹಾಜಹಾನ್‌ನ ಪ್ರೇಮ ಪುರಾಣ ಆರಂಭಿಸುತ್ತಿದ್ದಂತೆ ನಮ್ಮ ಮನಸ್ಸು ಪಾಠದ ಮೇಲಿಂದ ವರ್ಗವಾಗಿ ಪಕ್ಕದಲ್ಲಿ ಕುಳಿತಿದ್ದವರ ಕಡೆಗೆ ವಾಲುತ್ತಿತ್ತು. ಗಾಳಿಗೆ ಮುಖವೊಡ್ಡಿ ಪಾಠ ಕೇಳುತ್ತಿದ್ದಂತೆ ಕಾಣುತ್ತಿದ್ದ ಅವರ ಮುಖಗಳು ನಮ್ಮಳಗೆ ನಾನಾ ತರಂಗಗಳನ್ನ ಹುಟ್ಟು ಹಾಕುತ್ತಿದ್ದವು. ಅದರಲ್ಲೂ ಅವಳಿದ್ದಳಲ್ಲ, ಆ ಚೆಲುವೆ, ಅವಳನ್ನು ನೋಡುವುದೇ ಒಂದು ಸುಂದರ ಅನುಭವ; ಅಷ್ಟು ಚೆಲುವೆ ಆಕೆ. ಸುಳಿಯುತ್ತಿದ್ದ ಗಾಳಿಗೆ ಆಕೆಯ ಮುಂಗುರುಳು ಅತ್ತಿಂದ ಇತ್ತ, ಇತ್ತಿಂದ ಅತ್ತ ಹೊಯ್ದಡುತ್ತಿತ್ತು. ಮುಂಗುರುಳನ್ನು ಹತೋಟಿಗೆ ತರಲು, ಬೆರಳುಗಳು ಆಕೆಯ ಅನುಮತಿಯನ್ನು ಕೇಳುತ್ತಿರಲಿಲ್ಲ. ಆದರೆ, ಕೊನೆಗೆ ಸೋಲುತ್ತಿದ್ದದ್ದು ಬೆರಳುಗಳೇ. ಯಾಕೆಂದರೆ, ಆ ಮುಂಗುರುಳಿಗೆ ಗಾಳಿಯ ಬೆಂಬಲ. ಪಾಠ ತನ್ನ ಪಾಡಿಗೆ ತಾನು ನಡೆಯುತ್ತಿರುವಾಗಲೇ ಆಕೆ ಮಿಂಚಿನ ವೇಗದಲ್ಲಿ ನನ್ನತ್ತ ನೋಡಿ ಅಷ್ಟೇ ವೇಗದಲ್ಲಿ ಮುಖ ತಿರುಗಿಸಿದ್ದನ್ನು ಪಕ್ಕದಲ್ಲಿದ್ದ ಗೆಳೆಯ ನೋಡುತ್ತಿದ್ದ. ಅವನಿಗೆ ಗೊತ್ತಿತ್ತು ಆಕೆಯನ್ನು ಬಹಳ ಇಷ್ಟು ಪಡುತ್ತಿದ್ದೆ ಎಂಬುದು. ‘‘ಏ.. ಆಕಿ ನಿನ್ನ ನೋಡಿದ್ಲೋ,’’ ಎಂದು ಮೆಲ್ಲಗೆ ಕಿವಿಯಲ್ಲಿ ಉಸುರುತ್ತಿದ್ದ. ಇದು ದಿನಾ ರಿಪೀಟ್ ಆಗುತ್ತಲೇ ಇತ್ತು. ನನಗೆ ಗೊತ್ತಿಲ್ಲದೆ ಆಕೆ, ಆಕೆಗೆ ಗೊತ್ತಿಲ್ಲದೆ ನಾನು ಪರಸ್ಪರ ನೋಡುವುದು, ಆಗಾಗ ಕಣ್ಣಲ್ಲಿ ಮಾತನಾಡಿಕೊಳ್ಳುವುದು ನಡೆದೇ ಇತ್ತು. ‘ವಸಂತ’ ಕಾಲದ ಹಿಸ್ಟರಿ ಕ್ಲಾಸ್‌ಗಳೆಂದರೆ ನಮ್ಮ ನಡುವಿನ ಪ್ರೇಮ ಪಯಣದ ‘ಇತಿಹಾಸ’ದ ಆರಂಭಕ್ಕೆ ಮುನ್ನುಡಿ ಬರೆದಿದ್ದವು. ಆದರೆ ಎಷ್ಟು ದಿನ ಅಂತ ಹೀಗೆ ನೋಡಿಕೊಂಡಿರುವುದು, ನನ್ನೊಳಗೆ ಪ್ರೇಮ ಚಿಗುರೊಡೆದು ಬೆಳೆದು ಹೆಮ್ಮರವಾಗಿದ್ದನ್ನು ಆಕೆಗೆ ತಿಳಿಸಲೇಬೇಕಿತ್ತು. ಮೋಸ್ಟಲೀ, ಅವಳು ಹಾಗೆ ಅಂದು ಕೊಂಡಿರಬೇಕು ಅನಿಸುತ್ತದೆ. ಇಲ್ಲದಿದ್ದರೆ, ಅಂದು ಯಾಕೆ, ಕ್ಲಾಸ್ ಮುಗಿದ ಬಳಿಕ ಎಲ್ಲರು ಹೋದರೂ ಮರದ ನೆರಳಲ್ಲಿ ಒಬ್ಬಳೇ ನಿಲ್ಲುತ್ತಿದ್ದಳು? ಅದೇನೋ ಹೇಳುತ್ತಾರಲ್ಲ, ‘ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ’ ಎನ್ನುವಂಥ ಸ್ಥಿತಿ ನನ್ನದು. ಆ ದೊಡ್ಡ ಮರದ ಕೆಳಗೆ ನಾವಿಬ್ಬರೇ. ಆಹ್ಲಾದಕರವಾಗಿ ಬೀಸುತ್ತಿದ್ದ ಗಾಳಿಗೆ ಮುಖವೊಡ್ಡಿ, ನೋಟ್‌ಬುಕ್ ಎದೆಗವಚಿಕೊಂಡು ನಿಂತಿದ್ದಾಳೆ. ಆಕೆಯನ್ನು ಮಾತನಾಡಿಸಲೇಬೇಕು ಎಂದು ನಿಂತುಕೊಂಡ ನನಗೆ ಮಾತುಗಳೇ ಹೊರಡುತ್ತಿಲ್ಲ. ಈ ಕಣ್ಣಿನ ಭಾಷೆಗಿರುವಷ್ಟು ಧೈರ್ಯ, ಸಂವಹನ ನುಡಿಗಳಿಗಿರುವುದಿಲ್ಲ ಎಂಬ ಆಲೋಚನೆಗಳು ತಲೆಯಲ್ಲಿ ಗಿರಿಕಿ ಹೊಡೆಯುತ್ತಿರುವಾಗಲೇ ಧೈರ್ಯ ಮಾಡಿ, ‘‘ಹಲೋ,’’ ಎಂದೆ, ಆಕೆ  ‘‘ಹಲೋ,’’ ಎಂದಾಗಲೇ ಗೊತ್ತಾಗಿದ್ದು, ನಾನಷ್ಟೇ ಅಲ್ಲ ಆಕೆಗೂ ಮಾತನಾಡಲು ಧೈರ್ಯ ಸಾಲುತ್ತಿಲ್ಲ ಎಂಬುದು. ಐದು, ಹತ್ತು ನಿಮಿಷ ಆದ್ಮೇಲೆ ನಮ್ಮಿಬ್ಬರ ಮಧ್ಯೆ ಅಳುಕು ನಿಧಾನವಾಗಿ ಕರಗಿ ಅದು- ಇದು ಮಾತನಾಡುತ್ತಲೇ, ಮನದಾಳದಲ್ಲಿದ್ದ ಭಾವನೆಗಳಿಗೆ ಮಾತಿನ ರೂಪ ಕೊಟ್ಟು ಒಂದೇ ಉಸಿರಿನಲ್ಲಿ ‘‘ನಂಗೆ ನೀನು ಭಾಳಾ ಇಷ್ಟ,’’ ಎಂದೆ. ಅಷ್ಟೇ ವೇಗದಲ್ಲಿ ಆಕೆ, ‘‘ನನಗೂ...,’’ ಎಂದವಳೆ ಅಲ್ಲಿಂದ ಮಿಂಚಿನ ಓಟದಲ್ಲಿ ಮಾಯವಾದವಳು. ಓಹೋ ಎಂದು ಜೋರಾಗಿ ಕಿರುಚಿ ಮೇಲೆ ನೋಡಿದವನಿಗೆ ಎಲೆಗಳ ಸಂದುಗೊಂದುಗಳಿಂದ ಸೂರ್ಯ ನನ್ನತ್ತಲೇ ಇಣುಕುತ್ತಿದ್ದ. ‘‘ಭಪ್ಪರೇ ಮಗನೆ,’’ ಎಂದಂತಾಯಿತು. ಗಾಳಿಗೆ ಮೆಲ್ಲನೆ ಸದ್ದು ಮಾಡುತ್ತಿದ್ದ ಎಲೆಗಳು, ಅಂದು ಯಾಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದವೋ?
ನಂತರದ ದಿನಗಳಲ್ಲಿ, ಹಿಸ್ಟರಿ ಕ್ಲಾಸ್‌ನಲ್ಲಿ ಅವಳನ್ನು ನೋಡುವುದೇ ಪಾಠವಾಗಿ ಬಿಟ್ಟಿತ್ತು. ಪಕ್ಕದಲ್ಲಿದ್ದ ಗೆಳೆಯ ಆಗಾಗ ತಿವಿಯುತ್ತಾ, ‘‘ಏ ಮಗನ ನೋಡಿದ್ದು ಸಾಕು, ಪಾಠಾನೂ ಸ್ವಲ್ಪ ಕೇಳು..,’’ ಅಂತಿದ್ದ. ನನ್ನ ದುರದೃಷ್ಟಕ್ಕೆ, ಹಿಸ್ಟರಿ ಲೆಕ್ಚರ್ ನನ್ನತ್ತ ಚಾಕ್‌ಪೀಸ್ ಎಸೆದವರೇ, ‘‘ಲೋ ತಮ್ಮ, ಎದ್ದು ನಿಲ್ಲು. ಅಶೋಕ ಏನೇನ್ ಮಾಡಿದ ಹೇಳು,’’ ಅಂದ್ರು. ‘‘ಲಕ್ಷೋಪ ಲಕ್ಷ  ಸೈನಿಕರೊಂದಿಗೆ ಕಳಿಂಗ ಯುದ್ಧ ಮಾಡಿ ಗೆದ್ದ, ಆ ಮೇಲೆ ರಸ್ತೆಗಳಲ್ಲಿ ಗಿಡಗಳನ್ನು ನೆಟ್ಟ,’’ ಎಂದು ಪೆದ್ದು ಪೆದ್ದಾಗಿ, ಹೈಸ್ಕೂಲ್ ಹುಡುಗ ಹೇಳಿದ ಹಾಗೆ ಹೇಳಿದ್ದೇ ತಡ ಇಡೀ ಕ್ಲಾಸ್ ಗೊಳ್ಳೆಂದು ನಕ್ಕಿತು. ಆಕೆಯೂ ತುಸು ಜೋರೇ ನಕ್ಕಳು. ನಾಚಿಕೆಯಿಂದ ತಲೆ ತಗ್ಗಿಸಿದೆ.
ಆ ವಯಸ್ಸಿನಲ್ಲಿ, ನಮ್ಮನ್ನು ಇಷ್ಟಪಡುವ ಜೀವವೊಂದಿದೆ ಎಂದರೆ ಸಾಕು. ಎಲ್ಲವೂ ಆನಂದಮಯವಾಗಿಯೇ ಕಾಣುತ್ತದೆ. ಎಷ್ಟೆಲ್ಲ ಕಷ್ಟಗಳು ಹೂವಿನಂತೆ ಭಾಸವಾಗುತ್ತವೆ. ಕಿಸೆಯಲ್ಲಿ ನಾಲ್ಕು ಕಾಸು ಇಲ್ಲದಿದ್ದರೂ ಶ್ರೀಮಂತನ ಜಂಭಕ್ಕೇನೂ ಕೊರತೆ ಇರಲ್ಲ. ಆಗ, ಮುಂದಿರುವ ಗುರಿ ಮೈ ಮರೆಯುವ ಅಪಾಯಗಳೇ ಹೆಚ್ಚು. ನನಗೂ ಅದೇ ಆಗಿದ್ದು. ಪ್ರೇಮದ ಸುಳಿಯಲ್ಲಿ ಸಿಕ್ಕವನಿಗೆ ಫೈನಲ್ ಡಿಗ್ರಿ ರಿಸಲ್ಟ್ ದೊಡ್ಡ ಶಾಕ್ ನೀಡಿತ್ತು. ಯಾವ ಕ್ಲಾಸ್‌ನಲ್ಲಿ ಪ್ರೇಮ ಶುರುವಾಗಿತ್ತೋ ಅದೇ ಕ್ಲಾಸ್ ಅಂದರೆ, ಹಿಸ್ಟರಿ ಸಬ್ಜೆಕ್ಟ್‌ನಲ್ಲಿ ಢುಮ್ಕಿ ಹೊಡೆದಿದ್ದೆ. ಈ ವಿಷಯ ಅವಳಿಗೆ ಗೊತ್ತಾಗಿ, ಅದೇ ಮರದ ನೆರಳಿನಲ್ಲಿ ನಿಂತಿದ್ದಳು. ಆಕೆ ಅಂದು ಹೇಳಿದ ಮಾತುಗಳು, ಇಂದು ನಾನು ಡಾಕ್ಟರೇಟ್ ಮಾಡುವ ಹಂತಕ್ಕೆ ತಂದು ನಿಲ್ಲಿಸಿವೆ. ಆಕೆಯದ್ದು ನಿಷ್ಕಲ್ಮಷ ಪ್ರೇಮ. ತನ್ನಿಂದಾಗಿ ನನ್ನ ಭವಿಷ್ಯ ಹಾಳಾಯಿತು ಎಂದು ಬಹಳ ದುಃಖದಲ್ಲಿದ್ದಳು.
‘‘ನಮ್ಮಿಬ್ಬರದ್ದು ನಿಜವಾದ ಪ್ರೀತಿಯೇ ಆಗಿದ್ದರೆ, ನೀನು ಹಿಸ್ಟರಿ ಸಬ್ಜೆಕ್ಟ್‌ನಲ್ಲಿ ಪಿಎಚ್‌ಡಿ ಮಾಡಬೇಕು. ಅಲ್ಲಿಯವರೆಗೂ ನಮ್ಮಿಬ್ಬರ ಮಧ್ಯೆ ಯಾವುದೇ ಮಾತುಕತೆ ಇಲ್ಲ. ನೀನು ಬರೋವರೆಗೆ ನಾನು ಕಾಯುತ್ತಿರುತ್ತೇನೆ’’ ಎಂದವಳೇ ತಿರುಗಿ ನೋಡದೆ ಹೊರಟು ಹೋದಳು. ಚೂರು ಗಾಳಿ ಇರಲಿಲ್ಲ. ಎಲೆಗಳ ಸದ್ದಿಲ್ಲ. ಸಂದಿಯಲ್ಲಿ ಸೂಸುತ್ತಿದ್ದ ಸೂರ್ಯನ ಕಿರಣಗಳೂ ಪ್ರಖರವಾಗಿದ್ದವು. ಆಗಲೇ ನಿರ್ಧರಿಸಿದ್ದೆ. ಗೆಲ್ಲಲೇಬೇಕು ನಾನೊಂದು ದಿನ ಎಂದು.
ಅಂದಿನ ನಿರ್ಧಾರವನ್ನು ಪೂರೈಸುವ ಅಂತಿಮ ಘಟ್ಟದಲ್ಲಿದ್ದೇನೆ ಈಗ . ಎಲ್ಲವೂ ನಾನು ಅಂದುಕೊಂಡಂತೆ ಆದರೆ, ಮುಂದಿನ ವಸಂತ ಬರುವುದರೊಳಗೆ ನನ್ನ ಹೆಸರಿನ ಹಿಂದೆ  ‘ಡಾ.’ ಸೇರಿರುತ್ತೆ. ಅದೇ ಮರದ ಕೆಳಗೆ ನಿಂತ ಆಕೆಗೆ ನನ್ನ ಮುಖ ತೋರಿಸುವ ಹಂಬಲ.

This article has been published in VijayKarnataka, on 27 March 2017 edition

ಶನಿವಾರ, ಫೆಬ್ರವರಿ 18, 2017

ಸೋಮವಾರ, ಫೆಬ್ರವರಿ 13, 2017

ಹುಡುಗನೊಬ್ಬನ ಗಜಲ್‌ಗಳು: ಕ್ಯಾಮೆರಾ ಕನ್ಯೆಯ ಔಟ್ ಆಫ್ ಫೋಕಸ್ ಪ್ರೀತಿ

- ಅವಳದೊಂದು ಅದ್ಭುತ ಲೋಕ; ಅದರಲ್ಲಿ ನಾನಿದ್ದೆ ಎಂಬ ಹೆಮ್ಮೆಯಷ್ಟೇ


- ಪ್ರದ್ಯುಮ್ನ
ಮಹಾತ್ಮ ಗಾಂಧಿಯ ರಸ್ತೆಯ ಆ ಕಾಫಿ ಡೇಯ ಮಂದ ಬೆಳಕಿನಲ್ಲಿ ಅವಳ ಮುಖ ಅಸ್ಪಷ್ಟ ಕಾಣುತ್ತಿತ್ತು. ನಮ್ಮಿಬ್ಬರ ತಲೆಯೊಳಗೂ ವಿಚಾರಗಳ ಸ್ಪಷ್ಟತೆ ಇರಲಿಲ್ಲ. ಅಷ್ಟಕ್ಕೂ ಆ ಕಾಫಿ ಡೇ ನಮ್ಮಿಬ್ಬರಿಗೆ ಅಪರಿಚತವೇನೂ ಅಲ್ಲ. ಆದರೆ, ಅಲ್ಲಿರುವ ಎಲ್ಲ ಚೇರ್‌ಗಳೆಲ್ಲ ಭರ್ತಿಯಾಗಿದ್ದರೂ ನಾವಿಬ್ಬರೇ ಅಲ್ಲಿದ್ದೇವೆ ಎಂಬ ಭಾವನೆ ಮನೆ ಮಾಡಿತ್ತು. ಮೊದಲು ಅವಳು ಮಾತು ಆರಂಭಿಸಲಿ ಎಂದು ನಾನು; ನಾನೇ ಮೊದಲು ಮಾತನಾಡಲಿ ಎಂದು ಅವಳು. ಒಬ್ಬರಿಗೊಬ್ಬರು ಬಾಯಿ ಬಿಡುತ್ತಿಲ್ಲ. ಹೀಗೆ ಹತ್ತಾರು ನಿಮಿಷಗಳು ಸರಿದು ಹೋದವು. ಹಿನ್ನೆಲೆಯಲ್ಲಿ  ರಫಿ ಸಾಬ್ ಹಾಡುತ್ತಿದ್ದರು:
ತು ಇಸ್ ತರಹ ಸೇ ಮೇರಿ ಜಿಂದಗಿ ಮೇ ಶಾಮೀಲ್ ಹೈ
ಜಹಾಂ ಭೀ ಜಾಂವೂ ಯೇ ಲಗ್ತಾ ಹೈ ತೇರಿ ಮೆಹಫಿಲ್ ಹೈ
ನಮ್ಮಬ್ಬಿರ ನಡುವಿನ ಏಕಾಂತವನ್ನು ರಫಿ ಸಾಬ್‌ರ  ಈ ಹಾಡು ಮತ್ತಷ್ಟು ಘನ ಘೋರ ಸ್ಥಿತಿಗೆ ತಲುಪುವಂತೆ ಮಾಡುತ್ತಿತ್ತು. ಒಂದು ಹಂತದಲ್ಲಿ ಅವಳನ್ನು ಹಾಗೆಯೇ ಬಿಟ್ಟು ಎದ್ದು ಹೋಗಿ ಬಿಡಲೇ ಎಂಬ ಯೋಚನೆಯೂ ಸುಳಿದು ಹೋಯಿತು. ಮರುಗಳಿಗೆಯಲ್ಲೇ ಬೇಡ, ಇದೇ ಕೊನೆ ಭೇಟಿಯಾಗಬಹುದು. ಮತ್ತೆ ಅವಳು ಸಿಗುತ್ತಾಳೋ ಇಲ್ಲವೋ ಗೊತ್ತಿಲ್ಲ. ಕೊನೆಯ ಅವಕಾಶವನ್ನು ಹೀಗೆ ಫಲಪ್ರದವಿಲ್ಲದೆ ತಪ್ಪಿಸಿಕೊಳ್ಳುವುದು ಬೇಡ ಎಂದು ತಳವೂರಿ ಗಟ್ಟಿಯಾಗಿ ಕುಳಿತೆ. ಅಷ್ಟರಲ್ಲಿ ಆರ್ಡರ್ ಮಾಡಿದ್ದ ಕಾಫಿಯನ್ನು ಹಿಡಿದುಕೊಂಡು ಬಂದ ವೇಟರ್, ನಮ್ಮ ಮುಂದೆ ‘‘ಕಾಫಿ ಪ್ಲೀಸ್,’’  ಎಂದಾಗಲೇ, ಇಬ್ಬರು ‘‘ಇಲ್ಲಿಡಿ,’’ ಎಂದೆವು. ಬಹುಶಃ ಅದೊಂದು ನೆಪ ನಮ್ಮಿಬ್ಬರ ನಡುವೆ ಕವಿದಿದ್ದ ವೌನದ ಕತ್ತಲೆಯನ್ನು ಹೊಡೆದೊಡೆಸಿ, ಮಾತಿನ ಬೆಳಕು ಮೂಡಿಸಲು ಸಾಧ್ಯವಾಯಿತು ಅಂತ ಕಾಣುತ್ತದೆ.
‘‘ನಿಜವಾಗ್ಲೂ ನನ್ ಕ್ಷಮಿಸಿ ಬಿಡು. ಹಾಗಂತ, ನಾನು ಕ್ಷಮೆಗೆ ಯೋಗ್ಯಳು ಎಂದು ಹೇಳುತ್ತಿಲ್ಲ. ಆದರೆ, ಇದನ್ನು ಬಿಟ್ಟು ಬೇರೆ ಯಾವ ಪದಗಳು ಗೊತ್ತಾಗುತ್ತಿಲ್ಲ; ದಾರಿಯೂ ಕೂಡ,’’ ಎಂದು ಒಂದೇ ಉಸಿರಿನಲ್ಲಿ ಹೇಳಿದಳು. ಅಲ್ಲಿಗೆ ಎಲ್ಲವೂ ಸ್ಪಷ್ಟವಾಯಿತು. ಅವಳ ಮುಖವನ್ನೊಮ್ಮೆ ನೋಡಬೇಕು ಎಂದು ಕತ್ತು ಮೇಲೆತ್ತಿ ನೋಡಲು ಪ್ರಯತ್ನಿಸಿದೆ. ಅದಾಗಲೇ ಅವಳ ಕೆನ್ನೆ ಮೇಲೆ ಕಣ್ಣೀರು ಧಾರೆಯಾಗುತ್ತಿತ್ತು. ಆ ಕ್ಷಣದಲ್ಲಿ ಅವಳಿಗೇನು ಹೇಳಬೇಕು ಎಂದು ತೋಚದೆ ಮತ್ತೆ ನನ್ನ ಚಿತ್ತವನ್ನು ಕಾಫಿಯ ಮೇಲೆ ನೆಟ್ಟೆ. ಕಪ್‌ನಿಂದ ಮೇಲೇಳುತ್ತಿದ್ದ ಹಬೆಯ ಚಕ್ರಗಳು ನನ್ನಲ್ಲೇಳುತ್ತಿದ್ದ ದುಃಖದ ಅಲೆಗಳನ್ನೇ ಸಮೀಕರಿಸುತ್ತಿದ್ದವು.
ಕೇವಲ ಆರು ತಿಂಗಳ ಹಿಂದೆ ನಾವು ಹೀಗಿರಲಿಲ್ಲ; ನಮ್ಮ ನಡುವಿನ ಜಗತ್ತೇ ಬೇರೆಯದ್ದಿತ್ತು. ಅವಳೋ ಕ್ಯಾಮೆರಾ ಹೇಗಲಿಗೇರಿಸಿಕೊಂಡು ಹೊರಟಳೆಂದರೆ ಅದಕ್ಕೆ ದಿಕ್ಕು ದಿಸೆ ಇರುತ್ತಿರಲಿಲ್ಲ. ಹೋಗುವ ದಾರಿ ಯಾವುದು, ಅದು ಎಲ್ಲಿಗೆ ತಲುಪುತ್ತದೆ ಎಂಬುದನ್ನೂ ಯೋಚಿಸುತ್ತಿರಲಿಲ್ಲ. ಎದುರಿಗೆ ಸಿಗುವ ಪ್ರತಿ ವ್ಯಕ್ತಿ, ಗಿಡ, ಮರ, ಪ್ರಾಣಿ, ಪಕ್ಷಿ, ಮನೆ, ದಾರಿ ಬದಿಯ ಕಲ್ಲುಗಳನ್ನಿಟ್ಟು ಪೂಜೆ ಮಾಡುವ ದೇವಸ್ಥಾನವಲ್ಲದ ದೇವಸ್ಥಾನ.... ಹೀಗೆ ಕಣ್ಣಿಗೆ ಕಾಣುವ ಎಲ್ಲವೂ ಅವಳ ಕ್ಯಾಮೆರಾದಲ್ಲಿ ಬಂದಿಯಾಗುತ್ತಿದ್ದವು. ಅವಕ್ಕೊಂದು ಕವಿತೆಯ ಸ್ಪರ್ಶ ದಕ್ಕುತ್ತಿತ್ತು. ಅಷ್ಟೂಂದು ಸೃಜನಾತ್ಮಕವಾಗಿ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಳು. ಅವಳ ಕ್ಯಾಮೆರಾದಲ್ಲಿ ಬಂದಿಯಾಗುವ ಪ್ರತಿ ಚಿತ್ರವೂ ಒಂದೊಂದು ಕತೆ ಹೇಳುತ್ತಿದ್ದವು. ಹಾಗೆ ನೋಡಿದರೆ, ನೈಜದಲ್ಲಿದ್ದ ಚಿತ್ರಗಳಿಗಿಂತ ಆಕೆ ತೆಗೆದ ಚಿತ್ರಗಳು ಹೆಚ್ಚು ಗಮನ ಸೆಳೆಯುತ್ತಿದ್ದವು. ಗೊತ್ತಲ್ಲಿದಂತೆಯೇ ನಿಮ್ಮಳಗೇ ಇಳಿದು ಬಿಡುತ್ತಿದ್ದವು. ಅವಳ ಕ್ಯಾಮೆರಾ ‘ಕಣ್ಣ ಚಳಕ’ ಹಾಗಿತ್ತು. ಅವಳದೊಂದು ಅದ್ಭುತ ಲೋಕ; ಅದರಲ್ಲಿ ನಾನಿದ್ದೆ ಎಂಬ ಹೆಮ್ಮೆಯಷ್ಟೇ ನನ್ನ ಪಾಲಿಗೆ ಈಗ.
ಅಂಥವಳು ನನಗೆ ಸಿಕ್ಕಿದ್ದು ರೋಚಕವೇ. ನಮ್ಮಿಬ್ಬರು ನಡುವೆ ಅಂಥ ಸಾಮತ್ಯಗಳೇನಿಲ್ಲ. ನಾನೋ ಪುಸ್ತಕದ ಹುಳ. ಕೈಗೆ ಸಿಗುವ ಪುಸ್ತಕಗಳನ್ನು ಓದಲು ಕುಳಿತರೆ ಜಗತ್ತೇ ಮರೆತು ಹೋಗುತ್ತಿತ್ತು. ಆದರೆ, ನಮ್ಮಿಬ್ಬರನ್ನು ಬಂಧಿಸಿದ  ಏಕೈಕ ತಂತು; ‘ಮರಗಳ ಪ್ರೇಮ.’ ಅವಳೂ ಅಷ್ಟೇ ಅಭಿವೃದ್ಧಿಯ ನೆಪದಲ್ಲಿ ನಗರದಲ್ಲಾಗುತ್ತಿರುವ ಮರಗಳ ಮಾರಣಹೋಮಕ್ಕೆ ಆಕ್ರೋಶಿತಗೊಳ್ಳುತ್ತಿದ್ದಳು. ಅದನ್ನು ವಿರೋಧಿಸಿ ನಡೆಯುವ ಪ್ರತಿಭಟನೆ, ಚಳವಳಿಗಳೆನ್ನೆಲ್ಲ ತನ್ನ ಕ್ಯಾಮೆರಾ ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದಳು. ಇಂಥದ್ದೇ ಒಂದು ಪ್ರತಿಭಟನೆ ವೇಳೆ, ಆಕೆ ಪರಿಚಯವಾಗಿದ್ದು. ಅವಳೇನೂ ಅಂಥ ಹೇಳಿಕೊಳ್ಳುವಂಥ ಚೆಲುವೆಯಲ್ಲ. ಆದರೆ, ಅವಳಿಗಿರುವ ಬದ್ಧತೆ, ಪ್ಯಾಶನ್, ಆತ್ಮವಿಶ್ವಾಸ, ಪರಿಸರ ಕಾಳಜಿ ಅವಳತ್ತ ತುಸು ಹೆಚ್ಚೇ ಯೋಚಿಸುವಂತೆ ಮಾಡಿದ್ದವು. ಪರಿಚಯವಾಗಿದ್ದಾಗ ಹಾಯ್, ಬಾಯ್‌ಗಷ್ಟೇ ಸಿಮೀತವಾಗಿದ್ದ ಸಂಬಂಧ ಅದ್ಯಾವಾಗ ಸ್ನೇಹಕ್ಕೆ ತಿರುಗಿ ಮತ್ತೆ ಪ್ರೇಮಕ್ಕೆ ವಾಲಿತು ಎಂದು ಹೇಳುವುದು ಕಷ್ಟ. ಪ್ರೇಮ ಎಂದರೆ, ‘ಆಗುವುದಲ್ಲ’ ಅದು ‘ಸಂಭವಿಸುವುದು’ ಎಂದು ಅದ್ಯಾರೋ ಹೇಳಿದ್ದರು; ನಾನು ನಂಬಿರಲಿಲ್ಲ. ಆದರೆ ಈಗ ನಂಬದೇ ವಿಧಿಯಿಲ್ಲ. ಹೀಗೆ ಸಂಭವಿಸಿದ ಪ್ರೇಮಕ್ಕೆ ನಂಬಿಕೆಯೇ ಮೂಲದ್ರವ್ಯ. ನಮ್ಮಿಬ್ಬರ ಮಧ್ಯೆ ಈ ಮೂಲದ್ರವ್ಯಕ್ಕೇನೂ ಕೊರತೆ ಇರಲಿಲ್ಲ. ಸಂಭವಿಸಿದ ಪ್ರೇಮ ಹೆಮ್ಮರವಾಗಿ ಬೆಳೆದಿತ್ತು. ಅದರ ತಂಪನೆಯ ನೆರಳಲ್ಲಿ ಇಡೀ ಜಗತ್ತೆಲ್ಲ ಸುಂದರ ತಿಳಿ ಕೊಳದಂತಿತ್ತು. ಅಲ್ಲಿ ಕಷ್ಟಗಳೆಂಬ, ಅಪನಂಬಿಕೆಗಳೆಂಬ ಬಿಸಲಿನ ಪ್ರಖರ ಕಿರಣಗಳು ನಮ್ಮನ್ನು ತಾಕುತ್ತಿರಲಿಲ್ಲ. ಎಲ್ಲವೂ ಚೆಂದ ಇತ್ತು. ಮನವರಿತ ಗೆಳತಿ ಬಳಿ ಇರಲು ಇನ್ನೇನು ಬೇಕು?
ಹೀಗೆ ಎಲ್ಲವೂ ಚೆಂದ ಇದ್ದಾಗಲೇ, ಸರಳ ರೇಖೆಯಲ್ಲಿ ಜೀವನ ಸಾಗುತ್ತಿರುವಾಗಲೇ ಧುತ್ತನೇ ಎದುರಾಗುವ ಸಂಕಷ್ಟಗಳು ನಿಮ್ಮನ್ನು ಇನ್ನಿಲ್ಲದಂತೆ ಹೈರಾಣು ಮಾಡುತ್ತವೆ. ಪ್ರೇಮ ಪ್ರಕರಣಗಳೆಲ್ಲವೂ ಯಶಸ್ವಿಯಾಗಬೇಕೆಂದೇನೂ ರೂಲ್ಸ್ ಇಲ್ಲವಲ್ಲ. ಬಹುಶಃ ಈ ರೂಲ್ಸ್ ನಮ್ಮಿಬ್ಬರಿಗೂ ತುಸು ಹೆಚ್ಚೇ ಅಪ್ಲೈ ಆಯಿತು ಅಂತಾ ಕಾಣುತ್ತದೆ. ಈಗಲೂ ನನಗೆ ನಿರ್ದಿಷ್ಟ ಕಾರಣಗಳು ಹೊಳೆಯುತ್ತಿಲ್ಲ. ನಮ್ಮಿಬ್ಬರ ನಡುವಿನ ಬಾಂಧವ್ಯಕ್ಕೆ ತೊಡಕಾಗಿದ್ದು ಏನು? ಯಾತಕ್ಕಾಗಿ ನಾವಿಬ್ಬರೂ ಈಗ ಒಬ್ಬರನ್ನೊಬ್ಬರನ್ನು ಬಿಟ್ಟು ಅಗಲುವ ಸ್ಥಿತಿಗೆ ಬಂದು ಬಿಟ್ಟಿದ್ದೇವೆ? ಇಂಥ ಪರಿಸ್ಥಿತಿಗೆ ಅಸಲಿಗೆ ಕಾರಣಗಳೇನಾದರೂ ಇವೆಯೇ... ಎಷ್ಟೇ ಯೋಚಿಸಿದರೂ ಉತ್ತರ ಸಿಗುತ್ತಿಲ್ಲ. ನಮ್ಮಿಬ್ಬರನ್ನು ಬಂಧಿಸಿದ ‘ಮರಗಳ ಪ್ರೇಮ’ ಎಂಬ ಬದ್ಧತೆಯೇಕೆ ಇಷ್ಟು ಬೇಗ ಒಣಗಿ ಹೋಯಿತು? ಆದರೆ, ಈಗಂತೂ ಕವಲು ದಾರಿಯಲ್ಲಿ ನಿಂತಿದ್ದೇವೆ. ಸರಳ ರೇಖೆಯ ಜೀವನ, ವಕ್ರರೇಖೆಯಲ್ಲಿ ಅಂತ್ಯವಾಗುತ್ತಿದೆ ಎಂಬುದಂತೂ ಸತ್ಯ. ಇದಕ್ಕೆ ತಾನೇ ಕಾರಣ ಎಂದು, ಕಾರಣ ಹೇಳದೆ ಹೊರಟು ಹೋಗುವ ಸ್ಥಿತಿಯಲ್ಲಿ ಅವಳಿದ್ದಾಳೆ.
ಪ್ರೇಮ ಸಂಬಂಧ ಕಡಿದುಕೊಳ್ಳುವುದಕ್ಕೆ ಈ ಕಾಫಿ ಡೇ ವೇದಿಕೆಯಾಗಿದೆಯಷ್ಟೇ. ಅವಳಿಗೂ ಗೊತ್ತು ನಂಬಿಕೆ ಬುನಾದಿಯ ಮೇಲೆ ಬೆಳೆದ ಪ್ರೇಮವನ್ನು ಕತ್ತರಿಸಿಕೊಳ್ಳುವುದು ಅಷ್ಟು ಸರಳವಲ್ಲ. ಅವಳ ಮುಖದ ಮೇಲೆ ಎದ್ದೇಳುತ್ತಿದ್ದ ಭಾವನೆಗಳೇ ಎಲ್ಲವನ್ನೂ ಹೇಳುತ್ತಿದ್ದವು. ಆದರೆ, ಅವಳು ನಿಶ್ಚಿಯಿಸಿದ್ದಾಳೆ, ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆಂಬುದಂತೂ ‘‘ಕ್ಷಮಿಸಿ ಬಿಡು,’’ ಎಂದು ಹೇಳುವಾಗಲೇ ಮನವರಿಕೆಯಾಗಿತ್ತು. ಇನ್ನು ಅವಳಿಗೆ ಕಾರಣ ಕೇಳಿಯೂ ಉಪಯೋಗವಿಲ್ಲ. ತಡೆಯುವುದು ಅಸಾಧ್ಯದ ಮಾತು. ಅವಳ ಜೀವನ ಅವಳದ್ದು; ನನ್ನ ಜೀವನ ನನ್ನದು. ಹಾಗಂತ, ಅವಳ ನೆನಪುಗಳಿಂದ ದೂರ ಉಳಿಯತ್ತೇನೆಂದು ಭರವಸೆಯನ್ನಾದರೂ ಹೇಗೆ ಕೊಡಲಿ? ನೆನಪುಗಳಿಲ್ಲದಿದ್ದರೆ ಜೀವನಕ್ಕೇನು ಅರ್ಥವಿದೆ? ಒಣಗಿ ಹೋದ ಬೊಡ್ಡೆಯಿಂದ ಚಿಗುರು ಮತ್ತೆ ಮೂಡದೇ? ನಮ್ಮಿಬ್ಬರ ಜೀವನದಲ್ಲಿ ವಸಂತಗಾನ ಮತ್ತೆ ಶುರುವಾಗಬಹುದು ಎಂದು ಹೇಳಲು ಹೊರಟವನ ಮಾತುಗಳು ಗಂಟಲಲ್ಲೇ ಉಳಿದವು.
ಕಣ್ಣೀರು ಒರೆಸಿಕೊಳ್ಳುತ್ತಾ ಆಕೆ ಎದ್ದು ಹೋಗುವ ಹೊತ್ತಿಗೆ, ಟೇಬಲ್ ಮೇಲಿದ್ದ ಕಾಫಿ ತಣ್ಣಗಾಗಿತ್ತು; ನನ್ನೊಳಗೂ ಅದೇ ಭಾವ. ಹಿನ್ನೆಲೆಯಲ್ಲಿ, ಅದೇ ರಫಿ ಸಾಬ್ ತನ್ನ ತಣ್ಣನೆಯ ದನಿಯ ಹಾಡುತ್ತಿದ್ದರು:
ಇಸ್ಸ ಭರಿ ದುನಿಯಾ ಮೇಂ, ಕೋಯಿ ಭಿ ಹಮಾರಾ ನ ಹುವಾ
ಗೈರ ತೋ ಗೈರ ಹೈ, ಅಪ್ನೋಂ ಕಾ ಸಹಾರಾ ನ ಹುವಾ...




This article has been published in VijayKarnataka, on 13rd Feb 2017 edition

ಶುಕ್ರವಾರ, ಜನವರಿ 13, 2017

ರಾತ್ರಿಗಳು...

ಈ ರಾತ್ರಿಗಳಿಗೇಕಿಲ್ಲ
ಕತ್ತಲೆಯ ಭಯ?
ಚಂದ್ರ, ನಕ್ಷತ್ರಗಳದ್ದೇ
ಇರಬೇಕು ಅಭಯ!
***
ಈ ರಾತ್ರಿಯು ವಿಚಿತ್ರ
ತರುವುದು ಅವಳ
ನೆನಪು ಸಚಿತ್ರ

ಸೋಮವಾರ, ಜನವರಿ 2, 2017

ಹುಡುಗನೊಬ್ಬನ ಗಜಲ್‌ಗಳು: ಅವಳ ಕಣ್ಣಗಳಲ್ಲಿ ಕಾಂತಿ ತುಂಬುವ ಹಂಬಲ

- ಆಕೆ ಬಿಟ್ಟು ಹೋದ ಗಿಫ್ಟ್‌ನೊಂದಿಗೆ ಮತ್ತೆ ಹೊಸ ವರುಷದ ನಿರೀಕ್ಷೆಯಲ್ಲಿ....

- ಪ್ರದ್ಯುಮ್ನ
ಇಡೀ ಜಗತ್ತೇ ಹೊಸ ವರ್ಷದ ಆಚರಣೆಯ ಅಮಲಿನಲ್ಲಿ ಮುಳುಗಿದೆ. ಮಹಾನಗರಗಳ ಪಬ್ಬು, ಕ್ಲಬ್ಬುಗಳಲ್ಲಿ ಮದ್ಯಾರಾಧನೆಯೂ, ಬ್ಯಾಚುಲರ್‌ಗಳ ರೂಮ್‌ಗಳ ತುಂಬ ಬೀಯರ್- ರಮ್ ವಾಸನೆಯೂ, ರಸ್ತೆಗಳ ತುಂಬೆಲ್ಲ ಸೈಲೆನ್ಸರ್ ತೆಗೆದು ಕರ್ಣ ಕರ್ಕಶವಾಗಿ ಚೀರುತ್ತಾ ಓಡುವ ಬೈಕ್‌ಗಳೂ, ಅವುಗಳನ್ನು ಓಡಿಸುವ ನಶೆಯ ಸವಾರರೂ, ಅವರ ಬಾಯಿಂದ ಅಷ್ಟೇ ವಿಕಾರವಾಗಿ ಹೊರಡುವ ಹ್ಯಾಪಿ ನ್ಯೂ ಇಯರ್ ಎಂಬ ಪದಗಳೂ, ಆಕಾಶದ ತುಂಬ ಬಿರುಸು ಬಾಣ ಚಿತ್ತಾರಗಳೂ, ಆ ಸಂತೋಷದ ಕ್ಷಣಗಳೂ... ಇವೆಲ್ಲವೂ ಒಂದು ರೀತಿಯ ಕೊಲಾಜ್. ಇಂಥ ಚಿತ್ರಿಕೆಗಳಿಗೆ ಸಾವಿಲ್ಲ. ಹೊಸ ವರ್ಷವೆಂಬ ಕ್ಯಾನ್ವಾಸ್‌ನಲ್ಲಿ ಪ್ರತಿ ಬಾರಿಯೂ ಒಡಮೂಡಿ, ಸರಿದು ಹೋಗುವ ಚಿತ್ರಗಳು. ಇವಕ್ಕೆ ಕಲಾವಿದನ ಹಂಗಿಲ್ಲ. ಆದರೆ, ಇಂಥ ಸಂತೋಷದ ಕ್ಷಣಗಳನ್ನು ಆಸ್ವಾದಿಸುವ, ರಸಗಳಿಗೆಗಳನ್ನು ಸವಿಯುವ ಸಾಮರ್ಥ್ಯವನ್ನು ನಾನು ಕಳೆದುಕೊಂಡು ಸುಮಾರು ವರ್ಷಗಳಾದವು. ನೀಲಾಕಾಶದಲ್ಲಿ ಚಿತ್ತಾರದ ಸುರುಳಿಗಳು ಬಿಚ್ಚಿಕೊಂಡಾಗಲೆಲ್ಲ ನನ್ನೊಳಗೂ ಭಾವನೆಗಳ ಉಬ್ಬರ. ಅದೆಷ್ಟೋ ಹೊಸ ವರ್ಷಗಳ ಬಂದರೂ, ಹಳೆಯ ನೆನಪಗಳನ್ನೆಲ್ಲ ಗಂಟೆ ಮೂಟೆ ಕಟ್ಟಿಡಲು ಸಾಧ್ಯವಿಲ್ಲ. ಹೊಸ ಹೊಸ ವಸಂತ ತೆರೆದುಕೊಂಡಾಗಲೆಲ್ಲ ನೆನಪುಗಳ ಆಯುಷ್ಯ ಜಾಸ್ತಿಯಾಗುತ್ತಲೇ ಹೋಗುತ್ತದೆ. ಈ ನೆನಪುಗಳೇ ಹಾಗೇ, ಅವುಗಳಿಗೆ ಸಾವಿಲ್ಲ, ಬಣ್ಣವಿಲ್ಲ, ನಿರ್ಗುಣ, ನಿರಾಕಾರ! ಆದರೆ, ಅವುಗಳೊಳಗೇ ತುಂಬಿರುವ ನೋವಿನ ಆಲಾಪನೆ ಮಾತ್ರ ಎಂದಿಗೂ ಸಹಿಸಲು ಅಸಾಧ್ಯ.
ಹೊಸ ವರ್ಷದ ಹಿಂದಿನ ರಾತ್ರಿ ಎಂದರೆ; ನೋವಿನ ಕರಾಳ ರಾತ್ರಿ. ಆ ರಾತ್ರಿಯನ್ನು ನೆನೆಸಿಕೊಂಡರೇ ಈಗಲೂ ಮೈಯಲ್ಲಿ ನಡುಕ. ಉನ್ಮಾದದಲ್ಲಿ ಮಾಡಲು ಹೋದ ಹುಡುಗಾಟಿಕೆ ಇಡೀ ಜೀವನವನ್ನು ನೋವಿನ ಸರಪಳಿಯಲ್ಲಿ ಬಂಧಿಸಿಟ್ಟಿದೆ. ಆಕೆ ಬಿಟ್ಟು ಹೋದ ಹೊಸ ವರ್ಷದ ಗಿಫ್ಟ್ ಬಾಕ್ಸ್ ಇನ್ನೂ ಹಾಗೆಯೇ ಇದೆ; ಭದ್ರವಾಗಿದೆ. ಅದರೊಳಗೇನಿದೆ? ಗೊತ್ತಿಲ್ಲ. ಅದನ್ನು ಒಡೆದು ನೋಡುವ ಸಾಹಸ ಮಾಡಲು ನನ್ನಿಂದ ಸಾಧ್ಯವಿಲ್ಲ. ಅದು ಹಾಗೆಯೇ ಇರಬೇಕು; ಅದು ಆಕೆಯ ನಿಷ್ಕಲ್ಮಶ ಪ್ರೀತಿಯ ಕುರುಹು. ಅದರಲ್ಲಿ ನನಗಾಗಿ ಏನು ಕೊಟ್ಟಿರಬಹದು ಎಂಬೆಲ್ಲ ಲೆಕ್ಕಾಚಾರಗಳೇ, ಊಹೆಗಳೇ ನನ್ನೊಳಗೇ ಆಕೆಯನ್ನು ಜೀವಂತವಾಗಿಟ್ಟಿವೆ. ಒಡೆದು ನೋಡಿದರೆ ಊಹೆಗೂ, ಕಲ್ಪನೆಗೂ ಆಕಾರ ದಕ್ಕಿಬಿಡುತ್ತದೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ಅದು ಹಾಗೆಯೇ ಇದ್ದರೆ ಚೆನ್ನ. ನಿಗೂಢ ಕಾಣಿಕೆಯಾಗಿ, ನನ್ನನ್ನು ಸದಾ ಅವಳ ನೆನಪಿನಲ್ಲಿರುವಂತೆ ಮಾಡುವ ಏಕೈಕ ಸಾಧನವದು. ಮೋಸ್ಟಲೀ... ನನ್ನೊಂದಿಗೇ ಅದರ ಗುಟ್ಟು ಹೊರಟು ಹೋಗಬಹುದು.
ನಾವಾದರೂ ಹೇಗಿದ್ದವು? ಸ್ವರ್ಗಕ್ಕೆ ಕಿಚ್ಚು ಹಚ್ಚುವ ಪ್ರೀತಿಯದು. ನಮ್ಮನ್ನು ನೋಡಿ ಹಲುಬಿದವರು ಅನೇಕರು. ಅದೊಂದು ದಿವ್ಯ ಅನುಭೂತಿ. ಪ್ರೀತಿ ಕೊಟ್ಟು ಪ್ರೀತಿಯನ್ನು ಪಡೆದಾಗಲೇ ದಕ್ಕುವ ಅನನ್ಯ ಅನುಭವವದು; ಅದಕ್ಕೇ ಸಾಟಿಯೇ ಇಲ್ಲ, ಅವಳಿಗೂ. ಸದಾ ಚಟುವಟಿಕೆಯ ಚಿಲುಮೆ ಅವಳು. ಮುಂಗರುಳು ಸರಿಸುತ್ತಾ, ಪಟಪಟನೆ ಮಾತನಾಡುವ ಅವಳನ್ನು ನೋಡುವುದೇ ಚಂದ. ಅವಳ ಬಟ್ಟಲುಗಣ್ಣುಗಳಲ್ಲಿ ನೂರಾರು ಭರವಸೆ, ಏನೇನೋ ಮಾಡುವ ಹುಮ್ಮಸ್ಸು, ಒಮ್ಮೆಲೇ ನಭಕ್ಕೆ ನೆಗೆಯುವ ಅತ್ಯುತ್ಸಾಹ. ಅವಳನ್ನು ನೋಡಿದ ಯಾರಿಗಾದರೂ ಜೀವನೋತ್ಸಾಹ ಇಮ್ಮಡಿಯಾಗುವುದರಲ್ಲಿ ಸಂಶಯವೇ ಇರಲಿಲ್ಲ. ಗಗನಸಖಿಯಾಗಿ ವಿಮಾನದಲ್ಲಿ ಪ್ರಪಂಚ ಪರ್ಯಟನೆ ಮಾಡುವ ಅದಮ್ಯ ಬಯಕೆ ಆಕೆಯದ್ದು. ಆದರೆ?
ಅವಳೆಲ್ಲ ಕನಸುಗಳನ್ನು, ಹೆಬ್ಬಯಕೆಗಳನ್ನು ನಾನೇ ಕೊಂದು ಹಾಕಿದಿನಾ? ಇಂಥದೊಂದು ಗಿಲ್ಟ್ ಕಳೆದ ಐದು ವರ್ಷಗಳಿಂದ ಕಾಡುತ್ತಲೇ ಇದೆ. ನನ್ನಿಂದಾಗಿ ಅವಳ ಬದುಕೇ ಬರ್ಬಾದಾಗಿ ಹೋಯಿತು. ನನ್ನ ಒಂದು ಬೇಜವಾಬ್ದಾರಿ, ಅವಳ ಜೀವನದ ಪಥವನ್ನೇ ಬದಲಿಸಿ ಮುಂದೆ ದಾರಿಯಿಲ್ಲದ ಅಂಚಿನಲ್ಲಿ ತಂದು ನಿಲ್ಲಿಸಿದೆ ಅವಳನ್ನು. ನನ್ನ ಕನಸುಗಳನ್ನೂ ತನ್ನ ಕನಸಗಳೆಂದೇ ಭಾವಿಸಿ, ಸಂಭ್ರಮಸುತ್ತಿದ್ದ ಆಕೆಯಲ್ಲಿ ಕಣ್ಣಗಳಲ್ಲಿ ಆಕೆಯದ್ದೇ ಕನಸುಗಳಿಲ್ಲ. ಅವೆಲ್ಲವೂ ಮುರುಟಿ ಹೋಗಿವೆ. ಅವಳ ಮುಂದೆ ಹೊಸ ವರ್ಷದ ಆಚರಣೆಯ ಬಾಣ ಬಿರುಸಗಳು ಸೃಷ್ಟಿಸುವ ಚಿತ್ತಾರಗಳು ಕೇವಲ ಢಂ.. ಢಂ.. ಎನ್ನುವ ಶಬ್ಧವಷ್ಟೇ. ಅವುಗಳಿಗೆ ಆಕಾರವಿಲ್ಲ, ಸೌಂದರ್ಯವಿಲ್ಲ.
ಅಂದು ಹೀಗೆಯೇ, ಹೊಸ ವರ್ಷದ ಅಮಲಿನಲ್ಲಿ ತೇಲುತ್ತಾ, ಸಂತೋಷದ ರಣಕೇಕೆ ಹಾಕುತ್ತಾ ಹೊರಟಿತ್ತು ನಮ್ಮ ಟೀಮ್. ನನ್ನ ಬೈಕಿನಲ್ಲಿ ಹಿಂದೆ ಕುಳಿತ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾಕೆ ಗೊತ್ತಾ? ಮುಂದಿನ ವಾರ ಅವಳು ಗಗನಸಖಿಯಾಗಿ ಆಕಾಶದಲ್ಲಿ ಹಾರಾಡುವವಳಿದ್ದಳು. ಏರ್‌ಲೈನ್ಸ್ ಕಂಪನಿಯೊಂದು ಆಕೆಗೆ ಆಫರ್ ಲೆಟರ್ ಕೂಡ ಕೊಟ್ಟಿತ್ತು. ಅದೇ ಹುಮ್ಮಸ್ಸಿನಲ್ಲಿ ನನಗೊಂದು ಪುಟ್ಟ ಆ ‘ಗಿಫ್ಟ್’ ಕೊಟ್ಟಿದ್ದಳು. ನಮ್ಮ ಇಡೀ ಟೀಂಗೆ ಅವಳದ್ದೇ ಪಾರ್ಟಿ. ಎಂಟೊಂಭತ್ತು ಜನರಿದ್ದ ನಾವು, ಹೊಸ ವರ್ಷಕ್ಕೆ ಸೇರುವ ಆ ಬೃಹತ್ ರೋಡಿನಲ್ಲಿ ಕುಣಿದು ಕುಪ್ಪಳಿಸಲು ಅಷ್ಟೇ ವೇಗವಾಗಿ ಹೊರಟಿದ್ದವು. ಗಂಟಲೊಳಗೇ ಇಳಿದು ಹೋಗಿದ್ದು ತುಸು ವಿಸ್ಕಿ ನನ್ನನ್ನು ಸಂಪೂರ್ಣವಾಗಿ ನಿಯಂತ್ರಣ ತೆಗೆದುಕೊಳ್ಳುವ ಸನ್ನಾಹದಲ್ಲಿತ್ತು. ಆದರೆ, ಹುಚ್ಚು ಧೈರ್ಯದಿಂದ ಬೈಕಿ ಆ್ಯಕ್ಸಿಲೆಟರ್ ಕಿವಿಯೊತ್ತಿ ಬುರ್ರೆಂದು ಹೊರಟ ನಮಗೆ, ಮುಂದಾಗುವ ಅಪಘಾತದ ಮುನ್ಸೂಚನೆಯೇ ಇರಲಿಲ್ಲ. ಹಿಂದಿದ್ದ ಅವಳ ದನಿಯಲ್ಲಿ ಸಂತೋಷ ಉನ್ಮಾದವಿತ್ತು, ಕನಸು ಸಾಕಾರಗೊಂಡು ಸಂಭ್ರಮವಿತ್ತು. ಪ್ರೀತಿಸುವವನ ತೋಳು ತೆಕ್ಕೆಯಲ್ಲಿ ಬಂಧಿಯಾಗುವ  ದಿನಗಳ ಬಗ್ಗೆ ಲೆಕ್ಕ ಹಾಕುತ್ತಲೇ, ‘‘ನೋಡು ಇನ್ನೆರಡು ವರ್ಷದಲ್ಲಿ ನಾವಿಬ್ಬರು ಮದ್ವೆ ಆಗೋಣ. ಅಷ್ಟರಲ್ಲಿ ನಾನು ಇಡೀ ಜಗತ್ತು ಸುತ್ತಿ ಬರುತ್ತೇನೆ,’’ ಎಂದು ಹೇಳುತ್ತಿದ್ದ ಆಕೆಯ ಮಾತುಗಳು ಈಗಲೂ ಕಿವಿಯಲ್ಲಿ ಅಷ್ಟೇ ಗಟ್ಟಿಯಾಗಿ ಕೇಳಿಸುತ್ತಲೇ ಇರುತ್ತವೆ. ಆಕೆಯ ಮಾತುಗಳಿಗೆಲ್ಲ ‘‘ಎಸ್ ಬಾಸ್,’’ ಎನ್ನುತ್ತಲೇ ಆ್ಯಕ್ಸಿಲೆಟರ್ ತಿರುವುತ್ತಾ ಹೋದವನಿಗೆ, ಎದುರಾಗಿದ್ದು ನಮ್ಮಂತೆಯೇ ಸಂತೋಷದ ಅಮಲಿನಲ್ಲಿ ತೇಲಾಡುತ್ತಿದ್ದ ಜೋಡಿ ಇದ್ದ ಬೈಕ್. ತಪ್ಪು ಅವರದ್ದಾ..  ನಾನು ಮಾಡಿದ್ದು ತಪ್ಪಾ ಎನ್ನುವುದಕ್ಕಿಂತ, ಏನು ಆಗಬಾರದಿತ್ತೋ ಅದು ಆಗಿ ಹೋಗಿತ್ತು. ನಮ್ಮಿಬ್ಬರ ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ, ನಾವಿಬ್ಬರು ರೋಡ್ ಡಿವೈಡರ್‌ಗೆ ಬಡಿದಿದ್ದಾಯಿತು. ಅಷ್ಟೇ ಗೊತ್ತು. ಮುಂದೆನಾಯ್ತು? ಕಣ್ತೆರೆದು ನೋಡಿದಾಗ, ನಾವಿದ್ದದ್ದು ಆಸ್ಪತ್ರೆಯಲ್ಲಿ. ತಲೆಗೆ ಸ್ವಲ್ಪ ಪೆಟ್ಟು ಬಿದ್ದು, ಅಂಥ ಅಪಾಯವೇನಾಗಿರಲಿಲ್ಲ ನನಗೆ. ಆದರೆ, ಅವಳಿಗೆ? ಆಕೆ ತನ್ನ ಕಣ್ಣು ಕಾಂತಿಯನ್ನೇ ಕಳೆದುಕೊಂಡಿದ್ದಳು. ಮಿರರ್‌ನ ಚೂರುಗಳ ಆಕೆಯ ದೃಷ್ಟಿಯನ್ನು ತೆಗೆದು ಹಾಕಿದ್ದವು. ಅಲ್ಲಿಗೆ, ಆಕೆಯ ಇಡೀ ಕನಸು ಕತ್ತಲೆಯಲ್ಲಿ ಮುಳುಗಿ ಹೋಗಿತ್ತು. ಅದಕ್ಕೆ ನಾನು ಕಾರಣನಾದ ಗಿಲ್ಟು! ಹೊಸ ವರ್ಷದ ಸಂಭ್ರಮ ಈಗಲೂ ನನಗೆ ಅದೇ ನೋವನ್ನು ನೆನಪಿಸುವ, ಮಾಯದ ಗಾಯವನ್ನು ಮತ್ತೆ ಕೆದುಕುವ ದಿನವಷ್ಟೆ. ನನ್ನ ಬೇಜವಾಬ್ದಾರಿಯ ರೈಡಿಂಗ್ ಆಕೆಯ ಜೀವನದ ಮೇಲೆಯೇ ಭಾರಿ ಸವಾರಿ ಮಾಡಿ ಬಿಟ್ಟಿತ್ತು. ಅವಳೀಗ ಮೊದಲಿನಂತಿಲ್ಲ. ಅವಳಿಗೇ ಇಡೀ ಜಗತ್ತೇ ಕತ್ತಲು. ಆ ಗಾಢ ಕತ್ತಲಿನಲ್ಲಿ ನಾನು ಮಾತ್ರ ಮಿಣುಕುವ ದೀಪ ಅವಳಿಗೆ. ಆದರೆ, ಅವಳಪ್ಪನ ಸಿಟ್ಟಿಗೆ ಸುಮ್ಮನಿದ್ದಾಳೆ; ಅದ ಸಹಜವೂ ಕೂಡ.
ಅವಳು ಜತೆಯಲ್ಲಿ ಇಲ್ಲದಿರಬಹುದು. ಆದರೆ, ಆಕೆ ಕೊಟ್ಟ ಹೋದ ದಿವ್ಯ ಪ್ರೀತಿ, ಅನನ್ಯ ಅನುಭೂತಿ ಇದೆ. ಆಕೆ ಬಿಟ್ಟು ಹೋಗಿರುವ ನೂರಾರು ನೆನಪುಗಳಿವೆ. ಅಷ್ಟು ಸಾಕು. ತೀರಾ ದುಃಖವಾದಾಗ, ಆಕೆಯ ಆ ‘ಗಿಫ್ಟ್ ’ ಮತ್ತೆ ನನ್ನಲ್ಲಿ ಅದಮ್ಯ ಪ್ರೀತಿಯನ್ನು ಸ್ಪುರಿಸುತ್ತದೆ. ನೆನಪುಗಳಿಗೆ ಜೀವ ತುಂಬುತ್ತದೆ. ಆ ಕರಾಳ ರಾತ್ರಿಯ ಕಹಿ ನೆನಪನ್ನು ಮರೆ ಮಾಚುತ್ತದೆ. ಅದುವೇ ಆಕೆಯ ಪ್ರೀತಿಯ ದಿವ್ಯ ಸಾನ್ನಿಧ್ಯವನ್ನು ಕಲ್ಪಿಸುತ್ತದೆ. ನಾನು ಈಗಲೂ ಅವಳ ನಿರೀಕ್ಷೆಯಲ್ಲಿದ್ದೇನೆ, ಆಕೆ ನನ್ನ ಮೇಲಿಟ್ಟಿರುವ ಪ್ರೀತಿಗೆ ಅವರಪ್ಪ ಸೋಲುತ್ತಾನೆಂಬ ನಿರೀಕ್ಷೆಯಲ್ಲಿ ಆಕೆಯೂ ಇದ್ದಾಳೆ, ನಾನು ಕೂಡ. ಆ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಆಕೆಗೆ ಜೀವನಪೂರ್ತಿ ಕಣ್ಣಾಗಿ, ಆಕೆ ಕಂಡ ಕನಸಗಳಿಗೆ ನಾನು ಜೀವ ತುಂಬುತ್ತೇನೆ. ಅವಳ ಕಣ್ಣಲ್ಲಿ ಕಾಂತಿ ತುಂಬುವ ಹಂಬಲ ನನ್ನದು.



This article has published in VijayKarnataka, on 2nd jan 2017 edition

ಸೋಮವಾರ, ನವೆಂಬರ್ 21, 2016

-ಹುಡುಗನೊಬ್ಬನ ಗಜಲ್‌ಗಳು- ನೋಟು ರದ್ದಾಗಿರಬಹುದು; ನನ್ನ ಪ್ರೀತಿಯಲ್ಲ

- ಆಕೆಯ ನೆನಪಿನ ಕುರುಹಾಗಿ, ಸಾಫಲ್ಯಗೊಳ್ಳದ ಪ್ರೇಮದ ಸಂಕೇತವಾಗಿ ನನ್ನಲ್ಲಿದೆ ಆ ನೋಟು

- ಪ್ರದ್ಯುಮ್ನ
ಇವತ್ತ್ಯಾಕೆ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ ಎನ್ನುತ್ತಾ ಹಾಗೆಯೇ ಟಿವಿ ನೋಡುತ್ತಾ ಕುಳಿತೆ. ಕೊನೆಗೆ, ‘‘ಇಂದು ಮಧ್ಯ ರಾತ್ರಿಯಿಂದಲೇ ನಿಮ್ಮ ಕೈಯಲ್ಲಿರುವ 500 ರೂ. ಮತ್ತು 1000 ರೂ. ನೋಟುಗಳಿಗೆ ಮಾನ್ಯತೆ ಇಲ್ಲ. ಅವು ಕೇವಲ ಕಾಗದದ ಚೂರು,’’ ಎಂದು ಮೋದಿ ಹೇಳುತ್ತಿದ್ದಂತೆ, ಅವರು ದೇಶ ಉದ್ದೇಶಿಸಿ ಮಾತನಾಡುತ್ತಿದ್ದರ ಹಿಂದಿನ ಮರ್ಮ ಅರ್ಥವಾಯಿತು. ಅಂದರೆ, ಇನ್ನು ನಮ್ಮ ನೋಟುಗಳೆಲ್ಲ ರದ್ದಿ. ಮನೆಯಲ್ಲಿ ಕಂತೆ ಕಂತೆ ಕಪ್ಪು ಹಣ ಇಟ್ಟುಕೊಂಡವರ ಗತಿ ಹರೋಹರ ಎಂದ ಖುಷಿಯಾದೆ. ಹಾಗೆಯೇ ಮರುಕ್ಷಣದಲ್ಲಿ ನನ್ನ ಹತ್ತಿರ ಎಷ್ಟಿದೆ ಎಂದು ವಾಲೆಟ್ ತೆಗೆದು ನೋಡಿದೆ; ನಾಲ್ಕೈದು 100 ರೂ.ನೋಟಗಳಿದ್ದವು ಮತ್ತು ಆ ‘1000 ರೂ. ನೋಟು’. ಎರಡು ದಿನದ ಮಟ್ಟಿಗೆ ತೊಂದರೆಯಿಲ್ಲ. ಹೇಗಿದ್ದರೂ ಬ್ಯಾಂಕುಗಳು ಶುರುವಾಗುವ ಹೊತ್ತಿಗೆ ಹೋಗಿ ದುಡ್ಡು ಡ್ರಾ ಮಾಡಿಕೊಂಡರಾಯಿತು ಎಂದು ಯೋಚಿಸುತ್ತಾ ಮಲಗಿಕೊಂಡೆ. ನನ್ನ ವಾಲೆಟ್‌ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ  ಬೆಚ್ಚಗೆ ಕುಳಿತಿದ್ದ ಆ 1000 ರೂ. ನೋಟು ಬೇಡ ಬೇಡ ಎಂದರೂ ಕನಸಲ್ಲಿ ಬಂದು ಹೋಗುತ್ತಿತ್ತು. ಅದೊಂದು ತರಹ ಮಲಗಿಯೂ ಮಲಗಿರದ ಸ್ಥಿತಿ ಆ ರಾತ್ರಿ.
  ಎರಡು ದಿನಗಳ ಬಳಿಕ ನನ್ನ ಬಳಿಯ ನೂರರ ನೋಟುಗಳೆಲ್ಲ ಖಾಲಿಯಾದರೆ, ಆ 1000 ರೂ. ನೋಟು ವಿನಿಮಯ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ ಎದುರಾದರೆ, ಒಂದು ಕ್ಷಣ ಅಧೀರನಾದೆ. ಅದು ಕೇವಲ ನೋಟಲ್ಲ; ಆತ್ಮ ಸಂಗಾತಿ. ಅದು ನೋಟಿನ ನಂಟಲ್ಲ; ಪ್ರೀತಿಯ ಗಂಟು. ಪ್ರೇಮದ ಸಿಂಚನ ಹರಿಸಿದ ಮಳೆಬಿಲ್ಲೆ. ಆ ‘ಬೆಳದಿಂಗಳ ಬಾಲೆ’ ನನ್ನೊಂದಿಗೆ ಅಕ್ಷರಗಳ ಜತೆ ಒಡನಾಡಿದ ಕುರುಹು. ಇಷ್ಟೇ ಆಗಿದ್ದರೆ, ಒಂದು ಕ್ಷಣವೂ ಯೋಚಿಸಿದೆ, ವಿನಿಮಯ ಮಾಡಿಕೊಳ್ಳಬಹುದಿತ್ತು. ಆದರೆ, ಇಂದಿಗೂ ಆ ನೋಟು ನನ್ನೊಳಗೆ ಪ್ರೀತಿಯನ್ನು ಪೊರೆಯತ್ತಿರುವ ನಿತ್ಯ ಸಂಜೀವಿನಿ. ನನ್ನ ಅದೆಷ್ಟೋ ಕವನಗಳಿಗೆ ಸ್ಫೂರ್ತಿಯ ಸೆಲೆ; ಅಮೂರ್ತ ರೂಪದ ಸಾಂಕೇತಿಕ ರೂಪ. ಈಗ ಅವಳೆಲ್ಲಿದ್ದಾಳೋ.... ಹೇಗಿದ್ದಾಳೋ... ಏನು ಮಾಡುತ್ತಿದ್ದಾಳೋ.. ಗೊತ್ತಿಲ್ಲ. ಆಕೆ ಕೊಟ್ಟ ನೋಟು ನನ್ನೊಂದಿಗೇ ಇದೆ, ಆಕೆಯ ನೆನಪಿನ ಕುರುಹಾಗಿ; ಸಾಫಲ್ಯಗೊಳ್ಳದ ಪ್ರೇಮದ ಸಂಕೇತವಾಗಿ.
ಏಳು ವರ್ಷಗಳ ಹಿಂದೆ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ನನ್ನದೊಂದು ಗಜಲ್ ಪ್ರಕಟವಾಗಿತ್ತು. ಈಗಿನಷ್ಟು ಆಗ ಇನ್ನೂ ಎಸ್‌ಎಂಎಸ್, ವ್ಯಾಟ್ಸಾಪ್‌ಗಳಂಥ ಕ್ಷಿಪ್ರ ಸಂದೇಶವಾಹಕಗಳ ಭರಾಟೆ ಇರಲಿಲ್ಲ. ಪತ್ರ ಬರವಣಿಗೆ ಇನ್ನೂ ಜೀವಂತವಾಗಿತ್ತು. ಹಾಗೆ ಬಂದ ಒಂದು ಪತ್ರವೇ, ಈಗ ನನ್ನಲ್ಲಿರುವ 1000 ರೂ. ನೋಟಿನ ಮೂಲ. ನನ್ನ ಗಜಲ್ ಮೆಚ್ಚಿ ಬಂದಿದ್ದ ಆ ಪತ್ರದಲ್ಲಿ ನಾಲ್ಕೇ ನಾಲ್ಕು ಸಾಲು ಬರೆದಿತ್ತು. ಅವು ಅತ್ಯಾಕರ್ಷಕ, ಅರ್ಥಗರ್ಭಿತವಾಗಿದ್ದವು. ಓದಿದ ಕೂಡಲೇ ಬೇರೆಯದ್ದೇ ಭಾವ ಮೂಡಿಸುವಂಥವು. ಸರಿ, ಯಾರೋ ಒಬ್ಬರು ಮೆಚ್ಚಿ ಬರೆದಿದ್ದಾರೆಂದು ಮರು ಉತ್ತರಿಸೋಣ ಎಂದರೆ; ಅದಕ್ಕೆ ವಿಳಾಸ ಇಲ್ಲ. ಇನ್ನೇನು ಮಾಡುವುದು ಎಂದು ಸುಮ್ಮನಾದೆ. ಆದರೆ, ಆ ಪತ್ರಗಳು ಬರುವುದು ನಿಯಮಿತವಾಗುತ್ತ ಹೋದಂತೆ, ಅವಳೊಬ್ಬಳು ಯುವತಿ ಎಂಬುದಂತೂ ಖಚಿತವಾಗಿತ್ತು. ಒಂದೊಂದು ಪತ್ರದಲ್ಲಿ ಒಂದೊಂದು ಭಾವ. ಆದರೆ, ಪತ್ರ ಬರೆಯುವರು ಯಾರೆಂದೂ ಮಾತ್ರ ಗೊತ್ತೇ ಆಗುತ್ತಿಲ್ಲ. ಅದಕ್ಕಾಗಿ ಏನಿಲ್ಲ ಪ್ರಯತ್ನಪಟ್ಟರೂ ಫಲಿತಾಂಶ ಮಾತ್ರ ಶೂನ್ಯ. ಈ ‘ಪತ್ರ ವ್ಯವಹಾರ’ವೇ ನನ್ನ ಮತ್ತೊಂದಿಷ್ಟು ಗಜಲ್ ಕೃಷಿಗೆ ಪೂರಕವಾಯಿತು; ಸ್ಫೂರ್ತಿಯಾಯಿತು. ಮೊದ ಮೊದಲು ಸಾಮಾನ್ಯ ಓದುಗರೊಬ್ಬರ ಅಕ್ಕರೆಯ ಪ್ರೀತಿ ಎಂದು ನಿರ್ಲಕ್ಷ್ಯ ವಹಿಸಿದ್ದವನಿಗೆ ದಿನ ಕಳೆದಂತೆ, ಆಕೆಯ ಕಳುಹಿಸುವ ಪತ್ರಗಳಿಗೆ ಪರವಶನಾದೆ. ನಿಗದಿತ ಸಮಯಕ್ಕೆ ಪತ್ರ ಬರೆದಿದ್ದರೆ ಏನೋ ಚಡಪಡಿಕೆ, ಅವ್ಯಕ್ತ ಆತಂಕಗಳೆರಡೂ ಉಂಟಾಗುತ್ತಿದ್ದವು. ಪತ್ರ ಕೈ ಸೇರಿದ ಬಳಿಕ ಎಲ್ಲವೂ ನಿರಾಳ. ಅಂದ ಹಾಗೆ, ಆಕೆ ಬರೆಯುತ್ತಿದ್ದ ಪತ್ರಗಳೆಂದೂ ನಾಲ್ಕು ಸಾಲುಗಳನ್ನು ಮೀರುತ್ತಿರಲಿಲ್ಲ. ಆದರೆ, ಆ ನಾಲ್ಕು ಸಾಲು ಮಾತ್ರ, ನನಗೆ ನೂರು, ಸಾವಿರ ಸಾಲುಗಳ ರೀತಿಯಲ್ಲಿ ಗೋಚರಿಸುತ್ತಿದ್ದವು. ಅಷ್ಟೊಂದು ಭಾವ, ಲಹರಿ. ಹಾಗೆ ನೋಡಿದರೆ, ನಾನು ಬರೆಯುತ್ತಿದ್ದ, ಗಜಲ್, ಕವನಗಳೆನ್ನೆಲ್ಲ ಆಕೆಯ ಪತ್ರಗಳ ಮುಂದೆ ನಿವಾಳಿಸಿ ಒಗೆಯಬೇಕು, ಹಾಗೆ ಬರೆಯುತ್ತಿದ್ದಳಾಕೆ. ಆದರೇನು ಮಾಡುವುದು, ಇದೆನ್ನೆಲ್ಲ ಹೇಳೋಣ ಎಂದರೆ, ಅವಳ ವಿಳಾಸ ಇಲ್ಲ, ಹೆಸರೂ ಗೊತ್ತಿಲ್ಲ. ಅವಳೊಂದು ರೀತಿ ಬೆಳದಿಂಗಳ ಬಾಲೆಯಾದಳು. ನಿಜವಾಗಿಯೂ ಆಕೆ ನನ್ನ ಪ್ರೀತಿಸುತ್ತಿದ್ದಳಾ? ಅಥವಾ ನಾನೇ ಹಾಗೆ ಅಂದುಕೊಂಡಿದ್ದೇನಾ?, ನಾನೇ ಅವಳನ್ನು ಪ್ರೀತಿಸುತ್ತಿದ್ದೇನಾ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟವಾಗುತ್ತಿತ್ತು. ಆಕೆ ಬರೆಯುತ್ತಿದ್ದ ಒಂದೊಂದು ಪತ್ರವೂ ಒಂದೊಂದು ರೀತಿಯಲ್ಲಿರುತ್ತಿತ್ತು. ಉತ್ಕಟ ಪ್ರೇಮ ನಿವೇದನೆಯಂತೆ ಪತ್ರ ಬರೆಯುತ್ತಿದ್ದ ಆಕೆ, ಮತ್ತೊಮ್ಮೆ ಬರೆದಾಗ ಇಡೀ ಜಗತ್ತೇ ನಶ್ವರ, ನಾನು ನೀನು ನಿಮಿತ್ತ ಎನ್ನುವ ವೇದಾಂತಿಯ ಧಾಟಿಯಲ್ಲಿ ಬರೆಯುತ್ತಿದ್ದಳು. ನೆನಪಿರಲಿ... ಎಲ್ಲವೂ ನಾಲ್ಕೇ ನಾಲ್ಕು ಸಾಲುಗಳು! ಅವಳ ಪತ್ರಗಳ ಉದ್ದೇಶಕ್ಕೊಂದು ರೂಪ ಕೊಡುವುದು ಸುಮಾರು ದಿನಗಳವರೆಗೆ ನನಗೆ ಸಾಧ್ಯವಾಗಲೇ ಇಲ್ಲ. ಇದೇ ಗುಂಗಿನಲ್ಲಿ ಹೊರ ಬಂದ ನನ್ನ ಭಾವನೆಗಳು ಗಜಲ್ ರೂಪದಲ್ಲಿ ಪ್ರಕಟವಾಗುತ್ತ ಹೋದಂತೆ, ಮತ್ತಷ್ಟು ಓದುಗರು ಹುಟ್ಟಿಕೊಂಡರು. ಆದರೆ, ಆಕೆ ಯಾರು? ಎಲ್ಲಿದ್ದಾಳೆ? ಎಂಬೆಲ್ಲ ಪ್ರಶ್ನೆಗಳಿಗೆ ಮಾತ್ರ ಇರಲಿಲ್ಲ. ಅಷ್ಟು ಹೊತ್ತಿಗಾಗಲೇ ನಾನು, ಅವಳನ್ನ ಪ್ರೀತಿಸಲಾರಂಭಿಸಿದ್ದೆ. ಅವಳು ಸಿಗುತ್ತಾಳೋ.. ಇಲ್ಲವೋ ಎಂಬುದು ಗೊತ್ತಿಲ್ಲ. ಆದರೂ ಪ್ರೀತಿಸುತ್ತಿದ್ದೆ. ನನ್ನದೇ ಕಲ್ಪನೆಯೊಳಗೆ ಅವಳಿಗೊಂದು ಆಕಾರ, ಬಣ್ಣ, ಸೌಂದರ್ಯವನ್ನು ಕಲ್ಪಿಸಿ ಸಂತೋಷಪಡುತ್ತಿದ್ದೆ. ಒಮ್ಮಮ್ಮೆ ಅವಳ ಪತ್ರಗಳೆನ್ನೆಲ್ಲ ಹರವಿಟ್ಟುಕೊಂಡು, ದೊರೆಯದೇ ಇರುವ ಉತ್ತರಗಳಿಗಾಗಿ ತಡಕಾಡುತ್ತಿದ್ದೆ. ಮತ್ತೆ ಮತ್ತೆ ಓದುತ್ತಿದ್ದೆ; ಮತ್ತೆ ಮತ್ತೆ ಪ್ರೀತಿಸುತ್ತಿದ್ದೆ.
  ಹೀಗೆ ಸಾಗಿತ್ತು ನಮ್ಮ ನಡುವಿನ ಏಕಮುಖಿ ಪ್ರೀತಿಯ ಪಯಣ. ಅವಳೇನೋ ತನ್ನೆಲ್ಲ ಭಾವನೆಗಳನ್ನು ಆ ನಾಲ್ಕು ಸಾಲುಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ನಾನು ಮಾತ್ರ ಅವಳೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಆಗೀಗ ಪ್ರಕಟವಾಗುತ್ತಿದ್ದ ನನ್ನ ಕವನ, ಗಜಲ್‌ಗಳಲ್ಲಿ ಪ್ರಶ್ನೆಗಳು ಮತ್ತು ಉತ್ತರಗಳನ್ನು ಏಕಕಾಲಕ್ಕೆ ಹುಡುಕಿಕೊಂಡು ಸಂತೋಷ ಪಡುತ್ತಿದ್ದಳು ಎಂಬುದು ಆಕೆಯ ಪತ್ರ ಓದಿದಾಗ ಗೊತ್ತಾಗುತ್ತಿತ್ತು.
  ಎಲ್ಲದಕ್ಕೂ ಒಂದು ಅಂತ್ಯ ಇರುತ್ತದೆ ಅಲ್ಲವೇ? ಈ ನಾಲ್ಕು ಸಾಲು ಬರೆಯುವ ಗೆಳತಿಯ ಪತ್ರಕ್ಕೂ ಅಂತ್ಯ ಇತ್ತು ಅಂತ ಕಾಣುತ್ತದೆ. ಅವತ್ತೊಂದಿನ ಅಂಚೆಯಣ್ಣ ಅಂಚೆ ತಂದುಕೊಟ್ಟಾಗ ಎಂದಿನಂತೆ ಖುಷಿಯಿಂದಲೇ ಪಡೆದು, ಒಡೆದು ನೋಡಿದಾಗ ಆಘಾತ ಕಾದಿತ್ತು. ಒಂದೇ ಒಂದು ಸಾಲು; ‘ಇನ್ನು ನಾನು ನಿಮಗೆ ಪತ್ರ ಬರೆಯಲಾರೆ.’ ಜತೆಗೆ ಸಾವಿರದ ಒಂದು ನೋಟ, ಅದರ ಒಂದು ಬದಿಯಲ್ಲಿ ‘ನಿಮ್ಮನ್ನು ಎಂದೆಂದಿಗೂ ಪ್ರೀತಿಸುವವಳು’ ಒಕ್ಕಣಿಕೆಯಷ್ಟೆ. ಆಗ ನನಗಾದ ಹತಾಶೆ, ದುಃಖ ಹೇಳಲಾರದಷ್ಟು. ನಮ್ಮೆದುರಿಗೆ ನಾವು ತುಂಬ ಇಷ್ಟ ಪಡುವ, ಪ್ರೀತಿಸುವ ವ್ಯಕ್ತಿಯೊಬ್ಬರು ಕಣ್ಮರೆಯಾಗುತ್ತಿದ್ದರೆ ಎಂಥ ನೋವು ಇರುತ್ತದೆಯೋ ಅಂಥ ನೋವು ಅದು. ಯಾರೊಂದಿಗೆ ಹಂಚಿಕೊಳ್ಳಲಿ, ಹೇಗೆ ಹೇಳಲಿ? ಆಗ ನನಗುಳಿದಿದ್ದ ‘ದುಃಖ’ ಮತ್ತು  ಆ ‘ನೋಟು’ ಮಾತ್ರ. ಅವಳ್ಯಾಕೆ ಆ ಸಾವಿರದ ನೋಟು ಮೇಲೆ ನಿಮ್ಮನ್ನು ಎಂದೆಂದೂ ಪ್ರೀತಿಸುವಳು ಬರೆದು ಕೊಟ್ಟಳು ಎಂದು ಈಗಲೂ ಯೋಚಿಸುತ್ತೇನೆ. ಉತ್ತರ ಮಾತ್ರ ಸಿಕ್ಕಿಲ್ಲ. ಬಹುಶಃ ಸಿಗಲು ಸಾಧ್ಯ ಇಲ್ಲ. ಅದು ಆಕೆಗೆ ಮಾತ್ರ ಗೊತ್ತು!
***
  ನೋಟ ಅಮಾನ್ಯತೆಯ ಗೆಲವು, ಸೋಲುಗಳೆರಡೂ ನಡೆದಿದೆ. ಈಗ ನನ್ನ ಬಳಿ ಇರುವ ಆ ಸಾವಿರದ ನೋಟು ವಿನಿಮಯ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ಹಾಗೆಂದು, ವಿನಿಮಯ ಮಾಡಿಕೊಳ್ಳುತ್ತೇನೆಂದು ಭಾವಿಸಿಕೊಳ್ಳಬೇಕಿಲ್ಲ. ಸರಕಾರವೇನೋ ಆ ನೋಟಗಳ ಜೀವವನ್ನು ತೆಗೆದಿರಬಹುದು. ಆಕೆ ಕೊಟ್ಟ ಆ ನೋಟು ನನ್ನ ಜೀವನವನ್ನೇ ಪೊರೆದಿದೆ. ನೋಟು ರದ್ದಾಗಿರಬಹುದು; ನನ್ನ ಪ್ರೀತಿಯಲ್ಲ. ನೋಟಿಗೆ ವೌಲ್ಯ ಇಲ್ಲದಿರಬಹುದು; ಆಕೆ ಕೊಟ್ಟ ನೋಟಿನ ಬೆಲೆ ಕುಂದಿಲ್ಲ. ಅದು ಕೇವಲ ಸಾವಿರ ಬೆಲೆಯ ನೋಟಲ್ಲ. ಬಹುಶಃ ಆಕೆಗೂ ನನಗೆ ಕೊಟ್ಟ ಆ ಸಾವಿರದ ನೋಟು ಈಗ ನೆನಪಾಗಿರಬಹುದು?

This article has published in VijayKarnataka, on 21st nov 2016 edition

ಸೋಮವಾರ, ಅಕ್ಟೋಬರ್ 3, 2016

ಪುಟಿನ್: ಎದೆಗಾರಿಕೆಯ ನಾಯಕ

- ಅಂದಿನ ರಷ್ಯಾದ ಅಧ್ಯಕ್ಷ  ಬೋರಿಸ್ ಎಲ್ಸಿನ್ ಅವರು ಪುಟಿನ್‌ರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಕ ಮಾಡಿಕೊಳ್ಳುವವರೆಗೂ ಪುಟಿನ್ ಹೊರ ಪ್ರಪಂಚಕ್ಕೆ ಅಷ್ಟೇನೂ ಗೊತ್ತಿರದ ವ್ಯಕ್ತಿಯೇ ಆಗಿದ್ದರು. -

The party of power is in power again.
ಇತ್ತೀಚೆಗಷ್ಟೇ ರಷ್ಯಾದ ಡುಮಾ(ಸಂಸತ್ತು)ಗೆ ನಡೆದ ಚುನಾವಣೆಯಲ್ಲಿ ರಷ್ಯಾಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬೆಂಬಲಿತ ‘ಯುನೈಟೆಡ್ ರಷ್ಯಾ ಪಾರ್ಟಿ’ ಜಯಶಾಲಿಯಾದಾಗ ಅಲ್ಲಿನ ಪ್ರಮುಖ ಪತ್ರಿಕೆಯೊಂದು ತನ್ನ ಸಂಪಾದಕೀಯಕ್ಕೆ ಕೊಟ್ಟ ತಲೆಬರಹ ಇದು.
  ಕಳೆದ 17 ವರ್ಷಗಳಿಂದ ಪ್ರಧಾನಿಯಾಗಿ ಇಲ್ಲವೇ ಅಧ್ಯಕ್ಷರಾಗಿ ಅಧಿಕಾರದಲ್ಲಿರುವ ಪುಟಿನ್ ಅವರಿಗೆ ಈ ಚುನಾವಣೆ ಹಿಂದಿನ ಚುನಾವಣೆಗಳಂತೆ ಸರಳವಾಗಿರಲಿಲ್ಲ. ಸಿರಿಯಾದಲ್ಲಿನ ಯುದ್ಧ, ಉಕ್ರೇನ್ ಸಂಘರ್ಷಗಳು, ಅಂತಾರಾಷ್ಟ್ರೀಯ ಸಂಬಂಧದಲ್ಲಿ ಬಿರುಕು, ತೈಲ ಬೆಲೆ ಇಳಿಕೆ ಸೇರಿದಂತೆ ಸಮಸ್ಯೆಗಳು ಮುಕುರಿಕೊಂಡಿದ್ದವು. ರಷ್ಯಾದೊಳಗೇ ಒಂದು ರೀತಿಯಲ್ಲಿ ಪುಟಿನ್ ವಿರೋಧಿ ಅಲೆಯನ್ನು ಇವು ಸೃಷ್ಟಿಸಿದ್ದವು. ಇದರ ಹೊರತಾಗಿಯೂ ಪುಟಿನ್ ಅವರ ಜನಬೆಂಬಲ ಗಳಿಸಲು ಸಾಧ್ಯವಾಗಿದ್ದು ಹೇಗೆ ಎಂದು ರಾಜಕೀಯ ವಿಶ್ಲೇಷಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ, ರಷ್ಯಾದ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ. ಇದರ್ಥ ಈ ಬಾರಿ ಪುಟಿನ್ ಬೆಂಬಲಿತ ಯುನೈಟೆಡ್ ರಷ್ಯಾ ಪಾರ್ಟಿ ಮಣ್ಣುಮುಕ್ಕಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಚುನಾವಣೆಯಲ್ಲಿ ಶೇ.47.8ರಷ್ಟು ಮಾತ್ರ ಮತದಾನವಾಗಿದೆ. ಈ ಪೈಕಿ ರಷ್ಯಾ ಯುನೈಟೆಡ್ ಪಾರ್ಟಿ ಶೇ.45.2ರಷ್ಟು ಮತಗಳನ್ನು ಪಡೆದಿದೆ. ಅಂದರೆ, ಒಟ್ಟು 450 ಸ್ಥಾನಗಳ ಪೈಕಿ 343 ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ, ದಿ ಕಮ್ಯುನಿಸ್ಟ್ ಪಾರ್ಟಿ ಮತ್ತು ರಾಷ್ಟ್ರೀಯವಾದಿ ಎಲ್‌ಡಿಪಿಆರ್ ಶೇ.13ರಷ್ಟು ಮತಪಡೆಯಲಷ್ಟೇ ಶಕ್ಯವಾಗಿವೆ.
 
ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಇಷ್ಟೊಂದು ಪ್ರಮಾಣದಲ್ಲಿ ಗೆಲವು ಸಾಧ್ಯವಾಗಿದ್ದು ಹೇಗೆ ? ಇದಕ್ಕೆಲ್ಲ ಉತ್ತರ ವ್ಲಾದಿಮಿರ್ ಪುಟಿನ್ ಅವರ ವ್ಯಕ್ತಿತ್ವ ಮತ್ತು ನಾಯಕತ್ವ. ಇಡೀ ಜಗತ್ತಿಗೆ ದೊಡ್ಡಣ್ಣನಂತೆ ಪೋಸು ಕೊಡುವ ಅಮೆರಿಕಕ್ಕೆ ಸರಿಸಮಾನವಾಗಿ ನಿಂತು ಮಾತನಾಡುವ ಇಲ್ಲವೇ ಅದರ ನೀತಿಗಳನ್ನು ಯಾವುದೇ ಹಿಂಜರಿಕೆ ಇಲ್ಲದೇ ಖಂಡಿಸಿ, ಅದಕ್ಕೊಂದು ಅಂತಾರಾಷ್ಟ್ರೀಯ ಒಮ್ಮತಾಭಿಪ್ರಾಯವನ್ನು ಕ್ರೋಡೀಕರಿಸುವ ಸಾಮರ್ಥ್ಯವಿರುವುದು ಪುಟಿನ್ ಅವರಿಗೆ ಮಾತ್ರ. ಇದಕ್ಕೆ ಪುಷ್ಟಿಕರಣ ಬೇಕಿದ್ದರೆ; 2015ರ ‘ಟೈಮ್ ಮ್ಯಾಗಜಿನ್’ ಪ್ರಕಟಿಸಿದ ಮೋಸ್ಟ್ ಇನ್‌ಫ್ಲ್ಯೂಯಿನ್ಸ್ ಪೀಪಲ್ ಪಟ್ಟಿಯಲ್ಲಿ ಪುಟಿನ್‌ಗೆ ಅಗ್ರಸ್ಥಾನವಿತ್ತು. 2013, 2014 ಮತ್ತು 2015ರ ಸಾಲಿನಲ್ಲಿ ‘ಫೋರ್ಬ್ಸ್’ ಪಟ್ಟಿ ಪ್ರಕಟಿಸಿದ ‘ಮೋಸ್ಟ್ ಪವರ್ ಫುಲ್’ ಪಟ್ಟಿಯಲ್ಲಿ ಇವರೇ ಮೊದಲಿಗರಾಗಿದ್ದರು. ಅಂದರೆ, ಅವರ ಸಾಮರ್ಥ್ಯದ ಬಗ್ಗೆ ಜಗತ್ತಿಗಿದ್ದ ಭರವಸೆಯ ಪ್ರತೀಕವಿದು. ಹಾಗಂತ, ಪುಟಿನ್ ವ್ಯಕ್ತಿತ್ವದಲ್ಲೇನೂ ಕಪ್ಪುಚುಕ್ಕೆಗಳೇ ಇಲ್ಲ ಎಂದು ಹೇಳಿದರೆ ಮೂರ್ಖತನವಾಗುತ್ತದೆ; ಅವರ ಮೇಲೂ ಆರೋಪಗಳಿವೆ. ಕಳೆದ ಏಪ್ರಿಲ್‌ನಲ್ಲಿ ‘ಪನಾಮಾ ಪೇಪರ್ಸ್’ ಹೊರಗೆಡುವಿದ ಮಾಹಿತಿಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ಇದೇ ಪುಟಿನ್ ಅವರ ಹೆಸರು.  ಇವರ ಸಮೀಪವರ್ತಿಗಳು ಶತಕೋಟಿ ಡಾಲರ್ ಹಣವನ್ನು ವಿದೇಶಗಳಲ್ಲಿ ಹುಸಿ ಕಂಪನಿಗಳ ಹೆಸರಲ್ಲಿ ತೊಡಗಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಪನಾಮಾ ಪೇಪರ್ಸ್‌ನಿಂದ ಇಡೀ ಜಗತ್ತಿಗೆ ಗೊತ್ತಾಯಿತು. ಕಂಪನಿಗಳ ಹೆಸರಲ್ಲಿ ವಿದೇಶದಲ್ಲಿ ಹಣ ತೊಡಗಿಸುವುದು ಕಾನೂನು ಪ್ರಕಾರ ನ್ಯಾಯವೇ ಅಥವಾ ಅಲ್ಲವೇ ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳೇ ಇಂಥ ಕೃತ್ಯಕ್ಕೆ ಇಳಿಯುವುದು ನೈತಿಕವಾಗಿಯೂ ಅಧಃಪತನದ ಮುನ್ಸೂಚನೆ†. ಈ ಪನಾಮಾ ಪೇಪರ್ಸ್‌ನಿಂದ ಭಾರತದ ಕೆಲವು ಗಣ್ಯವ್ಯಕ್ತಿಗಳ ವ್ಯಕ್ತಿತ್ವ ಕೂಡ  ಒರೆಗಲ್ಲಿಗೆ ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.
ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಪುಟಿನ್ 1952 ಅಕ್ಟೋಬರ್ 7ರಂದು ಜನಿಸಿದರು. ಇವರ ತಂದೆ ವ್ಲಾದಿಮಿರ್ ಸ್ಪಿರಿಡೊನೊವಿಚ್ ಪುಟಿನ್ ರಷ್ಯಾದ ಸಬ್‌ಮರಿನ್‌ನವೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಮಾರಿಯಾ ಪುಟಿನಾ ಅವರು ಫ್ಯಾಕ್ಟರಿ ಕೆಲಸಗಾರ್ತಿ. ಬಾಸ್ಕೊಲೇನ್‌ನಲ್ಲಿ ಶಾಲಾ ಅಧ್ಯಯನ ಆರಂಭಿಸಿದ ಪುಟಿನ್, 12 ವಯಸ್ಸಿಗೆ ಬರುವಷ್ಟರಲ್ಲಿ ಜುಡೋ, ಸಾಂಬೋದಲ್ಲಿ ಪ್ರಾವೀಣ್ಯತೆ ಸಾಧಿಸಿದ್ದರು. ಸೇಂಟ್ ಪೀಟರ್ಸ್‌ಬರ್ಗ್ ಹೈಸ್ಕೂಲಿನಲ್ಲಿದ್ದಾಗ ಜರ್ಮನ್ ಕಲಿತರು. 1970ರಲ್ಲಿ ಸೇಂಟ್ ಪೀಟರ್ಸ್‌ಬರ್ಗ್ ಯುನಿರ್ವಸಿಟಿ ಸೇರಿದ ಪುಟಿನ್ 19975ರಲ್ಲಿ ಕಾನೂನು ಪದವೀಧರರಾಗಿ ಹೊರ ಬಂದರು. 1983ರಲ್ಲಿ ಲುಡ್ಲುಮಿಲಾ ಅವರನ್ನು ವಿವಾಹವಾದರು. ಇಬ್ಬರು ಮಕ್ಕಳಿದ್ದಾರೆ. ಆದರೆ, 2014ರಲ್ಲಿ ಪುಟಿನ್‌ರಿಂದ ಲುಡ್ಲುಮಿಲಾ ವಿಚ್ಚೇದನ ಪಡೆದಿದ್ದಾರೆ.
  ಪುಟಿನ್ ಅವರು ಜರ್ಮನಿ ಕಲಿತಿರುವುದು ಅವರಿಗೆ ಉದ್ಯೋಗವನ್ನು ತಂದುಕೊಟ್ಟಿತು ಎಂದು ಹೇಳಬಹುದು. ಜರ್ಮನಿ ಮಾತನಾಡುತ್ತಿರುವುದರಿಂದಲೇ ಅವರು ರಷ್ಯಾದ ಕೆಜಿಬಿ ಸೀಕ್ರೆಟ್ ಪೊಲೀಸ್ ಸೇವೆಗೆ ಸೇರ್ಪಡೆಗೊಳ್ಳುವಂತಾಯಿತು. ಕೆಜಿಬಿಯಲ್ಲಿ 16 ವರ್ಷ ಸೇವೆ ಸಲ್ಲಿಸಿದ ಅವರು ಲೆಫ್ಟಿನೆಂಟ್ ಕರ್ನಲ್‌ವರೆಗೂ ಬಡ್ತಿ ಪಡೆದರು. ಆದರೆ, 1991ರಲ್ಲಿ ಸೇವೆಯಿಂದ ಬಿಡುಗಡೆಗೊಂಡು ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. 1999ರಲ್ಲಿ  ಅಂದಿನ ರಷ್ಯಾದ ಅಧ್ಯಕ್ಷ  ಬೋರಿಸ್ ಎಲ್ಸಿನ್ ಅವರು ಪುಟಿನ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಕ ಮಾಡಿಕೊಳ್ಳುವವರೆಗೂ ಪುಟಿನ್ ಹೊರ ಪ್ರಪಂಚಕ್ಕೆ ಅಷ್ಟೇನೂ ಗೊತ್ತಿರದ ವ್ಯಕ್ತಿಯೇ ಆಗಿದ್ದರು. 1999ರಿಂದ 2000ವರೆಗೆ ರಷ್ಯಾದ ಪ್ರಧಾನಿಯಾಗಿದ್ದರು. 2000ರಿಂದ 2008ವರೆಗ ಅಧ್ಯಕ್ಷರಾಗಿದ್ದರು. 2008ರಿಂದ 2012ವರೆಗೆ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಅವರು ಆಡಳಿತಾರೂಢ ಯುನೈಟೆಡ್ ರಷ್ಯಾ ಪಕ್ಷದ ಅಧ್ಯಕ್ಷರೂ ಆಗಿ ಕೆಲಸ ಮಾಡಿದ್ದಾರೆ. ಮತ್ತೆ 2012 ಮೇ 7ರಂದು ರಷ್ಯಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2018ರ ಮಾರ್ಚ್‌ನಲ್ಲೇ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಒಂದು ವೇಳೆ ಪುಟಿನ್ ಅವರು ಮತ್ತೆ ಆಯ್ಕೆ ಮುಂದಾದರೆ ಅವರು ಗೆಲವು ಸರಳವಾಗಲಿದೆ ಎಂಬುದನ್ನು ಮೊನ್ನೆಯಷ್ಟೇ ಡುಮಾಗೆ ನಡೆದ ಚುನಾವಣೆ ಸಾಕ್ಷೀಕರಿಸಿದೆ.
  ಭಾರತ ಮತ್ತು ರಷ್ಯಾ ನಡುವಿನ ಸಂಬಂಧಕ್ಕೆ ಬಹುದೊಡ್ಡ ಇತಿಹಾಸವಿದೆ. ಭಾರತದ ಸರಳ ಸ್ನೇಹಿತ ರಾಷ್ಟ್ರ ಎಂದೇ ರಷ್ಯಾವನ್ನು ಕರೆಯಲಾಗುತ್ತದೆ. ಶೀತಲ ಸಮರ ಕಾಲದಿಂದಲೂ ಅಂಥದೊಂದು ಬಂಧನ ಎರಡೂ ರಾಷ್ಟ್ರಗಳ ಮಧ್ಯೆ ಇದೆ. ಈ ಸಂಬಂಧ ಪುಟಿನ್ ಆಡಳಿತಾವಧಿಯಲ್ಲೂ ಹಾಗೆಯೇ ಮುಂದುವರಿದಿದೆ. ಆದರೆ, ಇತ್ತೀಚಿಗೆ ಭಾರತದ ವಿದೇಶಾಂಗ ನೀತಿಗಳಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ರಷ್ಯಾ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದೆ ಎಂದು ವಿದೇಶಾಂಗ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಇದಕ್ಕೆ ಅವರು ಪಾಕಿಸ್ತಾನದ ಜತೆಗೆ ರಷ್ಯಾ ನಡೆಸುತ್ತಿರುವ ಸೇನಾ ಸಮರಾಭ್ಯಾಸವನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ. ಭಾರತ ಒಂದೆಡೆ ಅತಿಯಾಗಿ ಅಮೆರಿಕವನ್ನು ಅಪ್ಪಿಕೊಳ್ಳುತ್ತಿರುವುದು ಕೂಡ ಪುಟಿನ್ ಅವರ ನಡೆಗೆ ಕಾರಣವಾಗಿರಬಹುದು.
  ಮೇಲ್ನೋಟಕ್ಕೆ ಮೃದು ಮನಸ್ಸಿರುವಂತೆ ಕಂಡರೂ ಪುಟಿನ್ ಅಂತರಾಳದಲ್ಲಿ ಅತ್ಯಂತ ಗಟ್ಟಿ ಇರುವ ವ್ಯಕ್ತಿ. ಕಠಿಣ ನಿರ್ಣಯ ಕೈಗೊಳ್ಳುವ ಸಂದರ್ಭಗಳಲ್ಲಿ ಅವರು ಅಂಥ ಗಟ್ಟಿತನವನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಸಿರಿಯಾದ ಮೇಲಿನ ದಾಳಿಯನ್ನು ಉದಾಹರಣೆಯಾಗಿ ನೀಡಬಹುದು. ರಷ್ಯಾದ ದಾಳಿಯನ್ನು ಅಮೆರಿಕ ಎಷ್ಟೇ ವಿರೋಧಿಸಿದರೂ ಪುಟಿನ್ ಕ್ಯಾರೇ ಎನ್ನದೇ ತಾವು ಅಂದುಕೊಂಡಿದ್ದನ್ನು ಮಾಡಿಯೇ ಬಿಟ್ಟರು. ಅಂದರೆ, ಪುಟಿನ್ ಎಂಥದ್ದೇ ಸಂದರ್ಭದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬುದು ವೇದ್ಯವಾಗುತ್ತದೆ.
   ಜುಡೋ ಸಮರ ಕಲೆಯಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದಿರುವ ಪುಟಿನ್ ಎದೆಗಾರಿಕೆಯಳ್ಳ ನಾಯಕ ಎನ್ನುವುದರಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಕುದುರೆ ಸವಾರಿ, ಸ್ಕೂಬಾ ಡೈವಿಂಗ್ ಕೂಡ ಮಾಡಬಲ್ಲರು. ಹೆಲ್ಸ್ ಏಂಜಿಲ್ ಮೋಟಾರ್‌ಸೈಕಲ್ ಕ್ಲಬ್‌ನ ಗೌರವ ಸದಸ್ಯರೂ ಆಗಿರುವ ಪುಟಿನ್, ಫಾರ್ಮುಲಾ ಒನ್ ರೇಸ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಸದಾ ರಾಜಕೀಯ ಜಂಜಾಟದ ನಡುವೆಯೂ ಫಿಶಿಂಗ್‌ಗೆ ಸಮಯ ಹೊಂದಿಸಿಕೊಳ್ಳಬಲ್ಲರು. ಶೀತಲ ಸಮರದಂಥ ಪರಿಸ್ಥಿತಿ ಈಗಿಲ್ಲ ಎನ್ನುವುದು ಖರೆ. ಆದರೆ, ಅಂಥ ಸಂದರ್ಭ ಎದುರಾದರೆ ಇಡೀ ಜಗತ್ತನ್ನೇ ಧ್ರುವೀಕರಿಸಬಲ್ಲ ಛಾತಿ 63 ವರ್ಷ ವಯಸ್ಸಿನ ಪುಟಿನ್ ಅವರಿಗಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.
- Mallikarjun Tippar


(ಇದು ವ್ಯಕ್ತಿಗತ ಅಂಕಣ. ವಿಕೆ ಸೆಪ್ಟೆಂಬರ್ 25ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಸೋಮವಾರ, ಸೆಪ್ಟೆಂಬರ್ 19, 2016

ಸೋತವನ ರಾತ್ರಿ ಪದ್ಯಗಳು-3

ಹಾಸಿಗೆ ಬಿಕ್ಕಳಿಸುತಿದೆ
ಅವರಿಬ್ಬರ ವಿರಹ, ಮುನಿಸು ಕಂಡು
ಅದೆಷ್ಟೋ ರಾತ್ರಿಗಳು
ರಂಗು ರಂಗಾಗಿರಲಿಲ್ಲ
ಈಗೇಕೆ ಶೃಂಗಾರ ವೈರಾಗ್ಯ
ಅದೆಷ್ಟೋ ಕನಸುಗಳ
ಕಾವಲಿಗೆ ಕಾವಲಿಯಾಗಿರಲಿಲ್ಲ
ನನ್ನ ಈ ಮೆತ್ತನೆಯ ಮೈ ಹೊದಿಕೆ
ಕೇಳುತಿದೆ ಹಾಸಿಗೆ ಬಿಕ್ಕಳಿಸುತ
ಅವರಿಬ್ಬರ ಬೆವರಿನ ಘಮಕ್ಕೆ
ಗೋಡೆಗಳ ಮೇಲೂ ಸಣ್ಣ ಜಿನುಗು
ಕಂಡು ನಕ್ಕಿರಲಿಲ್ಲ ಆ ತಲೆದಿಂಬು?
ನಿಮ್ಮಬ್ಬರ ಪ್ರೇಮ ಪಲ್ಲಕ್ಕಿಗೆ
ಅದಾರೋ ಕಲ್ಲು ಹಾಕಿದರೋ
ಕೇಳುತಿದೆ ಹಾಸಿಗೆ ಬಿಕ್ಕಳಿಸಿತ

-ಸೋತವನು
--------------------

ಈ ಸುಡಗಾಡು ಸುಳಿಗಾಳಿ
ಸುಮ್ನ ಇರಾಂಗಿಲ್ಲ ಖೋಡಿ
ಅವಳ ನೆಂಪ ಹೊತ್ಕೊಂಡ್ ಬರ್ತದ
ಅವಳೂ ಬೇಡ, ಅಳವೂ ಬೇಡ
ಅಂದವನಿಗೆ ಈ ಗಾಳಿಯೊಂದ ಕಾಟ
ಯಾಕಾರ ಈ ನೆಂಪುಗಳು ಇಷ್ಟೊಂದು ಕಾಡ್ತಾವ ?
ದ್ಯಾವ್ರೆ ತೋರ್ಸು ದಾರಿ, ತ್ರಾಸು ಇರಲಾರ್ದು
ಹೈರಾಣಾಗೇನಿ ಹರಕಿ ಕಟ್ಕೊಂಡು
ಅವಳಿಗೀ ಒಳ್ಳೆದಾಗ್ಲಿ ಅಂತ
ಬರ್ದಿರಲಿ ಅವ್ಳ ನೆಂಪ ನಂಗಂತ
ಏ ಗಾಳಿ ಗೋಳಿ, ಹಂಗ ಹೋಗು
ಇರ್ಬೌದು ನನ್ನಂತವರ ನೂರಾರು ಮಂದಿ
ನಿನ್ನ ಕಾಯಾಕಾತ್ತಿರಬಹುದು !

- ಸೋತವನು
-------------------------

ಮನಸು ಭಾರವಾಗಿದೆ
ತುಸು ದೂರ ನೀನು ಬರದೇ
ಪ್ರೀತಿಯ ಪಯಣದಲಿ
ಸರಿದು ಹೋಗುವ ಹೊತ್ತು
ಸರಿ ದಾರಿಗೆ ಬರ್ಬೆಕು ನಾವಿಬ್ಬರು

-ಸೋತವನು
--------------------

ನೀ ಬೆಳಕಾದರೆ
ನಾ ಹಣತೆಯಾಗುವೆ
ನೀ ಕನಸಾದರೆ
ನಾ ಕಣ್ಣಾಗುವೆ
ನೀ ಮಳೆಯಾದರೆ
ನಾ ಮೋಡ ಆಗುವೆ
ನೀ ಮರವಾದರೆ
ನಾ ಮಣ್ಣಾಗುವೆ
ನೀ ದಾಹವಾದರೆ
ನಾ ನೀರಾಗುವೆ
ನೀ ಹೂವಾದರೆ
ನಾ ಕಂಪಾಗುವೆ
ನೀ ನಿಜವಾದರೆ
ನಾ ಸಹಜನಾಗುವೆ
ನೀ ಬೆಳದಿಂಗಳಾದರೆ
ನಾ ಚಂದ್ರನಾಗುವೆ
ನೀ ನಕ್ಷತ್ರವಾದರೆ
ನಾ ಆಕಾಶವಾಗುವೆ
ನೀ ಪ್ರೀತಿಯಾದರೆ
ನಾ ಪ್ರೀತಿಸುವೆ

-ಸೋತವನು

ಗುರುವಾರ, ಆಗಸ್ಟ್ 25, 2016

ಮತ್ತೆ ಲವ್ವಾಗಿದೆ- ಸೋತವನ ರಾತ್ರಿ ಪದ್ಯಗಳು-2

ಮತ್ತೆ ಲವ್ವಾಗಿದೆ
ಅವಳು ಬರೆಯೋ
ವಿರಹಿ ಕವಿತೆಗಳಿಂದ

ಮೊದಲಾಗಿತ್ತಲ್ಲ ಅದೇ ಲವ್ವು
ದಿನ ರಾತ್ರಿ ಒಂದಾಗಿತ್ತಲ್ಲಾ?
ಎಷ್ಟೊಂದು ಕನ್ಸುಗಳಿಗೆ
ಗಾಳ ಹಾಕಿ ಹೆಕ್ಕಿ ತೆಗಿದಿದ್ವುಲ್ವಾ
ಅದೇ ಆ ಒಂಚೂರು ಪ್ರೀತಿ

ಮತ್ತೆ ಲವ್ವಾಗಿದೆ ಈಗ

ಅದೇ ಆ ಮಾತುಗಳು
ಅವಳ ಕವಿತೆಯ ಸಾಲುಗಳು
ಬರೆದಷ್ಟು ಬತ್ತಲಾರದ ಭಾವಗಳು
ನನ್ನ ಸೋಲುಗಳಿಗೆ ನಾನೇ ಜವಾಬುದಾರ

ಮತ್ತೆ ಲವ್ವಾಗಿದೆ ಈಗ

ಸೇರಬೇಕು ಅವಳ ಸರದಿ ಸಾಲು
ಸಿಕ್ಕರೆ ಸಿಗಬಹುದು ನಂಗೂ
ಹರಿದು ಹೋದ ಚಂದ್ರನ ಚೂರು
ನಮ್ಮಿಬ್ಬರಿಗೂ ಕಂಡರೂ ಕಂಡೀತು
ಒಂದಾಗುವ ಸಣ್ಣ ಕಿಂಡಿಯೊಂದ

ಮತ್ತೆ ಲವ್ವಾಗಿದೆ
ಅವಳು ಬರೆಯೋ
ವಿರಹಿ ಕವಿತೆಗಳಿಂದ

- ಸೋತವನು

---
ಕೃಷ್ಣ ನೀ ಪಕ್ಷಪಾತಿ
ನೀನೇ ತಾನಾಗಿದ್ದ
ನಿನ್ನ ಪ್ರೇಮಿಸಿದ
ರಾಧೆಗೇನು ಕೊಟ್ಟೆ?

- ಸೋತವನು
----

ಏನೋ ಅಂದುಕೊಳ್ಳುವ ಹೊತ್ತಿಗೆ
ಕೈಗೆ ಸಿಗುವ ಹಳೇ ಹೊತ್ತಗೆಯ
ಮಧ್ಯೆ ಪುಟ ಮಡಿಚಿಟ್ಟ ಮಡಿಕೆಯಲಿ
ಅವಳ ನೆನಪು ಸೃಜಿಸುವ ಸಣ್ಣ ಎಲೆ!
ಒತ್ತರಿಸುವ ನೆನಪುಗಳ ಮೆರವಣಿಗೆ
ತತ್ತರಿಸಿ ಹೋಗಿರುವ ಎದೆಯೊಳಗೆ
ನುಂಗಲು ಆಗದ ಉಗಳಲು ಆಗದ
ಪ್ರೇಮದ ಎಲೆಯಡಿಕೆ ಬಾಯೊಳಗೆ!
ಕೆಂಪು ಕೆಂಪಾದ ಆಗಸದೊಳಗೆ
ಬಾಡಿ ಹೋಗುವ ಭಾಸ್ಕರ
ಮತ್ತೆ ಬಾರದಿರನೆ ಮರುದಿನ ಸರ ಸರ?
ಕಾಯುವೆ ಅವಳು ಬರುವ ಕವಲು
ದಾರಿಯಲಿ, ಹಗಲಾಗಿರಲಿ ಇರುಳಾಗಿರಲಿ!

- ಸೋತವನು

ಗುರುವಾರ, ಜುಲೈ 28, 2016

ಸೋತವನ ರಾತ್ರಿ ಪದ್ಯಗಳು-1

ಕವಿತೆ ಹುಟ್ಟೊ ಕಾಲದಲ್ಲಿ ಮುಂಗಾರಿನ ಮಿಂಚು
ಎದುರಿಗಿದ್ದವಳ ಕಣ್ಣಲ್ಲಿ ಪ್ರೇಮ ನಿವೇದನೆಯ ಸಂಚು
ಹಗಲಲ್ಲಿ ಕಂಡ ಬಾವಿಗೆ ಬೀಳಲು ಭಾವನೆಗಳ ಹೊಂಚು
ಇದನರಿತು ಹೊರಟವನ ಬ್ಯಾಗಿನಲ್ಲಿತ್ತು ಸಾವಿನ ಅಂಚು
- ಸೋತವನು

****

ಅಹಮಿಗೆ ಪೆಟ್ಟು ಬೀಳುವ ಕ್ಷಣ
ನಾನು ನಾನೆಂಬುವುದೆ ಪರಕೀಯ
ಇರುವ ನಾಲ್ಕು ಕ್ಷಣಗಳಲ್ಲಿ
ನೂರು ದಾರಿ ಹಲವು ಕವಲು
ಕೊನೆಗೆ ಸೇರುವುದೆಲ್ಲವೊ ಶೊನ್ಯ ಸಾಧನೆ
-ಸೋತವನು

****

ಹಾಡುವ ಕನಲಿಕೆ ಎದೆಯೊಳಗೆ
ತುರಿಸುವ ತಿಕ್ಕಾಟಗಳು ಅದರೊಳಗೆ
ಎದ್ದೇಳುವ ಬಿರಿಸು ಭಾವಗಳಿಗೆ
ಜೀವ ತುಂಬುವ ಕಲೆ ಅವಳಿಗೆ
ಮೇಲೆ ಹಾರಿ ಕೆಳಗೆ ಬೀಳುವ ಜಿದ್ದು
ಗೆಲ್ಲುವುದಕ್ಕಲ್ಲ ಸೋಲುವುದಕ್ಕೆ
ಗೆಲುವಿಗೆ ಒಂದೇ ಒಂದು ಖುಷಿ
ಸೋಲಿಗೆ ಗೆಲುವಿನ ಸಾವಿರ ನಿರೀಕ್ಷೆ
ಹಾಡುವ ಕನಲಿಕೆ ಕೊನೆಯಾಗುವುದೇ?
-ಸೋತವನು

ಸೋಮವಾರ, ಜುಲೈ 18, 2016

ಏನು ಆಗಬಾರದಿತ್ತೋ ಅದೇ ಆಯಿತು...

- ಹುಡುಗನೊಬ್ಬ ಗಜಲ್‌ಗಳು-

- ಪ್ರದ್ಯುಮ್ನ
ಜೀವನವೇ ಹಾಗೆ. ನಮ್ಮ ನಿರೀಕ್ಷೆಗಳು, ಆಕಾಂಕ್ಷೆಗಳು ಈಡೇರುವ ಹೊತ್ತಿನಲ್ಲಿ ಸಡನ್ನಾಗಿ ಯು ಟರ್ನ್ ತೆಗೆದುಕೊಳ್ಳುತ್ತದೆ. ಮತ್ತೆ ವಿರುದ್ಧ ದಿಕ್ಕಿನಲ್ಲಿ  ಓಡುತ್ತಿರುವಾಗಲೇ ಮತ್ತೊಂದಿಷ್ಟು ತಿರುವುಗಳು. ಈ ತಿರುವುಗಳ ತಿರುಗಣಿಯಲ್ಲಿ ಜೀವನ ಸುರಳಿಯಾಗುತ್ತ, ಅದರೊಳಗೆ ನೋವು, ಹತಾಶೆ, ಸುಖ, ದುಃಖ, ಸಂತೋಷ, ಸಂಭ್ರಮಗಳೆಲ್ಲವೂ ಲೀನವಾಗಿ ಶೂನ್ಯವಾಗುವ ಎಲ್ಲ ಅಪಾಯಗಳಿರುತ್ತವೆ. ನಾವು ಅಂದಕೊಂಡ ರೀತಿಯಲ್ಲಿ ಬದುಕು ಸಾಗದಿದ್ದಾಗ, ಬದುಕು ಅಂದುಕೊಂಡ ರೀತಿಯಲ್ಲಿ ನಾವು ನಡೆಯಬೇಕು. ಈ ತರ್ಕದಿಂದಲೇ ಜೀವನ ಹೆಚ್ಚು ಸಂತೋಷವಾಗಿರುತ್ತದೆ...
- ಹೀಗೆ ನೀನು ಅಂದು ಊರಾಚೆ ಇದ್ದೂ ಇಲ್ಲದಂತಿರುವ ಉದ್ಯಾನದ ಮೂಲೆಯೊಂದರ ಮುರುಕಲು ಬೆಂಚ್‌ನಲ್ಲಿ  ಕುಳಿತು ಜೀವನದ ಪಾಠ ಮಾಡುತ್ತಿರುವಾಗ, ನಿನ್ನ ಮಾತುಗಳು ತಲೆಯೊಳಗೆ ಇಳಿದಿರಲಿಲ್ಲ. ಅಂದಿಗೆ, ನಿನ್ನ ಮುಂಗುರುಳು ನೃತ್ಯ ನೋಡುತ್ತಾ.... ನಿನ್ನ ಸಾನ್ನಿಧ್ಯ, ನಿನ್ನ ಸಾಮೀಪ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೊತ್ತು ಕಳೆಯುವುದೇ ಬದುಕಾಗಿತ್ತು. ಅಂದಿಗೆ ಅದು ನನ್ನ ಜೀವನದ ಏಕ ಮಾತ್ರ ಗುರಿಯಾಗಿತ್ತು. ಅಂದು ನೀನು ಹೇಳಿದ ಪ್ರತಿಯೊಂದು ಮಾತುಗಳು ನನ್ನ ಅನುಭವಕ್ಕೆ ಈಗ ಬರುತ್ತಿವೆ. ನನ್ನ ಬದುಕಿನ ಅತಿದೊಡ್ಡ ಜೀವನಸೆಲೆ, ಸ್ಫೂರ್ತಿಯ ಚಿಲುಮೆಯಾಗಿದ್ದ ನೀನೇ ಹಠಾತ್ತನೇ ಯು ಟರ್ನ್ ತೆಗೆದುಕೊಂಡು, ನನ್ನನ್ನು ದಾರಿಯ ಮಧ್ಯೆ ಬಿಟ್ಟು ಹೋಗಿತ್ತೀಯ ಎಂಬ ಸಣ್ಣ ಸುಳಿವು ಇರಲಿಲ್ಲ. ಜೀವನದ ದಾರಿಯಲ್ಲಿ ಇಬ್ಬರೂ ಸಹಯಾತ್ರಿಕರಾಗಿ ಪಯಣ ಆರಂಭಿಸಿ, ಮುಗಿಸೋಣ ಎಂದು ಹೇಳಿದವಳು ನೀನು ಮಾತು ತಪ್ಪಿದೆ; ದಾರಿ ತಪ್ಪಿದೆ ನಾನು. ಈಗ ದಿಕ್ಕು ಕಾಣದೆ ನಿಂತಿದ್ದೇನೆ. ನನ್ನ ಮುಂದೆ ಅನೇಕ ಕವಲು ದಾರಿಗಳಿವೆ. ಯಾವ ದಾರಿಯನ್ನು ಆಯ್ಕೆ ಮಾಡಿಕೊಂಡರೆ, ಅದು ಎಲ್ಲಿ ಗೆ ಹೋಗಿ ಮುಟ್ಟತ್ತದೆ ಎಂಬ ಅರಿವು ನನಗಿಲ್ಲ. ಅದರ ಅರಿವು ಇದ್ದವಳು ನೀನು ನನ್ನ ಜತೆಯಲ್ಲಿ ಇದ್ದು ಇಲ್ಲದಂತೆ ಇರುವೆ. ಆಯ್ಕೆಗಳು ವಿಷಯ ಬಂದಾಗ ನನ್ನದು ಕನ್‌ಫ್ಯೂಸ್ಡ್ ಸೋಲ್. ಯಾವ ಆಯ್ಕೆ ನನ್ನನ್ನು ಎಲ್ಲಿಗೆ ಹೋಗಿ ಮುಟ್ಟಿಸುತ್ತದೆ ಎಂಬುದೇ ಗೊತ್ತಿಲ್ಲ. ಆದರೂ ಒಬ್ಬಂಟಿಯಾಗಿ ನಡೆಯುವ ಸಾಹಸ ಮಾಡುತ್ತಿದ್ದೇನೆ. ಯಾಕೆ ಹೇಳು..? ನಿನಗಾಗಿ, ನಿನ್ನ ಮೇಲಿನ ಪ್ರೀತಿಗಾಗಿ. ಆ ಪ್ರೀತಿಯೇ ನನ್ನನ್ನು ಕಷ್ಟದಲ್ಲೂ ಇಂದಿಗೂ ನಡೆಯುವುದನ್ನು ನಿಲ್ಲದಂತೆ ಮಾಡುತ್ತದೆ.
ನಿನ್ನದು ಯಾವಾಗಲೂ ಲೆಕ್ಕಾಚಾರದ ಬದುಕು. ಇಂಚುಪಟ್ಟಿಯನ್ನು ಹಿಡಿದು ಗೆರೆ ಕೊರೆದ ಹಾಗೆ ಬದುಕಬೇಕು ಎನ್ನುತ್ತಿದ್ದವಳು. ನನ್ನದೋ... ಯಾವುದೇ ಶಿಸ್ತಿಗೆ ಒಳಪಡದ, ಯಾವ ಅಂಕೆಗೂ ಸಿಗದ, ಸೂತ್ರ ಹರಿದ ಗಾಳಿ ಪಟದ ಚಲನೆಯಂಥ ಬದುಕು. ನಮ್ಮಿಬ್ಬರಿಗೂ ಸಾಮ್ಯತೆ ಏನು ಎಂದು ಹುಡುಕ ಹೊರಟರೆ ಏನಂದರೆ ಏನೂ ಇರಲಿಲ್ಲ.  ಆದರೂ ನಮ್ಮಿಬ್ಬರಲ್ಲೂ ಪ್ರೀತಿ ಎಂಬ ಗಾಢವಾದ  ಬಂಧ. ನಮ್ಮ ನಡುವೆ ಇದ್ದ ಎಲ್ಲ ವೈರುಧ್ಯಗಳನ್ನು ಮೀರಿ ನಮ್ಮನ್ನು ಒಂದಾಗಿಸಿತ್ತು. ನನ್ನ ಅಸ್ತವ್ಯಸ್ತ ಬದುಕಿನ ರೀತಿಯನ್ನು ನೀನು ಸಹಿಸಿಕೊಂಡಿದ್ದು ನಿಜವಾಗಲೂ ಅದು ನಿನ್ನ ಸಹನೆಯ ಶಕ್ತಿಯ ಪ್ರತೀಕ.  ಕಾಡು, ಗುಡ್ಡ, ಬೆಟ್ಟ, ಪ್ರಾಣಿ, ಪಕ್ಷಿ, ಚಿಟ್ಟೆ, ಕ್ರೀಮಿ, ಕೀಟಗಳ ಫೋಟೋ ತೆಗೆಯುತ್ತೇನೆ ಎಂದು ಬಗಲಿಗೆ ಕ್ಯಾಮೆರಾ ಏರಿಸಿಕೊಂಡು ಹೋರಡುತ್ತಿದ್ದವನು ನಾನು. ಕ್ಯಾಮೆರಾ ಮೇಲಿನ ಮೋಹ, ಒಂದೊಂದು ಸಾರಿ ನಿನ್ನ ಮೇಲಿನ ಪ್ರೀತಿಗಿಂತ ಹೆಚ್ಚಾಗುತ್ತಿತ್ತು. ಆಗ ನೀನು ತಮಾಷೆಯಾಗಿ, ‘‘ನಿನಗೆ ಕ್ಯಾಮೆರಾ ಫಸ್ಟ್ ಲವ್. ನಾನು ಸೆಕೆಂಡ್ ಲವ್,’’ ಎಂದು ಕಿಚಾಯಿಸುತ್ತಿದ್ದೆ. ಆದರೆ, ಈಗ ನಿಜ ಹೇಳುತ್ತೇನೆ ಕೇಳು; ನನ್ನ ಜೀವನದಲ್ಲಿ ಎಂದಿಗೂ ನೀನೇ ಮೊದಲ ಪ್ರೀತಿ. ನನ್ನ ಅಷ್ಟೂ ಜೀವನದ ಅನುಭವದಲ್ಲಿ ನಿನಗೆ ಕೊಟ್ಟ ಸ್ಥಾನ ನನ್ನ ಕ್ಯಾಮೆರಾಗೂ ಕೊಟ್ಟಿಲ್ಲ. ಆಫ್‌ಕೋರ್ಸ್, ಕ್ಯಾಮೆರಾ ಇಸ್ ಮೈ ಪ್ಯಾಶನ್... ಹಾಗಂತ ಸುಮಾರು ಸಾರಿ ಹೇಳಲು ಯತ್ನಿಸಿದ್ದೆ. ಆದರೆ, ಹೇಳಲು ಆಗಲಿಲ್ಲ. ಅದನ್ನು ಈಗ ಹೇಳುತ್ತಿದ್ದೇನೆ; ನೀನು ಕೇಳಿಸಿಕೊಳ್ಳುತ್ತೀಯ ಎಂಬ ನಂಬಿಕೆ ನನಗಿಲ್ಲ. ಕೇಳಿಸಿಕೊಂಡರೂ ಅದರೊಳಗಿನ ಭಾವನೆಗಳು ಎಬ್ಬಿಸುವ ಸಂಟರಗಾಳಿ ನಿನ್ನನ್ನು ತಾಕಲು ಸಾಧ್ಯವಿಲ್ಲ. ನೀನೀಗ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸಹನಾಮೂರ್ತಿ. ಈ ಜಗತ್ತಿನ ಆಗು ಹೋಗುಗಳ ಅರಿವು ನಿನಗಿಲ್ಲ. ಅಷ್ಟ್ಯಾಕೆ... ನಾನಾರು ಎಂಬುದು ಗೊತ್ತಿರಲಿಕ್ಕಿಲ್ಲ. ಅಂಥ ಸ್ಥಿತಿಯಲ್ಲಿದ್ದೀಯ.
ನೀನು ಹೇಳಿದ ಹಾಗೇ ಬದುಕುತ್ತಿದ್ದೇನೆ ಎಂದರೆ ನಂಬಲಾರೆ. ಅಂದು ನೀನು ಹೇಳಿದ ಹಾಗೆ ಬದುಕು ಅಂದುಕೊಂಡ ರೀತಿಯಲ್ಲಿ ಬದುಕುತ್ತಿದ್ದೇನೆ. ನನಗೀಗ, ಯಾವುದೇ ಬೆಟ್ಟ, ಗುಡ್ಡ, ಪ್ರಾಣಿ, ಪಕ್ಷಿಗಳು ಆಕರ್ಷಕವಾಗಿ ಕಾಣುತ್ತಿಲ್ಲ. ನನ್ನ ಕ್ಯಾಮೆರಾ ಲೆನ್ಸ್ ಮೇಲೆ ಧೂಳು ಕೂತಿದೆ. ನನಗೆ ಕ್ಯಾಮೆರಾ ಮೋಹ ಇನಿತು ಇಲ್ಲ. ಹೇಗೆ ಇರುತ್ತೇ ಹೇಳು..? ನನ್ನ ಕ್ಯಾಮೆರಾ ಕಣ್ಣಿಗೆ ಶಕ್ತಿ ತುಂಬಿದವಳು ನೀನೇ ನಿತ್ರಾಣ ಸ್ಥಿತಿಯಲ್ಲಿರುವಾಗ? ನೀನು ಜತೆಯಲ್ಲಿದ್ದಾಗ, ಸಣ್ಣ ಕೀಟವೂ ನನ್ನ ಕಣ್ಣೀಗೆ ಅಮೇಜಿಂಗ್ ಪ್ರಾಣಿಯಾಗಿ ಕಾಣುತ್ತಿತ್ತು. ಅದಕ್ಕಿರುವ ಬದುಕುವ ಛಲ ರೋಮಾಂಚನಗೊಳಿಸುತ್ತಿತ್ತು. ಎಲ್ಲ ಸಣ್ಣ ಸಣ್ಣ ಖುಷಿಗಳು ದೊಡ್ಡ ಸಂಭ್ರಮಗಳಾಗುತ್ತಿದ್ದವು; ದೊಡ್ಡ ದುಃಖಗಳೆಲ್ಲವೂ ಸಣ್ಣ ಸಣ್ಣ ತೊಂದರೆಗಳಾಗಿ ಬದಲಾಗುತ್ತಿದ್ದವು. ಅದಕ್ಕೆಲ್ಲ ನೀನೇ ಕಾರಣ. ನಿನ್ನ ನಿಷ್ಕಲ್ಮಷ ಪ್ರೇಮ ಕಾರಣ. ಆದರೆ ಈಗ...?

***
ಫೇಸ್‌ಬುಕ್‌ನಲ್ಲಿ ಮಹಿಳೆಯರು ಸೀರೆಯಲ್ಲಿ ಮಿಂಚುತ್ತಿರುವ ಫೋಟೋಗಳನ್ನು ಅಪ್‌ಲೋಡ್ ಮಾಡಿ, ತಮ್ಮ ಸ್ನೇಹಿತರಿಗೆ ಖೋ ಕೊಟ್ಟು ಅದನ್ನೊಂದು ಆಂದೋಲನ ರೀತಿ ಮಾಡುತ್ತಿದ್ದಾರೆ. ಇದನ್ನು ನೋಡುತ್ತಿದ್ದಂತೆ ನನಗೆ ಅಪರಾಧಿ ಭಾವನೆ ಒತ್ತರಿಸಿ ಬರುತ್ತಿದೆ. ಎಲ್ಲವೂ ಚೆನ್ನಾಗಿ ಇದ್ದರೆ, ನಿನ್ನವು ಇಂಥ ಹಲವು ಫೋಟೋಗಳು ನಿನ್ನ ಪ್ರೊಫೈಲ್‌ನಲ್ಲಿ ರಾರಾಜಿಸುತ್ತಿದ್ದವು. ಯಾಕೆಂದರೆ, ಸೀರಿಯುಟ್ಟರೆ, ನಿನ್ನ ಸೌಂದರ್ಯ ದುಪ್ಪಟ್ಟಾಗುತ್ತಿತ್ತು. ಅದಕ್ಕೊಂದು ಚೆಲವು ಬರುತ್ತಿತ್ತು, ಒಲವು ಮೂಡುತ್ತಿತ್ತು. ಆದರೆ, ನನ್ನಿಂದಾದ ತಪ್ಪಿನಿಂದ ನೀನು ಇಂಥ ಎಲ್ಲ ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸಲು ಆಗುತ್ತಿಲ್ಲ. ಅಂದು ನಿನ್ನ ಮಾತು ಕೇಳಬೇಕಿತ್ತು. ಅಂಥ ಅರ್ಜೆಂಟ್ ಏನೂ ಇರಲಿಲ್ಲ. ವಿದೇಶದಿಂದ ಬರುತ್ತಿದ್ದ ಗೆಳೆಯನೊಬ್ಬನನ್ನು ಆರಾಮವಾಗಿ ಕರೆದುಕೊಂಡು ಬರಬಹುದಿತ್ತು. ಬಹಳ ದಿನಗಳ ನಂತರ ನನ್ನ ಬಾಲ್ಯದ ಸ್ನೇಹಿತ ನನ್ನನ್ನು ಮಾತ್ರ ಭೇಟಿಯಾಗಲು ಬರುತ್ತಿದ್ದಾನೆಂಬ ಹುಚ್ಚು ಸಂತೋಷದ ನಡುವೆ ನಿನ್ನ ಎಚ್ಚರಿಕೆಯ ಮಾತುಗಳು ಕೇಳಿಸಲಿಲ್ಲ. ನಿಧಾನವಾಗಿಯೇ ಕಾರು ಓಡಿಸಿದ್ದರೆ ಎಲ್ಲವೂ ಚೆನ್ನಾಗಿರುತ್ತಿತ್ತು. ಅತಿಯಾದ ಉತ್ಸಾಹ, ಹುಚ್ಚು ಸಂತೋಷದಲ್ಲಿ ಎಲ್ಲೇ ಮೀರಿ ಓಡುತ್ತಿದ್ದ ಕಾರು ದಿಕ್ಕು ತಪ್ಪದೇ ಇರುತ್ತದೆಯೇ? ತಪ್ಪೀತು. ಖಂಡಿತ ಏನು ಆಗ ಬಾರದಿತ್ತೋ... ಅದೇ ಆಗಿತ್ತು. ನನಗೆ ಎಚ್ಚರವಾದಾಗ ಎಲ್ಲವೂ ಸ್ಪಷ್ಟವಾಗಿತ್ತು. ಚಿಕ್ಕ ಪುಟ್ಟ ಗಾಯಗಳಿಂದ ನಾನು ಬಚಾವಾಗಿದ್ದೆ. ಆದರೆ, ನೀನು ಜೀವಂತ ಹೆಣವಾಗಿದ್ದೆ. ‘‘ಶಿ ಈಸ್ ಇನ್ ಕೋಮಾ,’’ ಎಂದು ಡಾಕ್ಟರ್ ಹೇಳಿದಾಗ ನನಗೆ ಇಡೀ ಆಕಾಶವೇ ಮೈ ಮೇಲೆ ಕಳಚಿ ಬಿದ್ದ ಅನುಭವ. ಕಳೆದ ಒಂದು ವರ್ಷದಿಂದ ನಿನ್ನ ಸಾನ್ನಿಧ್ಯದಲ್ಲೇ ಇದ್ದೇನೆ. ಯಾವ ಕ್ಯಾಮೆರಾವೂ ನಿನ್ನ ಸಾನ್ನಿಧ್ಯದಿಂದ ನನ್ನನ್ನು ಬೇರ್ಪಡಿಸುತ್ತಿಲ್ಲ. ಯಾವ ಪಕ್ಷಿ, ಪ್ರಾಣಿಯ ಅಮೇಜಿಂಗ್ ಆಗಿ ಕಾಣುತ್ತಿಲ್ಲ.  ನನಗೆ ಈಗಿರುವ ಒಂದೇ ಧ್ಯಾನ. ಅದು ನಿನ್ನ ಸಾನ್ನಿಧ್ಯದಲ್ಲಿ, ನಿತ್ಯ ನೆನಪುಗಳನ್ನು ಮೆಲಕು ಹಾಕುವುದಷ್ಟೆ  ನನ್ನ ಒಂದೇ ಸರಳ ರೇಖೆಯಲ್ಲಿ ಎಳೆಯಬಹುದಾದ ಜೀವನ. ನನ್ನ ಜೀವನಕ್ಕೀಗ ಈಗೊಂದು ಅರ್ಥ ಸಿಕ್ಕಿದೆ. ನನ್ನ ಉಸಿರು ಇರೋವರಿಗೆ ನಿನಗೆ ಉಸಿರಾಗಿರುವುದು. ಅದನ್ನು ಬಿಟ್ಟು ನನಗೆ ಬೇರೆ ಯಾವುದೇ ಮೋಹಗಳಿಲ್ಲ...
***
ಹೀಗೆ ಹೇಳಿಕೊಳ್ಳುತ್ತಾ ಆಕೆಯ ತೊಡೆಯ ಮೇಲೆ ಕಣ್ಣೀರಿಟ್ಟವನಿಗೆ, ಆಕೆಯ ಸ್ಪಂದನ ಏನೋ ಎನ್ನುವಂತೆ, ಕಣ್ಣು ಸ್ವಲ್ಪ ಸಂಚಲನಗೊಂಡಿದ್ದು ಅವನ ಅರವಿಗೆ ಬರಲಿಲ್ಲ. ಆದರೆ, ಆತನೇ ತೆಗೆದ ಫೋಟೋದಲ್ಲಿದ್ದ ಅದಾವುದೋ ಕಾಡು ಹಕ್ಕಿಯೊಂದು ಕಂಡು ಕಾಣದಂತೆ ಆಕೆಯ ಕಣ್ ಚಲನೆಯನ್ನು ನೋಡಿಯೂ ನೋಡಿದಂತಿತ್ತು. 

ಸೋಮವಾರ, ಮೇ 23, 2016

ನಾವು ಏನೋ ಅಂದುಕೊಳ್ಳುತ್ತೇವೆ, ಅದು ಇನ್ನೇನೋ ಆಗುತ್ತದೆ!

ಹುಡುಗನೊಬ್ಬನ ಗಜಲ್ ಗಳು-
ಯಾವುದೇ ಕಲ್ಮಶವಿಲ್ಲದೇ ನಿರ್ವ್ಯಾಜ ಪ್ರೀತಿಯಾಗಿದ್ದರೆ ನಾವು ಹೇಗೆ ದೂರು ಆಗುತ್ತಿದ್ದೆವು..

- ಪ್ರದ್ಯುಮ್ನ
ಒಲಿದ ಹೃದಯಗಳು ಒಂದಾದರೆ ಬಾಳು ಇಂಪಾದ ಸಂಗೀತದಂತೆ ಕೇಳಿಸಲಾರಂಭಿಸುತ್ತದೆ. ಒಮ್ಮೊಮ್ಮೆ ಅಪಸ್ವರಗಳೇ ಹೆಚ್ಚಾದರೆ ಬಾಳು ನಾನೊಂದು ತೀರ... ನೀನೊಂದು ತೀರ... ಆಗುವುದು ಗ್ಯಾರಂಟಿ. ಆಗ ಕುಹಕ ಮಾತು, ವ್ಯಂಗ್ಯ ನಿಮ್ಮನ್ನು ಚುಚ್ಚಿ ಹೈರಾಣಾಗಿಸುತ್ತವೆ. ಕ್ರಿಕೆಟಿಗ ವಿರಾ್ ಕೊಹ್ಲಿ ಮತ್ತು ನಟಿ ಅನುಷ್ಕಾ ಜತೆಗಿನ ಮಧುರ ಬಾಂಧವ್ಯ ಇಂಥ ಅಪಸ್ವರದ ಮಧ್ಯೆ ಹೊರಳಾಡುತ್ತಿರುವಾಗಲೇ ಅವಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣ ಅಪಹಾಸ್ಯ ಮಾಡಿ ನಗುತ್ತಿತ್ತು. ಆದರೆ, ಒಲಿದ ಹೃದಯಕ್ಕೆ ಉಂಟಾದ ನೋವನ್ನು ನೋಡಿ ಸುಮ್ಮನಿರದ ಕೊಹ್ಲಿ, ``ನಿಮಗೆ ನಾಚಿಕೆಯಾಗಲ್ವಾ...? ಆಕೆ ನನಗೆ ಯಾವಾಗಲೂ ಸಕಾರಾತ್ಮಕ ಭಾವನೆಯನ್ನೇ ಕಟ್ಟಿಕೊಟ್ಟಿದ್ದಾಳೆ,'' ಎಂದು ಹೂಂಕರಿಸಿದಾಗಲೇ ಕುಹಕಿಗಳು ಸುಮ್ಮನಾದರು. ಇದೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ, ನಮ್ಮಿಬ್ಬರಿಗೂ ಹಾಗೆ ಆಗಿತ್ತಲ್ಲವೇ? ನಾವು ಒಲಿದ ಸ್ವರಾಗಳಾಗಿ ಇಂಪಾದ ಸಂಗೀತ ಹಾಡುತ್ತಿರುವಾಗಲೇ ಅಪಸ್ವರ ನಾದ ಹೆಚ್ಚಾಗಿ ಸಂಗೀತ ಹಳ್ಳ ಹಿಡಿದು, ನಾವಿಬ್ಬರೂ ದೂರ ಆದದ್ದು. ಆಗ ಕಾಲೇ್ ಕಾರಿಡಾ್ನಲ್ಲಿ ನಿನ್ನ ಬಗ್ಗೆ ಆಡಿಕೊಂಡವರೆಷ್ಟು? ನಿನ್ನಡೆಗೆ ಕುಹಕ ನಗೆ ಚೆಲ್ಲಿ, ವ್ಯಂಗ್ಯವಾಗಿ ನಕ್ಕವರೆಷ್ಟು..? ಆಗ ನಾನು ಕೂಡ ಥೇ್ ಕೊಹ್ಲಿ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೆ. ಕೊಹ್ಲಿ ಈ ಘಟನೆಯು ಆ ನೆನಪುಗಳನ್ನೆಲ್ಲ ಒಂದು ಸಾರಿ ತಿರುವಿ ಹಾಕಿದವು. ಸಿನಿಮಾ ಥಿಯೇಟ್ನ ಪ್ರೊಜೆಕ್ಟ್ನಲ್ಲಿ ಫಿ್‌ಮಗಳು ಒಂದೊಂದಾಗಿ ಒಂದರ ಹಿಂದೆ ಒಂದು ಓಡುವ ಹಾಗೆ ನನ್ನ ಮನಪಟಲದಲ್ಲಿ ಈ ನೆನಪುಗಳು ಮಿಂಚಿ ಮಾಯವಾದವು.
ನಾವಿಬ್ಬರೂ ಎಷ್ಟು ಅನ್ಯೋನ್ಯವಾಗಿದ್ದೆವಲ್ಲ. ನಮ್ಮನ್ನು ನೋಡಿ ಇಡೀ ಕ್ಯಾಂಪಸ್ಸೇ ಹೊಟ್ಟೆಕಿಚ್ಚು ಪಡುತ್ತಿತ್ತು. ಕಾಲೇ್ ಚರ್ಚಾಕೂಟಗಳಲ್ಲಿ ನನ್ನನ್ನು ಮೀರಿಸಿದವರೇ ಇರಲಿಲ್ಲ. ಸುತ್ತಲಿನ ಕಾಲೇಜುಗಳಲ್ಲೂ ಪ್ರಖ್ಯಾತಿ ಹಬ್ಬಿತ್ತು. ಚರ್ಚಾಕೂಟದಲ್ಲಿ ಭಾಗವಹಿಸಿದೆನೆಂದರೆ ಅಲ್ಲಿ ಪ್ರಥಮ ಬಹುಮಾನವನ್ನು ಮೊದಲೇ ಮೀಸಲಿಡುತ್ತಿದ್ದರು. ಆದರೆ, ಅಂದಿನ ಆ ಚರ್ಚಾಕೂಟದಲ್ಲಿ ನಾನು ಸೋತು ಹೋಗಿದ್ದೆ. ಅದಕ್ಕೆಲ್ಲ ನೀನೇ ಕಾರಣ ಎಂದು ನನ್ನ ಸ್ನೇಹಿತರಾದಿಯಾಗಿ ಎಲ್ಲರೂ ಕಾರಿಡಾ್ನಲ್ಲಿ ಹಂಗಿಸುತ್ತಿದ್ದರು. ಇದನ್ನೆಲ್ಲ ಹೇಗೆ ಸಹಿಸಿಕೊಳ್ಳಲಿ ಹೇಳು? ನೀನು ಯಾವತ್ತೂ ನನ್ನ ಸಾಧನೆಗೆ ಅಡ್ಡಿಯಾದವಳೇ ಅಲ್ಲ. ನನ್ನ ಸ್ಫೂರ್ತಿ ನೀನು. ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀನು. ಅದು ನಿನಗೂ ಗೊತ್ತಿತ್ತು. ಆದರೆ, ನೀನು ಮಾತ್ರ ಕಾರಿಡಾ್ ರೂಮ್ಗಳಿಗೆ ಬೆಲೆ ಕೊಟ್ಟು, ಬೆಲೆಕಟ್ಟಲಾಗದ ನನ್ನ ಸ್ನೇಹವನ್ನು ಪೂರ್ತಿ ಕಡಿದುಕೊಂಡೆ. ಇದ್ಯಾವ ನ್ಯಾಯ ಹೇಳು? ನಿನಗೆ ಹಂಗಿಸುತ್ತಿದ್ದವರೆಗೆಲ್ಲ ಸರಿಯಾಗಿಯೇ ನೀರಿಳಿಸಿದ್ದೆ. ಆದರೂ ನಮ್ಮಿಬ್ಬರ ಮಧ್ಯ ಆ ಇಂಪಾದ ಸಂಗೀತ ಮತ್ತೆ ಒಡಮೂಡಲೇ ಇಲ್ಲ. ನಮ್ಮಿಬ್ಬರ ಸ್ನೇಹ-ಪ್ರೀತಿ-ಪ್ರೇಮ ತಿಳಿ ಕೊಳದಲ್ಲಿ ರೂಮ್ ಕಲ್ಲುಗಳು ದೊಡ್ಡ ಅಲ್ಲೋಲ ಕಲ್ಲೋಲ ಅಲೆಗಳನ್ನು ಸೃಷ್ಟಿಸಿದ್ದವು. ಆ ಅಲೆಗಳ ಸುಳಿಯಿಂದ ನಾನು ಹೊರ ಬಂದೆ. ಆದರೆ ನೀನು ಮಾತ್ರ ಅದೇ ಸುಳಿಯಲ್ಲಿ ಆಳವಾಗಿ ಸಿಲುಕುತ್ತಾ, ಮತ್ತಷ್ಟು ಸುಕ್ಕಾಗುತ್ತಾ ಹೋದೆ.
ಈ ಘಟನೆಗಳನ್ನೆಲ್ಲ ಈಗ ರಿವೈಂ್ ಮಾಡಿ ನೋಡಿದಾಗ ಒಂದೊಂದು ಸಾರಿ ಸಿಲ್ಲಿ ಅನ್ನಿಸುತ್ತದೆ. ಮತ್ತೊಂದು ಸಾರಿ ನಾವಿಬ್ಬರೂ ಎಂಥ ಕುಹಕಕ್ಕೆ ಬಲಿಯಾದವೆಲ್ಲ ಎಂಬ ವ್ಯಥೆಯಾಗುತ್ತದೆ. ನಮ್ಮ ನಡುವಿನ ಬಾಂಧವ್ಯ ಅಷ್ಟು ಅಲ್ಪ ಕಾಲದ್ದಾಗಿತ್ತೆಂದರೆ ಅದು ಪೂರಿಪೂರ್ಣವಾಗಿರಲಿಲ್ಲ ಎಂದರ್ಥಲ್ಲವೇ? ಬಾಂಧವ್ಯದ ಬಿಲ್ಡಿಂ್ಗೆ ನಂಬಿಕೆ ಎಂಬ ತಳಪಾಯ ಗಟ್ಟಿಯಾಗಿರಲಿಲ್ಲ.  ಇಲ್ಲದಿದ್ದರೆ, ರೂಮ್ಗಳೆಂಬ ಸಣ್ಣ ಬಿರುಗಾಳಿಗೆ ಇಡೀ ಬಿಲ್ಡಿಂ್ ಕುಸಿದು ಬಿತ್ತು ಎಂದು ನಂಬುವುದಾದರೂ ಹೇಗೆ? ಆದರೆ, ಅದೇ ವಾಸ್ತವ ಅಲ್ಲವೇ? ನಂಬಲೇ ಬೇಕು. ನಂಬಿದ್ದೇನೆ ಕೂಡ. ಇದನ್ನು ಬಿಟ್ಟು ಇನ್ಯಾವ ದಾರಿ ಇತ್ತು ಹೇಳು ನನಗೆ? ಆದರೆ, ನೀನು ಮಾತ್ರ ಏನೂ ಆಗಿಯೇ ಇಲ್ಲ ಎನ್ನುವ ಹಾಗೇ ಇದ್ದೆ. ನಿನ್ನ ಮನಸ್ಸು ಅದ್ಹೇಗೆ ಅಷ್ಟೊಂದು ಕಠೋರವಾಗಿತ್ತು? ಕಿಂಚಿ್ ಆದರೂ ಕರುಣೆ ಗಾಳಿ ತಾಕಲಿಲ್ಲವೇ? ಬಹುಶಃ ತಾಕಿದ್ದರೆ ನನ್ನಂತೆಯೇ ನೀನು ಕುಹುಕಿಗಳಿಗೆಲ್ಲ ಒಂದು ಪಾಠ ಕಲಿಸುತ್ತಿದ್ದೆ. ಈಗೀಗ ನನಗನ್ನಿಸುತ್ತದೆ ನಮ್ಮಿಬ್ಬರದ್ದು ಒತ್ತಾಯಪೂರ್ವಕವಾಗಿ ನಂಬಿಸಿಕೊಂಡು ಪ್ರೀತಿಯಾಗಿತ್ತಾ.. ಸ್ನೇಹವಾಗಿತ್ತಾ ಅಂತ. ಸಹಜವಾದ ಮತ್ತು ಯಾವುದೇ ಕಲ್ಮಶವಿಲ್ಲದ ನಿರ್ವಾಜ್ಯ ಪ್ರೀತಿಯಾಗಿದ್ದರೆ ನಾವು ಹೇಗೆ ದೂರ ಆಗುತ್ತಿದ್ದೆವು?
ಒಂದು ವಿಷಯವನ್ನು ನೀನು ಮರೆತಿದ್ದೆ. ನನ್ನನ್ನು ಎಷ್ಟು ಸಲೀಸಾಗಿ ದಿಕ್ಕರಿಸಿ ಹೋದೆಯಲ್ಲ ನೀನು. ಆದರೆ, ನೀನಾದರೂ ಸುಖವಾಗಿದ್ದಾ? ಇಲ್ಲ. ಇರಲಿಲ್ಲ. ನಿಮ್ಮ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಅದ್ಯಾವುದೋ ಎಂಜಿನಿಯ್ನನ್ನು ಮದುವೆಯಾಗಿ ಮುಂಬಯಿಗೆ ಹಾರಿ ಹೋದೆ. ಎಲ್ಲರಂತೆ ನಾನು, ನಿನ್ನ ಜೀವನವನ್ನು ನೀನು ಕಟ್ಟಿಕೊಂಡೇ ಬಿಡು ಎಂದು ಭಾವಿಸಿ, ಅದೇ ಹಳೆ ನೆನಪುಗಳ ಕ್ಯಾಸೆ್ ಅನ್ನು ರೀವೈಂ್ ಮಾಡುತ್ತಾ ನನ್ನದೇ ಲೋಕದಲ್ಲಿ ಕಳೆದು ಹೋದೆ. ಹಳೇ ದೇಗುಲ, ಗೋರಿಗಳನ್ನು ಹುಡುಕಿಕೊಂಡು ಹೋದೆ. ಅವುಗಳ ಹಿಂದಿರುವ ಇತಿಹಾಸ ಕೆದಕುತ್ತಾ ನಮ್ಮಿಬ್ಬರ ಗತಪ್ರೇಮ ಮರೆಯಲು ಪ್ರಯತ್ನಿಸುತ್ತಿದ್ದೆ. ಈ ಕೆಲಸ ನನಗೆ ಒಂದಿಷ್ಟು ನೆಮ್ಮದಿ ಮತ್ತು ಇನ್ನೊಂದಿಷ್ಟು ಉತ್ಸಾಹ ತುಂಬುತ್ತಿತ್ತು. ಯಾಕೆ ಗೊತ್ತಾ? ಕೆಲವು ರಾಜರು, ಶ್ರೀಮಂತರು ತಮ್ಮ ಪ್ರೀತಿಯ ಪ್ರತೀಕವಾಗಿ, ಪತ್ನಿಯರ ನೆನಪಿಗೆ ಗುಡಿಯನ್ನೋ, ಗೋರಿಯನ್ನೋ ಕಟ್ಟಿ ತಮ್ಮ ಪ್ರೇಮವನ್ನು ಚಿರಸ್ಥಾಯಿಯಾಗಿಸಲು ಪ್ರಯತ್ನಿಸಿದ್ದರು. ಇಂಥವುಗಳ ಹಿಂದೆ ದಂತಕತೆಗಳು ಹುಟ್ಟಿಕೊಂಡು, ನಿರ್ವಾಜ್ಯ ಪ್ರೇಮವೆಲ್ಲ ಗಾಳಿಗೆ ತೂರಿ ಹೋಗಿತ್ತು. ಸ್ಥಾನಪಲ್ಲಟವಾದ ಪ್ರೇಮದ ಚುಕ್ಕೆಗಳನ್ನು ಸೇರಿಸಿ ಸುಂದರವಾದ ಕಲಾಕೃತಿ ರಚಿಸಲು ಪ್ರಯತ್ನಿಸುತ್ತಿದ್ದೆ. ತುಸು ಮಟ್ಟಿಗೆ ಯಶಸ್ವಿಯಾದೆ ಅಂದುಕೊಂಡರೂ ತಪ್ಪಿಲ್ಲ. ಆದರೆ, ಎದೆಯಾಳದಲ್ಲಿ ನೀನು ಬಿಟ್ಟು ಹೋದ ನೆನಪುಗಳು ಮಾತ್ರ ಸಾಯುತ್ತಲೇ ಇರಲಿಲ್ಲ. ಆಗೆಲ್ಲ ನಾನು ಇನ್ನಾವುದೋ ಗುಡಿಯನ್ನೋ, ಗೋರಿಯನ್ನೋ ಹುಡುಕಿಕೊಂಡು ಹೋಗುತ್ತಿದ್ದೆ.
ಅಂದೊಂದು ದಿನ ನಾನು ಯಾವುದನ್ನು ಕೇಳಬಾರದು ಎಂದುಕೊಂಡಿದ್ದೇನೋ ಅದೇ ಸುದ್ದಿಯನ್ನು ಕೇಳಬೇಕಾಯಿತು. ನೀನು ಊರಿಗೆ ಬಂದಿದ್ದು ಗೊತ್ತಾಯಿತು ನಿಜ. ಆದರೆ ನಿನ್ನನ್ನು ನೋಡುವ, ನಿನ್ನ ಎದುರಿಗೆ ಬರುವ ಧೈರ್ಯ ಇರಲಿಲ್ಲ. ವಿಧಿಯಾಟ ಬೇರೆನೇ ಅಲ್ಲವೇ? ಅದೊಂದು ಸಂಜೆ ಊರ ಹೊರಗಿನ ಗುಡಿಯಲ್ಲಿ ನೀನು ನಿನ್ನ ಅಮ್ಮನ ಜತೆ ನಿಂತಿದ್ದೆ,  ಆದರೆ, ನಿನ್ನ ನೋಡಿ ನನ್ನ ನಾನೇ ನಂಬಲಿಲ್ಲ. ನಿಜಕ್ಕೂ ಅದು ನೀನೇನಾ? ಹೇಗಿದ್ದೆ ನೀನು- ಬಳಕುವ ಬಳ್ಳಿ. ಸೂಜಿಮಲ್ಲಿಗೆಯಂಥವಳು. ಸೂಜಿಗಲ್ಲಿನವಳು. ಕಾಲೇ್ನಲ್ಲಿದ್ದಾಗ ಎಲ್ಲ ಹುಡುಗರು ಒಂದು ಕ್ಷಣವಾದರೂ ನಿನ್ನನ್ನು ನೋಡದೆ ಹೋಗುತ್ತಿರಲಿಲ್ಲ. ಅಂಥ ವ್ಯಕ್ತಿತ್ವ ನಿನ್ನದು. ಅವಳೇನಾ ನೀನು ಎಂಬ ಮಟ್ಟಿಗೆ ಬದಲಾಗಿದ್ದೆ. ಮುಖದಲ್ಲಿ ಕಳೆ ಇಲ್ಲ; ನಕ್ಕು ಎಷ್ಟೋ ದಿನಗಳವಾಗಿರುವ ಹಾಗಿತ್ತು. ಕೃಶ ಶರೀರದಲ್ಲಿ ಸುಮ್ಮನೇ ನೆಪಕ್ಕೆ ಮಾತ್ರ ಎನ್ನುವಂಥ ಜೀವ. ನಿನ್ನ ಜೀವನದಲ್ಲಿ ಹೀಗೆಲ್ಲ ಆಗಬಾರದೆಂದು ನಾನು ಬಯಸಿದ್ದೆ. ಆದರೆ, ಅದೇ ಆಗಿ ಹೋಗಿತ್ತು. ನಿನ್ನ ಇಂದಿನ ಪರಿಸ್ಥಿತಿಗೆ ಆ ನಿನ್ನ ಹಣ, ಹೆಣ್ಣುಬಾಕ ಗಂಡನೇ ಕಾರಣ ಎಂಬುದು ಗೊತ್ತಾಗಿದ್ದು ನಿನ್ನ ಗೆಳತಿಯಿಂದಲೇ. ಗೊತ್ತಿದ್ದು ಗೊತ್ತಿದ್ದು ನಿಮ್ಮ ಮನೆಯವರು ಅಂಥವನ ಖೆಡ್ಡಾಕ್ಕೆ ನಿನ್ನನ್ನು ಕೆಡವಿದ್ದರು ಎಂದು ಆಕೆ ಕಣ್ಣೀರಾಗಿದ್ದಳು.
ನೋಡು ಜೀವನವೇ ಹೀಗೆ. ನಾವು ಏನು ಅಂದುಕೊಂಡು ಹೋಗುತ್ತೇವೆ. ಅದು ಇನ್ನೇನೋ ಆಗುತ್ತದೆ. ಕಾರಿಡಾ್ಗಳಲ್ಲಿನ ಹಂಗಿಸುವ ಮಾತುಗಳನ್ನು, ರೂಮ್ಗಳನ್ನು ನೀನು ಅಷ್ಟು ಸೀರಿಯ್ ಆಗಿ ತೆಗೆದುಕೊಳ್ಳದಿದ್ದರೆ ಇಂದು ನಮ್ಮಿಬ್ಬರದೇ ಒಂದು ಪುಟ್ಟ ಸಂಸಾರ ಆನಂದ ಸಾಗರವಾಗಿರುತ್ತಿತ್ತು. ಆದರೆ, ಈಗ ಕಾಲ ಮಿಂಚಿ ಹೋಗಿದೆ. ಚಿಂತಿಸಿ ಫಲವಿಲ್ಲ ಎನ್ನುವ ಹಾಗಿಲ್ಲ. ನಿನ್ನ ನೆನಪಲ್ಲಿ ನಾನು ಇಂದಿಗೂ ಹಾಗೆಯೇ ಇದ್ದೇನೆ. ಅಂದು ಹೇಗಿದ್ದೇನೋ ಹಾಗೆ. ಮುಂದಿನ ನಿರ್ಣಯ ನಿನಗೆ ಬಿಟ್ಟದ್ದು.

ಸೋಮವಾರ, ಮೇ 2, 2016

ವೀಸಾ ಗದ್ದಲ್ಲದಲ್ಲಿ ಸಿಕ್ಕ ಇಸಾ

ಪೂರ್ವ ತುರ್ಕಿಸ್ತಾನ ಎಂದೂ ಕರೆಯಲಾಗುವ ಚೀನಾದ ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶದ ಪತ್ಯೇಕತಾವಾದಿ ನಾಯಕ ದೋಲ್ಕು್ ಇಸಾ ಅಲ್ಪ ಸಂಖ್ಯಾತ ಉಯಿಗ್ ಪಂಗಡದ ನಾಯಕ.

ದೋಲ್ಕು್ ಇಸಾ.
ಕಳೆದ ವಾರ ಭಾರತದ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಪ್ರಸಿದ್ಧಿಯಾದ `ಅಪರಿಚಿತ' ವ್ಯಕ್ತಿ ಇವರು. ಚೀನಾದಲ್ಲಿ ಸ್ವಾಯತ್ತ ಪ್ರಾಂತವಾಗಿರುವ ಕ್ಸಿ್ಜಿಯಾಂ್ ಸ್ವಂತ್ರಗೊಳ್ಳಲು ಹೋರಾಟ ನಡೆಸುತ್ತಿರುವ ನಾಯಕ ಇವರು. ಆದರೆ, ಕಮ್ಯುನಿ್‌ಟ ಚೀನಾ ಸರಕಾರಕ್ಕೆ ಇವರೊಬ್ಬ `ಮೋ್‌ಟ ವಾಂಟೆ್ ಟೇರರಿ ್‌ಟ'.
ಇತ್ತೀಚೆಗಷ್ಟೇ ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ಪ್ರಭಾವ ಬೀರುವ ಕೆಲಸಕ್ಕೆ ಕೈ ಹಾಕಿತ್ತು. ಪಠಾ್ಕೋ್ ವಾಯು ನೆಲೆ ದಾಳಿಯ ಪ್ರಮುಖ ಸಂಚುಕೋರ ಹಾಗೂ ಜೈಷೆ ಮೊಹಮ್ಮ್ ಉಗ್ರ ಸಂಘಟನೆಯ  ನಾಯಕ ಮಸೂ್ ಅಜ್ನನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಭಾರತ ನಡೆಸಿತ್ತು. ಆದರೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ವಿಟೋ ಪವ್ ಹೊಂದಿರುವ ಚೀನಾ ಎಂದಿನಂತೆ ಭಾರತದ ಯತ್ನಕ್ಕೆ ಅಡ್ಡಗಾಲು ಹಾಕಿತ್ತು. ಚೀನಾದ ಈ ನಡೆ ಸಹಜ ಕೂಡ. ಪಾಕಿಸ್ತಾನ ಮತ್ತು ಚೀನಾ ಅತ್ಯಾಪ್ತ ರಾಷ್ಟ್ರಗಳೆಂಬುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಈ ವಿಷಯದಲ್ಲಿ ಕೊಂಚ ಮುಜಗರ ಎದುರಿಸಿದ್ದ ಭಾರತಕ್ಕೆ, ಚೀನಾಗೆ ತಿರುಗೇಟು ನೀಡಲು ಸಿಕ್ಕಿದ್ದ ಹೊಸ ಅಸ್ತ್ರವೇ ಈ `ದೋಲ್ಕು್ ಇಸಾ'.
ಅಮೆರಿಕ ನೆರವಿನಿಂದ ಭಾರತದ ಧರ್ಮಶಾಲಾದಲ್ಲಿ ಏಪ್ರಿ್ 30ರಿಂದ ಎರಡು ದಿನಗಳ ಕಾಲ ನಡೆದ `ಇನಿಶಿಯೇಟಿ್‌ಸ ಫಾ್ ಚೀನಾ' ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಶ್ವ ಉಯಿಗು್ ಕಾಂಗ್ರೆ್(ಡಬ್ಲ್ಯೂಯುಸಿ)ನ ಪ್ರಧಾನ ಕಾರ್ಯದರ್ಶಿ ದೋಲ್ಕು್ ಇಸಾಗೆ ಆಹ್ವಾನ ನೀಡಲಾಗಿತ್ತು. ಇದಕ್ಕಾಗಿ ಇಸಾ ಭಾರತಕ್ಕೆ ಬರುವ ಸಿದ್ಧತೆ ನಡೆಸಿದ್ದರು. ವೀಸಾ ಕೂಡ ಸಿಕ್ಕಿತ್ತು. ಈ ವಿಷಯ ಭಾರತೀಯ ಮಾಧ್ಯಮಗಳಲ್ಲಿ `ಚೀನಾಗೆ ಭಾರತದ ಎದಿರೇಟು' ಎಂದು ಬಿಂಬಿತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚೀನಾ; ಭಾರತದ ಮೇಲೆ ಒತ್ತಡ ತಂದು, ದೋಲ್ಕು್ಗೆ ನೀಡಿದ್ದ ವೀಸಾ ರದ್ದಾಗುವಂತೆ ನೋಡಿಕೊಂಡಿತು. ಇಸಾ ಚೀನಾಕ್ಕೆ ಬೇಕಾಗಿರುವ ಮೋ್‌ಟ ವಾಟೆಂ್ ಉಗ್ರ ನಾಯಕ. ಆತನ ವಿರುದ್ಧ ಇಂಟ್ಪೋ್ನಲ್ಲಿ ರೆ್ ಕಾರ್ನ್ ನೋಟಿ್ ನೀಡಲಾಗಿದೆ. ಅಂಥವನಿಗೆ ಹೇಗೆ ವೀಸಾ ನೀಡುತ್ತೀರಿ ಎಂದು ಪ್ರಶ್ನಿಸಿತು. ಚೀನಾದ ಒತ್ತಡಕ್ಕೆ ಕೊನೆಗೂ ಮಣಿದ ಭಾರತ, ಯಾವುದೇ ವಿವರ ನೀಡದೆ ದೋಲ್ಕು್ ಇಸಾ ಅವರಿಗೆ ನೀಡಲಾಗಿದ್ದ ವೀಸಾ ರದ್ದು ಮಾಡಿತು. ಅಲ್ಲಿಗೆ ಮತ್ತೊಂದು ಬಾರಿ ಭಾರತ ಅಂತಾರಾಷ್ಟ್ರೀಯವಾಗಿ ಮುಜಗರ ಎದುರಿಸುವಂತಾಯಿತು. ಯಾವುದೇ ದೂರದೃಷ್ಟಿ ಇಲ್ಲದೆ, ಭಾವನಾತ್ಮಕ, ಸೇಡಿನ ಕ್ರಮಗಳಿಂದ ನಿರ್ಧಾರ ಕೈಗೊಂಡರೆ ಇಂಥ ಮುಜಗರದ ಸನ್ನಿವೇಶಗಳು ಎದುರಿಸಲೇಬೇಕಾಗುತ್ತದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ.
ಇದೆಲ್ಲ ಸರಿ. ಆದರೆ, ಈ ದೋಲ್ಕು್ ಇಸಾ ಯಾರು? ಆತನ ಮೇಲೇಕೆ ಚೀನಾಗೆ ಮುನಿಸು? ಎಂಬಂಥ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಚೀನಾದ ವಾಯವ್ಯ ಭಾಗಕ್ಕಿರುವ ವಿಶಾಲವಾದ ಭೂ ಪ್ರದೇಶವೇ `ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶ.' ಖನಿಜಗಳು ಮತ್ತು ನೈಸರ್ಗಿಕ ಅನಿಲ ಹೇರಳವಾಗಿರುವ ಈ ಪ್ರದೇಶ ಚೀನಾಗೆ ಅಕ್ಷರಶಃ ಚಿನ್ನದ ಗಣಿ. ಈ ಪ್ರದೇಶದಲ್ಲಿ ಅನೇಕ ಪಂಗಡಗಳಿದ್ದು ಈ ಪೈಕಿ ಉಯಿಗು್ ಪಂಗಡದವರೇ ಹೆಚ್ಚಾಗಿದ್ದಾರೆ. ಚೀನಾದಲ್ಲಿ ಅಲ್ಪಸಂಖ್ಯಾತರಾಗಿರುವ ಇವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. `ವಿಶ್ವ ಉಯಿಗು್ ಕಾಂಗ್ರೆ್' ಎಂಬ ಸಂಘಟನೆ ಈ ಹೋರಾಟದ ನೇತೃತ್ವ ವಹಿಸಿಕೊಂಡಿದೆ. ಇದರ ಅಧ್ಯಕ್ಷ ರೆಬಿಯಾ ಖಾದಿ್. ಇವರು ಅಮೆರಿಕದಲ್ಲಿದ್ದಾರೆ. ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿಯೇ ಈ ದೋಲ್ಕು್ ಇಸಾ. ಸದ್ಯ ಜರ್ಮನಿಯಲ್ಲಿ ವಾಸವಾಗಿರುವ ಇಸಾ, ಪ್ರಜಾಪ್ರಭುತ್ವದ ಪರ ಹೋರಾಟಗಾರ. 1997ರಲ್ಲಿ ಚೀನಾದಿಂದ ಪಲಾಯನ ಮಾಡಿ ಜರ್ಮನಿಯಲ್ಲಿ ಆಶ್ರಯ ಪಡೆದರು. 2006ರಲ್ಲಿ ಜರ್ಮನಿ ಇವರಿಗೆ ಅಲ್ಲಿನ ಪೌರತ್ವ ನೀಡಿದೆ.
ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ವಿಶ್ವ ಉಯಿಗು್ ಕಾಂಗ್ರೆ್ ಚಟುವಟಿಕೆಗಳನ್ನು ಚೀನಾ ಸರಕಾರ ಉಗ್ರ ಕೃತ್ಯಗಳಂದೇ ಪರಿಗಣಿಸುತ್ತದೆ. ಹೀಗಾಗಿ, ಈ ಹೋರಾಟದಲ್ಲಿ ಪಾಲ್ಗೊಳ್ಳುವವರೆಲ್ಲರೂ ಉಗ್ರರೇ. ಕ್ಸಿ್ಜಿಯಾಂ್ಗೆ ಪೂರ್ವ ತುರ್ಕಿಸ್ತಾನ ಎಂದೂ ಕರೆಯಲಾಗುತ್ತದೆ. ಹಾಗೆ ನೋಡಿದರೆ, ವೀಸಾಗೆ ಸಂಬಂಧಿಸದಂತೆ ಇಸಾ ಇದೇ ಮೊದಲ ಬಾರಿಗೇನೂ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿಲ್ಲ. 2003ರಿಂದಲೇ ದೋಲ್ಕು್ ಚೀನಾದ ಉಗ್ರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಯಿಗು್ರ  ಹೋರಾಟಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು 2008ರಲ್ಲಿ ಬೀಜಿಂ್ನಲ್ಲಿ ನಡೆದ ಒಲಿಂಪಿಕ ಬಹಿಷ್ಕರಿಸುವಂತೆಯೂ ದೋಲ್ಕು್ ಕರೆ ನೀಡಿದ್ದರು. ಇದಕ್ಕೂ ಮುಂಚೆ 2006ರಲ್ಲಿ ತೈವಾ್ಗೆ ೇಟಿ ನೀಡಿ, ಅಲ್ಲಿನ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದು ಚೀನಾಕ್ಕೆ ಗೊತ್ತಾಗುತ್ತಿದ್ದಂತೆ ಒತ್ತಡ ತಂದು, ತೈವಾ್ ಪ್ರವೇಶವನ್ನು ನಿರಾಕರಿಸುವಂತೆ ಮಾಡಿತು. ಇದೇ ವೇಳೆ, ವಿಶ್ವ ಉಯಿಗು್ ಕಾಂಗ್ರೆ್ನ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ದೋಲ್ಕು್ ಹಿಂದೆ ಸರಿದರೆ ಅವರ ಮೇಲಿರುವ ನಿಷೇಧವನ್ನು ಹಿಂತೆಗದುಕೊಳ್ಳಲಾಗುವುದು ಎಂದೂ ಪ್ರಕಟಿಸಿತು. ಆದರೆ, ದೋಲ್ಕು್ ಇದಾವುದಕ್ಕೂ ಬಗ್ಗದೆ, ಉಯಿಗು್ ಪ್ರತ್ಯೇಕತೆಯ ಹೋರಾಟದ ಮುಂಚೂಣಿಯಲ್ಲೇ ಇದ್ದಾರೆ. ಇಸಾ ಮತ್ತೊಮ್ಮೆ ಇಂಥ ತೊಂದರೆಗೆ ಸಿಕ್ಕಿ ಹಾಕಿಕೊಂಡಿದ್ದು ದಕ್ಷಿಣ ಕೊರಿಯಾಗೆ ಹೋದಾಗ. ಅದು 2009ನೇ ಇಸ್ವಿ. ದಕ್ಷಿಣ ಕೊರಿಯಾದಲ್ಲಿ `ಏಷ್ಯಾ ಪ್ರಜಾಪ್ರಭುತ್ವೀಕರಣ ವಿಶ್ವ ವೇದಿಕೆ'ಯ ಸಮಾವೇಶ ಆಯೋಜನೆಯಾಗಿತ್ತು. ಇದಕ್ಕೆ ಇಸಾ ಕೂಡ ಆಮಂತ್ರಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ದಕ್ಷಿಣ ಕೊರಿಯಾಕ್ಕೆ ತೆರಳುತ್ತಿದ್ದಂತೆ ಅವರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆಯೂ ಇಸಾ ತಮ್ಮ ವಿರೋಧವನ್ನು ದಾಖಲಿಸಿದ್ದರು. ಅಲ್ಲದೆ, ಅ್ರೀಪ್ರಸೆಂಟೆ್ ಆ್ಯಂ್ ಪೀಪ್‌ಸ ಆರ್ಗನೈಷೇ್ ಕೂಡ, ದಕ್ಷಿಣ ಕೊರಿಯಾದ ಕ್ರಮವನ್ನು ಖಂಡಿಸಿತ್ತು. ಇಸಾ ವಿರುದ್ಧ ಚೀನಾ ಮಾಡುತ್ತಿರುವ ಆರೋಪಗಳೆಲ್ಲವೂ ನಿರಾಧಾರ. ಅವರು ಯಾವುದೇ ಉಗ್ರ ಚಟುವಟಿಕೆ ನಡೆಸಿಲ್ಲ ಮತ್ತು ಅಂಥ ಸಂಘಟನೆಗಳ ಜತೆ ಗುರುತಿಸಿಕೊಂಡಿಲ್ಲ ಎಂದು ಹೇಳಿತು. ಎರಡು ದಿನಗಳ ಕಾಲ ದಕ್ಷಿಣ ಕೊರಿಯಾ ವಶದಲ್ಲಿದ್ದ ಇಸಾರನ್ನು ಬಿಡುಗಡೆ ಮಾಡಲಾಯಿತಾದರೂ, ಅವರಿಗೆ ದಕ್ಷಿಣ ಕೊರಿಯಾ ಪ್ರವೇಶಕ್ಕೆ ಅವಕಾಶ ಸಿಗಲೇ ಇಲ್ಲ. ಇದೀಗ ಭಾರತಕ್ಕೆ ಪ್ರವೇಶಿಸುವ ವಿಷಯದಲ್ಲೂ ಇಸಾ ಇಂಥದ್ದೇ ಸಮಸ್ಯೆಯನ್ನು ಎದುರಿಸಿದ್ದಾರೆ.
ದೋಲ್ಕು್ ಇಸಾ ಅವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಆದರೆ, ಅವರು ವಿದ್ಯಾರ್ಥಿ ದೆಸೆಯಿಂದಲೂ ಹೋರಾಟರರಾಗಿದ್ದರು ಎಂಬುದಂತೂ ಸತ್ಯ. 1980ರ ದಶಕದಲ್ಲಿ ಅವರು ಕ್ಸಿ್ಜಿಯಾಂ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗಲೇ ಪ್ರಜಾಪ್ರಭುತ್ವ ಪರ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಇದರಿಂದಾಗಿಯೇ ಅವರು ವಿಶ್ವವಿದ್ಯಾಲಯದಿಂದ ಹೊರಬೀಳಬೇಕಾಯಿತು. ಈ ವೇಳೆಯಲ್ಲಿ ಚೀನಾದ ಕಮ್ಯುನಿ್‌ಟ ಶಾಲೆಗಳಲ್ಲಿ ಕಲಿಯುತ್ತಿರುವ ಉಯಿಗು್ ಮಕ್ಕಳಿಗೆ, ಉಯಿಗು್ ಪಂಗಡದ ನಿಜವಾದ ಇತಿಹಾಸ, ಸಂಸ್ಕೃತಿ ತಿಳಿಸುವ ಪುಸ್ತಕಗಳನ್ನ ಹಂಚಲಾರಂಭಿಸಿದರು. ಇದು ಕೂಡ ಅಲ್ಲಿನ ಸರಕಾರದ ಕಣ್ಣು ಕೆಂಪಗಾಗುವಂತೆ ಮಾಡಿತು. ಅವರನ್ನು ಗಡಿಪಾರು ಮಾಡಿದ್ದರಿಂದ ಇಸಾ ಟರ್ಕಿಗೆ ತೆರಳಬೇಕಾಯಿತು. ಅರ್ಧಕ್ಕೆ ನಿಂತಿದ್ದ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿದ ಇಸಾ, ಟರ್ಕಿಯ ಘಾಜಿ ವಿಶ್ವವಿದ್ಯಾಲಯದಿಂದ ಪಾಲಿಟಿಕ ಮತ್ತು ಸೋಸಿಯಾಲಾಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಕಮ್ಯುನಿ್‌ಟ ಸರಕಾರದ ಹತ್ತಿಕ್ಕುವ ಧೋರಣೆಯ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿರುವ ಇಸಾ, ಅಲ್ಪಸಂಖ್ಯಾತ ಉಯಿಗು್ ಮುಸ್ಲಿಮರ ಆಶಾಕಿರಣ. ಇಂದಲ್ಲ ನಾಳೆ, ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶ ಪೂರ್ವ ತುರ್ಕಿಸ್ತಾನವಾಗಿ ಬದಲಾಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಆದರೆ, ಅದು ಅಷ್ಟು ಸರಳವಲ್ಲ. ಟಿಬೆಟಿಯನ್ನರು ಮತ್ತು ಉಯಿಗು್ರು ಸಮಾನ ದುಃಖಿಗಳು. ಟಿಬೆಟಿಯನ್ನರು ಕೂಡ ಪ್ರತ್ಯೇಕತೆಗಾಗಿ ದಶಕಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಏಷ್ಯಾದಲ್ಲೇ ಆರ್ಥಿಕ ಬಲಾಢ್ಯ ರಾಷ್ಟ್ರವಾಗಿರುವ ಚೀನಾದಲ್ಲಿ  ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತುವ ಕೆಲಸವನ್ನು ದೋಲ್ಕು್ ಇಸಾ ಸೇರಿದಂತೆ ಕೆಲವರು ಮಾಡುತ್ತಿದ್ದಾರೆ. ಈ ಬೀಜ ಮೊಳಕೆಯೊಡೆಯುತ್ತಿದ್ದಂತೆ ಚೀನಾ ಅದನ್ನು ಹಿಸುಕುವುದರಲ್ಲಿ ಯಶಸ್ವಿಯಾಗುತ್ತದೆ. ವ್ಯಕ್ತಿಗಳನ್ನು ಹತ್ತಿಕ್ಕಬಹುದು. ಆದರೆ ಚಳವಳಿಗಳನ್ನ ಹತ್ತಿಕ್ಕಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದೋಲ್ಕು್ ಇಸಾರಂಥ ಅನೇಕ ಹೋರಾಟಗಾರರು ಮಹತ್ವದ ವ್ಯಕ್ತಿಗಳು ಎನಿಸಿಕೊಳ್ಳುತ್ತಾರೆ.

This article published in VK on May 1, 2016 Edition

ಸೋಮವಾರ, ಮಾರ್ಚ್ 28, 2016

ಭಾವಕೋಶ ಕಳೆದುಕೊಂಡ ಹೋಳಿಯಾಟ!

ಆಕೆಯ ಕನಸುಗಳನ್ನು ಈಡೇರಿಸುವ ಸೌಭಾಗ್ಯ ನನಗಿಲ್ಲ ಎಂದುಕೊಂಡು ಇಡೀ ದಿನ ಅತ್ತ


- ಪ್ರದ್ಯುಮ್ನ
ಮನೆಯ ಕಿಟಕಿಯಾಚೆ, ಮಕ್ಕಳು ಕೈಯಲ್ಲಿ ಪಿಚಕಾರಿ ಹಿಡಿದು ಒಬ್ಬೊರಿಗೊಬ್ಬರು ಬಣ್ಣ ಎರಚುತ್ತಿದ್ದರು. ಅವರ ಮುಖದಲ್ಲಿ ಸಂತೋಷದ ಹೊನಲು. ಬಣ್ಣದ ಓಕುಳಿಯಾಟದಲ್ಲಿ ಮಿಂದೆದ್ದ ಅವರಿಗೆ ಜಗತ್ತಿನ ಪರಿವೇ ಇರಲಿಲ್ಲ. ಖಾಲಿಯಾದ ಪಿಚಕಾರಿಗಳನ್ನು ಬಣ್ಣದ ನೀರು ತುಂಬಿದ್ದ ಕ್ಯಾ್ಗಳಲ್ಲಿ ಅದ್ದಿ ಮತ್ತೆ ಓಡುತ್ತಿದ್ದರು. ಒಬ್ಬೊರ ಮೈ ಮೇಲೆ ಒಬ್ಬರು ಬೀಳುತ್ತಿದ್ದರು, ಏಳುತ್ತಿದ್ದರು. ಮುಖದ ತುಂಬ ಬಣ್ಣ ಬಣ್ಣದ ಭಾವ. ಕೇಕೆ ನಲಿವುಗಳಿಗೆ ಮಿತಿಯೇ ಇಲ್ಲದ ಕ್ಷಣಗಳವು. ಹೋಳಿಯಾಟವೇ ಅಂಥದ್ದು. ಬಣ್ಣಗಳ ಜತೆಗಿನ ಸಂವಹನ ನಿಮ್ಮನ್ನು ಅನುಭೂತಿಯ ಸಾಂಗತ್ಯಕ್ಕೆ ಕೊಂಡೊಯ್ಯುತ್ತದೆ. ಬಣ್ಣಗಳೇ ಹಾಗೆ, ನಿಮ್ಮ ನೆನಪುಗಳ ಪುಟ್ಟ ಗೂಡನ್ನು ಹೊಕ್ಕು, ಬೆಚ್ಚಿಗೆ ಕುಳಿತಿದ್ದ ನೆನಪುಗಳಿಗೆ ರೆಕ್ಕೆ ಕಟ್ಟುತ್ತುದೆ, ಗರಿ ಬಿಚ್ಚಿ ಹಾರಾಡಲು ಪ್ರೇರೇಪಿಸುತ್ತದೆ. ಬಣ್ಣ ಬಿಂಬಿಸುವ ಭಾವಗಳೇ ನೂರಾರು. ಪ್ರತಿ ಬಣ್ಣವೂ ಸಂಕೇತಿಸುವ ಅದರದ್ದೇ ಆದ ಭಾವನಾಲೋಕ. ಆದರೆ, ಈ ಬಿಳಿ ಬಣ್ಣವಿದೆಯಲ್ಲ ಅದು ಮಾತ್ರ ನನ್ನನ್ನು ಇಂದಿಗೂ ಕಾಡುತ್ತಲೇ ಇದೆ. ಅವಳು ಆ ಬಣ್ಣದ ಸೀರೆಯುಟ್ಟು ಎದುರಾದಾಗಲೆಲ್ಲ ನನ್ನ ಎದೆಯಲ್ಲಿ ನೋವುಗಳ ಕಂಪನ, ಅವಳ ಮುಖ ನೋಡಲು ಧೈರ್ಯವೂ ಸಾಲದು. ವಿಪರ್ಯಾಸ ಎಂದರೆ, ಆಕೆ ಎಂದೂ ಬಿಳಿ ಬಣ್ಣ ಇಷ್ಟಪಟ್ಟವಳಲ್ಲ. ಅವಳಿಗೆ ತಿಳಿ ನೀಲಿ, ಎಂದರೆ ಎಲ್ಲಿಲ್ಲದ ಇಷ್ಟ. ಅದು ಆಕಾಶದ ಬಣ್ಣ. ಆಕಾಶ ಎಂದರೆ ಮಿತಿ ಇಲ್ಲದ್ದು. ಆಕೆಯ ಕನಸು, ಮಹತ್ವಾಕಾಂಕ್ಷೆಗೂ ಇರಲಿಲ್ಲ ಎಲ್ಲೆ. ಆಕಾಶದಂತೆ ಸ್ವಚ್ಛಂದವಾಗಿ ಇರಬೇಕು ಎಂದುಕೊಂಡವಳು. ಆದರೆ, ಜೀವನದಲ್ಲಿ ನಾವು ಅಂದುಕೊಂಡಂತೆ ಏನೂ ನಡೆಯುವುದಿಲ್ಲವಲ್ಲ. ಅದು ಆಕೆಗೂ ಗೊತ್ತಿತ್ತು. ಆದರೆ ಕನಸು ಕಾಣುವುದು ಬಿಟ್ಟಿರಲಿಲ್ಲ. ತನ್ನೆಲ್ಲ ಕನಸುಗಳನ್ನು ನನ್ನ ಜತೆ ಹಂಚಿಕೊಂಡಿದ್ದಳು. ಆಕಾಶವನ್ನು ಹುಚ್ಚು ರೀತಿಯಲ್ಲಿ ಇಷ್ಟಪಡುತ್ತಿದ್ದ ಅವಳು, ಗಗನ ಸಖಿಯಾಗಿ ದಿನವೆಲ್ಲ ಆಕಾಶದಲ್ಲಿ ಹಾರಾಡುತ್ತ, ದೇಶದಿಂದ ದೇಶಕ್ಕೆ ಸುತ್ತತ್ತಲೇ ಇರಬೇಕೊ ಕಣೋ ಎಂದು ದೊಡ್ಡದಾಗಿ ನಗುತ್ತಿದ್ದಳು.
ನನ್ನ ಅವಳ ಗೆಳೆತನ ತುಂಬ ಹಳೆಯದ್ದು. ಅಂದರೆ, ನಾವಿಬ್ಬರೂ ಒಟ್ಟಾಗಿಯೇ ಓದುತ್ತಿದ್ದೆವು. ನಮ್ಮ ನಡುವಿನ ಸಂಬಂಧಕ್ಕೆ ಹೆಸರೇ ಇರಲಿಲ್ಲ. ನೀವು ಅದನ್ನು ಯಾವುದೇ ಸಂಬಂಧದ ಚೌಕಟ್ಟಿಗೆ ಕಟ್ಟಿ ಹಾಕಲು ಸಾಧ್ಯವಿರಲಿಲ್ಲ. ಯಾವುದೇ ಸಂಬಂಧದ ಹೆಸರು ಹೇಳಿದರೂ ಅದನ್ನು ಮೀರಿದ ಅನುಬಂಧ ನಮ್ಮಿಬ್ಬರದ್ದು. ಆದರೆ, ಆಕೆಯ ಕುಟುಂಬ ಮಾತ್ರ ತುಂಬ ತುಂಬ ಟ್ರೆಡೀಷನ್. ಸಂಪ್ರದಾಯಸ್ಥ ಕುಟುಂಬದಲ್ಲಿ ಈಕೆ ಕಾಣುವ ಕನಸುಗಳಿಗೆ ಬೆಲೆ ದೊರೆಯುತ್ತಾ ಎಂದು ಒಂದೊಂದು ಸಾರಿ ನನಗೆ ಭಯವಾಗುತ್ತಿತ್ತು. ಆದರೆ ಆಕೆಗೆ ಹುಂಬ ಧೈರ್ಯ. ತಾನು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತೇನೆಂಬ ಹುಚ್ಚು ಭರವಸೆ. ಆಕೆಯ ಇಷ್ಟಪಟ್ಟಿದ್ದೆಲ್ಲ ನೆರವೇರಲಿ ಎಂಬ ಸಣ್ಣ ಪ್ರಾರ್ಥನೆ ನನ್ನಿಂದ. ನಮ್ಮಿಬ್ಬರ ನಡುವಿನ ಸಲುಗೆ ಬೇರೆಯವರ ಕಣ್ಣಿಗೆ ಕುಕ್ಕುತ್ತಿತ್ತು. ಕಣ್ಣು ಕುಕ್ಕಿಸಿಕೊಂಡವರು ಸುಮ್ಮನಿದ್ದಾರೆಯೇ? ಏನು ಆಗಬೇಕಿತ್ತೋ.. ಅದೇ ಆಯ್ತು. ನಮ್ಮಿಬ್ಬರ ನಿರ್ವಾಜ್ಯ ಗೆಳತನಕ್ಕೆ ಕಲ್ಲು ಹಾಕುವ ಕೆಲಸವಾಗಿತ್ತು. ಹೀಗಿದ್ದಾಗ್ಯೂ.. ಕಾಲೇ್ನಲ್ಲಿ ನಾನು ಆಕೆ ಒಟ್ಟೊಟ್ಟಿಗೆ ಇರುತ್ತಿದ್ದೆವು. ಅದೊಂದು ದಿನ ಏನು ಆಯ್ತೋ ಗೊತ್ತಿಲ್ಲ. ಲೈಬ್ರರಿಯಲ್ಲಿ ಕೂತಿದ್ದವನ್ನು ಹೊರಗೆ ಕರೆ ತಂದು, ``ನನ್ನನ್ನು ಮದುವೆ ಆಗ್ತಿಯಾ? ನಿನ್ನ ಜತೆಗಿದ್ದರೆ ನನ್ನ ಕನಸೆಲ್ಲ ಈಡೇರುತ್ತದೆ,'' ಎಂದು ಒಂದೇ ಸವನೆ ಅಳಲಾರಂಭಿಸಿದಳು. ಎಂದೂ ಆ ರೀತಿಯಲ್ಲಿ ಯೋಚಿಸದ ನನಗೆ ಏನು ಹೇಳಬೇಕೋ... ಏನು ಹೇಳಬಾರದೋ ಒಂದು ಗೊತ್ತಾಗಲಿಲ್ಲ. ಆಕೆಯ ಕಣ್ಣೀರು ಮಾತ್ರ ಧಾರಾಕಾರವಾಗಿದೆ. ``ನೀನು ಮೊದಲು ಅಳುವುದನ್ನು ನಿಲ್ಲಿಸು,'' ಎಂದು ಸಂತೈಸಿದೆ. ನಮ್ಮಿಬ್ಬರ ಸಂಬಂಧಕ್ಕೆ ಹೊಸ ಅರ್ಥ, ಹೆಸರು ಕೊಡಬೇಕೆಂದು ನಿರ್ಧರಿಸಿಕೊಂಡೇ ಬಂದವಳಂತೆ ಕಾಣುತ್ತಿತ್ತು ಆಕೆ. ಆದರೆ, ನನಗೆ ಮಾತ್ರ ಆಕೆ ಹೀಗೇಕೆ ಒಮ್ಮಿಂದೊಮ್ಮೆ ಈ ರೀತಿ ಹೇಳುತ್ತಿದ್ದಾಳೆ ಎಂದು ಗೊಂದಲ. ಸ್ವಲ್ಪ ಹೊತ್ತಿನ ಬಳಿಕ ಸುಧಾರಿಸಿಕೊಂಡು, ಆಕೆ ಎಲ್ಲ ಹೇಳಿದಳು. ``ನೋಡೋ.. ನಾನು ಏನೆಲ್ಲ ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಹೇಗೆಲ್ಲ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದೇನೆ. ಆದರೆ, ನಮ್ಮ ಮನೆಯಲ್ಲಿ ಮಾತ್ರ ಮದುವೆ ಮಾಡಿಕೊಡಲು ನಿರ್ಧರಿಸಿದ್ದಾರೆ. ನನ್ನ ಅತ್ತೆಯ ಮಗನಿಗೆ,'' ಎಂದವಳೇ ಮಾತು ಹೊರಡಲಾರದೆ ಮತ್ತೆ ಅಳುವಿಗೆ ಶರಣಾದಳು. ಈಗ ನನಗೆಲ್ಲ ಅರ್ಥವಾಗಿತ್ತು. ಬಹುಶಃ ಈಕೆಯ ಗಗನಸಖಿಯಾಗಿ ಆಕಾಶದಲ್ಲಿ ಹಾರಾಡುತ್ತ, ದೇಶ ದೇಶ ಸುತ್ತುವ ಆಸೆ ಮತ್ತು ನನ್ನೊಂದಿಗಿನ ಈ ಒಡನಾಟವೇ ಆಕೆಯ ಮನೆಯವರು ಇಂಥ ನಿರ್ಧಾರಕ್ಕೆ ಬರಲು ಕಾರಣ. ಆದರೆ ನಾನು ನಿಜವಾಗಲೂ ಆಕೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಬಲ್ಲೆನಾ? ಅಂಥ ಶಕ್ತಿ ನನಗಿದೆಯಾ? ನನ್ನ ಜೀವನವೇ ಇನ್ನೂ ಒಂದು ಹಂತಕ್ಕೆ ಬರಬೇಕು. ಇದರ ಮಧ್ಯೆಯೇ ಆಕೆಯ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳಲು ಶಕ್ತನಾ? ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವಳನ್ನು ಪ್ರೀತಿಸುತ್ತಿದ್ದೇನಾ.. ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಓಡಲಾರಂಭಿಸಿದ್ದವು. ನಾನು ಕೇಳಿಕೊಂಡ ಆ ಕೊನೆಯ ಪ್ರಶ್ನೆ ಮಾತ್ರ ತುಸು ಹೊತ್ತು ಯೋಚಿಸುವಂತೆ ಮಾಡಿತು.  ಆಕೆಯೆಡೆಗೆ ನನ್ನಲ್ಲಿರುವ ಭಾವ ಪ್ರೀತಿಯದ್ದಾ.. ಬರೀ ಗೆಳೆತನದ್ದಾ..? ಹೀಗೆ ಪೂರ್ತಿ ಕ್ಪ್ಯೂಷ್. ಯಾವುದನ್ನು ನಿರ್ಧರಿಸಲಿಕ್ಕಾಗದ ಕ್ಷಣಗಳು ಅವು. ``ನನಗೆ ಒಂದಿಷ್ಟು ಸಮಯ ಕೊಡು. ಯೋಚಿಸಿ ಹೇಳುತ್ತೇನೆ,'' ಎಂದು ಆಕೆಯನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿಕೊಟ್ಟೆ.
ಮನೆಗೆ ಹೋದವನಿಗೆ ತಲೆ ತುಂಬ ಇದೇ ವಿಚಾರಗಳ ಸಂಘರ್ಷ. ಕೊನೆಗೂ ಒಂದು ನಿರ್ಧಾರಕ್ಕೆ ಬಂದೆ. ಹೌದು... ನಾನು ಅವಳನ್ನು ಇಷ್ಟಪಡುತ್ತೇನೆ. ಆದರೆ, ಅದಕ್ಕೊಂದು ರೂಪವಿರಲಿಲ್ಲ ಅಷ್ಟೆ. ಅವಳೇ ಅದಕ್ಕೊಂದು ಸ್ಪಷ್ಟವಾದ ರೂಪ ಕೊಟ್ಟಿದ್ದಾಳೆ. ಇನ್ನೇನು ಕಾಲೇ್ ಮುಗಿಯುವ ಹಂತದಲ್ಲಿದೆ. ಒಂದಿಷ್ಟು ಕಷ್ಟಪಟ್ಟರೆ ಒಳ್ಳೆಯ ಕೆಲಸ ಪಡೆಯುವ ಸಾಮರ್ಥ್ಯ ನನ್ನಲ್ಲಿದೆ. ಆಕೆಯ ಕನಸು ಈಡೇರಿಸುವಷ್ಟು ಸಶಕ್ತನಾಗಬಲ್ಲೆ. ನಮ್ಮಿಬ್ಬರ ನಡುವಿನ ಈ ನಿರ್ವಾಜ್ಯ ಸಂಬಂಧಕ್ಕೆ ಒಂದು ಅರ್ಥ ಹೊಳೆಯುತ್ತಿದೆ. ಅದಕ್ಕೊಂದು ಚೌಕಟ್ಟು ವಿಧಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ ಎಂದು ನಿರ್ಧರಿಸಿಕೊಂಡೆ.
ಆದರೆ, ವಿಧಿಯಾಟ ಬೇರೆ ಇತ್ತು. ನನ್ನ ನಿರ್ಧಾರ ತಿಳಿಸಲು ನಾಲ್ಕೈದು ದಿನ ತೆಗೆದುಕೊಂಡೆ. ಕೊನೆಗೆ, `ನಿನ್ನೊಂದಿಗೆ ಹೆಜ್ಜೆ ಹಾಕಲು ನಾನು ಸಿದ್ಧ' ಎಂಬ ವಾಕ್ಯವನ್ನು ಆಕೆಯ ಮುಂದೆ ಕಣ್ಣುಮ್ಚುಚಿಕೊಂಡು ಹೇಳಬೇಕೆಂದುಕೊಂಡು ಕಾಲೇ್ಗೆ ಬಂದೆ. ಆದರೆ ಅಲ್ಲಿ ಆಕೆಯಿಲ್ಲ. ಒಂದು ವಾರವಾದರೂ ಆಕೆ ಕಾಲೇ್ನತ್ತ ಸುಳಿಯತ್ತಲೇ ಇಲ್ಲ. ಎಲ್ಲಿ ಹೋದಳು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆಕೆಯ ಮನೆಗೆ ಹೋಗಿ ಕೇಳುವಷ್ಟು ಧೈರ್ಯ ನನ್ನಲ್ಲಿ ಇರಲಿಲ್ಲ. ಕೊನೆಗೂ ಗೊತ್ತಾಯಿತು. ಆಕೆಯನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿದ್ದಾರೆ. ಮುಂದಿನ ವಾರದಲ್ಲಿ ಮದುವೆ ಇದೆ ಎಂಬ ಮಾಹಿತಿ. ಅಲ್ಲಿಗೆ ಸ್ಪಷ್ಟವಾಗಿತ್ತು. ಇನ್ನು ಆಕೆ ನನಗೆ ಸಿಗಲ್ಲ. ಆಕೆಯ ಕನಸುಗಳನ್ನು ಈಡೇರಿಸುವ ಸೌಭಾಗ್ಯ ನನಗಿಲ್ಲ ಎಂದುಕೊಂಡು ಇಡೀ ದಿನ ಅತ್ತೆ. ಆದರೆ, ಜೀವನ ಮುಂದೆ ಹೋಗಬೇಕಲ್ಲ. ದಿನಗಳು ಉರುಳಿದವು, ವರ್ಷವೂ ಕಳೆಯಿತು. ಅಂದೂ ಹೋಳಿ ಇತ್ತು. ಎಲ್ಲೆಲ್ಲೂ ಬಣ್ಣಗಳ ರಂಗೋಲಿ. ಅಂದು ಹೀಗೆಯೇ ಮಕ್ಕಳ ಹೋಳಿಯಾಟ ನೋಡುತ್ತ ನಿಂತಿದ್ದವನಿಗೆ ಎದುರಾದವಳು ಅವಳೇ. ಅರೇ ಏನಾಯಿತು...? ಹೇಗಿದ್ದವಳು ಹೇಗಾಗಿದ್ದಾಳೆ. ಬಿಳಿ ಬಣ್ಣ ಕಂಡರೆ ಆಗದವಳು ಅದೇ ಬಣ್ಣದ ಸೀರೆ ಉಟ್ಟುಕೊಂಡಿರುವುದ್ಯಾಕೆ? ಛೇ ಅವಳ ಜೀವನದಲ್ಲಿ ಏನೆಲ್ಲ ಅನಾಹುತಗಳಾಗಿರಬಹುದು. ಅವಳ ಕನಸುಗಳಿಗೆ ಕೊಳ್ಳಿ ಇಟ್ಟವರಾರು ಎಂದು ಅವಳನ್ನೇ ಕೇಳಬೇಕು ಎಂದುಕೊಂಡೆ. ಆದರೆ, ಆಕೆ ಮಾತ್ರ, ನಾನು ಪರಿಚಯ ಇಲ್ಲದವನಂತೆ, ನೋಡಿಯೋ ನೋಡಿದಂತೆ ಹೊರಟೇ ಹೋದಳು. ಆಕೆಯ ಮುಖದಲ್ಲೀಗ ಭಾವಗಳಿಲ್ಲ. ಕಣ್ಣುಗಳಲ್ಲಿ ಕನಸುಗಳಿಲ್ಲ. ನಿರ್ಭಾವುಕತೆಯನ್ನು ಹೊದ್ದುಕೊಂಡವಳಂತಿದ್ದಾಳೆ. ಆಕೆಯನ್ನು ನೋಡಿದ ಮೇಲೆ ತಪ್ಪಿತಸ್ಥ ಭಾವ ನನ್ನದು. ಈಗ ಹೋಳಿಗಳು ನನ್ನ ಪಾಲಿಗೆ ಅರ್ಥ ಕಳೆದುಕೊಂಡಿವೆ. ಎಲ್ಲ ಬಣ್ಣಗಳ ನಡುವೆಯೂ ಬಿಳಿ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆಕೆಯ ಬಾಳಿನಲ್ಲಿ ಬಣ್ಣ ಬಣ್ಣಗಳ ಚಿತ್ತಾರ ಬಿಡಿಸಬೇಕಿತ್ತು ನಾನು. ಅವಳ ಇಂದಿನ ಪರಿಸ್ಥಿತಿಗೂ ನಾನು ಕೂಡ ಕಾರಣ ಎಂದು ನೆನಪಾದಾಗಲೆಲ್ಲ ಕಣ್ಣು ತೇವವಾಗುತ್ತದೆ.
ಮೇರೆ ಲಿಯೇ ತುಮ್ಹಾರಿ ಯಾದೇ ಹೀ ಕಾಫೀ ಹೈ
ಮೊಹಬ್ಬ್ ಮೇ ಜರೂರಿ ಮುಲಾಖ್ ನಹೀ
--------------------
Published in VK on 28th March 2016 edition

ಮಂಗಳವಾರ, ಮಾರ್ಚ್ 22, 2016

ಕವಿತೆ

ಕವಿತೆ ನನ್ನೊಳಗಿನ
ಕಾಣದ ಕಡಲಿನ ಹುಡುಕಾಟ
ಭಾವಗಳ ಜತೆ ಚೆಲ್ಲಾಟ
ಎಲ್ಲೆ ಮೀರಿದ ಮೌನದ ಚೀರಾಟ
ಮಾತು ಮೌನವಾಗಿ,
ಮೌನ ಮಾತಾಗುವ ಹೊತ್ತಲ್ಲಿ
ಮೆಲ್ಲನೆ ಉಸಿರು ಪಿಸುಗುಟ್ಟುವ ಕ್ಷಣವೇ ಕವಿತೆ

ಸೋಮವಾರ, ಫೆಬ್ರವರಿ 15, 2016

ಪ್ರೇಮೋದ್ಯಾನ ಸೀಳಿದ ಆ ಮೆಟ್ರೋ ಮಾರ್ಗ!

ಬೆಂಗಳೂರೆಂಬ ಮಹಾನಗರದಲ್ಲಿ ಪಾಕ ಬರ? ಅದಕ್ಕೆ ಅಲ್ಲವೇ ಇದಕ್ಕೆ `ಉದ್ಯಾನನಗರಿ' ಎಂಬ ಅಡ್ಡ ಹೆಸರು. ಈ ಪಾಕ ಬೆಳಗ್ಗೆಯಿಂದ ರಾತ್ರಿಯವರೆಗೂ  ಮಕ್ಕಳಿಂದ ಹಿಡಿದು ವಯಸ್ಸಾದವರೂ ಇರುತ್ತಾರೆ; ಬರುತ್ತಾರೆ, ಹೋಗುತ್ತಾರೆ. ಯಾವುದೋ ಕನಸುಗಳನ್ನು ಕಟ್ಟಿಕೊಂಡು, ದೂರದ ಊರಿನಿಂದ ಬರುವ ಅಬ್ಬೇಪಾರಿಗಳಿಗೂ ಇದೇ ಆಶ್ರಯ; ನಿರ್ಗತಿಕರಿಗೂ ಇದುವೆ ಅರಮನೆ. ಬಣ್ಣ ಬಣ್ಣದ ಕನಸುಗಳನ್ನು ಕಾಣುವವರಿಗೆ ಹುಲ್ಲಿನ ಹಾಸುಗೆ.., ವೃದ್ಧಾಪ್ಯದಲ್ಲಿ ಯೌವನದ ಮೆಲಕು ಹಾಕುವವರಿಗೆ ಸಿಟ್ಟಿಂ್ ಪಾಯಿಂ್... ಜೀವನದ ಜಂಜಾಟಕ್ಕೆ ಬೇಸತ್ತು ಸ್ವಲ್ಪ ಹೊತ್ತು ಕುಳಿತು ಹೋಗುವವರಿಗೆ ವಿರಾಮ ತಾಣ... ಬೊಜ್ಜು ಕರಗಿಸಿಕೊಳ್ಳುವವರಿಗೆ ವಾಕಿಂ್ ಟ್ರ್ಯಾಕ ಇವರ ಮ`್ಯೆಯೇ ಮೈಗೆ ಮೈ ತಾಕಿಸಿಕೊಂಡು, ಒಬ್ಬರ ಉಸಿರು ಮತ್ತೊಬ್ಬರಿಗೆ ಬಿಸಿಯಾಗುವಷ್ಟು ಹತ್ತಿರ ಕುಳಿತುಕೊಳ್ಳುವ ಪ್ರೇಮಿಗಳಿಗೆ ಲವ್ ಸ್ಪಾ್... ಆಗಾಗ ಪಾಕ ನಿರ್ವಾಹಕರು ಬಂದು ಕಾಟು ಕೊಡುವುದು ಬಿಟ್ಟರೆ ಎಲ್ಲವೂ ನಿತ್ಯ ಹರಿದ್ವರ್ಣ. ಎಲ್ಲರಿಗೂ ಒಂದಲ್ಲ ರೀತಿಯಲ್ಲಿ ತನ್ನ ನೆರವಿನ ಬಾಗಿಲು ಓಪ್ ಮಾಡಿಕೊಂಡಿರುವ ಉದ್ಯಾನಗಳು ಅದೆಷ್ಟೋ ಈ ಮಾಯಾನಗರಿಯಲ್ಲಿ.
ಈ ಉದ್ಯಾನವೂ ಅಷ್ಟೇ. ತುಂಬ ಚಿಕ್ಕದೂ ಅಲ್ಲ; ತುಂಬ ದೊಡ್ಡದು ಅಲ್ಲ. ರೋಡಿಗೆ ಅಂಟಿಕೊಂಡಿರುವ ಈ ಪಾಕ ಹಕ್ಕಿಗಳ ಕಲರವ.. ಅದನ್ನು ಸೀಳುವ ವಾಹನಗಳ ಕರ್ಕಶ ಹಾರ್ನು. ಅಂದು ಹಾಗೆಯೇ ಆಗಿತ್ತು. ಬೆಳ್ಳಂಬೆಳಗ್ಗೆ ಎದ್ದು, ಇದ್ದ ಡ್ರೆ್ಗಳಲ್ಲಿ ನೀಟಾಗಿರುವ ಪ್ಯಾಂಟು, ಶರ್ಟು ಹಾಕ್ಕೊಂಡು ಆ ಪಾಕ ಮುಂದೆ ಬಂದು ನಿಂತವನಿಗೆ, ಆರ್ಕು್ನಲ್ಲಿ ಪರಿಚಯವಾಗಿ, ಮೇ್ನಲ್ಲಿ ಚಾಟಿಂ್ ಮಾಡಿಕೊಂಡು, ಮೊಬೈ್ ನಂಬ್ಗಳು ಎಕ್ಸೆಂ್ ಆದ ಮೇಲೆ, ಗಂಟೆಗಟ್ಟಲೇ ಹರಟೆ ಹೊಡ್ಕೊಂಡು, ಒಂದು ರೇಂಜಿಗೆ ಇಬ್ಬರು ಲ್ ಮಾಡಿಕೊಂಡು ಅಥವಾ ಹಾಗೆ ಅನ್ನಕೊಂಡಿದ್ದೆವು ನಾವು. ಅಂದು ಅವಳು ಕಡುಕಪ್ಪು ನೀಲಿ ಬಣ್ಣದ ಜೀ್‌ಸ ತೊಟ್ಟು, ಅದರ ಮೇಲೊಂದು ಕಂದು ಬಣ್ಣದ ಜುಬ್ಬಾ ತರಹದ್ದು ಟಾ್ ಹಾಕ್ಕೊಂಡು ಬಂದವಳ ಕೈಯಲ್ಲಿ ಇನ್ನೇನೂ ಮೂಲೆ ಸೇರಲೇಬೇಕಾದ ಸ್ಥಿತಿಯಲ್ಲಿದ್ದ ಮೊಬೈ್ ಫೋ್ ಇತ್ತು. ಅವಳು ಬರುತ್ತಿದ್ದನ್ನು ದೂರದಿಂದಲೇ ನೋಡಿದ ನನ್ನೆದೆಯೊಳಗೆ ಖಾರ ಕುಟ್ಟುವ ಮಷೀ್ನ ಸೌಂಡು. ಏನೋ ಒಂಥಾರ ಹೆದರಿಕೆ, ತಳಮಳ; ಅರೆ... ಫೋ್ನಲ್ಲಿ ಸರಿ ರಾತ್ರಿ ಮಾತಾಡಿಕೊಂಡರೂ ಆಗದ ಈ ಅವಸ್ಥೆ ಎದುರಿಗೆ ಬರುತ್ತಿದ್ದವಳನ್ನು ನೋಡಿದ ಕೂಡಲೇ ಯಾಕೆ? ಅದಕ್ಕೆ ಇರಬೇಕು, ಫೇ್ಬುಕ ಮೇ್ ಚಾ್ಗಳಲ್ಲಿ ಫ್ರೆಂ್ಶಿ್ ಸುಲ`. ಅದೇ ಮುಖ ಎದುರಾದಾಗ ಮಾತನಾಡಲು ಪದಗಳೇ ಸಿಗುವುದಿಲ್ಲ; ಚಾ್ನಲ್ಲಿ ಮಾತುಗಳಿಗೆ ಬರವೇ ಇರುವುದಿಲ್ಲ. ಏನಾಗುತ್ತಿದೆ ಎನ್ನುವಷ್ಟರಲ್ಲಿ ನನ್ನ ಮುಂದೆ ಬಂದವಳೇ ``ಆ್ ಯೂ ಪ್ರದ್ಯುಮ್ನ..?'' ಎಂದು ಕತ್ತು ಕೊಂಕಿಸಿ ಕೇಳಿದವಳಿಗೆ, ಹಂ.. ಹಂ.. ತಡಬಡಾಯಿಸುತ್ತಲೇ ಎಂದೆ. ನನಗಾದ ತಳಮಳ, ಹೆದರಿಕೆ ಅವಳಿಗಾಗುತ್ತಿತ್ತಾ? ಗೊತ್ತಿಲ್ಲ. ಒಂದು ವೇಳೆ ಆಗುತ್ತಿದ್ದರೂ ಅವಳು ಅಂದು ತೋರಿಸಿಕೊಳ್ಳಲಿಲ್ಲ ಅನ್ನಿಸುತ್ತದೆ. ಪಾಕ ಆ ಮೇ್ ಗೇ್ನಿಂದ ಒಳಗೆ ಹೊರಟವರಿಗೆ ಎಡ -ಬಲದಲ್ಲಿ ಯಾರಿದ್ದಾರೆಂಬ ಅರಿವು ನನಗೆ ಇರಲಿಲ್ಲ. ಅವಳೇನೂ ಅಂಥ ಅಪೂರ್ವ ಸುಂದರಿಯಲ್ಲದಿದ್ದರೂ ಕೃಷ್ಣ ಸುಂದರಿ. ತುಸು ಕಪ್ಪನೆ ಮುಖದಲ್ಲಿ ಬೆಳ್ಳನೆಯ ಕೊಳದಂಥ ಕಣ್ಣಿಗೆ ಹಚ್ಚಿದ್ದ ಕಾಡಿಗೆ ತುಸು ಹೆಚ್ಚೇ ಅವಳ ಸೌಂದರ್ಯ ಹೆಚ್ಚಿಸಿತ್ತು. ಅವಳ ನಡಿಗೆಯಲ್ಲಿ ಅಂಥ ಅವಸರವೇನೂ ಇರಲಿಲ್ಲ. ನಿ`ಾನವಾಗಿ, ನಾಜೂಕಾಗಿ ಹೆಜ್ಜೆ ಹಾಕುತ್ತಿದ್ದವಳನ್ನು ಹಿಂಬಾಲಿಸುತ್ತಿದ್ದೆ, ಪಾಕ ತುಸು ದೂರ ಹೋಗುತ್ತಿದ್ದಂತೆ ಖಾಲಿಯಾದ ಬೆಂ್ ಕಾಣಿಸಿತು. ಅದನ್ನು ತೋರಿಸಿ, ``ಕುಳಿತುಕೊಳ್ಳೋಣವಾ?'' ಎಂದವಳೇ ನನ್ನ ಉತ್ತರಕ್ಕೂ ಕಾಯದೇ ಕೂತೇ ಬಿಟ್ಟಳು. ಅವಳ ಪಕ್ಕದಲ್ಲೇ ಕುಳಿತುಕೊಳ್ಳಲೇ  ಮಂಗ್ಯಾ... ಅಂತಾ ಒಂದು ಮನಸ್ಸು ಹೇಳಿದರೆ, ಮತ್ತೊಂದು ಮನಸ್ಸು, ಲೋ... ಹಾಗೇನಾದರೂ ಕುತ್ಕೊಂಡ್ರೆ ಇ್ಡಿಸೆಂ್ ಫೆಲೋ ಅಂದ್ಕೊಂಡು ಬಿಟ್ಟಾಳು. ಬೆಂಚಿನ ಆ ತುದಿಯಲ್ಲಿ ಕುತ್ಕೊ ಎನ್ನುತ್ತಾ ಎರಡು ಮನಸ್ಸುಗಳು ಸಂಘರ್ಷಕ್ಕಿಳಿಯುತ್ತಿರುವಾಗಲೇ ಆಕೆ, ನನ್ನ ಕೈ ಹಿಡಿದು... ಬಾ ಕುತ್ಕೊ ಎಂದು ಜಗ್ಗಿ ಕುಳ್ಳರಿಸಿದಳು. ಅರೆ.. ಏನಾಗುತ್ತಿದೆ? ನಾನು ಪೂರ್ತಿ ಅವಳ ಅಣತಿಯಂತೆ ನಡೆದುಕೊಳ್ಳುತ್ತಿದ್ದೇನಾ? ಅವಳಿಗೆ ಶರಣಾಗಿ ಬಿಟ್ದಿದ್ದೀನಾ? ಎಲ್ಲಿ ಕುತ್ಕೊಬೇಕು ಎನ್ನುವ ಅವಕಾಶದ ಆಯ್ಕೆಯೂ ನನಗಿಲ್ಲವಲ್ಲಾ ಎಂಬ ಯೋಚನೆಯಲ್ಲಿ ಮುಳುಗಿರುವಾಗಲೇ, ಹಾಂ.., ಮತ್ತೆ ಎಂದು ಮಾತು ಶುರು ಮಾಡಿದಳು. ``ಫೋ್ನಲ್ಲಿ ಅಷ್ಟೊಂದು ಲೀಲಾಜಾಲವಾಗಿ ಮಾತಾಡೋನು, ಇವತ್ತು ಯಾಕೆ ಒಳ್ಳೆ ಮೂಗನ ತರಹ ಆಡ್ತಿದ್ದೀಯಾ? ಮಾತಾಡು,'' ಎಂದವಳ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದೆ. ಆದರೆ ಬಹಳ ಹೊತ್ತಿನವರೆಗೆ ಹಾಗೆ ನೋಡುವುದು ನನ್ನಿಂದಾಗಲಿಲ್ಲ. ಆದಷ್ಟು ನಮ್ಮಿಬ್ಬರ ನಡುವಿನ ದೃಷ್ಟಿ ಯುದ್ಧವನ್ನು ತಪ್ಪಿಸಲು ಯತ್ನಿಸುತ್ತಿದ್ದೆ. ಅವಳಿಗೆ  ನನ್ನ ಮೊದಲನೆ ಬಾರಿಗೆ ನೋಡುತ್ತಿದ್ದೆನೆಂಬ ಯಾವ ಉದ್ವೇಗ, ಉನ್ಮಾದ, ತಳಮಳ ಇದ್ದಂತಿರಲಿಲ್ಲ; ನನಗಿತ್ತು.
ನಾವಿದ್ದ ಬೆಂ್ನತ್ತಲೇ ಒಬ್ಬ ಹೆಂಗಸು, ಬಗಲಲ್ಲಿ ಮಗುವನ್ನು ಎತ್ತಿಕೊಂಡು ಬಂದವಳೇ, ``ಅಣ್ಣಾ.. ನಿ್ ಜೋಡಿ `ಾಳ ಚಲೋ ಐತಿ, ನೀವು ಲಗ್ನಾ ಆಗ್ತೀರಿ. ಆ ಎಲ್ಲವ್ವನ ಆಣೆ ಮಾಡಿ ಹೇಳಕತ್ತಾನ್ರೀ,'' ಅಂದು ಬಿಟ್ಟಳು! ಈ ಮಾತು ಕೇಳಿ ಆಕೆ ನನ್ನ ಮುಖವನ್ನೊಮ್ಮೆ, ಆಕೆ ಮುಖವನ್ನೊಮ್ಮೆ ನೋಡಿ ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದೆ. ``ಏ.. ಏ್ ಹೇಳಾಕತ್ತೀರಿ ನೀವು. ರೊಕ್ಕಾ ಬೇಕಿದ್ದರ ಕೇಳರಿ ಕೊಡ್ತೇನಿ. ಹಿಂ್ ಬಾಯಿಗೆ ಬಂದಿಲ್ಲ ಹೇಳಬ್ಯಾಡಿ,'' ಎಂದು ಜೇಬಿನಿಂದ ಹತ್ತಿಪ್ಪತ್ತು ರೂಪಾಯಿ ತೆಗೆದು ಕೊಟ್ಟೆ. ``ಇಲ್ಲ.. ಅಣ್ಣಾರ, ನಾ ಸುಳ್ಳು  ಹೇಳಾಕತ್ತಿಲ್ಲ. ಖರೇನ ಹೇಳಾಕತ್ತೀನಿ. ಮುಂದ ನಿಮಗ ಗೊತ್ತಾಗತ್ತೈತಿ,'' ಎನ್ನುತ್ತಾ ನಮ್ಮತ್ತ ತಿರುಗಿ ನೋಡದೆ ಹೊರಟ ಹೋದಳು.
ಅವಳು ಹೋಗದ್ದೇ ತಡ, ತೀರಾ ಗಾಂಭಿರ್ಯವನ್ನು ಮುಖದ ಮೇಲೆ ತಂದುಕೊಂಡು ನನ್ನನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿ ನೋಡಿದ ಅವಳು, ನನ್ನ ಕೆನ್ನೆಗೆ ಒಂದು ಮುತ್ತನ್ನು ಕೊಟ್ಟು ತಲೆ ತಗ್ಗಿಸಿಕೊಂಡು ಕುಳಿತಳು! ಹಾಗೇ ಮುತ್ತು ಕೊಟ್ಟವಳ ಮನಸ್ಸಿನಲ್ಲಿ ಏನಿತ್ತು? ಆ ಹೆಂಗಸು ಹೇಳಿದ `ವಿಷ್ಯದ ನುಡಿಗಳ ಬಗ್ಗೆ ಯೋಚಿಸುತ್ತಿದ್ದಳೇನೋ..? ಅಂದ ಹಾಗೆ, ಅಂದು ಪ್ರೇಮಿಗಳ ದಿನವಾಗಿತ್ತು. ಇದಕ್ಕೆ ಆ ಪಾಕ ಸಾಕ್ಷಿಯಾಗಿತ್ತು.
---
ಪೇಪ್... ಪೇಪ್... ಎಂದು ರಪ್ಪಂತ ಬಾಗಿಲಿಗೆ ಎಸೆದು ಹೋದವನನ್ನು ಬೈಯ್ದುಕೊಳ್ಳುತ್ತಾ, ಅನಾಥವಾಗಿ ಬಾಗಿಲ ಬಳಿ ಬಿದ್ದಿದ್ದ ಆ ಪೇಪ್ ಎತ್ತಿಕೊಂಡು, ಪುಟಗಳನ್ನು ತಿರುವುತ್ತಿರುವಾಗಲೇ ಕಂಡದ್ದು, `ಉದ್ಯಾನ ಸೀಳಿದ ಮೆಟ್ರೋ ಮಾರ್ಗ' ಎಂಬ ಹೆಡ್ಡಿಂಗು. ಏನಿದು ಎಂದು ಸುದ್ದಿಯ ಮೇಲೆ ಕಣ್ಣಾಡಿಸುತ್ತಿರುವಾಗಲೇ ಗೊತ್ತಾಗಿದ್ದು, ಇದು ಅದೇ ಉದ್ಯಾನ. ನಮ್ಮ ಪ್ರೀತಿಯ ಬೀಜಾಂಕುರಕ್ಕೆ ಕಾರಣವಾಗಿದ್ದ ಉದ್ಯಾನ. ಅನಿರೀಕ್ಷಿತವಾಗಿ ಮುತ್ತುಕೊಟ್ಟ ಹುಡುಗಿ ಕುಳಿತುಕೊಂಡಿದ್ದ ಅದೇ ಉದ್ಯಾನ. ಅದೇ ಉದ್ಯಾನದ ನಟ್ಟ ನಡುವೆ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಆ ಸುದ್ದಿಯ ಸಾರಾಂಶ. ಅದೆಷ್ಟೋ ಹುಡುಗ, ಹುಡುಗಿಯರ ಪ್ರೀತಿ ನಿವೇದನೆಗೆ ನಿವೇಶನ ಒದಗಿಸಿತ್ತೋ..? ಅದೆಷ್ಟು ಹಿರಿಯ ಜೀವಗಳು ತಮ್ಮ ಯೌವ್ವನ ದಿನಗಳನ್ನು ಅಲ್ಲಿ ಕುಳಿತು ನೆನಪಿಸಿಕೊಂಡಿದ್ದರೋ..? ಅದೆಷ್ಟೋ ಅಬ್ಬೇಪಾರಿಗಳು ಆ ಹುಲ್ಲು  ಹಾಸಿನ ಮೇಲೆ ಮಲಗಿ ಕನಸುಗಳನ್ನು ಕಟ್ಟಿಕೊಂಡಿದ್ದರೋ..? ನಗರ ಬದುಕಿನ ವೇಗದ ಮ`್ಯೆ ತುಸು ವಿರಾಮ ನೀಡುವ ಬ್ರೇಕ ಪಾಯಿಂ್ ಆಗಿದ್ದ ಆ ಉದ್ಯಾನ ಇನ್ನು ನೆನಪಷ್ಟೇ ಎಂದು ಯೋಚಿಸುತ್ತಿದ್ದವನಿಗೆ, ಕಣ್ಣು ತುಸು ತೇವ ಆಗಿದ್ದು ಗೊತ್ತಾಗಲಿಲ್ಲ.
- ಪ್ರದ್ಯುಮ್ನ