ಮಂಗಳವಾರ, ಸೆಪ್ಟೆಂಬರ್ 29, 2009

ಗಜಲ್ ಮತ್ತು ಕವನ

ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ,
ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ

ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು,
ಬಿಕ್ಕಳಿಸಿ, ಬಿಕ್ಕಳಿಸಿ ಅಳುವ ಮುನ್ನ ನೀ ಜಾರಿ ಹೋಗಬೇಡ

ಇರಳು ಕವಿಯಲಿ, ಚಂದ್ರ ಮೂಡಲಿ, ನಕ್ಷತ್ರ ಮಿನುಗಲಿ,
ಕ್ಷೀರಪಥದಲಿ ಮಿಂದೆದ್ದು ಬರುವೆ, ಅಲ್ಲಿವರೆಗೂ ಹೋಗಬೇಡ

ಬೆರಳುಗಳು ಸುಡುತ್ತಿವೆ, ಸಿಗರೇಟಿನ ನಿಗಿ ನಿಗಿ ಬೆಂಕಿಗೆ,
ಚಿಮ್ಮುವ ಹೊಗೆಯಲಿ ನಿನ್ನದೇ ರೂಪ ಬಿಟ್ಟು ಹೋಗಬೇಡ

ದಾರಿ- ದಾರಿ ನಡುವೆ ಕಲ್ಲು ಮುಳ್ಳೇ ಇರಲಿ, ನೀ ಕಾಲ್ ಇಡುವಲ್ಲಿ
ನಾ ಕೈಯಿಡುವೆ, ನೋವು ನನಗಿರಲಿ, ನಲಿವು ನಿನಗಿರಲಿ, ಹೋಗಬೇಡ

ಎದೆಯ ಮೇಲೆ ಕಾಲಿಟ್ಟು, ಒಳಗೆ ಬೆಂಕಿಯಿಟ್ಟು ಹೋಗಲೇಬೇಕೆನ್ನುವಾಗ
ಮರೆಯಬೇಡ, ಕೆಂಪು ಸೂರ್ಯನ ಮೇಲಿಟ್ಟ ಆಣೆ, ನೀ ಹೋಗಬೇಡ

ಕಂಪ್ಯೂಟರ್ ಪರದೆ ತುಂಬೆಲ್ಲಾ ನಿನ್ನದೆ ಬಿಂಬ, ಆದರೂ
ಬೆರಳು 'ಡಿಲಿಟ್ ಕೀ' ಮೇಲೆ ಊರುತ್ತಿದೆ, ತೊರೆದು ಹೋಗಬೇಡ



ಅಲ್ಲಿ- ಇಲ್ಲಿ

ಅಲ್ಲಿ ದ್ವéೇಷವಿದೆ, ರೋಷವಿದೆ
ತಮ್ಮೊಳಗೆ ಹೊಡೆದಾಡಿ ಅಂತ್ಯವಾಗುವ ಆಪಾಯವಿದೆ

ಇಲ್ಲಿ ಸ್ನೇಹವಿದೆ, ಪ್ರೇಮವಿದೆ
ತ್ಯಾಗದ ಆರಿವಿದೆ, ಒಂದುಗೂಡಿಸುವ ಧ್ವನಿಯಿದೆ

ಅಲ್ಲಿ ತಲ್ಲಣವಿದೆ, ತವಕವಿದೆ,
ಕ್ರೂರ ಅಟ್ಟಹಾಸವಿದೆ, ಅದರಲ್ಲೇ ನೆತ್ತರದ ಹಸಿವಿದೆ

ಇಲ್ಲಿ ತಂಪಿದೆ, ತಂಗಾಳಿಯಿದೆ,
ನೊಂದವರಿಗೆ ನೆರವಾಗುವ ನೆರಳಿದೆ, ಒಲವಿದೆ

ಅಲ್ಲಿ ಬಿಸಿಲಿದೆ, ಬವಣೆಯಿದೆ,
ಒಂದಾಗುವವರ ಬೆನ್ನುಬೀಳುವ ಹಿಂಡೇ ಇದೆ

ಇಲ್ಲಿ ಕರುಣೆಯಿದೆ, ಅನುಕಂಪವಿದೆ,
ಒಲ್ಲೆ ಎಂದವರಿಗೂ ಹಿಡಿ ಪ್ರೀತಿ ಕೊಡವವರ ದಂಡೇ ಇದೆ

ಅಲ್ಲಿ- ಇಲ್ಲಿ ಇವೆರಡು ನಮ್ಮೊಳಗಿವೆ,
ಮನಸ್ಸು, ಹೃದಯದೊಳು ಅವಿತಿವೆ.

ಭಾನುವಾರ, ಜೂನ್ 28, 2009

ನಿಶಕ್ತ ಕಾಲುಗಳು

ಚಿಕ್ಕವನಿದ್ದಾಗಲೇ ಮೇಲೆದ್ದ. ಮೇಲದ್ದಾಗಲೇ ಬಿದ್ದ
ಮಕ್ಕಳೇ ದೇವರೆಂದ, ಮಕ್ಕಳಿಗೆ ಇವನೇ ದೆವ್ವೆಂದರು.
ಗೆದ್ದಷ್ಟೇ ಸೋತ. ಸೋತಷ್ಟೇ ಮತ್ತೆ ಚಿಗಿತ.
ಚಿಗಿಯುವಾಗಲೂ, ನೆಗೆಯುವಾಗಲೂ ತಾನೇ ತಾನಾದ.
ಕರಿ ಬಿಳಿ ತೊಗಲಿನ ಮಧ್ಯೆ ಕುಣಿದ, ಕುಪ್ಪಳಿಸಿದಎಲುಬುಗಳು
ಮುರಿಯವಂತೆ ಮೈ ಮಣಿಸಿದ ಕಾಲ್ ಕುಣಿಸಿದ,
ದನಿ ಎತ್ತರಿಸಿ, ತಗ್ಗಿಸಿದ ಪ್ರತಿ ಏರಿಳಿತದಲ್ಲೂ
ನೋವು-ನಲಿವು ನಗಿಸಿದ ಪಾಪ್ ಎಂದು ಮೂಗು ಮುರಿಯೋರೋಮೂಗ್
ಮೇಲೆ ಬೆರಳಿಟ್ಟರು, ಕಣ್ಣೀರಿಟ್ಟರು
ಸರ ಸರ ಸರಿದಾಡುವ, ಹರಿದಾಡುವ ಕಾಲುಗಳಿಗೆ ಕಣ್, ಮನ ಸೋತರು.
ಈಗ ಕಾಲುಗಳೇ ನಿತ್ರಾಣ, ನಿಶಕ್ತ ಹಾಡುವ ರಾಗ, ನಿರಾಗ,
ಕೇಳುವಗಡಿ-ಭಾಷೆ ಬೇಧಿಸಿ, ರಾಗ-ದ್ವೇಷ ಸರಿಸಿ ನಾದ ಹರಿಸಿದ.
ಕೊನೆಗೇ ತಾನೇ ನಿನಾದನಾದ.
ನನ್ನ ಕತ್ತರಿಸಿದರೂ ಹರಿಯೋದುಕೆಂಪ ರಕ್ತ, ಕರಿಯಲ್ಲ
ಎನ್ನುತ್ತಲೇ ಬಿಳಿ ಚರ್ಮಕ್ಕೆ ಮನಸೋತ ಬಣ್ಣ ಬಲಾಯಿಸಿದ
ಬಣ್ಣವೇನೋ ಬದಲಾಯಿತು. ಮನಸ್ಸು?

ಬುಧವಾರ, ನವೆಂಬರ್ 19, 2008

ಏನು ಬರೆಯಲಿ ಹೇಳು...?

ಬರೆಯಲು ಹೊರಟವನ
ಅಂತರಂಗವೆಲ್ಲ ಖಾಲಿಯಾದಾಗ
ಸುಟ್ಟು ಹೋದ ಕನಸುಗಳ
ವಾಸನೆ ಮೂಗಿಗೆ ಅಡರುತ್ತಿರುವಾಗ
ಬರೆಯುವದಾದರು ಹೇಗೆ ಹೇಳು..?
ಆಗುಂತಕಳಾಗಿ ಎದುರಾಗಿ, ಮರೆಯಾದೆ
ಮರೆಯಾಗುವ ಮುನ್ನ
ಮಾಸಲಾರದ ಬರೆ ಹಾಕಿದೆ
ಬರೆ ಇನ್ನು ಹಸಿ ಹಸಿಯಾಗಿರುವಾಗಲೇ
ಹಾಳೆಯ ಮೇಲೆ ಗೆರೆಯಾದ್ರೂ
ಹೇಗೆ ಮೊಡಿತು ಹೇಳು...?
ಬದುಕಿದ್ದು ಸತ್ತಂತಿರುವಾಗ
ಭಾವವಾಗುವ ಅಕ್ಷರಗಳಿಗೆ
ಜೀವವನ್ನಾದರೂ ಹೇಗೆ ತುಂಬಲಿ...?
ನಾ ಹಾಳಾಗುವ ಮುನ್ನ
ಒಮ್ಮೆ ನೀ ಹರಸು
ಎಂದೆಂದಿಗೂ ನಾ ನಿನ್ನ
ನೀ ನನ್ನ ನೋಡದಂತೆ

ಸೋಮವಾರ, ನವೆಂಬರ್ 17, 2008

ಮರೆಯೋದಲ್ಲ

ಮಳೆಗೆ ಅಳೋದು ಮಾತ್ರ ಗೊತ್ತು

ನಗೋದಲ್ಲ

ಸೂರ್ಯನಿಗೆ ಸುಡೋದು ಗೊತ್ತು

ಆರಿಸೋದಲ್ಲ

ಆದರೆ

ನನಗೆ ನಿನ್ನ ನೆನಪು

ಮಾಡಿಕೊಳ್ಳುದು ಗೊತ್ತು

ಮರೆಯೋದಲ್ಲ

- ಇದು ನನಗೆ ಇಷ್ಟವಾದ ಒಂದು ಶಾಯರಿಯ ಭಾವಾನುವಾದ

ಶನಿವಾರ, ಅಕ್ಟೋಬರ್ 18, 2008

ಅಲೆಗಳು ಏಳುತ್ತವೆ


ಶಾಯರಿಗಳಿಗೂ ಕೆಲವು
ಅಂದಾಜು ಇರತವೆ
ಕನಸುಗಳು ತೆರೆದ
ಕಣ್ಣುಗಳಲ್ಲೂ ಒಡಮೂಡುತ್ತವೆ
ದುಃಖದಲ್ಲಿ ಕಣ್ಣೀರು
ಬರಲೇಬೇಕೆನಿಲ್ಲ
ನಗುವ ನಯನಗಳಲ್ಲು
ಅಲೆಗಳು ಏಳುತ್ತವೆ
-------- ಇದು ಹಿಂದಿ ಶಾಯರಿಯ ಭಾವಾನುವಾದ.
ಇದು ಮನಸು ಕಾಡುವ ಶಾಯರಿ ಎಂಬ
ಭಾವನೆ ನನ್ನದು.. ನಿಮ್ಮದು ...?

ಭಾನುವಾರ, ಸೆಪ್ಟೆಂಬರ್ 28, 2008

ನಗಲು ಪ್ರಯತ್ನಿಸುತ್ತಿದ್ದೇನೆ

ಕತ್ತಲೆಯೇ ಬದುಕೆಂದು
ನಂಬಿದ ನಾನು ಈಗೀಗ
ನಗಲು ಪ್ರಯತ್ನಿಸುತ್ತಿದ್ದೇನೆ
ದುಃಖದ ಸಾಗರದಲ್ಲಿ ಕೈ
ಬಿಟ್ಟು ನೀ ಹಿಂತಿರುಗಿ ನೋಡದೆ
ಹೋದಾಗ ಸಾಯಬೇಕೆಂದು
ಕೊಂಡವನಿಗೆ ಅಲೆಗಳೇ
ಈಜು ಕಲಿಸಿ ದಡಕ್ಕೆ ಎಸೆದಿವೆ ನನ್ನನ್ನು.
----
ಈಗೀಗ ಪ್ರತಿ ಸೂರ್ಯನ ಹುಟ್ಟು
ಸಾವು ಕೂಡಾ ಆಸಕ್ತಿ ಹುಟ್ಟಿಸುತ್ತಿದೆ
ರಾತ್ರಿಯಲ್ಲಿ ಚಂದ್ರನ ತಣ್ಣನೆಯ
ಬೆಳಗು ಕೂಡಾ ಹೊಮ್ಮಿಸುತ್ತಿದೆ
ನೂರಾರು ಅರ್ಥ ನನ್ನೆದೆಯ
ಭಾವದೊಳಗೆ ಆದರೆ,
ಅಲ್ಲಿ ನೀನಿಲ್ಲವೆಂಬ
ಅರಿವು ಎಚ್ಚರವಾದಾಗ
ಮತ್ತೆ ಅದೇ ಕತ್ತಲೆ ಇಷ್ಟವಾಗುತ್ತದೆ
ಆದರೂ ಪಣತೊಟ್ಟಿದ್ದೇನೆ
ಕತ್ತಲೆಯನ್ನೇ ಹಿಂಜಿ
ಬೆಳಕನ್ನು ಪಡೆಯಬೇಕೆಂದು
ಆ ಬೆಳಕಲ್ಲಿ ಹೊಸ ಲೋಕ,
ಭಾವ, ಭಾಷೆ ಕಲಿಯಬೇಕೆಂಬ
ಹಂಬಲ ನನ್ನದು.

ಶನಿವಾರ, ಜುಲೈ 26, 2008

ಏನೋ ಆಗಿದೆ


ಏನೋ ಆಗಿದೆ
ನನಗಿಂದು
ಮುಂಗಾರು ಮೊದಲ
ಮಳೆ ಬಿದ್ದ ನೆಲದ
ಸುವಾಸನೆಯಂತೆ
ಹರಡಿದೆ ಮನವು
ಬರಿದಾಗಿದ್ದ ಭಾವಗಳು
ಮತ್ತೆ ಮೆಲ್ಲನೆ
ಚಿಗುರೊಡೆದಿವೆ
ಸೂರ್ಯನತ್ತ ಚಾಚಿ
ಮೊಗ್ಗಾಗಿ ಹೂ
ಬಿರಿಯಲು ಎದೆಯೊಳಗೆ
ಏನೋ ಉಲ್ಲಾಸ,
ಸಂಭ್ರಮದ ನರ್ತನ
ಕಾಣದ ಹೃದಯವ
ಕಾಣಲು ಕಾತರಿಸಿವೆ
ಕಣ್ಣಗಳೆರಡು
ಮುಗಿಲಾಚೆ ಮಲಗಿ
ಭೂ ಅಂಚಿನಲ್ಲಿ
ಅಸ್ತಂಗತವಾಗಲು
ಗರಿಗೆದರಿವೆ ಬಯಕೆಗಳು

ಶನಿವಾರ, ಜುಲೈ 19, 2008

ನೋವು


ಪ್ರಿತಿಸಿದವರನ್ನು
ಮಿಸ್
ಮಾಡಿಕೊಳ್ಳುವುದು
ಈ ಜಗತ್ತಿನಲ್ಲಿಯೇ
ಅತಿ ದೂಡ್ಡ
ನೋವು
ಆದರೆ,
ಇದಕಿಂತಲೂ
ದೂಡ್ಡ ನೋವು
ಎಂದರೆ,
ನಾವು ಯಾರನ್ನು
ಮಿಸ್
ಮಾಡಿಕೊಳ್ಳುತ್ತೇವೆ
ಅವರು ನಮ್ಮ
ಬಗ್ಗೆ ಒಂದು
ಕ್ಷಣವೂ
ಯೋಚಿಸದಿರುವುದು !

ಭಾನುವಾರ, ಜುಲೈ 13, 2008

ಬಾ(ಬ)ಲ ಭೀಮ








ನನ್ನ ಮೇಲ್ ಬಾಕ್ಸಿಗೆ ಒಂದು ಮೇಲ್ ಬಂದಿತ್ತು. ೨೦ ಕೆ.ಜಿ. ಬಾಲಕ ಎಂಬ ಒಕ್ಕಣಿಕೆ ಇತ್ತು ಅದರಲ್ಲಿ. ಒಳಗೆ ಬಾಲಕನ ಕೆಲವು ಫೋಟೋಗಳು ಇದ್ದವು . ನೋಡಲು ಏನೋ ಖುಷಿ ಅನ್ನಿಸಿತು. ನೀವು ನೋಡಿ ಖುಷಿ ಪಡಬಹುದು ಅಂತ ಬ್ಲಾಗಲ್ಲಿ ಪೋಸ್ಟ್ ಮಾಡತಿದಿನಿ.... ನಿಮಗೂ ಖುಷಿ ಆದ್ರೆ ಎರಡು ಲೈನ್ ಬರೆಯಿರಿ...